ಗಜೇಂದ್ರ ಮೋಕ್ಷ

ಗಜೇಂದ್ರ ಮೋಕ್ಷ
ಹಿಂದೆ ಜಯ-ವಿಜಯ ಎಂಬ ಮುನಿ ಕುಮಾರರಿದ್ದರು.ಅವರೀರ್ವರೂ ಅಣ್ಣ-ತಮ್ಮಂದಿರು ಮತ್ತು ವಿಷ್ಣು ಭಕ್ತರು.ಒಮ್ಮೆ ಓರ್ವ ರಾಜ ತಾನು ಮಾಡುವ ಯಾಗಕ್ಕೆ ಇವರೀರ್ವರನ್ನೂ ಪುರೋಹಿತರಾಗಿ ಆಹ್ವಾನಿಸಿದ.ಜಯ-ವಿಜಯರು ಸಂತೋಷದಿಂದ ಅಲ್ಲಿಗೆ ಹೋಗಿ ಯಾಗ ನಡೆಸಿಕೊಟ್ಟರು. ಇದರಿಂದ ಸಂತೋಷಗೊಂಡ ರಾಜ ಅವರೀರ್ವರಿಗೂ ಸೂಕ್ತ ದಕ್ಷಿಣೆ ನೀಡಿ ಕಳುಹಿಸಿದ.
ಜಯ-ವಿಜಯರು ಮನೆಗೆ ಬಂದರು.ಆಗ ಜಯನು ತಮಗೆ ಸಿಕ್ಕಿದ ದಕ್ಷಿಣೆಯನ್ನು ಸಮನಾಗಿ ಹಂಚಿಕೊಳ್ಳೋಣವೆಂದು ತಿಳಿಸಿದ.ಆದರೆ ವಿಜಯನು ಅದಕ್ಕೆ ಒಪ್ಪದೇ ಜಯನ ಪಾಲು ಆತನಿಗೆ ಮತ್ತು ತನ್ನ ಪಾಲು ತನಗೆ ಎಂದು ಹಠ ಹಿಡಿದ.ಈರ್ವರೂ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರು.ಜಗಳ ಪ್ರಾರಂಭವಾಗಿ ಅದು ವಿಕೋಪಕ್ಕೆ ತಿರುಗಿತು.
ಸಿಟ್ಟಿನ ಭರದಲ್ಲಿ ಜಯನು ತನ್ನ ತಮ್ಮನಿಗೆ ನೀನು ಮೊಸಳೆಯಾಗು ಎಂದು ಶಾಪವಿತ್ತ.ಇದಕ್ಕೆ ಪ್ರತಿಯಾಗಿ ವಿಜಯನೂ ತನ್ನ ಅಣ್ಣನಿಗೆ ನೀನು ಆನೆಯಾಗು ಎಂದು ಶಾಪವಿತ್ತ.ಕೊನೆಗೆ ಇಬ್ಬರಿಗೂ ತಾವು ಮಾಡಿದ ತಪ್ಪಿನ ಅರಿವಾಗಿ ಅವರು ಮಹಾವಿಷ್ಣುವನ್ನು ಪ್ರಾರ್ಥಿಸಿದರು.ಆಗ ವಿಷ್ಣುವು ಪ್ರತ್ಯಕ್ಷನಾಗಿ ಸಿಟ್ಟಿನ ಭರದಲ್ಲಿ ಕೊಟ್ಟ ಶಾಪವನ್ನು ಅನುಭವಿಸಲೇಬೇಕು.ಆದರೆ ಆದಷ್ಟು ಬೇಗ ಇಬ್ಬರಿಗೂ ತಾನು ಶಾಪ ವಿಮೋಚನೆ ಮಾಡುತ್ತೇನೆ ಎಂದು ಅಭಯವಿತ್ತ.
ಜಯ-ವಿಜಯರು ಆನೆ-ಮೊಸಳೆ ಗಳಾಗಿ ಗಂಗಾ ತೀರದಲ್ಲಿ ಹುಟ್ಟಿದರು.ಅದರೂ ಅವುಗಳು ತಮ್ಮ ತಮ್ಮಲ್ಲೇ ಜಗಳವಾದುತ್ತಿದ್ದವು.ಒಮ್ಮೆ ಆನೆ ನೀರು ಕುಡಿಯಲು ಬಂದಾಗ ಮೊಸಳೆ ಅದರ ಕಾಲನ್ನು ಕಚ್ಚಿ ಹಿಡಿಯಿತು.ನೋವಿನಿಂದ ಆನೆ ಚೀರಿಟ್ಟಿತು.ಮತ್ತು ಅದು ವಿಷ್ಣುವನ್ನು ಸಂಕಷ್ಟದಿಂದ ಪಾರುಮಾಡುವಂತೆ ಸ್ತುತಿಸಿತು.
ಅದರ ಮೊರೆಗೆ ಓಗೊಟ್ಟ ಶ್ರೀಹರಿ ತನ್ನ ಸುದರ್ಶನ ಚಕ್ರದಿಂದ ಮೊಸಳೆಯನ್ನು ಸಂಹರಿಸಿದ.ಕೂಡಲೇ ಅವೆರೆದಕ್ಕೂ ಶಾಪ ವಿಮೋಚನೆಯಾಗಿ ಆ ಜಾಗದಲ್ಲಿ ಜಯ-ವಿಜಯರು ನಿಂತಿದ್ದರು.ತನ್ನ ಭಕ್ತರಾದ ಅವರೀರ್ವರನ್ನೂ ಶ್ರೀಹರಿ ವೈಕುಂಟದ ದ್ವಾರಪಾಲಕರಾಗಿ ನೇಮಿಸಿಕೊಂಡ.

*****************ಕೃಪೆ: ಆಸೆ ಬ್ಲಾಗ್*****************

ಕಾಮೆಂಟ್‌ಗಳಿಲ್ಲ: