ಪ್ರಸಿದ್ಧ ಸಾಹಿತಿಗಳ ಕೃತಿಗಳು

ಮಹಾ ಸಾಹಸಿ [ಬಾಲೋಪಯೋಗೀನೀತಿ ಕಥೆಗಳು]

ಪ್ರಯಾಣಿಕ ಮತ್ತು ಡಕಾಯಿತಿ

ಅದೊಂದು ಕಗ್ಗತ್ತಲ ರಾತ್ರೆ. ಇಂಗ್ಲಿಷ್‌ ಗೃಹಸ್ಥನೊಬ್ಬ ಸಾರೋಟನಲ್ಲಿ ಪಯಣ ಹೊರಟಿದ್ದ. ರಸ್ತೆ ನಿರ್ಜನವಾಗಿತ್ತು. ಫಕ್ಕನೆ ಡಕಾಯಿತನೊಬ್ಬ ಅಲ್ಲಿ ಪ್ರತ್ಯಕ್ಷನಾದ ಅವನು ಕುದುರೆಯ ಮೇಲೆ ಕೂತಿದ್ದ. ಅವನ ಕೈಯಲ್ಲಿ ಪಿಸ್ತೂಲು ಇತ್ತು. ಅದನ್ನು ಅವನು ಪ್ರಯಾಣಿಕನ ಎದೆಗೆ ಗುರಿಯಿಟ್ಟಿದ್ದ. ಜೀವದಾಸೆಯಿದ್ದರೆ ಪ್ರಯಾಣಿಕನು ತನ್ನ ಹಣವನ್ನೆಲ್ಲ ಕೊಟ್ಟುಬಿಡಬೇಕೆಂದು ಅವನು ಬೆದರಿಕೆ ಹಾಕಿದ್ದ “ಒಬ್ಬಂಟ ದರೋಡೆಗಾರ ನಿನ್ನನ್ನು ಎಂದಿಗೂ ದೋಚಲಾರನೆಂದು ಬಡಾಯಿಕೊಚ್ಚು ತಿದ್ದೆಯಲ್ಲಾ? ಅದು ನನ್ನ ಗಮನಕ್ಕೆ ಬಂದಿದೆ. ಇಗೋ ನಾನೊಬ್ಬ ಸುಲಿಗೆಗಾರ ಒಬ್ಬಂಟಿಯಾಗಿ ಬಂದಿದ್ದೇನೆ. ನಿನ್ನನ್ನೀಗ ದೋಚುವೆನೊ ಇಲ್ಲವೋ ನೋಡುತ್ತಿರು. ನಿನ್ನ ಬಡಾಯಿ ಅದೆಷ್ಟು ನಿರರ್ಥಕ ಎಂಬುದು ನನಗೀಗ ತಿಳಿಯುವುದು” ಎಂದು ಆತ ಘರ್ಜಿಸಿದ.
ಪಯಣಿಗ ಒಂದಿಷ್ಟೂ ವಿಚಲಿತನಾಗಲಿಲ್ಲ. ತನ್ನಲ್ಲಿರುವ ಹಣವನ್ನು ಹೊರತೆಗೆಯಲೆಂಬಂತೆ ಅವನು ಕೋಟನ ಕಿಸೆಗೆ ಕೈತೂರಿದ “ನಿನ್ನ ಹಿಂದೆಗಡೆಯವನ ಸಹಾಯವಿಲ್ಲದಿದ್ದರೆ ಈಗಲೂ ನನ್ನನ್ನು ದೋಚುವುದು ನಿನಗೆ ಸಾಧ್ಯವಿಲ್ಲ” ಎನ್ನುತ್ತ, ಡಕಾಯಿತ ಹಿಂದಿರುಗಿ ನೋಡುತ್ತಿದ್ದಾಗ, ಪಯಣಿಗ ಮಿಂಚಿನ ವೇಗದಲ್ಲಿ ತನ್ನ ಪಿಸ್ತೂಲು ಹೊರ ತೆಗೆದು ಗುಂಡು ಹಾರಿಸಿಬಿಟ್ಟ. ಡಕಾಯಿತ ಸತ್ತು ಬಿದ್ದ. ಬಂದ ಗಂಡಾಂತರ ದೂರವಾಯಿತು. ಗೃಹಸ್ಥನ ಪ್ರಯಾಣ ಮುಂದುವರಿಯಿತು.
ಧೈರ್ಯ ಮತ್ತು ಪ್ರಸಂಗಾವಧಾನತೆಗಳು ಅವನನ್ನು ಗಂಡಾಂತರದಿಂದ ಪಾರು ಮಾಡಿದ್ದವು.
* * * *

ನ್ಯಾಯ ನಿರ್ಣಯ

ಒಬ್ಬ ರಷ್ಯನ್ನನು ಪಯಣ ಹೊರಟಿದ್ದ. ಯುರೋಪಿನ ದೇಶಗಳಲ್ಲಿ ಸುತ್ತಾಡುವುದು ಅವನ ಉದ್ದೇಶವಾಗಿತ್ತು. ಊರೂರು ಸುತ್ತಾಡುತ್ತ ಅವನು ವಾರ್ಸೋ ನಗರಕ್ಕೆ ಬಂದ. ಅವನ ಕೈಯಲ್ಲಿ ಒಂದು ಪತ್ರವಿತ್ತು. ಅವನ ಗೆಳೆಯ ಅದನ್ನು ಕೊಟ್ಟಿದ್ದ. ಅದರಲ್ಲಿ ಅವನು ಯಾರು, ಯಾವ ಉದ್ದೇಶದಿಂದ ಬಂದವನು ಎಂಬ ವಿವರಗಳಿದ್ದವು. ವಾರ್ಸೋ ನಗರದ ನಿವಾಸಿ ಒಬ್ಬನಿಗೆ ಬರೆದ ಪತ್ರವಿದು. ಪಯಣಿಗನು ಸಂಬಂಧಪಟ್ಟ ವ್ಯಕ್ತಿಯನ್ನು ಕಂಡುಹುಡುಕಿದ. ಅವನಿಗೆ ಪತ್ರವನ್ನು ತೋರಿಸಿದ ಒಡನೆ ವಾರ್ಸೋ ನಿವಾಸಿ ಆತನನ್ನು ಆದರದಿಂದ ಬರಮಾಡಿಕೊಂಡ. ಅವನಿಗೆ ಬೇಕಾದ ಅನುಕೂಲತೆಗಳನ್ನು ಒದಗಿಸಿಕೊಟ್ಟ.
ಪಯಣಿಗ ಅಲ್ಲಿ ಕೆಲವು ದಿನ ತಂಗಿದ. ನೋಡ ತಕ್ಕ ಸ್ಥಳಗಳನ್ನೆಲ್ಲ ನೋಡಿಕೊಂಡ. ಒಂದು ವಾರ ಕಾಲ ಬೇರೆ ಊರುಗಳಲ್ಲಿ ಸುತ್ತಾಡಿ ಮತ್ತೆ ಪುನಃ ಆ ನಗರಕ್ಕೆ ಹಿಂದೆ ಬಂದು ಪಯಣ ಮುಂದುವರಿಸಲು ನಿಶ್ಚಯಿಸಿದ. ಹಾಗೆ ಹೋಗುವಾಗ ತನ್ನಲ್ಲಿದ್ದ ಒಂದು ಪೆಟ್ಟಿಗೆಯನ್ನು ವಾರ್ಸೋ ನಿವಾಸಿಯ ವಶ  ಒಪ್ಪಿಸಿದ. “ಒಂದು ವಾರ ಬಿಟ್ಟು ನಾನು ಹಿಂದಿರುಗಿ ಬರುತ್ತೇನೆ. ಅಲ್ಲಿಯವರೆಗೆ ಈ ಪೆಟ್ಟಿಗೆ ನಿಮ್ಮಲ್ಲಿರಲಿ. ಅಮೂಲ್ಯವಾದ ಮುತ್ತು ರತ್ನಗಳು ಇದರಲ್ಲಿವೆ. ಇನ್ನೊಬ್ಬರಿಗೆ ಸಲ್ಲಬೇಕಾದ ವಸ್ತುಗಳಿವು. ದಯವಿಟ್ಟು ಇದನ್ನು ನಿಮ್ಮ ವಶ ಇರಿಸಿಕೊಳ್ಳಿ. ಮುಂದಿನ ವಾರ ನಾನು ಇದನ್ನು ಕೊಂಡೊಯ್ಯುವೆ” ಎಂದು ಕೇಳಿಕೊಂಡ. ಮನೆಯ ಯಜಮಾನ ಅವನ ಮಾತಿಗೆ ಒಪ್ಪಿದ. ಪೆಟ್ಟಿಗೆಯನ್ನು ತನ್ನಲ್ಲಿ ಇರಿಸಿಕೊಂಡ.
ಒಂದು ವಾರ ಕಳೆಯಿತು. ಪಯಣಿಗೆ ಹಿಂದಿರುಗಿ ಬಂದ. ತನ್ನ ಪೆಟ್ಟಿಗೆಯನ್ನು ಹಿಂದೆ ಕೊಡುವಂತೆ ಮನೆಯಾತನನ್ನು ಬೇಡಿಕೊಂಡ . ಅವನ ಮಾತು ಕೇಳಿದ ಯಜಮಾನನೂ ಅವನ ಹೆಂಡತಿಯೂ ಆಶ್ಚರ್ಯ ನಟಿಸಿದರು. “ಯಾವ ಪೆಟ್ಟಿಗೆ? ಯಾರು ಕೊಟ್ಟದ್ದು? ಯಾವಾಗ? ನಮಗೆ ಯಾವ ಸಂಗತಿಯೂ ಗೊತ್ತಿಲ್ಲವಲ್ಲ!” ಎಂದರು.
ಪಯಣಿಗನಿಗೆ ದಿಕ್ಕೇ ತೋಚದಂತಾಯಿತು. ಅವನು ಊರವರಲ್ಲಿ ದೂರು ಕೊಟ್ಟ. ಅವರು ಬಂದರು. ಮನೆಯಾತನನ್ನು ಪ್ರಶ್ನಿಸಿದರು. “ಈ ಪಯಣಿಗನಿಗೆ ತಲೆ ಕೆಟ್ಟಿದೆ. ಆದುದರಿಂದ ಏನೇನೋ ಮಾತಾಡುತ್ತಿದ್ದಾನೆ. ಅವನು ಪೆಟ್ಟಿಗೆ ಕೊಟ್ಟುದೂ ಇಲ್ಲ;  ನಾವದನ್ನು ಪಡೆದುದೂ ಇಲ್ಲ” ಎಂದು ಬಿಟ್ಟ ಮನೆಯಾತ.
ಪಯಣಿಗ ಪೋಲೀಸರಲ್ಲಿ ದೂರುಕೊಟ್ಟ. ಅವರು ಪೆಟ್ಟಿಗೆ ಕೊಟ್ಟ ಬಗ್ಗೆ ರುಜುವಾತು ಏನಿದೆ ಎಂದು ಅವನನ್ನು ಪ್ರಶ್ನಿಸಿದರು. ಪಯಣಿಗೆ ತನ್ನಲ್ಲಿದ್ದ ಕೀಲಿಕೈ ತೋರಿಸಿದ. ಆದರೆ ಪೋಲೀಸರು ಒಪ್ಪಲಿಲ್ಲ. “ಸಾಕ್ಷಿಗಳಿಲ್ಲದೆ ಕೈಚೀಟ ಸಹ ಪಡೆಯದೆ ಅಷ್ಟು ಅಮೂಲ್ಯ ವಸ್ತುಗಳನ್ನು ಹೇಗೆ ಕೊಟ್ಟೆ? ನಾವೇನೀ ಮಾಡಲಾರೆವು” ಎಂದರು ಅವರು. ಆದರೂ ದೇಶದ ಗವರ್ನರರಲ್ಲಿ ಆತ ದೂರು ಕೊಡಬಹುದು ಎಂಬ ಸಲಹೆ ನೀಡಿದರು ಅವರಲ್ಲಿಗೆ ಅವನನ್ನು ಕರೆದೊಯ್ದರು.
ಗವರ್ನರರು ಪಯಣಿಗನ ದೂರನ್ನು ತಾಳ್ಮೆಯಿಂದ ಕೇಳಿಕೊಂಡರು. ಮತ್ತೆ ಕ್ಷಣಕಾಲ ಆ ಬಗ್ಗೆ ಯೋಚಿಸಿದರು. ಅನಂತರ ಆಪಾದಿತನಿಗೆ ಹೇಳಿ ಕಳಿಸಿದರು. ಅವನು ಬಂದಾಗ ಅವರು ಅವನನ್ನು ತಮ್ಮ ಎದುರುಗಡೆಯ ಕುರ್ಚಿಯಲ್ಲಿ ಕೂಡಿಸಿದರು. ಅವನ ಕೈಯಲ್ಲಿ ಒಂದು ಕಾಗದವನ್ನೂ ಲೇಖನಿಯನ್ನೂ ಕೊಟ್ಟರು. ತಾನು ಹೇಳಿದಂತೆ ಅವನು ಅದರಲ್ಲಿ ಬರೆಯಬೇಕೆಂದು ಸೂಚಿಸಿದರು. ಮತ್ತು “ಪ್ರೀತಿಯ ನನ್ನವಳೇ, ನನ್ನ ಗುಟ್ಟು ರಟ್ಟಾಗಿದೆ. ಈ ಚೀಟು ತರುವವರಲ್ಲಿ ಆ ಪೆಟ್ಟಿಗೆಯನ್ನು ಕೊಟ್ಟು ಕಳಿಸು” ಎಂದು ಬರೆದು ಅದರ ಕೆಳಗಡೆ ಅವನು ತನ್ನ ಸಹಿ ಹಾಕಬೇಕು ಎಂದು ಅಪ್ಪಣೆ ಕೊಟ್ಟರು ಬಂದವನು ಇದಕ್ಕೆ ಸಿದ್ಧನಿರಲಿಲ್ಲ. ತಾನು ಬರೆಯಲಾರೆ ಎಂದು ಹಠ ಹಿಡಿದ. “ಹಾಗಾದರೆ ನೀನೇ ಅಪರಾಧಿ ಎಂದು ಸಾಭೀತಾಯಿತು ನೀನು ಶಿಕ್ಷೆ ಅನುಭವಿಸಬೇಕಾಗುತ್ತದೆ” ಎಂದು ಗವರ್ನರರು ಎಚ್ಚರಿಕೆ ಕೊಟ್ಟಾಗ ಅವನು ಅವರು ಹೇಳಿದಂತೆ ಒಪ್ಪಲೇಬೇಕಾಯಿತು.
ಪತ್ರ ಬರೆದಾಯಿತು. ಪತ್ರಕ್ಕೆ ಅವನ ಸಹಿಯೂ ಬಿತ್ತು. ಸೇವಕನ ಮೂಲಕ ಅದನ್ನು ಅವನ ಮನೆಗೆ ಕಳಿಸಲಾಯಿತು. ಪತ್ರ ಕಂಡೊಡನೆ ಅವನ ಹೆಂಡತಿಯ ಮುಖ ಬಿಳಿಚಿಕೊಂಡಿತು. ನಡುಗುತ್ತ ಅವಳು ಒಳಹೋಗಿ ಪೆಟ್ಟಿಗೆಯನ್ನು ತಂದೊಪ್ಪಿಸಿದಳು. ಸೇವಕ ಅದನ್ನು ತಂದು ಗವರ್ನರರಿಗೆ ಒಪ್ಪಿಸಿದ. ಅವರು ಅದನ್ನು ಪಯಣಿಗನಿಗೆ ಕೊಟ್ಟರು. “ನಿನ್ನ ವಸ್ತುಗಳೆಲ್ಲ ಸುರಕ್ಷಿತವಾಗಿ ಇವೆಯೇ ನೋಡಿಕೊ” ಎಂದರು.
ವ್ಯಾಪಾರಿ ತನ್ನ ಕೀಲಿಕೈ ಬಳಸಿ ಪೆಟ್ಟಿಗೆಯ ಬಾಯಿ ತೆರೆದ. ಅವನ ವಸ್ತುಗಳೆಲ್ಲ ಸುರಕ್ಷಿತವಾಗಿದ್ದವು. ಸಂತೋಷದಿಂದ ಅವನು ಗವರ್ನರರಿಗೆ ವಂದಿಸಿ, ಅಲ್ಲಿಂದ ಹೊರಟು ಹೋದ.
ಅಪರಾಧಿ ತಕ್ಷಣ ದೇಶ ಬಿಟ್ಟು ಹೋಗುವಂತೆ ಗವರ್ನರರ ಅಪ್ಪಣೆಯಾಯಿತು.
 *****

ದಿಟ್ಟ ಹುಡುಗಿ

ಒಬ್ಬಳು ಕೆಲಸದ ಹುಡುಗಿ ಇದ್ದಳು. ಒಮ್ಮೆ ಆಕೆ ತೋಟದಲ್ಲಿ ನಡೆದಾಡುತ್ತಿದ್ದಳು. ಅವಳ ಕೈಯಲ್ಲಿ ಪುಟ್ಟ ಕೂಸು ಇತ್ತು. ಬಹಳ ಹೊತ್ತಿನಿಂದ ಆಕೆ ಅದನ್ನು ಹೊತ್ತುಕೊಂಡಿದ್ದಳು. ಕೈಗಳು ದಣಿದಿದ್ದವು. ಆದುದರಿಂದ ಆಕೆ ಆ ಕೂಸನ್ನು ಹುಲ್ಲುಹಾಸಿನ ಮೇಲೆ ಇರಿಸಿದಳು; ಬಳಿಯಲ್ಲೆ ನಿಂತುಕೊಂಡಳು.
ಆಗಲೇ ದೊಡ್ಡದೊಂಧು ರಣಹದ್ದು ಮಗುವಿನ ಮೇಲೆ ಎರಗಿತು. ಕ್ಷಣದೊಳಗೆ ಅದನ್ನು ಎತ್ತಿ ಒಯ್ಯುವುದರಲ್ಲಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಾರಣ ಬಳಿಯಲ್ಲಿದ್ದ ಹುಡುಗಿ ಫಕ್ಕನೆ ತಾನು ಹೊದ್ದುಕೊಂಡಿದ್ದ ಶಾಲನ್ನು ಹದ್ದಿನ ಮೇಲೆ ಹಾಕಿದಳು. ಮತ್ತು ಗಟ್ಟಿಯಾಗಿ ಅದನ್ನು ಹಿಡಿದುಕೊಂಡಳು. ಹದ್ದು ಕೊಸರಾಡಿತು. ಸಿಕ್ಕಿದ ಕಡೆ ಹುಡುಗಿಯನ್ನು ಕುಕ್ಕಿತು ಪರಚಿತು. ಆಕೆಯ ಮೈ ಕೈಗಳಲ್ಲಿ ಗಾಯವಾಗಿ ನೆತ್ತರು ಸುರಿಯತೊಡಗಿತು. ಆದರೂ ಅವಳ ಬಿಗಿ ಹಿಡಿತ ಸಡಿಲಲಿಲ್ಲ. ಹದ್ದಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹದ್ದನ್ನು ಹಿಡಿದಿಟ್ಟ ಹುಡುಗಿ ಸಹಾಯಕ್ಕಾಗಿ ಬೊಬ್ಬಿಟ್ಟಳು. ನೆರೆಕರೆಯ ಜನ ಓಡಿ ಬಂದರು. ಹುಡುಗಿಯ ಹಿಡಿತದಿಂದ ಹದ್ದನ್ನು ಬಿಡಿಸಿ, ಹಿಡಿದುಕೊಂಡರು. ಆಕೆಯ ಧೈರ್ಯ ಮತ್ತು ಸಮಯಪ್ರಜ್ಞೆಗಳನ್ನು ಬಾಯಿ ತುಂಬ ಹೊಗಳಿದರು. ಹದ್ದನ್ನು ಒಯ್ದು ಮೃಗಾಲಯಕ್ಕೆ ಒಪ್ಪಿಸಿದರು.
ವಿಷಯ ತಿಳಿದು ಮಗುವಿನ ಹೆತ್ತವರೂ ತೋಟದೆಡೆ ಓಡಿ ಬಂಧರು. ಮಗುವನ್ನೆತ್ತಿ ಮುದ್ದಾಡಿದರು. ಹುಡುಗಿಯ ಸಾಹಸಕ್ಕಾಗಿ ಅವಳನ್ನು ಕೊಂಡಾಡಿದರು. ಆಕೆಗೆ ಬಹುಮಾನ ನೀಡಿ ಕೃತಜ್ಞತೆ ಅರ್ಪಿಸಿದರು. ಅಪ್ಪುಗೆಯಲ್ಲಿದ್ದ ಮಗು ಮಾತ್ರ ಬೊಚ್ಚಬಾಯಿ ಬಿಟ್ಟು ನಗುತ್ತಲೇ ಇತ್ತು.
* * *

ಸತ್ಯವಂತನಾದ ಧರ್ಮಬೋಧಕ

ಒಂದು ಊರಲ್ಲಿ ಒಬ್ಬ ಧರ್ಮಬೋಧಕನಿದ್ದ. ಅವನು ತೀರ ಬಡವ. ಆದರೆ ತುಂಬ ಪ್ರಾಮಾಣಿಕ. ಅವನಿಗೆ ಒಬ್ಬಳು ಹೆಂಡತಿ ಮತ್ತು ಏಳು ಜನ ಮಕ್ಕಳು. ಸುಮರು ೪೦ ಪೌಂಡುಗಳು ವಾರ್ಷಿಕ ಆದಾಯ ಮಾತ್ರ ಅವನಿಗಿತ್ತು. ಬಹು ಕಷ್ಟದಲ್ಲೆ ಅವನ ಸಂಸಾರ ಸಾಗುತಿತ್ತು.
ಒಂದು ದಿನ ಧರ್ಮಬೋಧಕನು ಎಲ್ಲೋ ಹೋಗಿದ್ದ.  ಮನೆಗೆ ಹಿಂದಿರುಗುವ ದಾರಿಯಲ್ಲಿ ಅವನಿಗೊಂದು ಚೀಲ ಗೋಚರಿಸಿತು. ಅವನು ಅದನ್ನು ಎತ್ತಿಕೊಂಡ; ಸಾಕಷ್ಟು ಭಾರವಾಗಿತ್ತು ಅದು. ಒಳಗೆ ನೋಡಿದಾಗ ಅಮೂಲ್ಯ ಚಿನ್ನಾಭರಣಗಳು ಅದರಲ್ಲಿದ್ದವು. ಸುತ್ತಮುತ್ತ ಯಾರೂ ಕಾಣಿಸಲಿಲ್ಲ. ಹಾಗಾಗಿ ಅವನು ಅದನ್ನು ಮನೆಗೆ ತಂದ. ಹೆಂಡತಿಗೂ ಅದನ್ನು ತೋರಿಸಿದ. ಅದು ತನಗೆ ದೊರೆತ ಬಗೆಯನ್ನೂ ವಿವರಿಸಿ ಹೇಳಿದ.
ಗಂಡನಿಗೆ ಚಿನ್ನಾಭರಣಗಳ ಚೀಲ ದೊರೆತುದರಿಂದ ಹೆಂಡತಿಗೆ ಭಾರೀ ಸಂತೋಷವಾಯಿತು. ತಮ್ಮ ಕಷ್ಟ ನಿವಾರಣೆಗಾಗಿ ದೇವನೇ ಅದನ್ನು ದೊರಕಿಸಿಕೊಟ್ಟ ಎಂದು ಕೊಂಡಳು ಆಕೆ. ಗಂಡ ಅದನ್ನು ತಮ್ಮ ಕುಟುಂಬದ ಉಪಯೋಗಕ್ಕೆ ಬಳಸಿಕೊಳ್ಳುವಂತೆ ಒತ್ತಾಯಿಸಿದಳು. ಆದರೆ ಗಂಡ ಅದಕ್ಕೆ ಒಪ್ಪಲಿಲ್ಲ. “ಷರರ ಸೊತ್ತು ನಮಗೆ ಬೇಡ ಅದರ ಚಿಕ್ಕಾಸನ್ನೂ ನಾನು ಮುಟ್ಟುವುದಿಲ್ಲ. ಅದನ್ನು ಕಳೆದುಕೊಂಡವರನ್ನು ಹುಡುಕಬೇಕು. ಸತ್ಯಕ್ಕೆ ನಾನೆಂದಿಗೂ ದ್ರೋಹ ಬಗೆಯಲಾರೆ” ಎಂದು ಹೇಳಿದ.
ಕೆಲವು ಕಾಲ ಕಳೆಯಿತು. ಒಂದು ದಿನ ಒಬ್ಬ ಗೃಹಸ್ಥನು ಧರ್ಮಬೋಧಕನ ಮನೆಗೆ ಬಂದ. ತಾನು ಕಳೆದುಕೊಂಡ ಒಡವೆಗಳ ವಿವರಣೆ ನೀಡಿದ. ತಕ್ಷಣ ಧರ್ಮಬೋಧಕ ತನಗೆ ಸಿಕ್ಕಿದ ಚಿನ್ನಾಭರಣಗಳ ಚೀಲವನ್ನು ಅವನಿಗೆ ಒಪ್ಪಿಸಿದ “ತುಂಬ ಉಪಕಾರ ಮಾಡಿದಿರಿ” ಎನ್ನುತ್ತ ಬಂದವನು ಹೊರಟು ಹೋದ.
ಧರ್ಮಬೋಧಕನ ಹೆಂಡತಿಗೆ ಭಾರೀ ಕೋಪ ಬಂತು. ಚಿನ್ನಾಭರಣಗಳನ್ನು ಮರಳಿ ಪಡೆದ ಆ ಧನಿಕ ಅದರ ಸ್ವಲ್ಪ ಭಾಗವನ್ನಾದರೂ ತಮಗೆ ಕೊಡಬೇಕಿತ್ತು ಎಂದುಕೊಂಡಳು ಆಕೆ. ತನ್ನ ಗಂಡನ ಮಿತಿಮೀರಿದ ಸತ್ಯ ಸಂಧತೆಗಾಗಿ ಅವನನ್ನೂ ದೂರಿದಳು. ಆದರೆ ಗಂಡನು ಕೋಪಗೊಳ್ಳಲಿಲ್ಲ. “ಸತ್ಯ ಸಂಧತೆ ಯೇ ಸರ್ವ ಶ್ರೇಷ್ಠ ನೀತಿ. ಅದಕ್ಕೆ ತಪ್ಪಿ ನಡೆಯುವುದು ತರವಲ್ಲ. ಅದು ನನ್ನಿಂದಾಗದು. ಜನಕ್ಕೆ ನೀತಿ ಬೋಧಿಸುವವರೇ ಅನೀತಿಯ ಹಾದಿ ಹಿಡಿದರೆ, ಬೇಲಿಯೇ ಹೊಲ ಮೇದಂತೆ ಆಗುವುದಿಲ್ಲವೆ?” ಎಂದುಬಿಟ್ಟ.
ಇನ್ನೂ ಕೆಲವು ದಿನಗಳು ಸಂದುವು. ಅಷ್ಟರಲ್ಲಿ ಆ ಧನಿಕನು ಧರ್ಮಬೋಧಕನ ಮನೆಗೆ ಮತ್ತೆ ಬಂದ. ಧರ್ಮಬೋಧಕನು ತನ್ನ ಮನೆಗೊಮ್ಮೆ ಬರಲೇಬೇಕೆಂದು ಒತ್ತಾಯಿಸಿದ. ಧರ್ಮಬೋಧಕ ಒಪ್ಪಿಕೊಂಡ. ಹೇಳಿದ ಆ ಶ್ರೀಮಂತನ ಮನೆಗೆ ಹೋದ. ಭರ್ಜರಿಯಾಗಿ ಊಟೋಪಚಾರಗಳು ನಡೆದವು. ಧರ್ಮಬೋಧಕ ತನ್ನ ಮನೆಗೆ ಹೊರಟು ನಿಂತ ಆಗ ಆ ಶ್ರೀಮಂತನಿಂದ ೫೦ ಪೌಂಡುಗಳ ಒಂದು ಚೆಕ್‌ ಮತ್ತು ವಾರ್ಷಿಕವಾಗಿ ೩೦೦ ಪೌಂಡು ಆದಾಯ ತರಬಲ್ಲ ಚಿನ್ನಾಭರಣಗಳ ಕಾಣಿಕೆ ಆತನಿಗೆ ದೊರೆಯಿತು. ಉದಾರಿಯಾದ ಆ ಧನಿಕನಿಗೆ ತುಂಬುಹೃದಯದ ಕೃತಜ್ಞತೆ ಅರ್ಪಿಸಿ, ಧರ್ಮಬೋಧಕ ಹೊರಟು ಬಂದ. ಅಂದಿಗೆ ಅವನ ಬಡತನವೂ ನೀಗಿತು, ಕಷ್ಟ ಕಾರ್ಪಣ್ಯಗಳೂ ತೊಲಗಿ ಹೋದವು.
ಧರ್ಮಬೋಧಕನ ಸತ್ಯಸಂಧತೆ ಅವನನ್ನು ಕಾಪಾಡಿತು.
* * * * *

ಮಹಾಸಾಹಸಿ ಮ್ಯಾಕ್ಸ್ವೆಲ್

ಜೇಮ್ಸ್‌ ಮ್ಯಾಕ್ಸ್‌ವೆಲ್‌ ಮಹಾಸಾಹಸಿ. ವೀರಯೋಧರ ಮನೆತನದಲ್ಲಿ ಹುಟ್ಟಿದ್ದ. ಉಗಿಹಡಗ ಒಂದರಲ್ಲಿ ಚಾಲಕನಾಗಿ ಆತ ದುಡಿಯುತ್ತಿದ್ದ. ಟರ್ನರ್ ಎಂಬ ದಕ್ಷ ಅಧಿಕಾರಿ ಹಡಗದ ನಾಯಕನಾಗಿದ್ದ.
ಒಂದು ದಿನ ಹಡಗವು ಇಂಗ್ಲೆಂಡಿನಿಂದ ಐರ್ಲೇಂಡಿನ ಪಶ್ಚಿಮ ಕರಾವಳಿಯ ಕಡೆಗೆ ಸಾಗುತ್ತಿತ್ತು. ಸುಮಾರು ಎಂಭತ್ತರಷ್ಟು ಗಂಡಸರೂ ಹೆಂಗಸರೂ ಹಡಗದಲ್ಲಿದ್ದರು.
ಹಡಗು ಸಾಕಷ್ಟು ದೂರ ಸಾಗಿತ್ತು. ಆಗ ಫಕ್ಕನೆ ಮ್ಯಾಕ್ಸ್‌ವೆಲನಿಗೆ ಹೊಗೆಯ ವಾಸನೆ ಬರತೊಡಗಿತು. ಹಡಗದ ಯಾವುದೋ ಭಾಗದಲ್ಲಿ ಬೆಂಕಿ ಹತ್ತಿಕೊಂಡಿದೆ ಎನಿಸಿತು ಅವನಿಗೆ. ತಕ್ಷಣ ಹಡಗದ ನಾಯಕನಿಗೆ ವಿಷಯ ತಿಳಿಸಿದ. ತನಗೂ ಹೊಗೆಯ ವಾಸನೆ ಬರುತ್ತಿದೆ ಎಂದು ಹೇಳಿದ ನಾಯಕ. ಇತರರೂ ಅದಕ್ಕೆ ದನಿಗೂಡಿಸಿದರು. ಆದರೆ ಅಷ್ಟರಲ್ಲಿ ಹೊಗೆಯ ವಾಸನೆ ನಿಂತುಬಿಟ್ಟಿತು. ಸ್ವಲ್ಪ ಹೊತ್ತು ಹಾಗೇ ಕಳೆಯಿತು. ಕೆಲವೇ ಕ್ಷಣಗಳಲ್ಲಿ ಮತ್ತೊಮ್ಮೆ ಕಟ್ಟಿಗೆ ಸುಟ್ಟ ವಾಸನೆ! ತುಸು ಹೊತ್ತು ಅದು ಮುಂದುವರಿಯಿತು. ಇದ್ದಕ್ಕಿದ್ದಂತೆ ಅದು ಮತ್ತೆ ನಿಂತಿತು. ಎಲ್ಲೂ ಏನೂ ಆಗಿಲ್ಲ ಎನ್ನುವ ಭಾವನೆ ಅವರಲ್ಲಿ ಮೂಡಿತು. ನಿಶ್ಚಿಂತೆಯಿಂದ ಎಲ್ಲರೂ ನಿದ್ದೆ ಹೋದರು.
ಮಧ್ಯರಾತ್ರಿಯ ಸಮಯ ಮ್ಯಾಕ್ಸ್‌ವೆಲನಿಗೆ ಫಕ್ಕನೆ ಎಚ್ಚರಾಯಿತು. ಈಗ ಅವನಿಗೆ ಹೊಗೆಯ ವಾಸನೆ ಜೋರಾಗಿ ಬರತೊಡಗಿತು. ಹಡಗಿಗೆ ಬೆಂಕಿ ಬಿದ್ದಿದೆ ಎನ್ನುವುದು ಅವನಿಗೆ ಖಚಿತವಾಯಿತು. ಹಡಗದ ತಳ ಭಾಗದಲ್ಲಿ ಉರಿಯ ಕೆನ್ನಾಲಗೆ ಕಾಣಿಸಿಕೊಂಡಿತು.
ಮ್ಯಾಕ್ಸ್‌ವೆಲ್‌ ತಕ್ಷಣ ಹಡಗದ ನಾಯಕನನ್ನು ಎಬ್ಬಿಸಿದ. ಅವನಿಗೆ ವಿಷಯ ತಿಳಿಸಿ, ತನಗೇನು ಅಪ್ಪಣೆ ಎಂದು ಕಾತರದಿಂದ ವಿಚಾರಿಸಿದ.
“ಹಡಗು ಸಮುದ್ರ ಮಧ್ಯದಲ್ಲಿದೆ. ತೀರಪ್ರದೇಶ ದೂರದಲ್ಲಿದೆ. ಯಾವ ಸಂದರ್ಭದಲ್ಲೂ ಹಡಗನ್ನು ನಿಲ್ಲಿಸುವಂತಿಲ್ಲ. ಸಾಧ್ಯವಿದ್ದಷ್ಟು ಹಡಗನ್ನು ಮುನ್ನಡೆಸು” ಎಂದು ಆತ ಅಪ್ಪಣೆ ನೀಡಿದ.
ಮ್ಯಾಕ್ಸ್‌ವೆಲನಿಗೆ ಪರಿಸ್ಥಿತಿಯ ಅರಿವಾಯಿತು. ಯಾವ ಸಂದರ್ಭದಲ್ಲೂ ಸಾವು ಎದುರಾಗಬಹುದು. ಸಾಯುವುದು ತಾನೊಬ್ಬನೇ ಅಲ್ಲ. ಹಡಗದಲ್ಲಿದ್ದ ಎಂಬತ್ತು ಮಂದಿಯೂ ಸಾಯುತ್ತಾರೆ. ಅವರೆಲ್ಲರ ಪ್ರಾಣ ಉಳಿಸುವ ಹೊಣೆ ತನ್ನ ಮೇಲಿದೆ. ಹೀಗೆ ಯೋಚಿಸಿದ ಆತ ಬಾಗಿಲಿನತ್ತ ನೋಡಿದ. ಮತ್ತೆ ಕೈಮುಗಿದು ತಲೆಬಾಗಿ “ಓ ದೇವರೇ,ನನ್ನ ಕರ್ತವ್ಯ ನೆರವೇರಿಸಲು ನನಗೆ ಶಕ್ತಿ ಕೊಡು. ನನ್ನ ಅನಂತರ ನನ್ನ ಹೆತ್ತವರನ್ನೂ ಕುಟುಂಬವನ್ನೂ ರಕ್ಷಿಸು” ಎಂದು ದೇವರಿಗೆ ಮೊರೆಯಿಟ್ಟ.
ಹಡಗಿಗೆ ಹತ್ತಿದ ಬೆಂಕಿ ನಿಮಿಷ ನಿಮಿಷಕ್ಕೆ ದೊಡ್ಡದಾಗುತ್ತಿತ್ತು. ಒಂದರ ಅನಂತರ ಒಂದಾಗಿ ವಿವಿಧ ಭಾಗಗಳಿಗೆ ಅದು ಹರಡುತ್ತಿತ್ತು. ಮ್ಯಾಕ್ಸ್ವೆಲ್ ಅತ್ಯಂತ ವೇಗವಾಗಿ ಹಡಗು ನಡೆಸುತ್ತಿದ್ದ. ಆ ಹೊತ್ತಿಗಾಗಲೆ ಅಲ್ಲಿದ್ದ ಜನರೆಲ್ಲ ಎಚ್ಚರಗೊಂಡಿದ್ದರು. ತಮಗೊದಗಿರುವ ಅಪಾಯವನ್ನು ಅವರು ಮನಗಂಡಿದ್ದರು. ನಾಯಕನ ಸೂಚನೆಯಂತೆ ಅವರೀಗ ಹಡಗದ ಅತ್ಯಂತ ಸುರಕ್ಷಿತ ಭಾಗಕ್ಕೆ ಧಾವಿಸುತ್ತಿದ್ದರು. ಹಾಗೆ ಧಾವಿಸುವಾಗಲೂ ಕೆಲೊವರು ಕೂಗಾಡುತ್ತಿದ್ದರು, ಕೆಲವರು ದೇವರಿಗೆ ಮೊರೆಯಿಡುತ್ತಿದ್ದರು. ಮ್ಯಾಕ್ಸ್ ವೆಲ್‌ ಮಾತ್ರ ಚಾಲಕನ ಸ್ಥಾನದಲ್ಲಿ ಕುಳಿತೇ ಇದ್ದ. ಹಡಗುಒಂದೇ ಸವನೆ ಮುಂದೆ ಚಲಿಸುತಿತ್ತು. ಆದಷ್ಟು ಬೇಗನೆ ಅದನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸುವುದೇ ಅವನ ಉದ್ದೇಶವಾಗಿತ್ತು. ಆದರೆ ಅಷ್ಟರಲ್ಲೇ ಉರಿಯ ಜ್ವಾಲೆಗಳು ಮೇಲೆ ಮೇಲೆ ಏರತೊಡಗಿದವು. ಅವನು ಕಾಲಿಡುವ ಜಾಗವೂ ಬಿಸಿಯೇರತೊಡಗಿತು. ಸುತ್ತ ಮುತ್ತಲೂ ಉರಿಯ ಬೇಗೆ ಹರಡಿತು. ನಿಮಿಷದಲ್ಲಿ ಅವನಿದ್ದ ಚಿಕ್ಕ ಕೋಣೆಗೂ ಬೆಂಕಿ ಹತ್ತಿಕೊಂಡಿತು. ಆದರೂ ಮ್ಯಾಕ್ಸ್ವೆಲ್ ಅತ್ತಿತ್ತ ನೋಡಲಿಲ್ಲ. ಕುಳಿತ ಜಾಗದಿಂದ ಒಂದಿಂಚು ಸಹ ಕದಲಲಿಲ್ಲ. ಅತ್ಯಂತ ವೇಗವಾಗಿ ಹಡಗನ್ನು ಮುನ್ನಡೆಸುತ್ತಲೇ ಇದ್ದ.
ಅಷ್ಟರಲ್ಲಿ ಹಡಗವು ತೀರಪ್ರದೇಶದ ಹತ್ತಿರಕ್ಕೆ ಬಂದಿತ್ತು. ಅಲ್ಲಿನ ಜನ ಬೆಂಕಿಹತ್ತಿ ಉರಿಯುತ್ತಿದ್ದ ಹಡಗನ್ನು ಕಂಡರು. ಒಡನೆ ಅವರು ದೊಡ್ಡ ದೊಡ್ಡ  ದೊಂದಿಗಳನ್ನು ಸಿದ್ಧಗೊಳಿಸಿದರು. ಕಡಲ ಕರೆಯ ಬಂಡೆಕಲ್ಲನ್ನು ಏರಿ, ಉರಿವ ದೊಂದಿಗಳನ್ನು ಎತ್ತಿ ಹಿಡಿದರು. ಹಡಗದಲ್ಲಿದ್ದವರಿಗೆ ತೀರಪ್ರದೇಶ ಹತ್ತಿರದಲ್ಲಿದೆ ಎನ್ನುವುದು ಈಗ ಖಚಿತವಾಯಿತು. ಬೆಳಕಿ ತೋರಿ ಬಂದ ಕಡೆ ಹಡಗು ಧಾವಿಸಹತ್ತಿತು.
ಮ್ಯಾಕ್ಸ್ವೆಲನ ಸುತ್ತಮುತ್ತ ಬೆಂಕಿ ಹಬ್ಬುತಿತ್ತು. ಹೊಗೆ ಆವರಿಸುತಿತ್ತು. ಅವನ ಪಾದಗಳ ಅಡಿಭಾಗದ ಚರ್ಮ ಸುಟ್ಟುಹೋಯಿತು. ಉರಿಯ ಬೇಗೆ, ಸುಟ್ಟ ನೋವು ಇವನ್ನು ಸಹಿಸುವುದೇ ಕಷ್ಟವೆನಿಸಿತು. ಆದರೂ ಅವನು ಕೂತಲ್ಲಿಂದ ಮಿಸುಕಾಡಲಿಲ್ಲ. ಕರ್ತವ್ಯವನ್ನು ಮರೆಯಲಿಲ್ಲ. ವೇಗವಾಗಿ ಹಡಗನ್ನು ಓಡಿಸುತ್ತಲೇ ಇದ್ದ. ಈಗ ಬೆಂಕಿ ಹಡಗದ ಮೇಲುಭಾಗವನ್ನೂ ಆವರಸಿತೊಡಗಿತು; ಇಂಜಿನಿನ ಕೊಠಡಿಗೂ ನುಗ್ಗಿತು. ಇಂಜಿನಿಗೆ ಧಕ್ಕೆ ಉಂಟಾಯಿತು. ಮರುಕ್ಷಣದಲ್ಲಿ ಹಡಗವು ಗಕ್ಕನೆ ನಿಂತುಬಿಟ್ಟಿತು. ಆದರೆ ಅಷ್ಟರಲ್ಲಿ ಅದು ಕಡಲ ಕರೆಯ ಬಂಡೆಕಲ್ಲಿಗೆ ತಾಗಿ ನಿಂತಿತ್ತು.
ಹಡಗು ನಿಂತುದೇ ತಡ, ಒಳಗಿದ್ದ ಜನ ಬಡಬಡನೆ ಕೆಳಗಿಳಿದರು. ಎಲ್ಲರೂ ಇಳಿದರೆಂಬುದು ಖಚಿತವಾದ ಬಳಿಕ ಮ್ಯಾಕ್ಸ್ವೆಲ್ ಇಳಿದು ಬಂದ. ಆಗಲೆ ಒಬ್ಬನು ಹಡಗದಲ್ಲಿ ತನ್ನ ಹಣದ ಪೆಟ್ಟಿಗೆ ಉಳಿದುಹೋಯಿತೆಂದು ಅಳತೊಡಗಿದ. ಇನ್ನೊಬ್ಬನು ತನ್ನ ಅಮೂಲ್ಯ ವಸ್ತುಗಳ ಗಂಟು ಅಲ್ಲಿದೆ ಎಂದು ಗೋಳಾಡಿದ. ತಕ್ಷಣ ಮ್ಯಾಕ್ಸ್ವೆಲ್‌ ಮತ್ತೊಮ್ಮೆ ಹಡಗದ ಮೇಲೇರಿದ. ಪ್ರಯಾಣಿಕರ ಪೆಟ್ಟಿಗೆಗಳನ್ನೆಲ್ಲ ಬೇಗಬೇಗನೆ ಕೆಳಗೆಸೆದ. ಮತ್ತೆ ಬೆಂಕಿಯ ಮಧ್ಯದಿಂದಲೆ ಓಡಿ ಬಂದು ಕೆಳಕ್ಕೆ ಜಿಗಿದ.
ಮ್ಯಾಕ್ಸ್ವೆಲ್‌ ಎಂಬತ್ತು ಜನರ ಜೀವ ಉಳಿಸಿದ್ದ. ಆ ಯತ್ನದಲ್ಲಿ ಅವನು ಜೀವ ಕಳೆದುಕೊಳ್ಳಲಿಲ್ಲ ನಿಜ. ಆದರೆ ಅವನ ಪಾದಗಳು ಸಂಪೂರ್ಣ ಸುಟ್ಟುಹೋಗಿದ್ದವು. ಕಾಲುಗಳು ಶಕ್ತಿಗುಂದಿದ್ದವು. ಕೆಲವು ಅಂಗಾಂಗಗಳು ನಿರುಪಯುಕ್ತವಾಗಿದ್ದವು. ಸುಂದರವಾದ ಅವನ ದೇಹ ವಿರೂಪಗೊಂಡಿತ್ತು. ದುಡಿವ ಶಕ್ತಿಯನ್ನೆ ಅವನು ಕಳೆದುಕೊಂಡಿದ್ದ.
ಆದರೆ ಅವನ ದಕ್ಷತೆ ಮತ್ತು ಕರ್ತವ್ಯ ಪ್ರಜ್ಞೆಗಳನ್ನು ಜಗತ್ತು ಕೊಂಡಾಡಿತು. ಹಡಗದ ಮಾಲಿಕರು ಅವನಿಗೆ ನಿವೃತ್ತಿ ವೇತನ ಕರುಣಿಸಿದರು. ಅವನ ಸಹಾಯಾರ್ಥ ದಾನಗಳೂ ದೇಣಿಗೆಗಳೂ ಹರಿದು ಬಂದವು. ಏನಾದರೇನು? ಅವನ ತ್ಯಾಗಕ್ಕೆ, ಅವನ ಸಾಹಸಕ್ಕೆ, ಅವನ ನಿಸ್ವಾರ್ಥ ಸೇವೆಗೆ ಬೆಲೆಕಟ್ಟುವುದು ಸಾಧ್ಯವಾದೀತೆ?
* * *

ಕೊಂದವನಿಗು ಕರುಣೆ ತೋರಿದವ

ನೂರಾರು ವರುಷಗಳ ಹಿಂದಿನ ಮಾತು. ಆಗ ಸ್ಪೇನ್‌ ದೇಶದ ಸ್ವಲ್ಪ ಭಾಗವನ್ನು ಮೂರ್ ಜನರು (ಮೊರೊಕ್ಕೊ ದೇಶದ ನಿವಾಸಿಗಳು) ಆಕ್ರಮಿಸಿದ್ದರು. ಅದೊಂದು ದಿನ ಒಬ್ಬ ಸ್ಪೆನಿಯಾರ್ಡನು ಎಳೆಯ ಮೂರ್ ಒಬ್ಬನನ್ನು ಕೊಂದುಬಿಟ್ಟ. ಮೂರರು ಅವನನ್ನು ಅಟ್ಟಿಸಿಕೊಂಡು ಬಂದರು. ಪ್ರಾಣಭಯದಿಂದ ಅವನು ಓಡತೊಡಗಿದ. ಎದುರುಗಡೆ ಒಂದು ತೋಟವಿತ್ತು. ಅವನು ಅದರ ದರೆ ಏರಿ, ಒಳಕ್ಕೆ ಜಿಗಿದ. ಅದು ಒಬ್ಬ ಮೂರನಿಗೆ ಸೇರಿದ ತೋಟವಾಗಿತ್ತು. ತೋಟದ ಯಜಮಾನ ಅಲ್ಲಿ ನಿಂತಿದ್ದ. ಓಡಿ ಬಂದವನು ಯಜಮಾನನ ಕಾಲಿಗೆ ಅಡ್ಡ ಬಿದ್ದ. ವೈರಿಗಳು ತನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ. ತನಗೆ ಅಡಗಿಕೊಳ್ಳಲು ಅಲ್ಲಿ ಅವಕಾಶ ಕೊಡಬೇಕು. ತನ್ನನ್ನು ಕಾಪಾಡಬೇಕು ಎಂದು ಅಂಗಲಾಚಿ ಬೇಡಿಕೊಂಡ.
ತೋಟದ ಮಾಲಿಕನು ತುಂಬ ಕರುಣಾಳು ತನ್ನೆಡೆಗೆ ಬಂದು ರಕ್ಷಣೆ ಬೇಡುತ್ತಿರುವ ಅಪರಿಚಿತನನ್ನು ಆತ ಕಣ್ಣರಳಿ ನೋಡಿದ. ಅವನಿಗೆ ಧೈರ್ಯ ಹೇಳಿದ ಅವನ ಜೀವ ಕಾಯುವುದಾಗಿ ಭರವಸೆ ನೀಡಿದ ತನ್ನ ಮಾತಿನಲ್ಲಿ ಭರವಸೆ ಹುಟ್ಟುವಂತೆ ಮಾಡಲು ಅವನಿಗೊಂದು ಹಣ್ಣನ್ನಿತ್ತ; ಅವನ ಜೊತೆ ಕೂತು ತಾನೂ ಹಣ್ಣು ತಿಂದ. (ಜೊತೆಯಾಗಿ ಕೂತು ಉಂಡವರನ್ನು ಅಥವಾ ತಿಂದವರನ್ನು ರಕ್ಷಿಸಬೇಕೆಂಬುದು ಮೂರ್ ಜನರ ಒಂದು ವಿಶಿಷ್ಟ ಪದ್ಧತಿ) ಅನಂತರ ತನ್ನ ಮರೆಹೊಕ್ಕುವನನ್ನು ತೋಟದ ಮನೆಯ ಪುಟ್ಟ ಕೋಣೆಯೊಳಗೆ ಕೂಡಿಸಿ, ಬೀಗ ಹಾಕಿದ. ಕತ್ತಲಾದೊಡನೆ ಸುರಕ್ಷಿತ ಸ್ಥಳ ಸೇರಲು ಆತನಿಗೆ ಸಹಾಯ ಮಾಡುವುದಾಗಿ ಮಾತು ಕೊಟ್ಟು, ತನ್ನ ವಾಸದ ಮನೆಗೆ ಬಂದುಬಿಟ್ಟ.
ಆ ಸಮಯಕ್ಕೆ ಸರಿಯಾಗಿ ಜನರ ದೊಡ್ಡ ಗುಂಪೊಂದು ಅವನ ಮನೆಯತ್ತ ಬರತೊಡಗಿತು. ಬಹಳ ಜನ ಅದರಲ್ಲಿದ್ದರು. ಎಲ್ಲರೂ ತುಂಬ ದುಃಖಿತರಾದಂತೆ ಕಾಣುತ್ತಿದ್ದರು. ಕೆಲವರು ಕಣ್ಣೀರು ಸುರಿಸುತ್ತಿದ್ದರೆ ಇನ್ನು ಕೆಲವರು ಅಳುತ್ತಿದ್ದರು. ಯುವಕರು ಕೆಲವರು ಸಿಟ್ಟಿನಿಂದ ಹಲ್ಲು ಕಡಿಯುತ್ತ ಪ್ರತೀಕಾರದ ಮಾತಾಡುತ್ತಿದ್ದರು. ಗುಂಪಿನ ಮಧ್ಯದಲ್ಲಿದ್ದ ಕೆಲವರು ಬಿಳಿ ಬಟ್ಟೆಯಲ್ಲಿ ಸುತ್ತಿದ ಏನನ್ನೊ ಹೊತ್ತು ತರುತ್ತಿದ್ದರು.
ಗುಂಪು ಹತ್ತಿರ ಬಂತು. ತೋಟದ ಯಜಮಾನನ ಮನೆಯಂಗಳವನ್ನು ಪ್ರವೇಶಿಸಿತು. ಗುಂಪಿನ ಮಧ್ಯದಲ್ಲಿದ್ದ ಮಂದಿಗಳು ಮುಂದೆ ಬಂದರು. ತಾವು ಹೊತ್ತು ತಂದಿದ್ದ ಹೊರೆಯನ್ನು ಮೆಲ್ಲನೆ ಇಳಸಿದರು. ಬಿಳಿ ಬಟ್ಟೆಯ  ಮುಸುಕಿನೊಳಗೆ ಬಾಲಕನೊಬ್ಬನ ಹಣವಿತ್ತು. ಕ್ಷಣದಲ್ಲೆ ಮನೆಯಾತನಿಗೆ ವಿಷಯ ತಿಳಿಯಿತು. ಅವನ ಪ್ರೀತಿಯ ಮಗನ ಕೊಲೆಯಾಗಿತ್ತು. ತನ್ನ ಆಸರೆ ಪಡೆದ ಪರಕೀಯನು ಬೇರಾರೂ ಅಲ್ಲ ತನ್ನ ಮಗನನ್ನೆ ಕೊಂದವನ್ನು ಎಂಬುದು ಅವನಿಗೆ ತಿಳಿದುಹೋಗಿತ್ತು. ಆದರೆ?
ಆತನು ತನ್ನಲ್ಲಿ ದಯಾಭಿಕ್ಷೆ ಬೇಡಿದ್ದಾನೆ. ಆತನನ್ನು ರಕ್ಷಿಸುವುದಾಗಿ ತಾನು ಭಾಷೆ ನೀಡಿದ್ದೇನೆ. ಮಗನ ಸಾವಿನ ಸೇಡು ತೀರಿಸಲು ಕೊಲೆಗಾರನನ್ನು ತಾನು ಕೊಂದು ಬಿಡಬಹುದು. ಅದರಿಂಸ ಸತ್ತ ಮಗ ಮತ್ತೆ ಬದುಕಿ ಬರಲುಂಟೆ? ಹಾಗಾದರೆ ತಾನೇನು ಸಾಧಿಸಿದಂತಾಯಿತು? ಛೆ, ಇಂಥ ವಿಚಾರ ಸಲ್ಲದು. ತಾನು ಕೊಟ್ಟ ಮಾತಿಗೆ ತಪ್ಪಬಾರದು; ಕೆಟ್ಟ ಯೋಚನೆ ಮಾಡಬಾರದು ಎಂದು ಆತ ಮನಸ್ಸಿನಲ್ಲೆ ನಿರ್ಧರಿಸಿದ. ತನ್ನ ಆಸರೆಯಲ್ಲಿರುವವನ ಸುಳಿವು ಯಾರಿಗೂ ಸಿಗದಂತೆ ಎಚ್ಚರ ವಹಿಸಿದ. ಮಗನ ಸಾವಿನ ದುಃಖ ನುಂಗಿಕೊಂಡು, ಶವ ಸಂಸ್ಕಾರದ ಕೆಲಸಗಳನ್ನು ನೆರವೇರಿದ. ಅವನ ದುಃಖದಲ್ಲಿ, ಕೆಲಸಗಳಲ್ಲಿ ಸಹಭಾಗಿಗಳಾದ ಜನಗಳೆಲ್ಲ ಒಬ್ಬೊಬ್ಬರಾಗಿ ಹೊರಟು ಹೋದರು.
ಸೂರ್ಯಾಸ್ತವಾಯಿತು. ಕತ್ತಲು ಕವಿಯಿತು ಅದನ್ನೆ ಕಾಯುತ್ತಿದ್ದ ಯಜಮಾನ ದಿಗ್ಗನೆ ಎದ್ದ. ತನ್ನ ಕುದುರೆಗಳಲ್ಲಿ ಅತ್ಯುತ್ತಮವಾದುದನ್ನು ಆರಿಸಿ ಹಿಡಿದುಕೊಂಡ. ಅದರೊಡನೆ ತನ್ನ ತೋಟದ ಮನೆಗೆ ನಡೆದ.
ಕೋಣೆಯಲ್ಲಿ ಸ್ಪೇನಿಯಾರ್ಡನು ಉಸಿರು ಬಿಗಿ ಹಿಡಿದು ಕುಳಿತುಕೊಂಡಿದ್ದ. ಯಜಮಾನ ಅವನನ್ನು ಹೊರಗೆ ಕರೆ ತಂದ ಅವನಿಗೆ ಕುದುರೆಯನ್ನು ಒಪ್ಪಿಸುತ್ತ ಹೀಗೆ ಹೇಳಿದ -
“ನನ್ನ ಪ್ರೀತಿಯ ಮಗನನ್ನು ಕೊಂದವನು ನೀನು. ನಿನ್ನ ತಪ್ಪಿಗೆ ತಕ್ಕ ಶಿಕ್ಷೆ ನಿನಗೆ ಸಿಗಬೇಕಿತ್ತು. ಆದರೆ ನೀನು ನನ್ನಿಂದ ಅಭಯದಾನ ಪಡೆದಿದ್ದಿಯಾ. ನನ್ನ ‘ಜೊತೆ ಕೂತು’ ಹಣ್ಣು ತಿಂದಿದ್ದಿಯಾ. ಕೊಟ್ಟ ಮಾತನ್ನು ನಾನು ಉಳಿಸಿಕೊಳ್ಳಬೇಕು. ಆದ ಕಾರಣ ನಿನ್ನನ್ನು ಕ್ಷಮಿಸಿದ್ದೇನೆ. ನಿನಗೆ ಅತ್ಯುತ್ತಮವಾದ ಈ ನನ್ನ ಕುದುರೆಯನ್ನು ಕೊಡುತ್ತಿದ್ದೇನೆ. ತಕ್ಷಣ ಇದನ್ನೇರಿ ಕತ್ತಲೆಯಲ್ಲಿ ಕಣ್ಮರೆಯಾಗಿ ಬಿಡು. ಗಾಳಿಯ ವೇಗದಲ್ಲಿ ಓಡಬಲ್ಲ ಕುದುರೆಯಿದು. ಇದರ ಸಹಾಯದಿಂದ ಬೆಳಗಾಗುವ ಮೊದಲು ನೀನು ಸುರಕ್ಷಿತ ಸ್ಥಳ ಸೇರಬಲ್ಲೆ. ನನ್ನ ಮಗನ ಜೀವ ನೀನು ತೆಗೆದ. ಆದರೆ ನಾನು ನಿನ್ನ ಜೀವ ತೆಗೆಯುವುದಿಲ್ಲ; ನಿನಗೆ ಕೊಟ್ಟ ಮಾತನ್ನು ಮುರಿಯುವುದಿಲ್ಲ. ಯಾರಿಗೂ ಕೇಡು ಬಗೆಯಲಾರೆ ಎಂಬುದು ನನ್ನ ಪ್ರತಿಜ್ಞೆಯಾಗಿತ್ತು. ಆ ಪ್ರತಿಜ್ಞೆಗೆ ಭಂಗಬಾರದಂತೆ ದೇವರು ನೋಡಿಕೊಂಡಿದ್ದಾನೆ. ಅದಕ್ಕಾಗಿ ಅವನಿಗೆ ನನ್ನ ಅನಂತ ವಂದನೆಗಳು”
ಸ್ಪೇನಿಯಾರ್ಡನ ಕಣ್ಣುಗಳು ತುಂಬಿದ ಕೊಳಗಳಾಗಿದ್ದವು. ತೊಟ್ಟಿಕ್ಕುತಿದ್ದ ಕಣ್ಣೀರಿಂದ ಕೆನ್ನೆಗಳು ಒದ್ದೆಯಾಗಿದ್ದವು. ತಲೆ ತಗ್ಗಿಸಿಕೊಂಡೆ ನಿಂತಿದ್ದ ಅವನಿಂದ ‘ಕ್ಷಮಿಸು ತಂದೆ’ ಎಂಬ ನುಡಿಗಳೆರಡು ಹೊರಬಂದಿದ್ದವು. ಮರುಕ್ಷಣದಲ್ಲೆ ಕುದುರೆ ಏರಿದ್ದ ಆತ ಕವಿದ ಕತ್ತಲಲ್ಲಿ ಕಣ್ಮರೆಯಾಗಿದ್ದ.
* * *

ಸ್ವಾಭಿಮಾನಿ ಸರದಾರ

ಓರ್ಟನ್‌ ಉತ್ತರ ಸ್ಕಾಟ್‌ಲ್ಯಾಂಡಿನ ಒಂದು ಪ್ರದೇಶ. ಸರ್ ರಾಬರ್ಟ್‌ ಇನ್ಸ್ ಅಲ್ಲಿನ ಸರದಾರ. ಅವನು ತನ್ನ ಹತ್ತೊಂಭತ್ತನೆಯ ವಯಸ್ಸಿನಲ್ಲೆ ತಂದೆ ತಾಯಿಗಳನ್ನು ಕಳೆದುಕೊಂಡಿದ್ದ. ಹಾಗೆಯೇ ತನ್ನ ಸಂಪತ್ತನ್ನೂ ಕಳೆದುಕೊಂಡು ಬಡವನಾಗಿದ್ದ. ಆದರೆ ‘ಸರದಾರ’ ಬಿರುದು ಮಾತು ಇನ್ನೂ ಉಳಿದುಕೊಂಡಿತ್ತು. ಈ ಸ್ಥಿತಿ ಬೇರೆಯವರಿಗೆ ಬಂದಿದ್ದರೆ ಅವರು ಪರರ ಸಹಾಯ ಬಯಸುತ್ತಿದ್ದರು. ಆದರೆ ಆತ ಬಹಳ ಸ್ವಾಭಿಮಾನಿ. ಯಾರ ಮುಂದೂ ಕೈಯೊಡ್ಡಿ ಬೇಡುವುದು ಅವನಿಗೆ ಸರಿಬರಲಿಲ್ಲ. ತಾನು ಶ್ರಮಪಟ್ಟು ದುಡಿಯಬೇಕು. ತನ್ನ ಅನ್ನ ತಾನು ಗಳಿಸಬೇಕು. ಇದು ಅವನ ನಿರ್ಧಾರ. ಹಾಗೆಂದು ಅವನಿಗೆ ಯಾವ ಕೆಲಸವೂ ಬಾರದು. ಆದಕಾರಣ ಆತ ಸೈನ್ಯಕ್ಕೆ ಸೇರಿದ. ಸಾಮಾನ್ಯ ಸೈನಿಕನಾಗಿ ದುಡಿಯತೊಡಗಿದ.
ಒಂದು ದಿನ ಸೇನಾಕಚೇರಿ ಎದುರುಗಡೆ ಆತ ಕಾವಲು ನಿಂತಿದ್ದ. ಅಷ್ಟರಲ್ಲಿ ಒಬ್ಬ ಗೃಹಸ್ಥ ಅಲ್ಲಿಗೆ ಬಂದ. ಸರ್ ರಾಬರ್ಟ್‌ ಇನ್ಸ್‌ನನ್ನು ಆತ ಈ ಮೊದಲೊಮ್ಮೆ ಕಂಡಿದ್ದ. ಆದರೆ ಅವನು ಸೈನ್ಯಕ್ಕೆ ಸೇರಿದ ಸಂಗತಿ ಅವನಿಗೆ ತಿಳಿದಿರಲಿಲ್ಲ. ಮಾತುಕತೆ ನಡೆಸಿದಾಗ ತನ್ನ ಇದಿರು ಸಾಮಾನ್ಯ ಸೈನಿಕನಾಗಿ ನಿಂತವನು ಸರ್ ರಾಬರ್ಟ್ ಇನ್ಸ್‌ ಎನ್ನುವುದು ಆತನಿಗೆ ಖಚಿತವಾಯಿತು. ಜೊತೆಯಲ್ಲಿ ಆಶ್ಚರ್ಯವೂ ಆಯಿತು ಆದರೆ ಅವನು ಅದನ್ನು ತೋರಗೊಡಲಿಲ್ಲ. ನೇರಾಗಿ ಸೇನಾಪತಿಯ ಕೊಠಡಿಯನ್ನು ಪ್ರವೇಶಿಸಿದ. ಅಲ್ಲಿ ಮಾತಾಡುತ್ತಿದ್ದಾಗ ಸರ್ ರಾಬರ್ಟ್‌ ಇನ್ಸ್‌ ಅವರಂತಹ ಸರದಾರರನ್ನು ಕಾವಲುಗಾರನಾಗಿ ಪಡೆದ ಸೇನಾಧಿಪತಿ ಬಲುದೊಡ್ಡ ಭಾಗ್ಯಶಾಲಿಯೆಂದು ಸೇನಾ ಮುಖ್ಯಸ್ಥನನ್ನು ಅವನು ಕೊಂಡಾಡಿದ ತನ್ನ ಕಚೇರಿಯ ಕಾವಲುಗಾರನಾಗಿ ಇರುವಾತ ಸರ್ ರಾಬರ್ಟ್‌ ಇನ್ಸ್‌  ಎಂಬುದನ್ನು ಕೇಳಿ ಸೇನಾಪತಿಗೆ ಆಶ್ಚರ್ಯವಾಯಿತು ಒಡನೆ ಆತ ಇನ್ನೊಬ್ಬ ಸೈನಿಕನನ್ನು ಕರೆದು ಕಚೇರಿಯ ಮುಂದುಗಡೆ ಕಾವಲು ನಿಂತವನನ್ನು ಒಳಗೆ ಕಳಿಸಿಕೊಡುವಂತೆ ಆಜ್ಞಾಪಿಸಿದ.
ಕಾವಲುಗಾರ ಸೇನಾಪತಿಯ ಇದಿರು ಪ್ರತ್ಯಕ್ಷನಾದ. ಅವನನ್ನು ಅಡಿಯಿಂದ ಮುಡಿಯವರೆಗೆ ದಿಟ್ಟಿಸಿ ನೋಡಿದ ಸೇನಾಪತಿ ಅವನು ಸರ್ ರಾಬರ್ಟ್ ಇನಸ್‌ ನಿಜವೇ ಎಂದು ಪ್ರಶ್ನಿಸಿದ. “ಹೌದು” ಎಂಬ ಉತ್ತರ ದೊರೆಯಿತು ಆಗ ಸೇನಾಪತಿಯು, “ನೀನು ಸಾಮಾನ್ಯ ಸೈನಿಕನಾಗಿ ಏಕೆ ಸೇರಿಕೊಂಡೆ? ಎಂದು ಮತ್ತೆ ವಿಚಾರಿಸಿದ “ನಾನು ಪ್ರಾಯಕ್ಕೆ ಬರುವಾಗಲೇ ಸಂಪತ್ತೆಲ್ಲ ಕೈಬಿಟ್ಟು ಹೋಗಿತ್ತು ಬಿರುದು ಮಾತ್ರ ನನ್ನಲ್ಲಿ ಉಳಿದಿತ್ತು. ಯಾರಿಂದಲೇ ಆಗಲಿ ಸಹಾಯ ಪಡೆಯಲು ಮನ ಒಪ್ಪಲಿಲ್ಲ. ಹಾಗಾಗಿ ಶ್ರಮಪಟ್ಟು ದುಡಿಯಬೇಕು; ನನ್ನ ಅನ್ನ ನಾನೇ ಗಳಿಸಬೇಕು ಎಂಬ ತೀರ್ಮಾನಕ್ಕೆ ಬಂದೆ. ಉದ್ಯೋಗ ಯಾವುದೂ ನನಗೆ ತಿಳಿದಿರಲಿಲ್ಲ. ಆದುದರಿಂದ ಸೈನ್ಯಕ್ಕೆ ಸೇರಿ ದುಡಿಯತೊಡಗಿದೆ” ಎಂದು ಯುವಕ ಉತ್ತರ ಕೊಟ್ಟ.
ಸೇನಾಪತಿಗೆ ಬಹಳ ಸಂತೋಷವಾಯಿತು ಯುವಕನ ಸ್ವಾಭಿಮಾನವನ್ನು ಅವನು ತುಂಬ ಮೆಚ್ಚಿಕೊಂಡ. ಒಡನೆ ಆ ದಿನವೆ ತನ್ನ ಮನೆಗೆ ಊಟಕ್ಕೆ ಬರುವಂತೆ ಅವನನ್ನು ಕೇಳಿಕೊಂಡ. ಯುವಕ ಮನೆಗೆ ಬಂದಾಗ ತನ್ನ ಉಡುಗೆ ತೋಡುಗೆಗಳ ರಾಶಿ ತೋರಿಸಿ, ಅದರಿಂದ ಬೇಕಾದುದನ್ನು ಆರಿಸಿ ತೆಗೆಯುವಂತೆ ಅವನನ್ನು ಒತ್ತಾಯಿಸಿದ. ಆದರೆ ಯುವಕ ಮಾತ್ರ ಏನನ್ನೂ ತೆಗೆದುಕೊಳ್ಳಲಿಲ್ಲ. ತನ್ನಲ್ಲಿ ಸಾಕಷ್ಟು ಉಡಿಗೆ ತೊಡಿಗೆಗಳಿವೆ. ಹೆಚ್ಚಿನದೇನೂ ತನಗೆ ಅಗತ್ಯವಿಲ್ಲ ಎಂದು ವಿನಯದಿಂದ ವಿಜ್ಞಾಪಿಸಿಕೊಂಡ.
ಯುವಕನ ಒಳ್ಳೆಯತನ ಸೇನಾದಿಪತಿಯ ಮನವನ್ನು ಗೆದ್ದಿತು. ಪರಿಣಾಮವಾಗಿ ಯುವಕನಿಗೆ ಬಲುಬೇಗನೇ ಭಡ್ತಿ ದೊರೆಯಿತು. ಸೈನ್ಯದಲ್ಲಿ ದೊಡ್ಡ ಅಧಿಕಾರಿಯಾಗಿ ಆತ ನೇಮಿಸಲ್ಪಟ್ಟ. ಸ್ವಂತ ಪರಿಶ್ರಮದಿಂದ ತನ್ನ ಬಿರುದಿಗೆ ತಕ್ಕ ಸ್ಥಾನಮಾನಗಳನ್ನು ಗಳಿಸಿ ಪ್ರಸಿದ್ಧಿಗೊಂಡ.
* * *

ಧೀರ ಸೇವಕಿ

ಒಬ್ಬ ಇಂಗ್ಲಿಷ್‌ ಮಹನೀಯನಿದ್ದ. ಇಂಗ್ಲೆಂಡಿನ ಬೆಟ್ಟ ಪ್ರದೇಶದಲ್ಲಿ ಅವನ ಮನೆಯಿತ್ತು. ಅವನಿಗಿನ್ನೂ ಮದುವೆ ಆಗಿರಲಿಲ್ಲ. ಮನೆಯಲ್ಲಿ ಅವನ ಹೊರತು ಒಬ್ಬ ಸೇವಕ. ಒಬ್ಬಳು ಅಡುಗೆಯಾಳು, ಇನ್ನೊಬ್ಬಳು ಕೆಲಸದ ಹುಡುಗಿ ಇಷ್ಟು ಮಂದಿ ಇರುತ್ತಿದ್ದರು.
ಒಂದು ಬಾರಿ ಯಜಮಾನ ಕೆಲಸದ ಮೇಲೆ ಮನೆ ಬಿಟ್ಟು ಹೋಗಬೇಕಾಯಿತು. ಮನೆ ಬಿಡುವ ಮೊದಲು ಆತ ಕೆಲಸದವನನ್ನು ಬಳಿಗೆ ಕರೆದ. ಕೆಲವು ದಿನ ತಾನು ಮನೆಯಲ್ಲಿ ಇರುವುದಿಲ್ಲ. ಹಿಂದಿರುಗಿ ಬರುವ ತನಕ ಸೇವಕನು ರಜೆ ತೆಗೆಯಬಾರದು. ಮನೆ ಬಿಟ್ಟು ಹೋಗಬಾರದು. ಇಲ್ಲೇ ಇದ್ದು, ಮನೆಗೆಲಸ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ. ಸೇವಕ ಅದಕ್ಕೆ ಒಪ್ಪಿಗೆ ನೀಡಿದ. ಯಜಮಾನ ಹೊರಟು ಹೋದ.
ಯಜಮಾನ ಮನೆ ಬಿಟ್ಟುದೇ ತಡ, ಸೇವಕ ತನ್ನ ಮಾತನ್ನು ಮರೆತ. ಅಂದೇ ತಾನು ಸಹ ಮನೆ ಬಿಟ್ಟು ಹೊರಟು ಹೋದ. ರಾತ್ರೆಯಾದರೂ ಹಿಂದಿರುಗಿ ಬರಲಿಲ್ಲ. ಅಡುಗೆಯವಳು ಮತ್ತು ಕೆಲಸದ ಹುಡುಗಿ ಇಬ್ಬರೇ ಮನೆಯಲ್ಲಿ ಉಳಿದರು.
ಕತ್ತಲಾಯಿತು. ಕೆಲಸದವರಿಬ್ಬರೂ ಬೇಗನೆ ಉಂಡರು. ಮತ್ತೆ ಮಲಗಿ ನಿದ್ರೆಹೋದರು. ತುಸು ಹೊತ್ತು ಕಳೆಯಿತು. ಯಾರೋ ಬಂದು ಬಾಗಿಲು ಬಡಿದಂತಾಯಿತು. ಅಡುಗೆಯಾಳು ಫಕ್ಕನೆ ಎಚ್ಚರಗೊಂಡಳು. ಬಾಗಿಲ ಬಳಿ ನಡೆದು, “ಯಾರದು? ಏನು ಬೇಕು” ಎಂದು ಕೇಳಿದಳು. ಮತ್ತೆ ಕಿಟಕಿಯ ಮೂಲಕ ಹೊರಕ್ಕೆ ನೋಡಿದಳು.
ಅಪರಿಚಿತ ವ್ಯಕ್ತಿಯೊಬ್ಬ ಹೊರಗಡೆ ನಿಂತಿದ್ದ. ತಾನು ಮನೆಯೊಡೆಯನ ಮಿತ್ರನೆಂದೂ ಕತ್ತಲಲ್ಲಿ ದಾರಿ ತಪ್ಪಿದ ಕಾರಣ ಅಲ್ಲಿಗೆ ಬಂದೆನೆಂದೂ ಆತ ಹೇಳಿದ. ರಾತ್ರಿಯ ಮಟ್ಟಿಗೆ ಅಲ್ಲಿ ಉಳಿಯಲು ತನಗೆ ಅವಕಾಶ ಕೊಡಬೇಕೆಂದು ಬೇಡಿಕೊಂಡ. ಅಡುಗೆಯಾಳು ಅವನ ಮಾತನ್ನು ನಂಬಿದಳು. ಗಾಳಿ ಮಳೆಯ ಆ ರಾತ್ರೆ ದಾರಿ ತಪ್ಪುವುದು ಸಹಜ ಎಂದುಕೊಂಡಳು. ಮತ್ತೆ ದೀಪ ಹಚ್ಚಿದಳು. ಬಾಗಿಲು ತೆರೆದು ಹೊರಗೆ ನಿಂತವನನ್ನು ಒಳಗೆ ಬರಮಾಡಿಕೊಂಡಳು ಆಗಿಷ್ಟಿಕೆಯ ಬೆಂಕಿಯನ್ನು ದೊಡ್ಡದು ಮಾಡಿದಳು. ಅತಿಥಿಯನ್ನು ಅಲ್ಲಿಗೆ ಕರೆದೊಯ್ದು, ಮೈ ಬೆಚ್ಚಗೆ ಮಾಡಿಕೊಳ್ಳುವಂತೆ ಕೇಳಿಕೊಂಡಳು. ಬಳಿಕ ಅವನ ಊಟಕ್ಕೆ ಸಿದ್ಧತೆ ಮಾಡಿದಳು.
ಅತಿಥಿಯು ಉದ್ದವಾದ ತನ್ನ ಕೋಟನ್ನು ಕಳಚಿದ. ಗೋಡೆಯ ಗೂಟಕ್ಕೆ ಅದನ್ನು ತೂಗಹಾಕಿದ. ಊಟದ ಸಿದ್ಧತೆ ಆಗುವ ತನಕ ಆಗಿಷ್ಟಿಕೆಯ ಬಳಿ ಚಳಿ ಕಾಯಿಸಿದ ಕೆಲವೇ ನಿಮಿಷಗಳಲ್ಲಿ ಅಡುಗೆ ಸಿದ್ಧವಾಯಿತು. ಅಡುಗೆಯವಳು ಅತಿಥಿಯನ್ನು ಊಟಕ್ಕೆ ಕರೆದಳು ಗಡದ್ದಾಗಿಯೇ ಆತ ಊಟ ಮಾಡಿದ. ಅನಂತರ ಅಡುಗೆಯವಳು ತೋರಿದ ಪಕ್ಕದ ಕೋಣೆಗೆ ಹೊರಟು ಹೋದ ಕೂಡಲೇ ಅದರ ಬಾಗಿಲು ಹಾಕಿ, ಮಂಚದಲ್ಲಿ ಮಲಗಿಕೊಂಡ.
ಅಡುಗೆಯವಳು ಅತಿಥಿ ಉಂಡ ಮೇಜನ್ನು ಶುಚಿಗೊಳಿಸಿದಳು. ತಟ್ಟೆ ಬಟ್ಟಲುಗಳನ್ನು ಇಡಬೇಕಾದ ಸ್ಥಳದಲ್ಲಿ ಇರಿಸಿದಳು. ಅಷ್ಟರಲ್ಲಿ ಅತಿಥಿಯ ಒದ್ದೆಕೋಟು ಅವಳ ಗಮನ ಸೆಳೆಯಿತು. ಅಗಿಷ್ಟಿಕೆಯ ಬಳಿ ನೇತು ಹಾಕಿದರೆ ಅದು ಬೇಗನೆ ಒಣಗೀತು ಎಂದುಕೊಂಡಳು ಆಕೆ. ಹಾಗಾಗಿ ಮೆಲ್ಲ ಬಂದು ಗೂಟದಿಂದ ಕೋಟನ್ನು ತೆಗೆದಳು. ಏನಾರ್ಶಚರ್ಯ! ಕೋಟು ಬಹಳ ಭಾರವಾಗಿತ್ತು. ಅಡುಗೆಯವಳ ಕುತೂಹಲ ಕೆರಳಿತು. ಏನಿದೆ ಅದರಲ್ಲಿ ಎಂದು ನೋಡುವ ಆಸೆಯಾಯಿತು. ಒಡನೆ ಅವಳು ಕೋಟಿನ ಎಲ್ಲ ಭಾಗಗಳನ್ನು ತಡಕಾಡಿ ನೋಡಿದಳು. ಅದರ ದೊಡ್ಡ ದೊಡ್ಡ ಕಿಸೆಗಳೊಳಗೆ ಕೈ ತೂರಿ ತಪಾಸಣೆ ನಡೆಸಿದಳು. ಅವಳ ಎದೆ ದಸಕ್ಕೆಂದಿತು. ಗುಂಡು ತುಂಬಿದ ಎರಡು ಪಿಸ್ತೂಲುಗಳೂ ಒಂದು ಹರಿತವಾದ ಚೂರಿಯೂ ಅಲ್ಲಿದ್ದವು. ಮರುಕ್ಷಣದಲ್ಲೆ ಅವಳಿಗೆಲ್ಲ ಅರ್ಥವಾಗಿತ್ತು. ಮನೆಯೊಳಗಿನ ‘ಅತಿಥಿ’ ಎಂಥವನು? ಏಕೆ ಬಂದವನು? ಎಂಬುದು ತಿಳಿದು ಹೋಗಿತ್ತು. ಆದರೆ ಆಕೆ ಧೈರ್ಯಗೆಡಲಿಲ್ಲ. ನಿಮಿಷದೊಳಗೆ ತಾನೇನು ಮಾಡಬೇಕೆಂದು ನಿರ್ಧರಿಸಿಬಿಟ್ಟಳು; ಅಂತೆ ಕೆಲಸಕ್ಕೂ ತೊಡಗಿದಳು.
ಮೊತ್ತಮೊದಲು ಆಕೆ ಸದ್ದಾಗದಂತೆ “ಅತಿಥಿ” ಮಲಗಿದ್ದ ಕೋಣೆಯತ್ತ ನಡೆದಳು. ಹೊರಗಡೆಯಿಂದ ಮೆಲ್ಲನೆ ಬಾಗಿಲ ಸರಪಳಿ ಸಿಕ್ಕಿಸಿದಳು. ಅದು ಫಕ್ಕನೆ ಬಿಟ್ಟು ಹೋಗದಂತೆ ಅದರ ಮೇಲೆ ಹಗ್ಗದ ಕಟ್ಟನ್ನೂ ಹಾಕಿದಳು. ಮತ್ತೆ ಹಾಗೆಯೇ ಹಿಂದೆ ಬಂದು ತನ್ನ ಕೋಣೆಯಲ್ಲಿ ಕುಳಿತುಕೊಂಡಳು. ನಿದ್ರೆ ಅವಳ ಬಳಿ ಸುಳಿಯಲಿಲ್ಲ. ಎಚ್ಚರಾಗಿಯೇ ಇದ್ದ ಅವಳಿಗೆ ಹೊರಗಡೆಯಿಂದ ಹೆಜ್ಜೆಯ ಸಪ್ಪಳ ಕೇಳಿದಂತಾಯಿತು. ಮತ್ತೊಂದು ಗಳಿಗೆಯಲ್ಲಿ “ಎಲ್ಲ ಸಿದ್ಧವಾಯಿತೆ?” ಎಂಬ ಮಾತು ಸ್ಪಷ್ಟವಾಗಿ ಕೇಳಿಸಿತು. ಮನೆಯೊಳಗಿನವನ ಸಹಾಯಕ್ಕಾಗಿ ಅವನ ಸಂಗಾತಿ ಬಂದಿದ್ದಾನೆ ಎಂಬುದು ಆಕೆಗೆ ಖಚಿತವಾಯಿತು ಒಡನೆ ಆಕೆ ಸದ್ದಾಗದಂತೆ ಎದ್ದು ನಿಂತಳು. ಮತ್ತೆ ಕತ್ತಲಲ್ಲೆ ತಡಕಾಡಿ ಪಿಸ್ತೂಲನ್ನು ಎತ್ತಿಕೊಂಡಳು. ಮೆಲ್ಲನೆ ಕಿಟಕಿ ತೆರೆದು ಹೊರಗೆ ನಿಂದವನೆಡೆ ಗುಂಡು ಹಾರಿಸಿದಳು. ಕಿಟಾರನೆ ಕಿರಿಚಿಕೊಂಡು ಆತ ಕೆಳಗುರುಳಿದ.
ಗುಂಡಿನ ಸಪ್ಪಳ ಕೇಳಿ ಮಲಗಿದ್ದ ಕೆಲಸದ ಹುಡುಗಿ ಫಕ್ಕನೆ ಎದ್ದು ಕೂತಳು. ಬೆಚ್ಚಿಬಿದ್ದ ‘ಅತಿಥಿ’ ಸಟ್ಟನೆದ್ದು ಬಾಗಿಲ ಬಳಿ ಓಡಿ ಬಂದ. ಮರುಘಳಿಗೆಯಲ್ಲಿ ಗಡಬಡ ಸದ್ದು ಮಾಡುತ್ತ ಆತ ಬಾಗಿಲನ್ನು ಎಳೆಯತೊಡಗಿದ. ತಕ್ಷಣ ಆ ಕೆಚ್ಚಿನ ಹೆಣ್ಣು ಕೋಣೆಯ ಬಾಗಿಲ ಬಳಿ ಹಾಜರಾದಳು. ಮತ್ತೆ ಗಟ್ಟಿಯಾಗಿ, “ಏ ದುಷ್ಟಾ, ನಿನ್ನ ಪಿಸ್ತೂಲು ನನ್ನ ಕೈಯಲ್ಲಿದೆ. ನೀನೀಗ ಬಾಗಿಲು ತೆರೆದರೆ ಕೋಣೆಯ ಹೊರಗೆ ಹೆಜ್ಜೆ ಇರಿಸುವ ಮೊದಲು ಸತ್ತು ಹೆಣವಾಗದೆ ಇರುವುದಿಲ್ಲ. ಎಚ್ಚರಿಕೆ” ಎಂದು ಅಬ್ಬರಿಸಿದಳು. ಗುಂಡಿನ ಸಪ್ಪಳ ಕೇಳಿ ತಬ್ಬಿಬ್ಬಾಗಿ ಕೂತಿದ್ದ ಕೆಲಸದ ಹುಡುಗಿಯನ್ನು ಕೂಗಿ ಕರೆದಳು. ಬೇಗೆನೆ ಓಡಿ ನೆರೆಕರೆಯ ಜನರನ್ನು ಕರೆತರುವಂತೆ ಆಕೆಯನ್ನು ಅಟ್ಟಿದಳು. ಜನರು ಬರುವ ತನಕ ಪಿಸ್ತೂಲು ಹಿಡಿದುಕೊಂಡು ಕೋಣೆಯ ಬಾಗಿಲಲ್ಲೆ ಕಾವಲು ನಿಂತಳು.
ತುಸು ಹೊತ್ತಿನಲ್ಲೆ ಊರವರೆಲ್ಲ ಅಲ್ಲಿ ಒಟ್ಟು ಸೇರಿದರು. ಕೋಣೆಯ ಬಾಗಿಲು ತೆರೆದು, ಕಳ್ಳ ಅತಿಥಿಯನ್ನು ಸೆರೆಹಿಡಿದರು. ಮನೆಯ ಪಕ್ಕದಲ್ಲೆ ಸತ್ತುಬಿದ್ದ ಡಕಾಯಿತನ ಹೆಣವನ್ನೂ ಅವರು ಕಂಡರು. ಮನೆಯವರನ್ನು ಕೊಂದು, ಮನೆಯನ್ನು ದೋಚಲು ಬಂದಿದ್ದವರಿಗೆ ತಕ್ಕ ಶಿಕ್ಷೆ ದೊರೆತಿತ್ತು. ನೆರೆದವರೆಲ್ಲ ಮನೆಯ ಸೇವಕಿಯ ಧೈರ್ಯ ಶೌರ್ಯಗಳನ್ನು ಮೆಚ್ಚಿ ಕೊಂಡಾಡಿದರು. ಮತ್ತೆ ಕಳ್ಳನನ್ನು ಪೋಲೀಸರಿಗೆ ಒಪ್ಪಿಸಿದರು.
ಕೆಲವು ದಿನಗಳು ಕಳೆದವು. ಪರವೂರಿಗೆ ಹೋಗಿದ್ದ ಯಜಮಾನ ಮನೆಗೆ ಹಿಂದಿರುಗಿದ. ತಾನು ಇಲ್ಲದಾಗ ಮನೆಯಲ್ಲಿ ನಡೆದ ಸಂಗತಿ ಎಲ್ಲ ಅವನಿಗೆ ತಿಳಿಯಿತು. ಸೇವಕಿಯ ಸಾಹಸದಿಂದಾಗಿ ತನ್ನ ಮನೆ ಉಳಿಯಿತೆಂದು ಅವನಿಗೆ ಬಹಳ ಸಂತೋಷವಾಯಿತು. ಅವನು ಅವಳನ್ನು ಬಾಯಿತುಂಬ ಹೊಗಳಿದ. ಮತ್ತೆ ಬಡವೆಯಾದರೂ ಗುಣಸುಂದರಿಯಾಗಿದ್ದ ಆಕೆಯನ್ನು ಮೆಚ್ಚಿ ಮದುವೆಯಾದ. ಮನೆಯ ಸೇವಕಿಯಾಗಿದ್ದವಳು ಮನೆಯೊಡೆಯನ ಪ್ರೀತಿಯ ಮಡದಿಯಾದಳು; ಮನೆಯ ಒಡತಿಯಾದಳು.
ತನ್ನ ಅದ್ಭುತ ಸಾಹಸಕ್ಕೆ ತಕ್ಕ ಪ್ರತಿಫಲ ಆಕೆಗೆ ದೊರೆಯಿತು.
* * *

ಶ್ರಮದ ಫಲ

ಒಂದು ಊರು ಇತ್ತು. ಅಲ್ಲೊಬ್ಬ ಜಮೀನುದಾರನಿದ್ದ. ವಾರ್ಷಿಕ ೨೦೦ ಪೌಂಡು ಉತ್ಪತ್ತಿ ಬರುವ ಭೂಮಿ ಅವನಿಗಿತ್ತು. ಬೇಸಾಯದ ಕೆಲಸಗಳನ್ನೆಲ್ಲ ಆಳುಗಳೇ ಮಾಡುತ್ತಿದ್ದರು. ಸ್ವತಃ ದುಡಿವ ಅಭ್ಯಾಸ ಅವನಿಗಿರಲಿಲ್ಲ.
‘ಆಳು ಮಾಡಿದ್ದು ಹಾಳು’ ಅನ್ನುತ್ತಾರಲ್ಲ? ಹಾಗೇ ಆಯಿತು. ಜಮೀನುದಾರನ ಬೇಸಾಯ ಸರಿಯಾಗಿ ನಡೆಯಲಿಲ್ಲ. ಒಳ್ಳೆಯ ಫಸಲು ಅವನಿಗೆ ಬರಲಿಲ್ಲ. ವೆಚ್ಚ ಹೆಚ್ಚುತ್ತ ಹೋಯಿತು. ಆದಾಯ ಕಡಿಮೆಯಾಯಿತು. ಜಮೀನುದಾರ ಸಾಲದಲ್ಲಿ ಬಿದ್ದ. ಕೊನೆಗೆ ಜಮೀನಿನ ಅರ್ಧಭಾಗವನ್ನು ಮಾರಿ, ಸಾಲ ಸಂದಾಯ ಮಾಡಿದ.
ಇನ್ನೂ ಅರ್ಧಭಾಗ ಉಳಿದಿದೆಯಲ್ಲ? ಅದರ ಬೇಸಾಯ ನಡೆಯಬೇಕಷ್ಟೆ? ಜಮೀನುದಾರ ಅದರ ಬಗೆಗೆ ಯೋಚಿಸಿದ. ಕಟ್ಟ ಕಡೆಗೆ ಅದನ್ನು ೨೦ ವರುಷಗಳ ಅವಧಿಗೆಂದು ಗೇಣಿಗೆ ಕೊಟ್ಟ.
ಕೆಲವು ಕಾಲ ಕಳೆಯಿತು. ಒಂದು ದಿನ ಗೇಣಿದಾರ ಭೂಮಾಲಿಕನ ಮನೆಗೆ ಬಂದ. ಆವರೆಗಿನ ಗೇಣಿಯನ್ನೆಲ್ಲ ಸಂದಾಯ ಮಾಡಿದ ಮಾತುಕತೆಯ ಮಧ್ಯೆ ಧನಿಯು ಆ ಹೊಲಗಳನ್ನು ಮಾರಲಿರುವನೇ ಎಂದು ವಿಚಾರಿಸಿದ. ಭೂಮಾಲಿಕನಿಗೆ ಆಶ್ಚರ್ಯವಾಯಿತು. ಆ ಬಡರೈತನಲ್ಲಿ ಅಷ್ಟು ಹಣ ಹೇಗೆ ಬಂತು ಎಂದು ತಿಳಿಯದಾಯಿತು. “ನನ್ನ ಎಲ್ಲ ಹೊಲಗಳ ಸಾಗುವಳಿ ನಡೆಸಿದರೂ ನನಗೆ ಲಾಭ ಸಿಗಲಿಲ್ಲ ನನ್ನಲ್ಲಿ ಚಿಕ್ಕಾಸೂ ಉಳಿಯಲಿಲ್ಲ. ನಿನಗಿದ್ದ ಭೂಮಿಯ ಅರ್ಧಭಾಗದಷ್ಟು ಹೊಲಗಳಲ್ಲಿ ಮಾತ್ರ ನೀನು ಬೇಸಾಯ ಮಾಡಿದೆ. ಆದರೂ ನೀನಿಂದು ಗೇಣಿ ಸಂದಾಯ ಮಾಡಿದ್ದೀಯಾ. ಈಗ ಹೊಲಗಳನ್ನು ಕೊಳ್ಳಲಿಕ್ಕೂ ಸಿದ್ಧನಿದ್ದಿಯಾ. ನಿನ್ನಲ್ಲಿ ಅಷ್ಟು ಹಣ ಹೇಗೆ ಬಂತು ಹೇಳು?” ಎಂದು ಅವನು ರೈತನನ್ನು ಪ್ರಶ್ನಿಸಿದ.
ಜಮೀನುದಾರನ ಮಾತು ಕೇಳಿ ರೈತನಿಗೆ ನಗು ಬಂತು. ನಗುತ್ತಲೇ ಅವನು ಉತ್ತರ ಕೊಟ್ಟ, “ನೀವು ಸ್ವತಃ ಶ್ರಮಪಟ್ಟು ದುಡಿಯಲಿಲ್ಲ. ಕೆಲಸದಲ್ಲಿ ಸೋಮಾರಿ ತನ ತೋರಿಸಿದರಿ. ‘ಹೋಗಿ ಕೆಲಸ ಮಾಡಿ’ ಎಂದು ಆಳುಗಳನ್ನು ಅಟ್ಟದಿರಿ. ನೀವು ಮಾಡಬೇಕಾದ ಕೆಲಸಕ್ಕೆ ಬೇರೆಯವರನ್ನೆ ಕಳಿಸಿದರಿ. ಆದಕಾರಣ ನಿಮ್ಮ ಬಳಿಗೆ ಬರಬೇಕಾಗಿದ್ದ ಸಂಪತ್ತು ನಿಮ್ಮಿಂದ ದೂರ ಹೋಯಿತು. ನಾನು ನಿಮ್ಮ ಹಾಗೆ ಮಾಡಲಿಲ್ಲ. ಕೆಲಸಕ್ಕೆ ನಾನೇ ಬಂದೆ. ಬೆವರು ಸುರಿಸಿ ನಾನೇ ದುಡಿದೆ. ಅದರಿಂದಾಗಿ ಒಳ್ಳೆಯ ಫಸಲು ನನಗೆ ಬಂದಿತು ಸಂಪತ್ತು ಕೈ ಸೇರಿತು. ನಿಮ್ಮ ಕೆಲಸ ಮಾಡಲು ಆಳನ್ನೆ ‘ಹೋಗು’ ಅಂದಾಗ ಸಂಪತ್ತನ್ನೆ ‘ಹೋಗು’ ಅಂದಂತಾಯಿತು. ಕೆಲಸಕ್ಕೆ ನಾನೇ ಬಂದು ಶ್ರಮಪಟ್ಟಾಗ ಸಂಪತ್ತನ್ನೆ ‘ಬಾ’ ಎಂದು ಕರೆದಂತಾಯಿತು.”
ರೈತನ ಮಾತುಕೇಳಿದ ಜಮೀನುದಾರನಿಗೆ ತನ್ನ ತಪ್ಪಿನ ಅರಿವಾಯಿತು. ಇನ್ನೆಂದಿಗೂ ಅಂಥ ತಪ್ಪು ಮಾಡಬಾರದೆಂಬ ನಿರ್ಧಾರ ಮನದಲ್ಲಿ ಮೂಡಿತು.
* * *

ಫಳಕಳ ಸೀತಾರಾಮ ಭಟ್ಟರ ಕೃತಿಗಳು

ಮಹಾ ಸಾಹಸಿ [ಬಾಲೋಪಯೋಗೀನೀತಿ ಕಥೆಗಳು] : ಕುರಿತು

ಮಹಾ ಸಾಹಸಿ [ಬಾಲೋಪಯೋಗೀನೀತಿ ಕಥೆಗಳು] : ಕುರಿತು

ಕಳೆದ ಅಕ್ಟೋಬರ್ ತಿಂಗಳೊಂದರಲ್ಲೇ ಶ್ರೀ ಪಳಕಳದಿಂದ ರಚಿತ ಮಕ್ಕಳ ೨ ಕಿರು ಹೊತ್ತಗೆಗಳನ್ನು ಒಲವಿನ ಓದುಗರಿಗೆ ಒಪ್ಪಿಸಿರುವ ಯುಗ ಪುರುಷ ಪ್ರಕಟಣಾಲಯದ ಮೂಲಕ ಇದೀಗ ಮತ್ತೊಂದು ನೂತನ ಕೃತಿ ‘ಮಹಾ ಸಾಹಸಿ’ಯನ್ನೂ ಪ್ರಕಟಿಸಲು ಬಲು ಹೆಮ್ಮಯೆನಿಸಿದೆ.
ಬಾಲೋಪಯೋಗಿಯಾದ ಈ ನೀತಿ ಕಥೆಗಳು ಒಂದಕ್ಕಿಂತ ಮತ್ತೊಂದು ಮುದ್ದು ಕಿರುಕಂದರ ಮನೋಮಂದಾರವನ್ನು ಅರಳಿಸುವಲ್ಲಿ ಬಹಳಷ್ಟು ಪರಿಣಾಮಕಾರಿಯೆಂದು ಹೆಚ್ಚು ಹೇಳಬೇಕಾಗಿಲ್ಲ. ಏನಿದ್ದರೂ ಇಂತಹ ಸಂಗ್ರಾಹ್ಯ ಸತ್ಕೃತಿಯನ್ನು ಸಾಕಷ್ಟು ಸಂಖ್ಯೆಯಲ್ಲಿ ಮುಂದಿನ ಜನಾಂಗದ ಇಂದಿನ ಬಾಲಕರು ಓದಿ ಆ ತಿರುಳನ್ನು ಮೈ ಗೂಡಿಸಿಕೊಂಡಾಗ ಕೃತಿ ರಚಯಿತರ ಹಾಗೂ ಪ್ರಕಾಶಕರ ಶ್ರಮ ಸಾರ್ಥಕ. ಅಂತಾಗಲೆಂದು ಹಾರೈಸುವುದರೊಂದಿಗೆ ಸನ್ಮಿತ್ರ ಸಹೃದಯ ಶ್ರೀ ಪಳಕಳ ಸೀತಾರಾಮ ಭಟ್ಟರನ್ನು, ಕೃತಿ ಮುದ್ರಣಗೈದ ಯುಗಪುರುಷ ಮುದ್ರಣಾಲಯದವರನ್ನೂ ಆವರಣ ಪುಟ ಹಾಗೂ ಒಳಪುಟಗಳಲ್ಲಿರುವ ಕಲಾಕೃತಿಗಳನ್ನು ವಿನಿರ್ಮಿಸುವಲ್ಲಿ ಸಹಕರಿಸಿದ ಕಲಾವಿದ ಶ್ರೀ ಕೆ. ದೇವಡಿಗಾರರನ್ನು ಅಭಿನಂದಿಸುವುದು ನಮ್ಮ ಕರ್ತವ್ಯ.

ಕೊಡೆತ್ತೂರು ಅನಂತಪದ್ಮನಾಭ ಉಡುಪ
ಪ್ರಕಾಶಕ/ಸಂಪಾದಕ
೧೯-೧೧-೧೯೮೮

ಮಹಾ ಸಾಹಸಿ [ಬಾಲೋಪಯೋಗೀನೀತಿ ಕಥೆಗಳು] : ಲೇಖಕನ ಮಾತು

ಮಹಾ ಸಾಹಸಿ [ಬಾಲೋಪಯೋಗೀನೀತಿ ಕಥೆಗಳು] : ಲೇಖಕನ ಮಾತು

ಕೆಲವು ಸಮಯದ ಹಿಂದೆ ಮದರಾಸಿನ ಲಿಟಲ್‌ ಫ್ಲವರ್ ಕಂಪೆನಿ (Little Flower Co.,) ಅವರ `Ancient Famous Fables’ ಎಂಬ ಇಂಗ್ಲೀಷ್‌ ಪುಸ್ತಕ ಮಾಲೆಯನ್ನು ಓದುವ ಅವಕಾಶ ದೊರೆಯಿತು. ಅಲ್ಲಿನ ಕೆಲವು ನೀತಿಕತೆಗಳು ಮಕ್ಕಳಲ್ಲಿ ಧೈರ್ಯ, ಶೌರ್ಯ, ಸಾಹಸ, ಕಾರುಣ್ಯ, ಕರ್ತವ್ಯಪ್ರಜ್ಞೆ, ಪರೋಪಕಾರಗಳಂತಹ ಸದ್ಗುಣಗಳನ್ನು ಬೆಳೆಸುವಲ್ಲಿ ಅತ್ಯಂತ ಉಪಯುಕ್ತವಾದಾವು ಎನಿಸಿತು; ಜೊತೆಯಲ್ಲೆ ಅವುಗಳನ್ನು ಕನ್ನಡದ ಮಕ್ಕಳಿಗೂ ಪರಿಚಯಿಸುವ ಆಸೆಯೊಂದು ಮನದಲ್ಲಿ ಮೂಡಿತು. ಅವುಗಳ ಪ್ರಕಾಶಕರಲ್ಲಿ ನನ್ನಾಸೆಯನ್ನು ತೋಡಿಕೊಂಡು, ಅನುಮತಿಗಾಗಿ ಪತ್ರ ಬರೆದಾಗ ಅವರು ಅನುಮತಿ ನೀಡುವ ಸೌಜನ್ಯ ತೋರಿ ಪ್ರೋತ್ಸಾಹಿಸಿದರು ಪರಿಣಾಮವಾಗಿ ಈ ಪುಟ್ಟ ಕಥಾ ಸಂಗ್ರಹ ಕನ್ನಡದ ಮಕ್ಕಳಿಗೆ ದೊರೆಯುವಂತಾಯಿತು. ಅದಕ್ಕಾಗಿ ಮದರಾಸಿನ ಸುಪ್ರಸಿದ್ಧ ಪ್ರಕಾಶನ ಸಂಸ್ಥೆ Little Flower Co. ಇದರ ಸರ್ವ ಸದಸ್ಯರಿಗೆ ನಾನು ಚಿರೃಋಣ.
ಈ ಪುಸ್ತಕವು ಕನ್ನಡದಲ್ಲಿ ಸರ್ವಾಂಗ ಸುಂದರವಾಗಿ ಪ್ರಕಟಗೊಳ್ಳಲು ಕಾರಣರಾದವರು ನಮ್ಮ ಬಂಧುಗಳೂ ಹಿತಚಿಂತಕರೂ ನಿರಂತರ ಪ್ರೋತ್ಸಾಹಕರೂ ಆದ “ಯುಗಪುರುಷ” ಪ್ರಕಾಶನದ ಒಡೆಯ ಶ್ರೀ ಕೊ ಅ. ಉಡುಪ ಅವರು ಶ್ರೀಯುತರಿಗೆ ನನ್ನ ಹಾರ್ದಿಕ ಕೃತಜ್ಞತೆಗಳು. ಈ ಸಂಗ್ರಹದ ಕೆಲವು ಕತೆಗಳು ಈ ಮೊದಲೇ ಪ್ರಕಟಿಸಿ ಉಪಕರಿಸಿದ “ತರಂಗ’ ಮತ್ತು “ಉದಯವಾಣಿ” ಪತ್ರಿಕೆಗಳ ಸಂಪಾದಕರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಈ ಹೊತ್ತಗೆಯನ್ನು ಅಂದವಾಗಿ ಮುದ್ರಿಸಿ ಕೊಟ್ಟವರು ‘ಯುಗಪುರುಷ’ ಮುದ್ರಣಾಲಯದ ಕೆಲಸಗಾರ ಬಂಧುಗಳು ಅವರಿಗೆ ನನ್ನ ನಮನಗಳು.

ಪಳಕಳ ಸೀತಾರಾಮಭಟ್ಟ
ಶಿಶುಸಾಹಿತ್ಯ ಮಾಲೆ.
ಮಿತ್ತಬೈಲು.
೧೪-೧೧-೧೯೮೮

ದಕ್ಷ ನ್ಯಾಯಾಧೀಶ

ದಕ್ಷ ನ್ಯಾಯಾಧೀಶ

ನಾಲ್ಕನೆಯ ಹೆನ್ರಿ ಇಂಗ್ಲೆಂಡಿನ ರಾಜ. ವೇಲ್ಸಿನ ರಾಜಕುಮಾರನು ಅವನ ಮಗ. ಅವನು ಒಳ್ಳೆಯವನೇ. ಯಾವುದು ಸರಿ ಯಾವುದು ತಪ್ಪು ಎಂದು ತಿಳಿವ ವಿವೇಕ ಆವನಿಗಿತ್ತು. ಆದರೆ ಅವನಿಗೆ ತಾಳ್ಮೆ ಕಡಿಮೆ. ಬಲು ಬೇಗ ಅವನು ಸಿಟ್ಟುಗೊಳ್ಳುತ್ತಿದ್ದ. ಕೆಲವು ಪೋಲಿಗಳ ಸಹವಾಸವೂ ಆತನಿಗಿತ್ತು.
ಒಮ್ಮೆ ರಾಜಕುಮಾರನ ಮಿತ್ರನೊಬ್ಬ ಏನೋ ಅಪರಾಧ ಮಾಡಿದ. ಅವನು ವಿಚಾರಣೆ ಎದುರಿಸಬೇಕಾಯಿತು. ಅವನ ವಿಚಾರಣೆ ನಡೆಸಿದವನು ಸರ್ ವಿಲಿಯಮ್‌ ಗಾಸ್ಕೊಗ್ನೆ. ಆತ ಬಹಳ ದಕ್ಷ ಮತ್ತು ಪ್ರಾಮಾಣಿಕ. ಆದರೆ ನ್ಯಾಯಾಧೀಶನು ತನ್ನ ಮಿತ್ರನಿಗೆ ರಿಯಾಯಿತಿ ತೋರಬೇಕೆಂಬುದು ರಾಜಕುಮಾರನ ಬಯಕೆಯಾಗಿತ್ತು. ನ್ಯಾಯಾಧೀಶನು ಅದಕ್ಕೆ ಸಿದ್ಧನಿರಲಿಲ್ಲ. ಅಪರಾಧಿಗೆ ತಕ್ಕ ಶಿಕ್ಷೆ ದೊರೆಯಿತು. ರಾಜಕುಮಾರ ಅಸಮಾಧಾನಗೊಂಡ. ಅವನ ತಾಳ್ಮೆ ತಪ್ಪಿತು. ಸಿಟ್ಟು ನೆತ್ತಿಗೇರಿತು ತಾನೇನು ಮಾಡುತ್ತಿದ್ದೇನೆ ಎನ್ನುವುದು ಅವನಿಗೆ ಮರೆತು ಹೋಯಿತು. ಮರುಕ್ಷಣದಲ್ಲೆ ಆತ ನ್ಯಾಯಾಧೀಶನ ಮೇಲೆ ಏರಿ ಹೋಗಿದ್ದ. ನ್ಯಾಯಾಲಯದಲ್ಲೆ ನ್ಯಾಯಾಧೀಶನಿಗೆ ಏಟು ಬಿಗಿದಿದ್ದ.
ಬಹಳ ಜನ ಅಲ್ಲಿ ನೆರೆದಿದ್ದರು. ಅವರೆಲ್ಲ ಉಸಿರು ಬಿಗಿ ಹಿಡಿದು ನೋಡುತ್ತಿದ್ದರು. ನ್ಯಾಯ ಸ್ಥಾನದಲ್ಲೆ ಅನ್ಯಾಯ ನಡೆದಿತ್ತು. ರಾಜಕುಮಾರನೆ ಅಪರಾಧ ಮಾಡಿದ್ದ. ಅವನಿಗೆ ಅಥವಾ ಅವನ ತಂದೆಗೆ ಹೆದರಿ ಉಳಿದ ಯಾರೇ ಆದರು ಸುಮ್ಮನೆ ಇದ್ದುಬಿಡುತ್ತಿದ್ದರು. ಆದರೆ ನ್ಯಾಯಾಧೀಶ ವಿಲಿಯಮ್‌ ಹಾಗೆ ಮಾಡಲಿಲ್ಲ. ರಾಜಕುಮಾರನ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಂಡ. ಅವನಿಗೆ ಜೈಲು ಶಿಕ್ಷೆ ವಿಧಿಸಿಯೇ ಬಿಟ್ಟ.
ರಾಜಕುಮಾರನ ಸಿಟ್ಟು ಹೆಚ್ಚು ಹೊತ್ತು ಉಳಿಯಲಿಲ್ಲ. ಸಿಟ್ಟು ಇಳಲಿದುದೇ ತಡ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಯಿತು. ಮನದಲ್ಲಿ ಪಶ್ಚಾತ್ತಾಪ ಮೂಡಿತು. ಅವನು ಚಕಾರವೆತ್ತದೆ ನ್ಯಾಯಾಧೀಶನ ಅಪ್ಪಣೆಯನ್ನು ಪಾಲಿಸಿದ. ತಾನೇ ಸೆರೆಮನೆಯತ್ತ ನಡೆದು ಜೈಲು ಶಿಕ್ಷೆಗೆ ಒಳಗಾದ.
ಮಿಂಚಿನ ವೇಗದಲ್ಲಿ ವಾರ್ತೆ ಹರಡಿತು. ರಾಜನಿಗೂ ವಿಷಯ ತಿಳಿಯಿತು. “ನಿರ್ಭೀತನಾಗಿ, ನಿಷ್ಪಕ್ಷಪಾತವಾಗಿ ಕರ್ತವ್ಯ ನೆರವೇರಿಸುವ ಧೀರನೂ, ನ್ಯಾಯ ನಿಷ್ಠುರಿಯೂ ಆದ ನ್ಯಾಯಾಧೀಶನೊಬ್ಬ ನಮ್ಮಲ್ಲಿ ಇದ್ದಾನೆ ಎಂಬುದಕ್ಕಾಗಿ ಹೆಮ್ಮೆಪಡುತ್ತೇನೆ. ಹಾಗೆಯೇ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಮತ್ತು ಅದಕ್ಕಾಗಿ ಶಿಕ್ಷೆ ಅನುಭವಿಸಲು ಸಿದ್ಧನಾದ ಮಗನಿರುವುದಕ್ಕಾಗಿ ಇನ್ನಷ್ಟು ಸಂತೋಷ ಪಡುತ್ತೇನೆ” ಎಂದು ಉದ್ಗಾರ ಅವನಿಂದ ಹೊರಹೊಮ್ಮಿತು.
* * *

ಝಾನ್ಸಿ ರಾಣಿ ಲಕ್ಷ್ಮೀಬಾಯಿ

 ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮ ಮತ್ತು ಬಾಲ್ಯ ಎರಡನೇ ಬಾಜೀರಾವ ಪೇಶ್ವೆಯವರ ಸಂಬಂಧಿ ಚಿಮಾಜೀ ಅಪ್ಪಾರವರ ವ್ಯವಸ್ಥಾಪಕರಾಗಿದ್ದ ಮೋರೊಪಂತ ತಾಂಬೆ ಮತ್ತು ಭಗೀರಥಿ ಬಾಯಿಯವರಿಗೆ ಕಾರ್ತಿಕ ಕೃಷ್ಣ ೧೪, ೧೭೫೭ ವರ್ಷ ಅಂದರೆ ಆಂಗ್ಲ ಪಂಚಾಂಗನುಸಾರ ೧೯ ನವೆಂಬರ ೧೮೩೫ ರಂದು ರಾಣಿ ಲಕ್ಷ್ಮೀಬಾಯಿಯ ಜನನವಾಯಿತು. ಆಕೆಗೆ ‘ಮಣಿಕರ್ಣಿಕಾ’ ಎಂದು ಹೆಸರಿಟ್ಟರು. ಮೋರೋಪಂತರು ಅವಳನ್ನು ಪ್ರೀತಿಯಿಂದ ‘ಮನುತಾಯಿ’ ಎಂದು ಕರೆಯುತ್ತಿದ್ದರು. ಮನುತಾಯಿಯು ನೋಡಲು ಸುಂದರ ಮತ್ತು ತುಂಬಾ ಬುದ್ಧಿವಂತೆಯಾಗಿದ್ದಳು. ಮನುತಾಯಿಗೆ ೩-೪ ವರ್ಷವಿರುವಾಗಲೇ ಮಾತೃವಿಯೋಗ ಅನುಭವಿಸಬೇಕಾಯಿತು. ಅವಳು ಮುಂದೆ ಬ್ರಹ್ಮಾವರ್ತಾದ ಎರಡನೇ ಬಾಜೀರಾವ ಪೇಶ್ವೆಯವರ ಆಶ್ರಯದಲ್ಲಿ ಬೆಳೆದಳು.   ಲಕ್ಷ್ಮೀಬಾಯಿ ಯುದ್ಧಕಲೆಯ ಶಿಕ್ಷಣ ಬ್ರಹ್ಮಾವರ್ತಾದಲ್ಲಿ ನಾನಾಸಾಹೇಬ ಪೇಶ್ವೆ ತಮ್ಮ ಬಂಧು ರಾವಸಾಹೇಬರವರೊಂದಿಗೆ ಕತ್ತಿವರಸೆ, ಬಂದೂಕು ಚಲಾಯಿಸುವುದು ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದರು. ಮನುತಾಯಿಯೂ ಸಹ ಅವರೊಂದಿಗೆ ಎಲ್ಲ ಯುದ್ಧಕಲೆಗಳನ್ನು ಕಲಿತು ಅದರಲ್ಲಿ ನೈಪುಣ್ಯ ಪಡೆದುಕೊಂಡಳು. ಅವರ ಜೊತೆಯಲ್ಲಿಯೇ ಮನುತಾಯಿ ವಿದ್ಯಾಭ್ಯಾಸವನ್ನು ಮಾಡಿದಳು.   ಝಾನ್ಸಿ ರಾಣಿ ಲಕ್ಷ್ಮೀಬಾಯಿ  ವಿವಾಹ ಮನುತಾಯಿಗೆ ೭ ವರ್ಷವಿರುವಾಗ ಝಾನ್ಸೀ ಸಂಸ್ಥಾನದ ಅಧಿಪತಿ ಗಂಗಾಧರರಾವ ನೆವಾಳಕರರವರೊಂದಿಗೆ ಅವಳ ವಿವಾಹವು ನೆರವೇರಿತು. ಮೋರೋಪಂತ ತಾಂಬೆಯವರ ಮನುತಾಯಿ ವಿವಾಹದ ನಂತರ ಝಾನ್ಸಿ ರಾಣಿಯಾದಳು. ವಿವಾಹದ ನಂತರ ಆಕೆಯನ್ನು ’ಲಕ್ಷ್ಮೀಬಾಯಿ’ ಎಂದು ಸಂಬೋಧಿಲಾಯಿತು.   ಪುತ್ರವಿಯೋಗದ ದುಃಖ ರಾಣಿ ಲಕ್ಷ್ಮೀಬಾಯಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಪುತ್ರನ ಜನನದಿಂದ ಅಧಿಕಾರಕ್ಕೆ ವಾರಸುದಾರ ಸಿಕ್ಕನೆಂದು ಗಂಗಾಧರರಾವಗೆ ತುಂಬಾ ಆನಂದವಾಯಿತು. ಆದರೆ ಮಗು ಮೂರು ತಿಂಗಳಿರುವಾಗಲೇ ಅಸುನೀಗಿತು. ಹಾಗಾಗಿ ರಾಣಿ ಲಕ್ಷ್ಮೀಬಾಯಿ ಮತ್ತು ಗಂಗಾಧರರಾವ ಇವರು ಪುತ್ರವಿಯೋಗ ಅನುಭವಿಸಬೇಕಾಯಿತು.   ಲಕ್ಷ್ಮೀಬಾಯಿ ಮಗನನ್ನು ದತ್ತು ತೆಗೆದುಕೊಳ್ಳುವುದು ಪುತ್ರವಿಯೋಗವನ್ನು ಸಹಿಸದೆ ಗಂಗಾಧರರಾವ ಹಾಸಿಗೆ ಹಿಡಿದರು. ಗಂಗಾಧರರಾವ ಅವರ ಇಚ್ಛೆಯಂತೆ ವಾರಸುದಾರನಾಗಿ ನೆವಾಳಕರ ವಂಶದ ಆನಂದರಾವನನ್ನು ದತ್ತು ಪಡೆದು ಅವನಿಗೆ ’ದಾಮೋದರರಾವ’ ಎಂದು ಹೆಸರಿಟ್ಟರು. ದತ್ತು ಪಡೆದ ನಂತರ ಕೆಲವು ಸಮಯದಲ್ಲೇ ಗಂಗಾಧರರಾವ ಮರಣ ಹೊಂದಿದರು. ಪತಿ ವಿಯೋಗದಿಂದ ರಾಣಿಲಕ್ಷ್ಮೀಬಾಯಿಯು ೧೮ ವರ್ಷದಲ್ಲೇ ವಿಧವೆಯಾದರು.   "ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ" ಆಂಗ್ಲರು ಹೊರಡಿಸಿದ ಹೊಸ ಆಜ್ಞೆಗನುಸಾರ ರಾಜ್ಯದ ಉತ್ತರಾಧಿಕಾರಿಯಾಗಿ ರಾಜನ ದತ್ತು ಪುತ್ರನಿಗೆ ಮಾನ್ಯತೆ ಇರಲಿಲ್ಲ. ಈ ಆಜ್ಞೆಯ ಕುರಿತು ರಾಣಿ ಲಕ್ಷ್ಮೀಬಾಯಿಗೆ ತಿಳಿಸಲು ಆಂಗ್ಲ ಅಧಿಕಾರಿ ಮೇಜರ ಎಲಿಸ ಭೇಟಿಯಾಗಲು ಬಂದನು. ರಾಣಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಝಾನ್ಸಿಯನ್ನು ತಾವು ವಶಪಡೆಸಿಕೊಳ್ಳುವುದಾಗಿ ತಿಳಿಸಿದನು. ರಾಣಿಯು ಸಂತಾಪದಿಂದ ದುಃಖಿತಳಾದಳು ಆದರೆ ಮರುಕ್ಷಣವೇ ಸಿಂಹಿಣಿಯಂತೆ ಘರ್ಜಿಸುತ್ತಾ "ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ" ಎಂದು ಗರ್ಜಿಸಿದಳು! ಇದನ್ನು ಕೇಳಿದ ಮೇಜರ ಎಲಿಸನು ಭಯಭೀತನಾಗಿ ಬರಿಗೈಯಲ್ಲಿ ಹಿಂತಿರುಗಿದನು.   ೧೮೫೭ ಸಂಗ್ರಾಮ   ೧೮೫೭ರ ಜನವರಿಯಲ್ಲಿ ಪ್ರಾರಂಭಗೊಂಡ ಸ್ವಾತಂತ್ರ ಸಂಗ್ರಾಮವು ಮೇ ೧೦ನೇ ತಾರೀಖಿನಂದು ಮೀರತನಲ್ಲಿ ಕಾಲಿಟ್ಟಿತ್ತು. ಮೀರತ, ಬರೇಲಿಯು ಕೂಡಲೇ ಆಂಗ್ಲರಿಂದ ಸ್ವತಂತ್ರವಾಯಿತು. ರಾಣಿ ಲಕ್ಷ್ಮೀಬಾಯಿಯು ಆಂಗ್ಲರ ಸಂಭವನೀಯ ಹಲ್ಲೆಯಿಂದ ಝಾನ್ಸಿಯ ರಕ್ಷಣೆಗಾಗಿ ಸಿದ್ಧತೆಯನ್ನು ಮಾಡತೊಡಗಿದಳು. ಆಂಗ್ಲರು ರಾಣಿ ಲಕ್ಷ್ಮೀಬಾಯಿಯನ್ನು ಜೀವಂತವಾಗಿ ಹಿಡಿದು ತರಲು ಸರ್ ಹ್ಯೂ ರೋಜ್ರನ್ನು ನೇಮಿಸಿದರು. ಸರ್ ಹ್ಯೂ ರೋಜ್ ಇವರ ಸೈನ್ಯವು ಝಾನ್ಸಿಯಿಂದ ಮೂರು ಮೈಲು ದೂರದಲ್ಲಿ ಬೀಡುಬಿಟ್ಟಿತು ಮತ್ತು ರಾಣಿಗೆ ಶರಣಾಗಲು ಸಂದೇಶ ಕಳಿಸಿತು. ಆದರೆ ಝಾನ್ಸಿ ರಾಣಿಯು ಶರಣಾಗದೆ ತಾನೇ ಮುಂದೆ ನಿಂತು ಎಲ್ಲರಿಗೆ ಹೋರಾಡಲು ಸ್ಫೂರ್ತಿ ನೀಡಿದಳು. ಯುದ್ಧ ಪ್ರಾರಂಭವಾಯಿತು. ಝಾನ್ಸಿಯ ಸೈನಿಕರು ಸತತವಾಗಿ ಫಿರಂಗಿಯಿಂದ ಗುಂಡುಗಳನ್ನು ಆಂಗ್ಲರ ಮೇಲೆ ಸಿಡಿಸಲು ಪ್ರಾರಂಭಿಸಿದರು. ಮೂರು ದಿವಸದ ನಂತರವೂ ಆಂಗ್ಲರಿಗೆ ಕೋಟೆಯ ಮೇಲೆ ವಿಜಯ ಸಾಧಿಸಲು ಸಾಧ್ಯವಾಗದಿದ್ದಾಗ ಸರ್ ಹ್ಯೂ ರೋಜ್ ಮೋಸದ ಮಾರ್ಗ ಹಿಡಿದರು. ಹೀಗೆ ಆಂಗ್ಲರು ಝಾನ್ಸಿಯ ಮೇಲೆ ವಿಜಯ ಸಾಧಿಸಿದರು. ಆಗ ರಾಣಿಯು ದತ್ತು ಪುತ್ರ ದಾಮೋದರನನ್ನು ಬೆನ್ನಿಗೆ ಕಟ್ಟಿ ಕುದುರೆಯನ್ನೇರಿ ’ಜಯ ಶಂಕರ’ ಎಂಬ ಘೋಷಣೆಯನ್ನು ಮಾಡುತ್ತಾ ಆಂಗ್ಲ ಸೈನ್ಯವನ್ನು ಭೇದಿಸಿ ಮುನ್ನೆಡೆದಳು. ಈ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯ ತಂದೆ ಮೋರೋಪಂತರು ಅವಳೊಂದಿಗೆ ಇದ್ದರು. ಆದರೆ ಆಂಗ್ಲರೊಂದಿಗಿನ ಯುದ್ಧದಲ್ಲಿ ಮೋರೋಪಂತರು ಗಾಯಗೊಂಡು ಆಂಗ್ಲರ ಕೈಗೆ ಸಿಕ್ಕುಬಿದ್ದರು. ನಂತರ ಅವರಿಗೆ ಅವರನ್ನು ನೇಣಿಗೇರಿಸಲಾಯಿತು.   ಝಾನ್ಸಿ ರಾಣಿಯ ಮೂಲ ಚಿತ್ರ   ಕಾಲ್ಪಿಯ ಯುದ್ಧ ರಾಣಿ ಲಕ್ಷ್ಮೀಬಾಯಿಯು ೨೪ ಗಂಟೆಗಳಲ್ಲಿ ೧೦೨ ಮೈಲಿಗಳಷ್ಟು ದೂರ ಕುದುರೆ ಸವಾರಿ ಮಾಡಿ ’ಕಾಲ್ಪಿ’ ಎಂಬ ಊರು ತಲುಪಿದಳು. ಪೇಶ್ವೆಯವರು ಪರಿಸ್ಥಿತಿಯ ಅಭ್ಯಾಸವನ್ನು ಮಾಡಿ ರಾಣಿ ಲಕ್ಷ್ಮೀಬಾಯಿಗೆ ಎಲ್ಲ ರೀತಿಯ ಸಹಾಯ ಮಾಡಲು ತೀರ್ಮಾನಿಸಿದರು. ರಾಣಿ ಕೇಳಿದಷ್ಟು ಸೈನಿಕರನ್ನು ಅವಳಿಗೆ ನೀಡಿದರು. ಮೇ ೨೨ರಂದು ಸರ್ ಹ್ಯೂ ರೋಜ್ ಕಾಲ್ಪಿಯ ಮೇಲೆ ದಾಳಿ ಮಾಡಿದನು. ಯುದ್ಧ ಪ್ರಾರಂಭವಾದದ್ದನ್ನು ನೋಡಿ ರಾಣಿ ಲಕ್ಷ್ಮೀಬಾಯಿಯು ಕೈಯಲ್ಲಿ ಕತ್ತಿ ಹಿಡಿದು ಶರವೇಗದಿಂದ ಮುನ್ನುಗ್ಗಿದಳು. ರಾಣಿಯ ಹಲ್ಲೆಯನ್ನು ನೋಡಿ ಆಂಗ್ಲ ಸೈನ್ಯವು ಹಿಂದೆ ಓಡಿಹೋದರು. ಈ ಪರಾಭವದಿಂದ ದಿಗ್ಭ್ರಾಂತನಾದ ಸರ್ ಹ್ಯೂ ರೋಜ್ ಬಾಕಿ ಇದ್ದ ಸೈನ್ಯವನ್ನು ಯುದ್ಧಭೂಮಿಗೆ ಕೂಡಲೇ ಕರೆಸಿದನು. ಹೊಸ ಸೈನ್ಯದ ಮುಂದೆ ದಣಿದಿದ್ದ ಕ್ರಾಂತಿಕಾರರ ಆವೇಶ ಕಡಿಮೆಯಾಯಿತು. ಮೇ ೨೪ರಂದು ಕಾಲ್ಪಿಯನ್ನು ಆಂಗ್ಲರು ತಮ್ಮ ವಶಕ್ಕೆ ಪಡೆದುಕೊಂಡರು. ಕಾಲ್ಪಿಯಲ್ಲಿ ಪರಾಭವಗೊಂಡ ರಾವಸಾಹೇಬ ಪೇಶ್ವೆ, ಬಾಂದ್ಯದ ನವಾಬ, ತಾತ್ಯಾ ಟೋಪೆ, ಝಾನ್ಸೀಯ ರಾಣಿ ಮತ್ತು ಇತರ ಪ್ರಮುಖ ಸರದಾರರೆಲ್ಲರು ಗೊಪಾಳಪುರದಲ್ಲಿ ಒಂದು ಕಡೆ ಸೇರಿದರು. ಝಾನ್ಸಿ ರಾಣಿಯು ಗ್ವಾಲಿಯರನ್ನು ಆಂಗ್ಲರಿಂದ ವಶಕ್ಕೆ ಪಡೆಯಬೇಕೆಂದು ಸೂಚನೆ ನೀಡಿದಳು. ಗ್ವಾಲಿಯರನ ರಾಜ ಶಿಂದೆ ಬ್ರಿಟಿಷರ ಅನುಕರಣೆ ಮಾಡುತ್ತಿದ್ದರು. ರಾಣಿ ಲಕ್ಷ್ಮೀಬಾಯಿಯು ಮುಂದಾಳತ್ವ ವಹಿಸಿ ಗ್ವಾಲಿಯರನ್ನು ಗೆದ್ದು ಪೇಶ್ವೆಯವರ ಕೈಗಿಟ್ಟಳು.   ಸ್ವಾತಂತ್ರವೀರರ ಬಲಿದಾನ ಗ್ವಾಲಿಯರನ್ನು ರಾಣಿ ಗೆದ್ದ ಸುದ್ದಿ ಸರ್ ಹ್ಯೂ ರೋಜ್ಗೆ ತಲುಪಿತು. ಇನ್ನು ಸಮಯ ವ್ಯರ್ಥ ಮಾಡಿದರೆ ಆಂಗ್ಲರ ನಾಶವಾಗುವುದೆಂದು ಅರಿತು, ಅವನು ತನ್ನ ಸೈನ್ಯವನ್ನು ಗ್ವಾಲಿಯರನ ಕಡೆ ತಿರುಗಿಸಿದನು. ಜೂನ್ ೧೬ರಂದು ಆಂಗ್ಲರ ಸೈನ್ಯವು ಗ್ವಾಲಿಯರ‍ ತಲುಪಿತು. ರಾಣಿ ಲಕ್ಷ್ಮೀಬಾಯಿ ಮತ್ತು ಪೇಶ್ವೆಯವರು ಸರ್ ಹ್ಯೂ ರೋಜ್ನನ್ನು ಎದುರಿಸಲು ಸಿದ್ಧರಾದರು. ಗ್ವಾಲಿಯರನ ಪೂರ್ವ ಭಾಗವನ್ನು ರಕ್ಷಿಸುವ ಸಂಪೂರ್ಣ ಹೊಣೆಯನ್ನು ರಾಣಿ ತನ್ನ ಮೇಲೆ ಹೊತ್ತಳು. ಯುದ್ಧದಲ್ಲಿ ಲಕ್ಷ್ಮೀಬಾಯಿಯ ಧೈರ್ಯ ನೋಡಿ ಸೈನಿಕರಿಗೆ ಸ್ಫೂರ್ತಿ ಸಿಕ್ಕಿತು. ರಾಣಿಯ ದಾಸಿಯರಾದ ಮಂದಾರ ಮತ್ತು ಕಾಶಿಯೂ ಪುರುಷರ ವೇಷ ಧರಿಸಿ ಯುದ್ಧ ಮಾಡಲು ಬಂದರು. ರಾಣಿಯ ಶೌರ್ಯದಿಂದಾಗಿ ಆ ದಿನ ಆಂಗ್ಲರು ಪರಾಭವ ಹೊಂದಬೇಕಾಯಿತು. ಜೂನ್ ೧೮ ರಂದು ರಾಣೀ ಲಕ್ಷ್ಮೀಬಾಯಿಯ ಶೌರ್ಯದಿಂದ ಹತಾಶರಾದ ಆಂಗ್ಲರು ಗ್ವಾಲಿಯರನ್ನು ಎಲ್ಲ ದಿಕ್ಕುಗಳಿಂದ ಒಟ್ಟಿಗೆ ಆಕ್ರಮಿಸಿದರು. ಆಗ ರಾಣಿಯು ಆಂಗ್ಲರಿಗೆ ಶರಣಾಗದೆ ಅವರನ್ನು ಬೇಧಿಸಿ ಹೊರಗೆ ಹೋಗಲು ನಿರ್ಧರಿಸಿದಳು. ಶತ್ರುಗಳನ್ನು ಬೇಧಿಸಿ ಹೊರಹೋಗುವಾಗ ಒಂದು ನೀರಿನ ಪ್ರವಾಹ ನಡುವೆ ಬಂದಿತು. ರಾಣಿಯ ಬಳಿ ಯಾವಾಗಲೂ ಇರುವ ಕುದುರೆ ’ರಾಜರತ್ನ’ ಇರದ ಕಾರಣ ಮತ್ತೊಂದು ಕುದುರೆಯ ಜೊತೆ ರಾಣಿಯು ಯುಧ್ಹಕ್ಕೆ ಇಳಿದಿದ್ದಳು. ಆ ಕುದುರೆಗೆ ನೀರಿನ ಪ್ರವಾಹ ದಾಟಲು ಸಾಧ್ಯವಾಗದೆ ಅಲ್ಲಿಯೇ ಸುತ್ತಲೂ ಶುರುಮಾಡಿತು. ಮುಂದೇನಾಗಬಹುದೆಂದು ಅರಿತ ರಾಣಿ ತನ್ನನ್ನು ಬೆಂಬತ್ತಿ ಬರುತ್ತಿದ್ದ ಸೈನ್ಯವನ್ನು ಎದುರಿಸಿದಳು. ಆಕೆಗೆ ಬಿದ್ದ ಹೊಡೆತದಿಂದಾಗಿ ರಕ್ತಸಿಕ್ತಳಾಗಿ ಕೆಳಗೆ ಬಿದ್ದಳು. ಪುರುಷರ ವೇಷ ಧರಿಸಿದ್ದ ಕಾರಣ ಸೈನಿಕರಿಗೆ ಅದು ರಾಣಿ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವಳು ಬಿದ್ದ ತಕ್ಷಣ ಆಂಗ್ಲರು ಹೊರಟು ಹೋದರು. ರಾಣಿಯ ಸೇವಕರು ಆಕೆಯನ್ನು ಸಮೀಪವಿದ್ದ ಗಂಗಾದಾಸರ ಮಠಕ್ಕೆ ಕರೆದುಕೊಂಡು ಹೋದರು ಮತ್ತು ಆಕೆಗೆ ಗಂಗಾಜಲವನ್ನು ನೀಡಿದರು. ತನ್ನ ಶರೀರ ಆಂಗ್ಲರ ಕೈಗೆ ಸಿಗಬಾರದೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ರಾಣಿಯು ವೀರಮರಣವನ್ನಪ್ಪಿದಳು. ಜಗತ್ತಿನಾದ್ಯಂತ ಕ್ರಾಂತಿಕಾರರಿಗೆಲ್ಲ ಭಗತ ಸಿಂಗನ ತ್ಯಾಗ, ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಸಂಘಟನಾ ಶಕ್ತಿ ಹಾಗೆಯೇ ಝಾನ್ಸಿರಾಣಿಯ ಶೌರ್ಯವು ಸ್ಫೂರ್ತಿಯನ್ನು ನೀಡಿದೆ. ಇಂತಹ ವೀರಾಂಗನೆ ರಾಣಿಲಕ್ಷ್ಮೀಬಾಯಿಯ ಚರಣಗಳಲ್ಲಿ ನಮನಗಳು. 
೧೮೫೭ ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ವೀರರ ಗೌರವಾರ್ಥ ಭಾರತ ಸರಕಾರ ಬಿಡುಗಡೆ ಮಾಡಿದ ಅಂಚೆಚೀಟಿ      ಝಾನ್ಸಿ ರಾಣಿಯ ಗೌರವಾರ್ಥ ಭಾರತದ ಅಂಚೆಚೀಟಿ 

​ಔರಂಗಜೇಬನನ್ನು ೨೭ ವರ್ಷ ಉತ್ತರ ಹಿಂದೂಸ್ಥಾನದಿಂದ ದೂರವಿಡುವ ಸಂಭಾಜಿರಾಜ ! ಸಂಭಾಜಿರಾಜರು ತಮ್ಮ ಅಲ್ಪಾಯುಷ್ಯದಲ್ಲಿ ಮಾಡಿರುವ ಅಲೌಕಿಕ ಕಾರ್ಯಗಳ ಪರಿಣಾಮವು ಸಂಪೂರ್ಣ ಹಿಂದೂಸ್ಥಾನದ ಮೇಲಾಯಿತು. ಆದುದರಿಂದ ಪ್ರತಿಯೊಬ್ಬ ಹಿಂದೂ ಬಾಂಧವರು ಅವರ ಬಗ್ಗೆ ಕೃತಜ್ಞರಾಗಿರಬೇಕು. ಅವರು ಔರಂಗಜೇಬನ ಎಂಟು ಲಕ್ಷ ಸೈನ್ಯವನ್ನು ಧೈರ್ಯದಿಂದ ಎದುರಿಸಿದರು ಹಾಗೂ ಬಹಳಷ್ಟು ಮೊಘಲ್ ಸರದಾರರನ್ನು ಯುದ್ಧದಲ್ಲಿ ಸೋಲಿಸಿ ಅವರಿಗೆ ಓಡಲು ಭೂಮಿ ಸಾಲದಂತೆ ಮಾಡಿದರು. ಇದರಿಂದ ಔರಂಗಜೇಬನು ಮಹಾರಾಷ್ಟ್ರದಲ್ಲಿ ದೀರ್ಘಕಾಲದವರೆಗೆ ಹೋರಾಡುತ್ತಿದ್ದನು ಹಾಗೂ ಸಂಪೂರ್ಣ ಉತ್ತರ ಹಿಂದೂಸ್ಥಾನವು ಅವನ ದಬ್ಬಾಳಿಕೆಯಿಂದ ಮುಕ್ತಗೊಂಡಿತು. ಇದು ಸಂಭಾಜಿರಾಜರ ಅತ್ಯಂತ ಮಹತ್ವಪೂರ್ಣ ಕಾರ್ಯ ಎಂದು ಹೇಳಬಹುದು. ಅವರು ಒಂದು ವೇಳೆ ಔರಂಗಜೇಬನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ, ಅಥವಾ ಅವನ ಗುಲಾಮಗಿರಿಯನ್ನು ಸ್ವೀಕರಿಸಿದ್ದರೆ, ಅವನು ಎರಡು-ಮೂರು ವರ್ಷಗಳಲ್ಲಿ ಪುನಃ ಉತ್ತರ ಹಿಂದೂಸ್ಥಾನಕ್ಕೆ ಹೋಗುತ್ತಿದ್ದನು; ಆದರೆ ಸಂಭಾಜಿರಾಜರ ತೀವ್ರ ಹೋರಾಟದಿಂದ, ೨೭ ವರ್ಷಗಳ ಕಾಲ ಔರಂಗಜೇಬನು ದಕ್ಷಿಣದಲ್ಲಿ ಸಿಕ್ಕಿಬಿದ್ದನು ಹಾಗೂ ಇದರಿಂದ ಉತ್ತರದಲ್ಲಿ ಬುಂದೇಲಖಂಡ, ಪಂಜಾಬ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಹಿಂದೂಗಳ ಹೊಸ ಅಧಿಕಾರದ ಉದಯವಾಗಿ ಹಿಂದೂ ಸಮಾಜಕ್ಕೆ ಸಂರಕ್ಷಣೆ ಲಭಿಸಿತು. 

 ಸಂಭಾಜಿರಾಜರ ಸಾಮರ್ಥ್ಯದ ಬಗ್ಗೆ ಪೋರ್ತುಗೀಜರಿಗಿದ್ದ ಭಯ! 

 ಸಂಭಾಜಿರಾಜರು ಗೋವಾದ ಮೇಲೆ ಆಕ್ರಮಣ ಮಾಡಿ ಧರ್ಮಾಂಧ ಪೋರ್ತುಗೀಜರನ್ನು ವಶಕ್ಕೆ ತೆಗೆದುಕೊಂಡರು. ಅವರೊಂದಿಗೆ ಒಪ್ಪಂದ ಮಾಡಿ ಗೋವಾದ ಅವರ ಧರ್ಮಪ್ರಸಾರಕ್ಕೆ ತಡೆಯೊಡ್ಡಿದ್ದರಿಂದ ಗೋವಾ ಪ್ರದೇಶದಲ್ಲಿನ ಹಿಂದೂಗಳ ರಕ್ಷಣೆಯಾಯಿತು ಎಂಬುದು ಮರೆಯಲು ಅಸಾಧ್ಯವಾದ ಸಂಗತಿ. ಪೋರ್ತುಗೀಜರಿಗೆ ಸಂಭಾಜಿರಾಜರ ಬಗ್ಗೆ ಬಹಳ ಭಯವಿತ್ತು. ಅವರು ಆಂಗ್ಲರಿಗೆ ಬರೆದ ಪತ್ರದಲ್ಲಿ ‘ಸದ್ಯದ ಪರಿಸ್ಥಿತಿಯಲ್ಲಿ ಸಂಭಾಜಿ ಮಹಾರಾಜರೇ ಸರ್ವಶಕ್ತಿಮಾನರಾಗಿದ್ದಾರೆ, ಇದು ನಮ್ಮ ಅನುಭವವಾಗಿದೆ !’ ಎಂದು ನಮೂದಿಸಿದ್ದಾರೆ. ಶತ್ರುವಿನ ಈ ಪ್ರಮಾಣ ಪತ್ರವು ಮಹಾರಾಜರ ಸಾಮರ್ಥ್ಯದ ಕಲ್ಪನೆ ನೀಡುತ್ತದೆ. 

ನಿರಾಧಾರ ಮತಾಂತರಗೊಂಡವರಿಗೆ ಅಧಾರ ಸಂಭಾಜಿ ಮಹಾರಾಜರು!

ಶಿವಾಜಿ ಮಹಾರಾಜರು ನೇತಾಜಿ ಪಾಲಕರರನ್ನು ಪುನಃ ಹಿಂದೂ ಧರ್ಮಕ್ಕೆ ಬರಮಾಡಿಕೊಂಡ ವಿಷಯ ಎಲ್ಲರಿಗೂ ತಿಳಿದಿದೆ; ಆದರೆ ಸಂಭಾಜಿರಾಜರು ತಮ್ಮ ರಾಜ್ಯದಲ್ಲಿ ‘ಶುದ್ಧೀಕರಣಕ್ಕಾಗಿ’ ಸ್ವತಂತ್ರ ವಿಭಾಗವನ್ನು ಸ್ಥಾಪಿಸಿರುವುದು ಮಹತ್ತ್ವದ ವಿಷಯವಾಗಿದೆ. ಹರಸೂಲ ಎಂಬ ಊರಿನ ಕುಲಕರ್ಣಿ ಮನೆತನದ ಬ್ರಾಹ್ಮಣನ ಕಥೆಯು ಸಂಭಾಜಿರಾಜರ ಇತಿಹಾಸದಲ್ಲಿ ಬರೆದಿಡಲಾಗಿದೆ. ಒತ್ತಾಯಪೂರ್ವಕವಾಗಿ ಮುಸಲ್ಮಾನನಾಗಿದ್ದ ಈ ಕುಲಕರ್ಣಿಯು ಹಿಂದೂ ಧರ್ಮಕ್ಕೆ ಮರಳಲು ಬಹಳ ಪ್ರಯತ್ನಿಸುತ್ತಿದ್ದನು; ಆದರೆ ಸ್ಥಳೀಯ ಬ್ರಾಹ್ಮಣರು ಅವನಿಗೆ ಸಹಾಯ ಮಾಡುತ್ತಿರಲಿಲ್ಲ. ಕೊನೆಗೆ ಈ ಬ್ರಾಹ್ಮಣನು ಸಂಭಾಜಿರಾಜರನ್ನು ಭೇಟಿಯಾಗಿ ತನ್ನ ವ್ಯಥೆಯನ್ನು ಅವರ ಎದುರು ಮಂಡಿಸಿದನು. ಮಹಾರಾಜರು ತಕ್ಷಣ ಅವನ ಶುದ್ಧೀಕರಣದ ವ್ಯವಸ್ಥೆ ಮಾಡಿ ಅವನಿಗೆ ಪುನಃ ಸ್ವಧರ್ಮದಲ್ಲಿ ಪ್ರವೇಶ ನೀಡಿದರು. ರಾಜನ ಔದಾರ್ಯದಿಂದ ಬಹಳಷ್ಟು ಹಿಂದೂಗಳು ಪುನಃ ಸ್ವಧರ್ಮಕ್ಕೆ ಮರಳಿದರು!

ಸಂಭಾಜಿ ರಾಜರ ಜ್ವಲಂತ ಧರ್ಮಾಭಿಮಾನ!

ಜನರಿಗೆ ಸಂಭಾಜಿ ರಾಜರ ಬಲಿದಾನದ ಇತಿಹಾಸದ ಸರಿಯಾದ ಮಾಹಿತಿ ಇಲ್ಲ. ಸಂಭಾಜಿರಾಜರು ಫೆಬ್ರವರಿ ೧, ೧೬೮೯ ರಂದು ಸಂಗಮೇಶ್ವರದಲ್ಲಿ ಕೆಲವರ ಆಸ್ತಿಯ ಬಗೆಗಿನ ಜಗಳದ ಬಗ್ಗೆ ತಿಳಿದುಕೊಳ್ಳುತ್ತಿದ್ದಾಗ, ಗಣೋಜಿ ಶಿರ್ಕೆಯ ಪಿತೂರಿಯಿಂದ ಬಂಧಿಸಲ್ಪಟ್ಟರು. ಆಗ ಮೋಘಲರು ಲಕ್ಷಾಂತರ ಸೈನಿಕರ ಬಂದೋಬಸ್ತಿನಲ್ಲಿ ರಾಜರ ಮೆರವಣಿಗೆ ಮಾಡಿದರು. ಅವರಿಗೆ ಶಾರೀರಿಕ ಹಾಗೂ ಮಾನಸಿಕ ಯಾತನೆ ನೀಡಿದರು. ವಿದೂಷಕನ ಬಟ್ಟೆ ಹಾಕಿಸಿ, ಕಟ್ಟಿಗೆಯ ಪಂಜರದಲ್ಲಿ ಕೈ ಕಾಲುಗಳನ್ನು ಸಿಕ್ಕಿಸಲಾಯಿತು. ಆ ಕಾಲದ ಚಿತ್ರಕಾರನು ಬಿಡಿಸಿದ ರಕ್ತದಿಂದ ತುಂಬಿದ ಸ್ಥಿತಿಯಲ್ಲಿರುವ ಸಂಭಾಜಿರಾಜರ ಚಿತ್ರವು ಕರ್ನಾವತಿ (ಅಹಮದಾಬಾದ) ನಗರ್ ಎಂಬಲ್ಲಿ ಸಂಗ್ರಹಾಲಯದಲ್ಲಿ ಇಂದಿಗೂ ಇದೆ. ಆ ಚಿತ್ರದಲ್ಲಿ ಅಸಂಖ್ಯ ಯಾತನೆಗಳನ್ನು ಸಹಿಸುವ ಈ ತೇಜಸ್ವಿ ಹಿಂದೂ ರಾಜನ ದೃಷ್ಟಿಯು ಅತ್ಯಂತ ಕ್ರುದ್ಧವಾಗಿದೆ, ಎಂಬುದು ಕಾಣುತ್ತದೆ. ಸಂಭಾಜಿರಾಜರ ಸ್ವಾಭಿಮಾನದ ಪರಿಚಯವು ಆ ಕ್ರುದ್ಧ ದೃಷ್ಟಿಯಿಂದಲೇ ತಿಳಿಯುತ್ತದೆ. ಫೆಬ್ರವರಿ ೧೫, ೧೬೮೯ ರಂದು ಪೇಡಗಾವನ ಕೋಟೆಯಲ್ಲಿ ಔರಂಗಜೇಬನನೊಂದಿಗೆ ರಾಜರ ಮುಖತ ಭೇಟಿ ಆಯಿತು. ‘ಕಾಫೀರರ ರಾಜ ಸಿಕ್ಕಿದನು’ ಎಂದು ಔರಂಗಜೇಬನು ನಾಮಾಜು ಪಠಿಸಿ ಅಲ್ಲಾನ ಉಪಕಾರವೆಂದು ತಿಳಿದು ಅತ್ಯಾನಂದ ವ್ಯಕ್ತಪಡಿಸಿದನು. ಆಗ ಔರಂಗಜೇಬನ ಪ್ರಧಾನ ಮಂತ್ರಿ ಇರವಲಾಸಖಾನನು ಸಂಭಾಜಿರಾಜರಿಗೆ ಶರಣಾಗಲು ತಿಳಿಸಿದನು. ಸಂತಪ್ತಗೊಂಡ ಸಂಭಾಜಿ ರಾಜರು ಔರಂಗಜೇಬನಿಗಾಗಿ 'ಮುಜರಾ' ಮಾಡಲು ನಿರಾಕರಿಸಿದರು. ಅದೊಂದು ನಿರ್ಣಾಯಕ ಕ್ಷಣವಾಗಿತ್ತು. ಮಹಾರಾಜರು ವೈಯಕ್ತಿಕ ಸುಖದ ಅಭಿಲಾಷೆಗಿಂತಲೂ ಹಿಂದುತ್ವದ ಅಭಿಮಾನವನ್ನು ಮಹತ್ತ್ವದ್ದೆಂದು ತಿಳಿದಿದ್ದರು. ತಮ್ಮ ತಂದೆ ನಿರ್ಮಿಸಿದ ಸ್ವಾಭಿಮಾನದ ಮಹಾನ ಪರಂಪರೆಯನ್ನು ಅವರು ಕಾಪಾಡಿದರು. ಇದರ ನಂತರ ಎರಡು ದಿನಗಳಲ್ಲಿ ಔರಂಗಜೇಬನ ಅನೇಕ ಸರದಾರರು ಅವರ ಮನ ಒಲಿಸಲು ಪ್ರಯತ್ನಿಸಿದರು. ಅವರಿಗೆ ‘ಮುಸಲ್ಮಾನರಾದರೆ ಜೀವದಾನ ಸಿಗುವುದು’, ಎಂಬುದಾಗಿ ಹೇಳಲಾಯಿತು; ಆದರೆ ಸ್ವಾಭಿಮಾನಿ ಸಂಭಾಜಿ ರಾಜರು ಸತತವಾಗಿ ಈ ಮುಸಲ್ಮಾನ ಸರದಾರರನ್ನು ಅವಮಾನಗೊಳಿಸಿದರು. 

ಧರ್ಮಕ್ಕಾಗಿ ಬಲಿದಾನ ನೀಡಿ ಇತಿಹಾಸದಲ್ಲಿ ಅಮರರಾದ ಸಂಭಾಜಿ ರಾಜರು ! 

ಕೊನೆಗೆ ಆ ಪಾಪೀ ಔರಂಗಜೇಬ ಅವರ ಕಣ್ಣು ಕುಕ್ಕಿಸಿದನು, ನಾಲಿಗೆ ಕತ್ತರಿಸಿದನು ಆದರೂ ಮೃತ್ಯುವು ರಾಜನನ್ನು ಸ್ಪರ್ಷಿಸಲಿಲ್ಲ. ದುಷ್ಟ ಮೊಘಲ ಸರದಾರರು ಅವರಿಗೆ ಪ್ರಚಂಡ ಯಾತನೆ ನೀಡಿದರು. ಅವರ ದಿವ್ಯ ಧರ್ಮಾಭಿಮಾನದಿಂದಾಗಿ ಅವರಿಗೆ ಈ ಎಲ್ಲ ಕಷ್ಟಗಳನ್ನು ಅನುಭವಿಸಲೇಬೇಕಾಯಿತು. ಮಾರ್ಚ ೧೨, ೧೬೮೯ ರಂದು ಯುಗಾದಿ ಹಬ್ಬವಿತ್ತು. ಹಿಂದೂಗಳ ಹಬ್ಬದಂದು ಅವರನ್ನು ಅಪಮಾನಗೊಳಿಸಲು ಮಾರ್ಚ ೧೧ ಫಾಲ್ಗುಣ ಅಮಾವಾಸ್ಯೆಯಂದು ಸಂಭಾಜಿರಾಜರ ಕೊಲೆ ಮಾಡಲಾಯಿತು. ಅವರ ಮಸ್ತಕವನ್ನು ಬರ್ಚಿಗೆ ಚುಚ್ಚಿ ಮೊಘಲರು ಅವರನ್ನು ಅಪಮಾನಗೊಳಿಸಿ ಮೆರವಣಿಗೆ ಮಾಡಿದರು. ಈ ರೀತಿ ಫೆಬ್ರುವರಿ ೧ ರಿಂದ ಮಾರ್ಚ ೧೧ ರವರೆಗೆ ಹೀಗೆ ೩೯ ದಿನಗಳ ಯಮಯಾತನೆಯನ್ನು ಸಹಿಸಿ ಸಂಭಾಜಿರಾಜರು ಹಿಂದುತ್ವದ ತೇಜವನ್ನು ಬೆಳೆಸಿದರು. ಧರ್ಮಕ್ಕಾಗಿ ಬಲಿದಾನ ಮಾಡಿದ ಈ ರಾಜನು ಇತಿಹಾಸದಲ್ಲಿ ಅಮರನಾದನು. ಔರಂಗಜೇಬನು ಮಾತ್ರ ರಾಜಧರ್ಮವನ್ನು ತುಳಿಯುವ ಇತಿಹಾಸದ ದರಬಾರಿನಲ್ಲಿ ಅಪರಾಧಿಯಾದನು. 

 ಸಂಭಾಜಿ ರಾಜರ ಬಲಿದಾನದ ನಂತರ ಮಹಾರಾಷ್ಟ್ರದಲ್ಲಿ ನಡೆದ ಕ್ರಾಂತಿ!
 ಸಂಭಾಜಿ ರಾಜರ ಈ ಬಲಿದಾನದಿಂದ ಸಂಪೂರ್ಣ ಮಹಾರಾಷ್ಟ್ರವು ಹೊತ್ತಿ ಉರಿಯಿತು ಹಾಗೂ ಪಾಪಿ ಔರಂಗಜೇಬನ ಜೊತೆ ಮರಾಠರ ನಿರ್ಣಾಯಕ ಹೋರಾಟ ಪ್ರಾರಂಭವಾಯಿತು. ಆ ಕಾಲವನ್ನು ‘ಹುಲ್ಲಿನ ಕಡ್ಡಿಗೆ ಬರ್ಚಿಗಳು ಹುಟ್ಟಿಕೊಂಡವು ಹಾಗೂ ಮನೆಮನೆಗಳು ಕೋಟೆಗಳಾದವು, ಮನೆ ಮನೆಯಲ್ಲಿ ಮಾತೆ ಭಗಿನಿಯರೆಲ್ಲರೂ ತಮ್ಮ ಗಂಡಸರಿಗೆ ರಾಜನ ಹತ್ಯೆಯ ಸೇಡು ತೀರಿಸಲು ಹೇಳತೊಡಗಿದರು’, ಎಂದು ವರ್ಣಿಸಿದ್ದಾರೆ. ಸಂಭಾಜಿ ಮಹಾರಾಜರ ಬಲಿದಾನದಿಂದ ಮರಾಠರ ಸ್ವಾಭಿಮಾನವು ಪುನಃ ಜಾಗೃತವಾಯಿತು. ಇದು ಮುನ್ನೂರು ವರ್ಷಗಳ ಹಿಂದಿನ ರಾಷ್ಟ್ರ ಜೀವನದಲ್ಲಿನ ಅತ್ಯಂತ ಮಹತ್ತ್ವದ ಅಂಗವಾಗಿತ್ತು. ಇದರಿಂದ ಇತಿಹಾಸದಲ್ಲಿ ತಿರುವು ಮೂಡಿತು. ಜನರ ಬೆಂಬಲದಿಂದ ಮರಾಠರ ಸೈನ್ಯ ಬೆಳೆಯುತ್ತ ಹೋಯಿತು ಹಾಗೂ ಸೈನ್ಯದ ಸಂಖ್ಯೆಯು ಎರಡು ಲಕ್ಷದವರೆಗೆ ತಲುಪಿತು. ಅಲ್ಲಲ್ಲಿ ಮೊಘಲರಿಗೆ ಪ್ರಖರವಾದ ವಿರೋಧ ಪ್ರಾರಂಭವಾಯಿತು ಹಾಗೂ ಕೊನೆಗೆ ಮಹಾರಾಷ್ಟ್ರದಲ್ಲಿಯೇ ೨೭ ವರ್ಷಗಳ ನಿಷ್ಫಲ ಯುದ್ಧದ ನಂತರ ಔರಂಗಜೇಬನ ಅಂತ್ಯವಾಯಿತು. ಮೊಘಲರ ಅಧಿಕಾರ ಕ್ಷೀಣಸಿ ಹಿಂದೂಗಳ ಶಕ್ತಿಶಾಲಿ ಸಾಮ್ರಾಜ್ಯವು ಉದಯಗೊಂಡಿತು.  

೨೭ ವರ್ಷ ಔರಂಗಜೇಬನ ಪಾಶವಿ ಆಕ್ರಮಣದ ವಿರುದ್ಧ ಮರಾಠರು ಮಾಡಿದ ಹೋರಾಟದಲ್ಲಿ ಹಂಬೀರರಾವ, ಸಂತಾಜಿ, ಧನಾಜಿಯಂತಹ ಅನೇಕ ಯೋಧರಿದ್ದರು; ಆದರೆ ಈ ಹೋರಾಟಕ್ಕೆ ತಿರುವು ಮೂಡಿದ್ದು ಸಂಭಾಜಿ ರಾಜರ ಬಲಿದಾನದಿಂದ ಆಗಿರುವ ಜಾಗೃತಿಯಿಂದಲೇ ಎಂಬುದನ್ನು ಮರೆಯುವಂತಿಲ್ಲ.





ಚಿತ್ರದುರ್ಗದ ಪಾಳೆಗಾರರು

ಚಿತ್ರದುರ್ಗವು ಮಧ್ಯ ಕರ್ನಾಟಕದಲ್ಲಿದೆ. ಈಗ ಅದು ಜಿಲ್ಲೆಯ ಮುಖ್ಯ ಸ್ಥಳ. ಅದಕ್ಕೆ ತನ್ನದೇ ಆದ ರೋಚಕ ಇತಿಹಾಸವಿದೆ. ಹದಿನಾರರಿಂದ ಹದಿನೆಂಟನೆಯ ಶತಮಾನಗಳ ಮಧ್ಯಂತರದಲ್ಲಿ, ಅದು ಚಿತ್ರದುರ್ಗದ ಪಾಳೆಗಾರರ ವಂಶದ ರಾಜಧಾನಿಯಾಗಿತ್ತು. ಈ ರಾಜವಂಶವನ್ನು, ಮತ್ತಿ ತಿಮ್ಮಣ್ಣ ನಾಯಕನು ಸ್ಥಾಪಿಸಿದನು.(೧೫೬೮-೮೮) ಅವನದು ಬೇಡರ ಸಮುದಾಯಕ್ಕೆ ಸೇರಿದ ಕಾಮಗೇತಿ ವಂಶ. ತಿಮ್ಮಣ್ಣ ನಾಯಕನು ಹೊಳಲ್ಕೆರೆ, ಚಿತ್ರದುರ್ಗ ಮತ್ತು ಹಿರಿಯೂರು ಪ್ರದೇಶಗಳ ಒಡೆಯನಾಗಿದ್ದನು. ಅವನ ಪರಾಕ್ರಮವನ್ನು ಮೆಚ್ಚಿಕೊಂಡ ವಿಜಯನಗರ ಸಾಮ್ರಾಜ್ಯದ ಅರಸರು, ಆ ಪಾಳೆಯಪಟ್ಟನ್ನು ತಮ್ಮ ಆಶ್ರಯಕ್ಕೆ ತೆಗೆದುಕೊಂಡರು. ಅವನ ನಂತರ ಪಟ್ಟಕ್ಕೆ ಬಂದ ಓಬಣ್ಣ ನಾಯಕನು(೧೫೮೮-೧೬೦೨) ಚಿತ್ರದುರ್ಗದ ಕೋಟೆಯೊಳಗಡೆ, ಒಂದು ಪಟ್ಟಣವನ್ನು ನಿರ್ಮಿಸಿದನು. ಅವನ ವಾರಸುದಾರನಾದ ಕಸ್ತೂರಿರಂಗನಾಯಕನು(೧೬೦೨-೧೬೫೨) ಮಾಯಕೊಂಡ, ಅಣಜಿ, ಸಂತೆಬೆನ್ನೂರು ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡು ಪಾಳೆಯಪಟ್ಟನ್ನು ವಿಸ್ತರಿಸಿದನು. ಸಮರ್ಥ ಆಡಳಿತಗಾರನೂ ವೀರನೂ ಆದ ಇಮ್ಮಡಿ ಮದಕರಿ ನಾಯಕನು(೧೬೫೨-೭೪) ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದನು. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಆಡಳಿತಗಾರನನ್ನು ನೇಮಿಸಿದನು. ದುರದೃಷ್ಟವಶಾತ್, ಈ ಕ್ರಮದ ಪರಿಣಾಮವಾಗಿ ಒಳಜಗಳಗಳು ಹೆಚ್ಚಾದವು. ಪಾಳೆಯಗಾರರಿಗೂ ಈ ಪ್ರಾದೇಶಿಕ ಅಧಿಕಾರಿಗಳಿಗೂ ನಡುವೆ ಯುದ್ಧಗಳೂ ನಡೆಯುತ್ತಿದ್ದವು.   ಈ ಮನೆತನಕ್ಕೆ, ಸೇಡು-ಪ್ರತಿಸೇಡು, ರಕ್ತಪಾತಗಳ ಸುದೀರ್ಘ ಇತಿಹಾಸವೇ ಇದೆ. ಈ ಸನ್ನಿವೇಶವು ಚಿಕ್ಕಣ್ಣನಾಯಕ, ಲಿಂಗಣ್ಣನಾಯಕ, ಭರಮಣ್ಣನಾಯಕ ಮತ್ತು ದೊಣ್ಣೆ ರಂಗಣ್ಣನಾಯಕರ ಕಾಲದಲ್ಲಿ ಬಹಳ ತೀವ್ರವಾಯಿತು. ದಳವಾಯಿ ಮುದ್ದಣ್ಣ ಮತ್ತು ಅವನ ಸೋದರರು ಖಳನಾಯಕರ ಪಾತ್ರವನ್ನು ವಹಿಸಿದರು. ಅವರನ್ನು ಸೋಲಿಸಿ ಪಟ್ಟಕ್ಕೆ ಬಂದ ಭರಮಣ್ಣನಾಯಕ ಮತ್ತು ದೊಡ್ಡ ಮದಕರಿನಾಯಕರ ಕಾಲದಲ್ಲಿ ಸ್ವಲ್ಪ ಮಟ್ಟಿನ ಶಾಂತಿ ಹಾಗೂ ಸಮೃದ್ಧಿಗಳನ್ನು ಪಡೆಯುವುದು ಸಾಧ್ಯವಾಯಿತು. ಅದು, ರಾಜ್ಯದ ವಿಸ್ತರಣೆಯ ಕಾಲವೂ ಆಯಿತು. ಕಿರಿಯ ಮದಕರಿನಾಯಕನ ಕಾಲದಲ್ಲಿ(೧೭೫೪-೭೯) ಚಿತ್ರದುರ್ಗವು ಬಹಳ ಪ್ರಭಾವಶಾಲಿಯಾದ ರಾಜ್ಯವಾಗಿ ಬೆಳೆಯಿತು. ಅಧಿಕಾರಕ್ಕಾಗಿ ಸ್ಪರ್ಧಿಸುತ್ತಿದ್ದ ಹೈದರ್ ಆಲಿ ಮತ್ತು ಮರಾಠರಿಬ್ಬರೂ ಕಿರಿಯ ಮದಕರಿನಾಯಕನ ನೆರವನ್ನು ಬಯಸುತ್ತಿದ್ದರು. ಮೊದಲು ಹೈದರ್ ಆಲಿಯ ಪರವಾಗಿಯೇ ಇದ್ದ ಮದಕರಿನಾಯಕನು ಅವನಿಗೆ ಬಹಳ ನೆರವು ನೀಡಿದನು. ಅದರಲ್ಲಿಯೂ ನಿಡಗಲ್ಲನ್ನು ಗೆಲ್ಲುವ ಕಾರ್ಯದಲ್ಲಿ, ಅವನ ಸಹಾಯ ಮುಖ್ಯವಾಗಿತ್ತು. ಆದರೂ ಒಳಗೊಳಗೇ ಅವರಿಬ್ಬರ ನಡುವೆ, ಅತೃಪ್ತಿ ಹಾಗೂ ಅಸಮಾಧಾನಗಳ ಹೊಗೆಯಾಡುತ್ತಿತ್ತು. ಆದ್ದರಿಂದಲೇ, ಮರಾಠರು ಮತ್ತು ಹೈದರಾಬಾದಿನ ನಿಜಾಮರು ಒಂದಾಗಿ, ಹೈದರ್ ಆಲಿಯ ಮೇಲೆ ಆಕ್ರಮಣ ಮಾಡಿದಾಗ ಮದಕರಿನಾಯಕನು ಮೌನವಹಿಸಿದನು. ಇದರಿಂದ ಕುಪಿತನಾದ ಹೈದರ್‌ಆಲಿಯು ದೊಡ್ಡ ಸೈನ್ಯದ ಸಂಗಡ ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದನು. ಸುದೀರ್ಘವಾದ ಯುದ್ಧದ ನಂತರ ಮದಕರಿನಾಯಕನು ಸೋಲನ್ನು ಒಪ್ಪಬೇಕಾಯಿತು. ಅವನು ಸೆರೆಯಾಳಾಗಿ, ದೂರದ ಶ್ರೀರಂಗಪಟ್ಟಣದಲ್ಲಿ ಸಾಯುವುದರೊಂದಿಗೆ ಪಾಳೆಯಗಾರರ ವಂಶದ ಇತಿಹಾಸವು ಕೊನೆಯಾಯಿತು.   ಚಿತ್ರದುರ್ಗದ ರಕ್ತರಂಜಿತವೂ ರೋಮಾಂಚಕವೂ ಆದ ಚರಿತ್ರೆಯೂ ಚರಿತ್ರಕಾರರನ್ನೂ ಸಾಹಿತಿಗಳನ್ನೂ ಬಹುವಾಗಿ ಆಕರ್ಷಿಸಿದೆ. ಅವರು ಈ ವಂಶದ ಆಳ್ವಿಕೆಯ ಬೇರೆ ಬೇರೆ ಹಂತಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಹುಲ್ಲೂರು ಶ್ರೀನಿವಾಸ ಜೋಯಿಸರು ಈ ರಾಜವಂಶದ ಇತಿಹಾಸವನ್ನು ಕುರಿತು ವ್ಯಾಪಕವಾದ ಸಂಶೋಧನೆ ನಡೆಸಿದರು. ಎಂ.ಎಸ್. ಪುಟ್ಟಣ್ಣನವರು ಚಿತ್ರದುರ್ಗದ ರಾಜವಂಶದ ಏಳುಬೀಳುಗಳನ್ನು ಕುರಿತು ‘ಚಿತ್ರದುರ್ಗದ ಪಾಳೆಗಾರರು’ ಎಂಬ ಮಹತ್ವದ ಪುಸ್ತಕವನ್ನು ಬರೆದಿದ್ದಾರೆ. ಪ್ರಸಿದ್ಧ ಕಾದಂಬರಿಕಾರರಾದ ತ.ರಾ.ಸು. ಅವರು ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’, ‘ತಿರುಗುಬಾಣ’, ‘ಹೊಸಹಗಲು’ ಮತ್ತು ‘ವಿಜಯೋತ್ಸವ’ ಎಂಬ ಕಾದಂಬರಿಗಳ ಸರಣಿಯಲ್ಲಿ, ಪಾಳೆಗಾರರು ಮತ್ತು ಅವರ ದಳವಾಯಿಗಳ ನಡುವಿನ ಸಂಘರ್ಷವನ್ನು ಬಹಳ ಶಕ್ತಿಶಾಲಿಯಾದ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಹಾಗೆಯೇ, ಆವರಿಗೆ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟ ‘ದುರ್ಗಾಸ್ತಮಾನ’ ಕಿರಿಯ ಮದಕರಿನಾಯಕನ ಅಭಿವೃದ್ಧಿ ಮತ್ತು ದುರಂತಗಳನ್ನು ಕಟ್ಟಿಕೊಡುವ ಕಾದಂಬರಿ.   ಹೀಗೆ ಚಿತ್ರದುರ್ಗದ ಇತಿಹಾಸವು ಕೇವಲ ತನ್ನ ಕಥೆಯನ್ನು ಮಾತ್ರವಲ್ಲ, ಮಧ್ಯಕಾಲೀನ ಕರ್ನಾಟಕದ ಹತ್ತು ಹಲವು ಪಾಳೆಯಪಟ್ಟುಗಳ ಕಥೆಯನ್ನು ಪ್ರತಿಫಲಿಸುತ್ತದೆ.

ರಾಜ ವಿಕ್ರಮಾದಿತ್ಯ (೬ನೇ ಶತಮಾನ)

೬ನೇ ಶತಮಾನದಲ್ಲಿ, ರಾಜ ವಿಕ್ರಮಾದಿತ್ಯ ಉಜ್ಜೈನನ್ನು ಪೂರ್ಣವಾಗಿ ಆಳಿದನು. ಅವನ ರಾಜ್ಯದಲ್ಲಿ, ಎಲ್ಲಾ ಕಾಯಿದೆಗಳು ಮತ್ತು  ಕ್ರಮ ವ್ಯವಸ್ಥೆಯು ಧರ್ಮಶಾಸ್ತ್ರದ ಅನುಸಾರ ಆಧರಿಸಲ್ಪಟ್ಟಿತ್ತು ಮತ್ತು ಉತ್ತಮವಾಗಿದ್ದವು.   ಅವನ ರಾಜ್ಯವು ಅರಭಸ್ಥಾನದವರೆಗೂ ವಿಸ್ತಾರವಾಯಿತು ಮತ್ತು ರಾಜನು ಉದಾರ ಸ್ವಭಾವದವನಾಗಿದ್ದು ಯಾವಾಗಲೂ  ತನ್ನ ಜನರ ನೆಮ್ಮದಿಯನ್ನು ನೋಡುತ್ತಿದ್ದನು. ವಿಕ್ರಮಾದಿತ್ಯನ ತಂದೆ ಮಹೇಂದ್ರದತ್ತ, ತಾಯಿ ಸೌಮ್ಯದರ್ಶನ ಮತ್ತು ತಮ್ಮ ಬಾರತುಹರಿ. ಅರಭಸ್ಥಾನ ಆಳುವವರನ್ನು ವಿಕ್ರಮಾದಿತ್ಯನು ಸೋಲಿಸಿದನು ಮತ್ತು ಆ ಪ್ರದೇಶವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. “ಬರಹಂ ಭೀನ್ ಸೋಯಿ" ಎಂಬ ಪದ್ಯದಲ್ಲಿ ಈ ಜಯವನ್ನು ಸುಂದರವಾಗಿ ವರ್ಣಿಸಲಾಗಿದೆ. ವಿಕ್ರಮಾದಿತ್ಯನು ೬೦ ವರ್ಷಗಳ ಆಳುವಿಕೆಯಲ್ಲಿ, ೨೫ ವರ್ಷ ಯುದ್ಧದಲ್ಲಿ ಕಾಲಕಳೆದನು. ಉದಾರ ಸ್ವಭಾವದ ಪ್ರಭುವಾಗಿದ್ದು ಯಾವಾಗಲೂ ಅವನ ಜನರ ನೆಮ್ಮದಿಗಾಗಿ ಯೋಚಿಸಿದನು ಮತ್ತು ಹಾಗೆಯೇ ಆಳಿದನು. ಅವನು ಶೈವ ಧರ್ಮದ ಅನುಯಾಯಿ ಆಗಿದ್ದರೂ ಸಹ, ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಿದನು. ಧನವಂತ್ರಿ, ಶಪಾನಕ, ಅಮರ ಸಿಂಗ್ ಶಂಕು, ವೇಟಲ್ ಭಟ್, ಖಾರಪರ, ಕಾಳಿದಾಸ, ವರಾಹಮಿಹಿರ ಮತ್ತು ವಾರುಚೀ ಇವು ಅವನ ಮಂತ್ರಾಲೋಚನ ಗೃಹದ ೯ ರತ್ನಗಳು. - ಪರಮಪೂಜ್ಯ ಪರಶುರಾಮ ಮಾಧವ ಪಾಂಡೆ ಮಾಹಾರಾಜರು, ಅಕೋಲಾ, ಮಹಾರಾಷ್ಟ್ರ.

ಚಾವುಂಡರಾಯ (ಕ್ರಿ.ಶ.೯೪೦-೯೮೯)

ಚಾವುಂಡರಾಯನು ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಕನೆಂದು ಪ್ರಸಿದ್ಧನಾಗಿರುವ ಹಾಗೆ, ಸಾಹಿತಿಯೆಂದು ಹೆಸರುವಾಸಿಯಾಗಿಲ್ಲ. ಅವನು, ತನ್ನ ಹುಟ್ಟು ಮತ್ತು ಆಸಕ್ತಿಗಳಿಂದ ಜೈನಧರ್ಮಕ್ಕೆ ಸೇರಿದವನು. ಆದರೆ, ತಾನು ಮೊದಲು ಬ್ರಹ್ಮಕ್ಷತ್ರಿಯವಂಶಕ್ಕೆ ಸೇರಿದ್ದು, ಅನಂತರ ಕ್ಷತ್ರಿಯಧರ್ಮಕ್ಕೆ ಸೇರಿದೆನೆಂದು ಹೇಳಿಕೊಳ್ಳುತ್ತಾನೆ. ಯುದ್ಧತಂತ್ರದಲ್ಲಿ ಪರಿಣಿತನಾಗಿದ್ದ ಚಾವುಂಡರಾಯನು, ಮಾರಸಿಂಹ-,(೯೬೩-೯೭೪) ಮತ್ತು ನಾಲ್ಕನೆಯ ರಾಚಮಲ್ಲರ (೯೭೪-೯೯೯) ಆಳ್ವಿಕೆಯಲ್ಲಿ ಕಾರ್ಯನಿರತನಾಗಿದ್ದನೆಂದು ಹೇಳಲಾಗಿದೆ. ಕ್ರಿ.. ೯೯೯-೧೦೦೪ ಅವಧಿಯಲ್ಲಿ ರಾಜ್ಯಭಾರ ಮಾಡಿದ ರಾಚಮಲ್ಲ- ಅಥವಾ ರಕ್ಕಸಗಂಗನ ಕಾಲದಲ್ಲಿಯೂ ಸ್ವಲ್ಪ ಸಮಯ ಚಾವುಂಡರಾಯನು ಇದ್ದಿರಬಹುದೆಂಬ ಊಹೆಗೆ ಕೆಲವು ಪುರಾವೆಗಳಿವೆ. ರಾಜರುಗಳು, ದಕ್ಷಿಣ ಕರ್ನಾಟಕದ, ಪಶ್ಚಿಮ ತಲಕಾಡು ಗಂಗರ ಪ್ರಸಿದ್ಧವಾದ ವಂಶಕ್ಕೆ ಸೇರಿದವರುಚಾವುಂಡರಾಯನು, ಮಂತ್ರಿಯೂ ಸೇನಾನಾಯಕನೂ ಆಗಿದ್ದರಿಂದ, ಬಹಳ ಪ್ರಭಾವಶಾಲಿಯಾಗಿದ್ದನು. ರಾಜಾದಿತ್ಯ, ವಜ್ಜಳದೇವ, ಗೋವಿಂದ ಮುಂತಾದ ರಾಜರುಗಳೊಂದಿಗೆ, ಬಾಗೆಯೂರಕೋಟೆ, ಉಚ್ಚಂಗಿಕೋಟೆ, ಗೋಣಿಯೂರ ಬಯಲು ಇತ್ಯಾದಿ ಊರುಗಳಲ್ಲಿ, ಅವನು ನಡೆಸಿದ ಯುದ್ಧಗಳನ್ನು ಕುರಿತ ವಿವರಗಳು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದಾಖಲೆಯಾಗಿವೆ. ಅವನು, ತನ್ನ ಪರಾಕ್ರಮದ ಕುರುಹಾಗಿ ರಣರಂಗಸಿಂಗ, ಸಮರ ಪರಶುರಾಮ ಮುಂತಾದ ಬಿರುದುಗಳನ್ನೂ ಪಡೆದಿದ್ದಾನೆ. ಆದರೂ, ಇಂಥ ದಾಖಲೆಗಳು ಚಾವುಂಡರಾಯನ ಪರಾಕ್ರಮದ ಪ್ರಶಂಸೆಯಲ್ಲಿ ನಿರತವಾಗಿರುವಷ್ಟು, ಯುದ್ಧಗಳ ಬಗೆಗಿನ ವಿವರಗಳನ್ನು ದಾಖಲೆ ಮಾಡುವ ಆಸಕ್ತಿ ತೋರಿಸುವುದಿಲ್ಲ.
 ಚಾವುಂಡರಾಯನ ಸಾಹಿತ್ಯಸೃಷ್ಟಿಯು, ಕ್ರಿ.. ೯೭೮ ರಲ್ಲಿ ರಚಿತವಾದಚಾವುಂಡರಾಯಪುರಾಣಕ್ಕೆಸೀಮಿತವಾಗಿದೆ. ಇದನ್ನುತ್ರಿಷಷ್ಠಿಲಕ್ಷಣಮಹಾಪುರಾಣವೆಂದೂ ಕರೆಯಲಾಗಿದೆ. ಇದು, ಪಂಡಿತರಲ್ಲದ ಸಾಮಾನ್ಯ ಜೈನರಿಗಾಗಿ ರಚಿತವಾಗಿರುವ ಪುಸ್ತಕ. ಇದರಲ್ಲಿ, ಇಪ್ಪತ್ನಾಲ್ಕು ಜೈನ ತೀರ್ಥಂಕರರುಗಳ ಜೀವನವನ್ನು ಸರಳವಾದ ಗದ್ಯದಲ್ಲಿ ನಿರೂಪಿಸಲಾಗಿದೆ. ವೃಷಭನಾಥನಿಂದ ಮೊದಲಾಗಿ ವರ್ಧಮಾನ ಮಹಾವೀರನವರೆಗೆ, ಎಲ್ಲ ತೀರ್ಥಂಕರರೂ ಇದರ ವ್ಯಾಪ್ತಿಯೊಳಗೆ ಬರುತ್ತಾರೆ. ಇಪ್ಪತ್ನಾಲ್ಕರ ಸಂಖ್ಯೆಗೆ, ಇತರ ಜೈನಮಹನೀಯರನ್ನೂ ಸೇರಿಸುವುದರಿಂದ ೬೩ ಜನರಾಗುತ್ತಾರೆ. ಚಾವುಂಡರಾಯಪುರಾಣವು, ಸಂಸ್ಕೃತದಲ್ಲಿ ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರು ರಚಿಸಿರುವ ಮಹಾಪುರಾಣ ಮತ್ತು ಪಂಪನ ಆದಿಪುರಾಣಗಳಿಂದ ಪ್ರಭಾವಿತವಾಗಿದೆ. ದೊಡ್ಡ ವಿದ್ವಾಂಸನಾಗಿದ್ದ ಚಾವುಂಡರಾಯನು, ಅನೇಕ ಸಂಸ್ಕೃತ ಮತ್ತು ಪ್ರಾಕೃತ ಕೃತಿಗಳಿಂದ, ಹಲವು ವಾಕ್ಯಗಳನ್ನು ಉದ್ಧರಿಸುತ್ತಾನೆ. ಚಾವುಂಡರಾಯಪುರಾಣದಲ್ಲಿ ಜೈನ ಮಾದರಿಯನ್ನು ಅನುಸರಿಸುವ ರಾಮಾಯಣದ ಕಥೆಯೂ ಸಂಗ್ರಹ ರೂಪದಲ್ಲಿ ಬಂದಿದೆ.
 ಅಲ್ಲೊಂದು ಇಲ್ಲೊಂದು ಪದ್ಯವು ಬಂದರೂ, ಕೂಡ ಚಾವುಂಡರಾಯಪುರಾಣವು ಕನ್ನಡದ ಮೊದಮೊದಲ ಗದ್ಯಕೃತಿಗಳಲ್ಲಿ ಒಂದು. ಅದು ತನ್ನ ಕಾಲದ ಒಂದು ಬಗೆಯ ಕನ್ನಡಕ್ಕೆ, ಕನ್ನಡಿ ಹಿಡಿಯುತ್ತದೆ. ಸಾಹಿತ್ಯದ ವಿದ್ಯಾರ್ಥಿಗೆ ಪುಸ್ತಕವು ಬಹಳ ನೀರಸವಾಗಿದೆಯೆಂದು ಹೇಳದೆ ವಿಧಿಯಿಲ್ಲ. ಅದು, ತಾನು ಹೇಳಬೇಕಾದ ಸಂಗತಿಗಳನ್ನು ಗದ್ಯೀಯ(ಪ್ರೊಸಾಯಿಕ್) ಎನ್ನಬಹುದಾದ ಶೈಲಿಯಲ್ಲಿ ಹೇಳುತ್ತದೆ.
 ಚಾವುಂಡರಾಯನು ಬರೆದಿರುವ ಇನ್ನೊಂದು ಕೃತಿಯು, ‘ಚರಿತ್ರಸಾರ’. ಅದು ಸಂಸ್ಕೃತದಲ್ಲಿದೆ. ಅದು ಜೈನಧರ್ಮಕ್ಕೆ ಸೇರಿದ ಸನ್ಯಾಸಿಗಳು ಮತ್ತು ಗೃಹಸ್ಥರ ಗುಣ-ಲಕ್ಷಣಗಳನ್ನೂ ವರ್ತನೆಯನ್ನೂ ವಿವರಿಸುವ ಪುಸ್ತಕ.
 ಹೀಗೆ, ಒಂದೆರಡು ಗ್ರಂಥಗಳನ್ನು ಬರೆದಿದ್ದರೂ ಚಾವುಂಡರಾಯನು ಪ್ರಸಿದ್ಧವಾಗಿರುವುದು, ಶ್ರವಣಬೆಳಗೊಳದಲ್ಲಿರುವ ಭಗವಾನ್ ಬಾಹುಬಲಿಯ ಏಕಶಿಲಾ ವಿಗ್ರಹದ ಸ್ಥಾಪನೆಗೆ ಕಾರಣನಾದವನೆಂದು. ಚಂದ್ರಗಿರಿ ಬೆಟ್ಟದ ಮೇಲೆ ನಿಂತಿರುವ ಭವ್ಯವಿಗ್ರಹದ ಪಾದಮೂಲದಲ್ಲಿರುವ ಶಾಸನಗಳು, ಸಂಗತಿಯನ್ನು ಖಚಿತಪಡಿಸುತ್ತವೆ. ಶಾಸನಗಳು ಮರಾಠೀ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಇರುವುದು, ಕುತೂಹಲಕಾರಿಯಾದ ಸಂಗತಿ. ಚಾವುಂಡರಾಯನು ವಿಗ್ರಹದ ಪೂಜೆ ಮತ್ತು ನಿರ್ವಹಣೆಗಳಿಗೆ ಅಗತ್ಯವಾದ ದಾನ ದತ್ತಿಗಳನ್ನೂ ಉದಾರವಾಗಿ ನೀಡಿದನು. ಸೇವೆಯನ್ನು ನಂತರ ಬಂದಿರುವ ಅನೇಕ ಪುಸ್ತಕಗಳು ದಾಖಲಿಸಿವೆ ಮತ್ತು ಪ್ರಶಂಸಿವೆ.
 ರನ್ನ, ನಾಗಚಂದ್ರ, ನೇಮಿಚಂದ್ರಯತಿ ಮುಂತಾದ ಕವಿಗಳು ಚಾವುಂಡರಾಯನ ಸಾಹಿತ್ಯಪ್ರೇಮವನ್ನು ಪ್ರಶಂಸಿದ್ದಾರೆ.
 ಹೀಗೆ, ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ರಾಜಕಾರಣಿ ಮತ್ತು ಕಲಾಪೋಷಕನಾಗಿ ಚಾವುಂಡರಾಯನ ಸ್ಥಾನವು ಭದ್ರವಾಗಿದೆ.

ದಾನಚಿಂತಾಮಣಿ ಅತ್ತಿಮಬ್ಬೆ

ಅತ್ತಿಮಬ್ಬೆಯು ಪ್ರಾಚೀನ ಕರ್ನಾಟಕದ ಅತ್ಯಂತ ಪ್ರಸಿದ್ಧ ಮಹಿಳೆಯರಲ್ಲಿ ಒಬ್ಬಳು. ಆಕೆಯ ಆಶ್ರಿತರಲ್ಲಿ ಒಬ್ಬನಾದ ಮಹಾಕವಿರನ್ನನು ತನ್ನ ’ಅಜಿತಪುರಾಣ’ದಲ್ಲಿ ಅತ್ತಿಮಬ್ಬೆಯನ್ನು ತುಂಬು ಮನಸ್ಸಿನಿಂದ ಪ್ರಶಂಸಿದ್ದಾನೆ. ಪ್ರಾಯಶಃ ರನ್ನನಿಂದಲೇ ಬರೆಯಲ್ಪಟ್ಟ, ಗದಗು ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕಿರುವ ಒಂದು ಶಾಸನದಲ್ಲಿ ಮತ್ತು ಪೊನ್ನನ ’ಶಾಂತಿಪುರಾಣ’ದಲ್ಲಿ ಅತ್ತಿಮಬ್ಬೆಯನ್ನು ಕುರಿತ ಮಾಹಿತಿಗಳು ದೊರಕಿವೆ.   ಅತ್ತಿಮಬ್ಬೆಯು ಹತ್ತನೆಯ ಶತಮಾದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದಳು. ಅವಳ ಪೂರ್ವಜರು, ಈಗ ಆಂಧ್ರಪ್ರದೇಶದಲ್ಲಿರುವ ವೆಂಗಿಮಂಡಲದ ಪುಂಗನೂರು ಪ್ರದೇಶದಿಂದ ಬಂದವರು. ಮಲ್ಲಪ್ಪಯ್ಯ ಮತ್ತು ಅಪ್ಪಕಬ್ಬೆ ಅವಳ ತಾಯಿ-ತಂದೆಯರು. ಅವಳ ತಂದೆಯು ಕಲೆ ಮತ್ತು ಸಾಹಿತ್ಯಗಳ ದೊಡ್ಡ ಪೋಷಕನಾಗಿದ್ದನು. ಪೊನ್ನನು ಅವನ ಆಶ್ರಿತನಾಗಿದ್ದವನು. ಚಾಲುಕ್ಯ ಚಕ್ರವರ್ತಿಯಾದ ಆಹವಮಲ್ಲ ಸೋಮೇಶ್ವರನ ಸಮರ್ಥ ಸೇನಾನಿಯಾಗಿದ್ದ ನಾಗದೇವನು ಅತ್ತಿಮಬ್ಬೆಯ ಪತಿ. ಅತ್ತಿಮಬ್ಬೆಯ ಸೋದರಿಯಾದ ಗುಂಡಮಬ್ಬೆಯೂ ಅವನ ಪತ್ನಿಯಾಗಿದ್ದಳು. ಅಣ್ಣಿಗದೇವನು ಅತ್ತಿಮಬ್ಬೆಯ ಮಗ. ನಾಗದೇವನ ಆಕಾಲಮರಣದ ನಂತರ ಗುಂಡಮಬ್ಬೆಯು ಸಹಗಮನ ಮಾಡಿದಳು. ತನ್ನ ಪತಿ ಮತ್ತು ಸೋದರಿಯರನ್ನು ಕಳೆದುಕೊಂಡ ವಿಷಾದದಲ್ಲಿ ಮುಳುಗಿದ ಅತ್ತಿಮಬ್ಬೆಯು ದುಃಖವನ್ನು ನುಂಗಿಕೊಂಡು ಧಾರ್ಮಿಕವಾದ ಸರಳ ಜೀವನವನ್ನು ನಡೆಸಿದಳು. ಅವಳ ಜೀವನವು ಕಲೆಗಳು ಮತ್ತು ಧರ್ಮದ ಪುನರುಜ್ಜೀವನಕ್ಕೆ ಮೀಸಲಾಯಿತು. ಪರೋಪಕಾರದಲ್ಲಿ ಮಗ್ನವೂ ಅತ್ಯಂತ ಸರಳವೂ ಆದ ಜೀವನವನ್ನು ನಡೆಸಿದ ಅತ್ತಿಮಬ್ಬೆಯು ’ದಾನಚಿಂತಾಮಣಿ’ ಎಂಬ ಬಿರುದನ್ನು ಪಡೆದಳು.   ಅತ್ತಿಮಬ್ಬೆಯು ಲಕ್ಕುಂಡಿಯಲ್ಲಿ ಒಂದು ವಿಶಾಲವಾದ ಜೈನ ಬಸದಿಯನ್ನು ನಿರ್ಮಿಸಿದಳು. (ಕ್ರಿ.ಶ. ೧೦೦೭) ಆ ದೇವಾಲಯದ ನಿರ್ವಹಣೆಗೆ ಅಗತ್ಯವಾದ ದಾನ - ದತ್ತಿಗಳನ್ನೂ ಅವಳೇ ನೀಡಿದಳು. ೧೫೦೦ ರತ್ನಖಚಿತವಾದ ಬಂಗಾರದ ಜಿನಬಿಂಬಗಳನ್ನು ಮಾಡಿಸಿ ಭಕ್ತರಿಗೆ ದಾನವಾಗಿ ನೀಡಿದಳು. ಪೊನ್ನನ ’ಶಾಂತಿಪುರಾಣ’ದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳ ಮೇಲೆ ಬರೆಸಿ ವಿದ್ವಾಂಸರಿಗೆ ವಿತರಣೆ ಮಾಡಿದಳು.   ಅವಳ ಮರಣದ ನಂತರ ಸ್ಥಾಪಿತವಾದ ಅನೇಕ ಶಾಸನಗಳು ಮತ್ತು ನಂತರದ ಪೀಳಿಗೆಗಳ ಹಲವು ಕವಿಗಳು ಅವಳ ಹಿರಿಮೆಯನ್ನು ಹೊಗಳಿದ್ದಾರೆ. ಆದರೆ, ರನ್ನನು ರಚಿಸಿರುವ ಪದ್ಯಗಳು ತಮ್ಮ ಸಾಹಿತ್ಯಕ ಗುಣಕ್ಕಾಗಿಯೂ ಸ್ಮರಣೀಯವಾಗಿವೆ. ಅವನು ಅವಳ ಪಾವಿತ್ರ್ಯವನ್ನು ಗಂಗಾನದಿಯ ನೀರಿಗೆ, ಬಿಳಿಯ ಆರಳೆಗೆ ಮತ್ತು ಕೊಪ್ಪಳನಗರದಲ್ಲಿರುವ ಪವಿತ್ರವಾದ ಬೆಟ್ಟಕ್ಕೆ ಹೋಲಿಸಿದ್ದಾನೆ.

ಅಮೋಘವರ್ಷ ನೃಪತುಂಗ (ಕ್ರಿ.ಶ.814-878)

ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಹೆಸರುವಾಸಿಯಾದ ಚಕ್ರವರ್ತಿಗಳಲ್ಲಿ ನೃಪತುಂಗನೂ ಒಬ್ಬನು. ಇದಕ್ಕೆ ಕೇವಲ ಅವನ ಯುದ್ಧವಿದ್ಯೆಯಲ್ಲಿನ ಪರಿಣತಿ ಕಾರಣವಲ್ಲ. ಕನ್ನಡನಾಡು ಎಂಬ ಪರಿಕಲ್ಪನೆಯನ್ನು ರೂಪಿಸುವುದರಲ್ಲಿ ಅವನು ವಹಿಸಿದ ಪಾತ್ರ ಹಾಗೂ ಕರ್ನಾಟಕದ ಸಂಸ್ಕೃತಿಗೆ ಅವನು ನೀಡಿದ ವಿಶಿಷ್ಟ ಕಾಣಿಕೆಗಳು ಈ ಮನ್ನಣೆಗೆ ಕಾರಣವಾಗಿವೆ. ರಾಷ್ಟ್ರಕೂಟ ರಾಜವಂಶಕ್ಕೆ ಸೇರಿದ ನೃಪತುಂಗನು ತನ್ನ ತಂದೆಯಾದ ಮೂರನೆಯ ಗೋವಿಂದನ ನಂತರ ಪಟ್ಟಕ್ಕೆ ಬಂದನು. ಬರೋಡಾ ಮತ್ತು ಸಂಜಾನಗಳ್ಲಿ ದೊರೆತಿರುವ ತಾಮ್ರಪತ್ರಗಳು, ಮಣ್ಣೆಯಲ್ಲಿ ಸಿಕ್ಕಿರುವ ಶಿಲಾಶಾಸನ ಹಾಗೂ ಅರೇಬಿಯಾದಿಂದ ಬಂದ ಪ್ರವಾಸಿ ಸುಲೈಮಾನನ ಬರವಣಿಗೆಯು ನೃಪತುಂಗನ ಆಳ್ವಿಕೆಯನ್ನು ಕುರಿತು ಸಮೃದ್ಧವಾದ ಮಾಹಿತಿಯನ್ನು ಒದಗಿಸುತ್ತವೆ. ಈಗ ಆಂಧ್ರಪ್ರದೇಶದಲ್ಲಿದ್ದು ಮಳಖೇಡ್ ಎಂದು ಕರೆಸಿಕೊಳ್ಳುತ್ತಿರುವ ಮಾನ್ಯಖೇಟವು ಅವನ ರಾಜಧಾನಿಯಾಗಿತ್ತು.   ನೃಪತುಂಗನ ಆಳ್ವಿಕೆಯುದ್ದಕ್ಕೂ ಅವನಿಗೆ ತನ್ನ ಸೋದರಮಾವನಾದ ಕಕ್ಕ ಮತ್ತು ಸಮರ್ಥ ಸೇನಾನಿಯಾದ ಬಂಕೆಯನ ನೆರವು ದೊರಕಿತು. ಹೊರಗಿನ ಮತ್ತು ಒಳಗಿನ ಶತ್ರುಗಳ ಬಾಹುಳ್ಯದಿಂದ ಅವನ ಆಡಳಿತದ ಮೊದಲ ಹಂತವು ಯುದ್ಧಮಯವಾಗಿತ್ತು. ಅವನ ನೆರೆಹೊರೆಯ ರಾಜರುಗಳಾದ ಗಂಗರು, ಗುರ್ಜರ ಪ್ರತಿಹಾರಿಗಳು ಮತ್ತು ಪಲ್ಲವರು ಯಾವಾಗಲೂ ಈ ಕಿರಿಯ ದೊರೆಯನ್ನು ಸೋಲಿಸಲು ಹೊಂಚುಹಾಕುತ್ತಿದ್ದರು. ಇಮ್ಮಡಿ ವಿಜಯಾದಿತ್ಯ ಮತ್ತು ಶಂಕರಗಣರು ಅವನ ಆಂತರಿಕ ಶತ್ರುಗಳಾಗಿದ್ದರು. ಆದರೂ ಗಂಗ ಶಿವಮಾರ, ವೆಂಗಿಯ ವಿಜಯಾದಿತ್ಯ ಮತ್ತು ಗಂಗ ರಾಚಮಲ್ಲರ(ಕ್ರಿ.ಶ.೮೩೧) ಮೇಲೆ ನಿರ್ಣಾಯಕವಾದ ಗೆಲುವುಗಳನ್ನು ಪಡೆಯುವುದರ ಮೂಲಕ ನೃಪತುಂಗನು ತನ್ನ ಸಾಮರ್ಥ್ಯವನ್ನು ಸ್ಪಷ್ಟಪಡಿಸಿದನು. ಆದರೆ ಗಂಗರು ಮತ್ತು ರಾಷ್ಟ್ರಕೂಟರ ನಡುವಿನ ವೈಮನಸ್ಯವು ಹಾಗೆಯೇ ಮುಂದುವರಿಯಿತು. ನೃಪತುಂಗನ ಮಗಳಾದ ಚಂದ್ರಬಲಬ್ಬೆ ಮತ್ತು ಗಂಗ ರಾಜ ಮೊದಲನೆಯ ಬೂತುಗನ ನಡುವೆ ನಡೆದ ವಿವಾಹವು ಈ ವೈಷಮ್ಯವನ್ನು ಕೊಂಚ ಕಾಲ ಹಿನ್ನೆಲೆಗೆ ಸರಿಸಿತು.   ಅನಂತರ ನೃಪತುಂಗನು ತನ್ನ ಸ್ವಂತ ಮಗನಾದ ಕೃಷ್ಣ ಮತ್ತು ತನ್ನ ಸೇನಾಧಿಪತಿಯಾಗಿದ್ದ ಬಂಕೆಯನ ಮಗ ಧ್ರುವನ ವಿರೋಧವನ್ನು ಎದುರಿಸಬೇಕಾಯಿತು. ಗುರ್ಜರ ಪ್ರತಿಹಾರ ವಂಶಕ್ಕೆ ಸೇರಿದ ಮೊದಲನೆಯ ಭೋಜನು ಇನ್ನೊಬ್ಬ ಪ್ರಬಲ ಶತ್ರುವಾಗಿದ್ದನು. ಈ ಎಲ್ಲ ಸಂಘರ್ಷಗಳಲ್ಲಿ ಬಹುಮಟ್ಟಿಗೆ ಜಯಶಾಲಿಯಾಗಿಯೇ ಉಳಿದಿದ್ದು ನೃಪತುಂಗನ ಸಾಮರ್ಥ್ಯ ಹಾಗೂ ಧೈರ್ಯಗಳಿಗೆ ಸಾಕ್ಷಿಯಾಗಿದೆ. ಇವರಲ್ಲದೆ ಅಂಗ, ವಂಗ, ಮಗಧ ಮತ್ತು ಮಾಳವ ರಾಜರುಗಳ ಮೇಲೆ ಕೂಡ ಅವನು ವಿಜಯಿಯಾದನೆಂದು ಹೇಳಲಾಗಿದೆ. ನರಲೋಕಚಂದ್ರ ಮತ್ತು ಸರಸ್ವತೀ ತೀರ್ಥಾವತಾರ ಎನ್ನುವುದು ಅವನ ಅನೇಕ ಬಿರುದುಗಳಲ್ಲಿ ಎರಡು.   ನೃಪತುಂಗನ ಆಳ್ವಿಕೆಯು ಕೇವಲ ಯುದ್ಧ ಮತ್ತು ರಕ್ತಪಾತಗಳಿಂದ ತುಂಬಿರಲಿಲ್ಲ. ಅವನು ಕಲೆ ಹಾಗೂ ಸಂಸ್ಕೃತಿಗಳ ಪೋಷಕನೂ ದಾರ್ಶನಿಕನೂ ಆಗಿದ್ದನು. ಶ್ರೀ ವಿಜಯನ ಕವಿರಾಜಮಾರ್ಗದ ರಚನೆಯಲ್ಲಿ ಅವನು ವಹಿಸಿದ ಪಾತ್ರವು ಚೆನ್ನಾಗಿ ದಾಖಲೆಯಾಗಿದೆ. ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ ಕೃತಿಯಾದ ಕವಿರಾಜಮಾರ್ಗವು ಅವನಿಂದಲೇ ರಚಿತವಾದುದೆಂದು ನಂಬಲಾಗಿತ್ತು. ಆ ಗ್ರಂಥದ ಆಶಯಗಳಿಗೆ ಚಕ್ರವರ್ತಿಯ ಸಮ್ಮತಿ ಇತ್ತು ಎನ್ನುವುದು, ಕೃತಿಯೊಳಗಡೆಯೇ ಬರುವ ನೃಪತುಂಗದೇವಾನುಮತ ಎನ್ನುವ ಮಾತಿನಿಂದ ಗೊತ್ತಾಗುತ್ತದೆ. ಕಾವ್ಯಮೀಮಾಂಸೆ, ವ್ಯಾಕರಣ, ಛಂದಸ್ಸು ಮುಂತಾದ ವಿಷಯಗಳನ್ನು ವಸ್ತುವಾಗಿ ಹೊಂದಿರುವ ಕವಿರಾಜಮಾರ್ಗವು ಕನ್ನಡ ನಾಡು, ನುಡಿ ಮತ್ತು ನಾಡಿಗರ ಬಗ್ಗೆ ಅನೇಕ ಮಹತ್ವದ ಮಾತುಗಳನ್ನು ಹೇಳುತ್ತದೆ. ಕನ್ನಡ ಪ್ರದೇಶದ ಭೌಗೋಳಿಕ ಗಡಿಗಳನ್ನು ಕುರಿತ ಮಾಹಿತಿ ಅಂತೆಯೇ ಕನ್ನಡಿಗರು ಮತ್ತು ಕನ್ನಡ ಭಾಷೆಯ ಸ್ವರೂಪವನ್ನು ಕುರಿತ ಅನೇಕ ಮಾಹಿತಿಗಳು ಇಲ್ಲಿ ವಿಪುಲವಾಗಿ ದೊರೆತಿವೆ. ಅಂತೆಯೇ ಕನ್ನಡ ಸಾಹಿತ್ಯದ ಪ್ರಾಚೀನತೆ ಹಾಗೂ ಆ ಕಾಲದ ಸಂಸ್ಕೃತಿಯನ್ನು ಅರಿಯಲು ಮತ್ತು ಅರ್ಥ ಮಾಡಿಕೊಳ್ಳಲು ಈ ಪುಸ್ತಕವು ವಿಶಿಷ್ಟ ಆಕರವಾಗಿದೆ. ಆಧುನಿಕ ವಿದ್ವಂಸರಾದ ಮುಳಿಯ ತಿಮ್ಮಪ್ಪಯ್ಯ, ಎಂ.ಎಂ. ಕಲಬುರ್ಗಿ, ಕೆ.ವಿ.ಸುಬ್ಬಣ್ಣ, ಶೆಲ್ಡನ್ ಪೊಲಾಕ್, ಷ. ಶೆಟ್ಟರ್ ಮುಂತಾದವರು ಕವಿರಾಜಮಾರ್ಗವನ್ನು ಕನ್ನಡದ  ಬಹು ಮುಖ್ಯ ಕೃತಿಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ (1778-1829)



ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚೆನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದೆ. ಕಿತ್ತೂರಿನ ಇತಿಹಾಸವು ಕ್ರಿ.ಶ. ೧೫೮೬ರಿಂದಲೇ ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಗೌಡ ಮನೆತನದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ವಿಜಾಪುರದ ಆದಿಲಶಾಹಿ ಸೈನ್ಯದಲ್ಲಿ ಸೇರಿಕೊಂಡಿದ್ದರು. ಈ ಸೋದರರಲ್ಲಿ ಹಿರಿಯ ಮಲ್ಲನಿಗೆ “ ಶಮಶೇರ ಜಂಗಬಹಾದ್ದೂರ " ಎನ್ನುವ ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ ಸರದೇಶಮುಖಿಯನ್ನು ನೀಡಲಾಗಿತ್ತು. ವಿಜಾಪುರದ ಪತನದ ನಂತರ ಕಿತ್ತೂರು ದೇಸಾಯಿಗಳು ತಮ್ಮ ರಕ್ಷಣೆಗಾಗಿ ಅನೇಕ ಕಾಳಗಗಳನ್ನು ಎದುರಿಸಬೇಕಾಯಿತು. ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ವಿಲಕ್ಷಣವಾಗಿತ್ತು. ಉತ್ತರ ಹಿಂದುಸ್ಥಾನದಲ್ಲಿ ಮೊಗಲ ಬಾದಶಾಹಿ ನಿರ್ಬಲವಾಗಿತ್ತು. ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿ ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಗಾರರು. ಇಂತಹ ರಾಜಕೀಯ ಪರಿಸ್ಥಿತಿ ಧೂರ್ತ, ಕ್ರೂರ ಧೋರಣೆಯ ಬ್ರಿಟಿಷ ಈಸ್ಟ ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು. ಇಂತಹ ಸಮಯದಲ್ಲಿ ಮಲ್ಲಸರ್ಜನ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು ಭದ್ರಗೊಳಿಸಿದ್ದನು. ೧೮೦೯ರಲ್ಲಿ ಪೇಶವೆಯವರಿಗೆ ರೂ.೧,೭೫,೦೦೦ ಕೊಟ್ಟು, ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು. ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು ೩ ವರ್ಷ ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ ರುದ್ರಸರ್ಜನು ಮರಾಠಾ ಹಾಗು ಟಿಪ್ಪು ಸುಲ್ತಾನ ಇವರ ಕಿರಿಕಿರಿ ತಪ್ಪಿಸಲು ಬ್ರಿಟಿಷರ ಜೊತೆಗೆ ಸ್ನೇಹದಿಂದಿದ್ದ. ಆದರೆ ಅದೆಂತಹ ಸ್ನೇಹ! ಪ್ರತಿ ವರ್ಷ ರೂ. ೧,೭೦,೦೦೦ ಕಾಣಿಕೆ ಕೊಡುವ ಕರಾರಿನ ಮೇಲೆ ಬ್ರಿಟಿಷರು ಈ ದೊರೆಗೆ ಸನ್ನದು ನೀಡಿದರು. ಶಿವಲಿಂಗರುದ್ರ ಸರ್ಜನು ೧೧ ಸೆಪ್ಟೆಂಬರ ೧೮೨೪ ರಂದು ವಾರಸದಾರರಿಲ್ಲದೆ ತೀರಿಕೊಂಡನು. ಈ ಎಳೆವಯಸ್ಸಿನ ದೊರೆಯ ಹೆಂಡತಿ ವೀರಮ್ಮನಿಗೆ ಆಗ ೧೧ ವರ್ಷ ವಯಸ್ಸು! ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡ. ಈ ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ ತಿರಸ್ಕರಿಸುತ್ತಾನೆ! ೧೩ ಸೆಪ್ಟೆಂಬರ ೧೮೨೪ ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ. ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಮೃತ ಶಿವಲಿಂಗರುದ್ರಸರ್ಜನ ಮಲತಾಯಿ ಚೆನ್ನಮ್ಮ! ಚೆನ್ನಮ್ಮ ಹುಟ್ಟಿದ್ದು ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಈ ಕಠಿಣ ಪರಿಸ್ಥಿತಿಯಲ್ಲಿ ಎದೆಗುಂದದೆ ಅವಳು ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ, ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟಗಟ್ಟಿದಳು. ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆದಿದ್ದಾಳೆ. ಅದರೆ ಬ್ರಿಟಿಷರು ಕಿತ್ತೂರಿನ ಒಡೆತನವನ್ನೆ ಅಪೇಕ್ಷಿಸಿದಾಗ, ಚೆನ್ನಮ್ಮ ಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ ಸಹ ಮಾಡಿದ್ದಾಳೆ. ೨೧ ಅಕ್ಟೋಬರ ೧೮೨೪ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ ಅಂದರೆ ಅಕ್ಟೋಬರ ೨೩ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳ್ತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾದರು. ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆಯುತ್ತದೆ. ೧೮೨೪ ಡಿಸೆಂಬರ್ ೨ ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ಡಿಸೆಂಬರ್ ೩ ರಂದು ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ. ಡಿಶಂಬರ ೪ ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳುಗುತ್ತಾರೆ. ಡಿಸೆಂಬರ್ ೫ ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್ ೧೨ ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ ೪ ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೫ ಫೆಬ್ರುವರಿ ೨ ರಂದು ನಿಧನಹೊಂದುತ್ತಾಳೆ. ಮುಂದೆ ಮೇ ೨೦ರಂದು ಜಾನಕಿಬಾಯಿ ನಿಧನಳಾಗುತ್ತಾಳೆ. ಆದರೆ ದೇಶ ನಿಷ್ಠರ ಹೋರಾಟ ನಿಂತಿರುವದಿಲ್ಲ. ಕಾಳಗದಲ್ಲಿ ಸೆರೆ ಸಿಕ್ಕು ಆ ಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ೧೮೨೯ರಲ್ಲಿ ಹೋರಾಟ ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಆ ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ. ಇತ್ತ ರಾಯಣ್ಣನ ಹೋರಾಟ ಮುಂದುವರೆದಿರುತ್ತದೆ. ವಿಶ್ವಾಸದ್ರೋಹಿಗಳು ಇವನ ಸಂಗಡಿಗರಂತೆ ನಟಿಸುತ್ತ ೧೮೩೦ ಫೆಬ್ರುವರಿಯಲ್ಲಿ ಇವನನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ. ಕಂಪನಿ ಸರಕಾರ ಈ ಕಾರ್ಯಕ್ಕಾಗಿ ಲಿಂಗನಗೌಡ ಮತ್ತು ವೆಂಕನಗೌಡರಿಗೆ ೩೦೦ ರೂಪಾಯಿ ಬಹುಮಾನ ಕೊಡುತ್ತದೆ. ಮೇ ೧೮೩೦ ರಲ್ಲಿ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರ ೪೦೦ ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ ೧೮೩೦ ರಂದು ವೀರಮ್ಮ ಸೆರೆಮನೆಯಲ್ಲಿ ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ ಹೊಂದಿದಳೆಂದೂ, ಇಂಗ್ಲಿಷರೆ ವಿಷ ಹಾಕಿ ಕೊಂದರೆಂದೂ ಪ್ರತೀತಿಯಿದೆ. ೧೮೩೧ ಜನೆವರಿ ೨೬ ರಂದು ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಗುತ್ತದೆ.