ನೀತಿ ಕಥೆ : ನಂಬಿಕೆ

ನೀತಿ ಕಥೆ : ನಂಬಿಕೆ

ವೀರಗಾನಹಳ್ಳಿಯೆಂಬ ಊರೊಂದರಲ್ಲಿ ವೀರಣ್ಣನೆಂಬ ಸಾಧುವೊಬ್ಬರು ಮಠವನ್ನು ಕಟ್ಟಿ ಬೆಳೆಸುತ್ತಿದ್ದರು. ದಿನವೂ ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ಭಿಕ್ಷಾಟಣೆ ಮಾಡಿ ಬಂದ ದವಸಧಾನ್ಯಗಳಿಂದ ಆಹಾರವನ್ನು ಬೇಯಿಸಿ ಮಠಕ್ಕೆ ಬಂದವರಿಗೆ ಅನ್ನದಾಸೋಹ ನಡೆಸುತ್ತಿದ್ದರು. ದಿನಕಳೆದಂತೆ ಕೆಲವು ಯುವಕರು ಸಾಧುವಿನ ಜೊತೆ ಸೇರಿಕೊಂಡು ಅನ್ನದಾಸೋಹವನ್ನು ಸೇವಿಸುತ್ತಾ ಮೈಗಳ್ಳತನದಲ್ಲಿ ಬದುಕುವುದನ್ನು ರೂಢಿಸಿಕೊಂಡರು. ಸಾಧುಗಳ ಶಿಷ್ಯರೆಂದು ಎಲ್ಲರಲ್ಲಿಯೂ ಹೇಳಿಕೊಳ್ಳುತ್ತಿದ್ದ ಅಂಥವರ ಸಂಖ್ಯೆ ದಿನೇ ದಿನೆ ಹೆಚ್ಚಿತು.

ಸಾಧುವಿಗೂ ವಯಸ್ಸಾಗಿ ಭಿಕ್ಷಾಟಣೆ ಮಾಡಲು ಶಕ್ತಿಯಿಲ್ಲದಂತಾದಾಗ ಅವರು ತಮ್ಮ ಶಿಷ್ಯರನ್ನೇ ಭಿಕ್ಷಾಟಣೆಗೆ ನಿಯೋಜಿಸಿದರು. ತಾವು ಕೊಡುವ ಭಿಕ್ಷೆಯು ಸತ್ಕಾರ್ಯಕ್ಕೆ ಬಳಕೆಯಾಗುವುದರಿಂದ ಜನರೂ ಹಿಂದೆಮುಂದೆ ನೋಡದೇ ತಾವು ಬೆಳೆದುದರಲ್ಲಿ ಒಂದಿಷ್ಟನ್ನು ದಾನ ನೀಡಲಾರಂಭಿಸಿದರು. ವಯೋಸಹಜವೆಂಬಂತೆ ಸಾಧುವಿಗೆ ತನ್ನ ನಂತರ ಮಠದ ಉತ್ತರಾಧಿಧಿಕಾರಿಯನ್ನು ಆಯ್ಕೆ ಮಾಡಬೇಕೆನಿಸಿ ತನ್ನ ಶಿಷ್ಯರನ್ನೆಲ್ಲಾ ಒಂದೆಡೆ ಸೇರಿಸಿ ವಿಚಾರಿಸಿದಾಗ ಶಿಷ್ಯರೆಲ್ಲರೂ 'ನಾ ಮುಂದು ತಾ ಮುಂದು' ಎಂದು ಕೂಗಲಾರಂಭಿಸಿದರು. ಇವರಲ್ಲಿ ಸೂಕ್ತರಾದವರನ್ನು ಆಯ್ಕೆ ಮಾಡಬೇಕೆಂದುಕೊಂಡ ಸಾಧುಗಳು ಒಂದೆರೆಡು ದಿನ ಆಲೋಚಿಸಿ ಉಪಾಯವೊಂದನ್ನು ಮಾಡಿ ಉತ್ತಮ ಶಿಷ್ಯನೊಬ್ಬನನ್ನು ಪತ್ತೆಹಚ್ಚಿ ಅವನಿಗೆ ಪಟ್ಟಕಟ್ಟಬೇಕೆಂದು ನಿರ್ಧರಿಸಿದರು.

ಮರುದಿನವೇ ಎಲ್ಲಾ ಶಿಷ್ಯರನ್ನೂ ತಮ್ಮೊಡನೆ ಗ್ರಾಮದಲ್ಲಿದ್ದ ಕಮ್ಮಾರನ ಕುಲುಮೆಯ ಬಳಿಗೆ ಕೊಂಡೊಯ್ದು 'ಇಲ್ಲಿ ಕಾದ ಕಬ್ಬಿಣದ ಸರಳನ್ನು ಕೈಯಲ್ಲಿಡಿದು ವಿಚಲಿತರಾಗದೆ ಯಾರು ಸಹಿಸಿಕೊಳ್ಳುತ್ತಾರೆಯೋ ಅವರನ್ನೇ ಮಠದ ಉತ್ತರಾಧಿಧಿಕಾರಿಯನ್ನಾಗಿ ಮಾಡುತ್ತೇನೆ' ಎಂದರು. ಇದನ್ನು ಕೇಳಿದ ಶಿಷ್ಯರೆದೆಯಲ್ಲಿ ನಡುಕ ಪ್ರಾರಂಭವಾಯಿತು. ಸಾಧುಗಳು ಮುಂದುವರೆಸಿ 'ಮೊದಲಿಗೆ ನಾನೇ ಸರಳನ್ನು ಹಿಡಿದುಕೊಳ್ಳುವೆ ನಂತರ ನೀವು ಒಬ್ಬೊಬ್ಬರಾಗಿ ಹಿಡಿಯಿರಿ' ಎಂದು ತಾವು ಮೊದಲನೆಯವರಾಗಿ ಕಮ್ಮಾರನ ಕುಲುಮೆಯಲ್ಲಿದ್ದ ಕಬ್ಬಿಣದ ಸರಳನ್ನು ಕೈಯಲ್ಲಿ ಹಿಡಿದು ದೇವರ ಜಪ ಮಾಡಿದರು. ಇದನ್ನು ಕಂಡ ಶಿಷ್ಯರು ಬೆವೆತು ಹೋದರು.

ಆಗ ಗುರುಗಳು 'ಬನ್ನಿ ಒಬ್ಬೊಬ್ಬರಾಗಿ ಸರಳನ್ನು ಹಿಡಿಯಿರಿ' ಎಂದಾಗ ಎಲ್ಲರೂ ಜೀವ ಉಳಿದರೆ ಸಾಕೆಂದು ತಿಳಿದು ಭಯದಿಂದ ಓಡಿಹೋದರು. ಆದರೆ ಒಬ್ಬನೇ ಒಬ್ಬ ಶಿಷ್ಯ ಮಾತ್ರ ಅಲ್ಲಿಯೇ ನಿಂತಿದ್ದು ಅವನು ಮುಂದೆ ಬಂದು ಸರಳನ್ನು ಕೈಯಲ್ಲಿ ಹಿಡಿದು ಮಂತ್ರ ಪಠಿಸಿದನು. ಅವನ ಕೈ ಸುಡಲಿಲ್ಲ. ಕಾರಣ ಅದು ಕಾದ ಕಬ್ಬಿಣವಾಗಿರಲಿಲ್ಲ. ಕಮ್ಮಾರನೊಡನೆ ಸಾಧುವು ಸೇರಿಕೊಂಡು ಉತ್ತಮ ಶಿಷ್ಯನನ್ನು ಆಯ್ಕೆ ಮಾಡಲು ಹೀಗೆ ನಾಟಕವಾಡಿದ್ದರು. ಗುರುಗಳು ಆ ಯುವ ಶಿಷ್ಯನನ್ನು ಕುರಿತು 'ಎಲ್ಲರೂ ಓಡಿ ಹೋದರೆ ನೀನೇಕೆ ಹೆದರಲಿಲ್ಲ' ಎಂದು ಕೇಳಿದಾಗ ಆ ಯುವಕನು 'ಗುರುಗಳಾದ ನೀವು ಕಾದ ಸರಳನ್ನು ಹಿಡಿಯಲು ಸಾಧ್ಯವಾಗುವುದಾದರೆ, ನಿಮ್ಮ ಶಿಷ್ಯನಾದ ನನ್ನಿಂದ ಏಕೆ ಅದು ಸಾಧ್ಯವಿಲ್ಲವೆನಿಸಿ ಭಗವಂತನಲ್ಲಿ ನಂಬಿಕೆಯಿಟ್ಟು ಹಿಡಿದೆ' ಎಂದಾಗ ಸಾಧುಗಳ ಮುಖದಲ್ಲಿ ಮಠಕ್ಕೆ ಸೂಕ್ತ ಉತ್ತರಾಧಿಧಿಕಾರಿ ದೊರೆತ ಆನಂದ ಎದ್ದು ಕಾಣುತ್ತಿತ್ತು.

ನೀತಿ: ನಂಬಿಕೆ ಬಹಳ ಮುಖ್ಯ. ಕಠಿಣ ಸಂದರ್ಭದಲ್ಲೂ ಅದುವೇ ನಮ್ಮನ್ನು ಕಾಪಾಡುತ್ತದೆ.


*******