ಮಲೆಗಳಲ್ಲಿ ಮದುಮಗಳು-೬೨

ಗೌರಿ ಹಬ್ಬಕ್ಕೆ ಇನ್ನೂ ಮೂರು ದಿವಸವಿದೆ ಎನ್ನುವಾಗ, ಒಂದು ಸಂಜೆ ಮೇಗರವಳ್ಳಿಯ ಹೆದ್ದಾರಿಯಲ್ಲಿ ಆಗುಂಬೆಯ ಕಡೆಯಿಂದ ತೀರ್ಥಹಳ್ಳಿಯ ದಿಕ್ಕೆಗೆ ನಾಲ್ವರು ಪ್ರಯಾಣಿಕರು, ಅವರನ್ನು ನೋಡಿದರೆ ಬಹುದೂರದಿಂದ ಬಂದವರಂತೆ ಕಾಣುತ್ತಿದ್ದರು, ಸೋತು ಕಾಲುಹಾಕುತ್ತಿರುವಂತೆ ನಡೆದು ಬರುತ್ತಿದ್ದರು. ಮುಂದೆ ಬರುತ್ತಿದ್ದ ಇಬ್ಬರು ಕೊಡೆ ಹಿಡಿದಿದ್ದರು. ಹಿಂದೆ ಬರುತ್ತಿದ್ದವರು ಕಂಬಳಿ ಕೊಪ್ಪೆ ಹಾಕಿಕೊಂಡಿದ್ದರು. ಮಳೆಗೂ ಕೆಸರಿಗೂ ರಕ್ಷೆಯಾಗಿ ತಮ್ಮ ಕಚ್ಚೆ ಪಂಚೆಗಳನ್ನು ಮೊಳಕಾಲಿನವರೆಗೂ ಎತ್ತಿ ಕಟ್ಟಿಕೊಂಡಿದ್ದು ಮೈಮುಚ್ಚುವಂತೆ ಬಟ್ಟೆ ಹಾಕಿಕೊಂಡಿದ್ದ ಆಗ್ರೇಸರಿಬ್ಬರನ್ನು ಯಜಮಾನರೆಂದೂ, ಹಿಂದೆ ತಲೆಯಮೇಲೆ ಗಂಟು ಮೂಟೆ ಹೊತ್ತು ಅರಮೈ ಬಿಟ್ಟುಕೊಂಡಿದ್ದ ಇಬ್ಬರನ್ನು ಅವರು ಆಳುಗಳೆಂದೂ ಯಾರಾದರೂ ಗುರುತಿಸಬಹುದಿತ್ತು.
ಮಳೆ ಸೋನೆಯಾಗಿ ಬೀಳುತ್ತಿದ್ದುದರಿಂದ ಮೇಗರೊಳ್ಳಿ ಪೇಟೆಯ ಬೀದಿ ನಿರ್ಜನವಾಗಿತ್ತು. ಆದರೆ ತುಂಬ ವಿರಳವಾಗಿ ಆ ಕಡೆ ಈ ಕಡೆ ಹುದುಗಿದಂತಿದ್ದ ಹುಲ್ಲಿನ ಮತ್ತು ಓಡುಹೆಂಚಿನ ಮಣೆಗಳ ಮತ್ತು ಅಂಗಡಿ ಮಳಿಗೆಗಳ ಮುಂಭಾಗದ ತೆಣೆಗಳಲ್ಲಿ ಒಬ್ಬರು ಇಬ್ಬಸ್ರು ಮೂವರು ಕಲೆತು ಮಾತಾಡಿಕೊಳ್ಳುತ್ತಿದ್ದುದು ಕಣ್ಣಿಗೆ ಬೀಳಬಹುದಾಗಿತ್ತು. ಕೆಲವರು ಎಲೆಯಡಿಕೆ ಜಗಿಯುತ್ತಿದ್ದರೆ ಇನ್ನು ಕೆಲವರು-ಅವರು ಸಾಬರು ಎಂದು ಅನಿವಾರ್ಯವಾಗಿ ಹೇಳಬಹುದಿತ್ತು-ಬೀಡಿ ಸೇಯುತ್ತಿದ್ದರು. ಮತ್ತೆ ಕೆಲವರು ಮಂಗಳೂರು ನಶ್ಯ ಸೇಯುವುದೊ ಮಡ್ಡಿ ನಶ್ಯ ತಿಕ್ಕುವುದೋ ಅಂತಹ ವಿರಾಮಶೀಲ ಕಾರ್ಯಗಳಲ್ಲಿ ತೊಡಗಿದ್ದರು
ಕಣ್ಣಾ ಪಂಡಿತರ ಮನೆಯ ಮುಂದೆ ಕಂಬಳಿಕೊಪ್ಪೆ ಹಾಕಿಕೊಂಡು ನಿಂತಿದ್ದ ಒಬ್ಬನು ಹಾದಿಯಲ್ಲಿ ಮುಂದೆ ಬರುತ್ತಿದ್ದ ಪಯಣಿಗರಲ್ಲಿ ಒಬ್ಬರನ್ನು ಗುರುತಿಸಿ, ಬಗ್ಗಿ, ಎರಡೂ ಕೈ ಜೋಡಿಸಿ “ಅಡ್ಡಬಿದ್ದ, ಐಗಳಿಗೆ, ಸಿಂಬಾವಿ ಕರಸಿದ್ದ” ಎಂದನು.
“ಎಲ್ಲ ಸುಖವಾಗಿದ್ದಾರೇನೋ?…. ಗುತ್ತಿ ಮನೇಲಿ ಇದಾನಷ್ಟೆ?” ಎಂದು ಹೊಲೆಯನ ಯೋಗಕ್ಷೇಮ ವಿಚಾರಿಸಿದರು. ಅನಂತಯ್ಯ.
ಗುತ್ತಿಯ ಅಪ್ಪ ಸಿಂಬಾವಿ ಕರಸಿದ್ದ ಮೋರೆ ಸಣ್ಣಗೆ ಮಾಡಿಕೊಂಡು, ಮಗ ಸೊಸೆಯನ್ನು ಕಟ್ಟಿಕೊಂಡು ದೇಶಾಂತರ ಹೋದುದನ್ನು ಸಾವಧಾನವಾಗಿ ಹೇಳುತ್ತಾ ಸುಖ ದುಃಖ ತೋಡಿಕೊಂಡನು. ಅವನಿಗೆ ಎರಡು ಸಮಾಧಾನದ ಮಾತು ಹೇಳಿ, ಕನ್ನಡ ಜಿಲ್ಲೆಯಿಂದ ಅದೇ ತಾನೆ ಹಿಂತಿರುಗುತ್ತಿದ್ದ ಐಗಳು ಅನಂತಯ್ಯ ನಾಲ್ಕು ಹೆಜ್ಜೆ ಕನ್ನಡ ಜಿಲ್ಲೆಯಿಂದ ಅದೇ ತಾನೆ ಹಿಂತಿರುಗುತ್ತಿದ್ದ ಐಗಳು ಅನಂತಯ್ಯ ನಾಲ್ಕು ಹೆಜ್ಜೆ ಮುಂದುವರಿದಿದ್ದರು. ಕರೀಂಸಾಬರ ಮಳಿಗೆಯಲ್ಲಿದ್ದ ಗುಂಪು ಸಸಂಭ್ರಮವಾಗಿ ಕೂಗಿತು: “ಓಹೋಹೋ! ಊರಿಗೆ ಹೋಗಿದ್ದ ಐಗಳ ಸವಾರಿ ಈಗ ಬರ್ತಾ ಇರೋ ಹಾಂಗೆ ಕಾಣ್ತದಲ್ದಾ?”
ಅನಂತಯ್ಯ ನೋಡಿದರು. ಬೀಡಿ ಸೇಯುತ್ತಿದ್ದ ಗುಂಪಿನಲ್ಲಿ ಪುಡಿಸಾಬಿ, ಲುಂಗಿಸಾಬಿ, ಅಜ್ಜೀಸಾಬಿ ಎಲ್ಲ ಇದ್ದರು. ತುಸು ಎತ್ತರದಲ್ಲಿ ವ್ಯಾಪಾರ ಕೊಡುವವನ ಕೂರುವ ಮಣೆಪೀಠದ ಮೇಲೆ ಕರ್ಮೀನ್ ಸಾಬರೂ ಮಂಡಿಸಿದ್ದರು. ಸರಿಸಮಾನ ಸ್ಕಂಧನಂತೆ ಚೀಂಕ್ರ ಸೇರೆಗಾರನೂ ಅಲ್ಲಿಯೆ ಬಳಿ ಕೂತಿದ್ದುದೂ ಕಾಣಿಸಿತು: “ಎಲ್ಲಾ ಏನೋ ಒಂದು ಮಸಲತ್ತಿಗೆ ಸೇರಿಕೊಂಡಹಾಗೆ ಕಾಣ್ತದೆ, ನೋಡು” ಎಂದು ತಮ್ಮ ಪಕ್ಕದಲ್ಲಿ ಬರುತ್ತಿದ್ದ ಕಿಟ್ಟಯ್ಯ ಸೆಟ್ಟರಿಗೆ ಹೇಳಿ, ಮಳಿಗೆಯವರ ಸ್ವಾಗತಕ್ಕೆ ಮಂದಸ್ಮಿತ ಮಾತ್ರ ಉತ್ತರವನ್ನೀಯುತ್ತಾ ಮುಂದುವರಿದರು ಅನಂತಯ್ಯ.
ಅವರು ಅಂತಕ್ಕನ ಮನೆಯ ಹತ್ತಿರಕ್ಕೆ ಬರುವಷ್ಟರಲ್ಲಿ ಶ್ರಾವಣಬೈಗು ಮೋಡಗಪ್ಪಾಗತೊಡಗಿತ್ತು. ಸುಪರಿಚಿತ ಪ್ರದೇಶಕ್ಕೆ ಪ್ರವೇಶಿಸುವಂತೆ, ಉಣುಗೋಲಿನ ಪಕ್ಕದಲ್ಲಿದ್ದ ತಡಬೆಯನ್ನು ಹತ್ತಿ ದಾಟಿ, ಅನಂತಯ್ಯ ತಮ್ಮ ಹಿಂದೆಯೆ ತಡಬೆಯನ್ನು ಕಿಟ್ಟಯ್ಯ…. ತಡಬೆಮೇಲೆ ಜಾರಿ ಬಿದ್ದೀಯಾ?….ಮಳೇಲಿ ಮರದ ದಿಂಡಿನ ತುಂಬಾ ಹಾಸುಂಬೆ ಕಟ್ಟಿದೆ, ಹುಷಾರಾಗಿಳಿ….”
ಅವರ ಹಿಂದೆ ಸಾಮಾನು ಹೊತ್ತು ಬರುತ್ತಿದ್ದ ಗಟ್ಟದ ತಗ್ಗಿನ ಆಳುಗಳಿಬ್ಬರು ತಡಬೆ ಹತ್ತಿ ಇಳಿಯುವ ಗೋಜಿಗೆ ಹೋಗದೆ, ಉಣುಗೋಲಿನ ಗಳುಗಳನ್ನು ಸರಿಸಿ ನಾಯಿ ಬೊಗಳಿತು. ಕೊರಗನು ಬಂದ ಆಗಂತುಕರನ್ನು ಗುರುತಿಸುವ ಮೊದಲೆ ಒಳಗೆ ಓಡಿ ಸುದ್ದಿ ಕೊಟ್ಟನು. ಹೊರಗೆ ಜಗಲಿಗೆ ಬಂದ ಅಂತಕ್ಕ “ಅಂತೂ ಕಡೆಗೂ ಬಂದಿರಲ್ಲ?”
ಕಿಟ್ಟಯ್ಯ ವಯಸ್ಸಿನಲ್ಲಿ ಇನ್ನೂ ಇಪ್ಪತೈದನ್ನೂ ದಾಟಿರಲಿಲ್ಲ. ಅಷ್ಟರಲ್ಲಿಯೆ ಅವನಿಗೆ ಎರಡು ಮದುವೆಗಳಾಗಿ ಇಬ್ಬರು ಹೆಂಡಿರೂ ತೀರಿಕೊಂಡಿದ್ದರು. ಮೊದಲನೆಯ ಹೆರೆಗೆಯ ಅನಂತರವೆ ತೀರಿಕೊಂಡಿದ್ದಳು. ಎರಡನೆಯವಳಿಗೆ ಒಂದು ಹೆಣ್ಣೂ ಹುಟ್ಟಿದ ಒಂದೂವರೆ ವರ್ಷದೊಳಗಾಗಿ ಮತ್ತೊಂದು ಗಂಡು ಹುಟ್ಟಿ, ಬಾಲೆ ಬಾಣಂತಿಯರು ಅದನ್ನೆಲ್ಲ ತಿಳಿದಿದ್ದ ಅಂತಕ್ಕ, ಅನಂತಯ್ಯ ಊರಿಗೆ ಹೋಗುವಾಗ್ಸ, ಅವರೊಡನೆ ಹೇಳಿಕಳಿಸಿದ್ದಳು, ಕಿಟ್ಟಯ್ಯನನ್ನೂ ತಮ್ಮ ಜೊತೆಯಲ್ಲಿ ಕರೆತರಲು. ತಕ್ಕ ಮಟ್ಟಿಗೆ ಹೊಟ್ಟೆಬಟ್ಟೆಗೆ ಏನೂ ಕಡಿಮೆಯಿಲ್ಲದಷ್ಟು ಆಸ್ತಿವಂತನಾಗಿದ್ದ ಸೋದರಳಿಯನಿಗೆ ಕಾವೇರಿಯನ್ನು ಕೊಟ್ಟು ಮದುವೆಮಾಡಿ, ಜನರ ಬಾಯಿಗೆ ಬೀಳುವುದನ್ನು ತಪ್ಪಿಸಿಕೊಳ್ಳುವ ಉದ್ದೇಶ ಅಂತಕ್ಕಗೆ.
“ಅವಳೇನು ಸಣ್ಣ ಹುಡುಗಿಯೆ? ಮದುವೆ ಮಾಡಿದ್ದರೆ ಮೂರು ಮಕ್ಕಳ ತಾಯಿ ಆಗುತ್ತಿದ್ದಳು! ಆದರೂ ಸುಮ್ಮನೆ ಚೆಲ್ಲು ಹರಿಯುತ್ತಿರುತ್ತಾಳೆ…. ಪರಿಕಾರ ಹಾಕುತ್ತಿದ್ದಾಗ ಹೇಗೆ ಆಡುತ್ತಿದ್ದಳೊ ಹಾಗೆಯೆ ಆಡುತ್ತಿರುತ್ತಾಳೆ ಕಂಡಕಂಡವರೊಡನೆ… ತೆಳ್ಳಗೆ ಬೆಳ್ಳಗೆ ಚೆನ್ನಾಗಿ ಇದ್ದಾಳೆ ಎಂದು ಎಲ್ಲರೂ ಅವಳನ್ನು ಮುದ್ದುಮಾಡುವವರೆ ಆಗಿದ್ದಾರೆ…. ಏನ್ನಾದರೂ ಒಂದಾದರೆ ಕಿಸಾಕೊಳ್ಳಿ ಆವಾಗ ಗೊತ್ತಾಗುತ್ತದೆ, ಅಂತಕ್ಕಗೆ ಋತುವಾದ ಮೇಲೆ ಹೆಣ್ಣು ಮಕ್ಕಳನ್ನು ಮದುವೆ ಮಾಡದೆ ಇಷ್ಟು ದಿನ ಯಾರಾದರೂ ಮನೆಯಲ್ಲಿ ಇಟ್ಟುಕೊಳ್ಳೂತ್ತಾರೆಯೇ?….”ಹೀಗೆಲ್ಲ ಜನರು ಆಡಿಕೊಳ್ಳತೊಡಗಿದ್ದರು, ಕಾವೇರಿಯ ವಿಚಾರವಾಗಿ
ಆ ವಿಷಯದಲ್ಲಿ ತಾಯಿ ಮಗಳಿಗೆ ಸೂಕ್ಷ್ಮವಾಗಿ ಎಚ್ಚರಿಕೆ ಕೊಟ್ಟಿದ್ದಳು, ನಿಜ. ಆದರೆ ಒಡೆಯರೂ ಅನ್ನದಾತರೂ ಕಷ್ಟಕ್ಕೆ ಬೇಕಾದವರೂ ಆಗಿ, ಹಿಂದಿನಿಂದಲೂ ತನಗೂ ತನ್ನ ಬಾಳದೆ ಹೋದ ಗಂಡ ಸುಬ್ಬಣ್ಣ ಸೆಟ್ಟರಿಗೂ ಆಪ್ತರಾಗಿದ್ದ ಶ್ರೀಮಂತ ಮನೆತನದ ಗೌರವಸ್ಥ ಯುವಕರು, ಬೆಟ್ಟಳ್ಳಿ ಕಲ್ಲಯ್ಯಗೌಡರ ಮಗ ದೇವಯ್ಯನಂಥವರು, ಮನೆಗೆ ಬಂದರೆ ಬೇಡ ಅನ್ನುವುದಕ್ಕಾಗುತ್ತದೆಯೆ? ಬಹುಕಾಲದ ಪರಿಚಯದಿಂದ ಸ್ನೇಹಪೂರ್ವಕವಾಗಿ ಮಾತಾಡಿಸಿದರೆ, ವರ್ತಿಸಿದರೆ, ಏನನ್ನಾದರೂ ಸ್ನೇಹಪೂರ್ವಕವಾಗಿ ಉಡುಗೋರೆ ತಂದಿದ್ದರೆ, ಬೇಡ ಎಂದು ನಿಷ್ಟುರವಾಗಿ ಹೇಳುವುದಕ್ಕಾಗುತ್ತದೆಯೇ? ಮಗಳ ಮೇಲೆ ಮೂರು ಹೊತ್ತು ಕಾವಲು ಕೂರುವುದಕ್ಕಾಗುತ್ತದೆಯೇ? ಎಷ್ಟಂದರೂ ಅವಳೂ ಪ್ರಾಯಕ್ಕೆ ಬರುತ್ತಿರುವ ಹುಡುಗಿ. ಪ್ರಾಯದ ಹುಡುಗರೊಡನೆ, ಒಂದೆರಡು ವಿನೋದದ ಮಾತಾಡಿ, ಕುಶಾಲು ಮಾಡುವುದು ಬೇಡ ಎಂದರೆ, ಮೇಲುಮೇಲಕ್ಕೆ ಹೂ ಅಂದರೂ, ನಿಜವಾಗಿಯೂ ಸುಮ್ಮನಿರುತ್ತಾಳೆಯೇ?…. ತನ್ನ ಪ್ರಾಯದ ಕಾಲದಲ್ಲಿ ಅಂತಹ ಅನುಭವಗಳಿಗೆ ಒಳಗಾಗಿದ್ದ ಅಂತಕ್ಕನ ಅಂತರಂಗ ಇನ್ನೂ ಮುಂದುವರಿದು ಹೇಳಿಕೊಂಡಿತ್ತು: ಸುಮ್ಮನಿರಲು ಖಾರ, ಉಪ್ಪು, ಹುಳಿ ತಿನ್ನುವ ಮನುಷ್ಯ ಮಾತ್ರದವರಿಗೆ ಸಾಧ್ಯವೇ?”
ಆವೊತ್ತು ರಾತ್ರಿ ಅಳಿಯನ ಉಪಚಾರಾರ್ಥವಾಗಿ ಔತಣದ ಊಟ ಸಿದ್ದವಾಗುವುದೇ ಹೊತ್ತಾಯಿತು. ಅದರಲ್ಲಿ ಕಾವೇರಿ ತಾಯಿಗೂ ಕೊರಗನಿಗೂ ನೆರವಾದಳು. ಆದರೆ ಅದು ಮನಃಪೂರ್ವಕವಾಗಿ ಆಗಿರಲಿಲ್ಲ. ಮೊದಲನೆಯದಾಗಿ, ಅಂದಿನ ರಾತ್ರಿಯೆ ಮಿಶನ್ ಸ್ಕೂಲಿನಲ್ಲಿ ತನಗೆ ಪುಡಿಸಾಬರು ಉಂಗುರ ಕೊಡುವುದೆಂದು ಗೊತ್ತಾಗಿದೆ ಎಂಬುದನ್ನು ಚೀಂಕ್ರ ಮಧ್ಯಾಹ್ನವೆ ತಿಳಿಸಿಹೋಗಿದ್ದನು. ಅನಿರೀಕ್ಷಿತವಾಗಿ ಬಂದಿದ್ದ ಅತಿಥಿಗಳಿಂದ ಅದಕ್ಕೆಲ್ಲಿ ಭಂಗವುಂಟಾಗುತ್ತದೆಯೋ ಎಂಬ ಅಶಂಕೆ ಕಾಡತೊಡಗಿತ್ತು ಕಾವೇರಿಯನ್ನು. ಎರಡನೆಯದಾಗಿ, ತನಗೆ ಸ್ವಲ್ಪವೂ ಇಷ್ಟವಿಲ್ಲದ ಕಿಟ್ಟಯ್ಯಸೆಟ್ಟಿಯನ್ನು ತನ್ನ ಗಂಡನಾಗುವಂತೆ ಮಾಡಲು ಸಂಚು ಮಾಡಿದ್ದಾರಲ್ಲಾ ಎಂಬುದು. ಕಿಟ್ಟಯ್ಯನನ್ನು, ಅವನು ಮದುವೆಯಾಗುವ ಮುನ್ನ ಹುಡುಗನಾಗಿದ್ದಾಗ ನೋಡಿದ್ದಳು. ಅವನ ಉಬ್ಬು ಹಲ್ಲು, ಕೋಳಿಯ ಕುತ್ತಿಗೆಯಂತೆ ಉದ್ದವಾಗಿದ್ದ ಕುತ್ತಿಗೆ, ಗಳುವಿನಂತಿದ್ದ ಸಪುರ ಕಾಲು-ಇವೆಲ್ಲ ಅವಳಿಗೆ ಹಿಡಿಸಿರಲಿಲ್ಲ. ಅದರಲ್ಲಿಯೂ ದೇವಯ್ಯನಂಥವರ ಭದ್ರಾಕಾರ ಮತ್ತು ಸ್ಪುರದ್ರೂಪಗಳನ್ನು ನೋಡಿ ಮೆಚ್ಚಿದ ಅವಳಿಗೆ ಕಿಟ್ಟಯ್ಯ ಜಿಗುಪ್ಸೆಗೆ ಕಾರಣನಾಗಿದ್ದನು. ಆಗೊಮ್ಮೆ ವಿನೋದಕ್ಕಾಗಿ ಅವಳ ತಾಯಿ “ನಮ್ಮ ಕಿಟ್ಟಯ್ಯನನ್ನು ಮದುವೆಯಾಗ್ತಿಯೇನೆ?” ಎಂದು ಕೇಳಿದ್ದಕ್ಕೆ, “ಅವನ್ನ ಮದುವೆಯಾಗುವುದಕ್ಕಿಂತ ಹಾಳುಬಾವಿಗಾದ್ರೂ ಹಾರುತ್ತೀನಿ!” ಆಮೇಲೆ ಕಿಟ್ಟಯ್ಯ ಕನ್ನಡ ಜಿಲ್ಲೆಯಲ್ಲಿಯೆ ಮದುವೆಯಾಗುವ ಸುದ್ದಿ ಕೇಳಿ, ತನಗೆ ಶನಿ ತೊಲಗಿತಲ್ಲಾ ಎಂದು ಸಂತೋಷಪಟ್ಟಿದ್ದಳು. ಅವನ ಮೊದಲನೆ ಹೆಂಡತಿ ಹೆತ್ತು ಸತ್ತಾಗಲೂ ಕಾವೇರಿಗೆ ಹೆದರಿಕೆಯಾಗಿತ್ತು, ಮತ್ತೆ ಎಲ್ಲಿ ತನಗೆ ಶನಿ ತಗಲಿಕೊಳ್ಳುತ್ತದೆಯೆ ಎಂದು. ಆದರೆ ಶನಿ ಗಟ್ಟದ ಮೇಲಕ್ಕೆ ಹತ್ತದೆ, ಗಟ್ಟದ ಕೆಳಗೇ ಅವನಿಗೆ ಮತ್ತೊಂದು ಮದುವೆ ಮಾಡಿಸಿತ್ತು ಆ ಎರಡನೆಯ ಹೆಂಡತಿ ಸತ್ತು ಎರಡು ಮೂರು ವರ್ಷಗಳಾಗಿದ್ದರೂ ಅವನಿಗೆ ಹೆಣ್ಣು ಸಿಕ್ಕಿಲಿಲ್ಲ ಎಂಬ ಸುದ್ದಿ ಕಾವೇರಿಗೆ ಅನಿಷ್ಟಕರವಾಗಿತ್ತು. ಏಕೆಂದರೆ ಈಗ ಎಲ್ಲರೂ ತನ್ನನ್ನು ಮದುವೆಗೆ ಬಂದ ಹೆಣ್ಣು ಎಂಬ ಅರ್ಥದಲ್ಲಿಯೆ ಕಾಣತೊಡಗಿದ್ದರು. ಅದೂ ಒಂದು ಒಳಕಾರಣವಾಗಿತ್ತು, ಕಾವೇರಿ ಶ್ರೀಮಂತ ಪ್ರತಿಷ್ಠಾವಂತರ ಮನೆತನದವನಾಗಿದ್ದ ದೇವಯ್ಯನಿಗೆ ಹತ್ತಿರ ಹತ್ತಿರ ಸರಿಯುವುದಕ್ಕೆ, ತನ್ನ ಬದಕನ್ನು ಅವನ ಬದುಕಿನೊಡನೆ ಸಾವಿರಪಾಲು ಹರ್ಷದಾಯಕವಾಗಿತ್ತು ಅವಳಿಗೆ-ದೇವಯ್ಯಗೌಡರು ಇಟ್ಟುಕೊಂಡವಳಾಗಿರುವುದು! ಅದರಲ್ಲಿಯೂ ಬಂದ ನೆಂಟರಿಗಾಗಿ ಹರಿವಾಣದಲ್ಲಿ ಇಟ್ಟಿದ್ದ ಎಲೆಡಕೆ ಹಾಕಿಕೊಂಡು ಜಗಿಯುತ್ತಿದ್ದ ಕಿಟ್ಟಯ್ಯಸೆಟ್ಟಿಯ ಹುಳುಹಿಡಿದು ವಿಕಾರವಾಗಿ ಅಸ್ತವ್ಯಸ್ತ ಕಾವೇರಿಗೆ ಅಮೇಧ್ಯ ಮೆಟ್ಟಿದ್ದಕ್ಕಿಂತಲೂ ಅಸಹ್ಯಕರವಾಗಿ ತೋರಿತ್ತು ತಾಯಿಯ ಆ ಸೋದರಳಿಯನೊಡನೆ ಒಡಬಾಳು.
ರಾತ್ರಿ ಊಟವಾಗುವುದಕ್ಕೆ ಮೊದಲೂ ಆಮೇಲೆಯೂ ಅಂತಕ್ಕ ಅನಂತಯ್ಯ ಕಿಟ್ಟಯ್ಯರು ಲೋಕಜೀವನ, ಗೃಹಕೃತ್ಯ ಮತ್ತು ಬಂಧು ಬಾಂಧವರು, ಭೂತ ಮತ್ತು ಭವಿಷ್ಯತ್ತು-ಅನೇಕ ವಿಷಯ ಮಾತಾಡುತ್ತಿದ್ದರು. ತಾವು ತಮ್ಮ ಮುದಿತಾಯಿಯನ್ನು ನೋಡಲು ಊರಿಗೆ ಹೋದಮೇಲೆ ಕೋಣುರು, ಹೂವಳ್ಳಿ, ಹಳೆಮನೆ, ಸಿಂಭಾವಿ, ಬೆಟ್ಟಳ್ಳೀ ಮತ್ತು ಮೇಗರವಳ್ಳಿಗಳಲ್ಲಿ ಜರುಗಿದ ಸಂಗತಿಗಳನ್ನೆಲ್ಲ ಕೇಳಿ ಕೇಳಿ, ಮತ್ತೆ ಮತ್ತೆ ಪ್ರಶ್ನೆಹಾಕಿ, ತಿಳಿದುಕೊಂಡರು. ಮುಕುಂದಯ್ಯ ಹೂವಳ್ಳಿಗೆ ಮನೆಅಳಿಯನಾಗಿ ಹೋಗಿ ನೆಲಸಿರುವುದನ್ನೂ, ಕೋಣುರು ಮನೆ ಜಮೀನುಗಳ ಹಿಸ್ಸೆ ತಮ್ಮ ಆಗಮನಕ್ಕಾಗಿಯೆ ಇದಿರು ನೋಡುತ್ತಿರುವ ವಿಚಾರವನ್ನು ಕೇಳಿದಾಗ ಅವರು ದೀರ್ಘಕಾಲ ಚಿಂತಾಮಗ್ನರಾಗಿದ್ದರು. ಅಂತಕ್ಕ ಅವರ ಮುದಿ ಅಬ್ಬೆಯ ಯೋಗಕ್ಷೇಮವನ್ನು ವಿಚಾರಿಸಿದಾಗ ಅವರು ಹೇಳಿದರು ಹನಿಗಣ್ಣಾಗಿ: ‘ಅಂತೂ ಅದು ನಾನು ಹೋಗುವವರೆಗೆ ಕಾದಿದ್ದುದೇ ನನ್ನ ಪುಣ್ಯ. ನಾನು ಬರುವುದನ್ನೆ  ಕಾಯುತ್ತಿತ್ತೆಂದು ತೋರುತ್ತದೆ ಅದರ ಜೀವ. ನಾನು ಹೋದ ಮರುದಿವಸವಲ್ಲ ಅದರ ಮರುದಿವಸವೆ ಅದರ ಪ್ರಾಣ ದೇವರ ಪಾದ ಸೇರಿತು! ಅದರದ್ದೇ ದಿನಾಗಿನ ಬಜ್ಜಗಿಜ್ಜ ಎಲ್ಲಾ ಪೂರೈಸಿ ಬರುವುದೇ ಇಷ್ಟು ತಡವಾಯಿತು. ರಂಗಪ್ಪಗೌಡರು ಏನು ತಿಳಿದುಕೊಂಡಿದಾರೆಯೋ?…”ಅನಂತಯ್ಯ ಕುಂಡೆಗೆ ಕಾಲು ಮುಟ್ಟಿಸಿಯೆ ಬಿಟ್ಟ!” ಎಂದು ಎಷ್ಟು ಜನರ ಕೈಲಿ ಆಗಲೆ ಹೇಳಿಬಿಟ್ಟಿದ್ದಾರೆಯೋ?”
ಆ ಮಾತುಕತೆಗಳಲ್ಲಿ ಬಹುಬಾಲು ಕಾವೇರಿಗೆ ನೀರಸವಾಗಿತ್ತು: ಕೆಲವು ಪಾಲು ಆಯಾ ಸಂದರ್ಭದ ಅಜ್ಞಾನದಿಂದಾಗಿ ಅರ್ಥವಾಗಿರಲಿಲ್ಲ. ಆದರೆ ಕಿಟ್ಟಯ್ಯಸೆಟ್ಟರನ್ನು ಮೇಗರವಳ್ಳಿಗೆ ಕರೆತಂದಿದ್ದ ಮುಖ್ಯಕಾರಣದ ವಿಷಯದಲ್ಲಿ ಮಾತ್ರ ಕಾವೇರಿ ಅನಾಸಕ್ತೆಯಾಗಿರಲು ಸಾಧ್ಯವಿರಲಿಲ್ಲ. ತನ್ನನ್ನು ಅವನಿಗೆ ಕೊಟ್ಟು ಲಗ್ನಮಾಡುವ ವಿಚಾರ, ಸ್ವಲ್ಪವೂ ಸಂದೇಹಕ್ಕೆ ಅವಕಾಶವಿಲ್ಲದೆ, ದೃಡವಾಗಿ ನಿರ್ಧರಿಸಲ್ಪಟ್ಟಿದೆ. ಎಂಬುದು ಅವಳಿಗೆ ಮರಣದಂಡನೆ ವಿಧಿಸಿದಷ್ಟು ಸುಸ್ಪಷ್ಟವಾಗಿತ್ತು. ಅವಳಿಗೆ ಏನು ಮಾಡುವುದು ತೋರಲಿಲ್ಲ. ಬೋನಿನೊಳಗೆ ಸಿಕ್ಕಿಬಿದ್ದ ಇಲಿಯಂತೆ ಅವಳ ಮನಸ್ಸು ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ಪರಿದಾಡತೊಡಗಿತ್ತು. ಇದ್ದಕ್ಕಿದ್ದ ಹಾಗೆ ಅವಳಿಗೆ ಹೂವಳ್ಳಿ ಚಿನ್ನಕ್ಕನ ನೆನಪಾಯಿತು. ತನ್ನದಕ್ಕಿಂತಲೂ ಹೆಚ್ಚಿನ ಸಂಪ್ರದಾಯಬದ್ದವಾದ ಬೋನಿನಲ್ಲಿ ಸಿಕ್ಕಿಕೊಂಡಿದ್ದ ಅವರು ಮದುವೆ ನಿಶ್ಚಯವಾಗಿ ಇನ್ನೇನು ಲಗ್ನದ ಮುಹೂರ್ತವೂ ಹತ್ತಿರ ಬಂತು ಎನ್ನುವಾಗಲೂ, ಹೇಗೆ ಧೈರ್ಯಮಾಡಿ ಆ ಅನಾಹುತದಿಂದ ತಪ್ಪಿಸಿಕೊಂಡಿದ್ದರು ಎಂಬುದನ್ನು ನೆನೆದಳು. ಅವರಿಗಿಂತಲೂ ಹೆಚ್ಚು ಸ್ವತಂತ್ರ ವಾತಾವರಣದಲ್ಲಿ ಬೆಳೆದಿರುವ ತನಗೆ, ಒದಗಲಿರುವ, ಆದರೆ ಇನ್ನೂ ಸ್ವಲ್ಪ ದೂರವಾಗಿರುವ, ಅನಾಹುತದಿಂದ ಪಾರಾಗಲು ಏಕೆ ಸಾಧ್ಯವಿಲ್ಲ?.
ಹಿಂದೊಮ್ಮೆ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರು ಐಗಳು ಅನಂತಯ್ಯನವರೊಡನೆ ಹುಲಿಕಲ್ಲು ಗುಡ್ಡ ಹತ್ತಿ, ಪ್ರಜ್ಞೆತಪ್ಪಿ, ದೋಲಿಯಲ್ಲಿ ತಮ್ಮ ಮನೆಗೆ ಬಂದಿದ್ದಾಗ, ತನ್ನ ತಾಯಿಯೊಡನೆ ಮಾತಾಡುತ್ತಾ, ಚಿನ್ನಕ್ಕನ್ನನ್ನು ಸಿಂಬಾವಿ ಭರಮೈಹೆಗ್ಗಡೆಯವರಿಗೆ ಕೊಟ್ಟು ಲಗ್ನವಾಗುವ ವಿಷಯದ ಪ್ರಸ್ತಾಪ ಬಂದಾಗ, ಅಂತಕ್ಕ ಹೂವಳ್ಳಿ ಚಿನ್ನಮ್ಮಗೂ ಕೋಣುರು ಮುಕುಂದಯ್ಯನಿಗೂ ಬಾಲ್ಯದಿಂದಲೂ ಇರುವ ಪ್ರಣಯ ಸಂಬಂಧದ ನೆನಪು ಮಾಡಿದಾಗ, ಮುದುಕ ಹೆಗ್ಗಡೆಯವರು ಹೇಳಿದ್ದ ಮಾತೂ ಮಾತಿನ ರೀತಿಯೂ ನೆನಪೂ ಮಾಡಿದಾಗ, ಮುದಕ ಹೆಗ್ಗಡೆಯವರು ಹೇಳಿದ್ದ ಮಾತೂ ಮಾತಿನ ರೀತಿಯೂ ಕಾವೇರಿಯ ಮುಂದೆ ನಿನ್ನೆಯೊ ಮೊನ್ನೆಯೊ ನಡೆದಂತೆ ಬಂದಿತು! “ಈ ಹುಡುಗರ ಆಟಾನೆಲ್ಲ ಲೆಕ್ಕಕ್ಕೆ ತಂಗೊಂಡ್ರೆ ಅಂದಹಾಗೆ ಆಯ್ತು ಬಿಡು: ಏನು ಮನೇಲಿ ಹೇಳೋರು ಕೇಳೋರು ಹಿರೇರು ದೊಡ್ಡೋರು ಯಾರು ಇಲ್ಲೇನು? ಇವರಿವರೇ ಗೊತ್ತು ಮಾಡಿಕೊಳ್ಳಾಕೆ? ನಾವೇನು ಕಿಲಸ್ತರೆ?…
ಆಗ ಸುಬ್ಬಣ್ಣ ಹೆಗ್ಗಡೆಯವರು ತಾಯಿಯ ಬೆನ್ನ ಹಿಂದೆ ನಿಂತಿದ್ದ ತನ್ನನ್ನೆ ಆ ವಿಚಾರದಲ್ಲಿ ತನ್ನ ಅಭಿಪ್ರಾಯ ಏನು ಎಂದು ಬರಿಯ ವಿನೋದಕ್ಕಾಗಿಯೆ ಕೇಳಿದ್ದರು. ತಾನು ಏನೂ ಉತ್ತರ ಕೊಡದೆ ಮುಂಡಿಗೆಯ ಹಿಂದೆ ಅವಿತುಕೊಂಡಿದ್ದಳು. ಈಗ? ತನಗೇ ಅಂತಹ ಸಂಕಟ ಪ್ರಾಪ್ತಿಯಾದಾಗ? ಕಾವೇರಿ ಚಿಂತಿಸಿದಳು: ಯಾವ ಮುಂಡಿಗೆ ಹಿಂದೆ ಅವಿತುಕೊಳ್ಳುವುದು? ತನ್ನನ್ನು ಮರೆಹೊಗಿಸಿಕೊಳ್ಳುವ ಮುಂಡಿಗೆ ಎಲ್ಲಿದೆ? ಚಿನ್ನಕ್ಕಗಾದರೂ ಮುಕುಂದಯ್ಯ ಇದ್ದರು. ತನಗೆ? ದೇವಯ್ಯಗೌಡರೂ ಉಂಗುರದ ಅನುಮಾನದಿಂದ ವಿಮುಖರಾಗಿಬಿಟ್ಟಿದ್ದಾರೆ!…. ಚೀಂಕ್ರ ಎಲ್ಲರೂ ಮಲಗಿದ ಮೇಲೆ ಹಿತ್ತಲುಕಡೆ ದನದ ಕೊಟ್ಟಿಗೆಯ ಹತ್ತಿರಬಂದು, ದನದ ಕೋಡು ಕಂಬಕ್ಕೆ ಬಡಿದಂತೆ ಸದ್ದು ಮಾಡುತ್ತಾನಂತೆ….ಇವೊತ್ತು ಇವರೆಲ್ಲಾ ಎಷ್ಟು ಹೊತ್ತಿನ ಮೇಲೆ ಮಲಗುತ್ತಾರೋ? ನಾನೂ ಹೊತ್ತಾಗಿ ಮಲಗಿದರೆ? ಎಲ್ಲಿಯಾದರೂ ಚೀಂಕ್ರ ಬರುವ ಸಮಯಕ್ಕೆ ಸರಿಯಾಗಿಒ ನನಗೆ ಜೋರಾಗಿ ನಿದ್ದೆ ಬಂದುಬಿಟ್ಟರೆ? ಇಲ್ಲ, ಇವೊತ್ತು ಏನಾದರೂ ನಿದ್ದೆ ಮಾಡುವುದೆ ಇಲ್ಲ; ಎಚ್ಚರವಾಗಿಯೆ ಇರುತ್ತೇನೆ… ಆ ಸಾಬು ಏನಾದರೂ ಕೆಟ್ಟ ಮನಸ್ಸು ಇಟ್ಟಿದ್ದಾನೆಯೊ? ಏನಾದರೂ ಮಾಡಿಬಿಟ್ಟರೆ? ಏನು ಮಾಡಿಯಾನು ಮಹಾ? ಚೀಂಕ್ರ ಜೊತೆಗಿರುವುದಿಲ್ಲವೆ? ಹಾಗೇನಾದರೂ ಮಾಡಿದರೆ, ಕತ್ತಿಯಲ್ಲಿ ಕಡಿದೆ ಬಿಡುತ್ತಾನೆ ಸಾಬಿಯನ್ನು! ಒಂದು ವೇಳೆ ಸ್ವಲ್ಪ ಮೈಮುಟ್ತಿ ಮುದ್ದಾಡಿದರೂ ಚಿಂತೆಯಿಲ್ಲ…. ಇತರರರೂ ಕೆಲವರು ಹಾಗೆ ನನ್ನನ್ನು ಪ್ರೀತಿಗಾಗಿ ಮುದ್ದಾಡಿಲ್ಲವೆ?…. ಏನಾದರೂ ಆಗಲಿ! ನನ್ನ ಬದಕು ಹಸನಾಗಬೇಕಾದರೆ ಆ ಉಂಗುರ ಮತ್ತೆ ನನ್ನ ಕೈ ಸೇರಬೇಕು. ಇಲ್ಲದಿದ್ದರೆ ಸಾಬಿ ಮಾಡಬಹುದಾದ ಕೇಡಿಗಿಂತಲೂ ಸಾಸಿರಮಡಿ ಕೇಡು ನನಗೆ ಕಟ್ಟಿಟ್ಟ ಬುತ್ತಿ….
ರಾತ್ರಿ ಅವರೆಲ್ಲ ಮಾತು ಮುಗಿಸಿ ಮಲಗುವುದು ತುಸು ಹೊತ್ತೇ ಆಗಿತ್ತು. ಇನ್ನೂ ಹೊತ್ತಾಗುತ್ತಿತ್ತೊ ಏನೊ? ಆದರೆ ಕಿಟ್ಟಯ್ಯಸೆಟ್ಟರು ಪದೇ ಪದೇ ಆಕಳಿಸತೊಡಗಿದ್ದರು. ಎಲಡಕೆ ಹಾಕಿದ್ದ ಕೆನ್ನಾಲಿಗೆಯನ್ನೂ ಹುಳುತಿಂದು ಅಸಹ್ಯವಾಗಿದ್ದ ದಂತಪಂಕ್ತಿಯನ್ನೂ ಪ್ರದರ್ಶಿಸುತ್ತ ಆಕಳಿಕೆಯಿಂದಲೆ ಉಕ್ಕಿದ್ದ ಕಣ್ಣನೀರನ್ನು ಮತ್ತೆ ಮತ್ತೆ ಪಂಚಿಯ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದರು, ರೋಮಮಯವಾಗಿದ್ದ ತಮ್ಮ ತೊಡೆ ಬುಡದವರೆಗೂ ಕಾಣುವುದನ್ನು ಒಂದಿನಿತೂ ಲೆಕ್ಕಿಸದೆ. ಅದನ್ನು ಕಂಡು ಅನಂತಯ್ಯ ಹೇಳಿದ್ದರು: “ಕಿಟ್ಟಯ್ಯಗೆ ಪೂರ್ತಿ ಸಾಕಾಗಿದೆ, ಹಾದಿ ನಡೆದು. ಅದರಲ್ಲಿಯೂ ಕೊನೆಕೊನೆಗೆ ಸ್ವಲ್ಪ ಓಡಿಓಡಿಯೆ ದೌಡು ಬರಬೇಕಾಯ್ತು, ಕತ್ತಲಾಗೋಕೆ ಮೊದಲೇ ಮನೆ ಸೇರುವ ಅಂತಾ. ಇವೊತ್ತು ಅಮಾಸೆ, ಕದ್ದಿಂಗಳು. ಪೂರಾ ಕೆಟ್ಟಕಾಲವಂತೆ! ರಾತ್ರಿ ಭೂತ ಪಿಶಾಚಿದೆಯ್ಯ ತಿರಗ್ತವೆ ಅಂತಾ ನಮ್ಮ ಕಿಟ್ಟಯ್ಯಗೆ ಪೂರಾ ಹೆದರಿಕೆ!….ನನಗೆ ಕಳ್ಳರ ಹೆದರಿಕೆ; ಇವನಿಗೆ ದೆವ್ವದ ಭಯ…. ಮೇಗರೊಳ್ಳಿಗೆ ಕಾಲಿಟ್ಟಮೇಲೆಯೇ ನಾವು ಮೆಲ್ಲಗೆ ಕಾಲು ಹಾಕಿದ್ದು….”
ಮನೆಯಲ್ಲಿ ನಿ:ಶಬ್ದವಾಗಿತ್ತು; ಕಗ್ಗತ್ತಲೆ ಕವಿದಿತ್ತು. ಮಳೆಗಾಲದ ಅಮವಾಸ್ಯೆಯಾಗಿದ್ದರಿಂದ ಮನೆಯ ಹೊರಗೆ ಯಾವ ವಸ್ತುವನ್ನೂ ಗುರುತಿಸಲು ಅಸಾಧ್ಯವಾಗುವಂತೆ ಕಗ್ಗತ್ತಲೆ ಕವಿದಿರುವಾಗ ಇನ್ನು ಮನೆಯ ಒಳಗೆ ಕೇಳಬೇಕೆ? ಮಲಗಿದ್ದವರು ಉಸಿರೆಳೆದುಕೊಳ್ಳುವ ಸದ್ದೂ ಆ ನಿಃಶಬ್ದ ಕತ್ತಲೆಯ ಬುಸುಗುಟ್ಟುವಿಕೆಯೆಂಬಂತೆ ಭಯಾನಕವಾಗಿತ್ತು. ಕಗ್ಗತ್ತಲೆಯನ್ನೆ ನೋಡುತ್ತಾ ನಿಃಶಬ್ದತೆಯನ್ನೆ ಆಲಿಸುತ್ತಾ ಕಾವೇರಿ ನಿಶ್ಚಲವಾಗಿ ಮಲಗಿದ್ದಳು, ಹಿತ್ತಲುಕಡೆಯ ದನದ ಕೊಟ್ಟಿಗೆಯ ದಿಕ್ಕಿಗೆ ಕಿವಿಯಾಗಿ. ಒಮ್ಮೊಮ್ಮೆ ದನವೂ ಎಮ್ಮೆಯೋ ಸೀನಿದರೆ, ಅಥವಾ ಕೊಳಗಿನ ಸದ್ದು ಮಾಡಿದರೆ ಕಾವೇರಿಗೆ ಮೈಯೆಲ್ಲ ಬಿಸಿಯಾದಂತಾಗಿ, ಹೊದೆದಿದ್ದ ಶಾಲನ್ನು ಸರಿಸುತ್ತಿದ್ದಳು, ಮೈ ತಣ್ಣಗಾಗಲಿಕ್ಕೆ.
ನಿದ್ದೆ ಮಾಡದಿದ್ದರೆ ಅಥವಾ ನಿದ್ದೆ ಬರದಿದ್ದರೆ ಇರಳು ಅದೆಷ್ಟು ದೀರ್ಘವೋ? ಕಾಯುವ ನಿಮಿಷನಿಮಿಷವೂ ಕಾವೇರಿಗೆ ಯುಗದೀರ್ಘವಾಗಿತ್ತು!
ಬರಬರುತ್ತಾ ಮನಸ್ಸಿನ ನೆಲದಲ್ಲಿ ನಡೆದಾಡುತ್ತಿದ್ದ ಅಲೋಚನೆಗಳು ಕನಸಿನ ನೀರಿನಲ್ಲಿ ತೇಲತೊಡಗಿದವು. ಭವಗಳಿಗಿದ್ದ ಸ್ಥೂಲತೆ ತೊಲಗಿ, ಗರಿ ಹಗುರವಾಗಿ ಕ್ರಮ ತೃಪ್ತಿ ಹಾರಾಡತೊಡಗಿದುವು, ಗುರುಲಘು ಭೇದವಿಲ್ಲದೆ ಅಸ್ತವ್ಯಸ್ತವಾಗಿ ಅಡ್ಡಾಡುವಂತೆ:
ಒಡ್ದಿಯಲ್ಲಿ ಕೋಳಿಯ ಹೇಟೆಯನ್ನು ಹಿಡಿದೆತ್ತಿಕೊಂಡು, ಆ ದಿನವೆ ಇಕ್ಕಲು ಮೊಟ್ಟೆ ಇದೆಯೋ ಇಲ್ಲವೋ ಎಂದು ಕಿರುಬೆರಳು ಹೆಟ್ಟಿ ನೋಡುತ್ತಿದ್ದಾಳೆ….
ಕೊರಗ ಹೇಳುತ್ತಿದ್ದಾನೆ “ಸುಳ್ಳು ಹೇಳೋ, ಸುಕ್ರ, ಅಂದರೆ “ವಾಟೆ ಕೊಳವೀಲಿ ಒಂಬತ್ತು ಆನೆ ಹೋಗಿ, ಮರಿ ಆನೆ ಬಾಲ ಸಿಕ್ಕೊಂಡ್ತು” ಅಂದನಂತೆ!” ಹಿ ಹ್ಹಿ ಹ್ಹಿ ಎಂದು ಫಕ್ಕನೆ ಕಣ್ಣು ಬಿಟ್ಟಳು ಕಾವೇರಿ.
‘ಅಯ್ಯೋ! ನಿದ್ದೆಮಾಡಿಬಿಟ್ಟಿದ್ದೆನಲ್ಲಾ?’ ಎಂದುಕೊಂಡು ಪಕ್ಕದಲ್ಲಿ ಅದೇ ಉದ್ದೇಶದಿಂದ ಇಟ್ಟುಕೊಂಡಿದ್ದ ತಾಮ್ರದ ಚೆಂಬಿನಿಂದ ನೀರು ತೆಗೆದು ಕಣ್ಣುಗಳನ್ನು ಒದ್ದೆ ಮಾಡಿಕೊಂಡಳು
ಮತ್ತೆ ಆಲೋಚನೆ: ಮೊದಮೊದಲು ಸಕ್ರಮ, ತರುವಾಯ ಅಕ್ರಮ:
ನಾಳೆ ಅಲ್ಲ, ನಾಡಿದ್ದಲ್ಲ, ಆಚೆ ನಾಡಿದ್ದು ಗೌರಿಹಬ್ಬಕ್ಕೆ ಮುಂಚೆ ದೇವಯ್ಯಗೌಡರು ಬಂದಾಗ ನನ್ನ ಕೈಲಿ ಉಂಗುರ ಕಂಡು ಬೆರಗಾಗ್ಬೇಕು!… ಬರದೆ ಇರ್ತಾರೆಯೆ? ಹೋದ ವರುಷವು ಗೌರಿ ಹಬ್ಬಕ್ಕೆ ಎರಡು ದಿನ ಇದೆ ಅನ್ನುವಾಗ ಬಂದು, ಈಗ ನಾನು ಹೊದ್ದುಕೊಂಡು ಇರೋ ಶಾಲನ್ನೆ ಕೊಟ್ಟು….ಏನೆಲ್ಲ ಮಾಡಿ ಹೋಗಿದ್ದರಲ್ಲಾ? (ಕಾವೇರಿ ಅದನ್ನು ನೆನೆದು ಪ್ರತ್ಯಕ್ಷವೆಂಬಂತೆ ಚಿತ್ರಿಸಿಕೊಂಡು ಸೊಗಸಿದಳು)….ದೇವಯ್ಯಗೌಡರು ಕಿಲಸ್ತರ ಜಾತಿಗೆ ಸೇರಿದರೆ ನಾನೂ ಸೇರುತ್ತೇನೆ. ಆ ಜಾತಿಯಲ್ಲಿ ಉಂಗುರ ತೊಡಿಸಿದ ಮೇಲೆ ಮದುವೆಯಾದಂತೆಯೆ ಲೆಕ್ಕವಂತೆ! ಪಾದ್ರಿ ಹೇಳಿದ್ದರಲ್ಲವೆ?…. ಪಾಪ, ಚೀಂಕ್ರನ ಮೇಲೆ ಏನೆಲ್ಲ ಹೇಳುತ್ತಿದ್ದರು? ಎಷ್ಟು ಒಳ್ಳೆಯವನು ಅಂವ? ಅವನ ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಂದ ಎಂದು ಸುದ್ದಿ ಹುಟ್ಟಿಸಿದ್ದರಲ್ಲಾ?….ಮೊನ್ನೆ ಅವನ ಕೈಬೆರಳನ್ನೆ ಕಡಿದಿದ್ದಳಲ್ಲಾ ಯಾವಳೋ ಹಿಡಿಂಬಿ? ಬೆರಳಿಗೆ ಬಟ್ಟೆ ಸುತ್ತಿಕೊಂಡು, ಅಳುತ್ತಾ ನನ್ನ ಹತ್ತಿರ ದುಃಖ ತೋಡಿಕೊಂಡನಲ್ಲಾ? ಪಾಪ, ಅವನ ಮಕ್ಕಳ ಗೋಳು ಬೇಡವಂತೆ!….ನನ್ನ ಹತ್ತಿರ ದೇವಯ್ಯ ಗೌಡರು ಕೊಟ್ಟ ದುಡ್ಡು ಇದೆಯಲ್ಲಾ ಅದನ್ನೆಲ್ಲ ಚೀಂಕ್ರನಿಗೆ ಕೊಟ್ಟುಬಿಡುತ್ತೇನೆ, ಅವನ ಅವನ ಉಪಕಾರಕ್ಕಾಗಿ…. ಏ ಈ ನಾಯಿಗೆ ಏನು ಕಲಿಯೆ? ಹೇಂಟೆ ಮೇಲೆ ಹತ್ತಕ್ಕೆ ಹೊಗ್ತದಲ್ಲಾ!…. ಯೇಸುಸ್ವಾಮಿ ಒಂದೇ ಮೀನನ್ನು ಐದು ಸಾವಿರ ಜನಕ್ಕೆ ಹೊಟ್ಟೆ ತುಂಬ ಹಂಚಿಕೊಟ್ಟನಂತಲ್ಲಾ!…. ತ್ಚೂ! ಬ್ಯಾಡ ಸುಮ್ಮನಿರಿ! ಅಲ್ಲಿಗೆಲ್ಲ ಕೈ ಹಾಕಬ್ಯಾಡಿ!…. ಅಲ್ಲಿಗೆ ಮುತ್ತುಕೊಡಾದು ಬ್ಯಾಡ; ನೀವು ಕಚ್ಚಿಬಿಡ್ತೀರಿ!….
ಕೋಣೆಯ ಮೂಲೆಯಲ್ಲಿ ಕೊಬ್ಬರಿ ಸುಟ್ಟು ಕಟ್ಟಿ ಇಟ್ಟಿದ್ದ ಇಲಿಕತ್ತರಿ ಸಿಡಿದ ಸದ್ದಾಗಿ ಕಾವೇರಿ ಕುಮುಟಿ ಎಚ್ಚೆತ್ತಳು. ಸಿಕ್ಕಿಕೊಂಡಿದ್ದ ಇಲಿ ಚ್ಞಿ ಚ್ಞಿ ಚ್ಞಿ ಎಂದು ಕೂಗಿತು. ಅಭ್ಯಾಸ ಬಲದಿಂದ ಛೇ ಪಾಪ! ಎಂದುಕೊಂಡಳು ಕಾವೇರಿ. ಆದರೆ ಅಷ್ಟರಲ್ಲೆ ಅದರ ಸದ್ದು ನಿಂತಿತ್ತು. ಅದು ಸತ್ತುಹೋಯಿತೆಂದು ಸುಮ್ಮನಾದಳು….
ಯಾಕೆ ಇನ್ನೂ ಚೀಂಕ್ರ ಬರಲಿಲ್ಲ? ಮಳೆ ಬಂದಿತೆಂದು ಸುಮ್ಮನಾಗಿ ಬಿಡುತ್ತಾನೊ? ಆಗ ಮಳೆ ಬಂದಿದ್ದರೇನಾಯ್ತು? ಈಗ ನಿಂತಿದೆಯಲ್ಲ!….ಮೆಲ್ಲಗೆ ಎದ್ದು ಹೋಗಿ ಹಿತ್ತಲು ಕಡೆಯ ಬಾಗಿಲು ತೆರೆದು ನೋಡಲೇ?…ಕಾವೇರಿಗೆ ಅನಂತಯ್ಯ ಹೇಳಿದ್ದು ನೆನಪಾಯಿತು: ಇವೊತ್ತು ಅಮವಾಸ್ಯೆ, ಕೆಟ್ಟಕಾಲ. ಭೂತ ಪಿಶಾಚಿ ತಿರುಗುತ್ತವೆ? ಒಬ್ಬಳೆ ಎದ್ದು ಹೋಗಿ ಬಾಗಿಲು ತೆರೆದಾಗ ಭೂತಗೀತ ಕಾಣಿಸಿಕೊಂಡರೆ?….ಈಗ ಬೇಡ, ಚೀಂಕ್ರ ಬಂದಮೇಲೆ ಹೋಗ್ತೀನಿ. ಆಗ ಧೈರ್ಯಕ್ಕೆ ಅಂವ ಇರ್ತಾನೆ!….
ದನದ ಕೋಡು ಕಂಬಕ್ಕೆ, ಅದು ಕುತ್ತಿಗೆ ತೀಡುವಾಗ ತಗುಲಿ, ಹೊಡೆದಂತೆ ಸದ್ದು ಕೇಳಿಸಿತು!
ಕಾವೇರಿ ಸರಕ್ಕನೆ ಹಾಸಗೆಯಲ್ಲಿ ಎದ್ದು ಕುಳಿತಳು. ಆಲಿಸಿದಳು. ಹೌದು, ಚೀಂಕ್ರನೆ ಇರಬೇಕು. ಎದೆ ಢವಢವನೆ ಹೊಡೆದುಕೊಂಡಿತು. ಉಸಿರಾಟ ಹೆಚ್ಚಿತು….ನಿಜವಾಗಿಯೂ ಬಂದೇ ಬಿಟ್ಟನೆ? ನಿಜವಾಗಿಯೂ ನಾನು ಅವನ ಸಂಗಡ ಒಬ್ಬಳೆ ಈ ರಾತ್ರಿ ಕಗ್ಗತ್ತಲೆಯಲ್ಲಿ ಹೋಗಿ ಸಾಬಿಯ ಕೈಲಿ ಉಂಗುರ ಹಾಕಿಸಿಕೊಂಡು ಬರಬೇಕೆ?….ಇದುವರೆಗೂ ಭಾವಮಾತ್ರವಾಗಿದ್ದು ಕಲ್ಪನಾ ಸ್ವಾರಸ್ಯದ ಸಾಹಸದಂತೆ ಆಕರ್ಷಣೀಯವಾಗಿದ್ದುದು ಈಗ ವಾಸ್ತವವಾಗಿ ನಡೆಯಲಿರುವ ಲೋಕಚರಿತವಾಗಿ ಇದಿರುನಿಂತಾಗ ತರಳೆ ಕಾವೇರಿಗೆ ಹೆದರಿಕೆಯಾಗತೊಡಗಿತು. ಪಕ್ಕದ ಕೋಣೆಯಲ್ಲಿ ಮಲಗಿದ್ದ ತಾಯಿಯನ್ನು ಎಬ್ಬಿಸಿದರೆ? ಏನು ಮಾಡುತ್ತಿದ್ದರೂ ತಾಯಿಯನ್ನೆ ಕೇಳಿ, ಕಾರ್ಯಾಚರಣೆ ಕೈಕೊಳ್ಳುವ ಸಮಯ ಬಂದಾಗ ದಿಕ್ಕು ತೋರದಂತಾಗಿ ಹಾಸಗೆಯ ಮೇಲೆ ಕುಳಿತೆ ಇದ್ದಳು, ಕಾಲು ಏಕೊ ಸೋತುಬಂದಂತಾಗಿತ್ತು…. ಆದರೆ? ತುಸು ನಿಂತಿದ್ದ ಆ ಕೋಡುಬಡಿಯುವ ಸದ್ದು ಮತ್ತೆ ಕೇಳಿಸಿತು….ಉಂಗುರ….ದೇವಯ್ಯಗೌಡರು…. ಕಿಟ್ಟಯ್ಯಸೆಟ್ಟಿ…. ಮದುವೆ…. ಹೂವಳ್ಳಿ ಚಿನ್ನಕ್ಕ….ತಲೆಯೊಳಗೆ ಏನೇನೋ ಸುತ್ತತೊಡಗಿತು…. ಈಗ ಹಿಂಜರಿದರೆ ನಾನು ಕೆಟ್ಟೆ. ನನ್ನ ಬಾಳೆಲ್ಲ ಹಾಳಾಗುತ್ತದೆ!….ಕಾವೇರಿ ದಿಟ್ಟಮನಸ್ಸಿನಿಂದ ಆವೇಶ ಬಂದವರಂತೆ ಹಾಸಗೆಯ ಮೇಲೆ ಎದ್ದುನಿಂತು, ಶಾಲನ್ನೆತ್ತಿ ಸುತ್ತಿ ಹೊದೆದುಕೊಂಡಳೂ.
ಅವಳು ಮಲಗುವಾಗ ದಿನನಿತ್ಯದ ರೂಢಿಯಂತೆ ಗಟ್ಟದ ತಗ್ಗಿನವರ ಉಡುಗೆಯಲ್ಲಿರಲಿಲ್ಲ; ಗಟ್ಟದ ಮೇಲಿನವರಂತೆ ಸೊಂಟಕ್ಕೆ ಸೀರೆ ಬಿಗಿದು ಸುತ್ತಿ, ಗೊಬ್ಬೆ ಸೆರಗು ಕಟ್ಟಿ, ಭದ್ರವಾಗಿ ಉಡುಗೆ ಉಟ್ಟಿದ್ದಳು. ಗಟ್ಟದ ತಗ್ಗಿನ ಉಡುಗೆ ತುಂಬ ಸಡಿಲ ಉಡುಗೆ ಎಂಬುದು ಅವಳ ನಂಬುಗೆ. ಯಾರಾದರೂ ತುಸು ಜಗ್ಗಿಸಿ ಎಳೆದರೂ ಬಿಚ್ಚಿಯೆ ಹೋಗುವ ಸಂಭವ ಹೆಚ್ಚು. ಗಟ್ಟದ ಮೇಲಿನದಾದರೋ, ದಂಡುಕಡಿಯಲು ಹೋಗುವವರ ಸಮವಸ್ತ್ರದಂತೆ, ಬಿಗಿಯಾಗಿ ಭದ್ರವಾಗಿದ್ದು, ಎಂತಹ ಹೋರಾಟದಲ್ಲಿಯೂ ಸಡಿಲವಾಗುವ ಸಂಭವ ಬಹಳ ಕಡಿಮೆ: ಬಿಚ್ಚಿಹೋಗುವುದಂತೂ ಸಾಧ್ಯವೆ ಇಲ್ಲ!….
ಕಾವೇರಿ ಸದ್ದುಮಾಡದೆ ತುದಿಗಾಲಿನಲ್ಲಿ ಮೆಲ್ಲನೆ ತಡವಿ ನಡೆದು, ತಾಳವನ್ನು ಅದಷ್ಟು ಎಚ್ಚರಿಕೆಯಿಂದ ಹಿಂದಕ್ಕೆ ಸರಿಸಿ, ಬಾಗಿಲನ್ನು ಕೀಲು ಸದ್ದಾಗದಂತೆ ತೆರೆದಳು. ಮಳೆಗಾಲದ ಚಳಿಗಾಳಿ ಸುಯ್ಯನೆ ಬೀಸಿತು. ಮತ್ತೆ ಬೇಗನೆ ಬಾಗಿಲು ಹಾಕಿಕೊಂಡು ಹೊರಗಣ ಚಿಲಕವಿಕ್ಕಿದಳು, ಬೀಸುವ ಚಳಿಗಾಳಿಯಿಂದ ಒಳಗೆ ಮಲಗಿರುವವರಿಗೆ ಎಚ್ಚರವಾಗದಿರಲಿಕ್ಕೆ….
ಮುತ್ತಿ ದಟ್ಟಯಿಸಿದ್ದ ಕತ್ತಲೆಯಲ್ಲಿ ವಸ್ತುಪ್ರತ್ಯೇಕತೆ ಕಾಣಿಸುತ್ತಿರಲಿಲ್ಲ. ಆದರೆ ಬಳಿಸಾರಿ ಪಿಸುದನಿಯಲ್ಲಿ ಮಾತನಾಡಿದ ಚೀಂಕ್ರನ ಗುರುತು ಹಿಡಿದು ಅವನ ಹಿಂದೆ ಹೊರಟಳು. ಸುಪರಿಚಿತ ಪ್ರದೇಶದಲ್ಲಿ ಮರ ಗಿಡ ಹುಳುವಿನ ನಡುವೆ, ಕಣ್ಣಿಗೇನೂ ಹಿಂದೆ ಬೇಗಬೇಗನೆ ನಡೆದು, ಅಡ್ಡಬಂದ ಆಗುಂಬೆ ತೀರ್ಥಹಳ್ಳೀ ಹೆದ್ದಾರಿಯನ್ನು ದಾಟಿ, ಮಿಷನ್ ಇಸ್ಕೂಲಿನ ಬಾವಿಯ ಹತ್ತಿರದಿಂದಾಗಿ ಅದರ ಕಟ್ಟಡದ ಮುಂಭಾಗದ ಬಾಗಿಲನ್ನು ಚೌಕಟ್ಟಿಗೆ ಕೈ ಆನಿಸಿ ಹೊಸ್ತಿಲ ಮೇಲೆ ನಿಂತು, ಒಳಗೆ ನೋಡಿದಳು:
ಕಗ್ಗತ್ತಲೇ! ಯಾರೂ ಏನೂ ಕಾಣಿಸುವಂತಿರಲಿಲ್ಲ. ಆದರೆ ಬೀಡಿಯ ವಾಸನೆ ಮತ್ತು ಹೊಗೆ ತುಂಬಿತ್ತು. ನೋಡುತ್ತಿದ್ದಂತೆ, ಸೇದುತ್ತಿದ್ದ ಬೀಡಿಯ ತುದಿಯ ಬೆಂಕಿಯ ಹುಂಡುಗಳು ಕೆಂಪಗೆ ಮಿರುಗಿದವು: ಒಂದಲ್ಲ, ಎರಡಲ್ಲ, ಮೂರು! ಕಾವೇರಿಗೆ ಕೈ ಕಾಲು ನಡುಗಿದಂತಾಗಿ ತುಂಬ ಹೆದರಿಕೆಯಾಯಿತು: ಕುಸಿದು ಬೀಳುತ್ತೇನೆಯೊ ಎಂಬಷ್ಟು ಭೀತಿ! ಅಷ್ಟರಲ್ಲಿ ಯಾರೊ ತನ್ನನ್ನು ಎಳೆದುಕೊಂಡರು. ‘ಉಂಗುರ ಬೇಡವೆ? ಬಾ.  ಯಾಕೆ ಹೆದರಿಕೆ?’ ಎಂದು ಹೇಳಿದಷ್ಟು ಮಾತ್ರ ಕೇಳಿಸಿತ್ತು. ಮುಂದೆ ಅವಳ ಕಿವಿಗೆ ಕೇಳಿಸುವ ಸಾಮರ್ಥ್ಯವೆ ಉಡುಗಿಹೋಗಿತ್ತು. ಮನಸ್ಸೂ ಮಂಜುಗಟ್ಟಿತ್ತು. ಚೀಂಕ್ರನನ್ನು ಕೂಗಿಕೊಂಡಳು. ಆದರೆ ಬಾಗಿಲು ಹಾಕಿತು. ಯಾವುದೋ ಬಲಿಷ್ಠ ಬಾಹು ತನ್ನನ್ನು ತೊಡೆಯ ನಡುವೆ ಅಪ್ಪಿ ಹಿಡಿದು, ಬೆರಳಿಗೆ ಉಂಗುರ ತೊಡಿಸುತ್ತಿದ್ದಂತೆಯೆ ಅವಳಿಗೆ ಪ್ರಜ್ಞೆ ತಪ್ಪಿತ್ತು: ಹಿಂದೆ ದೇವಯ್ಯ ತೊಡಿಸಿದ್ದಾಗ ಅದು ಸಡಿಲವಾಗಿದ್ದು ನುಣುಚಿ ಬಿದ್ದುಹೋಗಿತ್ತು; ಈವೊತ್ತು ಅದು ಭದ್ರವಾಗಿ ಬೆರಳನ್ನಪ್ಪಿ ಕೂತುಬಿಟ್ಟಿತು; ಜನರು ಆಡಿಕೊಳ್ಳುತ್ತಿದ್ದುದ್ದು ಸುಳ್ಳಲ್ಲ: ಹುಡುಗಿ ಈಚಿಚೇಗೆ ಎಷ್ಟು ಹುಲುಸಾಗಿ ಬಾಳೆದಿಂಡಿನಂತೆ ಬೆಳೆದು ನಿಂತಿದ್ದಾಳೆ!”….
* * *
ಬೆಳಗಿನ ಜಾವದ ಚಳಿಗಾಳಿ ಬೀಸಿ ಕಾವೇರಿಗೆ ಮೆಲ್ಲಗೆ ಪ್ರಜ್ಞೆ ಮರಳತೊಡಗಿತು. ಆದರೆ ಇನ್ನೂ ಎಚ್ಚರಾಗಿರಲಿಲ್ಲ. ಮೆಲ್ಲನೆ ನರಳಿದಳು. ಹೊರಳಲು ಯತ್ನಿಸಿದಾಗ ತುಂಬ ನೋವಾಗಿ. ಎಚ್ಚರವೂ ಆಯಿತು. “ಅಬ್ಬೇ! ಅಬ್ಬೇ!” ಕರೆದಳು. ಆದರೆ ದನಿ ಶಬ್ದರೂಪಕ್ಕೆ ತಿರುಗಲು ಸಮರ್ಥವಾಗಿರಲಿಲ್ಲ. ತಾನು ಮನೆಯಲ್ಲಿಯೆ ಮಲಗಿದ್ದೇನೆ ಎಂದೇ ಭಾವಿಸಿ, ಕಣ್ಣು ತೆರೆದು ಸಪ್ರಜ್ಞವಾಗಿ ಈಕ್ಷಿಸಿದಳು. ಬಾಗಿಲು ಪೂರ್ಣವಾಗಿ ತೆರೆದು ಬಿದ್ದಿದ್ದುದರಿಂದ ಬೆಳಗಿನ ಜಾವದ ಪೂರ್ವದ ಬೆಳಕಿನ ಛಾಯೆ ಒಂದಿನಿತು ನುಗ್ಗಿತ್ತು. ತಾನು ಮನೆಯಲ್ಲಿ ಮಲಗಲಿಲ್ಲ ಎಂಬ ಅರಿವು ಮರಳಿತು. ಒಡನೆಯೆ ನಡೆದ ಸತ್ಯಸಂಗತಿ ಸಿಡಿಲಿನಂತೆ ಮನದ ಮೇಲೆರಗಿತು: ಚೀಂಕ್ರನೊಡನೆ ಬಂದದ್ದು….ಉಂಗುರದ ನೆವದಿಂದ ತನ್ನನ್ನು ಸೆಳೆದು ಅಮಾನುಷವಾಗಿ ಪಶುಕ್ರೂರವಾಗಿ….ದ್ದು…ಮತ್ತೆ ಸ್ವಲ್ಪಹೊತ್ತು ಸೋತಂತೆ ಬಿದ್ದಿದ್ದಳು, ಕನ್ಯೆ!….ಮತ್ತೆ ಎಚ್ಚತ್ತು ಕಷ್ಟಪಟ್ಟು ಎದ್ದು ಕುಳಿತಾಗ ಇಸ್ಕೂಲಿನೊಳಕ್ಕೆ ಇನ್ನಷ್ಟು ಬೆಳಕು ನುಗ್ಗಿತ್ತು…ಇಸ್ಕೂಲು….ಅದೇ ಬೆಂಚಿನ ಮೇಲೆ ಕೂತಿದ್ದರಲ್ಲವೆ ಬೀಡಿ ಸೇದುತ್ತಿದ್ದವರು….ನೋಡುತ್ತಾಳೆ, ಕೊರಗ ಹುಡುಗನು ತಮ್ಮ ದನ ಎಮ್ಮೆಗಳಿಗಾಗಿ ಹುಲ್ಲು ದಾಸ್ತಾನು ಮಾಡಿದ್ದ ಸ್ಥಳದಲ್ಲಿಯೆ ತನ್ನನ್ನು ಕೆಡವಿ ಅತ್ಯಾಚಾರ ನಡೆಸಿದ್ದರೆ! ಆ ಹುಲ್ಲನ್ನೆ ಹಾಸುಗೆಯಾಗಿ ಹಾಸಿಬಿಟ್ಟಿದ್ದಾರೆ. ಸೀರೆ ಹರಿದು ಹೋಗಿದೆ. ರಕ್ತದ ಕಲೆ ಹುಲ್ಲಿನ ಮೇಲೆ, ಬಟ್ಟೆಯ ಮೇಲೆ-ತೊಡೆಯಲ್ಲಾ ನೆತ್ತರು. ತುಟಿ ಹರಿದು ಊದಿವೆ. ಕೆನ್ನೆ ಗಾಯಗೊಂಡು ರಕ್ತಮಯ, ಸೆರಗೆಲ್ಲಾ ಚೂರು. ಅಯ್ಯೋ ಎದೆಗಳೂ….! ಅಯ್ಯೋ…. ಅಯ್ಯೋ….ಅಯ್ಯೋ!…. ಕಾವೇರಿಗೆ ತನ್ನ ಶರೀರ ತನ್ನ ಜೀವಕ್ಕೆ ಮೆತ್ತಿಕೊಂಡಿರುವ ಅಮೇಧ್ಯದಷ್ಟು ಅಸಹ್ಯಕರವಾಯಿತು. ಆ ಎಂಚಲನ್ನು ಹ್ಯಾಕ್ ಥೂ ಉಗುಳಿಬೆಡಬೇಕೆಂದು ಮನಸ್ಸು ಉರಿಯತೊಡಗಿತು. ಪಕ್ಕದಲ್ಲಿ ಬಿದ್ದಿದ್ದ ಶಾಲನ್ನು ಎತ್ತಿಕೊಂಡಳು. ಬಾಗಿಲಿಂದ ಹೊರಬಿದ್ದಳು; ಗಾಯ, ನೋವು, ಅವಮಾನ, ಆಯಾಸ ಒಂದೂ ಅವಳಿಗೆ ತಡೆಯಾಗಲಿಲ್ಲ….ಮನೆಯ ಕೋಳಿಹುಂಜದ ಕಡೆಯ ಜಾವದ ಕೂಗು ಕೇಳುತ್ತಿತ್ತು…. ಇನ್ನು ಅವಳು ಯಾರಿಗೂ ಸಿಕ್ಕುವುದಿಲ್ಲ. ದೇವಯ್ಯಗೌಡರಿಗೂ ದೂರ; ಕಿಟ್ಟಯ್ಯನಿಗೂ ದೂರ….ಸ್ಕೂಲಿನ ಬಾವಿಯ ಬಳಿಗೆ ಬಂದಳು… ಅನಂತಯ್ಯ ಹಸುರು ಕೋಲು ಹಿಡಿದು ತೋಡಿಸಿದ್ದ ಬಾವಿ! ಎಷ್ಟೋ ಸಾರಿ ಸಿಟ್ಟು ಬಂದಾಗ ತಾಯಿಗೆ ಹೆದರಿಸಿದ್ದಳು, “ನಾನು ಇಸ್ಕೂಲು ಬಾವಿಗೆ ಹಾರಿ ಬಿಡ್ತಿನೆ” ಎಂದು…. ಶಾಲನ್ನು ಬಾವಿಯ ಬಳಿ ಬಿಚ್ಚಿ ಬಿಸುಟು….
ತನ್ನ ಮೈಯನ್ನು ಕೆಡಿಸಿದ್ದ ಕಡುಪಾಪಿಗಳಲ್ಲಿ ಚೀಂಕ್ರನೂ ಸೇರಿದ್ದನೆಂಬುದು ಕಾವೇರಿಗೆ ಗೊತ್ತಾಗದಿದ್ದುದು ಒಂದು ಭಗವತ್ ಕೃಪೆಯೆ ಆಗಿತ್ತು. ಆದೇನಾದರೂ ಗೊತ್ತಾಗಿದ್ದರೆ ಭಗವಂತನೆ ಸತ್ತು ಹೋಗುತ್ತಿದ್ದನು! ಆತ್ಮಹತ್ಯೆಗೂ ಪ್ರಯೋಜನವಿರುತ್ತಿರಲಿಲ್ಲ. ಸಕಲ ಮೌಲ್ಯ ವಿನಾಶವಾದಮೇಲೆ ಸತ್ತಾದರೂ ಸೇರಿಕೊಳ್ಳಲು ಯಾವ ಪುರುಷಾರ್ಥರೂಪದ ಯಾವ ದೇವರು ತಾನೆ ಇರುತ್ತಿತ್ತು?
* * *
ಅಂತಕ್ಕನ ಮನೆ ನಿರುದ್ವಿಗ್ನವಾಗಿ ನಿಃಶಬ್ದವಾಗಿತ್ತು. ಬೆಳಕು ಬಿಡುತ್ತಿದ್ದ ಹಾಗೆ ಒಡ್ಡಿಯ ಕೋಳಿಗಳು ಹೊರಗೆ ಬರಲು ಒಂದರ ಮೇಲೊಂದು ಒಡ್ದಿಯ ಬಾಗಿಲ ಬಳಿಗೆ ನುಗ್ಗಿ ಸದ್ದುಗೈಯತೊಅಡಗಿದ್ದವು. ಮುರುವನ್ನು ನಿರೀಕ್ಷಿಸಿ, ಹಸಿದ ದನವೊಂದು, ಕೊಟ್ಟಿಗೆಯಲ್ಲಿ ಅಂಬಾ ಎನ್ನುತ್ತಿತ್ತು. ಕೊರಗ ಹುಡುಗ ಎತ್ತು ಹಿತ್ತಲುಕಡೆಯ ಬಾಗಿಲನ್ನು ತೆರೆಯಲು ತಾಳಕ್ಕೆ ಕೈಹಾಕಿ ಹಿಂದಕ್ಕೆಳೆದನು. ತಾಳ ಸರಿಯಲ್ಲಿಲ್ಲ. ನೋಡುತ್ತಾನೆ ತಾಳ ಸರಿದೇ ಇತ್ತು. “ಅಯ್ಯೋ ದೇವರೆ, ರಾತ್ರಿ ತಾಳ ಹಾಕಿಯೆ ಇರಲಿಲ್ಲ?”ಎಂದುಕೊಂಡು ಬಾಗಿಲನ್ನು ಎಳೆದನು. ಬಾಗಿಲು ತೆರೆಯಲಿಲ್ಲ; ಹೊರಗಡೆಯಿಂದ ಚಿಲಕ ಹಾಕಿಬಿಟ್ಟಿದ್ದಾರಲ್ಲ?” ಎಂದುಕೊಂಡು ಮುಂಚೆಕಡೆಯ ಬಾಗಿಲಿಂದ ಹೊರಗೆ ಹೋಗಿ, ಹಿತ್ತಲುಕಡೆಯ ಬಾಗಿಲ ಚಿಲಕ ತೆಗೆದು, ತನ್ನ ದಿನನಿತ್ಯದ ಕೆಲಸಗಳಿ ಶುರು ಮಾಡಿದನು.
ಅಂತಕ್ಕ ಎದ್ದವಳು ಪದ್ಧತಿಯಂತೆ “ಕಾವೇರೀ” ಎಂದು ಕರೆದು ತನ್ನ ಕೆಲಸಕ್ಕೆ ಹೋದಳು.
ಸ್ವಲ್ಪ ಹೊತ್ತಾದ ಮೇಲೆ ತಾಯಿ ಅಡುಗೆಮನೆಯಿಂದಲೆ ಮಗಳನ್ನು ಮತ್ತೆ ಕೂಗಿ ಕರೆದಳು: ‘ಕಾವೇರಿ! ಕಾವೇರೀ!’
ಉತ್ತರ ಬರದಿರಲು ‘ಗಂಡನಾಗುವವನು ಬಂದಿದ್ದರೂ ಸ್ವಲ್ಪವೂ ಉತ್ಸಾಹ ತೋರಿಸದೆ ಉದಾಸೀನವಾಗಿ ಮಲಗಿಬ್ಬಿಟ್ಟಿದ್ದಾಳಲ್ಲಾ! ಏನು ಹಟದ ಹುಡುಗಿಯೋ ಇವಳು?’ ತನ್ನಲ್ಲಿಯೆ ತಾನೆಂದುಕೊಂಡು ಅಂತಕ್ಕ ಮಗಳು ಮಲಗಿದ್ದ ಕೋಣೆಗೆ ಹೋದಳು. ಬರಿದಾಗಿದ್ದ ಹಾಸಗೆಯನ್ನು ಕಂಡು ಮುಖ ತೊಳೆಯುವದಕ್ಕೋ ಬಯಲು ಕಡೆಗೋ ಹೋಗಿರಬೇಕೆಂದು ಭಾವಿಸಿ ಮತ್ತೆ ಅಡುಗೆ ಮನೆಗೆ ಹೋದಳು, ನೆಂಟರಿಗೆ ಬೆಳಗಿನ ಉಪಹಾರ ತಯಾರಿಸಲು.
ಕೊರಗ ಎಮ್ಮೆ ದನಗಳಿಗೆ ಮುರು ಇಡಲು ಸರಿಮಾಡಿ, ಹುಲ್ಲು ತರಲೆಂದು ಇಸ್ಕೂಲಿಗೆ ಓಡಿದನು. ಸ್ಕೂಲು ಕಟ್ಟಡದೊಳಗೆ ಎಮ್ಮೆ ದನ ಬಿಡಬೇಡ ಹುಲ್ಲು ಕೂಡಿಡಬೇಡ ಎಂದು ಪಾದ್ರಿ ಮೇಗರವಳ್ಳಿಗೆ ಬಂದಾಗಲೆಲ್ಲ ಹೇಳಿದ್ದರೂ ಕೊರಗ ಅತಿಕ್ರಮಿಸಿ ಹಾಗೆ ಮಾಡುತ್ತಲೆ ಬಂದಿದ್ದನು. ಜೀವರತ್ನಯ್ಯ ಬಾಗಿಲಿಗೆ ಬೀಗ ತಂದು ಹಾಕುವವರೆಗೂ ಇಸ್ಕೂಲನ್ನು ಹುಲ್ಲು ಕೊಡುವ ಜಾಗವನ್ನಾಗಿ ಬಳಸಲು ನಿಶ್ಚಯಿಸಿ ಬಿಟ್ಟಿದ್ದನು ಅವನು.
ಬಾವಿಯ ಬಳಿಗೆ ಬಂದಾಗ ಗುಲಾಬಿ ಬಣ್ಣದ ಶಾಲು ಬಿದ್ದಿದ್ದುದು ಕಾಣಿಸಿತು. ಕಾವೇರಿಯ ಹತ್ತಿರ ಅಂತಹ ಬಣ್ಣದ ಶಾಲು ಇದ್ದುದನ್ನು ಕಂಡಿದ್ದ, ಮತ್ತು ಮೆಚ್ಚಿ ಆಸೆಪಟ್ಟಿದ್ದ. ಅವನಿಗೆ ‘ಇಲ್ಲಿಗೆ ಯಾಕೆ ಬಂದಿದ್ದಾರೆ ಅವರು? ಇಷ್ಟು ಬೆಳಿಗ್ಗೆ?’ ಅನ್ನಿಸಿತು. ‘ಬಹುಶಃ ಹೊಟ್ಟೆ ಸರಿಯಾಗಿಲ್ಲವೆನೋ?… ಅವರೇ ಇರಬೇಕು ಹೊರಕಡೆಗೆ ಹೋಗಲಿಕ್ಕಾಗಿ ಹಿತ್ತಲುಕಡೆಯ ಬಾಗಿಲು ತೆರೆದು, ಹೊರಚಿಲಕ ಹಾಕಿಕೊಂಡಿದ್ದು’ ಎಂದುಕೊಂಡು ಸುತ್ತಲೂ ನೋಡಿದನು. ಯಾರೂ ಎಲ್ಲಿಯೂ ಇದ್ದ ಚಿಹ್ನೆ ಕಾಣಿಸಲಿಲ್ಲ. ಅವನಿಗೇ ತುಸು ಇಸ್ಸಿ ಅನ್ನಿಸಿತು, ಹಾಗೆ ನೋಡಿದುದ್ದಕ್ಕೆ: ‘ಅವರು ಇಲ್ಲೆ ಎಲ್ಲಿಯಾದರೂ ಮಟ್ಟಿನ ಮರೆಯಲ್ಲಿ ಹೊರಕಡೆಗೆ ಕೂತಿದ್ದರೆ?’ ಅಷ್ಟರಲ್ಲಿ ಕಾಡಿನಿಂದ ಒಂದು ಮೀಂಗುಲಿಗನ ಹಕ್ಕಿ ಕೂಗಿತು: ಮ್ಞೀ! ಮ್ಞೀ! ಮ್ಞೀ! ಮ್ಞೀ! ‘ಹಾಳು ಅಪಶಕುನದಹಕ್ಕಿ! ಎನು ಕೇಡು ಕರೆಯಲು ಒರಲುತ್ತಿದಿಯೋ?’ ಎಂದುಕೊಂಡ ಕೊರಗ ಹೊರಗೆ ಹುಲ್ಲು ತರಲು ಇಸ್ಕೂಲಿನ ಬಾಗಿಲಿಗೆ ಬಂದನು.
ನೋಡುತ್ತಾನೆ, ಬಾಗಿಲು ಆಈ ಎಂದು ಬಾಯಿ ತೆರೆದುಕೊಂಡಿದೆ ‘ಹಾಳು ಸೂಳೆಮಕ್ಕಳು! ಹಾಕಿದ್ದ ಚಿಲಕ ತೆಗೆದು, ಬಾಗಿಲು ಹಾರು ಹೊಡೆದಿಟ್ಟಿದ್ದಾರಲ್ಲಾ? ಕಂಡವರ ದನ ನುಗ್ಗಿಸಿ ಹುಲ್ಲು ತಿನ್ನಿಸಿರಬೇಕು’ ಎಂದು ಶಪಿಸುತ್ತಾ ಒಳಗೆ ದಾಟಿ ನೋಡುತ್ತಾನೆ.
ಹುಲ್ಲು ಕೆದರಿ ಬಿದ್ದಿದೆ. ಏನೇನೊ ವಾಸನೆ: ಬೀಡಿಯ ವಾಸನೆ, ಸಾರಾಯಿ ವಾಸನೆ, ಮಾಂಸದ ಮೇಲೋಗರದ ಕಂಪು! ನೋಡುತ್ತಾನೆ, ಒಂದು ಮೂಲೆಯಲ್ಲಿ ಲಾಟೀನು! ದೀಪ ಕಾಣಬಾರದಷ್ಟು ಸಣ್ಣಗೆ ಮಾಡಿದೆ! ಇನ್ನೂ ನೋಡುತ್ತಾನೆ, ಬಳೆ ಒಡೆದ ಓಡಿನ ಚೂರುಗಳು ಬಿದ್ದಿವೆ! ಮತ್ತೂ ನೋಡುತ್ತಾನೆ, ನೆತ್ತರು, ನೆಲದಮೇಲೆ ಮತ್ತು ಹಾಸಿದ್ದ ಹುಲ್ಲಿನ ಮೇಲೆ! ಕೊರಗನಿಗೆ ಪೂರಾ ದಿಗಿಲಾಯಿತು. ಏನೂ ಅರ್ಥವಾಗಲಿಲ್ಲ. ಹೊರಗೆ ಓಡಿ ಬಂದು, ಶಾಲನ್ನು ಸಮೀಪಿಸಿ, ಸುತ್ತಲೂ ನೋಡಿ ‘ಕಾವೇರಮ್ಮಾ! ಕಾವೇರಮ್ಮಾ!’ ಎಂದು ಕರೆದನು. ಸುತ್ತಣ ಕಾಡು, ಮಳೆಗಾಲದ ಕಡುಹಸರು ಕಾಡು, ಬದ್ಧಭ್ರುಕುಟಿ ಭೀಷಣ ನೀರವವಾಗಿತ್ತು. ದೆವ್ವಕಂಡವನಂತೆ ಶಾಲನ್ನು ಎತ್ತಿಕೊಂಡು ಮನೆಗೆ ಓಡಿ ಓಡಿ ಬಂದನು.
ಕೊರಗ ಹುಡುಗನು ಹೇಳಿದ್ದನ್ನು ಕೇಳಿ, ಅವನು ಕೊಟ್ಟ ಗುಲಾಬಿ ಬಣ್ಣದ ಶಾಲನ್ನು ನೋಡಿ, ಅಂತಕ್ಕಗೆ ದಿಗಿಲು ಬಡಿಯಿತು. ಹೌಹಾರಿ ಕಾವೇರಿಯ ಕೋಣೆಗೆ ಓಡಿದಳು. ಮಗಳ ಹೆಸರು ಹಿಡಿದು ಕೂಗುತ್ತಾ ಕರೆಯುತ್ತ ಮನೆಯಲ್ಲೆಲ್ಲ ಓಡಾಡಿದಳು ಹಿತ್ತಲು ಕಡೆಗೆ ಓಡಿ ಕೊಟ್ಟಿಗೆಯ ಹತ್ತಿರ ಕಾಡಿನ ಬಳಿ ನಿಂತು ಕರೆದಳು, ಮಗಳು ದಿನವೂ ಬಯಲ ಕಡೆಗೆ ಹೋಗುತ್ತಿದ್ದತ್ತ ಮುಖಮಾಡಿ. ಅಂತಕ್ಕನ ರೋದನವನ್ನು ಕೇಳಿ ಅನಂತಯ್ಯ ಕಿಟ್ಟಯ್ಯರೂ ಗಾಬರಿಯಿಂದ ಓಡಿಬಂದರು. ಕೊರಗನಿಂದ ವಿಷಯವನ್ನೆಲ್ಲ ಕೇಳಿ ತಿಳಿದು ಬಾವಿಯ ಬಳಿಗೆ ಶಾಲು ಸಿಕ್ಕಿದ್ದ ಸ್ಥಳಕ್ಕೆ ಓಡಿದರು.
* * *
ಮಗಳ ಹೆಣವನ್ನು ಬಾವಿಯಿಂದೆತ್ತಿ ತಂದು ಮನೆಯಲ್ಲಿ ಮಲಗಿಸಿದಾಗ ಅಂತಕ್ಕನ ಗೋಳು ಹೇಳತೀರದಾಗಿತ್ತು. ದುಃಖ ಉನ್ಮಾದದ ಮಟ್ಟಕ್ಕೇರಿತ್ತು. ಮಗಳು ಕಿಟ್ಟಯ್ಯ ಸೆಟ್ಟಿಯನ್ನು ಮದುವೆಯಾಗಲು ಇಷ್ಟವಿಲ್ಲದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳೆಂದೇ ಅವಳು ನಿರ್ಣಯಿಸಿ ನಂಬಿಬಿಟ್ತಿದ್ದಳೂ. ಆ ಸಂಕಟದ ಉರಿಯಲ್ಲಿ ಅವಳಿಗೆ ಉಚಿತ ಅನುಚಿತದ ಪರಿವೆಯಿರಲಿಲ್ಲ. ಮಗಳ ಸಾವಿಗೆ ಕಿಟ್ಟಯ್ಯಸೆಟ್ಟಿಯೆ ಕಾರಣವಾದನೆಂದು ಅವನನ್ನೂ ಶಪಿಸಿದಳು. ಆ ಶನಿಯನ್ನು ಮನೆಗೆ ಕರೆತಂದರು ಎಂದು ಅನಂತಯ್ಯನನ್ನು ಶಪಿಸಿದಳು. ಮಗಳ ಆ ಘೋರ ನಿರ್ಧಾರಕ್ಕೆ ಮೂಲಕಾರಣವಾದವನು ದೇವಯ್ಯನೇ ಎಂದು ಅತ್ತಕಡೆ ಬಹುದಿನಗಳಿಂದ ಸುಳಿಯದಿದ್ದ ಅವನನ್ನೂ ಹೀನಾಯವಾಗಿ ಬೈದಳು. ಅವರಿಗೆ ಯಾರು ಉಂಗುರ ತೊಡಿಸಲು ಅಪ್ಪಣೆ ಕೊಟ್ಟಿದ್ದರು? ಉಂಗುರ ಕಳೆದುಹೋಯಿತೆಂದು ಮಗಳ ಮನಸ್ಸನ್ನು ಆ ರೀತಿ ನೋಯಿಸಿ ಈ ಅಪಘಾತಕ್ಕೆ ಅವಳನ್ನೇಕೆ ನೂಕಬೇಕಿತ್ತು? ಎಂದೂ ಬಹಿರಂಗವಾಗಿಯೆ ಬೈದೂ ತಲೆ ಚಚ್ಚಿಕೊಂಡಳು.
ಹೆಣದ ಕೈಬೆರಳಲ್ಲಿ ಹರಳುಂಗುರ ಇದ್ದದ್ದನ್ನು ಗಮನಿಸಿದ್ದ ಅನಂತಯ್ಯ, ಕೊರಗನನ್ನು ವಿಚಾರಿಸಿ ನಡೆದ ಸಂಗತಿ ಏನು ಎಂಬುದನ್ನು ಅರಿತ ತರುವಾಯ, ಅಂತಕ್ಕ ರೋದಿಸಿ, ದುಃಖಿಸಿ, ಶಪಿಸಿ, ಎದೆ ಬಡಿದುಕೊಂಡೂ ತಲೆ ಚಚ್ಚಿಕೊಂಡೂ, ಅತ್ತೂ ಅತ್ತೂ ಸೋತುಸುಸ್ತಾಗಿ ತುಸು ತಣ್ಣಗಾದಮೇಲೆ, ಕಾವೇರಿಯ ಕಳೇಬರದ ಕೈಬೆರಳಿನಿಂದ ಹರಳುಂಗುರವನ್ನು ಕಳಚಿ ಅವಳಿಗೆ ನೀಡಿದರು. ಆಗ ಅವಳಿಗುಂಟಾಗಿದ್ದ ಬೆರಗಿಗೆ ಮೇರೆ ಇರಲಿಲ್ಲ., ಮಗಳ ಕೈಗೆ ಉಂಗುರ ಹೇಗೆ ಬಂತು ಎಂದು!
ಉಂಗುರ ಕಳೆದುಹೋಗಿ, ಎಲ್ಲಿ ಹುಡುಕಿದರೂ ಯಾರನ್ನು ಕೇಳಿದರೂ ಅದು ಪತ್ತೆಯಾಗದಿದ್ದಾಗ, ಅಂತಕ್ಕ ಧರ್ಮಸ್ಥಳಕ್ಕೆ ಆಣೆಯಿಟ್ಟುಕೊಂಡಿದ್ದಳು: ‘ಅಣ್ಣಪ್ಪದೇವರಿಗೆ ಶಕ್ತಿ ಇದ್ದಲ್ಲಿ ಉಂಗುರ ಎಲ್ಲಿಗೆ ಹೋಗುತ್ತದೆ ನೋಡುವ!’ ಎಂದು. ಅಣ್ಣಪ್ಪ ಭೂತರಾಯ ಇಂತಹ ಭಯಂಕರ ರೀತಿಯಲ್ಲಿ ಆ ಊಂಗುರವನ್ನು ತನಗೆ ಹಿಂತಿರುಗಿಸುತ್ತಾನೆ ಎಂದು ಆ ಭಕ್ತೆ ಸ್ವಪ್ನದಲ್ಲಿಯೂ ಭಾವಿಸಿರಲಿಲ್ಲ!.
ಅಂತಕ್ಕನ ಮಗಳು ಬಾವಿಗೆ ಬಿದ್ದು ಸತ್ತ ಸುದ್ದಿ ಹಬ್ಬಲು ತಡವಾಗಲಿಲ್ಲ. ಸಹಾನುಭೂತಿ ತೋರಿಸುವ; ದುಃಖದಲ್ಲಿ ಭಾಗಿಗಳಾಗುವ, ಸಮಾಧಾನ ಹೇಳಿ ಸಂತೈಸುವ ಸಲುವಾಗಿ ಮೇಗರವಳ್ಳಿಯ ಪರಿಚಿತರಲ್ಲಿ ಅನೇಕರು ಅಂತಕ್ಕನ ಮನೆಯಲ್ಲಿ ನೆರದಿದ್ದರು. ಅವರಲ್ಲಿ ಒಬ್ಬರಾಗಿದ್ದರು, ಕರೀಂಸಾಬರು. ಅನಂತಯ್ಯ ಹೆಣದ ಬೆರಳಿಂದ ಕಳಚಿದ ಹರಳುಂಗುರವನ್ನು ನೋಡಿ, ಗುರುತಿಸಿ, ಅವರು ಬೆಚ್ಚಿಬಿದ್ದಿದ್ದರು. ಆ ಅನಿಷ್ಟ ಉಂಗುರವನ್ನು ತನ್ನ ತಮ್ಮನ ಮುಖಾಂತರ ಬೆಟ್ಟಳ್ಳಿ ಕಲ್ಲಯ್ಯಗೌಡರಿಗೆ ಮಾರಿಬಿಟ್ಟೆನೆಂದು ತಿಳಿದಿದ್ದರು ಅವರು. ಮತ್ತೆ ಅದು ಕಾವೇರಿಯ ಬೆರಳಿಗೆ ಬಂದದ್ದು ಹೇಗೆ? ಅದು ಹೇಗೆಯೆ ಬಂದದ್ದಾಗಿರಲಿ, ಅದರ ಕೆಡಕು ಮಾಡುವ ಶಕ್ತಿಯ ಅವರ ಸಿದ್ಧಾಂತಕ್ಕೆ ಮತ್ತೊಂದು ನಿದರ್ಶನ ದೊರಕಿದಂತಾಗಿತ್ತು. ಅವರು ಅನಂತಯ್ಯನ ಕಿವಿಗೆ ಪಿಸುಗುಟ್ಟಿದ್ದರು: “ಐಗಳೆ, ಆ ಶನಿ ಉಂಗುರ ಇದ್ದಲ್ಲಿ ಕೇಡು ತಪ್ಪುವುದಿಲ್ಲ. ಪಾಪ, ಅದು ಹೇಗೆ ಬಂದಿತೊ ಆ ಮಗುವಿನ ಕೈಗೆ? ಎಳೆದುಕೊಂಡು ಹೋಗಿ ಅವಳನ್ನು ಬಾವಿಯೊಳಗೆ ಹಾಕಿಬಿಟ್ಟಿತಲ್ಲಾ!”
ಅದನ್ನು ಆಲಿಸಿದ್ದ ಒಬ್ಬನು ಮತ್ತೊಬ್ಬನ ಕಿವಿಯಲ್ಲಿ “ಆ ಹುಡುಗಿಯ ಕೆಟ್ಟಚಾಳಿಯೆ ಮೊದಲಿನಿಂದಲೂ ಹಾಂಗಿರುವಾಗಳು, ಹೌದಾ, ಆ ಉಂಗುರ ಏನು ಮಾಡೀತು?” ಎಂದು ತನ್ನ ನೀತಿಪ್ರಜ್ಞೆಯನ್ನು ಮೆರೆದಿದ್ದನು.
ಕೊರಗ ಹುಡುಗನ ಹೇಳಿಕೆಗಳಿಂದಲೂ, ಇಸ್ಕೂಲಿನ ಒಳಗೆ ತಾವು ಕಂಡಿದ್ದ ದೃಶ್ಯದ ವಿವರಜ್ಞಾನದ ನೆರವಿನಿಂದಲೂ, ಅಲ್ಲಿಯೆ ಸಿಕ್ಕಿದ್ದು, ಬತ್ತಿ ಇಳಿಸಿ ದೀಪ ಸಣ್ಣಗೆ ಮಾಡಿದ್ದ ಲಾಟೀನಿನ ಸಾಕ್ಷಿಯಿಂದಲೂ ಅನಂತಯ್ಯ ಕಾವೇರಿಯ ಸಾವು ಆತ್ಮಹತ್ಯೆಯಲ್ಲ, ಅತ್ಯಾಚಾರದ ತರುವಾಯ ನಡೆದ ಘಟನೆ ಎಂದು ಶಂಕಿಸಿದರು. ಅತ್ಯಾಚಾರದ ಪರಿಣಾಮವಾಗಿ ಹುಡುಗಿ ಪ್ರಜ್ಞೆತಪ್ಪಲು ಅವಳು ಸತ್ತಳೆಂದು ಭಾವಿಸಿಯೋ, ಅಥವಾ ಅವಳು ವಾಸ್ತವವಾಗಿ ತತಪ್ರಾಣೆಯ ಆಗಿದ್ದರಿಂದಲೋ, ಅವಳು ಆತ್ಮಹತ್ಯೆ ಮಾಡಿಕೊಂಡಳು ಎಂಬ ಭಾವನೆ ಹುಟ್ಟಿಸಲು ಶರೀರವನ್ನು ಹೊತ್ತು ತಂದು ಬಾವಿಗೆ ಹಾಕಿರಬೇಕು ಎಂದು ನಿರ್ಧರಿಸಿದರು. ಅವರ ನಿರ್ಧಾರಕ್ಕೆ ಪೋಷಕವಾಗಿ ಮತ್ತೊಂದು ಸಾಕ್ಷಿಯೂ ದೊರೆಯಿತು. ಅಲ್ಲಿ ಸಿಕ್ಕಿದ್ದ ಲಾಟೀನು ಕರ್ಮೀನ್ ಸಾಬರದ್ದು ಎಂದು ಕೊರಗ ಹುಡುಗ ಗುರುತಿಸಿದ್ದು! ಆದರೆ ಕರೀಂಸಾಬರು ತಮ್ಮ ಭಾವೋದ್ವೇಗವನ್ನು ಒಂದಿನಿತು ಹೊರಗೆಡಹದೆ ತಣ್ಣಗೆ ಹೇಳಿದರು: “ಆ ಲಾಟೀನು ನನ್ನದೇನೋ ಹೌದು. ಆದರೆ ಅದನ್ನು ಚೀಂಕ್ರ ಸೇರೆಗಾರ ತೆಗೆದುಕೊಂಡು ಹೋಗಿದ್ದ.”
ಆದರೆ ಅಲ್ಲಿ ನೆರದಿದ್ದ ಗುಂಪಿನಲ್ಲಾಗಲಿ, ಮೇಗರವಳ್ಳಿಯಲ್ಲೆ ಆಗಲಿ ಚೀಂಕ್ರಸೇರೆಗಾರನ ಸುಳಿವು ಎಲ್ಲಿ ಹುಡಕಿದರೂ ಕಾಣಲಿಲ್ಲ.
ಅಂತಕ್ಕ ಮಾತ್ರ, ಐಗಳು ಎಷ್ಟು ಸಕಾರಣವಾಗಿ ವಾದಿಸಿದರೂ, ತನ್ನ ಮಗಳು ಅತ್ಯಾಚಾರಕ್ಕೆ ಒಳಗಾದಳು ಎಂಬ ಅವಮಾನಕರವಾದ ಆಪಾದನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಟ್ಟಳು. ಮಗಳ ಮೈಮೇಲೆ ಆಗಿದ್ದ ಗಾಯಗಳನ್ನೂ ಕೆನ್ನೆ ತುಟಿ ಕುಚಗಳಾದಿಯಾಗಿ ಅಂಗೋಪಾಂಗಗಳಲ್ಲಿದ್ದ ಕ್ಷತವಿಕ್ಷತಗಳನ್ನೂ, ಮಗಳು ಬಾವಿಗೆ ಹಾರಿದಾಗ ಬಾವಿಯ ಬುಡದವರೆಗೂ ಇದ್ದ ಸುತ್ತಣ ಕಲ್ಲು ಕಟ್ಟಣೆ ಬಡಿದೂ ಬಡಿದೂ ಆಗಿದ್ದ ಗಾಯಗಳೆಂದೇ ಸಮರ್ಥಿಸಿದಳು: ಮಗಳು ಎಂತಿದ್ದರೂ ಸತ್ತುಹೋಗಿದ್ದಾಳೆ. ಮತ್ತೆ ಬರುವುದಿಲ್ಲ. ಸತ್ತವಳ ಹೆಸರಿಗೆ ಕಳಂಕಾರೋಪಣೆ ಮಾಡಿ ಅವಮಾನಗೊಳಿಸುವುದನ್ನು ತಾಯಿಯ ಕರುಳು ಎಂದಾದರೂ ಸಹಿಸುತ್ತದೆಯೇ?
ಆದರೂ ಐಗಳು ಅನಂತಯ್ಯನವರು ತಮ್ಮ ಕರ್ತವ್ಯವನ್ನು ನೇರವೇರಿಸಿದರು ಅತ್ಯಾಚಾರದ ಮತ್ತು ಕೊಲೆಯ ಸಂಗತಿಗಳನ್ನು ಕಾನೂನಿನ ಸನ್ನಿಧಿಗೆ ಒಯ್ಯುವ ಕ್ರಮ ಜರುಗಿಸಿದರು. ಕಾನೂನಿನ ದೂತರು, ಬೆಟ್ಟಳ್ಳಿ ದೇವಯ್ಯಗೌಡರು ಈ ಮೊದಲೆ ಮೇಗರವಳ್ಳಿ ಸಾಬರಮೇಲೆ ಫಿರ್ಯಾದಿ ಕೊಟ್ಟಿದ್ದನ್ನು ಗಮನಿಸಿ, ತಮ್ಮ ಕರ್ತ್ಯವ್ಯ ನಿರ್ವಹಣೆಯ ಅಂಗವಾಗಿ ಬಂದು ತನಿಖೆ ನಡೆಸಿದಾಗ ಮುಖ್ಯ ಅಪಾದಿತನಾಗಿದ್ದ. ಚೀಂಕ್ರ ಎಲ್ಲಿಯೂ ಪತ್ತೆಯಾಗಲಿಲ್ಲ. ಘಟ್ಟದ ಕೆಳಕ್ಕೆ ಪರಾರಿಯಾಗಿದ್ದಾನೆಂದು ಬರೆದುಕೊಂಡರು. ಆ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಅಪರಾಧವೆಸಗಿ ತಲೆ ತಪ್ಪಿಸಿಕೊಳ್ಳುವವರು ಬ್ರಿಟಿಷರ ಆಡಳಿತಕ್ಕೆ ಸೇರಿದ್ದ ಕನ್ನಡ ಜಿಲ್ಲೆಗೆ ಓಡಿಹೋಗುವುದು ಒಂದು ರಾಜತಂತ್ರದ ರೂಢಿಯಾಗಿತ್ತು! ಪುಡಿಸಾಬಿಯನ್ನು ದಸ್ತಗಿರಿ ಮಾಡಲು ಹುಡುಕಿದಾಗ, ಕರೀಂಸಾಬರು ಹೇಳಿದರು “ನನ್ನ ತಮ್ಮನಿಗೂ ಅಂತಕ್ಕನ ಮಗಳ ಆತ್ಮಹತ್ಯೆಗೂ ಏನೂ ಸಂಬಂಧವಿಲ್ಲ. ಕಾವೇರಿ ಬಾವಿಗೆ ಹಾರಿಕೊಳ್ಳುವುದಕ್ಕೆ ಒಂದು ವಾರದ ಹಿಂದೆಯೇ ಅವನು ವ್ಯಾಪಾರದ ಕೆಲಸದ ನಿಮಿತ್ತವಾಗಿ ಕಾಸರಗೋಡಿನ ಕಡೆಗೆ ಹೋದವನು ಇನ್ನು ಬಂದಿಲ್ಲ.” ತಮ್ಮ ಹೇಳಿಕೆಯ ಸತ್ಯತಾ ಸ್ಥಾಪನೆಗೆ ಬೆಂಬಲವಾಗಿ ಕಾನೂನಿನ ದೂತರ ಕೈ ಬೆಚ್ಚಗಾಗುವಂತೆ ತಕ್ಕ ವ್ಯವಸ್ಥೆಮಾಡಲು ಅವರು ಮರೆಯಲಿಲ್ಲ! ಅಂತಕ್ಕನಂತೂ ತನ್ನ ಮಗಳ ಪರಿಶುದ್ಧ ನಡತೆಯ ವಿರುದ್ಧವಾಗಿರುವ ಎಲ್ಲ ಆರೋಪಣೆಗಳನ್ನೂ ಅಲ್ಲಗಳೆದು ಅವಳ ಅತ್ಮಹತ್ಯೆಯನ್ನೆ ಸಮರ್ಥಿಸಿದಳು. ಪ್ರಬಲ ಸಾಕ್ಷಿಯ ವಸ್ತುವಾಗಿದ್ದ ಹರಳುಂಗರವನ್ನು ವಿಚಾರಿಸಲು, ಆ ಅನಿಷ್ಟ ವಸ್ತುವನ್ನು ಧರ್ಮಸ್ಥಳದ ದೇವರ ಪೆಟ್ಟಿಗೆಗೆ ಹಾಕಿಬಿಡಲು ಕಿಟ್ಟಯ್ಯಸೆಟ್ಟರ ಕೈಲಿ ಕಳುಹಿಸಿದನೆಂದು ಹೇಳಿದಳು. ಕಾನೂನಿನ ಕೈಯಿಂದ ತಲೆ ತಪ್ಪಿಸಿಕೊಳ್ಳಲು ಉಂಗುರವೂ ಘಟ್ಟದ ಕೆಳಕ್ಕೆ ಹಾರಿತ್ತು! ಧರ್ಮಸ್ಥಳದ ದೇವರ ಸನ್ನಿಧಿಯ ರಕ್ಷೆಗೆ! ಕಡೆಗೆ ಪೋಲೀಸರು ಬರಿ ಕೈಯಲ್ಲಿ ಹೇಗೆ ಹೋಗುವುದು ಎಂದು, ಕೇಡಿಗಳೆಂದು ಪ್ರಸಿದ್ಧರಾಗಿದ್ದ ಸಾಬಿಗಳ ಪಟ್ಟಿಯಲ್ಲಿದ್ದ ಅಜ್ಜೀಸಾಬಿ ಮತ್ತು ಲುಂಗೀಸಾಬಿ ಇಬ್ಬರನ್ನು ಕೋಳಹಾಕಿ ತೀರ್ಥಹಳ್ಳಿ ಲಾಕಪ್ಪಿಗೆ ಕರೆದುಕೊಂಡು ಹೋದರು.
*****

ಕಾಮೆಂಟ್‌ಗಳಿಲ್ಲ: