ಮಂಕುತಿಮ್ಮನ ಕಗ್ಗ (41-60)

ರಸಧಾರೆ - 041
ಕದಕಗಳಿಯನು ಬಿಗಿದು ಬೊಮ್ಮ ಗುಡಿಯಲಿರಲಿ
ಅದರ ಕೀಲ್ಕುಂಚಿಕೆಯ ಹೊರಕೆಸೆಯೇ ಸಾಕು
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು
ಒದವಿಪರು ದಿಟದರಿವ ಮಂಕುತಿಮ್ಮ?
ಕದ ಬಾಗಿಲು, ಅಗಳಿ = ಚಿಲಕ, ಕೀಲ್ಕುಂಚಿಕೆ = ಬೀಗದ ಕೈ, ಪದವಾಕ್ಯವಿದರು = ಪದ, ವಾಕ್ಯ, ವ್ಯಾಕರಣ ಇತ್ಯಾದಿಗಳನ್ನರಿತ ಪಂಡಿತರು, ವಾದ = ಚರ್ಚೆ, ಗಡಣೆ = ಆಡಂಬರ, ಒದವಿಪರು = ಸಹಾಯಮಾಡುತ್ತಾರೆ, ದಿಟದರಿವ = ಸತ್ಯವನ್ನು ಅರಿಯುವ.
ಕದಕೆ + ಅಗಳಿಯನು = ಕದಕಗಳಿಯನು, ಪದ + ವಾಕ್ಯ + ವಿದರು + ಆಗ = ಪದವಾಕ್ಯವಿದರಾಗ,
ಆ ದೇವರನ್ನು ಗುಡಿಯಲಿ ಬಿಟ್ಟು, ಬಾಗಿಲನ್ನು ಹಾಕಿ, ಚಿಲಕ ಹಾಕಿ, ಬೀಗ ಜಡಿದು ಬೀಗದ ಕೈಯನ್ನು ಎಸೆದುಬಿಟ್ಟರೆ, ಆಗ ಪಂಡಿತರು ಮತ್ತು ವಿಧ್ವಾಂಸರು ಆ ದೇವರನ್ನು ಕುರಿತ, ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುವ ವ್ಯರ್ಥವಾದವನ್ನು ಬಿಟ್ಟು, ಆ ದೇವರನ್ನು ಕುರಿತಾದ ಸತ್ಯವನ್ನು ಅರಿಯಲು ಸಹಾಯಮಾಡುವರು ಎಂಬುದು ಈ ಕಗ್ಗದ ವಾಚ್ಯಾರ್ಥವು.
ಸಾಮನ್ಯವಾಗಿ ಎಲ್ಲರೂ ದೇವಸ್ಥಾನಗಳಿಗೆ ಹೋಗುತ್ತಾರೆ. ಅದು ಮಂದಿರಗಳಾಗಿರಬಹುದು, ಮಸೀದಿಗಳಾಗಿರಬಹುದು ಇಗರ್ಜಿಗಳಾಗಿರಬಹುದು, ಅಥವಾ ಬೇರೆ ಯಾವುದೇ ಮತಕ್ಕೆ ಸೇರಿದ ಪೂಜಾ ಮಂದಿರವಾಗಿರಬಹುದು. ಕೆಲವರು ಪ್ರತಿನಿತ್ಯ ಹೋಗುತ್ತಾರೆ. ಕೆಲವರು ವಾರಕ್ಕೊಮ್ಮೆ ಹೋಗುತ್ತಾರೆ. ಕೆಲವರು ವಿಶೇಷದಿನಗಳಲ್ಲಿ ಹೋಗುತ್ತಾರೆ, ಕೆಲವರು ಒಂದು ವಾರದಲ್ಲಿ ಬೇರೆ ಬೇರೆ ದಿನಗಳಲ್ಲಿ, ಬೇರೆ ಬೇರೆ ದೇವಸ್ಥಾನಗಳಿಗೆ ಹೋಗುತ್ತಾರೆ, ಕೆಲವರು ಹೋಗುವುದೇ ಇಲ್ಲ. ಕೆಲವರು ಭಕ್ತಿಯಿಂದ ಹೋಗುತ್ತಾರೆ, ಕೆಲವರು ಶ್ರದ್ಧೆಯಿಂದ ಹೋಗುತ್ತಾರೆ, ಕೆಲವರು ಕೇವಲ ಅಭ್ಯಾಸಬಲದಿಂದ ಹೋಗುತ್ತಾರೆ, ಮತ್ತೆ ಕೆಲವರು ಕಾಟಾಚಾರಕ್ಕೆ ಹೋಗುತ್ತಾರೆ. ಹೇಗೆ ದೇವಾಲಯಗಳಿಗೆ ಹೋಗುವುದು ಸರಿಯೇ ತಪ್ಪೇ? ಅದು ಅವರವರ ಅಭಿಮತಕ್ಕೆ ಬಿಟ್ಟದ್ದು. ಆದರೆ ಹೀಗೆ ದೇವಸ್ಥಾನಕ್ಕೆ ಹೋಗುವುದು ಅಧ್ಯಾತ್ಮ ಪ್ರಯಾಣದ ಒಂದು ಹಂತ. ಮೂರ್ತಿ ಪೂಜೆ ಒಂದು ಹಂತ. ಅದೇ ಪರಿಪೂರ್ಣವೂ ಅಲ್ಲ ಮತ್ತು ಪರಮಾರ್ಥವೂ ಅಲ್ಲ.
ಅದು ಒಂದು ಹಂತವೆಂದರೆ ಅದಕ್ಕಿಂತ ಮೇಲಿನ ಸ್ಥರಕ್ಕೆ ಹೋಗುವುದು ಸರಿಯಲ್ಲವೇ? ಎಂದರೆ, ಹೌದು ಅದೇ ಸರಿಯಾದ ಅಧ್ಯಾತ್ಮ ಚಿಂತನೆ. ಯಾವುದೋ ಒಂದೇ ಒಂದು ಗುಣವಿರುವ ವಸ್ತುವಿನ ಗುಣವನ್ನು ಆ ವಸ್ತುವಿನಲ್ಲೇ ನೋಡುವುದು ಸಹಜ. ಅನ್ಯ ಮಾರ್ಗವಿಲ್ಲ. ಆದರೆ ಅನಂತ ಕಲ್ಯಾಣ ಗುಣಗಳನ್ನು ಹೊಂದಿರುವ ಆ ಪರಮಾತ್ಮ, ಸಕಲ ಚರಾಚರಗಳ ಒಡೆಯ, ಎಲ್ಲಕ್ಕೂ ಮೂಲ ಮತ್ತು ಗಮ್ಯನಾದ ಆ ಪರಮಾತ್ಮ, ಎಲ್ಲ ಜೀವಿಗಳಲ್ಲೂ ಚೇತನ ಸ್ವರೂಪನಾಗಿ ಇರುವಂತಾ ಪರಮಾತ್ಮ, ಒಂದು ಭೃಹತ್ ವ್ಯಾಪಕತ್ವವನ್ನು ಹೊಂದಿರುವ ಆ ಪರಮಾತ್ಮನನ್ನು ಒಂದು ಚಿತ್ರಪಟದಲ್ಲೋ ಅಥವಾ ಒಂದು ವಿಗ್ರಹದಲ್ಲೋ ಅಥವಾ ಒಂದು ದೇವಸ್ಥಾನದಲ್ಲೋ ಸೀಮಿತಗೊಳಿಸಲು ಸಾಧ್ಯವೇ?. ಹಾಗೆ ಮಾಡಿದರೆ, ನಮ್ಮ ದೃಷ್ಟಿಕೋಣವೂ ಕಿರಿದಾಗಿ ಸತ್ಯದ ಅರಿವು ಸಂಪೂರ್ಣವಾಗುವುದಿಲ್ಲ. ಹಾಗಾಗಿ ಆ ದೇವರನ್ನು ಆ ದೇವಸ್ಥಾನದಲ್ಲಿ ಇರಿಸಿ, ಬಾಗಿಲಿಗೆ ಬೀಗಹಾಗಿ, ಕೀಲಿಯನ್ನು ಬಿಸುಟು, ಎಂದರೆ ಆ ದೇವರನ್ನು ಆ ದೇವಸ್ತಾನದಲ್ಲಿರುವ ವಿಗ್ರಹಕ್ಕೆ ಸೀಮಿತಗೊಳಿಸದೆ, ಪರಮಾತ್ಮನ ಒಂದು ವಿಸ್ತಾರವಾದ ಚಿತ್ರವನ್ನು ಕಾಣಬೇಕು ಎನ್ನುವುದು ಈ ಕಗ್ಗದ ಗೂಡಾರ್ಥ.
ಎಲ್ಲಿಯತನಕ ಸೀಮಿತ ವಿಚಾರಗಳು ಇರುತ್ತವೆಯೋ, ಪಂಡಿತರು ಅದನ್ನೇ ಮಂಡಿಸುತ್ತಾ, ವಿಧ್ವಾಂಸರು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತಾ ಜನರನ್ನು ತಪ್ಪುದಾರಿಗೆ ಕೊಂಡೊಯ್ಯುವ ವ್ಯರ್ಥವಾದವನ್ನು ಮಾಡುತ್ತಾರೆ, ಎಂದು ಹೇಳುತ್ತಾ, ಎಲ್ಲರೂ ಪರಮಾತ್ಮನ ಒಂದು ವಿಶಾಲ ರೂಪವನ್ನು ನೋಡಲು ಪ್ರಯತ್ನಿಸಿದರೆ, ಆಗ ಆ ವಿದ್ವಾಂಸರೂ ಸಹ ವ್ಯರ್ಥವಾದವನ್ನು ಬಿಟ್ಟು ಸತ್ಯದ ಅರಿವುನ್ತಾಗಿಸಲು ಸಹಾಯ ಮಾಡಬಹುದು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮೂಲಕ.
ವಿಗ್ರಹಾರಾಧನೆ, ದೇವಸ್ತಾನಕ್ಕೆ ಹೋಗುವುದು,ಸರಿಯಲ್ಲ ಎಂದು ಅಲ್ಲ. ಆದರೆ ಅದೇ ಪರಮಾರ್ಥವಲ್ಲ. ಅದಕ್ಕಿಂತ ಬೆಳೆದು ವಿಸ್ತಾರವಾದ ರೂಪ ಮತ್ತು ಗಹನವಾದ ತತ್ವ ಮತ್ತು ಸತ್ಯವನ್ನು ಅರಿತುಕೊಳ್ಳುವುದು ಎಲ್ಲ ಅಧ್ಯಾತ್ಮಾಧ್ಯಾಯಿಗಳ ಕರ್ತವ್ಯ. ಮಹಡಿಯಮೇಲೆ ಹೋಗಲು ಮೆಟ್ಟಿಲುಗಳು ಬೇಕು. ಮೆಟ್ಟಿಲೇ ಮಹಡಿಯಾಗಲು ಸಾಧ್ಯವೇ? ನಮ್ಮ ಆಚಾರ ವಿಚಾರ ಮತ್ತು ಸಂಪ್ರದಾಯಗಳೆಲ್ಲ ಉನ್ನತ ಸತ್ಯದ ಅರಿವಿಗಾಗಿ ಇರುವ ಮೆಟ್ಟಿಲುಗಳು ಅಥವಾ ಉಪಕರಣಗಳು ಅಷ್ಟೇ. ಅವೇ ಪರಮಾರ್ಥವಲ್ಲ. ಅವುಗಳು ಬೇಕು. ಅವುಗಳ ಮೂಲಕ ಎಲ್ಲರೂ ಉನ್ನತ ಸತ್ಯದ ದರ್ಶನ ಮಾಡಿಕೊಳ್ಳಬೇಕು. ಈ ರೀತಿಯ ಉಪಕರಣಗಳನ್ನು ಉಪಯೋಗಿಸುತ್ತಾ ಮತ್ತು ಅವಗಳನ್ನು ಬಿಟ್ಟು, ಅವುಗಳನ್ನು ಮೀರಿ ಉನ್ನತ ಸ್ಥಾನಕ್ಕೆ ಬೆಳೆದಾಗ, ಸತ್ಯವಾಗಲೂ ನಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.
ರಸಧಾರೆ - 042
ಆಹ! ಈ ಮೋಹಗಳೋ, ನೇಹಗಳೋ, ದಾಹಗಳೋ
ಊಹಿಪೆಯ ಸೃಷ್ಟಿಯಲಿ ಹೃದಯವಿಹುದೆಂದು ?
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ
ಈ ಹರಿಬದೊಳಗುಟ್ಟು ? ಮಂಕುತಿಮ್ಮ.
ನೇಹಗಳು = ಸ್ನೇಹಗಳು. ಊಹಿಪೆಯ = ಊಹಿಸುತ್ತೀಯಾ. ಹರಿಬ = ವ್ಯಾಪಾರ.
ಆಹಾ ಈ ಬಂಧನಗಳು ಸ್ನೇಹಗಳು ಮತ್ತು ಬಯಕೆಗಳು ಇವುಗಳ ಮಧ್ಯೆ ಈ ಜಗತ್ತಿನ ಎಲ್ಲರಲ್ಲೂ ಹೃದಯವಿದೆಯೆಂದು ನೀನು ಅಂದುಕೊಂಡಿದ್ದೀಯಾ. ಪರಸ್ಪರ ಮಾತುಗಳ ಅಟ್ಟಹಾಸದಿಂದ ನಿಮ್ಮನ್ನೂ ಅಂತಹ ಅಟ್ಟಹಾಸಕ್ಕೆ ಪ್ರತಿಕ್ರಿಯಿಸಿಸಿವುದೇ ಈ ಜಗದ್ವ್ಯಾಪಾರದ ಗುಟ್ಟು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಜಗತ್ತಿನ ಪರಸ್ಪರ ಸಂಬಂಧಗಳಲ್ಲಿರುವ ಪೊಳ್ಳುತನವನ್ನು ಕುಹಕವಾಡುತ್ತಾರೆ, ಡಿ.ವಿ.ಜಿ.ಯವರು. ಎಲ್ಲ ಸಂಬಂಧಗಳೂ ಕೇವಲ ವ್ಯಾವಹಾರಿಕವಾಗಿದೆಯೇ ಹೊರತು ಹೃದಯದ ಸಂಬಂಧಗಳು ನಶಿಸಿಹೋಗಿವೆ. ಬೂಟಾಟಿಕೆಯ ಸ್ನೇಹ, ತೋರಿಕೆಯ, ಅಟ್ಟಹಾಸದ ಸಂಬಂಧಗಳು ಮತ್ತು ಈ ಸಂಬಂಧಗಳಲ್ಲಿನ ಪೊಳ್ಳುತನ, ಇವುಗಳೇ ಈ ಕಗ್ಗದ ಹೂರಣ. ಅಂದು ಅವರಿಗೆ ಹಾಗೆ ಅನ್ನಿಸಿರಬೇಕಾದರೆ, ಇಂದು ಅವರಿಗೆ ಏನು ಅನ್ನಿಸುತ್ತಿತ್ತೋ ಕಾಣೆ.
ಇಂದು ನಾವೆಲ್ಲಾ ಕಾಣುವ, ನಮ್ಮ ಸಮಾಜದ ವಿಷಯವನ್ನೇ ನೋಡೋಣ.
ಒಂದು ಮನೆ. ಆ ಮನೆಯಲ್ಲಿ ಗಂಡ ಹೆಂಡತಿಯರ ಸಂಬಂಧ ಕೇವಲ ಒಡಂಬಡಿಕೆಯಾಗಿ ಉಳಿದಿದೆ.ಪರಸ್ಪರ ಸ್ನೇಹ ಪ್ರೀತಿ,ತ್ಯಾಗ ನಂಬಿಕೆಗಳ ಆಧಾರದಮೇಲೆ ನಿಲ್ಲಬೇಕಾದ ಈ ನಂಟು ಇಂದು ಕೇವಲ ಒಡಂಬಡಿಕೆಯಾಗಿದೆ. ಇನ್ನು ಆ ಮನೆಯಲ್ಲಿ ತಂದೆ ತಾಯಿಗಳ ಜೊತೆಗೆ ಮಕ್ಕಳ ಸಂಬಂಧ, ಮಕ್ಕಳಲ್ಲೇ ಪರಸ್ಪರ ಸಂಭಂಧ ಎಲ್ಲವೂ ಹೃದಯವಂತಿಕೆಯಿಲ್ಲದೆ, ಗಟ್ಟಿ ಇಲ್ಲದೆ ಟೊಳ್ಳಾಗಿದೆ. ಅವರವರ ಅವಶ್ಯಕತೆಗಳನ್ನು ಪೂರೈಸುವತನಕ ಎಲ್ಲರೂ ಬೇಕು. ಇದರಲ್ಲಿ ಒಂದು ಚೂರು ಬೆಳ್ಳಿಗೆರೆಯಂದರೆ ಆ ತಾಯಿಗೆ ಮಕ್ಕಳೊಡನೆ ಇರುವ ಸಂಬಂಧ. ಇದರಲ್ಲಿ ಇನ್ನೂ ಸ್ವಲ್ಪ ಸತ್ವವನ್ನು ನಾವು ಕಾಣುತ್ತೇವೆ. ಆದರೆ ತಾಯಿ ಏನೋ ಸುದ್ಧ ಮಮತೆ, ಪ್ರೀತಿ ಅನುರಾಗ ಎಲ್ಲವನ್ನೂ ಹರಿಸುತ್ತಾಳೆ. ಆದರೆ ಮಕ್ಕಳೇ ರೆಕ್ಕೆ ಮೂಡಿದಮೇಲೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಾ, ಆ ತಾಯಿಯನ್ನೇ ಕಡೆಗಣಿಸುತ್ತಾರೆ. ಹಾಗೆ ಮಾಡೆದೆ ಇರುವ ಮಕ್ಕಳಿದ್ದರೆ, ತಾಯಿ ಪುಣ್ಯವಂತೆ.
ಇನ್ನು ಒಂದು ಸಮಾಜ. ಸ್ವಾರ್ಥಪೂರಿತ ಜನರೇ ತುಂಬಿರುವ ಈ ಸಮಾಜದಲ್ಲಿ ಹೃದಯವಂತಿಕೆಯನ್ನು ದುರ್ಬೀನು ಹಾಕಿಕೊಂಡು ನೋಡಿದರೂ ಕಾಣಸಿಗದು. ಅಕಸ್ಮಾತ್ ಯಾರಾದರೂ ಇದ್ದರೆ, ಅವರನ್ನು ದುರುಪಯೋಗ ಪಡಿಸಿಕೊಂಡು, ಹಿಂಡಿ ಹಿಪ್ಪೆ ಮಾಡಿ ಬಿಡುತ್ತಾರೆ, ಲೋಕದ ಜನರು. ಅಥವಾ ಅವನಿಗೆ ಸ್ವಲ್ಪ ಹುಚ್ಚಎಂದು ಹಣೆಪಟ್ಟಿ ಕಟ್ಟುತ್ತಾರೆ.
ಏಕೆ ಹೀಗಾಗಿದೆ? ಕೇವಲ ಸ್ವಾರ್ಥ. ಚೆನ್ನ ಎನ್ನುವ ಪದಕ್ಕೆ ಅರ್ಥ ತಿಳಿಯದಿದ್ದರೂ, ” ನಾನು-ನಾನೊಬ್ಬನೇ ಚೆನ್ನಾಗಿರಬೇಕುಎನ್ನುವ ದುರ್ಭಾವ. ನಾನುಎನ್ನುವ ಅಹಂಕಾರ. ಸಂಸ್ಕಾರದ ಕೊರತೆ, ಸಂಸ್ಕೃತಿಯ ನಾಶ, ಅವಿದ್ಯೆಯ ಕಲಿಕೆ, ವಿದ್ಯೆಗೆ ತಿರಸ್ಕಾರ ಮತ್ತು ತಾತ್ಸಾರ. ಹಿರಿಯರಲ್ಲಿ ಗೌರವವಿಲ್ಲ. ಅವರಿಂದ ಕಲಿಯಬೇಕು ಎನ್ನುವ ಆಸೆಯಿಲ್ಲ. ಒಟ್ಟಾರೆ ಹೇಳಬೇಕೆಂದರೆ ಅಧಃಪಥನ. ಹೃದಯವಂತಿಕೆಯ ಕೊರತೆಯಿಂದಲೇ, ಎಲ್ಲ ಸಮಸ್ಯೆಗಳು. ಇರುವವರ ಮತ್ತು ಇಲ್ಲದವರ ನಡುವಿನ ಅಗಾಧ ಅಂತರ. ತತ್ಕಾರಣ ಪರಸ್ಪರ ದ್ವೇಷಾಸೂಯೆಗಳು. ಅಯ್ಯೋ ಹೇಳುತ್ತಾ ಹೋದರೆ ಕೊನೆ ಮೊದಲಿಲ್ಲ!!!. ಒಟ್ಟಿನಲ್ಲಿ ಹೃದಯವಂತಿಕೆಯ ಕೊರತೆಯಿಂದ ಮನುಷ್ಯರ ಪರಸ್ಪರ ಸಂಬಂಧಗಳು ಹಾಳಾಗಿವೆ, ಟೊಳ್ಳಾಗಿದೆ, ಪೊಳ್ಳಾಗಿದೆ. ಸಮಸ್ಯೆ ಏನೆಂದು ಗೊತ್ತು. ಪರಿಹಾರವನ್ನು ನಾವುಗಳೇ ಕಂಡು ಹಿಡಿದು ಕೊಂಡು ಸಾಧ್ಯವಾದಷ್ಟುಮಟ್ಟಿಗೆ ನಮ್ಮ ಸಮಾಜವನ್ನು ಮತ್ತು ಒಟ್ಟು ಪರಿಸರವನ್ನು ಸರಿಪಡಿಸಿಕೊಳ್ಳುವುದೇ, ಈಗ ಆಗಬೇಕಾಗಿರುವ ಕೆಲಸ. ಪ್ರಯತ್ನ ಪಟ್ಟರೆ ಅಸಾಧ್ಯವಾದುದ್ದೇನಲ್ಲ
ರಸಧಾರೆ - 043
ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತತ್ತಲುಂ |
ಮೂಲೆಮೂಲೆಯೆಲಿ ವಿದ್ಯುಲ್ಲಹರಿಯೊಂದು ||
ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡು ಕೊಡದೆ ಮಂಕುತಿಮ್ಮ. ||
ಮೇಲೆ, ಕೆಳಗೆ, ಒಳಗೆ, ಮೇಲೆ, ಸುತ್ತಲು, ಎತ್ತೆತ್ತಲುಂ, ಮೂಲೆ ಮೂಲೆಯಲಿ ವಿದ್ಯುಲ್ಲಹರಿಯೊಂದು ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ ಚಾಲಿಪುದು ಬಿಡುಕೊಡದೆ ಮಂಕುತಿಮ್ಮ.
ಪರಮ ಶಕ್ತಿಯ ಉಲ್ಲೇಖ ಈ ಕಗ್ಗದೊಳಗೆ. ಈ ಹಿಂದೆಯೂ ಈ ವಿಷಯದ ಬಗ್ಗೆ ಅವರೂ ಉಲ್ಲೇಖಿಸಿದ್ದಾರೆ, ಮತ್ತೆ ನಾನೂ ಬರೆದಿದ್ದೇನೆ. ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣೀಭೂತವಾದ ಆ ಪರಮ ಶಕ್ತಿಯನ್ನು ಎಲ್ಲ ಸಾಧಕರೂ, ಸಿದ್ಧರೂ, ಸತ್ಪುರುಷರೂ, ಭಕ್ತರೂ ತಮ್ಮ ಭಕ್ತಿ ಪಾರವಶ್ಯದಲ್ಲಿ ಅನುಭವಿಸಿದ್ದಾರೆ. ಮೇಲೆ, ಕೆಳಗೆ, ಒಳಗೆ, ಹತ್ತಿರ, ದೂರ, ಸುತ್ತಲು, ಮತ್ತು ಎತ್ತೆತ್ತಲೂ ಆ ವಿದ್ಯುಲ್ಲಹರಿಯು ಎಲ್ಲವನ್ನು ಬಿಡು ಕೊಡದೆಎಂದರೆ ನಿರಂತರವಾಗಿ, ಒಂದು ಕ್ಷಣವೂ ವಿರಾಮವಿಲ್ಲದೇ ನಡೆಸುತ್ತಿದೆ ಎಂದು ಈ ಕಗ್ಗದ ಅಂತರ್ಯ.
ಆದಿ ಕಾವ್ಯ ಋಗ್ವೇದದ, ಪುರುಷ ಸೂಕ್ತದಲ್ಲಿಸ ಭೂಮಿಂ ವಿಶ್ವತೋ ವೃತ್ವಾ ಅತ್ತ್ಯತಿಷ್ಟತ್ ದಶಾಂಗುಲಂಎಂದು ಬರುತ್ತದೆ. ಅಂದರೆ ಯಾವುದೇ ಒಂದು ವಸ್ತುವು ಮಿಕ್ಕೆಲ್ಲ ವಸ್ತುಗಳನ್ನೂ ತನ್ನ ಅಧೀನದಲ್ಲಿಟ್ಟುಕೊಂಡಿರಬೇಕಾದರೆ, ತಾನು ಅದೆಲ್ಲದರಕ್ಕಿಂತ ಮೇಲೆ ಇರಬೇಕು. ಹೌದಲ್ಲವೇ? ಹಾಗೆಯೇ, ಎಲ್ಲ ಸೃಷ್ಟಿಯನ್ನು ತನ್ನ ಅಧೀನದಲ್ಲಿಟ್ಟುಕೊಂಡಿರುವ ಆ ಪರಮ ಶಕ್ತಿಯು,, ನಾವಿರುವ ಭೂಮಿಯನ್ನೂ ಸೇರಿ ಇಡೀ ವಿಶ್ವವನ್ನೇ ತನ್ನ ಅಧೀನದಲ್ಲಿಟ್ಟುಕೊಂಡಿರುವುದರಿಂದ ಅದು ಅತ್ತ್ಯತಿಷ್ಟತ್ ದಶಾಂಗುಲಂಇವೆಲ್ಲವನ್ನೂ ಮೀರಿ ಹತ್ತು ಅಂಗುಲ ಮೇಲಿದೆ ಎಂದು ಅರ್ಥ. ಅಷ್ಟೇ ಅಲ್ಲ ಅದು ತಾನೇ ಸೃಷ್ಟಿಸಿರುವ, ತನ್ನ ಅಧೀನದಲ್ಲಿರುವ, ಇಡೀ ಸೃಷ್ಟಿಯನ್ನು ತನ್ನ ಶಕ್ತಿಯಿಂದಲೇ ನಡೆಸಿಕೊಂಡು ಹೋಗುತ್ತದೆ ಎಂದು ಈ ಕಗ್ಗದ ಅಂತರ್ಯ. ಇರಲಿ, ಇದನ್ನು ಬಹಳ ಜನ ಅರಿತುಕೊಂಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ.
ಆದರೆ ನಾವು ನೋಡಬೇಕಾದ ಒಂದು ಅಂಶವಿದೆ. ಸಕಲ ಪ್ರಾಣಿಗಳಿಗೂ, ಅಂದರೆ ಆಕಾಶದಲ್ಲಿ ಹಾರುವ ಎಲ್ಲ ಪಕ್ಷಿಗಳಿಗೂ, ಭೂಮಿಯಮೇಲಿರುವ ಎಲ್ಲ ಪ್ರಾಣಿಗಳಿಗೂ, ಕೀಟಗಳಿಗೂ, ಕ್ರಿಮಿಗಳಿಗೂ, ಮತ್ತು ಎಲ್ಲ ಜಲಚರಗಳಿಗೂ ಒಂದು ಸಮಾನವಾದ ಅಂಶವುಂಟು. ಅದೇನೆಂದರೆ, ಎಲ್ಲಕ್ಕೂ ಒಂದು ದೇಹ, ಒಂದು ಮನಸ್ಸು, ಒಂದು ಬುದ್ಧಿ ಮತ್ತು ಒಂದು ಚೇತನ ಉಂಟು. ಈ ನಾಲ್ಕೂ ಬೇಕಾದ ಪ್ರಮಾಣದಲ್ಲಿ ಇರುವುದರಿಂದ ಈ ಎಲ್ಲ ಪ್ರಾಣಿಗಳ ಅಸ್ತಿತ್ವ. ದೈಹಿಕ ರೂಪ ಮತ್ತು ಅದರ ಮಿತಿ ಮತ್ತು ಪರಿಮಿತಿಗಳು, ಮನಸ್ಸು ಬುದ್ಧಿಗಳ ವಿಕಾಸದ ಸ್ಥರಗಳ ಅನ್ವಯ, ಆಯಾಯಾ ಪ್ರಾಣಿಗಳ ಸ್ವಭಾವಗಳು, ಕ್ರಿಯೆಗಳು ಇರುತ್ತವೆ. ಈ ಎಲ್ಲ ಪ್ರಾಣಿ ಪಕ್ಷಿಗಳೂ ಭೂಮಿಗೆ ಸಮಾನಾಂತರವಾಗಿದ್ದರೆ, ಮನುಷ್ಯ ಮಾತ್ರ ಲಂಬವಾಗಿದ್ದಾನೆ. ಹಾಗಾಗಿ ಮನುಷ್ಯ ಊರ್ದ್ವಮುಖನಾಗಿ ಯೋಚಿಸಲು ಸಾಮರ್ಥ್ಯವನ್ನು ಪಡೆದುಕೊಂಡು ಅನ್ಯ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಸರಿ ಹಾಗಿದ್ದರೆ ಅನ್ಯ ಪ್ರಾಣಿಗಳಿಗೆ ಹೋಲಿಸಿದರೆ, ಮಾನವರ ಜಗತ್ತಿನಲ್ಲಿ ಮಾತ್ರ ಏಕೆ ಇಷ್ಟೊಂದು ಹಿಂಸೆ ದ್ವೇಷ ಮುಂತಾದ ಕುಬುದ್ಧಿಗಳೇ ತುಂಬಿದೆ ಎಂದರೆ, ಆ ಪರಮಾತ್ಮ ಎಲ್ಲ ಮನಸ್ಸು ಬುದ್ಧಿ ದೇಹಾತ್ಮಗಳನ್ನು ಒಂದುಗೂಡಿಸಿ, ಅಷ್ಟಕ್ಕೇ ಬಿಟ್ಟಿದ್ದಾರೆ ಸಾಕಿತ್ತು. ಆದರೆ ಇವೆಲ್ಲವನ್ನೂ ಸೇರಿ ಒಂದು ಚೂರು ಅಹಂಕಾರವನ್ನೂ ಇಟ್ಟ. ಅನ್ಯ ಪ್ರಾಣಿಗಳಲ್ಲಿ ಅದು ಕೇವಲ ತನ್ನ ಆಹಾರ ಹುಡುಕುವುದು ಮತ್ತುತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಿಸಿದರೆ, ಈ ಮನುಷ್ಯ ಮಾತ್ರ ಸ್ವಾರ್ಥದಿಂದ ಅಹಂಕಾರವನ್ನು ಪರ ಹಿಂಸೆಗೆ, ದುರಾಸೆಗೆ, ಲೂಟಿಗೆ, ಹೀಗೆ ಮಾನವಕುಲಕ್ಕೆ ಮಾರಕವಾದ ಎಲ್ಲ ಕಾರ್ಯಗಳಿಗೂ ಉಪಯೋಗಿಸುತ್ತಾ ಇಡೀ ಪ್ರಪಂಚವನ್ನು ಒಂದು ಮಹಾ ರಣರಂಗವನ್ನಾಗಿ ಪರಿವರ್ತಿಸಿದ್ದಾನೆ.
ಎಲ್ಲ ಜೀವಿಗಳಲ್ಲೂ ಎಲ್ಲ ಸೃಷ್ಟಿಗೂ ಕಾರಣನಾದವನು ಮತ್ತು ನಡೆಸುವವನೂ ಪರಮಾತ್ಮನೇ ಆದಾಗ, ಇಂದಿನ ಪರಿಸ್ತಿತಿಗೂ ಆ ಪರಮಾತ್ಮನೇ ಕಾರಣವೆನ್ನುವವರು ಬಹಳ ಮಂದಿ. ಒಂದು ಉಸಿರು ಒಳಗೆ ಹೋದದ್ದು ಹೊರಗೆ ಬಾರದಿದ್ದರೋ ಅಥವಾ ಹೊರಗೆ ಬಂದ ಒಂದು ಉಸಿರು ಒಳಗೆ ಹೋಗದಿದ್ದರೋ ಮುಗಿಯಿತು ಇವನ ಕಥೆ. ಇಷ್ಟು ಪರಿಮಿತ ಸಾಮರ್ಥ್ಯವನ್ನಿತ್ತುಕೊಂಡು ಈ ಮನುಷ್ಯ ಹಾರಾಡುವುದನ್ನು ನೋಡಿದರೆ, ಅವನ ಮೌಡ್ಯಕ್ಕೆ ಅಚ್ಚರಿಯಾಗುತ್ತದೆ. ಇದು ಅಹಂಕಾರದ ಫಲ. ನಾನು ಎಲ್ಲ ಪ್ರಾಣಿಗಳಂತೆ. ನಮ್ಮ ಅಸ್ತಿಸ್ಥ್ವಕ್ಕೆ ಕಾರಣವಾದ ಆ ವಿಧ್ಯುಲ್ಲಹರಿ ಅಥವಾ ಆ ಮಹಾ ಚೇತನದ ಮುಂದೆ ನಾನೇನೂ ಇಲ್ಲ, ಹಾಗಾಗಿ ತಗ್ಗಿ ಬಗ್ಗಿ, ವಿನಯದಿಂದ, ಅಹಂಕಾರವನ್ನು ತೊರೆದು ನಡೆದು ಒಂದು ಸು-ಸಮಾಜದ ನಿರ್ಮಾಣಕ್ಕೆ ನಾವು ನಾಂದಿ ಹಾಡುವ ಎನ್ನುವ ಭಾವನೆ ತಳೆದರೆ ಚೆಂದ. ಇಲ್ಲದಿದ್ದರೆ ಪಥನವೇ ಹಾದಿ. ಆಯ್ಕೆ ನಮ್ಮದು ಸುಖ ನಮ್ಮದು ದುಃಖ ನಮ್ಮದು. ಅಳಿವು ಮತ್ತು ಉಳಿವು ನಮ್ಮ ಕೈಲೆ ಇದೆ.
ರಸಧಾರೆ - 044
ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು
ಸಂದೆ ನಸುಕಿನೊಳಿಹುದು ಜೀವನದ ಪಥವು
ಒಂದುಮೆಟುಕದು ಕೈಗೆ, ಏನೋ ಕಣ್ಕೆಣಕುವುದು
ಸಂದಿಯವೆ ನಮ್ಮ ಗತಿ ಮಂಕುತಿಮ್ಮ
ಮಂದಾಕ್ಷಿ = ಸ್ಪಷ್ಟವಿಲ್ಲ ದೃಷ್ಟಿ, ಸಂದೆ = ಸಂಜೆ, ಸಂದಿ = ಸಂದೇಹ ಅಥವಾ ಸಂದಿಗ್ಧ
ಮಂದಾಕ್ಷಿ ಎಮಗಿಹುದು ಬಲುದೂರ ಸಾಗದದು, ಸಂದೆ ನಸುಕಿನೋಳು ಇಹುದು ಜೀವನದ ಪಥವು.
ಒಂದುಂ ಎತುಕದು ಕೈಗೆ ಏನೋ ಕಣ್ ಕೆಣಕುವುದು ಸಂದಿಯವೆ ನಮ್ಮ ಗತಿ ಮಂಕುತಿಮ್ಮ.
ನಮ್ಮ ಮನಸ್ಸಿನ ಕಣ್ಣುಗಳು ಮಂದವಾಗಿವೆ. ಒಂದು ವಿಶಾಲವಾದ ದೃಷ್ಟಿ ನಮಗೆ ಇಲ್ಲ. ನಮ್ಮ ಆಲೋಚನೆಗಳು ಸ್ಪಷ್ಟವಿಲ್ಲದೆ ಸಂಜೆಗತ್ತಲಂತೆ ಮಸುಕುಮಸುಕಾಗಿರುವುದರಿಂದ ನಾವು ನಡೆಸುವ ನಮ್ಮ ಜೀವನದ ಪಥವು ಸಹ ಸ್ಪಷ್ಟತೆ ಇಲ್ಲದೆ ಮಸುಕಾಗಿದೆ. ನಮ್ಮ ಅಪೇಕ್ಷೆಗಳು ನಮಗೇ ಸ್ಪಷ್ಟವಾಗಿಲ್ಲ. ಸರಿಯಾದ ವಸ್ತು ಇನ್ನೇನು ಸಿಕ್ಕಿತು ಎನ್ನುವ ವೇಳೆಗೆ, ನಮ್ಮ ಕಣ್ಣು ಅನ್ಯ ವಸ್ತುವಿನಮೇಲೆ ಬಿದ್ದು ನಮ್ಮನ್ನು ವಿಚಲಿತಗೊಳಿಸಿ, ಸಂದೇಹ ಮತ್ತು ಸಂದಿಗ್ಧಕ್ಕೆ ತಳ್ಳಿಬಿಡುತ್ತದೆ ಎನ್ನುವುದು ಈ ಕಗ್ಗದ ಅಂತರ್ಯ.
ಇಲ್ಲಿ ಮಾನ್ಯ ಗುಂಡಪ್ಪನವರು, ನಮ್ಮ ಮಾನಸಿಕ ದೃಷ್ಟಿಕೋನದ ಬಗ್ಗೆ ಪ್ರಸ್ತಾಪಮಾಡುತ್ತಾರೆ. ಸಂಕುಚಿತ ಸ್ವಭಾವದ ನಮ್ಮ ದೃಷ್ಟಿಯೂ ಸಂಕುಚಿತ. ಒಂದು ವಿಶಾಲ ಮನೋಭಾವವನ್ನು ನಾನು ಕಳೆದುಕೊಂಡಿದ್ದೇವೆ. ನಾವು ಯಾವುದೇ ವಿಚಾರವನ್ನು ತೆಗೆದುಕೊಂಡರೂ ಒಂದು ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಲು ಅಸಮರ್ಥರಾಗಿದ್ದೇವೆ. ಯಾವುದೂ ಸ್ಪಷ್ಟವಿಲ್ಲ. ನಮ್ಮ ಸಂಬಂಧಗಳು ಸ್ಪಷ್ಟವಾಗಿ ಗಟ್ಟಿಯಾಗಿಲ್ಲ. ನಮ್ಮ ಸ್ನೇಹಗಳು ಗಟ್ಟಿಯಾಗಿಲ್ಲ. ನಮ್ಮ ಬೇಕು ಬೇಡಗಳ ಬಗ್ಗೆ ನಮಗೆ ನಿಖರವಾದ ಅಭಿಪ್ರಾಯವಿಲ್ಲ. ಒಟ್ಟಾರೆ ನಮಗೆ ಯಾವುದೂ ಸ್ಪಷ್ಟವಿಲ್ಲ. ಎಲ್ಲಾ ಮಸುಕು ಮಸುಕು. ನಮ್ಮ ದೃಷ್ಟಿಯೇ ಹಾಗಿರಬೇಕಾದರೆ ನಮ್ಮ ಜೀವನವೂ ಹಾಗೇ ಇರುವುದು ಸಹಜ ತಾನೇ.?
ನಮ್ಮ ಜೀವನಗಳನ್ನೇ ತೆಗೆದು ಕೊಳ್ಳೋಣ. ನಮ್ಮ ವಿಧ್ಯಾಭ್ಯಾಸದಲ್ಲಿ ನಮಗೆ ನಮ್ಮ ಸಾಮರ್ತ್ಯದ ಅರಿವಿಲ್ಲ. ಆ ಸಾಮರ್ತ್ಯಕ್ಕೆ ತಕ್ಕಂತ ಓದಿಲ್ಲ. ಸರಿ ಏನೋ ಓದಿದ್ದಾರೆ ಎಂದರೆ ಆ ಓದಿಗೆ ತಕ್ಕಂತ ಉದ್ಯೋಗವಿಲ್ಲ. ಸಿವಿಲ್ ಇಂಜಿನೀರಿಂಗ್ ಓದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಎಂತಹ ವಿಪರ್ಯಾಸ. ಸರಿ ಏನೋ ಉದ್ಯೋಗ ಮಾಡುತ್ತಾರೆ ಎಂದರೆ, ಮಾಡುವ ಕೆಲಸದಲ್ಲಿ ಆಸ್ಥೆ ಇಲ್ಲ, ಆಸಕ್ತಿಯಿಲ್ಲ ಮತ್ತು ತೃಪ್ತಿಯಿಲ್ಲ. ಅಕಸ್ಮಾತ್ ನಮಗೆ ಒಂದು ಹುಟ್ಟು ಸಿಕ್ಕಿದೆ. ನಮಗೆ ನಮ್ಮ ಜೀವದ ಗುರಿಯಿಲ್ಲ.ನಾವು ಏನಾಗಬೇಕು ಅಥವಾ ನಮಗೆ ಏನು ಬೇಕು ಎನ್ನುವುದು ನಮಗೆ ಗೊತ್ತಿಲ್ಲ. ಸುಮ್ಮನೆ ಬೆಳೆಗಾಗುತ್ತದೆ, ಏಳುತ್ತೇವೆ, ತಿನ್ನುತ್ತೇವೆ, ಏನೋ ಕೆಲಸ ಮಾಡುತ್ತೇವೆ, ಮತ್ತೆ ತಿನ್ನುತ್ತೇವೆ, ಮಲಗುತ್ತೇವೆ. ಮಲಗುವ ಮುಂಚೆ ನಾವು ಇಂದಿನ ಸಾಧನೆಯೇನು ಎಂದು ಯೋಚನೆ ಮಾಡಿದರೆ, ಎಲ್ಲವೂ ಶೂನ್ಯ. ನಮ್ಮ ಸಂಬಂಧಗಳನ್ನು ತೆಗೆದುಕೊಳ್ಳೋಣ. ನಮಗೆ ನಮ್ಮ ತಂದೆ ತಾಯಿಗಳೊಡನಾಗಲೀ, ಅಣ್ಣತಮ್ಮೊಂದಿರೊಡನಾಗಲೀ, ಬಂಧುಗಳೊಡನಾಗಲೀ, ಸ್ನೇಹಿತರೊಡನಾಗಲೀ ಸಮಗ್ರವಾಗಿ ಸಮಾಜದೊಡನಾಗಲೀ ಒಂದು ಸ್ಪಷ್ಟವಾದ ಗಟ್ಟಿಯಾದ ಸಂಬಂಧವೇ ಇಲ್ಲ. ನಮ್ಮ ಸಂಸ್ಕೃತಿಯ ಬಗ್ಗೆಯಾಗಲೀ ಸಂಸ್ಕಾರಗಳ ಬಗ್ಗೆಯಾಗಲೀ ಒಂದು ನಿಖರವಾದ ಅಭಿಪ್ರಾಯ ಮತ್ತು ದೃಷ್ಟಿಕೋನವಿಲ್ಲ. ಎಲ್ಲವೂ ಮಸುಕು ಮಸುಕು. ಇನ್ನು ನಮ್ಮ ಜೀವನದ ಪಥವು ಸ್ಪಷ್ಟವಾಗಿರುವುದೆಂತು? ಆ ಪ್ರಾಣಿಗಳ ಬದುಕಿಗೂ ನಮ್ಮ ಬದುಕಿಗೂ ಎಷ್ಟು ವ್ಯತ್ಯಾಸವಿದೆ.? ಕಡೆಯ ಪಕ್ಷ ಅವುಗಳಿಗೆ ಏನೋ ಒಂದು ಇಲ್ಲ ಎನ್ನುವುದು ಸ್ಪಷ್ಟ. ನಮಗೆ ಆ ಸ್ಪಷ್ಟತೆಯೂ ಇಲ್ಲ.
ಇದಕ್ಕೆಲ್ಲ ಏನು ಕಾರಣ? ನನ್ನ ಅಲ್ಪ ಮತಿಗೆ ಹೊಳೆಯುವುದು ಇಷ್ಟು. ಸ್ವಾರ್ಥ ಮತ್ತು ಅಹಂಕಾರಗಳೇ ನಮ್ಮನ್ನು ಈ ಗತಿಗೆ ತಳ್ಳಿವೆ. ನನಗೆ ಎಲ್ಲವೂ ಬೇಕುಎನ್ನುವ ಸ್ವಾರ್ಥದಿಂದ ಏನು ಬೇಕು ಎನ್ನುವುದೇ ತಿಳಿಯದಾಗಿದೆ.ಎಲ್ಲವೂ ಬೇಕು ಎನ್ನುವವನು ಏನೇನನ್ನು ಪಡೆದುಕೊಳ್ಳಲು ಸಾಧ್ಯ. ಪಡೆದು ಕೊಂಡು ದಕ್ಕಿಸಿಕೊಂಡು ಅನುಭವಿಸುವ ಸಾಮರ್ಥ್ಯ ಬೇಡವೇ? ಏನನ್ನೋ ಪಡೆದಾಕ್ಷಣ ಮತ್ತೇನಾದರ ಮೇಲೆ ಕಣ್ಣು. ಹೀಗೆ ನಮ್ಮ ಬೇಕು ಬೇಡಗಳ ಅಸ್ಪಷ್ಟತೆ.
ನನಗೆ ಎಲ್ಲವೂ ತಿಳಿದಿದೆ ಎನ್ನುವ ಅಹಂಕಾರದಿಂದ ಅರಿವಿನ ಬಾಗಿಲು ಮುಚ್ಚಿ ಹೋಗಿದೆ. ಮೇಲೆಕ್ಕೆ ಹೋಗಬೇಕಾದವನು ನಾನು ಕೆಳಗೆ ಇದ್ದೇನೆ ಎಂದು ಅರಿತರೆ ಮಾತ್ರ ಮೇಲಕ್ಕೆ ಹೋಗಲು ಸಾಧ್ಯ. ನಾನು ಮೇಲೆ ಇದ್ದೇನೆ ಎನ್ನುವವನು ಇನ್ನು ಮೇಲಕ್ಕೆ ಹೋಗುವುದು ಹೇಗೆ? ಅಗಾಧ ಜ್ಞಾನ ಸಮುದ್ರದಲ್ಲಿ ನನಗೆ ತಿಳಿದಿರುವುದು ಒಂದು ತೊಟ್ಟ ಹನಿಯೂ ಅಲ್ಲ ಎಂದು ತಿಳಿದವನಿಗೆ, ಇನ್ನಷ್ಟು ತಿಳಿದುಕೊಳ್ಳುವ ಅವಕಾಶ. ನನಗೆ ಎಲ್ಲ ಗೊತ್ತು ಎನ್ನುವ ಮೂರ್ಖತನಕ್ಕೆ ಮದ್ದುಂಟೆ?
ಎಲ್ಲರೂ ಹಾಗಿದ್ದಾರೆಯೇ?. ಖಂಡಿತ ಇಲ್ಲ ಎಲ್ಲೋ ಕೆಲವು ಜನ ಸಜ್ಜನರು, ಸ್ವಾರ್ಥರಹಿತರು, ನಿಜಾರ್ಥದಲ್ಲಿ ಜ್ಞಾನಿಗಳು, ವಿಶಾಲಮನೋಭಾವದ ಮಹಾನುಭಾವರು, ಲೋಕ ಕಲ್ಯಾಣಕ್ಕಾಗಿಯೇ ತಮ್ಮ ಜೀವನವನ್ನು ಮುಡುಪ್ಪಿಟ್ಟಿರುವವರೂ, ಸಕಲ ಜೀವರಾಶಿಗಳ ಹಿತವನ್ನೇ ಬಯಸುವವರೂ ಇದ್ದಾರೆ. ಎಲೆಮರೆ ಕಾಯಿಗಳಂತಿರುವ, ಸ್ವ-ಪ್ರಚಾರಕ್ಕೆ ಬಾಯಿಬಿಡದ ಅಂತಹವರ, ನಿಸ್ವಾರ್ಥ ಕಾರ್ಯ ಕಲಾಪಗಳಿಂದಲೇ ಈ ಜಗತ್ತಿನಲ್ಲಿ ಇನ್ನೂ ಸ್ವಲ್ಪ ಒಳಿತು ಉಳಿದಿದೆ. ಅಂಥವರಿಗೆ ನಮ್ಮ ನಮನ.
ನಾವೂ ಸಹ ಒಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಮನಸ್ಸೇನು?. ಆ ಮನಸ್ಸಿನ ಬೇಕು ಬೇಡಗಳೇನು? ಸ್ಪಷ್ಟವೇ? ಅಸ್ಪಷ್ತವೆ? ಸರಿಯೇ? ತಪ್ಪೇ? ನಮ್ಮ ಸಾಮರ್ಥ್ಯವೇನು? ಅರ್ಹತೆಗಳೇನು? ಹೀಗೆ ಸಮಗ್ರ ಚಿಂತನೆ ಮಾಡಿ ನಮ್ಮನ್ನು ನಾವು ಸರಿಪಡಿಸಿಕೊಂಡರೆ, ನಮ್ಮ ಬದುಕು ಮತ್ತು ಇತರರ ಜೀವನವೂ ಸುಧಾರಿಸುವುದರಲ್ಲಿ ನನಗೆ ಸಂದೇಹವೇ ಇಲ್ಲ.
ರಸಧಾರೆ - 045
ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು |
ಮಂಕುವಿಡಿಸಲು ಸಾಕು ಮಣ್ಣು೦ಡೆ ಕಣ್ಗೆ ||
ಶಂಕೆಗೆಡೆಯಿರದು ಕತ್ತಲೆಯೇ ಜಗವನು ಕವಿಯೆ |
ಬೊಂಕುದೀವಿಗೆ ತಂಟೆ ಮಂಕುತಿಮ್ಮ. ||
ಶಂಕೆಗೆಡೆಯಿರದು = ಶಂಕೆಗೆ + ಎಡೆ + ಇರದು
ಬೆಂಕಿಯುಂಡೆ = ಸೂರ್ಯ, ಬೆಣ್ಣೆಯುಂಡೆ = ಚಂದ್ರ, ವಿಡಿಸಲು ಬಿಡಿಸಲು, ಮಣ್ಣು೦ಡೆ = ಹಣತೆ , ಶಂಕೆಗೆಡೆಯಿರದು = ಸಂಶಯಕ್ಕೆ ಸ್ಥಳವಿರದು, ಬೊಂಕುದೀವಿಗೆ = ಅಸತ್ಯವಾದ ಜ್ಞಾನ.
ಸೂರ್ಯನ ಬೆಳಕಗಾಲೀ ಅಥವಾ ಚಂದ್ರನ ಬೆಳಕಗಾಲೀ ಅಥವಾ ಒಂದು ಪುಟ್ಟ ಹಣತೆಯಾದರೂ ಸಹ ನಮಗೆ ನೋಡಲು ಅನುವು ಮಾಡಿಕೊಡುತ್ತದೆ. ಆದರೆ ಜಗತ್ತನ್ನು ಸಂಪೂರ್ಣ ಕತ್ತಲೆ ಆವರಿಸಿದರೆ, ನೋಡುವ ಪ್ರಶ್ನೆಯೇ ಬರುವುದಿಲ್ಲ. ಆದರೆ ಒಂದು ಅರ್ದಂಬರ್ದವಾಗಿ ಕತ್ತಲೆ ಬೆಳಕಿನಾಟ ಕೇವಲ ತೊಂದರೆಯನ್ನು ಕೊಡುತ್ತದೆ ಎಂದು ಸೂಚ್ಯವಾಗಿ ಒಂದು ಗಹನವಾದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ, ಮಾನ್ಯ ಗುಂಡಪ್ಪನವರು.
ವಾಚಕರೆ ನೋಡಿ ಸತ್ಯವನ್ನು ಅರಿಯಲು ಅಥವಾ ನೋಡಲು ನಮಗೆ ಬೆಳಕು ಜ್ಞಾನದ ರೂಪದಲ್ಲಿ ಬೇಕು. ಆ ಬೆಳಕು ಪ್ರಖರವಾದ ಮತ್ತು ಜ್ಞಾನಕ್ಕೆ ಪ್ರತೀಕವಾದ ಸೂರ್ಯನ ಬೆಳಕಿನಂತ ಜ್ಞಾನವಾಗಬಹುದು. ಹೆಚ್ಚು ತೀಕ್ಷ್ಣವಲ್ಲದ ಬೆಳಕನ್ನು ನೀಡುವ ಚಂದ್ರನಂತೆ, ಶಾಂತ ಜ್ಞಾನವಾಗಬಹುದು ಅಥವಾ ಎಲ್ಲಕಡೆಯೂ ಕತ್ತಲಿದ್ದರೂ ಸಮೀಪದ ವಸ್ತುಗಳನ್ನು ನಿಚ್ಚಳವಾಗಿ ತೋರುವ ಹಣತೆಯ ಬೆಳಕಂತೆ ಕ್ಲುಪ್ತವಾದರೂ ಸತ್ಯವಾದ ಜ್ಞಾನವನ್ನು ನೀಡುವ ಬೆಳಕಾದರೂ ಸಾಕು. ನಮಗೆ ಸತ್ಯದ ಅರಿವಾಗುತ್ತದೆ.
ಬೆಳಕಿನಲ್ಲಿ ವಸ್ತು ವಿಷಯಗಳನ್ನು ಕಂಡರೆ ತಾನೇ ವಸ್ತುಗಳಲ್ಲಿ ವ್ಯತ್ಯಾಸ ಕಾಣುವುದು ಮತ್ತು ಅರಿತುಕೊಳ್ಳುವ ಅಪೇಕ್ಷೆ ಮತ್ತು ಪ್ರಕ್ರಿಯೆ ನಡೆಯುತ್ತದೆ. ಆದರೆ ಸಂಪೂರ್ಣ ಕತ್ತಲೆಯೇ ಆಗಿಬಿಟ್ಟರೆ, ನಮಗೆ ಶಂಕೆಯೇ ಇರದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಸಂಪೂರ್ಣ ಕತ್ತಲೆಯೆಂತೆ, ಸಂಪೂರ್ಣ ಅಜ್ಞಾನವೇ ತುಂಬಿಬಿಟ್ಟರೂ ಇದೋ, ಅದೋ, ಅಥವಾ ಯಾವುದುಎನ್ನುವ ಶಂಕೆ ಬರುವುದಿಲ್ಲ.
ಆದರೆ ಅರ್ದಂಬರ್ದ ಬೆಳಕು ಅಥವಾ ಸುಳ್ಳಾದ, ಬೆಳಕಲ್ಲದ ಬೆಳಕು ಬಂದಾಗ, ಅಂದರೆ, ಸತ್ಯವಾದ ಜ್ಞಾನವಲ್ಲದೆ ಇದ್ದರೆ ಅಸತ್ಯ ವಾದವನ್ನು ಪ್ರತಿಪಾದಿಸುವ ಪದವಿದರುತಮ್ಮ ತಮ್ಮ ಸಿದ್ಧಾಂತಗಳಿಂದ ಜನರಲ್ಲಿ ಇನ್ನಷ್ಟು ಶಂಕೆ, ಗೊಂದಲ ಮತ್ತು ತಂಟೆ ಉಂಟುಮಾಡುತ್ತಾರೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.
ಯಾವುದೇ ವಿಷಯದಬಗ್ಗೆ ಒಂದೇ ಒಂದು ಸತ್ಯವಿರುತ್ತದೆ. ಎರಡು ಸತ್ಯವಿರಲು ಸಾಧ್ಯವಿಲ್ಲ. ಹಾಗೆ ಆ ಸತ್ಯವನ್ನು ಅರಿತುಕೊಳ್ಳಲು ಜ್ಞಾನ ಬೇಕು. ಅದು ಪ್ರಖರವಾದ ಶಾಸ್ತ್ರಾಧಾರಿತ ಜ್ಞಾನವಾಗಬಹುದು, ಅಥವಾ ಶಾಂತ ಸ್ವರೂಪದ, ಕೇಳಿದ, ಚಿಂತಿಸಿ ಕಂಡುಕೊಂಡ, ಅನುಭವದ ಜ್ಞಾನವಾಗಬಹುದು ಅಥವಾ ನಮ್ಮ ಪರಿಮಿತ ಅರಿವಿಗೆ ಬಂದ ಸತ್ಯದ ರೂಪವಿರಬಹುದು. ಯಾವುದಾದರೂ ಸರಿಯೇ ಅದು ಜ್ಞಾನ ಮತ್ತು ಸತ್ಯವಾದ ಜ್ಞಾನವಾಗಿರಬೇಕು.
ಅಕಸ್ಮಾತ್ ನಾವು ಈ ಜ್ಞಾನದ ಮತ್ತು ಜ್ಞಾನವನ್ನು ಪಡೆದುಕೊಂಡು ಸತ್ಯದ ಶೋಧಕ್ಕೆ ಹೋಗದೆ ಅಜ್ಞಾನಿಗಳಾಗಿ ಉಳಿದರೆ ನಮಗೆ ಶಂಕೆಯೇ ಬರುವುದಿಲ್ಲ. ಆದರೆ ತಂಟೆ ಎಲ್ಲಿದೆಯಂದರೆ, ಎಡಬಿಡಂಗಿ ಜ್ಞಾನ, ಶಾಸ್ತ್ರವನ್ನು ಓದಿಕೊಂಡು(ಅರಿತುಕೊಂಡು ಅಲ್ಲ) ತಾನೇ ಮಹಾ ಪಂಡಿತ ಎಂದು ಕೊಚ್ಚಿಕೊಳ್ಳುವ ಅರಜ್ಞಾನಿಗಳು ಪ್ರತಿಪಾದಿಸುವ ತತ್ವಗಳು ಭಿನ್ನ ಭಿನ್ನವಾಗಿ ಜನರನ್ನು ಗೊಂದಲಕ್ಕೆ ಈಡುಮಾಡುತ್ತದೆ ಮತ್ತು ಬೇಧಗಳನ್ನು ಉಂಟುಮಾಡಿ ತಂಟೆಗೆ ಕಾರಣವಾಗುತ್ತದೆ.
ವಾಚಕರೆ, ಒಟ್ಟಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮೂಲಕ ನಮಗೆ ಒಂದು ಸಂದೇಶವನ್ನು ಕೊಡುತ್ತಾರೆ. ಅದೇನೆಂದರೆ, ಅಜ್ಞಾನಿಗಳಾಗಿ, ಶಂಕೆಯಿಲ್ಲದೆ ಇರುವುದು, ವಿಷಯಗಳನ್ನು ತಪ್ಪು ತಪ್ಪಾಗಿ ತಿಳಿದುಕೊಂಡು ತಾವೂ ಕೆಟ್ಟು ಲೋಕವನ್ನು ಕೆಡಿಸುವ ತಂಟೆ ಮಾಡುವುದಕ್ಕಿಂತ ಮೇಲು. ಆದರೆ ಪ್ರಖರವಾಗೋ, ಶಾಂತವಾಗೋ ಅಥವಾ ಅಲ್ಪವಾಗೋ ತಿಳಿದುಕೊಳ್ಳುವುದನ್ನು ಸರಿಯಾಗಿ ಅಥವಾ ಸತ್ಯವಾದುದನ್ನೇ ತಿಳಿದುಕೊಳ್ಳಬೇಕು ಎಂದು.
ರಸಧಾರೆ - 046
ಇರಲಿ ಜೀವರಹಸ್ಯವರೆಪರದೆಯೊಳಗಡಗಿ |
ಅರಸಿ ವರಿಸುವರಾರು ಬೀದಿಬತ್ತಲಿಯ ? ||
ಅರಳಿಪುದದಡಗಿರ್ದೊಡಾಗ ನಮ್ಮೆದೆಗಣ್ಣ |
ಸುರಸತೆಯ ಕುತುಕದಿಂ- ಮಂಕುತಿಮ್ಮ ||
ಜೀವರಹಸ್ಯವರೆಪರದೆಯೊಳಗಡಗಿ = ಜೀವ + ರಹಸ್ಯ + ಅರೆಪರದೆ + ಒಳಗೆ + ಅಡಗಿ. ಅರಳಿಪುದದಡಗಿರ್ದೊಡಾಗ = ಅರಳಿಪುದು + ಅದು + ಅಡಗಿ + ಇರ್ದೊಡೆ + ಆಗ. ನಮ್ಮೆದೆಗಣ್ಣ = ನಮ್ಮ + ಎದೆಗಣ್ಣು
ಇರಲಿ ಜೀವರಹಸ್ಯ ಅರೆಪರೆದೆಯ ಒಳಗೆ ಅಡಗಿ ಅರಸಿ ವರಿಸುವರಾರು ಬೀದಿ ಬತ್ತಲಿಯ? ಅರಳಿಪುದು ಅದು ಅಡಗಿ ಇರ್ದೊಡೆ ಆಗ ನಮ್ಮೆದೆಗಣ್ಣ ಸುರಸತೆಯ ಕೌತುಕದಿಂ ಮಂಕುತಿಮ್ಮ.
ಈ ಸೃಷ್ಟಿಯ ರಹಸ್ಯವು ತನ್ನ ನಿಜರೂಪವ ತೋರದೆ, ಒಂದು ಮಸುಕಾದ ಪರದೆಯೊಳಗೆ ಅಡಗಿದ್ದರೆ ಇರಲಿ. ನಮಗೆ ನಿಜವಾದ ಜ್ಞಾನವನ್ನು ಕೊಡಬೇಕಾದ ವಸ್ತು ಹೀಗೆ ಅಡಗಿ ಕುಳಿತ್ತಿದ್ದರೆ, ಹಾದಿಯಲ್ಲಿ ಹೋಗುವ ಓರ್ವ ಹುಚ್ಚಿಯನ್ನು ಯಾರಾದರೂ ಹುಡುಕಿಕೊಂಡು ಹೋಗಿ ಹೇಗೆ ವರಿಸುವುದಿಲ್ಲವೋ ಹಾಗೆ, ನಮ್ಮ ಅಂತಃಚಕ್ಷು ಕಾತರದಿಂದ ಅದನ್ನು ಅರಿಯಲು ಕಾಯುತ್ತಿರುತ್ತದೆ ಎಂದು ಪರಮಾತ್ಮನನ್ನು ಅರಿತುಕೊಳ್ಳುವ ವಿಚಾರವನ್ನು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.
ಹೌದು ನಮಗೆ ಅರಿವಾಗುವುದಿಲ್ಲ. ನಮಗೆ ಎಲ್ಲವೂ ಮಸುಕು. ಯಾವುದೂ ನಿಚ್ಚಳವಿಲ್ಲ. ನಾವೆಲ್ಲಾ ಬಹಳ ವಿಚಲಿತರಾಗಿದ್ದೇವೆ. ಏಕೆಂದರೆ ನಮ್ಮೆದುರಿಗೆ ಹಲವಾರು ರೂಪಗಳ ವಿವರಣೆ ಇದೆ. ಹಲವಾರು ಸಿದ್ಧಾಂತಗಳು ಹಲವಾರು ಬೇಧಗಳು ಮತ್ತು ಪ್ರಬೇಧಗಳು. ಯಾವುದನ್ನು ನಂಬುವುದು, ಯಾವುದನ್ನು ಹಿಡಿದುಕೊಳ್ಳುವುದು, ಯಾವುದನ್ನು ಬಿಡುವುದು. ಎಲ್ಲವೂ ಮಸುಕು ಮಸುಕು. ಎಲ್ಲವೂ ನಮಗೆ ಸಮರ್ಪಕವಾಗೆ ಕಾಣುತ್ತದೆ. ಏಕೆಂದರೆ ನಮ್ಮನ್ನು ಸತ್ಯವಾದ ಜ್ಞಾನದೆಡೆಗೆ ಕೊಂಡೊಯ್ಯಬೇಕಾದ ವಸ್ತುವೇ ಅಡಗಿ ಕುಳಿತಿದೆ. ಅರಳಿಪುದು ಅದು ಅಡಗಿ ಇರ್ದೊಡೆಹಾಗಿರುವಾಗ ನಾವು ಏನು ಮಾಡಬೇಕು. ಆ ಸತ್ಯದ ಅರಿವಾಗುವತನಕ ಹೃದಯದ ಕಣ್ಣನ್ನು ತೆರೆದಿಟ್ಟುಕೊಂಡು ಮನಸ್ಸಿನ ಕಣ್ಣನ್ನು ತೆರೆದಿಟ್ಟುಕೊಂಡು ಕಾತರದಿ ಕಾಯುವುದನ್ನು ಬಿಟ್ಟರೆ ಬೇರೆ ಏನು ದಾರಿ ಎನ್ನುವ ಭಾವ ವ್ಯಕ್ತವಾಗಿದೆ ಈ ಕಗ್ಗದಲ್ಲಿ.
ನೋಡಿ ನಮ್ಮ ಸಮಾಜದಲ್ಲಿ ಏನಲ್ಲ ನಂಬಿಕೆಗಳುಂಟು. ಆದರೆ ಯಾವುದೂ ಸಹ ಇದೆ ಪರಮ ಸತ್ಯವೆನ್ನುವ ಗುಂಪಿಗೆ ಸೇರಲಾರದು. ಏಕೆಂದರೆ ಪರಮ ಸತ್ಯದ ಅರಿವು ನಮಗಿಲ್ಲ. ಹಾಗೆ ಇದ್ದಿದ್ದರೆ, ಇಷ್ಟು ಬೇಧಗಳು ಇರುತ್ತಿರಲಿಲ್ಲ ಅಲ್ಲವೇ? ಕೆಲವರಿಗೆ , ಶಿವರೂಪ, ಕೆಲವರಿಗೆ ವಿಷ್ಣುರೂಪ , ಕೆಲವರಿಗೆ ಎರಡೂ. ಕೆಲವರಿಗೆ ಒಂದು” ( ಅದ್ವೈತ) ಕೆಲವರಿಗೆ ಯಾವುದೋ ವಿಶೇಷವಾದ ಒಂದು” (ವಿಶಿಷ್ಟಾದ್ವೈತ) ಕೆಲವರಿಗೆ ಒಂದಲ್ಲಎರಡು (ದ್ವೈತ). ಕೆಲವರಿಗೆ ಕರ್ತಾರ ಕೆಲವರಿಗೆ ಅಲ್ಲಾ ” . ಹೀಗೆ ಬೇರೆ ಬೇರೆ ಜನರಿಗೆ ಬೇರೆಯಾದರೆ, ಒಂದೇ ಸತ್ಯದ ದರ್ಶನವಾಗಿಲ್ಲವೆಂದೇ ಅರ್ಥವಲ್ಲವೇ?
ಇನ್ನೂ ಸ್ವಲ್ಪ ಆಳವಾಗಿ ಹೋದರೆ, ಆ ಒಂದನ್ನೂ ಅಥವಾ ಎರಡನ್ನೂ ಅರಿಯುವ ಪರಿಯಾದರೂ ಒಂದೇ ಇದೆಯೋ ಎಂದರೆ, ಅದೂ ಇಲ್ಲ. ವೈಷ್ಣವರಲ್ಲಿ ಶ್ರೀ ವೈಷ್ಣವರು, ಮಾದ್ವರು, ಸ್ಮಾರ್ಥರು, ಗೌಡೀಯರು, ಸ್ವಾಮೀ ನಾರಾಯಣ ಪಂಥದವರು, ಇನ್ನು ಶೈವರಲ್ಲಿ ಸ್ಥಾವರಲಿಂಗವನ್ನು ಪೂಜಿಸುವ ಶೈವರು, ” ಜಂಗಮಲಿಂಗವನ್ನು ಪೂಜಿಸುವ ವೀರಶೈವರು. ಈ ಎಲ್ಲ ಪಂಗಡಗಳಲ್ಲೂ ಒಳಪಂಗಡಗಳು ಮತ್ತು ಆ ಒಳಪಂಗಡಗಳಲ್ಲಿ ಒಳಪಂಗಡಗಳು. ಈ ಬೆಧಗಳ ಬಗ್ಗೆ ಬರೆದರೆ ಒಂದು ಗ್ರಂಥವನ್ನೇ ಬರೆಯಬಹುದು. ಆದರೆ ಆ ಪರಮ ಸತ್ಯದ ಬಗ್ಗೆ ಬರೆಲು ಒಂದು ಪುಟದಷ್ಟೂ ಗೊತ್ತಿಲ್ಲ. ಇದೆಲ್ಲ ಏಕೆ, ಏನು ಎಂದು ಆಲೋಚನೆ ಮಾಡಿದರೆ, ನಮಗೆ ಇನ್ನಷ್ಟು ಗೊಂದಲವುಂಟಾಗುತ್ತದೆ.
ಕೆಲವರಿಗೆ ವಾರಕ್ಕೊಂದು ದೇವರು. ದಿನಕ್ಕೊಂದು ದೇವರು. ಆ ದೇವರುಗಳಿಗೆ ಬೇರೆ ಬೇರೆಯಾದ ವ್ರತ ನೇಮಗಳು. ಕೆಲವರಿಗೆ ಇದ್ದಾನೆ ಕೆಲವರಿಗೆ ಇಲ್ಲ.ಕೆಲವರಿಗೆ ಗೊತ್ತಿಲ್ಲ. ಯಾರೂ ಒಬ್ಬ ಅವನ ಅನುಭವದ ಸೀಮಿತ ಮಿತಿಯಿಂದ ಏನನ್ನೋ ಹೇಳುತ್ತಾನೆ. ನಾವು ಯೋಚನೆ, ಚಿಂತನೆ ಮಾಡಲು ಅಸಮರ್ಥರು. ಅವನ ಬಾಲ ಹಿಡಿದು ಅವನು ಹೇಳಿದ್ದನ್ನು ನಂಬುತ್ತೇವೆ. ಅವನ ದರ್ಶನವನ್ನು ನಮ್ಮ ದರ್ಶನವೆಂದು ಹೇಗೆ ನಂಬುವುದು. ಹೀಗೆ ಇಷ್ಟೊಂದು ಬೇಧಗಳಿರುವಾಗ, ಒಂದು ಸತ್ಯವು ಇನ್ನೂ ಪ್ರಕಟವಾಗದೆ, ಅಡಗಿ ಕುಳಿತಂತೆ ಅಲ್ಲವೇ? ಯಾವುದೂ ಇದೇ-ಇದು ಎಂದು ನಿಷ್ಕರ್ಷೆಯಾಗದಿರುವಾಗ, ನಾವು ಯಾವುದನ್ನೋ ಒಂದನ್ನು ಹಿಡಿದುಕೊಂಡು ಹೋದರೆ ದಾರಿಯಲ್ಲಿ ಹೋಗುವ ಹುಚ್ಚಿಯನ್ನು ಇಷ್ಟಪಟ್ಟು ಮಾಡುವೆ ಮಾಡಿಕೊಂಡಹಾಗೆ ಎನ್ನುತ್ತಾರೆಶ್ರೀ. ಡಿ .ವಿ. ಜಿ.ಯವರು.
ಹಾಗಾಗಿ ವಾಚಕರೆ, ನಾವು ಏನು ಮಾಡಬೇಕು ಎಂದರೆ, ಅಂತರ್ಮುಖಿಗಳಾಗಬೇಕು. ನಮ್ಮ ಒಳಗಿರುವ ಜ್ಞಾನದ ಕಣ್ಣನ್ನು ಉದ್ದೀಪನಗೊಳಿಸಬೇಕು, ಒಬ್ಬ ಸರಿಯಾದ ಗುರುವನ್ನು ಆಶ್ರಯಿಸಬೇಕು ಮತ್ತು ನಮಗೆ ಆ ಪರಮ ಸತ್ಯದ ಅರಿವಾಗುವವ ತನಕ ಕಾಯಬೇಕು. ಎಂದೋ ಒಂದು ದಿನ ನಮಗೂ ಅರಿವು ಮೂಡುತ್ತದೆ ಮತ್ತು ಆ ಪರಮ ಶಕ್ತಿಯ ನಿಜ ಸ್ವರೂಪದ ದರ್ಶನವಾಗುತ್ತದೆ. ಹಾಗೆಂದರೆ, ನಾಲ್ಕು ಕೈಗಳಿಂದ, ಶಂಖ ಚಕ್ರಗಳಿಂದ ಅಲಂಕೃತನಾದ ವಿಷ್ಣುವೋ ಅಥವಾ ತ್ರಿಶೂಲಪಾಣಿಯಾಗಿ, ವಿಷಕಂಠನಾದ ಶಿವನೋ ಕಾಣುತ್ತಾರೆಂದಲ್ಲ. ಆ ರೂಪದ ಹಿಂದಿರುವ ತತ್ವದ ದರ್ಶನವಾಗುತ್ತದೆ. ಅದೇ ಆಧ್ಯಾತ್ಮ ಸಾಧನೆಯ ಉದ್ದೇಶ್ಯ.
ರಸಧಾರೆ - 047
ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು ?
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು?
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ
ಪರಿಕಿಸಿದೊಡದು ಲಾಭ ಮಂಕುತಿಮ್ಮ.
ಧರೆಯೊಳೆಂದೊರಲಿ = ಧರೆಯೊಳು + ಎಂದು + ಒರಲಿ. ಬೆಳಕಿನೊಳಾದನಿತ = ಬೆಳಕಿನೊಳು + ಆದ + ಇನಿತ.
ಅರೆಗಣ್ಣು = ಅರ್ದಂಬರ್ದ ಜ್ಞಾನ. ಅರೆಬೆಳಕು = ಅರ್ಧಬೆಳಕು. ಒರಲಿ = ಕೂಗಿ. ಇನಿತ= ಒಂದಿಷ್ಟು, ಪರಿಕಿಸಿದೊಡದು = ಪರೀಕ್ಷಿಸಿದರೆ ಅದು
ಅರೆಗಣ್ಣು ನಮದು ಎಂದು ಕೊರಗಿ ಕೊರಗಿ ಫಲವೇನು? ಅರೆ ಬೆಳಕು ಧರೆಯೊಳು ಎಂದು ಒರಲಿ ಸುಖವೇನು?
ಇರುವ ಕಣ್ಣಿರುವ ಬೆಳಕಿನೊಳು ಆದ ಇನಿತ ನೋಡಿ ಪರಿಕಿಸಿದೊಡದು ಅದು ಲಾಭ ಮಂಕುತಿಮ್ಮ
ನಮಗೆ ತಿಳಿದಿರುವುದು ಅರೆ ಬರೆ. ಈ ಅರೆ ಬರೆ ಜ್ಞಾನವನ್ನು ಇಟ್ಟುಕೊಂಡು ನಾವು ಪೂರ್ಣ ಸತ್ಯವನ್ನು ಪಡೆಯುವುದು ಹೇಗೆ ಎಂದು ಗೋಳಾಡದೆ ಇರುವ ಅರಿವಿನಿಂದ ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರೆ ಅದು ಲಾಭಧಾಯಕವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ಜಗತ್ತಿನ ಯಾವುದೇ ಭಾಗದಲ್ಲಿ ದಿನದ ಅರ್ಧಭಾಗ ಬೆಳಕು ಇನ್ನರ್ಧಭಾಗ ಕತ್ತಲು. ಬೆಳಕಿನಲ್ಲಿ ನಾವು ನಮ್ಮ ಕೆಲಸ ಕಾರ್ಯಗಳು ಮಾಡುವಹಾಗೆ, ಇರುವ ಜ್ಞಾನವನ್ನು ಉಪಯೋಗಿಸಿದರೆ ಲಾಭ ಎನ್ನುತ್ತಾರೆ. ಮಾನ್ಯ ಗುಂಡಪ್ಪನವರು.
ಒಬ್ಬ ಒಂದು ರಾತ್ರಿ ಎಲ್ಲೋ ಹೋಗಬೇಕಿತ್ತು. ಕತ್ತಲೆ. ಕೈನಲ್ಲಿ ಒಂದು ಲಾಟೀನು. ಅವನು ಹೋಗಬೇಕಾದ ದೂರ ಹತ್ತು ಮೈಲು. ಅಯ್ಯೋ ಈ ಕಡಿಮೆ ಬೆಳಕಿನ ಲಾಟೀನು ಇಟ್ಟುಕೊಂಡು ಅಷ್ಟು ದೂರ ನಾ ಹೇಗೆ ಸವೆಸುವುದು ಎಂದು ಯೋಚಿಸುತ್ತಾ ಕುಳಿತಿದ್ದ. ಆಗ ಅವನಿಗೆ ಒಬ್ಬರು ಒಂದು ಸೂಚನೆಯನ್ನು ಕೊಟ್ಟರು. ನಿನ್ನ ಲಾಟೀನಿನ ಬೆಳಕು ಹತ್ತು ಹೆಜ್ಜೆಗೆ ಸಾಕಾಗುವಷ್ಟು ಬೆಳಕನ್ನು ನೀಡುತ್ತದೆ. ಹಾಗಾಗಿ ಮೊದಲ ಹತ್ತು ಹೆಜ್ಜೆ ಆ ಬೆಳಕಿನ ಸಹಾಯದಿಂದ ನಡೆ. ಮುಂದಕ್ಕೆ ಇನ್ನೂ ಹತ್ತು ಹೆಜ್ಜೆ ನಿಚ್ಚಳವಾಗಿ ಕಾಣುವುದು. ಇದೇ ರೀತಿ ನೀ ಸವೆಸಬೇಕೆಂದಿರುವ ಹತ್ತೂ ಮೈಲಿಗಳನ್ನು ದಾಟಬಹುದುಎಂದು. ಅವರ ಮಾತ ಕೇಳಿ ಅವ ಹತ್ತೂ ಮೈಲಿಗಳನ್ನು ಸುನಾಯಾಸವಾಗಿ ದಾಟಿದ.
ವಾಚಕರೆ, ಎಲ್ಲ ಮಾನವರಿಗೂ ಒಂದಿನಿತು ಜ್ಞಾನವಿರುತ್ತದೆ. ಅದರ ಬೆಳವಣಿಗೆ ಮತ್ತು ವಿಸ್ತಾರ, ಅವರು ಹುಟ್ಟಿಬಂದ ಮನೆಯ ವಾತಾವರಣ, ಅವರಿರುವ ಸಮಾಜ, ಅವರಿಗೆ ದೊರೆತ ವಿಧ್ಯಾಭ್ಯಾಸ, ಅವರಿಗೆ ದೊರೆತ ಸಾಂಗತ್ಯ ಅವರು ಓದುವ ಪುಸ್ತಕ, ಹೀಗೆ ಹಲವಾರು ವಿಷಯಗಳ ಮೇಲೆ ಅಧಾರವಾಗಿರುತ್ತೆ. ಹಾಗಾಗಿಯೇ ಜನರಲ್ಲಿ ಅರಿವಿನ ಪ್ರಮಾಣದ ವ್ಯತ್ಯಾಸ ಮತ್ತು ಅರಿವಿನ ವ್ಯತ್ಯಯ. ಅಯ್ಯೋ ಅವರಿಗೆ ಎಷ್ಟು ವಿಷಯ ಗೊತ್ತು,ನನಗೇನೂ ಗೊತ್ತಿಲ್ಲ ಎಂದು ಹಲುಬುವುದಕ್ಕಿಂತ, ನಮಗೆ ಗೊತ್ತಿರುವ ವಿಚಾರಗಳನ್ನೇ ಚಿಂತಿಸಿ, ಅಂತರಂಗದಲ್ಲಿ ಮಥಿಸಿ, ಜ್ಞಾನಿಗಳೊಡಗೂಡಿ, ಆಲಿಸಿ, ಸಂದೇಹಗಳನ್ನು ನಿವಾರಿಸಿಕೊಂಡು, ನಮ್ಮೊಳಗೇ ನಾವೇ ವಿಚಾರಮಂಥನ ಮಾಡಿಕೊಂಡರೆ, ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದು.
ಹಾಗಾಗಿ, ನಾವು ಸತ್ಯವಾಗಿ ನಮ್ಮ ನಮ್ಮ ಅರಿವಿನ ಸ್ಥರವನ್ನು ಅರಿತುಕೊಳ್ಳಬೇಕು. ಅರಿತಿದ್ದನ್ನು ಸಂದೇಹವಿಲ್ಲದೆ ಗಟ್ಟಿಮಾಡಿಕೊಳ್ಳಬೇಕು. ಮೇಲೆ ಹೇಳಿದ ವಿಧಾನದಲ್ಲಿ ಅದನ್ನು ವಿಸ್ತರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಾಗೆ ಮಾಡಿದರೆ ನಮಗೆ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಲಾಭವಾಗುತ್ತೆ ಎನ್ನುವುದೇ ಈ ಕಗ್ಗದ ಹೂರಣ.
ರಸಧಾರೆ - 048
ಒಂದಿಹುದುಪಾಯವೋರೊರ್ವನರೆಗಣ್ಣುಗಳು
ವೊಂದೊಂದು ಸತ್ಯಾಂಶಕಿರಣಗಳ ಪಿಡಿದು
ಒಂದುಗೂಡಿದೊಡವರ್ಗಳರಿವನೆಲ್ಲವನಾಗ
ಮುಂದುಸಾಗುವೆವಿನಿತು ಮಂಕು ತಿಮ್ಮ
ಒಂದಿಹುದುಪಾಯವೊರೊರ್ವನರೆಗಣ್ಣುಗಳು = ಒಂದು + ಇಹುದು + ಉಪಾಯ + ವೋರೊರ್ವನ + ಅರೆಗಣ್ಣುಗಳು / ಒಂದುಗೂಡಿದೊಡವರ್ಗಳರಿವನೆಲ್ಲವನಾಗ = ಒಂದು + ಕೂಡಿದೊಡೆ + ಅವರ + ಅರಿವನೆಲ್ಲವ + ಆಗ ಅರೆಗಣ್ಣುಗಳು = ಅರೆಬರೆ ಜ್ಞಾನ, ಇನಿತು = ಸ್ವಲ್ಪ.
ಒಂದು ಇಹುದು ಉಪಾಯ ಓರೋರ್ವನ ಅರೆಗಣ್ಣುಗಳು ಒಂದೊಂದು ಸತ್ಯಾಂಶ ಕಿರಣಗಳ ಪಿಡಿದು ಒಂದು ಕೂಡಿದೊಡೆ ಅವರ್ಗಳ ಅರಿವನೆಲ್ಲವ ಆಗ ಮುಂದು ಸಾಗುವೆ ಇನಿತು ಮಂಕುತಿಮ್ಮ
ಎಲ್ಲರಲ್ಲೂ ಅವರವರ ಭಾವಕ್ಕೆ ಅನುಗುಣವಾಗಿ ಅಲ್ಪ ಸ್ವಲ್ಪ ಜ್ಞಾನವಿರುತ್ತದೆ. ಜ್ಞಾನಶೂನ್ಯ ಎಂಬುವವನು ಇರಲು ಸಾಧ್ಯವೇ ಇಲ್ಲ. ಹಾಗೆ ಎಲ್ಲರಿಗೂ ಇರುವ ಅಲ್ಪಸ್ವಲ್ಪ ಜ್ಞಾನಗಳನ್ನೆಲ್ಲ, ಎಲ್ಲರ ಮನದಲ್ಲಿರುವ ಸತ್ಯವಾದ ವಿಚಾರಗಳನ್ನು ಒಂದು ಕಡೆ ಸೇರಿಸಿ ಎಲ್ಲರೂ ತಮ್ಮ ಮತವೆ ಉತ್ತಮವಾದದ್ದು ಎಂಬ ಭಾವನೆ ತೊರೆದು ಒಮ್ಮತದಿಂದ ಮುಂದೆ ಹೋದರೆ, ಎಲ್ಲರೂ ಪರಮಸತ್ಯವನ್ನರಿಯುವ ಹಾದಿಯಲ್ಲಿ ಒಂದಿಷ್ಟು ಮುಂದಕ್ಕೆ ಹೋಗಬಹುದು ಎನ್ನುವುದು ಈ ಕಗ್ಗದ ಮೂಲಕ ಮಾನ್ಯ ಗುಂಡಪ್ಪನವರ ಪ್ರಸ್ತಾಪ.
ನೋಡಿ ಪ್ರತಿಯೊಂದು ವಿಷಯದಲ್ಲೂ ಪ್ರತಿಯೊಬ್ಬರೂ ಅವರವರದೇ ಅದಂತ ಅಭಿಪ್ರಾಯಗಳನ್ನು ಇಟ್ಟುಕೊಂಡಿರುತ್ತಾರೆ. ಬಹಳ ಕಡಿಮೆ ಸಂದರ್ಭದಲ್ಲಿ ಇಬ್ಬರ ಅಭಿಮತ ಸೇರುತ್ತದೆ. ಆದರೆ ಪ್ರತಿಯೊಬ್ಬರ ಅಭಿಮತವನ್ನೂ ಬೇರೆ ಬೇರೆಯಾಗಿ, ಪೂರ್ವಾಗ್ರಹವಿಲ್ಲದೆ, ನೋಡಿದರೆ ಎಲ್ಲವೂ ಸರಿಯೆಂದು ಕಾಣುತ್ತದೆ. ಇದೇ ರೀತಿ ಆ ಪರಮಾತ್ಮನನ್ನು ಅರಿಯುವ ಪರಿಯಲ್ಲೂ ಪ್ರತಿಯೊಬ್ಬರಿಗೂ ಅವರವರದೇ ಆದಂತ ಅಭಿಪ್ರಾಯಗಳಿರುತ್ತದೆ.ಅದು ಅವರವರ ಭಾವಕ್ಕೆ ಬಂದದ್ದು. ಅಲ್ಲಗೆಳೆಯುವಂತಿಲ್ಲ. ಆದರೆ ಯಾವುದೂ ಸಂಪೂರ್ಣ ಸತ್ಯದೆಡೆಗೆ ನಮ್ಮನ್ನು ಕೊಂಡುಹೋಗುವಲ್ಲಿ ಅಸಮರ್ಥವಾಗಿರುತ್ತದೆ.
ಈ ಜಗತ್ತಿನಲ್ಲಿರುವ ಎಲ್ಲ ಮತಗಳೂ ಹೇಗೆಯೇ. ಹತ್ತು ಹಲವಾರು. ಉದ್ದೇಶ್ಯ ಒಂದೇ ಆದರೂ ಮಾರ್ಗಗಳು ಬೇರೆ ಬೇರೆ. ಕೆಲವರದು ವಿಸ್ತಾರ, ಮತ್ತೆ ಕೆಲವರದು ಕ್ಲುಪ್ತ. ಕೆಲವರದು ಸುಲಭ, ಮತ್ತೆ ಕೆಲವರದು ಕ್ಲಿಷ್ಟ. ಗುಂಪು ಗುಂಪುಗಳಾಗಿ ಜನರು, ತಮ್ಮ ಯೋಚನಾ ಸಾಮರ್ಥ್ಯಕ್ಕೆ ತಿಲಾಂಜಲಿ ಕೊಟ್ಟು ಕೆಲವರನ್ನು ಮತ್ತು ಕೆಲವರ ಅಭಿಮತವನ್ನು, ನಂಬುತ್ತಾರೆ. ಅದನ್ನು ಅಂಧಾನುಕರಣೆ ಎನ್ನುತ್ತೀರೋ ಅಥವಾ ಮೂಢನಂಬಿಕೆ ಎನ್ನುತೀರೋ ವಾಚಕರ ಅಭಿಮತಕ್ಕೆ ಬಿಟ್ಟದ್ದು. ಈ ಮತ ಪ್ರತಿಪಾದಕರು ತಮ್ಮ ಮತವೆ ಉತ್ತಮ, ಉತ್ಕೃಷ್ಟ, ಬೇರೆಲ್ಲವೂ ಸರಿಯಿಲ್ಲ ಎನ್ನುವ ಬೇಧವನ್ನು ಅವರ ಅನುಯಾಯಿಗಳ ಮನದಲ್ಲಿ ಬಿತ್ತಿ, ತಮ್ಮ ಅನುಯಾಯಿಗಳ ಸಂಖ್ಯೆಯನ್ನು ಬೆಳೆಸಿಕೊಳ್ಳುವುದರಲ್ಲಿ ನಿರಂತರ ನಿರತರು. ಹಾಗಾಗಿಯೇ ಇಷ್ಟೊಂದು ಮತಗಳು, ಮತಬೇಧಗಳು ಮತ್ತು ಮತೀಯ ಕಲಹಗಳು.
ಅಜ್ಞಾನದ ಪರಮಾವದಿ !!!! ನಾವೇನು ಮಾಡಬೇಕು ಎಂದರೆ, ಮೊದಲು ನಮ್ಮ ಮನದಿಂದ ದ್ವೇಷವನ್ನು ತೆಗೆಯಬೇಕು. ಅಹಂಕಾರವನ್ನು ತೆಗೆಯಬೇಕು. ಪರರನ್ನು ಸಹಿಸಿಕೊಳ್ಳುವ ಮನೋಭಾವ ಬೆಳೆಸಿಕೊಂಡು ವೃದ್ಧಿಸಿಕೊಳ್ಳಬೇಕು. ಆಗ ನಮಗೆ ಪ್ರತಿಯೊಬ್ಬರ ಮತದಲ್ಲೂ ಒಂದು ಮೂಲ ಸತ್ಯದ ದರ್ಶನವಾಗುತ್ತದೆ. ಹಾಗೆ ಎಲ್ಲರಲ್ಲೂ ಕಾಣುವ ಒಂದು ಸಮಾನ ಸತ್ಯಾಂಶವನ್ನು ತೆಗೆದುಕೊಂಡು ಅದನ್ನು ನಮ್ಮೆಲ್ಲರ ನಡಿಗೆಯ ಪ್ರಾರಂಭ ಬಿಂದುವನ್ನಾಗಿ ಗುರುತಿಸಿಕೊಂಡು ಅಲ್ಲಿಂದ ಮುಂದಕ್ಕೆ ಹೋದರೆ, ನಾವೆಲ್ಲರೂ ಏಕಮತದಿಂದ ಪರಮಾತ್ಮನನ್ನು ಅರಿಯುವ ನಮ್ಮ ಪ್ರಯತ್ನದಲ್ಲಿ ಸಫಲತೆಯನ್ನು ಪಡೆಯಬಹುದು ಅಲ್ಲವೆ? ಆದರೆ ಎಲ್ಲಿಯತನಕ, ಅಸಹಿಷ್ಣುತೆ ಮತ್ತು ಅಹಂಕಾರಗಳು ಇರುತ್ತವೆಯೋ ಅದು ಅಸಾಧ್ಯ.
ಹಾಗಾಗಿ ನಾವು ಅಹಂಕಾರವನ್ನು ಮತ್ತು ಅಂಧಾನುಕರಣೆಯನ್ನು ತೊರೆದು ಜಾತಿ, ಮತ, ವರ್ಣ, ಲಿಂಗ ಬೇಧಗಳನ್ನು ಅಳಿಸಿ ಒಮ್ಮತದಿಂದ ನಮ್ಮೆಲ್ಲರ ಅಂತಃಸತ್ಯವನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಿ ತನ್ಮೂಲಕ ಪರಮ ಸತ್ಯದ ಅರಿವಿನೆಡೆಗೆ ಹೋಗೋಣ.
ರಸಧಾರೆ - 049
ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ |
ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು ||
ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ |
ದಂಡವದನುಳಿದ ನುಡಿ ಮಂಕುತಿಮ್ಮ||
ಪಂಡಿತರೆ = ಪಾಂಡಿತ್ಯವನ್ನರಿತವರೆ, ಶಾಸ್ತ್ರಿಗಳೆ = ಶಾಸ್ತ್ರಗಳನ್ನರಿತವರೆ, ಮಿಥ್ಯೆಯಿಂ = ಸುಳ್ಳಿನಿಂದ ತಥ್ಯಕ್ಕೆ = ಸತ್ಯಕ್ಕೆ ಕಟ್ಟುವೊಡೆ = ಕಟ್ಟುವಾಗ, ಬಿರುಬು = ಕಾಠಿಣ್ಯ
ನರಹೃದಯದಾಳ = ನರ + ಹೃದಯದ + ಆಳ , ದಂಡವದನುಳಿದ = ದಂಡವು + ಅದನು + ಉಳಿದ
ಪಾಂಡಿತ್ಯವನ್ನು ಪ್ರತಿಪಾದಿಸುವ ಪಂಡಿತರೆ ಮತ್ತು ಶಾಸ್ತ್ರವನ್ನು ಪ್ರತಿಪಾದಿಸುವ ಶಾಸ್ತ್ರಿಗಳೆ, ನಿಮ್ಮ ಪಾಂಡಿತ್ಯದಿಂದ ಮತ್ತು ಶಾಸ್ತ್ರ ಪ್ರತಿಪಾದನೆಯಿಂದ ಸುಳ್ಳನ್ನೇ ನಿಜವೆಂದು ನಿರೂಪಿಸಲು ಮತ್ತು ಇವೆರಡರ ಮಧ್ಯೆ ಒಂದು ಸೇತುವೆಯನ್ನು ಕಟ್ಟುವಾಗ ಸಾಮಾನ್ಯ ಮನುಜರ ಹೃದಯದಾಳದಲ್ಲಿ ಇರುವ ಗೊಂದಲಗಳು, ಅವರು ಅನುಭವಿಸುವ ಕಾಠಿಣ್ಯಗಳನ್ನು ಕಂಡಿದ್ದೀರಾ ಎಂದು ಕೇಳುತ್ತಾ ಸಾಮಾನ್ಯರ ಮನದ ಭಾವದ ಮುಂದೆ ಎಲ್ಲ ಪಾಂಡಿತ್ಯವೂ ಮತ್ತು ಶಾಸ್ತ್ರಗಳೂ ದಂಡವೆನ್ನುತ್ತಾರೆ (ನಿಷ್ಪ್ರಯೋಜಕ) ಮಾನ್ಯ ಗುಂಡಪ್ಪನವರು.
ಪುಸ್ತಕದ ಬದನೇಕಾಯಿಎನ್ನುವ ಮಾತು ಒಂದು ಇದೆ. ಅಂದರೆ ಯಾರೋ ಬರೆದ ವಿಷಯವನ್ನು ಓದಿಕೊಂಡು ಮನನಮಾಡಿಕೊಂಡು ತಮ್ಮ ವಾಗ್ಜರಿಯಿಂದ ತಾವು ಅರಿತಿದ್ದು ಸತ್ಯವೋ ಸುಳ್ಳೋ ಎಂದು ವಿವೇಚನೆಯಿಲ್ಲದೆ ತಮ್ಮ ಪಾಂಡಿತ್ಯವನ್ನು ಪ್ರಸ್ತುತಪಡಿಸುವ ಪಂಡಿತರ ಪರಿ ಮತ್ತು ತಮ್ಮ ಅನುಭವಕ್ಕೆ ತಂದುಕೊಳ್ಳದೆ ಶಾಸ್ತ್ರವನ್ನು ಓದಿಕೊಂಡು, ಆ ಶಾಸ್ತ್ರದಲ್ಲಿನ ವಿಧಾನಗಳು ವೈಜ್ಞಾನಿಕವೋ ಅಥವಾ ಮಾತ್ರ ಮೂಢನಂಬಿಕೆಯೋ ಎಂಬುದನ್ನು ಪರೀಕ್ಷಿಸದೆ ತಾವು ತಿಳಿದಿದ್ದೆ ಸತ್ಯವೆಂದು ಜನಗಳಿಗೆ ತಮ್ಮ ಮತವನ್ನು ರುಬ್ಬುವ ಶಾಸ್ತ್ರ ಪ್ರತಿಪಾದಕರ ವಿಧಾನ ಎರಡೂ ಸರಿಯಲ್ಲ. ಅವರು ಕೆಲವು ಬಾರಿ ತಮ್ಮ ಅರಿವು ಸತ್ಯಕ್ಕೆ ದೂರವಾಗಿದೆ ಎಂದು ಅರಿತಿದ್ದರೂ ತಾವು ತಿಳಿದದ್ದೇ ಸತ್ಯವೆಂದು ಪ್ರತಿಪಾದಿಸಿ, ತಮ್ಮ ಸ್ಥಾನವನ್ನು ಸುಭಧ್ರವಾಗಿಸಿಕೊಳ್ಳಲು ಸತ್ಯ ಮತ್ತು ಸುಳ್ಳಿನ ಮಧ್ಯೆ ಒಂದು ಸೇತುವೆಯನ್ನು ಕಟ್ಟುತ್ತಾರೆ. ಇವರು ಪ್ರತಿಪಾದಿಸುವ ವಿಷಯಗಳನ್ನು ಇನ್ನು ಸ್ವಲ್ಪ ಸಮಯದ ನಂತರ ಬೇರೆ ಯಾರೋ ಸುಳ್ಳೆಂದು ನಿರೂಪಿಸುತ್ತಾರೆ!!!
ಏಕೆಂದರೆ ಅವರಿಗೆ ಸಾಮಾನ್ಯ ಮಾನವರ ಮನದ ಅಂತರಂಗದಲ್ಲಿರುವ ಭಾವನೆಗಳು ಅರ್ಥವೇ ಆಗುವುದಿಲ್ಲ ಅಥವಾ ಇವರುಗಳು ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಅವುಗಳು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಏಕೆಂದರೆ ಅವು ಅನುಭವದ ಮೂಸೆಯಿಂದ ಎರಕ ಹೊಯ್ದಂತಾಗಿರುತ್ತದೆ. ಪ್ರತಿಯೊಂದು ವಸ್ತು ಮತ್ತು ವಿಷಯ ಅವರು ಸ್ವತಃ ಅನುಭವಿಸಿ ನಿಜ ಭಾವಗಳನ್ನು ಅರ್ಥೈಸಿಕೊಂಡು ಅನುಭವಿಸಿರುತ್ತಾರೆ. ಆ ರೀತಿಯ ಯಾವ ಅನುಭವವೂ ಇಲ್ಲದೆ, ಕೇವಲ ಪುಸ್ತಕದ ಮಾತು ಶಾಸ್ತ್ರದ ವಿಷಯವನ್ನು ಪ್ರತಿಪಾದಿಸುವ ಪಂಡಿತರನುಡಿಗಳಿಗಿಂತ ಜನ ಸಾಮಾನ್ಯರ ಅಂತರ್ಯದ ಅನುಭವದ ಭಾವಗಳಿಗೆ ಹೆಚ್ಚು ಮಹತ್ವ ಎನ್ನುತ್ತಾರೆ ಶ್ರೀ ಗುಂಡಪ್ಪನವರು.
ವಾಚಕರೆ ಇದು ನಮಗೂ ಅನುಭವಕ್ಕೆ ಬಂದಿರುವ ವಿಷಯವೇ. ಆದರೆ ಶಾಸ್ತ್ರ ಮತ್ತು ಪುಸ್ತಕದ ವಿಚಾರಗಳನ್ನು ಸಂಪೂರ್ಣ ತೊರೆಯಬೇಕೆ ಎನ್ನುವುದು ಪ್ರಶ್ನೆ? ಅಲ್ಲ. ಹಾಗೆ ತೊರೆಯುವುದೂ ಬೇಡ. ನಾವು ಏನು ಮಾಡಬೇಕೆಂದರೆ, ಆ ಪುಸ್ತಕಗಳ ಮತ್ತು ಶಾಸ್ತ್ರಗಳ ವಿಷಯಗಳನ್ನು ನಮ್ಮ ವಿಚಾರಕ್ಕೆ ಒಳಪಡಿಸಿ, ತಿಕ್ಕಿ, ತೀಡಿ, ಕಡೆದು ಅದರೊಳಗಿನ ಸತ್ವವನ್ನು ನಮ್ಮ ಅನುಭವಗಳೊಂದಿಗೆ ಮಿಶ್ರಣ ಮಾಡಿ ನಮಗೆ ಗೋಚರವಾದ ಸತ್ಯವನ್ನು ನಾವು ನಮ್ಮ ಮನಸ್ಸುಗಳಲ್ಲಿ ಗಟ್ಟಿಮಾಡಿಕೊಳ್ಳಬೇಕು. ಹೇಗೆ ಒಂದು ಹಂಸವು ನೀರು ಬೆರೆತ ಹಾಲಿನಲ್ಲಿ ನೀರನ್ನು ತೊರೆದು ಹಾಲನ್ನು ಮಾತ್ರ ಹೀರುತ್ತದೋ ಹಾಗೆ ನಾವು ಈ ಶಾಸ್ತ್ರ ಮತ್ತು ಪಾಂಡಿತ್ಯದ ವಿಚಾರಗಳಲ್ಲಿರುವ ಸತ್ವವನ್ನು ಹೀರಿ ನಮ್ಮ ವಿಚಾರವನ್ನು ಶುದ್ಧಿಮಾಡಿಕೊಳ್ಳಬೇಕು. ಶುದ್ಧ ವಿಚಾರದಿಂದ, ಶುದ್ಧ ಆಚರಣೆ ಶುದ್ಧ ಆಚರಣೆಯಿಂದ ಮನೋ ನೆಮ್ಮದಿ.
ರಸಧಾರೆ - 050
ಮನೆಯೆಲ್ಲಿ ಸತ್ಯಕ್ಕೆ? ಶೃತಿ ತರ್ಕಮಾತ್ರದೊಳೆ? |
ಅನುಭವಮುಮದರೊಂದು ನೆಲೆಯಾಗದಿಹುದೇಂ? ||
ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ |
ಅನಕಿಪುವು ತರ್ಕವನ್ನು ಮಂಕುತಿಮ್ಮ
ಅನುಭವಮುಮದರೊಂದು = ಅನುಭವಮುಂ + ಅದರೊಳು + ಒಂದು, ನೆಲೆಯಾಗದಿಹುದೇಂ = ನೆಲೆ + ಆಗದಿಹುದು + ಅದೇಂ, ಮನುಜಹೃದಯಾಂಗಣದೊಳೆನಿತೆನಿತೊ = ಮನುಜ + ಹೃದಯ + ಆಂಗಣದೊಳು + ಎನಿತು + ಇನಿತೋ, ದನಿಯುದಿಸಿ= ದನಿಯು + ಉದಿಸಿ, ಅಣಕಿಪುವು = ಅಣಕವಾಡುತ್ತದೆ. ಉದಿಸಿ = ಉದ್ಭವವಾಗಿ
ಸತ್ಯಕ್ಕೆ ಎಲ್ಲಿ ಮನೆ? ಶೃತಿ ತರ್ಕ ಮತ್ತು ವಾದಗಳಲ್ಲಿ ಮಾತ್ರವೇನು? ಮನುಜರ ಅನುಭವವೂ ಸತ್ಯವನ್ನು ನುಡಿಯಬಾರದೇನು? ಮನುಜರ ಹೃದಯದ ಆಂಗಣದಲ್ಲಿ ಹತ್ತು ಹಲವಾರು ಸತ್ಯದ ಭಾವಗಳು ಉದಯಿಸಿ ಈ ಶಾಸ್ತ್ರ ತರ್ಕ ಮತ್ತು ವಾದಗಳು ಪ್ರತಿಪಾದಿಸುವ ಸತ್ಯವನ್ನೆಲ್ಲ ಅಣಕಿಸುತ್ತವೆ ಎನ್ನುತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಹಿಂದಿನ ಕಗ್ಗದಲ್ಲಿ ಹೇಳಿದ ಪಂಡಿತರು ಮತ್ತು ಶಾಸ್ತ್ರಿಗಳು ಉಲ್ಲೇಖಿಸುವ ಶೃತಿ ತರ್ಕ ಮತ್ತು ವಾದಗಳಲ್ಲಿ ಮಾತ್ರ ಸತ್ಯವಿದೆಯೋ ?. ಏಕೆ ಸಾಮಾನ್ಯ ಜನರ ಅನುಭವಗಳಲ್ಲೂ ಸತ್ಯವಿರಬಾರದೇನು? ಎಂದು ಕೇಳುತ್ತಾರೆ ಗುಂಡಪ್ಪನವರು ಈ ಕಗ್ಗದಲ್ಲಿ, ಮುತ್ತಿನಂಥಾ ಮಾತು. ಏಕೆಂದರೆ ನಮ್ಮಲ್ಲಿ ಒಂದು ಮಾತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗೋದಿಲ್ಲಎಂದು. ಅಂದರೆ ಎಲ್ಲರೂ ನಂಬುವುದು ವೇದಗಳು ಸತ್ಯವನ್ನು ಮತ್ತು ಸತ್ವವನ್ನು ನುಡಿಯುತ್ತದೆ ಎಂದು. ಅಂದರೆ ವೇದದಲ್ಲಿ ಸತ್ಯವಿದೆ ಎಂದು.ಅದು ಅಕ್ಷರಶಃ ಸತ್ಯ. ಆದರೆ ಅವುಗಳನ್ನು ಓದಿ ಅವಕ್ಕೆ ವ್ಯಾಖ್ಯಾನ ಬರೆಯುವ ಪಂಡಿತರು ಅವಗಳನ್ನು ತಮ್ಮ ಚಿಂತನೆಯ ಹಾದಿಯಲ್ಲಿ ವಿಮರ್ಶಿಸುತ್ತಾ, ಹಲಬಾರಿ ಮೂಲದಲ್ಲಿರುವ ಸತ್ಯವನ್ನು ಮತ್ತು ಸತ್ವವನ್ನು ತಿರುಚಿ ಬರೆಯುತ್ತಾರೆ. ಅದು ಅವರ ಅನುಭವ. ಪೂರ್ಣ ಸತ್ಯವಾಗಿರುವುದಿಲ್ಲ. ಅಂತಹಾ ಉಕ್ತಿಗಳಾದರೂ ಎಂದಾದರೂ ಸುಳ್ಳಾಗಿರಬಹುದು ಆದರೆ ಗಾದೆ ಸುಳ್ಳಾಗೋಲ್ಲ ಎಂದು. ಏಕೆಂದರೆ ಗಾದೆ ಮಾತುಗಳು ಈ ಕಗ್ಗದಲ್ಲಿ ಹೇಳಿದ ಹಾಗೆ ಸಾಮಾನ್ಯ ಮನುಜಹೃದಯದ ಆಂಗಣದೊಳಗಿಂದಬಂದಂತಹ ಆಣಿಮುತ್ತುಗಳು.
ಗಟ್ಟಿ ಮತ್ತು ಆಳವಾದ ಅನುಭವ ನುಡಿಯುವ ಮಾತುಗಳು ಮನುಜ ಹೃದಯಾಂತರಾಳದಿಂದ ಮೂಡಿ ಬರುತ್ತವೆ ಮತ್ತು ಅವು ಸತ್ಯವನ್ನೇ ಹೇಳುತ್ತವೆ. ಅಂಥಹ ಸತ್ಯವಾದ ಮಾತುಗಳು ಮೇಲೆ ಹೇಳಿದ ಶೃತಿ ಮತ್ತು ತರ್ಕದೊಳಗಿನ ವಿಶ್ಲೇಷಣೆಗಳನ್ನು ಅಣಕಿಸುವಂತಿರುತ್ತವೆ. ಹಾಗಾಗಿ ನಾವು ಇವೆರಡನ್ನೂ ಪರೀಕ್ಷಿಸಿ ಸತ್ಯವನ್ನು ಮಾತ್ರ ಗಹಿಸ ಬೇಕು ಎಂದು ಅವರ ಅಭಿಪ್ರಾಯ.
ವಾಚಕರೆ, ಸಾಮಾನ್ಯ ಜನರ ಮತ್ತು ಅವರ ಅನುಭವದಿಂದ ಮೂಡಿದ ಮತ್ತು ಮನಸ್ಸಿನಿಂದ ಮೂಡಿದ ಮಾತುಗಳು ಸದಾಕಾಲಕ್ಕೂ ಸತ್ಯವಾಗಿ ಉಳಿಯುತ್ತವೆ. ತರ್ಕ ಮೀಮಾಂಸೆಗಳಂತಹ ಗ್ರಂಥಗಳು ಪ್ರತಿಪಾದಿಸುವುದಕ್ಕಿಂತ ಹೆಚ್ಚಾಗಿ ಈ ಜನಮನ ನುಡಿಗಳು ನಮಗೆ ಹೃದ್ಯವಾಗಿರುತ್ತವೆ, ಬೇಗ ಮನಸ್ಸಿಗೆ ನಾಟುತ್ತವೆ ಮತ್ತು ಬಹಳ ಕಾಲ ನಿಲ್ಲುತ್ತವೆ. ಅಂತಹ ವಿಷಯಗಳನ್ನು ನಾವೂ ಸಹ ಗ್ರಹಿಸಿ ಸತ್ಯವನ್ನರಿಯುವ ಪ್ರಯತ್ನವನ್ನು ಮಾಡೋಣ.


ರಸಧಾರೆ - 051

ಸೆಳೆಯುತಿರ್ಪುದೊಂದು ಹೊರಬೆಡಗಿನೆಳೆಗಳೆ |
ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ||
ಎಳೆದಾಟವೇಂ ಋಣಾಕರ್ಷಣೆಯೋ? ಸೃಷ್ಟಿ ವಿಧಿ |
ಯೊಳತಂತ್ರವೋ? ನೋಡು ಮಂಕುತಿಮ್ಮ. ||
ಸೆಳೆಯುತಿರ್ಪುದೊಂದು = ಸೆಳೆಯುತ + ಇರುವುದು + ಅದು + ಒಂದು ಹೊರಬೆಡಗಿನೆಳೆಗಳೆ ನ್ನೊಳಗಿನಸುವೆಲ್ಲವನು = ಹೊರ + ಬೆಡಗಿನ + ಎಳೆಗಳು + ಎನ್ನ + ಒಳಗಿನ + ಅಸು +ಎಲ್ಲವನು, ಸೃಷ್ಟಿ ವಿಧಿ ಯೊಳತಂತ್ರವೋ = ಸೃಷ್ಟಿ + ವಿಧಿಯ + ಒಳತಂತ್ರವೋ.
ಬೆಡಗು = ಅಕ್ಕರ್ಷಣೆ. ಅಸು = ಪ್ರಾಣ, ಚೇತನ, ಋಣಾಕರ್ಷಣೆ = ಪೂರ್ವಕರ್ಮದ ಸೆಳೆತ.
ಹೊರಜಗತ್ತಿನ ಆಕರ್ಷಣೆಗಳು ನನ್ನೊಳಗಿನ ಚೇತನವನ್ನು ಯಾವುದೋ ಒಂದು ಶಕ್ತಿ ಬಿಗಿದು ಕಟ್ಟಿ ಹಾಕಿ ಎಳೆಯುತ್ತಿದೆ. ಇದು ಏನು ಎಲೆದಾಟವೋ ಅಥವಾ ಪೂರ್ವ ಕರ್ಮಗಳ ಸೆಳೆತವೋ?
ಅಥವಾ ಈ ಜಗತ್ತಿನ ಸೃಷ್ಟಿಯ ನಿಯಮದ ಒಳತಂತ್ರವೋ ಎನ್ನುವುದನ್ನು ನೀನೆ ಪರಕಿಸಿ ನೋಡು ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
ಹೌದು ಹೊರಜಗತ್ತಿನಲ್ಲಿರುವ ಎಲ್ಲ ವಸ್ತುಗಳೂ ನಮ್ಮನ್ನು ತುಂಬಾ ಆಕರ್ಷಿಸುತ್ತವೆ. ಹಾಗೆಯೇ ಎಲ್ಲ ಪ್ರಾಣಿಗಳಿಗೂ ಈ ಜಗತ್ತಿನ ಎಲ್ಲ ವಸ್ತುಗಳೂ ಆಕರ್ಷಣೀಯವೇ. ನಾವು ನಮ್ಮ ಅನುಭವವನ್ನು ಹೇಳಿಕೊಳ್ಳುತ್ತೇವೆ. ಅನ್ಯ ಪ್ರಾಣಿಗಳು ಹೇಳಿಕೊಳ್ಳಲಾಗದಿದ್ದರೂ ಅನುಭವಿಸುತ್ತವೆ.
ಇರಲಿ ದ್ರುಷ್ಯಮಾಣೆ ಭವೇತ್ ಪ್ರೀತಿ: ಎಂದರೆ ವಸ್ತುಗಳನ್ನು ಕಂಡರೆ ಅದರಲ್ಲಿ ನಮಗೆ ಪ್ರೀತಿಯುಂಟಾಗುತ್ತದೆ. ಪಡೆಯಬೇಕು ಎನ್ನುವ ಆಸೆಯುಂಟಾಗುತ್ತದೆ. ಪಡೆಯುವಂತಹ ಸಾಧ್ಯತೆಗಳಿದ್ದರೆ, ಪ್ರಯತ್ನವೂ ನಡೆಯುತ್ತದೆ. ಹಲ ಸಲ ಸಫಲತೆಯೂ ದೊರಕುತ್ತದೆ. ಸಿಗಲಿ ಬಿಡಲಿ ಆಸೆ ಪಡುವುದಂತೂ ಉಂಟು. ಆಕರ್ಷಿತರಾಗುವುದಂತೂ ಉಂಟು. ಆ ಆಕರ್ಷಣೆಯಿಂದ ನಮ್ಮ ಅಸ್ತಿತ್ವವು ಸಂತಸಪಡುವುದೂ ಉಂಟು, ಹಾಗೆ ನೋವುಣ್ಣುವುದೂ ಉಂಟು. ಏಕೆ ಈ ನೋವು ಏಕೆ ಈ ಆಕರ್ಷಣೆ ಎನ್ನುವುದೇ ಈ ಕಗ್ಗದ ಹೂರಣ.
ನೋಡಿ ನಮ್ಮಲ್ಲಿ ಶುದ್ಧವಾದ ಆತ್ಮ ಉಂಟು. ಯುಕ್ತಾಯುಕ್ತಗಳ ವಿವೇಚನೆಯೂ ಉಂಟು. ಬಹು ಚಂಚಲ ಮನಸ್ಸೂ ಉಂಟು. ಒಂದಕ್ಕೊಂದಕ್ಕೆ ಅವಿನಾಭಾವ ಸಂಬಂಧ. ಈ ಸಂಬಂಧಕ್ಕೆ ಕಾರಣಗಳು ಹಲವು. ನಾವು ಎಲ್ಲದರಿಂದಲೂ ಯಾವಗಲೂ ಆಕರ್ಷಿತರಾಗುವುದಿಲ್ಲ. ಈ ಆಕರ್ಷಣೆಯ ಸ್ವರೂಪ ಬದಲಾಗುತ್ತಾ ಇರುತ್ತದೆ. ಇಂದು ಇದ್ದಂತೆ ನಾಳೆ ಇಲ್ಲ. ಮುಂಜಾನೆಗಿದ್ದದ್ದು ಸಂಜೆಗಿಲ್ಲ. ಹೀಗೆ ಒಂದೇ ರೂಪದಲ್ಲಿ ಇರದೇ ನಮ್ಮನ್ನು ಬೇಕು ಬೇಡಗಳ, ಇಷ್ಟ, ಅನ್-ಇಷ್ಟಗಳ ನಡುವೆ ಗೊಂದಲಕ್ಕೆ ಸಿಲುಕಿಸುತ್ತದೆ. ನಾವು ಇಲ್ಲಿಅಂದರೆ ಈ ಜಗತ್ತಿನ ವಸ್ತು ವಿಷಯ ಸಂಪರ್ಕದಲ್ಲಿ ನಮ್ಮ ಮನಸ್ಸನ್ನು ಸದಾ ತೊಡಗಿಸಿಕೊಂಡರೆ ಈ ಗೊಂದಲಗಳು ಸಹಜ. ಹಾಗಂತ, ಇದನ್ನು ಬಿಡಬೇಕು ಎಂದಲ್ಲ. ಇರಬೇಕು, ಇರದಂತೆ ಇರಬೇಕು.
ಈ ಆಕರ್ಷಣೆಗಳು ಅಂಟುಗಳು ನಮ್ಮ ಮನಸ್ಸಿನ ತುಮಲ ತೊಯ್ದಾಟಗಳಿಗೆ ಕಾರಣವೇನು?. ನಮ್ಮ ಸ್ವಭಾವ,ಪೂರ್ವಸಂಚಿತ ಗುಣಗಳ ವಾಸನೆ, ಇಲ್ಲಿ ನಾವು ಜನಿಸಿದಂದಿನಿಂದ ಪಡೆದು ಕೊಂಡು, ಬೆಳೆಸಿಕೊಂಡ ಹತ್ತು ಹಲವಾರು ಗುಣ ಸ್ವಭಾವಗಳು. ಆ ವಸ್ತು ವಿಷಯಗಳ ಅಂದ ಚೆಂದ ರುಚಿ ಗುಣಗಳಲ್ಲವೂ ನಮ್ಮನ್ನು ಸೆಳೆಯುತ್ತವೆ. ಇವೆಲ್ಲವೂ ಈ ಆಕರ್ಷಣೆಗೆ ಕಾರಣ. ಆದರೆ ಇದು ಸರಿಯೇ ತಪ್ಪೇ? ಸರಿ ತಪ್ಪು ಎರಡೂ. ಸರಿ ಏಕೆಂದರೆ, ಜಗತ್ತಿನ ಎಲ್ಲರೂ ಈ ಜಗತ್ತಿನ ವಸ್ತು ವಿಷಯಗಳಿಂದ ವಿಮುಖರಾದರೆ ಈ ಜಗದ್ವ್ಯಾಪಾರದ ಗತಿ. ಎಲ್ಲವೂ ನಿಂತುಹೋದರೆ, ಎಲ್ಲ ನಿಸ್ತೇಜ, ನೀರವ ಮತ್ತು ನಿಸ್ಸತ್ವ. ಆ ಪರಮಾತ್ಮನ ಲೀಲಾವಿನೋದ ಕೊನೆಯಾದರೆ ಏನು ಚೆನ್ನ. ಹಾಗಾಗಿ ಈ ಆಕರ್ಷಣೆ ಸರಿ. ತಪ್ಪು ಏಕೆಂದರೆ ಸಿಂಬಳದ ಹುಳುವಿನ ತರಹೆ ಇದರಲ್ಲೇ ಅಂಟಿಕೊಂಡರೆ ಅದೂ ಅಸಹ್ಯ . ಹಾಗಾಗಿ ಎಲ್ಲವನ್ನೂ ನೋಡಬೇಕು ಆಕರ್ಷಿತರಾಗಬೇಕು, ಅನುಭವಿಸಬೇಕು, ಮತ್ತು ಬಿಡಬೇಕು. ಆಗಲೇ ಜೀವನದಲ್ಲಿ ಒಂದು ಚೆಂದ ಚೆಲುವು.
ಅದ್ದರೆ ಎಷ್ಟು ಆಕರ್ಷಿತರಾಗಬೇಕು, ನಮ್ಮನ್ನು ನಾವು ಅದರೊಳಗೆ ಎಷ್ಟರಮಟ್ಟಿಗೆ ಮುಳುಗಿಸಿಕೊಳ್ಳಬೇಕು, ಯಾವಾಗ ಬಿಡಬೇಕು ಎನ್ನುವುದೇ ನಮ್ಮ ಪ್ರಯತ್ನ. ಆ ಪ್ರಯಾಣವನ್ನು ಮಾಡ ಬೇಕು ಎನ್ನುವ ರೀತಿಯಲ್ಲಿ ನೋಡು ಎನ್ನುತಾರೆ ಮಾನ್ಯ ಗುನಪ್ಪನವ್ರು ಈ ಕಗ್ಗದಂತ್ಯದಲ್ಲಿ. ನಾವೂ ಸಹ ಈ ವಿಷಯದಲ್ಲಿ ನಮ್ಮ ನಮ್ಮ ವಿಶ್ಲೇಷಣೆಯನ್ನು ನಾವೇ ಮಾಡಿಕೊಳ್ಳುತ್ತಾ ಮುಂದಿನ ಕಗ್ಗಕ್ಕೆ ಹೋಗೋಣವೆ?
ರಸಧಾರೆ - 052
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ
ಮುಗಿವ ತರಣಿಯ ರಕ್ತ ಹಿತವೆನಿಸದೆಕೋ !
ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ
ಬಗೆವೆನ್ನ ಮನಸಿನೊಳೊ ? ಮಂಕುತಿಮ್ಮ.
ಗಗನದ ನೀಲಿಮೆಯು ಎನ್ನ ಕಣ್ಣಿಗೆ ಸೊಗವ ಈವಂತೆ, ಮುಗಿವ ತರಣಿ ರಕ್ತ ಹಿತವೆನಿಸದು ಏಕೋ!
ಸೊಗದ ಮೂಲವದು ಎಲ್ಲಿ ನೀಲದೊಳೊ ಕೆಂಪಿನೊಳೊ ಬಗೆವ ಎನ್ನ ಮನಸಿನೊಳೊ ಮಂಕುತಿಮ್ಮ.
ನೀಲಿಮೆ = ನೀಲಿ ಬಣ್ಣ, ಎನ್ನ = ನನ್ನ, ಕಣ್ಗೆ = ಕಣ್ಣುಗಳಿಗೆ, ಸೊಗವ = ಆನಂದವ, ಈವಂತೆ= ಕೊಡುವಂತೆ, ಮುಗಿವ = ಮುಳುಗುವ, ತರಣಿ + ಸೂರ್ಯ, ರಕ್ತ = ಕೆಂಪು, ಸೊಗದ = ಸೊಗಸಿನ , ಬಗೆವ = ತಿಳಿಯುವ.
ಆಕಾಶದ ತಿಳಿನೀಲಿ ಬಣ್ಣವು ಎನ್ನ ಮನಸ್ಸಿಗೆ ಹಿತವನ್ನು ಕೊಡುತ್ತೆ. ಆದರೆ ಮುಳುಗುವ ಸೂರ್ಯನ ಕೆಂಪು ಬಣ್ಣ ಎನಗೇಕೋ ಹಿತವನ್ನು ಕೊಡುವುದಿಲ್ಲ. ಆ ಹಿತ ಎನ್ನುವುದು ಆಕಾಶದ ನೀಲಿ ಬಣ್ಣದಲ್ಲಿದೆಯೋ ಅಥವಾ ಮುಳುಗುವ ಸೂರ್ಯನ ರಕ್ತ ವರ್ಣದಲ್ಲಿದೆಯೋ ಅಥವಾ ಎರಡೂ ಅಲ್ಲದೆ, ಹಿತವೆಂದು ತಿಳಿಯುವ ನಮ್ಮ ಮನಸ್ಸಿನಲ್ಲಿ ಇದೆಯೋ ಎಂದು ಪ್ರಸ್ತಾಪ ಮಾಡುತ್ತಾರೆ, ಶ್ರೀ ಗುಂಡಪ್ಪನವರು.
ನೀಲಿ ಬಣ್ಣ ಪ್ರಶಾಂತತೆಯ ಪ್ರತೀಕ. ಅದಕ್ಕೆ ನಮ್ಮಲ್ಲಿ ಹಲವು ದೇವತೆಗಳಿಗೆ ನೀಲಿಬಣ್ಣದ ವರ್ಣನೆ. ಹಾಗಾಗಿ ನೀಲಿ ಬಣ್ಣ ಮನಸ್ಸಿಗೆ ಮುದವನ್ನು ಕೊಡುವುದು ಸಹಜ. ಆದರೆ ತನ್ನ ಕೆಲಸ ಮುಗಿಸಿ ಹಿಂತಿರುಗಿಹೋಗುವ ಆ ಸೂರ್ಯನ ರಕ್ತವರ್ಣವು ರುದ್ರತೆಯನ್ನು ತೋರುತ್ತದೆ. ಹಾಗಾಗಿ ನನಗೆ ಮನಸ್ಸಿಗೆ ಹಿತವೆನಿಸುವುದಿಲ್ಲ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ಅಷ್ಟಕ್ಕೇ ನಿಲ್ಲಿಸದೆ, ಹೌದು ಆ ಹಿತವು ನೀಲಿ ಬಣ್ಣದಲ್ಲಿದೆಯೋ ಅಥವಾ ರಕ್ತವರ್ಣದಲ್ಲಿದೆಯೋ ಅಥವಾ ನನ್ನ ಭಾವನೆಯಲ್ಲಿ ಮಾತ್ರ ಆ ಹಿತ ಮತ್ತು ಅಹಿತಗಳಿವೆಯೋ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ.
ಹೌದು ಒಂದು ಆಂಗ್ಲ ನುಡಿ ಚೆಂದ ನೋಡುವವನ ಕಣ್ಣಲ್ಲಿ ಎಂದು ಹೇಳುತ್ತದೆ. ಒಬ್ಬರಿಗೆ ಚೆಂದವಾಗಿ ಕಂಡದ್ದು ಮತ್ತೊಬ್ಬರಿಗೆ ಚೆಂದವಲ್ಲದೆ ಇರಬಹುದು. ಒಬ್ಬರಿಗೆ ಇಂದು ಚೆಂದವಾಗಿ ಕಂಡದ್ದು ನಾಳೆ ಅವರಿಗೇ ಚಂದವಲ್ಲದೆ ಇರಬಹುದು. ಈ ಅದು ಚೆನ್ನ- ಇದು ಚೆನ್ನ, ಅದು ಚೆನ್ನಾಗಿಲ್ಲ, ಅಥವಾ ಇದು ಚೆನ್ನಾಗಿಲ್ಲ, ಇದು ಸುಮಾರು, ಇದು ಅಸಹ್ಯ, ಇದು ಅತೀ ಸುಂದರ, ಹೀಗೆ ಒಂದು ವಸ್ತು ಅಥವಾ ವಿಷಯದ ಬಗ್ಗೆ ನಮ್ಮ ಅಭಿಪ್ರಾಯಗಳು, ಅಭಿಪ್ರಾಯಗಳಷ್ಟೇ ಆಗಿರುತ್ತದೆ ಹೊರತು ನಾವು ಅಭಿಪ್ರಾಯ ವ್ಯಕ್ತಪಡಿಸುವ ಆ ವಸ್ತು ವಿಷಯದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ್ಲ, ಅಲ್ಲವೇ?
ಆದರೆ ಆ ಚೆಲುವು ಎನ್ನವುದು ನೋಡುವವನ ಮನಸ್ಸಿನಲ್ಲಿ ಇರುತ್ತದೆ ಎನ್ನುವುದು ವಾಡಿಕೆ.ಯದ ಭಾವಂ ತತ್ಭವತಿನಾವು ಹೇಗೆ ಅಂದುಕೊಂಡರೆ ಹಾಗೆ ಎನ್ನುವುದು ಸೂಕ್ತ. ಹಾಗಾಗಿ ಒಂದು ವಸ್ತುವಿನ ಚೆಂದ ನಮ್ಮ ಮನಸ್ಸಿನ ಮೇಲೆ ಅಧಾರಪಟ್ಟಿರುತ್ತದೆ. ನನಗೆ ಒಬ್ಬ ಸ್ನೇಹಿತರಿದ್ದಾರೆ. ನಮ್ಮ ಬೀದಿಯ ನಾಯಿಗಳ ಕಂಡು ಅವರಿಗೆ ತುಂಬಾ ಪ್ರೀತಿ ತುಂಬಾ ಮರುಕ ಅಯ್ಯೋ ಪಾಪ ಅದನ್ನು ನೋಡಿ ಹೇಗೆ ಸೊರಗೆ ಹೋಗಿದೆಇವಕ್ಕೆಲ್ಲ ಯಾರು ಊಟ ಹಾಕ್ತಾರೋಹೀಗೆ ಅವರ ಕರುಣಾ ಪೂರಿತ ಭಾವ ಲಹರಿ ಹರಿಯುತ್ತಲೇ ಇರುತ್ತದೆ. ಪುಟ್ಟ ಮರಿಗಳನ್ನು ನೋಡಿದಾಗಅಯ್ಯೋ ಮುಂಡೇದು, ಎಷ್ಟು ಚೆನ್ನಾಗಿದೆ ನೋಡ್ರೀಎಂದು ರಾಗ ಎಳೀತಾರೆ. ಕೆಲವರಿಗೆ ಆ ನಾಯಿಗಳನ್ನು ಕಂಡರೆ ಹೆದರಿಕೆ. ಕೆಲವರಿಗೆ ಅದನ್ನು ಕಂಡರೆ ಅಸಹ್ಯ. ಆದರೆ ಆ ನಾಯಿ ಚೆನ್ನವೂ ಅಲ್ಲ ಅಸಹ್ಯವೂ ಅಲ್ಲ. ಚೆನ್ನ ಅಥವಾ ಅಸಹ್ಯ ಎನ್ನುವುದು ನಮ್ಮ ನಮ್ಮ ಭಾವನೆ ಅಷ್ಟೇ.
ಏ ತಿಂಗ್ ಆಫ್ ಬ್ಯೂಟಿ ಈಸ್ ಆ ಥಿಂಗ್ ಆಫ್ ಜಾಯ್ ಫಾರ್ ಎವರ್ಎನ್ನುವ ಒಂದು ಆಂಗ್ಲ ನುಡಿ ಇದೆ ಸದಾ ಸೊಗವನೀಡುವುದೇ ಸೊಬಗುಅಂದರೆ ಯಾವುದು ಸದಾಕಾಲ ಮನಸ್ಸಿಗೆ ಹಿತವೆನಿಸುತ್ತದೋ ಅದೇ ಸುಂದರ. ಆದರೆ ಚೆನ್ನ, ಸೊಬಗು, ಸುಂದರ, ಸೊಗಸು ಎನ್ನುವ ಗುಣವಾಚಕಗಳೆಲ್ಲ ಮನೋಜನ್ಯ. ಹಾಗಾಗಿ ಇವೆಲ್ಲ (relative) ಒಂದೇ ರೀತಿ ಇರುವುದಿಲ್ಲ. ಮನಸ್ಸಿನ ಭಾವ ಬದಲಾಗುತ್ತಾ ಇದ್ದಂತೆ ನಮ್ಮ ಅಭಿಪ್ರಾಯಗಳೂ ಬದಲಾಗುತ್ತಾ ಇರುತ್ತವೆ.
ಆದರೆ ಒಂದು ಒಳ್ಳೆಯ ಮನಸ್ಸು ಎಲ್ಲದರಲ್ಲೂ ಸೊಬಗನ್ನೇ ನೋಡುತ್ತದೆ. ಈ ಪರಮಾತ್ಮನ ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಒಂದು ಅಂದವಿದೆ. ಅದು ಅವನ ಇಚ್ಚೆಯಿಂದ ಆದದ್ದು. ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಅದನ್ನು ವಿಮರ್ಶಿಸುವ ಅರ್ಹತೆ ಅಧಿಕಾರ ನಮಗಿಲ್ಲ. ಏಕೆಂದರೆ ನಾವೂ ಸಹ ಈ ಸೃಷ್ಟಿಯ ಒಂದು ಬಾಗ ಅಲ್ಲವೇ? ಅದು ಯಾರಾದರೂ ಚೆನ್ನಾಗಿಲ್ಲ ಎಂದರೆ, ಆ ಪರಮಾತ್ಮನ ಸೃಷ್ಟಿಯನ್ನೇ ಪ್ರಶ್ನಿಸಿದಂತಾಗುತ್ತದೆ. ಒಳ್ಳೆಯ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಎಲ್ಲವನ್ನೂ ಪ್ರೀತಿಸಬೇಕು. ಯಾವುದನ್ನೋ ಇಷ್ತಪಡದಂತಾ ಮನೋಭಾವ ನಮಗೆ ಬರಲೇಬಾರದು.
ರಸಧಾರೆ - 053
ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ ?
ದಿನಪನದೆ? ಚಂದ್ರನದೆ ? ನೀರಿನದೇ? ನಿನದೆ?
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು?
ಗುಣಕೆ ಕಾರಣವೊಂದೆ? – ಮಂಕುತಿಮ್ಮ.
ತೃಣಕೆ = ಹುಲ್ಲಿಗೆ ದಿನಪ= ಸೂರ್ಯ. ತಣಿಣಿವ = ಆನಂದಿಸುವ
ಭೂಮಿಯಲ್ಲಿ ಚಿಗುರುವ ಹುಲ್ಲಿಗೆ ಆ ಹಸಿರುಬಣ್ಣ ಎಲ್ಲಿದ ಬಂತು. ಅದರ ಮೂಲವಾದ ಬೇರಿನದೋ ? ಅದು ಬೆಳೆವ ಭೂಮಿಯದೋ? ಬೆಳಕ ನೀಡುವ ಸೂರ್ಯನದೋ? ಅಥವಾ ಚಂದ್ರನದೋ? ಬೆಲೆಗೆ ಪೂರಕವಾದ ನೀರಿನದೋ? ಅಥವಾ ಅದನ್ನು ಬೆಳೆಸಿದ ನಿನ್ನದೋ? ಅಥವಾ ತಂಪ ಕಾಣುವ ನಿನ್ನ ಕಣ್ಣಿನ ಪುಣ್ಯದ್ದೋ? ನೋಡು ನೀ ಆ ಹಸಿರಿನ ಗುಣಕ್ಕೆ ಒಂದೇ ಕಾರಣವೋ? ಮಂಕುತಿಮ್ಮ.
ಹೌದಲ್ಲವಾ? ನಮಗೂ ಇಂತಹ ಪ್ರಶ್ನೆಗಳು ಮನದಲ್ಲಿ ಉದ್ಭವವಾಗಿರಬಹುದು, ಹಲವು ಬಾರಿ. ನಾವು ನೋಡುವ ಪ್ರತಿವಸ್ತುವಿನಲ್ಲೂ ಹಲವು ಸೋಜಿಗಗಳನ್ನು ನಾವು ಕಾಣಬಹುದು. ಆದರೆ ಆ ಸೋಜಿಗಕ್ಕೆ ಒಂದು ಕಾರಣವನ್ನು ಹುಡುಕಲು ನಮ್ಮಿಂದಾಗುವುದಿಲ್ಲ. ಏಕೆಂದರೆ ಒಂದು ಕಾರಣದಿಂದ ಆದಂತ ವಸ್ತುವಾವುದೂ ಈ ಪ್ರಪಂಚದಲ್ಲಿ ಇಲ್ಲವೆಂಬುದೆ ನನ್ನ ಗಟ್ಟಿ ನಂಬಿಕೆ. ಹಾರುವ ಹಕ್ಕಿಯ ಬಣ್ಣ, ರೆಕ್ಕೆಯ ವಿನ್ಯಾಸ, ಹಾವಿನ ರೂಪ, ಅದರ ಮೈಮೇಲಿನ ಚಿತ್ತಾರಗಳು, ಅಬ್ಬಾ ಎಂತಹ ವಿಚಿತ್ರ. ಇದೊಂದೂ ನಮಗೆ ಅರ್ಥವಾಗುವುದಿಲ್ಲ. ಎಲ್ಲವೂ ವಿಸ್ಮಯ.
ಈಗ a ಆ ಬೇರಿನ ವಿಷಯವನ್ನೇ ತೆಗೆದುಕೊಳ್ಳೋಣ. ಅದರ ಹಸಿರುಬಣ್ಣ ಎಲ್ಲಿಂದ ಬಂತು. ಅದರ ಮೂಲ ಬೇರಿನಿಂದ ಬಂತೆ ಅಲ್ಲ ಏಕೆಂದರೆ ಬೇರಿನ ಬಣ್ಣ ಹಸುರಲ್ಲ. ಅದು ಬೆಳೆದ ಭೂಮಿಯಿಂದ ಬಂತೆ, ಅಲ್ಲ ಭೂಮಿಯ ಬಣ್ಣ ಕೆಂಪು. ಸೂರ್ಯನಿಂದಲೇ ಅಥವಾ ಚಂದ್ರನಿಂದಲೇ ಎಂದರೆ, ಅವರದ ಬಣ್ಣವೂ ಹಸುರಲ್ಲ. ಇನ್ನು ಅದನ್ನು ಪೋಷಿಸಿ ಬೆಳೆಸಿದ ನೀರಿಂದ ಬಂತೆ ಎಂದರೆ ಅದೂ ಅಲ್ಲ. ಏಕೆಂದರೆ ನೀರಿನ ಬಣ್ಣವೂ ಹಸಿರಲ್ಲ, ಅಥವಾ ಅದನ್ನು ಬೆಳೆಸಿದ ನಿನ್ನಿಂದ ಬಂತೆ ಎಂದರೆ, ನೀನೋ ಕರಿಯ. ಅಥವಾ ಯಾವುದೋ ಪುಣ್ಯಶೇಷದಿಂದ ನಿನ್ನ ಕಣ್ಣಿಗೆ ಅದು ಹಸಿರಾಗಿ ಕಾಣುತ್ತದೆಯೇ ಎಂದರೆ ಅಲ್ಲ ಏಕೆಂದರೆ ಅದು ಕಾಣುವುದಷ್ಟೇ ಅಲ್ಲ ವಾಸ್ತವವಾಗಿಯೂ ಅದು ಹಸುರಾಗೆ ಇದೆ. ಹಾಗಾದರೆ ಆ ಹಸಿರಬಣ್ಣ ಎಲ್ಲಿಂದ ಬಂತು. ಇದು ಯಕ್ಷಪ್ರಶ್ನೆ. ವಿಜ್ಞಾನಿಗಳು ಹೇಳುತ್ತಾರೆ, “ಅದು ಅದೇನನ್ನೋ ಹೀರಿಕೊಂಡು, ಇದರೊಳಗೆ ಸೇರಿ, ಅದಾಗಿ ಅದರಿಂದ ಇದಾಗಿ ಹೀಗೆ ಹಸುರಾಗಿದೆ ಎಂದು. ಅವರ ವಾದವನ್ನು ಸತ್ಯವೆಂದೊಪ್ಪಿಕೊಂಡರೂ ಅದನ್ನೆಲ್ಲ ಆಗ ಮಾಡಿಸಿದ ಶಕ್ತಿಯಾವುದು. ಅಂದರೆ ಒಂದು ಪರಮಾತ್ಮ ಶಕ್ತಿ ಮತ್ತೆ ಈ ಎಲ್ಲ ವಸ್ತುಗಳ ಬೇರೆ ಬೇರೆ ಪ್ರಮಾಣದ ಗುಣಗಳ ಮಿಶ್ರಣವೇ ಒಂದು ಬೇರೆ ರೂಪ. ಅದಕ್ಕೆ ಅದೇ ಸಾಟಿ.
ಇದೆನ್ನೇಕೆ ಹೇಳಿದ್ದಾರೆ ಗುಂಡಪ್ಪನವರು ಎಂದು ಯೋಚನೆ ಮಾಡಿದರೆ, ನನಗೆ ಒಂದು ವಿಷಯ ಹೊಳೆಯುತ್ತದೆ. ನಾವು ಮನುಷ್ಯರು, ನಾನು ಮಾಡಿದೆ ಅಥವಾ ನಾ ಹಾಗೆ ಮಾಡುತ್ತೇನೆ ಎಂದು ಡಂಬವಾಡುತ್ತೇವೆ. ಎಂತಹ ಹೀನ ಯೋಚನೆ ನಮ್ಮದು. ಒಂದು ತುತ್ತು ಆನ್ನ ತಿನ್ನ ಬೇಕಾದರೆ, ಅದಕ್ಕೆ ಕಾರಣವಾದ ಆ ಕಾಳು , ಆ ಭೂಮಿ, ಆ ಭೂಮಿಯ ಸತ್ವ, ನೀರು, ಬಿಸಿಲು, ಅದನ್ನು ಬೆವರು ಸುರಿಸಿ ಬೆಳೆದು ಕಾಪಾಡಿದ ಆ ರೈತನ ಶ್ರಮ, ಬತ್ತವನ್ನು ಅಕ್ಕಿಯನ್ನಾಗಿಸಲು ಸಾಗಿಸಿದ ಆ ಬಂಡಿ ಮತ್ತದನ್ನು ಮಾಡಿದ ಬಡಗಿ, ಆ ಬಂಡಿಯನ್ನು ಹೊತ್ತು ಎಳೆದ ಆ ಎತ್ತ್ತುಗಳು, ಅದನ್ನು ಕುಟ್ಟಿದ ಕೈಗಳು, ಆಯ್ಯೋ ಬಿಡಿ ಹೇಳುತ್ತಾ ಹೋದರೆ, ಹನುಮಂತನ ಬಾಲದಂತೆ ಬೆಳೆಯುತ್ತದೆ, ಪಟ್ಟಿ.ನಾವು ಕೇವಲ ತಿನ್ನುತ್ತೇವೆ ಅಷ್ಟೇ. ಒಂದಿಷ್ಟೂ ಕೃತಜ್ಞತೆ ಇಲ್ಲದೆ, ಕೇವಲ ದುಡ್ಡು ಕೊಟ್ಟಿದ್ದೇನೆ ಎನ್ನುವ ಅಹಂಕಾರ ಬಿಟ್ಟರೆ ಇನ್ನೇನೂ ಇಲ್ಲ. ಅಹಂಕಾರ ಪಡಲಿಕ್ಕೆ ಒಂದಿಷ್ಟೂ ಅರ್ಹತೆ ಯೋಗ್ಯತೆ ಎರಡೂ ಇಲ್ಲದ ನಾವೂ ಸಹ ಹೀಗೆ ಮಾತನಾಡುತ್ತೇವೆ.
ಆ ಪರಮಾತ್ಮ ತನ್ನಿಚ್ಚೆಯಂತೆ ತನ್ನ ಸಂತೋಷಕ್ಕಾಗಿಯೇ ಎಲ್ಲವನ್ನೂ ಸೃಜಿಸಿ ತಾನು ಆನಂದಪಡುತ್ತಾನೆ. ಇದರಲ್ಲಿ ನಾವು ಅಹಂಕಾರಪಡಬಾರದು. ಈಶಾವಾಸ್ಯಮಿದಂ ಸರ್ವಂ ಯತ್ ಕಿಂಚಿತ್ ಜಗತ್ಯಾಂ ಜಗತ್ I ತೇನ ತ್ಯಕ್ತೇನ ಭುನ್ಜೀತಾ ಮಾ ಗ್ರುಧಃ ಕಸ್ಯಸ್ವಿದ್ಧನಂಎನ್ನುತ್ತದೆ ಈಶಾವಾಸ್ಯ. ಹಾಗಾಗಿ ಎಲ್ಲವೂ ಪರಮಾತ್ಮ, ಎಲ್ಲವೂ ಪರಮಾತ್ಮನಿನ, ಮತ್ತು ಎಲ್ಲವೂ ಪರಮಾತ್ಮನಿಗಾಗಿ ಎನ್ನುವುದನ್ನು ಮನದಟ್ಟು ಮಾಡಿಕೊಂಡರೆ ಅಹಂಕಾರ ಬಿಡಬಹುದು. ಅಹಂಕಾರ ಬಿಟ್ಟರೆ ಆನಂದವಾಗಿರಬಹುದು.
ರಸಧಾರೆ - 054
ಫಲವಿಲ್ಲ ಕಾರ್ಯಕಾರಣವಾದದಿಂ ತತ್ವ
ಸಿಳುಕದೆಮ್ಮೆಯ ತರ್ಕಕರ್ಕಶಾಂಕುಶಕೆ
ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ
ತಿಳಿಮನದೆ ನೋಳ್ಪಂಗೆ ಮಂಕುತಿಮ್ಮ
ಫಲವಿಲ್ಲ ಕಾರ್ಯಕಾರಣ ವಾದದಿಂದ. ತತ್ವ ಸಿಲುಕದು ಎಮ್ಮಯ ತರ್ಕ ಕರ್ಕಶಾಂಕುಶಕ್ಕೆ ಸುಳಿವುದು ಆಗೀಗಳು ಅದು ಸೂಕ್ಷಾಮನುಭವದಲಿ ತಿಳಿಮನದಿ ನೋಳ್ಪಂಗೆ ಮಂಕುತಿಮ್ಮ.
ಈ ಜಗತ್ತಿನ ಸೃಷ್ಟಿಯ ಕರ್ತೃ,ಕರಣ, ಕಾರ್ಯ, ಕಾರಣ ಇವುಗಳ ಬಗ್ಗೆ ಅತಿಯಾದ ವಾದ ವಿವಾದದಿಂದ ನಮಗೆ ತತ್ವವು ಸಿಗುವುದೇ ಇಲ್ಲ. ಆದರೆ ನಿರ್ಮಲವಾದ ಮತ್ತು ತಿಳಿಯಾದ ಮನದಲ್ಲಿ ಆಗಾಗ ಸೂಕ್ಷ್ಮಾನುಭವಕ್ಕೆ ಅದು ಗೋಚರವಾಗಬಹುದು. ಯಾರಿಗೆ? ನೋಡಲು ಇಚ್ಚಿಸುವವರಿಗೆ ಮತ್ತು ನೋಡುವವರಿಗೆ ಅದು ಆಗಾಗ ಗೋಚರಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನೋಡಿ ಒಂದು ಸೃಷ್ಟಿಯಿದೆ. ಹಾಗಂದಮೇಲೆ ಅದಕ್ಕೊಂದು ಸೃಷ್ಟಿಕರ್ತನಿದ್ದಾನೆ. ಈ ಸೃಷ್ಟಿ ಕಾರ್ಯಕ್ಕೊಂದು ಕಾರಣವಿರಬೇಕು. ಇದರ ಬಗ್ಗೆ ಲಕ್ಷಾಂತರ ವಾದಗಳು ವಿವಾದಗಳು ತರ್ಕಗಳು ಇವೆ. ಆದರೂ ಅದು ಏನು ಎಂದು ಯಾರಿಗೂ ನಿಚ್ಚಳವಾಗಿ ತಿಳಿದಿಲ್ಲ. ಅದನ್ನು ತಿಳಿಯಲು ಪ್ರಯತ್ನಿಸಿದವರೆಲ್ಲಾ, ತಮ್ಮ ತಮ್ಮದೇ ಆದ ವಿಧಾನದಲ್ಲಿ ಅದನ್ನು ನೋಡಲು ಪ್ರಯತ್ನಿಸಿ, ತಮ್ಮದೇ ಆದ ತತ್ವವನ್ನು ಪ್ರತಿಪಾದಿಸಿದ್ದಾರೆ. ಯಾವುದೂ ಅಂತಿಮವಲ್ಲ. ಹಾಗಾಗಿ ನಮ್ಮ ತರ್ಕವೆಂಬ ಒರಟಾದ ಆಯುಧಗಳಿಂದ ಅದನ್ನು ಕೆದಕುವ ಬದಲು ಮನವನ್ನು ನಿರ್ಮಲವಾಗಿಸಿಕೊಂಡು ಅದರ ಬಗ್ಗೆ ಚಿ೦ತಿಸಿದರೆ, ಪ್ರತಿಯೊಬ್ಬರಿಗೂ ಅದು ಗೋಚರವಾಗುತ್ತದೆ. ಆದರೆ ಮನಸ್ಸನ್ನು ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಕೆಲವು ಬಾರಿ ನಮ್ಮ ಅನುಭವಕ್ಕೆ ಒಂದು ಮಿಂಚಂತೆ ಬಂದು ಹೋಗುತ್ತದೆ. ಇದು ಪ್ರತಿಯೊಬ್ಬರಿಗೂ ಅನುಭವ ವೇಧ್ಯ.
ಅದನ್ನು ಅರಿತುಕೊಳ್ಳಲು, ಪಾಂಡಿತ್ಯ ಬೇಕಿಲ್ಲ. ವಾದ ಬೇಕಿಲ್ಲ. ಚರ್ಚೆ ಬೇಕಿಲ್ಲ. ಏಕೆಂದರೆ ವಾದ ಮಾಡಿದರೆ ವಿವಾದವಾಗುತ್ತದೆ. ಚರ್ಚೆ ಮಾಡಿದರೆ, ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ಸತ್ಯ ಗೋಚರವಾಗುವುದಿಲ್ಲ. ಸತ್ಯ ಗೋಚರವಾಗಬೇಕಾದರೆ, ಮನಸ್ಸಿನ, ಬುಧ್ಧಿಯ ಚಟುವಟಿಕಗಳನ್ನು, ಎಲ್ಲ ವಿಚಾರ, ತರ್ಕಗಳನ್ನೂ ಕುತರ್ಕಗಳನ್ನೂ ಬದಿಗಿಟ್ಟು ನಿರ್ಮಲ ಅಂತಃಕರಣದಲ್ಲಿ ಅದನ್ನು ಅನುಭವಿಸಿದರೆ, ಆಗಾಗ ನಮಗೆ ಗೋಚರವಾಗಬಹುದು. ಅಂತಹ ಸತ್ವಯುತವಾದ ಸತ್ಯವನ್ನು ಮನಸ್ಸಿನಲ್ಲಿ ಧೀರ್ಘಕಾಲ ಅನುಭವಿಸಿದರೆ, ನಮಗೆ ಶಾಂತಿ ಮತ್ತು ನೆಮ್ಮದಿ.
ಇದರ ಬಗ್ಗೆ ಹೆಚ್ಚು ವಿವರಣೆ ಅನಗತ್ಯ. ವಾಚಕರು ತಮ್ಮ ತಮ್ಮಲ್ಲೇ ಅನುಭವಿಸಬೇಕು. ದಯವಿಟ್ಟು ಅನುಭವಿಸಿ.
ಅಂತರನುಭವ ರಸಧಾರೆ - 055
ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ?
ಅರಿಯುವಂ ಸೋಂಕಿಂದೆ ಬಿಸಿಲುತನಿವುಗಳ
ನರನುಮಂತೆಯೇ ಮನಸಿನನುಭವದಿ ಕಾಣುವನು
ಪರಸತ್ವಮಹಿಮೆಯನು ಮಂಕುತಿಮ್ಮ.
ಇನ = ಸೂರ್ಯ, ಸೋಂಕಿಂದೆ = ಸ್ಪರ್ಶದಿಂದ, ತನಿವುಗಳ = ತಂಪನ್ನು, ನರನುಮಂತೆಯೇ = ನರನೂ ಹಾಗೆಯೇ, ಪರಸತ್ವ= ಪರಮಾತ್ಮ ತತ್ವವನು
ಕುರುಡನಿಗೆ ಸೂರ್ಯ ಚಂದ್ರರನು ಕಾಣಲಾಗುವುದೆ? ಬಿಸಿಲು ಮತ್ತು ತಂಪನ್ನು ಅವನು ಸ್ಪರ್ಶಮಾತ್ರದಿಂದಲೇ ಅರಿಯುವುದಿಲ್ಲವೇ ಮನುಷ್ಯನೂ ಸಹ ಮನಸ್ಸಿನ ಅನುಭವದಿಂದ ಪರಮಾತ್ವ ತತ್ವವನು ಕಾಣುತ್ತಾನೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಅವರವರ ಭಾವಕ್ಕೆ ಅವರವರ ಬಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ.
ಹರನ ಭಕ್ತರಿಗೆ ಹರ, ಹರಿಯ ಭಕ್ತರಿಗೆ ಹರಿ, ನರರೇನು ಭಾವಿಸುವರದರಂತೆ ಕಾಣುವನುನಿಜಗುಣ ಶಿವಯೋಗಿಗಳ ಮಾತು.
ಎಂತಹ ಸತ್ಯ. ಇಲ್ಲಿ ಕಣ್ಣಿಗೆ ಕಾಣುವುದು ಇಲ್ಲ. ಪರಮಾತ್ಮ ಎನ್ನುವುದು ಕೇವಲ ಭಾವನೆಗೆ ಬರುವ ವಿಚಾರ ಮತ್ತು ವಿಷಯ. ಹೇಗೆ ಒಬ್ಬ ಕಣ್ಣಿಲ್ಲದ ಮನುಷ್ಯ, ಸೂರ್ಯನ ತಾಪ ಮತ್ತು ಶೀತಲ ಚಂದ್ರನನ್ನು ತನ್ನ ಅನುಭವದಿಂದಲೇ ತಿಳಿದುಕೊಳ್ಳುತ್ತಾನೋ ಹಾಗೆಯೇ ಪ್ರತಿಯೊಬ್ಬ ನರನೂ ಆ ಪರಮಾತ್ವತತ್ವವನ್ನು ಕೇವಲ ಭಾವನೆಯಿಂದಲೇ ತಿಳಿದುಕೊಳ್ಳಬೇಕು ಎಂದು ಈ ಕಗ್ಗದ ಹೂರಣ.
ನೋಡಿ ಒಬ್ಬ ವಟುವಿಗೆ ಉಪನಯನವನ್ನು ಮಾಡುತ್ತಾರೆ. ಆಚಮನ, ಪ್ರಾಣಾಯಾಮ ಜಪ ತಪಗಳ ನಿಯಮವನ್ನು ಬಾಹ್ಯ ಚಟುವಟಿಕೆಗಳಿಂದ ಹೇಳಿಕೊಡುತ್ತಾರೆ. ಅವನೂ ಸಹ ಅವರು ಹೇಳಿ ಕೊಟ್ಟಂತೆಯೇ , ನಿಲ್ಲುವುದು, ಕೂರುವುದು, ಪ್ರಾಣಯಾಮ, ಅರ್ಗ್ಯ, ಮುಂತಾದ ಕರ್ಮಗಳನ್ನು ಮಾಡುತ್ತಾನೆ ಮತ್ತು ಆ ಸಮಯದಲ್ಲಿ ಬಾಯಿಂದ ಉಚ್ಚರಿಸುವ ಮಂತ್ರಗಳನ್ನೂ ಸ್ಫುಟವಾಗಿ ಉಚ್ಚಾರಮಾಡುತ್ತಾನೆ. ಗಾಯತ್ರಿ ಮಂತ್ರವನ್ನೂ ಹೇಳುತ್ತಾ ಜಪ ಮಾಡುತ್ತಾನೆ. ಇದೆಲ್ಲವನ್ನು ಹೇಳಿ ಕೊಡಬಹುದು ಆದರೆ ಅವನ ಅಂತರ್ಯದಲ್ಲಿ ನಡೆಯುವ ಮನೋವ್ಯಾಪಾರವನ್ನು ಮತ್ತು ಕ್ರಿಯೆಯನ್ನೂ ಹೇಳಿಕೊಡಲು ಸಾಧ್ಯವೇ? ಪ್ರತಿಯೊಬ್ಬರಿಗೂ ಅವರವರದೇ ಆದಂತ ಅನುಭವವಿರುತ್ತದೆ. ಪ್ರತಿಯೊಬ್ಬರಿಗೂ ಅವರವರ ಅನುಭವದ ಪ್ರಕಾರ ಆ ಪರತತ್ವದ ದರ್ಶನವಾಗುತ್ತದೆ. ಗಾಯತ್ರಿಯನ್ನು ಹೇಳಿಕೊಡಬಹುದು. ಆದರೆ ಆ ಮಂತ್ರಕ್ಕೆ ಅದಿ ದೇವತೆಯನ್ನು ಮನಸ್ಸಿನಲ್ಲಿ ಅವಾಹಿಸಿಕೊಂಡು ಜಪಮಾಡುವುದು ಅವರವರಿಗೆ ಬಿಟ್ಟದ್ದು.ಇದು ಮತ, ಪಂಥ, ಭೇಧವಿಲ್ಲದೆ, ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ
ಪ್ರತಿಯೊಬ್ಬರ ಅಂತರಂಗವನ್ನು ಹೊಕ್ಕು ನೋಡಲು ಸಾಧ್ಯವಿಲ್ಲ. ಆದರೆ ಅದನ್ನು ಹೊಕ್ಕು ನೋಡಿದರೆ, ಯಾರಿಗೆ ಎಷ್ಟು ಭಾವಿಸಲು ಸಾಧ್ಯವೋ ಅವರಿಗೆ ಆ ಪರಮಾತ್ಮ ಅಷ್ಟು. ನೀವು ದೊಡ್ಡದಾಗಿ ಭಾವಿಸಿದರೆ, ದೊಡ್ಡದು, ಸಣ್ಣದಾಗಿ ಭಾವಿಸಿದರೆ ಸಣ್ಣದು. ಇಡೀ ಬ್ರಹ್ಮಾಂಡವನ್ನೇ ಪರಮಾತ್ಮನೆಂದೂ ಭಾವಿಸಬಹುದು ಅಥವಾ ನಿಮ್ಮ ಮನೆಯಲ್ಲಿರುವ ಒಂದು ಸಣ್ಣ ಮೂರ್ತಿಯನ್ನೇ ದೇವರೆಂದು ಭಾವಿಸಬಹುದು. ಮೊದಲನೆಯದು ಬೃಹತ್ ನಿರಾಕಾರ ಭಾವ, ಎರಡನೆಯದು ಸಂಕುಚಿತ ಮೂರ್ತಿ ಪೂಜೆ. ಇದೆ ಅಂದರೆ ಇದೆ ಇಲ್ಲ ಅಂದರೆ ಇಲ್ಲ. ಹಾಗಾಗಿ ಆ ಪರಮಾತ್ಮ ಎನ್ನುವುದು ಬೃಹತ್ತಾಗಿ, ಮಹತ್ತಾಗಿ ಎಲ್ಲವೂ ತಾನೇ ತಾನಾಗಿ ತನ್ನ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಹೋಗುತ್ತಿದ್ದರೂ, ಅದು ನಮಗೆ ನಮ್ಮ ಭಾವನೆಗೆ ಬರುವುದು ನಾವು ಎಷ್ಟು ಭಾವಿಸಿದರೆ ಅಷ್ಟು. ಹೇಗೆ ಭಾವಿಸಿದರೆ ಹಾಗೆ. ನಮ್ಮ ಭಾವನೆ, ನಮ್ಮ ಅನುಭವ, ನಾವು ಕಾಣುವ ರೂಪ, ನಮಗಷ್ಟೇ ಸೀಮಿತ, ಅದನ್ನು ಅನ್ಯರು ನೋಡುವುದಕ್ಕಾಗಲೀ ಅಥವಾ ನೀವು ಪರರಿಗೆ ಅದನ್ನು ತೋರಿಸುವುದಕ್ಕಾಗಲೀ ಸಾಧ್ಯವಿಲ್ಲ.
ಹಾಗಾಗಿ ವಾಚಕರೆ, ನಾವು ಭಾವಿಸಬೇಕು, ನಮ್ಮ ಭಾವನೆಗಳಲ್ಲಿ ಆ ಪರತತ್ವ ಬೃಹತ್ತಾಗಬೇಕು ಮತ್ತು ಆ ಭಾವ ಗಟ್ಟಿಯಾಗಿ ದೀರ್ಘಕಾಲ ಇರಬೇಕೆಂಬುವ, ಪ್ರಯತ್ನ ನಮ್ಮದಾಗಬೇಕು.
ರಸಧಾರೆ - 056
ಮೇಲಿಂದ ನಕ್ಷತ್ರ ಜಯಘೋಷ ಸುತ್ತಣಿಂ
ಭೂಲೋಕದರಚು ಕೆಳಗಿಂ ಮೂಳೆಯಳುವು
ಕೇಳಬರುತೀ ಮೂರುಕೂಗೆನ್ನ ಹೃದಯದಲಿ
ಮೇಳಯಿಸುತಿದೆ ಸಂತೆ ಮಂಕುತಿಮ್ಮ
ಮೇಲಿಂದ ನಕ್ಷತ್ರ ಜಯಘೋಷ = ಆಕಾಶದಿಂದ ನಕ್ಷತ್ರಗಳ ಮಿಣುಕಾಟ, ಸುತ್ತಣಿಂ ಭೂಲೋಕದರಚು = ಸುತ್ತಲಿಂದ ಈ ಭೂಲೋಕದ ಪ೦ಚಭೂತಗಳ ನರ್ತನದ ಶಬ್ದ, ಕೆಳಗಿಂ ಮೂಳೆಯಳುವು = ಈ ಭೂಮಿಯಮೇಲೆ ಎಲ್ಲ ಪ್ರಾಣಿಗಳ ಕೊರಗು ಕೂಗಾಟ. ಕೇಳಬರುತೀ ಮೂರುಕೂಗೆನ್ನ ಹೃದಯದಲಿ ಮೇಳಯಿಸುತಿದೆ ಸಂತೆ = ಈ ಮೂರೂ ಸ್ತರಗಳಲ್ಲಿನ ಭಾವಗಳು ನನ್ನ ಹೃದಯದಲಿ ಸೇರಿ ಸಂತೆಮಾಡುತ್ತಿವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಇಡೀ ಸೃಷ್ಟಿಯ ವಿಸ್ಮಯಗಳು, ಅವುಗಳ ಬಗ್ಗೆ ನಮ್ಮ ಯೋಚನೆ ಕಾಣುವ, ಕಾಣದ, ಕೇವಲ ಊಹಿಸಿ ಅನುಭವಿಸಬಹುದಾದ ಆ ವಿಸ್ಮಯಭರಿತ ಲೋಕದ ಬಗ್ಗೆ ನಮ್ಮ ಆಲೋಚನೆ, ಕಂಡದ್ದು ,ಕೇಳಿದ್ದು, ಅನುಭವಿಸಿದ್ದು ಎಲ್ಲದರ ವಿಚಾರ ತಲೆಯಲ್ಲಿ. ಇನ್ನು ನಮಗೆ ಕಾಣುವ ಸೂರ್ಯ ಚಂದ್ರರು, ನಕ್ಷತ್ರ ಪುಂಜಗಳು, ಗಾಳಿ, ಮಳೆ, ಮೋಡ, ಮಿಂಚು, ಗುಡುಗು, ಸಿಡಿಲುಗಳಂತಹ ವಿಷಯಗಳು ಮತ್ತು ಅವುಗಳ ಕಾರ್ಯ ವೈಖರಿಯ ಬಗ್ಗೆ ಮತ್ತು ಕಡೆಯದಾಗಿ ನಮ್ಮ ಪ್ರಪಂಚದ ಮತ್ತು ಭೂಮಿಯ ಮೇಲಿನ ಸಕಲ ಪ್ರಾಣಿಗಳ ಬಗ್ಗೆ ವಿಚಾರ ವಿಷಯಗಳೆಲ್ಲ ನಮ್ಮ ತಲೆಗಳಲ್ಲಿ ಸೇರಿಕೊಂಡು ಒಂದು ಸಂತೆಯಲ್ಲಿ ಆಗುವಷ್ಟು ಗಲಭೆ ಶಬ್ಧ ನಮ್ಮ ಅಂತರ್ಯದಲ್ಲಿ ನಡೆಯುತ್ತಿರುತ್ತದೆ ಎನ್ನುವುದೇ ಈ ಕಗ್ಗದ ಹೂರಣ.
ಹೌದಲ್ಲವೇ, ನಮಗೆ ಬೇಕೋ ಬೇಡವೋ ಎಲ್ಲ ವಿಚಾರಗಳನ್ನೂ ನಮ್ಮ ಅರಿವಿಗೆ ರವಾನಿಸುವ, ಪಂಚ ಸ್ಪರ್ಶ ಇಂದ್ರಿಯಗಳು ಮತ್ತ ಪಂಚ ಜ್ಞಾನೇಂದ್ರಿಯಗಳು ಸದಾ ಪೈಪೋಟಿ ಮಾಡುತ್ತಿರುತ್ತವೆ. ಏನೆಲ್ಲಾ ತುಂಬಿಕೊಂಡು ನಮ್ಮ ಮನಸ್ಸು ಬುಧ್ಧಿಗಳು ಒಂದು ಕಸದ ತೊಟ್ಟಿಯಾ ತರಹೆ ಆಗಿರುತ್ತೆ. ಹಲವು ಬಾರಿ ನಮಗೆ ಆಶ್ಚರ್ಯ ಮತ್ತು ಬೇಸರ ಎರಡೂ ಆಗುತ್ತದೆ. ಥೂ!! ಇದೇನು ನಮ್ಮ ಮನಸ್ಸಲ್ಲಿ ಇಷ್ಟೊಂದು ಹೊಲಸು ತುಂಬಿದೆಯಲ್ಲ? ಎಂದು . ಮನಸ್ಸು ನಿರ್ಮಲವಾಗಿರಿಸಿಕೊಳ್ಳಬೇಕುಎಂದು ಹೇಳುತ್ತಾರೆ. ಅಂದರೆ ಈಗ ಮಲಅಂದರೆ ಕಶ್ಮಲಭರಿತವಾಗಿದೆ ಎಂದು ಅರ್ಥ ಅಲ್ಲವೇ? ಆದರೆ ನಮ್ಮ ಸ್ವಭಾವ ಗುಣಕ್ಕೆ ಅನುಗುಣವಾಗಿ ನಮ್ಮ ವಿಚಾರಗಳಿರುತ್ತವೆ.
ಸರಿ ಅದಕ್ಕೆ ಏನುಮಾಡಬೇಕು. ಹೀಗೆ ಬೇಡದ ವಿಚಾರಗಳೆಲ್ಲ ನನ್ನ ತಲೆಯಲ್ಲಿ ತುಂಬಿಕೊಳ್ಳಲು ನನ್ನ ಪ್ರಯತ್ನ ಮತ್ತು ಪ್ರಮೆಯವೇನೂ ಇಲ್ಲವಲ್ಲ!!!ಎಂದು ನೀವು ಕೇಳಬಹುದು. ಹೌದು ಆದರೆ ನಮ್ಮ ಆಂತರಿಕ ಶುದ್ಧತೆಗೆ ಏನು ಬೇಕೋ ಅಂತಹ ಸದ್ವಿಚಾರಗಳನ್ನು ಮಾತ್ರ ಉಳಿಸಿಕೊಳ್ಳಲು ಬೆಳೆಸಿಕೊಳ್ಳಲು ನಮಗೆ ಸ್ವಾತಂತ್ರ್ಯ ಮತ್ತು ಸಾಮರ್ಥ್ಯ ಎರಡನ್ನೂ ಆ ಪರಮಾತ್ಮ ನಮಗೆ ಕರುಣಿಸಿದ್ದಾನೋ ಇಲ್ಲವೋ? ಪ್ರಯತ್ನ ಪಟ್ಟರೆ, ನಾವು ವೈಚಾರಿಕ ಶುದ್ಧತೆಯನ್ನು ಪಡೆದುಕೊಂಡು ರೂಢಿಸಿ ಕೊಳ್ಳಬಹುದು. ಅಂತಹ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ನಮ್ಮೆಲ್ಲ ಓದು, ವಿಧ್ಯಾಭ್ಯಾಸ, ಆಚಾರ, ವಿಚಾರ, ಸ್ನೇಹ, ಸಂಬಂಧಗಳು, ಪೂಜೆ, ಧ್ಯಾನಗಳು, ಇದ್ದರೆ ನಾವು ಶುಧ್ಧರಾಗಲು ಸಾಧ್ಯ. ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಮಾಡಿದ ಆ ಮಾನಸಿಕ ಸಂತೆಯಿಂದ ಹೊರಬರಲು ಸಾಧ್ಯ.
ರಸಧಾರೆ - 057
ಆಗುಂಬೆಯಸ್ತಮಯ ದ್ರೋಣಪರ್ವತದುದಯ
ತ್ಯಾಗರಾಜನ ಗಾಂ ವಾಲ್ಮೀಕಿ ಕವನ
ಆಗಿಸವೆ ತಾವಿವೆಮ್ಮತರಂಗದಿ
ಯೋಗಪುಲಕಾಂಕುರವ? – ಮಂಕುತಿಮ್ಮ.
ದ್ರೋಣ ಪರ್ವತ = ಬಾಬಾ ಬುಡನಗಿರಿ ಬೆಟ್ಟ. ಆಗಿಸಿವೆ = ಉಂಟು ಮಾಡಿವೆ. ಪುಲಕಾಂಕುರ = ರೋಮಾಂಚನ.
ಆಗುಂಬೆಯ ಸೂರ್ಯಾಸ್ತಮಾನ ದ್ರೋಣಪರ್ವತದ ಸೂರ್ಯೋದಯ, ತ್ಯಾಗರಾಜನ ಗಾನ ವಾಲ್ಮೀಕಿಯ ಕವನ ಇವೆಲ್ಲವೂ ನಮ್ಮ ಅಂತರಂಗದಲ್ಲಿ ಸತ್ಯದ ದರ್ಶನವನ್ನು ಮಾಡಿಸಿ ರೋಮಾಂಚನಗೊಳಿಸುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಮ್ಮಲ್ಲಿ ಬಹಳಷ್ಟು ಜನಕ್ಕೆ ಸೂರ್ಯೋದಯ ಮಾತು ಸೂರ್ಯಾಸ್ತಮಾನಗಳನ್ನು ನೋಡಿ ಗೊತ್ತೇ ಇಲ್ಲ. ಅಥವಾ ಹಿಂದೆ ಎಂದೋ ನೋಡಿರುವುದು ಮರೆತೇ ಹೋಗಿದೆ. ಇಡೀ ಸೃಷ್ಟಿಯಲ್ಲಿ ಅತ್ಯದ್ಭುತವಾದದ್ದು ಮಾನವ ಸೃಷ್ಟಿ. ಏಕೆಂದರೆ ತಾನು ಇರುವುದಷ್ಟೇ ಅಲ್ಲ ತನ್ನೊಡನೆ ಆದಂತ ಎಲ್ಲ ಸೃಷ್ಟಿಯನ್ನೂ ನೋಡಿ ಆನಂದಿಸುವ ಕಲೆ ಕೇವಲ ಮಾನವನಿಗೆ ಮಾತ್ರ ಗೊತ್ತು. ಆದರೆ ಆನಂದ ಪಡುವುದನ್ನು ಮರೆತೆಹೋಗಿದ್ದಾನೆ ಈ ಮನುಷ್ಯ. ವಸ್ತು ವಿಷಯಗಳ, ಯಾಂತ್ರಿಕತೆಯ, ಸ್ವಾರ್ಥದ ಮತ್ತು ಅಹಂಕಾರದ ಕಾಡಿನಲ್ಲಿ ಮನುಷ್ಯ ಕಳೆದು ಹೋಗಿದ್ದಾನೆ. ಅವನಿಗೆ ಇಂದು ಒಂದು ಸೂರ್ಯೋದಯವೋ, ಸೂರ್ಯಾಸ್ತಮಾನವೋ ಸಂಗೀತವೋ ಅಥವಾ ಕಾವ್ಯ ರಸಧಾರೆಯೋ ಸಂತೋಷವನ್ನು ಕೊಡುವುದಿಲ್ಲ. ಅವುಗಳೆಲ್ಲ ಇಂದಿಗೂ ಸಂತೋಷಕ್ಕೆ ಮತ್ತು ಆನಂದಕ್ಕೆ ಕಾರಣವಾಗೆ ಉಳಿದಿವೆ. ಆದರೆ ಮನುಷ್ಯನಿಗೆ ಅವೆಲ್ಲವನ್ನು ನೋಡಿ, ಕೇಳಿ ಅಥವಾ ಓದಿ ಆನಂದಪಡುವ ಮನಸ್ತತ್ವವೇ ಇಲ್ಲವಾಗಿದೆ. ಇದು ದುರಂತ.
ಪಾಪ ಕೆಲವರಿಗೆ, ಜೀವನ ಜಂಜಾಟದಲ್ಲಿ, ಅನಿವಾರ್ಯತೆಯಲ್ಲಿ ಮತ್ತು ಒತ್ತಡದಲ್ಲಿ ಈ ವಿಷಯಗಳಿಗೆಲ್ಲಾ ಮನವ ಕೊಡುವುದಕ್ಕೆ ಸಾಧ್ಯವಿಲ್ಲ, ಅವರನ್ನು ಬಿಡುವ. ಅವರು ಕರ್ಮ ಯೋಗಿಗಳು. ಆದರೆ ಎಲ್ಲವೂ ಇದ್ದು ಆದರೂ ಕೊರಗುತ್ತಾ ಇರುವವರಿಗೆ ಅನಂದವಾಗಿರುವುದಕ್ಕೆ ಈ ಸೂರ್ಯೋದಯ ಸೂರ್ಯಾಸ್ತಮಾನ ಸಂಗೀತ ಮತ್ತು ಸಾಹಿತ್ಯಗಳು ಖಂಡಿತ ಸಹಾಯಮಾಡುತ್ತವೆ. ಅದರ ಕಡೆಗೆ ಒಲವ ತೋರಿಸಿ ತಮ್ಮನ್ನು ತಾನು ಅದರಲ್ಲಿ ತೊಡಗಿಸಿಕೊಂಡರೆ, ಸಂತೋಷಪಡಲಿಕ್ಕಾಗದ ಸ್ಥಿತಿಯಿಂದ ಪಡಬಹುದಾದ ಸ್ಥಿತಿಗೆ ಬರಬಹುದು.
ಇಡೀ ಸೃಷ್ಟಿಗೆ ಕರಣವಾದ ಈ ಸೂರ್ಯೋದಯ ಸೂರ್ಯಾಸ್ತಮಾನಗಳು, ಮಾನವನ ಅತ್ಯದ್ಭುತ ಆವಿಷ್ಕಾರವಾದ ಸಂಗೀತ ಜ್ಞಾನ ಮತ್ತು ಜಗತ್ತಿನಲ್ಲೆಲ್ಲೂ ಲಭ್ಯವಾಗದ ನಮ್ಮ ಭಾರತೀಯ ಸಾಹಿತ್ಯದ ಮುಕುಟದಂತಿರುವ ವಾಲ್ಮೀಕಿಯ ರಚನೆ ಇವೆಲ್ಲದರಲ್ಲಿ ಯಾವುದಾರೊಂದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಸತ್ಯವಾಗಿಯೂ ಮಾನಸಿಕ ನೆಮ್ಮದಿ ಮತ್ತು ಸಂತೋಷ ದೊರಕುತ್ತದೆಂದು ಹೇಳುತಾರೆ ಮಾನ್ಯ ಗುಂಡಪ್ಪನವರು. ನನ್ನ ಮಟ್ಟಿಗೆ ಸಾಹಿತ್ಯ ಮತ್ತು ಸಂಗೀತಗಳೆರಡೂ ಸಹ ಏಕಾಗ್ರತೆಯನ್ನು ನೀಡಿ ಧ್ಯಾನಕ್ಕೆ ಆಧ್ಯಾತ್ಮ ಚಿಂತನೆಗೆ ಬಹಳ ಸಹಾಯಮಾಡುತ್ತವೆ ಎಂಬುದನ್ನು ಮನಗಂಡಿದ್ದೇನೆ.
ವಾಚಕರೆ ಈ ಜಗತ್ತಿನಲ್ಲಿ ಆನಂದಪಡುವುದಕ್ಕೆ ಅಸಂಖ್ಯಾತ ಸಾಧನಗಳು ಮಾರ್ಗಗಳೂ ಇವೆ.. ಹಾಗೆಯೇ ದುಃಖಪಡುವುದಕ್ಕೆ, ಕೊರಗುವುದಕ್ಕೆ ಮತ್ತು ಗೋಳಾಡುವುದಕ್ಕೂ ಅಸಂಖ್ಯಾತ ಕಾರಣಗಳು ಮತ್ತು ಮಾರ್ಗಗಳಿವೆ. ನಮಗೆ ಏನು ಬೇಕು ಎನ್ನವುದು ಮುಖ್ಯ. ಈ ಜಗತ್ತಿನ ಅಂಗಡಿಯಲ್ಲಿ ಎಲ್ಲವೂ ಇದೆ. ಆಯ್ಕೆ ನಮ್ಮದು ಸುಖ ದುಃಖಗಳು ನಮ್ಮ ಕೈಲೆ ಇದೆ.
ರಸಧಾರೆ - 058
ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು
ಕೆಳೆಯೊಲವು ನಲ್ಲೆಯ ವಿಯೋಗವಿಂತಹವು
ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ
ನೊಳದನಿಯದೊಂದರಿಂ ಮಂಕುತಿಮ್ಮ
ಮಲೆ=ಬೆಟ್ಟ, ಕಣಿವೆ = ಕೊರಕುಗಳು, ಕೆಳೆ=ಗೆಳೆತನ, ನಲ್ಲೆ= ಪ್ರೇಯಸಿ, ವಿಯೋಗ = ದೂರ ಸರಿವಾಟ, ಮನದೋಟವನು = ಮನಸ್ಸಿನ ಚಂಚಲ ಪ್ರಕೃತಿಯನು, ಮೂಕಗೊಲಿಪುವುವು = ಸುಮ್ಮನಾಗಿಸುವುವು,
ಮೂಕಗೊಳಿಪುವುವೆನ್ನ = ಮೂಕ + ಗೊಲಿಪುವುವು + ಎನ್ನ, ನೊಳದನಿಯದೊಂದರಿಂ = ಒಳದನಿ + ಅದರ + ಒಂದರಿಂ
ಬೆಟ್ಟಗುಡ್ಡಗಳು ಅದರಲ್ಲಿರುವ ಕಣಿವೆಗಳು, ಪ್ರಕೃತಿ ವಿಕೋಪದ ಗುಡುಗು ಸಿಡಿಲು, ಮಳೆ, ಚಂದಮಾರುತದಂತಾ ವಿಷಯಗಳು, ಸ್ನೇಹಿತನ ಒಲವು, ಪ್ರೇಯಸಿಯ ವಿಯೋಗದಂತಾ ವಿಷಯಗಳು ನಮ್ಮ ಮನಸ್ಸನ್ನು ಆಳುವಾಗ, ಇವುಗಳನ್ನೆಲ್ಲ ನಿಲ್ಲಿಸಿ ಮನಸ್ಸನ್ನು ನನ್ನ ಒಳದನಿಯು ಮಾತ್ರ ಸುಮ್ಮನಾಗಿಸುವುದು ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಹೇಳುತ್ತಾರೆ.
ಭಗವದ್ಗೀತೆಯಲ್ಲಿ ಒಂದು ಉಲ್ಲೇಖ ಬರುತ್ತದೆ. ಈ ದೇಹವನ್ನು ಒಂದು ರಥವೆಂದು ತಿಳಿ. ಆತ್ಮನೇ ಯಜಮಾನ, ಬುದ್ಧಿಯೇ ಸಾರಥಿ, ಮನಸ್ಸೇ ಲಗಾಮು ಮತ್ತು ಓಡುವ ಆರು ಕುದುರೆಗಳೇ ಅರಿಷಡ್ವರ್ಗಗಳು ಎನ್ನುತ್ತಾನೆ
ಶ್ರೀ ಕೃಷ್ಣ. ಎಲ್ಲಿಯ ತನಕ ಓಡುವ ಕುದುರೆಗಳು ಲಗಾಮಿನ ಮೂಲಕ ಸಾರಥಿಯ ಹಿಡಿತದಲ್ಲಿರುತ್ತವೆಯೋ ಅಲ್ಲಿಯತನಕ ಆ ಯಜಮಾನನೆನ್ನಿಸಿಕೊಂಡವನು, ಸೇರಬೇಕಾದ ಸ್ಥಳವನ್ನು ಸೇರುತ್ತಾನೆ. ಎಂದು ಸಾರಥಿಯ ಹಿಡಿತ ಲಗಾಮಿನ ಮೇಲೆ ಸಡಿಲವಾಗಿ ಕುದುರೆಗಳು ಮನಸೋ ಇಚ್ಛೆ ಓಡುತ್ತದೋ, ಆಗ ಆ ಯಜಮಾನ ಮತ್ತು ಆ ಸಾರಥಿ ಇಬ್ಬರೂ ಕುದುರೆಗಳು ಎಲ್ಲಿ ಕೊಂಡು ಹೋಗುತ್ತದೋ ಅಲ್ಲಿಗೆ ಹೋಗುತ್ತಾರೆ. ಅಂದರೆ ಎಲ್ಲಿಯತನಕ ನಮ್ಮ ಮನಸ್ಸು ಬುಧ್ಧಿಯ ಹಿಡಿತದಲ್ಲಿರುತ್ತೋ ಅಲ್ಲಿಯತನಕ ನಮಗೆ ಶ್ರೇಯಸ್ಸು. ಎಂದು ನಮ್ಮ ಮನಸ್ಸು ವಿಷಯಗಳ ವ್ಯಕ್ತಿಗಳ ಮತ್ತು ವಸ್ತುಗಳ ಆಕರ್ಷಣೆಯ ಹಿಡಿತಕ್ಕೆ ಹೋಗುತ್ತದೋ, ಆಗ ಆತ್ಮ ಸೊರಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು ಸೂಚ್ಯವಾಗಿ ನಿಲಿಸಿ ಮನದೋಟವನು ಎನ್ನುತ್ತಾರೆ ಈ ಕಗ್ಗದಲ್ಲಿ
ಮಿತ್ರರೇ, ನಾವು ನಮ್ಮ ನಮ್ಮನ್ನೇ ಅವಲೋಕಿಸಿಕೊಂಡು ನೋಡಿದಾಗ, ನಮಗೆ ತಿಳಿಯುತ್ತದೆ ನಮ್ಮ ಮನಸ್ಸು ಎಂಬ ಕೋತಿ ಕ್ಷಣ ಕ್ಷಣಕ್ಕೂ ಮರದಿಂದ ಮರಕ್ಕೆ ಕೊಂಬೆಯಿಂದ ಕೊಂಬೆಗೆ, ಅಂದರೆ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಹೇಗೆ ಹಾರುತ್ತಾ, ವ್ಯರ್ಥವಾಗಿ ತಿರುಗುತ್ತಲೇ ಇರುತ್ತದೆ. ಇದು ಪ್ರತಿಯೊಬ್ಬರ ಸ್ಥಿತಿ. ಹರಿದಾಡುವಂಥಾ ಮಾನವ ನಿಲಿಸುವುದು ಬಲು ಕಷ್ಟಎಂದು ದಾಸರು ಹೇಳಿದ್ದಾರೆ. ಅರೆ! ದಾಸರೇ ಹಾಗೆ ಹೇಳಿದ ಮೇಲೆ ನಾವು ಮಾಡುವುದು ಏನು? ಎಂದು ನಾವು ಸುಮ್ಮನಾಗಿಬಿಡಬಹುದು. ಆದರೆ ದಾಸರು ಕಷ್ಟಎಂದರೆ ಹೊರತುಅಸಾಧ್ಯಎಂದು ಹೇಳಲಿಲ್ಲವಲ್ಲ.
ಹಾಗಾದರೆ ಏನು ಮಾಡಬೇಕು? “ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನನೊಳದನಿಯದೊಂದರಿಂನೋಡಿ ಇದು ಗುಂಡಪ್ಪನವರ ಸಲಹೆ. ಮನಸ್ಸಿನ ಓಟವನ್ನು ನಿಲ್ಲಿಸಿ ಮೂಕವಾಗಿಸಬೇಕು. ಹೇಗೆ? ಎಂದರೆ ಅಂತರಂಗದ ಅರಿವಿನಿಂದ ಮಾತ್ರ ಸಾಧ್ಯವೆನ್ನುತ್ತಾರೆ ಮಾನ್ಯ ಗುಂಡಪ್ಪನವರು. ಹಾಗಾಗಿ ನಾವು ಅಂತರ್ಮುಖಿಗಲಾಗಬೇಕು. ಗುಹ್ಯರಾಗಬೇಕು. ಒಳದನಿಯನ್ನು ಉತ್ತೇಜಿಸಬೇಕು. ಅದನ್ನು ಕೇಳಬೇಕು ಮತ್ತು ಅದರಂತೆ ನಡೆಯಬೇಕು. ಆಗ ಮನಸ್ಸಿಗೆ ನೆಮ್ಮದಿ, ಸುಖ, ಶಾಂತಿ ಮತ್ತು ಆನಂದದ ಅನುಭವವನ್ನು ನಾವು ಪಡೆಯ ಬಹುದು. ಇಂದು ಪ್ರಯತ್ನದಿಂದ ಸಾಧ್ಯ. ಪರರಿಂದ ಉಪದೇಶ ಪಡೆದು ನಡೆಸುವ ಕ್ರಿಯೆಯಲ್ಲ.
ವಾಚಕರೆ, ಇದೊಂದು ಪರೀಕ್ಷೆ. ಪ್ರಶ್ನ ಪತ್ರಿಕೆಗಳನ್ನೂ, ನಾವೇ ತಯಾರುಮಾಡಿ ನಾವೇ ಉತ್ತರ ಬರೆದು, ನಮ್ಮನ್ನು ನಾವೇ ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳುವಂಥಾ ಪರೀಕ್ಷೆ. ಇಲ್ಲಿ ಪ್ರಯತ್ನ ಗಟ್ಟಿ ಮತ್ತು ಧೀರ್ಘವಾದರೆ, ಯಶಸ್ಸು ನಿಶ್ಚಯ. ಅಂಥಹ ಪ್ರಯತ್ನವನ್ನು ಮಾಡುವ ಧೃಢ ನಿಶ್ಚಯಬೇಕು. ಒಮ್ಮೆ ತೀವ್ರವಾಗಿ ತೊಡಗಿಸಿಕೊಂಡರೆ, ಅದೇ ನಮ್ಮನ್ನು ಮುಂದಕ್ಕೆ ಎಳೆದುಕೊಂಡು ಹೋಗುತ್ತೆ. ಆದರೆ ನಾವು ಪ್ರಯತ್ನ ಪಡಬೇಕು . ಅಂಥಹ ಪ್ರಯತ್ನವನ್ನು ಮಾಡುವ ನಿರ್ಧಾರವನ್ನು ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?
ಸಾಕ್ಷಿದ್ವಯ ರಸಧಾರೆ - 059
ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ
ಮನಗಾಣಿಸಲು ನಿಮಗೆ ದೈವದದ್ಭುತವ ?
ಮನುಜರೊಳಗಾಗಾಗ ತೋರ್ವ ಮಹನೀಯಗುಣ
ವನುವಾದ ಮಂಕುತಿಮ್ಮ
ಆ ಪರತತ್ವದ ಅದ್ಭುತ ಕ್ರಿಯೆಗಳನ್ನು ನೋಡಲು ಮನಗಾಣಲು, ನಾವು ಮಂತ್ರ ತಂತ್ರ ಸಿದ್ಧಿಗಳಿಗೆ ಏಕೆ ಶರಣಾಗಬೇಕು? ಮನುಜರಲ್ಲಿ ಅಗಾಗ ಕಾಣುವ ಮಹನೀಯ ಗುಣಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ನಮಗೆ ದೈವದ ಕ್ರಿಯೆ ಅರ್ಥವಾಗುತ್ತದೆ, ಎನ್ನುವುದೇ ಈ ಕಗ್ಗದ ಹೂರಣ.
ನಿಜ. ಇದೊಂದು ವೃತ್ತ. ಇದರ ಕ್ರಿಯೆ ಅರ್ಥಮಾಡಿಕೊಳ್ಳುವುದು ಕಷ್ಟ. ಏಕೆಂದರೆ ನಮಗೆ ನೋಡಲು ಬರುವುದಿಲ್ಲ. ಅರ್ಥಮಾಡಿಕೊಳ್ಳಲು ಬರುವುದಿಲ್ಲ. ಈ ಜಗತ್ತನ್ನು ಸೃಷ್ಟಿಸಿ, ನಡೆಸಿಕೊಂಡು ಹೋಗುತ್ತಿರುವ ಆ ಅದ್ಭುತ ಚೇತನದ ಕಾರ್ಯ ವೈಖರಿಗೆ ಒಂದು ಪರಿಭಾಷೆಯನ್ನು ನೀಡುವುದು ಬಹಳ ಕಷ್ಟ. ನಮ್ಮ ಜೀವನದಲ್ಲಿ ನಡೆಯುವುದೆಲ್ಲವನ್ನೂ ಅರ್ಥೈಸುವುದು, ಕಾರಣಹುಡುಕುವುದು ಬಹಳ ಕಷ್ಟ. ಹಾಗೆ ನಾವು ಒಂದು ರೀತಿಯಲ್ಲಿ ಅರ್ಥಮಾಡಿಕೊಂಡರೂ, ಅದು ನಿಜವಾದ ಕಾರಣವಾಗಿಲ್ಲದೇ ಇರಬಹುದು.
ನಮ್ಮಲ್ಲಿ ಸಾಧಾರಣವಾಗಿ ಒಂದು ಮಾತನ್ನು ಕೇಳುತ್ತಲಿರುತ್ತೇವೆ. ಯಾರಾದಾರೂ ನಮಗೆ ಸಂಕಟ ಸಮಯದಲ್ಲಿ ಅನಪೇಕ್ಷಿತವಾಗಿ ಸಹಾಯ ಮಾಡಿದಾಗ ದೇವರು ಬಂದಂಗೆ ಬಂದ್ಯಪ್ಪಎನ್ನುವ ರೂಢಿ ಇದೆ ಅಲ್ಲವೇ. ಅಂದರೆ ಏನು ಆ ವ್ಯಕ್ತಿಯಲ್ಲಿ ನಾವು ದೇವರನ್ನು ಕಾಣುತ್ತೇವೆ ಮತ್ತು ಅವರಿಂದ ಆದ ಉಪಕಾರವನ್ನು ಆ ದೇವರೇ ಮಾಡಿದ ಎನ್ನುವ ರೀತಿಯಲ್ಲಿ ಅರ್ಥೈಸುತ್ತೇವೆ. ನಮಗೆ ಸಹಾಯಬೇಕು. ಯಾರು ಮಾಡುತ್ತಾರೆಂದು ಗೊತ್ತಿಲ್ಲ. ಯಾವಾಗ ಗೊತ್ತಿಲ್ಲವೋ ಆಗ ದೇವರ ಮೇಲೆ ನಂಬಿಕೆ. ಆ ಸಮಯದಲ್ಲಿ ಯಾರೇ ಸಹಾಯ ಮಾಡಿದರೂ ಅದನ್ನು ದೇವರೇ ಮಾಡಿದನೆಂದು ವ್ಯಾಖ್ಯಾನ. ಇದೇ ಜಗತ್ತು.
ಎಂದೋ ಒಂದು ಕಾಲವಿತ್ತು. ಗಜೇಂದ್ರನಿಗೆ, ಪ್ರಹ್ಲಾದನಿಗೆ, ದ್ರುವನಿಗೆ, ಗೋಕರ್ಣನಿಗೆ, ಅರ್ಜುನ ಮುಂತಾದವರಿಗೆ, ಆ ಪರಮಾತ್ಮ ನೇರ ಸಹಾಯ ಮಾಡಿದ ದೃಷ್ಟಾಂತಗಳು. ಆದರೆ, ಇಂದು ನಾವು ಅಂತಹ ಅನುಭವಗಳನ್ನು ಪಡೆಯಲು ಸಾಧ್ಯವೇ ಇಲ್ಲ. ಇಂದು ನಾವು ನಮ್ಮ ಸುತ್ತಲಿರುವ ಮನುಷ್ಯರಲ್ಲಿ ಅವರ ಕಲ್ಯಾಣ ಗುಣಗಳಿಂದ ಅವರ ಮೂಲಕವೇ ಆ ದೈವದ ಅನುಭವವನ್ನು ಪಡೆಯಬೇಕು. ಇಂದು ಮಂತ್ರ ತಂತ್ರಗಳಿಂದ ಆ ದೈವವನ್ನು ಸಿದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಟ್ರಾನ್ಸಿಮಿಟರ ಸಶಕ್ತವಾಗಿದ್ದರೂ, ರಿಸೀವರ್ ಹಾಳಾಗಿದೆಯಲ್ಲ. ಹಾಗಾಗಿ ನಮ್ಮ ಸುತ್ತಲಿನ ಜನರಲ್ಲಿ ಇರುವ ಆ ಪರಮಾತ್ಮನ ಕಲ್ಯಾಣಗುಣಗಳಾದ ಪ್ರೀತಿ, ಸಹನೆ, ದಯೆ , ಕರುಣೆ ಮುಂತಾದವುಗಳನ್ನು ಗುರುತಿಸಿದರೆ ಒಳ್ಳೆಯದು. ಅವುಗಳಲ್ಲೇ ನಾವು ದೈವವನ್ನು ಕಾಣಬೇಕು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.
ಇಂದೂ ಸಹ ಸಾಕಷ್ಟು ಜನ ಅಂತಹ ಮಹನೀಯರು ಇದ್ದಾರೆ. ಪ್ರತ್ಯಕ್ಷವಾಗಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಜನರು, ಎಲೆಮರೆಕಾಯಿಗಳಂತೆ ಇದ್ದಾರೆ. ಇಡೀ ಕರುನಾಡು ಹೆಮ್ಮೆಪಡುವಂಥಾ, ಮೋಕ್ಷಗುಂಡಂ ವಿಶ್ವೇಶ್ವರೈಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ( ರಾಜ ಋಷಿ ಎಂದು ಅವರಿಗೆ ಬಿರುದು) ರಂಥವರು, ( ಅವರಿಗೆ ಅನುಕೂಲ ವಿತ್ತು) ಸಾಲುಮರದ ತಿಮ್ಮಕ್ಕ , ಮದರ್ ತೆರೇಸಾ ರಂಥವರು, ಲೋಕ ಕಲ್ಯಾಣವನ್ನು ಮಾತ್ರ ಗುರುಯಾಗಿರಿಸಿಕೊಂಡು ಸಾಧನೆಯನ್ನು ಮಾಡುವ ಸಾಧುಗಳು ಸಂತರು, ಮಠ ಮಾನ್ಯಗಳು ಏನೂ ಇಲ್ಲದೆ ಕೆಲಸ ಮಾಡುತ್ತಾ ಒಟ್ಟು ಸಮುದಾಯದ ಹಿತವನ್ನೇ ಬಯಸುವ ಮಹನೀಯರು ನಮ್ಮ ಸುತ್ತುಮುತ್ತಲ್ಲೇ ಇರುತ್ತಾರೆ. ಅವರ ನಿಸ್ವಾರ್ಥ ಸೇವೆಯನ್ನು ನಾವು ದೈವ ಕೃಪೆ ಎಂದೇ ಪರಿಗಣಿಸಬೇಕಾಗುತ್ತದೆ. ಆ ಪರಮಾತ್ಮ ಪ್ರತ್ಯಕ್ಷವಾಗಿ ನಮಗೆ ಒದಗದಿದ್ದರೂ ಪರೋಕ್ಷವಾಗಿ ಇಂಥಹ ಮಹನೀಯರ ಮೂಲಕ ನಮಗೆ ಮತ್ತು ಇಡೀ ಸಮಾಜಕ್ಕೆ ಒದಗುತ್ತಲೇ ಇರುತ್ತಾನೆ. ನಾವೂ ಸಹ ಅಂತಹ ಗುಣಗಳನ್ನು ಗುರುತಿಸುತ್ತಾ, ನಾವೂ ಸಹ ಸಾಕಷ್ಟು ಒತ್ತಾಸೆಯನ್ನು ನೀಡುತ್ತಾ, ಅಂತಹ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು.
ಸಾಕ್ಷಿದ್ವಯ ರಸಧಾರೆ - 060
ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸಫರ್ಡಿನವರು |
ದೇಶಕಾಲವಿಭಾಗ ಮನದ ರಾಜ್ಯದೊಳಿರದು
ಶ್ವಾಸವದು ಬೊಮ್ಮನದು ಮಂಕುತಿಮ್ಮ. ||
ಕಬ್ಬಗಳು = ಕಾವ್ಯಗಳು ಬೊಮ್ಮನದು = ಪರಮಾತ್ಮನದು
ಗ್ರೀಸಿನ ಕಬ್ಬಗಳನ್ನು ಓದುವರು ದೆಹಲಿಯವರು. ಕಾಶಿಯಾ ಶಾಸ್ತ್ರಗಳನ್ನು ಆಕ್ಸಫರ್ಡಿನವರು ದೇಶ ಕಾಲ ವಿಭಾಗ ಮನ ರಾಜ್ಯದೊಳು ಇರದು ಶ್ವಾಸವದು ಬೊಮ್ಮನದು ಮಂಕುತಿಮ್ಮ.
ಜಗತ್ತಿನ ವಿಶಾಲತೆಗೆ ಒಂದು ಕನ್ನಡಿ ಈ ಕಗ್ಗ. ಗ್ಲೋಬಲ್ ವಿಲೇಜ್ಎಂದು ಇತ್ತೀಚೆಗೆ ಒಂದು ಪದ ಪ್ರಯೋಗವನ್ನು ನಾವು ಕೇಳುತಿದ್ದೇವೆ. ನಾವು ಇಲ್ಲಿ ಕುಳಿತುಕೊಂಡು ಪ್ರಪಂಚದ ಯಾವುದೇ ಮೂಲೆಯಲಿರುವ ಜನರೊಡನೆ ನಾನಾ ವಿಧವಾದ ಸಂಪರ್ಕಗಳನ್ನು ಇಂದು ಹೊಂದಿದ್ದೇವೆ. ಎಲ್ಲಿಯೋ ಹುಟ್ಟಿ ಬೆಳೆದ, ಆಲ್ಬರ್ಟ್ ಕಾಮೂವಿನ ನಾಟಕಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತೇವೆ. ಶೇಕ್ಸಪಿಯರನ ನಾಟಕಗಳನ್ನೂ ಆಡುತ್ತೇವೆ. ಆಲ್ಲಿ ಅವರುಗಳು ನಮ್ಮ ಭಾರತೀಯ ಸಂಸ್ಕೃತಿಯ ಕತೆ ನಾಟಕ ಶಾಸ್ತ್ರಗಳನ್ನು ಓದುತ್ತಾರೆ. ಇಂಗ್ಲೆಂಡಿನ ಶಾಲೆಗಳಲ್ಲಿ ಸಹನಾವವತುಹೇಳುತ್ತಾರೆ ಪ್ರಾರ್ಥನೆಯಲ್ಲಿ. ಆದರೆ ದುರಂತವೆಂದರೆ, ಇಲ್ಲಿ ಭಾರತದಲ್ಲಿ ಅದನ್ನು ಶಾಲೆಗಳಲ್ಲಿ ಹೇಳಿದರೆ ಅದಕ್ಕೊಂದು ಬಣ್ಣ ಕಟ್ಟಿ ಗೊಂದಲವೇ ಆಗುತ್ತದೆ. ಇರಲಿ, ಹೀಗೆ ಬೇರೆ ಬೇರೆ ದೇಶಗಳ ಭಾಷೆ ಮತ್ತು ಸಂಸ್ಕೃತಿಗಳನ್ನು ಬೇರೆ ಬೇರೆ ದೇಶಗಳಲ್ಲಿ ಅನುಕರಿಸಿ, ಅನುಸರಿಸುವಾಗ ಇಡೀ ಜಗತ್ತೇ ಒಂದು ಮನೆಯಾಗುವ ಸಂಭವ ಇದೆ ಎಂದು ಅರ್ಥ ತಾನೇ.
ವಿದ್ವತ್ವಂಚ ನೃಪತ್ವಂಚ ನೈವ ತುಲ್ಯಂ ಕದಾಚನ | ಸ್ವದೇಶೆ ಪೂಜ್ಯತೆ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೆ ಎನ್ನುತ್ತದೆ ಸುಭಾಷಿತ. ಹಾಗೆ ವಿದ್ಯೆಗೆ ದೇಶ ಕಾಲದ ಎಲ್ಲೆ ಇರುವುದಿಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ . ಹೌದು ಮನಸ್ಸು ವಿಶಾಲವಾದರೆ, ಮನಸ್ಸಿನ ಚಿಂತನೆ ವಿಶಾಲವಾದರೆ ಅದು ಸಾಧ್ಯ. ಆದರೆ ಜಾತಿ, ಮತ, ದೇಶ, ಭಾಷೆ, ವರ್ಣಗಳ ಸಣ್ಣ ಸಣ್ಣ ವೃತ್ತಗಳ ಗೆರೆಗಳನ್ನು ನಮ್ಮ ಸುತ್ತ ನಾವೇ ಎಳೆದುಕೊಂಡು ನಮ್ಮ ಜಾತಿ, ನಮ್ಮ ಭಾಷೆ, ನಮ್ಮ ವರ್ಣ, ನಮ್ಮ ರಾಜ್ಯ. ಹೀಗೆ ಬೇರೆ ಬೇರೆ ರೀತಿಯ ವೃತ್ತಗಳನ್ನು ಎಳೆದುಕೊಂಡು ಕೂಪಸ್ಥ ಮಂಡೂಕದ ರೀತಿ ಬಾಳುವ ನಮಗೆ ಜಗದ್ವೈಶಾಲ್ಯದ ಮನೋಭಾವ ಹೇಗೆ ಬರಬೇಕು ಹೇಳಿ? ಇಂದು ಜಗತ್ತು ಇರುವುದೇ ಹಾಗೆ. ಒಬ್ಬರು ಹಾಗಾದರೆ, ಮತ್ತೊಬ್ಬರೂ ತಮ್ಮ ಪ್ರತಿಷ್ಠೆ ತೋರುವುದಕ್ಕೋ ಅಥವಾ ತಮ್ಮನ್ನು ಮತ್ತು ತಮ್ಮತನವನ್ನು ಕಾಪಾಡಿಕೊಳ್ಳುವುದಕ್ಕೋ, ಇವರೂ ಹಾಗಾಗುತ್ತಾರೆ. ಇದಕ್ಕೆ ಕೊನೆ ಎಲ್ಲಿ. ಆ ದೇವರೇ ಬಲ್ಲ.
ಇಷ್ಟೆಲ್ಲಾ ವಿರೋಧ-ವೈವಿಧ್ಯತೆಗಳಲ್ಲಿ ಮನುಷ್ಯ ಒಂದು ವಿಚಾರ ಮರೆತು ಹೋಗಿದ್ದಾನೆ. ಎಲ್ಲ ಮನುಷ್ಯರೂ ಬದುಕಿರುವುದೇ ಉಸಿರಾಟದಿಂದ. ಮತ್ತು ಆ ಉಸಿರು ಪರಮ ಚೇತನದ ಕರುಣೆಯಿಂದ ನಮಗೆ ಸಿಕ್ಕಿದೆ. ವಾಚಕರೆ, ನೋಡಿ ಒಂದು ಉಸಿರು ಒಳಗೆ ಹೋದದ್ದು ಹೊರಗೆ ಬರದಿದ್ದರೆ ಅಥವಾ ಹೊರಗೆ ಬಿಟ್ಟ ಉಸಿರು ಮತ್ತೆ ಒಳಗೆ ಹೋಗದಿದ್ದರೆ, ನಾವು ಇಲ್ಲ. ಇಷ್ಟು ದುರ್ಬಲ, ಸೂಕ್ಷ್ಮ, ನಾಜೂಕಾದದ್ದು ( fragile ) ನಮ್ಮ ಬದುಕು, ನಾವು ಎಷ್ಟು ದಿವಸ ಬದುಕಿರಬೇಕು ಎನ್ನುವುದು ಆ ಪರಮ ಶಕ್ತಿಯ ಇಚ್ಚೆಯ ಮೇಲೆ ನಿರ್ಭರವಾಗಿದೆ ಎಂಬುವುದು ಆಸ್ತಿಕರ ನಂಬಿಕೆ. ಇರಲಿ ಯಾವುದೋ ಒಂದು ಶಕ್ತಿಯ ಅಧೀನ ನಾವೆಲ್ಲಾ. ಹಾಗೆ ಅಷ್ಟು ನಾಜೂಕಾದ ಬದುಕನ್ನು ನಡೆಸುವ ನಾವು, ಈ ಕ್ಷಣ ಇದೆ-ಮತ್ತೊಂದು ಕ್ಷಣ ಇಲ್ಲ, ಎನ್ನುವಂಥಾ ಬದುಕಿಟ್ಟುಕೊಂಡು ನಾವು ಅಹಂಕಾರ ಪಡುವುದು ಮೂರ್ಖತನವಲ್ಲದೆ ಮತ್ತೇನು.
ಬನ್ನಿ ನಾವು ಈ ಜಾತಿ, ಮತ, ದೇಶ, ಭಾಷೆ, ವರ್ಣಗಳ ಸಣ್ಣ ಸಣ್ಣ ವೃತ್ತಗಳ ಗೆರೆಗಳನ್ನು ಅಳಿಸಿ ಅಹಂಕಾರವನ್ನು ತೊರೆದು, ಪರಸ್ಪರ ಪ್ರೀತಿ, ಸದ್ಭಾವನೆ, ವಿಶ್ವಾಸಗಳನ್ನು ಬೆಳೆಸಿಕೊಂಡುವಿಶ್ವಮಾನವರಾಗೋಣ. ಇಡೀ ವಿಶ್ವವನ್ನೇ ಎಲ್ಲ ಪ್ರಾಣಿಗಳೂ ಪ್ರಶಾಂತವಾಗಿ ಜೀವಿಸಲು ಒಂದು ಸುಂದರ ತಾಣವನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡೋಣ.

ಕಾಮೆಂಟ್‌ಗಳಿಲ್ಲ: