ಹೆಚ್.ಎಸ್.ವೆಂಕಟೇಶಮೂರ್ತಿ ಅವರ ಭಾವಗೀತೆಗಳು - Lyrics by H.S.Venkatesh murthy

ಪ್ರೀತಿ ಕೊಟ್ಟ ರಾಧೆಗೆ... ಮಾತು ಕೊಟ್ಟ ಮಾಧವ 
ಪ್ರೀತಿ ಕೊಟ್ಟ ರಾಧೆಗೆ
ಮಾತು ಕೊಟ್ಟ ಮಾಧವ |
ತನ್ನನಿತ್ತ ಕೊಳಲಿಗೆ
ರಾಗ ತೆತ್ತ ಮಾಧವ ||

ಗಂಧ ಕೊಟ್ಟ ಹೆಣ್ಣಿಗೆ
ಅಂದ ಕೊಟ್ಟ ಮಾಧವ |
ಅನ್ನ ಕೊಟ್ಟ ಭಕ್ತಗೆ
ಹೊನ್ನ ಕೊಟ್ಟ ಮಾಧವ ||

ಹಾಲು ಕೊಟ್ಟ ವಿಧುರಗೆ
ಬಾಳು ಕೊಟ್ಟ ಮಾಧವ |
ದೇಹ ಕೊಟ್ಟ ಮಣ್ಣಿಗೆ
ಜೀವ ಕೊಟ್ಟ ಮಾಧವ ||  

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

ನೀನೆ ನೋಡು ಬೆಣ್ಣೆಗಡಿಗೆ ಸೂರಿನ ನೆಲುವಲ್ಲಿ
ಹೇಗೆ ತಾನೇ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ ||

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ ||

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯಶಾಮನ ಶಾಮನ
ಸೂರದಾಸ ಪ್ರಿಯಶಾಮನ ಶಾಮನ ಮುತ್ತಿಟ್ಟು ನಕ್ಕಳು ಗೋಪಿ ||


ಲೋಕದ ಕಣ್ಣಿಗೆ ರಾಧೆಯು ಕೂಡ...

ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು.
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು.

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ,
ಯಾರೋ ಮೋಹನ, ಯಾವ ರಾಧೆಗೋ,
ಪಡುತಿರುವನು ಪರಿತಾಪ.

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ,
ಭಾವಿಸಿ ಸೇರಲು ಬೃಂದಾವನವ,
ರಾಧೆ ತೋರುವಳು ದಾರಿ.

ಮಹಾಪ್ರವಾಹ, ತಡೆಯುವರಿಲ್ಲ,
ಪಾತ್ರವಿರದ ತೊರೆ ಪ್ರೀತಿ.
ತೊರೆದರು ತನ್ನ, ತೊರೆಯದು ಪ್ರಿಯನ,
ರಾಧೆಯ ಪ್ರೀತಿಯ ರೀತಿ, ಇದು
ರಾಧೆಯ ಪ್ರೀತಿಯ ರೀತಿ. 

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ||

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ 
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ

ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ 
ಮಣ್ಣ ಮುತ್ತು ದೊರೆಯಿತೇನು ನೀಲಿಬಾನಿಗೆ 

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ 
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ....

ಇಷ್ಟು ಕಾಲ ಒಟ್ಟಿಗಿದ್ದೂ..... 

 

ಹುಚ್ಚು ಖೋಡಿ ಮನಸು !!

ಹುಚ್ಚು ಖೋಡಿ ಮನಸು 
ಅದು ಹದಿನಾರರ ವಯಸು 

ಮಾತು ಮಾತಿಗೇಕೋ ನಗು 
ಮರುಘಳಿಗೇ ಮೌನ,
ಕನ್ನಡಿ ಮುಂದಷ್ಟು ಹೊತ್ತು 
ಬರೆಯದಿರುವ ಕವನ ||

ಸೆರಗು ತೀಡಿದಷ್ಟು ಸುಕ್ಕು 
ಹಠ ಮಾಡುವ ಕೂದಲು 
ನಿರಿ ಏಕೋ ಸರಿಯಾಗದು 
ಮತ್ತೆ ಒಳಗೆ ಹೋದಳು ||

ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ ರಂಗು ಹೆಚ್ಚೇ 
ನಗುತ ಅವಳ ಛೇಡಿಸುತಿದೆ 
ಗಲ್ಲದ ಕರಿ ಮಚ್ಚೆ ||

ಬರಿ ಹಸಿರು ಬರಿ ನೋವು 
ಎದೆಯೊಳೆಷ್ಟು ಹೆಸರು 
ಯಾರ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು ||

 

ತೂಗುಮಂಚ

ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು |
ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ 
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು ||

ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ 
ತುಟಿಯು ತೀಡಿ ಬೆಂಕಿ ಹೊತ್ತಿ ಹಮ್ಮನುಸಿರ ಬಿಟ್ಟಳು |
ಸೆರಗು ಜಾರುತಿರಲು ಕೆಳಗೆ ಬಾನುಭೂಮಿ ಮೇಲು ಕೆಳಗೆ 
ಅದುರುತಿರುವ ಅಧರಗಳಿಗೆ ಬೆಳ್ಳಿಹಾಲ ಬಟ್ಟಲು ||

ಚಾಚುತಿರಲು ಅರಳಿಗರಳು ಯಮುನೆಯೆಡೆಗೆ ಚಂದ್ರ ಬರಲು 
ಮೇಲೆ ತಾರೆಗಣ್ಣ ಹೊರಳು ಹಾಯಿದೋಣಿ ತೆಲಿತೋ 
ತನಗೆ ತಾನೇ ತೂಗುಮಂಚ ತಾಗುತಿತ್ತು ದೂರದಂಚ 
ತೆಗೆಯೋ ಗರುಡ ನಿನ್ನ ಚುಂಚ ಹಾಲುಗಡಿಗೆ ಹೇಳಿತು ||

                               
- ಹೆಚ್. ಎಸ್. ವೆಂಕಟೇಶ ಮೂರ್ತಿ


2 ಕಾಮೆಂಟ್‌ಗಳು:

Lakshmi ಹೇಳಿದರು...

ಎಲ್ಲಿರುವೇ ಘನಶಾಮ ರಾಧೆಯ ತೋರಿದು ಕವನ ಪೋಸ್ಟ್ ಮಡಿ plz

ಅನಾಮಧೇಯ ಹೇಳಿದರು...

ಮನವು ಹಗುರಾಗಿ ಸುವ ಶಕ್ತಿ ಅವರ ಕಾವ್ಯದಲ್ಲಿದೆ