ಮಂಕುತಿಮ್ಮನ ಕಗ್ಗ (61-80)

ಮಂಕುತಿಮ್ಮನ ಕಗ್ಗ (61-80)

ಸಾಕ್ಷಿ ದ್ವಯ ರಸಧಾರೆ - 061
ನಕ್ಷತ್ರ ಮಂಡಲದಿನಾಚೆಯಿಂದೊಂದು ದನಿ |
ವಕ್ಷೋಗುಹಾಂತರದಿನೊಂದು ದನಿಯಿಂತೀ ||
ಸಾಕ್ಷಿ ದ್ವಯವು ನಿನ್ನಳೊ೦ದುಗೂಡಿದೊಡದೇ |
ಪ್ರೇಕ್ಷೆ ಪರಬೊಮ್ಮನದು ಮಂಕುತಿಮ್ಮ
ವಕ್ಷ = ಹೃದಯ, ಪ್ರೇಕ್ಷೆ = ಸಾಕ್ಷಾತ್ಕಾರ, ದರ್ಶನ, ಪರಬೊಮ್ಮನದು = ಪರಬ್ರಹ್ಮನದು
ನಕ್ಷತ್ರ ಮಂಡಲದ ಆಚೆಯಿಂದ ಒಂದು ದನಿ, ವಕ್ಷ ಗುಹಾಂತರದಿಂದ ಒಂದು ದನಿಯಂತೆ ಈ ಸಾಕ್ಷಿ ದ್ವಯವು ನಿನ್ನೊಳಗೆ ಒಂದು ಗೂಡಿದೊಡೆ ಅದೇ ಪರ ಬ್ರಹ್ಮನ ದರ್ಶನವನ್ನು ನೀಡುತ್ತದೆ ಎಂಬುದೇ ಈ ಕಗ್ಗದ ಹೂರಣ.
ಒಂದು ದೈವೀ ದನಿ ಮತ್ತೊಂದು ಅಂತರ್ದನಿ ಎರಡರ ಸಮ್ಮಿಲನವೇ ಪರಮಾತ್ಮ ದರ್ಶನ. ನಾವು ಯಾವುದಾದರೊಂದು ದನಿಯನ್ನು ಕೇಳಬಹುದಲ್ಲವೆ. ಈ ಎರಡೂ ದನಿಗಳನ್ನು ಕೇಳುವುದು ಹೇಗೆ.ಅವುಗಳನ್ನು ಮೇಳೈಸುವುದು ಹೇಗೆ ಎಂಬುದೇ ಆಧ್ಯಾತ್ಮ ವಿದ್ಯೆಯ ಅಂತಿಮ ಪಾಠ. ಇಡೀ ಸೃಷ್ಟಿಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಲ್ಲ. ಹಾಗೆ ಕಲ್ಪಿಸಿಕೊಳ್ಳಲಾದರೆ, ಅದನ್ನು ಅಂತಃಚಕ್ಷುವಿನಿಂದ ನೋಡಲು ಸಾಧ್ಯವಾದರೆ ಮತ್ತು ಅದನ್ನು ನಮ್ಮ ಅಂತರಂಗದಲ್ಲಿ ಈ ಪಂಚಭೂತಗಳ, ಪಂಚ ಜ್ಞಾನೇಂದ್ರಿಯಗಳ, ಪಂಚ ಸ್ಪರ್ಶೇ೦ದ್ರಿಯಗಳ ಪ್ರಭಾವ ಮತ್ತು ಪರಿಧಿಯಿಂದ ಹೊರತುಪಡಿಸಿ ನೋಡಿದಾಗ ಆ ಬೃಹತ್ ಚೇತನದ ಅದ್ಭುತ ಕಾರ್ಯದ ಅರಿವಾಗಿ, ನಾವು ಪರಮಾತ್ಮ ದರ್ಶನ ಮಾಡಿಕೊಳ್ಳಬಹುದು. ಇದನ್ನು ವಿವರಿಸುವುದು ಕಷ್ಟ. ನಾ ಹಿಂದೆ ಹೇಳಿದ ಹಾಗೆ ಇದು ಕೇವಲ ಅನುಭವ ವೇಧ್ಯ.
ಇದನ್ನು ಇನ್ನೊಂದು ರೀತಿ ನೋಡಬಹುದು. ನಮಗೆ ಬಹಳಷ್ಟು ಜನರ ಬೋಧನೆಗಳು, ನಮ್ಮ ಓದಿನಿಂದ ಬಹಳಷ್ಟು ವಿಚಾರಗಳು, ತಿಳಿದವರಿಂದ, ಪಂಡಿತರಿಂದ, ಸಾಧು ಸಂತರಿಂದ, ಸಾಧನೆ ಮಾಡಿದವರಿಂದ ಕೇಳಿದ ವಿಚಾರಗಳಿಂದ ಒಂದು ಸ್ವಲ್ಪಮಟ್ಟಿಗೆ ಹಲವು ವಿಚಾರಗಳು ಅರಿವಿಗೆ ಬರುತ್ತವೆ. ನಾವು ನಮ್ಮ ಅಂತರಂಗದಲ್ಲಿ ಅಂತರ್ಮುಖಿಯಾಗಿ ಅನುಭವಿಸುವ ಕೆಲವು ವಿಚಾರಗಳು ನಮ್ಮ ಅರಿವಿಗೆ ಬರುತ್ತವೆ. ಎರಡೂ ವಿಚಾರಗಳನ್ನು ಮಂಥನ ಮಾಡಿ ಸಾಧ್ಯಾಸಾಧ್ಯತೆಗಳನ್ನು, ಸಾಧಕ ಭಾದಕಗಳನ್ನು, ವಿಚಾರದ ಒರೆಗೆಹಚ್ಚಿ ನಮಗೆ ಸರಿಕಂಡದ್ದನ್ನು ನಂಬಿ, ನಮ್ಮ ನಂಬಿಕೆಯನ್ನು ಗಟ್ಟಿ ಮಾಡಿಕೊಂಡು, ನಮ್ಮ ಅನುಭವನ್ನು ದೀರ್ಘಕಾಲ ಅನುಭವಿಸುವಂತಾದರೆ ಆ ಪರಮಾತ್ಮನ ಸತ್ಯರೂಪದ ದರ್ಶನ ನಮಗೆ ಖಂಡಿತ ಆಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಸಾಕ್ಷಿ ದ್ವಯವು ಎಂಬ ಪದ ಪ್ರಯೋಗದಿಂದ ಉಲ್ಲೇಖಿಸಿದ್ದಾರೆ.
ಇದನ್ನು ಅನುಭವಿಸ ಬೇಕು. ಅಂತರಂಗದಲ್ಲಿ ತಂದುಕೊಂಡು ಸಂತಸಿಸಬೇಕು, ಕಂಡುಕೊಳ್ಳಬೇಕು ಸ್ಥಿರಮಾಡಿಕೊಳ್ಳಬೇಕು. ನನ್ನ ಅನುಭವಕ್ಕೆ ಇನ್ನೂ ಸ್ಥಿರವಾಗಿ ಬಂದಿಲ್ಲ. ಪ್ರಯತ್ನಪಡುತ್ತಿದ್ದೇನೆ. ವಾಚಕರೆ ನೀವೂ ಪ್ರಯತ್ನ ಪಡಿ. ಜಯವಾಗಲಿ.
ರಸಧಾರೆ - 062
ಭೌತವಿಜ್ಞಾನಿ ರವಿತಾರೆಧರೆಗಳ ಚಲನ |
ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||
ಪ್ರೀತಿರೋಷಗಳನವನಳೆವನೇನ್ ? ಅವ್ಯಕ್ತ |
ಚೇತನವನರಿವನೇಂ ? ಮಂಕುತಿಮ್ಮ ||
ಭೌತವಿಜ್ಞಾನಿಯು ಸೂರ್ಯ ನಕ್ಷತ ಭೂಮಿಗಳ ತಿರುಗುವ ಸುಡುವ ಪ್ರಭಾವ ಬೀರುವ ಶಕ್ತಿಗಳ ಗುಣಾಕಾರ ಭಾಗಾಕಾರ ಲೆಕ್ಕಾಚಾರವನ್ನು ಮಾಡುತ್ತಾನೆ. ಆದರೆ ಮಾನವ ಮನಸ್ಸುಗಳಲ್ಲಿ ಪರಸ್ಪರ ಪ್ರೀತಿ ದ್ವೇಷ ರೋಷಗಳ ಶಕ್ತಿಯನ್ನು ಅಳೆಯುತ್ತಾನೆಯೇ? ಸಕಲ ಸೃಷ್ಟಿಯನ್ನೂ ಒಂದು ಸೂತ್ರದಲ್ಲಿ ಹೆಣೆದು ಅದರ ಗತಿ ವಿಧಿಗಳನ್ನು ನಿಯಂತ್ರಿಸುವ ಆ ಬೃಹತ್ ಚೇತನವನ್ನು ಅವನಿಂದ ಅರಿಯಲು ಸಾಧ್ಯವೇ ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.
ವಿಜ್ಞಾನಿಗಳ ಸಂಶೋಧನೆಗಳಿಂದ ಅವರಿಗೆ ಈ ಸೃಷ್ಟಿಯ ರಹಸ್ಯಗಳು ಅರಿವಿಗೆ ಬಂದಿರುವುದು ಕೇವಲ ಅಣುಮಾತ್ರ. ಊಹೆಗೂ ನಿಲುಕದ ಈ ಸೃಷ್ಟಿಯನ್ನು ಅವರ ಕೈಲಿ ಅರಿಯಲು ಸಾಧ್ಯವೇ ಇಲ್ಲ. ಅಮಿತವಾದಂತ ಈ ಜಗತ್ತನ್ನು ಮಿತ ಬುಧ್ಧಿಯಿಂದ ಅರಿಯಲು ಸಾಧ್ಯವೇ? ಏನೋ ಒಂದಿಷ್ಟು ಲೆಕ್ಕಾಚಾರ ಹಾಕಿ ಇದು ಹೀಗಿರಬಹುದು ಅಥವಾ ಅದು ಹಾಗಿರಬಹುದು ಎಂದು ಅಂದಾಜು ಮಾಡಬಹುದು. ಸ್ವಲ್ಪಮಟ್ಟಿಗೆ ಅರಿಯಲೂ ಸಾಧ್ಯ. ಆದರೆ ಒಂದು ವಿಚಾರ, ಇಂದು ಇವರುಗಳು ಕಂಡು ಕೊಂಡಂತಹ ವಿಚಾರಗಳು, ಎಂದಿಗೂ ಹೀಗೇ ಇರುವುದಿಲ್ಲ. ಬದಲಾಗುತ್ತಾ ಇರುವ ಈ ಜಗತ್ತಿನ ಪರಿಯನ್ನು ನಿಖರವಾಗಿ ಹೇಳಲು ಸಾಧ್ಯವೇ. ಇಲ್ಲ. ಕೇವಲ ಊಹಿಸಬಹುದು. ಹೀಗಿರಬಹುದು ಅಥವಾ ಹಾಗಿರಬಹುದು ಎಂದು ಕಲ್ಪಿಸಿಕೊಳ್ಳಬಹುದು ಮತ್ತು ಕಲ್ಪಿಸಿದ್ದನ್ನು ಸಿದ್ಧಾಂತವನ್ನಾಗಿ ಪ್ರತಿಪಾದಿಸಬಹುದು. ಆದರೆ ಕೆಲವು ವರ್ಷಗಳ ಬಳಿಕೆ ಆ ಸಿದ್ಧಾಂತಗಳು ಸತ್ಯಕ್ಕೆ ದೂರವೆನ್ನುವುದನ್ನು ಮತ್ತಾರೋ ಧೃಢಪಡಿಸುತ್ತಾರೆ. ಹಾಗಾಗಿ ವಿಜ್ಞಾನಿಗಳಿಂದ ಸೃಷ್ಟಿಯ ರಹಸ್ಯವನ್ನು, ಅವರ ಗುಣಾಕಾರ ಭಾಗಾಕಾರಗಳ ಲೆಕ್ಕಾಚಾರದಿಂದ ಅರಿಯಲು ಸಾಧ್ಯವಿಲ್ಲ ಎನ್ನುವುದು ಮಾನ್ಯ ಗುಂಡಪ್ಪನವರ ಮತ ಮತ್ತು ಸತ್ಯವೂ ಕೂಡ.
ಸೂರ್ಯ ನಕ್ಷತ ಭೂಮಿಗಳ ತಿರುಗುವ ಸುಡುವ ಪ್ರಭಾವ ಬೀರುವ ಶಕ್ತಿಗಳನ್ನು ಮತ್ತು ಅದರ ಲೆಕ್ಕಾಚಾರವನ್ನು ಈ ಭೌತ ವಿಜ್ಞಾನಿಗಳು ಅಲ್ಪ ಸ್ವಲ್ಪ ಹಾಕಿಬಿಡಬಹುದು. ಆದರೆ ಮಾನವನ ಮನಸ್ಸಿನಲ್ಲಿ ಇರುವ ಪ್ರೀತಿ ಪ್ರೇಮ ಕೋಪ ದ್ವೇಷದ ಭಾವಗಳ ಸಂವೇದನೆಯ ಒತ್ತಡ, ವೇಗದ ಲೆಕ್ಕಾಚಾರವನ್ನು ಯಾರಿಂದಲೂ ಹಾಕಲು ಸಾದ್ಯವಿಲ್ಲವೆನ್ನುತ್ತಾರೆ, ಮಾನ್ಯ ಗುಂಡಪ್ಪನವರು. ಹೌದು ಮಾನವನ ಮನಸೂ ಈ ಸೃಷ್ಟಿಯಷ್ಟೇ ಅಗಾಧ ಮತ್ತು ಆಳ. ವೇದಾಂತದಲ್ಲಿ ಅದನ್ನು ಬಹಳ ಆಳವಾದದ್ದು, ನಿಗೂಢವಾದದ್ದು ಊಹೆಗೆ ನಿಲುಕದ್ದು ಎನ್ನುವ ಅರ್ಥದಲ್ಲಿ ಗುಹಎನ್ನುತ್ತಾರೆ. ಒಬ್ಬರ ಮನಸ್ಸಿನ ಆಳವನ್ನು ಅರಿಯುವುದು ಸಾಧ್ಯವಿಲ್ಲ. ಮೇಲಿನ ರೂಪವೇ ಬೇರೆ , ಅಂತರ್ಯದ ಚಿತ್ರವೇ ಬೇರೆ. ಇದನ್ನೂ ಸಹ ವಿಜ್ಞಾನಿಗಳು ಅರಿಯುವಲ್ಲಿ ಅಸಫಲರು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.
ಹೀಗೆ ಯಾವುದನ್ನೂ ನಿಖರವಾಗಿ ಸಂಪೂರ್ಣವಾಗಿ ದೃಢ ಪಡಿಸಲಾಗದ ವೈಜ್ಞಾನಿಕ ಸಿದ್ಧಾಂತಗಳು, ಇನ್ನು ಇವೆಲ್ಲವನ್ನೂ ಸೃಜಿಸಿ, ಅವುಗಳ ಸೂತ್ರವನ್ನು ಕೈಲಿಟ್ಟುಕೊಂಡು, ಆಡಿಸುತ್ತಿರುವ ಆ ಬೃಹತ್ ಚೇತನ ರೂಪವಾದ ಪರಮಾತ್ಮನನ್ನು ಪರಮ ಚೇತನವನ್ನು ವಿಜ್ಞಾನಿಗಳಿಂದ ಅರಿಯಲು ಸಾಧ್ಯವೇ. ವೈಜ್ಞಾನಿಕ ಪ್ರಯೋಗಗಳ ಪರಿಧಿಯೊಳಗೆ ಇವುಗಳನ್ನು ತರುವುದು ಸಾಧ್ಯವೇ ಇಲ್ಲವೆಂದು ಮಾನ್ಯ ಗುಂಡಪ್ಪನವರ ಪ್ರತಿಪಾದನೆ ಈ ಕಗ್ಗದಲ್ಲಿ.
ನಾವೂ ಸಹ ಇವುಗಳನ್ನೆಲ್ಲ ಪ್ರಮಾಣಿಸಿ ನೋಡುವ ಅರೆ ವೈಜ್ಞಾನಿಕತೆಯ ಹಂಗಿಗೆ ಬೀಳದೆ, ಕೇವಲ ಅನುಭವಕ್ಕೆ ತಂದು ಕೊಳ್ಳಬಹುದು ಅಥವಾ ತಂದು ಕೊಳ್ಳುವ ಪ್ರಯತ್ನವನ್ನು ಮಾಡಬಹುದು.
ರಸಧಾರೆ - 063
ನರಭಾಷೆ ಬಣ್ಣಿಪುದೆ ಪರತತ್ವರೂಪವನು? |
ಅರಿಯದದು ನಮ್ಮೆದೆಯ ಭಾವಗಳನೊರೆಯೆ ||
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ |
ಒರಟುಯಾನವೊ ಭಾಷೆ ಮಂಕುತಿಮ್ಮ ||
ನರಭಾಷೆ ಬಣ್ಣಿಪುದೆ ಪರತತ್ವ ರೂಪವನ್ನು, ಅರಿಯದು ಅದು ನಮ್ಮ ಎದೆಯ ಭಾವಗಳನು ಒರೆಯೆ ಪರಮಾನುಭವಗಳ ಉಲಿ ಅನುಭವಿಗಳ ಒಳ ಕಿವಿಗೆ ಒರಟು ಯಾನವೋ ಭಾಷೆ ಮಂಕುತಿಮ್ಮ.
ನರಭಾಷೆ = ಮಾನವರ ಭಾಷೆ, ಬಣ್ಣಿಪುದೆ = ವರ್ಣಿಸುವುದೆ, ಪರತತ್ವ = ಪರಮಾತ್ಮ ತತ್ವ, ಪರಮಾನುಭವಗಳ ಉಲಿ = ಪರಮಾತ್ಮನ ಅನುಭವದ ಭಾಷೆ, ಅನುಭವಿಗಳ = ಸಾಧಕರ, ಒಳಕಿವಿಗೆ = ಅಂತರಂಗದ ಭಾವಕ್ಕೆ.
ನಾವಾಡುವ ನರಭಾಷೆಗೆ ಒಂದು ಮಿತಿ ಇದೆ. ಈ ಭಾಷೆಯಲ್ಲಿ ಆ ಪರಮಾತ್ಮ ಸ್ವರೂಪವನ್ನು ಬಣ್ಣಿಸಲು ಸಾಧ್ಯವಿಲ್ಲ. ನಮ್ಮ ಅಂತರಂಗದ ಭಾವವನ್ನು ಹೇಳಲು ಈ ಭಾಷೆ ಸಾಲದು. ಪರತತ್ವದ ಅನುಭವದ ಮಾತುಗಳು ಕೇವಲ ನಮ್ಮ ಒಳಗಿವಿಗೆ ಕೇಳಿಸುತ್ತದೆ. ಮಾನವರ ಭಾಷೆಯಲ್ಲಿ ವಿವರಿಸುವುದು ಒಂದು ನೇರವಲ್ಲದ ಸುಗಮವಲ್ಲದ ಪ್ರಯಾಣದಂತೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಮ್ಮಲ್ಲಿ ಆಚಾರ್ಯತ್ರಯರಾದ ಶಂಕರರು, ರಾಮಾನುಜರು ಮತ್ತ್ತು ಮಧ್ವರು ಭಗವದ್ಗೀತೆಗೆ, ಬ್ರ್ರಹ್ಮಸೂತ್ರಗಳಿಗೆ ಮತ್ತು ವೇದಗಳಿಗೆ ಪರಿಭಾಷೆಯನ್ನು ಬರೆದಿದ್ದಾರೆ. ಅವುಗಳನ್ನುಭಾಷ್ಯಎನ್ನುತ್ತಾರೆ. ಅಂದರೆ ಭಾಷೆಯಲ್ಲಿ ವಿವರಿಸಿದ ವಿಷಯಗಳು ಎಂದು ಅರ್ಥ. ಅವು ಅವರುಗಳು ತಮ್ಮ ಅನುಭವದಿಂದ ಮನಗಂಡ ವಿಚಾರಗಳು. ಅವರ ಅನುಯಾಯಿಗಳು ಅವುಗಳನ್ನೇ ಅನುಸರಿಸುತ್ತಾರೆ. ಶಂಕರರು ಹೀಗೆ ಹೇಳಿದ್ದಾರೆ, ರಾಮಾನುಜರು ಹಾಗೆ ಹೇಳಿದ್ದಾರೆ, ನೋಡಿ ಮದ್ವರು ಭಿನ್ನವಾಗಿ ವ್ಯಾಖ್ಯಾನ ಮಾಡಿದ್ದಾರೆ ಎಂದು ಅವರೇನು ಹೇಳಿದರೋ ಮತ್ತು ಇವರೇನು ಅರ್ಥಮಾಡಿಕೊಂಡರೋ ಅದು ಅವರವರಿಗೇ ಗೊತ್ತು. ಅವರ ಅನುಭವ ಇವರ ಅನುಭವವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಕೆಲವು ವಿಷಯಗಳು ಕೇವಲ ಅನುಭವ ವೇದ್ಯ.
ನನಗೆ ಹೇಳಲು ಶಬ್ಧಗಳೇ ಸಿಗುತ್ತಿಲ್ಲಎಂದು ಕೆಲವರು ಹಲವು ಬಾರಿ ಹೇಳಿರುವುದನ್ನು ಕೇಳಿರಬಹುದು. ಹೌದು ನಮ್ಮ ಪ್ರೀತಿ ಪ್ರೇಮ ಕರುಣೆ, ಕೋಪ ದ್ವೇಷ ಇಂಥಹ ಭಾವನೆಗಳನ್ನು ವಿವರಿಸಲು ನಮ್ಮಲ್ಲಿ ಶಬ್ಧಗಳಿರುವುದಿಲ್ಲ. ಏಕೆಂದರೆ ಮನಸ್ಸಿನ ಭಾವ ಕೇವಲ ಭಾವವಾಗಿರುತ್ತೆ. ಹಾಗೆಯೇ ಜಗತ್ತಿನ ಸೂತ್ರವನ್ನೆಲ್ಲ ತನ್ನ ಕೈಯಲ್ಲಿಟ್ಟುಕೊಂಡಿರುವ ಆ ಬೃಹತ್ ಚೇತನವನ್ನು ನಮ್ಮ ಸಾಧಾರಣ ಭಾಷೆಯಿಂದ ವಿವರಿಸಲು ಸಾಧ್ಯವಿಲ್ಲವೆಂಬುದೆ ಈ ಕಗ್ಗದ ಹೂರಣ.
ಇದನ್ನೇ ಅವರವರ ಭಾವಕ್ಕೆ ನರರೇನು ಭಾವಿಸುವರದರಂತೆ ಕಾಣುವನುಎಂದು ನಿಜಗುಣ ಶಿವಯೋಗಿಗಳು ಹೇಳಿಲ್ಲವೇ. ಆ ಪರಮಾತ್ಮನನ್ನು ಅನುಭವಿಸುವ ಭಾವ ಮತ್ತು ಭಾವನೆಯನ್ನು ನಮ್ಮ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ಭಾಷೆಗೆ ಒಂದು ಮಿತಿ ಇದೆ. ಭಾವಕ್ಕೆ ಒಂದು ಮಿತಿ ಇದೆ. ಆದರೆ ಭಾವದ ಮಿತಿ ಭಾಷೆಯ ಮಿತಿಗಿಂತ ಬಹಳ ವಿಶಾಲ ಮತ್ತು ಅಗಾಧ. ಹಾಗೇನಾದರೂ ಆ ಪರಮಾತ್ಮಾನುಭಾವವನ್ನು ಭಾಷೆಯಲ್ಲಿ ವಿವರಿಸಲು ಪ್ರಯತ್ನಪಟ್ಟರೆ, ಒಂದು ಹಳ್ಳ ತಿಟ್ಟುಗಳು, ಕಲ್ಲು ಮುಳ್ಳುಗಳಿಂದ ತುಂಬಿದ ಅಂಕುಡೊಂಕಾದ ರಸ್ತೆಯಮೇಲೆ ಗಾಡಿ ಓಡಿಸಿದಂತಾ ಒರಟು ಪ್ರಯಾಣವಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಹಾಗಾಗಿ ವಾಚಕ ಮಹಾಶಯರೇ ಆ ಪರಮ ಚೇತನವನ್ನು ಮತ್ತು ಅದರ ಲೀಲೆಯನ್ನು ಕೇವಲ ಅನುಭವಿಸಬೇಕು. ನಮ್ಮ ಅನುಭವ ನಮ್ಮದೇ ಆಗಿರಬೇಕು ಮತ್ತು ಎಲ್ಲರ ಅನುಭವವೂ ಅವರವರದೇ ಆಗಿರಬೇಕು. ನಮ್ಮ ಅನುಭವದ ದನಿ ನಮ್ಮ ಒಳಗಿವಿಗಳಿಗೆ ಕೇಳಿಸಬೇಕು. ಭಾಷೆಯಿಲ್ಲದ ಶಬ್ಧವಿಲ್ಲದ ಒಂದು ಶಾಂತ ಸುಂದರ ಅನುಭೂತಿ ನಮ್ಮಲ್ಲಿ ಆಗಬೇಕು. ಅಂತಹ ಅನುಭವವನ್ನು ಪಡೆಯುವ ವಿಧಾನವನ್ನು ಹಲವು ಸಜ್ಜನರಿಂದ ಅರಿತುಕೊಳ್ಳುವ. ಆದರೆ ನಮ್ಮ ಅನುಭವವನ್ನು ನಾವೇ ಪಡೆದುಕೊಳ್ಳಬೇಕು. ಪಡೆದುಕೊಳ್ಳುವ ಪ್ರಯತ್ನವನ್ನು ನಿರಂತರ ಮಾಡಿದಾಗ ನಮಗದರ ಅನುಭವ ಆಗಬಹುದು.
ರಸಧಾರೆ - 064
ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |
ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ||
ತತ್ವತಂಡುಲ ದೊರೆಗುಮುದು ವಿವೇಚಿತತತ್ವ |
ನಿತ್ಯ ಭೋಜನ ನಮಗೆ ಮಂಕುತಿಮ್ಮ ||
ಚಿತ್ತದ ಅನುಭವ ಭಾವ ಸಂಭಾವನೆಗಳು ಎಲ್ಲ ಬತ್ತವು. ಅದನು ವಿಚಾರ ಯುಕ್ತಿಗಳು ಕುಟ್ಟೆ ತತ್ವ ತಾಂದುಳ ದೊರೆಗುಂ ಅದು ವಿವೇಚಿತ ತತ್ವ ನಿತ್ಯ ಭೋಜನ ನಮಗೆ ಮಂಕುತಿಮ್ಮ.
ಚಿತ್ತ=ಮನಸ್ಸು, ಸಂಭಾವನೆ= ಆಲೋಚನೆ, ಕುಟ್ಟೆ = ಕುಟ್ಟಿದರೆ, ತಂಡುಲ = ಅಕ್ಕಿ, ದೊರೆಗುಂ = ದೊರೆತರೆ, ವಿವೇಚಿತ = ವಿವೇಚನೆಯ ಮೂಸೆಯಿಂದ ಹೊರಬಂದ, ನಿತ್ಯ ಭೋಜನ = ಮನಸ್ಸಿಗೆ, ಬುದ್ಧಿಗೆ ನಿತ್ಯದ ಆಹಾರ.
ನಮ್ಮ ಮನಸ್ಸಿನಲ್ಲಿ ಬರುವ ಭಾವ, ಅನುಭವ ಮತ್ತು ಆಲೋಚನೆಗಳೆಲ್ಲ ಬತ್ತದಂತೆ. ಅದನ್ನು ಯುಕ್ತಿ ಮತ್ತು ವಿಚಾರವೆಂಬ ಒನಕೆಗಳಿಂದ ಕುಟ್ಟಿದರೆ ತತ್ವವೆಂಬ ಅಕ್ಕಿ ನಮಗೆ ದೊರೆಯುವುದು. ಹಾಗೆ ದೊರೆತ ಅಕ್ಕಿರೂಪದ ತತ್ವವೇ ನಮ್ಮ ಭೌದ್ಧಿಕತೆಗೆ ಆಹಾರ ಎಂಬುದೇ ಈ ಕಗ್ಗದ ತಾತ್ಪರ್ಯ. ನಮ್ಮ ಮಾನಸಿಕತೆಯಲ್ಲಿ ನಮ್ಮ ವಿಚಾರ ಮಂಥನಕ್ಕೆ ಒತ್ತು ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಮಗೆ ಮನಸ್ಸು ಉಂಟು. ಬುದ್ಧಿಯೂ ಉಂಟು. ವಿಚಾರ ಮಾಡುವ ಶಕ್ತಿಯೂ ಉಂಟು. ಅನ್ಯ ಪ್ರಾಣಿಗಳಿಗೂ ಇವೆಲ್ಲವೂ ಇದೆ. ಆದರೆ ಅವುಗಳ ಆ ಶಕ್ತಿಗಳಿಗೆ ಒಂದು ಮಿತಿ ಇದೆ. ಆದರೆ ಅಮಿತವಾದ ಬುದ್ಧಿ ಮತ್ತು ಅಗಾಧ ವಿಚಾರ ಶಕ್ತಿಯನ್ನು ಹೊಂದಿರುವ ಈ ಮನುಷ್ಯಪ್ರಾಣಿ ಹಲ ದಿಕ್ಕಿನಲ್ಲಿ ವಿಚಾರ ಮಾಡುವ ಕ್ಷಮತೆಯನ್ನು ಹೊಂದಿದ್ದಾನೆ. ನಮ್ಮ ಮನಸ್ಸುಗಳಲ್ಲಿ ಬರುವ ಅನುಭವಜನ್ಯವಾದ ಭಾವನೆಗಳು ಮತ್ತು ಆ ಭಾವನೆಗಳಿಗನುಗುಣವಾಗಿ ಬರುವ ಆಲೋಚನೆಗಳನ್ನು ಆ ಮಿತ ವಿಚಾರ ಶಕ್ತಿಯ ಮಥನಕ್ಕೆ ಒಳಪಡಿಸಬೇಕು. ಬತ್ತವನ್ನು ಕುಟ್ಟಿದ ಹಾಗೋ, ಮೊಸರನ್ನು ಕಡೆದ ಹಾಗೋ ಮಾಡಿದರೆ ಅದರಿಂದ ನಮಗೆ ಜ್ಞಾನ ಉಂಟಾಗುತ್ತದೆ. ಸಾಧ್ಯಾ ಸಾಧ್ಯತೆಗಳ, ಯುಕ್ತಾಯುಕ್ತತೆಗಳ, ಮಥನವಾಗಿ ಅನವಶ್ಯಕವಾದ ವಿಷಯಗಳನ್ನು ದೂರ ತಳ್ಳಿ ನಮಗೆ ಏನು ಒಳ್ಳೆಯದೋ ಅಥವಾ ಒಳ್ಳೆಯದನ್ನು ಮಾಡಲು ಯಾವುದು ಅವಶ್ಯವೋ ಅದನ್ನು ಮಾತ್ರ ಉಳಿಸಿಕೊಳ್ಳಬಹುದು. ಹಾಗೆ ಉಳಿಸಿಕೊಂಡರೆ ಅದು ಜ್ಞಾನ.
ಆದರೆ ಇಂದಿನ ಪರಿಸ್ಥಿತಿ ಅದಲ್ಲ . ಸೆಳೆತಗಳು ಬಹಳ. ಮಾನಸಿಕ ವೈಕಲ್ಯಕ್ಕೆ ಹಲವಾರು ದಾರಿಗಳು. ದೂರದರ್ಶನ, ವೃತ್ತಪತ್ರಿಕೆಗಳು, ಅಂತರ್ಜಾಲ, ಅಂತರ್ಜಾಲದಲ್ಲಿ ಈ ಮುಕಪುಸ್ತಕದಂತ ಅಂಗಗಳು, ಇನ್ನು ವಾಹನಗಳು, ಉಣವು ಮಳಿಗೆಗಳು, ಸುತ್ತಾಟ ಭೋಜನ ಕೂಟಗಳು, ವೃತ್ತಿ, ಇವುಗಳ ಮಧ್ಯೆ ಯೋಚನೆ ಅಥವಾ ಆಲೋಚನೆ ಮಾಡಲು ನಮಗೆ ವ್ಯವದಾನವೇ ಇಲ್ಲ. ನಾವು ಬಹಳ ವ್ಯಸ್ತರು. ನಮಗೆ ಪುಸ್ತಕ ಓದಲು ವ್ಯವದಾನವಿಲ್ಲ. ಅರಿತವರೊಡನೆ ವಿಚಾರ ವಿನಿಮಯ ಮಾಡಲು ಆಸ್ಥೆ ಇಲ್ಲ, ಯಾರಾದರೂ ಹೇಳಿದ್ರೆ ಕೇಳುವ ಮನೋಭಾವವೂ ಇಲ್ಲ, ಹೆಚ್ಚಿನ ವಿಚಾರಗಳನ್ನು ಅರಿತುಕೊಳ್ಳುವ ಮನಸ್ತತ್ವವೂ ಇಲ್ಲ. ಹಾಗಿರಬೇಕಾದರೆ ಇನ್ನು ಭಾವವೂ ಇಲ್ಲ, ಅನುಭವವೂ ಇಲ್ಲ, ವಿಚಾರವೂ ಇಲ್ಲ. ಎಲ್ಲವೂ ಮೇಲೆ ಮೇಲೆ, ತಳುಕು ಹೆಚ್ಚು. ಗಾಢವಾದ ಬಂಧನಗಳಿಲ್ಲ, ಸಂಬಂಧಗಳಿಲ್ಲ. ಭಾವನೆಗಳಿಲ್ಲ, ಆಳವಾದ ವಿಚಾರಗಳಿಲ್ಲ. ಹಾಗಿರಬೇಕಾದರೆ ಇನ್ನು ಅನುಭವಗಳನ್ನು ಭಾವಿಸುವುದಕ್ಕಾಗಲೀ, ಅನುಭವಿಸುವುದಕ್ಕಾಗಲೀ ಸಮಯವೇ ಇಲ್ಲದಾಗ, ವಿಚಾರ ಬೆಳೆಯಲು ಹೇಗೆ ಸಾಧ್ಯ ಹೇಳಿ. ವಿಚಾರ ಬೆಳೆಯದೆ ಸತ್ಯ ದರ್ಶನವಾಗುವುದು ಹೇಗೆ ಹೇಳಿ. ವಿಪರ್ಯಾಸವೆಂದರೆ ಇಂದು ನಾವು ಯಾವುದನ್ನು ತೊರೆಯಬೇಕೋ ಅದಕ್ಕೆ ಅಂಟಿಕೊಂಡು ಮತ್ತು ಯಾವುದಕ್ಕೆ ಅಂಟಿಕೊಳ್ಳಬೇಕು ಅದರಿಂದ ದೂರವಾಗಿ ವೈಚಾರಿಕತೆಯ ಬಡತನದಿಂದ ಬಳಲುತ್ತಿದ್ದೇವೆ. ( poverity of intellectualism ).
ಏನು ನಮಗೆ ವಿಚಾರ ಶಕ್ತಿ ಇಲ್ಲವೇ?” ಎಂದು ನೀವು ಕೇಳಿದರೆ, ಖಂಡಿತ ಇದೆ. ಆದರೆ ಮೇಲೆ ಹೇಳಿದ ಕಾರಣಗಳಿಗೆ ಕೆಲವರು ವಿಚಾರಮಾಡುವುದಿಲ್ಲ. ಇನ್ನು ಕೆಲವರು ವಿಚಾರ ಮಾಡುತ್ತಾರೆ ಆದರೆ ತಮ್ಮ ಕುತರ್ಕದಿಂದ ಎಲ್ಲವನ್ನೂ ಪರಿಕಿಸುವ, ವಿಡಂಬನಾತ್ಮಕವಾಗಿ ನೋಡುವ, ಕುಹಕವಾಡುವ ಮತ್ತು ಅವಹೇಳನಮಾಡುವ ಕೆಲಸವನ್ನು ಮಾಡುತ್ತಾ, ಶುದ್ಧ ತತ್ವವನ್ನು, ಸತ್ವವನ್ನು ಅರಿಯುವ ದಿಶೆಯಿಂದ ವಿಮುಖರಾಗಿದ್ದಾರೆ. ಇಂತಹವರು ಸತ್ಯವಾಗಿ ಯಾರಾದರೂ ವಿಚಾರವನ್ನು ಮಾಡಬೇಕೆಂದು ನಿಶ್ಚಯಿಸಿದ್ದರೆ, ಅವರನ್ನೂ ವಿಮುಖರನ್ನಾಗಿಸಲು ಪ್ರಯತ್ನಿಸುತ್ತಾರೆ.
ಹಾಗಾಗಿ ವಾಚಕರೆ ನಮಗೆ ಸತ್ಯವಾಗಿಯೂ ಸತ್ಯದ ಮತ್ತು ತತ್ವದ ದರ್ಶನವಾಗಬೇಕಾದರೆ, ನಾವು ವಿಚಾರವಂತರಾಗಬೇಕು. ವಿಚಾರವಾದಿಗಳಾಗಬಾರದು. ನಮ್ಮ ಅನುಭವಗಳನ್ನು ಭಾವಿಸುತ್ತಾ ಅದನ್ನು ವಿಚಾರದ ಒರೆಗೆ ಹಚ್ಚಿ ನಮ್ಮದೇ ಆದಂತ, ನಮ್ಮ ಅಂತರ್ಯದಲ್ಲಿ ಸ್ಫುರಿಸಿದಂತಾ ಸತ್ಯವನ್ನು ತತ್ವವನ್ನು ನಾವು ಕಂಡುಕೊಳ್ಳಬೇಕು. ಅದಕ್ಕೆ ಪೂರ್ವಾಗ್ರಹಗಳನ್ನು ಬಿಟ್ಟು, ಅಂತರ್ಮುಖಿಗಳಾದರೆ ನಮಗೆ ಎಲ್ಲವೂ ನಿಚ್ಚಳವಾಗಿ ತೋರುವುದು. ಅಂತಹ ಪ್ರಯತ್ನವನ್ನು ನಾವೂ ಮಾಡೋಣವೆ?
ರಸಧಾರೆ - 065
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ||
ಮಸ್ತಕದಿ = ತಲೆಯಲ್ಲಿ , ಚಿತ್ತದೊಳು = ಅಂತರಂಗದಲ್ಲಿ, ತರು = ಗಿಡ, ಪುಸ್ತಕದಿ ದೊರೆತ ಅರಿವು ಮಸ್ತಕದಿ ತಳೆದ ಮಣಿ ಚಿತ್ತದೊಳು ಬೆಳೆದ ಅರಿವು ತರು ತಳೆದ ಪುಷ್ಪ. ವಸ್ತು ಸಾಕ್ಷಾತ್ಕಾರವು ಅಂತರ್ ವೀಕ್ಷಣೆಯಿಂದ ಶಾಸ್ತ್ರಿತನದಿಂದ ಅಲ್ಲ ಮಂಕುತಿಮ್ಮ.
ಪುಸ್ತಕಗಳನ್ನು ಓದಿ ಪಡೆದುಕೊಂಡ ಪಾಂಡಿತ್ಯ ತಲೆಯಮೇಲೆ ತಂದಿಟ್ಟುಕೊಂಡಂತ ಕಿರೀತದಲ್ಲಿನ ಮಣಿಯಂತೆ. ಆದರೆ ನಮ್ಮ ಅನುಭವಗಳನ್ನು ವಿಚಾರದ ಒರೆಗೆ ಹಚ್ಚಿ ನಮ್ಮ ಚಿತ್ತದಲ್ಲಿ ನಮಗೆ ಸ್ಫುರಿಸಿದ ಜ್ಞಾನ, ತನ್ನ ಸ್ವಾಭಾವಿಕ ಗುಣಕ್ಕೆ, ಮಣ್ಣಿನ ಸಾರ, ಪರಿಸರದ ಪ್ರಭಾವದಿಂದ ತನ್ನೊಳಗಿಂದಲೇ ವಿಕಸಿತವಾಗುವ ಒಂದು ಗಿಡದ ಪುಷ್ಪದಂತೆಎನ್ನುತಾರೆ, ಮಾನ್ಯ ಗುಂಡಪ್ಪನವರು.
ಪುಸ್ತಕಗಳನ್ನು ಓದಿ, ಬಾಯಿಪಾಟ ಮಾಡಿ ಅಥವಾ ನೆನಪಿನಲ್ಲಿಟ್ಟುಕೊಂಡು, ಸಮಯ ಸಂಧರ್ಭ ಬಂದಾಗ ಅದನ್ನು ಉಪಯೋಗಿಸುವುದು ಜಾಣತನ. ಆದರೆ ಅದು ಜ್ಞಾನವಲ್ಲ. ಅದು ಕೇವಲ ತೋರಿಕೆಗೆ ಅಥವಾ ಹೊಟ್ಟೆಪಾಡಿಗೆ . ಹೇಗೆ ರಾಜ ತನ್ನ ರಾಜತನವನ್ನು ಬಿಂಬಿಸಲು ಒಂದು ಕಿರೀಟವನ್ನು ತಂದು ಇಟ್ಟುಕೊಳ್ಳುತ್ತಾನೆಯೋ ಹಾಗೆ. ಅದು ನಮ್ಮ ಅರಿವಾಗಲು ಸಾಧ್ಯವಿಲ್ಲ. ಅದು ಅವಿದ್ಯೆ. ಕೇವಲ ಕಲಿತ ವಿದ್ಯೆ. ನಮ್ಮಲ್ಲಿ ಒಂದು ಗಾದೆ ಇದೆ. ಕಟ್ಟಿ ಕೊಟ್ಟ ಬುತ್ತಿ , ಹೇಳ್ ಕೊಟ್ಟ ಬುದ್ದಿ ಎಷ್ಟು ದಿವಸಾಅಂತ. ಹಾಗಾಗಿ ತಂದಿಟ್ಟುಕೊಂಡ ಅರಿವು ನಮ್ಮದಾಗಲು ಸಾಧ್ಯವಿಲ್ಲ ಅಥವಾ ಸದಾ ನಮ್ಮೊಡನಿರಲು ಸಾಧ್ಯವಿಲ್ಲ. ಬದಲಾಗಬಹುದು.ಶಾಸ್ತ್ರಗಳನ್ನು ಓದಿ ಪಾಂಡಿತ್ಯವನ್ನು ಪಡೆದು ಕೇವಲ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೂ, ಅನುಭವಿಸಿ ಮಥಿಸಿ ಅಂತರಂಗದಲ್ಲಿ ಪಡೆದುಕೊಂಡ ಜ್ಞಾನಕ್ಕೂ ಬಹಳ ಅಂತರವುಂಟು ಎನ್ನವುದು ಈ ಕಗ್ಗದ ಹೂರಣ.
ಆದರೆ ವಸ್ತು ವಿಷಯವನ್ನು ಕುರಿತು ನಮ್ಮ ಮನಸ್ಸು ಬುಧ್ಧಿಗಳ ಅಂತರ್ಯದಲ್ಲಿ ವಿಚಾರ ಮಂಥನದಿಂದ ಉಂಭಾವವಾಗುವ ಜ್ಞಾನ ನಮ್ಮಲ್ಲಿ ಸ್ಥಿರವಾಗಿ ನಮ್ಮ ಸ್ವಭಾವವೇ ಆಗಿ ನಿಲ್ಲುತ್ತದೆ. ಅದು ಒಂದು ಗಿಡ ತನ್ನ ಒಡಲಿನಿಂದ ತನ್ನ ಗುಣಗಳನ್ನು, ತಾ ನಿಂತ ಭೂಮಿಯ ಸಹಾಯದಿಂದ ಆ ಭೂಮಿಯೊಳಗಿನ ರಸಗಳ ಸಹಾಯದಿಂದ ವಿಕಸಿತಗೊಳಿಸಿ ತಾನೇ ಮೊಗ್ಗಾಗಿ ಅರಳಿ ಹೂವಾಗಿ ಸೋಗಸನೀಯುವಂತೆ, ನೋಡಿ ಎರಡು ಭಿನ್ನವಾದ ಗಿಡಗಳನ್ನು ಪಕ್ಕಪಕ್ಕದಲ್ಲೆ ಹಾಕಿದರೂ, ಅವು ಒಂದೇ ನೆಲ, ಗಾಳಿ ನೀರು ಪರಿಸರವನ್ನು ಹಂಚಿಕೊಂಡರೂ ಅರಳಿಸುವ ಹೂವೆ ಬೇರೆ ಬೇರೆ. ಅದರ ರೂಪ ಬಣ್ಣ ಸುವಾಸನೆಯೇ ಬೇರೆ ಬೇರೆ. ಏಕೆಂದರೆ ಅದು ಅಂತರಂಗದಲ್ಲಿ ಮಥಿಸಿ ತನ್ನದಾಗಿಸಿಕೊಂಡು ಅರಳಿಸಿದ ಹೂವಾದ್ದರಿಂದ.
ವಾಚಕರೆ ತಂದೆ ತಾಯಿಯರ ಮಮತೆಯ ಪರಿಯಲ್ಲಿ, ದತ್ತು ತೆಗೆದುಕೊಂಡ ಮಕ್ಕಳಿಗೂ ತಾವೇ ಹೆತ್ತ ಮಗುವಿಗೂ ಎಷ್ಟು ವ್ಯತ್ಯಾಸವಿರುತ್ತದೆ ಅಲ್ಲವೇ? ಇಲ್ಲ ಹಾಗಿರುವುದಿಲ್ಲ ನಾವು ಅದನ್ನು ನಮ್ಮ ಮಗುವಿನಂತೆಯೇ ನೋಡಿಕೊಳ್ಳುತ್ತೇವೆ ಎಂದು ಎಷ್ಟು ವಾದಿಸಿದರೂ ಅಂತರಂಗ ಭಾವನೆಯಲ್ಲಿ ಖಂಡಿತ ವ್ಯತ್ಯಾಸವಿರುತ್ತದಲ್ಲವೇ?
ಹಾಗೆಯೇ ಪುಸ್ತಕದ ವಿದ್ಯೆಗೂ ಅಂತರ್ಯದಲ್ಲಿ ನಮ್ಮದೇ ಅದ ಅನುಭವ ಜನ್ಯವಾದ ಜ್ಞಾನಕ್ಕೂ ಬಹಳ ವ್ಯತ್ಯಾಸವುಂಟು. ಇದನ್ನು ಹೆಚ್ಚು ವಿವರಿಸುವುದಕ್ಕಿಂತ ವಾಚಕರೆ ಅನುಭವಕ್ಕೆ ತಂದುಕೊಳ್ಳುವುದು ಉಚಿತ!!!!
ರಸಧಾರೆ - 066
ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ|
ಅರ್ಥವೇ೦ ಕ್ರಿಮಿಕೀಟಕೋಟಿ ರಚನೆಯಲಿ ||
ಕರ್ತನಾಲೋಚಿಸಿದ ದುಂದಿನವನೆಂಬ ನುಡಿ|
ಯರ್ದದೃಷ್ಟಿಯ ವಿವರ ಮಂಕುತಿಮ್ಮ ||
ವ್ಯರ್ಥವೆಂದೆನಿಪುದಲ = ವ್ಯರ್ಥವು + ಎಂದು + ಎನಿಪುದು + ಅಲ ಯರ್ದದೃಷ್ಟಿಯ = ಅರ್ಧ ದೃಷ್ಟಿಯ
ವ್ಯರ್ಥವೆಂದೆನಿಸುತ್ತದೆ ಸೃಷ್ಟಿಯಲಿ ಬಹುಭಾಗ, ಈ ಕ್ರಿಮಿ ಕೀಟ ಕೋಟಿಗಳ ಸೃಷ್ಟಿಯಲಿ ಅರ್ಥವೇನು ? ಆ ಸೃಷ್ಟಿಕರ್ತನು ಈ ಸೃಷ್ಟಿಯನ್ನು ರಚಿಸುವಾಗ ತನ್ನ ಶಕ್ತಿಯ ದುಂದುಪಯೋಗ ಮಾಡಿರಬಹುದೆಂದು ಯಾರಾದರೂ ಆಲೋಚಿಸಿದರೆ ಅದು ಅವರ ಅಪರಿಪೂರ್ಣ ಜ್ಞಾನದ, ಯೋಚನಾ ದಾರಿದ್ರ್ಯದ ಸೂಚಕವೆಂದು ಈ ಕಗ್ಗದ ಹೂರಣ.
ಕೆಲವರಿಗೆ ಛೆ ಈ ಪರಮಾತ್ಮ ಅದೇನೆಲ್ಲಾ ಸೃಷ್ಟಿಸಿ ಬಿಟ್ಟಿದ್ದಾನೆ, ತನ್ನ ಸೃಷ್ಟಿಯ ಶಕ್ತಿಯನ್ನು ಅನಾವಶ್ಯಕವಾಗಿ ದುಂದು ಮಾಡಿಕೊಂಡುಬಿಟ್ಟಿದ್ದಾನೆಎಂದು ಅನ್ನಿಸಬಹುದು. ಅದು ಸಂಕುಚಿತ ಭಾವ. ಆ ಪರಮಾತ್ಮನ ಈ ಸೃಷ್ಟಿಗೆ ಕಾರಣವನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವೇ? ಇಲ್ಲಿ ಒಂದಕ್ಕೊಂದು ಪೂರಕವಾಗಿದೆ. ಒಂದು ಅಣುವಿಗೆ ಮತ್ತೊಂದು ಅಣು ಪೂರಕ. ಆದರೆ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಮನುಷ್ಯ ಈ ಎಲ್ಲ ಸೃಷ್ಟಿಯೂ ತನಗಾಗಿ ಆಗಿದೆ ಎಂದು ಅಂದುಕೊಳ್ಳುತ್ತಾನೆ, ಮೂರ್ಖತನದಿಂದ. ಪರಮಾತ್ಮನ ಸೃಷ್ಟಿಗೆಲ್ಲವೂ ಒಂದು ಕಾರಣವಿದೆ. ಅದನ್ನು ನೋಡಲುಬಾರದೆ, ಅರೆಜ್ಞಾನದಿಂದ ವ್ಯಾಖ್ಯಾನಮಾಡುವ ಈ ಮನುಷ್ಯನ ಅಜ್ಞಾನಕ್ಕೆ ಏನು ಹೇಳಬೇಕೋ ಗೊತ್ತಿಲ್ಲ.
ಪಶು ಪಕ್ಷಿಗಳು, ಪ್ರಾಣಿಗಳು, ಅನಂತ ಪ್ರಭೇದಗಲಿರುವ ಜಲ ಚರಗಳು, ಕೋಟಿ ಕೋಟಿ ತರಹೆಯ ಕ್ರಿಮಿ ಕೀಟಗಳು, ಮರಗಳು, ಗಿಡ ಬಳ್ಳಿಗಳು, ಸಸಿ ಪೊದೆಗಳು, ಬೃಹತ್ ಹೆಮ್ಮರಗಳು, ಎಷ್ಟೊಂದು ತರಹೆ ಹೂಗಳು ಹಣ್ಣುಗಳು, ಬೆಟ್ಟ ಗುಡ್ಡಗಳು, ನದಿ ತೊರೆಗಳು. ಒಂದೊಂದಕ್ಕೆ ಒಂದೊಂದು ಬಣ್ಣ. ಬೇರೆ ಬೇರೆ ಆಕಾರ ರುಚಿ ವಾಸನೆ, ಅಬ್ಬಬ್ಬಾ ಒಂದು ಶತಾಂಶವನ್ನು ವಿವರಿಸಲು ಸಹಸ್ರ ಪುಟಗಳ ಹೊತ್ತಿಗೆಯೂ ಸಾಲದು, ಈ ಎಲ್ಲವನ್ನೂ ಆ ಪರಮಾತ್ಮ ಸೃಜಿಸಿ ತಾನೂ ಅದರಲ್ಲಿ ಇರುತ್ತಾ ಆನಂದ ಪಡುತ್ತಿದ್ದಾನೆ. ಅವೆಲ್ಲವನ್ನೂ ಅವನು ತನ್ನ ಆನಂದಕ್ಕೆ ಸೃಷ್ಟಿಸಿಕೊಂಡಿದ್ದಾನೆ. ಮನುಷ್ಯನನ್ನೂ ಸಹ. ಆದರೆ ಮನುಷ್ಯ ಹೆಡ್ಡತನದಿಂದ, ” ಪರಮಾತ್ಮ ನಮಗಾಗಿ ಎಲ್ಲವನ್ನೂ ಸೃಷ್ಟಿಸಿದ್ದಾನೆ ಎಂದು ತಿಳಿದಿದ್ದಾನೆ.
ಈ ಗಿಡಮರಗಳು ನನಗಾಗಿ. ಅದರಲ್ಲಿ ಬಿಡುವ ಹಣ್ಣು ಹೂಗಳು ನನಗಾಗಿ. ಕೆಲವು ಪ್ರಾಣಿಗಳು ನನಗೆ ತಿನ್ನಲು ಬೇಕು ಅದರ ನಾಶ. ಕೆಲವು ಪ್ರಾಣಿಗಳು ನನಗೆ ಔಷಧಿಯನ್ನು ಕೊಡುತ್ತವೆ, ಅದರ ನಾಶ. ಕೆಲವು ಪ್ರಾಣಿಗಳಿಂದ ನನಗೆ ಪ್ರಾಣ ಭಯ. ಅದರ ನಾಶ. ಕೆಲವು ಪ್ರಾಣಿಗಳು ನನಗೆ ಊಳಿಗ ಮಾಡಬೇಕು. ಅದರ ಸ್ವಾತಂತ್ರ್ಯದ ನಾಶ. ಹಾರುವ ಹಕ್ಕಿಯನ್ನೂ ಬಿಟ್ಟಿಲ್ಲ. , ನೀರಿನ ಮೀನನ್ನೂ ಬಿಟ್ಟಿಲ್ಲ. ಮನೆ ಕಟ್ಟಲು ನಾಟ ಬೇಕು. ಕಡಿ ಮರ. ಜಲ್ಲಿ ಬೇಕು ಕಡಿ ಬೆಟ್ಟ. ಹೀಗೆ ಅವನ ಕಣ್ಣು, ಕಲ್ಲು ಮಣ್ಣು ಮರ, ಲೋಹ ಅದಿರು ನೀರು,ಎಲ್ಲದರ ಮೇಲೆ ಇವನ ವಕ್ರ ದೃಷ್ಟಿ . ಮನುಷ್ಯನೂ ಸಹ ಸೃಷ್ಟಿಯ ಎಲ್ಲರಂತೆ ಆದರೂ ಅವನು ಯಾವುದನ್ನೂ ಇರಗೊಡಲಾರ. ಇವನಿಗೆ ಅತೀ ಆಸೆ .ಅದಕ್ಕೆ ಪೂರಕವಾಗಿ ಅವನಿಗೆ ಅನ್ಯ ಪ್ರಾಣಿಗಳಿಗಿಂತ ಹೆಚ್ಚು ಬುಧ್ಧಿ ಶಕ್ತಿ. ಅನ್ಯ ಪ್ರಾಣಿಗಳಿಗಿಂತ ಹೆಚ್ಚು ಸಾಮರ್ತ್ಯ. ಅದನ್ನು ಕೊಟ್ಟವನೂ ಆ ಪರಮಾತ್ಮನೇ ಆದರೂ ಮನುಷ್ಯ ನಾನು ಎಂದು ಬೀಗುತ್ತಾನೆ. ನಾನೂ ಸಹ ಈ ಪರಮಾತ್ಮನ ಸೃಷ್ಟಿಯಲ್ಲಿ ಎಲ್ಲದರಂತೆ ಒಂದು. ಇದನ್ನು ನಾಶಮಾಡುವ ಹಕ್ಕು ಯೋಗ್ಯತೆಯೂ ನನಗೆ ಇದ್ದರೂ ಹಕ್ಕಿಲ್ಲ. ಹಾಗಾಗಿ ನಾನು ಇದನ್ನು ನಾಶಮಾಡಬಾರದು ಎಂದು ಮನುಷ್ಯ ಅರಿತುಕೊಳ್ಳುತ್ತಾನೋ ಅಂದು ಅವನು ಈ ಜಗತ್ತಿನಲ್ಲಿ ನೆಮ್ಮದಿಯಿಂದ ಇರಬಹುದು.
ರಸಧಾರೆ - 067
ಸೃಷ್ಟಿಸಂಕಲ್ಪ ಲಿಪಿಯೆಲ್ಲ ನಮ್ಮೆದುರಿಲ್ಲ |
ದೃಷ್ಟಿಗೋಚರವದರಳೊಂದು ಗೆರೆ ಮಾತ್ರ ||
ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? |
ಕ್ಲಿಷ್ಟದ ಸಮಸ್ಯೆಯದು- ಮಂಕುತಿಮ್ಮ ||
ಸೃಷ್ಟಿಸಂಕಲ್ಪ = ಜಗತ್ತಿನ ಸೃಷ್ಟಿಯ ಸಂಕಲ್ಪ (ನಕಾಶೆ) , ಲಿಪಿ = ಲೇಖಾ ಧಾಖಲೆ, ಜಗತ್ತಿನ ಸೃಷ್ಟಿಯ ಸಂಕಲ್ಪ ( ನಕಾಶೆ ) ನಮ್ಮ ಎದುರಲಿ ಇಲ್ಲ. ದೃಷ್ಟಿಗೆ ಗೋಚರವು ಅದರೊಳು ಒಂದು ಗೆರೆ ಮಾತ್ರ. ಅಷ್ಟರಿಂದ ಇದು ನಷ್ಟ ಅದು ಶಿಷ್ಟ ಎನ್ನುವುದೆ? ಇದು ಕ್ಲಿಷ್ಟದ ಸಮಸ್ಯೆ ಮಂಕುತಿಮ್ಮ.
ಜಗತ್ತು ಸೃಷ್ಟಿಯಾಗುವ ಮುಂಚಿನ ಲೇಖಾ ಅಥವಾ ರೇಖಾ ಚಿತ್ರ ನಮ್ಮ ಬಳಿ ಇಲ್ಲ. ನಾವು ಕಾಣಲಾಗಿರುವುದು ಒಂದು ಬೃಹತ್ ಚಿತ್ರದಲ್ಲಿ ಒಂದೇ ಗೆರೆ ಮಾತ್ರ. ಅಷ್ಟು ಸಣ್ಣ ಗೆರೆಯನ್ನು ಕಂಡು ನಾವು ಈ ಸೃಷ್ಟಿಯನ್ನು ಕುರಿತು ವ್ಯಾಖ್ಯಾನ ಮಾಡುತ್ತಾ, ಇದು ಸರಿ ಇದು ಸಪ್ಪು ಎನ್ನುವುದು ಸರಿಯೇ?” ಎಂದು ಕೇಳುತ್ತ, ಇದು ಬಹಳ ಕ್ಲಿಷ್ಟದ ಸಮಸ್ಯೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲಿ.
ನಾವು ಒಂದು ಮನೆ ಕಟ್ಟಬೇಕಾದರೆ ಅದಕ್ಕೊಂದು ನಕಾಶೆ ಬೇಕು. ನೀವು ಯಾರಾದರೂ ಗೃಹ ನಿರ್ಮಾಣ ಅಭಯಂತರನ್ನು ಸಂಪರ್ಕಿಸಿದಲ್ಲಿ, ಅವರು ಮೊದಲು ನಿವೇಶನದ ಅಳತೆ ಹಾಕಿ, ನಿಮ್ಮೊಡನೆ ಸಂಪ್ರತಿಸಿ, ನಿಮ್ಮ ಬೇಕು ಬೇಡಗಳನ್ನೆಲ್ಲ ವಿಚಾರಿಸಿ, ಒಂದಲ್ಲ ನಾಲ್ಕು ಬಾರಿ ಗೆರೆ ಎಳೆದು , ನಿಮಗೆ ತೋರಿಸಿ, ನೀವು ಹೇಳಿದ ಮತ್ತು ಅವರಿಗೆ ತೋಚಿದ ಮಾರ್ಪಾಡುಗಳನ್ನು ಮಾಡಿಕೊಂಡು ನಂತರ ಒಂದು ರೇಖಾ ನಕಾಶೆಯನ್ನು ತಯಾರುಮಾಡುತ್ತಾರೆ. ನಂತರ, ಅದರ ಮುನ್ನೋಟದನಕಾಶೆ ತಯಾರುಮಾಡಿ, ” ನೋಡಿ ನಿಮ್ಮ ಮನೆ ಅಥವಾ ಕಟ್ಟಡ ಸಂಪೂರ್ಣವಾದಾಗ ಹೀಗೆ ಕಾಣುತ್ತದೆಎಂದು ನಿಮಗೆ ತೋರಿಸುತ್ತಾರೆ. ತದನಂತರ, ಈ ಎರಡರ ನೀಲಿ ನಕಾಶೆ ತಯಾರುಮಾಡಿ, ಕಟ್ಟಡ ಕೆಲಸ ನಡೆಯುವಷ್ಟು ದಿನವೂ ಆ ನಕಾಶೆಯನ್ನು ಬಳಿಯಲ್ಲಿ ಇಟ್ಟುಕೊಂಡು, ಕಟ್ಟಡವು ಅದರ ಪ್ರಕಾರ ಬರುತ್ತಿದೆಯೇ ಇಲ್ಲವೇ ಎಂದು ನೋಡುತ್ತಾ ಇರುತ್ತಾರೆ. ಅಷ್ಟು ಮಾಡಿದರೂ ಎಲ್ಲೋ ಒಂದು ಕೊರತೆ ನಿಮಗೆ ಕಾಣುತ್ತದೆ.
ಈ ಜಗತ್ತು ಎಷ್ಟು ದೊಡ್ಡದೆಂದರೆ ನಾವದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲವೆಂದು ನಾ ಈ ಹಿಂದೆ ಹೇಳಿದ್ದೇನೆ. ಶತ ಶತ ಕೋಟಿ ಕೋಟಿ ಕಿಲೋಮೀಟರ್ ( ಇದು ಬರೀ ಊಹೆ ಅಷ್ಟೇ-ಕಂಡವರಾರು) ವಿಸ್ತೀರ್ಣವಿರುವ ಈ ಜಗತ್ತನ್ನು ನಿರ್ಮಾಣ ಮಾಡುವಾಗ , ಇನ್ನೆಂತಹ ರೇಖಾಚಿತ್ರವನ್ನು ಆ ಪರಮಾತ್ಮ ತಯಾರುಮಾಡಿರಬೇಕು. ಅದನ್ನು ನಾವು ನೋಡಿಲ್ಲ. ಆದರೆ ಆ ರೇಖಾ ಚಿತ್ರದ ಯಾವುದೋ ಒಂದು ಗೆರೆಯನ್ನು ನೋಡಿ ನಾವು, “ಇದು ಸರಿ ಅದು ತಪ್ಪು ಎಂದು ವ್ಯಾಖ್ಯಾನ ಮಾಡುವುದು ಎಷ್ಟು ಸರಿ. ಹಾಗೆ ಹೇಳುವುದು ಸರಿಯೇ. ಅಂದರೆ ಈ ಸೃಷ್ಟಿಯ ಆಯ ಅಳತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ವಿವರಿಸಲೂ ಸಾಧ್ಯವಿಲ್ಲ. ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲದಂತಾ ಆ ಸೃಷ್ಟಿಯಲ್ಲಿ ಕೊರತೆಗಳನ್ನು ಕಾಣುವುದು ಅವಿವೇಕತನವಲ್ಲದೆ ಮತ್ತೇನು. ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ವ್ಯಾಖ್ಯಾನ ಮಾಡುವುದು ಎಷ್ಟೊಂದು ಮೂರ್ಖತನವಲ್ಲವೇ?
ಮತ್ತೊಂದು ವಿಷಯವೇನೆಂದರೆ, ಒಂದು ರೇಖಾಚಿತ್ರವನ್ನು ತಯಾರು ಮಾಡಿದರೆ, ಅಷ್ಟೇ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಈ ಜಗತ್ತಿನ ರೂಪ ನಿರಂತರ ಬದಲಾಗುತ್ತಾ ಇರುತ್ತದೆ. ಏಕೆಂದರೆ ಇದರ ಹಿಂದಿರುವುದು ಆ ಭೃಹತ್ ಚೇತನ. ಹಾಗಾಗಿ ಚೈತನ್ಯಮಯವಾದ ಈ ಜಗತ್ತು ನಿರಂತರ ಬದಲಾಗುತ್ತಾ ಹಲವಾರು ವಿಸ್ಮಯಗಳನ್ನು ಪ್ರಕಟಿಸುತ್ತಾ, ಪ್ರದರ್ಶಿತ್ತಾ ಇರುತ್ತದೆ. ಆ ಪರಮಾತ್ಮನ ಸೃಷ್ಟಿಯಲ್ಲೂ ಕೊರತೆಗಳನ್ನು ಹುಡುಕದೆ, ಅವನ ಸೃಷ್ಟಿಗೆ ಯಾವುದಾದರೂ ಆದರೆ ಅವನಿಗೆ ಮಾತ್ರ ಗೊತ್ತಿರುವ ಒಂದು ಕಾರಣವಿದೆ. ಅದನ್ನರಿಯಲು ನಮಗೆ ಸಾಧ್ಯವಿಲ್ಲ.
ನಮ್ಮಲ್ಲಿ ಬಹಳಷ್ಟು ಜನ ನಿಮಗೆ ಸಿಗುತ್ತಾರೆ . ಯಾವುದಾದರೂ ವಿಷಯವನ್ನು ಕೊಡಿ. ಅವರಿಗೆ ಗೊತ್ತಿದೆಯೋ ಇಲ್ಲವೋ ಗಂಟೆಗಳಗಟ್ಟಲೆ ಭಾಷಣವನ್ನೇ ಮಾಡಿಬಿಡುತ್ತಾರೆ. ನೋಡುವವರಿಗೆ ಆಹಾ ಓಹೋಎನ್ನಿಸಬೇಕು ಹಾಗೆ ಇರುತ್ತೆ ಅವರ ಬುರಡೆ. ಅವರಿಗೆ ಎಲ್ಲವನ್ನು ತಮ್ಮ ಶೈಲಿಯಲ್ಲಿ ಟೀಕೆ ಮಾಡಲು ಬರುತ್ತೆ, ಸರಿ ತಪ್ಪುಗಳ ಅರಿವಿಲ್ಲದೆಯೇ? ಅದರಿಂದ ಯಾವ ಪ್ರಯೋಜನವೂ ಇಲ್ಲ. ಕೇವಲ ನಮ್ಮ ಅಹಂಕಾರದ ತೃಷೆಯನ್ನು ತಣಿಸಲಷ್ಟೇ ಉಪಯೋಗ. ಹಾಗಾಗಿ ವಾಚಕರೆ ನಾವು ನಮಗೆ ಅರಿಯದ ವಿಷಯದ ವ್ಯಾಖ್ಯಾನ ಮಾಡುವಂತಾ ಸಾಹಸವನ್ನು ಮಾಡದೆ, ನಮ್ಮ ನಮ್ಮ ಅರಿವಿನ ಪರಿಧಿ ಮತ್ತು ಮಿತಿಗಳಲ್ಲಿ ಈ ಜಗತ್ತನ್ನು ಮತ್ತು ಅದನ್ನು ಸೃಷ್ಟಿಮಾಡಿದ ಪರಮಾತ್ಮನ ಮಹತ್ತು ಮಹಿಮೆಯನ್ನು ಅನುಭವಿಸುತ್ತಾ, ಆನಂದದಿಂದ ಜೀವನವನ್ನು ಕಳೆಯುವ ಪ್ರವೃತ್ತಿ ನಮದಾಗಬೇಕು. ಆಗಲೇ ನಿಜವಾದ ಸುಖ ಮತ್ತು ಆನಂದ.
ಅಂತರ್ವೀಕ್ಷಣೆ ರಸಧಾರೆ - 068
ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಲ್ಲಿ |
ಎಲ್ಲಿ ಪರಿಪೂರಣವೊ ಅದನರಿಯುವನಕ ||
ಸೋಲ್ಲಿಸುವರಾರು ಸೃಷ್ಟಿಯ ಪೇಟಿಯೋಳಗುಟ್ಟ? |
ಎಲ್ಲ ಬಾಳು ರಹಸ್ಯ ಮಂಕುತಿಮ್ಮ ||
ಅರೆಬೆಳಕು = ಸ್ಪಷ್ಟವಿಲ್ಲದ ಜ್ಞಾನ. ಅರೆಸುಳಿವು = ಆ ಜ್ಞಾನದ ಮಾರ್ಗಗಳೂ ನಿಚ್ಚಳವಲ್ಲ, ಪರಿಪೂರಣವೊ = ಪರಿ ಪೂರ್ಣವೋ, ಅದನರಿರುವನಕ = ಅದನ್ನು ಅರಿಯುವ ತನಕ. ಸೋಲ್ಲಿಸುವರಾರು ಹೇಳುವವರಾರು, ಪೇಟಿಯೂಳಗುಟ್ಟ = ಪೆಟ್ಟಿಗೆಯೊಳಗಿನ ಗುಟ್ಟ.
ಎಲ್ಲ ವಿಷಯಗಳಲ್ಲೂ ಅರೆ ಬರೆ ಜ್ಞಾನ ಮತ್ತು ತಿಳುವಳಿಕೆ. ಆ ತಿಳುವಳಿಕೆಯನ್ನು ಪಡೆವ ಮಾರ್ಗಗಳೂ ಸಹ ಅರ್ದಂಬರ್ದ ಮತ್ತು ಯಾವುದೂ ನಿಚ್ಚಳವಲ್ಲ. ಅದು ನಮಗೆ ಸಂಪೂರ್ಣ ಜ್ಞಾನ ಬರುವ ತನಕ ಹಾಗೇ ಇರುತ್ತದೆ. ಆದರೆ ನಮಗೆ ಆ ಪರಿಪೂರ್ಣಜ್ಞಾನವನ್ನು ಹೇಳಿಕೊಡುವವರಾರು. ಈ ಜೀವನವೆಲ್ಲ ಒಂದು ನಿಗೂಢ ಅಥವಾ ರಹಸ್ಯ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ವಾಚಕರೆ, ನಮಗೇನು ಗೊತ್ತು ಹೇಳಿ? ನಮಗೇನು ಗೊತ್ತು ಎನ್ನವುದೇ ಗೊತ್ತಿಲ್ಲ.!!!. ನಮ್ಮ ಜನ್ಮದಿಂದ ಹಿಡಿದು ನಮ್ಮೊಡನೆ ನಡೆಯುವ ಎಲ್ಲ ವಿಧ್ಯಮಾನಗಳನ್ನು ನಾವು ಎಂದೂ ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಸಾಧ್ಯವೂ ಇಲ್ಲ. ಏಕೆಂದರೆ ಒಂದು ವಸ್ತು, ವಿಷಯ, ಅಥವಾ ವ್ಯಕ್ತಿಯನ್ನು ಸಂಪೂರ್ಣ ಅರ್ಥಮಾಡಿಕೊಳ್ಳಬೇಕಾದರೆ, ನಾವು ಆ ವಸ್ತು ವಿಷಯ ಮತ್ತು ವ್ಯಕ್ತಿಗಳನ್ನು ಎಲ್ಲಾ ಅಯಾಮಗಳಿಂದಲೂ ಪರಿಕಿಸಿ ನೋಡಬೇಕು. ಎರಡು, ಯಾವುದೇ ಪೂರ್ವಾಗ್ರಹವಿಲ್ಲದೆ ಶುದ್ಧಮನಸ್ಕರಾಗಿ ಅದನ್ನು ಅರ್ಥಮಾಡಿಕೊಳ್ಳಲು ನಮಗೆ ಇಚ್ಛೆ ಇರಬೇಕು. ಆಗ ಅದು ಅರ್ಥವಾಗುತ್ತದೆ. ನಾವು ಹಾಗೆ ಇರಲು ಸಾಧ್ಯವಿಲ್ಲ. ನಮಗೆಅರೆಬೆಳಕು ಅರೆಸುಳಿವುಹಾಗಾಗಿ ನಮಗೆ ಅರ್ಥವಾಗುವುದಿಲ್ಲ.
ಈ ಜಗತ್ತಿನಲ್ಲಿ ( ಲಕ್ಷಾಂತರ ವರ್ಷಗಳಿಂದ ಇರುವ ) ಮನುಷ್ಯನಿಗೆ ಯೋಚನೆ ಮಾಡುವ ಶಕ್ತಿ ಬಂದಾಗಿಲಿಂದಲೂ ಇದರ ಬಗ್ಗೆ ಯೋಚನೆ ಮಾಡುತ್ತಲೇ ಇದ್ದಾನೆ. ಹಲಕೆಲವರು ಅಲ್ಪಸ್ವಲ್ಪ ತಿಳಿದಿದ್ದಾರೆ. ಆದರೆ ಎಲ್ಲವನ್ನೂ ಅಲ್ಲ. ಇಡೀ ಜಗತ್ತಿನಲ್ಲಿ ಬಹಳಷ್ಟು ದಾರ್ಶನಿಕರು ಆಗಿಹೋಗಿದ್ದಾರೆ. ವೇದಕಾಲದ ಋಷಿಗಳು ಭಾರತೀಯ ಉಪನಿಷತ್ತಿನ ಕಾಲದ ದಾರ್ಶನಿಕರು, ಗ್ರೀಕ್ ದೇಶದ ತತ್ವಶಾಸ್ತ್ರಿಗಳು ಹಲವಾರು ವಿಚಾರದಲ್ಲಿ ಈ ಜಗತ್ತಿನ ಸೃಷ್ಟಿಗೆ ಒಂದು ಸೂಕ್ತ ವ್ಯಾಖ್ಯಾನ ಮಾಡಲು ಪ್ರಯತ್ನಪಟ್ಟಿದ್ದಾರೆ . ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ಭಾಗವತ , ಪುರಾಣಗಳು, ಅವಕ್ಕೆ ಬೇರೆ ಬೇರೆ ಆಚಾರ್ಯರುಗಳು ಬರೆದ ಭಾಷ್ಯಗಳು ಮತ್ತು ಹೊರದೇಶಗಳ ದಾರ್ಶನಿಕರ, ಜ೦ಡವೆಸ್ತಾ, ಬೈಬಲ್, ಖುರಾನ್ ಗಳೆಲ್ಲವೂ ತಮ್ಮದೇ ಆದ ರೀತಿಯಲ್ಲಿ ಜಗತ್ತಿನ ಕರ್ತನ ಕ್ರಿಯೆಗೆ ಒಂದು ಸೂಕ್ತ ಪರಿಭಾಷೆಯನ್ನು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸ್ವಲ್ಪಮಟ್ಟಿಗೆ ಯಶಸ್ಸನ್ನೂ ಕಂಡಿದ್ದಾರೆ. ಆದರೆ ಸಂಪೂರ್ಣ ಸತ್ಯವನ್ನು ಕಂಡುಕೊಳ್ಳಲು ವಿಫಲರಾಗಿದ್ದಾರೆ. ಎಲ್ಲರದೂ ಅವರವರು ಕಂಡುಕೊಂಡ ಅಂತರಂಗದ ಸತ್ಯವಷ್ಟೇ. ಆದರೂ ಇಂದೊಂದು ರಹಸ್ಯ. ನಮ್ಮ ಅರಿವಿನ ಪರಿಧಿಯೊಳಕ್ಕೆ ಬರದು. ಹಾಗಾಗಿ ರಹಸ್ಯ.
ಹಾಗಾಗಿ ಜಗತ್ತಿನ ಸತ್ಯವನ್ನು ಯಾರು ಹೇಳುವವರು ಎಂದು ಮಾನ್ಯ ಗುಂಡಪ್ಪನವರೂ ಪ್ರಶ್ನಿಸುತ್ತಾರೆ. ಹಾಗೆ ನಾವೂ ಯೋಚಿಸಿದಾಗ, ನಮಗೆ ತಿಳಿಯುವುದು ಏನೆಂದರೆ ಹೌದು ನಮಗೆ ಯಾರೂ ಹೇಳಲು ಸಾಧ್ಯವಿಲ್ಲ. ನಾವು ನಮ್ಮ ನಮ್ಮ ರೀತಿಯಲ್ಲೇ ಅನುಭವಿಸಬೇಕು. ಈ ಜಗತ್ತನ್ನು ಸೃಷ್ಟಿಸಿದ ಆ ಪರಮಾತ್ಮನ ಕ್ರಿಯೆಯ ಬಗ್ಗೆ ನಮಗೆ ಸಂಪೂರ್ಣ ಜ್ಞಾನ ಉಂಟಾಗುವವರೆಗೂ, ನಮಗೆ ಈ ಅರೆಬರೆ ಜ್ಞಾನ ಮತ್ತು ಅರೆಬರೆ ದೃಷ್ಟಾಂತಗಳೇ ಇರುತ್ತವೆ. ಈ ಜಗತ್ತಿನ ಸೃಷ್ಟಿಯ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನು ಅರಿಯಲು ಸಾಧ್ಯವೇ ಇಲ್ಲ. ಇದು ರಹಸ್ಯ. ಏಕೆಂದರೆ ಒಂದು ಅದ್ಭುತ ಮತ್ತು ಬೃಹತ್ತಾದ ವಿಷಯದ ಸಮಗ್ರ ಅವಲೋಕನ ಮಾಡಿ ಅರಿವಿಗೆ ತಂದುಕೊಳ್ಳುವುದಕ್ಕೆ ಅಷ್ಟೇ ದೊಡ್ಡ ಜ್ಞಾನ ಮತ್ತು ದೃಷ್ಟಿ ಬೇಕು. ಅದನ್ನು ತಂದುಕೊಳ್ಳುವ ಪ್ರಯತ್ನವನ್ನು ನಾವು ಮಾಡಬಹುದು. ಅದನ್ನು ಮಾಡುತ್ತಾ ನಾವು ನಮ್ಮದೇ ಆದ ಸತ್ಯವನ್ನು ಅರಿಯಲು ಪ್ರಯತ್ನ ಪಡೋಣವೇ?
ರಸಧಾರೆ - 069
ಹೆಸರನರಿಯದ ಸಸಿಯೊಳಿರದೆ ರಸಗಂಧಗಳು ? |
ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ||
ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು |
ಉಸಿರುತಿಹೆವದ ನಾವು ಮಂಕುತಿಮ್ಮ. ||
ಹೆಸರನರಿಯದ = ಹೆಸರೇ ಗೊತ್ತಿಲ್ಲದ, ರಸಗಂಧಗಳು = ಮಕರಂದ ಮತ್ತು ಪರಿಮಳ, ದಿಸೆದಿಸೆಗಳೊಳು = ದಿಕ್ಕು ದಿಕ್ಕುಗಳಲ್ಲಿ, ಉಸಿರುತಿಹೆವದ = ಆ ಗಾಳಿಯನ್ನು ಸೇವಿಸುತ್ತಿದ್ದೇವೆ.
ನಮಗೆ ಹೆಸರೇ ಗೊತ್ತಿಲ್ಲದ ಸಸಿಯಲ್ಲಿ ಮಕರಂದ ಮತ್ತು ಸುಗಂಧಗಳಿರುವುದಿಲ್ಲವೇ? ಸೂರ್ಯನ ಬೆಳಕಿನಿಂದ ಅವು ಬೆಳೆಯುವುದಿಲ್ಲವೇ? ಆ ಗಿಡಗಳಲ್ಲಿರುವ ಸುಗಂಧವನ್ನು ಗಾಳಿಯು ದಿಕ್ಕು ದಿಕ್ಕುಗಳಿಗೆ ಪಸರಿಸದೆ?
ಅಂತಹ ಗಾಳಿಯನ್ನು ನಾವು ಉಸಿರಾಡುತ್ತಿಲ್ಲವೇ? ಎಂದು ಒಂದು ಗಹನವಾದ ವಿಚಾರವನ್ನು ಈ ಕಗ್ಗದ ಮೂಲಕ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ನಾವು ಉಸಿರಾಡುವ ಗಾಳಿಯಲ್ಲಿ ಯಾವ ಯಾವ ತೋಟದ ಯಾವ ಯಾವ ಗಿಡಗಳ ಹೂಗಳ ಪುಷ್ಪಗಳ ಸುಗಂಧ ಮಿಳಿತವಾಗಿದೆಯೋ ನಮಗರಿವಿರುವುದಿಲ್ಲ. ಎರಡನೆಯದಾಗಿ ಹೆಸರೇ ಇಲ್ಲದ ಅಥವಾ ನಮಗೆ ಗೊತ್ತಿರದ ಗಿಡವಾದರೂ, ಅದರ ಹೂಗಳಿಗೂ ಒಂದು ಸುಗಂಧವಿರುತ್ತದೆ. ಆ ಗಿಡದ ಬೆಳವಣಿಗೆಗೂ ಆ ನಭೋಮಂಡಲದಲ್ಲಿರುವ ಸೂರ್ಯನೇ ಕಾರಣ ಮತ್ತು ಬೀಸುವ ಗಾಳಿಯೂ ಬೇಧಭಾವವಿಲ್ಲದೆ ಎಲ್ಲ ಗಿಡಗಳ ಸುಗಂಧವನ್ನೂ ತನ್ನೊಡಲಲ್ಲಿ ಸೇರಿಸಿಕೊಂಡು ಬೀಸುತ್ತದೆ ಮತ್ತು ಆ ಹಲ ಸುಗಂಧಭರಿತ ವಾಯುವನ್ನು ನಾವು ಸೇವಿಸುತ್ತೇವೆ. ಇಲ್ಲಿ ಯಾರೂ ಬೇಧಭಾವವನ್ನು ಮಾಡುವುದಿಲ್ಲ.
ಇಲ್ಲಿ ನಾವು ಅರಿಯಬೇಕಾದದ್ದು ಏನೆಂದರೆ, ಹೇಗೆ ಆ ಸೂರ್ಯ, ಗಾಳಿ ಮತ್ತು ನಾವು ಉಸಿರಾಡುವ ಪ್ರಕ್ರಿಯೆ ಎಲ್ಲವೂ ಬೇಧವಿಲ್ಲದೆ ತಮ್ಮ ತಮ್ಮ ಕೆಲಸವನ್ನು ಮಾಡುತ್ತವೆಯೋ, ಹಾಗೆಯೇ ಈ ಜಗತ್ತಿನಲ್ಲಿ ಆ ಪರಮಚೇತನವೂ ಸಹ ಬೇಧಭಾವವಿಲ್ಲದೆ, ಎಲ್ಲವನ್ನೂ ಸಮನಾದ ಭಾವದಿಂದ ನೋಡಿಕೊಳ್ಳುತ್ತದೆ. ಸೃಷ್ಟಿಸಿದ ಪ್ರತಿ ಜೀವಿಗೂ ಅದರ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಏನೇನು ಬೇಕೋ ಅದನ್ನೆಲ್ಲ ಮೊದಲೇ ಸಿದ್ಧಪಡಿಸಿದೆ. ಬೇಧವೇನಿದ್ದರೂ ನಮ್ಮ ಮನಸ್ಸುಗಳಲ್ಲಿ ಮಾತ್ರ. ನಾವುಗಳು ಅದರ ಉದ್ದೇಶ್ಯ, ಅದರ ಕಾರ್ಯವೈಖರಿಯಬಗ್ಗೆ ಚಿಂತಿಸದೆ ಅನುಭವಿಸುತ್ತಾ ಇರುತ್ತೇವೆ.
ಹಾಗೆಯೇ ಅಜ್ಞಾತರಾದ ಹಲವಾರು ಜನ ಈ ಜಗತ್ತಿನ ಒಳಿತಿಗಾಗಿ ಯಾವ ಫಲಾಪೇಕ್ಷೆಯೂ ಇಲ್ಲದೆ, ಅಹರ್ನಿಶಿ ದುಡಿಯುತಾರೆ ಮತ್ತು ನಿರಂತರ ದುಡಿಯುತ್ತಲೇ ಇರುತ್ತಾರೆ. ಅವರ ಹೆಸರು ಯಾವ ಪತ್ರಿಕೆ ಅಥವಾ ದೂರದರ್ಶನದಲ್ಲಿ ಪ್ರಚಾರವಾಗುವುದಿಲ್ಲ. ಅವರು ನಮ್ಮ ಸುತ್ತು ಮುತ್ತಲ್ಲೇ ಇದ್ದರೂ ನಮಗೆ ತಿಳಿದಿರುವುದಿಲ್ಲ. ಆದರೆ ಅವರ ಕಾರ್ಯದ ಫಲ ಮಾತ್ರ ಇಡೀ ಸಮಾಜಕ್ಕೆ ದೊರೆಯುತ್ತದೆ. ತಮ್ಮ ಕಾರ್ಯದ ಫಲದವನ್ನು ಯಾರು ಪಡೆದುಕೊಂಡಿದ್ದಾರೆ ಎಂದು ಅವರೂ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅವರು ನಿಸ್ವಾರ್ಥಿಗಳು. ಸಹಸ್ರಾರು ವರ್ಷಗಳ ಪುರಾತನವಾದ ವೇದಗಳ ಕರ್ತೃಗಳು ಯಾರೆಂದು ಯಾರಿಗೂ ಅರಿಯದು. ಆದರೆ ಅದರಲ್ಲಿನ ಅರಿವು ಕ್ರಮ ಮತ್ತ ಜ್ಞಾನವು ಎಲ್ಲ ಜನರ ಮೇಲೆ ಹೇಗೆ ಪ್ರಭಾವ ಬೀರಿದೆ ಮತ್ತು ಒಂದು ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಕಾರಣವಾಗಲಿಲ್ಲವೇ? ಮತ್ತು ಇಂದಿಗೂ ಬೀರುತ್ತಾ ಇದೆ ಅಲ್ಲವೆ? ವಿಡಂಬನೆ, ಏನೆಂದರೆ ನಾವು ಎಷ್ಟೊಂದು ವಸ್ತುಗಳನ್ನು ನಮ್ಮ ಸೌಕರ್ಯಕ್ಕಾಗಿ ಉಪಯೋಗಿಸುತ್ತೇವೆ . ಆದರೆ ಎಂದಿಗೂ ಅದರ ಹಿಂದೆ ಇರುವ ಹಲವರ ಅರಿವಿನ ಮತ್ತು ಶ್ರಮದ ಬಗ್ಗೆ ಯೋಚಿಸುವುದೇ ಇಲ್ಲ ಮತ್ತು ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಸಹ ಮಾಡುವುದಿಲ್ಲ. ಇದುವೇ ಪ್ರಪಂಚ!!!! ಹಾಗೆಂದು ಅದರ ಬಗ್ಗೆಯೇ ಯೋಚಿಸುತ್ತಾ ಇರಬೇಕೆಂದೂ ಅರ್ಥವಲ್ಲ.
ಹಾಗಾಗಿ ವಾಚಕರೆ, ನಮ್ಮ ಕರ್ತವ್ಯವೇನೆಂದು ಯೋಚಿಸಿದರೆ, ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಕ್ರಿಯೆಗೆ ನಾವು ಬಾಧಕರಾಗದೆ, ಕೇವಲ ಸ್ವಾರ್ಥ ರಹಿತವಾಗಿ ಪರೋಪಕ್ಕಾರಕ್ಕಾಗಿ ದುಡಿಯುವ ಈ ಸೃಷ್ಟಿಯಲ್ಲಿರುವ ಎಲ್ಲವನ್ನೂ ಗೌರವಿಸೋಣ, ಸಾಧ್ಯವಾದರೆ ಅವುಗಳಿಗೆ ನಮ್ಮ ಅಲ್ಪ ಶಕ್ತಿಯಿಂದ ಇಂಬು ಕೊಡೋಣ. ನಮ್ಮ ಕೃತಜ್ಞತೆಯನ್ನು ತೋರೋಣ.
ಪ್ರಕೃತಿ ರಸತಂತ್ರ ರಸಧಾರೆ - 070
ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ |
ಆವಿಯಾಗೇಳ್ದು ಮುಗಿಲಾಗಿ ಮಳೆಗೆರೆದು ||
ಬಾವಿಗೂಟೆಯನಿತ್ತು ನರರೊಡಲ ಸೇರುವುದು |
ದೈವ ರಸತಂತ್ರವಿದು ಮಂಕುತಿಮ್ಮ ||
ಭೂವಿಷಯದಲಿ = ಈ ಬುವಿಗೆ ಸಂಬಂಧಿಸಿದ ವಿಷಯದಲ್ಲಿ, ಪುದಿದ = ಅಡಗಿದ, ರಸವಾಸನೆಗಳೆಲ್ಲ = ಗುಣ ಮತ್ತು ಸ್ವಭಾವಗಳೆಲ್ಲ, ಆವಿಯಾಗೇಳ್ದು = ಆವಿಯಾಗಿ ಎದ್ದು, ಮುಗಿಲಾಗಿ = ಮೋಡವಾಗಿ, ಬಾವಿಗೂಟೆಯನಿತ್ತು = ಭಾವಿಗಳಿಗೆ ಒರತೆಯಾಗಿ, ನರರೊಡಲ = ಮನುಷ್ಯರ ದೇಹವನ್ನು.
ಈ ಭೂಮಿಗೆ ಸಂಬಂಧಿಸಿದ ಮತ್ತು ಈ ಭೂಮಿಯಲ್ಲಿ ಅಡಗಿದ ರಸಗಳು ಸೂರ್ಯನ ಶಾಖದಿಂದ, ಆವಿಯಾಗಿ, ಅದು ಮೋಡವಾಗಿ ಮತ್ತೆ ಮಳೆಯಾಗಿ ಧರೆಗಿಳಿದು ಆ ಮಳೆಯನೀ ಭೂಮಿಯಲ್ಲಿ ಇಂಗಿ ಭಾವಿಗಳಿಗೆ ಒರತೆಯಾಗಿ ಆ ನೀರನ್ನು ಕುಡಿದ ನರರ ದೇಹವನ್ನು ಸೇರುವುವು. . ಇದೆ ದೈವ ನಿರ್ಮಿಸಿದ ರಸತಂತ್ರ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಈ ಭೂಮಿಯ ಒಳಗೆ ಮತ್ತು ಮೇಲೆ ಹಲವಾರು ರಾಸಾಯನಿಕ ವಸ್ತುಗಳು ಇವೆ. ಇಂಗಾಲ, ಜಲಜನಕ ಅಲ್ಯೂಮಿನಿಯಂ ಉಕ್ಕು, ಹಿತ್ತಾಳೆ, ಚಿನ್ನ, ಸತು, ಪಾದರಸದಂತ ಮೂಲ ಧಾತುಗಳು ಒಟ್ಟು ೧೧೮ ಇವೆ. ಲೆಡ್ ಆನನ್ ಸೆಪ್ತಿಯಂ ಎನ್ನುವುದು ಈ ಧಾತುಗಳಲ್ಲೇ ಇತ್ತೀಚಿಗೆ ಕಂಡು ಹಿಡಿದ ದಾತುವೆಂದು ಹೇಳಲ್ಪಡುತ್ತದೆ. ಜಲಜನಕ ಮತ್ತು ಹೀಲಿಯಂ ಈ ಜಗತ್ತಿನಲ್ಲಿ ಹೇರಳವಾಗಿದೆ ಇವೆಲ್ಲವೂ ಮತ್ತೂ ಇನ್ನೂ ಏನೇನೋ ಸೇರಿ ಆ ಜಗತ್ತಾಗಿದೆ. ಪ್ರೋಟಾನ್ಸ್, ನ್ಯುಟ್ರಾನ್ಸ್ ಅಥವಾ ಎಲೆಕ್ಟ್ರಾನ್ಸ್ ಇಲ್ಲದ ಕಪ್ಪು ವಸ್ತು ಗಳೂ ಇವೆ. ಇದರ ಸಂಪೂರ್ಣ ಜ್ಞಾನವನ್ನು ಯಾರಾದರೂ ರಸಾಯನ ಶಾಸ್ತ್ರಿಗಳನ್ನು ಕೇಳಿದರೆ ಹೇಳುತ್ತಾರೆ. ಅಂದರೆ ಈ ಜಗತ್ತಿನ ಸೃಷ್ಟಿಯ ಸಮಯದಲ್ಲಿ ಸೂರ್ಯನಲ್ಲಿ ಉಂಟಾದ ಮಾಹಾ ಸ್ಫೋಟವಾದಾಗ ಮೊದಲ ಇಪ್ಪತ್ತು ನಿಮಿಷಗಳಲ್ಲಿ ಇವೆಲ್ಲವೂ ಆದವು ಎಂದು ಹೇಳುತ್ತಾರೆ. ತಿಳಿದವರು ಇದನ್ನು ಇನ್ನೂ ಹೆಚ್ಚಾಗಿ ವಿವರಿಸ ಬಲ್ಲರು.
ಆ ಸೂರ್ಯನ ಶಾಖದಿಂದ ಉಂಟಾಗುವ ಆವಿಯಲ್ಲಿ ಈ ಎಲ್ಲ ವಸ್ತುಗಳ ಗುಣಗಳೂ ಬೇರೆ ಬೇರೆ ಪ್ರಮಾಣದಲ್ಲಿ ಸೇರಿ ಅವೆಲ್ಲವೂ ನಭೋಮಂಡಲ ಸೇರಿ, ಸೇರಿ ಸೇರಿ, ಮೋಡವಾಗುತ್ತದೆ. ಆ ಮೋಡದಲ್ಲಿ ಈ ಎಲ್ಲ ಗುಣಗಳೂ ಅಡಕವಾಗಿರುತ್ತದೆ. ಆ ಮೋಡ ತನ್ನ ತೂಕ ಹೆಚ್ಚಿಸಿಕೊಂಡಂತೆ ಭಾರ ತಾಳಲಾರದೆ ಮಳೆಯ ರೂಪದಲ್ಲಿ ಧರೆಗಿಳಿಯುತ್ತದೆ. ಮಳೆಯಾಗಿ ಹರಿವ ನೀರಿನಲ್ಲಿ ಈ ಎಲ್ಲ ಗುಣಗಳೂ ಸೇರಿ ಅದನ್ನು ಸೇವಿಸುವ ಎಲ್ಲ ಮಾನವರ ಒಡಲು ಸೇರುವುದು. ಅದು ಅವರವರ ದೇಹದಲ್ಲಿರುವ ರಾಸಾಯನಿಕಗಳ ಜೊತೆಗೆ ಮಿಶ್ರಣಗೊಂಡು ಅವರವರ ಮನೋ ವ್ಯಾಪಾರದ ಮೇಲೂ ಸಹ ತನ್ನ ಪ್ರಭಾವ ಬೀರುತ್ತದೆ. ಇದು ಪರಮಾತ್ಮ ಸೃಷ್ಟಿಸಿದ ಒಂದು ರಸ ತಂತ್ರ. ಇದು ಏರುಪೇರಾಗುತ್ತಿರುತ್ತದೆ. ನನ್ನ ಸ್ನೇಹಿತನಿಗೊಬ್ಬನಿಗೆ, ಅವನ ದೇಹದಲ್ಲಿ ಸೋಡಿಯಂ ಕಡಿಮೆಯಾಯಿತು ಎಂದು ೩ ದಿನದಲ್ಲಿ ತಲೆ ಕೂದಲೆಲ್ಲಾ ಬೆಳ್ಳಗೆ ಆಗಿ ಹೋಯಿತು. ಮತ್ತೆ ಅವನ ದೇಹದ ರಾಸಾಯನಿಕ ಸಮತೋಲನವನ್ನು ಸರಿಪಡಿಸಿದಾಗ ಅವ ಮೊದಲಿನಂತಾದ . ಪಿತ್ತ ಅಂದರೆ ಅಸಿಡಿಟಿ ಹೆಚ್ಚಾದರೆ ಮನುಷ್ಯ ತಿಕಲು ತಿಕ್ಕಲಾಗಿ ಆಡುತ್ತ್ತಾನೆ. ಹಾಗಾಗಿ ಈ ದೇಹದ ರಾಸಾಯನಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ತೀರ ಅಗತ್ಯ. ಪಂಡಿತರು, ಜ್ಞಾನಿಗಳು ಮತ್ತು ವೈದ್ಯರು ಇದನ್ನು ನಮಗೆ ತಿಳಿಸಬೇಕು.
ಆಹಾ ಇನ್ನೂ ಅದೇನೇನು ಅದ್ಭುತಗಳಿವೆಯೋ ಈ ಜಗದ ಸೃಷ್ಟಿಯಲ್ಲಿ.
ಪ್ರಕೃತಿ ರಸತಂತ್ರ ರಸಧಾರೆ - 071
ತರಣಿ ಕಿರಣದ ನಂಟು ಗಗನ ಸಲಿಲದ ನಂಟು |
ಧರಣಿ ಚಲನೆಯ ನಂಟು ಮರುತನೊಳ್ ನಂಟು ll
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ |
ಕಿರಿದು ಪಿರಿದೊಂದಂಟು ಮಂಕುತಿಮ್ಮ ||
ತರಣಿ = ಸೂರ್ಯ ಸಲಿಲ = ನೀರು, ಮರುತ = ಗಾಳಿ, ಕಿರಿದು = ಸಣ್ಣದು, ಪಿರಿದು = ದೊಡ್ಡದು.
ಸೂರ್ಯನ ಮತ್ತು ಕಿರಣದ ಸಂಬಂಧ, ಆಕಾಶದ ಮತ್ತು ಮಳೆ ನೀರಿನಸಂಬಂಧ, ಭೂಮಿಯ ಸುತ್ತುವಿಕೆಯ ಸಂಬಂಧ, ಮತ್ತು ಅದಕ್ಕನುಗುಣವಾಗಿ ಬೀಸುವ ಗಾಳಿಯ ಸಂಬಂಧ,ಹೀಗೆ ಒಂದಕ್ಕೊಂದು ನಂಟು ಹಾಕಿಕೊಂಡು ಹಲವಾರು ಬಗೆಯ ಸಂಬಂಧಗಳ ಒಂದು ಗಂಟೆ ಈ ಜಗತ್ತು ಇದರಲ್ಲಿ ಕೆಲವು ಸಣ್ಣ ಸಣ್ಣ ನಂಟುಗಳು ಮತ್ತೆ ಕೆಲವು ದೊಡ್ಡದಾದ ಗಂಟುಗಳು ಎಂದು ಈ ಜಗತ್ತಿನ ಎಲ್ಲವಸ್ತುಗಳ ಪರಸ್ಪರ ಸಂಬಂಧಗಳನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ತೈತರೀಯ ಉಪನಿಷತ್ತಿನ ಬ್ರಹ್ಮಾನಂದ ವಲ್ಲಿಯಲ್ಲಿನ ಮೊದಲನೇ ಅನುವಾಕದಲ್ಲಿತಸ್ಮಾದ್ವಾ ಏತಸ್ಮಾದಾತ್ಮನ ಅಕಾಶಃ ಸಂಭೂತಃ ಆಕಾಶಾತ್ದ್ವಾಯು: ವಾಯೋರಗ್ನಿ: ಅಗ್ನೇರಾಪಃ ಅದ್ಭ್ಯಃ ಪೃಥಿವೀ | ಪ್ರುಥಿವ್ಯಾ ಓಷದಯಃ ಓಷಧೀಭ್ಯೋನ್ನಂ ಅನ್ನಾತ್ ಪುರುಷಃ ಸವಾ ಏಷ ಪುರುಷೋನ್ನ ರಸಮಯಃಎಂದು ಜಗತ್ತಿನ ವಸ್ತುಗಳಲ್ಲಿರುವ ಪರಸ್ಪರ ಸಂಬಂಧವನ್ನು ವಿವರಿಸಲ್ಪಟ್ಟಿದೆ. ಆ ಪರಮಾತ್ಮನ ಸೃಷ್ಟಿಯಾದ ಆಕಾಶ ಆ ಆಕಾಶದಲ್ಲಿರುವ ಕೋಟಿ ಕೋಟಿ ಆಕಾಶಕಾಯಗಳು, ಗಾಳಿ, ಸೂರ್ಯಕಿರಣಗಳಿಂದ ಉಂಟಾಗುವ ಶಾಖ. ಶಾಕದಿಂದ ಆವಿ, ಆವಿಯಿಂದ ಮೋಡ, ಮೋಡದಿಂದ ಗುಡುಗು ಮಿಂಚುಗಳು, ಆಗ ಸುರಿಯುವ ಮಳೆ, ಮಳೆಯಿಂದ ತಣ್ಣಗಾಗುವ ಇಳೆ, ತಣ್ಣಗಿನ ಇಳೆಯಲ್ಲಿ ಬೆಳೆಯುವ ಬೆಳೆ, ಬೆಳೆಯಿಂದ ಅನ್ನ ಅಂದರೆ ಆಹಾರ, ಆ ಆಹಾರದಿಂದ ಶಕ್ತಿ. ಆ ಶಕ್ತಿಯಿಂದ ನಡೆಯುವ ಜಗದ್ವ್ಯಾಪಾರ. ಒಂದಕ್ಕೊಂದು ಕೊಂಡಿ ತಗುಲಿಸಿಕೊಂಡು, ನಂಟು ಹಾಕಿಕೊಂಡು ಇವೆ. ಹೀಗೆ ಆಕಾಶ, ಗಾಳಿ, ಮಳೆ, ಬೆಳೆ, ಎಲ್ಲವೂ ಎಲ್ಲ ಜೀವಿಗಳಿಗೂ ಉಪಯೋಗವಾಗುವಂತೆ ಮತ್ತು ಜಗತ್ತಿನ ಎಲ್ಲ ಪ್ರಾಣಿಗಳೂ ಬದುಕುವಂತೆ ಒಂದು ನಂಟು ಹಾಕಿ ಆ ಪರಮಾತ್ಮ ಸೃಷ್ಟಿಸಿದ್ದಾನೆ. ಒಂದನ್ನು ಅಗಲಿ ಇನ್ನೊಂದು ಇರಲು ಸಾಧ್ಯವೇ ಇಲ್ಲ. ಈ ಭುವಿಯ ಮೇಲೆ ಇರುವ ಸಕಲ ವಸ್ತುಗಳೂ ಒಂದಕ್ಕೊಂದು ನಂಟನ್ನು ಬೆಳೆಸಿ ಗಂಟನ್ನು ಹಾಕಿಕೊಂಡು ಸಕಲ ಜೀವರಾಶಿಗಳ ಅಸ್ತಿಸ್ಥಕ್ಕೆ ಪೂರಕವಾಗಿದೆ. ಇಲ್ಲಿನ ಯಾವುದಾದರೂ ಒಂದು ನಂಟು ಕಡಿದು ಗಂಟು ಬಿಚ್ಚಿ ಹೋದರೆ ಎಲ್ಲವೂ ಏರುಪೇರಾಗುತ್ತದೆ.
ನೋಡಿ ನಾವು ಉಸಿರಾಡುತ್ತೇವೆ ಆದರೆ ಆದರೆ ಆ ಗಾಳಿಯ ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ. ಅದನ್ನು ಎಷ್ಟು ಬೇಕಾದರೂ ಕಲುಷಿತಗೊಳಿಸಲು ನಾವು ಹೇಸುವುದಿಲ್ಲ. ಹಾಗೆ ನೀರು ಭೂಮಿ ಗಿಡ ಮರ ಕಾಡು, ಗುಡ್ಡ ಬೆಟ್ಟ ಕಲ್ಲು ಮಣ್ಣು ಲೋಹ ಅದಿರು, ಪ್ರಾಣಿ ಪಕ್ಷಿ ಯಾವುದನ್ನೂ ನಾವು ಬಿಟ್ಟಿಲ್ಲ. ಬೇರೆ ಪ್ರಾಣಿಗಳು ಅವುಗಳನ್ನು ಕೇವಲ ಉಪಯೋಗಿಸಿಕೊಂಡು ಮಾತ್ರ ಜೀವಿಸುತ್ತವೆ. ಆದರೆ ಮನುಷ್ಯಮಾತ್ರ ತನ್ನ ಕಣ್ಣಿಗೆ ಬೀಳುವ ಸರ್ವವನ್ನೂ ತನ್ನಉಪಯೋಗಕ್ಕೆ ಆ ಪರಮಾತ್ಮ ಸೃಷ್ಟಿಸಿದ್ದಾನೆ ಎಂಬ ದುರ್ಭಾವದಿಂದ, ಸ್ವಾರ್ಥದಿಂದ, ಲೋಭದಿಂದ, ದುರಾಸೆಯಿಂದ, ಹೆಚ್ಚು ಹೆಚ್ಚು ಹಣ ಸಂಪಾದಿಸಲು ದುರ್ಮಾರ್ಗಕ್ಕೆ ಇಳಿದು ಎಲ್ಲವನ್ನೂ ನಾಶಮಾಡುತ್ತಿದ್ದಾನೆ. ಒಂದು ಇಂಚನ್ನೂ ಸೃಷ್ಟಿಮಾಡಲು ಯೋಗ್ಯತೆ ಇಲ್ಲದ ಈ ಮಾನವ ಕುನ್ನಿ ಎಲ್ಲವನ್ನೂ ನಾಶಮಾಡಲು ಉಧ್ಯುಕ್ತನಾಗಿದ್ದಾನೆ. ಆಹಾರಕ್ಕೆ ಬರ, ನೀರಿಗೆ ಬರ, ಶುದ್ಧಗಾಳಿಗೆ ಬರ, ಇವೆಲ್ಲ ಮಾನವನ ಲೋಭದಿಂದ ಉಂಟಾದ ಪರಿಸ್ತಿತಿ.ಇದರಿಂದ ಪ್ರೀತಿಗೆ ಬರ, ವಿಶ್ವಾಸಕ್ಕೆ ಬರ, ಸೌಹಾರ್ದಯುತವಾದ ಜೀವನಕ್ಕೆ ಬರ . ಈಗ್ಗೆ ೫೦-೬೦ ವರ್ಷಗಳಿಂದ, ಇಡೀ ಜಗತ್ತಿನ ವಾತಾವರಣವೇ ತೀವ್ರವಾಗಿ ಕಲುಷಿತವಾಗಿದೆ, ಈ ಮನುಷ್ಯನ ಲೋಭದಿಂದ. ” “ತಾನು ಬದುಕಿದರೆ, ಸಾಕು ಮತ್ತೆಲ್ಲರೂ ನಾಶವಾದರೂ ನನಗೆ ಚಿಂತೆಯಿಲ್ಲಎನ್ನುವ ಪರಿ. ಮುಂದಿನ ಪೀಳಿಗೆಗೆ ಎಂತಹ ಸ್ತಿತಿಯನ್ನು ನಿರ್ಮಾಣ ಮಾಡಿ ಹೋಗುತ್ತಿದ್ದಾನೆ ಎನ್ನುವ ಪರಿಜ್ಞಾನವೇ ಇಲ್ಲದ ಮನುಷ್ಯ. ಆ ಪರಮಾತ್ಮನಿಗಾಗಿ ದೇವಸ್ಥಾನ, ಇಗರ್ಜಿ, ಮಸೀದಿಗಳನ್ನು ಕಟ್ಟಿ ಪೂಜೆಮಾಡುತ್ತೇನೆ ಎನ್ನುವ ಮನುಷ್ಯ ಆ ಪರಮಾತ್ಮ ಸೃಷ್ಟಿಸಿದ ಎಲ್ಲವನ್ನೂ ನಾಶಮಾಡುತ್ತಿರುವಾಗ, ಎಂತಹ ಪೂಜೆ ಎಂತಹ ಭಕ್ತಿ. ಧಿಕ್ಕಾರವಿರಲಿ ಇಂತಹ ಪ್ರಗತಿಗೆ.
ವಾಚಕರೆ , ಕಟುವಾದರೂ ಇದು ಸತ್ಯ. ಇಂದು ನಾವು ಸರಿಯಾಗದೆ ಇದ್ದರೆ, ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ಕ್ಷಮಿಸುವುದಿಲ್ಲ, ಜೋಕೆ !!!
ಪ್ರಕೃತಿ ರಸತಂತ್ರ ರಸಧಾರೆ - 072
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |
ಆವನಾ ಬಂಧುತೆಯ ಜಡೆಯ ಬಿಡಿಸುವನು? ||
ಜೀವ ಜೀವಕೆ ನಂಟು ಜಡ ಚೇತನಕೆ ನಂಟು |
ಆವುದದಕಂಟಿರದು? – ಮಂಕುತಿಮ್ಮ.||
ವಿಶ್ವದಲಿ = ಜಗತ್ತಿನಲಿ, ನೋಡಲೆಲ್ಲರೆಲ್ಲರ = ನೋಡಲು+ಎಲ್ಲರ+ಎಲ್ಲರ, ನತು + ಬಾಂಧವ್ಯ, ಆವನಾ = ಯಾರು, ಬಂಧುತೆಯ=ಈಬಂಧನದ, ಆವುದದಕಂಟಿರದು = ಯಾವುದಕ್ಕೆ ಅಂಟಿರದು?
ಈ ಜಗತ್ತಿನ ಎಲ್ಲವೂ ಒಂದು ರೀತಿಯ ಪರಸ್ಪರ ಕೊಂಡಿಹಾಕಿಕೊಂಡು ಅಂಟಿಕೊಂಡಿವೆ. ಜಡೆಯ ತರಹ ಹೆಣೆದು ಕೊಂಡಿರುವ ಅಂಟಿನ ನಂಟನ್ನು ಮತ್ತು ಗಂಟನ್ನು ಯಾರು ಬಿಡಿಸುವವರು. ಜೀವ ಜೀವಕೆ ನಂಟು ಚೇತನ ಮತ್ತು ಜಡಕ್ಕೆ ನಂಟು, ಯಾವುದದಕಂಟಿರದು, ಅಂದರೆ ಯಾವುದಕ್ಕೆ ಅಂಟಿರದು ಹೇಳಿ ನೋಡುವಾ ಎಂಬಂತೆ ಜಗತ್ತಿನ ಬಾಂಧವ್ಯಗಳನ್ನು ಈ ಕಗ್ಗದಲ್ಲೂ, ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.
ವಾಚಕರೆ ಹೌದಲ್ಲವೇ, ಈ ಜಗತ್ತಿನಲ್ಲಿ ಪರಸ್ಪರ ಸಂಬಂಧವಿಲ್ಲದ ವಸ್ತುಗಳೇ ಇಲ್ಲ ಅಲ್ಲವೇ. ಆ ಪರಮ ಶಕ್ತಿಗೆ ಅದೇ ಸೃಷ್ಟಿಸಿದ ಜಗತ್ತಿನೊಂದಿಗೆ ನಂಟು, ಈ ಸೃಷ್ಟಿಯಲ್ಲಿರುವ ಎಲ್ಲವೂ ಆ ಬೃಹತ್ ಚೇತನದ ಮೂಲಕ ಪರಸ್ಪರ ಸಂಬಂಧವನ್ನು ಹೊಂದಿದೆ. ಯೋಚನೆ ಮಾಡಿದರೆ, ನಮಗೆ ತಿಳಿಯುವುದು ಏನೆಂದರೆ, ಸಂಬಂಧ ಇದೆ ಅಥವಾ ಇರಬೇಕು. ಆದರೆ ಆ ಸಂಬಂಧಗಳ ಸೂಕ್ಷ್ಮ ರೂಪಗಳು ನಮಗೆ ಅರಿವಿಲ್ಲ. ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು ಮತ್ತು ಅವುಗಳ ಶೀತೊಷ್ಣಗಳು ಸುತ್ತುವಿಕೆ ಇವೆಲ್ಲವೂ ಪ್ರಕೃತಿಯೊಂದಿಗೆ ನಂಟು. ಆ ಪ್ರಕೃತಿಯ ಎಲ್ಲವೂ ಪರಸ್ಪರ ಸಂಬಂಧವನ್ನು ಹೊಂದಿದೆ. ಒಂದು ಇನ್ನೊಂದಕ್ಕೆ ಪೂರಕ, ಒಂದು ಇನ್ನೊಂದಕ್ಕೆ ಆಹಾರ. ಭೂಮಿಯಗುಣಗಳು ಆಕಾಶಕ್ಕೆ ಒಂದು ಸೂತ್ರದಲ್ಲಿ ಹೋಗುತ್ತವೆ. ಮತ್ತೆ ರೂಪ ಪರಿವರ್ತಿತವಾಗಿ ಭುವಿಗೆ ಇಳಿಯುತ್ತವೆ. ಹಾಗೆ ಇಳಿದ ಗುಣಗಳು ಮತ್ತೆ, ಗಿಡ ಮರಗಳ, ಹೂ ಹಣ್ಣುಗಳ ಗೆಡ್ಡೆ ಗೆಣಸುಗಳ ಮೂಲಕ ಮತ್ತೆ ಪ್ರಕಟವಾಗಿ ಅವನ್ನು ಸೇವಿಸಿದ ಪ್ರಾಣಿಗಳಲ್ಲಿ ಸೇರಿ ಆ ಗುಣಗಳು ಮತ್ತೆ ಆ ಪ್ರಾಣಿಗಳಲ್ಲಿ ರೂಪಾಂತರಗೊಂಡು ಪ್ರಕಟವಾಗುತ್ತದೆ. ಇದು ಜಡ ಮತ್ತು ಜಡ ಜಡಕ್ಕೆ ಇರುವ ಸಂಬಂಧ .
ಇನ್ನು ಚೇತನಕ್ಕೆ ಮತ್ತು ಜಡಕ್ಕೆ ಇರುವ ಸಂಬಂಧವನ್ನು ನೋಡಿದರೆ, ಅದು ಬಹಳ ಸೂಕ್ಷ್ಮ. ಜಡದ ಗುಣಗಳು ಜೀವಕ್ಕೆ ಸೂಕ್ಷ್ಮರೂಪದಿ ಹೋಗುವುದು ಮತ್ತು ಜೀವಿಗಳ ಮೇಲೆ ಅವುಗಳ ಪ್ರಭಾವ, ಗುಣ ಪರಿವರ್ತನೆ, ಗುಣ ಅಭಿವೃದ್ಧಿ ಇವೆಲ್ಲವನ್ನೂ ಆಲೋಚನೆ ಮಾಡಿ ಒಂದು ಗ್ರಂಥವನ್ನು ಬರೆದರೆ ಒಂದು ಹತ್ತು ಸಾವಿರ ಪುಟಗಳೂ ಸಾಲದೇನೋ. ಇರಲಿ ಇಂದು ಆ ಬಂಧ ಸಂಬಂಧಗಳು ಇವೆ ಆದರೂ ರೂಪ ಬದಲಾವಣೆಯಾಗುತ್ತಿದೆ. ಕಲುಷಿತಗೊಳ್ಳುತ್ತಿದೆ. ಭೌತಿಕ ಮತ್ತು ರಾಸಾಯನಿಕ ಸಂಕರವಾಗುತ್ತಿದೆ. ಆ ಸಂಕರದಿಂದ ಪ್ರಕೃತಿಯ ಗುಣಗಳೂ ಬದಲಾಗುತ್ತಿವೆ. ಬದಲಾವಣೆಯು ಪ್ರಕೃತಿ ನಿಯಮದಂತೆ ನಡೆಯುತ್ತಾದರೂ ಇಂದು ಪ್ರಕೃತಿಯಲ್ಲಿ ಆ ಭಗವದ್ ಸೃಷ್ಟಿಯಲ್ಲಿ ಮಾನವನ ಅತಿಯಾದ ಹಸ್ತಕ್ಷೇಪದಿಂದ ಎಲ್ಲವೂ ಕಲುಷಿತವಾಗುತ್ತಿದೆ.
ನಾವು ಏನು ಮಾಡಬಹುದು ಎಂದರೆ. ನಾವು ಸಾಧ್ಯವಾದಷ್ಟು ಇದಕ್ಕೆ ಪೂರಕವಾದ ಕಾರ್ಯಗಳನ್ನು ಮಾಡದೆ ಕಾಲುಷ್ಯವನ್ನು ತಡೆಯಲು ಪ್ರಯತ್ನಿಸ ಬೇಕು.
ಪ್ರಕೃತಿ ರಸತಂತ್ರ ರಸಧಾರೆ - 073
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ |
ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ||
ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ |
ಒಂಟಿಸಿಕೊ ಜೀವನವ ಮಂಕುತಿಮ್ಮ
ನಂಟು ತಂಟೆಗಳ ಗಂಟು ಈ ಬ್ರಹ್ಮಭಂಡಾರ ಅಂಟಿಲ್ಲ ಎನಗೆ ಇದರೊಳು ಎನ್ನದಿರು ಎಂದೆಂದೂ.
ಒಂಟಿ ನೀನು ಒಳಜಗಕೆ ಭಂಟ ಹೊರ ಜಗಕಾಗಿ ಒಂಟಿಸಿಕೋ ಜೀವನವ ಮಂಕುತಿಮ್ಮ.
ಈ ಜಗತ್ತಿನಲ್ಲಿ ಆ ಪರಮಾತ್ಮನ ಸೃಷ್ಟಿಯಲ್ಲಿ , ನಂಟುಗಳು ಮತ್ತು ಅಂಟುಗಳು ಮತ್ತು ಗಂಟುಗಳು ಬಹಳಷ್ಟಿವೆ. ಇದೆಕ್ಕೆಲ್ಲ ನನಗೆ ಸಂಬಂಧವಿಲ್ಲಎಂದು ಹೇಳಬೇಡ ಎಂದೆಂದೂ. ಅಂತರ್ಯದಲ್ಲಿ ನೀನು ಒಬ್ಬಂಟಿಯಾಗಿರು, ಆದರೆ ಹೊರ ಜಗತ್ತಿಗೆ ನಿನ್ನ ನಂಟು ಒಬ್ಬ ಆಳಿನಂತೆ ಇದ್ದು ಈ ಜೀವನಕ್ಕೆ ನೀ ಅಂಟಿಸಿಕೊ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಈ ಜಗತ್ತಿನ ಸೃಷ್ಟಿಯಲ್ಲಿ ಎಲ್ಲವೂ ಒಂದಕ್ಕೊಂದು ನಂಟು ಹಾಕಿಕೊಂಡೇ ಇವೆ. ಯಾವೂದೂ ಸಹ ಅಂಟಿಲ್ಲದೆ ಸ್ವತಂತ್ರವಾಗಿ ಇಲ್ಲವೇ ಇಲ್ಲ ನಾವು ನಮ್ಮ ಇಚ್ಛೆ ಮತ್ತು ಪ್ರಮೇಯಗಳಿಲ್ಲದೆಯೇ ಎಲ್ಲಕ್ಕೂ ನಂಟು ಹಾಕಿಕೊಂಡಿರುತ್ತೇವೆ. ಎಷ್ಟೋ ನಂಟುಗಳು ನಮ್ಮ ಅರಿವಿಗೇ ಬಂದಿರುವುದಿಲ್ಲ. ಕೆಲವರು ಇದಕ್ಕೆ ನನಗೆ ಸಂಬಂಧವಿಲ್ಲಎನ್ನುವ ಮಾತನ್ನು ಹೇಳುವುದು ನಾವು ಕೇಳಿರಬಹುದು. ಆದರೆ ಇರುವ ಸಂಬಂಧ ಅವರನ್ನು ಮುಟ್ಟುವ ತನಕ ಅದು ಅವರಿಗೆ ಅರಿವಾಗಿರುವುದಿಲ್ಲ, ಅಷ್ಟೇ. ಈ ಸಂಭಂಧಗಳಲ್ಲಿ ಕೆಲವು ವೈಯಕ್ತಿಕ, ಕೆಲವು ಸಾಮೂಹಿಕ, ಕೆಲವು ಸಾಮಾಜಿಕ ಮತ್ತು ಕೆಲವು ರಾಷ್ಟ್ರೀಯ. ಆದರೆ ಸಂಭಂದವಿಲ್ಲವೆನ್ನಲಾಗದು.
ನಮ್ಮ ಸಂಬಂಧಗಳು ಎಷ್ಟು ಗಟ್ಟಿ ಅಥವಾ ಎಷ್ಟು ಟೊಳ್ಳು ಎನ್ನುವುದು ಆ ವಸ್ತು, ವ್ಯಕ್ತಿ ಅಥವಾ ವಿಷಯದೊಂದಿಗೆ ನಮ್ಮ ಸಂಬಂಧದ ತೀವ್ರತೆ ಮತ್ತು ಆಳದ ಮೇಲೆ ಅಧಾರಪಟ್ಟಿರುತ್ತದೆ. ನಾವು ಬಹಳಷ್ಟುಜನ ಸಂಸಾರದಲ್ಲಿ ಇದ್ದರೂ ಸನ್ಯಾಸಿಗಳ ತರಹೆ ಇರುವವರನ್ನು ಕಂಡಿದ್ದೇವೆ ಮತ್ತು ಮತ್ತೆ ಹಲವರು ಬೇರೆ ಯಾವ ವಿಷಯದ ಬಗ್ಗೆಯೂ ಯೋಚನೆ ಮಾಡದೆ, ಕೇವಲ ಜಗತ್ತಿನಲ್ಲೇ ಮುಳುಗಿರುವವರೂ ಇದ್ದಾರೆ. ಇದು ಬಿಟ್ಟರೆ ಬೇರೆ ಇಲ್ಲವೇ ಇಲ್ಲ ಎಂದು ಭಾವಿಸಿ ಈ ಜಗತ್ತಿಗೆ ಮತ್ತು ಈ ಜಗತ್ತಿನ ಎಲ್ಲಕ್ಕ್ಕೂ ಅಂಟಿಕೊಂಡಿರುವವರು ಬೇಕಾದಷ್ಟು ಜನ ಸಿಗುತ್ತಾರೆ. ಇಲ್ಲೇ ಇದ್ದು ಎಲ್ಲ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರೂ ಯಾವುದಕ್ಕೂ ಅಂಟದವರೂ ಇದ್ದಾರೆ. ಇದ್ದೂ ಇಲ್ಲದಂತಿರುವುದು ಒಂದು ಯೋಗ. ಅದು ಅಭ್ಯಾಸದಿಂದ ಮತ್ತು ಸಂಸ್ಕಾರದಿಂದ ಬರುತ್ತದೆ.
ಅದಕ್ಕೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಹೇಳುವುದನ್ನು ಮತ್ತೊಮ್ಮೆ ನೋಡಿ. ಹೊರಜಗತ್ತಿಗೆ ಎಲ್ಲವನ್ನೂ ತಲೆಯಮೇಲೆ ಹೊತ್ತುಕೊಂಡು, ತನ್ನ ಜವಾಬ್ದಾರಿ ಎಂಬಂತೆ, ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವ ಒಬ್ಬ ಸೇವಕನಂತೆ(ಭಂಟ) ಎಲ್ಲಕ್ಕೂ ಅಂಟಿಕೊಂಡು ಕೆಲಸಮಾಡು. ಆದರೆ ಅಂತರಂಗದಲ್ಲಿ ಯಾವುದನ್ನೂ ಒಂದು ಅಭ್ಯಾಸವನ್ನಾಗಿಸಿಕೊಳ್ಳುವುದೋ ಅಥವಾ ಸ್ವಾಭಾವವಾಗಿಸಿಕೊಳ್ಳುವುದೋ ಮಾಡದೆ ಮನಸ್ಸು ಬುದ್ಧಿ ದೇಹಾತ್ಮಗಳಿಗೆ ಇವ್ಯಾವುದರ ಅಂಟೂ ಅಂಟದ ರೀತಿ ಇದ್ದರೆ ಒಳ್ಳೆಯದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಭಗವಂತನನ್ನೇ ನಂಬಿ, “ಪದ್ಮಪತ್ರಮಿವಾಂಭಸಿ ನೀರಿನಲ್ಲಿರುವ ಕಮಲದೆಲೆಯಂತೆ ಅಂಟಿಯೂ ಅಂಟದಂತಿರುವ ನಿರ್ಲಿಪ್ತಜೀವನವನ್ನು ನಡೆಸಿದರೆ, ಸುಖ ದುಃಖಗಳ ವರ್ತುಲದಿಂದ ಹೊರಗೆ ನಿಂತು ಕೇವಲ ಸಾಕ್ಷೀ ಭಾವದಿಂದ ನೋಡುತ್ತಾ ಆನಂದವಾಗಿರಬಹುದು. ನಮ್ಮ ಸುಖ, ದುಃಖ, ನೋವು, ನಲಿವು, ಆನಂದ, ಪ್ರೀತಿ ಪ್ರೇಮ ಮುಂತಾದ ಎಲ್ಲ ಭಾವಗಳಿಗೂ ಈ ಜಗತ್ತಿನೊಂದಿಗೆ ನಮಗೆ ಇರುವ ಅಂಟಿನ ತೀವ್ರತೆಯ ಮೇಲೆ ಅಧಾರಪಟ್ಟಿದೆ. ನಮಗೇನು ಬೇಕು ಎಂದು ನಿರ್ಧರಿಸಲು ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನಿತ್ತಿದ್ದಾನೆ , ಪರಮಾತ್ಮ ಆಯ್ಕೆ ನಮ್ಮದು ಅದರಿಂದ ಬರುವ ಎಲ್ಲ ಫಲಗಳೂ ನಮ್ಮದು.
ಪಾಲ್ ಬೊಮ್ಮನ್ ನೊರೆ ಸೃಷ್ಟಿ. ರಸಧಾರೆ - 074
ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |
ಹೊಮ್ಮುವೆನು ಕೋಟಿರೂಪದಲಿ ನಾನೆಂದು ||
ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |
ನಮ್ಮಿರವು ಮಾಯೆಯಲಿ ಮಂಕುತಿಮ್ಮ.
ಸುಮ್ಮನೆ ಒಬ್ಬಂಟಿ ಎಂತೆ ಇಹುದು? ಬೇಸರವಹುದು. ಹೊಮ್ಮುವೆನು, ಕೋಟಿ ರೂಪದಲಿ ನಾನು ಎಂದು ಬೊಮ್ಮನು ಎಳಸಿದನಂತೆ. ಆ ಎಳಸಿಕೆಯೆ ಮಾಯೆ. ನಮ್ಮ ಇರವು ಮಾಯೆಯಲಿ ಮಂಕುತಿಮ್ಮ
ಹೊಮ್ಮುವೆನು = ಉಕ್ಕುವೆನು ಬೊಮ್ಮ= ಪರಬ್ರಹ್ಮ, ಯೆಳಸಿಕೆ= ಅನಿಸಿಕೆ, ನಮ್ಮಿರವು = ನಮ್ಮ ಈ ಜಗತ್ತಿನ ಅಸ್ತಿತ್ವ.
ಆ ಪರಮಾತ್ಮನಿಗೆ ಒಬ್ಬನೇ ಇರುವುದು ಹೇಗೆ ಎಂದು ಅನಿಸಿ ಬೇಸರಬಂದು, ನಾನು ಕೋಟಿ ಕೋಟಿ ರೂಪದಲಿ ಹೊರ ಹೊಮ್ಮುವೆನು ಎಂದುಕೊಂಡು ಆ ಮಾಯಾ ರೂಪದ ಜಗತ್ತನ್ನು ಸೃಷ್ಟಿಮಾಡಿದನಂತೆ. ಆ ಮಾಯೆಯೇ ಈ ಜಗತ್ತು. ನಾವಿರುವುದು ಈ ಮಾಯೆಯೊಳಗೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. ಹಾಗಾಗಿ ಪರಬ್ರಹ್ಮ ಹಾಲು. ಉಕ್ಕಿ ಹರಿಯುವ ನೊರೆಯೇ ಸೃಷ್ಟಿ.
ಕಣ್ಣಿಗೆ ಕಂಡೂ ನಮಗೆ ಅರ್ಥವಾಗದ್ದು ಮಾಯೆ. ಆದರೆ ಈ ಮಾಯೆಯ ವಿಸ್ತಾರವನ್ನು ನೋಡಿದರೆ ಅಬ್ಬಬ್ಬಾ ಎನ್ನುವಂತಾಗುತ್ತದೆ. ನಭೋ ಮಂಡಲದಲ್ಲಿ ಒಂದು ಮಹಾಸ್ಫೋಟ. ಅದು ವಿಜ್ಞಾನಿಗಳ ಪ್ರಕಾರ ಒಂದು ಸಾವಿರದಿಂದ ಎರಡು ಸಾವಿರ ಕೋಟಿ ವರ್ಷಗಳ ಹಿಂದೆ ನಡೆದಿರಬೇಕು. ಒಂದೇ ಅಗ್ನಿಗೋಳವಾಗಿದ್ದ ಈ ಜಗತ್ತು ಅಂತರ್ಯದಲ್ಲಿ ಅತ್ಯಧಿಕವಾದ ಶಾಖದಿ೦ದ ಉಂಟಾದ ಆಂತರಿಕ ಗುರುತ್ವ ಮತ್ತು ಬಾಹ್ಯ ವಿಕಿರಣದಿಂದ ಒಂದೇ ಬಾರಿಗೆ ಸ್ಪೋಟಗೊಂಡು ದೂರದೂರಕ್ಕೆಸೆಯಲ್ಪಟ್ಟದ್ದು ಕೇವಲ ಅನಿಲಗಳು. ಆಗ ಅದರ ಶಾಖವೇ ೧೦೦ ಬಿಲ್ಲಿಯನ್ ಡಿಗ್ರೀಗಳಿತ್ತಂತೆ. ಹಾಗೆ ಎಸೆಯಲ್ಪಟ್ಟ ಅನಿಲಗಳಲ್ಲಿನ ಅಯಾನಿಕ್ ಕಣಗಳು ಒಂದಕ್ಕೊಂದು ಘರ್ಷಣೆಗೊಂಡು ಅತೀ ಹೆಚ್ಚಾದ ಶಾಖ ಉಂಟಾಗಿ ಆ ಶಾಖದ ಕಾರಣದಿಂದ ಒಂದಕ್ಕೊಂದು ಸೇರಿ ನಕ್ಷತ್ರವಾಗಿ ಆವಿರ್ಭಾವವಾಯಿತಂತೆ . ಅಂತಹ ಸಮಯದಲ್ಲಿ ಕಡಿಮೆ ಶಾಖವಿದ್ದರೆ ಅದು ಒಂದು ಗ್ರಹವಾಗಿ ರೂಪಿತಗೊಂಡಿತಂತೆ. ಹಾಗೆ ರೂಪಿತಗೊಂಡ ಗ್ರಹಗಳು ಕೋಟಿ ಕೋಟಿ ವರ್ಷಗಳಲ್ಲಿ ತಣ್ಣಗಾಗಿ ತಣ್ಣಗಾಗಿ ಜೀವಿಯ ಅವಿರ್ಭಾವಕ್ಕೆ ಸೂಕ್ತ ವಾತಾವರಣ ನಿರ್ಮಾಣವಾದಾಗ ಇಲ್ಲಿ ನೀರು ಸಸ್ಯ ಆಹಾರ ಹೀಗೆ ಎಲ್ಲವೂ ಉತ್ಪತ್ತಿಯಾಯಿತಂತೆ. ಇದು ವಿಜ್ಞಾನದ ವಿವರಣೆ.
ಆದರೆ ನಮ್ಮಂತಹ ಸಾಮಾನ್ಯರಿಗೆ ಅರ್ಥವಾಗುವುದೇನೆಂದರೆ ಇಡೀ ಸೃಷ್ಟಿಗೆ ಕಾರಣ ಒಂದು ಬೃಹತ್ ಚೇತನ. ಆ ಚೇತನ ತನ್ನ ಶಕ್ತಿಯಿಂದಲೇ ತಾನೇ ಈ ಜಗತ್ತಾಗಿ ಪ್ರಕಟಗೊಂಡಿದೆ. ಅದನ್ನೇತಾಳ್ಳಪಾಕ ಅನ್ನಮಾಚಾರ್ಯರು” ” ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ ಎಂದು, ಅಂದರೆ ಎಲ್ಲರಲ್ಲೂ ಹುಟ್ಟಿ ಎಲ್ಲರಲ್ಲೂ ಸೇರಿ ಎಲ್ಲರ ರೂಪವೂ ತಾನೇ ಆಗಿಎಂದು ಹೇಳುತ್ತಾರೆ. ಅದಕ್ಕೆ ನಮಗೆ ಎಲ್ಲವೂ ಆ ಪರಮಾತ್ಮನೇ. ಆಕಾಶ, ಸೂರ್ಯ, ಭೂಮಿ ಗಾಳಿ, ಗುಡ್ಡ, ಬೆಟ್ಟ, ನದಿ, ಮರ, ಗಿಡ ಹೀಗೆ ಎಲ್ಲವೂ ನಮಗೆ ಪರಮಾತ್ಮ ಸ್ವರೂಪವಲ್ಲವೇ? ಆದರೆ ನಮಗೆ, ಯಾವುದೂ ಸ್ಪಷ್ಟ ಅಲ್ಲವಲ್ಲ. ಯಾವುದೂ ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ನಮ್ಮ ಪರಿಮಿತ ಜ್ಞಾನಕ್ಕೆ ಅದನ್ನು ಭಾವಿಸುವುದೂ ಕಷ್ಟ. ಹಾಗಾಗಿ ಅದು ಮಾಯೆ. ನಮಗೆ ಗೊತ್ತಿರುವುದು ಅಥವಾ ನಾವು ನಂಬಿರುವುದು ಒಂದೇ. ಎಲ್ಲವೂ ಪರಮಾತ್ಮನಿಂದ ಆಗಿದೆ ಎಲ್ಲವೂ ಪರಮಾತ್ಮನಿಂದಲೇ ನಡೆಯುತ್ತದೆ. ಪರಮಾತ್ಮ ಎನ್ನವುದು ಒಂದು ಶಕ್ತಿ. ಆ ಶಕ್ತಿಯಿಂದಲೇ ಸಕಲವೂ. ಎಲ್ಲದಕ್ಕೂ ಅದೇ ಮೂಲ ಮತ್ತು ಎಲ್ಲದಕ್ಕೂ ಅದೇ ಗಮ್ಯ.
ನಾವು ಅದಕ್ಕೆ ಶರಣಾಗಿ, ನಿಯಮಿತ ಕಾರ್ಯಗಳನ್ನು ಮಾಡುತ್ತಾ ಅಹಂಕಾರ ತೊರೆದು ಅವನ ಸೃಷ್ಟಿಯಲ್ಲಿಯ ಎಲ್ಲದರಲ್ಲೂ ಆ ಪರಮ ಶಕ್ತಿಯ ರೂಪವನ್ನೇ ನೋಡುತ್ತಾ ಬಾಳಿದರೆ ಸುಖ. ಅದನ್ನು ಬಿಟ್ಟು ಬೇರೆ ಯಾವುದೇ ಭಾವನೆ ಇದ್ದರೆ ನಿರಂತರ ಸಂಕಟ, ನೋವು ಮತ್ತು ದುಃಖ. ನಂಬುವುದೂ ಬಿಡುವುದೂ ಅವರವರ ನಂಬಿಕೆಗೆ ಬಿಟ್ಟದ್ದು . ವಾಚಕರೆ ನೀವು ಸ್ವತಂತ್ರರು. ನಂಬುವುದೂ ಬಿಡುವುದೂ ನಮ್ಮ ಆಯ್ಕೆಗೆ ಸೇರಿದ್ದು.
ಪಾಲ್ ಬ್ರಹ್ಮ ನೊರೆಸೃಷ್ಟಿ ರಸಧಾರೆ - 075
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ |
ವಿಸ್ತರಿಸುವಂದದಿ ಸೃಷ್ಟಿ ತನ್ನ ಮೂಲವನು ||
ಮರೆಮಾಚಿ ತಾನೇ ಮೆರೆಯುತ್ತಿಹುದು ಕಣ್ಗಳಿಗೆ |
ನೊರೆಸೃಷ್ಟಿ ಪಾಲ್ ಬ್ರಹ್ಮಮಂಕುತಿಮ್ಮ. ||
ಮರ ತನ್ನ ಹೆತ್ತ ಬೀಜನು ಇಲ್ಲವೆನಿಸಿ ವಿಸ್ತರಿಸುವಂದದಿ ಸೃಷ್ಟಿ ತನ್ನ ಮೂಲವನು ಮರೆಮಾಚಿ ತಾನೇ ಮೆರೆಯುತ್ತಿಹುದು ಕಣ್ಗಳಿಗೆ ನೊರೆಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ.
ಒಂದು ಮರ ತನ್ನ ಮೂಲವಾದ ಬೀಜವನ್ನು ಇಲ್ಲವಾಗಿಸಿ ತಾನು ಬೆಳೆದು ರೆಂಬೆ ಕೊಂಬೆಗಳಿಂದ ವಿಸ್ತಾರವಾಗಿ ಬೆಳೆವಂತೆ ಈ ಜಗತ್ತೂ ಸಹ ತನ್ನ ಮೂಲವಾದ ಆ ಅಗ್ನಿಗೋಳವನ್ನು ಇಲ್ಲವಾಗಿಸಿ ಮೆರೆಯುತ್ತಿದೆ ಮತ್ತು ನಮಗೆ ಕಾಣುತ್ತಿದೆ. ಇದು ಹೇಗಿದೆ ಎಂದರೆ ಆ ಪರಬ್ರಹ್ಮ ಹಾಲಾದರೆ ಅತೀ ಉಷ್ಣತೆಯಿಂದ ಕಾದು ಕಾದು ಉಕ್ಕುವ ಹಾಲಿನ ನೊರೆಯಂತೆ ಈ ಸೃಷ್ಟಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಒಂದು ಬೀಜದೊಳಗೆ ಒಂದು ಜೀವಕಣ ಅದಕ್ಕೆ ಒಂದು ಹೊದಿಕೆ. ಹೊದಿಕೆ ಪೂರಕ. ಸರಿಯಾದ ಪಾತ್ರ ದೊರಕಿದರೆ ಆ ಬೀಜ ಮೊಳೆತು ಸಸಿಯಾಗಿ ಗಿಡವಾಗಿ ಮರವಾಗಿ ತನ್ನ ಸ್ಥಾನದಲ್ಲೇ ಹರಡಿಕೊಳ್ಳುತ್ತದೆ. ಆದರೆ ಆ ಮರಕ್ಕೆ ಮೂಲವಾದ ಬೀಜ ತನ್ನನ್ನು ತಾನು ಇಲ್ಲವಾಗಿಸಿಕೊಂಡು, ತನ್ನ ಶಕ್ತಿಯಿಂದಲೇ ಆ ಮರದಲ್ಲಿ ಕೋಟ್ಯಾಂತರ ಬೀಜಗಳಿಗೆ ಕಾರಣವಾಗುತ್ತದೆ. ಈ ಜಗತ್ತಿನ ಸೃಷ್ಟಿಯೂ ಹಾಗೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಒಂದು ಗೋಳ. ಒಳಗೆ ಭಯಂಕರ ಶಾಖ. ಬೀಜ ತನ್ನೊಳಗಿನ ಶಕ್ತಿ ಮತ್ತು ಹೊರಗಿನ ಶಕ್ತಿಯ ಕ್ರಿಯೆಯಿಂದ ಸಿಡಿದು ಸಸಿಯಾದಂತೆ, ಆ ಗೋಳವೂ ಸಿಡಿದು ಈ ಜಗತ್ತೆಂಬ ಮಹಾವೃಕ್ಷವಾಗಿದೆ ಎನ್ನುವುದು ವಿಜ್ಞಾನ. ಕಾದ ಹಾಲು ಉಕ್ಕುವಂತೆ ಉಕ್ಕಿ ನೊರೆಯಲ್ಲ ಹರಡುವಂತೆ ಈ ಜಗತ್ತು ಊಹಾತೀತವಾದ ವಿಸ್ತಾರಕ್ಕೆ ಹರಡಿದೆ. ಹೇಗೆ ಬೆಳೆದ ಮರವೂ ಸಹ ತನ್ನ ಅಸ್ತಿತ್ವಕ್ಕೆ ಒಳಗಿನಿಂದ ಮತ್ತು ಹೊರಗಿನಿಂದ ಸಾರ ಹೀರುತ್ತದೆಯೋ ಹಾಗೆಯೇ ಈ ಜಗತ್ತಿನ ಎಲ್ಲವೂ ತನ್ನ ಮೂಲವಾದ ಆ ಪರಮ ಚೇತನದ ಆಧಾರದ ಮೇಲೆ ನಿಂತಿದೆ. ಒಳಗೂ ಅದೇ ಚೇತನ ಹೊರಗೂ ಅದೇ ಚೇತನ. ಯತಃ ಸರ್ವಾಣಿ ಭೂತಾನಿ ಭವಂತ್ಯಾದಿ ಯುಗಾಗಮೆಯಾವುದರಿಂದ ಯುಗದ ಆದಿಯಲ್ಲಿ ಎಲ್ಲವೂ ಪ್ರಕಟಗೊಂಡವೋ ಅದೇ ಆ ಬೃಹತ್ ಚೇತನ. ಈ ಜಗತ್ತಿನ ಎಲ್ಲವನ್ನೂ ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಬೃಹತ್ ಚೇತನವೇ ಆ ಪರಮ ಶಕ್ತಿ. ಅದನ್ನೇ ಪರಬ್ರಹ್ಮ, ದೇವರು ಪರಮಾತ್ಮ ಎನ್ನುವ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತೇವೆ.
ಹಾಗಾದರೆ ನಮಗೆಲ್ಲ ಒಂದು ಪ್ರಶ್ನೆ ಇದೆ ಅಲ್ಲವಾ? ಅದು ನಾವು ಯಾರು”? ಎಂಬುದು. ನಾವೆಲ್ಲಾ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಹೋಗುವ ಆ ಬೃಹತ್ ಚೇತನದ ಒಂದು ಸೂಕ್ಷ್ಮ ಕಣವಷ್ಟೇ!!!!!. ಹಾಲ ಮೇಲಿನ ನೊರೆಯಂತೆ. ಮನಸ್ಸು ಬುದ್ಧಿ ದೇಹಾತ್ಮಗಳ ಒಂದು ಗೂಡು. ಈ ನಾಲ್ಕೂ ಒಂದು ಕಡೆ ಸೇರಿರುವ ಒಂದು ಮನೆ. ಸೃಷ್ಟಿಯ ಎಲ್ಲಕ್ಕೂ ಇದು ಅನ್ವಯ. ಪ್ರಮಾಣ ಮತ್ತು ಪರಿಮಾಣ ಬೇರೆ ಬೇರೆ ಅಷ್ಟೇ. ಮೇಲೆ ಕೊಂಚ ಅಹಂಕಾರ. ಅದು ನಮ್ಮನ್ನು ಈ ಜಗತ್ತಿನಲ್ಲಿ ಆಡಿಸುತ್ತದೆ. ನಮ್ಮ ಭಾಗಗಳಾದ ದೇಹ ಮನಸ್ಸು ಬುದ್ಧಿ ಮತ್ತು ಆತ್ಮಗಳ ಮೂಲವನ್ನು ಅರಿಯುವುದೇ ಆಧ್ಯಾತ್ಮ. ಆ ಪರಮಾತ್ಮನ ಲೀಲಾವಿನೋದವನ್ನು ಅರ್ಥಮಾಡಿಕೊಳ್ಳುವುದೇ ಆಧ್ಯಾತ್ಮದ ಗುರಿ.
ವಾಚಕರೆ ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ವಿಧ್ಯಮಾನವೂ ಆ ಬೃಹತ್ ಚೇತನದ ಕಾರಣದಿಂದಲೇ ನಡೆಯುತ್ತದೆ. ಅದು ಹಾಲಾದರೆ ಈ ಜಗತ್ತು ನೊರೆ. ಇದು ಚಿಂತನೆ ಮತ್ತು ಮನನಕ್ಕೆ ಒಂದು ಸೂಕ್ತ ವಿಚಾರ.
ಪಾಲ್ ಬ್ರಹ್ಮ- ನೊರೆ ಸೃಷ್ಟಿ. ರಸಧಾರೆ - 076
ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲೆಸಿ ||
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |
ವಿಹರಿಪನು ನಿರ್ಲಿಪ್ತ ಮಂಕುತಿಮ್ಮ||
ತಾನೊಬ್ಬಂಟಿ = ಒಬ್ಬನೇ ಇದ್ದವನು, ಬಹುವಾಗಲೆಳಸಿ= ಬಹಳವಾಗಬೇಕೆಂದೆಣಿಸಿ, ಬೊಮ್ಮ = ಪರಬ್ರಹ್ಮ, ನಿಜಮಹಿಮೆಯಿಂ = ತನ್ನ ನಿಜ ಮಹಿಮೆಯಿಂದ ಸೃಜಿಸಿ = ಸೃಷ್ಟಿಸಿ, ವಿಶ್ವವನಲ್ಲಿನೆಲೆಸಿ = ವಿಶ್ವವ + ಅಲ್ಲಿ + ನೆಲೆಸಿ ಜೀವತೆಯ = ಜೀವನವ, ಸರಸವಿರಸದಲಿ = ಸರಸ ಮತ್ತು ವಿರಸದಲ್ಲಿ, ವಿಹರಿಪನು ನಿರ್ಲಿಪ್ತ = ತಾನು ನಿರ್ಲಿಪ್ತನಾಗಿ ವಿಹರಿಸುತ್ತಿದ್ದಾನೆ.
ಆ ಮಹಾ ಶಕ್ತಿ ಒಂದೇ ಇತ್ತು. ಅದು ತಾನೇ ಹಲವಾಗಿ ಪ್ರಕಟಗೊಳ್ಳಬೇಕೆಂದು, ತನ್ನ ಸಂಕಲ್ಪದಿಂದ, ತನ್ನದೇ ಆದ ಪರಮ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿ, ತನ್ನ ಶಕ್ತಿಯನ್ನು ಪ್ರತಿಯೊಂದರಲ್ಲೂ ಇರಿಸಿ ತನ್ನ ಇರವನ್ನು ನಿಗೂಢವಾಗಿರಿಸಿಕೊಂಡು, ತಾನು ಮಾತ್ರ ನಿರ್ಲಿಪತೆತೆಯಿಂದ ಈ ಜಗವನ್ನು ನಡೆಸಿಕೊಂಡು ಹೋಗುತ್ತಿದ್ದಾನೆ ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
ಒಂದೇ ಇದ್ದ ಆ ಭೃಹತ್ ಚೇತನ ಹಲವಾಗಿ ಆ ಹಲವು ಬಹಳವಾಗಿ ಪ್ರಕಟಗೊಂಡು, ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು ಬೇರೆ ಬೇರೆ ಕಾರ್ಯಗಳನ್ನು ವಹಿಸಿಕೊಂಡು ಜಗತ್ತಿನ ಎಲ್ಲ ಚಿತ್ರ ವಿಚಿತ್ರಗಳಲ್ಲೂ ತಾನೇ ಇದ್ದುಕೊಂಡು ಒಂದು ರೂಪವಿಲ್ಲದೆ ಹಲವಾರು ರೂಪಗಳಿಂದ ಈ ಜಗತ್ತಿನಲ್ಲಿ ಪ್ರಕಟವಾಗಿದೆ, ಎಂಬುವುದು ವಿಜ್ಞಾನವೂ ಹೌದು ವೇದಾ೦ತವೂ ಹೌದು. ವೇದಾಂತ ಮತ್ತು ವಿಜ್ಞಾನ ಬೇರೆ ಅಲ್ಲ. ಅಧುನಿಕ ವಿಜ್ಞಾನ ಮಾತ್ರ ವೇದಾಂತದ ಜ್ಞಾನಕ್ಕಿಂತ ಬಹಳ ಹಿಂದಿದೆ, ಅಷ್ಟೇ.
ಈ ಪರಮಾತ್ಮನ ಸೃಷ್ಟಿ, ಎಷ್ಟು ಅಗಾಧವೆಂದರೆ, ಎಲ್ಲ ಆಯಾಮಗಳನ್ನೂ ನೋಡಲಾಗದೆ, ನಾವು ನೋಡಿದ್ದೇ ಸತ್ಯವೆಂಬ ಭ್ರಮೆಯಲ್ಲಿರುತ್ತೇವೆ, ಅದೇ ಮಾಯೆ. ನಮ್ಮ ದಿನಂದಿನ ಕೆಲಸಗಳು ಪ್ರೀತಿ, ಪ್ರೇಮ, ಸ್ನೇಹ , ವೈರ, ದಯೆ, ಕರುಣೆ, ಕೋಪ ತಾಪ, ಎಲ್ಲವೂ ಒಂದು ಭ್ರಮೆಯಷ್ಟೇ!! ಇಂಥ ಭ್ರಮೆಗೆ ಕಾರಣ ಸತ್ಯದರಿವಿನ ಅಭಾವ. ಮನುಷ್ಯರಷ್ಟೇ ಅಲ್ಲ ಸಕಲ ಜಗತ್ತು ಈ ಮಾಯೆಯಲ್ಲಿ ನಿಂತಿದೆ. ಅದಕ್ಕೆ ದಾಸರೆಂದರು ನೀ ಮಾಯೆಯೋ? ನಿನ್ನೊಳು ಮಾಯೆಯೋ? ” ಎಂದು. ಆ ಪರಮ ಪುರುಷನನ್ನು ಅರಿಯಲು ಮಾಯೆಯ ಪರದೆ ಅಡ್ಡ. ಈ ಮಾಯೆಯನ್ನು ಅರಿಯಲು ಅಹಂಕಾರದ ಪರದೆ ಅಡ್ಡ. ಪರದೆ ಸುಲಭವಾಗಿ ಸರಿಯೋಲ್ಲ. ಅದಕ್ಕೆ ಸಾಧನೆ ಬೇಕು ಕಷ್ಟಪಟ್ಟು ಸರಿಸಬೇಕು. ಮತ್ತೆ ಮತ್ತೆ ಹಿಂದಕ್ಕೆ ಬರುವ ಈ ಪರದೆ ಬಹಳ ಗಟ್ಟಿ. ನಾವು ಅದಕ್ಕಿಂತ ಗಟ್ಟಿಯಾದರೆ, ಪರದೆ ಸರಿಯುತ್ತದೆ. ಪರದೆ ಸರಿದರೆ ಸತ್ಯದರ್ಶನ .
ಹಾಗಾದರೆ, “ಈ ಪರಮಾತ್ಮ ಇದನೆಲ್ಲ ಯಾಕೆ ಸೃಷ್ಟಿ ಮಾಡಿದ ? ಅವನಿಗೇನು ಮಾಡೋಕೆ ಬೇರೆ ಕೆಲಸ ಇರಲಿಲ್ಲವೇ? ಸೃಷ್ಟಿ ಮಾಡಿ ನಮಗೆಲ್ಲ ಈ ಕೆಲಸಕ್ಕೆ ಬಾರದ ಭಾವನೆಗಳನ್ನು ಕೊಟ್ಟು, ಮಾಯೆ ಎಂಬ ಪರದೇನೂ ಇಟ್ಟು, “ಸಾಧ್ಯವಾದರೆ ಸರಿಸಿಕೊಂಡು ಬನ್ನಿಅಂತ ನಮ್ಮನ್ನೆಲ್ಲ ನಮ್ಮ ಪಾಡಿಗೆ ಬಿಟ್ಟು ನಿರ್ಲಿಪ್ತನಾಗಿ ಏಕೆ ಕುಳಿತಿದ್ದಾನೆ ?” ಎಂದರೆ, ಇದು ಅವನ ಲೀಲಾ ವಿನೋದಹಾಗೆ ನಮ್ಮ ಮನಸ್ಸಿಗೆ ಬರುವುಕ್ಕೆ ಕಾರಣ ಇಲ್ಲಿ ನಾವುಇದ್ದೇವೆ ಎಂದುಕೊಂಡರೆ ಮಾತ್ರ. ಎಲ್ಲವೂ ಅವನೇ ಎಂದಾಗ ಆ ಪ್ರಶ್ನೆ ಉದ್ಭವವಾಗುವುದಿಲ್ಲ. ಈಶಾವಾಸ್ಯಮಿದಂ ಸರ್ವಂ ಯತ್ಕಿಂಚಿತ್ ಜಗತ್ಯಾಂ ಜಗತ್ಎಂದು ಈಶಾವಾಸ್ಯ ಉಪನಿಷತ್ತು ಹೇಳುವಂತೆ ಎಲ್ಲವೂ ಆ ಪರಮಾತ್ಮನೇ. ಚಿಕ್ಕದು ,ದೊಡ್ಡದು, ಕಾಣುವುದು, ಕಾಣದ್ದು, ಗಿಡ, ಮರ, ಬೆಟ್ಟ ಗುಡ್ಡ, ಆಕಾಶ, ನದಿ, ಗ್ರಹಗಳು, ನಕ್ಷತ್ರಗಳು, ಪ್ರಾಣಿಗಳು, ಪಕ್ಷಿಗಳು ಹೀಗೆ ನಾವೇನೇನು ಕಾಣುತ್ತೆವೇಯೋ, ಊಹಿಸಿಕೊಳ್ಳುತ್ತೆವೆಯೋ, ನಾವು ಏನು ಕಾಣಲಾರೆವೋ ಯಾವುದನ್ನು ಊಹಿಸಿಕೊಳ್ಳಲಾರೆವೋ ಅದೆಲ್ಲವೂ ಆ ಬೃಹತ್ ಚೇತನವೇ ಆಗಿದೆ.
ಹಾಗಾಗಿ ವಾಚಕರೆ, ನೋಡಿ, ಯೋಚಿಸಿ, ಊಹಿಸಿ, ಅನುಭವಿಸಿ ಈ ಜಗತ್ತು ಸತ್ಯವೋ, ನಮ್ಮ ಇರವು ಸತ್ಯವೋ ಎಂದು ಅರಿತು ಸತ್ಯವಾವುದು ಎಂದು ಅರಿಯಲು ನಾವು ಪ್ರಯತ್ನ ಪಡೋಣ. ನಿರಂತರ ಪ್ರಯತ್ನದಿಂದ ನಮಗೆ ಅದರ ಅರಿವು ಮೂಡಬಹುದು.
ರಸಧಾರೆ - 077
ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |
ರನ್ನವೋ ಬ್ರಹ್ಮ; ನೋಡವನು ನಿಜಪಿಂಛ ||
ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲಿನೊಲು |
ತನ್ಮಯನೋ ಸೃಷ್ಟಿಯಲಿ ಮಂಕುತಿಮ್ಮ ||
ನಿಜಪಿಂಛ = ನೈಜ ಬಣ್ಣಗಳ ನವಿಲುಗರಿ, ವರ್ಣದೆಣಿಕೆಯಲಿ = ಬಣ್ಣಗಳ ಎಣಿಕೆಯಲಿ, ನವಿಲಿನೊಲು = ನವಿಲಿನಂತೆ
ತನ್ನ ಹೊಳಹೊಳಪುಗಳ ತಾನೇ ನೆನೆನೆನೆದು ಮೈ ಮರೆತಂತ ರತ್ನವೋ ಆ ಬ್ರಹ್ಮ. ಅಲ್ಲಿ ನೋಡು ಅವನು ಒಂದು ನವಿಲು ತನ್ನ ಗರಿಗಳನ್ನೆಲ್ಲ ಕೆದರಿ ನೃತ್ಯ ಮಾಡುವಾಗ ತನ್ನ ಗರಿಗಳ ಬಣ್ಣ ಗಳನ್ನೂ ಕಂಡು ತನ್ಮಯವಾಗುವಂತೆ, ತನ್ನಿಂದ ಆದ, ತಾನೇ ಆದ ಈ ಸೃಷ್ಟಿಯನ್ನು ಅನುಭವಿಸುವಾಗ ಆ ಪರಮಾತ್ಮನೂ ತನ್ಮಯನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ . ಇಡೀ ಜಗತ್ತು, ಸೃಷ್ಟಿ ಆದದ್ದೇ ಆ ಪರಮ ಶಕ್ತಿಯಿಂದ. ಆ ಪರಮ ಶಕ್ತಿಯೇ ಜಡವನ್ನೂ ಸೃಷ್ಟಿಸಿ, ಜಡದೊಳಗೆ ಚೇತನವಾಗಿ ಪ್ರವೇಶಿಸಿ ಜಡಕ್ಕೆ ಚೈತನ್ಯವನ್ನು ತುಂಬಿ ಆಯಾಯಾ ಜಡಗಳ ಗುಣಗಳನ್ನು ತಾನೂ ಅನುಭವಿಸುತ್ತ ಆ ಅನುಭವದಲ್ಲಿ ಆ ಪರಮಾತ್ಮನೂ ಮಗ್ನನೋ? ಎನ್ನುವ ಪ್ರಶ್ನೆ.
ವಾಚಕರೆ ನೋಡಿ ನಾವು ನಮ್ಮ ದೇಹದ ಭಾಗಗಳನ್ನು ಹೇಗೆ ಹೇಳುತ್ತೇವೆ ಎಂದು. ನನ್ನ ಕೈನನ್ನ ಕಾಲುನನ್ನ ತಲೆನನ್ನ ಮನಸ್ಸು ನನ್ನ ಬುದ್ಧಿ ಹೀಗೆ ಎಲ್ಲಕ್ಕೂ ನನ್ನಎಂದು ಸೇರಿಸುತ್ತೇವೆ . ನಮ್ಮಲಿರುವ ಒಂದು ಪುಸ್ತಕಕ್ಕೂ ನನ್ನ ಪುಸ್ತಕಎನ್ನುತ್ತೇವೆ. ನಾವು ಪುಸ್ತಕವನ್ನು ಹೊಂದಿದ್ದೇನೆ ಆದ್ದರಿಂದನನ್ನ ಪುಸ್ತಕಹಾಗೆಯೇ ಕೈ, ಕಾಲು, ಮೈ, ತಲೆ, ಮನಸ್ಸು, ಬುದ್ಧಿಗಳನ್ನು ನಾನು ಹೊಂದಿದ್ದೇನೆ ಆದ್ದರಿಂದ ನನ್ನಸೇರಿಸುತ್ತೇವೆ. ಹಾಗಾದರೆ ಇವನ್ನೆಲ್ಲ ಹೊಂದಿರುವ ಆ ನಾನು ಯಾರು ಎಂದರೆ, ಅದೇ ಆ ಬೃಹತ್ ಚೇತನದ ಒಂದು ಅಂಶ. ಅಂದರೆ ಆ ಬೃಹತ್ ಚೇತನವೇ ಇವನ್ನೆಲ್ಲ ಹೊಂದಿ ನನ್ನದು ನನ್ನದುಎಂದು ಹೇಳುತ್ತಾ ಅದರಿಂದ ಉಂಟಾಗಬಹುದಾದ ನೋವು ನಲಿವು ಆನಂದ ದುಃಖಗಳಂಥಾ ಅನುಭವಗಳನ್ನು ಅನುಭವಿಸುತ್ತಾ ಈ ಸೃಷ್ಟಿಯಲ್ಲೇ ಮಗ್ನವಾಗಿದೆ. ಆ ಬೃಹತ್ ಚೇತನವನ್ನು ನಮ್ಮ ಶಿವನಸಮುದ್ರದಲ್ಲಿ ಉಂಟಾಗುವ ವಿಧ್ಯುತ್ತಿಗೆ ಹೋಲಿಸಿದರೆ, ನಮ್ಮನ್ನು ನಾವು ನಮ್ಮ ಮನೆಗಳಲ್ಲಿ ಬೆಳಗುವ ಒಂದು ಸಣ್ಣ ಬಲ್ಬ್ ಹೋಲಿಸಿಕೊಳ್ಳಬಹುದು. ಇಲ್ಲಿ ಬೆಳಗುವುದು ಯಾವುದೆಂದರೆ ಅಲ್ಲಿನ ವಿಧ್ಯುತ್. ಆದರೆ ಅದು ಬೆಳಗಲು ಸಾಧನ ಈ ಸಣ್ಣ ಬಲ್ಬ್. ಇಡೀ ದೇಶದಲ್ಲಿ ಬೆಳಗುವ ಮತ್ತು ಕೆಲಸ ಮಾಡುವ ಎಲ್ಲ ವಿಧ್ಯುತ್ ಉಪಕರಣಗಳಿಗೂ ಆ ವಿಧ್ಯುತ್ತಿನ ಮೂಲ ಒಂದೇ. ಹಾಗೆಯೇ ಈ ಸೃಷ್ಟಿಯಲ್ಲಿ ನಾವೆಲ್ಲಾ ಒಂದೊಂದು ಬಲ್ಬಗಳು.ನಮ್ಮಲ್ಲಿ ಬೆಳಗುವ ಆ ಜ್ಯೋತಿಯೇ ಆ ಪರಮ ಚೇತನ.
ಇಲ್ಲಿ ನಾನು ಎನ್ನುವ ಭಾವ ಇದೆ. ಹಾಗಾಗಿ ನಾನು ನೋಡುತ್ತೇನೆ, ಮಾಡುತ್ತೇನೆ, ಓದುತ್ತೇನೆ, ಓಡುತ್ತೇನೆ…. ಇತ್ಯಾದಿಗಳ ಪ್ರಯೋಗ ಮಾಡುತ್ತೇವೆ. ಎಂದು ನಾನುಎನ್ನುವ ಭಾವವಿಲ್ಲವೋ ಅಂದು ನಾವೂ ಸಹ ಆ ಬೃಹತ್ ಚೇತನದ ರೀತಿಯೇ ಇಲ್ಲಿ ಆನಂದದಿಂದ ಮಗ್ನರಾಗಿರಬಹುದು. ಎರಡೆ೦ದುಕೊಂಡರೆ ಬೇಧ ಮತ್ತು ಅದಕ್ಕನ್ವಯಿತ ಭಾವ. ಒಂದೇ ಆದರೆ ಬೇಧವಿಲ್ಲ. ನವಿಲು ತನ್ನ ಮೈಮೇಲಿನ ಗರಿಗಳ ವಿವಿಧ ಬಣ್ಣಗಳನ್ನು ಕಂಡು ಆನಂದದಿಂದ ಮಗ್ನವಾಗಿ ಹೇಗೆ ನಾಟ್ಯ ಮಾಡುತ್ತದೋ ಹಾಗೆಯೇ ಆ ಪರಮಾತ್ಮ ತನ್ನಿಂದ ಆದ, ತಾನೇ ಇರುವ ಈ ಜಗತ್ತಿನ ಎಲ್ಲದರೊಳಗೂ ಇದ್ದು ಆ ಎಲ್ಲ ವಸ್ತುಗಳಲ್ಲಿ ಉಂಟಾಗುವ ಎಲ್ಲ ಭಾವಗಳನ್ನೂ ತಾನೇ ಅನುಭವಿಸುತ್ತಾ ಮತ್ತನಾಗಿ , ತನ್ಮಯನಾಗಿ ಆನಂದದಿಂದ ಇದ್ದಾನೆ ಎನ್ನುವುದೇ ಈ ಕಗ್ಗದ ಹೂರಣ.
ನಾನು ನಾನು ಅನುಭವಿಸುತ್ತಿದ್ದೇನೆ ಎಂದು ಭಾವಿಸದೆ, ಎಲ್ಲವೂ ಆ ಪರಮಾತ್ಮನಿಗೆ ಸೇರಿದ್ದು ಎನ್ನುವ ಭಾವ ತಳೆದಾಗ, ನಮ್ಮಲ್ಲಿರುವ ಅಹಂಕಾರವೂ ಕಡಿಮೆಯಾಗಬಹುದು ಅಲ್ಲವೇ ವಾಚಕರೆ?
ರಸಧಾರೆ - 078
ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |
ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ ||
ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |
ಮೆರೆಯುವನು ಪರಬೊಮ್ಮ ಮಂಕುತಿಮ್ಮ ||
ತಳೆಯುತ್ತ = ಧರಿಸುತ್ತ , ಪರಿಕಿಸುತೆ = ಪರೀಕ್ಷಿಸುತ್ತಾ , ಮುಕುರದಲಿ = ಕನ್ನಡಿಯಲಿ, ಸೊಗಸುಗಳ = ಅಂದ ಚೆಂದಗಳ, ಪರಿಯ = ವಿಧಗಳನ್ನು ವಿಲಸಿಪಂತೆ = ವಿಲಾಸದಿಂದ (ಆನಂದದಿಂದ)
ಒಂದು ಹೆಣ್ಣು ಹೇಗೆ ತೊಟ್ಟ ಒಡವೆಗಳನ್ನು ತೆಗೆದು ಮತ್ತೆ ತೊಟ್ಟು ಕನ್ನಡಿಯಲಿ ತನ್ನ ಅಂದ ಚೆಂದವನ್ನು ನೋಡಿಕೊಳ್ಳುತ್ತಾ ಮೈ ಮರೆಯುತ್ತಾಳೋ, ಹಾಗೆ ತಾನೆ ಸೃಜಿಸಿದ ಈ ಜಗತ್ತಿನಲ್ಲಿ ಬೇರೆ ಬೇರೆ ದೇಹಗಳನ್ನು ಧರಿಸಿ ಅದರಲ್ಲಿ ಸಿಗುವ ಹತ್ತು ಹಲವಾರು ಭಾವನೆಗಳ ಆನಂದದಿಂದ ಅನುಭವಿಸುತ್ತಾ ಮೈ ಮರೆತಿದ್ದಾನೋ ಏನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಸಾಮಾನ್ಯ ತಿಳುವಳಿಕೆ ಏನೆಂದರೆ ಎಲ್ಲ ಪ್ರಾಣಿಗಳೂ ಹುಟ್ಟುತ್ತವೆ, ಕೆಲಕಾಲ ಬದುಕಿ ಸಾಯುತ್ತವೆ ಎಂದು. ಆದರೆ ವಾಸ್ತವಿಕತೆಯೇ ಬೇರೆ ಅಲ್ಲವೇ? ಹುಟ್ಟು ಸಾವುಗಳೆಂಬುದು ಕೇವಲ ನಮ್ಮ ಪರಿಭಾಷೆಗಳಷ್ಟೇ ಎಂದು ಅನಿಸುತ್ತದೆ. ಇದನ್ನು ರೂಪಾಂತರವೆಂದರೆ ಹೆಚ್ಚು ಸೂಕ್ತವೆಂದು ಅನಿಸುತ್ತದೆ. ಬೇರೆ ಬೇರೆ ಮೂಲಗಳಿಂದ ಬಂದ ದೇಹ ಮನಸ್ಸು ಬುದ್ಧಿ ಆತ್ಮಗಳು ಒಂದಾದಾಗ ಒಂದು ಪ್ರಾಣಿಯ ಆವಿರ್ಭಾವ. ಗಿಡ ಮರಗಳಿಗೂ ಇದು ಅನ್ವಯಿಸುತ್ತದೆ. ಆ ಎಲ್ಲ ಮೂಲಗಳಿಗೂ ಮೂಲ ಒಂದೇ.
ಹಾಗಾಗಿ ಒಂದೇ ಬೃಹತ್ ಚೇತನ ತನ್ನ ಮೂಲದಲ್ಲಿ ಇದ್ದುಕೊಂಡು ತಾನು ಬೇರೆ ಬೇರೆ ರೂಪಗಳಿಗೆ ಹೊಂದುವಂತೆ ತನ್ನನ್ನು ತಾನು ತನ್ನ ಮೂಲ ಗುಣವನ್ನು ಬಿಡದೆ, ಬದಲಾಯಿಸಿಕೊಳ್ಳುತ್ತಾ. ರೂಪಾಂತರಗೊಳ್ಳುತ್ತಾ, ಎಲ್ಲ ರೂಪಗಳಲ್ಲೂ ತಾನಿದ್ದುಕೊಂಡು ಎಲ್ಲ ರೂಪಗಳಲ್ಲಿ ಆಗಬಹುದಾದ ಅನುಭವ ಆನಂದ ಮುಂತಾದ ಎಲ್ಲ ಭಾವಗಳನ್ನೂ ಅನುಭವಿಸುತ್ತಾ ಆನಂದದಿಂದ ತನ್ಮಯವಾಗಿದೆ. ಇದನ್ನು ಅರಿಯದೆ ನಾವು ನಾನು ಸುಖವಾಗಿದ್ದೇನೆನನಗೆ ದುಃಖವಾಗಿದೆ” “ನನಗೆ ನೋವಾಗುತ್ತದೆಎಂದು ಹೇಳುತ್ತಾ ಪ್ರಾಕೃತ ಭಾವದಿಂದ ಮಾತನಾಡುತ್ತೇವೆ.
ಸ ಏಕಾಕೀ ನ ರಮತಅವನು ಒಬ್ಬನೇ ಇದ್ದ. ಬೇಜಾರಾಯಿತೋ ಏನೋ ಈ ಜಗತ್ತನ್ನು ಸೃಷ್ಟಿಸಿದ. ತನ್ನ ಶಕ್ತಿಯಿಂದಲೇ ಇದನ್ನು ಸೃಷ್ಟಿಸಿದ. ಈ ಜಗತ್ತಿನಲ್ಲಿರುವ ಎಲ್ಲದರಲ್ಲೂ ಚೇತನಾ ಸ್ವರೂಪದಲ್ಲಿ ಸೇರಿ ಆಯಾಯಾ ವಸ್ತುಗಳನ್ನು ಅನುಭವಿಸುತ್ತಾ ಆನಂದದಿಂದ ಇದ್ದಾನೆ.
ಎಲ್ಲವೂ ಅವನಿಂದಲೇ. ಎಲ್ಲವೂ ಅವನೇ. ಎಲ್ಲವೂ ಅವನಿಗಾಗಿಯೇ ಎಂದು ನಾವು ಯೋಚಿಸಿದಾಗ, ನಾವೂ ಅವನ ಆ ಬೃಹತ್ ರೂಪದ ಒಂದು ಅಂಶವೆಂದುಕೊಂಡಾಗ, ವಸ್ತು, ವ್ಯಕ್ತಿ ವಿಷಯ ಸಂಬಂಧವಾದ ಭಾವನೆಗಳು ನಶಿಸಿ ಅವುಗಳ ಬಗ್ಗೆ ಒಂದು ನಿರ್ಲಿಪ್ತತೆ ಬೆಳೆದಾಗ, ಮನಸ್ಸು ನಿರ್ಮಲವಾಗಿ, ಅನಂದವಾಗಿರಬಹುದು.
ವಿಶ್ವ ಲೀಲೆ. ರಸಧಾರೆ - 079
ಬರೆವ ಹಲಗೆಯನೊಡೆದು ಬಾಲಕನು ತಾನದನು |
ಮರಳಿ ಜೋಡಿಪೆವೆನ್ನುತಾಯಾಸಗೊಳುತ ||
ಸರಿ ಚೌಕಗೈವಾಟದಲಿ ಜಗವ ಮರೆವಂತೆ |
ಪರಬೊಮ್ಮ ಸೃಷ್ಟಿಯಲಿ ಮಂಕುತಿಮ್ಮ ||
ಜೋಡಿಪೆವೆನ್ನುತಾಯಾಸಗೊಳುತ = ಜೋಡಿಸುವೆ ಎನ್ನುತ ಆಯಾಸಗೊಳುತ, ಬರೆವ ಹಲಗೆ = ಹಿಂದಿನ ಕಾಲದಲ್ಲಿ ಬರೆಯಲು ಉಪಯೋಗಿಸುತ್ತಿದ್ದ ಸ್ಲೇಟು.
ಹಿಂದಿನ ಕಾಲದಲ್ಲಿ ಮಕ್ಕಳು ಬಳಪದಿಂದ ಬರೆಯಲು ಉಪಯೋಗಿಸುತ್ತಿದ್ದ ಸ್ಲೇಟು ಒಂದು ರೀತಿಯ ಮೃದು ಕಲ್ಲಿನ ಹಲಗೆಯಾಗಿರುತ್ತಿತ್ತು. ಅದಕ್ಕೆ ಮೃದು ಮರದ ಚೌಕಟ್ಟಿರುತ್ತಿತ್ತು. ಅಕಸ್ಮಾತ್ ಅದು ಕೆಳಗೆ ಬಿದ್ದು ಒಡೆದು ಹೋದರೆ, ಮತ್ತೆ ಅಂಟಿಸಲಾಗುತ್ತಿರಲಿಲ್ಲ. ಹಾಗೆ ಒಡೆದ ಹಲಗೆಯನ್ನು ಅಂಟಿಸಲು ಪ್ರಯತ್ನಪಟ್ಟು ಆಯಾಸಪಡುವ ಮಗುವಿನಂತೆ, ಆ ಪರಮಾತ್ಮನೂ ಸಹ ಒಂದೇ ಆಗಿದ್ದ ತಾನು ಹಲವಾಗಿ, ಅದನ್ನೆಲ್ಲ ಮತ್ತೆ ಒಟ್ಟಿಗೆ ಅಂಟಿಸಲು ಮಾಡುವ ಪ್ರಯತ್ನದಲ್ಲಿ ತಲ್ಲೀನನಾಗಿದ್ದಾನೋ ಎಂದು ಒಂದು ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
ಒಂದೇ ಆಗಿದ್ದ ಆ ಪರಮ ವಸ್ತುವು ತನ್ನ ಸಂಕಲ್ಪದಿಂದಲೇ ಸಿಡಿದು ಬಹಳವಾಗಿ, ಆಕಾಶ, ಆಕಾಶ ಗಂಗೆಗಳು, ನಕ್ಷತ್ರ ಪುಂಜಗಳು, ಸೌರವ್ಯೂಹಗಳು ಗಾಳಿ ನೀರು, ಭೂಮಿ, ಇತರೆ ಗ್ರಹಗಳು, ಪ್ರತಿಗ್ರಹಗಳ ಮೇಲಿನ ಕೋಟ್ಯಾಂತರ ವೈವಿಧ್ಯತೆಗಳು,ಹೀಗೆ ನಮಗೆ ಕಾಣುವ, ನಾವು ಅನುಭವಿಸಬಹುದಾದ, ಊಹಿಸಬಹುದಾದ ಮತ್ತು ಊಹಿಸಲೂ ಅಸಾಧ್ಯವಾದ ಇಡೀ ಜಗತ್ತಾಗಿ ಮಾಡಿ, ತಾನೇ ಅದರೊಳಗೆ ಚೈತನ್ಯ ರೂಪದಲ್ಲಿ ಪ್ರಕಟಗೊಂಡು ಕ್ಷಣ ಕ್ಷಣಕ್ಕೂ ಸೃಷ್ಟಿ ಸ್ಥಿತಿ ಲಯಗಳೆಂಬ ಪ್ರಕ್ರಿಯೆಯನ್ನಿಟ್ಟು ಎಲ್ಲಕ್ಕೂ ಒಂದು ನಿಗಧಿತ ಸಮಯವನ್ನಿತ್ತು ಇಡೀ ಜಗತ್ತೇ ನಮಗೆ ಬೇರೆ ಬೇರೆಯಾಗಿ ಕಾಣುವಂತೆ ಇಟ್ಟಿದ್ದಾನೆ. ಬಾಲಕನು ಒಡೆದ ಬರೆಯುವ ಹಲಗೆಯನ್ನು ಜೋಡಿಸಲು ಪ್ರಯತ್ನಪಡುವುದರಲ್ಲಿ ತಲ್ಲೀನನಾದಂತೆ, ಬೇರೆ ಬೇರೆಯಾಗಿರುವ ಅಥವಾ ಬೇರೆಬೇರೆಯಾಗಿ ಕಾಣುವ, ಒಡೆದ ಹಲಗೆಯಂತೆ ಇರುವ ಈ ಜಗತ್ತಿನ ಹಲಗೆಯನ್ನು, ತಾನೂ ಜೋಡಿಸಲು ಪ್ರಯತ್ನಪಡುತ್ತಾ ತನ್ಮಯನಾಗಿದ್ದಾನೋ, ಈ ಪರಮಾತ್ಮ ಎಂದು ಒಂದು ಸಂದೇಹವನ್ನು ವ್ಯಕ್ತಪಡಿಸುತ್ತಾರೆ ಶ್ರೀ ಡಿ.ವಿ.ಜಿ. ಯವರು.
ಅವನ ಸೃಷ್ಟಿಯಲ್ಲಿ ಒಡಕು ಇಲ್ಲ. ಎಲ್ಲವೂ ಸಮರ್ಪಕವಾಗೆ ಇದೆ. ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ, ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆಎನ್ನುತ್ತದೆ ಈಶಾವಾಸ್ಯೋಪನಿಷತ್ತಿನ ಶಾಂತಿ ಮಂತ್ರ. ಪರಮಾತ್ಮ ಸೃಷ್ಟಿಯ ಪೂರ್ಣತ್ವವನ್ನು ಸಾರಿ ಸಾರಿ ಹೇಳುತ್ತದೆ. ಆದರೆ ಒಡೆದಿರುವುದು ಏನು. ನಾವುಗಳು ಅದನ್ನು ನೋಡುವ ಪರಿ ಅಥವಾ ಬಗೆ. ಮಾನವನ ಅಲ್ಪ ಬುಧ್ಧಿಯಿಂದ ಅತೀ ಸುಂದರವಾದ ಈ ಪ್ರಪಂಚವನ್ನು ಪ್ರಗತಿಯ ಹೆಸರಿನಲ್ಲಿ ಜಾತಿ, ಮತ, ಭಾಷೆ, ಧರ್ಮಗಳ ಹೆಸರಿನಲ್ಲಿ ಒಡೆದು ಒಡೆದು ಚೂರು ಚೂರು ಮಾಡಿದ್ದಾನೆ. ಎಲ್ಲಿ ನೋಡಿದರೂ ಜಗಳ, ಕಿತ್ತಾಟ, ದುರ್ಮಾರ್ಗ, ಇವೆಲ್ಲವುಗಳಿ0 ಚೂರಾಗಿದೆ ಈ ಜಗತ್ತು.
ಇನ್ನು ಮನುಷ್ಯನ ಅಂತರ್ಯವನ್ನು ನೋಡಿದರೆ, ಸಂಶಯಗಳಿಂದ, ಪಕ್ಷಪಾತದಿಂದ, ದ್ವೇಷದಿಂದ, ಅಹಂಕಾರದಿಂದ ದುರಾಸೆಯಿಂದ ಇದೂ ಸಹ ಇಂದು ಚೂರು ಚೂರಾಗಿದೆ. ಮನುಷ್ಯನ ಮನಸ್ಸಿನಲ್ಲಿ ಒಂದು ಸುಮುಖವಾದ, ಸರ್ವ ಹಿತ ಹೇತುವಾದ ಆಲೋಚನೆ ಇಲ್ಲವೇ ಇಲ್ಲ. ಕ್ಷಣಂ ಚಿತ್ತಂ, ಕ್ಷಣಂ ಪಿತ್ತಂಎನ್ನುವಂತೆ ಸ್ಥಿಮಿತವೆ ಇಲ್ಲದೆ, ಅವನ ಶಾಂತಿಯೂ ಭಗ್ನವಾಗಿದೆ. ಇಂತಹ ಅಶಾಂತ ಮನಸ್ಸು ಪರರ ಶಾಂತಿಯನ್ನೂ ನಿರಂತರ ಕದಡುತ್ತಲೇ ಇರುತ್ತದೆ. ಹಾಗಾಗಿ ಶಾಂತಿಯ ಭಗ್ನ.
ಆ ಪರಮ ಚೇತನ ಹಲವಾರು ಬಾರಿ ತನ್ನ ಇರವನ್ನು ಸೂಕ್ಷ್ಮ ರೂಪದಲಿ ತೋರಿ, ಅರಿತುಕೊಳ್ಳುವ ಸಂದರ್ಭಗಳನ್ನು ತಂದೊಡ್ಡಿ, ಮಾನವನಿಗೆ ಅರಿತುಕೊಳ್ಳಲು ಯೋಗ್ಯ ಅವಕಾಶವನ್ನು ನೀಡಿದೆ, ನೀಡುತ್ತಿದೆ ಮತ್ತು ನೀಡುತ್ತಲೇ ಇರುತ್ತದೆ. ಕೇವಲ ಮೂರ್ಖತನದಿಂದ ಮಾನವ ಕಲಿಯುವುದಿಲ್ಲ. ಒಡೆದ ಈ ಜಗತ್ತಿನ ಜಾತಿ ಮತ ಧರ್ಮ ಭಾಷೆಗಳೆಂಬ ಚೂರುಗಳನ್ನೆಲ್ಲ ಒಂದಾಗಿಸಿ ಈ ಜಗತ್ತು ನಮಗೆ ಪರಮಾತ್ಮ ಕೊಟ್ಟ ಒಂದು ಪರಿಪೂರ್ಣ ತಾಣ, ಇದನ್ನು ಭಾಗ್ನಮಾಡಿದರೆ ನಮಗೆ ಉಳಿಗಾಲವಿಲ್ಲ ಎಂದು ಅರಿತು ಬಾಳಿದರೆ ಸುಖ ಇಲ್ಲದಿದ್ದರೆ ನಾಶ.
ಬನ್ನಿ ನಾವೂ ಸಹ ಒಡೆದ ಈ ಭಾಗಗಳನ್ನು ಅಂಟಿಸಲು ಪ್ರಯತ್ನ ಪಡೋಣ.
ವಿಶ್ವ ಲೀಲೆ. ರಸಧಾರೆ - 080
ಚೀಟಿಯಾಟದ ಬಿನದಿ ತಾನೋರ್ವನಿರ್ವರವೊಲ್ |
ಆಟವಾಡುತಲಿ ತನ್ನೊರ್ತನವ ಮರೆವಾ ||
ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ |
ಪಾಟಿಯಲಿ ಮರೆತಿಹನು.- ಮಂಕುತಿಮ್ಮ ||
ಚೀಟಿಯಾಟ = ಇಸ್ಪೀಟಾಟ, ಬಿನದಿ = ತರಹೆ, ತಾನೋರ್ವ = ತಾನು ಒಬ್ಬನೇ, ಇರ್ವರೋಲ್ = ಇಬ್ಬರಂತೆ, ತನ್ನೊರ್ತನವ = ತನ್ನ ಒಂಟಿತನವ, ಮರೆವಾ ಮಾಟದಲಿ = ಮರೆವ ರೀತಿಯಲಿ, ಬೊಮ್ಮನುಂ = ಬ್ರಹ್ಮನು, ತನ್ನೇಕತೆಯ = ಒಂಟಿಯಾಗಿ, ಜೀವ ಪಾಟಿಯಲಿ = ಜೀವರಾಶಿಗಳ ಮಧ್ಯೆ
ನಮ್ಮ ಅಪ್ಪನ ಕಾಲಕ್ಕೆ ಹಲ ದೊಡ್ಡವರು ಇಸ್ಪೀಟಿನ ಒಂದು ಬಗೆಯ ಆಟವಾಡುತ್ತಿದ್ದರು. ಅದಕ್ಕೆ ಪೇಶೆನ್ಸ್ ಅಥವಾ ಸಾಲಿಟೇರ್ ಎಂದು ಕರೆಯುತ್ತಿದ್ದರು. ಒಬ್ಬರೇ ಕುಳಿತು ಆಡುವಾಟ. ಇನ್ನೊಂದು ರಮ್ಮಿ. ಅದರಲ್ಲಿ ಒಬ್ಬರಿಗಿಂತ ಹೆಚ್ಚುಜನ ಆಡುವುದು. ಆದರೆ ಕೆಲವರು ವಯಸ್ಸಾದವರು, ಕಾಲಯಾಪನೆಗೆ ಎರಡೂ ಕಡೆಯ ಆಟವನ್ನು ಒಬ್ಬರೇ ಆಡುತ್ತಿದ್ದರು. ಹಾಗೆ ಆಡುವಾಗ ಒಬ್ಬರೇ ಮೈ ಮರೆಯುತ್ತಿದ್ದರು. ಆ ರೀತಿ ತಾನೇ ಸೃಷ್ಟಿಸಿದ ಈ ಜಗತ್ತಿನಲ್ಲಿ ತಾನು ಮತ್ತೆಲ್ಲದರೊಳಗೆ ಸೇರಿ ತಾನೂ ಈ ಜಗತ್ತನ್ನು ಅನುಭವಿಸುತ್ತ ಮೈ ಮರೆತ್ತಿದ್ದಾನೋ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ಹಾಗೆ ತಾನೇ ಜಗವೆಲ್ಲ ಸೃಷ್ಟಿಸಿ, ಕೋಟ್ಯಾಂತರ ತುಣಕುಗಳನ್ನು ಇಸ್ಪೀಟಿನ ಎಲೆಗಳಂತೆ ಇಡೀ ನಭೋ ಮಂಡಲಕ್ಕೆ ಹರಡಿ ತಾನೂ ಇದರೊಳಗೆ ಚೈತನ್ಯವಾಗಿ ಸೇರಿ ಒಂದು ಲೀಲಾ ವಿನೋದವನ್ನು ಆಡುತ್ತಾ ತನ್ಮಯನಾಗಿ ಮರೆತು ಮೆರೆಯುತ್ತಿದ್ದಾನೆ ಎಂದು ಅಣಕವಾಡುತ್ತಾರೆ ಮಾನ್ಯ ಗುಂಡಪ್ಪನವರು. ಒಳಗೂ ಹೊರಗೂ ಅವನೇ, ಆ ಚೈತನ್ಯವೇ ಇದೇ. ಭಾವಮುಲೋನ ಬಾಹ್ಯಮುನಂದುನುಬಾಹ್ಯದಲ್ಲೂ ಭಾವದಲ್ಲೂ ಆ ಪರಮಶಕ್ತಿ ಸ್ವರೂಪನಾದ ಪರಮಾತ್ಮನೇ ಎನ್ನುತ್ತಾರೆ ಮಾನ್ಯ ತಾಳ್ಳಪಾಕ ಅನ್ನಮಾಚಾರ್ಯರು.
ನಾರಾಯಣೋಪನಿಷತ್ತಿನಲ್ಲಿ, ” ಅನತರ್ಬಹಿಸ್ಚ ತತ್ ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ ಎಂದು ಒಳಗೂ ಹೊರಗೂ ಇರುವ ಆ ಪರಮಾತ್ಮನ ಸ್ವರೂಪದ ಉಲ್ಲೇಖ ಇದೆ. ಆ ಪರಮಾತ್ಮನಿಗೆ ಒಂದು ದೇಹವಿಲ್ಲ. ಎಲ್ಲ ದೇಹಗಳೂ ಅವನೇ ಮತ್ತು ಅವನದೇ. ಅವನಿಲ್ಲದೆ ಈ ದೇಹಗಳೆಲ್ಲ ಇಲ್ಲವೇ ಇಲ್ಲ. ಏಕೆಂದರೆ ಅವನೇ ದೇಹ ಅವನೇ ಮನಸ್ಸು ಅವನೇ ಬುದ್ಧಿ ಮತ್ತು ಅವನೇ ಆತ್ಮ. ನಮಗಾಗುವ ನೋವು, ನಲಿವು, ದುಃಖ, ಸಂತೋಷ, ಪ್ರೀತಿ, ಪ್ರೇಮ ಎಲ್ಲವನ್ನೂ ಅನುಭವಿಸುವುದು ನಮ್ಮೊಳಗಿನ ಆ ಪರಮ ಚೇತನವೇ ಅಲ್ಲವೇ.
ಅಯ್ಯೋ ಎಲ್ಲವೂ ಅವರೇ ಆದರೆ ನಾವು ಯಾರು? ಎಂದರೆ, ನಾವು ಕೇವಲ ನಾವು ಅಥವಾ ನಾನುಎನ್ನುವ ಭಾವ ಮಾತ್ರ ನಾವಷ್ಟೇ. ಇದನ್ನು ಅಹಂಕಾರವೆನ್ನುತ್ತಾರೆ. ಅದು ಇರುವ ತನಕ ನಮಗೂ ಎಲ್ಲವೂ ಬೇರೆ ಬೇರೆಯಾಗಿ ಕಾಣುತ್ತದೆ. ಎಲ್ಲವೂ ಬೇರೆ ಬೇರೆ ರೂಪಗಳು ಕಾಣುತ್ತವೆ. ಅದು ನಶಿಸಿದರೆ ಎಲ್ಲವೂ, ಎಲ್ಲರಲ್ಲೂ, ಎಲ್ಲದರಲ್ಲೂ
ಆ ಪರಮಾತ್ಮನೇ ಕಾಣುತ್ತಾನೆ. ಹಾಗಾದರೆ ನಾವು ಮಾಡುವುದನ್ನು ಸರಿತಪ್ಪುಧರ್ಮಅಧರ್ಮಎಂದು ಏಕೆ ಹೇಳಬೇಕು? ಎಲ್ಲವೂ ಆ ಪರಮಾತ್ಮನೇ ಆಗಿ ಮತ್ತು ಎಲ್ಲವನ್ನೂ ಅವನೇ ಮಾಡುತ್ತಾ ಅನುಭವಿಸುತ್ತಾ ತನ್ಮಯನಾಗಿದ್ದರೆ ನಾವು ಮಾಡುವುದು ಏನು ಇಲ್ಲವಲ್ಲಎಂದರೆ ನಾವು ಲೌಕಿಕವಾಗಿ ಕಟ್ಟಿಕೊಂಡ ಸಮಾಜದ ಒಳಿತಿಗೆ ಒಂದು ಸುವ್ಯವಸ್ಥಿತ ಬದುಕಿಗೆ ಈ ಕಟ್ಟು ಪಾಡುಗಳು ಅವಶ್ಯಕ. ಲೌಕಿಕವನ್ನು ಬಿಟ್ಟು ಅಹಂಕಾರವನ್ನು ಬಿಟ್ಟರೆ, ಯಾವ ಕಟ್ಟುಪಾಡಿಗೂ ಒಳಪಡದೆ ಮುಕ್ತರಾಗಿಬಿಡಬಹುದು.
ಆದ್ಯಾತ್ಮಿಕ ಬೆಳವಣಿಗೆಯ ಅಂತಿಮಹಂತದಲ್ಲಿ ಬರುವ ಭಾವವೇ ಇದು. ಇಂತಹ ಭಾವನೆ ಬಂದರೆ ಅವರನ್ನು ದೇವಮಾನವರೆನ್ನುತ್ತಾರೆ.
ವಾಚಕರೆ ಬನ್ನಿ ನಾವೂ ಅಹಂಕಾರವನ್ನು ಬಿಡುವ, ಬಿಟ್ಟು ಎಲ್ಲೆಡೆಯಲ್ಲೂ ಆ ಪರಮಾತ್ಮನ ಲೀಲೆಯನ್ನು ನೋಡಿ ಆನಂದಿಸುವ.                                                           

 

ಕಾಮೆಂಟ್‌ಗಳಿಲ್ಲ: