ಪಂಪಭಾರತ : ಗದ್ಯಾನುವಾದ - ಅನುಬಂಧ

 ಅನುಬಂಧ
ಪಂಪನು ತನ್ನ ಭಾರತದ ಪ್ರಾರಂಭದಲ್ಲಿ ತನ್ನ ಪೋಷಕನಾದ ಅರಿಕೇಸರಿಯ ವಂಶವೃಕ್ಷವನ್ನು ವಿಸ್ತಾರವಾಗಿ ಕೊಟ್ಟಿದ್ದಾನೆ. ಇದು ಐತಿಹಾಸಿಕ ದೃಷ್ಟಿಯಿಂದ ಬಹು ಉಪಯುಕ್ತವಾಗಿದೆ. ಅದರ ವಿವರ ಈ ರೀತಿ ಇದೆ.

ಶ್ರೀಮಚ್ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನೆಂಬಂತೆ ಕಾಂತಿಯಿಂದ ಕೂಡಿ ಈ ಭೂಮಿಯಲ್ಲಿ ತನ್ನ ಕುಲಕ್ಕೆ ಶಿಖಾಮಣಿಯಾದ ಯುದ್ಧಮಲ್ಲನು ಪ್ರಸಿದ್ಧನಾದನು. ಪ್ರಬಲನಾದ ಆತನು ತೋಳಬಲದ ಖ್ಯಾತಿಯನ್ನು ಪಡೆದು ಅನೇಕ ರಾಜರ ರತ್ನಕಿರೀಟಗಳ ಕಾಂತಿಯಿಂದ ತನ್ನ ಪಾದಗಳು ಬೆಳಗುವಂತೆ ಮಾಡಿ ಸಪಾದ ಲಕ್ಷಕ್ಷಿತಿಯನ್ನು ಆಳಿದನು. ಇವನು ಬೋದನವೆಂಬ ತನ್ನ ರಾಜಧಾನಿಯಲ್ಲಿ ಪ್ರತಿದಿನವೂ ಬಾವಿಗಳಲ್ಲಿ ಎಣ್ಣೆಯನ್ನು ತುಂಬಿ ಐನೂರು ಆನೆಗಳನ್ನು ಸ್ನಾನಮಾಡಿಸುವನು. ಈ ಯುದ್ಧಮಲ್ಲ ಮಹೀಪತಿಗೆ ಸುಂದರಾಂಗನಾದ ಅರಿಕೇಸರಿಯು ರಾಜನಿಗೆ ಕೀರ್ತಿ ಹುಟ್ಟುವಂತೆ ಹುಟ್ಟಿ ಮಂತ್ರಿಗಳಿಂದ ಕೂಡಿ ತನ್ನ ಕಿತ್ತ ಕತ್ತಿಯಿಂದ ವಿರೋರಾಜರ ಅಮೂಲ್ಯವಾದ ವಸ್ತುಗಳನ್ನೂ ಆನೆ ಕುದುರೆಗಳನ್ನೂ ಗೆದ್ದು ನಿರುಪಮನೆಂಬ ರಾಜನ ಆಳ್ವಿಕೆಯಲ್ಲಿ ಮೂರು ಕಳಿಂಗ ದೇಶಗಳೊಡನೆ ವೆಂಗಿಮಂಡಲವನ್ನೂ ಗೆದ್ದು ದಿಗ್ಭಿತ್ತಿಗಳಲ್ಲಿ ಗರ್ವದಿಂದ ತನ್ನ ಹೆಸರನ್ನು ಬರೆಯಿಸಿದನು. ಕ್ಷತ್ರಿಯ ಗುಣಗಳು ಆ ಕುಲದಲ್ಲಿ ಈತನಿಂದಲೇ ನೆಲಸಿ ನಿಂದುವು, ಅಲ್ಲದೆ ಅರಿಕೇಸರಿಯು ಮಾಡಿದ ಕಾರ್ಯಗಳು ಮೂರು ಲೋಕದಲ್ಲಿಯೂ ಪ್ರಖ್ಯಾತರಾದ ಆದಿ ಕ್ಷತ್ರಿಯರಲ್ಲಿಯೂ ಇಲ್ಲವೆನ್ನುವಷ್ಟು ಪ್ರಸಿದ್ಧಿಯಾದುವು. ಅರಿಕೇಸರಿಗೆ ನರಸಿಂಹ, ಭದ್ರದೇವ ಎಂಬಿಬ್ಬರು ಮಕ್ಕಳಾದರು. ಶತ್ರುರಾಜರ ತಲೆಗಳನ್ನು ಸೀಳುವಷ್ಟು ಭಯಂಕರವಾದ ಕತ್ತಿಗಳನ್ನುಳ್ಳ ಬಾಹುಬಲವುಳ್ಳವರವರು. ಅವರಲ್ಲಿ ಹಿರಿಯನಾದ ನರಸಿಂಹನಿಗೆ ಯುದ್ಧಮಲ್ಲನೆಂಬುವನು ಹಿರಿಯ ಮಗ, ಭುವನಪ್ರದೀಪನೂ ಅವಾರ್ಯವೀರ್ಯನೂ ಆದ ಯುದ್ಧಮಲ್ಲನಿಗೆ ಬದ್ದೆಗನು ಹಿರಿಯ ಮಗ. ಇವನು ಹುಟ್ಟಿದೊಡನೆಯೇ ಜ್ಞಾನವೂ ಜ್ಞಾನದೊಡನೆ ಐಶ್ವರ್ಯವೂ ಅದರೊಡನೆ ಅತ್ಯತಿಶಯವಾದ ಪರಾಕ್ರಮವೂ ಹುಟ್ಟಿದುವು. ತನ್ನ ವಿಶೇಷ ಶಕ್ತಿಯಿಂದ ಶತ್ರುರಾಜರನ್ನು ಚದುರಿಸಿ ರಣರಂಗದಲ್ಲಿ ತನ್ನ ಪರಾಕ್ರಮವನ್ನು ಕೊಂಡಾಡುವ ಹಾಗೆ ನಲವತ್ತೆರಡು ಕಾಳಗಗಳಲ್ಲಿ ಜಯವನ್ನು ಸಂಪಾದಿಸಿದನು. ಸಮುದ್ರ ಮುದ್ರಿತವಾದ ಈ ಭೂಮಂಡಲದಲ್ಲಿ ಯಾರಿಗೂ ಸೋಲದವನು ಇವನೇ ಎಂಬ ಖ್ಯಾತಿಯನ್ನು ಸಂಪಾದಿಸಿದುದಲ್ಲದೆ ಬದ್ದೆಗನು ಭೀಮನೆಂಬ ರಾಜನನ್ನು ಬಹಳ ಗರ್ವದಿಂದ ನೀರಿನಲ್ಲಿ ಮೊಸಳೆಯನ್ನು ಹಿಡಿಯುವಂತೆ ಒತ್ತಿ ಹಿಡಿದನು, ಮುಗಿಲನ್ನು ಮುಟ್ಟಿದ ಪೆಂಪು, ಪೆಂಪನ್ನು ಒಳಕೊಂಡ ಉದ್ಯೋಗ, ಉದ್ಯೋಗದ ಫಲವಾದ ಆಜ್ಞಾಫಲ, ಆಜ್ಞೆಯಿಂದ ಭಯಪಟ್ಟು ಬಾಗಿ ನಿಂತ ಶತ್ರುರಾಜರ ಸಮೂಹ ಇವು ತನ್ನ ಕೀರ್ತಿ ಯಶಸ್ಸಿಗೆ ಆಶ್ರಯವಾಗಿರಲು ಬದ್ದೆಗನು ತನ್ನ ಹುಬ್ಬನ್ನು ಹಾರಿಸುವುದರಿಂದಲೇ ಕೋಟ್ಯಂತರ ಜನವನ್ನು ಅನಮಾಡಿಕೊಳ್ಳುವನು. ಅವನ ಭಂಡಾರದಲ್ಲಿ ಮೇರುಪರ್ವತದ ಚಿನ್ನವಿದೆ. ಕಲ್ಪವೃಕ್ಷಗಳ ತೋಟವಿದೆ, ಸಿದ್ಧರಸದ ಒರತೆಯಿದೆ, ಸ್ಪರ್ಶಶಿಲೆಯ ಗಣಿಯಿದೆ, ತಡೆಯಿಲ್ಲದೆ ದಾನಮಾಡುವವರಲ್ಲಿ ಬದ್ದೆಗನನ್ನು ಹೋಲುವವರಾದ್ದಾರೆ! ಆ ಭದ್ರದೇವನ ತ್ಯಾಗಕ್ಕೆ ಹೊರಗಾದುದಾವುದೂ ಇರಲಿಲ್ಲ.

ಆ ಬದ್ದೆಗನಿಗೆ ವೈರಿಗಳೆಂಬ ಕತ್ತಲೆಗೆ ಸೂರ್ಯನೂ ಭೂಮಿಯನ್ನು ಗೆಲ್ಲಲು ಸಮರ್ಥವಾದ ವಿಜಯ ಭುಜಬಲವುಳ್ಳವನೂ ಆದ ಯುದ್ಧಮಲ್ಲನು ಮಗ. ಇವನ ಮಗ ನರಸಿಂಹನು ನಹುಷ ಪೃಥು, ಭಗೀರಥ, ನಳರೆಂಬ ಮಹಾಪುರುಷರನ್ನು ಕಡೆಗಾಣಿಸಿದ ಮಹಿಮೆಯುಳ್ಳವನೂ ಜ್ಞಾನದಲ್ಲಿ ಪರಮಾತ್ಮನಂತಿದ್ದವನೂ ಆಗಿ ಹಿರಿಯರ ಆಜ್ಞೆಯನ್ನು ಉಲ್ಲಂಘನೆ ಮಾಡದೆ ಶತ್ರುಸೈನ್ಯವನ್ನು ಅಡಗಿಸಿಕೊಳ್ಳುವುದರಲ್ಲಿ ಅವನ ಕೋಪವು ತಡೆಯಿಲ್ಲದುದಾಗಿದ್ದಿತು. ನರಸಿಂಹನು ಲಾಟದೇಶದ ಮೇಲೆ ನುಗ್ಗಿ ಯುದ್ಧಮಾಡಿದ ವಿಷಯವನ್ನು ಕೇಳಿ ಆ ದೇಶದವರು ಆಗ ಸತ್ತವರಿಗೆ ಈಗಲೂ ತರ್ಪಣವನ್ನು ಕೊಡುತ್ತಿರುವರು. ಸಿಂಹದಂತೆ ಕೆರಳಿ ನರಸಿಂಹನು ಯುದ್ಧಮಾಡಿದಾಗ ಚಿಮ್ಮಿದ ರಕ್ತವು ಈಗಲೂ ಆಕಾಶದಲ್ಲಿ ಕೆಂಗುಡಿಯು ಮುಸುಕಿದಂತಿದೆ, ಸಪ್ತ ಮಾಲವಗಳನ್ನು ಸುಟ್ಟು ಕರಿಕೇರಿಸಿದ ಜ್ವಾಲೆಗಳು ಅವನ ತೇಜಸ್ಸಿನ ಬಿಳಲುಗಳನ್ನು ಅನುಕರಿಸಿದವು. ವಿಜಯಗಜಗಳೊಡನೆ ಘೂರ್ಜರ ರಾಜ್ಯವನ್ನು ಮುತ್ತಿ ಅದನ್ನು ಗೆದ್ದು ವಿಜಯನನ್ನು ತಿರಸ್ಕರಿಸಿದ್ದಾನೆ. ಸಿಡಿಲೆರಗುವಂತೆ ಹಾಗೆ ಎರಗಿದ ನರಸಿಂಹನ ಸೈನ್ಯಕ್ಕೆ ಹೆದರಿ ಮಹಿಪಾಲನೆಂಬ ರಾಜನು ಉಂಡೆಡೆಯಲ್ಲಿ ಉಣ್ಣದೆ ಕೆಡೆದೆಡೆಯಲ್ಲಿ ಕೆಡೆಯದೆ ಓಡಿಹೋದನು. ಅಲ್ಲದೆ ನರಸಿಂಹನು ತನ್ನ ಕುದುರೆಯನ್ನು ಗಂಗಾನದಿಯಲ್ಲಿ ಮೀಯಿಸಿ ಕಾಳಪ್ರಿಯದಲ್ಲಿ ತನ್ನ ಭುಜವಿಜಯಗರ್ವದಿಂದ ವಿಜಯಸ್ತಂಭವನ್ನು ಸ್ಥಾಪಿಸಿದನು.

ಈ ನರಸಿಂಹ ಮನೋನಯನಪ್ರಿಯೆ ಜಾಕವ್ವೆ, ಚಂಚಲವಾದ ಕರಿಯ ಮುಂಗುರುಳುಳ್ಳವಳೂ ಚಂದ್ರನಂತೆ ಮುಖವುಳ್ಳವಳೂ ಆದ ಇವಳು ಕುಲದಲ್ಲಿಯೂ ಶೀಲದಲ್ಲಿಯೂ ಸೀತಾದೇವಿಗಿಂತ ಸೀತಾದೇವಿಗಿಂತ ಅಗ್ಗಳವಾದವಳು. ಹೊಸದಾಗಿ ಅರಳಿತ ತಾವರೆಯೆಸಳ

ಮೇಲಿರುವ ಲಕ್ಷ್ಮಿಯೂ ಈ ಜಾಕವ್ವೆಯ ಪಕ್ಕದಲ್ಲಿ ಕಾಂತಿಹೀನಳಾಗುತ್ತಾಳೆ ಎಂದ ಮೇಲೆ ಉಳಿದ ಸಾಮಾನ್ಯಸ್ತ್ರೀಯರು ಈಕೆಗೆ ಸಮನಾಗುತ್ತಾರೆಯೇ.

ಆ ಜಾಕವ್ವೆಗೂ ಆ ಭೂವಲ್ಲಭ ನರಸಿಂಹನಿಗೂ ಅತಿವಿಶದ ಯಶೋವಿತಾನನಾದ ಅರಿಕೇಸರಿ ತನ್ನ ತೇಜೋಗ್ನಿಯಲ್ಲಿ ಮಗ್ನರಾದ ರಿಪುಶಲಭವನ್ನುಳ್ಳವನಾಗಿ ಮಗನಾಗಿ ಹುಟ್ಟಿದನು. ಅವನು ಹುಟ್ಟಿದಾಗ ಆನೆಯ ಮದೋದಕವನ್ನೇ ಬೆಚ್ಚುನೀರಾಗಿ ತಳಿದರು. ಆನೆಯ ಅಂಕುಶದಿಂದ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದರು, ಆನೆಯ ದಂತದ ತೊಟ್ಟಿಲಿನಲ್ಲಿಟ್ಟು ತೂಗಿದರು. ಆದುದರಿಂದ ಈ ಬಾಲ್ಯದಿಂದಲೇ ಅರಿಕೇಸರಿಯು ಗಜಪ್ರಿಯನೆಂಬುದನ್ನು ತೋರಿಸಿದನು. ತಾನೇ ಪ್ರತ್ಯಕ್ಷ ಇಂದ್ರನೆಂಬಂತೆ ಪ್ರಕಾಶಿಸಿದ ಇಂದ್ರನ ತೋಳೇ ತೊಟ್ಟಿಲಾಗಿ ಬೆಳೆದನು, ಅಮೇಯ ಬಲಶಾಲಿಯೂ ಮನುಜಮಾರ್ತಾಂಡನೂ ಆದ ಇವನಿಗೆ ಬುದ್ಧಿಶಕ್ತಿಯಿಂದಲೂ ಪೌರುಷ ಶಕ್ತಿಯಿಂದಲೂ ಶಾಸ್ತ್ರಪಾರವೂ ಶತ್ರುಸೈನ್ಯಪಾರವೂ ಜೊತೆಯಲ್ಲಿಯೇ ಸಿದ್ಧಿಸಿದುವು. (ನಡುವಿನ) ಉಡುವಣಿ ಹರಿಯುವುದಕ್ಕೆ ಮುಂಚೆಯೇ ಛಲದಿಂದ ಶತ್ರುಸೈನ್ಯವನ್ನು ಚದುರಿಸಿ ಶತ್ರುಸೈನ್ಯದ ರಕ್ತ ಸಮುದ್ರದಲ್ಲಿ ಜಿಗುಳೆ ಬೆಳೆಯುವ ತೆರದಲ್ಲಿ ಬೆಳೆದನು. ಪ್ರತಿಭಟಿಸಿದ ಸೈನ್ಯವು ಕೋಟಿಸಂಖ್ಯೆಯನ್ನು ಮೀರಿರಲು ಪರಸ್ತ್ರೀಯು ಊರ್ವಶಿಗಿಂತ ಮೇಲಾಗಿದ್ದರೂ ಎಂದು ಅವನ ಕಣ್ಣು ಸೋಲುವುದಿಲ್ಲ. ಯುದ್ಧದಲ್ಲಿ ಮೂರುಲೋಕವು ನಿಂತಿದ್ದರೂ ದಾನಮಾಡುವಾಗ ಮೇರುಪರ್ವತವೇ ಎದುರಿಗಿದ್ದರೂ ತನ್ನ ಶೌರ್ಯಕ್ಕೂ ಔದಾರ್ಯಕ್ಕೂ ಇದು ಸಾಲದೆಂದು ಪ್ರಿಯಗಳ್ಳನು ಚಿಂತಿಸುವನು. ಇತರ ಮಹಾಸಾಮಂತರು ಸ್ವಸ್ತ್ಯಾದಿ ಬಿರುದುಗಳನ್ನು ಹೊಗಳಿಸಿಕೊಳ್ಳುವುದರಲ್ಲಿ ಸಮಾನರಾಗುತ್ತಾರೆಯೇ ವಿನಾ ಗುಣದಲ್ಲಿ ಸಮಾನರಾಗಲಾರರು.

ಈ ಗುಣಾರ್ಣವನು ತ್ಯಾಗದ ಕಂಭವನ್ನು ನಿಲ್ಲಿಸಿ ವೀರದ ಶಾಸನವನ್ನು ಸ್ಥಾಪಿಸಿ ಅನರಾಗದ ರಾಜರನ್ನು ವಶಪಡಿಸಿಕೊಂಡು ಮೂರು ಲೋಕಗಳಲ್ಲಿ ಯಶಸ್ಸಿಗೆ ಆಕರರಾಗಿದ್ದ ಬದ್ದೆಗದೇವ ಮತ್ತು ನರಸಿಂಹರಿಗಿಂತ ತ್ಯಾಗದಲ್ಲಿಯೂ ವೀರದಲ್ಲಿಯೂ ನಾಲ್ಕು ಬೆರಳಷ್ಟು ಉನ್ನತನಾಗಿದ್ದಾನೆ. ಪಂಪನ ಪ್ರಕಾರ ಚಾಳುಕ್ಯ ವಂಶವೃಕ್ಷವನ್ನು ಈ ರೀತಿ ಗುರುತಿಸಬಹುದು.

೧. ಯುದ್ಧಮಲ್ಲ-ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು, ಪ್ರತಿದಿನವೂ ಐನೂರು ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.

೨. ಅರಿಕೇಸರಿ, ವೆಂಗಿಯ ಪ್ರಧಾನನೊಡನೆ ನಿರುಪಮರಾಜ್ಯವನ್ನು ಮುತ್ತಿದನು.

೩. ನರಸಿಂಹ

೪. ಭದ್ರದೇವ

೫. ದುಗ್ಧಮಲ್ಲ- ಯುದ್ಧಮಲ್ಲ

೬. ಬದ್ದೆಗ-ಭದ್ರದೇವ
೪೨ ಕಾಳಗಗಳನ್ನು ಜಯಿಸಿದನು.
ಸೋಲದ ಗಂಡನೆಂಬ ಬಿರುದನ್ನುಳ್ಳವನು.
ಭೀಮನನ್ನು ನೀರಿನಲ್ಲಿ ನುಗ್ಗಿ ಹಿಡಿದನು.

೭. ದುಗ್ಧಮಲ್ಲ (ಯುದ್ಧಮಲ್ಲ.)

೮. ನರಸಿಂಹ- ಕಲಿನರಸಿಂಹ- ನರಸಿಂಹ- ನರಗ.
ಸುಭದ್ರ ಮುನಿಯ ಪ್ರತಿಬಿಂಬ
ಲಾಳನನ್ನು ಅಡಿಗೆರಗಿಸಿದನು
ಸಪ್ತಮಾಲದ ಮುಖ್ಯರನ್ನು ಸೋಲಿಸಿದನು
ಘೂರ್ಜರ ರಾಜ ಸೈನ್ಯವನ್ನು ಸೋಲಿಸಿ ಗಂಗಾ ಜಲದಲ್ಲಿ ಕುದುರೆಯನ್ನು ಮೀಯಿಸಿದನು.
ಮಹೀಪಾಲನನ್ನು ಓಡಿಸಿದನು
ಇವನ ಮಿತ್ರನಾದ ಸಂಗನನ್ನು ನಾಶಪಡಿಸಿದನು.
ಇವನ ಹೆಂಡತಿ ಜಾಕವ್ವೆ

೯. ಅರಿಕೇಸರಿ- ಅರಿಗ- ಗೊಜ್ಜಿಗನಿಂದ ವಿಜಯಾದಿತ್ಯನನ್ನು ರಕ್ಷಿಸಿದ

೧೦. ಬದ್ದೆಗ- ಅರಿಕೇಸರಿಯ ಹಿರಿಯ ಮಗ, ರಾಜಧಾನಿ ಗಂಗಾಧಾರಾ (ಯಶಸ್ತಿಲಕದಿಂದ) ಫ್ಲೀಟರು ಇದರಲ್ಲಿ ಉಕ್ತವಾಗಿರುವ ಕೆಲವು ಸಂಗತಿಗಳಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಸೂಚಿಸಿದ್ದಾರೆ. (vIಒಟಿoಔಓಟಿ ಈS oWಓ ಒIಒಟಓಟಿಓ ಔಟಿoಟಔoಟಿ) ಎಂಬ ಗ್ರಂಥದಲ್ಲಿ. ಅವುಗಳನ್ನು ಹೀಗೆ ಸಂಗ್ರಹಿಸಬಹುದು: ನರಸಿಂಹ ಭದ್ರದೇವರು ಏಕವ್ಯಕ್ತಿಗಳು- (ಮುಂದಿನ ಶಂಶೋಧನೆಯಿಂದ ಇದು ಸರಿಯಲ್ಲವೆಂದು ಸಿದ್ಧಾಂತವಾಗಿದೆ) ವಂಶವೃಕ್ಷದಲ್ಲಿ ಬರುವ ನರಸಿಂಹನು ಲಾಳನನ್ನು ಸೋಲಿಸಿದುದನ್ನು ಅವರು ಹೇಳಿಲ್ಲ. ಸಂಗನನ್ನು ಸೋಲಿಸಿದುದೂ ಅವರಿಂದ ಉಕ್ತವಾಗಿಲ್ಲ. ಆದರೆ ರೈಸರು ತಮ್ಮ ಪಂಪಭಾರತದ ಪೀಠಿಕೆಯ ನಾಲ್ಕನೆಯ ಪುಟದ ಅಡಿಟಿಪ್ಪಣಿಯಲ್ಲಿ ಇದನ್ನು ನಮೂದಿಸಿದ್ದಾರೆ. ಫ್ಲೀಟರು ಇವನ ಹೆಂಡತಿಯು ‘ಚಂದ್ರಾನನೆ’ ಎಂದು ಹೇಳುತ್ತಾರೆ. ರೈಸರು ‘ಜಾತವ್ವೆ’ ಎಂದಿದ್ದಾರೆ (ಪಂ.ಭಾ.ಪೀಠಿಕೆ). ರಾ. ನರಸಿಂಹಾಚಾರ್ಯರು ಜಾಕವ್ವೆ ಎಂದೇ ಹೇಳಿದ್ದಾರೆ. ಮೂಲದಲ್ಲಿ ಆ ಭಾಗವು ಉಕ್ತವಾಗಿದೆ. ಚಂದ್ರಾನನಾ ಎಂಬುದು ವಿಶೇಷಣವಿರಬಹುದು. ಅರಿಕೇಸರಿಯ ತಂದೆಯ ಹೆಸರು ಯುದ್ಧಮಲ್ಲನೆಂದು ಫ್ಲೀಟರು ಹೇಳುತ್ತಾರೆ. ಇದು ಸರಿಯಲ್ಲ. ಏಕೆಂದರೆ ಪಂಪಭಾರತ, ಪರಭಣಿ ತಾಮ್ರಶಾಸನ ವೇಮಲುವಾಡಶಾಸನಗಳಲ್ಲಿ ‘ನರಸಿಂಹ’ ಎಂದೇ ಹೇಳಿದೆ- ಬದ್ದೆಗನು ಅರಿಕೇಸರಿಯ ಮೊದಲನೆಯ ಮಗನೆಂದು ಸೋಮದೇವನು ತನ್ನ ‘ಯಶಸ್ತಿಲಕಚಂಪು’ವಿನಲ್ಲಿ ತಿಳಿಸಿದ್ದಾನೆ. ಆದುದರಿಂದ ಇವನಿಗೆ ಇನ್ನೂ ಇತರ ಮಕ್ಕಳಿದ್ದಿರಬಹುದೆಂದು ಊಹಿಸಲು ಅವಕಾಶವಿದೆ. ಆದರೆ ಪರಭಣಿಯ ತಾಮ್ರ ಶಾಸನದಲ್ಲಿ ಭದ್ರದೇವನು ಅರಿಕೇಸರಿಯ ಒಬ್ಬನೇ ಮಗನೆಂದು ಉಕ್ತವಾಗಿದೆ.

ಪಂಪಭಾರತದಲ್ಲಿ ಬರುವ ಚಾಳುಕ್ಯವಂಶವೃಕ್ಷಕ್ಕೆ ಒಂದನೇ ಅರಿಕೇಸರಿಯ ಕೊಲ್ಲೇಪಾರಾ ದಾನಪತ್ರವೂ ಎರಡನೆಯ ಅರಿಕೇಸರಿಯ ವೇಮಲವಾಡ ಶಿಲಾ ಲೇಖನವೂ ಮೂರನೆಯ ಅರಿಕೇಸರಿಯ ಪರಭಣಿ ತಾಮ್ರಶಾಸನವೂ ಉಪಷ್ಟಂಭಕವಾಗಿವೆ. ಇವುಗಳಲ್ಲಿರುವ ಈ ಭಾಗವನ್ನು ಮುಂದಿನ ರೀತಿಯಲ್ಲಿ ಚಿತ್ರಿಸಬಹುದು.

ಪರಭಣಿಯ ತಾಮ್ರಶಾಸನ
ಚಾಳುಕ್ಯವಂಶ (ಆದಿತ್ಯಭವ)

೧. ಯುದ್ಧಮಲ್ಲ
ಸಪಾದಲಕ್ಷ ರಾಜ್ಯವನ್ನು ಆಳುತ್ತಿದ್ದನು.
ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
ಕಲಿಂಗತ್ರಯದೊಡನೆ ವೆಂಗಿಯನ್ನು ಸಂರಕ್ಷಿಸಿದನು.

೨. ಅರಿಕೇಸರಿ

೩. ನರಸಿಂಹ

೪. ಭದ್ರದೇವ

೫. ಯುದ್ಧಮಲ್ಲ

೬. ಬದ್ದೆಗ
ಸಂಗಮನಿಗೆ ತೊಂದರೆ ಕೊಟ್ಟನು
ಭೀಮನನ್ನು ಜಲಯುದ್ಧದಲ್ಲಿ ಸೋಲಿಸಿದನು

೭. ಯುದ್ಧಮಲ್ಲ

೮. ನರಸಿಂಹ

೯. ಅರಿಕೇಸರಿ- ಇವನ ಹೆಂಡತಿ ಪ್ರಖ್ಯಾತ ರಾಷ್ಟ್ರಕೂಟರ ಲೋಕಾಂಬಿಕೆ

೧೦. ಭದ್ರದೇವ-ಬದ್ದೆಗ-ಶುಭದಾಮ ಜಿನಾಲಯವನ್ನು ಕಟ್ಟಿಸಿದನು

೧೧. ಅರಿಕೇಸರಿ
ರಾಜಧಾನಿ ಲೆಂಬುಳಪಾಟಕ
ಸೋಮದೇವಸೂರಿಗೆ ದಾನ ಕೊಟ್ಟನು

ವೇಮಲವಾಡ ಶಿಲಾಶಾಸನ
ಚಾಲುಕ್ಯಕುಲ

೧. ವಿನಯಾದಿತ್ಯ ಅಥವಾ ಯುದ್ಧಮಲ್ಲ
ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು
ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
ಚಿತ್ರಕೂಟವನು ವಶಮಾಡಿಕೊಂಡನು.

೨. ಅರಿಕೇಸರೀಶ-ಬಲದಿಂದ ವೆಂಗಿ ದೇಶವನ್ನು ತೆಗೆದುಕೊಂಡನು

೩. ನರಸಿಂಹವರ್ಮ- ಅಥವಾ ರಾಜಾದಿತ್ಯ (?)

೪. ಯುದ್ಧಮಲ್ಲ

೫. ನರಸಿಂಹ ದೇವ-ಗುರ್ಜರಾಜ ಸೈನ್ಯವನ್ನು ಜಯಿಸಿದನು, ಏಳು ರಾಜರನ್ನು ಜಯಿಸಿದನು

೬. ಅರಿಕೇಸರಿ-ಗೋವಿಂದ (ಗೊಜ್ಜಿಗ) ನಿಂದ ಬಿಜ್ಜನನ್ನು ರಕ್ಷಿಸಿದನು. ಹೆಂಡತಿ ರೇವಕ್ಕ (?)

ಕೊಲ್ಲೋಪಾರಾ ದಾನಪತ್ರ
ಚಾಳುಕ್ಯ ವಂಶ

ರಣವಿಕ್ರಮಸತ್ಯಾಶ್ರಯ ಪೃಥ್ವೀಪತಿ ಮಹಾರಾಜ ವಿನಯಾದಿತ್ಯ ಯುದ್ಧಮಲ್ಲ ಅರಿಕೇಸರಿ

ಮಧ್ಯಯುಗದ ಇತಿಹಾಸದಲ್ಲಿ ನಾಲ್ಕು ಚಾಲುಕ್ಯ ಕುಲಗಳಿದ್ದವು. ಒಂದನೆಯದು ಬಾದಾಮಿಯದು. ಎರಡನೆಯದು ಕಲ್ಯಾಣಿಯದು. ಮೂರನೆಯದು ವೆಂಗಿಯದು. ನಾಲ್ಕನೆಯದು ಪಂಪ ಮತ್ತು ಸೋಮದೇವರಿಂದ ಉಕ್ತವಾದುದು. ಇವುಗಳಲ್ಲಿ ಬಾದಾಮಿಯ ಚಾಳುಕ್ಯಕುಲದಿಂದ ವೆಂಗಿಯ ಚಾಳುಕ್ಯಕುಲವು ಉತ್ಪನ್ನವಾಯಿತು. ಕಲ್ಯಾಣಿಯ ಚಾಲುಕ್ಯರು ಬಾದಾಮಿಯ ಚಾಲುಕ್ಯರ ವಂಶಜರೆಂದು ತಾವೇ ಹೇಳಿಕೊಂಡಿದ್ದಾರೆ. ಬಾದಾಮಿಯ ಚಾಲುಕ್ಯರ ಕಾಲ ಮತ್ತು ಕಲ್ಯಾಣಿಯ ಚಾಲುಕ್ಯರ ಕಾಲಗಳಿಗೆ ಮಧ್ಯೆ ರಾಷ್ಟ್ರಕೂಟರು ಆಳಿದರು. ಈ ಎರಡು ಕುಲಗಳನ್ನು ಜೋಡಿಸಿದವನು ಯಾರು ಎಂಬುದು ನಿಶ್ಚಿತವಾಗಿ ತಿಳಿಯದಿದ್ದರೂ ಈ ಎರಡು ಕುಲಗಳಿಗೂ ಸಂಬಂಧವಿತ್ತೆಂದು ಹೇಳುವುದಕ್ಕೆ ಆಧಾರ ಸಿಗುತ್ತದೆ. ವೆಂಗಿಯೂ ಇವುಗಳ ಶಾಖೆಗೇ ಸೇರಿರಬಹುದು. ಇವರ ಸ್ಥಳವೂ ಲಕ್ಷ್ಮೀಶ್ವರಕ್ಕೆ ಅಕ್ಕಪಕ್ಕದಲ್ಲಿದ್ದಿರಬಹುದು.
***********


**************

ಪಂಪಭಾರತ : ಗದ್ಯಾನುವಾದ - ಚತುರ್ದಶಾಶ್ವಾಸಂ

ಚತುರ್ದಶಾಶ್ವಾಸಂ
ಕಂ|| ಶ್ರೀ ರಾಮಾಲಿಂಗಿತ ವಿಪು
ಳೋರಸ್ಕಂ ಭಾಸ್ಕರಪ್ರತಾಪಂ ನಿಜ ದೋ|
ರ್ಮೇರು ಮಥಿತಾರಿ ಬಳ ಕೂ
ಪಾರಂ ಸಂಹಾರಿತಾರಿ ಶೌರ್ಯಂ ಹರಿಗಂ|| ೧

ತನ್ನಿಱದು ಗೆಲ್ದ ಕೊಳುಗುಳ
ವನ್ನೋಡಲ್ ಚಕ್ರಪಾಣಿಯುಂ ತನ್ನ ಸಹೋ|
ತ್ಪನ್ನರುಮೊಡವರೆ ಬಂದು ವಿ
ಪನ್ನೋಗ್ರಾರಾತಿವರ್ಗನಾಹವಧರೆಯಂ| ೨

ವ|| ಎಯ್ದಿ ತನ್ನಿಂದಮಂತಕಾನನಮನೆಯ್ದಿದ ಮಹಾ ಪ್ರಚಂಡಮಂಡಳಿಕಮಕುಟ ಬದ್ದಸಾಮಂತಮಹಾಸಾಮಂತಸಂಹತಿಯುಮನೆಣಿಕೆಗೞದ ಕರಿತುರಗವರೂಥ ಪದಾತಿಗಳುಮಂ ನೋಡಿ ಮುರಾರಿಯ ಮೊಗಮಂ ನೋಡೆಯಧೋಕ್ಷಜನಜಾತಶತ್ರುವನಿಂತೆಂದಂ-

ಉ|| ಶಾತ ಶರಾಗ್ನಿ ಭಗ್ನ ಭಟ ಕೋಟಿ ವಿಭೀಷಣಮುಗ್ರವೈರಿಸಂ
ಘಾತಕರೀಂದ್ರರುಂದ್ರಕಟಕೂಟಪರಿಚ್ಯುತಭೃಂಗಮಾಳಿಕಾ|
ಪೀತಮದಾಂಬುಕಂ ಪ್ರಕೃತಿರಕ್ತಜಳಾಸವಮತ್ತಯೋಗಿನೀ
ವ್ರಾತಪರೀತಭೂತಸದನಂ ಕದನಂ ಕದನತ್ರಿಣೇತ್ರನಾ|| ೩

ಚ|| ಸುರಿತ ವರೂಥ ಚಕ್ರ ಹತಿಯಿಂ ಧರಣೀತಳಮತ್ತಮಿತ್ತಮ
ೞ್ದರಿಯೆ ವಿಯತ್ತಳಂ ಬಗೆದು ನೋೞ್ಪೊಡೆ ನಾಡೆ ಪತತ್ಪತತ್ರಿ ಜ|
ರ್ಝರಿತಮೆ ದಿಕ್ತಟಂ ರಿಪು ನರಾಪ ರಕ್ತ ಧುನೀ ಪ್ರವಾಹ ಪಿಂ
ಜರಿತಮೆ ಬೀರಮಂ ಪೊಗೞ್ವನೇವೊಗೞ್ವಂ ಕದನತ್ರಿಣೇತ್ರನಾ|| ೪

ವ|| ಎಂಬನ್ನೆಗಂ ಧೃತರಾಷ್ಟ್ರನುಂ ಗಾಂಧಾರಿಯುಮೊಂದಾಗಿ ಬರೆ ದುರ್ಯೋಧನನ ಪೆಂಡಿರಪ್ಪ ಭಾನುಮತಿಯುಂ ಚಂದ್ರಮತಿಯುಂ ಮೊದಲಾಗೆ ಸಮಸ್ತಾಂತಪುರಮುಂ ದುಶ್ಯಾಸನ ಲಕ್ಕಣ ಭೂರಿಶ್ರವಸ್ಸೋಮದತ್ತ ಭಗದತ್ತ ಬಾಹ್ಲೀಕ ಶಲ್ಯ ಶಕುನಿ ಸೈಂಧವ ಕರ್ಣ ಪ್ರಮುಖರಪ್ಪ ನಾಯಕರ ಪೆಂಡಿರುಂ ತಮ್ಮ ಗಂಡರಂ ಕೊಳುಗುಳದೊಳಱಸಿ ಕಾಣದೆ ಬಾಯೞದು ಪಳಯಿಸುತ್ತುಂ ಯೂಧಪತಿ ಕೆಡೆಯೆ ದೆಸೆದಪ್ಪಿದ ವನಕರಿಕರೇಣುಗಳುಮನಡರ್ಪಿಲ್ಲದೆ ಕಲ್ಪವೃಕ್ಷಮುಡಿದು ಕೆಡೆಯೆ ಬಂಬಲ ಬಾಡಿದ ವನಲತೆಗಳುಮಂ ಪೋಲ್ತು-

೧. ಸಂಪಲ್ಲಕ್ಷ್ಮಿಯಿಂದ ಆಲಿಂಗಿಸಲ್ಪಟ್ಟ ವಿಸ್ತಾರವಾದ ಎದೆಯುಳ್ಳವನೂ ಸೂರ್ಯನ ತೇಜಸ್ಸುಳ್ಳವನೂ ತನ್ನ ಭುಜವೆಂಬ ಮೇರುಪರ್ವತದಿಂದ ಕಡೆದ ಶತ್ರುಸೇನಾಸಮುದ್ರವುಳ್ಳವನೂ ತನ್ನ ಭುಜವೆಂಬ ಮೇರುಪರ್ವತದಿಂದ ಕಡೆದ ಶತ್ರುಸೇನಾಸಮುದ್ರವುಳ್ಳವನೂ ಶತ್ರುಗಳನ್ನು ಕೊಂದ ಶೌರ್ಯವುಳ್ಳವನೂ ಆದ ಅರಿಕೇಸರಿಯು (ಅರ್ಜುನನು) ೨. ತಾನು ಯುದ್ಧಮಾಡಿ ಗೆದ್ದ ಯುದ್ಧಭೂಮಿಯನ್ನು ನೋಡಲು ಕೃಷ್ಣನೂ ತನ್ನ ಸಹೋದರರೂ ಜೊತೆಯಲ್ಲಿ ಬರಲು ನಾಶಮಾಡಲ್ಪಟ್ಟ ಭಯಂಕರವಾದ ಶತ್ರುಗಳನ್ನುಳ್ಳ ಧರ್ಮರಾಯನೂ ಯುದ್ಧಭೂಮಿಯನ್ನು ಬಂದು ಸೇರಿದನು. ವ|| ತನ್ನಿಂದ ಯಮನ ಬಾಯನ್ನು ಸೇರಿದ ಮಹಾಶೂರರಾದ ಮಂಡಳಿಕ, ಮಕುಟಬದ್ಧ ಸಾಮಂತಮಹಾಸಾ ಮಂತಸ ಮೂಹವನ್ನು ಎಣಿಕೆಯನ್ನು ಮೀರಿದ ಅಸಂಖ್ಯಾತವಾದ ಆನೆ, ಕುದುರೆ, ತೇರು, ಕಾಲಾಳು ಸೈನ್ಯವನ್ನು ನೋಡಿ ಕೃಷ್ಣನ ಮುಖವನ್ನು ನೋಡಲು ಕೃಷ್ಣನು ಧರ್ಮರಾಯನನ್ನು ಕುರಿತು ಹೀಗೆಂದನು. ೩. ಹರಿತವಾದ ಬಾಣಗಳ ಬೆಂಕಿಯಿಂದ ಹಾಳಾದ ಅನೇಕ ಯೋಧರಿಂದ ಭಯಂಕರವಾದುದೂ ಭಯಂಕರವಾದ ಶತ್ರುಗಳು ಸಮೂಹಗಳಿಂದಲೂ ಆನೆಗಳು ವಿಸ್ತಾರವಾದ ಕಪೋಲದ ಕಡೆಯಿಂದ ಹರಿಯತ್ತಿರುವ ಮದೋದಕವನ್ನು ಕುಡಿಯುತ್ತಿರುವ ದುಂಬಿಗಳ ಸಮೂಹಗಳಿಂದಲೂ, ಸಹಜವಾಗಿ ರಕ್ತಜಲವೆಂಬ ಮದ್ಯದಿಂದ ಸೊಕ್ಕಿರುವ ಯೋಗಿನೀಜನಗಳ ಗುಂಪಿನಿಂದಲೂ ಸುತ್ತುವರಿಯಲ್ಪಟ್ಟು ಅರ್ಜುನನ ಯುದ್ಧರಂಗವು ಪಿಶಾಚಿಗಳ ಆವಾಸಸ್ಥಾನವಾಗಿದೆ. ೪. ಪ್ರಕಾಶಮಾನವಾದ ತೇರಿನ ಗಾಲಿಗಳ ಹೊಡೆತದಿಂದ ಭೂಪ್ರದೇಶವು ಅಲ್ಲಲ್ಲಿ ಹಳ್ಳತಗ್ಗುಗಳಿಂದ ಕೂಡಿದೆ. ಆಕಾಶಪ್ರದೇಶವು ಬೀಳುತ್ತಿರುವ ಬಾಣಗಳ ಚೂರುಗಳಿಂದ ಜರ್ಝರಿತವಾಗಿ ಹೋಗಿದೆ. ದಿಗ್ಭಾಗಗಳು ಶತ್ರುರಾಜರ ರಕ್ತದ ನದಿಯ ಪ್ರವಾಹದಿಂದ ಕೆಂಪು ಹಳದಿ ಮಿಶ್ರವಾದ ಬಣ್ಣದಿಂದ ಕೂಡಿದೆ. ಅರ್ಜುನನ ಪ್ರತಾಪವನ್ನು ವರ್ಣಿಸುವುದು ಹೇಗೆ ಸಾಧ್ಯ. ವ|| ಎನ್ನುವಷ್ಟರಲ್ಲಿ ಧೃತರಾಷ್ಟ್ರನೂ ಗಾಂಧಾರಿಯೂ ಒಟ್ಟುಗೂಡಿ ಬಂದರು. ದುರ್ಯೋಧನನ ಹೆಂಡತಿಯರಾದ ಭಾನುಮತಿಯೂ ಚಂದ್ರಮತಿಯೂ ಸಮಸ್ತ ರಾಣಿವಾಸವೂ ಲಕ್ಷಣ ಭೂರಿಶ್ರವ ಸೋಮದತ್ತ ಭಗದತ್ತ ಬಾಹ್ಲಿಕ ಶಲ್ಯಶಕುನಿ ಸೈಂಧವ ಕರ್ಣನೇ ಮೊದಲಾದ ಪ್ರಮುಖನಾಯಕರ ಹೆಂಡತಿಯರೂ ಗಟ್ಟಿಯಾಗಿ ಅಳುತ್ತಾ ಸಲಗನು ಕೆಡೆಯಲು ದಿಕ್ಕುಕಾಣದ ಕಾಡಿನ ಹೆಣ್ಣಾನೆಗಳನ್ನೂ ಕಲ್ಪವೃಕ್ಷವು ಮುರಿದು ಬೀಳಲು ಅವಲಂಬನವಿಲ್ಲದೆ ಸುಟ್ಟು ಬಾಡಿದ

ಚಂ|| ಇಱವ ಪಿಣಿಲ್ ತೆರಳ್ದೊವ ಕಣ್ಣನಿ ಮಾಣದೆ ಮೋದೆ ಶೋಕದ
ಚ್ಚಿಱದವೊಲಿರ್ದ ಬಾಸುೞನೊಳೞ್ದು ಕನಲ್ದು ಬೞಲ್ದು ಜೋಲ್ದ ಮೆಯ್|
ಮಱುಗುವ ಬೇಗದೊಳ್ಮೊಗಮಣಂ ದೆಸೆಗಾಣದ ನೋಟಮಾರುಮಂ
ಮಱುಗಿಸೆ ಬಂದುದಂದು ಕರುಣಂ ಬರೆ ವೈರಿನೃಪಾಂಗನಾಜನಂ|| ೫

ವ|| ಆಗಳ್ ಧರ್ಮಪುತ್ರಂ ಧೃತರಾಷ್ಟ್ರಂಗಂ ಗಾಂಧಾರಿಗಮೆಱಗಿ ಪೊಡೆವಟ್ಟು-

ಕಂ|| ಏಗೆಯ್ದುಮೆನ್ನ ಧರೆಯೊ
ರ್ವಾಗಮುಮಂ ನೀಮೆ ಬೆಸಸೆಯುಂ ಕುಡದಿನಿತಂ|
ಮೇಗಿಲ್ಲದೆ ನೆಗೆೞ್ದಱದಂ
ನಾಗಧ್ವಜನಯ್ಯ ನೀಮದರ್ಕೞಲದಿರಿಂ|| ೬

ಆತನೊಡವೋಯ್ತು ಪಗೆ ನಿಮ
ಗಾತನಿನಗ್ಗಳದ ಮಗನೆನಾಂ ನಖ ಮಾಂಸ|
ಪ್ರೀತಿಯೊಳೆ ನೆಗೞ್ವೆನಿಂ ಪಡೆ
ಮಾತೇಂ ಪಂಬಲಿಸದೆನ್ನ ಪೇೞ್ದುದುಗೆಯ್ಯಿಂ|| ೭

ವ|| ಎಂಬುದುಂ ಧೃತರಾಷ್ಟ್ರನಿಂತೆಂದಂ-

ಕಂ|| ತನಯಶತಮಾದುದಲ್ತೆನ
ಗನಿವಾರಿತ ದುಖಶತಮೆ ತಾನಾದುದವಂ|
ನೆನೆಯೆಂ ಸಂಸ್ಕಾರಿಸಲೀ
ವನಿತೆಯರ್ಗವರವರ ಪುರುಷರಂ ಕುಡವೇೞ್ಕುಂ|| ೮

ವ|| ಎಂಬುದುಮದಾವುದು ದೋಷಮವರ್ಗೆಲ್ಲಂ ಸಂಸ್ಕಾರವಿಯಂ ನಾನೆ ಪಕ್ಕದೊಳಿರ್ದು ಮಾಡುಸುವೆನೆಂಬನ್ನೆಗಂ ಕೊಂತಿ ಬಂದು ಕರ್ಣನ ಕಳೇವರಮಂ ತೞ್ಕೈಸಿ ಕೊಂಡು ಪಾಂಡವರಯ್ವರುಮನಲ್ಲಿಗೆ ಬರಿಸಿ-

ಕಂ|| ನಿಮ್ಮಣ್ಣನೆನ್ನ ಪಿರಿಯ ಮ
ಗಮ್ಮಾತೇಂ ಕರ್ಣನಾಂ ಮಹಾಪಾತಕಿಯೆಂ|
ನಿಮ್ಮಯ ಮೋಹದಿನೀತಂ
ಗಾಮ್ಮಾಡಿದೆನಿನಿತನೆಂದು ಶೋಕಂಗೆಯ್ದಳ್|| ೯

ವ|| ಆಗಳಯ್ವರುಮಾ ಮಾತಂ ಕೇಳ್ದು ಭೋಂಕನೆರ್ದೆದೆಯೆ ಸಹೋದರ ಶೋಕದೊಳ್ ಮನ್ಯುಮಿಕ್ಕು ಸೈರಿಸಲಾಱದೆ-

ಕಾಡುಬಳ್ಳಿಗಳನ್ನೂ ಹೋಲುತ್ತಾ ೫. ಸಡಿಲವಾಗಿರುವ ಜಡೆ, ಪ್ರವಾಹವಾಗಿ ಸುರಿಯುವ ಕಣ್ಣೀರು, ಬಿಡದೆ ಹೊಡೆದುಕೊಳ್ಳುತ್ತಿರಲು ದುಖದ ಅಚ್ಚಿಟ್ಟಹಾಗೆ ಇದ್ದ ಬಾಸುಂಡೆಗಳಲ್ಲಿ ತಗ್ಗಾಗಿ ಕೆರಳಿ ಆಯಾಸಗೊಂಡು ಜೋಲುತ್ತಿರುವ ಮೈ, ವ್ಯಥೆಪಡುವ ಹೊತ್ತಿನಲ್ಲಿ ದಿಕ್ಕುಕಾಣದೆ (ಕಣ್ಣುಗಳಲ್ಲಿ ನೀರು ತುಂಬಿಕೊಂಡಿರುವುದರಿಂದ) ನೋಟ ಇವು ಯಾರನ್ನಾದರೂ ದುಖಿಸುವಂತೆ ಮಾಡಲು ಶತ್ರುರಾಜರ ರಾಣಿಯರು ಕರುಣೆಯೇ ಮೂರ್ತಿಮತ್ತಾಗಿ ಬಂದಂತೆ ಅಲ್ಲಿಗೆ ಬಂದರು. ವ|| ಆಗ ಧರ್ಮರಾಜನು ಧೃತರಾಷ್ಟ್ರನಿಗೂ ಗಾಂzsiರಿಗೂ ಬಗ್ಗಿ ನಮಸ್ಕಾರಮಾಡಿ

೬. ಏನು ಮಾಡಿದರೂ ನನ್ನ ರಾಜ್ಯದ ಒಂದು ಭಾಗವನ್ನು ನೀವೆ ಹೇಳಿದರೂ ಕೊಡದೆ ಸ್ವಲ್ಪವೂ ಉತ್ತಮವಾಗಿಲ್ಲದ ರೀತಿಯಲ್ಲಿ ಇಷ್ಟನ್ನೂ ಮಾಡಿ ಸರ್ಪಧ್ವಜನಾದ ದುರ್ಯೋಧನನು ಸತ್ತನು. ನೀವು ಅದಕ್ಕಾಗಿ ದುಖಪಡಬೇಡಿ. ೭. ದ್ವೇಷವು ಆತನೊಡನೆಯೇ ಹೋಯಿತು. ನಾನು ಆತನಿಗಿಂತ ಉತ್ತಮನಾದ ಮಗನಾಗಿದ್ದೇನೆ. ಉಗುರುಮಾಂಸಗಳಿಗಿರುವಷ್ಟು ಬಹು ಅನ್ಯೋನ್ಯವಾದ ಪ್ರೀತಿಯಿಂದಲೇ ನಡೆದುಕೊಳ್ಳುತ್ತೇನೆ. ಬೇರೆ ಮಾತೇನು? ಹಂಬಲಿಸದೆ ನಾನು ಹೇಳಿದುದನ್ನು ಮಾಡಿ ವ|| ಎನ್ನುಲು ಧೃತರಾಷ್ಟ್ರನ್ನು ಹೀಗೆಂದನು. ೮. ನನಗೆ ನೂರುಮಕ್ಕಳಾಗಲಿಲ್ಲ. ತಡೆಯಲಾಗದ ನೂರು ದುಖಗಳೇ ತಾನಾದುವು. ಅವುಗಳನ್ನು ನೆನೆಯುವುದಿಲ್ಲ; ಈ ಸ್ತ್ರೀಯರು ಅವರವರ ಪತಿದೇಹಗಳನ್ನು ಶವಸಂಸ್ಕಾರ ಮಾಡಲು ಅವರಿಗೆ ಕೊಡಬೇಕು. ವ|| ಎನ್ನುವಷ್ಟರಲ್ಲಿ ದೋಷವೇನಿದೆ? ಅವರುಗಳ ಸಂಸ್ಕಾರವಿಯನ್ನೆಲ್ಲ ನಾನೇ ಪಕ್ಕದಲ್ಲಿದ್ದು ಮಾಡಿಸುತ್ತೇನೆ ಎನ್ನುವಷ್ಟರಲ್ಲಿ ಕುಂತೀದೇವಿಯು ಬಂದು ಕರ್ಣನ ಹೆಣವನ್ನು ತಬ್ಬಿಕೊಂಡು ಪಾಂಡವರೈದುಜನವನ್ನೂ ಅಲ್ಲಿಗೆ ಬರಮಾಡಿದಳು.

೯. ಕರ್ಣನು ನಿಮ್ಮಣ್ಣ, ನನ್ನ ಹಿರಿಯ ಮಗ, ಹೇಳುವುದೇನು? ನಾನು ಮಹಾಪಾತಕಿ, ನಿಮ್ಮ ಮೇಲಿನ (ಮೋಹದಿಂದ) ಈತನಿಗೆ

ಚಂ|| ಅೞಪಿದರಾರುಮಿಲ್ಲೆಮಗೆ ನೀನೆಮಗಣ್ಣನೆಯೆಂದು ಮುನ್ನಮಾ
ಮಱದೊಡೆ ಪಟಮಂ ನೆಲನುಮಂ ನಿನಗಿತ್ತು ಕುರುಪ್ರಧಾನನೊಳ್|
ಕಱುಪನೆ ನಿಚ್ಚಟಂ ಬಿಸುಟು ನಿನ್ನಯ ಪೇೞ್ದ್ದುದುಗೆಯ್ದು ಪಾೞಯಂ
ಮೆಯೆವೆ ಬಾಯ ತಂಬುಲದೊಳಂ ಮಡುಗೂೞೊಳಮಂಗವಲ್ಲಭಾ|| ೧೦

ವ|| ಎಂದು ಶೋಕಾಕ್ರಾಂತರಾದರಂ ನಾರಾಯಣಂ ಸಂತೈಸಿ ಕೊಂದರ್ ಕೊಲೆ ಸಾವರೆಂಬುದು ಜಗದ್ವ್ಯಾಪಾರವಿಶ್ವರನಿಚ್ಛೆಯಿಂದ ನೆಗೞ್ಗುಮೆಂದು ದುಖೋಪಶಮನಂ ಮಾಡಿದೊಡೆ ಸಮಾಹಿತಚಿತ್ತರಾಗಿ ಕೊಳುಗುಳನಂ ವಿವಿಧಾನದಿಂ ಬಳಸಿ ದುರ್ಯೋಧನಂ ಮೊದಲಾಗೆ ಕುರುಕ್ಷೇತ್ರದೊಳ್ ಸತ್ತರಸುಮಕ್ಕಳೆಲ್ಲರುಮನೊಂದಾಗಿ ತಂದು ಬೆಟ್ಟಾಗೊಟ್ಟಿ ಕರ್ಣನ ಕಳೇವರಮನನಿಬರಿಂ ಮಿಗೆ ಮಹಾಬ್ರಾಹ್ಮಣರಿಂದಂ ಮಂತ್ರವಿಯಿಂದಿರಿಸಿ ಹರಿಚಂದನ ಕರ್ಪೂರ ಕಾಳಾಗರುಕಾಷ್ಠಂಗಳಿಂದಂ ಯಥೋಕ್ತ ವಿಯಿಂ ಸಂಸ್ಕಾರಿಸಿ ಕರ್ಣಂಗೆ ಕರ್ಣಸ್ಥಳಿಯೆಂಬ ತೀರ್ಥಮಂ ಮಾಡಿ ಜಳದಾನಾದಿ ಕ್ರಿಯೆಗಳಂ ನಿರ್ವರ್ತಿಸೆ ತದನಂತರದೊಳ್ ಧೃತರಾಷ್ಟ್ರನುಂ ಗಾಂಧಾರಿಯುಂ ಪುತ್ರವಿಯೋಗದುಖದಿಂ ಮುನಿವನಮನಾಶ್ರಯಿಸಿದರ್ ಕೊಂತಿಯುಂ ಕರ್ಣನ ಶೋಕದೊಳ್ ಧರ್ಮಪುತ್ರನಂ ಬೀೞ್ಕೊಂಡವರೊಡನೆ ತಪಶ್ಚರಣಪರಾಯಣೆಯಾದಳಿತ್ತ ಧರ್ಮನಂದನಂ ದೇವಕೀನಂದನನನಿಂತೆಂದಂ-

ಮ|| ಇನಿತೊಂದುಗ್ರರಣಪ್ರಘಟ್ಟಕದೊಳೀ ಭಾರಾವತಾರಂ ಧರಾಂ
ಗನೆಗೀಯಿರ್ವರಿನಾದುದಾಯ್ತೆನಗೆ ನಿರ್ದಾಯಾದ್ಯವಿ ಸಾ|
ಲ್ಗೆನಗಿಂ ರಾಜ್ಯಮೆ ಬಾೞ್ತೆಯಲ್ತು ಹರಿಗಂಗುತ್ಸಾಹದಿಂ ಪಟ್ಟ ಬಂ
ಧನಮಂ ಮಾಡುವಮಿಂದೆ ಹಸ್ತಿನಪುರಪ್ರಸ್ಥಾನಮಂ ಮಾಡುವಂ|| ೧೧

ವ|| ಎಂಬುದುಮಶೇಷ ಧರಾಭಾರಮಂ ಶೇಷಂ ತಾಳ್ದುವಂತೆ ವಿಕ್ರಮಾರ್ಜುನಂಗಲ್ಲದೆ ಪೆಱಂಗೆ ತಾಳ್ದಲರಿದಿದರ್ಕಾನುಮೊಡಂಬಡುವೆನೆಂದು ಮುಕುಂದನನೇಕ ಮುಕುಂದಬೃಂದಂಗಳ್ ಮೊೞಗೆ ಶುಭಮೂಹೂರ್ತದೊಳರಿಕೇಸರಿಯಂ ಮುಂದಿಟ್ಟು ಹಸ್ತಿನಪುರೋಪವನಮನೆಯ್ದೆ ವಂದಾಗಳ್-

ಚಂ|| ಮೃದುಮಧುರಸ್ವನಂ ನೆಗೞೆ ಬಂದೇಳಮಾವಿನೊಳಿರ್ದು ಕೂಡೆ ಪಾ
ಡಿದುದು ಮದಾಳಿಮಾಲೆ ಪುಗಲೆನ್ನದೆ ಪುಗಲೆನ್ನದೆ ದಲ್ ಪುಗಿಮೆಂದು ಮೆಲ್ಪುಗುಂ|
ದದ ದನಿಯಿಂ ತಳಿರ್ತಸುಗೆಯೊಳ್ ನೆಲಸಿರ್ದ ಪಿಕಾಳಿ ಮೆಲ್ಲನೂ
ಳ್ದುದು ಮನಮಾ ತೀಡಿದುದು ತೆಂಕಣ ತಂಬೆಲರಪ್ಪಿಕೊಳ್ವವೋಲ್|| ೧೨

ಇಷ್ಟನ್ನೂ ನಾನೇ ಮಾಡಿದೆನು ಎಂದು ದುಖಿಸಿದಳು- ವ|| ಆಗ ಅಯ್ವರು ಸಹೋದರರು ಆ ಮಾತನ್ನು ಕೇಳಿ ವಿಶೇಷವಾಗಿ ದುಖಿಸಿ ಸಹಿಸಲಾರದೆ- ೧೦. “ನೀನು ನಮಗಣ್ಣನೆಂದು ನಮಗೆ ಯಾರೂ ತಿಳಿಸಲಿಲ್ಲ. ಮೊದಲು ತಿಳಿದಿದ್ದರೆ ಪಟ್ಟವನ್ನೂ ರಾಜ್ಯವನ್ನೂ ನಿನಗೆ ಕೊಟ್ಟು ಕೌರವಮುಖ್ಯಸ್ಥನಾದ ದುರ್ಯೋಧನನಲ್ಲಿ ದ್ವೇಷವನ್ನು ಶಾಶ್ವತವಾಗಿ ಬಿಸಾಡಿ ನೀನು ಹೇಳಿದುದನ್ನು ಮಾಡಿಕೊಂಡು ನಿನ್ನ ಬಾಯಿದಂಬುಲದಲ್ಲಿಯೂ ಇಟ್ಟ ತಂಗಳು ಅನ್ನದಲ್ಲಿಯೂ ಸಂಪ್ರದಾಯವನ್ನು ಪಾಲಿಸುತ್ತಿರುತ್ತಿದ್ದೆವಲ್ಲವೆ? ವ|| ಎಂದು ದುಖದಿಂದ ಕೂಡಿದ್ದವರನ್ನು ಕೃಷ್ಣನು ಸಮಾಧಾನಪಡಿಸಿ ಕೊಂದವರು ಕೊಲೆಗೆ ಈಡಾಗಿ ಸಾಯುತ್ತಾರೆ ಎಂಬುದು ಲೋಕೋಕ್ತಿ. ಈಶ್ವರನ ಇಚ್ಛೆಯಿಂದಲೇ ನಡೆಯುತ್ತದೆ ಎಂದು ದುಖವನ್ನು ಹೋಗಲಾಡಿಸಿದನು. ಯುದ್ಧರಂಗವನ್ನು ಶಾಸ್ತ್ರರೀತಿಯಲ್ಲಿ ಸುತ್ತಿನೋಡಿ ದುರ್ಯೋಧನನೇ ಮೊದಲಾಗಿ ಕುರುಕ್ಷೇತ್ರದಲ್ಲಿ ಸತ್ತ ಎಲ್ಲ ರಾಜಕುಮಾರರನ್ನೂ ತಂದು ಒಟ್ಟಿಗೆ ಬೆಟ್ಟದಂತೆ ರಾಶಿಮಾಡಿದರು. ಕರ್ಣನ ಶರೀರವನ್ನು ಅಷ್ಟು ಜನವನ್ನೂ ಮೀರುವ ರೀತಿಯಲ್ಲಿ ಬ್ರಾಹ್ಮಣರಿಂದ ವಿಪೂರ್ವಕವಾಗಿ ಇರಿಸಿ ಶ್ರೀಗಂಧ, ಕರ್ಪೂರ, ಕರಿಯ ಅಗರು ಸೌದೆಯಿಂದ ಶಾಸ್ತ್ರದಲ್ಲಿ ಹೇಳಿರುವಂತೆ ಸಂಸ್ಕಾರಮಾಡಿದರು. ಕರ್ಣನ ಜ್ಞಾಪಕಾರ್ಥವಾಗಿ ಕರ್ಣಸ್ಥಳಿಯೆಂಬ ಕ್ಷೇತ್ರವನ್ನು ನಿರ್ಮಿಸಿದರು. ತರ್ಪಣವೇ ಮೊದಲಾದ ಕ್ರಿಯೆಗಳನ್ನು ಮಾಡಿ ಮುಗಿಸಿದರು. ಧೃತರಾಷ್ಟ್ರನೂ ಗಾಂಧಾರಿಯೂ ಮಕ್ಕಳನ್ನು ಅಗಲಿದ ದುಖದಿಂದ ಋಷಿಗಳ ತಪೋವನವನ್ನು ಆಶ್ರಯಿಸಿದರು. ಕುಂತೀದೇವಿಯೂ ಕರ್ಣನ ದುಖದಿಂದ ಧರ್ಮರಾಯನ ಅಪ್ಪಣೆಯನ್ನು ಪಡೆದು ಹೊರಟು ತಪಸ್ಸಿನಲ್ಲಿ ನಿರತಳಾದಳು. ಈ ಕಡೆ ಧರ್ಮರಾಯನು ಕೃಷ್ಣನಿಗೆ ಹೀಗೆಂದನು- ೧೧. ಇಷ್ಟು ಭಯಂಕರವಾದ ಈ ಯುದ್ಧಸಮಾರಂಭದಲ್ಲಿ ಈ ಭೀಮಾರ್ಜುನರಿಬ್ಬರಿಂದ ಭೂದೇವಿಗೆ ಈ ಭಾರದ ಇಳಿಯುವಿಕೆ ಆಯಿತು. ನನಗೆ ದಾಯಾದಿಗಳಿಲ್ಲದಿರುವುದೂ ಆಯಿತು. ಈ ವೈಭವವೇ ನನಗೆ ಸಾಕು. ನನಗೆ ಇನ್ನು ರಾಜ್ಯದಿಂದ ಪ್ರಯೋಜನವಿಲ್ಲ. ಹರಿಗನಾದ ಅರ್ಜುನನಿಗೆ ಇಂದೇ ಪಟ್ಟಾಭಿಷೇಕವನ್ನು ಮಾಡೋಣ, ಈ ದಿನವೇ ಹಸ್ತಿನಾಪುರಕ್ಕೆ ಪ್ರಯಾಣ ಮಾಡೋಣ. ವ|| ಎನ್ನಲು “ಸಮಸ್ತಭೂಭಾರವನ್ನೂ ಆದಿಶೇಷನು ಧರಿಸುವ ಹಾಗೆ ವಿಕ್ರಮಾರ್ಜುನನಲ್ಲದೆ ಬೇರೆಯವರಿಗೆ ಧರಿಸಲಸಾಧ್ಯ; ಇದಕ್ಕೆ ನಾನೂ ಒಪ್ಪುತ್ತೇನೆ”. ಎಂದು ಕೃಷ್ಣನು ಅನೇಕ ಮಂಗಳವಾದ್ಯಗಳ ಸಮೂಹವು ಭೋರ್ಗರೆಯುತ್ತಿರಲು ಶುಭಮುಹೂರ್ತದಲ್ಲಿ ಅರಿಕೇಸರಿಯನ್ನು ಮುಂದಿಟ್ಟು ಹಸ್ತಿನಾಪಟ್ಟಣದ ಸಮೀಪದಲ್ಲಿರುವ ತೋಟವನ್ನು ಸಮೀಪಿಸಿದನು.

೧೨. ಮೃದುಮಧುರವಾದ ಧ್ವನಿಯಿಂದ ಫಲಿತ ಎಳಮಾವಿನ ಮರದಲ್ಲಿದ್ದುಕೊಂಡು ಮದಿಸಿದ ದುಂಬಿಯ ಸಮೂಹವು ಕೂಡಲೆ

ಚಂ|| ಪಸರಿಸಿ ಬಂದ ಮಾಮರನೆ ಬೆಳ್ಗೊಡೆ ರಾಗದ ಪುಂಜದನ್ನವ
ಷ್ಪಸುಗೆಯ ನೀಳ್ದ ಕೆಂದಳಿರೆ ಪಾಳಿಮಹಾಧ್ವಜಮೆತ್ತಮಿಂಪನಾ|
ಳ್ದೆಸೆವಳಿಗೀತಿ ತಾನೆ ಜಯಗೀತಿಗಳಾಗಿರೆ ವಿಕ್ರಮಾರ್ಜುನಂ
ಗೊಸೆದಿದಿರ್ವರ್ಪವೋಲ್ ಬನವದೊಪ್ಪಿದುದಿಂತು ಬಸಂತರಾಜನಾ|| ೧೩

ವ|| ಆಗಳ್ ನಗರಪ್ರವೇಶಂಗೆಯ್ಯಲೆಂದು ಕಿಱದಾನುಂ ಬೇಗಮಾ ಪುರೋಪವನದೊಳ್ ವಿಶ್ರಮಿಸಿ ಪಂಚರತ್ನಮಯ ಮಂಡನಾಯೋಗ ಮಂಡಿತವಿಜಯಗಜಾರೂಢನಾದ ವಿಜಯನಂ ಮುಂದಿಟ್ಟು ಮಹಾವಿಭೂತಿಯಿಂದಯ್ವರುಂ ನಿಜಾನ್ವಯ ರಾಜದ್ರಾಜಧಾನಿಯಂ ಪುಗೆ-

ಮ|| ನವಕಾಳಾಗರುಧೂಪಧೂಮತತಿಸೌಗಂಧಂಗಳಿಂ ಸಯ್ತು ನೀ
ಳ್ದು ವಿಯಚ್ಚಕ್ರದೊಳಲ್ಲಿ ಮಂದಮರುತವ್ಯಾಘಾತದಿಂದೆಯ್ದೆ ತೋ|
ರ್ಪವೊಲಾಗಿರ್ದುದು ಕಣ್ಗೆ ವಂದುದು ಪುರಸ್ತ್ರೀ ಪಾಂಡುಪುತ್ರಂಗಮು
ತ್ಸವದಿಂ ಮುನ್ನರಿದಿರ್ದ ತನ್ನ ಪಿಣಿಲಂ ಕೂರ್ತಂದು ಬಿಟ್ಟಂತೆವೋಲ್|| ೧೪

ಮಲ್ಲಿಕಮಾಲೆ|| ಓಳಿದೋರಣಮಾಯ್ತು ಹಾರದ ಪಚ್ಛೆಸಾರದ ಮಾಲೆ ಸೌ
ಧಾಳಿಯೊಳ್ಗುಡಿಯಾಯ್ತು ಚೀನದ ಸುಯ್ಯತಾಣದ ಪಟ್ಟೆ ಹ|
ರ್ಮ್ಯಾಳಿದಪ್ಪದೆ ರಯ್ಯಮಾಯ್ತೆಸೆವಾಟ ಪಾಟದ ಗೀತಿ ಕ
ಣ್ಗೋಳಿವಟ್ಟುದದೊಂದು ಚೆಲ್ವು ದಲಾಯ್ತು ತತ್ಪುರಮಧ್ಯದೊಳ್|| ೧೫

ಮಾಲಿನಿ|| ಪ್ರವರತರ ಪುರಂನೂಪುರಾರಾವಮೆತ್ತಂ
ಕಿವಿಗೆ ವರೆ ವಿಳಾಸಂ ಕಣ್ಗೆ ಶೇಷಾಕ್ಷತೌಘ|
ದ್ರವಮೆ ತಮಗಮಿತ್ತತ್ತಿಂಬನೆಂಬನ್ನೆಗಂ ಪಾಂ
ಡವರೆ ಪುಗೆ ಪೊೞಲ್ಗಂದೊಟ್ಟ ಬೆಟ್ಟಾಯ್ತು ರಾಗಂ|| ೧೬

ವ|| ಅಂತು ಪುರುಜನಜನಿತಾಶೀರ್ವಾದಸಹಸ್ರಂಗಳೊಡನೆ ಸೂಸುವ ಶೇಷಾಕ್ಷತಂಗಳ ನಾನುತ್ತುಂ ಬಂದು ತತ್ಪುರಾಂಗನೆಯ ಮುಖಸರಸಿಜಮಲರ್ದಂತೆಸೆದೊಪ್ಪುವ ರಾಜಮಂದಿರಮಂ ಪೊಕ್ಕು ಧರ್ಮನಂದನಂ ದೇವಕೀನಂದನನೊಳ್ ಪರಮಾನಂದಂ ಬೆರಸು ಸಾಮಂತ ಚೂಡಾಮಣಿಯ ಪಟ್ಟಬಂಧನ ಮಹೋತ್ಸವಮಂ ಸಮಕೊಳಿಸಿ ರಿಕ್ರಮಾರ್ಜುನನನಿಂತೆಂದಂ-

ಹಾಡಿತು. ಪ್ರವೇಶಮಾಡಬೇಡ ಎನ್ನದೆ ಪ್ರವೇಶಮಾಡಿ ಎಂದು ಕಡಿಮೆಯಾಗದ ಧ್ವನಿಯಿಂದ ಚಿಗುರಿದ ಅಶೋಕಮರದಲ್ಲಿ ನೆಲಸಿದ್ದ ಕೋಗಿಲೆಗಳ ಗುಂಪು ನಿಧಾನವಾಗಿ ಕೂಗಿತು. ಮನಸ್ಸಿಗೆ ತೃಪ್ತಿಯಾಗುವಂತೆ ಆಲಿಂಗನ ಮಾಡಿಕೊಳ್ಳುವ ಹಾಗೆ ದಕ್ಷಿಣದಿಕ್ಕಿನ ತಂಗಾಳಿಯು ಬೀಸಿತು. ೧೩. ಚಿಗುರಿ ಹೂವಾದ ಮಾವಿನಮರವೇ ಶ್ವೇತಚ್ಛತ್ರಿ; ಕೆಂಪುಬಣ್ಣದ ರಾಶಿಯಂತಿರುವ ಅಶೋಕವೃಕ್ಷದ ಕೆಂಪುಚಿಗುರೇ ಪಾಳಿಧ್ವಜಗಳು. ಎಲ್ಲ ಕಡೆಯಲ್ಲಿಯೂ ಸೌಂದರ್ಯದಿಂದ ಕೂಡಿ ಪ್ರಕಾಶಿಸುವ ದುಂಬಿಯ ಹಾಡೇ ಜಯಗೀತೆಗಳಾಗಿರಲು ವಿಕ್ರಮಾರ್ಜುನನನ್ನು ಪ್ರೀತಿಯಿಂದ ಸ್ವಾಗತಿಸುವ ಹಾಗೆ ವಸಂತರಾಜನ ವನವು ಪ್ರಕಾಶಮಾನವಾಗಿತ್ತು. ವ|| ಆಗ ನಗರಪ್ರವೇಶಮಾಡಬೇಕೆಂದು ಸ್ವಲ್ಪ ಕಾಲ ಆ ಪಟ್ಟಣದ ಸಮೀಪದ ತೋಟದಲ್ಲಿದ್ದು ವಿಶ್ರಾಂತಿ ಹೊಂದಿ ಪಂಚರತ್ನದಿಂದ ಕೂಡಿದ ಆಭರಣಗಳ ಸಮೂಹದಿಂದ ಅಲಂಕರಿಸಲ್ಪಟ್ಟ ವಿಜಯಗಜವನ್ನು ಹತ್ತಿರುವ ಅರ್ಜುನನನ್ನು ಮುಂದುಮಾಡಿಕೊಂಡು ಮಹಾವೈಭವದಿಂದ ಅಯ್ದುಜನವೂ ತಮ್ಮ ವಂಶಪಾರಂಪರ್ಯವಾಗಿ ಬಂದು ಪ್ರಕಾಶಿಸುತ್ತಿರುವ ರಾಜಧಾನಿಯನ್ನು ಪ್ರವೇಶಿಸಿದರು. ೧೪. ಹೊಸದಾದ ಕರಿಯ ಅ ಗರುಧೂಪದ ಹೊಗೆಯ ಸಮೂಹವು ಸುವಾಸನೆಗಳಿಂದ ಕೂಡಿ ನೇರವಾಗಿ ಆಕಾಶದಲ್ಲಿ ಉದ್ದವಾಗಿ ಹರಡಿ ಅಲ್ಲಿ ನಿಧಾನವಾಗಿ ಬೀಸುವ ಗಾಳಿಯಿಂದ ಹೊಡೆಯಲ್ಪಟ್ಟು ಆಕರ್ಷಕವಾಗುವ ಹಾಗೆ ಆಯಿತು. ಪಟ್ಟಣವೆಂಬ ಹೆಂಗಸು ಪಾಂಡುಪುತ್ರನಾದ ಅರ್ಜುನನಿಗಾಗಿ ಸಂತೋಷದಿಂದ ಮೊದಲು ಕತ್ತರಿಸಿದ್ದ ತನ್ನ ಜಡೆಯನ್ನು ಈಗ ಪ್ರೀತಿಯಿಂದ ಇಳಿಯಬಿಟ್ಟ ಹಾಗೆ ಕಣ್ಣಿಗೆ ಮನೋಹರವಾಗಿ ಕಂಡಿತು. ೧೫. ಆ ಪಟ್ಟಣದ ಮಧ್ಯದಲ್ಲಿ ಹಾರವಾಗಿ ಮಾಡಿರುವ ಹಸಿರುವಾಣಿಯ ಸಾರವತ್ತಾದ ತೋರಣಗಳು ಸಾಲಾಗಿ ರಂಜಿಸಿದುವು. ಉಪ್ಪರಿಗೆಗಳ ಸಾಲಿನಲ್ಲಿ ರೇಷ್ಮೆಯ ಕಸೂತಿ ಕೆಲಸಮಾಡಿದ ನವುರಾದ ಬಟ್ಟೆಗಳಿಂದ ಕೂಡಿದ ಒಳ್ಳೆಯ ಬಾವುಟಗಳು ಎಲ್ಲ ಉಪ್ಪರಿಗೆಗಳಲ್ಲಿಯೂ ಪ್ರಕಾಶಸಿದುವು. ನೃತ್ಯ ಸಂಗೀತ ಹಾಡುಗಳು ಮನೋಹರವಾದುವು. ಅದು ಕಣ್ಣಿಗೆ ಸೌಂದರ್ಯರಾಶಿಯಾಗಿ ಕಂಡಿತು. ೧೬. ಅತಿಶ್ರೇಷ್ಠರಾದ ಅಂತಪುರಸ್ತ್ರೀಯರ ಕಾಲಂದಿಗೆಯ ಧ್ವನಿಯು ಎಲ್ಲ ಕಡೆಯಲ್ಲಿಯೂ ಕೇಳಿಸುತ್ತಿರಲು ಕಣ್ಣುಗಳಿಗೆ ವೈಭವವು ತೋರಿ ಬರಲು, ಆಶೀರ್ವಾದದ ಅಕ್ಷತೆಗಳ ಸಮೂಹವು ತಮಗೂ ಸಂತೋಷವನ್ನೂ ಕೊಟ್ಟಿತು ಎನ್ನುತ್ತಿರಲು ಪಾಂಡವರು ಪುರಪ್ರವೇಶಮಾಡುವ ಸಂತೋಷವು ಅತ್ಯತಿಶಯವಾಯಿತು. ವ|| ಹಾಗೆ ಪಟ್ಟಣದ ಜನಗಳಿಂದ ಉದ್ಭವವಾದ ಆಶೀರ್ವಾದ ಸಹಸ್ರಗಳನ್ನೂ ಅವರು ಚೆಲ್ಲುವ ಮಂತ್ರಾಕ್ಷತೆಗಳನ್ನೂ ತಲೆಯಲ್ಲಿ ಧರಿಸುತ್ತ ಬಂದು ಆ ಪುರಸ್ತ್ರೀಯ ಮುಖಕಮಲವು ಅರಳಿದಂತೆ ಪ್ರಕಾಶಿಸುತ್ತಿರುವ ಅರಮನೆಯನ್ನು ಪ್ರವೇಶೀಸಿದರು. ಧರ್ಮರಾಜನು ಕೃಷ್ಣನೊಡನೆ

ಉ|| ಪ್ರಾಯದ ಪೆಂಪೆ ಪೆಂಪೆಮಗೆ ವಿಱದರಂ ತವೆ ಕಂದ ಪೆಂಪು ಕ
ಟ್ಟಾಯದ ಪೆಂಪು ಶಕ್ರನೊಡನೇಱದ ಪೆಂಪಿವು ಪೆಂಪುವೆತ್ತು ನಿ|
ಟ್ಟಾಯುಗಳಾಗಿ ನಿನ್ನೊಳಮರ್ದಿದುವು ನೀಂ ತಲೆವೀಸದುರ್ವರಾ
ಶ್ರೀಯನಿದಾಗದೆನ್ನದೊಳಕೊಳ್ ಪರಮೋತ್ಸವದಿಂ ಗುಣಾರ್ಣವಾ|| ೧೭

ವ|| ಎಂದು ಧರ್ಮಪುತ್ರನುಂ ದೇವಕೀಪುತ್ರನುಂ ಮರುತ್ಪುತ್ರನುಮಮರೇಂದ್ರ ಪುತ್ರನನೆಂತಾನುಮೊಡಂಬಡಿಸಿ ನಾಳೆ ಪಟ್ಟಬದ್ಧೋತ್ಸವಮೆಂದು ಮುನ್ನಿನ ದಿವಸಂ ಮಯನಿಂ ಪಂಚರತ್ನಮಯಮಾದ ಸಭಾಮಂಟಪಮಂ ತರಿಸಿ ವಸಿಷ್ಠ ಕಶ್ಯಪ ವ್ಯಾಸ ವಿಶ್ವಾಮಿತ್ರ ಭರದ್ವಾಜಾದಿ ಮುನಿಪತಿಗಳಂ ಬರಿಸಿ ಮಾತಳಿಯ ಕೆಯ್ಯೊಳ್ ದೇವೇಂದ್ರನಟ್ಟಿದ ಕಲ್ಪವೃಕ್ಷದ ತಳಿರ್ಗಳನೈರಾವತದ ಹರವೃಷಭದ ಕೋಡ ಮಣ್ಣುಮನಾಕಾಶಗಂಗೆಯ ನೀರುಮಂ ಮಂದಾರಪಾರಿಜಾತದ ಪೂಮಾಲೆಗಳುಮಂ ವರುಣದೇವನಟ್ಟಿದ ಕ್ಷಾರಕ್ಷೀರೇಕ್ಷುದಮಧುಘೃತಸ್ವಾದೂದಕಂಗಳೆಂಬೇೞುಂ ಸಮುದ್ರಂಗಳ ಚತುರ್ದಶ ಮಹಾನದಿಗಳ ನೀರುಮಂ ತೞತೞ ತೊಳಗುವ ಕಳಧೌತ ಕಳಶಂಗಳೊಳ್ ತೆಕ್ಕನೆ ತೀವಿ ತಂದ ವಾರವನಿತಾಜನಕ್ಕಂ ಸಾಮಂತಚಕ್ರಕ್ಕಮುಡಲಿಕ್ಕಿ ಧವಳಚ್ಛತ್ರ ಚಾಮರಸಿಂಹಾಸನ ಪಟ್ಟವರ್ಧನಕುಲಧನಾದಿ ರಾಜ್ಯಚಿಹ್ನಂಗಳಂ ವಿವಿಧ ವಿಧಾನದಿಂದಮವಾಸಿಸಿ ಗಂಗಾಜಳಪವಿತ್ರೀಕೃತಗಾತ್ರನುಂ ಕೌಶೇಯ ಪರಿಧಾನನುಮಾಗಿರ್ದ ಮಾನನಿಧಾನನಂ ತಂದು ಪೊಡೆವಡಿಸಿ ಮಂಗಳಪಟಹಂಗಳುಂ ಮಂಗಳಗೀತಿಗಳುಮೆಸೆಯೆ ಕಳಕಳಾವರ್ತಮಾಗೆ ಜಾಗರಮಿರ್ದು ಮಱುದಿವಸಂ ಪ್ರಶಸ್ತ ಮೌಹೂರ್ತಿಕ ನಿರೂಪಿತ ಶುಭ ಲಗ್ನೋದಯ ದಿಂದಷ್ಟೋತ್ತರಶತ ಪೂರ್ಣಕುಂಭಂಗಳಂ ಚತುರ್ವೇದ ಪಾರಗರಪ್ಪ ಧರಾಮ ರರೆತ್ತಿಕೊಂಡು ಮಂತ್ರಪೂತ ಜಲಂಗಳಿಂ ವಿಯಿಸಿ-

ಚಂ|| ಸ್ರ|| ವನಪ್ರಧ್ವಾನದಿಂ ಮಂಗಳಪಹರವಂ ಪೆರ್ಚೆ ಮಾಂಗಲ್ಯಗೇಯ
ಧ್ವನಿಯಿಂದಾಶಾಂತರಂ ಘೂರ್ಣಿಸಿ ಸೊಗಯಿಸೆ ಕೆಯ್ಗೆಯ್ದು ಸಾಮಂತ ಸೀಮಂ|
ತಿನಿಯರ್ ಮುಂದಾಡೆ ಭೋರೆಂದೆಸೆಯೆ ಜಯಜಯಧ್ವಾನಮೋರಂತೆ ವಾರಾಂ
ಗನೆಯರ್ ವಂದಾಡೆ ಸಂದೀ ವಿಭವದೊಳರಿಗಂಗಾಯ್ತು ರಾಜ್ಯಾಭಿಷೇಕಂ|| ೧೮

ವ|| ಆಗಳ್ ರಾಜ್ಯಾಭಿಷೇಕದ ನಂತರದೊಳ್ ಧರ್ಮನಂದನಂ ವಾಯುನಂದನಂ ದೇವಕೀನಂದನನಶ್ವಿನೀನಂದನರಯ್ವರುಮನೇಕ ಮಂಗಳಾಭರಣಾಳಂಕೃತಶರೀರರರಿಕೇಸರಿಯಂ ಕೇಸರಿವಿಷ್ಟರದೊಳ್ ಕುಳ್ಳಿರಿಸಿ ಪಂಚರತ್ನಶಿಖಾವಿರಾಜಮಾನಮಪ್ಪ ಪಟ್ಟಮನೆತ್ತಿ ಯಾದವ ವಂಶಸಂಭೂತೆಯುಮನೇಕಲಕ್ಷಣೋಪೇತೆಯುಮಪ್ಪ ಸುಭದ್ರೆಗೆ ಮಹಾದೇವಿವಟ್ಟಮಂ ಕಟ್ಟಿದಾಗಳ್-

ವಿಶೇಷ ಸಂತೋಷದಿಂದ ಕೂಡಿ ಸಾಮಂತಚೂಡಾಮಣಿಯಾದ ಅರ್ಜುನನ ಪಟ್ಟಾಭಿಷೇಕಮಹೋತ್ಸವವನ್ನೇರ್ಪಡಿಸಿ ಅರ್ಜುನನನ್ನು ಕುರಿತು ಹೀಗೆಂದನು- ೧೭. ಗುಣಾರ್ಣವಾ ಪ್ರಾಯದ ವೈಭವ; ನಮ್ಮನ್ನು ಅತಿಕ್ರಮಿಸಿದವರನ್ನು ನಾಶವಾಗುವಂತೆ ಕೊಂದ ವೈಭವ; ಅತ್ಯಕವಾದ ಪರಾಕ್ರಮದ ವೈಭವ; ಇಂದ್ರನೊಡನೆ ಅವನ ಅರ್ಧಾಸನವನ್ನು ಹತ್ತಿದ ವೈಭವ ಇವು ಆಕ್ಯವನ್ನು ಹೊಂದಿ ದೀರ್ಘಾಯುವಾಗಿ ನಿನ್ನಲ್ಲಿ ಸೇರಿಕೊಂಡು ಪ್ರಕಾಶವಾಗಿವೆ. ಅರ್ಜುನ, ನೀನು ತಲೆಬೀಸದೆ (ಅಸಮ್ಮತಿಯನ್ನುಪ್ರದರ್ಶಿಸದೆ) ಇದು ನನ್ನಿಂದಾಗುವುದಿಲ್ಲ ಎನ್ನದೆ ಈ ರಾಜ್ಯಸಂಪತ್ತನ್ನು ಅತ್ಯಂತ ಸಂತೋಷದಿಂದ ನೀನು ಅಂಗೀಕರಾಮಾಡು. ವ|| ಎಂದು ಧರ್ಮರಾಯನೂ ಕೃಷ್ಣನೂ ಭೀಮನೂ ಅರ್ಜುನನ್ನು ಹೇಗೂ ಒಪ್ಪಿಸಿದರು. ನಾಳೆಯೇ ಪಟ್ಟವನ್ನು ಕಟ್ಟುವ ದಿವಸವೆಂದು ದೇವಲೋಕದ ಶಿಲ್ಪಿಯಾದ ಮಯನೆಂಬುವನಿಂದ ಪಂಚರತ್ನಮಯವಾದ ಸಭಾಮಂಟಪವನ್ನು ತರಿಸಿದರು. ವಸಿಷ್ಠ, ಕಶ್ಯಪ, ವ್ಯಾಸ, ವಿಶ್ವಾಮಿತ್ರ, ಭಾರದ್ವಾಜರೇ ಮೊದಲಾದ ಋಷಿಶ್ರೇಷ್ಠರನ್ನು ಬರಮಾಡಿದರು. ಮಾತಲಿಯ ಕಯ್ಯಲ್ಲಿ ದೇವೇಂದ್ರನು ಕಲ್ಪವೃಕ್ಷದ ಚಿಗುರುಗಳನ್ನೂ ಐರಾವತವೆಂಬಾನೆಯೂ ಈಶ್ವರನ ನಂದಿಯೂ ಕೊಂಬಿನಿಂದ ಎಬ್ಬಿಸಿದ ಮಣ್ಣನ್ನೂ ಆಕಾಶಗಂಗೆಯ ನೀರನ್ನು ನಮೇರು ಮಂದಾರ ಪಾರಿಜಾತಗಳೆಂಬ ದೇವಲೋಕದ ಮರಗಳ ಹೂವುಗಳಿಂದ ಕೂಡಿದ ನೀರುಗಳನ್ನೂ ಕಳುಹಿಸಿಕೊಟ್ಟನು. ವರುಣದೇವನು ಉಪ್ಪು, ಹಾಲು, ಕಬ್ಬಿನ ರಸ, ಮೊಸರು, ಜೇನು, ತುಪ್ಪ, ಸಿಹಿನೀರುಗಳ ಏಳು ಸಮುದ್ರಗಳ ಮತ್ತು ಹದಿನಾಲ್ಕು ಮಹಾನದಿಗಳ ಪುಣ್ಯತೀರ್ಥವನ್ನು ಕಳುಹಿಸಿಕಟ್ಟನು. ಅವನ್ನು ಥಳಥಳನೆ ಹೊಳೆಯುವ ಸ್ವಚ್ಛವಾದ ಬಿಳಿಯ ಕೊಡಗಳಲ್ಲಿ ತುಂಬಿ ತಂದಿರುವ ವೇಶ್ಯಾಸ್ತ್ರೀಯರಿಗೂ ಸಾಮಂತರಾಜಸಮೂಹಕ್ಕೂ ಉಡುಗೊರೆಯನ್ನು ಕೊಟ್ಟನು. ಶ್ವೇತಚ್ಛತ್ರ (ಬಿಳಿಯ ಕೊಡೆ) ಚಾಮರ, ಸಿಂಹಾಸನ, ಪಟ್ಟದಾನೆ, ಕುಲಧನವೇ ಮೊದಲಾದ ರಾಜ್ಯಚಿಹ್ನೆಗಳನ್ನು ಬೇರೆ ಬೇರೆ ರೀತಿಯಿಂದ ಪ್ರತಿಷ್ಠೆ ಮಾಡಿಸಿದನು. ಗಂಗಾಜಲದಿಂದ ಪವಿತ್ರವನ್ನಾಗಿ ಮಾಡಲ್ಪಟ್ಟ ಶರೀರವುಳ್ಳವನೂ ರೇಷ್ಮೆಯ ವಸ್ತ್ರದ ಹೊದಿಕೆಯುಳ್ಳವನೂ ಆದ ಅರ್ಜುನನನ್ನು ನಮಸ್ಕಾರಮಾಡಿಸಿ ಮಂಗಳವಾದ್ಯಗಳೂ ಮಂಗಳಗೀತೆಗಳೂ ಪ್ರಕಾಶಿಸುತ್ತಿರಲು ಕಳಕಳಧ್ವನಿಯಿಂದ ಆವರಿಸಲ್ಪಟ್ಟು ಜಾಗರಣೆಯಿರಿಸಿದನು. ಮಾರನೆಯ ದಿವಸ ಪ್ರಶಸ್ತವಾದ ಜೋಯಿಸರಿಂದ ನಿಷ್ಕರ್ಷಿಸಲ್ಪಟ್ಟ ಶುಭಮುಹೂರ್ತದಲ್ಲಿ ನೂರೆಂಟು ಪೂರ್ಣಕುಂಭಗಳನ್ನು ನಾಲ್ಕು ವೇದಗಳಲ್ಲಿಯೂ ಪಂಡಿತರಾದ ಬ್ರಾಹ್ಮಣರು ಎತ್ತಿಕೊಂಡು ಮಂತ್ರಪೂತವಾದ ನೀರಿನಿಂದ ಸ್ನಾನಮಾಡಿಸಿದರು. ೧೮. ಸಮುದ್ರಘೋಷದಂತೆ ಮಂಗಳವಾದ್ಯಧ್ವನಿಯು ಹೆಚ್ಚಿದುವು. ಮಂಗಳಗೀತೆಗಳ ಧ್ವನಿಯಿಂದ ದಿಕ್ಕುಗಳ ಒಳಭಾಗವೆಲ್ಲ ಶಬ್ದಮಾಡಿ ಸೊಗಯಿಸಿದುವು. ಅಲಂಕರಾರಮಾಡಿಕೊಂಡಿರುವ ಸಾಮಂತರಾಜರ ಸ್ತ್ರೀಯರು ಮುಂಭಾಗದಲ್ಲಿ ನೃತ್ಯವಾಡಿದರು. ಜಯಜಯಧ್ವನಿಯು ಒಂದೇ ಸಮನಾಗಿ ಭೋರೆಂದು ಧ್ವನಿಮಾಡುತ್ತಿರಲು ವೇಶ್ಯಾಸ್ತ್ರೀಯರು ಬಂದು ನೃತ್ಯವಾಡಿದರು. ಇಂದು ಈ ವೈಭವದಲ್ಲಿ ಅರಿಗನಿಗೆ (ಅರ್ಜುನನಿಗೆ) ರಾಜ್ಯಾಭಿಷೇಕವಾಯಿತು. ವ|| ರಾಜ್ಯಾಭಿಷೇಕವಾದ ಮೇಲೆ ಧರ್ಮರಾಯನೂ ಭೀಮ ಕೃಷ್ಣ ನಕುಲಸಹದೇವರೇ ಮೊದಲಾದ ಅಯ್ದುಜನರೂ

ಚಂ|| ನೆಗಱ್ದ್ದುದು ದೇವದುಂದುಭಿರವಂ ಸುರನಂದನದಿಂ ಪೊದೞ್ದ ಬ
ಲ್ಮುಗುಳ್ಗಳ ತಂದಲಂದು ಕವಿತಂದುದದಂ ತನಿಸೋಂಕು ಸೋಂಕಿ ಮೆ|
ಲ್ಲಗೆ ಮಲಯಾನಿಳಂ ಸುಱದೊಡಂದು ಜಗಂ ಪೊಸತಾದುದೆಂದೊಡೇ
ವೊಗೞ್ವ್ವುದೊ ಪಟ್ಟಬಂಧನಮಹೋತ್ಸವಮಂ ಜಗದೇಖಮಲ್ಲನಾ|| ೧೯

ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಯೊಳೊಂದಿ ಸಾಂದಿನೊಳ್
ಕತ್ತುರಿಯೊಂದು ಕೋಳ್ಗೆಸಳೋಕುಳಿ ಚಂದನಗಂಧವಾರಿಯೊಳ್|
ಸುತ್ತಲುಮೞ್ಕಱಂ ಪಡೆವ ಗೇಯದ ಪೆಂಪಿನಲಂಪನಾರ್ಗಮಾ
ರ್ತಿತ್ತುದು ಪಟ್ಟಬಂಧನಮಹೋತ್ಸವಮಾ ಪಡೆಮೆಚ್ಚೆ ಗಂಡನಾ|| ೨೦

ವ|| ಮತ್ತಮೈರಾವಣಾನ್ವಯನುಂ ಸುರಭಿನಿಶ್ವಾಸನುಂ ಸೂಕ್ಷ್ಮಬಿಂದುರುಚಿರನುಂ ಕಾಳಿಂಗ

ವನಸಂಭೂತನುಮನೇಕಲಕ್ಷಣೋಪೇತನುಮಪ್ಪ ತ್ರಿಭುವನಾಭರಣಮೆಂಬಾನೆಗಮುಭಯಕುಲ ಶುದ್ಧನುಂ ಗುಣಶುದ್ಧನುಂ ಗುಣಸಮುದ್ರನುಮಪ್ಪ ಮಹಾಮಂತ್ರಿಯಭವನುಮುಚ್ಚೈಶ್ಯ್ರವಾನ್ವಯ ಸಂಭವನುಂ ಪ್ರಶಸ್ತ ಲಕ್ಷಣ ಲಕ್ಷಿತನುಮಪ್ಪ ತ್ರಿಭುವನಿತಿಲಕಮೆಂಬ ಕುದುರೆಗಂ ಪಟ್ಟಂಗಟ್ಟಿ ಪುರುಷೋತ್ತಮನ ತಂಗೆಯುಂ ತಾನುಂ ತುಳಾಪುರುಷಮನಿರ್ದು ಲೋಕಕ್ಕೆಲ್ಲಂ ಬಿಯಮಂ ಮೆದು-

ಚಂ|| ತೊರೆದುದು ಕಾಮಧೇನು ತುಱುಗಲ್ಗೊನೆವಣ್ತುದು ಕಲ್ಪವೃಕ್ಷವಿ
ಶ್ವರನ ವರಫ್ರಸಾದಮಿದಿರ್ಗೊಂಡುದು ಸುತ್ತಿಱದೊಂದು ಮುತ್ತಿನಾ|
ಗರಮೆ ತೆರಳ್ದುದೆಯ್ದೆ ರಸ ಸಿದ್ಧಿಯುಮಾಯ್ತೆನೆ ತನ್ನನಾಸೆವ
ಟ್ಟೆರೆದವರ್ಗಿತ್ತು ಪೊಮ್ಮಯದೆ ಮಾಡಿದನೀ ನೆಲನಂ ಗುಣಾರ್ಣವಂ|| ೨೧

ವ|| ಅಂತು ಚಾಗಂಗೆಯ್ದು ಸಿಂಹಾಸನಮಸ್ತಕಸ್ಥಿತನುಂ ವಿರಾಜಮಾನ ಧವಳಚ್ಛತ್ರಚಾಮರ ಸಹಸ್ರಸಂಛಾದಿತನುಮಾಗಿ ವಿಕ್ರಾಂತುಂಗ ನೊಡ್ಡೋಲಗಂಗೊಟ್ಟಿರೆ-

ಕಂ|| ಎಡೆಗೊಂಡಿರಿಮುತ್ಸಂಚಂ
ನುಡಿಯದಿರಿಂ ನೃಪತಿ ನುಡಿಯಿಂ ನೀಮಿ|
ರ್ಪೆಡೆಯೊಳಿರಿಂ ನೀವಱವಿರ್
ಮಿಡುಕಿದೊಡೆನೆ ಚಿತ್ರವೇತ್ರದಂಡಧರರ್ಕಳ್|| ೨೨

ಅನೇಕ ಒಡವೆಗಳಿಂದ ಅಲಂಕಾರಮಾಡಲ್ಪಟ್ಟ ಶರೀರರಾಗಿ ಅರಿಕೇಸರಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಅಯ್ದು ರತ್ನಗಳಿಂದ ಖಚಿತವಾದ ತಲೆಯ ಪಟ್ಟ (ಶಿರಪೇಷ್)ದಿಂದ ಪ್ರಕಾಶಮಾನವಾದ ಪಟ್ಟವಸ್ತ್ರವನ್ನು ಕಟ್ಟಿ ಯಾವದವಂಶದಲ್ಲಿ ಹುಟ್ಟಿದವಳೂ ಅನೇಕ ಲಕ್ಷಣಗಳಿಂದ ಕೂಡಿದವಳೂ ಆದ ಸುಭದ್ರೆಗೆ ಮಹಾರಾಣಿಯ ಪಟ್ಟವನ್ನು ಕಟ್ಟಿದರು. ೧೯. ದೇವದುಂದುಭಿಯಾಯ್ತು. ದೇವತೆಗಳ ತೋಟದಿಂದ ವ್ಯಾಪಿಸಿದ ದೊಡ್ಡ ಹೂಗಳ ತುಂತುರುಮಳೆಯಾಯಿತು. (ಪುಷ್ಪವೃಷ್ಟಿಯಾಯಿತು) ಅದರ ಇಂಪಾದ ಸ್ಪರ್ಶದಿಂದ ನಿಧಾನವಾಗಿ ಮಲಯಮಾರುತವು ಸುಳಿದಾಡಿತು. ಆ ದಿನ ಲೋಕವೇ ಹೊಸತಾಯಿತು ಎಂದರೆ ಜಗದೇಕಮಲ್ಲನಾದ ಅರ್ಜುನನ ಪಟ್ಟಬಂಧ ಮಹೋತ್ಸವವನ್ನು ಏನೆಂದು ಹೊಗಳುವುದು ೨೦. ಮುತ್ತು ಪಚ್ಚೆ ರತ್ನ ಮತ್ತು ವಜ್ರಗಳ ಸಾಲುಗಳಲ್ಲಿ ಸೇರಿ ಶ್ರೀಗಂಧ ಕಸ್ತೂರಿ ಮೊದಲಾದುವುಗಳ ಒಳ್ಳೆಯ ಕೆಸರಿನಲ್ಲಿಯೂ ಶ್ರೀಗಂಧದ ಪರಿಮಳಯುಕ್ತವಾದ ನೀರಿನಲ್ಲಿಯೂ ಓಕುಳಿಯಾಡಿಸುತ್ತ ಎಲ್ಲೆಡೆಯಲ್ಲಿಯೂ ಪ್ರೀತಿಯನ್ನುಂಟುಮಾಡುವ ಸಂಗೀತದ ವೈಭವದಿಂದ ಕೂಡಿದ ಅರ್ಜುನನ ಪಟ್ಟಬಂಧನಮಹೋತ್ಸವವು ಎಂತಹವರಿಗೂ ಸಾಕಷ್ಟು ಸಂತೋಷವನ್ನು ಕೊಟ್ಟಿತು. ವ|| ಮತ್ತು ಐರಾವತದ ವಂಶದಲ್ಲಿ ಹುಟ್ಟಿದುದೂ ಸುಗಂಧಯುಕ್ತವಾದ ಉಸಿರುಳ್ಳುದೂ ಸೂಕ್ಷ್ಮವಾದುದೂ ಸಣ್ಣ ಸಣ್ಣ ಬಿಳಿಯ ಮಚ್ಚೆಗಳಿಂದ ರಮ್ಯವಾದುದೂ ಕಳಿಂಗದೇಶದ ಅರಣ್ಯದಲ್ಲಿ ಹುಟ್ಟಿದುದೂ ಅನೇಕ ಲಕ್ಷಣಗಳಿಂದ ಕೂಡಿದುದೂ ಆಗಿರುವ ತ್ರಿಭುವನಾಭರಣವೆಂಬ ಆನೆಗೂ ಉಭಯಕುಲಶುದ್ಧನೂ ಗುಣಸಮುದ್ರನೂ ಆಗಿರುವ ಮಹಾಮಂತ್ರಿಯ ಮನೆಯಲ್ಲಿಯೇ ಬೆಳೆದ (?) ಉಚ್ಚೆ ಶ್ರವದ ವಂಶದಲ್ಲಿಯೇ ಜನಿಸಿರುವ ಪ್ರಶಸ್ತವಾದ ಲಕ್ಷಣಗಳಿಂದ ಗುರುತುಮಾಡಲ್ಪಟ್ಟ ತ್ರಿಭುವನತಿಲಕವೆಂಬ ಕುದುರೆಗೂ ಪಟ್ಟವನ್ನು ಕಟ್ಟಿದರು. ಕೃಷ್ಣನ ತಂಗಿಯಾದ ಸುಭದ್ರೆಯೂ ಅರ್ಜುನನೂ ತುಲಾಪುರಷಭಾರವಿದ್ದು (ತನ್ನ ತೂಕದಷ್ಟು ಚಿನ್ನವನ್ನು ತೂಕಮಾಡಿ ದಾನಮಾಡುವುದು) ಲೋಕಕ್ಕೆಲ್ಲ ತಮ್ಮ ದಾನದ ವೈಭವವನ್ನು ಮೆರೆದರು. ೨೧. ಕಾಮಧೇನುವೆಂಬ ದೇವಲೋಕದ ಹಸುವು ಹಾಲನ್ನು ಸುರಿಸಿತು. ಕಲ್ಪವೃಕ್ಷವು ಕಿಕ್ಕಿರಿದು

ಓಳಿಕೊಳೆ ಪೊಳೆವ ಕಣ್ಗಳ್
ನೀಲಿಮವನಜಂಗಳೋಳಿ ಕೊಳ್ಳದುವುಂ ತಾ|
ಮೋಳಿಕೊಳಲಂತೆ ಗಣಿಕೆಯ
ರೋಳಿಯೊಳೆ ಮಡಲ್ತ ಲತೆಗಳಿರ್ಪಂತಿರ್ದರ್|| ೨೩

ಕಂ|| ಸಾರ್ಚಿದ ಲೋಹಾಸನದೊಳ
ಮರ್ಚಿದ ಬೊಂದರಿಗೆ ಪೞಯ ಬಿತ್ತರಿಗೆ ಕರಂ|
ಪೆರ್ಚುವ ಮಹಿಮೆಯನೆಯ್ದೆ ನಿ
ಮಿರ್ಚೆ ಮಹಾ ಮಕುಟ ಬದ್ಧರೋಳಿಯೊಳಿರ್ದರ್

ಮಗ ಮಗ ಮಗಿಸುವ ಮೃಗಮದ
ದಗರುವ ಕಪ್ಪುರದ ಕಂಪುಮಂ ಸೂಡಿದ ಬಾ|
ಸಿಗದ ಪೊಸಗಂಪನಿಂಬಾ
ಗೊಗೆದಿರೆ ಮಾಡಿದುದು ಚಾಮರರುಹಗಂಧವಹಂ|| ೨೫

ಪಸರಿಸಿದ ತಾರಹಾರದ
ಪೊಸವೆಳ್ದಿಂಗಳುಮನಮರ್ದ ಪೆರ್ದುಡುಗೆಗಳೊಳ್|
ಮಿಸುಗುವ ಪೊಸ ಮಾಣಿಕದಳ
ವಿಸಿಲುಮನೊಡಗಾಣಲಾದುದರಿಗನ ಸಭೆಯೊಳ್|| ೨೬

ವ|| ಅಂತು ದೇವೇಂದ್ರನಾಸ್ಥಾನಮನೆ ಪೋಲ್ತು ಸೊಗಯಿಸುವ ಸಂಸಾರಸಾರೋದಯ ನಾಸ್ಥಾನದೊಳೊರ್ವ ವೈತಾಳಿಕಂ ನಿಂದಿರ್ದು ಮೃದುಮಧುರಗಂಭೀರಧ್ವನಿಯಿನಿಂತೆಂದಂ-

ತುಂಬಿದ ಹಣ್ಣುಗಳಿಂದ ಕೂಡಿದ ಗೊನೆಯನ್ನುಳ್ಳುದಾಯಿತು. ಈಶ್ವರನ ವರಪ್ರಸಾದವು ಎದಿರುಗೊಂಡಿತು. ಸುತ್ತಲೂ ಒಂದು ಮುತ್ತಿನ ಭಂಡಾರವೇ ಆವರಿಸಿಕೊಂಡು ಚಲಿಸಿತು. ಸಂಪೂರ್ಣವಾಗಿ ರಸಸಿದ್ಧಿ ಆಯಿತು ಎನ್ನುವ ಹಾಗೆ ತನ್ನಲ್ಲಿ ಆಸೆಯಿಂದ ಬಂದು ಬೇಡಿದವರಿಗೆ ಅವರ ತೃಪ್ತ್ಯನುಸಾರವಾಗಿ ದಾನಮಾಡಿ ಲೋಕವನ್ನೆಲ್ಲ ಸುವರ್ಣಮಯವನ್ನಾಗಿ ಮಾಡಿದನು. ವ|| ಹಾಗೆ ದಾನಮಾಡಿ ಸಿಂಹಾಸನದ ಮೇಲುಭಾಗದಲ್ಲಿ ಕುಳಿತವನೂ ಹೊಳೆಯುತ್ತಿರುವ ಸಾವಿರಾರು ಬೆಳುಗೊಡೆ ಮತ್ತು ಚಾಮರಗಳಿಂದ ಮುಸುಕಲ್ಪಟ್ಟವನೂ ವಿಶೇಷ ಪರಾಕ್ರಮಿಯೂ ಆದ ಅರ್ಜುನನು ಸಭಾಮಧ್ಯದಲ್ಲಿ ಓಲಗಗೊಟ್ಟನು. ೨೨. ನಿಮ್ಮ ನಿಮ್ಮ ಸ್ಥಳದಲ್ಲಿರಿ; ಗಟ್ಟಿಯಾಗಿ ಮಾತನಾಡಬೇಡಿ; ರಾಜನು ಮಾತನಾಡಿದ ಮೇಲೆ ನೀವು ಮಾತನಾಡಿ; ನೀವು ಇರುವ ಸ್ಥಳದಲ್ಲಿಯೇ ಇರಿ; ಅಲುಗಾಡಿದರೆ ತಕ್ಷಣವೇ ಬಗೆಬಗೆಯಾದ ಬೆತ್ತವನ್ನು ಹಿಡಿದಿರುವ ಕಟ್ಟಿಗೆಕಾರರ ಅನುಭವವು ನಿಮಗಾಗುತ್ತದೆ. (ಅವರ ದಂಡದ ಏಟುಗಳ ರುಚಿ ನಿಮಗೆ ಅನುಭವವಾಗುತ್ತದೆ ಎಂದಭಿಪ್ರಾಯ). ೨೩. ಎಂದು ಹೇಳುತ್ತಿರುವ ಕಾವಲವರ ಹೊಳೆಯುವ ಕಣ್ಣುಗಳು ಸಾಲಾಗಿರಲು ಕನ್ನೆ ದಿಲೆಯ ತೋಟದಲ್ಲಿ ಒಪ್ಪುವ ಕನ್ನೆ ದಿಲೆಯ ಹೂವುಗಳು ಕ್ರಮಬದ್ಧವಾಗಿ ಸಾಲಾಗಿರುವಂತೆ ವೇಶ್ಯಾಸ್ತ್ರೀಯರು ಸಾಲಾಗಿ ಚಿಗುರಿದ ಬಳ್ಳಿಗಳಂತೆ ಕಂಡರು. ೨೪. ಹತ್ತಿರವಿಟ್ಟಿರುವ ಲೋಹಾಸನಗಳಲ್ಲಿ (ಚಿನ್ನ, ಬೆಳ್ಳಿ ಮೊದಲಾದ ಲೋಹಗಳಿಂದ ಕೂಡಿದ ಕುರ್ಚಿಗಳಲ್ಲಿ) ಸೇರಿರುವ ಮೆತ್ತೆಗಳು (ಪೞಯ?) ಸಣ್ಣ ಪೀಠಗಳೂ ವಿಶೇಷ ವೈಭವವನ್ನತಿಶಯವಾಗಿ ಉಂಟು ಮಾಡಲು ಮಹಾರಾಜರುಗಳು ಸಾಲಾಗಿದ್ದರು. ೨೫. ಸುಗಂಧವನ್ನು ಬೀರುತ್ತಿರುವ ಕಸ್ತೂರಿ ಅಗರು ಮತ್ತು ಪಚ್ಚಕರ್ಪೂರದ ವಾಸನೆಯನ್ನು ಅಲ್ಲಿ ನೆರೆದವರು ಮುಡಿದು ಕೊಂಡಿರುವ ಬಾಸಿಗದ ಹೊಸ ವಾಸನೆಯನ್ನು ಚಾಮರ ಬೀಸುವುದರಿಂದ ಎದ್ದ ಗಾಳಿಯು ಎಬ್ಬಿಸುತ್ತಿರಲು ಅದು ಸಂತೋಷದಾಯಕವೇ ಆಯಿತು. ೨೬. ಪ್ರಸರಿಸಿರುವ ಮುತ್ತಿನ ಹಾರಗಳ ಹೊಸಬೆಳ್ದಿಂಗಳುಗಳನ್ನು ಧರಿಸಿರುವ ಬೆಲೆಯುಳ್ಳ ಆಭರಣಗಳಲ್ಲಿ ಪ್ರಕಾಶಿಸುವ ಹೊಸ ಮಾಣಿಕ್ಯಗಳ ಎಳೆಯ ಬಿಸಿಲನ್ನೂ, ಅರಿಕೇಸರಿಯ ಆಸ್ಥಾನದಲ್ಲಿ ಒಟ್ಟಿಗೆ ಕಾಣಲು ಸಾಧ್ಯವಾಯಿತು. ವ|| ಹಾಗೆ ದೇವೇಂದ್ರನ ಸಭೆಯನ್ನೇ ಹೋಲುತ್ತ ಸೊಗಯಿಸುವ ಸಂಸಾರಸಾರೋದಯನಾದ ಅರ್ಜುನನ ಆಸ್ಥಾನದಲ್ಲಿದ್ದ ವಿವಿಧತಾಳಗಳನ್ನು ಉಪಯೋಗಿಸಿ ಹಾಡುವ ಗಾಯಕನಾದ ವೈತಾಳಿಕನು ಎದ್ದು ನಿಂತು ಮೃದುಮಧುರಗಂಭೀರ

ಸ್ರ|| ಆಸೇತೋ ರಾಮ ಚಾಪಾಟನಿ ತಟಯುಗ ಟಂಕಾಂಕಿತಾಖಂಡ ಖಂಡಾ
ದಾ ಪೀಯೂಷಾಬ್ಧಿ ದುಗ್ಧಪ್ಲವ ಧವಳ ಕನತ್ಕಂದರಾನ್ಮಂದರಾದ್ರೇ|
ಆಚಂದ್ರಾರ್ಕ ಪ್ರತೀತೋಭಯ ಗಿರಿಶಿಖರಾತ್ ಸ್ವೋದಯಸ್ಯೆ ಕ ಹೇತೋ
ಶೈಲೇಳಾಕಲ್ಪಕಾಳಂ ಕ್ಷಿತಿವಲಯಮಿದಂ ಪಾತು ವಿಕ್ರಾಂತತುಂಗ|| ೨೭

ಶಾ|| ಶೌರ್ಯಂ ಯಸ್ಯ ಗುಣಾರ್ಣವ ಕ್ಷಿತಿಪತೇಸ್ಸವ್ಯಾಪಸವ್ಯಕ್ರಮಾತ್
ಗರ್ವಾಕೃಷ್ಟವಿಕರ್ಣಟಂಕನಿಕರೋತ್ಕೀರ್ಣಪ್ರಭಾವಾಕ್ಷರೈ|
ಮತ್ತಾರಿದ್ವಿಪಮಸ್ತಕಸ್ಥಿತಶಿಲಾಷಟ್ಟಂ ಸದಾಖ್ಯಾಯತೇ
ತಸ್ಯಾಯಂ ಪುನರುಕ್ತ ಏವ ಸಮರ ಶ್ಲಾಘ್ಯಪ್ರಶಸ್ತಿಕ್ರಮ|| ೨೮

ಏತತ್ಕಂಪಿತ ಪರ್ವತಾಸ್ಸು ಚಕಿತಾ ಏತುಂ ಸಮುದ್ರಂ ಪುನ
ಸಪ್ತದ್ವೀಪ ಜಿಗೀಷಯಾ ವಿಜಯಿನಾ ಕೇನಾಪಿ ಪುರಿಜೀಕೃತಂ|
ಯಜ್ಜಾತಂ ಶರ ಶಂಕು ಶಲ್ಯ ಶತಕೈಸ್ಸಂತಾಪ್ಯ ಶತ್ರುದ್ವಿಪಾನ್
ನಿಶ್ವಾಸೋಪರತಾನ್ ಗುಣಾರ್ಣವಮಹೀಪಾಲೇನ ಯುದ್ಧಾವನೌ|| ೨೯

ಪೃಥ್ವಿ|| ಪರಸ್ಪರ ವಿರುದ್ಧಯೋರ್ವಿನಯ ಯೌವನಾರಂಭಯೋ
ಪ್ರಭೂತ ಸಹಜೇರ್ಷ್ಯಯೋರಪಿ ಸರಸ್ವತೀ ಶ್ರೀಸ್ತಿಯೋ||
ತಥಾಚ ಪರಿಹಾರಿಣೋರಪಿ ಮಹಾ ಕ್ಷಮಾ ಶೌರ್ಯಯೋ
ಚಿರಂ ಪ್ರಥಮ ಸಂಗಮೋ ಹರಿಗ ಭೂಪತೌ ದೃಶ್ಯತೇ| ೩೦

ವ|| ಅಂತಾತಂ ಪೊಗೞ್ದು ಮಾಣ್ದ ನಂತರದೊಳೆತ್ತಿಕೊಂಡ ಶ್ರುತಿಯಂ ಪಲ್ಲಟಿಸದೆಯುಂ ಮತ್ತಂ ಪರಿಚ್ಛೇದಂಗಳನಱದುಮೊಟ್ಟಜೆಯ ರಾಜಿಯಿಂ ಕಣ್ಗಳಿಂಚರದೊಳಂ ಪೊಂಪುೞವೋಗೆ ಮಂಗಳಪಾಠಕರಿರ್ವರೊಂದೆ ಕೊರಲೊಳಿಂತೆಂದು ಮಂಗಳವೃತ್ತಂಗಳನೋದಿದರ್-

ಶಾ|| ರಂಗತ್ತುಂಗತರಂಗಭಂಗುರಲಸದ್ಗಂಗಾಜಳಂ ನರ್ಮದಾ
ಸಂಗ ಸ್ವಚ್ಛವನಂ ಪ್ರಸಿದ್ಧ ವರದಾ ಪುಣ್ಯಾಂಬು ಗೋದಾವರೀ|
ಸಂಗತ್ಯೋರ್ಜಿತವಾರಿಸಾರ ಯುಮುನಾ ನೀಳೋರ್ಮಿ ನೀರಂ ಭುಜೋ
ತ್ತುಂಗಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೧

ಧ್ವನಿಯಿಂದ ಹಾಡಿದನು. ೨೭. ಶ್ರೀರಾಮನ ಬಿಲ್ಲಿನ ಕೊಪ್ಪಿನ ಎರಡು ಕಡೆಗಳೆಂಬ ಉಳಿಯಿಂದ ಗುರುತು ಮಾಡಲ್ಪಟ್ಟ ಸಮಗ್ರವಾದ ಭರತಖಂಡದಲ್ಲಿ ರಾಮಸೇತುವಿನವರೆಗೂ ಹಾಲಿನ ಪ್ರವಾಹದಂತೆ ಬೆಳ್ಳಗೆ ಪ್ರಕಾಶಿಸುತ್ತಿರುವ ಕ್ಷೀರಸಾಗರದಂತೆ ಮಂದರಪರ್ವತ ಕಣಿವೆಯವರೆಗೂ ತನ್ನಅಭಿವೃದ್ಧಿಗೆ ಒಂದೇ ಕಾರಣವಾಗಿರುವ ಚಂದ್ರ ಸೂರ್ಯರ ಪರ್ಯಂತ ಪ್ರಸಿದ್ಧರಾಗಿರುವ ಪೂರ್ವ ಪಶ್ಚಿಮ ಪರ್ವತಗಳ ಪರ್ವತಭೂಮಿಗಳಿರುವ ಶಿಖರಗಳವರೆಗೂ ಕಾಲದವರೆಗೂ ವಿಕ್ರಾಂತತುಂಗನಾದ ಅರ್ಜುನನು ಈ ಭೂಮಂಡಲವನ್ನು ರಕ್ಷಿಸಲಿ. ೨೮. ಯಾವ ಗುಣಾರ್ಣವನೆಂಬ ಬಿರುದುಳ್ಳ ಅರಿಕೇಸರಿರಾಜನ (ಅರ್ಜುನನ) ಪರಾಕ್ರಮವು ಬಲ ಮತ್ತು ಎಡಗೈಗಳಿಂದ ಪ್ರಯೋಗಮಾಡುವ ಕ್ರಮವಾದ ಗರ್ವದಿಂದ ಕೂಡಿ ಕಿವಿಯವರೆಗೂ ಸೆಳೆಯುವ ಬಾಣಗಳೆಂಬ ಶತ್ರುರಾಜರ ಮದ್ದಾನೆಗಳ ಕುಂಭಸ್ಥಳದಲ್ಲಿ ಶಕ್ತಿಯುತವಾದ ಉಳಿಗಳ ಸಮೂಹದಿಂದ ಅಕ್ಷರಗಳಿಂದ ಕೊರೆಯಲ್ಪಟ್ಟಿರುವ ಶಾಸನಷ್ಮಲಕಗಳು ಪ್ರಕಾಶಪಡಿಸುತ್ತಿರುವ ಆ ಅರಿಕೇಸೆರಿಯ ಯುದ್ಧಪ್ರಶಸ್ತಿಯು ಪುನರುಕ್ತವಾಗುತ್ತಿರಲಿ. ೨೯. ಗುಣಾರ್ಣವಮಹೀಪಾಲನ ಯುದ್ಧಭೂಮಿಯಲ್ಲಿ ಅವನ ಹರಿತವಾದ ನೂರಾರು ಬಾಣಗಳಿಂದ ಹತವಾದ ಶತ್ರುರಾಜರ ಆನೆಗಳು ಸಪ್ತ ದ್ವೀಪಗಳನ್ನೂ ಗೆಲ್ಲಬೇಕೆಂಬ ಆಶೆಯುಳ್ಳ ಇಂದ್ರನಿಗೆ ಹೆದರಿ ನಡುಗುತ್ತ ಸಮುದ್ರಪ್ರವೇಶಮಾಡುತ್ತಿರುವ ಕುಲಪರ್ವತಗಳ ರಾಜಿಯ ಹಾಗಿವೆ. ೩೦. ಪರಸ್ಪರ ವಿರೋಗಳಾದ ವಿನಯ ಮತ್ತು ಯವ್ವನಗಳನ್ನೂ ಸಹಜವಾಗಿಯೇ ಹುಟ್ಟಿರುವ ಅಸೂಯೆಯಿಂದ ಕೂಡಿದ ಸರಸ್ವತಿ ಮತ್ತು ಲಕ್ಷ್ಮಿಗಳನ್ನೂ ಹಾಗೆಯೇ ಪರಸ್ಪರ ನಾಶಕಾರಿಗಳಾದ ದಯೆ ಮತ್ತು ಶೌರ್ಯಗಳನ್ನೂ ಬಹುಕಾಲವಾದ ಮೇಲೆ ಮೊತ್ತ ಮೋದಲನೆಯ ಸಲ ಅರಿಕೇಸರಿ ರಾಜನಲ್ಲಿ ಮಾತ್ರ ಒಟ್ಟಿಗೆ ನೋಡಬಹುದಾಗಿದೆ. ವ|| ಹಾಗೆ ಅವನು ಹೊಗಳಿ ನಿಲ್ಲಿಸಿಯಾದ ಮೇಲೆ ಶಾಸ್ತ್ರವನ್ನು (ವೇದಾಕ್ಷರಗಳನ್ನು) ವ್ಯತ್ಸಾಸಮಾಡದೆಯೂ (ಸುಸ್ವರವಾಗಿ) ನಿಲ್ಲಿಸಬೇಕಾದ ಸ್ಥಳಗಳನ್ನೂ ತಿಳಿದೂ ಸಂಪೂರ್ಣಾರ್ಥ ದ್ಯೋತಕವಾಗುವ ಹಾಗೂ ಕಂಡಂತೆ ಇನಿದಾದ ಸ್ವರಗಳಿಂದ ಕೂಡಿ ರೋಮಾಂಚವಾಗುವ ಹಾಗೂ ಇಬ್ಬರು ಮಂಗಳಪಾಠಕರು ಒಕ್ಕೊರಲಿನಿಂದ ಮಂಗಳಸ್ತೋತ್ರವನ್ನು ಪಠಿಸಿದರು. ೩೧. ನರ್ತನ ಮಾಡುತ್ತಿರುವ ಅಲೆಗಳಿಂದ ವಿರ್ಭಾವಾಗುತ್ತಿರುವ (ಘರ್ಷಣೆಯನ್ನು ಹೊಂದುತ್ತಿರುವ) ಪ್ರಕಾಶಮಾನವಾದ ಗಂಗಾಜಲವೂ, ಸ್ವಚ್ಛವಾಗಿರುವ ನರ್ಮದಾನದಿಯ ನೀರೂ ಪ್ರಸಿದ್ಧವೂ ಪವಿತ್ರವೂ ಆದ ವರದಾನದಿಯ ನೀರೂ ಶ್ರೇಷ್ಠವಾದ ಗೋದಾವರಿಯ ನೀರೂ ಸಾರವತ್ತಾದ ಯಮುನಾನದಿಯ ನೀಲಿಯ ಬಣ್ಣದ ಅಲೆಗಳಿಂದ ಕೂಡಿದ ನೀರೂ ಇವೆಲ್ಲವೂ ಎತ್ತರವಾದ ಭುಜಗಳುಳ್ಳ ಅರಿಗನಿಗೆ (ಅರ್ಜುನನಿಗೆ)

ಮ|| ಶ್ರುತದೇವೀವಚನಾಮೃತಂ ಶ್ರುತಕಥಾಳಾಪಂ ಶ್ರುತಸ್ಕಂದ ಸಂ
ತತಿ ಶಶ್ವಚ್ಚ್ರುತಪಾರಗ ಶ್ರುತಿ ಮಹೋರ್ಮ್ಯುಲ್ಲಾಸಿವಾರಾಶಿವಾ|
ರಿತಧಾತ್ರೀತಳಗೀತಿ ನಿರ್ಮಳಯಶಂಗಾರೂಢಸರ್ವಜ್ಞ ಭೂ
ಪತಿಗೊಲ್ದಾಗಳುವಿಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೨

ಶಾ|| ಕೈಳಾಸಂ ನಿಷಧಾಪಾಂಗ ನಿಕಟಕ್ಷೋಣೀಧರಂ ನೀಳ ಕು
ತ್ಕೀಳಂ ಕಂದಮಹೀಧರಂ ಶಿಖರನಾಮೋದ್ಯನ್ನಗಂ ಪ್ರಸುರ|
ತ್ಪ್ರಾಳೇಯಾಚಲವಿತನೆಮ್ಮವೊಲಿಳಾಭೃನ್ನಾಥನೆಂದಿಂತಿಳಾ
ಪಾಳಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೩

ಮ|| ಜಳ ದ್ವೀಪ ರಸತಳಾಂಬರ ಕುಲಾದ್ರೀಂದ್ರಂಗಳೋರಂತೆ ತ
ನ್ನೊಳಮುದ್ಯತ್ಕಟಕಂಗಳಾವಹ ಮಹಾದ್ರವ್ಯಂಗಳೋರಂತೆ ಮಂ|
ಗಳಕಾರ್ಯಂಗಳನಿತ್ತು ಮತ್ತೆ ಮಣಿಭೂಷಾತುಂಗರತ್ನಾಂಶು ಪಾ
ಟಳಿತಂಗೀಗರಿಗಂಗೆ ಮಂಗಳ ಮಹಾಶ್ರೀಯಂ ಜಯಶ್ರೀಯುಮಂ|| ೩೪

ನಯನಾನಂದ ಮೃಗಾಂಕಬಿಂಬಮುದಯಂಗೆಯ್ವರ್ಕಬಿಂಬಂ ಮನ
ಪ್ರಿಯಲಕ್ಷ್ಮೀ ವದನೇಂದು ಬಿಂಬಮಖಿಲ ಕ್ಷ್ಮಾದವೀಪರ್ವಾಪ್ರಮೋ|
ದ ಯಶೋಬಿಂಬಮುದಗ್ರದಿಕ್ಕರಿಕರಾಕರಾಕಾರೋಲ್ಲಸದ್ಬಾಹುಗೀ
ಪ್ರಿಯಗಳ್ಳಂಗೊಸೆದೀಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೫

ವ|| ಎಂದು ಪೊಗೞ್ದು ಮಾಣ್ದ ನಂತರದೊಳ್ ವ್ಯಾಸ ಕಶ್ಯಪ ವಿಶ್ವಾಮಿತ್ರ ಭರದ್ವಾಜಾದಿ ಮಹಾಮುನಿಪ್ರತತಿಗಳ್ ಬಂದು ನಿಜಕಮಂಡಲುಜಲಂಗಳೊಳ್ ಬೆರಸಿದ ಧವಳಾಕ್ಷತಂಗಳಂ ತಳಿದು-

ವ|| ಅರಿ ಭೂಪಾಳ ದವಾನಳಂ ಹರಿಗ ನಿನ್ನುಗ್ರಾಸಿ ಧಾರಾಂಬು ಶ್ರೀ
ಕರದಿಂ ಮೞ್ಗ್ಗುಗೆ ದಾನವರ್ಷ ಸಲಿಲಂ ಕೊಳ್ಗರ್ಥಿ ಸಸ್ಯಕ್ಕೆ ಕಿ|
ನ್ನರಿಯರ್ ಪಾಡುಗೆ ನಿನ್ನದೊಂದು ಪಲವುಂ ಬಣ್ಣಂಗಳಂ ಮೇರು ಮಂ
ದರ ಕೈಳಾಸ ಮಹೇಂದ್ರ ನೀಳ ನಿಷಧಾದ್ರೀಂದ್ರೋಪಕಂಠಂಗಳೊಳ್|| ೩೬

ಮಂಗಳಕರವಾದ ಸಂಪತ್ತನ್ನೂ ಜಯಲಕ್ಷ್ಮಿಯನ್ನೂ ಕೊಡಲಿ. ೩೨. ಸರಸ್ವತಿ ವಚನಗಳೆಂಬ ಅಮೃತವೂ ಪುರಾಣಸಿದ್ಧವೂ ಆದ ಕಥಾಸಮೂಹಗಳೂ ಜಿನಾಗಮಗಳೂ ಜಪ ವೇದ ಸಮೂಹಗಳೂ ಅನಂತವಾದ ವೇದಗಳಲ್ಲಿ ಪಂಡಿತರಾದವರ ಜ್ಞಾನಗಳೆಂಬ ದೊಡ್ಡ ಅಲೆಗಳಿಂದ ಸಮುದ್ರದಿಂದ ಪರಿವೃತರಾದ ಭೂಮಿಯ ಸಮುದ್ರಗೀತೆಗಳೂ ಇವೆಲ್ಲವೂ ನಿರ್ಮಲ ಕೀರ್ತಿಯುಳ್ಳ ಆರೂಢಸರ್ವಜ್ಞನೆಂಬ ಬಿರುದುಳ್ಳ ಅರಿಕೇಸರಿ ರಾಜನಿಗೆ (ಅರ್ಜುನನಿಗೆ) ಪ್ರೀತಿಯಿಂದ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ ಸರ್ವದಾ ಕೊಡಲಿ-

೩೩. ಕೈಲಾಸ ಪರ್ವತ, ನಿಷಧಪರ್ವತ ಮತ್ತು ಅಂಗದೇಶಕ್ಕೆ ಸಮೀಪವಾದ ಪರ್ವತ, ನೀಲಗಿರಿಯೆಂಬ ಪರ್ವತ, ಕಂದವೆಂಬ ಪರ್ವತ, ಶಿಖರವೆಂಬ ಪರ್ವತ ಎತ್ತರವೂ ಪ್ರಕಾಶವೂ ಆದ ಹಿಮವತ್ಪರ್ವತ ಇವೆಲ್ಲ ಅರಿಕೇಸರಿಯೂ ನಮ್ಮ ಹಾಗೆಯೇ ರಾಜಾರಾಜ, ಚಕ್ರವರ್ತಿ (ಇಳೆಯನ್ನು ಧರಿಸಿರುವವನು) ಎಂದು ಭೂಪಾಲನಾದ ಅರಿಕೇಸರಿಗೆ (ಅರ್ಜುನನಿಗೆ) ಮಂಗಳ ಮಹಾಶ್ರೀಯನ್ನೂ ಜಯಶ್ರೀಯನ್ನೂ ಅನುಗ್ರಹಿಸಲಿ. ೩೪. ಸಮುದ್ರ, ದ್ವೀಪ, ಪಾತಾಳ, ಆಕಾಶ ಮತ್ತು ಕುಲಪರ್ವತಗಳು ತಮ್ಮಲ್ಲಿರುವ ಅಮೂಲ್ಯವಾದ ವಸ್ತುಗಳನ್ನು ಒಂದೇ ಸಮನಾದ ಮಂಗಳಕಾರ್ಯಗಳನ್ನು ಪಾಟಳಕಾಂತಿಯಿಂದ ಪ್ರಕಾಶಮಾನವಾದ ಅರಿಗಂಗೆ ಕೊಟ್ಟು ಮಂಗಳಕಾರ್ಯಗಳನ್ನೂ ಜಯಶ್ರೀಯನ್ನೂ ದಯಪಾಲಿಸಲಿ. ೩೫. ಕಣ್ಣುಗಳಿಗಾನಂದವನ್ನುಂಟುಮಾಡುವ ಚಂದ್ರಬಿಂಬವೂ ಬಾಲಸೂರ್ಯನ ಬಿಂಬವೂ ಮನಸ್ಸಿಗೆ ಪ್ರಿಯಳಾದ ಲಕ್ಷ್ಮೀದೇವಿಯ ಮುಖಚಂದ್ರಬಿಂಬವೂ ಸಮಸ್ತವಾದ ಭೂಮಿ, ದ್ವೀಪ, ಮತ್ತು ಸಮುದ್ರಗಳಿಗೆ ಸಂತೋಷವನ್ನುಂಟುಮಾಡುವ ಯಶೋಬಿಂಬವೂ (ಕ್ರೀರ್ತಿಸಮೂಹವೂ) ದೀರ್ಘವಾದ ದಿಗ್ಗಜಗಳ ಸೊಂಡಿಲುಗಳ ಆಕಾರವನ್ನುಳ್ಳ ಪ್ರಕಾಶಮಾನವಾದ ಬಾಹುಗಳನ್ನುಳ್ಳ ಪ್ರಿಯಗಳ್ಳನೆಂಬ ಬಿರುದಾಂಕಿತನಾದ ಅರಿಕೇಸರಿಗೆ (ಅರ್ಜುನನಿಗೆ) ಸಂತೋಷಿಸಿ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ ಕೊಡಲಿ ವ|| ಎಂದು ಹೊಗಳಿ ನಿಲ್ಲಿಸಿಯಾದಮೇಲೆವ್ಯಾಸ ಕಶ್ಯಪ ವಿಶ್ವಾಮಿತ್ರ ಭಾರದ್ವಾಜರೇ ಮೊದಲಾದ ಮಹಾಮುನಿಗಳ ಸಮೂಹಗಳು ಬಂದು ತಮ್ಮ ಕಮಂಡಲುಗಳ ನೀರಿನಿಂದ ಬೆರಸಿದ ಬಿಳಿಯ ಅಕ್ಷತೆಗಳನ್ನು ಚೆಲ್ಲಿ (ಆಶೀವಾದಪೂರ್ವಕ ತಲೆಯ ಮೇಲೆ ಎರಚಿ) ಹರಸಿದರು. ೩೬. ಎಲೈ ಅರ್ಜುನನೇ ಶತ್ರುರಾಜರೆಂಬ ಕಾಡುಕಿಚ್ಚು ನಿನ್ನ ಭಯಂಕರವಾದ ಕತ್ತಿಯ ಅಲಗೆಂಬ ನೀರಿನ ಹನಿಗಳಿಂದ (ಅಸಿಧಾರೆಯ ಹನಿಗಳಿಂದ) ಅಳಿದುಹೋಗಲಿ. ಯಾಚಕರೆಂಬ ವೃಕ್ಷಕ್ಕೆ ನಿನ್ನ ದಾನವೆಂಬ ಮಳೆಯು ಸುರಿಯಲಿ. ನಿನ್ನ ಸ್ತುತಿರೂಪವಾದ

ವ|| ಎಂದು ಪರಸಿ ತಮ್ಮ ನಿವಾಸಂಗಳ್ಗೆ ಪೋದರಾಗಳ್ ಧರ್ಮನಂದನನೆನಗೆ ನಿನ್ನ ರಾಜ್ಯಾಭಿವೃದ್ಧಿಯಂ ನೋಡುತಿರ್ಪುದುಂ ಮುಮುಕ್ಷು ವೃತ್ತಿಯೊಳಿರ್ಪುದುಮಲ್ಲದೆ ಪೆಱತೇನುಂ ಬಾೞ್ತೆಯಲ್ಲೆಂದು ಭೀಮ ನಕುಳ ಸಹದೇವರ್ಕಳ್ಗೆ ದುರ್ಯೋಧನನ ತಮ್ಮನಪ್ಪ ಯುಯುತ್ಸುಗಮವರ್ ಬೇಡಿದ ನಾಡುಗಳನೆ ಕುಡಿಸಿ ಸಂತಸಂಬಡಿಸೆ ಪುರುಷೋತ್ತಮನಂ ವಿಬುಧವನಜವನಕಳಹಂಸನುಮಿಂತೆಂದಂ-

ಕಂ|| ನಿನ್ನ ದಯೆಯಿಂದಮರಿ ನೃಪ
ರನ್ನೆ ಕೊಂದೆಮಗೆ ಸಕಳ ರಾಜ್ಯಶ್ರೀಯುಂ|
ನಿನ್ನ ಬಲದಿಂದೆ ಸಾರ್ದುದು
ನಿನ್ನುಪಕಾರಮನದೇತಳ್ ನೀಗುವೆನೋ|| ೩೭

ವ|| ಎಂದು ಮುಕುಂದನನನುನಯ ವಚನ ರಚನಾ ಪರಂಪರೆಗಳಿಂದ ಸಂತಸಂ ಬಡೆನುಡಿದು ಸಾತ್ಯಕಿವೆರಸನರ್ಘ್ಯವಸ್ತುವಾಹನ ಸಹಿತಂ ದ್ವಾರಾವತಿಗೆ ಕಳಿಪಿ ಸಕಳಭುವನತಳ ಭಾರಮನವಯವದಿಂ ತಾಳ್ದಿರ್ದುದಾತ್ತವೃತ್ತಿಯೊಳುದಾತ್ತನಾರಾಯಣನುಂ ಭುವನ ಭವನೋದರದೊಳ್ ಪಸರಿಸಿದ ತೇಜದೊಳ್ ಪ್ರಚಂಡ ಮಾರ್ತಂಡನುಂ ಆವೆಡೆಯೊಳಮಸ ಮಾನಮೆನಿಸಿದ ಮಹಾಮಹಿಮೆಯೊಳುದಾರಮಹೇಶ್ವರನುಂ ನಳ ನಹುಷ ಮಾಂಧಾತರಂ ಮಸುಳೆವಂದ ನೆಗೞ್ತೆಯೊಳೆ ಮನುಜಮಾಂಧಾತನುಂ ತ್ರಿಣೇತ್ರನುಮನಸುಂಗೊಳಿಸಿದ ಸಾಹಸದೊಳ್ ಕದನತ್ರಿಣೇತ್ರನುಂ ಅಚಳಿತ ಪ್ರತಿಜ್ಞೆಯೊಳ್ ಪ್ರತಿಜ್ಞಾ ಗಾಂಗೇಯನುಂ ರಾಮನುಮನೇೞಸಿದ ಸಹಾಸದೊಳಕಳಂಕರಾಮನುಂ ಬೇಡಿದರ ಬೇಡಿದುದಂ ಮಾರ್ಕೊಳ್ಳದೀವುದಱಂ ಪ್ರತ್ಯಕ್ಷಜೀಮೂತವಾಹನೆನುಂ ಚತುರ್ದನ ಭುವನಂಗಳೊಳ್ ತನಗೆ ಮಾರ್ಮಲೆವರಿಲ್ಲಪ್ಪುದಱಂ ಜಗದೇಕಮಲ್ಲನುಂ ಉರ್ಕಿ ಬಂದು ಮೇಲ್ವಾಯ್ದ ಮಾರ್ವಲಂಗಳಂ ತನ್ನ ಬಾಳ ಬಾಯೊಳೞiಡಿದುದೞಂ ಪರಸೈನ್ಯಭೈರವನುಂ ಅರಾತಿ ಗಜಘಟೆಗಳೆನಿತು ಬಂದೊಡ್ಡೆಯುಂ ತನ್ನೊಂದಮಂದಧ್ವನಿಗೊಡ್ಡೊಡೆ ದೋಡುವುದಱಂ ವೈರಿಗಜಘಟಾವಿಘಟನನುಂ ತನಗಿದಿರನದಿರದೊಡ್ಡಿದ ವಿದ್ವಿಷ್ಟ ಬಲಂ ನೋಡೆ ನೋಡೆ ಕರಗುವುದಱಂ ವಿದ್ವಿಷ್ಟ ವಿದ್ರಾವಣನುಂ ಅರಾತಿ ವನ ಗಹನಮನಳುರ್ದು ಕೊಳ್ವುದಱಂದಮರಾತಿ ಕಾಳಾನಳನುಂ ಪಗೆವರೆಂಬ ಕುರಂಗಂಗಳನೊಂದೊಂದಳೊಂದಲೀ ಯದೆೞ್ಬಟ್ಟುವುದಱಂ ರಿಪುಕುರಂಗಕಂಠೀರವನುಂ ವಿಕ್ರಾಂತದೊಳ್ ತನ್ನಿರ್ದಲ್ಲಿ ತಾನೆ ಪಿರಿಯನಪ್ಪುದಱಂ ವಿಕ್ರಾಂತ ತುಂಗನುಂ ಆವೆಡೆಯೊಳಂ ವಿಕ್ರಮಂ ಕ್ರಮಮೆನಿಸಿದುದಱಂ ಪರಾಕ್ರಮಧವಳನುಂ ಎಂತಪ್ಪ ಸಂಗ್ರಾಮದೊಳಂ

ಅನೇಕ ಹಾಡುಗಳನ್ನು ಕಿನ್ನರಿಯರು ಮೇರು, ಮಂದರ, ಕೈಲಾಸ, ಮಹೇಂದ್ರ, ನಿಷಧ ಪರ್ವತಗಳ ಸಮೀಪ ಪ್ರದೇಶಗಳಲ್ಲಿ (ತಪ್ಪಲಿನಲ್ಲಿ) ಹಾಡಲಿ. ವ|| ಎಂಬುದಾಗಿ ಆಶೀರ್ವಾದಮಾಡಿ ತಮ್ಮ ಮನೆಗಳಿಗೆ ಹೋದರು. ಆಗ ಧರ್ಮರಾಯನು ಅರ್ಜುನ! ನಿನ್ನ ರಾಜ್ಯಾಭಿವೃದ್ಧಿಯನ್ನು ನೋಡುತ್ತಿರುವುದೂ ಮೋಕ್ಷೇಚ್ಛುಗಳಾದ ತಪಸ್ವಿಗಳ ವೃತ್ತಿಯಲ್ಲಿರುವುದೂ ಅಲ್ಲೆದ ನನಗೆ ಬೇರೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿ ಹಾಗೆಯೇ ಭೀಮ ನಕುಲ ಸಹದೇವರುಗಳಿಗೂ ದುರ್ಯೋಧನನ ತಮ್ಮನಾದ ಯುಯುತ್ಸುವಿಗೂ ಅವರು ಕೇಳಿದ ನಾಡುಗಳನ್ನು ಕೊಡಿಸಿ ಸಂತೋಷಪಡಿಸಿದನು. ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು, ೩೭. ನನ್ನ ಕೃಪೆಯಿಂದ ಶತ್ರುರಾಜರನ್ನು ಸಂಪೂರ್ಣವಾಗಿ ಕೊಂದ ನಮಗೆ ಸಕಳ ರಾಜ್ಯಸಂಪತ್ತೂ ನಿನ್ನ ಶಕ್ತಿಯಿಂದಲೇ ಕೈಸೇರಿತು. ನಿನ್ನ ಸಹಾಯವನ್ನು ಯಾವುದರಲ್ಲಿ ತೀರಿಸಲಿ ವ|| ಎಂದು ಕೃಷ್ಣನನ್ನು ಪ್ರೀತಿಯುಕ್ತವಾದ ಮಾತುಗಳ ಸಮೂಹದಿಂದ ಸಂತೋಷಪಡುವ ಹಾಗೆ ಮಾತನಾಡಿ ಸಾತ್ಯಕಿಯೊಡನೆ ಬೆಲೆಯೇ ಇಲ್ಲದ ಅನೇಕ ವಸ್ತುವಾಹನಗಳ ಸಹಿತವಾಗಿ ದ್ವಾರಾವತಿಗೆ ಕಳುಹಿಸಿದನು. ಸಮಸ್ತವಾದ ಭೂಮಂಡಲದ ಭಾರವನ್ನೂ ಸುಲಭವಾಗಿ ಧರಿಸಿ ಉದಾತ್ತ ವೃತ್ತಿಯಲ್ಲಿದ್ದು ಉದಾತ್ತನಾರಾಯಣನೂ ಭುವನೋದರದಲ್ಲಿ (ಪ್ರಪಂಚವೆಂಬ ಮನೆಯ ಒಳಭಾಗದಲ್ಲಿ) ಪ್ರಸರಿಸಿದ ತೇಜಸ್ಸಿನಿಂದ ಪ್ರಚಂಡಮಾರ್ತಂಡನೂ (ಅತ್ಯಂತ ಕಾಂತಿಯುಕ್ತವಾದ ಸೂರ್ಯ) ಯಾವ ಕಡಯಲ್ಲಿಯೂ ಸಮಾನವೇ ಇಲ್ಲದವನು ಎಂಬ ಮಹಿಮೆಯಿಂದ ಉದಾರಮಹೇಶ್ವರನೂ ನಳನಹುಷಮಾಂಧಾತರನ್ನು ಕಾಂತಿಹೀನಮಾಡಿದ ಪ್ರಸಿದ್ಧಿಯಿಂದ ಮನುಜಮಾಂಧಾತನೂ ಮುಕ್ಕಣ್ಣನನ್ನೂ ಆಶ್ಚರ್ಯಪಡಿಸಿದ ಸಾಹಸದಿಂದ ಕದನತ್ರಿಣೇತ್ರನೂ ಚಲಿಸದೇ ಇದ್ದ ಪ್ರತಿಜ್ಞೆಯಿಂದ ಪ್ರತಿಜ್ಞಾಗಾಂಗೇಯನೂ ರಾಮನನ್ನೂ ಹಿಯ್ಯಾಳಿಸಿದ ಸಾಹಸದಿಂದ ಅಕಳಂಕ ರಾಮನೂ ಬೇಡಿದವರಿಗೆ ಅವರು ಬೇಡಿದುದನ್ನು ಪ್ರತಿಮಾತನಾಡದೆ ಕೊಡುವುದರಿಂದ ಪ್ರತ್ಯಕ್ಷ ಜೀಮೂತವಾಹನನೂ ಹದಿನಾಲ್ಕು ಲೋಕಗಳಲ್ಲಿಯೂ ತನಗೆ ಪ್ರತಿಭಟಿಸುವವರಿಲ್ಲದುದರಿಂದ ಜಗದೇಕಮಲ್ಲನೂ ಕೊಬ್ಬಿ ಬಂದು ಮೇಲೆ ಬೀಳುವ ಪ್ರತಿಸೈನ್ಯವನ್ನು ತನ್ನ ಕತ್ತಿಯ ಮೊನೆಯಿಂದ ನಾಶಪಡಿಸಿದುದರಿಂದ ಪರಸೈನ್ಯ ಭೈರವನೂ ಶತ್ರುಪಕ್ಷಗಳ ಆನೆಯ ಸಮೂಹವು ಎಷ್ಟು ಬಂದು ಚಾಚಿದರೂ ತನ್ನ ಒಂದು ಗರ್ಜನೆಗೆ ಗುಂಪು ಚೆದುರಿ ಓಡುವುದರಿಂದ ವೈರಿಗಜಘಟಾವಿಘಟನನೂ ತನಗೆ ಇದಿರಾಗಿ ಹೆದರದೆ ಬಂದು ಒಡ್ಡಿದ ಶತ್ರುಸೈನ್ಯವು ನೋಡುನೋಡುತ್ತಿರುವಾಗಲೇ ಕರುಗುವುದರಿಂದ ವಿದ್ವಿಷ್ಟ ವಿದ್ರಾವಣನೂ ಶತ್ರುಗಳೆಂಬ ಕಾಡಿನ ಒಳಭಾಗವನ್ನು ವ್ಯಾಪಿಸಿ ಸುಡುವುದರಿಂದ ಅರಾತಿ ಕಾಳಾನಳನೂ ಹಗೆಗಳೆಂಬ ಜಿಂಕೆಗಳನ್ನು ಒಂದೂ ಬಿಡದಂತೆ ಬೆನ್ನಟ್ಟಿ ಕೊಲ್ಲುವುದರಿಂದ ಅವಕಾಶವಿಲ್ಲದೆ ಓಡಿಸುವುದರಿಂದ ರಿಪು ಕುರಂಗಕಂಠೀರವನೂ ಪರಾಕ್ರಮದಲ್ಲಿ ತಾನಿದ್ದ ಜಾಗದಲ್ಲಿಯೇ ಹಿರಿಯನಾದುದರಿಂದ ವಿಕ್ರಾಂತತುಂಗನೂ, ಎಲ್ಲ ಕಡೆಯಲ್ಲಿಯೂ ಪರಾಕ್ರಮವೇ ತನಗೆ ಯೋಗ್ಯವಾದುದೆಂದು ಅಂಗೀಕರಿಸುವುದರಿಂದ ಪರಾಕ್ರಮಧವಳನೂ ಎಂತಹ ಯುದ್ಧದಲ್ಲಿಯೂ

ಪೋಗದೆ ನಟ್ಟು ನಿಲ್ವುದಱಂ ಸಮರೈಕಮೇರುವುಂ ಗೊಜ್ಜಿಗನೆಂಬ ಸಕಳ ಚಕ್ರವರ್ತಿ ಮುಳಿಯೆ ತನಗೆ ಶರಣಾಗತನಾದ ವಿಜಯಾದಿತ್ಯನಂ ಕಾದ ಬಲ್ಲಾಳ್ತನದೊಳ್ ಶರಣಾಗತ ಜಳನಿಯುಂ ವಿನಯಮೇ ತನಗೆ ಭೂಷಣಮಾಗೆ ಮಾಡುವುದಱಂ ವಿನಯ ಭೂಷಣನುಂ ಲೋಕಕ್ಕೆಲ್ಲಮಸಾಧಾರಣಮಪ್ಪ ದಾನಗುಣದೊಳ್ ಲೋಕೈಕಕಲ್ಪದ್ರುಮನುಂ ಎನಿತಾನುಂ ಗಜಗಮನಂಗಳಂ ತಾನೆ ಸಮೆದನಪ್ಪುದಱಂ ಗಜಗಮನರಾಜಪುತ್ರನುಂ ಎಂತಪ್ಪ ಗರ್ವವ್ಯಾಳಿಯುಮನತಿವರ್ತಿಗಳುಮನಾರೂಢದೊಳ್ ತನಗಳವಡುವುದಱಂದಾರೂಢ ಸರ್ವಜ್ಞನುಂ ಪರಮಾತ್ಮನಂತೆ ಲೋಕಾಲೋಕದ ವಸ್ತುಗಳುಮಂ ಕರತಳಾಮಳಕಮಾಗಱವುದರಿಂ ನೃಪ ಪರಮಾತ್ಮನುಂ ಎಂತಪ್ಪ ಪಂಡಿತರ ಗೋಷ್ಠಿಯೊಳಂ ತಾನೆ ಸೊಗಯಿಸುವುದಱಂ ವಿಬುಧ ವನಜವನಕಳಹಂಸನುಂ ಕೆಯ್ಗೆಯ್ಯದೆ ಸೊಗಯಿಸುವನಪ್ಪುದಱಂ ಸಹಜಮನೋಜನುಂ ಎಂತಪ್ಪ ಬರ್ದೆಯರುಮಂ ಬಗೆಗೆ ವರಿಸುವ ತಕ್ಕಿನೊಳ್ ಸುರತಮಕರಧ್ವಜನುಂ ಕೂರ್ಪ ಕೂರದರ ಕೂರದರ ಪಡೆಗಳೆರಡುಂ ತನ್ನನೆ ಮೆಚ್ಚುವುದಱಂ ಪಡೆಮೆಚ್ಚೆಗಂಡನುಂ ಎಂತಪ್ಪ ಮಾರ್ವಲಂಗಳುಮಂ ನೋಡುತ್ತೆ ಗೆಲ್ವುದಱಂ ನೋಡುತ್ತೆ ಗೆಲ್ವನುಂ ಮಹಾ ಭಾರಾವತಾರದೊಳತಿರಥ ಮಹಾರಥ ಸಮರರ್ಥಾರ್ಧರಥರ್ಕಳಂ ಪಡಲ್ವಡಿಸುವುದಱಂ ಸಾಹಸಾರ್ಜುನನುಮಮರೇಂದ್ರನೊಳರ್ಧಾಸನಮೇಱದ ಮಹಾ ಮಹಿಮೆಯೊಳ್ ಮಹಿಮ್ಹಾರ್ಣವನುಮರಿಕರಿಗಳಂ ಪಡಲ್ವಡಿಸುವ ಬೀರದೊಳರಿ ಕೇಸರಿಯುಮಾಗಿ-

ಚಂ|| ಪಸದನಮಾವುದಾವ ಋತುವಿಂಗಮರ್ದೊಪ್ಪುಗುಮಾವ ಪೊೞ್ತದಾ
ವೆಕಸದೊಳೊಂದುಗುಂ ವಿನಯಮಾವೆಡೆಗಾವುದು ಚಿಲ್ವುವೆತ್ತು ರಂ|
ಜಿಸುಗುಮದರ್ಕದಂ ಸಮಱ ನಿಚ್ಚಲುಮಾ ಬಿಯಮಾ ವಿನೋದಮಾ
ಪಸದನಮಾ ವಿಳಾಸದೊಳೊಡಂಬಡೆ ಭೋಗಿಸಿದಂ ಗುಣಾರ್ಣವಂ|| ೩೮

ಪಸರಿಸಿ ನೀಳ್ದ ತನ್ನ ಜಸದೊಳ್ ಪೆಱನೊರ್ವನ ಕೀರ್ತಿ ತಳ್ತು ರಂ
ಜಿಸೆ ನೆಗೞiತನೇಂ ನೆಗೞ್ದನೆಂಬ ಚಲಂ ಮಿಗೆ ತನ್ನ ಪೆಂಪು ತ|
ನ್ನೆಸಕಮೆ ತನ್ನ ವಿಕ್ರಮಮೆ ತನ್ನ ನೆಗೞ್ತೆಯೆ ತನ್ನ ಮಾತೆ ತಾ
ನೆಸೆವ ಜಗತ್ರಯಕ್ಕೆನಿಸಿ ಪಾಲಿಸಿದಂ ನೆಲನಂ ಗುಣಾರ್ಣವಂ|| ೩೯

ಕಂ|| ಆ ಮಳಯಾಚಳ ಹಿಮಗಿರಿ
ಸೀಮಾವನಿತಳಕೆ ಬೆಂಗಿಮಂಡಳದೊಳ್ ಚಿ|
ಲ್ವಾವಗಮೆ ತನಗದೊಂದೂರ್
ನಾಮದೊಳಂ ವೆಂಗಿಪೞು ಕರಂ ಸೊಗಯಿಸುಗುಂ|| ೪೦

ಬಿಟ್ಟುಹೋಗದೆ ಸ್ಥಿರವಾಗಿ ನಿಲ್ಲುವುದರಿಂದ ಸಮರೈಕಮೇರುವೂ ಗೊಜ್ಜಿಗನೆಂಬ ಸಕಳಚಕ್ರವರ್ತಿಯ ಕೋಪಕ್ಕೆ ಪಾತ್ರನಾದ ವಿಜಯಾದಿತ್ಯನನ್ನು ರಕ್ಷಿಸಿದ ಪರಾಕ್ರಮದಿಂದ (ರಕ್ಷಿಸಿದುದರಿಂದ) ಶರಣಾಗತಜಳನಿಯ. ವಿನಯವನ್ನೇ ತನಗೆ ಒಡವೆಯನ್ನಾಗಿ ಮಾಡಿಕೊಂಡಿರುವುದರಿಂದ ವಿನಯಭೂಷಣನೂ ಲೋಕಕ್ಕೆಲ್ಲ ಅಸಾಧಾರಣ ರೀತಿಯದಾಗಿರುವ ದಾನಗುಣದಿಂದ ಲೋಕೈಕ ಕಲ್ಪದ್ರುಮನೂ ಎಷ್ಟೋ ಗಜಶಾಸ್ತ್ರಗಳನ್ನು ತಾನೆ ರಚಿಸಿರುವುದರಿಂದ ಗಜಾಗಮ ರಾಜಪುತ್ರನೂ ಎಂತಹ ಮದ್ದಾನೆಯನ್ನೂ ವಶಕ್ಕೆ ಬರದೇ ಇರುವ ತುಂಟಾನೆಗಳನ್ನೂ ಹತ್ತುವುದರಲ್ಲಿ ಸಮರ್ಥನಾಗಿರುವುದರಿಂದ ಆರೂಢಸರ್ವಜ್ಞನೂ ಪರಮಾತ್ಮನ ಹಾಗೆ ಲೋಕಾಲೋಕ ವಸ್ತುಗಳನ್ನು ಕಯ್ಯಲ್ಲಿರುವ ನೆಲ್ಲಿಯಕಾಯಿನಂತೆ ತಿಳಿದಿರುವುದರಿಂದ ನೃಪಪರಮಾತ್ಮನೂ ಎಂತಹ ವಿದ್ವಾಂಸರ ಸಮೂಹದಲ್ಲಿಯೂ ತಾನೇ ಪ್ರಕಾಶಮಾನವಾಗಿರುವುದರಿಂದ ವಿಬುಧವನಜವನಕಳಹಂಸನೂ ಅಲಂಕಾರಮಾಡಿಕೊಳ್ಳದೆಯೇ ಸುಂದರನಾಗಿರುವುದರಿಂದ ಸಹಜಮನೋಜನೂ ಎಂತಹ ಪ್ರೌಢಸ್ತ್ರೀಯರನ್ನೂ ತನ್ನಲ್ಲಿ ಪ್ರೀತಿಮಾಡುವ ಹಾಗೆ ಮಾಡುವ ಯೋಗ್ಯತೆಯಿಂದ ಸುರತಮಕರದ್ವಜನೂ ಪ್ರೀತಿಸುವ ಮತ್ತು ಪ್ರೀತಿಸದಿರುವ ಎರಡುಸೈನ್ಯಗಳೂ ತನ್ನನ್ನು ಮೆಚ್ಚುವುದರಿಂದ ಪಡೆಮೆಚ್ಚೆಗಂಡನೂ ಎಂತಹ ಪ್ರತಿಸೈನ್ಯವನ್ನೂ ನೋಡುವುದರಿಂದಲೇ ಗೆಲ್ಲುವುದರಿಂದ ನೋಡುತ್ತೆ ಗೆಲ್ವನೂ ಮಹಾಭಾರತ ಯುದ್ಧದಲ್ಲಿ ಅತಿರಥ ಸಮರಥ ಅರ್ಥರಥರುಗಳನ್ನೂ ಕೆಳಗೆ ಬೀಳುವ ಹಾಗೆ ಮಾಡುವುದರಿಂದ ಸಾಹಸಾರ್ಜುನನೂ ದೇವೇಂದ್ರನೊಡನೆ ಅರ್ಧಾಸನವನ್ನು ಹತ್ತಿದ ಮಹಾಮಹಿಮೆಯಿಂದ ಮಹಿಮಾರ್ಣವನೂ ಶತ್ರುಗಳು ಆನೆಗಳನ್ನು ಕೆಳಗುರುಳಿಸುವುದರಿಂದ ಅರಿಕೇಸರಿಯೂ ಆಗಿ ೩೯. ಯಾವ ಋತುವಿಗೆ ಯಾವ ಅಲಂಕಾರವೊಪ್ಪುವುದು, ಯಾವ ಹೊತ್ತು ಯಾವ ಕಾರ್ಯಕ್ಕೆ ಒಪ್ಪುತ್ತದೆ ಯಾವ ಸ್ಥಳಕ್ಕೆ ಯಾವ ವಿನಯ (ನೀತಿ) ಸೊಗಸಾಗಿದೆ ಅದಕ್ಕೆ ಅದನ್ನು ಸರಿಯಾಗಿ ಸೇರಿಸಿ (ಹೊಂದಿಸಿಕೊಂಡು) ಪ್ರತಿದಿನವೂ ಆ ವೆಚ್ಚ, ಆ ಸಂತೋಷ, ಆ ಅಲಂಕಾರ, ಆ ವಿಲಾಸಗಳಲ್ಲಿ ಸೇರಿ ಮನೋಹರವಾಗುವ ರೀತಿಯಲ್ಲಿ (ಅರಿಕೇಸರಿಯು) ಗುಣಾರ್ಣವನು ಸುಖವಾಗಿದ್ದನು. ೩೯. ಪ್ರಸರಿಸಿ ಬೆಳೆದ ತನ್ನ ಯಶಸ್ಸಿನೊಡನೆ ಇನ್ನೊಬ್ಬನ ಕೀರ್ತಿ ಸಮಾನವಾಗಿ ಸೇರಿ ಪ್ರಕಾಶಿಸಿದರೆ ಅವನು ಪ್ರಸಿದ್ಧನೆ ಎಂಬ ಛಲವು ಹೆಚ್ಚಾಗಿರಲು ತನ್ನ ವೈಭವ, ತನ್ನ ಪರಾಕ್ರಮ, ತನ್ನ ಪ್ರಸಿದ್ಧಿ, ತನ್ನ ಮಾತು ಇವುಗಳೇ ಪ್ರಸಿದ್ಧವಾಗಿರುವ ಮೂರು ಲೋಕಗಳಿಗೂ ತಾನೇ ಎನಿಸಿ ಗುಣಾರ್ಣವನು ರಾಜ್ಯವನ್ನು ಪಾಲಿಸಿದನು. ೪೦. ಮಲಯಪರ್ವತದಿಂದ ಹಿಡಿದು ಹಿಮವತ್ಪರ್ವತವನ್ನು ಮೇರೆಯಾಗಿ ಉಳ್ಳ ಭೂಭಾಗದಲ್ಲಿ ವೆಂಗಿದೇಶವೇ ಯಾವಾಗಲೂ ಸುಂದರವಾಗಿರುವುದು. ಅದರಲ್ಲಿ ವೆಂಗಿಪಳು ಎಂಬುದು ವಿಶೇಷವಾಗಿ ಶೋಭಿಸುವುದು.

ಅದುವೆ ವಸಂತಂ ಕೊಟ್ಟೂ
ರೊದವಿದ ನಿಡುಗುಂದಿ ಮಿಕ್ಕ ವಿಕ್ರಮ ಪುರವೆಂ|
ಬುದುಮಗ್ರಹಾರ ಸಂಪ
ತ್ಪದವಿಗಳೊಳಮಗ್ರಗಣ್ಯನೂರ್ಜಿತಪುಣ್ಯಂ|| ೪೧

ನಯಶಾಲಿ ವತ್ಸ ಗೋತ್ರ
ಶ್ರಯಣೀಯನನೇಕ ಸಕಳ ಶಾಸ್ತ್ರಾರ್ಥ ವಿನಿ|
ಶ್ಚಯ ಮತಿ ಕೃತಿ ಮಾಧವ ಸೋ
ಮಯಾಜಿ ಸಲೆ ನೆಗೞ್ದನಾಸಮುದ್ರಂಬರೆಗಂ|| ೪೨

ಉ|| ಶಕ್ರ ಶಶಾಂಕ ಸೂರ್ಯ ಪವಮಾನರುಮಾತನ ಹೋಮ ಮಂತ್ರ ಚ
ಕ್ರ ಕ್ರಮಕಕ್ಕಣಂ ಮಿಡುಕಲಾಗಡೆ ಶಾಪಮನೀಗುಮೆಂದೆ ದಿ|
ಕ್ಚಕ್ರಮುಮಂಜಿ ಬೆರ್ಚಿ ಬೆಸಕೆಯ್ವುದದಲ್ಲದಗುರ್ವು ಪರ್ವೆ ಸ
ರ್ವಕ್ರತುಯಾಜಿಯಾದನಳವಿಂತುಟು ಮಾಧವಸೋಮಯಾಜಿಯಾ|| ೪೩

ಕಂ|| ವರ ದಿಗ್ವನಿತೆಗೆ ಮಾಟದ
ಕುರುಳಾ ತ್ರೈಭುವನಕಾಂತೆಗಂ ದಲ್ ಕಂಠಾ|
ಭರಣಮೆನೆ ಪರೆದ ತನ್ನ
ಧ್ವರ ಧೂಮದೆ ಕರಿದು ಮಾಡಿದಂ ನಿಜಯಶಮಂ|| ೪೪

ತತ್ತನಯನಖಿಳ ಕರಿ ತುರ
ಗೋತ್ತಮ ಮಣಿ ಕನಕ ಸಾರ ವಸ್ತುವನೆರೆದ|
ಗ್ಮಿತ್ತು ಸಲೆ ನೆಗೞ್ದನತಿ ಪುರು
ಷೋತ್ತಮನಭಿಮಾನಚಂದ್ರನೆನಿಪಂ ಪೆಸರಿಂ|| ೪೫

ಕಂ|| ಆತಂಗೆ ಭುವನ ಭವನ
ಖ್ಯಾತಂಗೆ ಸಮಸ್ತ ವೇದ ವೇದಾಂಗ ಸಮು|
ದ್ಯೋತಿತ ಮತಿಯುತನುಚಿತ ಪು
ರಾತನ ಚರಿತಂ ತನೂಭವಂ ಕೊಮರಯ್ಯಂ|| ೪೬

೪೧. ಆವೆಂಗಿಪಳುವಿನಲ್ಲಿ ವಸಂತ ಕೊಟ್ಟೂರು ನಿಡುಗುಂದಿ ಅತ್ಯತಿಶಯವಾದ ವಿಕ್ರಮಪುರ ಎಂಬುವ ಅಗ್ರಹಾರಗಳು ಶೋಭಾಯಮಾನವಾಗಿವೆ. ಅಲ್ಲಿಯ ಸಂಪತ್ಪದವಿಗಳಲ್ಲಿ ಅಗ್ರಗಣ್ಯನಾದವನೂ ಅಭಿವೃದ್ಧಿಯಾಗುತ್ತಿರುವ ಪುಣ್ಯವುಳ್ಳವನೂ ಆದ ೪೨. ವಿನಯಶಾಲಿಯೂ ವತ್ಸಗೋತ್ರವನ್ನು ಆಶ್ರಯಿಸಿದವನೂ ಸಕಲ ಶಾಸ್ತ್ರಾರ್ಥಗಳಲ್ಲಿ ಸ್ಥಿರವಾದ ಪಾಂಡಿತ್ಯವುಳ್ಳವನೂ ಆದ ಮಾಧವ ಸೋಮಯಾಜಿಯೆಂಬುವನು ಸಮುದ್ರ ಕಡೆಯವರೆಗೂ ಬಹುಪ್ರಸಿದ್ಧನಾಗಿದ್ದನು. ೪೩. ಇಂದ್ರಚಂದ್ರ ಸೂರ್ಯವಾಯುದೇವತೆಗಳೂ ಆತನ ಹೋಮ ಮಂತ್ರ ಸಮೂಹಕ್ಕೆ ಸ್ವಲ್ಪವೂ ಅಡ್ಡಿ ಮಾಡುತ್ತಿರಲಿಲ್ಲ. ಮಾಡಿದರೆ ಶಾಪವನ್ನು ಕೊಡುತ್ತಾನೆಂದೇ ದಿಙ್ಮಂಡಲಗಳೂ ಹೆದರಿ ಸೇವೆ ಮಾಡುತ್ತವೆ. ಅಲ್ಲದೆ ಅವನು ಸರ್ವಕ್ರತುಯೆಂಬಯಜ್ಞವನ್ನು ಮಾಡಿದವನು. ಮಾಧವ ಸೋಮಯಾಜಿಯ ಶಕ್ತಿಯಂತಹುದು. ೪೪. ಶ್ರೇಷ್ಠವಾದ ದಿಕ್ಕೆಂಬ ಸ್ತ್ರೀಗೆ ಕತ್ತಿನ ಆಭರಣವು ಎನ್ನುವ ಹಾಗೆ ವ್ಯಾಪಿಸಿರುವ ತನ್ನ ಯಜ್ಞದೂಮದಿಂದ (ಹೊಗೆಯಿಂದ) ತನ್ನ ಯಶಸ್ಸನ್ನೂ ಕಪ್ಪಾಗಿ ಮಾಡಿಕೊಂಡನು. ೪೫. ಪುರುಷರಲ್ಲಿ ಅತಿಶ್ರೇಷ್ಠನಾದ ಅವನ ಮಗನಾದ ಅಭಿಮಾನಚಂದ್ರನೆಂಬ ಹೆಸರುಳ್ಳವನು ಬೇಡಿದವರಿಗೆ ತನ್ನ ಸಮಸ್ತ ಆನೆ ಕುದುರೆ ಉತ್ತಮ ರತ್ನ ಚಿನ್ನ ಮೊದಲಾದ ಉತ್ತಮ ವಸ್ತುಗಳನ್ನು ದಾನಮಾಡಿ ವಿಶೇಷ ಪ್ರಸಿದ್ಧನಾದನು. ೪೬. ಭೂಮಂಡಲದಲ್ಲಿ ಪ್ರಸಿದ್ಧನಾದ ಆತನಿಗೆ ಸಕಲ ವೇದಶಾಸ್ತ್ರಗಳಿಂದ ಪ್ರಕಾಶಿಸಲ್ಪಟ್ಟ ಬುದ್ಧಿಯುಳ್ಳವನೂ ಉಚಿತವಾದ ಪ್ರಾಚೀನ ಆಚರಸಂಪನ್ನನಾದವನೂ ಆದ ಮಗನು ಕೊಮರಯ್ಯನೆಂಬುವನು. ಆ ಕೊಮರಯ್ಯನಿಗೆ ಭೂಮ್ಯಾಕಾಶಗಳಲ್ಲಿ ಹರಡಿರುವ ತನ್ನ ಗುಣವೆಂಬ ಮಣಿಗಳಿಗೆ ಸಮುದ್ರದಂತಿರುವವನೂ ಅಜ್ಞಾನವೆಂಬ ಕತ್ತಲನ್ನು ಪರಿಹರಿಸುವವನೂ ಆದ ಅಭಿರಾಮದೇವರಾಯನೆಂಬುವನು ಮಗನು. ೪೮. ಜಾತಿಯಲ್ಲೆಲ್ಲ ಉತ್ತಮ ಜಾತಿಯ ಬ್ರಾಹ್ಮಣಕುಲದವನಿಗೆ ಧರ್ಮದಲ್ಲೆಲ್ಲ ಜೈನಧರ್ಮವೇ ಉತ್ತಮವಾದುದೆಂದು (ಯೋಗ್ಯವಾದುದು) ಆ ಜಾತಿಯನ್ನು ಅಭಿವೃದ್ಧಿಮಾಡಿ ತನ್ನ ಖ್ಯಾತಿಯನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಂಡನು. ಅವನ ಮಗನೇ ಪ್ರಸಿದ್ಧನಾದ ಕವಿತಾಗುಣಾರ್ಣವ ಎಂಬ ಬಿರುದಿನ ಪಂಪ.

ಆ ಕೊಮರಯ್ಯಂಗವನಿತ
ಳಾಕಾಶ ವ್ಯಾಪ್ತ ನಿಜ ಗುಣ ಮಣಿ ರ|
ತ್ನಾಕರನಜ್ಞಾನತಮೋ
ನೀಕರನಭಿರಾಮ ದೇವರಾಯಂ ತನಯಂ|| ೪೭

ಉ|| ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ
ಮಾತೊ ಜಿನೇಂದ್ರ ಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ ತ|
ಜ್ಜಾತಿಯನುತ್ತರೋತ್ತರಮೆ ಮಾಡಿ ನೆಗೆೞದನಿಂತಿರಾತ್ಮ ವಿ
ಖ್ಯಾತಿಯನಾತನಾತನ ಮಗಂ ನೆಗೞ್ದಂ ಕವಿತಾಗುಣಾರ್ಣವಂ|| ೪೮

ಕಂ|| ಪಂಪಂ ಧಾತ್ರೀವಳಯ ನಿ
ಳಿಂಪಂ ಚತುರಂಗ ಬಳ ಭಯಂಕರಣಂ ನಿ|
ಷ್ಕಂಪಂ ಲಲಿತಾಲಂಕರ
ಣಂ ಪಂಚಶರೈಕರೂಪನಪಗತಪಾಪಂ|| ೪೯

ಚಂ|| ಕವಿತೆ ನೆಗೞ್ತೆಯಂ ನಿಱಸೆ ಜೋಳದ ಪಾಱ ನಿಜಾನಾಥನಾ
ಹವದೊಳರಾತಿನಾಯಕರ ಪಟ್ಟನೆ ಪಾಱಸೆ ಸಂದ ಪೆಂಪು ಭೂ|
ಭುವನದೊಳಾಗಳುಂ ಬೆಳಗೆ ಮಿಕ್ಕಭಿಮಾನದ ಮಾತು ಕೀರ್ತಿಯಂ
ವಿವರಿಸೆ ಸಂದನೇಂ ಕಲಿಯೊ ಸತ್ಕವಿಯೋ ಕವಿತಾಗುಣಾಣವಂ|| ೫೦

ಕಂ|| ಆತಂಗರಿಕೇಸರಿ ಸಂ
ಪ್ರೀತಿಯೆ ಬೞಯಟ್ಟಿ ಪಿರಿದನಿತ್ತು ನಿಜಾಭಿ|
ಖ್ಯಾತಿಯನಿಳೆಯೊಳ್ ನಿಱಸ
ಲ್ಕೀ ತೆಱದಿತಿಹಾಸ ಕಥೆಯನೊಪ್ಪಿಸೆ ಕುಱತಂ|| ೫೧

ಶ್ರೌತಮಿದು ತನಗೆ ಗಂಗಾ
ಸ್ರೋತದವೊಲಳುಂಬಮಾಗಿ ಗೆಡೆಗೊಳ್ಳದೆ ವಿ|
ಖ್ಯಾತ ಕವಿ ವೃಷಭ ವಂಶೋ
ದ್ಭೂತಮೆನಲ್ ಬರಿಸದೊಳಗೆ ಸಮೆವಿನೆಗಮಿದಂ|| ೫೨

ವ|| ಅದೆಂತೆನೆ ಆದಿವಂಶಾವತಾರಸಂಭವಂ ರಂಗಪ್ರವೇಶಂ ಜತುಗೃಹದಾಹಂ ಹಿಡಿಂಬ ವಧೆಬಕಾಸುರವಧೆ ದ್ರೌಪದೀಸ್ವಯಂವರಂ ವೈವಾಹಂ ಯುಷ್ಠಿರಪಟ್ಟಬಂಧನಂ ಇಂದ್ರಪ್ರಸ್ಥ ಪ್ರವೇಶಂ ಅರ್ಜುನದಿಗ್ವಿಜಯಂ ದ್ವಾರಾವತೀಪ್ರವೇಶಂ ಸುಭದ್ರಾಹರಣಂ ಸುಭದ್ರಾ ವಿವಾಹಂ ಖಾಂಡವವನ ದಹನಂ ಮಯ ದರ್ಶನಂ ನಾರದಾಗಮನಂ ಜರಾಸಂಧ ವಧೆ ರಾಜಸೂಯಂ ಶಿಶುಪಾಲವಧೆ ದ್ಯೂತವ್ಯತಿಕರಂ ವನ ಪ್ರವೇಶಂ ಕಿವಿರ‍್ಮ ವಧೆ ಕಾಮ್ಯಕವನದರ್ಶನಂ ದ್ವೆ ತವನ ಪ್ರವೇಶಂ ಸೈಂಧವಬಂಧನಂ ಚಿತ್ರಾಂಗದಯುದ್ಧಂ ಕಿರಾತದೂತಾಗಮನಂ ದ್ರೌಪದೀವಾಕ್ಯಂ ಪಾರಾಶರ ವೀಕ್ಷಣಂ ಇಂದ್ರಕೀಲಾಭಿಗಮನಂ ಈಶ್ವರಾರ್ಜುನ ಯುದ್ಧಂ ದಿವ್ಯಾಸ್ತ್ರಲಾಭಂ ಇಂದ್ರಲೋಕಾಲೋಕನಂ ನಿವಾತಕವಚಾಸುರವಧೆ ಕಾಳಕೇಯ ಪೌಳೋಮವಧೆ ಸೌಗಂಕಕಮಲಾಹರಣಂ ಜಟಾಸುರವಧೆ ಮಾಯಾಮತ್ತಹಸ್ತಿ ವ್ಯಾಜಂ ವಿರಾಟಪುರ

೪೯. ಪಂಪನು ಭೂಮಂಡಲದ ಶ್ರೇಷ್ಠದೇವತೆ. ಚತುರಂಗಸೈನ್ಯಗಳಿಗೆ ಭಯವನ್ನುಂಟುಮಾಡುವವನು. ಧೈರ್ಯಶಾಲಿ (ನಡುಗದವನು) ಸುಂದರವಾದ ಅಲಂಕಾರವುಳ್ಳವನು. ಮನ್ಮಥನ ಹಾಗೆಯೇ ಇರುವ ರೂಪವುಳ್ಳವನು, ಪಾಪರಹಿತನಾದವನು – ೫೦. ತನ್ನ ಕವಿತ್ವವು ಖ್ಯಾತಿಯನ್ನು ಸ್ಥಾಪಿಸಿತು. ಅನ್ನದಾತನಲ್ಲಿದ್ದ ಉಪ್ಪಿನ ಋಣವು ತನ್ನ ರಾಜನ ಯುದ್ಧದಲ್ಲಿ ಶತ್ರುನಾಯಕರ ವೀರಪಟ್ಟಗಳನ್ನು ಹಾರಿಸುವಂತಹ ಹಿರಿಮೆಯನ್ನೂ ತನ್ನ ಯಶಸನ್ನೂ ವಿವರಿಸಿತು. ಕವಿತಾಗುಣಾರ್ಣವನು ಬಹು ಪ್ರಸಿದ್ಧನಾದನು. ಪಂಪಕವಿ ಎಂತಹ ಶೂರನೋ ಎಂತಹ ಸತ್ಕವಿಯೋ? ೫೧. ಆತನಿಗೆ (ಆ ಪಂಪನಿಗೆ) ಅರಿಕೇಸರಿರಾಜನು ಅತ್ಯಂತ ಪ್ರೀತಿಯಿಂದ ಹೇಳಿಕಳುಹಿಸಿ ವಿಶೇಷವಾಗಿ ದಾನಮಾಡಿ ತನ್ನ ಕೀರ್ತಿಯನ್ನು ಭೂಮಿಯಲ್ಲಿ ಸ್ಥಾಪಿಸೆಂದು ಹೇಳಲು ಈ ರೀತಿಯಾದ ಇತಿಹಾಸ ಕಥೆಯನ್ನು ರಚಿಸಿ ಒಪ್ಪಿಸಲು ನಿಶ್ಚಯಿಸಿದನು.

೫೨. ವೇದಸದೃಶವಾದ ಈ ಕೃತಿಯು ತನಗೆ ಗಂಗಾಪ್ರವಾಹದಂತೆ ಅತ್ಯತಿಶಯವಾಗಿ ಪರರ ಸಹಾಯವನ್ನಪೇಕ್ಷಿಸದೆ ಪ್ರಸಿದ್ಧರಾದ ಕವಿಶ್ರೇಷ್ಠರ ಪರಂಪರೆಯಲ್ಲಿಯೇ ಹುಟ್ಟಿತು ಎನ್ನುವ ಹಾಗೆ ಒಂದು ವರ್ಷದಲ್ಲಿ ರಚಿತವಾಯಿತು. ವ|| ಅದು ಹೇಗೆಂದರೆ ಆದಿವಂಶಾವತಾರಸಂಭವ, ರಂಗಪ್ರವೇಶ, ಅರಗಿನಮನೆಯ ದಾಹ, ಹಿಡಿಂಬವಧೆ, ಬಕಾಸುರವಧೆ, ದ್ರೌಪದೀಸ್ವಯಂವರ, ವಿವಾಹ, ಧರ್ಮರಾಯಪಟ್ಟಾಭಿಪೇಕ, ಇಂದ್ರಪ್ರಸ್ಥಪ್ರವೇಶ, ಅರ್ಜುನ ದಿಗ್ವಿಜಯ, ದ್ವಾರಾವತೀ ಪ್ರವೇಶ, ಸುಭದ್ರಾಹರಣ, ಸುಭದ್ರಾವಿವಾಹ, ಖಾಂಡವವನ ದಹನ, ಮಯದರ್ಶನ,

ಪ್ರವೇಶಂ ಕೀಚಕವಧೆ ದಕ್ಷಿಣೋತ್ತರ ಗೋಗ್ರಹಣಂ ಅಭಿಮನ್ಯು ವಿವಾಹಂ ಮಂತ್ರಾಳೋಚನಂ ದೂತಕಾರ್ಯಂ ಕುರುಕ್ಷೇತ್ರಪ್ರಯಾಣಂ ಭೀಷ್ಮ ಕರ್ಣ ವಿವಾದಂ ಯುದ್ಧೋದ್ಯೋಗಂ ಶ್ವೇತವಧೆ ಭೀಷ್ಮಶರ ಶಯನಂ ದ್ರೋಣಾಭಿಷೇಕಂ ಅಭಿಮನ್ಯು ವಧೆ ಸೈಂಧವ ವಧೆ ಘಟೋತ್ಕಚ ವಧೆ ದ್ರೋಣಚಾಪ ಮೋಕ್ಷಂ ದ್ರೋಣ ವಧೆ ಅಶ್ವತ್ಥಾಮ ಕರ್ಣ ವಿವಾದಂ ಕರ್ಣಾಭಿಷೇಕಂ ಸಂಸಪ್ತಕ ವಧೆ ದುಶ್ಯಾಸನ ವಧೆ ವೇಣೀಸಂಹನನಂ ಕರ್ಣಾರ್ಜುನ ಯುದ್ಧಂ ಕರ್ಣ ಸೂರ್ಯಲೋಕಪ್ರಾಪ್ತಿ ಶಲ್ಯಾಭಿಷೇಕಂ ಶಲ್ಯನಿಪಾತನಂ ಭೀಮ ದುಯೋಧನ ಗದಾಯುದ್ಧಂ ದುಯೋಧನ ವಧೆ ಪಂಚಪಾಂಡವಹರಣಂ ಸ್ತ್ರೀಪರ್ವಂ ಅರ್ಜುನಾಭಿಷೇಕಂ ಪೆಱವುಮುಪಾಖ್ಯಾನ ಕಥೆಗಳೊಳಮೊಂದುಂ ಕುಂದಲೀಯದೆಪೇೞ್ಗೆಂ-

ಚಂ|| ಎಸೆಯೆ ಸಮಸ್ತ ಭಾರತಮನಾವ ನರೇಂದ್ರರುಮಾರ್ತು ಕೂರ್ತು ಪೇ
ೞಸರೆ ಕವೀಂದ್ರರುಂ ನೆಯೆ ಪೇೞರೆ ಪೇೞಪೊಡೆಯ್ದೆ ನೀನೆ ಪೇ|
ಱಸುವೆಯುದಾತ್ತ ಕೀರ್ತಿ ನಿಲೆ ಪೇೞ್ವೊಡೆ ಪಂಪನೆ ಪೇೞ್ಗುಮಿಂತು ಪೇ
ೞಸಿದ ನರೇಂದ್ರರುಂ ನೆಯೆ ಪೇೞ್ದ ಕವೀಂದ್ರರುಮಾರ್ ಧರಿತ್ರಿಯೊಳ್|| ೫೩

ಎನೆ ಸಕಲಾವನೀತಳ ಜನಂ ಪಿರಿದುಂ ದಯೆಗೆಯ್ದು ಸಾರ್ಚಿ ಮೆ
ಲ್ಲನೆ ಪಿರಿದಪ್ಪ ಗೌರವದ ಮೈಮೆಯ ಮನ್ನಣೆಯೋಳಿಗಲ್ ಕರಂ|
ಮನಮನಲರ್ಚೆ ಕೀರ್ತಿ ಜಗದೊಳ್ ನಿಲೆ ಪೇೞಸಿದಂ ಜಗಕ್ಕೆ ನ
ಚ್ಚಿನ ಕವಿತಾ ಗುಣಾರ್ಣವನಿನೀ ಕೃತಿ ಬಂಧನಮಂ ಗುಣಾರ್ಣವಂ|| ೫೪

ಪಿರಿಯಕ್ಕರ|| ತುಡುಗೆ ನಿಚ್ಚಲುಂ ಪಂಚರತ್ನಂಗಳುಂ ಪೊಱಮಡೆ ತನ್ನುಡುವುಪ್ಪಟಂಗಳ್
ಮಡಿಯೊಳಾಗೆಯುಮೞ್ಕಱಂ ಕಂಡಾಗಳ್ ಪಿರಿಯ ಬಿತ್ತರಿಗೆಯಂ ಕೆಲದೊಳಿಕ್ಕಿ|
ಕೊಡುವ ಬಾಡಕ್ಕಂ ಜೀವಧನಂಗಳ್ಗಂ ಬಿಡುವೆಣ್ಗಂ ಲೆಕ್ಕಮಿಲ್ಲೆನಿಸಿ ರಾಗಂ
ಗಿಡದೆ ಕೊಂಡಾಡಿದಂ ಬಲ್ಲಹನಱಯೆ ಗುಣಾರ್ಣವಂ ಕವಿತಾಗುಣಾರ್ಣವನಂ|| ೫೫

ಬೀರದಳವಿಯ ನನ್ನಿಯ ಚಾಗದ ಶಾಸನಂ ಚಂದ್ರರ್ಕತಾರಂಬರಂ
ಮೇರು ನಿಲ್ವಿನಂ ನಿಲವೇೞ್ಕುಂ ಕಾವ್ಯಕ್ಕೆ ತಾನಿತ್ತಂ ಶಾಸನದಗ್ರಹಾರಂ|
ಸಾರಮೆಂಬಿನಂ ಪೆಸರಿಟ್ಟು ತಾನೀಯೆ ಹರಿಗನ ಧರ್ಮ ಭಂಡಾರದಂತೆ
ಸಾರಮಾದುದು ಬಿಟ್ಟಗ್ರಹಾರಮಾ ಬಚ್ಚೆಸಾಸಿರದೊಳು ಧರ್ಮವುರಂ|| ೫೬

ನಾರದಾಗಮನ, ಜರಾಸಂಧವಧೆ, ರಾಜಸೂಯ, ಶಿಶುಪಾಲವಧೆ, ದ್ಯೂತವ್ರ್ಯತಿಕರ, ವನಪ್ರವೇಶ, ಕೀಚಕವಧೆ, ಕಾಮ್ಯಕವನದರ್ಶನ, ದ್ವೆ ತವನಪ್ರವೇಶ, ಸೈಂಧವಬಂಧನ, ಚಿತ್ರಾಂಗದಯುದ್ಧ, ಕಿರಾತದೂತಾಗಮನ, ದ್ರೌಪದೀವಾಕ್ಯ, ವ್ಯಾಸರ ದರ್ಶನ, ಇಂದ್ರಕೀಲಾಭಿಗಮನ, ಈಶ್ವರಾರ್ಜುನಯುದ್ಧ, ದಿವ್ಯಾಸ್ತ್ರಲಾಭ, ಇಂದ್ರಾಲೋಕಾಲೋಕನ, ನಿವಾತಕವಚಾಸುರವಧೆ, ಕಾಳಕೇಯಪೌಳೋಮವಧೆ, ಸೌಗಂಕಕಮಲಾಹರಣ, ಜಟಾಸುರವಧೆ, ಮತ್ತಗಜದ ವೃತ್ತಾಂತ, ವಿರಾಟಪುರಪ್ರವೇಶ, ಕೀಚಕವಧೆ, ದಕ್ಷಿಣೋತ್ತರ ಗೋಗ್ರಹಣ, ಅಭಿಮನ್ಯುವಿವಾಹ, ಮಂತ್ರಾಲೋಚನೆ, ದೂತಕಾರ್ಯ, ಕುರುಕ್ಷೇತ್ರ ಪ್ರಯಾಣ, ಭೀಷ್ಮಕರ್ಣವಿವಾದ, ಯುದ್ಧೋದ್ಯೋಗ, ಶ್ವೇತವಧೆ, ಭೀಷ್ಮಶರಶಯನ, ದ್ರೋಣಾಭಿಷೇಕ, ಅಭಿಮನ್ಯುವಧೆ, ಸೈಂಧವವಧೆ, ಘಟೋತ್ಕಚವಧೆ, ದ್ರೋಣಚಾಪಮೋಕ್ಷ, ದ್ರೋಣವಧೆ, ಅಶ್ವತ್ಥಾಮಕರ್ಣ ವಿವಾದ, ಕರ್ಣಾಭಿಷೇಕ, ಸಂಸಪ್ತಕವಧೆ, ದುಶ್ಯಾಸನವಧೆ, ಮುಡಿಯನ್ನು ಕಟ್ಟುವುದು, ಕರ್ಣಾರ್ಜುನರ ಯುದ್ಧ, ಕರ್ಣನ ಸೂರ್ಯಲೋಕಪ್ರಾಪ್ತಿ, ಶಲ್ಯಾಭಿಷೇಕ, ಶಲ್ಯನಿಪಾತನ, ಭೀಮದುರ್ಯೋಧನ ಗದಾಯುದ್ಧ, ದುಯೋಧನವಧೆ, ಪಂಚಪಾಂಡವಹರಣ, ಸ್ತ್ರೀಪರ್ವ, ಅರ್ಜುನಾಭಿಷೇಕ ಮೊದಲಾದ ಇತರ ಅನೇಕ ಉಪಾಖ್ಯಾನ ಕತೆಗಳಲ್ಲಿ ಒಂದೂ ತಪ್ಪದೆ ಹೇಳಿದೆನು. ೫೩. ಇದುವರೆಗೆ ಯಾವ ರಾಜರೂ ಸಮರ್ಥರಾಗಿ ಪ್ರೀತಿಯಿಂದ ಪ್ರಸಿದ್ಧವಾದ ಸಮಗ್ರಭಾರತವನ್ನು ಹೇಳಿಸಿಲ್ಲ. ಕವಿಶ್ರೇಷ್ಠರೂ ಪೂರ್ಣವಾಗಿ ಹೇಳಿಲ್ಲ. ಹೇಳಿಸುವುದಾದರೆ ನೀನೆ ಚೆನ್ನಾಗಿ ಹೇಳಿಸುತ್ತೀಯೆ; ಉನ್ನತವಾದ ಕೀರ್ತಿ ನಿಲ್ಲುವ ಹಾಗೆ ಹೇಳುವ ಪಕ್ಷದಲ್ಲಿ ಪಂಪನೆ ಹೇಳುತ್ತಾನೆ. ಹೀಗೆ ಹೇಳಿಸಿದ ರಾಜರೂ ಪೂರ್ಣವಾಗಿ ಹೇಳಿದ ಕವಿಶ್ರೇಷ್ಠರೂ ಲೋಕದಲ್ಲಿ ಯಾರಿದ್ದಾರೆ? ೫೪. ಎಂದು ಸಮಸ್ತ ಭೂಮಂಡಲದ ಜನವೂ ಹೇಳಲು ಗುಣಾರ್ಣವನಾದ ಅರಿಕೇಸರಿಯು ವಿಶೇಷವಾದ ಕೃಪೆಮಾಡಿ ಹಿರಿದಾದ ಮಹಿಮೆಯ ಸತ್ಕಾರಸಮೂಹಗಳನ್ನು ಸದ್ದಿಲ್ಲದೆ ಮಾಡಿ ವಿಶೇಷವಾಗಿ ಮನಸ್ಸನ್ನು ಅರಳಿಸಲು (ತೃಪ್ತಿಪಡಿಸಲು) ಅವನ ಕೀರ್ತಿ ನಿಲ್ಲುವಂತೆ ಲೋಕದಲ್ಲಿ ಪ್ರಸಿದ್ಧನಾದ ಕವಿತಾಗುಣಾರ್ಣವನಾದ ಪಂಪನಿಂದ ಈ ಕಾವ್ಯಪ್ರಬಂಧವನ್ನು ಗುಣಾರ್ಣವನು ಹೇಳಿಸಿದನು. ೫೫. ಪ್ರತಿನಿತ್ಯವೂ ಆಭರಣಗಳನ್ನೂ ಪಂಚರತ್ನಗಳನ್ನೂ ಹೊರಗೆ ಹೊರಡಬೇಕಾದರೆ ತಾನು ಸ್ವಂತವಾಗಿ ಧರಿಸುವ ಶ್ರೇಷ್ಠವಾದ ವಸ್ತ್ರಗಳನ್ನೂ ಒಳ್ಳೆಯ ಮಡಿಯಾಗಿರುವ ಸ್ಥಿತಿಯಲ್ಲಿ ಪ್ರೀತಿಯಿಂದ ಕೊಡುವನು. ಉನ್ನತವಾದ ಆಸನಗಳನ್ನೂ ತನ್ನ ಪಕ್ಕದಲ್ಲಿಯೇ ಹಾಸಿ ಕುಳ್ಳಿರಿಸಿಕೊಂಡು ಗೌರವಿಸುವನು. ಅವನು ದಾನಮಾಡುವ ಹಳ್ಳಿಗಳಿಗೂ ಗೋವುಗಳೇ ಮೊದಲಾದ ಪ್ರಾಣಿಗಳಿಗೂ ದಾಸಿಯರಿಗೂ ಲೆಕ್ಕವೇ ಇಲ್ಲ. ಪ್ರೀತಿಯು ಕಡಿಮೆಯಾಗದಂತೆ ರಾಷ್ಟ್ರಕೂಟರ ರಾಜನಾದ ವಲ್ಲಭದೇವನಾದ ಮೂರನೆಯ ಕೃಷ್ಣನು ತಿಳಿಯುವಂತೆ ಕವಿತಾಗುಣಾರ್ಣವನಾದ ಪಂಪಕವಿಯನ್ನು ಸತ್ಕರಿಸಿದನು. ೫೬. ತನ್ನ ವೀರ್ಯದ ಪರಾಕ್ರಮದ ಶಕ್ತಿಯ ಸತ್ಯದ ದಾನದ (ಪ್ರತೀಕಾರವಾಗಿರುವ) ಶಾಸನವು ಚಂದ್ರಸೂರ್ಯ ನಕ್ಷತ್ರಗಳಿರುವವರೆಗೆ ಮೇರುಪರ್ವತ ನಿಲ್ಲುವಂತೆ ಕಾವ್ಯಕ್ಕೆ ಬಹುಮಾನವಾಗಿ (ಸಂಭಾವನೆಯಾಗಿ) ತಾನು ಕೊಟ್ಟ ಶಾಸನದಗ್ರಹಾರವು ಸಾರವತ್ತಾಗಿ ನಿಲ್ಲಬೇಕು

ಚಂ|| ದೆಸೆ ಮಖಧೂಮದಿಂ ದ್ವಿಜರ ಹೋಮದಿನೊಳ್ಗೆ ಹಂಸ ಕೋಕ ಸಾ
ರಸ ಕಳ ನಾದದಿಂದೊಳಗೆ ವೇದನಿನಾದದಿನೆತ್ತಮೆಯ್ದೆ ಶೋ|
ಭಿಸೆ ಸುರಮಥ್ಯಮಾನ ವನ ಕ್ಷುಭಿತಾರ್ಣ ಘೋಷದಂತೆ ಘೂ
ರ್ಣಿಸುತಿರಲೀ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ|| ೫೭

ಕಂ|| ರಾಜದ್ರಾಜಕಮೆನಿಸಿದ
ಸಾಜದ ಪುಲಿಗೆಯ ತಿರುಳ ಕನ್ನಡದೊಳ್ ನಿ|
ರ್ವ್ಯಾಜದೆಸಕದೊಳೆ ಪುದಿದೊಂ
ದೋಜೆಯ ಬಲದಿನಿಯ ಕವಿತೆ ಪಂಪನ ಕವಿತೇ|| ೫೮

ಚಂ|| ಪುದಿದ ಜಸಂ ಪೊದೞ್ದ ಚಳಮೊಂದಿದಳಂಕೃತಿ ಕೈತ ದೇಸಿಯೆಂ
ಬುದನೆನೆ ವಸ್ತು ವಿದ್ಯೆಯೆನೆ ಕಬ್ಬಮೆ ಮುನ್ನಮವಂತಿವಲ್ಲದ|
ಲ್ಲದೆ ಪೆಱವಿಲ್ಲ ಕಬ್ಬಮೆನೆ ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆ
ಟ್ಟಿದುವು ಸಮಸ್ತಭಾರತಮುಮಾದಿಪುರಾಣಮಹಾಪ್ರಬಂಧಮುಂ|| ೫೯

ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಸಮಸ್ತ ಭೂ
ತಳಕೆ ಸಮಸ್ತ ಭಾರತಮುಮಾದಿಪುರಾಣಮುಮೆಂದು ಮೆಯ್ಯಸುಂ|
ಗೊಳುತಿರೆ ಪೂಣ್ದು ಪೂಣ್ದ ತೆಱದೊಂದಱುದಿಂಗಳೊಳೊಂದು ಮೂಱು ತಿಂ
ಗಳೊಳೆ ಸಮಾಪ್ತಿಯಾದುದೆನೆ ಬಣ್ಣಿಸಿದಂ ಕವಿತಾಗುಣಾರ್ಣವಂ|| ೬೦

ಕ್ಷಿತಿಗೆ ಸಮಸ್ತ ಭಾರತಮುಮಾದಿಪುರಾಣಮುವಿಗಳೊಂದಳಂ
ಕೃತಿಯವೊಲಿರ್ದುವೇಕಱಯ ಪೋದವರಾದವರೊಳ್ ಸರಸ್ವತೀ|
ಮತಿ ಕವಿತಾಗುಣಕ್ಕೆ ಪದೆದೆಯ್ದೆವರಲ್ಕೆ ಕವಿಂದ್ರರಾರ್ ಸರ
ಸ್ವತಿಗೆ ವಿಳಾಸಮಂ ಪೊಸತು ಮಾಡುವ ಪಂಪನ ವಾಗ್ವಿಲಾಸಮಂ|| ೬೧

ಉ|| ವ್ಯಾಸಮುನಿ ಪ್ರಣೂತ ಕೃತಿಯಂ ಸಲೆ ಪೇೞ್ದು ಸತ್ಯವಿ
ವ್ಯಾಸ ಸಮಾಗಮಾನ್ವಿತಮನಾದಿಪುರಾಣಮನೆಯ್ದೆ ಪೇೞ್ದು ವಾ|
ಕ್ಶ್ರೀ ಸುಭಗಂ ಪುರಾಣಕವಿಯುಂ ಧರೆಗಾಗಿರೆಯುಣ್ಮಿ ಪೊಣ್ಮುವೀ
ದೇಸಿಗಳುಂತೆ ನಾಡೊವಜನಾದನೊ ಪೇೞ್ ಕವಿತಾಗುಣಾರ್ಣವಂ|| ೬೨

ಎಂದು ಹೊಸದಾಗಿ ನಾಮಕರಣಮಾಡಿ ಕೊಡಲು ಆ ಬಚ್ಚೆಸಾಸಿರವೆಂಬ ನಾಡಿನಲ್ಲಿ ಧರ್ಮಪುರವೆಂಬ ಅಗ್ರಹಾರವು ಅರಿಕೇಸರಿಯ ಧರ್ಮಭಂಡಾರದಂತೆ (ಧರ್ಮವು ಕೂಡಿಟ್ಟಿರುವ ಉಗ್ರಾಣದಂತೆ) ಸಾರವತ್ತಾದುದು ಆಯಿತು. ೫೭. ದಿಕ್ಕುಗಳು ಯಜ್ಞಯಾಗಗಳ ಹೊರೆಯಿಂದಲೂ ಬ್ರಾಹ್ಮಣರು ಮಾಡುವ ಹೋಮದಿಂದಲೂ ಒಳ್ಳೆಯ ಕೆರೆಗಳು ಹಂಸ ಚಕ್ರವಾಕ ಸಾರಸಪಕ್ಷಿಗಳ ಮಧುರವಾದ ಧ್ವನಿಯಿಂದಲೂ ಊರಿನ ಒಳಭಾಗವು ವೇದಘೋಷದಿಂದಲೂ ತುಂಬಿರಲು ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದ ಘೋಷದಂತೆ ಅರಿಕೇಸರಿಯು ಧರ್ಮವಾಗಿ ಕೊಟ್ಟ ಧರ್ಮಪುರವು ಶಬ್ದಮಾಡುತ್ತ ಯಾವಾಗಲೂ ಬಹು ರಮಣೀಯವಾಗಿತ್ತು. ೫೮. ಪಂಪನ ಕವಿತ್ವವು ಪ್ರಕಾಶಮಾನವಾದ ರಾಜನುಳ್ಳದ್ದು ಎಂದೆನಿಸಿದ ಪುಲಿಗೆರೆಯ ಸಹಜವಾದ ತಿರುಳುಕನ್ನಡದಲ್ಲಿ ಋಜುವಾದ ಕಾವ್ಯಮಾರ್ಗದಲ್ಲಿ ಶಕ್ತಿಯುಕ್ತವಾಗಿಯೂ ಇಂಪಾಗಿಯೂ ಇರುವಂತೆ ರಚಿತವಾಗಿದೆ. ೫೯. ಕೂಡಿಕೊಂಡಿರುವ ಯಶಸ್ಸು ವ್ಯಾಪ್ತವಾದ ಓಜಸ್ಸು ಅಥವಾ ಕಾಂತಿ, ಸೇರಿಕೊಂಡಿರುವ ಅಲಂಕಾರ, ದೇಸಿ ರಚನೆಯೆಂಬುದನ್ನೇ ಪ್ರಧಾನವಸ್ತುಗಳನ್ನಾಗಿ ಉಳ್ಳ ಕಾವ್ಯಗಳು ವಿದ್ಯೆಗಿಂತ ಮಾನ್ಯವಾದುವು. ಅವಲ್ಲದವು ಕಾವ್ಯವೇ ಅಲ್ಲ. ಈ ಭಾರತವೂ ಆದಿಪುರಾಣವೂ ಅವುಗಳ ಹಾಗಿರದೆ ಮೇಲೆ ಹೇಳಿದ ಗುಣಗಳಲ್ಲದೆ ಬೇರೆಯಲ್ಲ ಎಂದೆನಿಸಿಕೊಂಡು ಪ್ರಾಚೀನಕಾವ್ಯಗಳನ್ನೆಲ್ಲ ಪರಾಜಿತವನ್ನಾಗಿ (ಹೊಡೆದು ಹಾಕಿದುವು) ಮಾಡಿದುವು. ೬೦. ಇಲ್ಲಿ ವಿಕ್ರಮಾರ್ಜುನವಿಜಯ ಅಥವಾ ಭಾರತದಲ್ಲಿ ಸಮಸ್ತಭೂಮಂಡಲಕ್ಕೆ ಲೋಕವ್ಯವಹಾರವನ್ನೂ ಅಲ್ಲಿ ಆ ಆದಿಪುರಾಣದಲ್ಲಿ ಜಿನಾಗಮವನ್ನೂ ಪ್ರಕಾಶಪಡಿಸುತ್ತೇನೆ. ಸಮಸ್ತಭಾರತವೂ ಆದಿಪುರಾಣವೂ ನನ್ನ ಶರೀರವನ್ನೂ ಪ್ರಾಣವನ್ನೂ ಆಕ್ರಮಿಸಿಕೊಂಡಿರಲು ಪ್ರತಿಜ್ಞೆಮಾಡಿ ಆ ಪ್ರತಿಜ್ಞೆ ಮಾಡಿದ ರೀತಿಯಲ್ಲಿಯೇ ಒಂದು (ಭಾರತವು) ಆರು ತಿಂಗಳಲ್ಲಿಯೂ ಮತ್ತೊಂದು (ಆದಿಪುರಾಣವು) ಮೂರುತಿಂಗಳಲ್ಲಿಯೂ ಪೂರ್ಣವಾಯಿತು ಎನ್ನುವ ಹಾಗೆ ಕವಿತಾಗುಣಾರ್ಣವನಾದ ಪಂಪನು ವರ್ಣಿಸಿದನು. ೬೧. ಸಮಸ್ತ ಭಾರತವೂ ಆದಿಪುರಾಣವೂ ಲೋಕಕ್ಕೆ ಈಗ ಒಂದು ಅಲಂಕಾರದಂತಿದೆ. ಏಕೆ ಗೊತ್ತಿದೆಯೇ? ಹಿಂದೆ ಆಗಿಹೋದವರಲ್ಲಿಯೂ ಈಗ ಆಗಿರುವವರಲ್ಲಿಯೂ ಸರಸ್ವತೀಮತಿಯಾಗಿ ಪಂಪನ ಕವಿತಾಗುಣಕ್ಕೆ ಆಸೆಪಟ್ಟು ಅವನ ಮೇಲ್ಮೆಯ ಹತ್ತಿರಕ್ಕೆ ಬರುವವರೂ ಸರಸ್ವತಿಗೆ ವಿಳಾಸವನ್ನು ಹೊಸದುಮಾಡುವ ಅವನ ಮಾತಿನ ವೈಭವವನ್ನು ಮೀರುವವರೂ ಯಾರೂ ಇಲ್ಲ. ೬೨. ವ್ಯಾಸಮಹರ್ಷಿಗಳಿಂದ ಹೊಗಳಲ್ಪಟ್ಟ ಕೃತಿಯಾದ ಭಾರತವನ್ನು ಚೆನ್ನಾಗಿ ಹೇಳಿಯೂ ಪ್ರಸಿದ್ಧರಾದ ಸತ್ಕವಿಗಳ

ಚಂ|| ಪುದಿದಿರೆ ರಾಗಮುರ್ಕೆ ಪೊಸವೇಟದಲಂಪುಗಳೆಲ್ಲಮೋದಿದ
ರ್ಗಿದಱನುಯಾಯಿಗಳ್ಗೆಸೆವುದಾರ ಗುಣಂ ಸಕಳಾವನೀಶ್ವರ|
ರ್ಗದಟನಳುರ್ಕೆ ಭೃತ್ಯನಿವಹಕ್ಕೆ ಚದುರ್ ಗಣಿಕಾಜನಕ್ಕೆ ಕುಂ
ದದೆ ನೆಲಸಿರ್ಕೆ ಮಹಿತಳಕ್ಕೆ ಮದೀಯ ಕೃತಿಪ್ರಬಂಧದಿಂ|| ೬೩

ಮ||ಸ್ರ|| ಚಲದೊಳ್‌ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನುತ್ಯುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ|
ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿ
ರ್ಮಲ ಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ|| ೬೪

ಮ|| ಕರಮೞ್ಕರ್ತು ಸಮಸ್ತ ಭಾರತ ಕಥಾ ಸಂಬಂಧಮಂ ಬಾಜಿಸಲ್
ಬರೆಯಲ್ ಕೇಳಲೊಡರ್ಚುವಂಗಮಿದಱ ಳ್ ತನ್ನಿಷ್ಟವಪ್ಪನ್ನಮು|
ತ್ತರಮಕ್ಕುಂ ಧೃತಿ ತುಷ್ಟಿ ಪುಷ್ಚಿ ವಿಭವಂ ಸೌಭಾಗ್ಯಮಿಷ್ಟಾಂಗನಾ
ಸುರತಂ ಕಾಂತಿಯಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ|| ೬೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ

ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಚತುರ್ದಶಾಶ್ವಾಸಂ

ವ್ಯಾಖ್ಯಾನ ಮತ್ತು ಸಹವಾಸಗಳಿಂದ ಕೂಡಿರುವ ಆದಿಪುರಾಣವನ್ನು ಚೆನ್ನಾಗಿ ಹೇಳಿಯೂ ಪಂಪನು ವಾಕ್ಸಂಪತ್ತಿನ ಸೌಂದರ್ಯವುಳ್ಳವನೂ ಪುರಾಣರಚನೆ ಮಾಡಿದ ಕವಿಯೂ ಭೂಮಿಗೆ ಆಗಿರಲು ಹಾಗೆಯೆ; ದೇಸಿಗುಣಗಳೂ ಉನ್ನತವಾಗಿ ಅಭಿವೃದ್ಧಿ ಯಾಗುತ್ತಿರಲು ಕವಿತಾಗುಣಾರ್ಣವನು ‘ನಾಡ ಒವಜ’- ನಾಡಿನ ಓಜ ಎಂದರೆ ನಾಡಿಗೇ ಆಚಾರ್ಯನೂ ಆದನು. ೬೩. ಭೂಮಂಡಲದಲ್ಲಿ ಈ ನನ್ನ ಕೃತಿಬಂಧವನ್ನು ಓದಿದರಿಗೆ ವ್ಯಾಪ್ತವಾದ ಸಂತೋಷವೂ ಇದರಂತೆ ನಡೆದುಕೊಂಡವರಿಗೆ ಅಭಿವೃದ್ಧಿಯಾಗುತ್ತಿರುವ ಪ್ರಣಯ ವೈಭವವೂ ಸಮಸ್ತರಾಜಮಂಡಲಕ್ಕೆ ಪ್ರಕಾಶವಾದ ಔದಾರ್ಯಗುಣವೂ ಸೇವಕವರ್ಗಕ್ಕೆ ಪರಾಕ್ರಮಾತಿಶಯವೂ ವೇಶ್ಯಾಜನಕ್ಕೆ ಚಾತುರ್ಯವೂ ಕಡಿಮೆಯಾಗದೆ ನೆಲಸಿರಲಿ. ೬೪. ಚಲದಲ್ಲಿ ದುಯೋಧನನೂ ಸತ್ಯದಲ್ಲಿ ಕರ್ಣನೂ ಪೌರುಷದಲ್ಲಿ ಭೀಮಸೇನನೂ ಬಲದಲ್ಲಿ ಶಲ್ಯನೂ ಗುಣೌನ್ನತಿಯಲ್ಲಿ ಭೀಷ್ಮನೂ ಚಾಪವಿದ್ಯಾಕೌಶಲದಲ್ಲಿ ದ್ರೋಣಾಚಾರ್ಯನೂ ಸಾಹಸದ ಮಹಿಮೆಯಲ್ಲಿ ಅರ್ಜುನನೂ ಧರ್ಮದಲ್ಲಿ ಪರಿಶುದ್ಧಮನಸ್ಸುಳ್ಳ ಧರ್ಮರಾಯನೂ ಶ್ರೇಷ್ಠರಾದವರು. ಇವರಿಂದ ಭಾರತವು ಲೋಕಪೂಜ್ಯವಾಗಿದೆ. ೬೫. ಸಮಸ್ತಭಾರತಕಥಾಪ್ರಬಂಧವನ್ನು ಪ್ರೀತಿಸಿ ವಾಚಿಸಲು (ಓದಲು) ಕೇಳಲು ಬರೆಯಲು ಪ್ರಾರಂಭಮಾಡುವವನಿಗೆ ಬೇಕಾದಷ್ಟು ಅಭಿವೃದ್ಧಿಯಾಗುತ್ತದೆ. ಧೈರ್ಯ, ತೃಪ್ತಿ, ಬಲ, ವೈಭವ, ಸೌಭಗ್ಯ, ತನ್ನ ಇಷ್ಟಳಾದ ಸ್ತ್ರೀಯ ಸಂಭೋಗ, ಶಾಂತಿ, ವೃದ್ಧಿ, ವೈಭವ, ಭದ್ರ, ಶುಭ, ಮಂಗಳ ಇವೆಲ್ಲವೂ ಆಗುತ್ತವೆ. ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳವನೂ ಆದ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹದಿನಾಲ್ಕನೆಯ ಆಶ್ವಾಸವು.
***********
ಮುಂದಿನ ಭಾಗ :    ಪಂಪಭಾರತ : ಅನುಬಂಧ




*************

ಪಂಪಭಾರತ : ಗದ್ಯಾನುವಾದ - ತ್ರಯೋದಶಾಶ್ವಾಸಂ

ತ್ರಯೋದಶಾಶ್ವಾಸಂ
ಕಂ|| ಶ್ರೀ ದಯಿತನ ಹರಿಗನ ಸಂ
ಪಾದಿತಭೂಜವೀರ್ಯಮೞ್ಕೞಂ ತನಗೆರ್ದೆಯೊಳ್|
ಚೋದಿಸೆ ಪರಸಿದನಾಶೀ
ರ್ವಾದಪರಂಪರೆಯಿನಾಗಳಂತಕತನಯಂ|| ೧

ಪರಸಿ ಸಕಳಾವನೀತಳ
ಭರಮಿನಸುತನೞಯೆ ಹರಿಗನಿಂದೆನಗೀಗಳ್|
ದೊರೆಕೊಂಡುದೆಂದೊಡೇ ಬಿ
ತ್ತರಿಸಿದನೋ ರಿಪುಕುರಂಗಕಂಠೀರವನಂ|| ೨

ವ|| ಅನ್ನೆಗಮತ್ತ ದುರ್ಯೋಧನನತಿ ಸಂಭ್ರಮಾಕುಳಿತ ಪರೀತ ಪರಿವಾರಜನೋಪನೀತ ಚಂದನಕರ್ಪೂರುಮಿಶ್ರಿತ ಹಿಮಶಿಶಿರಧಾರಾಪರಿಷೇಕದಿಂದೆಂತಾನುಂ ಮೂರ್ಛೆಯಿಂದೆೞ್ಚತ್ತು ಕರ್ಣನಂ ನೆನೆದು ಸ್ಮರಣಮಾತ್ರದೊಳೆ ಶೋಕಸಾಗರಂ ಕರೆಗಣ್ಮೆ ಸೈರಿಸಲಾಱದೆ-

ಉ|| ನೀನುಮಗಲ್ದೆಯಿನ್ನೆನಗೆ ಪೇೞ್ ಪೆಱರಾರೆನಗಾಸೆ ನಿನ್ನನಿ
ನ್ನಾನುಮಗಲ್ವೆನೇ ಕೆಳೆಯ ಬೆನ್ನನೆ ಬಂದಪೆನಾಂತರಂ ಯಮ|
ಸ್ಥಾನಮನೆಯ್ದಿಸುತ್ತಿದುವೆ ದಂದುಗಮೆಂತೆರ್ದೆಮುಟ್ಟಿ ಕೂರ್ತು ಪೇೞು
ಮಾನಸವಾೞನಂಗವಿಷಯಾಪ ನೀಂ ಪೊಱಗಾಗೆ ಬಾೞನೇ|| ೩

ಚಂ|| ಒಡಲೆರಡೊಂದೆ ಜೀವಮಿವರ್ಗೆಂಬುದನೆಂಬುದು ಲೋಕಮೀಗಳಾ
ನುಡಿ ಪುಸಿಯಾಯ್ತು ನಿನ್ನಸು ಕಿರೀಟಯ ಶಾತಶರಂಗಳಿಂದೆ ಪೊ|
ಪೊಡಮೆನಗಿನ್ನು ಮೀಯೊಡಲೊಳಿರ್ದುದು ನಾಣಿಲಿ ಜೀವಮೆಂದೊಡಾ
ವೆಡೆಯೊಳೆ ನಿನ್ನೊಳೆನ್ನ ಕಡುಗೂರ್ಮೆಯುಮೞ್ಕ ಱುಮಂಗವಲ್ಲಭಾ|| ೪

ಮ|| ಅಱಯಂ ಸೋದರನೆಂದು ಧರ್ಮತನಯಂ ನಿರ್ವ್ಯಾಜದಿಂ ನಿನ್ನನಾ
ನಱವೆಂ ಮುನ್ನಱದಿರ್ದುಮೆನ್ನರಸನಾನೇಕಿತ್ತೆನಿಲ್ಲೇಕೆ ಪೇ
ೞಱಪಲ್ಕೊಲ್ದೆನುಮಿಲ್ಲ ಕಾರ್ಯವಶದಿಂ ಕೂರ್ಪಂತವೋಲ್ ನಿನ್ನನಾಂ
ನೆ ಕೊಂದೆಂ ಮುಳಿಸಿಂದಮಂಗನೃಪತೀ ಕೌಂತೇಯರೇಂ ಕೊಂದರೇ|| ೫

೧. ಜಯಲಕ್ಷ್ಮೀಪತಿಯಾದ ಅರ್ಜುನನು ಸಂಪಾದಿಸಿದ ಭುಜವೀರ್ಯವು ತನ್ನ ಹೃದಯದಲ್ಲಿ ಸಂತೋಷವನ್ನು ಹೆಚ್ಚಿಸುತ್ತಿರಲು ಧರ್ಮರಾಯನು ಆಗ ಅವನನ್ನು ಹರಕೆಯ ಪರಂಪರೆಯಿಂದ ಆಶೀರ್ವದಿಸಿದನು. ೨. ಅರ್ಜುನನಿಂದ ಕರ್ಣನು ಸಾಯಲು ಸಮಸ್ತ ಭೂಮಂಡಲದ ಆಪತ್ಯವು ತನಗೆ ಈಗ ದೊರೆಕೊಂಡಿತೆಂದು ಹೇಳಿ ಧರ್ಮರಾಯನು ಅರ್ಜುನನನ್ನು ವಿಶೇಷವಾಗಿ ಹೊಗಳಿದನು! ವ|| ಅಷ್ಟರಲ್ಲಿ ಆ ಕಡೆ ದುಯೋಧನನು ತನ್ನನ್ನು ಸುತ್ತುವರಿದಿದ್ದು ಅತ್ಯಂತ ಸಂಭ್ರಮದಿಂದ ವ್ಯಾಕುಳಿತರಾದ ಸೇವಕಜನರಿಂದ ತರಲ್ಪಟ್ಟ ಶ್ರೀಗಂಧ ಮತ್ತು ಪಚ್ಚಕರ್ಪೂರ ಮಿಶ್ರಿತವಾದ ಮಂಜಿನಷ್ಟು ತಣ್ಣಗಿರುವ ನೀರಿನಿಂದ ಸಿಂಪಿಸಲ್ಪಟ್ಟು ಹೇಗೋ ಮೂರ್ಛೆಯಿಂದ ಎಚ್ಚೆತ್ತನು. ಕರ್ಣನನ್ನು ಜ್ಞಾಪಿಸಿಕೊಂಡು ನೆನೆಸಿದ ಮಾತ್ರಕ್ಕೆ ದುಖಸಮುದ್ರವು ದಡವನ್ನು ಮೀರಿ ಉಕ್ಕಲು ಸೈರಿಸಲಾರದೆ ೩. ನೀನು ಕೂಡ ನನ್ನನ್ನು ಅಗಲಿ ಹೋದೆ. ನನಗೆ ಆಸೆಯಾಗಿರುವವರು ಬೇರೆ ಯಾರು? ನಿನ್ನನ್ನು ಬಿಟ್ಟು ನಾನು ಇರಬಲ್ಲೆನೆ? ಸ್ನೇಹಿತನೇ ಪ್ರತಿಭಟಿಸಿದವರನ್ನು ಯಮನ ಮನೆಗೆ ಸೇರಿಸುತ್ತ ನಿನ್ನ ಬೆನ್ನಿನ ಹಿಂದೆಯೇ ಬರುತ್ತೇನೆ, ಇದೇ ನನಗಿರುವ ಕರ್ತವ್ಯ. ಹೃದಯದಂತರಾಳದಿಂದ ಪ್ರೀತಿಸಿದ ನೀನು ಅಗಲಿದ ಮೇಲೆ ಕರ್ಣ, ನಾನು ಮನುಷ್ಯ ಜೀವನವನ್ನು ಬಾಳಬಲ್ಲೆನೆ? ೪. ದುಯೋಧನ ಕರ್ಣರಲ್ಲಿ ಎರಡು ಶರೀರ ಒಂದು ಪ್ರಾಣ ಎಂದು ಲೋಕವು ಹೇಳುತ್ತಿದ್ದಿತು. ಈಗ ಆ ಮಾತು ಸುಳ್ಳಾಯಿತು. ನಿನ್ನ ಪ್ರಾಣವು ಅರ್ಜುನನ ಹರಿತವಾದ ಬಾಣಗಳಿಂದ ಹೋದರೂ ನನ್ನ ನಾಚಿಕೆಯಿಲ್ಲದ ಜೀವವು ಇನ್ನೂ ಶರೀರದಲ್ಲಿದೆ ಎಂದರೆ ಕರ್ಣ ನಿನ್ನ ನನ್ನ ಅತಿಶಯವಾದ ಪ್ರೀತಿಯೂ ಸ್ನೇಹವೂ ಆವೆಡೆಯಲ್ಲಿದೆ? ೫. ಧರ್ಮರಾಯನು ನೀನು ಅವನ ಜೊತೆಯಲ್ಲಿ ಹುಟ್ಟಿದವನೆಂಬುದನ್ನು ತಿಳಿಯನು. ಸಹಜವಾಗಿಯೇ ನೀನು ಯಾರೆಂಬುದನ್ನು ನಾನು ಬಲ್ಲೆ; ಮೊದಲು ತಿಳಿದಿದ್ದರೂ ನನ್ನ ದೊರೆತನವನ್ನು ನಾನು ನಿನಗೇಕೆ ಕೊಡಲಿಲ್ಲ? ನಿನಗೆ ತಿಳಿಯಪಡಿಸುವುದಕ್ಕೂ ಇಷ್ಟಪಡಲಿಲ್ಲ? ಸ್ವಕಾರ್ಯಸಾಧನೆಗಾಗಿ ಪ್ರೀತಿಸುವ ಹಾಗೆ (ನಟಿಸಿ) ಪಾಂಡವರ ಮೇಲಿನ ಕೋಪದಿಂದ ನಿನ್ನನ್ನು ನಾನೇ ಕೊಂದೆನು. ಪಾಂಡವರು ನಿನ್ನನ್ನು

ಚಂ|| ಉದತರಂಗತಾಟತಧರಾತಳಮಂ ನಿನಗಿತ್ತು ನಿನ್ನ ಕೊ
ಟ್ಟುದನೆ ಪಸಾದಮೆಂದು ಪೊಡೆವಟ್ಟು ಮನೋಮುದದಿಂದೆ ಕೊಂಡು ಬಾ|
ೞದುವೆ ಬಯಕ್ಕೆ ಮುಂ ನಿನಗದಂ ಕಿಡಿಪಂದೆಲೆ ಕರ್ಣ ಕೇತುವಾ
ದುದು ನಿನಗಾ ವೃಕೋದರನ ಕಾಯ್ಪನೆ ಪೊತ್ತಿಸಿದೆನ್ನ ಕಾಳೆಗಂ|| ೬

ವ|| ಎಂದು ಕರ್ಣನೊಳಾದ ಶೋಕಾನಲನೊಳ್ ಬಾಯೞದು ಮೆಯ್ಮೞದು ಪಳಯಿಸುವ ನಿಜತನೂಜನ ಶೋಕಮನಾೞಸಲೆಂದು ಧೃತರಾಷ್ಟ್ರನುಂ ಗಾಂಧಾರಿಯುಂ ಬರೆವರೆ ಬರವಂ ಗೆಂಟೞಳ್ ಕಂಡು ದುಶ್ಯಾಸನನ ಸಾವಂ ನೆನೆದು ತಾಯ್ತಂದೆಯ ಮೊಗಮಂ ನೋಡಲ್ ನಾಣ್ಚಿ-

ಕಂ|| ಆನುಂ ದುಶ್ಯಾಸನನುಂ
ಕಾನೀನನುಮೊಡನೆ ಪೋಗಿ ಬೀೞ್ಕೊಂಡು ರಣ|
ಸ್ಥಾನಕ್ಕೆ ಪೋದೆವಿಮ್ಮಗು
ೞ್ದೆನೆಂದಾಂ ನಾಣ್ಚದಿವರ ಮೊಗಮಂ ನೋೞ್ಪೆಂ || ೭

ಚಂ|| ಪವನಜನಂತು ಪೂಣ್ದು ಯುವರಾಜನ ನೆತ್ತರನಾರ್ದು ಪೀರ್ದನಿಂ
ತವಗಡದಿಂ ದಿನೇಶಜನನಂಕದ ಗಾಂಡಿವಿ ಕೊಂದನೆಂತು ಪಾಂ|
ಡವರನಿದಿರ್ಚಿ ಸಾಸುವೆ ಸಂಯನೊಲ್ವುದೆ ಕಜ್ಜಮೀಗಳೆಂ
ಬವರ್ಗಳ ಮಾತುಗೇಳ್ವನಿತನಿನ್ನೆನಗಂ ಬಿದಿ ಮಾಡಿತಾಗದೇ|| ೮

ವ|| ಎಂಬೆನ್ನಗಮೆಯ್ದೆ ವಂದ ಪಿತೃದ್ವಂದ್ವ ಚರಣಕ್ಕೆ ವಿನಯವಿನಮಿತೋತ್ತಮಾಂಗ ನಾದನನಿರ್ವರುಂ ಪರಸಿ ತಡವರಿಸಿಯುಂ ತೆಬ್ಬರಿಸಿಯುಮೞ್ಕಳಪ್ಪಿಕೊಂಡಮೃತವರ್ಷಿ ಕರ ಪರಿಷೇಕದಿಂದೆ ಪುತ್ರಸ್ಪರ್ಶನಮಾಪ್ಯಾಯನಕೋಟಯಾಗೆ ಪುಳಕಿತಗಾತ್ರರುಮಾನಂದ ಬಾಷ್ಟವಾರಿ ಧಾರಾಪರಿಕಲಿತನೇತ್ರರುಮಾಗಿ ಕಿಱದಾನುಂ ಬೇಗಮಿರ್ದಲ್ಲಿ ಕಾರ್ಯವ್ಯಗ್ರ ಪಾಪಿಪಾಶಾಶ್ರಿತರೆಲ್ಲರುಂ ಕೇಳಲೆಂದು ಮಹೀಭುಜನಿಂತೆಂದಂ-

ಮ|| ಎನಗಂ ಪಾಂಡುಗಮಿಲ್ಲ ಭೇದಮೆಳೆಯಂ ಪಚ್ಚಾಳ್ವಮಾ ಪಾಂಡುನಂ
ದನರುಂ ಸೈದರೆ ನಿನ್ನೊಳೀ ಕಲಹಮುಂ ನಿನ್ನಿಂದಮಾಯ್ತೆಂದೊಡಿಂ|
ಮುನಿವೈ ಗಂಗೆಯ ಪೆರ್ಮಗಂಗೆ ಘಟಸಂಭೂತಂಗೆ ಕರ್ಣಂಗಸಾ
ಧ್ಯನೊಳಾ ಗಾಂಡಿವಿಯೊಳ್ ಕಱುತ್ತಿಱವರಾರಿಂ ಮಾಡುವಂ ಸಂಯಂ|| ೯

ಕೊಂದರೇನು? ೬. ಸಮುದ್ರದ ಅಲೆಗಳ ಹೊಡೆತವುಳ್ಳ ಈ ಭೂಮಂಡಲವನ್ನು ನಿನಗೆ ಕೊಟ್ಟು ನೀನು ಕೊಟ್ಟುದನ್ನೇ ಪ್ರಸಾದವೆಂದು ನಮಸ್ಕರಿಸಿ ಮನಸ್ಸಂತೋಷದಿಂದ ಸ್ವೀಕರಿಸಿ ಬಾಳಬೇಕೆಂಬುದೇ ನನ್ನ ಮೊದಲಿನ ಆಸೆ. ನನಗೆ ಅದನ್ನು ಕೆಡಿಸಬೇಕೆಂದೇ ಭೀಮನ ಕೋಪವನ್ನು ಹೆಚ್ಚಿಸಿದ ನನ್ನ ಯುದ್ಧವು ನಿನಗೆ (ನಾಶಮಾಡುವ) ಧೂಮಕೇತುವಾಯಿತು. ವ|| ಹೀಗೆ ದುಖ ಪಡುತ್ತಿದ್ದ ಮಗನ ದುಖವನ್ನು ಸಮಾಧಾನಪಡಿಸಬೇಕೆಂಬದು ಧೃತರಾಷ್ಟ್ರನೂ ಗಾಂಧಾರಿಯೂ ಬರುತ್ತಿರುವುದನ್ನು ದೂರದಿಂದಲೇ ತಿಳಿದು ದುಶ್ಯಾಸನನ ಸಾವನ್ನು ನೆನೆದು ತಾಯಿತಂದೆಗಳ ಬರವನ್ನು ನೋಡಲು ನಾಚಿ ೭. ನಾನೂ ದುಶ್ಯಾಸನನೂ ಕರ್ಣನೂ ಜೊತೆಯಲ್ಲಿ ಹೋಗಿ ಅಪ್ಪಣೆ ಪಡೆದು ಯುದ್ಧರಂಗಕ್ಕೆ ಹೋದೆವು. ಈಗ ನಾನು ಇನ್ನೇನೆಂದು ಹೇಳಿ ನಾಚದೆ ಇವರ ಮುಖವನ್ನು ನೋಡಲಿ? ೮. ಭೀಮನು ಹಾಗೆ ಪ್ರತಿಜ್ಞೆ ಮಾಡಿ ಯುವರಾಜನು ರಕ್ತವನ್ನು ಆರ್ಭಟಮಾಡಿ ಕುಡಿದನು. ಹೀಗೆ ಸಾಹಸದಿಂದ ಕರ್ಣನನ್ನು ಶೂರನಾದ ಅರ್ಜುನನು ಕೊಂದನು. ಪಾಂಡವರನ್ನು ಹೇಗೆ ಎದುರಿಸಿ ಗೆಲ್ಲುತ್ತೀಯೇ? ಈಗ ಸಂಗೆ ಒಪ್ಪುವುದೇ (ಸರಿಯಾದ) ಕಾರ್ಯವೆಂದು ಹೇಳುವವರ ಮಾತನ್ನು ಕೇಳುವಷ್ಟನ್ನು ಇನ್ನು ನನಗೆ ವಿ ಮಾಡಿದೆಯಲ್ಲವೇ? ವ|| ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಾಯಿ ತಂದೆಗಳ ಪಾದಕ್ಕೆ ವಿನಯದಿಂದ ತಲೆಬಗ್ಗಿಸಿ ನಮಸ್ಕಾರಮಾಡಿದವನನ್ನು ಇಬ್ಬರೂ ಹರಿಸಿದರು. ಮೈಯನ್ನು ಮುಟ್ಟಿನೋಡಿಯೂ ಸಮಾಧಾನಮಾಡಿಯೂ ಪ್ರೀತಿಯಿಂದ ಆಲಿಂಗನಮಾಡಿಕೊಂಡರು. ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಶವು ಹೆಚ್ಚಿನ ಸಂತೋಷವನ್ನುಂಟುಮಾಡಿತು. ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ ಕಣ್ಣೀರಿನ ಪ್ರವಾಹದಿಂದ ತುಂಬಿದ ಕಣ್ಣುಳ್ಳವರೂ ಆದರೂ ಸ್ವಲ್ಪ ಕಾಲವಿದ್ದು ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು ದೃತರಾಷ್ಟ್ರನು ಹೀಗೆಂದನು.

೯. ನನಗೂ ಪಾಂಡುವಿಗೂ ಭೇದವಿಲ್ಲ; ರಾಜ್ಯವನ್ನು ಭಾಗಮಾಡಿಕೊಂಡು ಆಳೋಣ. ಆ ಪಾಂಡುಪುತ್ರರೂ ನಿನ್ನಲ್ಲಿ ಸರಿಯಾಗಿ ನಡೆದುಕೊಳ್ಳುವವರೇ ಆಗಿದ್ದಾರೆ. ಈ ಜಗಳವೂ ನಿನ್ನಿಂದ ಆಯಿತು ಎಂದರೆ ಇನ್ನು ನೀನು ಕೋಪಿಸಿಕೊಳ್ಳುತ್ತೀಯೆ. ಭೀಷ್ಮ ದ್ರೋಣ

ಹರಿಣಿ|| ಪಗೆಗೆ ಕಣಿಯೊಂದುಂಟೇ ನಣ್ಪಿಂಗಮಾಗರಮುಂಟೆ ನೀಂ
ಬಗೆಯ ಪಗೆಯುಂ ನಣ್ಪುಂ ಕೆಯ್ಕೊಂಡ ಕಜ್ಜದಿನಲ್ತೆ ಪು|
ಟ್ಟುಗುಮರಸುಗಳ್ಗೆಂದೀ ಸಂದರ್ಥಶಾಸ್ತ್ರದೊಳೇಕೆ ಪೇೞ್
ಮಗನೆ ನೆಗ ಕಾರ್ಯಂ ಮಿತ್ರಾದಿ ಕಾರಕಮೆಂಬುದಂ|| ೧೦

ಕಂ|| ನೀನುಳ್ಳೊಡೆಲ್ಲರೊಳರೆಮ
ಗೇನುಮೞಲ್ ಮನದೊಳಿಲ್ಲದೆಂತೆನೆ ಮಗನೇ|
ಭಾನುವೆ ಸಾಲದೆ ಪಗಲೆನಿ
ತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ|| ೧೧

ವ|| ಅದಲ್ಲದೆಯುಂ ಪಾಂಡವರಪ್ಪೊಡೆನಗೆ ಪಾಂಡುರಾಜಂಗೆ ಬೆಸಕೆಯ್ಯದುದನೆ ಬೆಸಕೆಯ್ವರೆಂದುದಂಮೀಱುವರಲ್ಲರವರ ನಾನೆಂತುಮೊಡಂಬಡಿಹಸಿ ನೀನೆಂದುದನೆನಿಸುವೆನಿದರ್ಕೆ ಮಾರ್ಕೊಳ್ಳದೊಡಂಬಡು ನಿನ್ನಂ ಕೆಯ್ಯನೊಡ್ಡಿ ಬೇಡಿದಪ್ಪೆನೆಂದ ಧ್ವತರಾಷ್ಟ್ರನ ನುಡಿಗನುಬಲಮಾಗಿ ಗಾಂಧಾರಿಯಿಂತೆಂದಳ್-

ಚಂ|| ಕುರುಕುಳನಂದನಂ ಪವನನಂದನನೆಂಬ ಮದಾಂಧಗಂಧಸಿಂ
ಧುರೆಮೆ ಕಱುತ್ತು ಪಾಯೆ ಪಡಲಿಟ್ಟವೊಲಾದುದು ಪುಣ್ಯದೊಂದು ಪೆ|
ರ್ವರನುೞವಂತೆ ನೀನುೞದೆಯೆನ್ನಿವನ್ನರುಮಿಲ್ಲ ಮುತ್ತರುಂ
ಕುರುಡರುಮೆನ್ನದೆಮ್ಮ ನುಡಿಗೇಳ್ ಮಗನೇ ಬಗೆ ತಂದೆಗಿಂಬುಕೆಯ್|| ೧೨

ಕಂ|| ಪೋಕಿನಿತಳಸವಸದಿಂ
ದೀ ಕಲಹಂ ಧರ್ಮಸುತನನಾಂ ನಿನಗೆ ನಿರಾ|
ಪೇಕಮೊಡಂಬಡಿಸುವೆನಿಂ
ತೀ ಕಜ್ಜಂ ಕೂರ್ಪೇಡೆನಗೆ ಕೆಯ್ಕೊಳ್ ಮಗನೆ|| ೧೩

ವ|| ಎಂದನುಬಂಸಿದ ಮೋಹಪಾಶದೊಳ್ ತಾಯ್ತಂದೆಯ ನುಡಿದ ನುಡಿಯಂ ಕೇಳ್ದಭಿಮಾನಧನಂ ಸುಯೋಧನನಿಂತೆಂದಂ-

ಉ|| ದೋಷಮೆ ನಿಮ್ಮ ಪೇೞ್ದುದೆನಗೆಂತುಮೊಡಂಬಡಲಪ್ಪುದೊಂದೆ ದು
ಶ್ಯಾಸನ ರಕ್ತಪಾನದೊಳೆ ಸೊರ್ಕಿದ ಪಾತಕನಂ ಪೊರಳ್ಚಿ ಕೊಂ|
ದೀ ಸಮರಾವನೀತಳದೊಳಿಂ ಬಲಿಗೆಯ್ಜಿನಮೊಲ್ಲೆನಲ್ತೆ ನಿ
ರ್ದೋಷಿಗಳೊಳ್ ಪೃಥಾಸುತರೊಳಿಂ ಮಗುೞ್ದ್ದುಂ ಪುದುವಾೞನೆಂಬೆನೇ|| ೧೪



ಕರ್ಣರಿಗೆ ಅಸಾಧ್ಯವಾದ ಆ ಅರ್ಜುನನನ್ನು ಕೋಪದಿಂದ ಎದುರಿಸಿ ಯುದ್ಧ ಮಾಡುವವರಾರಿದ್ದಾರೆ? ಇನ್ನು ಸಂಯನ್ನು ಅವರೊಂದಿಗೆ ಮಾಡಿಕೊಳ್ಳೋಣ. ೧೦. ಹಗೆತನಕ್ಕೆ ಒಂದು ಗಣಿಯಿದೆಯೇನು? ಸ್ನೇಹಕ್ಕೆ ಒಂದು ಮನೆಯಿದೆಯೇನು? ನೀನು ಯೋಚಿಸಪ್ಪ; ರಾಗದ್ವೇಷಗಳೆರಡೂ ಅವರು ಅಂಗೀಕರಿಸುವ ಕಾರ್ಯ ದಿಂದಲ್ಲವೇ ಹುಟ್ಟುವುದು? ರಾಜರಿಗೆ ವಿಶೇಷ ಸತ್ಯವಾಗಿರುವ ಅರ್ಥಶಾಸ್ತ್ರದಲ್ಲಿ ಹೇಳಿರುವ ‘ಕಾರ್ಯವೇ ಸ್ನೇಹದ್ವೇಷಗಳಿಗೆ ಕಾರಣವಾದುದು’ ಎಂಬ ಈ ನೀತಿವಾಕ್ಯದಂತೇಕೆ ಮಾಡುವುದಿಲ್ಲ? ೧೧. ಮಗನೆ ನಮಗೆ ನೀನಿದ್ದರೆ ಎಲ್ಲರೂ ಇದ್ದಂತೆಯೇ. ಮಗನೆ ನಮಗೆ ಮನಸ್ಸಿನಲ್ಲಿ ಯಾವ ದುಖವೂ ಇಲ್ಲ; ಹೇಗೆಂದರೆ ಹಗಲಿನಲ್ಲಿ ಒಬ್ಬ ಸೂರ್ಯನಿದ್ದರೆ ಸಾಲದೇ? ಎಷ್ಟೋ ದೀವಿಗೆಗಳು ಉರಿದರೇನು, ಆರಿಹೋದರೇನು? ವ|| ಹಾಗಲ್ಲದೆಯೂ ಪಾಂಡವರಾದರೆ ಪಾಂಡುರಾಜನಿಗೆ ವಿಧೇಯರಾಗಿದ್ದಂತೆಯೇ ನನ್ನಲ್ಲಿಯೂ ವಿಧೇಯರಾಗಿದ್ದಾರೆ. ನಾನು ಹೇಳಿದುದನ್ನು ಮೀರುವವರಲ್ಲ. ಅವರನ್ನು ನಾನು ಹೇಗೊ ಒಪ್ಪಿಸಿ ನೀನು ಹೇಳುದುದಕ್ಕೆ ಒಪ್ಪಿಕೊಳ್ಳುವ ಹಾಗೆ ಮಾಡುತ್ತೇನೆ. ಇದಕ್ಕೆ ನೀನು ಪ್ರತಿಯಾಡದೆ ಒಪ್ಪಿಕೊ; ನಿನ್ನನ್ನು ಕೈಯೊಡ್ಡಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ ಧೃತರಾಷ್ಟ್ರನ ಮಾತಿಗೆ ಸಹಾಯಕವಾಗಿ (ಬೆಂಬಲವಾಗಿ) ಗಾಂಧಾರಿ ಹೀಗೆಂದಳು. ೧೨. ಕುರುಕುಲವೆಂಬ ನಂದನವನವು ಭೀಮನೆಂಬ ಮದ್ದಾನೆಯು ಕೋಪದಿಂದ ನುಗ್ಗಲು ಧ್ವಂಸವಾಯಿತು. ನಮ್ಮಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವ ಹಾಗೆ ನೀನು ಉಳಿದಿದ್ದೀಯೆ. ಇನ್ನು ಯುದ್ಧಮಾಡುವವರಾರೂ ಇಲ್ಲ. ಮುದುಕರು ಕುರುಡರು ಎನ್ನದೆ ನಮ್ಮ ಮಾತನ್ನು ಕೇಳು; ಯೋಚಿಸು; ತಂದೆಯು ಹೇಳುವುದಕ್ಕೆ ಒಪ್ಪು. ೧೩. ಈ ಜಗಳವು ಇಷ್ಟಕ್ಕೇ ಬೇಗ ನಿಲ್ಲಲಿ. ಧರ್ಮರಾಜನನ್ನು ಆಕ್ಷೇಪಣೆಯೇ ಇಲ್ಲದೆ ಒಡಂಬಡುವ ಹಾಗೆ ಮಾಡುತ್ತೇನೆ. ನನ್ನನ್ನು ನೀನು ಪ್ರೀತಿಸುವುದಾದರೆ ಈ ಕಾರ್ಯವನ್ನು ನೀನು ಅಂಗೀಕಾರಮಾಡು ವ|| ಎಂದು ಮೋಹಪಾಶದಿಂದ ಬಂತರಾದ ತಾಯಿತಂದೆಯರು ನುಡಿದ ನುಡಿಯನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಹೀಗೆಂದನು- ೧೪. ನೀವು ಹೇಳಿದುದು ನನಗೆ ದೋಷವೇನಲ್ಲ ಹೇಗೂ ಒಡಂಬಡತಕ್ಕುದೇ ಆದರೆ ಒಂದು ವಿಚಾರ ಮಾತ್ರ. ದುಶ್ಯಾಸನ ರಕ್ತಪಾನದಿಂದ ಸೊಕ್ಕಿರುವ ಶ್ರೀಮ

ವ|| ಎಂಬುದುಮಂಧಮಹೀಪತಿ ನೀನಿದಾವುದು ಮಾತಾಗಿ ನುಡಿವೈ-

ಕಂ|| ಅನುಜರ್ ನಾಲ್ವರುಮಂ ಧ
ರ್ಮನಂದನಂ ವೇಳೆಗೊಂಡು ಕಾವಂ ಪೊಣರ್ದಾ|
ವನುವರದೊಳಮೆನೆ ಪೇೞ್ ಪವ
ನನಂದನಂಗೞವು ಪೊಣರೆ ತಾಂ ಬೞ್ದಪನೇ|| ೧೫

ಎನೆ ನೃಪನೆಂದಂ ಧರ್ಮಜ
ನನುಜರ್ಕಳೊಳೊರ್ವನೞದೊಡೊಡನೞವ ಸುಯೋ|
ಧನನಲ್ಲಿ ನೂರ್ವರುಂ ತ
ನ್ನನುಜರ್ಕಳ್ ಸಾಯೆ ಬಾೞ್ವುದಂ ನಂಬಿದಿರೇ|| ೧೬

ವ|| ಎಂದು ಮತ್ರಂ ಸಂಯೋಧನನಿಂತೆಂದಂ-

ಮ|| ತಲೆದೋಱಲ್ಕಣಮಳ್ಕಿ ವೈರಿ ನೆಲನಂ ಪೋ ಪೊಕ್ಕನೆಂಬನ್ನೆಗಂ
ಚಲದಿಂದೆಯ್ದುವ ಕರ್ಣನುಗ್ರರಥಮಂ ಮುಂ ನುಂಗಿದೀ ದ್ರೋಹಿಯೊಳ್|
ನೆಲದೊಳ್ ಪಂಬಲೆ ಮತ್ತಮೆನ್ನ ಮುಳಿಸಿಂಗಾಂ ಕಾದುವೆಂ ಪೇಸಿದೆಂ
ನೆಲೆಗಂಡಂತೆ ನೆಲಕ್ಕೆ ಗೆಲ್ದೊಡಮದಂ ಚಿ ಮತ್ತಮಾನಾಳ್ವೆನೇ|| ೧೭

ವ|| ಅಂತುಮಲ್ಲದೆಯುಂ

ಚಂ|| ತೊಡರದೆ ನೀಮುಮಾ ನೆಗೞ್ದ ಪಾಂಡುವುಮೊಂದಿಯೆ ಬೞರೊಂದೊಡಂ
ಬಡು ನಿಮಗಿಲ್ಲ ಜೂದೆ ನೆವಮಾಗಿರೆ ಮೂಲಿಗನಾದೆನಾನೆ ಪೂ|
ಣ್ದಿಡುವಗೆಗೆನ್ನೊಳಾದ ಕಿಸುರೆನ್ನೊಡವೋಪುದಿದೊಳ್ಳಿತೆನ್ನ ಪಿಂ
ಬಡಿನೊಳೆ ನಣ್ಪಿನಯ್ಯ ನಿಮಗಂ ಮಗನಲ್ಲನೆ ಧರ್ಮನಂದನಂ|| ೧೮

ಉ|| ತಪ್ಪದು ಕರ್ಣನಿಂ ಬೞಕೆ ಸಂಯ ಮಾತೆನಗಾತನಿಲ್ಲದೆಂ
ತಪ್ಪುದೊ ರಾಜ್ಯಮೀ ಗದೆಯುಮೀ ಭುಜದಂಡಮುಮುಳ್ಳಿನಂ ಕೊನ|
ರ್ತಪ್ಪುದೆ ಪೇೞಮೆನ್ನ ಪಗೆ ನೋವಱದಂಜುವುದೇಕೆ ನಿಂದರೇಂ
ತಪ್ಪುದೊ ಪೇೞಮಯ್ಯ ನೊಸಲೊಳ್ ಬರೆದಕ್ಕರಮಾ ವಿಧಾತ್ರನಾ|| ೧೯

ಪಾಪಿಯಾದ ಭೀಮನನ್ನು ಹೊರಳಿಸಿ ಕೊಂದು ಈ ಯುದ್ಧರಂಗದಲ್ಲಿ ಬಲಿಯಿಕ್ಕುವವರೆಗೆ ಒಪ್ಪುಲಾರೆ. ನಿರ್ದೋಷಿಗಳಾದ ಪೃಥೆಯ ಮಕ್ಕಳಲ್ಲಿ ಪುನ ಕೂಡಿ ಬದುಕುವುದಿಲ್ಲವೆನ್ನುತ್ತೇನೆಯೇ ವ|| ಎನ್ನಲು ಕುರುಡುರಾಜನಾದ ದೃತರಾಷ್ಟ್ರನು (ದುರ್ಯೋಧನನನ್ನು ಕುರಿತು) ಇದು ಯಾವ ಮಾತೆಂದು ನುಡಿಯುತ್ತಿದ್ದೀಯೆ? ೧೫. ಧರ್ಮರಾಜನು ತನ್ನ ನಾಲ್ಕು ಜನ ತಮ್ಮಂದಿರಲ್ಲಿ ಯಾವ ಯುದ್ಧದಲ್ಲಾದರೂ ಯಾರೊಬ್ಬರು ಸತ್ತರೂ ತಾನೂ ಸಾಯುತ್ತೇನೆಂದು ಪ್ರತಿಜ್ಞೆಮಾಡಿ ರಕ್ಷಿಸುತ್ತಿರುವಾಗ ಭೀಮನಿಗೆ ನಾಶವುಂಟಾದರೆ ತಾನು ಬದುಕುತ್ತಾನೆಯೇ? ೧೬. ಎನ್ನಲು ದುರ್ಯೋಧನನೆಂದನು. ತಮ್ಮಂದಿರು ನಾಲ್ವರಲ್ಲಿ ಒಬ್ಬನು ಸತ್ತರೂ ಜೊತೆಯಲ್ಲಿಯೇ ಧರ್ಮರಾಯನು ಸಾಯುತ್ತಾನೆ. ದುಯೋಧನನು ಮಾತ್ರ ತನ್ನ ತಮ್ಮಂದಿರು ನೂರುಜನವೂ ಸತ್ತಿರುವಾಗ ಅವನು ಬದುಕುತ್ತಾನೆಂದು ನಂಬಿದಿರೇನು? ವ|| ಎಂದು ಪುನ ದುರ್ಯೋಧನನು ಹೀಗೆಂದನು -೧೭. ವೈರಿಯು ಕಾಣಿಸಿಕೊಂಡು ಎದುರಾಗುವುದಕ್ಕೆ ಹೆದರಿ ತನ್ನ ನೆಲವನ್ನು, ಛೀ ಹೋಗಿ ಹೊಕ್ಕನು ಎಂದು ಹೇಳುವಷ್ಟರಲ್ಲಿಯೇ ಛಲದಿಂದ ಬರುತ್ತಿದ್ದ ಕರ್ಣನ ಭಯಂಕರವಾದ ತೇರನ್ನು ಮೊದಲೇ ನುಂಗಿದ ಈ ದ್ರೋಹಿಯಾದ ಭೂಮಿಯಲ್ಲಿ ಪುನ ಹಂಬಲೇ? ನನ್ನ ಕೋಪಕ್ಕಾಗಿ ನಾನು ಕಾದುತ್ತಿದ್ದೇನೆ. (ಇದು ಅಶಾಶ್ವತ ಎಂಬ) ವಾಸ್ತವಾಂಶವನ್ನು ತಿಳಿದೇ ಈ ನೆಲಕ್ಕೆ ಹೇಸಿದ್ದೇನೆ. ಗೆದ್ದರೂ ಛಿ ಪುನ ನಾನು ಅದನ್ನು ಆಳುತ್ತೇನೆಯೇ? -ವ|| ಹಾಗಲ್ಲದೆಯೂ ೧೮. ನೀವೂ ಆ ಪಾಂಡವರೂ ಯಾವ ವೈಮನಸ್ಯವೂ ಇಲ್ಲದೆ ಹೊಂದಿಕೊಂಡೆ ಬಾಳಿದಿರಿ. ನಿಮಗೆ ಒಂದು ಅಸಮಾಧಾನವೂ ಇಲ್ಲ. ಜೂಜೇ ಕಾರಣವಾಗಲು ಈ ಪ್ರತಿಜ್ಞೆಮಾಡಿದ ಬದ್ದದ್ವೇಷಕ್ಕೆ ನಾನೇ ಮೊದಲಿಗನಾದೆ. ನನ್ನಲ್ಲಿ ಹುಟ್ಟಿದ ಈ ಜಗಳವು ನನ್ನ ಜೊತೆಯಲ್ಲಿಯೇ ಹೋಗುವುದು ಒಳ್ಳೆಯದು. ನನ್ನ ಹಿಂದುಗಡೆ (ನಾನು ಸತ್ತ ಬಳಿಕ) ಅಪ್ಪಾ ಧರ್ಮರಾಯನೂ ನಿಮಗೆ ಮಗನಲ್ಲವೇ? (ನೀವು ಅವನೊಡನೆ ಸುಖವಾಗಿ ಬಾಳಬಹುದು) ೧೯. ಕರ್ಣನಾಗಿ ಹೋದಮೇಲೆ ಸಂಯ ಮಾತು ತಪ್ಪು (ನನಗೆ ದೋಷಯುಕ್ತವಾದುದು) ಅವನಿಲ್ಲದೆ ನನಗೆ ರಾಜ್ಯವು ಹೇಗಾಗುತ್ತದೆ? ಈ ಗದೆಯೂ ಬಾಹುದಂಡವೂ ಇರುವವರೆಗೆ ನನ್ನ ಶತ್ರುವು ಚಿಗುರಿಕೊಳ್ಳುತ್ತಾನೇಯೇ, ದುಖವನ್ನು ಅನುಭವಿಸಿಯಾವ ಮೇಲೆಯೂ ಹೆದರುವುದೇಕೆ?

ಮ|| ಸ್ರ|| ನರನಂ ಮುಂ ಕೊಲ್ವೆನಾಂ ಕರ್ಣನನೞದುದಱಂ ಕೊಲ್ವೆನಾ ಭೀಮನಂ ಸಂ
ಗರದೊಳ್ ಸೀಳ್ದೊಟ್ಟಿ ದುಶ್ಸಾಸನನೞಲನದಂ ನೀಗುವೆಂ ಪೋಕುಮಂತಿ|
ರ್ವರುಮಂ ಕೊಂದಂದು ಮೇಣಾನವರಿದಿರಿರೊಳ್ ಕಾದಿ ಸತ್ತಂದು ಮೇಣ್ ವಿ
ಸುರಿತಂ ಮತ್ಕೋಪಮುಂ ನಿಮ್ಮಡಿಯುಮನಿದೆ ಬೀೞ್ಕೊಂಡೆನಿಂ ಪೋಗಿ ಮೇೞಂ|| ೨೦

ವ|| ಎಂದು ತಾಯ್ಗಂ ತಂದೆಗಮೆಱಗಿ ಪೊಡೆವಟ್ಟು ಪೋಗಲ್ವೇೞ್ದು ಸಂಸಾರಾಸಾರಸತೆಯ ನಱದನುಂ ಮಹಾಸತ್ತ್ವನುಮಪ್ಪುದಱಂ ತನ್ನಂ ತಾನೆ ಸಂತೈಸಿಯುಂ ಚೇತರಿಸಿಯುಂ ಮಜ್ಜನ ಭೋಜನಾನುಲೇಪನ ತಾಂಬೂಲಾದಿಗಳೊಳ್ ಮಹಾಹವ ಖೇದಮುಮಂ ಮನಖೇದಮುಮ ನಾಱಸಿ ಮಂತ್ರಶಾಲಾಂತಸ್ಥಿತ ಕನಕವಿಷ್ಟರಾರೂಢನಾಗಿ ಶಲ್ಯ ಶಕುನಿ ಕೃಪ ಕೃತವರ್ಮಾಶ್ವತ್ಥಾಮ ಪ್ರಧಾನ ವೀರಪುರುಷರಂ ಬರಿಸಿ ಯಥೋಚಿತಪ್ರತಿಪತ್ತಿಗಳೊಳಿರಿಸಿ ಪೇೞಮಿನ್ನೆಮ್ಮಗೆಯ್ವ ನಿಯೋಗಮೇನೆನೆ ಶಾರದ್ವತನಿಂತೆಂದಂ-

ಉ|| ಸಂಗತ ನೀತಿಶಾಸ್ತ್ರವಿದರಪ್ಪರವಂದಿರ ತಮ್ಮ ತಮ್ಮ ಕ
ಜ್ವಂಗಳ ಮೆಯ್ಗಳೊಳ್ ಪುಸಿದದಂ ಕಡುನನ್ನಿಯೆ ಮಾಡಿ ತೋರ್ಪರು|
ತ್ತುಂಗ ಸುಸೂಕ್ಷ್ಮಪಾರ್ಶ್ವಕೃಶ ಕೋಮಳ ನಿಮ್ನ ಘನೋನ್ನತ ಪ್ರದೇ
ಶಂಗಳನಾ ಸಮಾನತಳದಲ್ಲಿಯೆ ಚಿತ್ರಕನೆಯ್ದೆ ತೋರ್ಪವೋಲ್|| ೨೧

ವ|| ಅದಱನೆಂತಪ್ಪ ಬುದ್ಧಿಯೊಡೆಯರ ಪೇೞ್ವಸಾಮಾನ್ಯಮಪ್ಪುಪಾಯಂಗಳುಂ ನಿನಗೆ ದೈವಂ ವಿಮುಖಮಪ್ಪುವಱಂದಪಾಯಂ ಬಹುಳವಾಗಿ ಬಂದುದಾಱುಂ ಗುಣಂಗಳನೆ ತಂದುವು ಮೌಲ ಭೃತ್ಯ ಸುಹೃತ್ ಶ್ರೇಣಿ ಮಿತ್ರಾಟವಿಕತಂತ್ರಂಗಳ್ ಪಣ್ಣಿದ ಜಂತ್ರಂಗಳಂತೆ ಕೞಕುೞ ಮಾದುವಾರ್ಗಮಭೇದ್ಯರುಮಸಾಧ್ಯರುಮಪ್ಪಯೋನಿಸಂಭವರೆ ಹೇಳಸಾಧ್ಯರಾದವರು ಕಾರಣದಿಂ-

ಹರಿಣಿ|| ಅೞದರಕರ್ ಭೀಷ್ಮದ್ರೋಣಾಂಗನಾಯಕರೀಗಳಿ
ನ್ನುೞದರವರಿಂ ಮೇಲೆಂಬನ್ನರ್ ಮಹಾರಥರಲ್ತೆ ಮುಂ|
ಕೞದುದಳೇಂ ನಷ್ಟಂ ನಷ್ಟಂ ಮೃತಂ ಮೃತಮೆಂಬುದಿ
ನ್ನೞದಿಲಿದೇಕಿಲ್ಲಿಂ ಮೇಲಪ್ಪುದಂ ಬಗೆ ಭೂಪತೀ|| ೨೨

ಅಪ್ಪಾ ಯುದ್ಧವನ್ನು ನಿಲ್ಲಿಸಿದರೂ ಬ್ರಹ್ಮನು ಹಣೆಯಲ್ಲಿ ಬರೆದ ಅಕ್ಷರ ತಪ್ಪುತ್ತದೆಯೇ ಏನು? ೨೦. ಕರ್ಣನನ್ನು ಸಾಯಿಸಿದುದರಿಂದ ಆರ್ಜುನನನ್ನು ಮೊದಲು ಕೊಲ್ಲುತ್ತೇನೆ. ಆ ಭೀಮನನ್ನು ಯುದ್ಧದ್ಲಲಿ ಸೀಳಿ ರಾಶಿ ಹಾಕಿ ದುಶ್ಯಾಸನನ ದುಖವನ್ನು ಪರಿಹಾರಮಾಡಿಕೊಳ್ಳುತ್ತೇನೆ. ಹಾಗೆ ಅವರಿಬ್ಬರನ್ನು ಕೊಂದ ದಿನ ಅಥವಾ ನಾನು ಅವರೆದುರಿಗೆ ಕಾದಿ ಸತ್ತ ದಿನ ನನ್ನ ಉರಿಯುತ್ತಿರುವ ಕೋಪವು ಶಮನವಾಗುತ್ತದೆ. ನಿಮ್ಮ ಪಾದಗಳನ್ನು ಬೀಳ್ಕೊಂಡೆನು (ದಯಮಾಡಿ) ಇನ್ನು ನೀವು ಹೋಗಿಏಳಿ. ವ|| ಎಂದು ತಾಯಿಗೂ ತಂದೆಗೂ ನಮಸ್ಕಾರ ಮಾಡಿ ಹೋಗಹೇಳಿ ಸಂಸಾರದ ಅಸಾರತೆಯನ್ನು ತಿಳಿದವನೂ ಮಹಾಸತ್ವನೂ ಆದುದರಿಂದ ತಾನೇ ತನ್ನನ್ನು ಸಮಾಧಾನಮಾಡಿಕೊಂಡೂ ಚೇತರಿಸಿಕೊಂಡು. ಸ್ನಾನ, ಊಟ, ಗಂಧ, ತಾಂಬೂಲ ಮೊದಲಾದವುಗಳಿಂದ ಮಹಾಯುದ್ಧದ ಆಯಾಸವನ್ನೂ ಮನಸ್ಸಿನ ದುಖವನ್ನೂ ಹೋಗಲಾಡಿಸಿಕೊಂಡನು. ಮಂತ್ರಶಾಲೆಯ ಒಳಗಿರುವ ಚಿನ್ನದ ಪೀಠದ ಮೇಲೆ ಕುಳಿತು ಶಬ್ದ, ಶಕುನಿ, ಕೃಪ, ಕೃತವರ್ಮ, ಅಶ್ವತ್ಥಾಮರೇ ಮೊದಲಾದ ಮುಖ್ಯ ವೀರಪುರುಷರನ್ನು ಬರಮಾಡಿ ಯಥೋಚಿತವಾದ ಸತ್ಕಾರಗಳನ್ನು ಮಾಡಿ ‘ನಾವು ಇನ್ನು ಮಾಡಬೇಕಾದ ಕಾರ್ಯವೇನೆಂದು ಹೇಳಿ’ ಎನ್ನಲು ಕೃಪನು ಹೀಗೆಂದು ಹೇಳಿದನು. ೨೧. ಚಿತ್ರವನ್ನು ಬರೆಯುವವನು ಅತಿ ಎತ್ತರವಾದ, ಅತಿಸೂಕ್ಷ್ಮವಾದ, ಪಕ್ಕದಲ್ಲಿರುವ ತೆಳ್ಳಗಿರುವ, ಕೋಮಲವಾಗಿರುವ, ತಗ್ಗಾಗಿರುವ, ದಪ್ಪವಾಗಿರುವ, ಉನ್ನತವಾಗಿರುವ ಪ್ರದೇಶಗಳನ್ನು (ತಾವು ಬರೆಯುವ) ಪಟದ (ಚಿತ್ರದ) ಸಮ ಪ್ರದೇಶದಲ್ಲಿಯೇ ತೋರಿಸುವ ಹಾಗೆ ಚೆನ್ನಾಗಿ ನೀತಿಶಾಸ್ತ್ರವನ್ನು ತಿಳಿದವರು ತಮ್ಮ ತಮ್ಮ ಕಾರ್ಯಗಳ ವಿಷಯದಲ್ಲಿ ಸುಳ್ಳಾದುದನ್ನೂ ಪೂರ್ಣ ಸತ್ಯವನ್ನಾಗಿಯೇ ಮಾಡಿ ತೋರಿಸುವರು. ವ|| ಆದುದರಿಂದ ಎಂತಹ ಬುದ್ಧಿವಂತರಾದವರೂ ಹೇಳುವ ಸಾಮಾನ್ಯವಾದ ಉಪಾಯಗಳೂ ನಿನಗೆ ದೈವ ವ್ಯತ್ಯಾಸವಾಗಿರುವುದರಿಂದ ವಿಶೇಷ ಅಪಾಯಕಾರಿಯಾದ ರಾಜ ಸಂ ವಿಗ್ರಹಯಾನ, ಆಸನ, ಸಂಶಯ, ದ್ವೆ ಭಾವ ಎಂಬ ಆರು ಗುಣಗಳನ್ನೇ ಉಂಟುಮಾಡಿದವು. ಮೌಲ, ಭೃತ್ಯ, ಸಹೃತ್, ಶ್ರೇಣಿ, ಮಿತ್ರ, ಆಟವಿಕ ತಂತ್ರಗಳು ಸಿದ್ಧಪಡಿಸಿದ ಕೃತಕಯಂತ್ರಗಳಂತೆ ಚೆಲ್ಲಾಪಿಲ್ಲಿಯಾದವು. ಯಾರೂ ಭೇದಿಸುವುದಕ್ಕಾಗದವರೂ, ಅಸಾಧ್ಯರೂ ಅಯೋನಿಜರೂ ಆದ ದ್ರೋಣಾಚಾರ್ಯರೇ ಆಟದಲ್ಲಿ ಗೆಲ್ಲುವಂತೆ ಸುಲಭವಾಗಿ ಜಯಿಸಲ್ಪಟ್ಟರು. ಆ ಕಾರಣದಿಂದ ೨೨. ಅಕರಾದ ಭೀಷ್ಮದ್ರೋಣ ಕರ್ಣರು ಸತ್ತರು. ಇನ್ನುಳಿದವರು ಮಹಾರಥರು ಅವರಿಗಿಂತ ಮೇಲೆನ್ನುವರೆಲ್ಲವೇ? ಮೊದಲು ಕಳೆದುಹೋದುದನ್ನು ಚಿಂತಿಸುವುದರಲ್ಲಿ ಏನು ಪ್ರಯೋಜನ? ನಷ್ಟವಾದುದು ನಷ್ಟವಾಯಿತು, ಸತ್ತದ್ದು ಸತ್ತುಹೋಯಿತು ಎಂದುಕೊಳ್ಳುವುದು. ಇನ್ನು ದುಖಿಸಬೇಡ, ಮಹಾರಾಜನೇ

ಕಂ|| ನೆಱವೊಡೆ ನೆರವೊಳೆಮಿನಿಬರು
ಮಿಱ ಕಲಹಮಪಾಯ ಬಹುಳಮಿನ್ನುಂ ನಯದ|
ತ್ತೆಱಗುವೊಡೆ ಸಂ ಹರಿಗನೊ
ಳುಱುಗುಂ ನಿನಗಿಂತಿವೆರಡೆ ಕಜ್ಜಂ ನೃಪತೀ|| ೨೩

ವ|| ಎಂಬುದುಂ ಬೞಕ್ಕಿನ ನುಡಿಗೆ ಸೈರಿಸಲಾಱದೆ ಫಣಿಕೇತನನಿಂತೆಂದಂ-

ಮ|| ಪೞವಾಡಯ್ದನೆ ಬೇಡೆಯುಂ ಕುಡದ ನಾನೇನೆಂದು ಸಂಧಾನಮಂ
ಗೞಯಿಪ್ಪೆಂ ಗೞಯಿಪ್ಪನಂಗನೃಪನಂ ನೀನೆತ್ತಿ ತಂದೆನ್ನ ಮುಂ|
ದಿೞಪಲ್ಕಾರ್ಪೊಡಮಾವುದಾಗಿ ಕೃಪ ನೀಂ ಪೇೞದ್ದಪ್ಪೆ ಮಾತನಿ
ನ್ನುೞ ದುರ್ಯೋಧನನಲ್ಲನೇ ಕಳದೊಳಂ ಕಾಣ್ದಂತು ಕೌಂತೇಯರಂ|| ೨೪

ವ|| ಎಂಬುದು ಜಳಧರಧ್ವನಿಯಿನಶ್ವತ್ಥಾಮನಿಂತೆಂದಂಂ-

ಚಂ|| ಕುಳಬಳಶೌರ್ಯಧೈರ್ಯಯುತರೆಲ್ಲರುಮಂ ಪೆಱಗಿಕ್ಕಿ ಕರ್ಣನಂ
ಪಳಯಿಸುತಿರ್ಪೆಯೇನೊ ಗಳ ನಿನ್ನಯ ತಮ್ಮನ ನೆತ್ತರಂ ಭಯಂ|
ಗೊಳೆ ಪವಮಾನಸೂನು ತವೆ ಪೀರ್ದೆಡೆಯೊಳ್ ಕಲಿ ಕರ್ಣನೇಕೆ ಪೇೞು
ಮಿಳ ಮಿಳ ನೋಡುತಿರ್ದನವನುರ್ಕನಿಳಾಪರುಂಟೆ ನಿನ್ನವೋಲ್|| ೨೫

ಕಂ|| ಅಂಬಿಗನೊಳಾದುದಿದು ಋಣ
ಸಂಬಂಧಂ ನಿನಗಮೋಘಮಿದನುೞದವರಾ|
ರ್ಗಂ ಬಿಸುಡಲ್ಕೇಂ ಬರ್ಕುಮೆ
ನೀಂ ಬೆಸಸುವುದೆನ್ನನಾಂತರಂ ತವೆ ಕೊಲ್ವೆಂ|| ೨೬

ವ|| ಎಂದಶ್ವತ್ಥಾಮಂ ಕರ್ಣನಂ ಪೞದು ನುಡಿದೊಡಾ ನುಡಿಗೆ ಮುನಿದು ಕೊಲ್ವನಿತುವರಂ ಬಗೆದು ದುರ್ಯೋಧನನಿಂತೆಂದಂ-

ಕಂ|| ನಿನ್ನಿಂದಂ ತ್ರಿಭುವನ ರಾ
ಜ್ಯೋನ್ನತಿ ಬಂದೆನಗೆ ಸಾರ್ಗುಮಪ್ಪೊಡಮೊಲ್ಲೆಂ|
ನೀನ್ನುಡಿದು ಬರ್ದುಕಿದೈ ಪೆಱ
ರೆನ್ನಿದಿರೊಳ್ ನುಡಿದು ಕರ್ಣನಂ ಬರ್ದುಕುವರೇ|| ೨೭

ಇಲ್ಲಿಂದ ಮುಂದಾಗಬೇಕಾದುದನ್ನು ಯೋಚಿಸು. ೨೩. ಯುದ್ಧಮಾಡುವುದಾದರೆ ನಾವಿಷ್ಟು ಜನವೂ ಸಹಾಯಕ್ಕೆ ಇದ್ದೇವೆ. ಯುದ್ಧಮಾಡು. ಯುದ್ಧವು ಹೆಚ್ಚಿನ ಅಪಾಯವುಳ್ಳದ್ದು ಎಂದು ಸಂಯ ಕಡೆ ಒಲಿಯುವ ಪಕ್ಷದಲ್ಲಿ ಆರ್ಜುನನಲ್ಲಿ ಸಂಯಾಗುತ್ತದೆ. ರಾಜನೇ ನಿನಗಿವೆರಡೇ (ಮಾಡಬೇಕಾದ) ಕಾರ್ಯಗಳು. ವ|| ಎನ್ನಲು ಆಮೇಲೆ (ಎರಡನೆಯ ಸಲ) ಹೇಳಿದ ಮಾತಿಗೆ ಸೈರಿಸಲಾರದೆ ದುಯೋಧನನು ಹೀಗೆಂದನು. ೨೪. ಹಳೆಯ ಗ್ರಾಮಗಳೈದನ್ನು ಬೇಡಿದರೂ ಕೊಡದ ನಾನು ಏನೆಂಬುದಾಗಿ ಸಂಯನ್ನುಂಟುಮಾಡಲಿ? ಕರ್ಣನನ್ನು ನನ್ನ ಮುಂದೆ ತಂದು ಇಳಿಸುವುದಕ್ಕೆ ಸಮರ್ಥನಾದರೆ (ಆಗ ಸಂಯನ್ನು) ಗಳಿಯುಸುತ್ತೇನೆ. ಕೃಪನೇ ನೀನು ಈ ಮಾತನ್ನು ಏನೆಂದು ಹೇಳುತ್ತೀಯೆ. ಇನ್ನು ಮಾತನ್ನು ಬಿಡು. ಯುದ್ಧಭೂಮಿಯಲ್ಲಿ ಪಾಂಡವರನ್ನು ಕಾಣುವ ದುರ್ಯೋಧನನೆಂಬ (ಆಶ್ಚರ್ಯವಾದ) ಹೆಸರುಳ್ಳವನಲ್ಲವೇ ನಾನು? ವ|| ಎನ್ನಲು ಗುಡುಗಿನ ಶಬ್ದದಿಂದ ಅಶ್ಚತ್ಥಾಮನು ಹೀಗೆಂದನು- ೨೫. ಕುಲ, ಬಲ, ಶೌರ್ಯ ಧೈರ್ಯದಿಂದ ಕೂಡಿದವರೆಲ್ಲರನ್ನೂ ಬಿಟ್ಟು ಕರ್ಣನನ್ನು ಕುರಿತು ಪ್ರಲಾಪಮಾಡುತ್ತಿದ್ದೀಯೆ. ನಿಜ, ನಿನ್ನ ತಮ್ಮನಾದ ದುಶ್ಯಾಸನನ ರಕ್ತವನ್ನು ಭಯವನ್ನುಟುಮಾಡುತ್ತಿರುವ ಹಾಗೆ ಭೀಮನು ಪೂರ್ಣವಾಗಿ ಕುಡಿದ ಸಂದರ್ಭದಲ್ಲಿ ಶೂರನಾದ ಕರ್ಣನೇಕೆ ಹೇಳು ಮಿಟಮಿಟನೆ ನೋಡುತ್ತಿದ್ದ? ನಿನ್ನ ಹಾಗಿರುವ ರಾಜರೂ ಉಂಟೇ? ೨೬. ನಿನಗೆ ಅಂಬಿಗರವನಲ್ಲಿ ವಿಶೇಷ ಋಣಸಂಬಂಧವಾಯಿತು. ಇದನ್ನು ಬಿಡಿಸಲು ಉಳಿದವರಿಗೆ ಸಾಧ್ಯವೇ? ನೀನು ಅಪ್ಪಣೆ ಕೊಡು; ಪ್ರತಿಭಟಿಸಿದವರನ್ನು ಪೂರ್ಣವಾಗಿ ಕೊಲ್ಲುತ್ತೇನೆ. ವ|| ಎಂದು ಅಶ್ವತ್ಥಾಮನು ಕರ್ಣನನ್ನು ನಿಂದಿಸಿ ಮಾತನಾಡಲು ಆ ಮಾತಿಗೆ ಕೋಪಿಸಿಕೊಂಡು ಅವನನ್ನು ಕೊಂದು ಹಾಕುವವರೆಗೂ ಯೋಚಿಸಿ ದುರ್ಯೋಧನನು ಹೀಗೆಂದನು. ೨೭. ನಿನ್ನಿಂದ ಮೂರುಲೋಕದ ರಾಜ್ಯಾಪತ್ಯದ ವೈಭವವು ಬಂದು ನನಗೆ ಸೇರುವುದಾದರೂ ನನಗೆಬೇಡ, ಕರ್ಣನ ವಿಷಯವಾಗಿ (ಕೆಟ್ಟುದನ್ನು) ಆಡಿ ನೀನಾಗುವ ಹೊತ್ತಿಗೆ ಬದುಕಿದ್ದೀಯೆ. ಇತರರು ಎಂದುಕೊಳ್ಳುವುದು. ಇನ್ನು ದುಖಿಸಬೇಡ, ನನ್ನೆದುರಿನಲ್ಲಿ ಕರ್ಣನನ್ನು ನಿಂದಿಸಿ

ಚಂ|| ನುಡಿ ನಿನಗಂ ದಿನೇಶತನಯಂಗಮದೆನ್ನಯ ಪಕ್ಕದಾದೊಡಂ
ಮಿಡುಕದೆ ಕೇಳ್ವೆನಲ್ಲಿ ಸಮನಿರ್ವರುಮಾತನತೀತನಾದ ಪಿಂ|
ಬಡಿನೊಳದೆಂತು ಪೇೞು ಪೞಯೆ ಕೇಳ್ವೆನೊ ಕೇಳ್ದೊಡೆ ಚಿ ಪೆಱಂ ಪೆಱಂ
ನುಡಿದೊಡೆ ಕೇಳ್ದನೆಂದೆನಗೆ ನೋಯನೆ ಸಗ್ಗದೊಳಿರ್ದಿನಾತ್ಮಜಂ|| ೨೮

ವ|| ಎಂಬುದುಮೀ ನುಡಿಯೆ ನುಡಿಯೆ ನಿನ್ನ ಕೂರ್ಮೆಗಂ ತಕ್ಕೂರ್ಮೆಗಂ ದೊರೆಯಪ್ಪುದಾದೊಡಮರಾತಿಸೈನ್ಯಮಂ ತವೆ ಕೊಂದಲ್ಲದೆ ನಿನ್ನ ಮೊಗಮಂ ನೋಡೆನೆಂದಶ್ವತ್ಥಾಮನಾಸ್ಥಾನದಿಂದೆೞ್ದು ಪೋದನಾಗಳ್ ಭೂನಾಥಂ ಮದ್ರರಾಜನನಿಂತೆಂದಂ-

ಚಂ|| ಇನತನಯಂಗೆ ಸಾವುಮೆನಗಿಂತಿನಿತೊಂದೞಲುಂ ದಿನೇಶ ಪು
ತ್ರನೆ ನಿಮಗಿಂಬುಕೆಯ್ಯದುದಱಂ ದೊರೆಕೊಂಡುದು ವೀರ ಲಕ್ಷ್ಮಿನಿ|
ಮ್ಮನುಬಲದಿಂದಮಲ್ಲದೆನಗಾಗದು ದಲ್ ಸಲೆ ಪಟ್ಟಮಂ ಸಮಂ
ತೆನಗೆಯೆ ಮಾೞ್ಪೊಡೇ ತೊದಳೊ ನೀಮೆ ದಲಾಂಪುದು ಬೀರವಟ್ಟಮಂ|| ೨೯

ವ|| ಎಂಬುದುಂ ಶಬ್ಯನಿಂತಿರ್ದಿನಿಬರೊಳಮಾನಾವಾಳ ದೊರೆಲಂ ಬೆಸನಂ ನೀಮೆನಗೆ ದಯೆಗೆಯ್ವಿರೆಂಬುದೆಲ್ಲಮೆನಗೆ ಸೈಪುಯೆ ಸ್ವಾಮಿ ಸಂಪತ್ತುಮಂತೆಗೆಯ್ವೆನೆಂದು ಷೋಡಶ ರಾಜಭರಮಂ ತಾಳ್ದುವಂತೆ ಸೇನಾಪತ್ಯಭಾರಮಂ ಮದ್ರರಾಜಂ ತಾಳ್ದಿ-

ಕಂ|| ಮುಟ್ಟುಗಿಡೆ ತಾನೆ ತನ್ನಂ
ಕಟ್ಟಿಸಿಕೊಳ್ವಂತೆ ಬೀರವಟ್ಟಮನಾಗಳ್|
ಕಟ್ಟಿಸಿಕೊಂಡಂ ಶಲ್ಯಂ
ಕಟ್ಟುದುದಂ ಕಳೆಯಲಾರ್ಗಮೇಂ ತೀರ್ದಪುದೇ|| ೩೦

ವ|| ಅನ್ನೆಗಮಿತ್ತ ತದವೃತ್ತಾಂತಮಂ ಸಂಚಳಿತ ಚಾರ ಚಕ್ಷುಗಳಿಂದಂ ಧರ್ಮಪುತ್ರನಱದು ನರಕಾಂತಕಂಗೆ ಬೞಯನಟ್ಟಿ ಬರಿಸಿ ಪೇಡೆ ನಿಶಾಟ ರಾಜ ಕಿರೀಟ ಕೋಟಿ ತಾಟಿತ ಭುಜಂ ಚತುರ್ಭಜನಿಂತೆಂದಂ-

ಮ|| ಅದಟುಂ ಕಾರ್ಮುಕವಿದ್ಯೆಯುಂ ಭುಜಬಳಾವಷ್ಟಂಭಮುಂ ಸಂದು ನಿಂ
ದುದು ಅಲ್ಯಂಗವನೊರ್ವನಲ್ತೆ ನಮಗಂ ಹೃಚ್ಛಲ್ಯನಾತಂಗೆ ಕ|
ಟ್ಟಿದಿರೊಳ್ ನಿಲ್ವೊಡೆ ನೀನೆ ನಿ ಲ್ವೆಯದಱಂ ನಿಶ್ಯಲ್ಯಮಪ್ಪಂತು ನಿ
ನ್ನೊದವಿಂ ಮಾೞುೞ ದಗಾಧಸಾಗರಪರೀತಾಶೇಷ ಭೂಭಾಗಮಂ|| ೩೧

ಬದುಕುತ್ತಿದ್ದರೆ? ೨೮. ನಿನಗೂ ಕರ್ಣನಿಗೂ ನನ್ನ ಸಮಕ್ಷಮದಲ್ಲಿ ವಾಗ್ವಾದವಾದರೆ ಚಲಿಸದೆ ಕೇಳುತ್ತೇನೆ. ಅಲ್ಲಿ ಇಬ್ಬರೂ ಸಮ. ಅವನು ಸತ್ತುಹೋದ ಬಳಿಕ ಅದು ಹೇಗೆ ಅವನ ವಿಷಯವಾದ ನಿಂದೆಯನ್ನು ಕೇಳುವೆನು ಹೇಳು. ಹಾಗೆ ಕೇಳಿದರೆ ಸ್ವರ್ಗದಲ್ಲಿರುವ ಕರ್ಣನು ಚಿ, ಇತರರು ನನ್ನನ್ನು ಬಯ್ದರೆ (ದುರ್ಯೋಧನನು) ಇದನ್ನು ಕೇಳಿದನು ಎಂದು ನನ್ನ ವಿಷಯದಲ್ಲಿ ನೊಂದುಕೊಳ್ಳುವುದಿಲ್ಲವೇ? ವ|| ಎನ್ನಲು ಈ ಮಾತೇ ನಿನ್ನ ಸ್ನೇಹಕ್ಕೂ ಯೋಗ್ಯವಾದ ನಡತೆಗೂ ಸಮಾನವಾಗಿದೆ (ಯೋಗ್ಯವಾಗಿದೆ). ಆದರೂ ಶತ್ರುಸೈನ್ಯವನ್ನು ಪೂರ್ಣವಾಗಿ ಕೊಂದಲ್ಲದೆ ನಿನ್ನ ಮುಖವನ್ನು ನೋಡುವುದಿಲ್ಲ ಎಂದು ಅಶ್ವತ್ಥಾಮನು ಅಲ್ಲಿಂದ ಎದ್ದುಹೋದನು. ಆಗ ರಾಜನಾದ ದುರ್ಯೋಧನನು ಶಲ್ಯನನ್ನು ಕುರಿತು ಹೀಗೆಂದನು -೨೯, ಕರ್ಣನಿಗೆ ಸಾವೂ ನನಗೆ ಇಷ್ಟೊಂದು ದುಖವೂ ಕರ್ಣನು ನೀವು ಹೇಳಿದ ಹಾಗೆ ಕೇಳದುದರಿಂದುಂಟಾಯಿತು. ವಿರಲಕ್ಷ್ಮಿಯೂ ನಿಮ್ಮ ಸಹಾಯವಿಲ್ಲದೆ ನನಗೆ ಆಗುವುದಿಲ್ಲ ಅಲ್ಲವೇ? ನಿಜವಾಗಿಯೂ ನನಗೆ ರಾಜ್ಯಾಭಿಷೇಕಮಾಡಬೇಕಾದರೆ (ನಾನು ಗೆಲ್ಲಬೇಕಾದರೆ) ನೀವೇ ವೀರಪಟ್ಟವನ್ನು ಸ್ವೀಕರಿಸಬೇಕು. ಇದು ಸುಳ್ಳೇ? ವ|| ಎನ್ನಲಾಗಿ “ಇಲ್ಲಿರುವ ಇಷ್ಟು ಜನರಲ್ಲಿ (ಲೆಕ್ಕದವನು) ನಾನು ಯಾವ ವೀರಪುರುಷನಿಗೆ ಸಮಾನಾಗುತ್ತೇನೆ. ನೀವು ನನಗೆ ಕಾರ್ಯವನ್ನು ದಯೆಗೈದಿರುವದೆಲ್ಲ ನನ್ನ ಅದೃಷ್ಟವೂ ಸ್ವಾಮಿಸಂಪತ್ತೂ ಆಗಿರುತ್ತದೆ. ನೀವು ಹೇಳಿದ ಹಾಗೆಯೇ ಮಾಡುತ್ತೇನೆ’ ಎಂದು ಹದಿನಾರು ರಾಜರ ಭಾರವನ್ನೂ ತಾಳುವಂತೆ ಶಲ್ಕನು ಸೇನಾಪತ್ಯ ಭಾರವನ್ನು ಧರಿಸಿದನು. ೩೦. ಇತರ ಸಲಕರಣಗಳೆಲ್ಲ ನಾಶವಾಗಿರಲು ತನಗೆ ತಾನೇ ಕಟ್ಟಿಸಿಕೊಳ್ಳುವ ಹಾಗೆ ಶಲ್ಯನು ವೀರಪಟ್ಟವನ್ನು ಕಟ್ಟಿಸಿಕೊಂಡನು. ವಿಯ ನಿಯಮವನ್ನು ಕಳೆಯಲು ಯಾರಿಗಾದರೂ ಸಾಧ್ಯವಾಗುತ್ತದೆ ವ|| ಅಷ್ಟರಲ್ಲಿ ಆ ಸಮಾಚಾರವನ್ನು ಸಂಚಾರಮಾಡುತ್ತಿರುವ ಗೂಢಚಾರರಿಂದ ಧರ್ಮರಾಯನು ತಿಳಿದು ಕೃಷ್ಣನಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡು ಹೇಳಲು ರಾಕ್ಷಸರಾಜರ ಅನೇಕ ಕಿರೀಟಗ್ರಾದಿಂದ ಹೊಡೆಯಲ್ಪಟ್ಟ ತೋಳನ್ನುಳ್ಳ ಚತುರ್ಭುಜನಾದ ಕೃಷ್ಣನು ಹೀಗೆಂದನು. ೩೧. ಪರಾಕ್ರಮವೂ ಚಾಪವಿದ್ಯೆಯೂ ಬಾಹುಬಲದ ಅಹಂಕಾರವೂ ಶಲ್ಯನಲ್ಲಿ ಸೇರಿ ನಿಂತಿವೆ. ನಮಗೂ ಅವನೊಬ್ಬನೇ ಎದೆಗೆ ನಾಟದ ಈಟಿಯಂತಿರುವವಲ್ಲವೇ? ಅವನಿಗೆ ಸರಿಸಮನಾಗಿ ನಿಲ್ಲುವುದಾದರೆ ನೀನೊಬ್ಬನೇ ನಿಲ್ಲುವೆ. ಆದುದರಿಂದ ನೀನು ಆಳವಾದ ಸಾಗರಗಳಿಂದ ಸುತ್ತುವರಿಯಲ್ಪಟ್ಟ

ವ|| ಅದಲ್ಲದೆಯುಂ ಸಿದ್ಧಿತ್ರಯಂಗಳ್ ನಿನಗಾತ್ಮೀಯಾಯತ್ತ ಸಿದ್ಧಿಯಾಗಿ ನಿಂದುದಱಂ ನೀನೆ ಬೀರವಟ್ಟಮಂ ತಾಳ್ದಿ ನಿಲ್ವುವೆನೆ-

ಉ|| ಆಂ ದಿಟಮಾಗಿ ಶಲ್ಯನಳವಂ ನೆ ಮುನ್ನದಿರ್ದುಮೆನ್ನ ತ
ಮ್ಮಂದಿರನೇಕೆ ಕಾಡಿಸುವೆನಾನೆ ಮಹಾಜಿಯೊಳಾಂಪೆನಂತೆಗೆ|
ಯ್ಯೊಂದು ಮುಕುಂದ ಕಟ್ಟೆನಗೆ ಪಟ್ಟಮನೆಂದು ಮುಕುಂದವೃಂದಮೊಂ
ದೊಂದಱಳೊಂದಿ ಮಿಕ್ಕೆಸೆಯೆ ತಾಳ್ನಿದನಾ ವಿಭು ಬೀರಮಟ್ಟಮಂ|| ೩೨

ವ|| ಅಂತು ಯುಷ್ಠಿರಂ ನಿಷ್ಠಿತಾಹವವ್ಯಾಪಾರನಾಗಿ ಮಧುಕೈಟಭಾರಾತಿಯಂ ಬೀಡಿಂಗೆ ಪೋಂಗಲ್ವೆೞ್ದಗ್ನಿ ಹೋತ್ರಶಾಲೆಗೆ ವಂದು ದರ್ಭಶಯನತಳದೊಳೊಱಗಿ ಬೆಳಗಪ್ಪ ಜಾವದೊಳ್-

ಚಂ|| ಕಡಲುರಿಯಂತಕಾಲ ಘನ ಗರ್ಜನೆಯಂತೆ ಸಮಸ್ತ ದಿಕ್ತಟಂ
ಪಿಡುಗುವಿನಂ ರಣಾನಕರವಂಗಳಸುಂಗೊಳೆ ಪರ್ವಿ ಬೇಗದಿಂ|
ಸಡಗರದೇೞ್ಗೆಯುಂ ಕಳಕಳಧ್ವನಿಯುಂಬೆರಸಾಡುವಂತೆರ
ೞೃಡೆಯೊಳಮಾಗಳೊರ್ಮೊದಲೆ ಪಲ್ಲಣಮಿಕ್ಕಿಪುದಲ್ಲಕಲ್ಲೊಳಂ|| ೩೩

ವ|| ಆಗಳಂತಕತನಯನುಂ ಧೃತರಾಷ್ಟ್ರತನಯನುಮಾರೂಢಮದಗಜರುಮುಪಾರೂಢ ವಿಶೇಷಕರುಮಾಗಿ ತಂತಮ್ಮ ಶಿಬಿರಂಗಳಿಂ ಚತುರ್ಬಲಂಗಳ್ ಪೊಱಮಟ್ಟು ಸಂಗ್ರಾಮರಂಗಕ್ಕವತರಿಸೆ ಕುರುಬಲಮಂ ಮದ್ರರಾಜನಭಿನವವ್ಯೂಹಮನೊಡ್ಡುವುದುಂ ವಿಬುಧವನಜವನಕಳಹಂಸನುಂ ಹಂಸವ್ಯೂಹನೊಡ್ಡಿ ಮಾರ್ವಲಕ್ಕೆ ಯಮಪಾಶಮಂ ಬೀಸುವಂತೆ ಕೆಸಿದಾಗಳ್-

ಕಂ|| ಚಯ್ ಚಯ್ಯೆಂಬಾಗಳ್ ಮೆಯ್
ಮೆಯ್ ಚಲದಿಂ ಮುಟ್ಟ ಪೊಣರ್ದು ತಳ್ತಿಱವುರ್ಕಿಂ|
ಕೆಯ್ ಚೆಚ್ಚರಿಕೆಯ ಚಲದಿಂ
ಕೆಯ್ ಚಳಿವಿನಮಿದರೆರಡು ಬಲದೊಳಮದಟರ್|| ೩೪

ಕರಿ ಮಕರಾಹತಹತಿಯಿಂ
ಬಿರಿದಳಱುವ ಭೈತ್ರದಂತೆ ವಿವಿಧಾಯುಧ ದಂ|
ತುರಿತಂಗಳೞೆದುವಾ ಸಂ
ಗರ ಜಳನಿಯೊಳ್ ವರೂಥಕರಿನಿಕರಂಗಳ್|| ೩೫

ಸಮಸ್ತಭೂಮಂಡಲವನ್ನೂ ನಿನ್ನ ಸಹಾಯದಿಂದ ಕಂಟಕವಿಲ್ಲದಂತೆ ಮಾಡುವುದು. ವ|| ಅಷ್ಟೇ ಅಲ್ಲದೆ ಸಿದ್ಧಿತ್ರಯಗಳಾದ ಪ್ರಭುಸಿದ್ಧಿ ಮಂತ್ರಸಿದ್ಧಿ ಮತ್ತು ಉತ್ಸಾಹ ಸಿದ್ಧಿಗಳು ನಿನಗೆ ಅನವಾದ ಸಿದ್ಧಿಯಾಗಿ ನಿಂತಿರುವುದರಿಂದ ನೀನೇ ಪಟ್ಟವನ್ನು ಧರಿಸಿ ನಿಲ್ಲುವುದು ಎನ್ನಲು ೩೨. ನಾನು ನಿಶ್ಚಯವಾಗಿಯೂ ಶಲ್ಯನ ಪರಾಕ್ರಮವನ್ನು ಸಂಪೂರ್ಣವಾಗಿ ಮೊದಲೇ ತಿಳಿದಿದ್ದೂ ನನ್ನ ತಮ್ಮಂದಿರನ್ನೇಕೆ ಕಾದಿಸಲಿ; ಮಹಾಯುದ್ಧದಲ್ಲಿ ನಾನೆ ಎದುರಿಸುತ್ತೇನೆ. ಕೃಷ್ಣನೇ ಹಾಗೆ ಮಾಡೆಂದು ನನಗೆ ಪಟ್ಟವನ್ನು ಕಟ್ಟು ಎಂದು ಮುಕುಂದವೆಂಬ ಮಂಗಳವಾದ್ಯ ಸಮೂಹವು ಒಂದರಲ್ಲೊಂದು ಸಮನ್ವಯವಾಗಿ ಕೂಡಿಕೊಂಡು ವಿಶೇಷವಾಗಿ ಪ್ರಕಾಶಿಸಲು ಆ ದೊರೆಯು ವೀರಪಟ್ಟವನ್ನು ತಾಳಿದನು. ವ|| ಹಾಗೆ ಧರ್ಮರಾಯನು ನಿಶ್ಚಿತವಾದ ಯುದ್ಧ ವ್ಯಾಪಾರೋದ್ಯೋಗವುಳ್ಳವನಾಗಿ ಕೃಷ್ಣನನ್ನು ಬೀಡಿಗೆ ಹೋಗ ಹೇಳಿ ತಾನು ಅಗ್ನಿಹೋತ್ರಶಾಲೆಗೆ (ಯಾಗಶಾಲೆಗೆ) ಬಂದು ದರ್ಭೆಯಿಂದ ಮಾಡಲ್ಪಟ್ಟ ಹಾಸಿಗೆಯಲ್ಲಿ ಮಲಗಿ ಬೆಳಗಾಗುವ ಜಾವದಲ್ಲಿ ೩೩. ಬಡಬಾನಲದಂತೆ ಅಕಾಲದ ಗುಡುಗಿನಂತೆ ಸಮಸ್ತ ದಿಕ್ಕುಗಳ ದಡಗಳೂ ಸಿಡಿಯುವಂತೆ ಯುದ್ಧವಾದ್ಯಗಳು ಭೋರ್ಗರೆಯುತ್ತಿರಲು ವೇಗದ ಸಂಭ್ರಮಾತಿಶಯವೂ ಕಳಕಳಧ್ವನಿಯೂ ಬೆರಸಿ ಆಡುವಂತೆ ಎರಡು ಸೈನ್ಯಗಳಲ್ಲಿಯೂ ಒಟ್ಟಿಗೆ ಅಲ್ಲೋಲಕಲ್ಲೋಲವಾಗಲು ಕುದುರೆಗಳಿಗೆ ಜೀನನ್ನು ಹಾಕಿದರು. ವ|| ಆಗ ಧರ್ಮರಾಯನೂ ದುರ್ಯೋಧನನೂ ಮದ್ದಾನೆಗಳನ್ನು ಹತ್ತಿ ಪಾಳೆಯಗಳಿಂದ ಹೊರಟು ಚತುರಂಗಸೇನಾಸಮೇತರಾಗಿ ಯುದ್ಧರಂಗದಲ್ಲಿ ಬಂದಿಳಿದರು. ಶಲ್ಯನು ಕೌರವಸೈನ್ಯವನ್ನು ಹೊಸದಾದ ರಚನಾವಿಧಾನದಿಂದ ಮುಂದೊಡ್ಡಲು ವಿದ್ವಾಂಸರೆಂಬ ಕಮಲದ ತೋಟಕ್ಕೆ ರಾಜಹಂಸದಂತಿರುವ ಧರ್ಮರಾಯನೂ ಹಂಸವ್ಯೂಹವನ್ನು ಚಾಚಿ ಪ್ರತಿ ಸೈನ್ಯಕ್ಕೆ ಯಮಪಾಶವನ್ನು ಬೀಸುವಂತೆ ಕೈಬೀಸಿದನು.

೩೪. ಶರೀರ ಶರೀರಗಳ ಚಯ್‌ಚಯ್ ಎಂದು ಘರ್ಷಣೆಮಾಡುತ್ತ ಸ್ಪರ್ಧೆಯಿಂದ ಹತ್ತಿರಕ್ಕೆ ಬಂದು ರಣೋತ್ಸಾಹದ ಕೈಚಟುವಟಿಕೆಯ ರಭಸದಿಂದ ಜೊತಜೊತೆಯಾಗಿ ಹೆಣಗಾಡಿ ಕೈಸೋತುಹೋಗುವವರೆಗೂ ಉಭಯ ಸೈನ್ಯದ ಶೂರರೂ ಪರಸ್ಪರ ಕತ್ತರಿಸಿದರು.

೩೫. ನೀರಾನೆ ಮತ್ತು ಮೊಸಳೆಗಳ ಹೊಡೆತದಿಂದ ಬಿರಿದು ನಾಶವಾಗುವ ಹಡಗಿನಂತೆ ನಾನಾ ಆಯುಧಗಳು ವಿಶೇಷವಾಗಿ ನಾಟಕೊಂಡಿರುವ

ಒಂದಕ್ಷೋಹಿಣಿಬಲಮೆರ
ಡುಂ ದೆಸೆಯೊಳಮುೞದುವನಿತೆ ಭಾರತಮೆಮ|
ಗಿನ್ನಿಂದುಜ್ಜವಣೆ ದಲೆಂದದ
ಟೋಂದುತ್ತರಮಾಗೆ ಕಾದಿದರ್ ಕಟ್ಟಾಳ್ಗಳ್|| ೩೬

ಸುರಿತಶರನಿಕರಪಾತಿತ
ನರೋತ್ತಮಾಂಗಂ ಕಬಂಧ ನಾಟಕರಂಗಂ|
ಸುರಿತನವರುರರಂಗ
ತ್ತರಂಗಮೊಪ್ಟಿದುದು ವೀರಭಟರಣರಂಗಂ|| ೩೭

ವ|| ಅಂತು ಮುಂಬಗಲ್ವರಂ ತುಮುೞೆ ಕಾದುವ ಸಮರಭರಂ ಮನೋರಾಗಮಂ ಮಾಡೆಯುಂ ಮುಮ್ಮೞೆಸಿ ಪಾಂಡವ ಕೌರವ ಬಲದ ಕಲಿಕೆಯ ಪ್ರಧಾನನಾಯಕರ್ಕಳ್-

ಮ|| ಸ|| ಕಡಿಕೆಯ್ದೊಂದೊರ್ವರೊಳ್ ತಳ್ತಿಱವ ಬಯಕೆಯಿಂ ದಿವ್ಯ ಬಾಣಾದಿಗಳ್ಗಂ
ಪೊಡೆವಟ್ಟುಂ ಸೂತರಂ ಚೋದಿಸಿನುತುಮಗುರ್ವುರ್ವೆ ಕೆಯ್ಮಿಕ್ಕು ಕಾದಲ್|
ನಡೆತರ್ಪಾವೇಗದೊಳ್ ಮುಮ್ಮೞಸಿದ ಪಲವುಂ ರಾಜಚಿಹ್ನಂಗಳಂ ಬೆ
ಳ್ಗೊಡೆಗಳ್ ತಳ್ಪೊಯ್ದದೇಂ ಕಣ್ಗೊಳಿಸಿದುದೊ ವಿನಕ್ಷತ್ರಕಚ್ಛತ್ರಪಿಂಡಂ|| ೩೮

ವ|| ಅಂತು ಮುಟ್ಟೆವಂದೋರೊರ್ವರೆ ರಥದ ಕುದುರೆಯ ಪೞವಿಗೆಯ ಕುಱುಪುಗಳಿನಿವರವರೆಂದಱದು ಸಾತ್ಯಕಿ ಕೃತವರ್ಮನೊಳ್ ನಕುಳಂ ಶತಬಿಂದುವಿನ ಮಕ್ಕಳಯ್ವರೊಳ್ ಸಹದೇವಂ ಶಕುನಿಯೊಳ್ ಯುದ್ಧಾಮನ್ಯೂತ್ತಮೌಜಸರ್ ಕೃಪನೊಳ್ ಭೀಮಸೇನಂ ಪರ್ವತರಾಜರೊಳ್ ವಿಕ್ರಮಾರ್ಜುನನಶ್ವತ್ಥಾಮನೊಳ್ ಪೆಣೆದು ಮಂಡಳ ಭ್ರಾಂತೋದ್ಭಾಂತಸ್ಥಿತಚಕ್ರಮೆಂಬ ರಥಯುದ್ಥದೊಳಮಾಲೀಢ ಪ್ರತ್ಯಾಲೀಢ ಸಮಪಾದಂ ಗಳೆಂಬಾಸನಂಗಳೊಳಂ ಪೆಱವುಂ ಶರಾಸನವಿದ್ಯೆಗಳೊಳತಿ ಪ್ರವೀಣರುಂ ಜಾಣರುಮಾಗಿ

ಅಕ್ಕರ|| ನೆಱದು ನಿರ್ವಾಯಂ ನರುವಾಯಂ ಮುಂ ಮೊನೆ ನೆರಕೆ ನಾರಾಚಂ ತಗರ್ತಲೆಯಂ
ನೆಱನರಿವ ಕಣೆ ಗೆಲೆಯಂಬು ಕಕ್ಕಂಬು ಕೆಲ್ಲಂಬು ಮೊನೆಯಂಬು ತೀವೆ ಕಣ್ಣಂ|
ಪೆಱಯ ಮುಗಂ ಕಣಕೆನೆ ವೊಪಂಬು ಕವಲಂಬುರೆಂಬಂಕದಂಬೆತ್ತಲುಂ
ತುಱುಗಿ ನಡುವಿನಂ ಸಾರ್ದು ಸಾರ್ದೆಚ್ಚೆಚ್ಛು ಕಾದಿದರತಿರಥರೊಂದುಜಾವಂ|| ೩೯

ಮ|| ಅಂತು ಕಾದುವಾಗಳೇಕಾದಶರುದ್ರರೊಳಗೆ ತುತ್ತತುದಿಯ ರುದ್ರನುಂ ರೌದ್ರನು ಮಪ್ಪಶ್ವತ್ಥಾಮನೇವದೊಳ್ ಕಣ್ಗಾತುಣದೆ ಮಾರ್ಕೊಂಡು ವಿಕ್ರಮಾರ್ಜುನನಂ ದಿವ್ಯಾಸ್ತ್ರಂಗಳಿಂದ ಮೆಚ್ಚು ಕಾದಿ ಗೆಲಲಾಱದೆ-

ರಥ ಮತ್ತು ಆನೆಗಳ ಸಮೂಹಗಳು ಯುದ್ಧಸಮುದ್ರದಲ್ಲಿ ನಾಶವಾದವು. ೩೬. ಉಭಯಪಕ್ಷದಲ್ಲಿಯೂ ಒಂದಕ್ಷೋಹಿಣೀ ಸೈನ್ಯವು ಉಳಿಯಿತು. ಭಾರತಯುದ್ಧವು ಇದಿಷ್ಟೇ ಸಂಖ್ಯೆಯುಳ್ಳದು. ಈ ದಿನ ನಮಗೆ ಉದ್ಯಾಪನೆ (ಮುಗಿಯುವುದೇ) ಯಿಲ್ಲವೇ ಎಂದು ಹೇಳುತ್ತ ಅಪಾರ ಪರಾಕ್ರಮದಿಂದ ವೀರಪುರುಷರು ಕಾದಾಡಿದರು. ೩೭. ಹೊಳೆಯುತ್ತಿರುವ ಬಾಣಗಳ ಸಮೂಹಕ್ಕೆ ಸಿಕ್ಕಿಬೀಳುತ್ತಿರುವ ಮನುಷ್ಯರ ತೆಲಗಳನ್ನುಳ್ಳದೂ, ಮುಂಡಗಳು ಕುಣಿದಾಡುವ ರಂಗಸ್ಥಳವಾದುದೂ ಹೊಸ, ರಕ್ತದ ಚಂಚಲವಾದ ಅಲೆಗಳನ್ನುಳ್ಳುದೂ ಆದ ವೀರಭಟರ ರಣರಂಗವು ಪ್ರಕಾಶಮಾನವಾಯಿತು. ವ|| ಹಾಗೆ ಮುಂಬಗಲವರೆಗೆ (ಮದ್ಯಾಹ್ನದವರೆಗೆ) ತುಮುಲಯುದ್ಧವನ್ನು ಮಾಡುವ ಯುದ್ಧಕಾರ್ಯವು ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿರಲು ಪಾಂಡವಕೌರವಬಲಪ್ರವೀಣರಾದ ಮುಖ್ಯ ನಾಯಕರುಗಳು ಕಾದಿದರು. ೩೮. ಬಹುವೇಗದಿಂದ ಕೂಡಿ ಪರಸ್ಪರ ತಗುಲಿ ಯುದ್ಧಮಾಡುವ ಅಪೇಕ್ಷೆಯಿಂದ ದಿವ್ಯಾಸ್ತ್ರಗಳಿಗೆ ನಮಸ್ಕಾರಮಾಡಿ ಸಾರಥಿಗಳಿಗೆ ರಥವನ್ನು ನಡೆಸಿ ಎಂದು ಹೇಳಿ ಭಯವು ಹೆಚ್ಚುತ್ತಿರಲು ಶಕ್ತಿಮೀರಿ ಯುದ್ಧಮಾಡಲು ಬರುತ್ತಿರುವ ವೇಗದಲ್ಲಿ ಮುಂದಕ್ಕೆ ಚಾಚಿದ ಹಲವು ರಾಜಚಿಹ್ನೆಗಳನ್ನು ಶ್ವೇತಚ್ಛತ್ರಗಳು ಸಂಘಟ್ಟಿಸಿ ಚಂಚಲವಾದ ನವಿಲುಗಳನ್ನುಳ್ಳ ಛತ್ರಿಗಳ ಸಮೂಹದಂತೆ ವಿಶೇಷ ಆಕರ್ಷಣೀಯವಾಗಿದ್ದುವು. ವ|| ಹಾಗೆ ಸಮೀಪಕ್ಕೆ ಬಂದು ಒಬ್ಬೊಬ್ಬರ ರಥದ ಕುದುರೆಯ ಬಾವುಟದ ಗುರುತುಗಳಿಂದ ಇವರು ಅವರು ಎಂದು ಗುರುತಿಸಿ ಸಾತ್ಯಕಿ ಕೃತವರ್ಮನಲ್ಲಿಯೂ ನಕುಳನು ಶತಬಿಂದುವಿನ ಅಯ್ದು ಮಕ್ಕಳಲ್ಲಿಯೂ ಸಹದೇವನು ಶಕುನಿಯಲ್ಲಿಯೂ ಯುಧಾಮನ್ಯೂತ್ತಮೌಜಸರು ಕೃಪನಲ್ಲಿಯೂ ಭೀಮಸೇನನು ಪರ್ವತರಾಜರಲ್ಲಿಯೂ ವಿಕ್ರಮಾರ್ಜುನನು ಆಶ್ವತ್ಥಾಮನಲ್ಲಿಯೂ ಹೆಣೆದುಕೊಂಡು ಭ್ರಾಂತ, ಉದ್ರಾಂತ, ಸ್ಥಿತ, ಚಕ್ರ ಎಂಬ ರಥಯುದ್ಧದಲ್ಲಿಯೂ ಆಲೀಢ, ಪ್ರತ್ಯಾಲೀಢ, ಸಮಪಾದ ಎಂಬ ಆಸನಗಳಲ್ಲಿಯೂ ಇತರ ಅನೇಕ ಬಿಲ್ವಿದ್ಯೆಗಳಲ್ಲಿಯೂ ಅತಿ ಪ್ರವೀಣರೂ ಜಾಣರೂ ಆಗಿ ೩೯. ಕೂಡಿಕೊಂಡು ನಿರ್ವಾಯ, ನರುವಾಯ, ಮುಮ್ಮೊನೆ, ನೆರಕೆ, ನಾರಾಚ, ತಗರ್ತಲೆ, ಮರ್ಮಸ್ಥಾ ವನ್ನು ಲ

ಕಂ|| ತನ್ನ ದೊಣೆಯಂಬುಗಳ್ ತವು
ವನ್ನೆಗಮೆಚ್ಚಂಬು ತಪ್ಪೊಡಭಿವಾದಯೆನ|
ಲ್ಕಿನ್ನೆನಗೆ ಪದನಿದೆಂದು ಕ
ರಂ ನಗೆ ಸುರರರಿಗನಿದಿರ್ಗೆ ತೊಲಗಿದನಾಗಳ್|| ೪೦

ದಾವಶಿಖಿ ಶಿಖೆಯನಿೞಪುದಿ
ದಾವ ಸರಲ್ ಪೇೞಮೆನಿಪ ಸರಲಿಂ ತಱದಂ|
ದೇವರ ಪಡೆ ರಾಗಿಸೆ ಮನ
ದೇವದಿನವಯದೆವ ಶಕುನಿಯಂ ಸಹದೇವಂ|| ೪೧

ವ|| ಅಂತು ಶಕುನಿಯಂ ತಱವುದುಮಿತ್ರತಿರಭುಕ್ತಿ ವಿಷಯಾಶರಪ್ಪ ಶತಬಿಂದುವಿನ ಮಕ್ಕಳಪ್ರಯ್ವರಂ ಗಾಳಿಗೊಡ್ಡಿದ ಪುಲ್ಲ ಬಿಂದುಗಳಂತೆ ನಕುಲಂ ನೆಲಕ್ಕೆ ಸೋವತಂ ಮಾಡಿದನಿತ್ತ ವಿಂಧ್ಯ ಮಳಯ ಹಿಮವನ್ನಿವಾಸಿಗಳಪ್ಪ ಪರ್ವತರಾಜರುಮಂ ಭೀಮಸೇನನಂತಕಾನನನೆಯ್ದಿಸಿದಂ ಯುಧಾಮನ್ಯೂತ್ತಮೌಜಸರ್ ಗೆಲೆ ಕಾದಿ ಕೃಪನನುಪಗತಪರಿಶ್ರಮನಂ ಮಾಡಿದರಾಗಳ್ ಮೆಯ್ವಿರ್ಚಿ ಬಂದು ಪೆಣೆದ ಭೀಮ ನಕುಳ ಸಹದೇವರುಮಂ ಶಲ್ಯಂ ವಿರಥರ್ಮಾಡಿ ಪಿಡಿದು ಕೊಂಡುಪುಲ್ಲ ಸೂಡನೀಡಾಡುವಂತೆ ತನ್ನಳಿಯಂದಿರಿರ್ವರುಮನೀಡಾಡಿ ಭೀಮನಂ ಪೊಣರ್ದು ನೆಲಿಕ್ಕಿಕ್ಕಿ ಬೆನ್ನಂ ಮೆಟ್ಟಿ ದಾಂಟುವ ಮದಗಜದಂತೆ ಕೊಲಲೊಲ್ಲದೆ ದಾಂಟದಾಗಳ್ ದುರ್ಯೋಧನನೞಲ್ದು ಕಣ್ಗಾಣದೆಯ್ದೆವಂದಶ್ವತ್ಥಾಮನು ಮದ್ರರಾಜ ಕೃಪಕೃತವರ್ಮರನಿಂತೆಂದಂ-

ತರಳ|| ನಿಜಕುಲೋಚಿತವೃತ್ತಿಯಂ ಬಗೆಯಿಂ ಮಹಾರಥರಿರ್ ಮಹೀ
ಭುಜರ ಮಕ್ಕಳಿರೆಂದು ನಂಬಿದೆನಿಂತು ನಣ್ಪನೆ ವೈರಿ ಭೂ|
ಭುಜರೊಳುಂಟೊಡತಾಗಿ ಮಾೞ್ಪುದನೀಗಳಾನಱದೆಂ ಫಣಿ
ಧ್ವಜನೆನಪ್ಪೆನೆ ನಿಮ್ಮನಿನ್ನೆಗೆಂದೊಡೀ ರಣರಂಗದೊಳ್|| ೪೨

ಉ|| ಕಾದುವ ಮಾೞ್ಕೆಯಲ್ಲೞದು ಕೆಮ್ಮನೆ ನಣ್ಣನೆ ಮೇಳಗಾಳೆಗಂ
ಗಾದುವ ಮಾೞ್ಕೆ ಸಿಂಧು ಘಟ ಸೂತ ಸುತರ್ತಳಿನಾಗದೊಂದು ರಾ|
ಜ್ಯೋದಯವಮ್ಮ ನಿಮ್ಮ ಬಲದಿಂದೆನಗಪುದೆ ಮದ್ವಿರೋಯಂ
ಛೇದಿಸಲಾನೆ ಸಾಲ್ವೆನಿರಿಮನ್ನೆಗವಿ ರಣರಂಗಭೂಮಿಯೊಳ್|| ೪೩

ಭೇದಿಸುವ ಕಣೆಗೆಲೆಯಂಬು, ಕಕ್ಕಂಬು, ಕೆಲ್ಲಂಬು, ಮೊನೆಯಂಬು, ಇವುಗಳು, ಕಣ್ಣನ್ನು ತುಂಬಿಕೊಳ್ಳಲು, ಪೆಯಮುಱಗಂ, ಕಣಕೆನೆ, ಪೋಪಂಬು, ಕವಲಂಬು ಎಂಬ ಪ್ರಸಿದ್ಧವಾದ ಬಾಣಗಳು ಎಲ್ಲಕಡೆಯಲ್ಲಿಯೂ ನುಗ್ಗಿ ಹೋಗಿ ನಾಟಿಕೊಳ್ಳುವ ಹಾಗೆ ನೋಡಿನೋಡಿ ಹೊಡೆದು ಹೊಡೆದು ಅತಿರಥರು ಒಂದು ಜಾವದ ಕಾಲ ಕಾದಿದರು. ವ|| ಹಾಗೆ ಯುದ್ಧ ಮಾಡುವಾಗ ಹನ್ನೊಂದು ಜನ ರುದ್ರರೊಳಗೆ ಕಟ್ಟಕಡೆಯವನೂ ಭಯಂಕರನೂ ಆದ ಅಶ್ವತ್ಥಾಮನು ಕೋಪದಿಂದ ಕುರುಡನಾಗಿ ಪ್ರತಿಭಟಿಸಿ ವಿಕ್ರಮಾರ್ಜುನನನ್ನು ದಿವ್ಯಾಸ್ತ್ರಗಳಿಂದ ಹೊಡೆದು ಕಾದಿ ಗೆಲ್ಲಲಾರದೆ -೪೦. ತನ್ನ ಬತ್ತಳಿಕೆಯ ಬಾಣಗಳು ಮುಗಿಯುವವರೆಗೂ ಹೊಡೆದು ತೀರಿಹೋಗಲು ಇನ್ನು ಅಭಿವಾದಯೆ (ನಮಸ್ಕರಿಸುತ್ತೇನೆ) ಎನ್ನಲು ಇದು ಸಮಯವೆಂದು -ದೇವತೆಗಳೆಲ್ಲ ನಗುತ್ತಿರಲು ಆರ್ಜುನನೆದುರಿಗೆ ಆಗ ಹೊರಟು ಹೋದನು. ೪೧. ದಾವಾಗ್ನಿಯನ್ನೂ ಕೀಳುಮಾಡುತ್ತಿರುವ ಈ ಬಾಣವು ಯಾವುದು ಹೇಳಿ ಎನ್ನುವ ಬಾಣದಿಂದ ದೇವರ ಸಮೂಹವು ಸಂತೋಷಪಡುತ್ತಿರಲು ಮನಸ್ಸಿನ ಕೋಪದಿಂದ ಸಹದೇವನು ಶಕುನಿಯನ್ನು ಕತ್ತರಿಸಿದನು. ವ|| ಈ ಕಡೆ ಅತಿರಭುಕ್ತಿಯೆಂಬ ದೇಶದ ರಾಜರಾದ ಶತಬಿಂದುವಿನ ಅಯ್ದುಮಕ್ಕಳನ್ನೂ ನಕುಲನು ಗಾಳಿಗೆ ಒಡ್ಡಿದ ಹುಲ್ಲಿನ ಮೇಲಿನ ಜಲಬಿಂದುಗಳಂತೆ ಭೂಮಿಗೆ ಬಲಿಕೊಟ್ಟನು. ಈ ಕಡೆ ವಿಂಧ್ಯ, ಮಳಯ, ಹಿಮವತ್ಪರ್ವತನಿವಾಸಿಗಳಾದ ಪರ್ವತರಾಜರುಗಳನ್ನು ಭೀಮನು ಯಮನ ಬಾಯನ್ನು ಸೇರಿಸಿದನು. ಯುಧಾಮನುತ್ತಮೌಜಸರು ಗೆಲ್ಲುವ ಹಾಗೆ ಯುದ್ಧಮಾಡಿ ಕೃಪನನ್ನು ನಷ್ಟಪರಾಕ್ರಮವನ್ನಾಗಿ ಮಾಡಿದರು. ಆಗ ಮೆಯ್ಯುಬ್ಬಿ ಹೆಣೆದುಕೊಂಡು ಒಟ್ಟಾಗಿ ಬಂದ ಭೀಮನಕುಳಸಹದೇವರನ್ನು ಶಲ್ಯನು ರಥವಿಲ್ಲದವರನ್ನಾಗಿ ಮಾಡಿ ಹಿಡಿದುಕೊಂಡು ಹುಲ್ಲಿನ ಕಂತೆಯನ್ನು ಎಸೆಯುವಂತೆ ತನ್ನಳಿಯಂದಿರನ್ನು ಎಸೆದು ಭೀಮನೊಡನೆ ಹೆಣಗಿ ಅವನನ್ನು ನೆಲಕ್ಕಿಕ್ಕಿ ಬೆನ್ನನ್ನು ತುಳಿದು ದಾಟುವ ಮದ್ದಾನೆಯಂತೆ ಕೊಲ್ಲಲು ಇಷ್ಟಪಡದೆ ದಾಟಿದನು. ಆಗ ದುರ್ಯೋಧನನು ದುಖಪಟ್ಟು ಕಣ್ಗಾಣದೆ ಸಮೀಪಕ್ಕೆ ಬಂದ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕುರಿತು ಹೀಗೆಂದನು. ೪೨. ನಿಮ್ಮ ಕುಲಕ್ಕೆ ಯೋಗ್ಯವಾದ ವರ್ತನೆಯನ್ನು ಯೋಚಿಸಿ ಮಹಾರಥರಾಗಿದ್ದೀರಿ ರಾಜರ ಮಕ್ಕಳಾಗಿದ್ದೀರಿ ಎಂದು ನಿಮ್ಮನ್ನು ನಂಬಿದೆನು ಶತ್ರುರಾಜರುಗಳಲ್ಲಿ ಸ್ನೇಹವುಳ್ಳವರಾಗಿ ನಡೆದುಕೊಳ್ಳುವುದನ್ನು ಈಗ ನಾನು ತಿಳಿದೆನು. ಇನ್ನು ಮೇಲೆ ಯುದ್ದರಂಗದಲ್ಲಿ ನಿಮ್ಮನ್ನು ನನ್ನವರೆಂದು ಭಾವಿಸಿದರೆ ಫಣಿ (ಸರ್ಪ)ಧ್ವಜನೇ ಅಲ್ಲ. (ದುಯೋಧನನೆನಿಸಿಕೊಳ್ಳುತ್ತೆನೆಯೇ?) ೪೩. ಇದು ಯುದ್ಧಮಾಡುವ ರೀತಿಯಲ್ಲ ; ಇದು

ಮಲ್ಲಿಕಾಮಾಲೆ|| ಬೀರವಟ್ಟಮನಾಂತ ಬೀರರುಮಿರ್ವರುಂ ಸುರ ರಾಜಿ ಕೈ
ವಾರದಿಂ ಬೞವಿಟ್ಟು ನಮ್ಮನೆ ನೋಡ ನೋಡುವರೀಗಳೀ|
ಭಾರತಂ ಸಮೆದಪ್ಪುದಳ್ಕದೆ ನಿಂದು ಕಾದೆನುತುಂ ಶರಾ
ಸಾರಮಂ ಸುರಿದಂತಕಾತ್ಮಜನಂತಸುಂಗೊಳೆ ಕಾದಿದಂ|| ೪೫

ಕಂ|| ಕಾದೆ ರಥ ತುರಗ ಕೇತನ
ಕೋದಂಡಂಗಳುಮನುಱದೆ ಖಂಡಿಸಿ ವಿಳಯಾಂ|
ಭೋದನಿನಾದದೆ ಮದ್ರ ಮ
ಹೀದಯಿತಂ ತೊಟ್ಟನಾರ್ವುದುಂ ಧರ್ಮಸುತಂ|| ೪೬

ಮುಳಿದು ತಳಮಳಿಸಿ ತಳರದೆ
ತೊಳಗುವ ಕರವಾಳನುರ್ಚಿ ಮೆಯ್ವೆರ್ಚಿ ಪೊದ|
ೞ್ದ ಳವಮರೆ ಪಿಡಿದು ರಥದಿಂ
ದಿಳೆಗಿೞೆದವನವನಿಪತಿಯನಣುಗಿಱವೊಯ್ದಂ|| ೪೭

ವ|| ಪೊಯ್ದೊಡೆ ಮದಾಂಧಗಂಧಸಿಂಧುರಂ ಪೊಯ್ದ ಪೆರ್ಮರದಂತೆ ನೆಲನದಿರೆ ಕೆಡೆದ ತನ್ನಳಿಯನಂ ಮದ್ರರಾಜಂ ಕಂಡು ಕರುಣಿಸಿ-

ಚಂ|| ಮುಳಿಯಿಸದನ್ನವಿ ನೃಪನಿನಾಗದು ಸಾವೆನಗೆಂತುವಿತನಂ
ಮುಳಿಯಿಪಿನೆಂದುರಸ್ಥಳಮನಂತೊದೆದಾಗಡೆ ಕಂತುಗೀಶ್ವರಂ|
ಮುಳಿದವೊಲಾ ನೃಪಂ ಮುಳಿದು ನೋಡೆ ವಿಲೋಚನಪಾವಕಂ ತಗು
ಳ್ದಳುರ್ದೊಡೆ ಬೂದಿಯಾದುದೊಡಲಾಗಳೆ ಮದ್ರ ಮಹಾಮಹೀಶನಾ|| ೪೮

ವ|| ಅಂತಜಾತಶತ್ರು ನೇತ್ರೋದ್ಭಾತಾನಳಂ ತ್ರಿಣೇತ್ರಲಲಾಟನಳನಂತಳವಲ್ಲದಳುರೆ ಮದ್ರನಾಥಂ ಭಸ್ಮೀಭೂತನಾದ ಮಾತನಹಿಕೇತನಂ ಕೇಳ್ದು-

ಸ್ನೇಹದಿಂದ ಪ್ರೇಮಕಲಹವಾಡುವ ರೀತಿ ಭೀಷ್ಮ ದ್ರೋಣ ಕರ್ಣರಿಂದ ಆಗದ ಒಂದು ರಾಜ್ಯಲಾಭ ನಿಮ್ಮ ಬಲದಿಂದ ನನಗಾಗುತ್ತದೆಯೇ. ನನ್ನ ವಿರೋಯನ್ನು ಮುರಿಯಲು ನಾನೇ ಶಕ್ತನಾಗಿದ್ದೇನೆ. ಅಲ್ಲಿಯವರೆಗೆ ಈ ಯುದ್ಧಭೂಮಿಯಲ್ಲಿ ಇರಿ. ವ|| ಎಂದು ದುಯೋಧನನು ಅವರ ಕಾಳಗವನ್ನು ಮಾತಿನಿಂದಲೇ ಜರೆದು ತೇರಿನಲ್ಲಿ ಬೀಡಿಗೆ ಹೋದನು. ಆಗ ಶಲ್ಯನು ಚಕ್ರವರ್ತಿಯಾದ ದುಯೋಧನನು ತನ್ನನ್ನು ಮೂದಲಿಸಿ ನುಡಿದುದಕ್ಕೆ ಮನಸ್ಸಿನಲ್ಲಿ ದುಖಪಟ್ಟು- ೪೪. ರಾಜನಾದ ದುರ್ಯೋಧನನಿಂದ ಇಷ್ಟರ ಮಟ್ಟಿಗೆ ಅವಮಾನವು ನನಗಾಯಿತು. ಇನ್ನು ಸಿಡಿದುಹೋಗುತ್ತೇನೆ, ಶತ್ರುಸೈನ್ಯವನ್ನು ತುಳಿದು ಅಜ್ಜಿಗುಜ್ಜಿಮಾಡುತ್ತೇನೆ ಎಂದು ಅತ್ಯಂತ ಭಯಂಕರವಾದ ಬಾಣಸಮೂಹದಿಂದಲೇ ಅವರನ್ನು ಹೂಳಲು ಪಾಂಡವಸೈನ್ಯವು ಆತನ ಬಾಣಗಳ ತುದಿಯಲ್ಲಿ ಸುರುಟಿಕೊಂಡು ರಾಶಿಯಾಗಿ ಹೋಯಿತು. ಶಲ್ಯನು ಇನ್ನೆಷ್ಟು ಪ್ರತಾಪಶಾಲಿಯೋ! ವ|| ಹಾಗೆ ಶಲ್ಯನು ಪಾಂಡವಸೈನ್ಯದಲ್ಲಿ ಒಂದಕ್ಷೋಹಿಣೀ ಸೈನ್ಯವನ್ನು ಕೊಂದು ದ್ರುಪದನ ಅಯ್ದುಜನ ಮಕ್ಕಳನ್ನೂ ಅವನ ಇಪ್ಪತ್ತೈದು ತಮ್ಮಂದಿರನ್ನೂ ಶಕಟವಿಕಟರೇ ಮೊದಲಾದ ಹನ್ನೆರಡುಸಾವಿರ ರಾಜರನ್ನೂ ಕೊಂದು ಮುಂದೆ ಪ್ರತಿಭಟಿಸುವವರಾರನ್ನೂ ಕಾಣದೆ ತನಗಿಂತ ಉತ್ತಮರಾದವರಾರೂ ಇಲ್ಲದೆ ನಿಂತನು. ಧರ್ಮರಾಜನು ಮೂರುಲೋಕಗಳೂ ಪೂರ್ಣವಾಗಿ ನಡುಗಿಸುವಂತೆ ಮದ್ದಲೆಯ ಗುರುತಿನ ಬಾವುಟದಿಂದ ಮರೆಯುತ್ತಿರುವ ತನ್ನ ತೇರನ್ನು ಹೆದರದೆ ಎದುರಾಗಿ ಹರಿಯಿಸಿದನು. ೪೫. ನಾವಿಬ್ಬರೂ ಸೇನಾಪತ್ಯವನ್ನು ವಹಿಸಿರುವ ವೀರರೇ ಆಗಿದ್ದೇವೆ. ದೇವತೆಗಳ ಸಮೂಹವು ಹೊಗಳುತ್ತಾ ದಾರಿಮಾಡಿಕೊಂಡು ನಮ್ಮನ್ನೇ ನೋಡುತ್ತಿದ್ದಾರೆ. ನೋಡು ಈಗ ಈ ಭಾರತಯುದ್ಧ ಪರಿಸಮಾಪ್ತಿಯಾಗುತ್ತಿದೆ. ಹೆದರದೆ ನಿಂತು ಯುದ್ಧಮಾಡು ಎನ್ನುತ್ತ ಬಾಣದ ಮಳೆಯನ್ನು ಸುರಿದು ಧರ್ಮರಾಯನು ಪ್ರಾಣವನ್ನು ಸೆಳೆದುಕೊಳ್ಳುವಂತೆ ಕಾದಿದನು. ೪೬. ತೇರು, ಕುದುರೆ, ಬಾವುಟ, ಬಿಲ್ಲುಗಳನ್ನು ವೇಗವಾಗಿ ಖಂಡಿಸಿ ಪ್ರಳಯಕಾಲದ ಗುಡುಗಿನ ಶಬ್ದದಿಂದ ಶಲ್ಯಮಹಾರಾಜನು ಗರ್ಜಿಸಿದನು. ಧರ್ಮರಾಯನು ೪೭. ಕೋಪದಿಂದ ತಲ್ಲಣಗೊಂಡು ಹೊಳೆಯುವ ಕತ್ತಿಯನ್ನು ಒರೆಯಿಂದ ಸೆಳೆದು ರಥದಿಂದ ಇಳಿದು ಉಬ್ಬಿ ಆವರಿಸಿದ ಶಕ್ತಿಯಿಂದ ಹೊಡೆಯಲು ಶಲ್ಯನ ಸಮೀಪಕ್ಕೆ ಬರಲು ಶಲ್ಯನೂ ತೇರಿನಿಂದ ಇಳಿದು ಧರ್ಮರಾಜನನ್ನು ಸಮೀಪಿಸಿ ಹೊಡೆದನು. ವ|| ಮದ್ದಾನೆಯು ಅಪ್ಪಳಿಸಿದ ದೊಡ್ಡ ಮರದಂತೆ ನೆಲವು ಅಳ್ಳಾಡುವ ಹಾಗೆ ಕೆಳಗೆ ಬಿದ್ದ ತನ್ನಳಿಯನಾದ ಧರ್ಮರಾಜನನ್ನು ಶಲ್ಯನು ನೋಡಿ (ಕರುಣದಿಂ ನೋಡಿ) ಕರುಣಿಸಿ,

೪೮. ಕೋಪವನ್ನುಂಟು ಮಾಡುವವರೆಗೂ ಈ ರಾಜನಿಂದ ಸಾವು ಹೇಗೂ ನನಗಾಗುವುದಿಲ್ಲ. ಹೇಗೂ ಈತನನ್ನು ರೇಗಿಸುತ್ತೇನೆ ಎಂದು ಎದೆಯನ್ನು ಒದ್ದನು. ತಕ್ಷಣವೇ ಮನ್ಮಥನಿಗೆ ಈಶ್ವರನುಕೋಪಿಸಿಕೊಂಡ ಹಾಗೆ ಆ ರಾಜನು ಕೋಪಿಸಿ ನೋಡಿದನು. ಕಣ್ಣಿನ ಬೆಂಕಿಯು

ಉ|| ಆ ದೊರೆಯರ್ ನದೀಜ ಘಟಸಂಭವ ಸೂರ್ಯತನೂಜ ಮದ್ರ ರಾ
ಜಾದಿ ಮಹೀಭುಜರ್ ಧುರದೊಳೆನ್ನಯ ದೂಸಱನೞ ಮೞದಂ|
ತಾದರಿದೊಂದೆ ಮೆಯ್ಯುೞದುದಿನ್ನೆನಗಾವುದೊ ಮೆಳ್ಪಡೆಯ್ದೆ ಮುಂ
ದಾದ ವಿರೋಸಾಧನಮನೆನ್ನ ಗದಾಶನಿಯಿಂದುರುಳ್ಚುವೆಂ|| ೪೯

ವ|| ಎಂದು ನಿಜಭುಜ ವಿಕ್ರಮೈಕಸಾಹಯನಾಗಿ ಗದೆಯಂ ಕೊಂಡು ಸಂಗ್ರಾಮ ರಂಗಕ್ಕೆ ನಡೆಯಲೆಂದಿರ್ದ ಕುರುಕುಳಚೂಡಾಮಣಿಯ ದಕ್ಷಿಣಕರಾಗ್ರಮಂ ಪಿಡಿದು ಸಂಜಯನಿಂತೆಂದಂ-

ಮ|| ಬೆವಸಾಯಂಗೆಯಲಿನ್ನುಮುಂಟೆಡೆ ಕೃಪಾಶ್ವತ್ಥಾಮರುಳ್ಳಂತೆ ಪಾಂ
ಡವರಂ ಗೆಲ್ವುದಸಾಧ್ಯಮಾಯ್ತೆ ನಿಜ ದೋರ್ದಂಡಂಬರಂ ಗಂಡರಾ|
ಹವರಂಗಕ್ಕೊಳರೇ ಸಮಂತು ಪಗೆಯಂ ಕೊಲ್ವಂತು ಗೆಲ್ವಂತು ಕಾ
ದುವುದೇಕಾಕಿಯೆ ಆಗಿ ದೇವರಿಪುಭೂಪಾಳರ್ಕಳೊಳ್ ಕಾದುವೈ|| ೫೦

ವ|| ಎಂಬುದುಮೆನ್ನುಮನೇಕಾಕಿಯೆಂದೇಳಿಸಿ ನುಡಿದೆಯೆಂದು ಸಂಜಯನ ಮೊಗಮಂ ಮುನಿದು ನೋಡಿ-

ಚಂ|| ವನ ಕರಿ ಕುಂಭ ಪಾಟನ ಪಟಿಷ್ಠ ಕಠೋರ ನಖ ಪ್ರಹಾರ ಭೇ|
ದನ ಗಳಿತಾಸ್ತ್ರ ರಕ್ತ ನವ ಮೌಕ್ತಿಕ ಪಙ್ತವಿಳಾಸ ಭಾಸುರಾ|
ನನನೆನೆ ಸಂದುದಗ್ರ ಮೃಗರಾಜನುಮಂ ಮದವದ್ವಿರೋ ಭೇ
ದನಕರನಪ್ಪ ಶೌರ್ಯಮದದೆನ್ನುಮನೊಂದೊಡಲೆಂಬ ಸಂಜಯಾ|| ೫೧

ವ|| ಎಂಬುದುಂ ದೇವರ ಬಾಹುಬಳಮಜೇಯಮುಮಸಹಾಯಮುಮಪ್ಪುದಾದ ದೊಡಂ ದೇಶ ಕಾಲ ವಿಭಾಗಮುಮನಾಪತ್ಪ್ರತೀಕಾರಮುಮನಱಯದ ವಿವೇಕಿಗಳಂತೆ ದೇವರ್ ನೆಗೞಲಾಗದೇನಂ ನೆಗಡಂ ಕುರುಪಿತಾಮಹನೊಳಾಳೋಚಿಸಿ ನೆಗೞ್ವುದೆಂದು ಮುೞಸಾ ನುಡಿದು ಕಾಲವಂಚನೆಗೆಯ್ಯಲ್ ಬಗೆದು ಸಂಗ್ರಾಮರಂಗದೊಳಗನೆ ಮುಂದಿಟ್ಟೊಡಗೊಂಡನೇಕ ನೃಪಶಿರ ಕಪಾಳಶಕಳಜರ್ಜರಿತಮುಂ ಪರಸ್ಪರ ಸಮರರಭಸ ಸಮುತ್ಸಾರಿತಮುಂ ಸಕಲ ಸಾಮಂತಮಕುಟಬದ್ಧಮೌಳಿಮಾಳಾವಿಗಳಿತಮಕುಟಕೋಟಿ ಸಂಘಟ್ಟನೋಚ್ಚಳಿತ ಮಣಿಶಲಾಕಾ ಸಂಕುಳಮುಂ ಸಮರಭರ ನಿರ್ಭರ ಭೀಮಸೇನ ಘನಗದಾಪ್ರಹರಣನಿಸ್ಸಹಮದವದನೇಕ ಮತ್ತ ಮಾತಂಗ ಪದನಖಖರ್ವಿತೋರ್ವೀತಳಮುಂ ಪ್ರಚಂಡಮಾರ್ತಂಡಮರೀಚಿತೀವ್ರಜ್ವಳನಾಸಾರ

ಅಟ್ಟಿಕೊಂಡು ಬಂದು ಆಗಲೆ ಸುಡಲು ಶಲ್ಯಮಹಾರಾಜನ ಶರೀರವು ಬೂದಿಯಾಯಿತು. ವ|| ಹಾಗೆ ಧರ್ಮರಾಯನ ಕಣ್ಣಿನಲ್ಲಿ ಹುಟ್ಟಿದ ಬೆಂಕಿಯು ಮುಕ್ಕಣ್ಣನ ಹಣೆಗಣ್ಣಿನ ಬೆಂಕಿಯಂತೆ ಅಳತೆಯಿಲ್ಲದಷ್ಟು ಸುಡಲು ಶಲ್ಯನು ಬೂದಿಯಾದ ಮಾತನ್ನು ದುರ್ಯೋಧನನು ಕೇಳಿದನು. ೪೯. ಅಂತಹ ಅದ್ಭುತಶಕ್ತಿಯುಳ್ಳ ಭೀಷ್ಮ, ದ್ರೋಣ, ಕರ್ಣ, ಮದ್ರರಾಜನೇ ಮೊದಲಾದ ರಾಜರುಗಳು ಯುದ್ಧದಲ್ಲಿ ನನ್ನ ಕಾರಣದಿಂದ ಸತ್ತು ನಿರ್ನಾಮವಾದರು. ಈ ನನ್ನದೊಂದೆ ಶರೀರ ಉಳಿದಿದೆ. ಇನ್ನು ನನಗೆ ಮಾಡುವ ಕಾರ್ಯವಾವುದು? ಸಂಪೂರ್ಣವಾಗಿ ನನ್ನನ್ನು ಎದುರಿಸುವ ಶತ್ರುಸೈನ್ಯವನ್ನು ನನ್ನ ಗದೆಯೆಂಬ ಸಿಡಿಲಿನಿಂದ ಉರುಳಿಸುವೆನು ವ|| ಎಂದು ತನ್ನ ಬಾಹುಬಲವೊಂದನ್ನೇ ಸಹಾಯವನ್ನಾಗಿ ಹೊಂದಿ ಗದೆಯನ್ನು ತೆಗೆದುಕೊಂಡು ಯುದ್ಧರಂಗಕ್ಕೆ ಹೋಗಬೇಕೆಂದಿದ್ದ ಕುರುಕುಲಚೂಡಾಮಣಿಯಾದ ದುಯೋಧನನ ಬಲಗೈಯ್ಯ ತುದಿಯನ್ನು ಹಿಡಿದುಕೊಂಡು ಸಂಜಯನು ಹೀಗೆಂದನು. -೫೦. ಕೃಪಾಶ್ವತ್ಥಾಮರಿರಲು ಕಾರ್ಯಭಾರಮಾಡುವುದಕ್ಕೆ ಇನ್ನೂ ಅವಕಾಶವುಂಟು. ಪಾಂಡವರನ್ನು ಗೆಲ್ಲುವುದು ಸಾಧ್ಯವಾಗಿದೆಯೆ? ನಿನ್ನ ಬಾಹುದಂಡದವರೆವಿಗೂ – ಅದಕ್ಕೆ ಸಮಾನರಾದ ಪೌರುಷಶಾಲಿಗಳು ಯುದ್ಧರಂಗದಲ್ಲಿದ್ದಾರೆಯೇ? ಶತ್ರುವನ್ನು ಕೊಲ್ಲುವ ಹಾಗೂ ಗೆಲ್ಲುವ ಹಾಗೆ ಕಾದಬೇಕು. ಸ್ವಾಮಿ; ಶತ್ರುರಾಜರುಗಳಲ್ಲಿ ಒಬ್ಬಂಟಿಗನೇ ಆಗಿ ಕಾದುತ್ತೀಯಾ? ವ|| ಎನ್ನಲು ನನ್ನನ್ನು ಏಕಾಕಿಯೆಂದು ಅಪಹಾಸ್ಯಮಾಡಿ ನುಡಿದೆಯಾ ಎಂದು ಸಂಜಯನ ಮುಖವನ್ನು ನೋಡಿ ಕೋಪಿಸಿಕೊಂಡು ೫೧. ಕಾಡಾನೆಯ ಕುಂಭಸ್ಥಳವನ್ನು ಭೇದಿಸುವುದರಲ್ಲಿ ಸಮರ್ಥವೂ ಕಠಿಣವೂ ಆದ ಉಗುರುಗಳ ಪೆಟ್ಟಿನಿಂದ ಬಿರಿದು ಅಲ್ಲಿಂದ ಸುರಿಯುತ್ತಿರುವ ಕೆಂಪಾದ ಹೊಸಮುತ್ತುಗಳ ಸಾಲುಗಳ ಶೋಭೆಯಿಂದ ಪ್ರಕಾಶಮಾನವಾದ ಮುಖವುಳ್ಳ ಮೃಗರಾಜನಾದ ಸಿಂಹವನ್ನೂ ಮದಿಸಿರುವ ಶತ್ರುಗಳನ್ನು ಸೀಳುವ ಪ್ರತಾಪದ ಸೊಕ್ಕಿನಿಂದ ಕೂಡಿದ ನನ್ನನ್ನು ಸಂಜಯಾ, ಏಕಾಕಿ ಎನ್ನುವೆಯಾ? ವ|| ಸ್ವಾಮಿಯವರ ತೋಳಿನ ಬಲವು ಜಯಿಸುವುದಕ್ಕೆ ಆಗದುದೂ ಸಹಾಯವನ್ನಪೇಕ್ಷಿಸದುದೂ ಆಗಿದೆ. ಆದರೂ ದೇಶಕಾಲವಿಭಾಗವನ್ನು ಆಪತ್ತಿಗೆ ತಿಳಿಯದಿರುವ ವಿವೇಕಶೂನ್ಯರಾದವರ ಹಾಗೆ ಸ್ವಾಮಿಯವರು ಮಾಡಕೂಡದು. ಏನು ಮಾಡಬೇಕಾದರೂ ಕುರುಪಿತಾಮಹನಾದ ಭೀಷ್ಮರಲ್ಲಿ ಆಲೋಚಿಸಿ ಮಾಡತಕ್ಕದ್ದು ಎಂದು (ದುರ್ಯೋಧನನ) ಕೋಪವು ಕಡಿಮೆಯಾಗುವ ಹಾಗೆ ಮಾತನಾಡಿ ಸಮಾಧಾನಪಡಿಸಿದನು. ಕಾಲವಂಚನೆಮಾಡಲು ಯೋಚಿಸಿ ಯುದ್ಧರಂಗದಲ್ಲಿ ಒಳಭಾಗದಲ್ಲಿಯೇ ದುರ್ಯೋಧನನನ್ನು ಮುಂದಿಟ್ಟು ಕೊಂಡು ಅವನೊಡನೆ ಅನೇಕರಾಜರ ತಲೆ ಮತ್ತು ಕಪಾಲಗಳ ತಲೆಯೋಡುಗಳಿಂದ ಕಿಕ್ಕಿರಿದಿದ್ದು ಒಬ್ಬೊಬ್ಬರ ಯುದ್ಧರಭಸದಿಂದ ಹೊರಡಿಸಲ್ಪಟ್ಟುದೂ ಸಕಲ ಸಾಮಂತರಾಜರ

ಕರಾಳಕರವಾಳಭಾಮಂಡಳಪರೀತೋದ್ಯತದೋರ್ದಂಡಚಂಡಪ್ರಚೆಂಡಸುಭಟಾರೂಢತುರಂಗಮ ವೇಗಬಲಪತಿತಖರಖುರಟಂಕಪರಿಸ್ಖಲನಕಳಿತ ವಿಷಮಸಮರಭೇರೀ ನಿಸ್ವನಮುಮಾಕರ್ಣಕೃಷ್ಣ ವಿಕ್ರಮಾರ್ಜುನಕಾರ್ಮುಕವಿಮುಕ್ತನಿಶಿತಸಾಯಕಸಂಕುಳಶಲ್ಯನಿಪತಿತಾನೇಕಕಳಕಳಾಕಳಿತಮುಂ ಪ್ರಕುಪಿಸೂತಹೂಂಕಾರ ಕಾತರಿತತರಳತರತುರಂಗದ್ರುತವೇಗಾಕೃಷ್ಣ ಧನಂಜಯರಥಚಟುಳ ಚಕ್ರನೇಮಿಧಾರಾಪರಿವೃತಸಂಘಟ್ಟನಸಮುಚ್ಚಳಿತ ಪಾಂಸು ಪಟಳಾಂಧಕಾರದುರ್ಲಕ್ಷಾಂತರಿಕ್ಷ ಕ್ಷಿತಿ

ದಿಗಂತರಾಳಾಂತರಮುಮನವರತನಿಹತನರಕರಿತುರಗನಿಕುರುಂಬಕೀಲಾಲಕಲ್ಲೋಲಪ್ರವರ್ತನಾನೇಕ ನದನದೀಪ್ರವಾಹ ಬಾಹುಳ್ಯದುಸ್ತರಾವತರಣಮಾರ್ಗಮುಂನಿಶಿತಾಸಿಪತ್ರಪತಿತಪ್ರಚಂಡ ಸುಭಟಮಸ್ತಕೋಚ್ಚಳಿತಚಟಾಚ್ಛಾಟನದುರ್ನಿರೀಕ್ಷ್ಯನರ್ತಿ ತಾನೇಕಕಬಂಧಬಂಧುರಮುಮಪ್ಪ ವಿಷಮ ಪ್ರದೇಶಂಗಳೊಳ್ ತೊಲಗಿ ತೊಲಗಿ ಪೋಗೆ ಸಂಜಯಂ ದುರ್ಯೋಧನನ ಮೊಗಮಂನೋಡಿ-

ಚಂ|| ಎಱಗುವನೇಕ ವಂಶ ನರಪಾಲಕರತ್ನಕಿರೀಟಕೋಟಿಯೊಳ್
ಮಿಱುಗುವ ಪದ್ಮರಾಗದ ಬಿಸಿಲ್ಗಗಿವೀ ನಿಜ ಪಾದಪದ್ಮವಿ|
ಯಿಱದು ಸಿಡಿಲ್ದ ಬಾಳ ಮೊನೆಯಂಬಿನ ತಿಂತಿಣಿಯೊಳ್ ತಗುಳ್ದು ಕಿ
ಕ್ಕಿಱಗಿಱದಿರ್ದ ಕೊಳ್ಗುಳದೊಳಂ ನಡೆವೀ ನಡೆಗೆಂತು ನೋಂತೆಯೋ|| ೫೨

ವ|| ಎನುತುಂ ಕಿಱದಂತರಮಂ ಬಂದು-

ಚಂ|| ಇವು ಪವನಾತ್ಮಜಂ ಗದೆಯಿನೆಲ್ವಡಗಾಗಿರೆ ಮೋದೆ ಮೊೞ ಬಿ
ೞ್ದುವು ಮದವಾರಣಂಗಳಿವು ನೋಡ ಗುಣಾರ್ಣವನಂಬಿನಿಂದುರು|
ಳ್ಳುವು ಮನುಜೇಂದ್ರ ರುಂದ್ರ ಮಕುಟಾಳಿಗಳೋಳಿಗಳಿಂತಿವಲ್ತೆ ಗಾಂ
ಡಿವಿಯ ವರೂಥಘಾತದೊಳೆ ನುರ್ಗಿದ ತುಂಗತುರಂಗಕೋಟಿಗಳ್|| ೫೩

ವ|| ಎಂದು ನೆಣದ ಪಳ್ಳಂಗಳಂ ಪಾಯ್ದುಂ ನೆತ್ತರ ತೊಗಳಂ ಬಂಜಿಸಿಯುಮಡಗಿನಿಡುವುಗಳಂ ದಾಂಟಿಯುಂ ಪೆಣದ ತಿಂತಿಣಿಯಂ ನೂಂಕಿಯುಂ ರಥದ ಘಟ್ಟಣೆಗಳನೇಱ ಪಾಯ್ದುಂ ತೇರ ಪಲಗೆಯಂ ಮೆಟ್ಟಿಯುಂ ಪೋಗಿವೋಗಿ ಭೂತ ಪ್ರೇತ ಪಿಶಾಚ ನಿಶಾಚರನಿಚಯನಿಚಿತಭೂಭಾಗಮನೆಯ್ದೆ ವಂದಾಗಳ್-

ತಲೆಗಳ ಸಾಲುಗಳಿಂದ ಜಾರಿದ ಕಿರೀಟಗಳ ತುದಿಯ ತಗುಲುವಿಕೆಯಿಂದ ಮೇಲೆದ್ದ ರತ್ನಸಲಾಕಿಗಳ ಸಮೂಹವನ್ನುಳ್ಳುದೂ ಯುದ್ಧಭಾರವನ್ನು ವಹಿಸಿರುವ ಭೀಮಸೇನನ ದೊಡ್ಡದಾದ ಗದೆಯ ಪೆಟ್ಟನ್ನು ಸಹಿಸಲಾಗದ ಮದ್ದಾನೆಗಳ ಕಾಲಿನುಗುರಿನಿಂದ ತೋಡಿದ ಭೂಭಾಗವನ್ನುಳ್ಳದೂ ಬಹಳ ಕಾಂತಿಯಿಂದ ಕೂಡಿದ ಸೂರ್ಯನ ತೀವ್ರವಾದ ಕಿರಣಗಳಂತೆಯೂ ತೀವ್ರಾಗ್ನಿಯಂತೆಯೂ ಹೊಳೆಯುವ ಭಯಂಕರವಾದ ಕತ್ತಿಗಳ ಕಾಂತಿಯ ಪರಿವೇಷದಿಂದ ಸುತ್ತುವರಿಯಲ್ಪಟ್ಟು ಎತ್ತರವಾದ ಬಾಹುಗಳಿಂದ ಪ್ರಚಂಡವಾದ ಸುಭಟರು ಹತ್ತಿರುವ ಕುದುರೆಗಳ ಸೈನ್ಯದ ವೇಗದಿಂದ ಬೀಳಿಸಲ್ಪಟ್ಟ ಹೇಸರಗತ್ತೆಗಳ ತೀಕ್ಷ್ಣವಾದ ಗೊರಸಿನ ಲಾಳಗಳ ಜಾರುವಿಕೆಯಿಂದ ಉಂಟಾದ ಶಬ್ದವುಳ್ಳದ್ದೂ ಕಿವಿಯವರೆಗೂ ಸೆಳೆಯಲ್ಪಟ್ಟ ಅರ್ಜುನನ ಬಾಣದಿಂದ ಬಿಡಲ್ಪಟ್ಟ ಹರಿತವಾದ ಬಾಣಗಳ ಶಲ್ಯದಿಂದ (ಚೂರು) ಬೀಳಿಸಲ್ಪಟ್ಟ ಅನೇಕ ಕಳಕಳಶಬಲ್ದಗಳಿಂದ (ಕೂಡಿದುದೂ) ತುಂಬಿದುದೂ ಕೋಪಗೊಂಡ ಸಾರಥಿಗಳ ಗರ್ಜನೆಗಳಿಂದ ಸಂಭ್ರಮಗೊಂಡ ಚಂಚಲವಾದ ಕುದುರೆಯ ಓಟದ ವೇಗದಿಂದ ಸೆಳೆಯಲ್ಪಟ್ಟ ಅರ್ಜುನನ ಬಲಿಷ್ಠವಾದ ಚಕ್ರಗಳ ಸುತ್ತಲಿರುವ ಕಬ್ಬಿಣದ ಪಟ್ಟಿಗಳು ಹೊರಳಿದ ಹೊಡೆತದಿಂದ ಮೇಲಕ್ಕೆದ್ದ ಧೂಳುಗಳ ಪದರದಿಂದ ಕಾಣಲಾಗದ ಭೂಮ್ಯಾಕಾಶ ದಿಗ್ಭಾಗಗಳ ಒಳಭಾಗವನ್ನುಳ್ಳುದೂ ಯಾವಾಗಲೂ ಹೊಡೆಯಲ್ಪಟ್ಟ ಮನುಷ್ಯ, ಆನೆ, ಕುದುರೆಗಳ ಸಮೂಹದ ರಕ್ತಗಳ ಅಲೆಗಳ ಹೊರಳುವಿಕೆಯಿಂದ ಆದ ಅನೇಕ ನದನದೀಪ್ರವಾಹಗಳನ್ನು ದಾಟಲಸಾಧ್ಯವಾದ ದಾರಿಗಳನ್ನುಳ್ಳುದೂ, ಹರಿತವಾದ ಕತ್ತಿಯಿಂದ ಬೀಳಿಸಲ್ಪಟ್ಟ ಭಯಂಕರವಾದ ಸುಭಟರ ತಲೆಯಿಂದ ಮೇಲಕ್ಕೆದ್ದ ಜುಟ್ಟುಗಳ ಚಲನೆಯಿಂದ ಮರೆಯಾಗಿರುವ ಅನೇಕ ಅಟ್ಟೆಗಳ ನೃತ್ಯದಿಂದ ಮನೋಹರವಾಗಿರುವುದೂ ಆಗಿರುವ ಹಳ್ಳಕೊಳ್ಳಗಳ ಪ್ರದೇಶದಲ್ಲಿ ನಡೆದು ಹೋಗುತ್ತಿರುವ ದುರ್ಯೋಧನನ ಮುಖವನ್ನು ಸಂಜಯನು ನೋಡಿ ೫೨. ನಮಸ್ಕಾರಮಾಡುವ ಅನೇಕ ಮನೆತನಗಳ ರಾಜರ ಕಿರೀಟದ ತುದಿಯಲ್ಲಿ ಪ್ರಕಾಶಿಸುತ್ತಿರುವ ಪದ್ಮರಾಗದ ಕಾಂತಿಗೂ ರತ್ನಗಳ ಪ್ರಕಾಶಕ್ಕೂ ಅಂಜುತ್ತಿದ್ದ ಈ ನಿನ್ನ ಪಾದಕಮಲಗಳು ಈಗತಾನೇ ಕತ್ತಲಿಸಲ್ಪಟ್ಟು ಸಿಡಿದು ಬಿದ್ದಿರುವ ಮೊನಚಾದ ಬಾಣಗಳ ಸಮೂಹದಲ್ಲಿ ಸೇರಿಕೊಂಡು ಒತ್ತಾಗಿ ಸೇರಿರುವ ಯುದ್ಧರಂಗದಲ್ಲಿಯೂ ನಡೆಯುವ ಈ ನಡೆಗೆ ಎಷ್ಟು ವ್ರತಮಾಡಿದ್ದೆಯೋ?- ವ|| ಎನ್ನುತ್ತ ಸ್ವಲ್ಪದೂರ ಬಂದು ೫೩. ಇವು ಭೀಮನು ಗದೆಯಿಂದ ಮೂಳೆ ಮಾಂಸಗಳಾಗುವಂತೆ ಹೊಡೆಯಲು ಕುಸಿದು ಬಿದ್ದ ಮದ್ದಾನೆಗಳು. ಇವು ನೋಡಪ್ಪ, ಅರ್ಜುನನ ಬಾಣದಿಂದ ಉರುಳಿಬಿದ್ದ ರಾಜರ ರಾಶಿಯಾದ ಕಿರೀಟಗಳ ಸಮೂಹಗಳು. ಇವು ಅರ್ಜುನನ ತೇರಿನ ಪೆಟ್ಟಿನಿಂದ ಜಜ್ಜಿಹೋದ ಎತ್ತರವಾದ ಕುದುರೆಗಳ ಸಮೂಹಗಳು ವ|| ಎಂಬುದಾಗಿ ಕೊಬ್ಬುಗಳ ಹಳ್ಳವನ್ನು ಹಾಯ್ದೂ ರಕ್ತಪ್ರವಾಹಗಳನ್ನು ತಪ್ಪಿಸಿಯೂ ಮಾಂಸದ ರಾಶಿಗಳನ್ನು ದಾಟಿಯೂ ನರಗಳ ಸಮೂಹವನ್ನು ತಳ್ಳಿಯೂ ತೇರಿನ ಸಂಘಟ್ಟಣೆಗಳಿಂದಾದ ದಿಣ್ಣೆಹಳ್ಳಗಳನ್ನು ಹತ್ತಿ ಇಳಿದೂ ತೇರಿನ ಹಲಗೆಗಳನ್ನು ತುಳಿದೂ ನಡೆದು ಹೋಗಿ ಭೂತಪ್ರೇತಪಿಶಾಚ ರಾಕ್ಷಸಸಮೂಹದಿಂದ ತುಂಬಿದ ಪ್ರದೇಶವನ್ನು ಸೇರಿದರು. ೫೪. ಅರಿಕೇಸರಿಯಲ್ಲಿ ಹೇಗೂ ವಿರೋಧವು ಬೇಡ, ಸಮಾನವಾಗಿ ಕೂಡಿ

ಉ|| ಬೇಡ ವಿರೋಧಮೆಂತುಮರಿಕೇಸರಿಯೊಳ್ ಸಮಸಂದು ಸಂಯಂ
ಮಾಡೆನೆ ಮಾಡಲೊಲ್ಲದೆ ಸುಹೃದ್ಬಲಮೆಲ್ಲಮನಿಕ್ಕಿ ಯುದ್ಧಮಂ|
ಮಾಡಿದ ಜಾತಿಬೆಳ್ ನಿನಗದೇವಿರಿದೀಯೆಡಱಂದು ಮುಂದೆ ಬಂ
ದೇಡಿಸುವಂತಿರಾಡಿದುದದೊಂದು ಮರುಳ್ ಫಣಿರಾಜಕೇತುವಂ|| ೫೪

ಚಂ|| ಮರುಳೆನೆ ಲೋಕದೊಳ್ ನೆಗೞ್ದು ಕೊಳ್ಗುಳದೊಳ್ ಮರುಳಾಟವಾಡುವಾಂ
ಮರುಳೆನೊ ವಿಕ್ರಮಾರ್ಜುನನೊಳೊಲ್ಲದೆ ಸಂಯನುರ್ಕಿ ಕೆಟ್ಟ ನೀಂ|
ಮರುಳಯೊ ಪೇೞ ಪೇೞದೊಡೆ ಪೋಗದಿರೀಶ್ವರನಾಣೆಯೆಂದು ಪು
ಲ್ಮರುಳಿನಿಸಾನುಮಂ ತೆಗೆದು ಕಾಡಿದುದಲ್ಲಿ ಫಣೀಂದ್ರಕೇತುವಂ|| ೫೫

ವ|| ಆಗಳಾ ಮರುಳ ಕೆಯ್ತಕ್ಕೆ ದುರ್ಯೋಧನಂ ಮುಗುಳ್ನಗೆ ನಕ್ಕೆನ್ನಂ ವಿಧಾತ್ರಂ ಮರುಳ್ಮಾಡಿದ ಕಾರಣದಿಂದೀ ಮರುಳ ಕಣ್ಗಾಂ ಮರುಳಾಗಿ ತೋಱದೆನೆಂದಲ್ಲಿಂ ತಳರ್ದು ಕಿಱದಂತರಮಂ ನಡೆದೊಂದೆಡೆಯೊಳನೇಕ ಕರಿ ತುರಗ ನರ ಕಳೇವರ ಸಂಕೀರ್ಣಮುಮುಭಯ ಪಕ್ಷಸ್ಥಿತೋಭಯಕುಲಶುದ್ಧನೃಪತಿಮಣಿಮಕುಟಮರೀಚಿಮೇಚಕಿತಮುಮಪ್ಪ ಸಂಗ್ರಾಮಭೂಮಿಯ ನಡುವೆ ಧೃಷ್ಟದ್ಯುಮ್ನಕಚಗ್ರಹವಿಲುಳಿತ ಮೌಳಿಯುಂ ತದೀಯ ಕೌಕ್ಷೇಯಕಧಾರಾವಿದಾರಿತ ಶರೀರನುಮಾಗಿ ಬಿೞರ್ದ ಶರಾಚಾರ್ಯರಂ ಕಂಡು-

ಚಂ|| ನೆಗೞ್ದುದು ಬಿಲ್ಲ ಬಿನ್ನಣಮಿಳಾವಳಯಕ್ಕೆ ಸಮಸ್ತ ಧಾತ್ರಿ ಕೆ
ಯ್ಮುಗಿವುದು ನಿಮ್ಮದೊಂದೆ ಪೆಸರ್ಗೇಳ್ವೊಡೆ ನಿಮ್ಮ ಸರಲ್ಗೆ ದೇವರುಂ|
ಸುಗಿವರಯೋನಿಸಂಭವರಿರೆನ್ನಯ ದೂಸಱನೆನ್ನ ಕರ್ಮದಿಂ
ಪಗೆವರಿನಕ್ಕಟಾ ನಿಮಗವಿಯಿರವಾದುದೆ ಕುಂಭಸಂಭವಾ|| ೫೬

ವ|| ಎಂದು ಗುರುವಿನ ಪಾದಕಮಲಂಗಳಂ ತಲೆಯ ಮೇಲಿಟ್ಟು ಪೊಡೆವಟ್ಟಂತೆ ನಡೆತಂದು ವೃಕೋದರನಿಂ ನಿಶ್ಯೇಷ ಪೀತರುರನಪ್ಪ ದುಶ್ಯಾಸನನಂ ಕಂಡಾತನಂ ಮುತ್ತಿ ಸುತ್ತಿಱದ ಮುದುವರ್ದುಗಳುಮನಗಲೆ ಮೆಟ್ಟಿ ಪೋೞ್ದು ಭೀಮಸೇನಂ ಮುನ್ನಂ ಕುಡಿದುದಱಂ ನೆತ್ತರಂ ಪಡೆಯದಾಕಾಶಕ್ಕೆ, ಬಾಯಂ ತೆದೂಳ್ವ ಬಳ್ಳುಗಳುಮಂ ನರವುಮಂ ಬರಿಯುಮಂ ಪತ್ತಿ ತೆಗೆದು ಪೆಡಸಾರ್ವ ನರಿಗಳುಮಂ ತಾನೆ ಸೋದು ಸೋದರನೞಲೊಳ್ ಕಣ್ಣ ನೀರ್ಗಳಂ ಸುರಿದು-

ಕಂ|| ನಿನ್ನಂ ಕೊಂದನ ಬಸಿಱಂ
ನಿನ್ನಂ ತೆಗೆಯದೆಯುಮವನ ಕರುಳಂ ಪರ್ದಿಂ|
ಮುನ್ನುಂಗಿಸಿ ನೋಡದೆಯುಂ
ಮುನ್ನಮೆ ಯುವರಾಜ ನಿನ್ನನಾಂ ನೋಡಿದೆನೇ|| ೫೭

ಸಂಯನ್ನು ಮಾಡು ಎಂದರೂ ಒಪ್ಪದೆ ಸ್ನೇಹಿತರನ್ನು ನಾಶಮಾಡಿ ಯುದ್ಧವನ್ನು ಮಾಡಿದ ಜಾತಿಮರುಳಾದ ನಿನಗೆ ಈ ಕಷ್ಟಗಳು ಏನು ದೊಡ್ಡದು ಎಂದು ಮುಂದೆ ಬಂದು ದುರ್ಯೋಧನನನ್ನು ಅಪಹಾಸ್ಯಮಾಡುವಂತೆ ಒಂದು ಮರುಳು ಮಾತನಾಡಿತು. ೫೫. ಲೋಕದಲ್ಲಿ ಮರುಳುಗಳು ಎನ್ನಿಸಿಕೊಂಡು ಪ್ರಸಿದ್ಧರಾಗಿ ಯುದ್ಧರಂಗದಲ್ಲಿ ಮರುಳುಗಳ ಆಟವನ್ನಾಡುವ ನಾವುಗಳು ಮರುಳುಗಳೋ (ಬುದ್ಧಿಗೇಡಿಗಳೋ) ವಿಕ್ರಮಾರ್ಜುನನಲ್ಲಿ ಸಂಯನ್ನೊಲ್ಲದೆ ಉಬ್ಬಿ ಕೆಟ್ಟ ನೀನುದಡ್ಡನೋ ಹೇಳು. ಹೇಳಿದಿದ್ದರೆ ಹೋಗಬೇಡ; ಈಶ್ವರನಾಣೆ ಎಂದು ಹುಲ್ಲಿನಂತೆ ಬಹು ಲಘುವಾದ ಒಂದು ಮರುಳು ಒಂದಿಷ್ಟು ತಡೆದು ದುರ್ಯೋಧನನ್ನು ಹಿಂಸೆ ಮಾಡಿತು. ವ|| ಆಗ ಆ ಪಿಶಾಚಿಯ ಕೆಲಸಕ್ಕೆ ದುರ್ಯೋಧನನು ಮುಗುಳ್ನಗೆ ನಕ್ಕು ನನ್ನನ್ನು ಬ್ರಹ್ಮನು ಮರುಳುಮಾಡಿದ ಕಾರಣದಿಂದ ಈ ಪಿಶಾಚದ ಕಣ್ಣಿಗೆ ನಾನು ಹುಚ್ಚನಾಗಿ ತೋರಿದೆನು ಎಂದು ಅಲ್ಲಿಂದ ಹೊರಟು ಸ್ವಲ್ಪ ದೂರ ನಡೆದು ಒಂದು ಕಡೆಯಲ್ಲಿ ಅನೇಕ ಆನೆ, ಕುದುರೆ ಮನುಷ್ಯರ ದೇಹಗಳಿಂದ ತುಂಬಿದುದೂ ಎರಡು ವಂಶದ ಪಕ್ಷಗಳಲ್ಲಿಯೂ (ತಂದೆತಾಯಿಗಳ ಎರಡು ಕುಲದಲ್ಲಿಯೂ) ಶುದ್ಧರಾದವರ ರತ್ನಕಿರೀಟಗಳ ಕಾಂತಿಯಿಂದ ಕೂಡಿಕೊಂಡಿರುವ ಆ ಯುದ್ಧಭೂಮಿಯ ಮಧ್ಯಭಾಗದಲ್ಲಿ ಧೃಷ್ಟದ್ಯುಮ್ನನು ಜುಟ್ಟನ್ನು ಹಿಡಿದುದರಿಂದ ತಿರುಗಿಕೊಂಡಿರುವ ತಲೆಯುಳ್ಳವನೂ ಅವನ ಕತ್ತಿಯ ಅಲಗುಗಳಿಂದ ಸೀಳಲ್ಪಟ್ಟ ಶರೀರವುಳ್ಳವನೂ ಆಗಿ ಬಿದ್ದಿದ್ದ ದ್ರೋಣಾಚಾರ್ಯನನ್ನು ನೋಡಿದನು. ೫೬. ನಿಮ್ಮ ಚಾಪವಿದ್ಯಾಕೌಶಲವು ಭೂಮಂಡಲದಲ್ಲೆಲ್ಲ ಪ್ರಸಿದ್ಧವಾದುದು. ನಿಮ್ಮಒಂದು ಹೆಸರನ್ನು ಕೇಳಿದರೆ ಸಮಸ್ತ ಲೋಕವೂ ಕೈಮುಗಿಯುವುದು. ನಿಮ್ಮ ಬಾಣಗಳಿಗೆ ದೇವತೆಗಳೂ ಭಯಪಡುವರು. ನೀವು ಅಯೋನಿಜರಾಗಿದ್ದೀರಿ; ನನ್ನ ಕಾರಣದಿಂದ ನನ್ನ ದುಷ್ಕರ್ಮದಿಂದ ಅಯ್ಯೋ ದ್ರೋಣಾಚಾರ್ಯರೇ ಶತ್ರುಗಳಿಂದ ನಿಮಗೂ ಈ ದುಸ್ಥಿತಿಯುಂಟಾಯಿತೇ? ವ|| ಎಂದು ಗುರುವಿನ ಪಾದಕಮಲಗಳನ್ನು ತಲೆಯ ಮೇಲಿಟ್ಟು ನಮಸ್ಕಾರಮಾಡಿ ಹಾಗೆಯೇ ಮುಂದೆ ನಡೆದು ಬಂದು ಭೀಮಸೇನನಿಂದ ಸ್ವಲ್ಪವೂ ಉಳಿಯದಂತೆ ಕುಡಿಯಲ್ಪಟ್ಟ ರಕ್ತವನ್ನುಳ್ಳ ದುಶ್ಯಾಸನನನ್ನು ನೋಡಿ ಮುತ್ತಿ ಬಳಸಿಕೊಂಡಿದ್ದ ಮುದಿಹದ್ದುಗಳನ್ನು ಬಿಟ್ಟು ದೂರಹೋಗುವಂತೆ ಕಾಲಿನಿಂದ ಶಬ್ದಮಾಡಿ ಸೀಳಿ ಭೀಮನು ಮೊದಲೇ ಕುಡಿದುಬಿಟ್ಟಿದ್ದುದರಿಂದ ರಕ್ತವನ್ನು ಪಡೆಯದೆ ಆಕಾಶದ ಕಡೆ ಬಾಯಿಬಿಟ್ಟು ಕೂಗುತ್ತಿರುವ ಗುಳ್ಳೆನರಿಗಳನ್ನೂ ನರಗಳನ್ನೂ ಪಕ್ಕೆಗಳನ್ನೂ ಕಿತ್ತೆಳೆದು ಹಿಂದಕ್ಕೆ ಹೋಗುವ ನರಿಗಳನ್ನೂ ತಾನೇ ಅಟ್ಟಿ ತಮ್ಮನ ದುಖದಿಂದ ಕಣ್ಣೀರನ್ನು ಸುರಿಸಿದನು. ೫೭. ನಿನ್ನನ್ನು

ವ|| ಎಂಬುದುಂ ಸಂಜಯನಿಂತಪ್ಪ ವಿಪ್ರಳಾಪಂಗಳ್ ಶೌರ್ಯಶಾಲಿಗಳ್ಗನುಚಿತ ಮತ್ತಮೆೞ್ತರ್ಪುದೆಂದು ತಳರ್ದು ಬಂದಮೋಘಾಸ್ತ್ರ ಧನಂಜಯ ಕರಪರಿಚ್ಯುತವಿಕರ್ಣ ವಿಶೀರ್ಣನಾಗಿರ್ದ ಕರ್ಣಸೂನುವಂ ವೃಷಸೇನನಂ ಕಂಡು ಕರ್ಣನಂ ನೆನೆದೆರ್ದೆದೆದು ದುರ್ಯೋಧನನ ಕೆಳೆಯನಪ್ಪ ನಿಮ್ಮಮ್ಮಂ ಕರ್ಣನೆಲ್ಲಿದನೆಂದು ತೆಕ್ಕನೆ ತೀವಿದ ಕಣ್ಣ ನೀರೊಳ್ ದೆಸೆಗಾಣದೆ ನಿಂದಿರ್ದ ಸುಯೋಧನನಂ ಸಂಜಯನಿಂತೆಂದಂ-

ಚಂ|| ನರಶರಘಾತದಿಂ ಪಱದು ಪತ್ತಿಸಿದಂತೆವೊಲಿರ್ದ ಮೆಯ್ ಭಯಂ
ಕರತರಮಾಗೆ ಮುಯ್ವುವರೆಗಂ ತೆಗೆದಂಬಿನ ಮುಷ್ಟಿ ಬಿನ್ನಣಂ|
ಬೆರಸಿರೆ ಪೋದ ಪಂದಲೆಯೊಳಾದ ಮುಗುಳ್ನಗೆ ಭೀತರಾದರೆ
ಲ್ಲರುಮನಳುರ್ಕೆಯಿಂ ನಗುವವೋಲ್ ರವಿನಂದನನಿತ್ತಲಿರ್ದಪಂ|| ೫೮

ವ|| ಎಂಬುದುಮಾಗಳ್ ತೆಪ್ಪತ್ತುಮೆಲ್ಲಿದನೆತ್ತಣನೆಂದು ಕರ್ಣನ ಕಳೇವರಮಂ ನೋಡಿ ನೋಡಲಾಱದೆ ಕಣ್ಗಳಂ ಮುಟ್ಟ ಮೂರ್ಛೆವೋಗಲ್ ಬಗೆದನಂ ಸಂಜಯ ತೞ್ಕೈಸಿಕೊಂಡಾಗಳ್ ಚೇತರಿಸಿ ಕೂರ್ಮೆ ಕೆಯ್ಮಿಕ್ಕು ಬರೆ ಸೈರಿಸಲಾಱದೆ-

ಚಂ|| ಬೆಸನೆಡೆಗಳ್ಗೆ ತೊೞ್ತ್ತುಬೆಸನಂಗಳವುಂಕಿದೊಡಾಗದೆಂದು ಬ
ಗ್ಗಿಸುವೆಡೆಗಾಳ್ದನಿಂತು ನೆಗೞೆಂಬೆಡೆಯೊಳ್ ಗುರು ಪೆರ್ಚಿದೊಂದು ಬೇ|
ವಸದೆಡೆಗಾಶ್ರಯಂ ಮನಮನೊಪ್ಪಿಸುವೀಯೆಡೆಯೊಳ್ ಮನಂ ವಿಚಾ
ರಿಸುವೊಡೆ ಕರ್ಣನಲ್ಲದೆನಗಾವೆಡೆಗಂ ಪೆಱನೊರ್ವನಾವನೋ|| ೫೯

ಮ|| ನೆಲನಂ ಕೊಟ್ಟನಿನಾತ್ಮಜಾತನೆನಗಾಂ ತಕ್ಕೂರ್ಮೆಯಿಂದಂ ಜಳಾಂ
ಜಲಿಯಂ ಕೊಟ್ಟೆನುಮಿಲ್ಲ ಸೂರ್ಯತನಯಂ ತೇಜೋಗ್ನಿಯಿಂದಂ ದ್ವಿಷ|
ದ್ಬಲಮಂ ಸುಟ್ಟನುದಾತ್ತಪುಣ್ಯನವನಂ ಚೈತಾಗ್ನಿಯಿಂ ಸುಟ್ಟೆನಿ
ಲ್ಲೊಲವಿಂದಿಂತೆರ್ದೆಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೋಧನಂ|| ೬೦

ವ|| ಎಂದು ನೊಂದು ನುಡಿದ ದುರ್ಯೋಧನನಂ ಸಂಜಯನಿಂತೆಂದಂ-

ಶಾ|| ಕೊಟ್ಟೈಕಿರ್ಚನುದಗ್ರಶೋಕಶಿಖಿಯಿಂ ಕಣ್ಣೀರ್ಗಳಿಂದೆಯ್ದೆ ನೀ
ರ್ಗೊಟ್ಟೈ ಸೂರ್ಯಸುತಂಗೆ ಲೌಕಿಕಮನೇನಿಂ ದಾಂಟಿದೈ ಪೋೞ್ದು ಸೀ|
ಳ್ದೊಟ್ಟಿಂ ವೈರಿಯನೊಡ್ಡಿ ತತ್ಪಿಶಿತದಿಂದಾತಂಗೆ ನೀಂ ಕೂರ್ಪೋಡೇ
ಗೆಟ್ಟತ್ತಿನ್ನಡೆ ಮಾಡು ತದ್ದಿ ಜಗಣಕ್ಕಾಹಾರಮಂ ಭೂಪತೀ|| ೬೧

೫೮. ಕೊಂದವನ ಹೊಟ್ಟೆಯಿಂದ ನಿನ್ನನ್ನು ತೆಗೆಯದೆಯೂ ಅವನ ಕರುಳನ್ನು ಹದ್ದಿಗೆ ಮೊದಲು ನುಂಗಿಸಿ ನೋಡದೆಯೂ ಅದಕ್ಕೆ ಮುಂಚೆಯೇ ಯುವರಾಜನಾದ ದುಶ್ಯಾಸನನೇ ನಿನ್ನನ್ನು ನಾನು ನೋಡಿದೆನೇ? ವ|| ಸಂಜಯನು ಇಂತಹ ವಿಶೇಷವಾದ ಅಳುವಿಕೆಯು ಶೌರ್ಯಶಾಲಿಗಳಿಗೆ ಯೋಗ್ಯವಲ್ಲ. ಆ ಕಡೆ ಬರಬೇಕು ಎಂದು ಹೇಳಲು ಅಲ್ಲಿಂದ ಹೊರಟುಬಂದು ಅಮೋಘಾಸ್ತ್ರಧನಂಜಯ ನಾದ ಅರ್ಜುನನ ಕಯ್ಯಿಂದ ಬಿಡಲ್ಪಟ್ಟ ಬಾಣದಿಂದ ಸೀಳಲ್ಪಟ್ಟಿದ ಕರ್ಣನ ಮಗನಾದ ವೃಷಸೇನನನ್ನು ನೋಡಿ ಕರ್ಣನನ್ನು ಜ್ಞಾಪಿಸಿಕೊಂಡು ಎದೆಬಿರಿದು ‘ದುರ್ಯೋಧನನ ಸ್ನೇಹಿತನಾದ ನಿಮ್ಮ ತಂದೆ ಕರ್ಣನೆಲ್ಲಿದ್ದಾನೆ ಎಂದು ಥಟ್ಟಕ್ಕನೆ ತುಂಬಿದ ಕಣ್ಣೀರಿನಿಂದ ದಿಕ್ಕು ಕಾಣದೆ ನಿಂತಿದ್ದ ದುರ್ಯೋಧನನನ್ನು ಕುರಿತು ಸಂಜಯನು ಹೀಗೆಂದನು- ಅರ್ಜುನನ ಬಾಣದ ಪೆಟ್ಟಿನಿಂದ ಹರಿದು ಹಂಚಿದ ಹಾಗಿರುವ ಶರೀರ, ಅತ್ಯಂತ ಭಯಂಕರವಾಗರಲು ಹೆಗಲ ತುದಿಯವರೆಗೂ ಸೆಳೆದ ಬಾಣ ಹಿಡಿದ ಮುಷ್ಟಿ, ಕೌಶಲದಿಂದ ಕೂಡಿರಲು ಕತ್ತರಿಸಿಹೋದ ಹಸಿಯ ತಲೆಯಲ್ಲಿ ಕಾಣಿಸುತ್ತಿರುವ ಮುಗುಳ್ನಗೆ, ಇವುಗಳಿಂದ ಕೂಡಿ ಹೆದರಿ ಕೊಂಡಿರುವವರನ್ನೆಲ್ಲ ಅತಿಶಯವಾದ ರೀತಿಯಲ್ಲಿ ನಗುತ್ತಿರುವ ಹಾಗೆ ಸೂರ್ಯಪುತ್ರನಾದ ಕರ್ಣನು ಈ ಕಡೆ ಇದ್ದಾನೆ. ವ|| ಎನ್ನಲು ಆಗಲೆ ಚೇತರಿಸಿಕೊಂಡು ಎಲ್ಲಿದ್ದಾನೆ ಯಾವ ಕಡೆ ಎಂದು ಕರ್ಣನ ಶರೀರವನ್ನು ನೋಡಿ ನೋಡಲಾರದೆ ಕಣ್ಣುಗಳನ್ನು ಮುಚ್ಚಿಕೊಂಡು ಮೂರ್ಛಿತನಾದವನನ್ನು ಸಂಜಯನು ತಬ್ಬಿಕೊಳ್ಳಲು ಚೇತರಿಸಿಕೊಂಡು ಪ್ರೀತಿಯು (ಸ್ನೇಹವು) ಕೈಮೀರಿ ಬರುತ್ತಿರಲು ಅದನ್ನು ಸೈರಿಸಲಾರದವನಾದನು. ೫೯. ಕಾರ್ಯಮಾಡುವ ಸಂದರ್ಭದಲ್ಲಿ ಸೇವಕನಂತೆಯೂ ವ್ಯಸನಗಳು ಮೇಲೆ ಮೇಲೆ ಒತ್ತಿ ಬರುತ್ತಿರಲು ಇದಾಗುವುದಿಲ್ಲ ಎಂದು ಬೆದರಿಸುವ ಸಮಯದಲ್ಲಿ ಯಜಮಾನನಂತೆಯೂ (ಸ್ವಾಮಿ-ಒಡೆಯ) ಹೀಗೆ ಮಾಡು ಎನ್ನುವ ಸಮಯದಲ್ಲಿ ಗುರುವಿನಂತೆಯೂ; ಅಕವಾದ ವ್ಯಥೆಯುಂಟಾದಾಗ ಅವಲಂಬನದಂತೆಯೂ ಮನಸ್ಸನ್ನೊಪ್ಪಿಸುವ ಸಂದರ್ಭದಲ್ಲಿ ಮನಸ್ಸೇ ಆಗಿಯೂ ಇದ್ದಂಥ ಕರ್ಣನನ್ನು ಬಿಟ್ಟು ನನಗೆ ಎಲ್ಲ ಸಮಯಕ್ಕೂ ಸಹಾಯಕನಾಗುವ ಮತ್ತೊಬ್ಬನಾವನಿದ್ದಾನೆ? ೬೦. ಕರ್ಣನು ನನಗೆ (ಭೂಮಿಯನ್ನು) ರಾಜ್ಯವನ್ನೇ ಸಂಪಾದಿಸಿ ಕೊಟ್ಟನು. ನಾನು ಅದಕ್ಕನುಗುಣವಾಗಿ ಪ್ರೀತಿಯಿಂದ ಅವನಿಗೆ ತರ್ಪಣವನ್ನು ಕೊಟ್ಟಿಲ್ಲ. ಸೂರ್ಯನ ಮಗನಾದ ಕರ್ಣನು ತನ್ನ ತೇಜಸ್ಸೆಂಬ ಅಗ್ನಿಯಿಂದ ವೈರಿಸೈನ್ಯವನ್ನು ಸುಟ್ಟನು. ಬಹಳ ಪುಣ್ಯಶಾಲಿಯಾದ ಅವನನ್ನು ಚಿತೆಯ ಬೆಂಕಿಯಿಂದ ಸುಟ್ಟಿಲ್ಲ; ಹೀಗೆ ಕರ್ಣನಲ್ಲಿ ಎದೆಸೋಂಕಿ ಪ್ರೀತಿಯಿಂದ ಇರುವವನು ದುರ್ಯೋಧನನ ಹಾಗೆ ಬೇರೆಯಾದವನು ಉಂಟೆ? ವ|| ಎಂದು ದುಖಿಸಿ ಆಡಿದ ದುರ್ಯೋಧನನಿಗೆ ಸಂಜಯನು ಹೀಗೆ ಹೇಳಿದನು – ೬೧. ತೀವ್ರವಾದ ಶೋಕಾಗ್ನಿಯಿಂದ

ವ|| ಎಂದು ಪೆರ್ಚಿದ ಶೋಕರಸಮಂ ಕೋಪರಸದ ಮೇಲಿಕ್ಕಿ ಭೀಷ್ಮಂ ಶರಶಯನ ತಳವಿಗತನಾಗಿರ್ದಲ್ಲಿವರಮೆಂತಾನುಮೊಡಗೊಂಡು ಬಂದಾಗಳ್-

ಚಂ|| ಇಡಿದಿರೆ ರೋಮ ಕೂಪದೊಳಗುರ್ಚಿದ ಸಾಲ ಸರಲ್ಗಳುಂ ತೆಱಂ
ಬಿಡಿದರೆ ಬೆಟ್ಟುವೋರ್ಗುಡಿಸಿದಂತೆ ನೆಱಲ್ದಿರೆ ಸುಯ್ಯ ಪುಣ್ಗಳಿಂ|
ಬಡನಡುವಂ ಶರಾಳಿಭಯದಿಂ ನಡುಪಂತಿರೆ ಚಿತ್ತದೊಳ್ ಮೃಡಂ
ತೊಡರ್ದಿರೆ ಬಿೞ್ದದೇನೆಸೆದನೋ ಶರಶಯ್ಯೊಯೊಳಂದು ಸಿಂಧುಜಂ|| ೬೨

ಹರನೊಳೆ ಪತ್ತಿ ತೆತ್ತಿಸಿದ ಚಿತ್ತಮನಿರ್ಬಗಿಯಾಗೆ ಮೋಹಮೊ
ತ್ತರಿಸೆ ಸುಯೋಧನಂಗೆ ರಣಭೂಮಿಯೊಳೆಂತುಟವಸ್ಥೆಯೋ ಕನ|
ಲ್ದುರಿದಪುದೆನ್ನ ಮೆಯ್ಯೆನುತುಮತ್ತಣ ಪಂಬಲ ಬಂಬಲೊಳ್ ತೆಱಂ
ದಿರಿದುದು ಚಿತ್ತಮಾ ದೊರೆಯ ಯೋಗಿಗಮಿಂತುಂಟೆ ಮೋಹಮಾಗದೇ|| ೬೩

ವ|| ಎಂಬನ್ನೆಗಮವರಿರ್ವರ ಕಾಲ ಸೊಪ್ಪುಳನಾಲಿಸಿ ಸುರನದೀನಂದನಂ ಪೇೞವಿ ಬಂದರಾರೆಂದನೇಕ ವ್ರಣವೇದನಾಪರವಶಶರೀರಂ ಬೆಸಗೊಳ್ವುದುಂ ಸಂಜಯಂ ಕುರುಪಿತಾ ಮಹನ ಕರ್ಣೋಪಾಂತಮಂ ಸಾರ್ದು ಕುರುಕುಳಗಗನಮೃಗಧರಂ ಬಂದನೆಂದು ಬಿನ್ನಪಂಗೆಯ್ವುದುಂ ಯೋಗಾಭ್ಯಾಸದೊಳರೆಮುಗುಳ್ದ ರಕ್ತಾಂಭೋಜದಳ ವಿಳಾಸೋಪಹಾಸಿಗಳಪ್ಪ ಕಣ್ಗಳನೊತ್ತಂಬದಿಂ ತೆದು-

ಚಂ|| ಎಱಗಿದ ಕೌರವೇಶ್ವರನೊಳಾದಮಿದಿರ್ಚಿದಲಂಪೆಲರ್ಚಿದ
ೞ್ಕಱನೊಳಕೊಳ್ವಿನಂ ಪರಸಿ ಮೆಯ್ಯೊಳೆ ಬಂದ ತೆಱಕ್ಕೆ ಮೆಯ್ ಕರಂ|
ಮಱುಗಿಪುದಿಂತು ಪೇೞು ಮಗನೆ ಬೆಳ್ಗೊಡೆಯೆಲ್ಲಿದುದೆತ್ತ ಪೋಯ್ತು ಸು
ತ್ತಿಱದ ಚತುರ್ಬಲಂ ನಿನಗವಿಯಿರವಾದುದೆ ವೈರಿಭೂಪರಿಂ|| ೬೪

ವ|| ಎಂದು ಕಣ್ಣ ನೀರಂ ನೆಗಪಿ ನಿನ್ನ ಬಂದ ಬರವೇ ಸಮರವೃತ್ತಾಂತಮನೞಪಿ ದಪ್ಪುದಿಂ ನಿನ್ನ ಗೆಯ್ವ ನಿಯೋಗಮಾವುದೇಗೆಯ್ಯಲ್ ಬಗೆದಪೆಯೆನೆ-

ಚಿತಾಗ್ನಿಯನ್ನು ಕೊಟ್ಟಿದ್ದೀಯೆ. ಕಣ್ಣೀರುಗಳಿಂದ ಸಂಪೂರ್ಣವಾಗ ತರ್ಪಣವನ್ನು ಕೊಟ್ಟಿದ್ದೀಯೆ. ಲೋಕವ್ಯವಹಾರದಲ್ಲಿ ಏನನ್ನು ದಾಟಿದ್ದೀಯೆ? ಶತ್ರುವನ್ನು ಹೋಳುಮಾಡಿ ಸೀಳಿ ರಾಶಿಹಾಕಿ ಆ ಮಾಂಸದಿಂದ- ಕರ್ಣನನ್ನು ನೀನು ಪ್ರೀತಿಸುವುದಾದರೆ ಆ ಪಕ್ಷಿಸಮೂಹಕ್ಕೆ (ಹದ್ದುಗಳಿಗೆ) ಆಹಾರವನ್ನು ಮಾಡು. ನಷ್ಟವಾದುದೇನು? ಇನ್ನು ಮುಂದೆ ನಡೆ. ವ|| ಎಂದು ಹೇಳಿ ಹೆಚ್ಚಾದ ಶೇಕರಸವನ್ನೂ ಮೀರಿ ಕೋಪರಸವು ಹೆಚ್ಚುತ್ತಿರಲು ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿದ್ದ ಸ್ಥಳದವರೆಗೆ ಹೇಗೋ ಜೊತೆಯಲ್ಲಿ ಕರೆದುಕೊಂಡು ಹೋದನು.

೬೨. ಕೂದಲಿನ ಒಂದೊಂದು ಹಳ್ಳ (ಕುಳಿ)ಗಳಲ್ಲಿಯೂ ಸಾಲವೃಕ್ಷದಿಂದ ಮಾಡಿದ ಬಾಣಗಳು ನಾಟಿಕೊಂಡು ದಟ್ಟವಾಗಿ ತುಂಬಿರಲು ನಾನಾರೀತಿಯಾಗಿ ಪರ್ವತಗಳುರುಳಿದಂತೆ ಬಿದ್ದು ನಿಶ್ಚೇಷ್ಟನಾಗಿ ಸ್ಪಂದನವಾಗುತ್ತಿರುವ (ದುಡಿಯುತ್ತಿರುವ) ಹುಣ್ಣುಗಳಿಂದಲೂ ಬಾಣಗಳ ನೋವಿನಿಂದಲೂ ಬಡವಾಗಿರುವ ಸೊಂಟವನ್ನು ನಡುಗಿಸುತ್ತ ಮನಸ್ಸಿನಲ್ಲಿ ಶಿವನನ್ನು ಧ್ಯಾನಿಸುತ್ತ ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿ ಅತ್ಯಂತ ಶೋಭಾಯಮಾನನಾಗಿದ್ದನು. ೬೩. ಈಶ್ವರನಲ್ಲಿ ಸೇರಿಕೊಂಡಂತಿದ್ದ ಮನಸ್ಸನ್ನು ಮೋಹವು ಎರಡು ಭಾಗವಾಗಿ ಮಾಡಲು ದುರ್ಯೋಧನನಿಗೆ ಯುದ್ಧ ರಂಗದಲ್ಲಿ ಇಂತಹ ಅವಸ್ಥೆಯಾಯಿತೇ! ನನ್ನ ಶರೀರವು ಕೆಂಡದಂತೆ ಹೊಳೆದು ಉರಿಯುತ್ತಿದೆಯಲ್ಲಾ ಎಂದು ಹೇಳುತ್ತ ಆ ಕಡೆಯ ಹಂಬಲದ ಆಕ್ಯದಿಂದ ಮನಸ್ಸು ನಾನಾ ರೀತಿಯಾಗಿ ಅಲೆದಾಡಿತು. ಅಂತಹ ಯೋಗ್ಯತೆಯನ್ನುಳ್ಳ ಯೋಗಿಗೂ ಹೀಗೆಯೇ ಮಮತೆ ಉಂಟಾಗುವುದಿಲ್ಲವೇ? ವ|| ಎನ್ನುವಷ್ಟರಲ್ಲಿ ಇಬ್ಬರ ಹೆಜ್ಜೆಯ ಶಬ್ದವನ್ನು ಕೇಳಿ ಅನೇಕ ಗಾಯಗಳ ನೋವಿನಿಂದ ಪರವಶವಾಗಿದ್ದ ಶರೀರವನ್ನುಳ್ಳ ಭೀಷ್ಮನು ‘ಈಗ ಬಂದವರು ಯಾರು ಹೇಳಿ’ ಎಂದು ಕೇಳಿದನು. ಸಂಜಯನು ಕುರುಪಿತಾಮಹನಾದ ಭೀಷ್ಮನ ಕಿವಿಯ ಹತ್ತಿರಕ್ಕೆ ಹೋಗಿ ‘ಕುರುವಂಶವೆಂಬ ಆಕಾಶದ ಚಂದ್ರನಾದ ದುರ್ಯೋಧನನು ಬಂದಿದ್ದಾನೆ’ ಎಂದು ವಿಜ್ಞಾಪನೆ ಮಾಡಿದನು. ಭೀಷ್ಮನು ಯೋಗಾಭ್ಯಾಸದಲ್ಲಿ ಅರ್ಧಮುಚ್ಚಿಕೊಂಡಿದ್ದ ಕನ್ನೆ ದಿಲೆಯ ದಳದ ಕಾಂತಿಯನ್ನು ಹಾಸ್ಯಮಾಡುವ ಹಾಗಿದ್ದ ತನ್ನ ಕಣ್ಣುಗಳನ್ನು ಬಲಾತ್ಕಾರದಿಂದ ತೆಗೆದು- ೬೪. ತನಗೆ ನಮಸ್ಕಾರ ಮಾಡಿದ ಕೌರಮೇಶ್ವರನನ್ನು ಎದುರಿನಲ್ಲಿ ಕಂಡ ಸಂತೋಷವು ಪ್ರೀತಿಯನ್ನು ಅದಿಕಗೊಳಿಸಲು ಆಶೀರ್ವಾದಮಾಡಿ ನೀನು ಏಕಾಕಿಯಾಗಿ ಬಂದ ಸ್ಥಿತಿಯನ್ನು ನೋಡಿ ನನ್ನ ಮನಸ್ಸು ವಿಶೇಷದುಖಪಡುತ್ತಿದೆ. ಮಗು, ಶ್ವೇತಚ್ಛತ್ರಿ ಎಲ್ಲಿ? ಸುತ್ತಲೂ ಬಳಸಿ ಬರುತ್ತಿದ್ದ ಚತುರಂಗಸೈನ್ಯವೆಲ್ಲಿ? ಯಾವ ಕಡೆಗೆ ಹೋಯಿತು. ಶತ್ರುರಾಜರಿಂದ ನಿನಗೂ ಈ ಸ್ಥಿತಿಯುಂಟಾಯಿತೆ? ವ|| ಎಂದು ಕಣ್ಣೀರನ್ನು ತುಂಬಿಕೊಂಡು ನೀನು ಬಂದಿರುವ ಬರುವಿಕೆಯೇ ಯುದ್ಧ ಸಮಾಚಾರವನ್ನು ತಿಳಿಸುತ್ತದೆ.

ಚಂ|| ಬಗೆ ಪೆಱತುಂಟೆ ವೈರಿನೃಪರಂ ತಱದೊಟ್ಟುವುದಲ್ಲದೆಂತುಮಿ||
ಲ್ಲಿಗೆ ಬರವಂ ಭವತ್ಪದಸರೋಜವನಾಂ ಬಲಗೊಂಡು ಮತ್ತಮಾ||
ಜಿಗೆ ನಡೆಯಲ್ಕೆ ಬಂದೆನೆನೆ ದೇವನದೀಸುತನಾತ್ಮಚಿತ್ತದೊಳ್|
ಬಗೆದನಿದೇನಖಂಡಿತಮೊ ಶೌರ್ಯಗುಣೋನ್ನತಿ ರಾಜರಾಜನಾ|| ೬೫

ವ|| ಎಂದಾದಿ ಮಧ್ಯಾವಸಾನದೊಳೆಲ್ಲಿಯುಮೆೞಲದ ಕಲಿತನದಳವಿಂಗೆ ಮನಂಗೊಂಡು ಮಗನೆ ನಿನಗಪ್ಪೊಡೆ ದೆಯ್ವಂ ಪ್ರತಿಕೂಲಮೆಂತುಂ ಕಾದಿ ಗೆಲಲಾರ್ಪೆಯಲ್ಲೆ ಸೂಜಿಯ ಕೂರ್ಪು ಕುಂಬಳದೊಳಡಂಗುವಂತೆ ನಿನ್ನೊಂದೆ ಮೆಯ್ಯೊಳಾದ ಕೂರ್ಪು ಪಗೆವರ ದರ್ಪಮನದಿರ್ಪದಲ್ತೆ ನಿನಗಂ ಮೈತ್ರೇಯರ್ ಕೊಟ್ಟೂರುಭಂಗಶಾಪಮನಿವಾರಿತಮೆನ್ನೀ ಪ್ರಾಣಮುಳ್ಳಂತೆ ಸಂಯಂ ಮಾಡಿ ವಸುಂಧರೆಯಂ ಕೊಂಡು ಕಾಲಮಂ ಕಜ್ಜಮುಮನಱದು ಬೞಯಂ ನಿನ್ನ ನೆಗೞ್ವುದಂ ನೆಗೞ್ವುದೆಂದು-

ಚಂ|| ಪರಿಕಿಪುದೊಂದಱಂದೆರಡನೋತೊಳಕೊಳ್ವುದು ಮೂಱಱಂದೆ ನಾ
ಲ್ಕರಿದಱದಯ್ದಱಂದೆ ನೆಕಲ್ವುದು ನಿರ್ಣಯಮಾಗಿರಾಱಳ್|
ಪರಿಣತನಪ್ಪುದೇೞಳಮೊಂದದೆ ನಿಲ್ವುದು ದುರ್ವಿಮಂತ್ರಮಂ
ಪರೆಪ ಟಮಾಳಮಂ ಪಿರಿದನೋದಿದೊಡಪ್ಪ ಪದಾರ್ಥಮಾವುದೋ|| ೬೬

ಕಂ|| ಪೆರ್ಚುಗೆ ಭರತಕುಲಂ ನೆಲೆ
ವೆರ್ಚುಗೆ ನಿಮ್ಮೆರಡು ತಂಡಮೊದವಿದ ನಣ್ಪಿಂ|
ಕರ್ಚುಗೆ ಕಲುಷಂ ನೀಂ ತಲೆ
ಯುರ್ಚದಿರೆನ್ನೆಂದ ನುಡಿಗೆ ಕುರುಕುಳತಿಳಕಾ|| ೬೭

ಉ|| ದೋಷಮುಮೇವಮುಂ ಶಕುನಿಯಿಂ ಯುವರಾಜನಿನಾಯ್ತು ಪೋಯ್ತು ನಿ
ರ್ದೋಷಿಗಳಪ್ಪ ನಿಮ್ಮೆರಡು ತಂಡಮುಮಿಂ ಪುದುವಾಳ್ವುದಂತದೇಂ|
ದೋಷಮೊ ಮೇಣ್ ವೃಕೋದರನಿನಾ ರಣರಂಗದೊಳಾದ ದುಷ್ಟ ದು
ಶ್ಯಾಸನರಕ್ತಮೋಕ್ಷದೊಳೆ ದೋಷವಿಮೋಕ್ಷಮದೇಕೆ ಕೊಂಡಪೈ|| ೬೮

ವ|| ಎಂದು ನುಡಿದ ಪಿತಾಮಹನ ನುಡಿಗಳ್ಗೆ ಕುರುರಾಜನಿಂತೆಂದಂ-

ಇನ್ನು ಮುಂದೇನು ಮಾಡುತ್ತೀಯೆ? ಹೇಗೆ ಯೋಚಿಸಿದ್ದೀಯೆ ಎಂದು ಕೇಳಿದರು. ೬೫. ದುರ್ಯೋಧನನು ಮತ್ತೇನಜ್ಜ; ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವುದಲ್ಲದೆ ಬೇರೆ ಯೋಚನೆಯುಂಟೇ? ನಿಮ್ಮ ಪಾದಕಮಲಗಳನ್ನು ಪ್ರದಕ್ಷಿಣೆಮಾಡಿ ಪುನ ಯುದ್ಧಕ್ಕೆ ಹೋಗೋಣವೆಂದು ಬಂದೆ ಎಂದನು. ಭೀಷ್ಮನು ಚಕ್ರವರ್ತಿಯಾದ ದುಯೋಧನನ ಶೌರ್ಯಗುಣದ ಔನ್ನತ್ಯವು ಏನು ಅಖಂಡಿತವೋ ಎಂದು ತನ್ನ ಮನಸ್ಸಿನಲ್ಲಿ ಸಂತೋಷಿಸಿದನು. ವ|| ಮೊದಲಿಂದ ಕೊನೆಯವರೆಗೆ ಎಲ್ಲಿಯೂ ಸಡಿಲವಾಗದ ಅವನ ಶೌರ್ಯದ ಪ್ರಮಾಣಕ್ಕೆ ಸಂತೋಷಪಟ್ಟು (ದುರ್ಯೋಧನನನ್ನು ಕುರಿತು) ‘ಮಗು ನಿನಗಾದರೆ ದೈವವು ಪ್ರತಿಕೂಲವಾಗಿದೆ. ಕಾದಿ ಗೆಲ್ಲಲಾರೆ; ಸೂಜಿಯ ಹರಿತವಾದ ತುದಿಯು ಕುಂಬಳಕಾಯಲ್ಲಿ ಅಡಗಿಹೋಗುವ ಹಾಗೆ ನಿನ್ನ ಒಂದೇ ಶರೀರದಲ್ಲಿರುವ ಹರಿತವಾದ ಶಕ್ತಿ ಶತ್ರುಗಳ ದರ್ಪವನ್ನು ನಡುಗಿಸಲಾರದು. ನಿನಗೂ ಮೈತ್ರೇಯರು ಕೊಟ್ಟಿರುವ ಊರುಭಂಗ ಶಾಪವು ತಪ್ಪಿಸುವುದಕ್ಕಾಗದು. ನನ್ನ ಪ್ರಾಣವು ಇರುವಾಗಲೇ ಸಂಯನ್ನು ಮಾಡಿಕೊಂಡು ಭೂಮಿಯನ್ನು ಸ್ವೀಕರಿಸಿ ಮುಂದೆ ಕಾಲವನ್ನೂ ಕಾರ್ಯವನ್ನೂ ತಿಳಿದು ಬಳಿಕ ನೀನು ಮಾಡುವುದನ್ನು ಮಾಡು ಎಂದರು. ೬೬. ಒಂದಾದ ಬುದ್ಧಿಯಿಂದ ಎರಡಾದ ಕಾರ್ಯಾಕಾರ್ಯಗಳನ್ನು ಅಥವಾ ಪುಣ್ಯಪಾಪಗಳನ್ನು ಪರೀಕ್ಷಿಸಬೇಕು. ಶತ್ರುಮಿತ್ರಬಾಂಧವ (ಉದಾಸೀನ)ರೆಂಬ ಮೂವರನ್ನು ಒಲಿಸಿ ಕಷ್ಟವಾದ ಸಾಮ ದಾನ ಭೇದ ದಂಡಗಳೆಂಬ ಉಪಾಯಚತುಷ್ಟಯಗಳನ್ನು ಒಳಪಡಿಸಿಕೊಳ್ಳಬೇಕು. ಅಯ್ದು ಜ್ಞಾನೇಂದ್ರಿಯಗಳಿಂದ ಪೂರ್ಣವಾಗಿ ವಿವೇಕವನ್ನು ಕಲಿತುಕೊಳ್ಳಬೇಕು. ರಾಜಯೋಗ್ಯವಾದ ಸಂ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೆ ಭಾವ ಎಂಬ ಆರು ಗುಣಗಳಲ್ಲಿ ಪಂಡಿತನಾಗಬೇಕು. ದ್ಯೂತಸ್ತ್ರೀಪಾನಾದಿ ಸಪ್ತವ್ಯಸನಗಳಲ್ಲಿ ಸೇರಿಕೊಳ್ಳದಿರಬೇಕು. ದುಷ್ಟ ಮಂತ್ರಾಲೋಚನೆಯಿಂದ ಕೂಡಿದ ಮೋಸದ ಮಾತುಗಳನ್ನು ವಿಶೇಷವಾಗಿ ಕೇಳುವುದರಿಂದ ಆಗುವ ಪ್ರಯೋಜನವೇನು? ೬೭. ಭರತಕುಲ (ವಂಶ) ಅಭಿವೃದ್ಧಿಯಾಗಲಿ; ನಿಮ್ಮ ಎರಡು ಗುಂಪಿನ ಸ್ನೇಹವು ಈಗಿರುವುದಕ್ಕಿಂತ ಉತ್ಕೃಷ್ಟವಾಗಲಿ, ನಿಮ್ಮ ದ್ವೇಷವು ತೊಳೆದುಹೋಗಲಿ; ಕುರುಕುಲಶ್ರೇಷ್ಠನಾದ ದುರ್ಯೋಧನನೇ ನೀನು ನಾನು ಹೇಳಿದ ಮಾತಿಗೆ ತಲೆಯಾಡಿಸಬೇಡ. ೬೮. ನಿಮ್ಮ ತಪ್ಪೂ ಕೋಪವೂ

ಮ|| ಶರಶಯ್ಯಾಗ್ರದೊಳಿಂತು ನೀಮಿರೆ ಘಟಪ್ರೋದ್ಭೂತನಂತಾಗೆ ವಾ
ಸರನಾಥಾತ್ಮಜನಂತು ಸಾಯೆ ರಣದೊಳ್ ದುಶ್ಯಾಸನಂ ತದ್ವ ಕೋ|
ದರನಿಂದಂತೞದೞ್ಗೆ ಸೈರಿಸಿಯುಮಾಂ ಸಂಧಾನಮಂ ವೈರಿ ಭೂಪ
ರೊಳಿಂ ಸಂಸಿ ಪೇೞಮಾರ್ಗೆ ಮೆವೆಂ ಸಂಪತ್ತುಮಂ ಶ್ರೀಯುಮಂ|| ೬೯

ಕಂ|| ಬಿಡಿಮೆನ್ನ ನುಡಿಗೆ ಬೀೞ್ಕೊಳೆ
ನುಡಿಯದಿರಿಂ ಪೆಱತನಜ್ಜ ಮುಂ ನುಡಿದೆರಡಂ|
ನುಡಿವೆನೆ ಚಲಮಂ ಬಲ್ವಿಡಿ
ವಿಡಿದೆಂ ತನ್ನಪ್ಪುದಕ್ಕೆ ಸಂಗರ ಧರೆಯೊಳ್|| ೭೦

ವ|| ಎಂಬುದುಂ ನೀನುಮೆಂತುಂ ಕಾದಿಯಲ್ಲದಿರೆಯಪ್ಪೊಡಿಂದಿನೊಂದಿವಸಮನೆನ್ನ ಪೇೞ್ವ ಜಳಮಂತ್ರೋಪದೇಶಮಂ ಕೆಯ್ಕೊಂಡು ಕುರುಕ್ಷೇತ್ರದುತ್ತರದಿಗ್ಧಾಗದ ವೈಶಂಪಾಯನ ಸರೋವರದೊಳ್ ಮುೞುಗಿ ಕಾಲಾಗ್ನಿರುದ್ರಂ ರಸಾತಳದೊಳಡಂಗಿರ್ಪಂತಿರ್ದು ನಿನ್ನವಸರಕ್ಕೆ ಬಂದು ಕೂಡುವ ಬಲದೇವನುಮಂ ನಿನ್ನಿರ್ದೆಡೆಯನಱಯದಱಸುವಶ್ವತ್ಥಾಮ ಕೃಪ ಕೃತವರ್ಮರುಮಂ ಕೂಡಿಕೊಂಡು ಪಗೆವರಂ ನಾಳೆ ಕಾದಿ ಗೆಲ್ವುದೆಂದು ಹಿತೋಪದೇಶಂಬೆರಸು ಜಳಮಂತ್ರೋಪದೇಶಮಂ ಕಿವಿಯೊಳ್ ಪರ್ಚಿ ಪೇೞ್ದು ಕುರುಪಿತಾಮಹಂ ಸಂಜಯನಂ ಧೃತರಾಷ್ಟ್ರನಲ್ಲಿಗೆ ಸಂಧಾನವಾರ್ತೆಯಂ ಸಮಕೊಳಿಸುವಂತಾನಾಗತಬಾಧಾಪ್ರತಿಷೇಧಂ ಮಾಡುವಂತಟ್ಟಿ ಸಕಳ ಕುರುಕುಳಾವಲಂಬನಕಲ್ಪವೃಕ್ಷಮಂ ಪರಸಿ ಪೋಗಲ್ವೇೞೆ ದೇವನದೀಪ್ರಿಯಪುತ್ರನಂ ಧೃತರಾಷ್ಟ್ರಪುತ್ರಂ ಬೀೞ್ಕೊಂಡು ಕನಕಪತ್ರಲತಾಲಾಂಛಿತಗದಾದಂಡಮಂ ಕೊಂಡೊರ್ವನೆ ವೈಶಂಪಾಯನಸರೋವರದ ಬಟ್ಟೆಯಂ ನಡೆಗೊಂಡು-

ಶಾ|| ಕ್ರಂದತ್ಸ್ಯಂದನಜಾತನಿರ್ಗತಶಿಖಿಜ್ವಾಳಾಸಹಸ್ರಂಗಳಾ
ಟಂದೆತ್ತಂ ಕವಿದೞ್ವೆ ಬೇವ ಶವಸಂಘಾತಂಗಳಂ ಚಕ್ಕಮೊ|
ಕ್ಕೆಂದಾಗಳ್ ಕಡಿದುಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂ
ಬಂದಂ ತನ್ನ ಮನಕ್ಕಗುರ್ವಿಸುವಿನಂ ದುರ್ಯೋಧನಂ ನೋಡಿದಂ|| ೭೧

ವ|| ನೋಡಿ ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುೞದು ಬೇವ ಪೆಣಂಗಳ ಕಂಪು ನಾಱುವುದರ್ಕೆ ಸೈರಿಸಲಾಱದೆ ಕೋಳ್ದಾಂಟಿನೊಳ್ ಕೊಳುಗುಳವಂ ಕೞದುಪೋಗಿ

ಶಕುನಿಯಿಂದಲೂ ದುಶ್ಯಾಸನನಿಂದಲೂ ಪ್ರಾರಂಭವಾಯಿತು, ಹೋಯಿತು; ನಿರ್ದೊಷಿಗಳಾದ ನಿಮ್ಮ ಎರಡು ಗುಂಪೂ ಇನ್ನು ಕೂಡಿ ಬಾಳಿರಿ; ಹಾಗೆ ಮಾಡುವುದು ದೋಷವೇನಲ್ಲ. ಭೀಮನು ರಣರಂಗದಲ್ಲಿ ಬಿಡುಗಡೆಮಾಡಿದ ದುಷ್ಟ ದುಶ್ಯಾಸನನ ರಕ್ತದಿಂದಲೇ ದೋಷವಿಮೋಚನೆಯೂ ಆಯಿತು. ನೀನು ಅದನ್ನೇ ಪುನ ಏಕೆ ಅಂಗೀಕರಿಸುತ್ತೀಯೆ? ವ|| ಎಂದು ಹೇಳಿದ ಭೀಷ್ಮನ ಮಾತುಗಳಿಗೆ ದುಯೋಧನನು ಹೀಗೆಂದನು- ೬೯. ಬಾಣದ ಹಾಸಿಗೆಯ ತುದಿಯಲ್ಲಿ ನೀವು ಹೀಗಿರುವಾಗ ದ್ರೋಣಾಚಾರ್ಯರು ಹಾಗಿರುವಾಗ, ಕರ್ಣನು ಸತ್ತು ಯುದ್ಧದಲ್ಲಿ ದುಶ್ಯಾಸನನು ಭೀಮನಿಂದ ಹಾಗೆ ಸತ್ತು ನಾಶವಾಗಿರುವಾಗ (ಇವೆಲ್ಲವನ್ನೂ) ನಾನು ಸಹಿಸಿಕೊಂಡು ಶತ್ರುರಾಜರಲ್ಲಿ ಸಂಯನ್ನುಂಟುಮಾಡಿಕೊಂಡು ಯಾರಿಗೆ ನನ್ನ ಐಶ್ವರ್ಯವನ್ನೂ ವೈಭವವನ್ನೂ ಪ್ರದರ್ಶಿಸಬೇಕು. ೭೦. ನನ್ನ ಮಾತಿಗೆ (ಸಿದ್ಧಾಂತಕ್ಕೆ) ನನ್ನನ್ನು ಬಿಡಿ. ಅಜ್ಜ, ತಮ್ಮ ಅಪ್ಪಣೆಯನ್ನು ಪಡೆದು ಹೋಗುವುದಕ್ಕಾಗಿ ಬಂದ ನನಗೆ ಬೇರೆ ಯಾವುದನ್ನೂ ಹೇಳಬೇಡಿ. ಮೋದಲು ಒಂದು ರೀತಿ ಪುನ ಬೇರೆ ರೀತಿಯಲ್ಲಿ ಹೇಳುತ್ತೇನೆಯೇ? ಛಲವನ್ನು ಬಿಗಿಯಾಗಿ ಹಿಡಿದಿದ್ದೇನೆ. ಯುದ್ಧದಲ್ಲಿ ತಾನಾದುದಾಗಲಿ’ ಎಂದನು. ವ|| “ನೀನು ಹೇಗೂ ಯುದ್ಧಮಾಡದೇ ಇರುವುದಿಲ್ಲವಾದರೆ ಈ ಒಂದು ದಿವಸವನ್ನು ನಾನು ಹೇಳುವ ಜಲಮಂತ್ರೋಪದೇಶವನ್ನು ಅಂಗೀಕರಿಸಿ ಕುರುಕ್ಷೇತ್ರದ ಉತ್ತರ ದಿಗ್ಭಾಗದಲ್ಲಿರುವ ವೈಶಂಪಾಯನಸರೋವರದಲ್ಲಿ ಮುಳುಗಿದ್ದು ಕಾಲಾಗ್ನಿರುದ್ರನು ಪಾತಾಳಲೋಕದಲ್ಲಡಗಿರುವ ಹಾಗೆ ಇರು. ನಿನ್ನ ಸಹಾಯಕ್ಕೆ ಬಂದು ಸೇರುವ ಬಲರಾಮನನ್ನೂ ನೀನು ಇರುವ ಸ್ಥಳವನ್ನು ತಿಳಿಯದೇ ಹುಡುಕುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕೂಡಿಕೊಂಡು ಶತ್ರುಗಳನ್ನು ನಾಳೆ ಜಯಿಸು” ಎಂದು ಭೀಷ್ಮನು ಹಿತೋಪದೇಶದಿಂದ ಕೂಡಿದ ಜಳಮಂತ್ರೋದೇಶವನ್ನು ದುಯೋಧನನ ಕಿವಿಯಲ್ಲಿ ರಹಸ್ಯವಾಗಿ ಉಪದೇಶಿಸಿದನು. ಸಂಜಯನನ್ನು ಧೃತರಾಷ್ಟ್ರನ ಬಳಿಗೆ ಸಂಧಾನದ ಮಾತನ್ನು ಸಿದ್ಧಗೊಳಿಸುವುದಕ್ಕಾಗಿ ಕಳುಹಿಸಿದನು. ಮುಂದೆ ಬರುವ ತೊಂದರೆಗೆ ಪ್ರತೀಕಾರವನ್ನು ಮಾಡುವಂತೆ ಹೇಳಿ ಸಕಲ ಕುರುವಂಶದ ಆಶ್ರಯಕ್ಕೆ ಕಲ್ಪವೃಕ್ಷದ ಹಾಗಿರುವ ದುರ್ಯೋರ್ಧನನ್ನು ಆಶೀರ್ವದಿಸಿ ಬೀಳ್ಕೊಟ್ಟನು. ದುರ್ಯೋಧನನು ಭೀಷ್ಮನ ಅಪ್ಪಣೆಯನ್ನು ಪಡೆದು ಹೊರಟು ಕನಕಪತ್ರಲತೆಯಿಂದ ಗುರುತುಮಾಡಲ್ಪಟ್ಟ ಗದಾದಂಡವನ್ನು ತೆಗೆದುಕೊಂಡು ಏಕಾಕಿಯಾಗಿ ವೈಶಂಪಾಯನಸರೋವರದ ಮಾರ್ಗವನ್ನು ನಡೆದುಹೋದನು. ೭೧. ಶಬ್ದಮಾಡುತ್ತಿರುವ ರಥದಿಂದ ಹುಟ್ಟಿ ಹೊರಹೊರಟ ಸಾವಿರಾರು ಅಗ್ನಿಜ್ವಾಲೆಗಳು ಮೇಲೆ ಹಾಯ್ದು ಎಲ್ಲಕಡೆಯೂ ಸುಡುತ್ತಿರಲು ಬೇಯುತ್ತಿರುವ ಹೆಣಗಳ ರಾಶಿಗಳನ್ನು ಆಗ ಭಯಂಕರವಾದ ಪಿಶಾಚಿಗಳ ಸಮೂಹಗಳು ಚಕ್ಕುಮೊಕ್ಕೆಂದು

ವಿಳಯಕಾಳ ವಿಘಟ್ಟಿತಾಷ್ಟದಿಗ್ಭಾಗಸಂಬಂಧನಗಗನತಳಮೆ ಧರಾತಳಕ್ಕೆ ಪಱದು ಬಿೞ್ದಂತಾನುಮಾದಿವರಾಹಂ ಸಮುದ್ರಮುದ್ರಿತಧರಾಮಂಡಳಮಂ ರಸಾತಳದಿಂದೆತ್ತಿ ಬಂದಂದು ನಭೋಮಂಡಳಸ್ಥಾನಮೆ ಸಲಿಲಪರಿಪೂರಿತಮಾದಂತಾನುಮಾಗಿ-

ಮ|| ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆಱತಲ್ತಿದುಗ್ರಲಯಕಾಳಾಂಭೋಧರಚ್ಛಾಯೆ ತಾ|
ನೆ ದಲೆಂಬಂತಿರೆ ಕಾಚ ಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕ ಬಳಾಕಾನೀಕ ರಾವಾಕುಳಂ| ೭೨

ಚಂ|| ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದೞ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾೞ್ವರಂ|
ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದೆತ್ತಮು
ನ್ಮದಕಳಹಂಸಕೋಕನಿಕರದ್ವನಿರುಂದ್ರಫಣೀಂದ್ರಕೇತುವಂ|| ೭೩

ವ|| ಅಂತೆಸೆವ ಪುಂಡರೀಕಷಂಡೋಪಾಂತಮನೆಯ್ದೆವಂದನೇಕವ್ರಣಗಳಿತನವರುರ ಮಾಗಿರ್ದ ತನ್ನ ಮೆಯ್ಯನೊರಸಿ ಕರ್ಚಿ ಮುಕ್ಕುಳಿಸಿಯುಗುೞುಚಮಿಸಿ ಜಳದೇವತೆಗಳ್ಗೆ ಪೊಡೆವಟ್ಟು ಜಳಮಂತ್ರಾಕ್ಷರಂಗಳಿಂ ಸರೋವರಮನಭಿಮಂತ್ರಿಸಿ-

ಚಂ|| ಬೆಳಗಿ ಸಮಸ್ತಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ದಿ ಬೞಲ್ದಪರಾಂಬುರಾಶಿಯೊಳ್|
ಮುೞುಗುವ ತೀವ್ರದೀತಿವೊಲಾ ಕೊಳದೊಳ್ ಫಣಿರಾಜಕೇತನಂ
ಮುೞುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ||೭೪

ವ|| ಅಂತು ವಜ್ರಿಯ ವಜ್ರಹತಿಗಳ್ಕಿ ಕುಲಗಿರಿಜಳಯಂ ಪುಗುಂವಂತೆ ದುಯೋಧನಂ ಕೊಳನಂ ಪೊಕ್ಕಿರ್ದನನ್ನೆಗಮಿತ್ತ ಧರ್ಮಪುತ್ರಂ ಶಲ್ಯವಧೆಯಿಂ ಬೞಯಂ ರಾಜರಾಜನಂ ಕೊಳುಗುಳದೊಳಱಸಿಯುಂ ಕಾಣದೆ ನಮ್ಮ ಮಾಡುವ ಕರ್ತವ್ಯಮಾವುದೇಗೆಯ್ವಂ ಪೇೞಮೆಂದು ನಾರಾಯಣನಂ ಬೆಸಗೊಳೆ ಮಧುವನಿತಾವದನಕಮಳಹಿಮಕರನಿಂತೆಂದಂ-

ಮ|| ಸ್ರ|| ನೆಱನೀತಂಗೂರುಯುಗ್ಮಂ ನೆಱನನಱಯದಾನಿನ್ನೆಗಂ ಮಾಣ್ದೆನಿಂ ಪೋ
ತೆಱಪಂ ಪಾರ್ದಿರ್ಪೆನೆಂದೊಯ್ಯನೆ ಗದೆಯನಣಂ ಪಾಡುಗೆಯ್ದಿರ್ದು ಭೋರೆಂ|
ದೆಱಪುಗ್ರಾರಾತಿಯೂರುದ್ವಯಮನಿಡೆ ಗದಾಘಾತದಿಂದೂರುಯುಗ್ಮಂ
ಮುಱದೆತ್ತಂ ನುಚ್ಚುನೂಱುಗಿರೆ ಕೆಡೆದನಿಳಾಭಾಗದೊಳ್ ಧಾರ್ತರಾಷ್ಟ್ರಂ|| ೯೬

ಚಂ|| ನುಡಿದುದನೆಯ್ದೆ ತುತ್ತ ತುದಿಯೆಯ್ದುವಿನಂ ನುಡಿದಂ ವಲಂ ಚಲಂ
ಬಿಡಿದುದನೆಯ್ದೆ ಮುಂ ಪಿಡಿದುದಂ ಪಿಡಿದಂ ಸಲೆ ಪುಣ್ದ ಪೂಣ್ಕೆ ಪೂಣ್ಕೆ ನೇ|
ರ್ಪಡೆ ನಡೆವನ್ನೆಗಂ ನಡೆದನಳ್ಕದೆ ಬಳ್ಕದೆ ತನ್ನೊಡಲ್ ಪಡೆ
ಲ್ವಡುವಿನಮಣ್ಮುಗುಂದನೆ ದಲೇನಭಿಮಾನಧನಂ ಸುಯೋಧನಂ|| ೯೭

ವ|| ಅಂತು ಸತ್ತುಂ ನೆಲನಂ ಪತ್ತುವಿಡೆನೆಂಬಂತೆ ನೆಲನಂ ಪತ್ತಿ ಮೂರ್ಛಾಗತನಾಗಿರ್ದ ಕುರುಕುಳಚೂಡಾಮಣಿಯನೇನುಂ ಮಾಣದೆ ಕಿವಿರವೈರಿ ಮುಟ್ಟೆವಂದಾಗಳೇಕಾದಶಾ ಕ್ಷೋಹಿಣೀಪತಿಯಪ್ಪ ರಾಜಾರಾಜನಂ ಪರಾಭವಂಬಡಿಸದಿರೆಂದು ಬಲದೇವಂ ಬಾರಿಸೆವಾರಿಸೆ-

ಘಟ್ಟಿಸಲು ಹುಟ್ಟಿದ ಉಲ್ಕೆಗಳ ಸಮೂಹವು ವಿಸ್ತರಿಸಿ ಆಕಾಶವನ್ನು ವ್ಯಾಪಿಸಿ ದೇವತೆಗಳ ಕಣ್ಣಲ್ಲಿ ತುಂಬಿ ತೊಳಗಲು ಅವರಿಗೆ ಅವು ಪ್ರಳಯಕಾಲದ ಉಲ್ಕಾಪಾತದ ಸಂದೇಹವನ್ನುಂಟುಮಾಡಿದವು. ಅವರ ಕ್ರಮ ಕ್ರಮವಾದ ತುಳಿತದಿಂದ ಬೆಟ್ಟಗಳು ಸಡಿಲವಾಗಿ ಕಳಚಿ ಬಿದ್ದವು. ಭೂಭಾಗವು ಅಳ್ಳಾಡಿದುವು. ಭೀಮ, ದುರ್ಯೋಧನರ ಗದಾಯುದ್ಧವು ಮಹಾಭಯಂಕರವಾಯಿತು. ವ|| ಇಬ್ಬರೂ ಒಬ್ಬೊಬ್ಬರಲ್ಲಿ ವೀರ್ಯವನ್ನು ಕೌಶಲವನ್ನೂ ಪ್ರದರ್ಶಿಸಿ ಕಾದಲು ದುರ್ಯೋಧನನು ವಿದ್ಯಾಧರಕರಣದಲ್ಲಿ (ಮೇಲಕ್ಕೆ ಹಾರುವ ಒಂದು ವರಸೆ ಅಥವಾ ಪಟ್ಟು) ವಿಶೇಷ ಪರಿಚಿತನಾದುದರಿಂದ ಆಕಾಶಕ್ಕೆ ನೆಗೆದು -೯೫. ಸಿಡಿಲು ಬೀಳುವಂತೆ ಭೋರೆಂದು ತಕ್ಷಣವೇ ಎರಗಿ ಮಹಾಭಯಂಕರವಾದ ದಪ್ಪನಾದ ಪರಿಘದಂತಿರುವ ಗದೆಯಿಂದ ಘರ್ಜನೆಮಾಡಿ ಇದ್ದ ಸ್ಥಳದಿಂದ ಕದಲುವಂತೆ ಹೊಡೆಯಲು ಭೂಮಿ ನಡುಗಿತು, ಭೀಮನು ನೀಲಪರ್ವತದಂತೆ ಕೆಳಗೆ ಬಿದ್ದನು; ವ|| ಹಾಗೆ ದುರ್ಯೋಧನನ ಗದೆಯ ಹೊಡೆತದಿಂದ ಮೂರ್ಛಿತನಾಗಿರಲು ದುರ್ಯೋಧನನು ‘ಬಿದ್ದವನನ್ನು ಹೊಡೆಯುವುದಿಲ್ಲ’ ಎಂದು ವಾಯುಮಾರ್ಗದಲ್ಲಿ ಸ್ವಲ್ಪದೂರದಲ್ಲಿಯೇ ಗದೆಯನ್ನು ಬೀಸಿದನು. ಭೀಮನು ಆ ಗದೆಯ ಗಾಳಿಯಿಂದ ಮೂರ್ಛೆಯಿಂದೆಚ್ಚತ್ತು ಭೂಮಿಯಮೇಲೆ ಬಿದ್ದಿದ್ದ ತನ್ನ ಗದೆಯನ್ನು ಭೂಜಾದಂಡದಲ್ಲಿ ಅಳವಡಿಸಿಕೊಂಡನು. ಭೀಮನನ್ನು ಕೃಷ್ಣನು ಹೊಗಳುವ ನೆಪದಿಂದ ನಮ್ಮಪ್ಪನಿಗೆ ಜಯವಾಗುತ್ತದೆ ಎಂದು ತೊಡೆಯನ್ನು ತಟ್ಟಿ ಆರ್ಭಟಿಸಿದನು, ಭೀಮನು ಅದೇ (ಆ ತೊಡೆಯೇ) ದುಯೋಧನನ ಮರ್ಮಸ್ಥಳವೆಂದು ತಿಳಿದನು. ೯೬. ಈ ಎರಡು ತೊಡೆಗಳು ಈತನಿಗೆ ಮರ್ಮಸ್ಥಾನ. ಮರ್ಮವನ್ನು ತಿಳಿಯದೆ ನಾನು ಇಲ್ಲಿಯವರೆಗೆ ತಪ್ಪಿದೆನು. ಇನ್ನು ಬಿಡು, ಅವಕಾಶವನ್ನು ನಿರೀಕ್ಷಿಸುತ್ತಿದ್ದೇನೆ-ಎಂದು ನಿಧಾನವಾಗಿ ಹಗೆಯನ್ನು ಹೊಂಚುಹಾಕುತ್ತಿದ್ದು (ಗದೆಯನ್ನು ಸ್ವಲ್ಪ ಸರಿಮಾಡಿಕೊಂಡು) ಭೋರೆಂದು ಮೇಲೆ ಬೀಳುವ ಶತ್ರುವಿನ ಎರಡು ತೊಡೆಗಳನ್ನು ಹೊಡೆಯಲು ಗದೆಯ ಪೆಟ್ಟಿನಿಂದ ಆ ಎರಡು ತೊಡೆಗಳೂ ಮುರಿದು ಎಲ್ಲ ಕಡೆಯಲ್ಲಿಯೂ ಪುಡಿಪುಡಿಯಾಗಿರಲು ದುರ್ಯೋಧನನು ನೆಲದ ಮೇಲೆ ಬಿದ್ದನು. ೯೭. ಆಡಿದ ಮಾತನ್ನು ತುತ್ತತುದಿ ಮುಟ್ಟುವವರೆಗೂ ಆಡಿದನು. ಮೊದಲು ಹಿಡಿದ ಹಟವನ್ನು ಕೊನೆಯವರೆಗೂ ಸಾಸಿದನು. ಮಾಡಿದ ಪ್ರತಿಜ್ಞೆಯ ನೇರವಾಗಿ ನಡೆಯುವವರೆಗೂ ನಡೆದು ಹೆದರದೆ ಅಳ್ಳಾಡದೆ ತನ್ನ ಶರೀರವು ಕೆಳಗೆ ಬೀಳುವವರೆಗೂ ತನ್ನ ಪರಾಕ್ರಮವನ್ನು ಕಡಿಮೆಮಾಡಿಕೊಳ್ಳಲಿಲ್ಲವಲ್ಲಾ, ದುರ್ಯೋಧನನು ಎಷ್ಟು ಆತ್ಮಗೌರವನ್ನುಳ್ಳವನು! ವ|| ಹಾಗೆ ಸತ್ತೂ ನೆಲವನ್ನು(ಅಂಟಿಕೊಂಡಿರುವುದನ್ನು) ಬಿಡುವುದಿಲ್ಲ ಎನ್ನುವ ಹಾಗೆ ನೆಲವನ್ನು ತಬ್ಬಿಕೊಂಡು ಮೂರ್ಛಾಗತನಾಗಿದ್ದ ಕುರುಕುಲಚೂಡಾಮಣಿಯಾದ ದುಯೋರ್ಧನನನ್ನು ಭೀಮನು ಸ್ವಲ್ಪವೂ ಬಿಡದೆ ಸಮೀಪಕ್ಕೆ ಬಂದಾಗ ಬಲರಾಮನು, ಹನ್ನೊಂದಕ್ಷೋಹಿಣೀ ಪತಿಯಾದ ಚಕ್ರವರ್ತಿಯನ್ನು ಅವಮಾನಪಡಿಸಬೇಡವೆಂದು

ಮ|| ಸ್ರ|| ಇದಱಳೊ ಮೂರ್ಧಾಭಿಷೇಕಂ ತನಗೆ ಗಡ ಸಮಂತಾಯ್ತು ಪಿಂಛಾತಪತ್ರಂ
ಪುದಿದೆತ್ತಂ ತಣ್ಣೆೞಲ್ಮಾಡುವುದು ಗಡಮಿದೆಂತೆಂದುಮಾರ್ಗಪ್ಟೊಡಂ ಪ|
ರ್ವಿದ ಗರ್ವೋದ್ರೋಕದಿಂ ಬಾಗದು ಗಡಮೆನುತುಂ ಮಾಣಿಕಂ ಸೂಸೆ ಬಲ್ಪಿಂ
ದೊದೆದಂ ಸಾರ್ತಂದು ದುರ್ಯೋಧನನ ಮಕುಟಮಂ ಕೋಪದಿಂ ಭೀಮಸೇನಂ|| ೯೮

ವ|| ಒದೆವುದುಂ ದುರ್ಯೋಧನಂಗಾದವಸ್ಥೆಯಂ ನೋಡಲಾಱದೆಯುಂ ತನ್ನ ತಮ್ಮನ ಮನಮಂ ನೋಡಿಸಲಾಱದೆಯುಂ ಬಲದೇವಂ ಭಗ್ನಮನೋರಥನಾಗಿ ದ್ವಾರಾವತಿಗೆ ಪೋದನನ್ನೆಗಂ ವೇಣೀಸಂಹಾರೋರುಭಂಗ ಮಕುಟಭಂಗಂಗಳೆಂಬ ತನ್ನ ಮಹಾ ಪ್ರತಿಜ್ಞೆಯಂ ನೆಱಪಿದ ಭೀಮಸೇನನಳವನಳವಲ್ಲದೆ ಪೊಗೞ್ದು ಚಕ್ರಿ ಕಾಲ ಕುಶಲನಪ್ಪುದಱನಶ್ವತ್ಥಾಮನಿನಪ್ಪನಾಗತ ಬಾಧಾವಿಘಾತಮಂ ಮಾಡಲೆಂದಯ್ವರುಮಂ ನೀಲಗಿರಿಗೊಡಗೊಂಡು ಪೋಗುತ್ತುಮಲ್ಲಿರ್ದ ಬೀಡುಮನಾ ಬೀಡಿಂಗೆ ಕಾಪಾಗಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯುತ್ತಮೌಜಸರುಮಂ ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರುಮಂ ಪೇೞ್ದು ಹಸ್ತಿನಪುರಕ್ಕೆ ಕಳಿಪಿದನ್ನೆಗಮಿತ್ತ ಕೃಪ ಕೃತವರ್ಮ ಸಮೇತನಶ್ವತ್ಥಾಮಂ ದುಯೋರ್ಧನನಿರ್ದೆಡೆಯಱಯದೆ ಗಾಂಗೇಯರಿಂದಮಿರ್ದೆಡೆಯನಱದು ಕೊಳಕ್ಕೆವಂದಲ್ಲಿಯುಂ ಕಾಣದೆ ಕೊಳುಗುಳದೊಳಱಸುತ್ತುಂ ಬರ್ಪಂ ತೊಟ್ಟನೆ ಕಟ್ಟಿದಿರೊಳ್-

ಚಂ|| ಪಿಡಿದೆಡಗೆಯ್ಯ ಚಾಮರದ ದಕ್ಷಿಣಹಸ್ತದ ಪದ್ಮದೊಳ್ಪೊಡಂ
ಬಡೆ ನಸು ಮಾಸಿ ಪಾಡಱದ ರೂಪಿನೊಳುಣ್ಮವ ಗಾಡಿ ನಾಡೆ ಕ|
ಣ್ಗೆಡ ತೊಡಂಕಿ ಪೀದ ಕುರುಳ್ಗಳೆ ಚಿತ್ತದೊಳಾದ ಬೇಸಱಂ
ನುಡಿವವೊಲಾಗೆ ಬರ್ಪ ಕಮಳಾಯತನೇತ್ರೆಯನಿಂದು ವಕ್ತ್ರೆಯಂ|| ೯೯

ವ|| ಕಂಡು ನೀನಾರ್ಗೇನೆಂಬೆಯೆಲ್ಲಿಗೆ ಪೋದಪೆಯೆನೆ-

ಮ|| ಪೆಸರೊಳ್ ಲಕ್ಷ್ಮಿಯೆನಿನ್ನೆಗಂ ನೆಲಸಿ ತಾಂ ದುರ್ಯೋಧನೋರಸ್ಥಳಾ
ವಸಥಂ ದ್ರೋಣ ನದೀಜ ಕರ್ಣ ಭುಜವೀರ್ಯಾವೇಷ್ಟಿತಂ ಮಾಡೆ ಸಂ|
ತಸದಿರ್ದೆಂ ಬಿಸುಟಾ ಧರಾಪತಿಯಂ ನಾರಾಯಣಾದೇಶಮೊ
ಡ್ಡಿಸೆ ಪಾಂಡುಪ್ರಿಯಪುತ್ರರೊಳ್ ನೆರೆಯಲೆಂದಿಂತೀಗಳಾಂ ಪೋದಪೆಂ|| ೧೦೦

ವ|| ಎಂಬುದುಮಶ್ವತ್ಥಾಮನಿಂತೆಂದಂ-

ತಡೆದನು. ೯೮. ‘ಇದರಿಂದಲ್ಲವೇ ಇವನಿಗೆ ಪಟ್ಟಾಭಿಷೇಕವು ಪೂರ್ಣವಾಗುವುದು. ನವಿಲುಗರಿಯ ಕೊಡೆಯು ಎಲ್ಲ ಕಡೆಯೂ ಪ್ರಸರಿಸಿ ಇದಕ್ಕಲ್ಲವೇ ತಂಪಾದ ನೆರಳನ್ನುಂಟು ಮಾಡುವುದು. ಇದು ಎಂದೂ ಯಾರಿಗೂ ಹೆಚ್ಚಾದ ಗರ್ವದಿಂದ ಬಾಗುವುದಿಲ್ಲವಲ್ಲವೇ’ ಎನ್ನುತ್ತ ಮಾಣಿಕ್ಯರತ್ನಗಳು ಚೆಲ್ಲುತ್ತಿರಲು ಭೀಮಸೇನನು ಹತ್ತಿರಬಂದು ಕೋಪದಿಂದ ದುಯೋಧನನ ಕಿರೀಟವನ್ನು ಬಲವಾಗಿ ಒದೆದನು. ವ|| ಬಲರಾಮನು ದುರ್ಯೋಧನನಿಗಾದ ಅವಸ್ಥೆಯನ್ನು ನೋಡಲಾರದೆಯೂ ತನ್ನ ತಮ್ಮನಾದ ಕೃಷ್ಣನ ಮನಸ್ಸನ್ನು ನೋಯಿಸಲಾರದೆಯೂ ಭಗ್ನಮನೋರಥನಾಗಿ ದ್ವಾರಾವತಿಗೆ ಹೋದನು. ಅಷ್ಟರಲ್ಲಿ ವೇಣೀಸಂಹಾರ (ಮುಡಿಯನ್ನು ಕಟ್ಟುವುದು) ಊರುಭಂಗ (ತೊಡೆಯನ್ನು ಮುರಿಯುವುದು) ಮಕುಟಭಂಗ (ಕಿರೀಟವನ್ನು ಒಡೆಯುವುದು) ಎಂಬ ತನ್ನ ಮಹಾಪ್ರತಿಜ್ಞೆಗಳನ್ನು ಪೂರ್ಣಮಾಡಿದ ಭೀಮಸೇನನ ಶಕ್ತಿಯನ್ನು ಅಳತೆಮೀರಿ ಕೃಷ್ಣನು ಹೊಗಳಿದನು. ಕಾಲಕುಶಲನಾದುದರಿಂದ ಅಶ್ವತ್ಥಾಮನಿಂದ ಮುಂದೆ ಬರುವ ವಿಪತ್ತಿಗೆ ಪರಿಹಾರಮಾಡುವುದಕ್ಕೆಂದು ಅಯ್ದು ಜನ ಪಾಂಡವರನ್ನು ನೀಲಗಿರಿಗೆ ತನ್ನ ಜೊತೆಯಲ್ಲಿ ಕರೆದುಕೊಂಡು ಹೋದನು. ಆ ಬೀಡಿಗೆ ರಕ್ಷಕರಾಗಿ ಧೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ, ಯುಧಾಮನ್ಯೂತ್ತಮೌಜಸರನ್ನೂ ಶ್ರುತಸೋಮಕರೇ ಮುಖ್ಯರಾದ ಪಂಚಪಾಂಡವರನ್ನೂ ಗೊತ್ತು ಮಾಡಿ (ಇರಹೇಳಿ) ಪಾಂಡವರನ್ನು ಹಸ್ತಿನಾಪಟ್ಟಣಕ್ಕೆ ಕಳುಹಿಸಿದನು. ಅಷ್ಟರಲ್ಲಿ ಈ ಕಡೆ ಕೃಪಕೃತವರ್ಮರೊಡಗೂಡಿದ ಅಶ್ವತ್ಥಾಮನು ದುರ್ಯೋಧನನಿದ್ದ ಸ್ಥಳವನ್ನು ತಿಳಿಯದೆ ಭೀಷ್ಮರಿಂದ ದುರ್ಯೋಧನನಿದ್ದ ಸ್ಥಳವನ್ನು ತಿಳಿದು ಕೊಳಕ್ಕೆ ಬಂದು ಅಲ್ಲಿಯೂ ಕಾಣದೆ ಯುದ್ಧಭೂಮಿಯಲ್ಲಿ ಹುಡುಕುತ್ತ ಬರುತ್ತಿದ್ದವನು ಥಟಕ್ಕನೆ ಎದುರುಗಡೆಯಲ್ಲಿ ೯೯. ಎಡಗೈಯಲ್ಲಿ ಚಾಮರವೂ ಬಲಗೈಯಲ್ಲಿ ಕಮಲದ ಹೂವೂ ಮನೋಹರವಾಗಿರಲು ಸ್ವಲ್ಪ ತೇಜೋಹೀನವಾಗಿ ಸ್ವಭಾವಸ್ಥಿತಿ ಕೆಟ್ಟು ಆಕಾರವನ್ನು ಹೊರಹೊಮ್ಮುತ್ತಿರುವ ಸೌಂದರ್ಯವು ವಿಷೇಷವಾಗಿ ಕಣ್ಣನ್ನು ಆಕರ್ಷಿಸಲು ಸಿಕ್ಕಾಗಿ ಕೆದರಿರುವ ಕುರುಳುಗಳು ಮನಸ್ಸಿನ ಬೇಸರನ್ನು ನುಡಿಯುವ ಹಾಗಿರಲು (ಎದುರಿಗೆ) ಬರುತ್ತಿದ್ದ ಕಮಳದಂತೆ ವಿಸ್ತಾರವಾದ ಕಣ್ಣುಳ್ಳ ಚಂದ್ರಮುಖಿಯನ್ನು ನೋಡಿದನು. ವ|| ನೀನಾರು? ನಿನ್ನ ಹೆಸರೇನು? ಎಲ್ಲಿಗೆ ಹೋಗುತ್ತಿದ್ದೀಯೆ ಎನ್ನಲು ೧೦೦. ನನ್ನ ಹೆಸರು ಲಕ್ಷ್ಮಿಯೆಂದು. ದ್ರೋಣ ಭೀಷ್ಮ ಕರ್ಣರ ಬಾಹುಬಲದಿಂದ ರಕ್ಷಿತನಾದ ದುರ್ಯೋಧನನ ಎದೆಯು ಮನೆಯಾಗಿರಲು ಇಲ್ಲಿಯವರೆಗೆ ಅಲ್ಲಿ ಸಂತೋಷದಿಂದಿದ್ದೆನು. ಕೃಷ್ಣನು ಅಪ್ಪಣೆಯ ಪ್ರಕಾರ ಆ ರಾಜನನ್ನು ಬಿಸುಟು ಪಾಂಡುಪ್ರಿಯಪುತ್ರರಲಿ

ಮ|| ಕುರುವಂಶಾಂಬರಭಾನುವಂ ಬಿಸುಡಿಸಲ್ಕಾನುಳ್ಳಿನಂ ತೀರದಾ
ನಿರೆ ನಾರಾಯಣನೆಂಬನುಂ ಪ್ರಭುವೆ ಪೇೞ್ ನೀನೀ ಮರುಳ್ಮಾತನಂ|
ಬುರುಹಾಕ್ಷ್ಮೀ ಬಿಸುಡಂಜದಿರ್ ನಡೆ ಕುರುಕ್ಷ್ಮಾಪಾಳನಿರ್ದಲ್ಲಿಗೆಂ
ದರವಿಂದಾಲಯೆಯಂ ಮಗುೞದನದೇನಾ ದ್ರೌಣಿ ಶೌರ್ಯರ್ಥಿಯೋ|| ೧೦೨

ಮ|| ಅಂತು ವಿಕಸಿತಕಮಳದಳನಯನೆಯಂ ಕಮಳೆಯನಶ್ವತ್ಥಾಮಂ ಮುಂದಿಟ್ಟು ಕುರುಕುಟುಂಬಘಟಚೇಟಿಕೆಯಂ ತರ್ಪಂತೆ ತಂದು ವೃಕೋದರ ಗದಾಸಂಚೂರ್ಣಿತೋರು ಯುಗಳನುಂ ಭೀಮಸೇನಚರಣಪ್ರಹರಣಗಳಿತಶೋಣಿತಾರ್ದ್ರಮೌಳಿಯುಮಾಗಿ ಕೋಟಲೆಗೊಳ್ವ ಕೌರವೇಶ್ವರನನೆಯ್ದೆ ಪೋಗಿ ಹಸ್ತಪ್ರಹಸ್ತಮಂಡಲಾಗ್ರನುಂ ಶೋಕವ್ಯಗ್ರನುಮಾಗಿ-

ಚಂ|| ನೆಗೞ್ದ ನೆಗೞ್ತೆಗಾವೆಡೆಯೊಳಂ ಪೞೆಯಿಲ್ಲದೆ ಪೂಣ್ದು ಸಂದ ವೈ
ರಿಗಳನೆ ಕೊಂದು ವಾರಿಪರೀತಮಹೀತಳಮಂ ನಿಮಿರ್ಚಿ ಜೆ|
ಟ್ಟಿಗರನಯೋನಿಸಂಭವರನಾಳ್ದರಿವರ್ಗದೊಳಾಂತು ಕಾದೆಯುಂ
ಬಗೆ ದೊರೆಕೊಂಡುದಿಲ್ಲಿದು ವಿಧಾತ್ರನ ದೋಷಮೊ ನಿನ್ನ ದೋಷಮೋ|| ೧೦೩

ಕಂ|| ಆದೊಡಮೆನ್ನಂ ಬಂಚಿಸಿ
ಪೋದುದಳ್ ನಿನಗೆ ಪಗವರಿಂದಿನಿತೆಡಱi|
ಯ್ತಾದಿತ್ಯತೇಜ ಬೆಸಸಿದಿ
ರಾದ ಪೃಥಾಸುತರನುೞಯಲೀಯದೆ ಕೊಲ್ವೆಂ|| ೧೦೪

ವ|| ಎಂಬುದುಂ ಫಣಿಕೇತನಂ ನೆತ್ತಿಯಿಂದೊದುಗುವ ನೆತ್ತರ ಧಾರೆಯಿಂ ಮೆತ್ತಿದ ಕಣ್ಗಳನೊತ್ತಂಬದಿಂ ತೆದಶ್ವತ್ಥಾಮನ ಮೊಗಮಂ ನೋಡಿ-

ಚಂ|| ಎನಗಿನಿತೊಂದವಸ್ಥೆ ವಿಯೋಗದಿನಾದುದಿದರ್ಕೆ ನೀನೞ
ಲ್ದಿನಿತು ಮನಕ್ಷತಂಬಡದಿರಾಗದು ಪಾಂಡವರಂ ಗೆಲಲ್ ಪುರಾ|
ತನಪುರುಷಂ ಮುರಾರಿ ಕೆಲದೊಳ್ ನಿಲೆ ನೀಂ ಕೊಲಲಾರ್ಪೊಡಾಗದೆಂ
ಬೆನೆ ತಱದೊಟ್ಟ ವೈರಿಗಳನೆನ್ನಸುವುಳ್ಳಿನಮೆಯ್ದೆವಾ ಗಡಾ|| ೧೦೫

ವ|| ಎಂಬುದುಂ ಪಾಂಡವರನಿಕ್ಕಿದೊಸಗೆವಾತನೀಗಳೆ ಕೇಳಿಸುವೆನೆಂದು ಸರೋಜ ನಿಳಯೆಯನೆನ್ನ ಬರ್ಪನ್ನಮರಸನನಗಲದೆ ವಿಕಸಿತಶತಪತ್ರಾತಪತ್ರದ ತಣ್ಣೆೞಲುಮಂ ಕುಂದಲೀಯದಿರೆಂದು ನಿಯಮಿಸಿ ರುದ್ರಾವತಾರಂ ಕೃಪ ಕೃತವರ್ಮ ಸಮೇತನರಸನಂ ಬೀೞ್ಕೊಂಡು ಪೋದನಾಗಳ್-

ಸೇರಬೇಕೆಂದು ಈಗ ನಾನು ಹೋಗುತ್ತಿದ್ದೇನೆ. ವ|| ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೧೦೧. ಹೊಸದಾಗಿ ಅರಳಿರುವ ಕಮಲದಳಗಳ ಮೇಲೆ ಓಡಾಡುವವಳು ಸಮುದ್ರವನ್ನು ಕಡೆಯಲು ಹುಟ್ಟಿದವಳೆ, ವಿಷ್ಣುವಿನ ಹೆಂಡತಿಯೇ, ಮಿಂಚಿನಂತಿರುವ ಹರಿತವಾದ ಕತ್ತಿಗಳ ಮೇಲೆ ಸಂಚರಿಸುತ್ತೀಯೆ; ಶತ್ರುರಾಜಸೇನಾಸಮುದ್ರವನ್ನು ತಡೆಯಲು ಹುಟ್ಟಿದ ಈ ನಿನಗೆ ನನ್ನನ್ನು ಪ್ರತಿಭಟಿಸಲು ಸಾಧ್ಯವೇ, ೧೦೨. ಕುರುವಂಶವೆಂಬ ಆಕಾಶಕ್ಕೆ ಸೂರ್ಯನಾದ ದುಯೋರ್ಧನನನ್ನು ನಾನಿರುವಾಗ ನೀನು ಬಿಸಾಡಲು ಸಾಧ್ಯವಿಲ್ಲ; ನಾನಿರುವಾಗ ನಾರಾಯಣನೆಂಬುವನು ನಿನಗೆ ಯಜಮಾನನೇ ಹೇಳು, ಹೇ ಕಮಲಮುಖಿ ಈ ಹುಚ್ಚುಮಾತನ್ನು ಬಿಸಾಡು; ಹೆದರಬೇಡ; ನಡೆ, ಕೌರವಚಕ್ರವರ್ತಿಯಿರುವ ಸ್ಥಳಕ್ಕೆ ಎಂದು ಲಕ್ಷ್ಮಿಯನ್ನು ಹಿಂತಿರುಗಿಸಿದನು. ಅಶ್ವತ್ಥಾಮನ ಅಹಂಕಾರವೆಷ್ಟು? ವ|| ಅರಳಿದ ಕಮಲದಳದಂತೆ ಕಣ್ಣುಳ್ಳ ಲಕ್ಷ್ಮಿಯನ್ನು ಅಶ್ವತ್ಥಾಮನು ಮುಂದಿಟ್ಟುಕೊಂಡು ಕೌರವಕುಟುಂಬ ಘಟಚೇಟಿಕೆಯನ್ನು ಕರೆದುತರುವಂತೆ ತಂದನು. ಭೀಮನ ಗದೆಯಿಂದ ಪುಡಿಮಾಡಲ್ಪಟ್ಟ ಎರಡು ತೊಡೆಯುಳ್ಳವನೂ ಭೀಮಸೇನನ ಪಾದಗಳ ಒದೆತದಿಂದ ಸುರಿದ ರಕ್ತದಿಂದ ಒದ್ದೆಯಾಗಿರುವ ತಲೆಯುಳ್ಳವನೂ ಆಗಿ ವ್ಯಥೆಪಡುತ್ತಿರುವ ದುರ್ಯೋಧನನ ಹತ್ತಿರಕ್ಕೆ ಬಂದು ನೋಡಿದನು. ಕೈಯಿಂದ ಕತ್ತಿಯು ಕಳಚಿಕೊಂಡಿತು, ದುಖದಿಂದ ವಿಶೇಷಖಿನ್ನನಾದನು. ೧೦೩. ದುರ್ಯೋಧನ ಮಾಡಿದ ಕಾರ್ಯದಲ್ಲಿ ಎಲ್ಲಿಯೂ ನಿಂದೆಯಿಲ್ಲದೆ ನಿರ್ವಹಿಸಿ, ಪ್ರಸಿದ್ಧರಾದ ಶತ್ರುಗಳನ್ನು ಕೊಂದು, ಸಮುದ್ರದಿಂದ ಸುತ್ತುವರಿಯಲ್ಪಟ್ಟು ಭೂಮಿಯನ್ನು ವಿಸ್ತರಿಸಿ, ಶೂರರಾದ ಅಯೋನಿಜರಾದವರಿಗೆ ಸ್ವಾಮಿ (ಒಡೆಯ)ಯಾಗಿದ್ದು, ಶತ್ರುವರ್ಗವನ್ನು ಎದುರಿಸಿ ಯುದ್ಧಮಾಡಿದರೂ ನಿನಗೆ ಇಷ್ಟಾರ್ಥವು ಲಭಿಸಲಿಲ್ಲವಲ್ಲಾ. ಇದು ವಿಯ ದೋಷವೋ ನಿನ್ನ ದೋಷವೋ? ೧೦೪. ನನ್ನನ್ನು ವಂಚಿಸಿ ಹೋದುದರಿಂದ ನಿನಗೆ ಶತ್ರುಗಳಿಂದ ಇಷ್ಟು ಅವಮಾನವಾಯಿತು. ಸೂರ್ಯತೇಜಸ್ಸುಳ್ಳವನೇ ಆಜ್ಞೆಮಾಡು, ಪ್ರತಿಭಟಿಸಿದ ಪಾಂಡವರನ್ನು ಉಳಿಯುವುದಕ್ಕೆ ಅವಕಾಶವಿಲ್ಲದಂತೆ ಕೊಲುತ್ತೇನೆ ಎಂದನು. ವ|| ಸರ್ಪಧ್ವಜನಾದ ದುರ್ಯೋಧನನು ತಲೆಯಿಂದ ಜಿನುಗಿ ಹರಿಯುತ್ತಿರುವ ರಕ್ತಪ್ರವಾಹದಿಂದ ಅಂಟಿಕೊಂಡಿದ್ದ ಕಣ್ಣುಗಳನ್ನು ಬಲಾತ್ಕಾರದಿಂದ ತೆರೆದು ಅಶ್ವತ್ಥಾಮನ ಮುಖವನ್ನು ನೋಡಿ ಹೇಳಿದನು. ೧೦೫. ನನಗೆ ಇಷ್ಟೊಂದು ಕಷ್ಟದ ಸ್ಥಿತಿ ವಿಯ ಕಟ್ಟಳೆಯಿಂದ ಆಯಿತು. ಇದಕ್ಕೆ ನೀನು ದುಖಪಟ್ಟು ಮನಸ್ಸಿನಲ್ಲಿ ನೋಯಬೇಡ. ಆದಿಪುರುಷನಾದ ಕೃಷ್ಣನು ಅವರ ಪಕ್ಕದಲ್ಲಿರುವಾಗ ನೀನು ಪಾಂಡವರನ್ನು ಗೆಲ್ಲಲಾಗುವುದಿಲ್ಲ.

ಚಂ|| ಮಗನೞಲೊಳ್ ಕರಂ ಮಱುಗುತಿರ್ಪಿನಮೆನ್ನ ತನೂಜನಾಳ್ವ ಸಾ
ಮಿಗಮೞವಾಗೆ ಶೋಕರಸಮಿರ್ಮಡಿಸಿತ್ತು ಜಳಪ್ರವೇಶಮಿ|
ಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥನನಾಥನಾಗಿ ತೊ
ಟ್ಟಗೆ ಮುೞುಪಂತೆವೋಲ್ ಮುೞುಗಿದಂ ಕಡುಕೆಯ್ದಪರಾಂಬುರಾಶಿಯೊಳ್ || ೧೦೬

ವ|| ಆ ಪ್ರಸ್ತಾವದೊಳಶ್ವತ್ಥಾಮಂ ಕೃಪ ಕೃತವರ್ಮರುಂಬೆರಸು ಹಸ್ತಿನಪುರದೊಳ್ ಪಾಂಡವರಿರ್ದರೆಗೆತ್ತುಮಲ್ಲಿಗೆ ನಿಟ್ಟಾಲಿಯಾಗಿ ದಾೞಯನಿಟ್ಟು ಮುಟ್ಟೆವಂದು ಬಾಯ್ಮಾಡಿ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯೂತ್ತಮೌಜಸರಂ ಕೊಂದು ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರಂ ಪಾಂಡವರೆಗೆತ್ತು ಕೊಂದು ತದುತ್ತಮಾಂಗಂಗಳಂ ಕೊಂಡು ತೞತೞನೆ ನೇಸಱ್ಮೂಡುವಾಗಳೆಯ್ದೆ ವಂದು ದುರ್ಯೋಧನನಂ ಕಂಡು ಕೊಳ್ ನಿನ್ನ ನಚ್ಚಿನ ಪಾಂಡವರ ತಲೆಗಳನೆಂದು ಮುಂದಿಕ್ಕಿದಾಗಳ್ ದುರ್ಯೋಧನಂ ನೋಡಿ-

ಕಂ|| ಬಾಲಕಮಳಂಗಳಂ ಕಮ
ಳಾಲಯದಿಂ ತಿಱದು ತರ್ಪ್ಪವೋಲ್ ತಂದೈ ನೀಂ|
ಬಾಲಕರ ತಲೆಗಳಕ್ಕಟ
ಬಾಲಕವಧದೋಷಮೆಂತು ನೀಂ ನೀಗಿದಪಯ್|| ೧೦೭

ವ|| ಎಂಬುದುಮಶ್ವತ್ಧಾಮನಂತೆಂಬುದೇನೆನೆ ದುರ್ಯೋಧನನೆಂದಂ ಪಾಂಡವರ ತಲೆಗಳಲ್ಲಮಿವು ಪಾಂಡವರ ಸೂನುಗಳಪ್ಪ ಪಂಚಪಾಂಡವರ ತಲೆಗಳೆಂಬುದುಮಿದರ್ಕೆ ಕರ್ತವ್ಯಮಾವುದೆಂದೊಡೆ ಹಿಮವತ್ಪರ್ವತದೊಳ್ ತಪಶ್ಚರಣಪರಾಯಣರಾಗಿ ಮೆನಗಮಂತ್ಯಕಾಲಮೆಂದು ದುರ್ಯೋಧನಂ ಪ್ರಾಣಪರಿತ್ಯಾಗಂಗೆಯ್ದನಾಗಳಶ್ವತ್ಥಾಮನುಂ ಕೃಪನುಂ ಸಿಗ್ಗಾಗಿ ಹಿಮವತ್ಪರ್ವತಕ್ಕೆ ನಡೆಗೊಂಡರಿತ್ತ ಕೃತವರ್ಮನುಂ ದ್ವಾರಾವತಿಗೆ ಪೋದನಾಗಳ್-

ಪಿರಿಯಕ್ಕರ|| ಬಿಳಿಯ ತಾವರೆಯೆಸೞೊಳ್ ಮಾಡಿದ ಬೆಳ್ಗೊಡೆ ರಯ್ಯಮಾಗೆಡದ ಕೆಯ್ಯೊಳ್
ಪೊಳೆವ ಚೆಂಬೊನ್ನ ಕಾವಿನ ಚಾಮರಮಮರ್ದಿರೆ ಭೇರಿ ಸಿಂಹಾಸನಮುಂ
ಬೞಯೊಳ್ ಜವಂ ಮಿಳಿರೆ ರಾಜ್ಯಚಿಹ್ನಂಗಳ್ವೆರಸಿಂತು ನಡೆತಂದು ರಾಜ್ಯಲಕ್ಷ್ಮಿ
ಬಳೆದ ಸಂತೋಷದಂತಮನೆಯ್ದೆ ಪತ್ತಿದಳ್ ಸಹಜಮನೋಜನಂ ನಾಡೋಜನಂ|| ೧೦೮

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನಗಂಭೀರವಚನರಚನ

ಚತುರ ಕವಿತಾಗುಣಾರ್ಣವವಿರಚಿತಮಪ ವಿಕ್ರಮಾರ್ಜುನವಿಜಯದೊಳ್ ತ್ರಯೋದಶಾಶ್ವಾಸಂ

ಹಾಗೆ ನೀನು ಅವರನ್ನು ಕೊಲ್ಲಲು ಸಮರ್ಥನಾದರೆ ನಾನು ಬೇಡವೆನ್ನುತ್ತೇನೆಯೇ? ನನ್ನ ಪ್ರಾಣಗಳಿರುವಾಗಲೇ ಶತ್ರುಗಳನ್ನು ತರಿದು ರಾಶಿಹಾಕಿ ಬರುತ್ತಿಯಾ? ಏನು. ವ|| ಎನ್ನಲು ‘ಪಾಂಡವರನ್ನು ಇಕ್ಕಿ ಕೊಂದ ಶುಭವಾರ್ತೆಯನ್ನು ಈಗಲೇ ಕೇಳಿಸುತ್ತೇನೆ’ ಎಂದು ಕಮಲಾಸನೆಯಾದ ಲಕ್ಷ್ಮಿಯನ್ನು ನಾನು ಬರುವವರೆಗೂ ರಾಜನನ್ನು ಅಗಲದೆ ಅರಳಿದ ಕಮಲದ ಕೊಡೆಯ ತಂಪಾದ ನೆರಳನ್ನು ಕಡಿಮೆಮಾಡಬೇಡವೆಂದು ಕಟ್ಟಳೆಯಿಟ್ಟು ರುದ್ರಾವತಾರನಾದ ಅಶ್ವತ್ಥಾಮನು ಕೃಪಕೃತವರ್ಮರೊಡನೆ ರಾಜನನ್ನು ಬೀಳ್ಕೊಂಡು ಹೋದನು- ಆಗ ೧೦೬. ನಾನು ನನ್ನ ಮಗನ ಮರಣದುಖದಿಂದಲೇ ವಿಶೇಷ ದುಖಪಡುತ್ತಿರಲು ನನ್ನ ಮಗನನ್ನು ಆಳುವ ಸ್ವಾಮಿಯೂ ನಾಶವಾಗಲು ಶೋಕರಸವಿಮ್ಮಡಿಯಾಗಿದೆ. ನೀರಿನಲ್ಲಿ ಮುಳುಗಿಕೊಳ್ಳುವುದೇ ಇಲ್ಲಿಗೆ ಯೋಗ್ಯವಾದುದು ಎಂದು ನಿಶ್ಚಯಿಸಿ ಸೂರ್ಯನು ಅನಾಥನಾಗಿ (ದಿಕ್ಕಿಲ್ಲದವನಾಗಿ) ತೊಟ್ಟನೆ ಮುಳುಗುವ ಹಾಗೆ ಪಶ್ಚಿಮ ಸಮುದ್ರದಲ್ಲಿ ಶೀಘ್ರವಾಗಿ ಮುಳುಗಿದನು. (ಸೂರ್ಯಾಸ್ತಮಾನವಾಯಿತು) ವ|| ಆ ಸಮಯದಲ್ಲಿ ಅಶ್ವತ್ಥಾಮನು ಕೃಪಕೃತವರ್ಮರೊಡಗೂಡಿ ಹಸ್ತಿನಾಪಟ್ಟಣದಲ್ಲಿ ಪಾಂಡವರಿರುವರೆಂದು ಭ್ರಾಂತಿಸಿ ಅಲ್ಲಿಗೆ ಎಚ್ಚರದಿಂದ ದಾಳಿಯಿಟ್ಟು (ಮುತ್ತಿಗೆ ಹಾಕಿ) ಸಮೀಪಕ್ಕೆ ಬಂದು ಕೂಗಿ ದೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯೂತ್ತಮೌಜಸರನ್ನು ಕೊಂದು ಶ್ರುತಸೋಮಕರೇ ಮೊದಲಾದ ಉಪಪಾಂಡವರನ್ನು ಪಾಂಡವರೆಂದು ಭ್ರಮಿಸಿಕೊಂಡು ಅವರ ತಲೆಗಳನ್ನು ತೆಗೆದುಕೊಂಡು ಪ್ರಕಾಶಮಾನವಾಗಿ ಸೂರ್ಯನು ಹುಟ್ಟುವ ಹೊತ್ತಿಗೆ ಸರಿಯಾಗಿ ಸಮೀಪಕ್ಕೆ ಬಂದು, ದುರ್ಯೋಧನನನ್ನು ಕುರಿತು ತೆಗೆದುಕೊ ನಿನಗೆ ಪ್ರಿಯರಾದ ಪಾಂಡವರ ತಲೆಗಳನ್ನು ಎಂದು ಮುಂದಿಟ್ಟನು. ಅದನ್ನು ದುರ್ಯೋಧನನು ನೋಡಿ ೧೦೭. ಸರೋವರದಿಂದ ಎಳೆಯ ಕಮಲಗಳನ್ನು ಕಿತ್ತು ತರುವ ಹಾಗೆ ಅಯ್ಯೋ! ನೀನು ಬಾಲಕರ ತಲೆಗಳನ್ನು ತಂದಿರುವೆ, ಬಾಲವಧಾದೋಷವನ್ನು ನೀನು ಹೇಗೆ ಕಳೆಯುತ್ತೀಯೇ? ಎಂದನು.

ವ|| ಅಶ್ವತ್ಥಾಮನು ಹಾಗೆಂದರೇನು? ಎನ್ನಲು ದುಯೋರ್ಧನನು ಹೀಗೆ ಹೇಳಿದನು. ‘ಇವು ಪಾಂಡವರ ತಲೆಗಳಲ್ಲ. ಪಾಂಡವರ ಮಕ್ಕಳಾದ ಪಂಚಪಾಂಡವರ ತಲೆಗಳು ಎನ್ನಲು ಇದರ ಪರಿಹಾರಕ್ಕೆ ಮಾಡಬೇಕಾದ ಕರ್ತವ್ಯವೇನು ಎಂದನು ಅಶ್ವತ್ಥಾಮ; ಹಿಮವತ್ಪರ್ವತದಲ್ಲಿ ತಪಸ್ಸುಮಾಡುವುದರಲ್ಲಿ ಆಸಕ್ತರಾಗಿ’, ನನಗೂ ಅಂತ್ಯಕಾಲವು ಬಂದಿದೆ’ ಎಂದು ದುರ್ಯೋಧನನು ಪ್ರಾಣವನ್ನು ನೀಗಿದನು. ಆಗ ಅಶ್ವತ್ಥಾಮನೂ ಕೃಪನೂ ಅವಮಾನಿತರಾಗಿ ಹಿಮವತ್ಪರ್ವತಕ್ಕೆ ನಡೆದರು. ಈ ಕಡೆ ಕೃತವರ್ಮನೂ ದ್ವಾರಾವತಿಗೆ ಹೋದನು. ೧೦೮. ಬಿಳಿಯ ತಾವರೆಯ ದಳದಲ್ಲಿ ಮಾಡಿದ ಬಿಳಿಯ ಕೊಡೆಯು ಬಲದ ಕಯ್ಯಲ್ಲಿ ರಮ್ಯವಾಗಿರಲು ಹೊಳೆದ ಹೊಂಬಣ್ಣದ ಚಿನ್ನದ ಕಾವುಳ್ಳ ಚಾಮರವು ಎಡಗಯ್ಯಲ್ಲಿ ಸೇರಿಕೊಂಡಿರಲು, ಭೇರಿ ಸಿಂಹಾಸನಾದಿಗಳು ಪಕ್ಕದಲ್ಲಿ ವೇಗವಾಗಿ ಚಲಿಸುತ್ತಿರಲು ರಾಜ್ಯಚಿಹ್ನೆಗಳೊಡಗೂಡಿ ಅಬಿವೃದ್ಧಿಯಾಗುತ್ತಿದ್ದ ಸಂತೋಷವು ಸಂಪೂರ್ಣವಾಗಲು ರಾಜ್ಯಲಕ್ಷ್ಮಿಯು ಸಹಜಮನೋಜನೂ ನಾಡೋಜನೂ ಆದ ಅರ್ಜುನನನ್ನು ಸೇರಿದಳು. ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹದಿಮೂರನೆಯ ಆಶ್ವಾಸ.
***********




***************