ಬೇಂದ್ರೆಯವರ ಆಯ್ದ ಭಾವಗೀತೆಗಳು

ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene

ಯಾಕೋ ಕಾಣೆ ರುದ್ರ ವೀಣೆ
ಮಿಡಿಯುತಿರುವುದು
ಜೀವದಾಣೆಯಂತೆ ತಾನೆ
ನುಡಿಯುತಿರುವುದು.

ತಂತಿ ಮಿಂಚಿ ನಡುಗುತಿದೆ
ಸೊಲ್ಲು ಸಿಡಿದು ಗುಡುಗುತಿದೆ
ಮಿಡಿದ ಬೆರಳು ಅಡಗುತಿದೆ
ಮುಗಿಲ ಬಯಲಲಿ.

ಚಿಕ್ಕೆ ಬಾಲ ಬೀಸುತಿವೆ
ಸೂರ್ಯಚಂದ್ರ ಈಸುತಿವೆ
ಹೊಸ ಬೆಳಕನೆ ಹಾಸುತಿವೆ
ಕಾಲ ಪಥದಲಿ.

ಧರ್ಮಾಸನ ಹೊರಳುತಿವೆ
ಸಿಂಹಾಸನ ಉರುಳುತಿವೆ
ಜಾತಿ ಪಂಥ ತೆರಳುತಿವೆ
ಮನದ ಮರೆಯಲಿ.

ನೆಲದ ಬಸಿರೊಳುರಿಯುತಿದೆ
ಬೆಟ್ಟದೆದೆಯು ಬಿರಿಯುತಿದೆ
ನೀರು ಮೀರಿ ಹರಿಯುತಿದೆ
ಕೆಂಪು ನೆಲದಲಿ.

ಭೂಮಿತಾಯಿಯ ಚೊಚ್ಚಿಲ ಮಗ / bhoomitaayiya chocchila maga

ಭೂಮಿತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹಿರೇನು?

ಮುಗಿಲೆಂಬುವದು
ಕಿಸಿದಿತು ಹಲ್ಲು!
ಬಂದಾ ಬೆಳೆಯು
ಮಿಡಿಚಿಯ ಮೇವು;
ಬಿತ್ತಿದ್ದಾಯಿತು
ಉತ್ತಿಹ ಮಣ್ಣು!
ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು!
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು!
ಎದೆಯ ಗೂಡಿನೊಳು
ಚಿಂತೆಯ ಗೂಗಿ!
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ!
ಮೋರೆಯು ಸಾವನು
ಅಣಕಿಸುತಿಹುದು!
ಕೊರಳಿಗೆ ಹತ್ತಿದೆ
ಸಾಲದ ಶೂಲ!
ಆದರು ಬರದೊ
ಯಮನಿಗೆ ಕರುಣ 
ಉಸಿರಿಗೆ ಒಮ್ಮೆ
ಜನನಾ ಮರಣಾ.

ನರಗಳ ನೂಲಿನ
ಪರೆ ಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ;
ಅದರೊಳಗೊಂದು
ಎಲುಬಿನ ಬಲೆಯು!
ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತುವು
ಹೊರಳುತ ಉರುಳುತ;
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೋ ಬಂದು!
ಸಾವಿನ ಬೆಳಕದು
ಕಾಣುವದೆಂದು?
ಎಂದೋ ಎಂದು
ಕನವರಿಸುವದು
ತಳಮಳಿಸುವದು!

ಶ್ರಾವಣಾ ಬಂತು / Shraavana Bantu

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು.

ಕಡಲಿಗೆ ಬಂತು ಶ್ರಾವಣಾ| ಕುಣಿದ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ.

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನ ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೇಹಗಲು|

ಶ್ರಾವಣಾ ಬಂತು ಹೊಳಿಗಳಿಗೆ| ಅದೆ ಶುಭಗಳಿಗೆ|
ಹೊಳಿಗೆ ಮತ್ತ ಮಳಿಗೆ|
ಆಗ್ಯೇದ ಲಗ್ನ| ಅದರಾಗ ಭೂಮಿ ಮಗ್ನ||

ಶ್ರಾವಣಾ ಬಂತು ಊರಿಗೆ| ಕೆರಿ ಕೇರಿಗೆ|
ಹೊಡೆದ ಝೂರಿಗೆ|
ಜೋಕಾಲಿ ಏರಿ| ಅಡರ್ಯಾವ ಮರಕ ಹಾರಿ|

ಶ್ರಾವಣಾ ಬಂತು ಮನಿಮನಿಗೆ| ಕೂಡಿ ದನಿದನಿಗೆ|
ಮನದ ನನಿಕೊನಿಕೊನಿಗೆ|
ಒಡೆದಾವ ಹಾಡೂ| ರಸ ಉಕ್ಕತಾವ ನೋಡು||
ಶ್ರಾವಣಾ ಬಂತು.

ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||

ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||

ಹಸಿರುಟ್ಟ ಬಸುರಿಯ ಹಾಂಗ|
ನೆಲಾ ಹೊಲಾ ಹ್ಯಾಂಗ|
ಅರಿಸಿನಾ ಒಡೆಧಾಂಗ|
ಹೊಮ್ಮತಾವ| ಬಂಗಾರ ಚಿಮ್ಮತಾವ||
ಗುಡ್ಡ ದುಡ್ಡ ಸ್ಥಾವರಲಿಂಗ|
ಅವಕ ಅಭ್ಯಂಗ|
ಎರಿತಾವನ್ನೊ ಹಾಂಗ|
ಕೂಡ್ಯಾವ ಮೋಡ| ಸುತ್ತೆಲ್ಲ ನೋಡ ನೋಡ||

ನಾಡೆಲ್ಲ ಏರಿಯ ವಾರಿ||
ಹರಿತಾವ ಝರಿ|
ಹಾಲಿನ ತೊರಿ|
ಈಗ ಯಾಕ| ನೆಲಕೆಲ್ಲ ಕುಡಿಸಲಾಕ||
ಶ್ರಾವಣಾ ಬಂತು.

ಜಗದ್ಗುರು ಹುಟ್ಟಿದ ಮಾಸ|
ಕಟ್ಟಿ ನೂರು ವೇಷ|
ಕೊಟ್ಟ ಸಂತೋಷ|
ಕುಣಿತದ ತಾನsದ ದಣಿತದ|

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು||

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ / Innu yaka baralillavva hubballiyava

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ
ವಾರದಾಗ ಮೂರುಸರತಿ ಬಂದು ಹೋದಂವಾ...

ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡಂವಾ
ತುಂಬ-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತುಮಾತಿಗೆ ನಕ್ಕುನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾsಡಾ ಹಾಡಂವಾ
                                                                               ಇನ್ನೂ ಯಾಕ ಬರಲಿಲ್ಲ ....

ತಾಳೀಮಣಿಗೆ ಬ್ಯಾಳಿಮಣಿ ನಿನಗೆ ಬೇಕೇದಾಂವಾ
ಬಂಗಾರ-ಹುಡೀಲೇ ಭಂಡಾರನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹೀಡೀಲೆ ರೊಕ್ಕಾ ತೆಗದು ಹಿಡಿ ಹಿಡಿ ಅನ್ನಾಂವಾ
ಖರೆ ಅಂತ ಕೈಮಾಡಿದರ ಹಿಡs; ಬಿಡಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮೂಗುಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ಹುಟ್ಟಾಯಾಂವಾ ನಗಿಕ್ಯಾದಿಗೀ ಮೂಡಸಿಕೊಂದಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯ ಮಡಿಚಿಕೊಂದಾಂವಾ
ಜಲ್ಮಕ ಜಲ್ಮಕ ಗೆಣ್ಯಾ ಆಗಿ ಬರತೇನೆಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ
                                                                               ಇನ್ನೂ ಯಾಕ ಬರಲಿಲ್ಲ....

ಸೆಟ್ಟರ ಹುಡುಗ ಸೆಟಗೊಂಢೋದಾ ಅಂತ ನನ್ನ ಜೀಂವಾ
ಹಾದೀಬೀದಿ ಹುಡುಕುತೈತ್ರೆ ಬಿಟ್ಟ ಎಲ್ಲ ಹ್ಯಾಂವಾ
ಎಲ್ಲೀ! ಮಲ್ಲೀ! ಪಾರೀ! ತಾರೀ! ನೋಡೀರೇನವ್ವಾ
ನಿಂಗೀ! ಸಂಗೀ! ಸಾವಂತರೀ! ಎಲ್ಲಾನ ನನ್ನಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ನೀ ಹೀಂಗ ನೋಡಬ್ಯಾಡ ನನ್ನ / Nee hinga nodabyada nanna

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ.

ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆsನಗ ಇಲ್ಲದ ಭೀತಿ

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ


ಅನಂತ ಪ್ರಣಯ (ಉತ್ತರಧ್ರುವದಿಂ, ದಕ್ಷಿಣಧ್ರುವಕೂ) / Uttara dhruvadim, dakshina dhruvaku

ಉತ್ತರಧ್ರುವದಿಂ, ದಕ್ಷಿಣಧ್ರುವಕೂ,
ಚುಂಬಕ ಗಾಳಿಯು ಬೀಸುತಿದೆ 
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು. 

ಅಕ್ಷಿನಿಮೀಲನ ಮಾಡದೆ ನಕ್ಷ- 
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

ಬಾರೊ ಸಾಧನಕೇರಿಗೆ / Baaro Saashana kerige

ಬಾರೊ ಸಾಧನಕೇರಿಗೆ,
ಮರಳಿ ನಿನ್ನೀ ಊರಿಗೆ....

ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ?

ಮಲೆಯ ಮೊಗವೇ ಹೊರಳಿದೆ,
ಕೋಕಿಲಕೆ ಸವಿ ಕೊರಳಿದೆ,
ಬೇಲಿಗೂ ಹೂ ಬೆರಳಿದೆ,
ನೆಲಕೆ ಹರೆಯವು ಮರಳಿದೆ.
ಭೂಮಿತಾಯ್ ಒಡಮುರಿದು ಎದ್ದಳೊ,
ಶ್ರಾವಣದ ಸಿರಿ ಬರಲಿದೆ.

ಮೋಡಗಳ ನೆರಳಾಟವು,
ಅಡವಿ ಹೂಗಳ ಕೂಟವು,
ಕೋಟಿ ಜೆನ್ನೊಣಕೂಟವು,
ಯಕ್ಷಿ ಮಾಡಿದ ಮಾಟವು.
ನೋಡು ಬಾ ಗುಂಪಾಗಿ ಪಾತರ-
ಗಿತ್ತಿ ಕುಣಿಯುವ ತೋಟವು.

ಮರವು ಮುಗಿಲಿಗೆ ನೀಡಿದೆ.
ಗಿಡದ ಹೊದರೊಳು ಹಾಡಿದೆ
ಗಾಳಿ ಎಲ್ಲೂ ಆಡಿದೆ
ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
ತರದ ನೋಟವ ನೋಡಿದೆ?

 

ಇಳಿದು ಬಾ ತಾಯೆ ಇಳಿದು ಬಾ.. / ilidu baa taaye ilidu baa

ಇಳಿದು ಬಾ ತಾಯಿ ಇಳಿದು ಬಾ...

ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ...

ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ | ಬಯಲ ಜರೆದು ಬಾ | ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ | ಇಳಿದು ಬಾ ತಾಯಿ ಇಳಿದು ಬಾ
ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ | ಜೀವ ಜಲದಲ್ಲಿ ಚಲಿಸಿ ಬಾ | ಮೂಲ ಹೊಲದಲ್ಲಿ ನೆಲೆಸಿ ಬಾ
ಕಮ್ಚು ಮಿಂಚಾಗಿ ತೆರಳಿ ಬಾ | ನೀರು ನೀರಾಗಿ ಉರುಳಿ ಬಾ | ಮಾತೆ ಹೊಡಮರಳಿ ಬಾ
ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ

ಕೊಳೆಯ ತೊಳೆವವರು ಇಲ್ಲ ಬಾ | ಬೇರೆ ಶಕ್ತಿಗಳು ಹೊಲ್ಲ ಬಾ | ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ | ನಮ್ಮ ನಾಡನ್ನೆ ಸುತ್ತ ಬಾ | ಸತ್ತ ಜನರನ್ನು ಎತ್ತ ಬಾ
ಇಳಿದು ಬಾ ತಾಯಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ

ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
ಅವತಾರವೆಂದೆ ಎಂದಾರೆ ತಾಯೆ ಈ ಅಧಃಪಾತವನ್ನೆ
ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ

ದಮ್ ದಮ್ ಎಂದಂತೆ ದುಡುಕಿ ಬಾ | ನಿನ್ನ ಕಂದನ್ನ ಹುಡುಕಿ ಬಾ | ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ | ಬಾಳು ಬೆಳಕಾಗಿ ಬೆಳೆದು ಬಾ | ಕೈ ತೊಳೆದು ಬಾ ಮೈ ತೊಳೆದು ಬಾ

ಇಳಿದು ಬಾ ತಾಯಿ ಇಳಿದು ಬಾ | ಇಳೆಗಿಳಿದು ಬಾ ತಾಯಿ ಇಳಿದು ಬಾ
ಶಂಭು ಶಿವಹರನ ಚಿತ್ತೆ ಬಾ | ದತ್ತ ನರಹರಿಯ ಮುತ್ತೆ ಬಾ | ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ


ನಾರೀ ನಿನ್ನ ಮಾರೀ ಮ್ಯಾಗ / naari ninna maari myaaga

ನಾರೀ ನಿನ್ನ ಮಾರೀ ಮ್ಯಾಗ 
ನಗೀ ನವಿಲು ಆಡತಿತ್ತ
ಆಡತಿತ್ತ ಓಡತಿತ್ತ 
ಮುಗಿಲ ಕಡೆಗೆ ನೋಡತಿತ್ತ |

ಮಿಣ ಮಿಣ ಮಿಣ ಮಿಂಚತಿತ್ತ
ಮೂಡತಿತ್ತ ಮುಳುಗತಿತ್ತ
ಮುಳುಗತಿತ್ತ ತೊಳಗತಿತ್ತ
ನೆಲ ಜಲ ಬೆಳಗತಿತ್ತ |

ಕಣ್ಣಿನ್ಯಾಗ ಬಣ್ಣದ ನೋಟ
ತಕತಕ ಕುಣಿದಾಡತಿತ್ತ
ಕುಣಿತಿತ್ತ ಮಣಿತಿತ್ತ
ಒನಪಿನಲೆ ಒನದಾಡತಿತ್ತ |

ಮನದ ಮಾಮರದ ಕೋಣಿಗೆ
ಕೋಕಿಲೊಂದು ಕೂಡತಿತ್ತ
ಕೂಡತಿತ್ತ ಹಾಡಬಿಟ್ಟು
ಬರೇ ನಿನ್ನ ನೋಡತಿತ್ತ |

ಒಂದು ಜೀವ ನೊಂದುಕೊಂಡು
ಹಗಲಿರುಳು ಮಿಡುಕಾಡುತಿತ್ತ
ಮಿಡುಕುತಿತ್ತ ತೊಡಕತಿತ್ತ
ಏನೋ ಒಂದ ಹುಡುಕತಿತ್ತ |

ಕಣ್ಣೀರಿನ ಮಳೆಯ ಕೂಡ
ತನ್ನ ದುಃಖ ತೋಡತಿತ್ತ
ತೋಡತಿತ್ತ ಬೇಡತಿತ್ತ
ದೊರಕದ್ದಕ್ಕ ಬಾಡತಿತ್ತ

 

ಭೃಂಗದ ಬೆನ್ನೇರಿ... / bhrungada benneri

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ ||

ಏನು ಏನು? ಜೇನು ಜೇನು? ಏನೇ ಗುಂಗುಂ ನಾನಾ
ಓಂಕಾರದ ಶಂಖನಾದಕ್ಕಿಂತ ಕಿಂಚಿದೂ ನಾ
ಕವಿಯ ಏಕತಾನ ಕವನದಂತೆ ನಾದಲೀನಾ ||

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವ ರೇಷ್ಮೆ ಬೆರೆಯುವಂತೆ ತಾನೇ ಬಾಲಾ
ಉಸಿರಿನಿಂದೆ ಹುಡುಕುವಂತೆ ತನ್ನ ಬಾಳ ಮೇಳಾ ||

ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮೊಳಗುವೊಲು ಸ್ವತಂತ್ರಾ ||

ಎಲ್ಲೆಲ್ಲೋ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ರರಂಗ ಭೂಮಾ
ದಾಂಗುಡಿಗಳ ಬಿಡುತ್ತಲಿತ್ತು ಅರಳಲಿತ್ತು ಪ್ರೇಮಾ ||

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
ಬಂತೆಲ್ಲಿಗೆ'? ಕೇಳುತಿದ್ದ ನೀಯನಂತ ಕಾಲಾ ||

ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಬಿಗ್ಗಲಿತ್ತು ತನ್ನ ತಾನೇ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ ||

ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ ||

ಯುಗ ಯುಗಾದಿ ಕಳೆದರೂ / Yuga yugadi kaledaru

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಳಲಿ,
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ.

ನಿದ್ದೆಗೊಮ್ಮೆ ನಿತ್ಯ ಮರಣ,
ಎದ್ದ ಸಲ ನವೀನ ಜನನ,
ನಮಗೆ ಏಕೆ ಬಾರದು?
ಎಲೆ ಸನತ್ಕುಮಾರ ದೇವ,
ಎಲೆ ಸಾಹಸಿ ಚಿರಂಜೀವ,
ನಿನಗೆ ಲೀಲೆ ಸೇರದೂ.

ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.


 

ನಾನು ಬಡವಿ ಆತ ಬಡವ / Naanu badavi aata badava

ನಾನು ಬಡವಿ ಆತ ಬಡವ
      ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
      ಅದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ
      ಅವನೆ ರಂಗಸಾಲೆ
ಕಣ್ಣು ಕಟ್ಟುವಂಥ ಮೂರ್ತಿ
      ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದ
      ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬಾ
      ನನಗೆ ನವಿರು ಬಟ್ಟೆ

ಆತ ಕೊಟ್ಟ ವಸ್ತು ಒಡವೆ
      ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
      ಕೆನ್ನೆ ತುಂಬಾ ಮುತ್ತು

ಕುಂದು ಕೊರತೆ ತೋರಲಿಲ್ಲ
      ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
      ತುಟಿಗೆ ಹಾಲು ಜೇನು.     


ಯಾರಿಗೂ ಹೇಳೋಣು ಬ್ಯಾಡ... / Yarigu helonu byada

ಯಾರಿಗೂ ಹೇಳೋಣು ಬ್ಯಾಡ (೩)
ಹಾರಗುದರಿ ಬೆನ್ನ ಏರಿ
ಸ್ವಾರರಾಗಿ ಕೂತು ಹಾಂಗ
ದೂರ ದೂರ ಹೋಗೋಣಾಂತ ||||

ಯಾರಿಗೂ ಹೇಳೋಣು ಬ್ಯಾಡ
ಹಣ್ಣು ಹೂವು ತುಂಬಿದಂಥ
ನಿನ್ನ ತೋಟ ಸೇರಿ ಒಂದ
ತಿನ್ನೋಣಂತ ಅದರ ಹೆಸರ || ||


ಯಾರಿಗೂ ಹೇಳೋಣು ಬ್ಯಾಡ
ಕುಣಿಯೋಣಂತ ಕೂಡಿ ಕೂಡಿ
ಮಣಿಯೋಣಂತ ಜಿಗಿದು ಹಾರಿ
ದಣಿಯದಲೇ ಆಡೋಣಂತ || ||

ಯಾರಿಗೂ ಹೇಳೋಣು ಬ್ಯಾಡ
ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತ || ||


ಯಾರಿಗೂ ಹೇಳೋಣು ಬ್ಯಾಡ
ಹಾವಿನ ಮರಿಯಾಗಿ ಅಲ್ಲಿ
ನಾವೂನೂ ಹೆಡೆಯಾಡಿಸೋಣ
ಹೂವೆ ಹೂವು ಹಸಿರೆ ಹಸಿರು || ||

ಯಾರಿಗೂ ಹೇಳೋಣು ಬ್ಯಾಡ
ನಿದ್ದೆ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೊಣಂತ
ಯಾರಿಗೂ ಹೇಳೋಣು ಬ್ಯಾಡ || ||

ಅಂತರಂಗದ ಮೃದಂಗ..

ಅಂತರಂಗದ ಮೃದಂಗ ಅಂತು ತೊಂ ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಂ ಝಣಣ ನಾನಾ
ನೆನಪು ತಂತಿ ಮೀಟುತಿತ್ತು ತೊಂತನನ ತಾನ, ತೊಂತನನ ತಾನ,
ತೊಂತನನ ತಾನ

ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ
ಏಕನಾದದಂದದೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ ||

ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ ||

ಕತ್ತಲಲ್ಲೆ ಬೆಳಕು ಮಿಂಚಿ ಪಡೆದೀತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ ||


ಬೆಳಗು (ಮೂಡಲ ಮನೆಯಾ ಮುತ್ತಿನ ನೀರಿನ)


ಮೂಡಲ ಮನೆಯಾ ಮುತ್ತಿನ ನೀರಿನ
ಎರಕSವ ಹೊಯ್ದಾ
ನುಣ್ಣ-ನ್ನೆರಕSವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ.
ಹೋಯ್ತೋ-ಜಗವೆಲ್ಲಾ ತೊಯ್ದಾ


ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.


ಎಲೆಗಳ ಮೇಲೆ ಹೂಗಳ ಒಳಗೆ
ಅಮೃತSದ ಬಿಂದು
ಕಂಡವು-ಅಮೃತದ ಬಿಂದು
ಯಾರಿರಿಸಿರುವರು ಮುಗಿಲS ಮೇಲಿಂ-
ದಿಲ್ಲಿಗೇ ತಂದು.
ಈಗ-ಇಲ್ಲಿಗೇ ತಂದು.


ತಂಗಾಳಿಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ- ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧ-ಮೈಯೆಲ್ಲಾ ಸವರಿ.


ಗಿಡಗಂಟೆಗಳಾ ಕೊರಳೊಳಗಿಂದ
ಹಕ್ಕಿಗಳ ಹಾಡು
ಹೊರಟಿತು-ಹಕ್ಕಿಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.


ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.


ಅರಿಯದು ಅಳವು ತಿಳಿಯದು ಮನವು
ಕಾಣSದೋ ಬಣ್ಣಾ
ಕಣ್ಣಿಗೆ-ಕಾಣSದೋ ಬಣ್ಣಾ.
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.         

 

ನಾಕು ತಂತಿ

ಒಂದು

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾS
ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾS
ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ
ಹತವೊ ಹಿತವೋ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ
ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ.

ಎರಡು

ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡುನಡುಗಿ;
ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;
ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ 
ಸೊಲ್ಲಿನಲಿ;
ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;
ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವುದೋ
ನಾ ತಿಳಿಯೆ.
ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.

ಮೂರು

'ಚಿತ್ತೀಮಳಿ, ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿSಯೊ ಮಗನS
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ'
'ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.'

ನಾಕು

'ನಾನು' 'ನೀನು'
'ಆನು' 'ತಾನು'
ನಾಕೆ ನಾಕು ತಂತಿ,
ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

ಬಂಗಾರ ನೀರ ಕಡಲಾಚೆಗೀಚೆಗಿದೆ

ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ (೨)

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ 
ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರ 
ಅದು ನಮ್ಮ ಊರು ಇದು ನಿಮ್ಮ ಊರು ತಮ್ ತಮ್ಮ ಊರೋ ಧೀರ 
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ||

ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ 
ಹರಿತದ ಭಾವ ಬೇರಿತದಾ ಜೀವ ಅದರೊಳಗೆ ಒಳಗೆ ಒಳಗೆ
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ ನಿಮ್ಮ ಆತ್ಮಗಳಿಗೆ 
ಅಂಬಿಗನು ಬಂದ ನಂಬಿಗನು ಬಂದ ಬಂದದಾ ದಿವ್ಯ ಘಳಿಗೆ ||

ಇದು ಉಪ್ಪು ನೀರ ಕಡಲಲ್ಲೋ ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೇ ತಿಳಿದದಾ ಇದರ ಬೆಲೆಯು
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು
ಕಣ್ ಅರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು ||
   
ಬಂದವರ ಬಳಿಗೆ ಬಂದದ ಮತ್ತು ನಿಂದವರಾ ನೆರೆಗೂ ಬಂದದೋ ಬಂದದ
ನವ ಮನು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ ||

ಗಮ ಗಮಾ ಗಮ್ಮಾಡಿಸ್ತಾವ ಮಲ್ಲಿಗಿ

ಗಮ ಗಮಾ ಗಮ್ಮಾಡಿಸ್ತಾವ ಮಲ್ಲಿಗಿ  | ನೀ ಹೊರಟಿದ್ದೀಗ ಎಲ್ಲಿಗೀ ?
ಗಮ ಗಮಾ..................... || ಪಲ್ಲವಿ ||

ತುಳುಕ್ಯಾಡತಾವ ತೂಕಡಿಕಿ 
ಎವಿ ಅಪ್ಪತಾವ ಕಣ್ಣ ದುಡುಕಿ 
ಕನಸು ತೇಲಿ ಬರತಾವ ಹುಡುಕಿ ||
ನೀ ಹೊರಟಿದ್ದೀಗ ಎಲ್ಲಿಗೀ ?

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ 
ಚಂದ್ರಮ ಕನ್ನಡಿ ಹರಳ 
ಮನ ಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗೀ ?

ನೆರಳಲ್ಲಾಡತಾವ ಮರದ ಬುಡs
ಕೆರಿ ತೆರಿ ನೂಗತಾವ ದಡಕ
ಹೀಂಗ ಬಿಟ್ಟು ಎಲ್ಲಿ ನನ್ನ ನಡs 
ನೀ ಹೊರಟಿದ್ದೀಗ ಎಲ್ಲಿಗೀ ?

ನನ್ನ ನಿನ್ನ ಒಂದತನದಾಗ 
ಹಾಡು ಹುಟ್ಟಿ ಒಂದು ಮನದಾಗ 
ಬೆಳದಿಂಗಳಾತು ಬನದಾಗ || 
ನೀ ಹೊರಟಿದ್ದೀಗ ಎಲ್ಲಿಗೀ ?

ಬಂತ್ಯಾಕ ನಿನಗ ಇಂದ ಮುನಿಸು 
ಬೀಳಲಿಲ್ಲ ನನಗ ಇದರ ಕನಸು 
ರಾಯ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗೀ ?

 

ಕುರುಡು ಕಾಂಚಾಣ ಕುಣಿಯುತ್ತಲಿತ್ತು!

ಕುರುಡು ಕಾಂಚಾಣ ಕುಣಿಯುತ್ತಲಿತ್ತು!
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ ||
ಕುರುಡು ಕಾಂಚಾಣ || ಪಲ್ಲವಿ ||

 
ಬಾಣಂತಿಯೆಲುಬ ಸಾ- 
ಬಾಣದ ಬಿಳುಪಿನಾ 
ಕಾಣದ ಕಿರುಗೆಜ್ಜಿ ಕಾಲಾಗ ಇತ್ತೋ;
ಸಣ್ಣ ಕಂದಮ್ಮಗಳ 
ಕಣ್ಣೀನ ಕವಡೀಯ 
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;  

ಬಡವರ ಒಡಲಿನ 
ಬಡಬಾsನಲದಲ್ಲಿ 
ಸುಡು ಸುಡು ಪಂಜು ಕೈಯೊಳಗಿತ್ತೋ;
ಕಂಬನಿ ಕುಡಿಯುವ 
ಹುಂಬ ಬಾಯಿಲೆ ಮೈ -
ದುಂಬಿಯಂತುಧೋ ಉಧೋ ಎನ್ನುತಲಿತ್ತೋ.

ಕೂಲಿ ಕುಂಬಳಿಯವರ 
ಪಾಲಿನ ಮೈದೊಗಲ 
ಧೂಳಿಯ ಭಂಡಾರ ಹಣೆಯಯೊಳಗಿತ್ತೋ;
ಗುಡಿಯೊಳಗೆ ಗಣಣ, ಮಾ - 
ಹಡಿಯೊಳಗ ತನನ, ಅಂ -
ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ.

ಹ್ಯಾಂಗಾರೆ ಕುಣಿಕುಣಿದು 
ಮಂಗಾಟ ನಡೆದಾಗ 
ಅಂಗಾತ ಬಿತ್ತೋ, ಹೆಗಲಲಿ ಎತ್ತೋ.

                    -ದ.ರಾ.ಬೇಂದ್ರೆ (ಅಂಬಿಕಾತನಯದತ್ತ)

9 ಕಾಮೆಂಟ್‌ಗಳು:

Education centre ಹೇಳಿದರು...

ತುಂಬಾ ಉಪಯುಕ್ತವಾದ ಮಾಹಿತಿಯನ್ನು ಸಂಗ್ರಹಿಸಿದ್ದೀರಾ ನಮಗೆ ದನ್ಯವಾದಗಳು...

Unknown ಹೇಳಿದರು...

ಒಳ್ಳೆಯ ಕವನ ಸಂಗ್ರಹ

Savitha S. P ಹೇಳಿದರು...

ಧನ್ಯವಾದಗಳು.
ಕವನಗಳ ಸಂಗ್ರಹ ಉಪಯುಕ್ತ‌‌‌..🙏

ಅನಾಮಧೇಯ ಹೇಳಿದರು...

Super sir

ಅನಾಮಧೇಯ ಹೇಳಿದರು...

ಸೂಪರ್

ಅನಾಮಧೇಯ ಹೇಳಿದರು...

ಬಂಗಾರದಲೇ ಮೇಲೆ ಭಾವಗೀತೆ ಮಾಡಿ

ಅನಾಮಧೇಯ ಹೇಳಿದರು...

ಶಬ್ಧ ಗಾರುಡಿಗ ನಮ್ಮ ಬೇಂದ್ರೆ ಅಜ್ಜನವರು…

ಅನಾಮಧೇಯ ಹೇಳಿದರು...

ನಿಮ್ಮ ಈ ಮಾಹಿತಿ ಸಂಗ್ರಹ ತುಂಬಾ ಉಪಯೋಗವಾಗಿದೆ ಧನ್ಯವಾದಗಳು🙏👍

Apoorva Bapat ಹೇಳಿದರು...

Very very useful.
ವರಕವಿ ದ ರಾ ಬೇಂದ್ರೆ ಅವರ ಜನ್ಮದಿನದಂದು ಉತ್ತಮವಾದ ಲಿಂಕ್ ಸಿಕ್ಕಿತು
ಬಹಳ ಸುಂದರವಾಗಿದೆ ಧನ್ಯವಾದಗಳು🙏