ಮಂಕುತಿಮ್ಮನ ಕಗ್ಗ (121-143)



ಮಂಕುತಿಮ್ಮನ ಕಗ್ಗ (121-143)
ರಸಧಾರೆ - 121
ತನುವೇನು? ಮನವೇನು? ಪರಮಾಣು ಸಂಧಾನ |
ಕುಣಿಸುತಿಹುದುಭಯವನು ಮೂರನೆಯದೊಂದು ||
ತೃಣದ ಹಸುರಿನ ಹುಟ್ಟು ತಾರೆಯಸಕದ ಗುಟ್ಟು |
ದಣಿಯದದನರಸು ನೀಂ ಮಂಕುತಿಮ್ಮ ||
ಕುಣಿಸುತಿಹುದುಭಯವನು = ಕುಣಿಸುತಿಹುದು + ಉಭಯವನು//ಮೂರನೆಯದೊಂದು = ಮೂರನೆಯದು +ಅದೊಂದು // ತಾರೆಯಸಕದ = ತಾರೆಯ + ಎಸಕದ // ದಣಿಯದದನರಸು = ದಣಿಯದೆ+ ಅದನು+ ಅರಸು
ಪರಮಾಣು = ಸೂಕ್ಷ್ಮಾತಿ ಸೂಕ್ಷ್ಮ ಅಣುಗಳು // ಉಭಯವನು = ಎರಡನ್ನೂ // ಎಸಕದ = ಮಿನುಗುವಿಕೆಯ // ಅರಸು = ಹುಡುಕು.
ದೇಹವೇನು ಮನಸ್ಸೇನು, ಎರಡೂ ಸಹ ಪರಮಾಣುಗಳ ಅನುಸಂದಾನದಿಂದ ಕಾರ್ಯಪ್ರವೃತ್ತವಾಗಿವೆ. ಆದರೆ ಇವರೆಡನ್ನೂ ಸಂಧಿ ಮಾಡಿ ಆಡಿಸುತಿರುವುದು ಆ ಮೂರನೆಯ ಪರಮ ಶಕ್ತಿ. ಹುಲ್ಲಿನ ಹಸಿರಿಗೂ, ತಾರೆಯ ಮಿನುಗುವಿಕೆಗೂ ಕಾರಣವೇನೆಂಬುದನ್ನು ನೀ ಹುಡುಕು ಎಂದು ಒಂದು ಆದೇಶವನ್ನು ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ ಕೊಟ್ಟಿದಾರೆ.
ವಾಚಕರೆ, ನಮ್ಮ, ನಮ್ಮದೇನು ಎಲ್ಲಾ ಚರಾಚರ ಪ್ರಾಣಿಗಳ ದೇಹದ ರಚನೆಯಾಗಿರುವುದೇ, ಸೂಕ್ಷ್ಮ ಜೀವಾಣುಗಳ ಸಮರ್ಪಕ ಜೋಡಣೆಯಿಂದ. ಜೋಡಣಾನಾಕ್ರಮದ ಅನುಸಾರ ಅದನ್ನು ಮನುಷ್ಯನೆಂದೋ ನಾಯಿಯೆಂದೋ, ಕೋತಿಯೆಂದೋ, ಸೊಳ್ಳೆಯೆಂದೋ, ಪರಿಗಣಿಸಲ್ಪಡುತ್ತದೆ. ಈ ಜೀವಕಣಗಳು ಎಷ್ಟು ಸೂಕ್ಷ್ಮವೆಂದರೆ, ದುರ್ಬೀನಿನ ಕಣ್ಣಿಗೂ ಕಾಣಲಸದಲ. ಆದರೆ ಅವುಗಳ ಕಾರ್ಯವೋ ಮೇರುಸಮಾನ. , ಉಸಿರಾಟ, ರಕ್ತ ಸಂಚಲನೆ, ಆಹಾರ ಸೇವನೆ, ಪಚನ, ಶಕ್ತಿ ಉತ್ಪನ್ನ, ಸಮಾನ ವಿತರಣ ಮತ್ತು ತ್ಯಜನ ಹೀಗೆ ಎಲ್ಲಕೆಲಸಗಳಲ್ಲೂ ನಿರಂತರ ನಿಮಗ್ನವಾಗಿರುತ್ತವೆ ಈ ಜೀವ ಕಣಗಳು . ಹತ್ತು ಹಲವಾರು ರಸಗಳ ಉತ್ಪತ್ತಿ.ಆ ರಸಗಳಿಂದ ದೇಹ ಕಾರ್ಯ ಪ್ರವೃತ್ತಿ. ಒಂದಕ್ಕೊಂದಕ್ಕೆ ನಿಕಟ ಸಂಪರ್ಕ. ಕಾಲಲ್ಲಿ ಸೊಳ್ಳೆ ಕಡಿದರೆ ತಲೆಯಲ್ಲಿ ಕಂಪನ, ಕೈಗಳು ರಕ್ಷಣೆಗೆ ಧಾವಿಸುತ್ತವೆ. ಎಂದೋ ಕಂಡ ವ್ಯಕ್ತಿಯ ಮತ್ತೆ ಕಂಡರೆ, ಕೂಡಲೇ ಬುದ್ಧಿಯಲ್ಲಿನ ನೆನಪು ಮನದ ಅಂಗಳಕ್ಕೆ. ರೂಪ, ಬಣ್ಣ, ನಡಿಗೆ, ಹಾವ, ಭಾವ ಹೆಸರು ಎಲ್ಲದರ ಜ್ಞಾಪಕ ಮರುಕಳಿಸುತ್ತದೆ.
ಹೀಗೆ ಈ ದೇಹ ಮತ್ತು ಮನಸ್ಸಿನ ನಿಕಟ ಮತ್ತು ಸೂಕ್ಷ್ಮ ಸಂಬಂಧವನ್ನು ಕಾರ್ಯೋನುಮುಖಗೊಳಿಸುವುದಕ್ಕೆ ಕಾರಣ ಆ ಪರಮಾತ್ಮ ಶಕ್ತಿ. ಆ ಶಕ್ತಿಯೂ ಸಹ ಈ ಅಣುಗಳಲ್ಲಿ ತಾನೇ ಹರಡಿಕೊಂಡು, ಎಲ್ಲಕ್ಕೂ ಇಂಬುಕೊಡುತ್ತಾ ಪ್ರತಿ ಪ್ರಾಣಿಯನ್ನೂ ಎಲ್ಲ ಕಾರ್ಯಗಳಿಗೂ ಪ್ರೇರೇಪಿಸುತ್ತದೆ. ಈ ತನು ಮನ ಮತ್ತು ಆ ಪರಮ ಚೇತನದ ಅವಿನಾಭಾವ ಸಂಭಂದವೇ ಈ ಜಗದ್ವ್ಯಾಪಾರ. ಈ ಜಗತ್ತಿನ ಎಲ್ಲ ಚರಾಚರ ಪ್ರಾಣಿಗಳು ಈ ಸಂಬಂಧದ ಚಕ್ರದಲ್ಲೇ ಸುತ್ತುತ್ತಿರುತ್ತವೆ. ಇದು, ಎಲ್ಲೋ ಅಡಗಿದ್ದು ಮಳೆಯಾದೊಡನೆ, ಚಂಗನೆ ಚಿಗುರಿ ಧರೆಗೆ ಹಸಿರ ಹೊದಿಸುವ ಹುಲ್ಲಿಗೂ, ಎಲ್ಲೋ ಭೂಮಿಯಿಂದ ಕೋಟಿ ಕೋಟಿ ಮೈಲಿ ದೂರದಲ್ಲಿ ಮಿನಿಗುತ್ತಿರುವ ಆ ನಕ್ಷತ್ರಕ್ಕೂ ಅನ್ವಯಿಸುತ್ತದೆ.
ಈ ತನುವೂ ನಾವಲ್ಲ. ಈ ಮನವೂ ನಾವಲ್ಲ. ಏಕೆಂದರೆ ನಾವು ಉಪಯೋಗಿಸುವ ಪದಗಳನ್ನು ಸ್ವಲ್ಪ ನೋಡಿ. ನನ್ನಮೈಯಲ್ಲಾ ನೋಯುತ್ತಿದೆ. ನನ್ನಮನಸ್ಸೇಕೋ ಸರಿಯಿಲ್ಲ. ನನ್ನ ಹೆಸರು ರಾಮ. ಹಾಗಾಗಿ ಎಲ್ಲವನ್ನೂ ನಾನು ಹೊಂದಿದ್ದೇನೆ ಮಾತ್ರ. ಆದರೆ ಅದು ನಾನಲ್ಲ. ಈ ಅಣುಗಳಿಂದಾದ ತನು ( ದೇಹ ) ರೂಪವಿಲ್ಲದ ಮನಸ್ಸು ಮತ್ತು ಇವೆರಡನ್ನೂ ಕಾರ್ಯಪ್ರವೃತ್ತಿಗೆ ತೊಡಗಿಸುವ ಆ ಪರಮ ಚೇತನಗಳ ಮಧ್ಯೆ ನಾನು ಯಾರು ಎಂಬುದನ್ನು ಅರಿಯಬೇಕು. ಆ ಪರಮ ಚೇತನವನ್ನು ಅರಿಯಬೇಕು. ಆಗಲೇ ನಮ್ಮ ಬದುಕಿನ ಸೂಕ್ಷ್ಮತೆಗಳು ನಮಗೆ ಅರಿವಾಗಿ ಸತ್ಯವಾದ ಜ್ಞಾನ ಪ್ರಾಪ್ತಿಯಾಗುತ್ತದೆ. ಇದುವೇ ಅಧ್ಯಾತ್ಮ. ಅಂತಹ ಪ್ರಯತ್ನವನ್ನು ನಾವೂ ಸಹ ಮಾಡಲು ಮುಂದೆ ಸಾಗೊಣವೇ?
ರಸಧಾರೆ - 122, ಸಚ್ಚಿದಾನಂದ ತತ್ವ
ಜನಿಸಿದುದು ಮೃತಿಯನೆಳಸದೆ ಕುಲವ ಬೆಳೆಸುವುದು. |
ಒಣಗಿದಂತಿರುವ ತೃಣಮೂಲ ಮೊಳೆಯುವುದು ||
ಮನುಜರಳಿವರು ಮರುಸಂತಾನ ನಿಂತಿಹುದು |
ಅಣಗದಾತ್ಮದ ಸತ್ವ ಮಂಕುತಿಮ್ಮ
ಮೃತಿಯನೆಳಸದೆ = ಮೃತಿಯ + ಎಳಸದೆ// ಮನುಜರಳಿವರು = ಮನುಜರು + ಅಳಿವರು// ಅಣಗದಾತ್ಮದ = ಅಣಗದು + ಆತ್ಮದ
ಮೃತಿಯನೆಳಸದೆ = ಮೃತ್ಯುವನ್ನು ಬಯಸದೆ // ತೃಣಮೂಲ = ಹುಲ್ಲಿನ ಬೇರು//ಅಳಿವರು=ಸಾಯುವರು// ಮರುಸಂತಾನ = ಮುಂದಿನ ಪೀಳಿಗೆ// ಅಣಗದು = ಕಡಿಮೆಯಾಗದು
ಹುಟ್ಟಿದವರು ಯಾರೂ ಕೂಡಲೇ ಸಾಯಲು ಇಚ್ಚಿಸುವುದಿಲ್ಲ. ತಮ್ಮ ಕುಲವನ್ನು ಬೆಳೆಸಲು ಇಚ್ಚಿಸುತ್ತಾರೆ. ನೋಡಲು ಒಣಗಿದಂತೆ ಇದ್ದರೂ ಮಳೆಯಾದಾಗ, ಹೇಗೆ, ಮತ್ತೆ ತನ್ನ ಒಡಲಿಂದ ಜೀವಂತವಾಗಿ ಚಿಗುರು ಹಸಿರೊಡೆದು ನಲಿಯುವ ಹಸಿರು ಹುಲ್ಲಂತೆ, ಮನುಷ್ಯರು ಸತ್ತರೂ ಅವರ ಸಂತಾನ ಈ ಭೂಮಿಯಲ್ಲಿ ನಿಂತಿಹುದು. ಆತ್ಮದ ಸತ್ವ ಈ ಜಗತ್ತಿನಲ್ಲಿ ಎಂದಿಗೂ ಕಡಿಮೆಯಾಗದು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.
ಈ ಭೂಮಿಗೆ ಎಷ್ಟು ವಯಸ್ಸಾಗಿದೆಯೋ ನಮಗೆ ಗೊತ್ತಿಲ್ಲ. ಈ ಭೂಮಿಯಮೇಲೆ ಮೊದಲ ಮಾನವ ಎಂದು ಬಂದನೋ, ನಮಗೆ ಗೊತ್ತಿಲ್ಲ. ಆದರೂ ಅಂದಿನಿಂದ ಇಂದಿನತನಕ ಮಾನವ ಸಂತತಿ ಇದೆ. ಮಾನವ ಸಂತತಿ ಬರುವ ಮುನ್ನ ಇದ್ದ ಪ್ರಾಣಿಪಕ್ಷಿಗಳ ಹಲವಾರು ಪ್ರಬೇಧಗಳು ಇಂದು ಸಂಪೂರ್ಣವಾಗಿ ನಾಶವಾಗಿ ಇಲ್ಲವಾಗಿವೆ. ಆದರೆ ಬೇರೆ ಬೇರೆ ಪ್ರಾಣಿ ಪಕ್ಷಿಗಳು ಉದ್ಭವವಾಗಿವೆ!! ಈ ರೀತಿಯ ನಿರಂತರ ಚಕ್ರ ನಡೆದು ಬಂದಿದೆ ಈ ಭುವಿಯಲ್ಲಿ. ಇಲ್ಲಿ ಮಾನವ, ತಾನು ನಿರಂತರವಾಗಿ ಇರಲಾಗದಿದ್ದರೂ ತನ್ನ ಸಂತತಿಯಿಂದ ಕುಲವನ್ನು ಬೆಳೆಸುತ್ತಿದ್ದಾನೆ. ಭೂಮಿಯಲ್ಲಿ ಒಂದು ಒಣ ಹುಲ್ಲಿನ ಬೇರು ಹೇಗೆ ಒಂದು ಮಳೆಯಾದರೆ ಚಿಗುರೊಡೆದು ಧರೆಗೆಲ್ಲ ಹಸಿರ ಹೊದಿಕೆಯನ್ನು ಹೊದಿಸುವಂತೆ ಆ ಪರಮಾತ್ವ ತತ್ವ ಈ ಜಗತ್ತಿನಲ್ಲಿ ನಿರಂತರ, ನಿತ್ಯ ಮತ್ತು ಅನಂತವಾಗಿರುವ ಸತ್ಯ.
ಈ ಜಗತ್ತಿನ ಸಕಲ ಚರಾಚರ ಪ್ರಾಣಿಗಳ ಅಸ್ತಿತ್ವಕ್ಕೆ ಮತ್ತು ಕಾರ್ಯ ಪ್ರವೃತ್ತಿಗೆ ಕಾರಣವಾದ ಚೇತನ ಮಾತ್ರ ಹಾಗೆ ಇದೆ. ಬೇರೆ ಬೇರೆ ರೂಪಗಳಲ್ಲಿ ಪ್ರಕಟಗೊಳ್ಳುತ್ತಾ ಈ ಜಗತ್ತಿನ ಚಿತ್ರ ವಿಚಿತ್ರ ರೂಪಗಳಲ್ಲಿ ತನ್ನ ಪ್ರಭಾವವನ್ನು ತೋರುತ್ತಾ ಆನಂದಪಡುತ್ತಿದೆ, ಎಲ್ಲ ಚರಾಚರಗಳಲ್ಲೂ ತನ್ನ ಅಸ್ತಿತ್ವವನ್ನು ಪ್ರಕಾಶಿಸಿ ಎಲ್ಲ ರೂಪಗಳಲ್ಲೂ ಈಶಾವಾಸ್ಯಮಿದಂ ಸರ್ವಂ ಯತ್ಕಿನ್ಚಿಂತ್ ಜಗತ್ಯಾಂ ಜಗತ್ಎಂದು ಹೇಳುವ ಈಶಾವಾಸ್ಯೋಪನಿಷತ್ತಿನ ಉಕ್ತಿಯಂತೆ.
ರೂಪಗಳು ಬೇರೆಯಾದರೂ, ಕಾಲಮಾನ ಬೇರೆಯಾದರೂ ಸದಾಕಾಲ ತನ್ನ ಪ್ರಭಾವವನ್ನು ಒಂದೇ ರೀತಿ ಅನಾದಿಕಾಲದಿಂದಲೂ ತೋರುತ್ತಾ ಹಾಗೆಯೇ ನಿರಂತರವಾಗಿ ನಡೆಯುತ್ತಾ ಅನಂತಕಾಲದವರೆಗೂ ಇರುವುದೇ ಆ ಪರಮಾತ್ಮ ತತ್ವ. ಅದಕ್ಕೆ ಅಂತವೇ ಇಲ್ಲ. ಅದು ಅನಂತ ಎನ್ನುವುದೇ ಈ ಕಗ್ಗದ ಹೂರಣ. ವಾಚಕರೆ ನಾವು ಇಲ್ಲಿ ಕಾಣಬೇಕಾದದ್ದು ಏನೆಂದರೆ, ಒಂದೇ ಪರಮ ಸತ್ವ, ತಾನೇ ಎಲ್ಲವೂ ಆಗಿ, ಎಲ್ಲವನ್ನೂ ಕಾರ್ಯೋನ್ಮುಖವಾಗಿಸುವ ಚೇತನವೂ ಆಗಿ, ಎಲ್ಲ ವಿಚಿತ್ರಗಳನ್ನೂ ತೋರುತ್ತಾ, ಎಲ್ಲವನ್ನು ತಾನೇ ಅನುಭವಿಸುತ್ತಾ ನಿರಂತರವಾಗಿ ಅನಂತಕಾಲ, ಸ್ವಲ್ಪವೂ ಅಣಗದೆ ಇರುವುದೇ ಆ ಪರಮ ಚೇತನ. ಅದಕ್ಕೆ ನಮ್ಮ ನಮನವನ್ನು ಸಲ್ಲಿಸಬೇಕಷ್ಟೇ.
ರಸಧಾರೆ - 123, ಸಚ್ಚಿದಾನಂದ ತತ್ವ
ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು |
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ||
ಸನ್ನಿಹಿಸುವಂ ಸುಮ್ಮನಿರಲೊಲದೆ ಮಾನವನು |
ಚಿನ್ಮಯತೆಯಾತ್ಮಗುಣ ಮಂಕುತಿಮ್ಮ||
ಬನ್ನಬವಣೆಗಳ= ಬನ್ನ+ಬವಣೆಗಳ // ತಾನೆನಿತೆನಿತು = ತಾನು + ಎನಿತೆನಿತು // ಪಟ್ಟಿರೆಯುಮಿನ್ನೊಮ್ಮೆ= ಪಟ್ಟರೆಯು೦ + ಇನ್ನೊಮ್ಮೆ // ಸಾಹಸಗಳಿಂಸನ್ನಿಹಿಸುವಂ= ಸಾಹಸಗಳಿಂ + ಸನ್ನಿಹಿಸುವ//
ಚಿನ್ಮಯತೆಯಾತ್ಮಗುಣ = ಚಿನ್ಮಯತೆ+ ಆತ್ಮಗುಣ
ತಾನೆನಿತೆನಿತು= ತಾನು ಎಷ್ಟೆಷ್ಟು // ಬನ್ನಬವಣೆಗಳ= ಕಷ್ಟ ತೊಂದರೆ ಸೋಲುಗಳನ್ನ // ಪಟ್ಟರೆಯು೦ = ಪಟ್ಟರೂ/ ಸನ್ನಿಹಿಸುವ = ತೊಡಗುವ// ಸುಮ್ಮನಿರಲೊಲದೆ = ಸುಮ್ಮನಿರಲಾರದೆ //
ಚಿನ್ಮಯತೆಯಾತ್ಮಗುಣ = ಜ್ಞಾನಸ್ವಾರೂಪವು ಆತ್ಮದ ಗುಣ
ಮನುಷ್ಯ ಎಷ್ಟೊಂದು ಕಷ್ಟ ಅನುಭವಿಸಿದರೂ, ಸೋಲನ್ನು ಅನುಭವಿಸಿದರೂ, ತೊಂದರೆಗಳನ್ನು ಎದುರಿಸದರೂ, ಮತ್ತೆ ಮತ್ತೆ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾನೆ, ಹೊಸ ಹೊಸ ಸಾಹಸಗಳನ್ನು ಮಾಡುತ್ತಲೇ ಇರುತ್ತಾನೆ. ಸುಮ್ಮನಿರಲಾಗದಿರುವುದು ಮನುಷ್ಯನಲ್ಲಿರುವ ಜ್ಞಾನಸ್ವಾರೂಪವಾದ ಆತ್ಮದ ಗುಣವೆಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪ ಮಾಡುತ್ತಾರೆ.
ಮನುಷ್ಯನೇ ಆಗಲಿ ಬೇರೆ ಯಾವ ಪ್ರಾಣಿಯೇ ಆಗಲಿ ತನ್ನ ಮನೋ ವಾಂಚೆಯ ಪೂರೈಕೆಯ ಹಾದಿಯಲ್ಲಿ ಎಷ್ಟೇ ಎಡರು ತೊಡರುಗಳು ಬಂದರೂ ಮರಳಿ ಮರಳಿ ಯತ್ನವನ್ನು ಮಾಡುವುದೇ ಸಹಜ ಗುಣ. ಅವನ ಗುಣ ಎಂದರೆ ಈ ಎಲ್ಲ ಚರಾಚರಗಳಲ್ಲಿ ಪ್ರವಹಿಸುವ ಜ್ಞಾನಸ್ವಾರೂಪವಾದ, ಪರಮ ಚೇತನದ ಅಂಶವಾದ ಆತ್ಮನ ಗುಣ ಎಂದು ಅರ್ಥೈಸಿಕೊಳ್ಳ ಬಹುದು. ನಾನು ಕೆಲವೊಮ್ಮೆ, ಮನೆಯಲ್ಲಿ ನೆಲದಮೇಲೆ ಹರಿದಾಡುವ ಇರುವೆಗಳ ಹಾದಿಯಲ್ಲಿ ಒಂದು ಕಡ್ಡಿಯನ್ನೂ ಅಥವಾ ನನ್ನ ಬೆರಳನ್ನೇ ಅಡ್ಡವಾಗಿ ಇಟ್ಟಾಗ, ಅದು ಧೃತಿಗೆಡದೆ, ಪಕ್ಕದಿಂದ ಹರಿದು ಹೋಗುಲುಧ್ಯುಕ್ತವಾಗುತ್ತದೆ. ಅದರ ಹಾದಿಯಲ್ಲಿ ಪ್ರತೀ ಬಾರಿ ಅಡ್ಡ ಬಂದಾಗ ಪ್ರತಿ ಬಾರಿಯೂ ಅದು ಪ್ರಯತ್ನವನ್ನು ಬಿಡಿವುದೇ ಇಲ್ಲ. ಒಂದು ಗಿಡದ ರೆಂಬೆಯನ್ನು ಕಡಿದರೆ ಅಕ್ಕಪಕ್ಕಗಳಲ್ಲಿ ಹೊಸ ಚಿಗುರೊಡೆದು, ಒಂದರೆಡೆ ನಾಲ್ಕಾರು ಕೊಂಬೆಗಳುದ್ಭವವಾಗುತ್ತವೆ. ಆಲ್ಲಿ ಚೇತನವಿರುವ ತನಕ ಈ ಪ್ರಯತ್ನ ನಡೆದೇ ಇರುತ್ತದೆ.
ಹಾಗೆಯೇ ಸಕಲ ಚರಾಚರಗಳಲ್ಲಿ ಉತ್ಕೃಷ್ಟ ದೇಹವನ್ನು ಹೊಂದಿದ ಮನುಷ್ಯನೂ ಸಹ ಉಸಿರಾಡುವ ತನಕ ಹೆಣಗಾಡುತ್ತಲೇ ಇರುತ್ತಾನೆ, ಹೋರಾಡುತ್ತಲೇ ಇರುತ್ತಾನೆ. ತನ್ನ ಪ್ರಯತ್ನವನ್ನು ಮಾಡುತ್ತಾನೆ ಇರುತ್ತಾನೆ. ಎಷ್ಟು ಕಷ್ಟಬಂದರೂ, ಎಷ್ಟು ತೊಂದರೆಗಳು ಎದುರಾದರೂ, ಎಷ್ಟು ಸೋಲ್ಲನ್ನುಂಡರೂ ಸಹ ಅವನ ಪ್ರಯತ್ನ ನಡೆದೇ ಇರುತ್ತದೆ. ಜೀವವಿರುವ ತನಕ ಮನಸ್ಸು ನೆನೆದದ್ದನ್ನು ನಡೆಸುವ ಅಥವಾ ಪಡೆಯುವ ಪ್ರಯತ್ನ ನಡೆದೇ ಇರುತ್ತದೆ. ಆದರೆ ಆ ಪ್ರಯತ್ನಪಡುವರು ಯಾರು. ಸಚ್ಚಿದಾನಂದಸ್ವಾರೂಪವಾದ, ಜ್ಞಾನಸ್ವಾರೂಪವಾದ ಆ ಚೇತನ ಸಕ್ರಿಯವಾಗಿರುವ ತನಕ ಪ್ರಯತ್ನ ನಡೆಯುತ್ತದೆ. ಇಲ್ಲದಿದ್ದರೆ ಇಲ್ಲ. ಹಾಗಂದರೆ ಪ್ರಯತ್ನ ನಡೆಯುವುದು ನಮ್ಮಿಂದಲೋ ಅಥವಾ ನಮ್ಮನ್ನು ಧಾರಣೆಮಾಡಿ ಸಕ್ರಿಯವಾಗಿರುವ ಆ ಚೇತನದಿಂದಲೋ.? ಇದು ಪ್ರಶ್ನೆ. ಉತ್ತರ ಸುಲಭ ಆದರೆ ಕಠಿಣ.!!!
ಒಂದು ಸ್ವಿಚ್ ಒತ್ತಿದರೆ ಬಲ್ಬನಿಂದ ಬೆಳಕು ಹರಿಯುತ್ತದೆ. ಆ ಬೆಳಕು ಎಲ್ಲಕಡೆ ಹರಿಯುತ್ತದೆ. ಸ್ವಿಚ್ ಆಫ್ ಮಾಡಿದರೆ ಬೆಳಕು ಇಲ್ಲ. ಅಂದರೆ ಬೆಳಗುವುದು ಬಲ್ಬಿನ ಮೂಲಕ ಹರಿಯುವ ವಿದ್ಯುತ್ ಅಲ್ಲವೇ. ಹಾಗೆಯೇ ನಮ್ಮಲ್ಲೂ ಸಕ್ರಿಯವಾದದ್ದು ಕೇವಲ ನಮ್ಮಲ್ಲಿ ಪ್ರವಹಿಸುವ ಆ ವಿದ್ಯುತ್ರೂಪದ ಚೇತನವೇ ಹೊರತು ನಾವಲ್ಲ. ಹಾಗಾಗಿ ನಮ್ಮ ಎಲ್ಲ ಕಾರ್ಯಗಳೂ ಪ್ರಯತ್ನಗಳೂ ಸಹಾ ಆ ಪರಮ ಚೇತನದಿಂದಲೇ ನಡೆಯುತ್ತದೆ. ಹಾಗೆ ಕಾರ್ಯೋನ್ಮುಖವಾಗುವುದೇ, ಸಕ್ರಿಯವಾಗುವುದೇ ಆ ಚೇತನದ ಅಥವಾ ಆತ್ಮದ ಗುಣ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾನು ಇದನ್ನು ಮಾಡುತ್ತೇನೆ, ನಾನು ಅದನ್ನು ಮಾಡುತ್ತೇನೆ. ನಾನು ಸಾಧಿಸಿಬಿಡುತ್ತೇನೆ ಅಥವಾ ಸಫಲನಾಗುತ್ತೇನೆಎಂದು ನಾವು ಕೊಚ್ಚಿಕೊಳ್ಳುವುದು ಕೇವಲ ನಮ್ಮಅಹಂಕಾರದಿಂದಲ್ಲವೇ? ಇದನ್ನು ತೊರೆದರೆ, ನಮಗೆ ಇಡೀ ಪ್ರಪಂಚದಲ್ಲಿ ಆ ಪರಮ ಚೇತನದ ಸಕ್ರಿಯ ರೂಪ ಕಾಣುವುದು ಅಥವಾ ಅನುಭವಕ್ಕೆ ಬರುವುದು. ಅಂತಹ ಪ್ರಯತ್ನವನ್ನು ನಾವೂ ಸಹ ಮಾಡಬಹುದು.
ರಸಧಾರೆ - 124, ಸಚ್ಚಿದಾನಂದ ತತ್ವ
ಮೌನದೊಳೋ ಮಾತಿನೊಳೋ ಹಾಸ್ಯದೊಳೋ ಹಾಡಿನೊಳೋ |
ಮಾನವಂ ಪ್ರಣಯದೊಳೋ ವೀರ ವಿಜಯದೊಳೋ ||
ಏನೋ ಎಂತೋ ಸಮಾಧಾನಗಳನರಸುತಿಹ |
ನಾನಂದವಾತ್ಮ ಗುಣ ಮಂಕುತಿಮ್ಮ ||
ಸಮಾಧಾನಗಳನರಸುತಿಹನಾನಂದವಾತ್ಮ = ಸಮಾಧಾನಗಳನು+ ಅರಸುತಿಹನು + ಆನಂದವ + ಆತ್ಮ. ಮಾನವಂ = ಕೋಪವನ್ನು
ನಾವು ಸದಾ ಕಾಲ ಮೌನವಾಗಿಯೋ, ಮಾತನಾಡುತ್ತಲೋ, ಹಾಸ್ಯವಾಡುತ್ತಲೋ, ಹಾಡುತ್ತಲೋ, ಕೋಪಗೊಳ್ಳುತ್ತಲೋ, ಪ್ರಣಯದಲ್ಲೋ, ವೀರತ್ವದಲ್ಲೋ ಅಥವಾ ಗೆಲುವಿನ ಸಂಭ್ರಮದಲೋ ಯಾವುದಾದರೂ ವಿಧದಿಂದ ಸಮಾಧಾನ ಸಂತೋಷಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ನಮ್ಮನ್ನು ಸದಾ ಕಾಲ ಸಕ್ರಿಯವಾಗಿಸಿರುವ ಆ ಪರಮ ಚೇತನವು ನಮ್ಮ ಮೂಲಕ ಈ ಎಲ್ಲ ಭಾವಗಳನ್ನೂ ಅನುಭವಿಸುತ್ತಾ ಇರುವುದೇ ಆತ್ಮನ ನಿಜವಾದ ಗುಣ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾವು ಸದಾ ನಿರತರು. ಒಂದಲ್ಲ ಒಂದು ಕೆಲಸದಲ್ಲಿ. ನಮ್ಮ ಎಲ್ಲಾ ಕೆಲಸಗಳ ಮೂಲ ಉದ್ದೇಶ್ಯ ಕೇವಲ ಸಮಾಧಾನ ಮತ್ತು ಆನಂದವನ್ನು ಪಡೆಯುವುದಷ್ಟೇ. ಇದರಲ್ಲಿ ನಮಗೆ ತಿಳಿಯದ ವಿಷಯಯವೆನೆಂದರೆ, ಒಂದು ನಿಜವಾದ ಆನಂದ ಎಂದರೆ ಏನು? ಎರಡು, ಆ ಆನಂದವನ್ನು ಪಡೆಯುವುದು ಹೇಗೆ? ಮತ್ತು ಆ ಆನಂದವನ್ನು ಅನುಭವಿಸುತ್ತಿರುವವರಾರು? ನಾವು ನಾನು ಆನಂದವನ್ನು ಪಡೆಯುತ್ತಿದ್ದೇನೆ” ” ನಾನು ಸಂತೋಷವನ್ನು ಅನುಭವಿಸುತ್ತಿದ್ದೇನೆ” ” ಇಂತಿಂತ ವಸ್ತು ವಿಷಯ ವ್ಯಕ್ತಿಗಳು ಹೀಗೆ ಹೀಗೆ ಇದ್ದರೆ ನನಗೆ ಸಂತೋಷವಾಗುತ್ತದೆಎಂದು ಯೋಚಿಸುತ್ತೇವೆ. ನೋಡಿ ಇಲ್ಲಿ ಎಲ್ಲ ಕಡೆಯೂ ನಾನು” ” ನನಗೆ ” ” ನಮ್ಮಎಂಬ ಪದಗಳನ್ನು ಲೀಲಾಜಾಲವಾಗಿ ಉಪಯೋಗಿಸುತ್ತೇವೆ. ಇಲ್ಲಿ ಹಾಗೆ ಆಡಿಸುವುದು ಕೇವಲ ನಮ್ಮ ಅಹಂಕಾರವಷ್ಟೇಇದು ಅಜ್ಞಾನ ಜನ್ಯ. ಒಂದು ಕ್ಷಣ ನಾವು ಇಡೀ ಜಗತ್ತನ್ನು ಸೃಜಿಸಿ, ಎಲ್ಲವೂ ತಾನೇ ಆಗಿ, ಎಲ್ಲ ರೂಪಗಳ ಅಸ್ತಿತ್ವಕ್ಕೆ ಕಾರಣವಾದ ಆ ಪರಮ ಚೇತನವೇ ಈ ಎಲ್ಲ ಭಾವಗಳನ್ನೂ ಅನುಭವಿಸುತ್ತಿದೆ, “ನಾವಲ್ಲ” ” ಎಂದು ಯೋಚಿಸಿದರೆ, ನಮ್ಮ ಅನುಭವದ ಲಹರಿಯೇ ಬದಲಾಗುತ್ತದೆ.
ದೇಹ ಮನಸ್ಸು ಬುದ್ಧಿ ಆತ್ಮಗಳ ಸಮ್ಮಿಲನದಿಂದಾದ ನಮ್ಮ ಈ ಜೀವನ ಕೇವಲ ಆ ಪರಮ ಚೇತನದ ಕ್ರಿಯೆಯಷ್ಟೇ. ಇವುಗಳ ಮಧ್ಯೆ ನಾನು ಎಂಬುದು ನಮ್ಮ ಇಂದ್ರಿಯ ಸಂಬಂಧವಾದ ಭಾವವಷ್ಟೇ. ಈ ಭಾವದಿಂದ ಮೇಲೆದ್ದು ನಾನುಎಂಬುದನ್ನು ಬಿಟ್ಟು, ಇಡೀ ಸೃಷ್ಟಿಯೇ ಆ ಪರಮಾತ್ಮ, ಎಲ್ಲ ಭಾವಗಳೂ ಆ ಚೇತನದ ಹಲವಾರು ವ್ಯಕ್ತ ರೂಪಗಳಷ್ಟೇ. ಸಚ್ಚಿದಾನಂದ ರೂಪನಾದ ಆ ಚೇತನನೆ ಎಲ್ಲವನ್ನೂ ಅನುಭವಿಸುತ್ತಿದ್ದಾನೆ ಎಂದು ನಾವು ಅರಿತುಕೊಂಡಾಗ ನಮಗೆ ನಿಜವಾದ ಆನಂದ ಉಂಟಾಗುತ್ತದೆ.
ವಾಚಕರೆ, ದೇಹ ಮನಸ್ಸು ಬುದ್ಧಿಗಳನ್ನು ಒಂದೆಡೆ ಸೇರಿಸಿ, ಅದರೊಳಕ್ಕೆ ಆತ್ಮ ರೂಪದಲ್ಲಿ ಸೇರಿ, ಆ ಪರಮ ಚೇತನವು ಆನಂದಿಸುತ್ತಿದೆ. ಏಕೆಂದರೆ ಸಚ್ಚಿದಾನಂದ ಸ್ವರೂಪವಾದ ಅದರ ಮೂಲ ಗುಣವೇ ಆನಂದ. ನಾವು ಅದನ್ನು ಅರಿತರೆ ನಾವೂ ಸಹ ಆನಂದವಾಗಿರಬಹುದು. ಅದನ್ನು ಬಿಟ್ಟು ನಾವೇ ಎಲ್ಲ ಅನುಭವಿಸುತ್ತೇವೆ ಎಂದರೆ ನಮಗೆ ಸತ್ಯವಾದ ಆನಂದದ ಅರಿವೇ ಆಗುವುದಿಲ್ಲ. ನಮ್ಮ ಹುಡುಕಾಟಕ್ಕೆ ಅಂತ್ಯವೇ ಇರುವುದಿಲ್ಲ. ನಾವು ನಮಗೆ ನಿತ್ಯವಾದ ಮತ್ತು ಸತ್ಯವಾದ ಆನಂದಬೇಕಾದರೆ ಈ ಭಾವ ಬೆಳೆಸಿಕೊಳ್ಳಬೇಕು ಅಲ್ಲವೇ? ಇದನ್ನು ಎಲ್ಲ ವಾಚಕರೂ ತಮ್ಮ ತಮ್ಮಲ್ಲೇ ವಿಚಾರ ಮಾಡಿಕೊಳ್ಳಬೇಕೆಂದು ನನ್ನ ವಿಚಾರ, ಏಕೆಂದರೆ ಇದು ಸ್ವಯಂ ವೇದ್ಯ.
ರಸಧಾರೆ - 125, ಸಚ್ಚಿದಾನಂದ ತತ್ವ
ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ |
ಬಚ್ಚಿಡುವುದದನು ಜೀವಿತೆಯ ಮಾಯಕತೆ ||
ಇಕ್ಶುವೊಲ್ ಜೀವ, ಗಾಣದವೊಲ್ ಜಗನ್ಮಾಯೆ |
ನಿಚ್ಚವಿಳೆಯಾಲೆಮನೆ ಮಂಕುತಿಮ್ಮ
ಸಚ್ಚಿದಾನಂದಂಗಳಾತ್ಮ = ಸತ್+ಚಿತ್+ಆನಂದಗಳು+ ಆತ್ಮ // ಬಚ್ಚಿಡುವುದದನು = ಬಚ್ಚಿಡುವುದು+ಅದನು// ನಿಚ್ಚವಿಳೆಯಾಲೆಮನೆ = ನಿಚ್ಚವು+ಇಳೆ+ಆಲೆ+ಮನೆ
ಸ್ವಭಾವ = ಗುಣ // ಜೀವಿತೆಯ = ಬದುಕಿನ // ಮಾಯಕತೆ = ಮಾಯೆ// ಇಕ್ಶುವೊಲ್= ಕಬ್ಬಿನಂತೆ// ಗಾಣದವೊಲ್ = ಜಗನ್ಮಾಯೆ// ನಿಚ್ಚವು+ಇಳೆ+ಆಲೆ+ಮನೆ = ಈ ಜಗತ್ತು ನಿತ್ಯದ ಆಲೆಮನೆ.
ಆತ್ಮದ ಗುಣ ಸಚ್ಚಿದಾನಂದ. ಆದರೆ ಈ ಇಂದ್ರಿಯ ಸಂಪರ್ಕದಿಂದ ಉಂಟಾದ ನಮ್ಮ ಬದುಕಿನ ಮಾಯೆ ಅದನ್ನು ಮುಚ್ಚಿಡುವುದು. ಜೀವ, ರಸ ತುಂಬಿದ ಕಬ್ಬಿಣ ಜಲ್ಲೆ ಇದ್ದಂತೆ. ಈ ಜಗತ್ತಿನ ಮಾಯೆ ಗಾಣದ ರೀತಿ. ಹೀಗೆ ಶುದ್ಧರಸ ತುಂಬಿದ ಆತ್ಮವನ್ನು ಮಾಯೆಯಂಬ ಗಾಣದಲ್ಲಿ ಇರುಕಿಸಿ ಹಿಂಡಿ ಹಿಂಡಿ ನಿತ್ಯ ನಡೆಯುವ ಈ ಜಗತ್ತಿನ ಆಲೆಯಮನೆಯಲ್ಲಿ ಪಾಕ ತೆಗೆಯುವುದೇ ಜೀವನ ಎನ್ನುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಆ ಪರಮ ಚೇತನದ ಒಂದು ಅಂಶವಾದ ಈ ಚರಾಚರ ಜೀವಿಗಳ ರೂಪಧರಿಸಿದ ಆತ್ಮವು ಶುಧ್ಧ, ಆನಂದ ಸ್ವರೂಪ. ಅದರ ಗುಣವೇ ಅನಂದದಿಂದಿರುವುದು. ಆದರೆ ಪೃಥ್ವಿ ಮತ್ತು ಪಂಚಭೂತ ತತ್ವದಿಂದಾದ ಮನಸ್ಸು ಬುದ್ಧಿ ದೇಹಗಳ ಸಂಪರ್ಕದಿಂದ ಅದರ ನಿಜಸ್ವರೂಪ ಮಾಯೆಯಿಂದ ಕವಿಯಲ್ಪಟ್ಟಿದೆ. ಕಬ್ಬಿನ ಜಲ್ಲೆಯಲ್ಲಿ ಆಪಾದಮಸ್ತಕ ಸಿಹಿ ರಸ ತುಂಬಿರುತ್ತದೆ. ಅದನ್ನು ಹೊರತೆಗೆಯಬೇಕಾದರೆ, ಅದನ್ನು ಗಾಣಕ್ಕೆ ಸಿಕ್ಕಸಿ ಅರೆದಾಗ ರಸ ಹೊರಬರುತ್ತದೆ.
ನಮ್ಮ ಜೀವನಗಳೂ ಅಷ್ಟೇ ಎಲ್ಲರಲ್ಲೂ ಶುದ್ಧ ಆತ್ಮವೇ ಇದೆ. ಆದರೆ ಮಾಯೆಯಿಂದ ಕವಿದು ಈ ಪ್ರಪಂಚದಲ್ಲಿ ಮುಳುಗಿದೆ. ಈ ಮನಸ್ಸು ಬುದ್ಧಿ ದೇಹಗಳು ಆತ್ಮದ ತತ್ವವನ್ನು ಅರಿಯಲು ಗಾಣದಂತಿರುವ ನಮ್ಮ ನಿತ್ಯ ಜೀವನದ ಗಾಣದಲ್ಲಿ ಸಿಕ್ಕು ಅರೆಯಬೇಕು. ಆಸೆಗಳು, ಪಾಶಗಳು, ಪ್ರೀತಿ, ದ್ವೇಷಗಳು ಎಲ್ಲ ಭಾವಗಳೊಳಕ್ಕೆ ಹೊಕ್ಕು ಕಷ್ಟ ಸುಖಗಳನ್ನು ಅನುಭವಿಸಿ, ಅನುಭವವನ್ನು ಪಡೆದು ಸತ್ಯವನ್ನು ಅರಿತು ಸತ್ವದ ದರ್ಶನವಾದಾಗ ನಮಗೆ ಸಕ್ಕರೆಯಂಥಾ ಸವಿಯಾದ ಅನುಭವ ಸಿಗುತ್ತದೆ. ಅದನ್ನೇ ಗುಂಡಪ್ಪನವರು ನಿಚ್ಚವಿಳೆಯಾಲೆಮನೆ ಎಂದರು. ಈ ಜಗತ್ತು ನಿತ್ಯದ ಆಲೆಮನೆ ಎಂಬ ಅರ್ಥದಲ್ಲಿ. ಆದರೆ ಇಂದಿನ ಜಗತ್ತಿನಲ್ಲಿ ಎಷ್ಟುಜನ ಗಾಣದಲ್ಲಿ ಸಿಕ್ಕರೂ, ಸಕ್ಕರೆ ಹೊರಬರುವುದೇ ಇಲ್ಲ. ಏಕೆಂದರೆ ಜನ ಹೊಕ್ಕಿರುವ ಈ ಮಾಯೆಯ ಗೋಡೆ ದಿನೇ ದಿನೇ ದಪ್ಪವಾಗುತ್ತಿದೆ. ತಾನು ತನ್ನದೆಂಬ ಮಾಯಾ ಪ್ರೇರಿತವಾದ ಮೋಹದ ಗೋಡೆಯನ್ನು ಒಡೆದು ಹಾಕಿದರೆ ನಮಗೆ ಸವಿಯಾದ ನಿತ್ಯವಾದ ಸತ್ಯವಾದ ಆನಂದ ಸಿಗುತ್ತದೆ. ಅಂದರೆ ಸಚ್ಚಿದಾನಂದ ಸ್ವರೂಪನಾದ ಪರಮ ಚೇತನದ ದರ್ಶನವಾಗುತ್ತದೆ. ಅದನ್ನು ಪಡೆಯಲು ನಿರಂತರ ಪ್ರಯತ್ನವನ್ನು ಎಲ್ಲರೂ ಮಾಡಬೇಕು. ಗುರುಕೃಪೆ ಮತ್ತು ದೈವ ಕೃಪೆಯಿಂದ, ಸಾಧನೆಯ ಮಾರ್ಗದಲ್ಲಿ ನಡೆದಾಗ ಅದನ್ನು ಪಡೆಯಬಹುದು. ಸಕ್ಕರೆಯ ಸವಿ ಬೇಕೆಂದರೆ ನಮ್ಮ ಬದುಕುಗಳೂ ಸಹ ನಿತ್ಯ ಆಲೆಮನೆಗಳಾಗಬೇಕು.
ರಸಧಾರೆ - 126
ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ |
ಕಲೆ ಕಣಂಗಳು ಮಾತ್ರ ಪೂರ್ಣಂಗಳಲ್ಲ ||
ನಲಿವು ಚೆಲುವುಗಳ ಪರಿಪೂರ್ಣ ಮೂಲಾಕೃತಿಯೆ |
ಪರಬೊಮ್ಮನೆನ್ನುವರು ಮಂಕುತಿಮ್ಮ ||
ಒಳಿತೆಂದು = ಒಳಿತು + ಎಂದು // ಸೊಗಸೆಂದು = ಸೊಗಸು + ಎಂದು// ಮೂಲಾಕೃತಿಯೆ = ಮೂಲ + ಆಕೃತಿಯೆ // ಪರಬೊಮ್ಮನೆನ್ನುವರು = ಪರಬೊಮ್ಮ + ಎನ್ನುವರು
ಕಲೆ ಕಣಂಗಳು = ಬಾಗಶಃ// ಪೂರ್ಣಂಗಳಲ್ಲ = ಅಪರಿಪೂರ್ಣಗಳು
ಈ ಜಗತ್ತಿನಲ್ಲಿ ನಾವು ಇದು ಒಳ್ಳೆಯದು” ” ಇದು ಸೊಗಸುಎಂದು ಮೆಚ್ಚುವುದೆಲ್ಲ ಆ ಪರಮಾತ್ಮನ ಸಂಪೂರ್ಣ ರೂಪವಲ್ಲ, ಕೇವಲ ಪಾರ್ಶ್ವರೂಪ. ನಲಿವು ಚೆಲುವುಗಳ ಪರಿಪೂರ್ಣ ರೂಪವೇ ಆ ಪರಮಾತ್ಮ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಜಗದಲ್ಲಿ ಜನರು ಯಾವುದೇ ವಸ್ತುವನ್ನು, ವಿಷಯವನ್ನು ಅಥವಾ ವ್ಯಕ್ತಿಯನ್ನು ಪೂರ್ಣವಾಗಿ ಅರಿತು ನೋಡುವುದೇ ಇಲ್ಲ. ನಮಗೆ ಯಾವುದನ್ನೂ ಸಂಪೂರ್ಣವಾಗಿ ಅರಿಯುವ ಇಚ್ಛೆಯೂ ಇಲ್ಲ, ಯೋಗ್ಯತೆಯೂ ಇಲ್ಲ. ನಾವು ಮೆಚ್ಚುವುದು, ಇಷ್ಟಪಡುವುದು, ಇಷ್ಟಪಡದೆ ಇರುವುದು, ನಾವು ಅಸಹ್ಯಪಟ್ಟುಕೊಳ್ಳುವುದು, ನಾವು ಅತಿಯಾಗಿ ಇಷ್ಟಪಡುವುದು ಎಲ್ಲವೂ ನಮ್ಮ ಭಾವಕ್ಕೆ ಸಂಬಂಧಿಸಿದ್ದು. ನಮ್ಮ ಭಾವ ನಮ್ಮ ಸ್ವಭಾವ ಜನ್ಯ. ನಮ್ಮ ಸ್ವಭಾವ ಹೇಗಿದೆ ಎಂದರೆ, ಒಂದು ವಸ್ತು ವಿಷಯ ಅಥವಾ ವ್ಯಕ್ತಿಯನ್ನು ನಾವು ಇಷ್ಟಪಡುವುದೋ ಅಥವಾ ಪಡದೆ ಇರುವುದಕ್ಕೋ ನಮ್ಮದೇ ಕಾರಣಗಳಿರುತ್ತೆ. ಒಬ್ಬ ವ್ಯಕ್ತಿ ನನಗೆ ಸಹಾಯಮಾಡುತ್ತಾನೆ, ನನ್ನನ್ನು ಹೊಗಳುತ್ತಾನೆ, ನಾ ಹೇಳಿದ ಹಾಗೆ ಕೇಳುತ್ತಾನೆ” ” ನಮ್ಮ ಭಾಷೆಯವನು ನಮ್ಮ ಜಾತಿಯವನುಎಂಬ ಹಲವಾರು ಕಾರಣಗಳಿಗೆ ನಾವು ಅವನನ್ನು ಇಷ್ಟಪಡುತ್ತೇವೆ, ಅಲ್ಲವೇ? ಒಬ್ಬ ವ್ಯಕ್ತಿಯನ್ನು ಆ ವ್ಯಕ್ತಿ ಹೇಗಿದ್ದಾನೋ ಹಾಗೆಯೇ ಇಷ್ಟಪಡುವುದು ಸಾಧ್ಯವೇ ಇಲ್ಲವೆ? ಅಂದರೆ ನಾವು ಒಂದು ವ್ಯಕ್ತಿಯ ಅಥವಾ ವಿಷಯದ ಅಥವಾ ವಸ್ತುವಿನ ಸತ್ಯರೂಪವನ್ನು ನೋಡುವುದಿಲ್ಲ. ಹಾಗಾಗಿ ನಾವು ನೋಡುವ ವಸ್ತು ಅಪೂರ್ಣ!!! ನಮ್ಮ ದೃಷ್ಟಿಗೆ. ಆದರೆ ಅದು ವಸ್ತುಶಃ ಅಪೂರ್ಣವೇ?
ಖಂಡಿತ ಅಲ್ಲ !! ಏಕೆಂದರೆ ವೇದವು ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣವೇವಾವಶಿಷ್ಯತೆ ಎನ್ನುತ್ತದೆ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ ಪ್ರತಿಯೊಂದು ವಸ್ತುವೂ ಪೂರ್ಣವಾಗೆ ಇದೆ. ಹಲವು ಪೂರ್ಣಗಳು ಸೇರಿ ಒಂದು ಪೂರ್ಣವಾಗಿದೆ ಈ ಜಗತ್ತಿನಲ್ಲಿ. ಒಂದು ಪೂರ್ಣವನ್ನು ಎರಡಾಗಿಸಿದರೂ, ಎರಡು ಪರಿಪೂರ್ನವಸ್ತುಗಳೇ ಉಳಿಯುತ್ತವೆ ಎನ್ನುತದೆ ವೇದ. ನಾವು ನೋಡುವ ಪರಿಯಲ್ಲಿ ದೋಷವಿಟ್ಟುಕೊಂಡು ವಸ್ತು ವಿಷಯ ಮತ್ತು ವ್ಯಕ್ತಿಗಳಲ್ಲಿ ದೋಷ ಕಾಣುವುದು ನಮ್ಮ ಕೊರತೆಯಷ್ಟೇ. ಆದರೆ ಇದನೆಲ್ಲ ಸೃಷ್ಟಿಮಾಡಿದ ಆ ಪರಮಾತ್ಮನು ಪರಿಪೂರ್ಣ. ಅವನಲ್ಲಾಗಲೀ ಅವನ ಸೃಷ್ಟಿಯಲ್ಲಾಗಲೀ ಒಂದು ಚೂರೂ ದೋಷವಾಗಲೀ ಕೊರತೆಯಾಗಲೀ ಇಲ್ಲ. ಎಲ್ಲವೂ ಸುಂದರ, ಎಲ್ಲವೂ ಪರಿಪೂರ್ಣ. ಈ ಜಗತ್ತಿನ ಎಲ್ಲರೂ ಅಂದರೆ ಸಕಲ ಚರಾಚರಗಳೂ ಆನಂದವಾಗಿ ಸುಖವಾಗಿ ಇರಲು, ಆ ಪರಮಾತ್ಮ ಎಲ್ಲವನ್ನೂ ಸೃಷ್ಟಿಸಿದ್ದಾನೆ. ನೀರು ಗಾಳಿ,ಆಕಾಶ, ಸೂರ್ಯ ಚಂದ್ರರು, ಗಿಡ ಮರಗಳು, ಎಲ್ಲರಿಗೂ ಆಹಾರ ಎಲ್ಲವನ್ನೂ ಕೊಟ್ಟಿದ್ದಾನೆ. ಮನುಷ್ಯನಿಗೆ ಒಂದು ಸೃಜನಾತ್ಮಕವಾದ ಜ್ಞಾನವನ್ನೂ ಕೊಟ್ಟು ಈ ಭುವಿಗೆ ಇನ್ನಷ್ಟು ಸೌಂದರ್ಯವನ್ನು ತುಂಬಲು ಅನುವು ಮಾಡಿಕೊಟ್ಟಿದ್ದಾನೆ.
ಆದರೆ ಮನುಷ್ಯನ ಸ್ವಾರ್ಥದಿಂದ, ಎಲ್ಲವೂ ತನಗಾಗಿ ಮಾಡಲ್ಪಟ್ಟಿದೆ, ಸೃಷ್ಟಿಸಲ್ಪಟ್ಟಿದೆ ಎಂದು ಆ ಪರಮಾತ್ಮನ ಮೂಲ ಉದ್ದೇಷ್ಯವನ್ನೇ ಅಲ್ಲಗೆಳೆದು ಎಲ್ಲವನ್ನೂ ಹಾಳುಮಾಡುತ್ತಿದ್ದಾನೆ. ನಶ್ವರ ಬಾಳನ್ನು ಪಡೆದು, ತನ್ನಕಡೆನಿಶ್ಚಯ ಮತ್ತು ಸತ್ಯವೆಂದು ಅರಿತರೂ, ಅದನ್ನು ಮರೆಸಿ ಕೇವಲ ಹಣ ಸಂಪಾದನೆಯಲ್ಲಿ ಮತ್ತೆಲ್ಲವನ್ನೂ ಹಾಳುಗೆಡವುತ್ತಿದ್ದಾನೆ. ಮತ್ತೆಲ್ಲವೂ ನಾಶವಾಗಿ, ಕೇವಲ ಹಣವಿದ್ದರೆ ಏನು ಪ್ರಯೋಜನವೆಂಬ ಜ್ಞಾನ ಅವನಿಗೆ ಇಲ್ಲವೇ ಇಲ್ಲ, ಈ ದುಷ್ಟನಿಗೆ. ವಾಚಕರೆ ನಾವಿಂದು ಒಂದು ಭಯಂಕರ ಪರ್ವದಲ್ಲಿ ಇದ್ದೇವೆ. ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕು. ಇಡೀ ಸಮಾಜವನ್ನು ಎಚ್ಚರಿಸಬೇಕು.
ಅಂಥಹ ಪ್ರಯತ್ನವನ್ನು ನಾವು ಮಾಡುವ ಪಣವನ್ನು ಇಂದೇ ತೊಡಬೇಕು.
ರಸಧಾರೆ - 127
ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ |
ಭುವನಜೀವನಜಲಧಿಯೂರ್ಮಿಕೋಟಿಯಲಿ ||
ಛವಿಕೋಟಿಯರಚಲ್ ಪ್ರತಿಚ್ಚಾಯೆ ವಿಲಸಿಪುದು |
ಸವಿ ನಮ್ಮದದರ ಕಣ ಮಂಕುತಿಮ್ಮ ||
ಶಿವ = ಶುಭವಾದ ಛವಿಕೋಟಿಯರಚಲ್ = ಕಾಂತಿಯನ್ನು ಕೋಟಿಕಣಗಳಲ್ಲಿ ಎರಚಲು. ವಿಲಸಿಪುದು = ವಾಸಿಸುವುದು.
ಶುಭ ಸಂತೋಷ ಸೌಂದರ್ಯಗಳ ಪೂರ್ಣರೂಪವೇ ಆ ಪರಮಾತ್ಮ. ಈ ಜಗತ್ತಿನ ಜೀವನವೆಂಬ ಸಮುದ್ರದಲ್ಲಿರುವ ಕೋಟ್ಯಾನುಕೋಟಿ ಜೀವಬಿಂದುಗಳಲ್ಲಿ, ಆ ಪರಮ ಕಾಂತಿಯ ಛಾಯೆ ಕಾಣುವುದು ಅಥವಾ ವಿಲಾಸಿಸುವುದು. ನಾವೂ ಸಹ ಆ ಛಾಯೆಯ ಒಂದು ಕಣ ಮಾತ್ರವೆಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.
ಹೌದಲ್ಲವೇ? ಈ ಜಗತ್ತಿನಲ್ಲಿ ಎಣಿಸಲು ಆಗದಷ್ಟು ವಸ್ತು ಪ್ರಭೇಧಗಳು , ವಿಷಯ ಪ್ರಭೇಧಗಳಿವೆ . ಕೋಟ್ಯಾನು ಕೋಟಿ. ಮತ್ತೆ ಒಂದೊಂದು ಪ್ರಭೇಧದಲ್ಲೂ ಕೋಟಿ ಕೋಟಿ ಪ್ರತಿರೂಪಗಳು. ಪ್ರತಿ ಜೀವಿಯೂ ಇರುವುದು ಇರುವುದು, ಪ್ರಕೃತಿ ಮತ್ತು ಪುರುಷನ ಸಂಯೋಗದಿಂದ. ( ಇಲ್ಲಿ ಪುರುಷ ಎಂದರೆ ಗಂಡಸು ಎಂಬ ಅರ್ಥವಲ್ಲ). ಅಂದರೆ ಪರಮಾತ್ಮನಿಂದಾದ ವಸ್ತುಗಳೊಳಕ್ಕೆ ಪರಮಾತ್ಮನೇ ಚೇತನಾ ರೂಪದಿಂದ ಸೇರಿ ಅದನ್ನೊಂದು ಜೀವಿಯನ್ನಾಗಿಸಿರುವಾಗ, ಈ ಜಗತ್ತಿನಲ್ಲಿ ಇರುವ ಎಲ್ಲವೂ ಆ ಪರಮಾತ್ಮನೇ ಅಲ್ಲವೇ. ಆದರೆ ಬೇರೆ ಬೇರೆ ರೂಪಗಳನ್ನು ಕೊಟ್ಟು ಅವುಗಳನ್ನು ಬೇರೆ ಬೇರೆ ಎಂದು ಗುರುತಿಸುವಂತೆ ಮಾಡಿದ್ದಾನೆ.
ಈ ಜಗತ್ತು ಒಂದು ಮಹಾಸಾಗರ. ಇದನ್ನು ಜಗತ್ಸಾಗರವೆನ್ನಬಹುದು. ಈ ಜಗತ್ಸಾಗರದ ಒಂದೊಂದು ಬಿಂದುವೂ ಒಂದೊಂದು ಜೀವಿ. ಆ ಜೀವಿ ಪ್ರತಿಬಿಂಬಿಸುವುದೂ ಸಹ ಆ ಪಾರಮಾತ್ಮ ತತ್ವವನ್ನೇ. ಆಕಾಶದಲ್ಲಿ ಒಬ್ಬ ಸೂರ್ಯ. ಭೂಮಿಯಮೇಲೆ ಇರುವ ಸಕಲ ಪಾತ್ರೆಗಳ ನೀರಲ್ಲೂ ಒಂದೇ ಸೂರ್ಯ ಬೇರೆಬೇರೆಯಾಗಿ ಪೂರ್ಣವಾಗಿ ಪ್ರತಿ ಬಿಂಬಿಸುವುದಿಲ್ಲವೇ ಹಾಗೆಯೇ ಎಲ್ಲ ಚರಾಚರಗಳಲ್ಲೂ ಆ ಪರಮಾತ್ಮನೇ ಪ್ರತಿಬಿಂಬಿಸುತ್ತಾನೆ ಮತ್ತು ಎಲ್ಲ ಪ್ರಾಣಿಗಳಲ್ಲೂ ಆ ಪರಮಾತ್ಮನೇ ಬೇರೆ ಬೇರೆ ರೂಪಗಳನ್ನು ಧರಿಸಿ ವಾಸಿಸುತ್ತಿದ್ದಾನೆ ಎನ್ನುವುದೇ ಈ ಕಗ್ಗದ ಹೂರಣ.
ಹಾಗಾಗಿ ವಾಚಕರೆ, ಎಂದು ನಮಗೆ ಈ ವಿಚಾರ ಮನದಲ್ಲಿ ಗಟ್ಟಿಯಾಗಿ ನಿಲ್ಲುತ್ತದೋ ಮತ್ತು ಹೊರರೂಪದ ಬೇಧವನ್ನು ಗುರುತಿಸದೆ ಅಂತರ್ಯದಲ್ಲಿ ನಿವಸಿಸುವ ಅಥವಾ ವಿಲಸಿಸುವ ಆ ಪರಮಾತ್ಮನನ್ನು ಕಾಣುವ ಪ್ರವೃತ್ತಿ ನಮಗೆ ಬೆಳೆಯುತ್ತದೋ ಅಂದು ನಾವು ಜಾತಿ ಮತ, ಭಾಷೆ, ವರ್ಣ, ಭಾಗ್ಯ ಮುಂತಾದ ವಿಷಯಗಳಾಧಾರಿತ ಬೇಧ ಮಾಡದೆ ಇಡೀ ವಿಶ್ವವನ್ನೇ ಬದುಕಲು ಒಂದು ಸುಂದರ ತಾಣವನ್ನಾಗಿಸಬಹುದು. ಆದರೆ ತಮಗೆಲ್ಲರಿಗೂ ಗೊತ್ತಿರುವಂತೆ ಇಂದಿನ ವಸ್ತು ಸ್ಥಿತಿಯೇ ಬೇರೆಯಾಗಿದೆ. ಇಂದು ಮನುಷ್ಯ ಮನುಷ್ಯನ ಮಧ್ಯದಲ್ಲಿ ಬೇಧ ಉಂಟಾಗಲು ಸಾವಿರಾರು ಕಾರಣಗಳು. ಇದರ ಬಗ್ಗೆ ಬರೆದರೆ ಕೊನೆಯೇ ಇಲ್ಲದಂತಾಗುತ್ತದೆ. ಹಾಗಾಗಿ ವಾಚಕರೆ ನಾವು ನಮ್ಮ ನಮ್ಮ ನಡುವಿನಲ್ಲಿರುವ ಬೇಧಗಳನ್ನು ಅಳಿಸಿ ಒಂದು ಸೌಹಾರ್ಧಯುತವಾದ ಬಾಳನ್ನು, ಅದರಿಂದ ಒಂದು ಸುಂದರ ಸಮಾಜವನ್ನು ಕಟ್ಟಲು ಪ್ರಯತ್ನಪಡಬಹುದಲ್ಲ!
ರಸಧಾರೆ - 128, ಸಚ್ಚಿದಾನಂದ ತತ್ವ
ಹೊರಗಾವುದೊಳಗಾವುದೀ ಸೃಷ್ಟಿ ಚಕ್ರದಲಿ |
ಎರಡನೊಂದಾಗಿಪುದು ಹರಿವ ನಮ್ಮುಸಿರು ||
ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ
ಬರಿ ಸುಷಿರಪಿಂಡ ಜಗ ಮಂಕುತಿಮ್ಮ
ಹೊರಗಾವುದೊಳಗಾವುದೀ = ಹೊರಗೆ ಆವುದು+ ಒಳಗೆ ಆವುದು //ಎರಡನೊಂದಾಗಿಪುದು = ಎರಡನು ಒಂದಾಗಿಪುದು // ಇರುವುದುಳಿದಿನಿತು = ಇರುವುದು + ಉಳಿದ + ಇನಿತು//ಯೋಗಿಗಳೊಳಂ = ಯೋಗಿಗಳ+ಒಳಂ
ಸುಷಿರಪಿಂಡ = ಕೊಳಲುಗಳ ಸಮೂಹ
ಈ ಸೃಷ್ಟಿಯಲಿ ಹೊರಗೆ ಯಾವುದು, ಒಳಗೆ ಯಾವುದು ? ಹೊರ ಒಳಗನ್ನು ಒಂದೇ ಆಗಿಪುದು ಹರಿವ ನಮ್ಮುಸಿರು. ಯೋಗಿಗಳು ಮಾತ್ರ ತಮ್ಮ ಸಾಧನೆಯಿಂದ ಉಸಿರುಬಿಗಿ ಹಿಡಿದು ಬಿಟ್ಟ ಉಸಿರನ್ನು ತಡೆಯಬಹುದು. ಆದರೆ ಈ ಜಗವೆಲ್ಲ ಒಂದು ಕೊಳಲುಗಳ ಸಮೂಹ ಎಂದು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ನಮ್ಮ ಸುತ್ತಲೂ ಗಾಳಿ ಇದ್ದರೆ ನಾವು ಇರಬಹುದು. ಅಂದರೆ ನಮ್ಮ ಸುತ್ತ ಗಾಳಿ. ಆ ಗಾಳಿ ನಮ್ಮ ಒಳಗೆ ಹೋಗಿ ಹೊರಬರುತ್ತಾ ಇದ್ದರೆ ನಾವೂ ಜೀವಂತ. ಅಂದರೆ ನಮ್ಮ ಒಳಗೂ ಹೊರಗೂ ಅದೇ ಗಾಳಿ. ಇದರಲ್ಲಿ ಒಳಗು ಯಾವುದು ಹೊರಗು ಯಾವುದು. ನಾವಿರುವುದೇ ಅದರಲ್ಲಿ. ಇನ್ನು ನಮ್ಮೊಳಗಿರುವುದು ನಮ್ಮ ಒಳಗೆ ಹೇಗೆ? ಹಾಗಾಗಿ ಹೊರಗೂ ಒಳಗುಗಳ ಅಂತರವೇ ಇಲ್ಲ ಇದ್ದರೂ ಆ ಅಂತರವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.
ಕೆಲವು ಯೋಗಿಗಳು ತಮ್ಮ ಸಾಧನೆಯಿಂದ ಪ್ರಾಣಾಯಾಮ ಮುಂತಾದವುಗಳಿಂದ ಕೆಲಕಾಲ ತಮ್ಮೊಳಗಿನ ಉಸಿರನ್ನು ಒಳಗೇ ಇರಿಸಿಕೊಳ್ಳುವುದೋ ಅಥವಾ ಹೊರಗೆ ಉಸಿರು ಬಿಟ್ಟು, ಕೆಲಕಾಲ ಉಸಿರಾಡದೆಯೇ ಇರಬಹುದು. ಆದರೆ ಇಡೀ ಜಗತ್ತೇ ಉಸಿರಾಡುತ್ತಿದೆ. ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಮೀನು, ಗಿಡ, ಮರ, ಬಳ್ಳಿ, ಹೀಗೆ ಎಲ್ಲವೂ ಉಸುರಿನ ಬಲದಿಂದಲೇ ಜೀವಿಸಿವೆ. ಉಸುರಿನ ನಾಳ ಆಡುತ್ತಿದರೆ ಜೀವನ ಇಲ್ಲದಿದ್ದರೆ ಮರಣ.
ಇದನ್ನೇ ಮಾನ್ಯ ಗುಂಡಪ್ಪನವರು ಸುಷಿರಪಿಂಡಎನ್ನುತ್ತ್ತಾರೆ. ಸುಷಿರ ಎಂದರೆ ಕೊಳಲು ಅಥವಾ ಪಿಳ್ಳಂಗೋವಿ ಎಂದು ಅರ್ಥ. ಆ ಪಿಳ್ಳಂಗೋವಿಯಲ್ಲಿ ನಾವು ಉಸಿರನ್ನು ಊದಿದರೆ ಹೇಗೆ ನಾದಬರುತ್ತದೋ, ಹೇಗೆ ಆ ನಾದವೇ ಆ ಪಿಳ್ಳಂಗೋವಿಯ ಜೀವಾಳವೋ, ಹಾಗೆಯೇ ಈ ಜಗತ್ತಿನ ವ್ಯಾಪಾರವೆಲ್ಲ ನಡೆಯುವುದು ಆ ಪರಮಾತ್ಮ ನಮ್ಮೆಲ್ಲರೊಳಗೆ ಉಸಿರೆಂಬ ಜೀವ ಹೇತುವನ್ನಿಟ್ಟು ನಮ್ಮನ್ನೆಲ್ಲ ಜೀವಂತವಾಗಿಟ್ಟು ಈ ಜಗದ ನಾದ ಹೊರಡಿಸುತ್ತಿದ್ದಾನೆ. ಜಗನ್ನಾಟಕವನ್ನಾಡಿಸುತ್ತಿದ್ದಾನೆ. ನಮ್ಮಿಂದ ಹೊರಡುವ ಶಬ್ದ ಸಹಿತವಾದ ಭಾವ ಮತ್ತು ಶಬ್ದ ರಹಿತವಾದ ಭಾವ ಎಲ್ಲವೂ ಆ ಪರಮಾತ್ಮ ಜೀವಿಗಳೆಂಬ ಪಿಳ್ಳಂ ಗೋವಿಗಳಲ್ಲಿ, ಅಂದರೆ ನಮ್ಮಲ್ಲಿ ಹೊರಡಿಸುವ ನಾದವಲ್ಲವೇ?
ವಾಚಕರೆ, ಇಲ್ಲಿ ನಮ್ಮ, ಅಂದರೆ ಆತ್ಮದ್ದು , ನಮ್ಮ ಸ್ವಂತ ಯಾವುದೂ ಇಲ್ಲ. ಎಲ್ಲವೂ ಎರವಲು, ಈ ದೇಹ, ಭೂಮಿಯಿಂದ , ಮನಸ್ಸು ಬುದ್ಧಿಗಳನ್ನು ಪಂಚ ಭೂತಗಳಿಂದ , ಆತ್ಮನನ್ನು ಪರಮಾತ್ಮನಿಂದ ಎರವಲು ಪಡೆದು ನಾದ ಹೊರಡಿಸುವ ನರರು ನಾವು. ಈ ದೇಹದೊಳಗಿನ ಸಕಲವೂ. ಮನಸ್ಸಿನ ವ್ಯಾಪಾರ, ಬುದ್ಧಿಯ , ಗ್ರಹಣ, ಶೇಕರಣ ಮತ್ತು ಉಪಯೋಗ ಎಲ್ಲವೂ ಎರವಲು. ಎಲ್ಲವನ್ನೂ ಪಡೆದು ಉಪಯೋಗಿಸುವಷ್ಟು ದಿನ ಉಪಯೋಗಿಸಿ ನಂತರ ಸಾಲ ತೀರಿಸಿದ ಹಾಗೆ ಹಿಂತಿರುಗಿಸಿ ಮತ್ತೆ ಎರವಲು ಪಡೆಯಲು ಉಧ್ಯುಕ್ತರಾಗಬೇಕು. ಆದರೆ ಪಡೆದ ಸಾಲವನ್ನು ಹೇಗೆ ಉಪಯೋಗಿಸಿ, ಜಗತ್ತಿನಲ್ಲಿ ನಮ್ಮ ವ್ಯಾಪಾರವನ್ನು ಹೇಗೆ ವೃದ್ಧಿಗೊಳಿಸುವುದು ಎನ್ನುವುದು ನಮಗೆ ಬಿಟ್ಟದ್ದು. ದುರ್ವ್ಯವಹಾರ ಮಾಡಿ ಎಲ್ಲವನ್ನೂ ಕಳೆದುಕೊಂಡು ಗತಿಹೀನರಾಗಬಹುದು, ಸದುಪಯೋಗಪಡಿಸಿಕೊಂಡು ಸದ್ಗತಿಯನ್ನೂ ಪಡೆಯಬಹುದು. ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅದಕ್ಕೆ ನಮ್ಮ ಕನ್ನಡದ ಪುರಂದರ ದಾಸರು ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಿ ಕೊಳ್ಳಬೇಡಿರೋ ಹುಚ್ಚಪ್ಪಗಳಿರಾಎಂದು ಒಂದು ಎಚ್ಚರಿಕೆಯ ಮಾತು ಹೇಳಿದ್ದಾರೆ. ನಮ್ಮ ನಮ್ಮ ಜೀವನವನ್ನು ಸದ್ಆಗಿಸುವ ಹಾದಿಯಲ್ಲಿ ನಮಗೆ ಜಯವಾಗಲಿ.
ರಸಧಾರೆ - 129, ನಿತ್ಯ ಪುರಾತನ ನಿತ್ಯ ನೂತನ
ಧರೆಯ ನೀರ್ಗಾಗಸದ ನೀರಿಳಿದು ಬೆರೆವಂತೆ |
ನರನ ಪ್ರಾಕ್ತನಕೆ ನೂತನಸತ್ವ ಬೆರೆತು ||
ಪರಿವುದೀ ವಿಶ್ವಜೀವನಲಹರಿಯನವರತ |
ಚಿರಪ್ರತ್ನನೂತ್ನ ಜಗ ಮಂಕುತಿಮ್ಮ ||
ನೀರ್ಗಾಗಸದ = ನೀರಿಗೆ+ಆಗಸದ // ವಿಶ್ವಜೀವನಲಹರಿಯನವರತ = ವಿಶ್ವ+ಜೀವನ+ಲಹರಿ + ಅನವರತ //ಪರಿವುದೀ = ಪರಿವುದು+ ಈ
ಪ್ರಾಕ್ತನ= ಹಳತು // ಪರಿವುದು = ಹರಿಯುವುದು // ಅನವರತ = ನಿರಂತರ// ಪ್ರತ್ನನೂತ್ನ = ಹಳತು ಮತ್ತು ಹೊಸತು
ಭೂಮಿಯ ನೀರಿಗೆ ಆಗಸದ ಮಳೆಯ ನೀರು ಇಳಿದು ಬೆರಯುವಂತೆ, ಮನುಷ್ಯನ ಪುರಾತನತೆಗೆ ನೂತನತ್ವ ಬೆರೆತು ನಿರಂತರವಾಗಿ ಹರಿಯುವುದು ಈ ಜೀವನ ಲಹರಿ, ಹಾಗಾಗಿ ಹಳತು ಮತ್ತು ಹೊಸತದರ ನಿರಂತರ ಸಮ್ಮಿಲನವೇ ಈ ಜಗತ್ತು ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ ಈ ಕಗ್ಗದಲ್ಲಿ.
ಆಕಾಶದ ನೀರು ಆಕಾಶದಲ್ಲಿ ಇತ್ತೇ. ಇಲ್ಲ. ಅದು ಈ ಭೂಮಿಯ ಮೇಲಿನ ನೀರೆ ಆವಿಯಾಗಿ ಮೋಡವಾಗಿ ಮತ್ತೆ ಧರೆಗೆ ಇಳಿಯುತ್ತದೆ. ಆಗ ನಾವು ಅದನ್ನು ಹೊಸ ಮಳೆ ಎಂದು ಕರೆಯುತ್ತವೆ. ಆ ರೂಪ ಹೊಸತಾದರೂ ಅದರ ಮೂಲ ಹಳತಲ್ಲವೇ ಆದರೂ ಅದಕ್ಕೊಂದು ಹೊಸ ಬಣ್ಣ. ಅದರ ಆಗಮನ ಹೊಸ ಭಾವವನ್ನು ತರುತ್ತದೆ. ಹೊಸ ಸಂಭ್ರಮದ ಸ್ವಾಗತವಿರುತ್ತದೆ. ಆದರೆ ಆ ಭಾವವೂ ನಮ್ಮಲ್ಲಿ ಹಿಂದೆಯೂ ಬಂದಿತ್ತು, ಹಾಗಾಗಿ ಅದು ಪುರಾತನ, ಆದರೂ ಇಂದು ಬಂದಿದೆ ಹಾಗಾಗಿ ನೂತನ.
ಈ ಜಗತ್ತಿನ ಎಲ್ಲವೂ ಹೇಗೇ. ಹಳತಿನ ಆಧಾರದ ಮೇಲೆ ಹೊಸ ಹೊಸ ವಿಚಾರಗಳು, ಆವಿಷ್ಕಾರಗಳು ಭಾವಗಳು ಸಾಹಿತ್ಯ ಸಂಗೀತ ಸಂಸ್ಕೃತಿ ಎಲ್ಲವೂ ಸಹ. ಅದರಿಂದ ಇದು ಹೊಸರೂಪ ತಾಳುತ್ತೆ. ಅದನ್ನು ನಾವು ನೂತನವೆನ್ನುತ್ತೇವೆ. ಏನೋ ಹೊಸದನ್ನು ಕಂಡುಹಿಡಿದ ಹಾಗೆ ಅಥವಾ ಕಂಡಹಾಗೆ ಸಂಭ್ರಮಿಸುತ್ತೇವೆ. ಆದರೆ ಹಳತು ಹೊಸದರ ಮೂಲ. ಹಳತಿಗೆ ಅದಕ್ಕಿಂದ ಹಳತಿನದು ಮೂಲ. ಹೀಗೆ ಹಳತು ಹೊಸತುಗಳ ಪ್ರವಾಹದ ಚಲನೆ ಈ ಜಗತ್ತಿನಲ್ಲಿ ನಿರಂತರವಾಗಿ ನಡೆದೇ ಇರುತ್ತದೆ. ನಮ್ಮ ಕನ್ನಡ ಭಾಷೆಯನ್ನೇ ತೆಗೆದುಕೊಳ್ಳೋಣ. ಭಾಷೆ ಒಂದೇ ದಿನದಲ್ಲಿ ಉಗಮವಾಗಲಿಲ್ಲ. ಒಂದು ವಿಕಸನ ಪ್ರಕ್ರಿಯೆಯಲ್ಲಿ ಹರಿದು ಹಲವಾರು ರೂಪಗಳನ್ನು ತಳೆದು ಪಡೆದು ಮತ್ತೆ ಆ ವಿಕಸನ ಪ್ರಕ್ರಿಯೆಯಲ್ಲೇ ರೂಪಾಂತರಗೊಳ್ಳುತ್ತಾ, ಇಂದಿನ ರೂಪ ಪಡೆದಿದೆ. ಓದುವ ಬರೆಯುವ ಮತ್ತು ಆಡುವ ಎಲ್ಲ ರೂಪಗಳಲ್ಲೂ ಅದು ಬದಲಾಗುತ್ತಾ ಇದೆ. ಹಳತಿನ ಆಧಾರದ ಮೇಲೆ ಹೊಸ ಹೊಸ ರೂಪ ಪಡೆಯುತ್ತದೆ. ಇಂದು ನಾವು ಹಳೆಗನ್ನಡವನ್ನು ಓದಲು ಸಮರ್ಥರಲ್ಲ. ಈಗಿನ ಹೊಸ ಕನ್ನಡ ಓದುತ್ತೇವೆ. ಆದರೆ ಇಂದಿನ ಭಾಷೆಯು ಅಂದಿನ ಭಾಷೆಯ ರೂಪಾಂತರಿತ ರೂಪವೆಂದು ಅರಿಯಬೇಕು .
ಒಂದು ಮರ ನೂರಾರು ವರ್ಷಗಳ ಕಾಲ ಜೀವಂತವಾಗಿರುತ್ತೆ. ಅದರ ಬೇರುಗಳು ಭೂತಲದಲ್ಲಿ ಸುತ್ತಲೂ ಬಹಳ ಕಾಲದಿಂದ ಹರಡಿಕೊಂಡಿರುತ್ತವೆ, ಅದರ ಕಾಂಡ ಭದ್ರವಾಗಿ ಭೂಮಿಯಲ್ಲಿ ನಾಟಿಕೊಂಡು ಇರುತ್ತದೆ. ಪ್ರತೀ ವರ್ಷವೂ ಆ ಮರ ತನ್ನ ದೇಹವನ್ನು ಕೊಡವಿಕೊಂಡಂತೆ ತನ್ನ ಎಲೆಗಳನ್ನೆಲ್ಲ ಉದುರಲು ಬಿಟ್ಟು ಮತ್ತೆ ಹೊಸ ಚಿಗುರನ್ನು ಮತ್ತು ಅದರ ಮೂಲಕ ಹೊಸ ಹೂ ಕಾಯಿ ಹಣ್ಣುಗಳನ್ನು ತಳೆಯುವುದಿಲ್ಲವೇ. ಈ ಪ್ರಕ್ರಿಯೆಯನ್ನು ನಾವು ಜಗತ್ತಿನ ಪ್ರತೀ ವಸ್ತುವಿಗೂ ಅನ್ವಯಿಸಿಕೊಳ್ಳಬಹುದು. ನಮ್ಮ ಯೋಚನೆ ಎಷ್ಟು ದೂರ ಹೋಗಬಲ್ಲದೋ ಅಷ್ಟೂ ದೂರ ಹರಿಸಿ ನೋಡಿದಾಗ, ನಮಗೆ ಈ ಹಳತು ಹೊಸತುಗಳ ಸಮ್ಮಿಲಿತ ರೂಪದ ಪರಿಚಯ ಖಂಡಿತ ಆಗುತ್ತದೆ. ನಮ್ಮ ಎಲ್ಲ ಹೊಸತೂ ಸಹ ಹಳತಿನ ಅಡಿಪಾಯದಮೇಲೆ ನಿಂತ ಹೊಸ ರೂಪ ಎಂದು ನಾವು ಅರ್ಥಮಾಡಿಕೊಂಡಾಗ ಈ ಜಗಜ್ಜೀವನದ ನಿರಂತರತೆಯ ರೂಪ ನಮಗೆ ಗೋಚರವಾಗುತ್ತದೆ.
ರಸಧಾರೆ - 130
ರಾಮನಡಿಯಿಟ್ಟ ನೆಲ,ಭೀಮನುಸಿರಿದ ಗಾಳಿ |
ವ್ಯೋಮದೆ ಭಗೀರಥಂ ತಂದ ಸುರತಟನಿ ||
ಸೋಮನಂ ಪೆತ್ತ ಕಡಲೀ ಪುರಾತನಗಳಿರೆ |
ನಾವೆಂತು ಹೊಸಬರೆಲೊ- ಮಂಕುತಿಮ್ಮ ||
ರಾಮನಡಿಯಿಟ್ಟ = ರಾಮನು + ಅಡಿ + ಇಟ್ಟ //ಭೀಮನುಸಿರಿದ = ಭೀಮನು + ಉಸುರಿದ,// ಪುರಾತನಗಳಿರೆ = ಪುರಾತನಗಳು + ಇರೆ // ಹೊಸಬರೆಲೊ = ಹೊಸಬರು + ಎಲೊ
ವ್ಯೋಮದೆ = ಆಕಾಶದಿಂದ // ಸುರತಟನಿ = ಗಂಗಾನದಿ //ಸೋಮನಂ = ಚಂದ್ರನನ್ನು // ಪೆತ್ತ = ಹೆತ್ತ,// ಕಡಲೀ= ಸಮುದ್ರವು// ಪುರಾತನಗಳಿರೆ= ಪುರಾತನವಾಗಿರಲು
ರಾಮನು ನಡೆದಾಡಿದ ನೆಲ, ಭೀಮನು ಉಸಿರಾಡಿದ ಈ ಭೂಮಿ, ದಿವಿಯಿಂದ ಭಗೀರಥ ಈ ಭೂಮಿಗೆ ತಂದ ಆಕಾಶ ಗಂಗೆ, ಸಮುದ್ರ ಮಂಥನದಲ್ಲಿ ಕ್ಷೀರಸಾಗರದಲ್ಲಿ ಹುಟ್ಟಿದ ಆ ಚಂದ್ರ ಇವೆಲ್ಲವೂ ಪುರಾತನವೇ ಆಗಿರಲು, ನಾವು ಹೇಗೆ ಈ ಭೂಮಿಯಲ್ಲಿ ಹೊಸಬರಾಗುತ್ತೇವೆ ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.
ತ್ರೇತಾಯುಗದಲ್ಲಿ, ಪೂರ್ವದಲ್ಲಿ ರಾಮನು ನಡೆದಾಡಿದ, ಸರಯೂ ನದೀ ತೀರ, ಆ ಪಂಚವಟಿ, ದಂಡಕಾರಣ್ಯ, ಆ ರಾಮೇಶ್ವರ ಎಲ್ಲವೂ ಇಂದೂ ಇವೆ. ದ್ವಾಪರದಲ್ಲಿ ಭೀಮನೂ ಸಹ ಇಂದು ಇರುವ ಗಾಳಿಯನ್ನೇ ಉಸಿರಾಡುತ್ತಿದ್ದನು. ಭಾಗೀರಥನು ದಿವಿಯಿಂದ ಭುವಿಗೆ ತಂದ ಆ ಪರಮ ಪಾವನೆ ಗಂಗಾ ಮಾತೆ ಇನ್ನೂ ಹಾಗೆಯೇ ಹರಿದು ಈ ಭಾರತ ಖಂಡವನ್ನು ಪವಿತ್ರಗೊಳಿಸುತ್ತಿದ್ದಾಳೆ. ಪುರಾಣಗಳ ಪ್ರಕಾರ ಸಮುದ್ರಮಂಥನದಲ್ಲಿ ಉದ್ಭವವಾದ ಚಂದ್ರನು ಇನ್ನೂ ನಮಗೆ ಕಾಣುತ್ತಿದ್ದಾನೆ.ಹಾಗೆ ಎಲ್ಲ ಪುರಾತನವಸ್ತುಗಳೂ ನಮ್ಮೊಂದಿಗೆ ಇರುವಾಗ, ನಾವು ನೂತನರು, ಹೊಸಬರು ಹೇಗಾಗುತ್ತೇವೆ, ಎನ್ನುವುದೇ ಈ ಕಗ್ಗದ ಹೂರಣ.
ಮಹಾಭಾರತ ಯುದ್ಧದಲ್ಲಿ ಅರ್ಜುನ ನನ್ನ ಬಾಂಧವರನ್ನು ಕೊಂದು ಸಿಗುವ ರಾಜ್ಯ ನನಗೇಕೆಎಂದು ಗೋಳಾಡುತ್ತಾ, ” ನಾ ಯುದ್ಧ ಮಾಡುವುದಿಲ್ಲ ಎಂದಾಗ ಕೃಷ್ಣ ಹೇಳುತ್ತಾನೆನಿನ್ನ ಮುಂದೆ ನಿಂತಿರುವವರು ಹಿಂದೆಯೂ ಇದ್ದರು, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ಹಾಗಾಗಿ ಅವರಿಗಾಗಿ ನೀನು ಚಿಂತಿಸಬೇಡಎಂದು. ಈ ಪ್ರಪಂಚ ಒಂದು ನಿರಂತರ ಪಯಣಿಸುವ ಆಕಾಶಕಾಯವಿದ್ದಹಾಗೆ. ಇಲ್ಲಿ ಅದೇ ವಸ್ತುಗಳು ಮತ್ತೆ ಮತ್ತೆ ಬಂದು ಹೋಗುತ್ತಿರುತ್ತವೆ. ಅಂದಿನ ನೂತನವು ಇಂದಿಗೆ ಪುರಾತನವಾಗುತ್ತದೆ ಅಂದಿನ ಪುರಾತನವು ಇಂದಿಗೆ ನೂತನವಾಗುತ್ತದೆ.
ನಮ್ಮ ತಾತ ಚಿಕ್ಕಹುಡುಗನಾಗಿದ್ದಾಗ, ಅವರು ಅವರ ತಾತನಿಗೆ ನೂತನ. ಕಾಲಾನುಕಾಲಕ್ಕೆ ಅವರಿಗೆ ಮಕ್ಕಳಾದಾಗ,ಅವರ ಮಕ್ಕಳು ನೂತನರು. ಮಕ್ಕಳಿಗೆ ಅವರು ದೊಡ್ಡವರು. ಮಕ್ಕಳ ಮಕ್ಕಳಿಗೆ ವೃದ್ಧರು. ನಮಗೆ ಅವರು ಪುರಾತನರು. ಅವರು ಈಗ ಬರೇ ನೆನೆಪು ಮಾತ್ರ. ನೋಡಿದಿರಾ ನೂತನವು ಹೇಗೆ ಪುರಾತನವಾಯ್ತು ಮತ್ತು ಪುರಾತನವು ಹೇಗೆ ನೂತನವಾಯ್ತು . ಇದು ಈ ಜಗತ್ತಿನ ಎಲ್ಲ ಜೀವಿಗಳಲ್ಲಿಯೂ ಸಹಜ. ಆದರೆ ಒಂದು ವಿಷಯ ಗಮನಿಸಬೇಕು. ಇಲ್ಲಿ ನೂತನವಾಗುವುದು ಏನು ಪುರಾತನವಾಗಿ ಉಳಿಯುವುದು ಏನು ? ಸದಾ ನೂತನವಾಗಿ ಉಳಿಯುವುದು ಚೇತನ ಪುರಾತನವಾಗುವುದು ರೂಪ. ಪುರಾತನವಾದ ರೂಪ ಮತ್ತೆ ನೂತನ ವಾಗುತ್ತದೆ. ಆದರೆ ನಿತ್ಯ ನೂತನವಾದ ನಿತ್ಯವಾದ , ಮತ್ತು ಸತ್ಯವಾದ ಚೇತನ ಪುರಾತನ ರೂಪವನ್ನು ತೊರೆದು ನೂತನ ರೂಪವನ್ನು ಧಾರಣೆ ಮಾಡುತ್ತದೆ. ಹಾಗಾಗಿ ಪುರಾತನವಾಗುವುದು ಕೇವಲ ರೂಪ ಮಾತ್ರ. ನಿತ್ಯ ನೂತನ ಚೇತನ.
ಹೀಗೆ ಪುರಾತನ ಮತ್ತು ನೂತನಗಳ ಪರಸ್ಪರ ಹೊಂದಾಣಿಕೆಯೇ ಜೀವನ . ನಾವು ನಮ್ಮನ್ನು ಚೇತನ ಎಂದು ಅರಿತರೆ ನಾವೂ ಸಹ ನಿತ್ಯ ನೂತನ.
ರಸಧಾರೆ - 131
ಪುಲಿಸಿಂಘದುಚ್ವಾಸ, ಹಸು ಹುಲ್ಲೆ ಹಯದುಸಿರು |
ಹುಳು ಹಾವಿಲಿಯಸುಯ್ಲು, ಹಕ್ಕಿ ಹದ್ದುಯ್ಲು ||
ಕಲೆತಿರ್ಪುವೀಯಲ್ಲ ನಾಮುಸಿರ್ವೆಲರಿನಲಿ |
ಕಲಬೆರಕೆ ಜಗದುಸಿರು ಮಂಕುತಿಮ್ಮ
ಪುಲಿಸಿಂಘದುಚ್ವಾಸ = ಹುಲಿ + ಸಿಂಹದ + ಉಚ್ವಾಸ // ಹಯದುಸಿರು = ಹಯದ + ಉಸಿರು// ಹದ್ದುಯ್ಲು = ಹದ್ದ+ಹುಯ್ಲು // ಹಾವಿಲಿಯಸುಯ್ಲು,= ಹಾವು+ಇಲಿಯ+ಸುಯ್ಲು // ಕಲೆತಿರ್ಪುವೀಯಲ್ಲ = ಕಲೆತು + ಇರ್ಪುದು+ ಈ+ ಎಲ್ಲ // ನಾಮುಸಿರ್ವೆಲರಿನಲಿ = ನಾವು+ ಉಸಿರ್ವ+ ಎಲರಿನಲಿ//ಜಗದುಸಿರು = ಜಗದ + ಉಸಿರು.
ಹಯ = ಕುದುರೆ // ಹುಯ್ಲು = ಉಸಿರು// ಇರ್ಪುದು = ಇರುವುದು.//ಉಸಿರ್ವ = ಉಸಿರಾಡುವ // ಎಲರಿನಲಿ = ಗಾಳಿಯಲಿ// ಸುಯ್ಲು = ಉಸಿರು
ಹುಲಿ, ಸಿಂಹ, ಹಸು, ಜಿಂಕೆ, ಕುದುರೆ, ಹುಳು, ಹಾವು, ಇಲಿ , ಹಕ್ಕಿ, ಹದ್ದು ಈ ಎಲ್ಲ ಪ್ರಾಣಿ ಪಕ್ಷಿಗಳು ಉಸಿರಾಡುವ ಗಾಳಿಯೇ ನಾವು ಉಸಿರಾಡುವ ಗಾಳಿಯಲ್ಲಿ ಕಳೆತುಹೋಗಿದೆ. ಹಾಗಾಗಿ ಈ ಜಗತ್ತಿನ ಉಸಿರು ಕಲಬೆರಕೆ ಉಸಿರು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಕೆಲ ಪ್ರಾಣಿಗಳು ಕಾಡಿನಲ್ಲಿ, ಕೆಲ ಪ್ರಾಣಿಗಳು ನಾಡಿನಲ್ಲಿ ವಾಸಿಸುತ್ತವೆ. ಕೆಲವು ನೆಲದ ಮೇಲೆ, ಕೆಲವು ಬಿಲದ ಒಳಗೆ, ಕೆಲವು ಮರದ ಮೇಲೆ. ಕೆಲವು ಗುಹೆಗಳಲ್ಲಿ. ಹೀಗೆ ಬೇರೆ ಬೇರೆ ಕಡೆ ವಾಸಿಸುವ ಪ್ರಾಣಿ ಗಳಲ್ಲವೂ ಉಸಿರಾಡುವ ಗಾಳಿ, ಎಲರು ಮಾತ್ರ ಒಂದೇ ಅಲ್ಲವೇ? ಅಷ್ಟೇ ಅಲ್ಲ, ಅವು ಕುಡಿಯುವ ನೀರೂ ಸಹ ಆ ಒಂದೇ ಆಕಾಶದಿಂದ ಬೀಳುವ ಮಳೆಯೇ ಅಲ್ಲವೇ? ಇನ್ನು ಎಲ್ಲ ಪ್ರಾಣಿಗಳಿಗೂ ಆಹಾರಕ್ಕೆ ಅಧಾರಪಡುವುದು, ಎಲ್ಲರಿಗೂ ಅನ್ನಪೂರ್ಣೆಯಾದ ಈ ಭೂ ತಾಯಿಯನ್ನು. ಕೆಲವು ನೇರವಾಗಿ, ಕೆಲವು ಸುತ್ತಿ ಬಳಸಿ ( indirect dependency). ಎಲ್ಲ ಪ್ರಾಣಿಗಳ ಮೇಲೆ ಬೀಳುವ ಬೆಳಕು ಮತ್ತು ಶಾಖಕ್ಕೂ ಮೂಲ ಸಹ ನಮಗೆ ಕಾಣುವ ಒಂದೇ ಸೂರ್ಯನದು, ಅಲ್ಲವೇ? ನಾವೂ ಸಹ, ಅಂದರೆ ನಾವು ಮನುಜರೂ ಸಹ ಅದೇ ಗಾಳಿ, ಅದೇ ನೀರು, ಅದೇ ಬೆಳಕು, ಮತ್ತು ಅದೇ ಶಾಖವನ್ನು ಅದೇ ಮೂಲಗಳಿಂದ ಪಡೆಯುತ್ತೇವೆ. ಇಲ್ಲಿ ಬೇರೆ ಬೇರೆ ಪ್ರಾಣಿಗಳು ಉಸಿರಾಡುವ ಗಾಳಿಯಾವುದು? ನಾವು ಉಸಿರಾಡುವ ಗಾಳಿಯಾವುದು, ಮೇಲಿಂದ ಹರಿದು ಬರುವ ನೀರಿಗೆ ಯಾರು ಮೊದಲು ಬಾಯಿಟ್ಟಿದ್ದರು ಎಂದು ಕಂಡು ಹಿಡಿದುಕೊಳ್ಳುವುದು ಸಾಧ್ಯವೇ ಇಲ್ಲ ಅಲ್ಲವೇ? ಅಂದರೆ ನಾವು ಈ ಇಳೆಯನ್ನು ಇದ್ದು ಹೋಗಲು ಬಂದಿದ್ದೇವೆ ಅಷ್ಟೇ ಮತ್ತು ಇಲ್ಲಿರುವ ಎಲ್ಲವನ್ನೂ ನಾವು ಇತರೊಂದಿಗೆ ಹಂಚಿಕೊಂಡೆ ಬಾಳಬೇಕು.
ಅದೇ ನೀರು ಬಾರಿ ಬಾರಿ ಆವಿಯಾಗುತ್ತದೆ., ಅದು ಮೋಡವಾಗಿ ಧರೆಗೆ ಮಳೆಯಾಗಿ ಇಳಿಯುವುದು. ಇದು ಒಂದು ಚಕ್ರ. ಈ ಚಕ್ರ ಎಷ್ಟು ದಿನಗಳಿಂದ ಸುತ್ತುತ್ತಿದೆ ಎಂದು ಹೇಗೆ ಹೇಳುವುದು? ಒಂದೊಂದು ಹನಿಯೂ ಬಹಳ ಪುರಾತನವಾದದ್ದು , ಈ ಭೂಮಿಯೂ ಸಹ ಬಹಳ ಪುರಾತನವಾದದ್ದು. ಇಲ್ಲಿ ಬಂದು ಹೋಗುವ ಚರಾಚರಗಳೂ ಸಹ ಬಹಳ ಪುರಾತನವಾದವು. ರೂಪ ಬದಲಾಯಿಸಿಕೊಂಡು ಮತ್ತೆ ಮತ್ತೆ ನೂತನವೆಂಬಂತೆ ಬಂದು ಹೋಗುತ್ತಿದೆ. ಕೆಲವು ಬಂದು ಬೇಗನೆ ರೂಪಾಂತರಗೊಳ್ಳುತ್ತವೆ ಮತ್ತೆ ಕೆಲವು ನಿಧಾನವಾಗಿ ಆಗುತ್ತವೆ. ಮನುಷ್ಯರಾದ ನಾವೂ ಅಷ್ಟೇ. ಹಿಂದಿನವರು ಮಾಡಿದ್ದನ್ನೇ ನಾವು ಮಾಡುವುದು. ಮಾಡುವ ರೀತಿ ಸ್ವಲ್ಪ ವಿನೂತನವಾಗಿ ಕಾಣುತ್ತದೆ. ಅದೂ ಸಹ ಪುರಾತನದ ಅಡಿಪಾಯದ ಮೇಲೆ ಇರುತ್ತದೆ. ಹೀಗೆ ಈ ಜಗತ್ತೇ ಪುರಾತನ ಮತ್ತು ನೂತನತೆಯ ಒಂದು ಕಲಬೆರಕೆ ಎನ್ನುವುದು ಈ ಕಗ್ಗದ ಹೂರಣ. ನಾವು ಈ ವಿಷಯವನ್ನು ಕಾಣಬೇಕು ಅರ್ಥಮಾಡಿಕೊಳ್ಳಬೇಕು, ಅಷ್ಟೇ.
ರಸಧಾರೆ - 132
ರಾಮನುಚ್ವಾಸವಲೆದಿರದೆ ರಾವಣನೆಡೆಗೆ |
ರಾಮನುಂ ದಶಕಂಠನೆಲರನುಸಿರಿರನೆ ||
ರಾಮರಾವಣರಿಸಿರ್ಗಳಿಂದು ನಮ್ಮೊಳಗಿರವೇ? |
ಭೂಮಿಯಲಿ ಪೋಸತೇನೋ ? – ಮಂಕುತಿಮ್ಮ.||
ರಾಮನುಚ್ವಾಸವಲೆದಿರದೆ = ರಾಮನ + ಉಚ್ವಾಸವು+ ಅಲೆದಿರದೆ// ರಾವಣನೆಡೆಗೆ = ರಾವಣನ ಎಡೆಗೆ//ದಶಕಂಠನೆಲರನುಸಿರಿರನೆ = ದಶ + ಕಂಠನ + ಎಲರನು+ ಉಸಿರಿರನೆ//
ರಾಮರಾವಣರುಸಿರ್ಗಳಿಂದು = ರಾಮ + ರಾವಣರ + ಉಸಿರುಗಳು + ಇಂದು // ನಮ್ಮೊಳಗಿರವೇ = ನಮ್ಮೊಳಗೇ + ಇರವೇ // ಪೋಸತೇನೋ = ಪೊಸತು + ಏನೋ
ಎಲರನು = ಗಾಳಿಯನು // ಉಚ್ವಾಸವು = ಶ್ವಾಶದ ಗಾಳಿ // ಪೋಸತೇನೋ = ಹೊಸದೇನೋ?
ರಾಮನು ಉಸಿರಾಡಿದ ಉಸಿರ ರಾವಣ ಉಸಿರಾಡಲಿಲ್ಲವೇ? ಹಾಗೆಯೇ ರಾಮನೂ ಸಹ ರಾವಣನ ಉಸಿರ ಉಸಿರಾಡಿರಬಹುದಲ್ಲವೇ. ಅಂದು ಬೀಸಿದ ಪವನನು ಇಂದೂ ಇರುವುದರಿಂದ ಅಂದು ರಾಮ ರಾವಣರು ಉಸಿರಾಡಿದ ಉಸಿರು ನಮ್ಮೊಳಗೂ ಇರುವಾಗ ಈ ಭೂಮಿಯಲಿ ಹೊಸತು ಯಾವುದು ಎಂದು ಒಂದು ಪ್ರಶ್ನೆ ಎತ್ತುತ್ತಾರೆ ಮಾನ್ಯ ಗುಂಡಪ್ಪನವರು.
ಈ ಭೂಮಿಯೂ ಬಹಳ ಹಳತು. ಆದರೆ ಪ್ರತಿಬಾರಿ ಉತ್ತಾಗಲೂ ಹೊಸತನದಿಂದ ಮೆರೆಯುವ ಈ ಭೂಮಿ ಹೊಸರೂಪ ಧರಿಸುತ್ತದೆ. ಹಾಗೆಯೇ ಈ ಭೂಮಿಯಮೇಲೆ ಬೆಳೆಯುವ ಹೊಸ ಬೆಳೆ, ಮರಗಳಲ್ಲಿನ ಹೊಸ ಚಿಗುರು, ಹೂ ಹಣ್ಣುಗಳೂ ಸಹ ಹೊಸದಾಗಿವೆ. ಆದರೆ ಅದರ ಆಧಾರ ಹಳೆಯ ಮರ ಮತ್ತು ಆ ಮರಕ್ಕೆ ಆಧಾರ ಈ ಹಳೆಯ ಇಳೆ. ಹೀಗೆ ಹಳೆಯ ಮತ್ತು ಹೊಸದರ ಸಮ್ಮಿಲನವೇ ಜೀವನ. ಹಳೆಯದು ಹಾಗೇ ಇದ್ದರೆ ಒಂದು ರೀತಿಯ ಏಕತಾನತೆ ಮೂಡಿ, ಸ್ವಾರಸ್ಯವಿಲ್ಲದ ಜೀವನವಾಗುತ್ತಿತ್ತು. ನಮಗೆ ಮತ್ತು ಈ ಇಳೆಗೆ ಮತ್ತೆ ಮತ್ತೆ ಬಂದು ಹೋಗುವ ಜೀವಿಗಳಿಗೆ ಒಂದು ಹುರುಪನ್ನು, ಒಂದು ಜೀವನೋತ್ಸಾಹವನ್ನು ತುಂಬುವ ಸಲುವಾಗಿ ಈ ರೀತಿ ಹೊಸತು ಹಳತರ ಸಮ್ಮಿಲಿತ ಜೀವನ ಚಕ್ರವನ್ನು ಆ ಪರಮ ಚೇತನ ವಿಧಿಸಿದೆ. ಹಳೆಯ ನೆನಪುಗಳು ಮತ್ತು ಅವುಗಳು ನೀಡುವ ಹೊಸ ಹುರುಪುಗಳೇ ಜೀವನ ಸಾರ.
ಹಾಗೆಯೇ ಬೀಸುವ ಗಾಳಿ, ಬೀಳುವ ಮಳೆ, ಹೊಸ ಬೆಳೆ, ಹೊಸ ಚಿಗುರು, ಹೂ ಹಣ್ಣುಗಳು,ಎಲ್ಲವೂ ಸಹ. ನಾವು ಚಿಕ್ಕಂದಿನಲ್ಲಿ ಘನವಾದ ಮಳೆಗಳನ್ನು ನೋಡಿದ್ದೆವು. ಆದರೆ ಈಗಲೂ ಆ ಮಳೆ ಆ ಮಿಂಚು ಆ ಗುಡುಗುಗಳ ಸದ್ದು ಕೇಳಿದಾಗ ಏನೋ ಒಂದು ಉತ್ಸಾಹ ಮೂಡುತ್ತದೆ. ಇಲ್ಲಿ ಬೀಸುವ ಗಾಳಿ ಇಡೀ ಭೂಮಿಯನ್ನು ಸುತ್ತಿ ಸುತ್ತಿ ಎಷ್ಟು ಕೋಟಿ ಕೋಟಿ ಬಾರಿ ಸುತ್ತಿದೆಯೋ ಯಾರಿಗೆ ಲೆಕ್ಕ. ಆ ಗಾಳಿ ಕಂಡ ಜನರೆಷ್ಟು, ಆ ಗಾಳಿ ಕಂಡ ಜನರ ನೋವೆಷ್ಟು ನಲಿವೆಷ್ಟು ಚರಿತೆಯೆಷ್ಟು, ಲೆಕ್ಕವಿದೆಯೇ? ಆದರೂ ನಾವು ಪ್ರತಿಬಾರಿ ಉಸಿರನೆಳದುಕೊಂಡಾಗಲೂ, ಅದು ನಮಗೆ ಹೊಸ ಉಸಿರು. ಆದರೆ ಅದೇ ಉಸಿರು ಸಾವಿರ ಸಾವಿರ ಕೋಟಿಬಾರಿ ಒಳಹೊಕ್ಕು ಹೊರಗೆ ಬಂದಂತ ಹಳೆಯ ಗಾಳಿಯೇ ಅಲ್ಲವೇ. ಪ್ರತಿಬಾರಿ ನಾವು ಉಸಿರಾಡಿದಾಗಲೂ, ಒಂದು ಚೈತನ್ಯ ತುಂಬುತ್ತದೆ, ಉತ್ಸಾಹ ಮೂಡುತ್ತದೆ. ಆ ಉತ್ಸಾಹವನ್ನು ಕಾಪಾಡಲೋಸುಗವೇ, ಅದರಲ್ಲಿ ಒಂದು ಹೊಸತನವನ್ನು ಕಾಣುವ ಮನೋಭಾವ ನಮಗೆ ಆ ದೇವರು ದಯಪಾಲಿಸಿದ್ದಾನೆ. ಅಲ್ಲವೇ? ಈ ಹಳತು ಹೊಸತುಗಳ ಭಾವ ಕೇವಲ ನಮ್ಮ ಮನೋಭಾವವಷ್ಟೇ! ಎಲ್ಲವೂ ಪುರಾತನವೆಂದು ಒಂದು ನೀರವತೆಯ ಭಾವಕ್ಕಿಂತ ಎಲ್ಲದರಲ್ಲೂ ಒಂದು ನೂತನತೆಯನ್ನು ಕಾಣುವ ಉಲ್ಲಸಿತ ಮನೋಭಾವ ಒಳ್ಳೆಯದಲ್ಲವೇ. ಅದು ನಮ್ಮನ್ನು ಉತ್ಸಾಹಗೊಳಿಸುತ್ತದೆ ಮತ್ತು ಜೀವನದಲ್ಲಿ ಒಂದು ಆಶಾಭಾವನ್ನು ತುಂಬುತ್ತದೆ.
ಸೌಂದರ್ಯ ನೋಡುವವನ ಕಣ್ಣಲ್ಲಿ ಎನ್ನುತಾರೆ ಜ್ಞಾನಿಗಳು. ನಾವೂ ಸಹ ಪುರಾತನದ ಅಥವಾ ಹಳತಿನ ತಳಹದಿಯಲ್ಲಿ ಪಲ್ಲವಿಸುವ ಹೊಸತನ್ನು ನೋಡುತ್ತಾ ನಮ್ಮ ನಮ್ಮ ಜೀವನಗಳಲ್ಲಿ ಹೊಸತು ಹಳತುಗಳ ಸಮ್ಮಿಶ್ರ ಅನುಭವವನ್ನು ಪಡೆಯೋಣವೇ ?
ರಸಧಾರೆ - 133
ಬಹಿರಂತರಗಳೊಂದು ಭೂತಭವ್ಯಗಳೊಂದು |
ಇಹಪರಂಗಳುಮೊಂದು ಚೈತನ್ಯವೊಂದು ||
ಬಹುಪಾತ್ರನಾಟಕದಿ ಮಾಯೆ ಶತವೇಷಗಳ |
ವಹಿಸಲೀವಳು ಪತಿಗೆ ಮಂಕುತಿಮ್ಮ.
ಬಹಿರಂತರಗಳೊಂದು = ಬಹಿರ+ಅಂತರಂಗಗಳು + ಒಂದು // ಇಹಪರಂಗಳುಮೊಂದು = ಇಹ+ ಪರಗಳುಂ+ಒಂದು // ಚೈತನ್ವೊಂದು = ಚೈತನ್ಯವು+ಒಂದು // ವಹಿಸಲೀವಳು=ವಹಿಸಲು + ಈವಳು
ಬಹಿರ = ಹೊರಗೆ// ಅಂತರ= ಒಳಗೆ, ಇಹ + ಬದುಕ್ಕಿದ್ದಾಗಿನ ಜೀವನ// ಪರ= ಬದುಕಿನ ನಂತರದ ಜೀವನ
ಒಳಗೂ ಹೊರಗುಗಳು ಒಂದೇ. ಭೂತ ಭವಿತವ್ಯಗಳು ಒಂದೇ. ಇಹ ಪರಗಳು ಒಂದೇ ಏಕೆಂದರೆ ಇವೆಲ್ಲವೂ ಆಗಿರುವುದು , ಆಗುತ್ತಿರುವುದು ಎಲ್ಲವೂ ಒಂದೇ ಚೈತನ್ಯದಿಂದ. ಆದರೆ ಈ ಜಗತ್ತನ್ನು ಆವರಿಸಿರುವ ಮಾಯೆಯೆಂಬ ಮಾಯಾಂಗನೆ ಆ ಚೈತನ್ಯಕ್ಕ್ಕೆ ಹಲವಾರು ರೂಪಗಳನ್ನು ವಹಿಸಲು ಕೊಡುತ್ತಾಳೆ, ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.
ಇಡೀ ಬ್ರಹ್ಮಾಂಡವೆ ಆ ಪರಮಾತ್ಮ ಚೈತನ್ಯದಿಂದಾಗಿದೆ, ಎಲ್ಲದರಲ್ಲೂ ಆ ಚೈತನ್ಯವೇ ತುಂಬಿದೆ, ಆ ಚೈತನ್ಯವೇ ನಿವಸಿಸಿದೆ ಎಂದ ಮೇಲೆ ಒಳಗೇನು ಹೊರಗೇನು ನೀ ಮಾಯೆಯೋ ನಿನ್ನೊಳು ಮಾಯೆಯೋ ಎಂದು ಪುರಂದರ ದಾಸರಿಗೆ ಈ ಸಂದೇಹ ಬಂದಿತ್ತು ಎಂದಮೇಲೆ ನಾವೆಷ್ಟರವರು? ಹಿಂದೆ ನಡೆದದ್ದೂ ಮುಂದೆ ನಡೆಯುವುದೂ ಸಹ, ಆ ಪರಮ ಚೈತನ್ಯದ ಇಂಬಿನಿಂದಲೇ ನಡೆದಿದೆ, ನಡೆಯುತ್ತಿದೆ ಮತ್ತು ನಡೆಯುತ್ತದೆ. ಆ ಪರಮಚೈತನ್ಯವೇ ಇಹದಲ್ಲೂ ಪರದಲ್ಲೂ ಇದೆ. ಆದರೆ ಈ ಜಗತ್ತು ಒಂದು ಮಾಯೆಯಿಂದ ಆವರಿಸಿದೆ. ಮಾಯೆಯೆಂದರೆ ಒಂದು ವಸ್ತುವಿನ ನಿಜಸ್ವರೂಪ ಬಯಲಾಗದೆ ಬೇರೆ ಏನೋ ಎಂಬಂತೆ ತೋರುವುದು. ಮಾಯೆ ಆವರಿಸಿರುವ ಕಾರಣದಿಂದಲೇ ಪ್ರತಿಯೊಬ್ಬರಿಗೂ ಇಡೀ ಜಗತ್ತೇ ಬೇರೆ ಬೇರೆ ರೀತಿ ಕಂಡದ್ದರಿಂದಲೇ, ಇಷ್ಟೊಂದು ಮತಗಳು, ಬೇರೆ ಬೇರೆ ವ್ಯಾಖ್ಯಾನಗಳು ಬೇರೆ ಬೇರೆ ಅಭಿಪ್ರಾಯಗಳು. ಒಂದೇ ವಸ್ತುವಿಗೆ ಸಾವಿರಾರು ಪರಿಭಾಷೆಗಳು.
ಒಂದೇ ರೂಪ ( ರೂಪವಿಲ್ಲದೆಯೂ) ದಲ್ಲಿ ಇರುವ ಆ ಪರಮ ಚೈತನೆಯವೇ ಎಲ್ಲ ರೂಪಗಳನ್ನೂ ಧರಿಸಿರುವುದರಿಂದ ಬಹುಪಾತ್ರನಾಟಕದಿ ಮಾಯೆ ಶತವೇಷಎಂದರು ಗುಂಡಪ್ಪನವರು. ಯತಃ ಸರ್ವಾಣಿ ರೂಪಾನಿ ಭವಂತ್ಯಾದಿ ಯುಗಾಗಮೆ ಎಂದು ಪರಮಾತ್ಮ ಸ್ವರೂಪವನ್ನು ವಿವರಿಸುವಾಗ ಭೀಷ್ಮಪಿತಾಮಹರು ಧರ್ಮರಾಯನ ಪ್ರಶ್ನೆಗೆ ಉತ್ತರವೀಯುತ್ತಾ ಹೇಳುತ್ತಾರೆ. ಅಂದರೆ ಎಲ್ಲವೂ ಯಾರಿಂದ ಹೊರಬರುತ್ತದೋ,ಎನ್ನುತ್ತಾರೆ. ಅಂದರೆ ಎಲ್ಲವೂ, ಎಲ್ಲರೂಪಗಳೂ ಅವನಿಂದಲೇ ಹೊರಟು ಅವನಿಂದಲೇ ಆಗಿ ಅವನ ಶಕ್ತಿಯಿಂದಲೇ ಜೀವಿಸುತ್ತಿವೆ. ಎಲ್ಲವೂ ಒಂದೇ ಆದರೂ ಮಾಯೆಯಿಂದ ನಮಗೆ ಎಲ್ಲವೂ ಬೇರೆ ಬೇರೆಯಾಗಿ ಕಾಣುತ್ತಿದೆ. ಆ ಪರಮ ಚೇತನ ಬೇರೆ ಬೇರೆಯಾಗಿ ಕಾಣುವುದಕ್ಕೆ ಮಾಯೆಯೇ ಕಾರಣ ಎನ್ನುವ ಅರ್ಥದಲ್ಲಿ ವಹಿಸಲೀವಳು ಪತಿಗೆ ಎಂದು ಮಾಯೆ ತನ್ನ ಪತಿಯಾದ ಆ ಪರಮಾತ್ಮನಿಗೆ ಭಿನ್ನ ಭಿನ್ನ ವಾದ ವೇಷಗಳನ್ನು ಧರಿಸುವಂತೆ ಮಾಡಿದ್ದಾಳೆ ಎನ್ನುತ್ತಾರೆ ನಮ್ಮ ಡಿ.ವಿ.ಜಿ. ವಾಚಕೆ ನಾವು ಮಾಯೇಯಿಂದಾವ್ರುತವಾದ ಈ ಭಿನ್ನ ಭಿನ್ನ ಜಗತ್ತನ್ನು ನೋಡುತ್ತಾ, ಇದು ಮರೆ ಎಂದು ಅರಿತಾಗ, ನಮಗೆ ಅಂತರ್ದರ್ಶನವಾದಾಗ ಆ ಪರಮಾತ್ಮನ ನಿಜರೂಪ ಅರಿವಾಗುತ್ತದೆ. ಅಂತಹ ಅರಿವನ್ನು ಪಡೆಯುವ ದಾರಿಯಲ್ಲಿ ನಾವೂ ಸಹ ಮುನ್ನಡೆಯೋಣವೇ?
ರಸಧಾರೆ - 134
ಏಕದಿಂದಲನೇಕ ಮತ್ತನೇಕದಿಂದಲೇಕ |
ವೀ ಕ್ರಮವೇ ವಿಶ್ವದಂಗಾಂಗಸಂಬಂಧ ||
ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ |
ಸಾಕಲ್ಯದರಿವಿರಲಿ ಮಂಕುತಿಮ್ಮ.
ಏಕದಿಂದಲನೇಕ = ಏಕದಿಂದಲಿ+ ಅನೇಕ // ಮತ್ತನೇಕದಿಂದಲೇಕವೀ = ಮತ್ತೆ+ಅನೇಕದಿಂದಲಿ+ ಏಕವು + ಈ // ವಿಶ್ವದಂಗಾಂಗಸಂಬಂಧ = ವಿಶ್ವದ+ಅಂಗಾಂಗ+ಸಂಬಂಧ//ಸಾಕಲ್ಯದರಿವಿರಲಿ = ಸಾಕಲ್ಯದ +ಅರಿವಿರಲಿ.
ಸಾಕಲ್ಯದ = ಏಕತೆಯ, ಸಮಾನತೆಯ
ಏಕದಿಂದ ಅನೇಕ ಮತ್ತು ಅನೇಕದಿಂದ ಏಕ. ಇದೆ ಕ್ರಮವೇ ವಿಶ್ವದ ಎಲ್ಲಾ ಅಂಗಗಳ ಸಂಬಂಧ. ಹಾಗಿರುವಾಗ ಲೋಕದಲ್ಲಿ ಜಾತಿಯಲಿ ವ್ಯಕ್ತಿಯಲಿ ಮತ್ತು ಈ ಜಗತ್ತಿನ ಎಲ್ಲ ಸಂಸ್ಥೆಗಳಲ್ಲಿ ಸಕಲದಲ್ಲೂ, ಈ ಒಂದು ವಿಧಿ, ಕ್ರಮ ಅಥವಾ ವ್ಯವಸ್ಥೆ ಇರಬೇಕು ಎಂದು ಮಾನ್ಯ ಗುಂಡಪ್ಪನವರು ಆದೇಶಿಸುತ್ತಿದ್ದಾರೆ, ಈ ಕಗ್ಗದಲ್ಲಿ.
ಇಡೀ ಜಗತ್ತೇ ಏಕದಿಂದ ಆದದ್ದು. ಅದು ಅನೇಕವಾಗಿ ಹರಡಿದೆ. ಅದರೂ ಎಲ್ಲವೂ ತಮ್ಮ ತಮ್ಮ ಅಸ್ತಿತ್ವವನ್ನು ಮತ್ತು ತಮ್ಮ ರೂಪವನ್ನು ಹಲವಂತೆ ತೋರಿದೆ. ಈ ಭೂಮಿ, ಈ ಸೂರ್ಯ. ಈ ಸೂರ್ಯಮಂಡಲಗಳು , ಈ ಕ್ಷೀರಪಥಗಳು, ಈ ಆಕಾಶಗಂಗೆಗಳು ಎಲ್ಲವೂ ಸಹ ಪ್ರತ್ಯೇಕ ಪ್ರತ್ಯೇಕವಾಗಿದ್ದರೂ, ಏಕ ಮೂಲದಿಂದಲೇ ಉದ್ಭವವಾಗಿದೆ. ಬೇರೆಬೇರೆಯಾಗಿ ನೋಡಿದಾಗ ಬೇರೆಬೇರೆಯಾಗಿಯೂ ಸಮಗ್ರವಾಗಿ ನೋಡಿದರೆ ವಿಶ್ವದ ಸಮಗ್ರ ರೂಪ ಕಾಣುತ್ತ ದೆ.
ಈ ಏಕದಿಂದ ಅನೇಕಕ್ಕೆ, ಒಂದು ದೃಷ್ಟಾಂತವನ್ನು ನೋಡೋಣ. ಒಂದು ಬೃಹತ್ ಮರ. ಒಂದೇಒಂದು ಬೀಜದಿಂದ ಉದ್ಭವವಾದ ಮರ. ಪ್ರತೀ ವರ್ಷ ಹೊಸಚಿಗುರನ್ನು ತಳೆದು, ಹೂ ಬಿಟ್ಟು, ಕಾಯಿ ಬಿಟ್ಟು ಹಣ್ಣಾಗಿ ಉದುರುತ್ತದೆ. ಒಂದೇ ಮರದಿಂದ ಲಕ್ಷಾಂತರ ಬೀಜಗಳು ಉತ್ಪತ್ತಿಯಾಗುತ್ತವೆ. . ಪ್ರತಿಯೊಂದು ಬೀಜದಿಂದಲೂ ಮತ್ತೊಂದು ಬೃಹತ್ ಮರವಾಗುವ ಸಂಭವ. ಇದು ಪ್ರತಿಯೊಂದು ಜೀವಿಯಲ್ಲೂ ಸಹಜ, ಮನುಷ್ಯನನ್ನೂ ಸೇರಿ. ಇದನ್ನೇ ಮಾನ್ಯ ಗುಂಡಪ್ಪನವರುವಿಶ್ವದಂಗಾಂಗಸಂಬಂಧಎಂದು ಕರೆದರೂ. ಈ ಏಕದಿಂದನೇಕದ ಮತ್ತು ಅನೇಕದಿಂದೇಕದ ಪ್ರಕ್ರಿಯೆ ಈ ಜಗತ್ತಿನ ಎಲ್ಲ ಅಂಗಗಳಿಗೂ ಅನ್ವಯಿಸುತ್ತದೆ ಎನ್ನುತ್ತಾರೆ. ಒಂದು ಅಂದರೆ ಏಕವಾದ ಆ ಪರಮಾತ್ಮನಿಂದಲೇ ಎಲ್ಲವೂ ( ಹಲವು) ಆಗಿದೆ ಎನ್ನುವುದು ವೇದಾಂತದ ವಿಚಾರ.
ನಾವು ವಾಸಿಸುವ ಈ ಸಮಾಜ ಮತ್ತು ಈ ಸಮಾಜದ ವ್ಯವಸ್ಥಯನ್ನು ನೋಡೋಣ . ಎಲ್ಲರೂ ಸಮಾನರು, ಎಲ್ಲರಿಗೂ ಈ ಸಮಾಜದಲ್ಲಿ ಶಾಂತಿಯಿಂದ ಸಮಾನವಾಗಿ ಬಾಳಲು ಹಕ್ಕಿದೆ. ಯಾವುದೇಒಂದುಅಥವಾ ಒಬ್ಬವ್ಯಕ್ತಿಯ ಹಿತಕ್ಕೆ ಈ ಸಮಾಜವಲ್ಲ ಎಂಬ ಅನೇಕದ ಹಿತವನ್ನು ಬಯಸುವ ಸಿದ್ಧಾಂತದ ಮೇಲೆ ನಮ್ಮ ಸಮಾಜ ನಿರ್ಮಾಣವಾಗಿದೆ. ಒಂದು ಮನೆಯಲ್ಲಿ ಒಬ್ಬಹಿರಿಯ. ಅವನು ಯೋಚಿಸುವುದು ಯೋಚಿಸಬೇಕಾದದದ್ದು ಆ ಮನೆಯ ಹಲವರ ಹಿತ. ಮತ್ತೆ ಆ ಹಲವರು ಆ ಒಬ್ಬನಿಗೆ ಪೂರಕವಾಗಿದ್ದರೆ, ಆ ಮನೆಯಲ್ಲಿ ನೆಮ್ಮದಿ ಶಾಂತಿ ಮತ್ತು ಸುಖ. ಇದನ್ನು ನಾವು ಒಂದು ಸಂಸ್ಥೆಗೆ ಅನ್ವಯಿಸಿದರೆ ಸಂಸ್ಥೆಯ ಮುಖ್ಯಸ್ಥ ಒಬ್ಬನ ಆದೇಶದ ಮೇರೆಗೆ ನಡೆಯುವ ಆ ಸಂಸ್ಥೆಯ ಎಲ್ಲಾ ಕೆಲಸಕಾರ್ಯಗಳು . ಆದೇಶ ಸರಿಯಿದ್ದರೆ, ಕೆಲಸ ಸಮರ್ಪಕ.ಹಾಗೆಯೇ ಈ ಎಲ್ಲರೂ ( ಹಲವರು)ಸಮರ್ಪಕವಾಗಿ ಕೆಲಸ ಮಾಡಿದರೆ ಅವನಿಗೆ ಒಳ್ಳೆಯ ಹೆಸರು. ಹೀಗೆ ಏಕದ ಮತ್ತು ಅನೇಕದ ಪರಸ್ಪರ ಪೂರಕತೆಗಳು ನಮಗೆ ಜಗತ್ತಿನ ಎಲ್ಲದರಲ್ಲೂ ಕಾಣುತ್ತದೆ.
ಒಬ್ಬರು( ಏಕವು) ಹಲವರ ( ಅನೇಕದ) ಮೇಲೆ ಮತ್ತು ಹಲವರು ಒಬ್ಬರ ಮೇಲೆ ಆಧಾರ ಪಟ್ಟಿರುವುದು ಸಹಜ ಕ್ರಮ.ಈ ಸಹಜತೆ ಎಲ್ಲದರಲ್ಲೂ ಇದೆ. ಅದನ್ನು ಅರಿತಿರಬೇಕು ಎನ್ನುವುದೇ ಈ ಕಗ್ಗದ ಹೂರಣ.
ರಸಧಾರೆ - 135
ಸಂಪೂರ್ಣ ಗೋಳದಲಿ ನೆನೆದೆಡೆಯೆ ಕೇಂದ್ರವಲ |
ಕಂಪಿಸುವ ಕೇಂದ್ರ ನೀಂ ಬ್ರಹ್ಮ ಕಂದುಕದಿ ||
ಶಂಪಾತರಂಗವದರೊಳು ತುಂಬಿ ಪರಿಯುತಿದೆ |
ದಂಬೋಳಿ ನೀನಾಗು ಮಂಕುತಿಮ್ಮ ||
ನೆನೆದೆಡೆಯೆ = ನೆನೆದ +ಎಡೆಯೆ // ಶಂಪಾತರಂಗವದರೊಳು = ಶಂಪಾತರಂಗವು + ಅದರೊಳು
ಶಂಪಾತರಂಗ= ಮಿಂಚಿನ ಅಲೆಗಳು // ದಂಬೋಳಿ = ವಜ್ರಾಯುಧ.
ಈ ಭೂಮಿಯಲ್ಲಿ ಪ್ರತಿಯೊಂದು ಕಣ ಕಣವೂ ಮಿಂಚಿನ ತರಂಗಗಳ ಕೇಂದ್ರ ಬಿಂದುವಿನನತೆ. ಬ್ರಹ್ಮ ಸೃಷ್ಟಿಮಾಡಿದ ಈ ಭೂಮಂಡಲದಲ್ಲಿ ನೀನೂ ಸಹ ಒಂದು ಕೇಂದ್ರ ಬಿಂದು. ನಿನ್ನಲ್ಲೂ ಮಿಂಚಿನ ತರಂಗಗಳು ಹರಿಯುತ್ತಿವೆ. ಹೀಗೆ ಹರಿಯುವ ಎಲ್ಲ ತರಂಗಗಳನ್ನೂ ಒಟ್ಟುಮಾಡಿ ನಿನ್ನ ಬುಧ್ದಿಯನ್ನು ವಜ್ರಾಯುಧವನ್ನಾಗಿಸಿಕೊಂಡು ಸಾಧನೆಯನ್ನು ಮಾಡು ಎಂದು ವಾಚಕರೆಗೆ ಒಂದು ಸೂಚನೆಯನ್ನು ನೀಡಿದ್ದಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
ಈ ಇಡೀ ಪ್ರಪಂಚವೇ ಅಣುಗಳಿಂದಾದುದು. ಪ್ರತಿ ಅಣುವೂ ಒಂದು ಶಕ್ತಿ ಕೇಂದ್ರ. ಎಲ್ಲಾ ಶಕ್ತಿ ಕೇಂದ್ರಗಳು ಒಟ್ಟಾರೆಯಾಗಿ ಒಂದು ಶಕ್ತಿ ಸಮೂಹ. ನಾವೆಲ್ಲಾ ಅಂತಹ ಶಕ್ತಿ ಸಮೂಹಗಳು. ಎಲ್ಲಕಡೆಯೂ ಹರಿದಂತೆ ನಮ್ಮಲ್ಲೂ ಆ ಅಣು ಸಮೂಹದ ಶಕ್ತಿ ಹರಿಯುತಿದೆ. ಆ ಶಕ್ತಿಯೇ ನಮಗೆ ಕಾರ್ಯ ಪ್ರವ್ರುತ್ತತೆಯನ್ನು ನೀಡುತ್ತದೆ. ನಮ್ಮ ದೇಹವೆಲ್ಲವೂ ಕೇವಲ ಜೀವಾಣುಗಳಿಂದ ಆಗಿವೆ. ಪ್ರತಿಯೊಂದು ಜೀವಾಣುವೂ ಒಂದು ಶಕ್ತಿ ಕೇಂದ್ರ. ಈ ಜೀವಾಣುಗಳ ಒಟ್ಟು ಸಮೂಹವೇ ನಾವು.
ಇದು ಮಾನವರಾದ ನಮಗಷ್ಟೇ ಸೀಮಿತವಲ್ಲ. ಸಕಲ ಚರಾಚರವೂ ಸಹ ಹೀಗೆ ಆಗ ಮಾಡಲ್ಪಟ್ಟಿದೆ. ಒಂದು ಬೀಜವು ತನ್ನದೇ ಶಕ್ತಿಯಿಂದ ಮೊಳೆತು, ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗಿ ನೂರಾರು ವರ್ಷಗಳ ಕಾಲ ಜೀವಿಸುತ್ತದೆ. ಇದು ಒಂದು ದೃಷ್ಟಾಂತ ಅಷ್ಟೇ. ಈ ಜಗತ್ತಿನ ಎಲ್ಲವೂ ಹಾಗೇಯೇ! ಒಂದು ಸಣ್ಣ ಇರುವೆಯಿಂದ ಹಿಡಿದು ಒಂದು ಬೃಹತ್ತಾದ ಆನೆಯವರೆಗೆ, ಎಲ್ಲವೂ ಒಂದೊಂದು ಶಕ್ತಿ ಬಿಂದುಗಳೇ ಅಲ್ಲವೇ. ವಾಚಕರೆ, ಆ ಶಕ್ತಿಯು ಕೇವಲ ದೈಹಿಕ ಶಕ್ತಿಯೆಂದು ಅರ್ಥೈಸಬಾರದು. ಏಕೆಂದರೆ ಈ ದೈಹಿಕ ಶಕ್ತಿ ಮತ್ತು ಮಾನಸಿಕ ಶಕ್ತಿಗಳು ಒಂದಕ್ಕೊಂದು ಪೂರಕವಲ್ಲವೇ? ಮನಸ್ಸು ಧೃಢವಾಗಿದ್ದರೆ ದೇಹವೂ ದೃಢ ಹಾಗೆಯೇ ಮನಸ್ಸು ಧೃಢವಾಗಿದ್ದರೆ ದೇಹಾರೋಗ್ಯವೂ ಉತ್ತಮ. ಹಾಗಾಗಿ ನಮ್ಮಲ್ಲಿ ಶಂಪಾತರಂಗವದರೊಳು ತುಂಬಿ ಪರಿಯುತಿದೆ ಎನ್ನುವಂತೆ ಒಂದು ಮಿಂಚಿನಂತ ಶಕ್ತಿ ಹರಿಯುತ್ತದೆ.
ಆ ನಮ್ಮ ಶಕ್ತಿಯನ್ನು ಗುರುತಿಸಿ, ಕೇಂದ್ರೀಕರಿಸಿ, ಎಲ್ಲ ಶಕ್ತಿಯನ್ನೂ ನಮ್ಮ ಗುರಿಯನ್ನು ತಲುಪಲು ಉಪಯೋಗಿಸಿದ್ದಲ್ಲಿ ವಜ್ರವು ಕಲ್ಲನ್ನು ಕತ್ತರಿಸುವಂತೆ, ನಮ್ಮ ಧ್ಯೇಯಸಾಧನೆಯಲ್ಲಿ ಬರುವ ಅಡ್ಡಿಗಳನ್ನೆಲ್ಲ ತೊಲಗಿಸಿ ನಮ್ಮ ದಾರಿಯನ್ನು ಸುಗಮವಾಗಿಸಿಕೊಳ್ಳಬೇಕು, ಹಾಗೆ ಆ ಕ್ಲಿಷ್ಟವಾದ ಪರಿಸ್ಥಿತಿಯಿಂದ ಹೊರಬರಲು, ಕ್ಲಿಷ್ಟವಾದ ಸಮಸ್ಯೆಗಳನ್ನು ಪರಿಹರಿಸುವಂತ ವಜ್ರಾಯುಧವಾಗಬೇಕು ನಾವು ಎನ್ನುವುದೇ ಈ ಕಗ್ಗದ ಹೂರಣ. ಅಂತಹ ಪ್ರಯತ್ನವನ್ನು ನಾವು ಮಾಡಬೇಕು.
ರಸಧಾರೆ - 136
ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ |
ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ ||
ನಿಶ್ವಸಿತ ಸಂಬಂಧ ನಿನಗಂ ದಿಗಂತಕಂ |
ಪುಷ್ಪವಾಗಿರು ನೀನು ಮಂಕುತಿಮ್ಮ. |
ವಿಶ್ವಪರಿಧಿಯದೆಲ್ಲೊ = ವಿಶ್ವದ + ಪರಿಧಿ+ ಅದು + ಎಲ್ಲೊ // ಸೂರ್ಯಚಂದ್ರರಿನಾಚೆ = ಸೂರ್ಯ+ಚಂದ್ರರಿನ+ ಆಚೆ // ನೀನೆಣಿಸಿದೆಡೆಯೆ = ನೀನು + ಎಣಿಸಿದ + ಎಡೆಯೆ, ನಿಶ್ವಸಿತ = ಉಸಿರಾಡುವ // ದಿಗಂತ = ಆಕಾಶದ ವ್ಯಾಪ್ತಿ,
ನೀನು ಒಂದು ಕೇಂದ್ರ ಬಿಂದು. ಇಡೀ ವಿಶ್ವದ ಪರಿಧಿಯಲ್ಲಿ, ಸೂರ್ಯ ಚಂದ್ರರಿಗೂ ಆಚೆ ನೀನು ಎಲ್ಲಿ ನಿಂತರೆ ಅಲ್ಲಿ ನೀನು ಒಂದು ಬಿಂದುವಾಗಿರುವೆ. ನಿನಗೂ ದಿಗಂತಕ್ಕೂ ನಿನ್ನ ಉಸಿರಾಟದ ಸಂಬಂಧವಿದೆ. ಹಾಗಾಗಿ ನೀನು ನಿನ್ನ ಶಕ್ತಿಯ ಸುಗಂಧವನ್ನು ಎಲ್ಲೆಡೆ ಹರಡು ಎಂದು ಒಂದು ಆದೇಶವನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾನು ಒಂದೆಡೆ ನಿಂತರೆ, ಎನ್ನ ಸುತ್ತಲೂ ಜಗತ್ತು. ಅಂದರೆ ನಾನು ಒಂದು ಬಿಂದು. ಇದೇ ರೀತಿ ಎಲ್ಲರೂ ಒಂದೊಂದು ಬಿಂದುಗಳು. ಸೂರ್ಯಚಂದ್ರರು, ಎಲ್ಲ ಆಕಾಶಕಾಯಗಳು, ಈ ಜಗತ್ತಿನ ಎಲ್ಲ ಜೀವಿಗಳೂ ಸಹ ಜಗತ್ತಿನಲ್ಲಿ ಒಂದೊಂದು ಬಿಂದುಗಳೇ ಅಲ್ಲವೇ? ನಾವು ಎಲ್ಲಿ ನಿಂತರೆ ಅಲ್ಲಿ ಒಂದು ಬಿಂದು. ಸುತ್ತಲೂ ಜಗತ್ತು. ನಾನು ನಿಂತಲ್ಲಿಂದಲೇ ನನಗೆ ಈ ಜಗತ್ತಿನೊಂದಿಗೆ ಸಂಬಂಧವುಂಟಾಗುತ್ತದೆ. ಆದರೆ ಆ ಸಂಬಂಧ ನಿಶ್ವಸಿತ ಸಂಬಂಧಎಂದು ಮಾನ್ಯ ಗುಂಡಪ್ಪನವರು ಹೇಳುತ್ತಾರೆ. ಎಂದರೆ ನಮ್ಮ ನಿಶ್ವಾಸ ಉಚ್ವಾಸಗಳು ನಡೆಯುತ್ತಿರುವತನಕ ನಮಗೆ ನಮ್ಮ ಸುತ್ತಲಿರುವ ಈ ಜಗತ್ತಿನೊಡನೆ ಭೌತಿಕ ಸಂಬಂಧ ಮತ್ತು ದಿಗಂತದವರೆಗೆ ನಮ್ಮ ಮಾನಸಿಕ ಮತ್ತು ಭೌದ್ಧಿಕ ಸಂಬಂಧಗಳು ಇರುತ್ತವೆ. ಎಂದು ಆ ಶ್ವಾಸ ನಿಲ್ಲುತ್ತದೋ ಅಂದು ಈ ಸಂಬಂಧಗಳಿಗೆಲ್ಲಾ ಒಂದು ರೀತಿಯ ಅಂತ್ಯ.
ನಾವು ನಮ್ಮ ಸುತ್ತಲಿನ ಜಗತ್ತಿನೊಡನೆ ಇರುವ ಸಂಬಂಧಗಳನ್ನು ಒಂದು ಬಾರಿ ಪರೀಕ್ಷಿಸಿ ನೋಡಿದರೆ ಅದು ಎಂತಹ ಸಂಬಂಧ ಎಂದು ನಮಗೆ ಅರ್ಥವಾಗಬೇಕು. ಅದು ಪ್ರೀತಿಯದೋ? ಸ್ವಾರ್ಥದ್ದೋ ? ದ್ವೇಷದ್ದೋ?ಶುದ್ಧತೆಯದ್ದೋ ? ಅನುರಾಗದ್ದೋ? ಎಂದು. ನಿಂತ ಕಡೆಯಿಂದಲೇ ನಾವು ನಮ್ಮ ಪರಿಸರ ಸಮಾಜ ಮತ್ತು ಜಗತ್ತಿನೊಡನೆ ಹಲವಾರು ವಿಧವಾದ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತೇವೆ. ಕೆಲವರೊಂದಿಗೆ ಸ್ವಾರ್ಥಸಹಿತ ಪ್ರೀತಿ ಮತ್ತೆ ಕೆಲವರೊಂದಿಗೆ ಸ್ವಾರ್ಥಪೂರಿತ ಪ್ರೀತಿಯ ಸಂಬಂಧ, ಕೆಲವರೊಂದಿಗೆ ಸಕಾರಣ ದ್ವೇಷ(ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದು ಒತ್ತಟ್ಟಿಗೆ ಇರಲಿ) ಕೆಲವರೊಂದಿಗೆ ವಿನಾಕಾರಣ ದ್ವೇಷ. ಹೀಗೆ ಹಲವಾರು ರೀತಿಯ ಸಂಬಂಧಗಳು ಇರುತ್ತವೆ. ಆದರೆ ಜೀವನದಲ್ಲಿ ಪ್ರತೀ ಪ್ರಾಣಿಯು ಹೋರಾಡುವ ಆನಂದ ಮತ್ತು ಸುಖ ಇವುಗಳ ಪ್ರಮಾಣ ಮತ್ತು ಗುಣ ನಾವು ನಮ್ಮ ಸುತ್ತಲಿನ ಜಗತ್ತಿನೊಂದಿಗೆ ಇಟ್ಟಿರುವ ಸಂಬಂಧ ಸಂಪರ್ಕಗಳ ಮೇಲೆ ಅಧಾರಪಟ್ಟಿರುತ್ತದೆ.
ನಮ್ಮ ಗುಣ ಒಳ್ಳೆಯದಾದರೆ ಈ ಜಗತ್ತೇ ನಮಗೆ ಒಳ್ಳೆಯದಾಗಿ ಕಾಣುತ್ತದೆ. ಮೊದಲಲ್ಲಿ ಸ್ವಲ್ಪ ಕಠಿಣ ಎನಿಸಬಹುದು. ಕ್ರಮೇಣ ಸರಿಹೊಗುವುದು. ಏಕೆಂದರೆ ನಾವು ಏನನ್ನು ಪಡೆದುಕೊಂಡಿರುತ್ತೇವೆಯೋ ಅದನ್ನೇ ಕೊಡಲು ಸಾಧ್ಯ ಮತ್ತು ಏನನ್ನು
ನೀಡುತ್ತೇವೆಯೋ ಅದನ್ನೇ ಪಡೆಯಲು ಸಾಧ್ಯಹಾಗಾಗಿ ನಮಗೆ ಈ ಜಗತ್ತಿನಿಂದ ಒಳ್ಳೆಯೆದೆಬೇಕಾದರೆ ನಾವೂ ಸಹ ನಮ್ಮ ಸುತ್ತ ಜಗತ್ತಿಗೆ ಒಳ್ಳೆಯದನ್ನೇ ನೀಡಿದರೆ ನಮಗದು ಸಿಗುತ್ತದೆಇದನ್ನೇ ಮಾನ್ಯ ಗುಂಡಪ್ಪನವರು ಪುಷ್ಪವಾಗಿರು ನೀನು
ಎಂದು ಒಂದು ಸೂಕ್ತ ಸಲಹೆಯನ್ನು ನೀಡಿ ನೀನು ಸಭ್ಯತೆಯ, ಪ್ರೀತಿಯ, ಜ್ಞಾನದ, ಸೌಹಾರ್ಧತೆಯ ಸುಗಂಧವನ್ನು ಈ ಜಗಕ್ಕೆ ನೀಡುವಂಥವನಾಗು ಎಂದು ಒಂದು ಆದೇಶವನ್ನು ಈ ಕಗ್ಗದಲ್ಲಿ ನೀಡಿದ್ದಾರೆ.
ವಾಚಕರೆ ನಮಗೇನು ಬೇಕು ಎನ್ನವುದು ನಮಗೆ ತಿಳಿದಿರಬೇಕು. ನಾವೂ ಸಹ ಅದನ್ನು ನೀಡಲು ಸಿದ್ಧರಿರಬೇಕು. ಆಗ ನಾವು ನಿಂತ ಬಿಂದುವಿನಿಂದಲೇ ನಮಗೆ ಜಗತ್ತು ಸುಂದರವಾಗಿ ಕಾಣುವುದು.
ರಸಧಾರೆ - 137
ನಾನೆನುವವನೆ ವಿಶ್ವಚಕ್ರನಾಭಿಯವಂಗೆ |
ಕಾಣಬಹ ದಿಗ್ವಿವರ ಚಕ್ರನೇಮಿಪಥ ||
ಅನಂತ್ಯವೀ ಜಗಚ್ಚಕ್ರನಾಭಿಕ್ರಮತೆ |
ತಾನೊಂದೆ ಸತ್ವವದು ಮಂಕುತಿಮ್ಮ
ನಾನೆನುವವನೆ = ನಾನು+ ಎನುವವನೆ // ವಿಶ್ವಚಕ್ರನಾಭಿಯವಂಗೆ = ವಿಶ್ವ + ಚಕ್ರ+ ನಾಭಿ+ ಅವಂಗೆ // ದಿಗ್ವಿವರ = ದಿಕ್ + ವಿವರ // ಅನಂತ್ಯವೀ = ಅನಂತ್ಯವು + ಈ // ಜಗಚ್ಚಕ್ರನಾಭಿಕ್ರಮತೆ = ಜಗತ್+ಚಕ್ರ+ನಾಭಿ+ಕ್ರಮತೆ// ತಾನೊಂದೆ = ತಾನು + ಒಂದೆ. ಚಕ್ರನೇಮಿಪಥ = ಬಂಡಿ ಚಕ್ರದ ಸುತ್ತೂ ಬಳಸಲ್ಪಟ್ಟಿರುವ ಕಬ್ಬಿಣದ ಬಳೆ.// ನಾಭಿ=ಕೇಂದ್ರ ಬಿಂದು
ನಾನು ಎಂದು ಯಾರಾದರೂ ಅಂದರೆ ಅವನು ಅವನ ಮಟ್ಟಿಗೆ ಅವನ ಒಂದು ಜಗಚ್ಚಕ್ರಕ್ಕೆ ನಾಭಿಯಂತಾಗುತ್ತಾನೆ. ಅವನು ನೋಡುತ್ತಿರುವುದು ಜಗತ್ತಿನ ಚಕ್ರದ ಅನಂತ ಉರುಳಾಟ. ಅದೊಂದೇ ಜೀವನದ ತಿರುಳು ಸತ್ವ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾನು ಇದ್ದೇನೆ. ನನ್ನ ಸುತ್ತಿ ಈ ಜಗತ್ತು. ಅಂದರೆ ಅದು ಒಂದು ಚಕ್ರ. ಈ ನನ್ನಜಗಚ್ಚಕ್ರಕ್ಕೆ ಕಾಣಬಹ ದಿಗ್ವಿವರಅಂದರೆ ನಾನೆಷ್ಟು ದೂರ ಕಾಣುತ್ತೇನೋ, ನನ್ನ ಸಂಬಂಧ ಸಂಪರ್ಕಗಳು ಎಷ್ಟು ದೂರ ಹರಡಿಕೊಂಡಿದೆಯೋ ಅದೇ ನನ್ನ ಚಕ್ರದ ನೇಮಿಪಥ” . ಅಂದರೆ ಚಕ್ರದ ಹೊರ ಸುತ್ತಳತೆ. ಅಂದರೆ ನಾನು ನನ್ನ ಸಂಬಂಧಗಳ ಸ್ವರೂಪವೆಷ್ಟು ದೊಡ್ಡದೋ ಅಷ್ಟು ದೊಡ್ಡದು ನನ್ನ ಚಕ್ರ. ನನ್ನ ಒಂದೊಂದು ಸಂಬಂಧಗಳೂ ಸಹ ಈ ಚಕ್ರದ ಒಂದೊಂದು ಅಡ್ಡ ಪಟ್ಟಿಗಳು. ಹೇಗೆ ಚಕ್ರದ ಪಟ್ಟಿಗಳು ಹಾಳಾದರೆ ಹೊಸಪಟ್ಟಿಗಳನ್ನು ಹಾಕುತ್ತೇವೆಯೋ ಹಾಗೇ ನಮ್ಮ ಬದುಕಿನಲ್ಲೂ ಸಂದರ್ಭಕ್ಕನುಸಾರವಾಗಿ ನಮ್ಮ ಸಂಬಂಧಗಳೂ ಸಹ ಬದಲಾಗುತ್ತಲೇ ಇರುತ್ತವೆ. ಆದರೆ ಆ ಬದಲಾದ ಸಂದರ್ಭದಲ್ಲೂ ನಾವು ಆ ಚಕ್ರದ ಬಿಂದುವಾಗೆ ಉಳಿಯುತ್ತೇವೆ. ನಾವೇ ಆ ಚಕ್ರದ ಕೇಂದ್ರ ಬಿಂದು, ಅದನ್ನೇ ಮಾನ್ಯ ಗುಂಡಪ್ಪನವರು ತಾನೊಂದೆ ಸತ್ವವದುಎಂದಿದ್ದಾರೆ.
ಪ್ರತಿಯೊಬ್ಬರದೂ ಒಂದೊಂದು ಚಕ್ರ. ಪ್ರತಿ ಚಕ್ರಕ್ಕೂ ಒಂದೊಂದು ನೇಮಿಪಥ ಕೆಲವರ ಚಕ್ರ ದೊಡ್ಡದು ಕೆಲವರ ಚಕ್ರ ಚಿಕ್ಕದು. ಪ್ರತಿಯೊಬ್ಬರೂ ತಮ್ಮ ತಮ್ಮ ಸಂಬಂಧವನ್ನು ಹೇಗೆ ಇಟ್ಟುಕೊಂಡಿರುತ್ತಾರೋ ಅವರವರ ಚಕ್ರದ ಸ್ವರೂಪವೂ ಹಾಗೇ ಇರುತ್ತದೆ ಮತ್ತು ಅವರವರ ಚಕ್ರದ ಸ್ವರೂಪವೂ ಅವರವರ ಸಂಬಂಧದ ಸ್ವರೂಪದ ಮೇಲೆ ಅಧಾರ ಪಟ್ಟಿರುತ್ತದೆ. ಈ ಮನುಷ್ಯ ಮನುಷ್ಯರ ನಡುವೆ ಇರುವ ಸಂಬಂಧಗಳು ಮತ್ತು ಇಡೀ ಸೃಷ್ಟಿಯೊಡನೆ ಎಲ್ಲ ಮನುಷ್ಯರ ಸಂಪರ್ಕವು ಒಂದು ಸಂಕೀರ್ಣ ಮತ್ತು ಅನಂತ ಸಂಬಂಧಗಳ ಸರಮಾಲೆಯೇ ಅಲ್ಲವೇ? ಇದನ್ನೇ ಮಾನ್ಯ ಗುಂಡಪ್ಪನವರುಅನಂತ್ಯವೀ ಜಗಚ್ಚಕ್ರನಾಭಿಕ್ರಮತೆಎಂದು ಉಲ್ಲೇಖಿಸಿದ್ದಾರೆ.
ವಾಚಕರೆ ನಾವು ನೋಡ ಬೇಕಾದದ್ದು ಅವಲೋಕಿಸಬೇಕಾದದ್ದು ಏನೆಂದರೆ , ನಮ್ಮ ಚಕ್ರದ ಸ್ವರೂಪವನ್ನು ಮತ್ತು ಸಂಬಂಧ ಸ್ವರೂಪವಾದ ಈ ಚಕ್ರದ ಅಡ್ಡಪಟ್ಟಿಗಳ ಸತ್ವವನ್ನು ಮತ್ತು ಸ್ವಾಸ್ಥ್ಯವನ್ನು. ಅಂಥಹ ಅವಲೋಕನವು ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚು ಅವಶ್ಯವಲ್ಲವೇ? ಸಾಧ್ಯವಾದರೆ ಸ್ವಾರ್ಥ, ಅಸೂಯೆ ದ್ವೇಷ ಮುಂತಾದವುಗಳಿಂದಾದ ನಮ್ಮ ಚಕ್ರದ ಪಟ್ಟಿಗಳನ್ನು ತೆಗೆದು ಪ್ರೀತಿ, ಪ್ರೇಮ, ವಿಶ್ವಾಸ ಸುಮನಸ್ಸಿನಂಥ ಪಟ್ಟಿಗಳಿಂದ ಮತ್ತೆ ನಮ್ಮ ಜೀವನದ ಚಕ್ರವನ್ನು ನಿರ್ಮಿಸಿದರೆ ಅದರ ಕೇಂದ್ರ ಬಿಂದುವಾದ ನಾವು ಸಂತೋಷದಿಂದಿರಬಹುದು ಅಲ್ಲವೇ?
ರಸಧಾರೆ - 138
ಬಾನಾಚೆಯಿಂ ವಿಶ್ವಸತ್ವ ತಾನಿಳಿದಿಳೆಗೆ |
ನಾನೆನುವ ಚೇತನದಿ ರೂಪಗೊಂಡಿಹುದೋ ||
ನಾನೆನುವ ಕೇಂದ್ರದಿನೆ ಹೊರಟ ಸತ್ವದ ಪರಿಧಿ |
ಬಾನಾಚೆ ಹಬ್ಬಿಹುದೋ ? – ಮಂಕುತಿಮ್ಮ
ಬಾನಾಚೆಯಿಂ = ಬಾನ+ ಆಚೆಯಿಂದ // ತಾನಿಳಿದಿಳೆಗೆ = ತಾನು+ಇಳಿದು+ಇಳೆಗೆ
ಆಕಾಶದಾಚೆ ಅಂದರೆ ನಮಗಿಂತ ಬಹಳದೂರದಿ ಇರುವ ವಿಶ್ವ ಸತ್ವವು ತಾನು ಈ ಭೂಮಿಗೆ ಇಳಿದು ನಾನುಎನ್ನುವ ಚೇತನದ ರೂಪ ತಳೆದಿದೆಯೋ ಅಥವಾ ನಾನುಎನ್ನುವ ಒಂದು ಬಿಂದುವಿನಿಂದ ಹೊರಟ ಸತ್ವವು ಆಕಾಶದಾಚೆ ಹಬ್ಬಿಹುದೋ ಎಂದು ಒಂದು ಜಿಜ್ಞಾಸಾ ಭರಿತ ಉದ್ಗಾರವನ್ನು ಎತ್ತುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಒಂದು ಜೀವಿ ಈ ಭೂಮಿಗೆ ಬರಬೇಕಾದರೆ ಪರಮ ಚೇತನದ ಒಂದಂಶವನ್ನು ಪಡೆದು, ಒಂದು ಜೀವಿಯಾಗಿ ಈ ಜಗತ್ತಿನಲ್ಲಿ ಜೀವಿಸುತ್ತದೆ. ಇದನ್ನೇ ಗುಂಡಪ್ಪನವರು ತಾನಿಳಿದಿಳೆಗೆಎನ್ನುತ್ತಾರೆ. ಒಂದೊಂದು ಜೀವಿಗೆ ಒಂದೊಂದು ಆಯುವಿನ ಕಾಲ. ಆಯಸ್ಸು ಮುಗಿದಂತೆ ದೇಹ ಮನಸ್ಸು ಬುದ್ಧಿಗಳ ಸಂಗವನ್ನು ಆ ಚೇತನ ತೊರೆದು ಹೋಗುತ್ತದೆ. ಹೋದದ್ದು ಎಲ್ಲಿಗೆ ಹೋಗುತ್ತದೆ ಎನ್ನುವುದನ್ನು ಕಠಉಪನಿಷತ್ತಿನಲ್ಲಿ ಯಮ, ನಚಿಕೇತನಿಗೆ ಆತ್ಮ ತತ್ವವನ್ನು ಹೇಳುವಾಗ ಹೇಳುತ್ತಾನೆ. ಆತ್ಮ ದೇಹವನ್ನು ತೊರೆದು ತನ್ನೊಡನೆ ಈ ಜನ್ಮದಲ್ಲಿ ಸಂಚಿತವಾದ ಎಲ್ಲ ವಾಸನೆಗಳನ್ನು ಪೂರ್ವಕರ್ಮರೂಪದಲ್ಲಿ ತನ್ನ ಸುತ್ತ ಒಂದು ಸೂಕ್ಷ್ಮ ಶರೀರದಲ್ಲಿ ಕೊಂಡು ಹೋಗುತ್ತದೆ. ಮತ್ತೆ ಅದು ಇನ್ನೊಂದು ಸ್ಥೂಲ ದೇಹವನ್ನು ಧರಿಸಿದಾಗ ಆ ಎಲ್ಲ ಪೂರ್ವ ಕರ್ಮಗಳನ್ನೂ, ವಾಸನೆಗಳನ್ನೂ ಪ್ರಕಟಗೊಳಿಸಿ ಮತ್ತೆ ಪೂರೈಸಿಕೊಳ್ಳುತ್ತದೆ. ಅಲ್ಲಿಯತನಕ ಆಕಾಶದಲ್ಲಿ ಅಣುರೂಪದಲ್ಲಿ ಗಾಳಿಯಲ್ಲಿ ಸೇರಿಕೊಂಡಿರುತ್ತದೆ. ಪುನರಪಿ ಜನನಂ, ಪುನರಪಿ ಮರಣಂಎಂದು ಆಚಾರ್ಯ ಶಂಕರರು ಹೇಳುವಂತೆ ಅಥವಾ ಜಾತಸ್ಯ ಮರಣಂ ದೃವಂ, ದೃವಂ ಜನ್ಮಂ ಮೃತಸ್ಯಚಎಂದು ಭಗವಾನ್ ಶ್ರೀ ಕೃಷ್ಣ ಹೇಳಿದಂತೆ ಆತ್ಮವು ಮತ್ತೆ ಮತ್ತೆ ಜನ್ಮ ತಳೆಯುತ್ತದೆ.
ಹೀಗೆ ಆಕಾಶ ತತ್ವದಲ್ಲಿರುವ ಆ ಬೃಹತ್ ಚೇತನದಿಂದ ಒಂದು ಅಂಶ ಧರೆಗೆ ದೇಹಧಾರಣೆಗೆ ಬರುತ್ತದೆ. ಬಂದು ಜೀವಿಸುತ್ತದೆ, ಮತ್ತೆ ಆಕಾಶಕ್ಕೇರುತ್ತದೆ ಮತ್ತೆ ಬರುತ್ತದೆ ಮತ್ತೆ ಹೋಗುತ್ತದೆ. ಪ್ರತಿಬಾರಿ ಬಂದಾಗಲೂ ಒಂದು ಬಿಂದುವಿನ೦ತೆ ಇಲ್ಲಿರುತ್ತದೆ. ಇಲ್ಲಿನ ಹಲವಾರು ಬಿಂದುಗಳೊಡನೆ ಸಂಬಂಧದ ಚಕ್ರಗಮನ. ಈ ಭೂಮಿಯ ಮೇಲೆ ಎಷ್ಟು ಜೀವರಾಶಿಗಳಿವೆಯೋ ಅಷ್ಟೇಯೋ, ಹೆಚ್ಚೋ ಅಥವಾ ಕಡಿಮೆಯೋ ಜೀವರಾಶಿಗಳು ಆಕಾಶದಲ್ಲಿಯೂ ಅಣು ರೂಪದಲ್ಲಿ ಇದೆ ಎಂದು ನಮ್ಮ ನಂಬಿಕೆ. ಅಲ್ಲಿಯದು ಇಲ್ಲಿಗೆ ಬರುತ್ತವೆ, ಇಲ್ಲಿಯವು ಅಲ್ಲಿಗೆ ಹೊಗುತ್ತವೆ. ಇದೆ ಈ ಕಗ್ಗದ ಹೂರಣ.
ಆದರೆ ಈ ಪ್ರಕ್ರಿಯೆಯನ್ನು ನಾಲ್ಕು ಸಾಲುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಕೇವಲ ಮಹಾ ಮಹಾ ವಿದ್ವಾಂಸರು ಮಾತ್ರ ಇದನ್ನು ಸೂಕ್ತವಾಗಿ ವಿವರಿಸ ಬಲ್ಲರು. ಆದರೆ ಎಂದು ಆ ಜೀವ ಪೂರ್ವ ಕರ್ಮ ರಹಿತವಾಗುತ್ತದೋ ಅಥವಾ ಎಂದು ಆ ಜೀವ ವಾಸನಾ ರಹಿತವಾಗುತ್ತದೋ ಅಂದು ಅದು ಪ್ರಕೃತಿ ಸಂಬಂಧವನ್ನು ತೊರೆದು ಶುದ್ಧವಾಗಿ ತನ್ನ ಸ್ವಸ್ಥಾನವಾದ ಪರಮಾತ್ಮನನ್ನು ಸೇರುತ್ತದೆ, ಎನ್ನುತ್ತದೆ ಭಾರತೀಯ ವೇದಾಂತ.
ವಾಚಕರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಒಂದು ಸಂದೇಹದ ರೂಪದಲ್ಲಿ ಈ ವಿಚಾರವನ್ನು ನಮ್ಮ ಮುಂದೆ ಪ್ರಸ್ತಾಪ ಮಾಡಿದ್ದರೂ, ನಮ್ಮನ್ನು ವಿಚಾರಕ್ಕೆ ಹಚ್ಚುವುದಕ್ಕೊಸ್ಕರವೇ ಈ ರೀತಿಯ ಪ್ರಸ್ತಾಪಮಾಡಿದ್ದಾರೆ ಎಂದು ನನ್ನ ನಂಬಿಕೆ. ಈ ವಿಚಾರವನ್ನು ನಂಬ ಬೇಕು. ಏಕೆಂದರೆ ನಂಬಿಕೆಯೆ ನಮ್ಮ ಅಸ್ತಿತ್ವದ ಆಧಾರವಲ್ಲವೇ?
ರಸಧಾರೆ - 139
ಸೃಷ್ಟಿಕತೆ ಕಟ್ಟು ಕಥೆ ; ವಿಲಯ ಕಥೆ ಬರಿಯ ಕಥೆ |
ಹುಟ್ಟು ಸಾವುಗಳೊಂದೆ ಪುರುಳಿನೆರಡು ದಶೆ ||
ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ |
ಸತ್ಯ ಜಗದಲಿ ಕಾಣೋ- ಮಂಕುತಿಮ್ಮ.
ಪುರುಳಿನೆರಡು = ಹುರುಲಿನ, ಸಾರದ ಎರಡು ಮುಖ
ಸೃಷ್ಟಿ ಎನ್ನುವುದು, ಲಯ ಎನ್ನುವುದು, ಹುಟ್ಟು ಸಾವು ಎನ್ನುವುದು ಕೇವಲ ಕಲ್ಪನಾ ಕಥೆಗಳಷ್ಟೇ, ಪ್ರತಿನಿತ್ಯ ಪರಿವರ್ತನೆಯಾಗುವುದೇ ಸತ್ಯ ಈ ಜಗದಲ್ಲಿ. ಅದ್ದನ್ನು ಕಾಣು ಎಂದು ಮಾನ್ಯ ಗುಂಡಪ್ಪನವರು ಒಂದು ಆದೇಶವನ್ನು ನಮಗೆ ಕೊಡುತ್ತಾರೆ ಈ ಕಗ್ಗದಲ್ಲಿ.
ಈ ಜಗತ್ತಿನಲ್ಲಿ ಎಲ್ಲವೂ ಮೊದಲಿನಿಂದ ಇದೆ. ಮುಂದೆಯೂ ಇರುತ್ತದೆ. ಯಾವುದಕ್ಕೂ ನಾಶವಿಲ್ಲ. ಯಾವುದಕ್ಕೂ ಅಂತ್ಯವಿಲ್ಲ ಹಾಗಾಗಿ ಈ ಜಗತ್ತನ್ನು ಅನಂತ ಎಂದಿದ್ದಾರೆ. ನಮ್ಮ ಪೂರ್ವಜರು. ನಮ್ಮ ಋಷಿ ಮುನಿಗಳು ಸಾಮಾನ್ಯ ಜನರಿಗೆ, ಇಲ್ಲಿ ಆಗುವ ರೂಪಾಂತರದ ಪ್ರಕ್ರಿಯೆಯನ್ನು ವಿವರಿಸಿದರೆ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೇ ಇರಬೇಕು, ಇದಕ್ಕೆ ಹುಟ್ಟು ಸಾವು ಎಂದು ಹೆಸರಿಟ್ಟು ಕರೆದಿರುವುದು. ಇಲ್ಲಿ ಹುಟ್ಟುಸಾವುಗಳೆಂಬುದು ಕೇವಲ ಬಾಹ್ಯ ಪರಿಕಲ್ಪನೆ. ಎಲ್ಲವೂ ಒಂದು ರೂಪಾಂತರ ಪ್ರಕ್ರಿಯೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಇರುತ್ತದೆ. ಇದನ್ನು ಜನ್ಮ, ಬಾಲ್ಯ, ಕೌಮಾರ್ಯ, ಯೌವನ, ಪ್ರೌಢ, ವಾರ್ಧಕ್ಯ ಮರಣ ಎಂದು ಈ ರೂಪಾಂತರದ ಬೇರೆ ಬೇರೆ ಹಂತಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆದು ನಮ್ಮಂಥಹ ಸಾಮಾನ್ಯರಿಗೆ ಅರ್ಥವಾಗುವಂತೆ ಅನುವುಮಾಡಿಕೊಟ್ಟಿದ್ದಾರೆ.
ನಾ ಮತ್ತೆ ಮತ್ತೆ ಅದೇ ಉದಾಹರಣೆಯನ್ನು ಕೊಡುತ್ತೇನೆ. ನೋಡಿ ಒಂದು ಮರದ ಬೀಜ ಭೂಮಿಯಲ್ಲಿ ಹುದುಗಿ, ನೀರು ಮತ್ತು ಮಣ್ಣಿನೊಳಗೆ ಮಣ್ಣಿನ ಸಾರಗಳ ಸಂಪರ್ಕದಿಂದ, ರೂಪಾಂತರಗೊಂಡು ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ , ಮರವಾಗಿ ಹೆಮ್ಮರವಾಗಿ ರೂಪುಗೊಳ್ಳುತ್ತದೆ. ಆ ಬೀಜವೇ ಈ ಮರವಾಯಿತೆಂದಾದ ಮೇಲೆ ಇದು ಕೇವಲ ರೂಪಾಂತರವಷ್ಟೇ ಅಲ್ಲವೇ? ಇದನ್ನೇ ನಾವು ಎಲ್ಲ ಚರಾಚರ ಸೃಷ್ಟಿಗೂ ಅನ್ವಯಿಸಿಕೊಳ್ಳಬಹುದು. ಒಂದು ಮಾನವ ಶಿಶು ತಾಯ ಗರ್ಭದಲ್ಲಿ ರೂಪುಗೊಂಡು ಭೂಪತನವಾದಂದಿನಿಂದ ಬೆಳೆದು ಮೇಲೆ ಹೇಳಿದ ಎಲ್ಲ ಹಂತಗಳನ್ನೂ ದಾಟಿ ಕೊನೆಗೆ ಒಂದು ದಿನ ಇಲ್ಲವಾಗುವುದೂ ಸಹ ಈ ರೂಪಾಂತರದ ಪ್ರಕ್ರಿಯೆ ಅಲ್ಲದೆ ಮತ್ತೇನು. ಅಣುಗಳ ಸಮೂಹವೇ ಈ ರೂಪಗಳು ಎಲ್ಲ ಅನುಗಳೂ ಆ ಪರಮ ಅಣುವಿನ ಒಂದು ಬಾಗವೇ ಅಲ್ಲವೇ?
ಆದರೆ ಮಾಯೆಯಿಂದ ನಾವು ಎಲ್ಲವನ್ನೂ ಬೇರೆ ಬೇರೆಯಾಗಿ ಗುರುತಿಸುವಂತಾಗಿದೆ. ಇದು ಆ ಪರಮಾತ್ಮನ ಲೀಲೆ. ನಾವೆಲ್ಲಾ ಅವನ ಲೀಲಾವಿನೋದದಲ್ಲಿ ಒಂದೊಂದು ರೂಪಗಳಷ್ಟೇ. ಇದನ್ನು ಗಟ್ಟಿಯಾಗಿ ನಂಬಿದರೆ ನಮಗೆ ಈ ಜಗತ್ತಿನೊಂದಿಗೆ ಅತೀವವಾದ ಅಂಟು ಮತ್ತು ಅಂಟಿನಿಂದಾದ ನಂಟು ಇರದು. ಅಂತಹ ಸ್ಥಿತಿಯಲ್ಲಿ ಸುಖ ದುಃಖಗಳ ಸಂಕೋಲೆಯಿಂದ ಬಿಡುಗಡೆಯಾಗಿ ಒಂದು ನಿರ್ಲಿಪ್ತ ಆನಂದದ ಭಾವ ಇರುವುದು.
ರಸಧಾರೆ - 140
ಹಳೆ ಸೂರ್ಯ- ಹಳೆ ಚಂದ್ರ ಹಳೆ ಭೂಮಿ ಹಳೆ ನೀರು
ಹಳೆ ಹಿಮಾಚಲ ಗಂಗೆ ಹಳೆ ವಂಶ ಚರಿತೆ
ಹಳೆಯವಿವು ನೀನಿದರೊಳಾವುದನು ಕಳೆದೀಯೋ?
ಹಳತು ಹೊಸತರೊಳಿರದೆ? – ಮಂಕುತಿಮ್ಮ
ನಾವು ನೋಡುವ ಸೂರ್ಯ, ಚಂದ್ರ ಈ ಭೂಮಿ ನಮ್ಮ ದೇಶದ ಹೆಮ್ಮೆಯ ಹಿಮಾಲಯ ಹಿಂದೆ ಆಗಿಹೋದ ವಂಶಗಳ ಚರಿತ್ರೆ ಎಲ್ಲವೂ ಹಳೆಯದೇ ಅಲ್ಲವೇ? ಅವರಲ್ಲಿ ನೀನು ಯಾವುದನ್ನು ತೆಗೆದು ಹಾಕಬೇಕು ಅಥವಾ ಅಳಿಸಿಹಾಕಬೇಕು ಎಂದುಕೊಂಡಿದ್ದೀಯೇ? ಹಳತು ಹೊಸತರಲ್ಲಿ ಇರಲು ಸಾಧ್ಯವಿಲ್ಲವೇ? ಎಂದು ಒಂದು ವಿಷಯವನ್ನು ಪ್ರಶ್ನಾರೂಪದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ನಾವು ನೋಡುವ ಆಕಾಶ ಮತ್ತು ಆ ಆಕಾಶದ ಎಲ್ಲ ಕಾಯಗಳು, ನಮ್ಮ ಸೌರಮಂಡಲದ ಸೂರ್ಯ ಚಂದ್ರರು ನಾವಿರುವ ಈ ಭೂಮಿ ಮತ್ತು ಭೂಮಿಯ ಮೇಲಿರುವ ಬೆಟ್ಟ ಗುಡ್ಡ ನದಿ ಮತ್ತು ಮಾನವರಾದ ನಮ್ಮ ಪೂರ್ವಜರ ಚರಿತ್ರೆ ಮುಂತಾದವುಗಳೆಲ್ಲವೂ ಹಳತು. ಆದರೆ ಹಳತೆಂದು ಇದಾವುದನ್ನೂ ಮರೆಯಲು ನಮ್ಮ ಬದುಕಿನಿಂದ ದೂರಾಗಿಸುವುದು ಸಾದ್ಯವಿಲ್ಲ. ಹಳತೆ ನಮ್ಮ ಇಂದಿನದಕ್ಕೆ ಅಡಿಪಾಯ. ಆ ಹಿಮಾಚಲ ನಮ್ಮ ದೇಶವನ್ನು ಇಂದಿಗೂ ಹಲವಾರು ವಿಧದಲ್ಲಿ ರಕ್ಷಿಸುತ್ತಿದೆ. ಆ ಗಂಗೆ ಇಂದಿಗೂ ಹರಿಯುತ್ತಾ ನಮ್ಮ ದೇಶದ ಜನ ಜೀವನದ ಮೇಲೆ ಪ್ರಭಾವ ಬೀರುತ್ತಲೇ ಇದ್ದಾಳೆ. ಆ ಸೂರ್ಯ ಚಂದ್ರರೂ ಸಹಃ ಅಂದಿಂದ ಇಂದಿನವರೆಗೆ ನಮ್ಮ ಅಸ್ವ್ತಿತ್ವಕ್ಕೆ ಸಹಾಯಕರಾಗೆ ಇದ್ದಾರೆ. ಇವಾವುದನ್ನೂ ನಾವು ಬಿಡಲಾಗದು. ನಮ್ಮ ಅಸ್ತಿತ್ವಕ್ಕೆ ಆಧಾರವಾಗಿರುವ ಈ ಎಲ್ಲವನ್ನೂ ನಾವು ಬಿಟ್ಟರೆ ಅಥವಾ ಮರೆತರೆ ನಮ್ಮ ಬೇರುಗಳು ಅಲುಗಾಡಿ ನಾವು ನಿಂತ ನೆಲ ಅಲುಗಾಡುವುದು, ನಮ್ಮ ಅಧಾರ ಬಲಹೀನವಾಗುವುದು ಮತ್ತು ನಮ್ಮ ಪಥನದ ಆರಂಭ ಅಲ್ಲಿಂದಲೇ ಸಾಗುತ್ತದೆ.
ಈ ವಿಚಾರಗಳನ್ನೇ ಇಂದಿನ ವಿಧ್ಯಮಾನಗಳಿಗೆ ಅನ್ವಯಿಸಿಕೊಂಡರೆ, ನಾವು ಈಗಾಗಲೇ ಪಥನದ ಹಾದಿಯಲ್ಲಿ ಸಾಗಿದ್ದೇವೆ. ನಮಗೆ ಹಳೆಯದರ ಮೇಲೆ ಸ್ವಲ್ಪವೂ ಗೌರವವಿಲ್ಲ. ನಮ್ಮ ಪೂರ್ವಜರ ಬಗ್ಗೆ, ಅವರ ಜೀವನ ಶೈಲಿಯಲ್ಲಿನ ಗಟ್ಟಿತನದ ಬಗ್ಗೆ , ನಮಗೆ ಕಿಂಚಿತ್ತೂ ಆಸಕ್ತಿಯಿಲ್ಲ. ನಮಗೆ ನಮದೇ ಲೋಕ. ವೃದ್ಧ ತಂದೆ ತಾಯಿಗಳು ನಮಗೆ ನಮ್ಮ ಆನಂದ,ಸಂತೋಷದ, ಅಧಾರವಾಗದೆ ಇಂದು ಬೇಸರಕ್ಕೆ, ಕಷ್ಟಕ್ಕೆ ಕಾರಣರಾಗಿದ್ದಾರೆ. ನಮಗೆ ಕೇವಲ ನಾವೇ ಮುಖ್ಯ. ಅವರಿಂದ ನಾವಿದ್ದೇವೆ, ಅವರಿಗೆ ನಾವು ಇಂದು ನೀಡದ ಪ್ರೀತಿ ಗೌರವಗಳನ್ನು ನಾವೂ ಸಹ ನಮ್ಮ ಮಕ್ಕಳಿಂದ ನಾವು ವೃದ್ಧರಾದಮೇಲೆ ಅಪೇಕ್ಷೆ ಪಡುತ್ತೇವೆ. ನಾವು ಪ್ರೀತಿ ವಿಶ್ವಾಸ ಗೌರವಗಳನ್ನು ಅಪೇಕ್ಷಿಸಬೇಕಾದರೆ ಇಂದು ನಾವು ನೀಡಬೇಕು. ಏಕೆಂದರೆ ನಾವು ನೀಡದ್ದನ್ನು ಅಪೇಕ್ಷೆಪಡಲಾಗುವುದಿಲ್ಲ ಎಂಬ ಕಿಂಚಿತ್ ಸಾಮಾನ್ಯ ಜ್ಞಾನವಾದರೂ ಇಲ್ಲ ನಮಗೆ. ಇದು ಪಥನವಲ್ಲದೆ ಮತ್ತೇನು?
ನಮ್ಮ ಭಾರತೀಯ ಸಂಸ್ಕೃತಿ, ಸಾಹಿತ್ಯ, ಸಂಗೀತ, ಕಲೆ ಇವೆಲ್ಲವೂ ಒಂದು ಪರಂಪರೆಯಿಂದ ಬಂದದ್ದು. ಹಳತಿನ ಆಧಾರದ ಮೇಲೆಯೇ ಹೊಸ ಹೊಸ ಆಯಾಮಗಳನ್ನು ಬೆಳೆಸಿಕೊಂಡು ಹಳತಿನ ಬೇರುಗಳನ್ನು ಮತ್ತಷ್ಟು ದೃಢವಾಗಿಸಿ, ಹೊಸ ರೂಪ ತಳೆದು ಜ್ವಾಜ್ಯಲ್ಯಮಾನವಾಗಿ ಬೆಳೆದಿದ್ದು. ಆದರೆ ಇಂದು ಒಟ್ಟು ಸಮುದಾಯದ ಗತಿ ಬೇರೆಲ್ಲೋ ಹೋಗುತ್ತಿದೆ. ಹಳತನ್ನು ಮರೆತು ಬೇರೆ ಏನನ್ನೋ ಕಾಣಲು, ಶೂನ್ಯದಲ್ಲಿ ಸಂತೋಷವನ್ನು ಹುಡುಕುವ ಪ್ರಯತ್ನ ಇಂದು ನಡೆದಿದೆ. ಇದು ಸಲ್ಲ ಮತ್ತೆ ನಾವು ನಮ್ಮ ಪುರಾತನ ಬೇರುಗಳಿಗೆ ನೀರೆರೆದು ಹಸಿರಾಗಿಸಿ ಹಳತಿನ ವಿಶಾಲ ರಂಗಸ್ಥಳದಲ್ಲಿ ನಮ್ಮ ಜೀವನದ ಪಾತ್ರಗಳನ್ನು ಧರಿಸಿದಾಗ, ಸಂತೋಷದ ಬದುಕು, ಚೈತನ್ಯದ ಬದುಕು ನಮ್ಮದಾಗಬಹುದು. ಇಲ್ಲದಿದ್ದರೆ ಪಥನ ಶತಃಸಿದ್ಧ. ನಮ್ಮ ಇಂದಿನದಲ್ಲಿ ಹಳತಿನ ಎಲ್ಲ ಬಣ್ಣ ರುಚಿ ಗಂಧಗಳೂ ಸಹ ಇವೆ. ಇದನ್ನೇ ಮಾನ್ಯ ಗುಂಡಪ್ಪನವರುಹಳತು ಹೊಸತರೊಳಿರದೆ ಎಂದು ಸೂಚ್ಯವಾಗಿ ಕೇಳಿದ್ದಾರೆ, ಈ ಕಗ್ಗದಲ್ಲಿ.
ವಾಚಕರೆ ನಾವು ನಮ್ಮ ಪರಂಪರೆಯನ್ನು, ಆಧಾರ ಆಧಾರದ ಮೇಲೆ ಬೆಳೆದ ನಮ್ಮ ಸಂಸ್ಕಾರ,ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ಸಿಗುವ ಪ್ರತಿಯೊಂದು ಅವಕಾಶವನ್ನೂ ಬಿಡದೆ ನಿರಂತರ ಪ್ರಯತ್ನ ಮಾಡಿದಾಗ ನಮ್ಮ ಜೀವನವು ಒಂದು ಧನ್ಯ ಮತ್ತು ಸಫಲ ಜೀವನವಾಗಬಹುದು ಅಲ್ಲವೇ?
ರಸಧಾರೆ - 141
ಋತುಚಕ್ರ ತಿರುಗುವುದು ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸಹುಲ್ಲು ಬೆಳೆಯುವುದು
ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವುದು ಜೀವ
ಸತತ ಕೃಷಿಯೋ ಪ್ರಕೃತಿ ಮಂಕುತಿಮ್ಮ.
ಕೃಷಿಯೋ = ಪ್ರಯತ್ನ // ಮತ್ತುದಿಸುವುದು = ಮತ್ತೆ ಉದಯಿಸುವುದು.// ಕ್ಷಿತಿ = ಇಳೆ
ಋತುಗಳ ಚಕ್ರ ತಿರುಗುತ್ತಲೇ ಇರುತ್ತದೆ. ಕಾಲನು ತನ್ನ ಪದಾಘಾತದಲ್ಲಿ ಮೃತರಾಗುವವರ ನೆನೆದು ಮರುಗುತ್ತಾನೆ . ಹಾಗೆ ಮೃತರಾದವರು ಮಣ್ಣಾದ ಮೇಲೆ ಆ ಭೂಮಿಯಮೇಲೆ ಮತ್ತೆ ಹೊಸ ಹುಲ್ಲು ಹುಟ್ಟುತ್ತದೆ..ಈ ಧರೆ ಮತ್ತೆ ಮತ್ತೆ ಗರ್ಭ ಧರಿಸಿ ಹೊಸ ಹೊಸ ಪಲ್ಲವಗಳಿಗೆ ಎಡೆಮಾಡಿ ಕೊಡುತ್ತಾಳೆ, ಮತ್ತೆ ಮತ್ತೆ ಹೊಸ ಜೀವ ಉದಯಿಸುವುದು. ನಿರಂತರವಾಗಿ ನಡೆಯುವ ಕೃಷಿಯೇ ಈ ಪ್ರಕೃತಿ ಎಂದು ಒಂದು ಸುಂದರ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ಸೃಷ್ಟಿಯ ಆದಿಯಲ್ಲಿ ಏನಿತ್ತೋ ಏನೋ ನಾನರಿಯೆ. ಆದರೆ ಅಂದಿನಿಂದ ಇಂದಿಗೂ ಪ್ರತಿ ಕ್ಷಣ ಸಾವಿರಾರು ಜೀವಿಗಳು ಈ ಜಗತ್ತಿನಲ್ಲಿ ಜನಿಸುತ್ತಿದ್ದಾರೆ ಮತ್ತು ಅಳಿಯುತ್ತಿದ್ದಾರೆ. ಕೋಟ್ಯಾಂತರ ಜೀವಿಗಳ ಸೃಷ್ಟಿ ಮತ್ತು ಅಳಿವು ಪ್ರತಿಕ್ಷಣವೂ ನಡೆಯುತ್ತಿದೆ. ಪ್ರಾಣಿಗಳು ಪಕ್ಷಿಗಳು ಕೀಟಗಳು ಮಾನವರು ಮತ್ತು ಜಲಚರಗಳಲ್ಲಿ ನಿರಂತರ ಈ ಪ್ರಕ್ರಿಯೆ ನಡೆಯುತ್ತಿದೆ. ಅವ್ಯಾಹತ ಹರಿಯುವ ಕಾಲದ ರಂಗಮಂಟಪದಲ್ಲಿ ನಡೆದಾಡುವ ಪಾತ್ರಗಳ ಕುಸಿಯುವಿಕೆ ಮತ್ತು ಹೊಸ ಹೊಸ ಪಾತ್ರಗಳ ಸೃಷ್ಟಿ ಮತ್ತು ನಲಿದಾಟ,ಕಾಲನೆಷ್ಟು ಅವ್ಯಾಹತನೋ ಅಷ್ಟೇ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಒಂದು ದೇಹ ಮತ್ತು ಚೇತನದ ನಿರಂತರ ಸಮಾಗಮ, ಜೀವನ ಮತ್ತು ನಿರ್ಗಮನದ ಆಟವೇ ಈ ಇಳೆಯಲ್ಲಿ. ಆ ಪರಮಾತ್ಮನ ಸೃಷ್ಟಿ ಸ್ಥಿತಿ ಲಯಗಳಾಟ. ಇದೆ ಪ್ರಕೃತಿ ಮತ್ತು ಅದರ ಸಹಜ ಸ್ಥಿತಿ.
ಬಂಧುಗಳೇ, ನಾವು ಬೇಕೆಂದರೂ, ಬೇಡವೆಂದರೂ, ಇಷ್ಟಪಟ್ಟರೂ, ಪಡದೆ ಇದ್ದರೂ ನಮ್ಮ ನಿಮಿತ್ತವಿಲ್ಲದೆಯೇ ನಡೆಯುವ ಈ ಗೊಂಬೆಯಾಟದಲ್ಲಿ ನಾವೆಲ್ಲಾ ಕೇವಲ ಪಾತ್ರಧಾರಿಗಳು. ಆ ಜಗನ್ನಾಟಕ ಸೂತ್ರಧಾರಿ ಆಡಿಸುವ ಬೊಂಬೆಗಳು. ನಮ್ಮ ಪಾತ್ರ ಬಂದಾಗ ನಮ್ಮ ಪ್ರವೇಶ, ಪಾತ್ರ ಮುಗಿದೊಡನೆ ನಿರ್ಗಮನ, ಇವೆರಡರ ನಡುವೆ ನಾವಾಡುವ ಆಟ ಹೇಳತೀರದು. ಅಜ್ಞಾನದಿಂದ ನಮ್ಮನ್ನುನಾನು ಎಂದುಕೊಂಡು ನಾವು ಪಡುವ ಪಾಡನ್ನು ನೋಡಿ ಆ ಪರಮಾತ್ಮನೂ ಸಹ ನೋಡಿ ನಗುತ್ತಿರಬೇಕು, ಅಲ್ಲವೇ? ಈ ಜಗತ್ತಿನ ಎಲ್ಲ ಮಾನವರಿಗೂ ನಾವು ಒಂದು ದಿನ ಈ ಪಾತ್ರದಿಂದ ನಿರ್ಗಮಿಸಲೇ ಬೇಕುಎಂದು ಗೊತ್ತು. ಆ ಸತ್ಯವನ್ನು ಮರೆಸಿ ನಮ್ಮಿಂದ ಹಲವಾರು ಕೆಲಸಗಳನ್ನು ಮಾಡಿಸುವುದು ಮಾಯೆ. ನಮಗರ್ಥವಾಗದ ಮಾಯೆ. ನಾವು ನಿರ್ದೇಶಕನು ಸೂಚಿಸಿದ ಮಾರ್ಗದಲ್ಲಿ ನಮ್ಮ ಪಾತ್ರ ವಹಿಸಿದರೆ ಸುಖ, ನಮ್ಮ ಅಹಂಕಾರದ ಮಾತು ಕೇಳಿದರೆ ದುಃಖ. ಆಯ್ಕೆ ನಮ್ಮದು. ಸುಖ ಅಥವಾ ದುಃಖ ನಮ್ಮದು.
ರಸಧಾರೆ - 142
ಮೂಲವಸ್ತುವದೊಂದು ಲೀಲೆಗೋಸುಗನೂರು |
ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ||
ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯವ ತಾಳಿ |
ಆಳುತಿರು ಜೀವನವ ಮಂಕುತಿಮ್ಮ ||
ಮೂಲವಸ್ತುವದೊಂದು = ಮೂಲ + ವಸ್ತುವು+ ಅದು+ ಒಂದು// ಲೀಲೆಗೊಸುಗನೂರು = ಲೀಲೆಗೋಸುಗ + ನೂರು// ಕೇವಲದೊಳೇಕ = ಕೇವಲದ+ಒಳು + ಏಕ//
ಇಡೀ ಜಗತ್ತಿನ ಮೂಲ ವಸ್ತುವು ಒಂದೇ. ಆ ಪರಮಾತ್ಮ ತನ್ನ ಲೀಲಾ ವಿನೋದಕಾಗಿ ತನ್ನನ್ನೇ ತಾನು ಹಲವಾಗಿಸಿಕೊಂಡಿದ್ದಾನೆ. ಕಾಲದ ನೋಟಕ್ಕೆ ಬಹಳವಾಗಿ ಕಂಡರೂ ಅದು ಕೇವಲ ಒಂದೇ. ಸ್ಥೂಲವಾಗಿ ನೋಡಿದಾಗ ಹಲವಾಗಿ ಬಾಳಿದರೂ ಸೂಕ್ಷ್ಮ ರೂಪದಿ ನೋಡಿದಾಗ ಜಗತ್ತಿನ ಎಲ್ಲ ವಸ್ತುಗಳಲ್ಲೂ ಸಾಮ್ಯತೆಯನ್ನು ತೋರುತ್ತಾ ಆ ಆತ್ಮನೇ ಆಳುತ್ತಿದ್ದಾನೆ, ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಜಗತ್ತಿನ ಎಲ್ಲವೂ ಒಂದೇ ಮೂಲದಿಂದ ಬಂದು ಹಲವಾಗಿ ಪ್ರಕಟಗೊಂಡಿದೆ ಎನ್ನುವುದು ಪ್ರಮಾಣಸಿದ್ಧ . ಆದರೂ ನಮಗೆ ಅದು ಬೇರೆ ಬೇರೆಯಾಗಿ ಕಾಣುತ್ತವೆ. ಹಾಗೆ ಬೇರೆ ಬೇರೆ ಕಾಣುವುದು ಕೇವಲ ಸ್ಥೂಲ ರೂಪ. ಆದರೆ ಸೂಕ್ಷ್ಮ ರೂಪದಲ್ಲಿ ನೋಡಿದರೆ ಎಲ್ಲವೂ ಒಂದೇ ಎಂದು ತೋರುತ್ತದೆ ಮತ್ತು ಅರ್ಥವಾಗುತ್ತದೆ. ನಮ್ಮ ಇಂದ್ರಿಯಗಳಿಗೆ ಗೋಚರವಾಗುವ ಪ್ರತಿಯೊಂದೂ ಸ್ಥೂಲರೂಪದಲ್ಲಿ ಇದ್ದು ಈ ಸ್ಥೂಲರೂಪಕ್ಕೆ ಚಲನೆಯನ್ನು ನೀಡುವ ಚೇತನವೇ ಸೂಕ್ಷ್ಮರೂಪದಲ್ಲಿ ಇದೆ. ಆ ಚೇತನವು ಪರಮ ಚೈತನ್ಯದ ಒಂದು ಅಂಶವಷ್ಟೇ. ಆ ಪರಮ ಚೈತನ್ಯವೇ ಇಡೀ ವಿಶ್ವಕ್ಕೆ ಮೂಲ. ಆ ಪರಮಾತ್ಮ ಕೇವಲ ತನ್ನ ಲೀಲಾ ವಿನೋದಕ್ಕಾಗಿ ಎಲ್ಲವನ್ನೂ ಸೃಜಿಸಿ ಅದಕ್ಕೆ ಚೈತನ್ಯ ರೂಪದಲ್ಲಿ ತಾನೆ ಒಳಹೊಕ್ಕು ತನ್ನ ಲೀಲೆಯನ್ನು ನಡೆಸಿದ್ದಾನೆ. ಅದನ್ನೇ ಮಾನ್ಯ ಗುಂಡಪ್ಪನವರು ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯವ ತಾಳಿಎಂದಿದ್ದಾರೆ.
ಇಲ್ಲಿ ನಾವು ಮುಖ್ಯವಾಗಿ ನೋಡಬೇಕಾದುದೇನೆಂದರೆ ಸ್ಥೂಲ ರೂಪದಲ್ಲಿರುವ ನಾವೆಲ್ಲಾ ನಮ್ಮ ನಮ್ಮನ್ನು ಬೇರೆಬೇರೆಯಾಗಿ ಗುರುತಿಸಿ ಕೊಂಡರೂ ಮತ್ತು ಬೇರೆ ಬೇರೆ ರೂಪಗಳಿಗೆ ಬೇರೆ ಬೇರೆ ಹೆಸರುಗಳನ್ನೂ ಇಟ್ಟರೂ ನಮ್ಮಲ್ಲಿ ಇರುವ ಸಾಮ್ಯತೆ ಏನೆಂದರೆ ಏಕರೂಪದಲ್ಲಿರುವ ಆ ಸೂಕ್ಷ ಚೇತನವೇ. ಅಂದರೆ ನಾವೆಲ್ಲ ಬೇರೆ ಬೇರೆ ರೂಪದಲ್ಲಿ ಇದ್ದರೂ ನಮ್ಮಲ್ಲಿ ಇರುವ ಆ ಸಾಮ್ಯ ರೂಪದ ಚೇತನವೇ ಪರಮಾತ್ಮ.
ಹೇಗೆ ಸಾಮ್ಯರೂಪದ, ಒಂದೇ ತೆರನಾಗಿರುವ, ವಿದ್ಯುತ್ ಹಲವಾರು ವಿಧದ ವಿವಿಧ ರೂಪದ ವಿದ್ಯುತ್ ಬಲ್ಬುಗಳನ್ನು ಬೆಳಗುತ್ತದೆಯೋ ಹಾಗೆ ಕೋಟ್ಯಾಂತರ ರೂಪಗಳನ್ನು ಧರಿಸಿರುವುದು, ರೂಪಗಳನ್ನು ಬೆಳಗುವುದೂ ಸಹ ಸಾಮ್ಯರೂಪದ ಚೇತನ ಅಥವಾ ಆತ್ಮ. ನಾವು ನಮ್ಮ ನಮ್ಮ ರೂಪಗಳಮರೆಸಿಕಂಡರೆ ನಮಗೆ ಕಾಣುವುದು ಆ ಏಕರೂಪದ ಪರಮಾತ್ಮ ಮಾತ್ರ ಎನ್ನುವುದೇ ಈ ಕಗ್ಗದ ಹೂರಣ. ಆದರೆ ಮಾಯೆ ನಮ್ಮನ್ನು ಹಿಡಿದು ಬಂಧಿಸಿ ಬಿಟ್ಟಿದೆ. ನಾವು, ಆ ಸೂಕ್ಷ್ಮವಾಗಿ ಸಾಮ್ಯತೆಯಿಂದ ಎಲ್ಲ ಜೀವಿಗಳಲ್ಲೂ ಇರುವ, ಆ ಪರಮಾತ್ಮನನ್ನು ಕಾಣಲು ಆಶಕ್ಯರಾಗಿದ್ದೇವೆ. ಮಾಯೆಯಿಂದ ಆವರಿಸಲ್ಪಟ್ಟ ನಮ್ಮ ಮನಸ್ಸು ಬುದ್ಧಿಗಳು ಈ ಬೇಧದ ಭಾವದಿಂದ ಹೊರಬರಬೇಕಾದರೆ, ಮುಕ್ತನಾಗಬೇಕಾದರೆ ಆರು ವೈರಿಗಳ ಸೆರೆಯಿಂದ ಹೊರಬರಬೇಕು.
ವಾಚಕ ಮಹಾಶಯರೇ, ಅದು ಸಾಧ್ಯವೋ, ಇಲ್ಲವೋ ನಾನರಿಯೆ! ಸಾಧ್ಯವಿರಬಹುದು. ಎಂದು ಮತ್ತು ಹೇಗೆ ಸಾಧ್ಯವೆಂದು ನಾನರಿಯೆ !! ಆದರೆ ಸಾಧ್ಯವಾದಲ್ಲಿ ಇಡೀ ಭುವನವೇ ನಾವು ಶಾಂತಿಯಿಂದ, ಸೌಹಾರ್ಧತೆಯಿಂದ. ಪ್ರೀತಿಯಿಂದ, ಪ್ರೇಮದಿಂದ ಮತ್ತು ಆನಂದದಿಂದ ಬಾಳಲು ಎಲ್ಲ ಜೀವಿಗಳೂ ಇಷ್ಟಪಡುವ ಒಂದು ಸುಂದರ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ.
ರಸಧಾರೆ - 143
ಧಾತ್ರಿಯನು ಮದುವೆಮಂಟಪದೊಲು ಸಿಂಗರಿಸಿ |
ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ||
ಕೃತ್ರಿಮವನೆಡೆಬಿಡದೆ ನಡೆಸಿ ನಗುವ ವಿಲಾಸಿ |
ಚಿತ್ರಕಾರಿಯೋ ಮಾಯೆ ಮಂಕುತಿಮ್ಮ
ಮದುವೆಮಂಟಪದೊಲು = ಮಾಡುವೆ+ಮಂಟಪದ+ಒಲು// ಕ್ಷಾತ್ರದಗ್ನಿಗಳ = ಕ್ಷಾತ್ರದ + ಅಗ್ನಿಗಳ // ನರಹೃದಯಗಳೊಳಿರಿಸಿ = ನರ + ಹೃದಯದೊಳು + ಇರಿಸಿ// ಕೃತ್ರಿಮವನೆಡೆಬಿಡದೆ = ಕೃತ್ರಿಮವನು+ ಎಡೆಬಿಡದೆ .
ಧಾತ್ರಿ=ಭೂಮಿ // ಮಂಟಪದೊಲು ಮಂಟಪದ ಹಾಗೆ// ಕ್ಷಾತ್ರದಗ್ನಿಗಳ = ಕ್ರಿಯಾತ್ಮಕವಾದ ಚೈತನ್ಯವನ್ನು // ಕೃತ್ರಿಮ = ಅಸಹಜತೆ// ವಿಲಾಸಿ ಚಿತ್ರಕಾರಿಯೋ = ವಿಲಸಿಸಿರುವ ಮಾಯಾಂಗನೆ.
ಈ ಧರಣಿಯನ್ನು ಮನುಷ್ಯನ ಕಣ್ಣಿಗೆ ಸುಂದರವಾಗಿ ಕಾಣುವಂತೆ, ಮದುವೆ ಮಂಟಪದಂತೆ ಸಿಂಗರಿಸಿ, ಇದರೊಳಗೆ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಬೇಕಾದ ಆಸ್ಥೆ ಮತ್ತು ಆಸೆಯನ್ನು ಅವನ ಹೃದಯದಲ್ಲಿ ತುಂಬಿ ಸತ್ಯವನ್ನು ಮರೆಸಿ ಕೇವಲ ಅಸಹಜತೆಯನ್ನು ಮೆರೆಯುವಂತೆ ಮಾಡಿರುವ ಮತ್ತು ನೋಡಿ ನಗುತ್ತಿರುವ ಮಾಯೆಒಂದು ಸುಂದರ ಚಿತ್ರಕಾರಿಯೋ ಎಂದು ಒಂದು ಗಹನವಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಹೌದಲ್ಲವೇ ಸಹೃದಯರೇ, ಇಡೀ ಜಗತ್ತು ಹಲವಾರು ಭೂ ವಿನ್ಯಾಸಗಳಿಂದ, ಬೆಟ್ಟ ಗುಡ್ಡಗಳಿಂದ, ನದಿ ತೊರೆ ಮತ್ತು ದುಮ್ಮಿಕುವ ಜರಿಗಳಿಂದ, ಕೋಟಿ ಕೋಟಿ ವಿನ್ಯಾಸ, ಬಣ್ಣ, ಮತ್ತು ಆಕಾರಗಳಿಂದ ಕೂಡಿದ ಕ್ರಿಮಿ, ಕೀಟ, ಹುಳ, ಹುಪ್ಪಟೆ,ಪ್ರಾಣಿ , ಪಕ್ಷಿ, ಮನುಷ್ಯ, ಗಿಡ, ಮರಗಳು, ಹೂ, ಹಣ್ಣುಗಳು, ಸುಗಂಧಗಳು, ಹೀಗೆ ಹೇಳಲಾಗದಷ್ಟು, ವೈವಿಧ್ಯತೆಯಿಂದ ಕೂಡಿದೆ. ಇಲ್ಲಿ ಹುಟ್ಟಿದ ಪ್ರತಿ ಮನುಷ್ಯನು ಅವನ ಜೀವನದಲ್ಲಿ ಒಂದು ಬಾರಿಯಾದರೂ ಇದರ ಈ ಅಂದವನ್ನು ನೋಡಿ ಆಹಾ ಎಷ್ಟು ಚೆನ್ನಾಗಿದೆಎಂದು ಒಂದು ಉದ್ಹ್ಘಾರವನ್ನು ತೆಗೆಯದೆ ಇರಲು ಸಾಧ್ಯವೇ ಇಲ್ಲ. ಒಂದೊಂದು ಕಡೆಯಲ್ಲಿ ಒಂದೊಂದು ವಿನ್ಯಾಸ. ಮಣ್ಣಿನ ಗುಣ ಬೇರೆ, ನೀರಿನ ಗುಣ ಬೇರೆ, ಗಾಳಿಯ ಮತ್ತದರ ಗಂಧದ ಗುಣ ಬೇರೆ. ಇವುಗಳ ಗುಣಗಳಿಗೆ ಅನುಸಾರವಾಗಿ ಎಲ್ಲ ಜೀವಿಗಳ ಗುಣಗಳೂ ಬೇರೆ ಬೇರೆ. ಆದರೂ ಪ್ರತಿ ವೈವಿಧ್ಯತೆಯಲ್ಲೂ ಒಂದು ಮನ ಮೋಹಕ ಸುಂದರತೆ. ಇದನ್ನು ನೋಡಿ ಆನಂದಿಸದೇ, ಆಕರ್ಷಿತನಾ(ಳಾ)ಗದೆ ಇರುವ ಮನುಷ್ಯ ಇರಲು ಸಾಧ್ಯವೇ ಇಲ್ಲ ಅಲ್ಲವೇ?
ಆದರೆ ಇದು ಇಹ. ಇದು ಇಹವಾದರೆ ಪರವೂ ಒಂದು ಉಂಟು. ನಾವು ಇರುವುದೇ ಇಹದಲ್ಲಿ. ಪರಕ್ಕೆ ಹೋಗುವ ಪರದಾಟ. ಆದರೆ ಇಲ್ಲಿರುವ ಅಂದರೆ ಇಹದಲ್ಲಿರುವ ಎಲ್ಲ ಅಂದಗಳೂ ಅಶಾಶ್ವತವಾದರೂ, ಮನುಷ್ಯನನ್ನು ಆಕರ್ಷಿಸಿ ಮೋಹಗೊಳಿಸಿ ತನ್ನೆಡೆಗೆ ಸೆಳೆಯುತ್ತಿದೆ. ಈ ಸೆಳೆತದಿಂದ ಹೊರಬರಲು ಮಾನವನ ನಿರಂತರ ಪ್ರಯತ್ನ ನಡೆದೇ ಇದೆ. ಜನ್ಮ ಜನ್ಮಾಂತರದಿಂದ ನಡೆಯುತ್ತಲೇ ಇದೆ. ಪ್ರತಿ ಜನ್ಮದಲ್ಲೂ ಕೆಲವರು ಕೆಲವು ಹೆಜ್ಜೆ ಮುನ್ನಡೆಯುತ್ತಾರೆ, ಕೆಲವರು ಹಿನ್ನಡೆಯನ್ನೂ ಹಾಕುತ್ತಾರೆ. ಮತ್ತೆ ಮುನ್ನಡೆಯುವ ಪ್ರಯತ್ನ. ಎಣ್ಣೆ ಸುರಿದ ನೆಲದಮೇಲೆ ನಡೆಯಲು ಪ್ರಯತ್ನ ಪಡುವವನ ರೀತಿ”. ಈ ಜಗತ್ತಿನ ಮಾಯೆಯಂಬ ಎಣ್ಣೆ ನಮ್ಮನ್ನು ಮುನ್ನಡೆಯಲು ಬಿಡುವುದೇ ಇಲ್ಲ. ಬಹಳಷ್ಟು ಸಾರಿ ಜಾರಿ ಬೀಳುವುದೇ ನಮ್ಮ ಪಾಡು.
ಈ ಜಗತ್ತನ್ನು, ಆಕರ್ಷಣೀಯವಾದ ಈ ಜಗತ್ತಿನ ಸೊಬಗನ್ನೂ, ನಮ್ಮನ್ನು ಈ ಆಕರ್ಷಣೆಯ ವೃತ್ತದೊಳಕ್ಕೆ ಸೆಳೆದುಕೊಳ್ಳುವ ಮಾಯೆಯನ್ನು”, ಸೃಷ್ಟಿಸಿದ ಆ ದೈವವೂ ಸಹ ಈ ನಮ್ಮ ಪಾಡನ್ನು ಕಂಡು ಒಳಗೊಳಗೇ ಹಲವಾರುಬಾರಿ ನಕ್ಕಿರಬಹುದು, ಗಹಗಹಿಸಿ ಅಟ್ಟಹಾಸದ ಕೇಕೆ ಹಾಕಿರಬಹುದು , ಅಣಕವಾಡಿರಬಹುದು. ಜಗವನ್ನು ಸೃಜಿಸಿ, ನಿನ್ನನ್ನು ಸೃಷ್ಟಿಮಾಡಿ, ಜಗಕ್ಕೆ ಅಂದವನ್ನು ಕೊಟ್ಟು, ಮಾಯೆಯ ಪ್ರಾಭಲ್ಯದಿಂದ ಈ ಜಗತ್ತಿನಲ್ಲಿ ನಿನಗೆ ಆಸೆಯನ್ನೂ ಹುಟ್ಟಿಸಿ, ನನ್ನ ಸೇರುವಾಸೆಯನ್ನೂ ಕೊಟ್ಟು ಅದರ ಸೆಳೆತದಲ್ಲಿ ಸಿಕ್ಕಿಹಾಕಿಕೊಂಡು ಪರದಾಡುವಂತೆ ಮಾಡಿದ್ದೇನೆ, ಇದರಿಂದ ಬಿಡಿಸಿಕೊಳ್ಳುವ ಮಾರ್ಗವನ್ನೂ ತೋರಿದ್ದೇನೆ. ನಿನ್ನ ಶಕ್ತಿಯಿಂದ ಬಿಡಿಸಿಕೊಂಡು ಬರುವೆಯೋ ಅಥವಾ ಅದರ ಸೆಳೆತದಲ್ಲೇ ಅಲ್ಲೇ ಒದ್ದಾಡುವೆಯೋ ಎಂದು ತಮಾಷೆಯಾಟವನ್ನು ಆಡುತ್ತಿದ್ದಾನೆ. ಇದು ಮಾಯೆ ಎಂದು ಬಹಳಷ್ಟು ಜನರಿಗೆ ಅರಿವಾಗುವುದೇ ಇಲ್ಲ. ಹಾಗೆ ಅರಿವಾದವರಲ್ಲಿ ಬಹಳಷ್ಟುಜನ ಇದರಿಂದ ಮುಕ್ತರಾಗುವ ಪ್ರಯತ್ನವನ್ನೇ ಮಾಡುವುದಿಲ್ಲ. ಹಾಗೆ ಪ್ರಯತ್ನ ಪಟ್ಟವರಲ್ಲಿ ತದೇಕಚಿತ್ತದಿಂದ ಮುಂದುವರೆದವರು ವಿರಳ. ಹಾಗೆ ಮುಂದುವರೆದವರಲ್ಲಿ ಮುಕ್ತಿ ಪಡೆದವರು ಅತೀ ವಿರಳ.
ವಾಚಕರೆ ನಾವೂ ಸಹ ಬಿಡುಗಡೆಯ ಪ್ರಯತ್ನ ಪಡುವ, ದಿಟ್ಟ ಹೆಜ್ಜೆಯನ್ನು ಇಡುವ ಸಂಕಲ್ಪವನ್ನು ಇಂದೇ ಮಾಡೋಣವೆ?


 **

1 ಕಾಮೆಂಟ್‌:

Unknown ಹೇಳಿದರು...

🙏 ನಮಸ್ಕಾರ ಮಹೇಶ್ ಅವರಿಗೆ 🙏
ತಮ್ಮ ಲೇಖನ ಮಾಲೆಯಲ್ಲಿ ದಿ ವಿ ಜಿ ಅವರ ಮಂಜು ತಿಮ್ಮನ ಕಗ್ಗ ದ ಮುಂದಿನ ಭಾಗಗಳನ್ನು ಎಲ್ಲಿ ವೀಕ್ಷಿಸಲು ಸಾಧ್ಯವಿದೆ ಎಂದು ದಯವಿಟ್ಟು ತಿಳಿಸಿ.

ಕೃತಜ್ಞ,
ಶ್ರೀಕಾಂತ