ಮಂಕುತಿಮ್ಮನ ಕಗ್ಗ (101-120)

ಮಂಕುತಿಮ್ಮನ ಕಗ್ಗ (101-120)

ರಸಧಾರೆ - 101
ಬ್ರಹ್ಮ
ತೇಲುವುದಮೇಯಸತ್ವದಲಿ ಮೇಯ ಜಗ ||
ಮೂಲದಶೆಯೊಳಗೊಂದು, ಮಾಪನದ ಬಗೆಗೆರಡು |
ಗಾಳಿಯುಸುರುಗಳಂತೆ ಮಂಕುತಿಮ್ಮ ||
ನೀರ್ಗಲ್ಲವೊಲು = ನೀರ್ಗಲ್ಲ + ವೊಲು , ತೇಲುವುದಮೇಯಸತ್ವದಲಿ = ತೇಲುವುದು + ಅಮೇಯ + ಸತ್ವದಲಿ / ಮೂಲದಶೆಯೊಳಗೊಂದು = ಮೂಲ + ದಶೆಯೊಳಗೆ + ಒಂದು / ಬಗೆಗೆರಡು = ಬಗೆಗೆ ಎರಡು/ ಗಾಳಿಯುಸುರುಗಳಂತೆ = ಗಾಳಿ+ಉಸುರುಗಳಂತೆ / ನೀರ್ಗಲ್ಲವೊಲು = ನೀರಮೇಲೆ ತೆಳುವ ಮಂಜಿನ ಗಡ್ದೆಯಂತೆ. / ತೇಲುವುದಮೇಯಸತ್ವದಲಿ = ಅರಿವಿಲ್ಲದ್ದು, ಅರಿವಿನ ಅಗಾಧ ಕಡಲಲ್ಲಿ ತೇಲುತ್ತಿದೆ. ಮೂಲದಶೆಯೊಳಗೊಂದು = ಮೂಲ ರೂಪದಲ್ಲಿ ಒಂದು, ಮಾಪನದ ಬಗೆಗೆರಡು = ಅರಿವಿನ ಅಳತೆಗೆ ಬರುವುದು ಎರಡು / ಗಾಳಿಯುಸುರುಗಳಂತೆ = ಗಾಳಿ ಮತ್ತು ಉಸುರುಗಳಂತೆ.
ಹಾಲಿನಲ್ಲಿ ಬೆಣ್ಣೆ ತೇಲುವಂತೆ, ಕಡಲಿನಲ್ಲಿ ಮಂಜಿನಗಡ್ಡೆ ತೇಲುವಂತೆ, ಅಗಾಧ ಅಜ್ಞಾನದ ಕಡಲಲ್ಲಿ ಜ್ಞಾನ ತೇಲುತ್ತಿದೆ. ಹೀಗೆ ಮೂಲ ರೂಪದಲ್ಲಿ ಒಂದರಂತೆ ಕಂಡರೂ ಅರ್ತೈಸಿದರೆ, ಸತ್ಯರೂಪದ ಅರಿವಾಗುತ್ತದೆ. ಹೇಗೆ ಹೊರಗಿರುವುದು ಗಾಳಿಯಾದರೆ ನಮ್ಮಜೀವನಕ್ಕೆ ಹೇತುವಾದದ್ದನ್ನು ಉಸಿರುಎಂದು ಕರೆಯುತ್ತೇವೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ವ್ಯಾಖ್ಯಾನಮಾಡಿದ್ದಾರೆ .
ಇಡೀ ಜಗತ್ತು ಬ್ರಹ್ಮನಿಂದ ಆವೃತವಾಗಿದೆ. ವಿಶ್ವಂ ವ್ಯಾಪ್ನೋತಿ, ವಹತಿ, ಪ್ರವಹತಿ ಚ ವಿಷ್ಣು:ಎಂದು ಒಂದು ವ್ಯಾಖ್ಯಾನವಿದೆ. ಅರ್ಥಾತ್ , ಇಡೀ ವಿಶ್ವವನ್ನು ವ್ಯಾಪಿಸಿಕೊಂಡು, ಎಲ್ಲೆಡೆಯಲ್ಲೂ ಹರಿಯುತ್ತಾ, ಎಲ್ಲದರಲ್ಲೂ ಸೇರಿಕೊಂಡಿರುವುದೇ, ವಿಷ್ಣು. ಎಲ್ಲೆಡೆಯಲ್ಲಿ ಇದ್ದರೂ ನಮ್ಮ ಅರಿವಿಗೆ ಬಾರದಾಗಿ ಅಮೇಯವಾಗಿದೆ. ಅಮೇಯವೆಂದರೆ ಅರಿವಿಗೆ ಬಂದಿಲ್ಲದ್ದು . ಅದನ್ನು ಮೇಯವಾಗಿಸಬೇಕಾದರೆ ಚಿಂತನೆ, ಮಂಥನ, ಧ್ಯಾನ, ಅಧ್ಯಯನ ಮುಂತಾದವು ಬೇಕು. ಹಾಗೆ ಎಲ್ಲೆಡೆಯಲ್ಲಿ ಇರುವ ಜ್ಞಾನವನ್ನು ಖ್ರೋಡೀಕರಿಸಿ ಒಂದು ರೂಪದಲ್ಲಿ ನಮ್ಮ ಅರಿವಿಗೆ ತಂದುಕೊಳ್ಳುವುದೇ, ಸಾಧನೆ.
ಜ್ಞಾನ ಸಾಗರ ತನ್ನ ಸ್ಥಾನದಲ್ಲಿ ತಾನು ಇದೆ. ಪ್ರಾಣಿಗಳು ಈ ಜಗತ್ತಿನಲ್ಲಿ ಉದ್ಭವವಾಗುವ ಮೊದಲಿಂದಲೂ ಹೇಗೆ, ಗಾಳಿ ಎಲ್ಲೆಡೆಯಲ್ಲೂ ವ್ಯಾಪಿಸಿಕೊಂಡಿರುವಂತೆ, ನಮ್ಮ ಅರಿವಿಗೆ ಬರುವ ಮುಂಚೆಯೂ ಜ್ಞಾನವಿಲ್ಲಿತ್ತು, ಹಾಲಿನಲ್ಲಿ ಬೆಣ್ಣೆ ವ್ಯಾಪಿಸಿಕೊಂಡಿದೆಯೋ, ಹಾಗೆ. ಅದನ್ನು ಕಡೆದು ಮಥಿಸಿ ನಮ್ಮ ಅರಿವಿಗೆ ತಂದುಕೊಂಡಾಗ ಅದು ನಮ್ಮ ಅರಿವುಅಥವಾ ಜ್ಞಾನವಾಗುತ್ತದೆ. ನಮಗರಿವಿಲ್ಲದಿದ್ದರೂ ಈ ಅಗಾಧ ವಿಶ್ವವಿಲ್ಲವೇ? ಹಾಗೆಯೇ ನಮಗೆ ಗೊತ್ತಿಲ್ಲದ ಅಗಾಧ ಜ್ಞಾನ ಎಲ್ಲೆಲ್ಲೂ ಉಂಟು. ಆದರೆ ನಾವು ನಮ್ಮ ಯೋಗ್ಯತೆ ಮತ್ತು ಶಕ್ತಿಗೆ ಅನುಸಾರವಾಗಿ ಅದನ್ನು ಪಡೆದುಕೊಳ್ಳಬಹುದು. ಎಲ್ಲೆಲ್ಲೂ ಎತೇಚ್ಚವಾಗಿ ಗಾಳಿಯಿದ್ದರೂ ನಮ್ಮ ಶ್ವಾಸಕೋಶಗಳಲ್ಲಿ ಎಷ್ಟು ತುಂಬಿಕೊಳ್ಳಬಹುದೋ ಅಷ್ಟು ನಮದು ಮತ್ತು ಅದು ನಮ್ಮ ಉಸಿರು. . ಪ್ರಾಣಾಯಾಮ ಮುಂತಾದ ಕ್ರಿಯೆಗಳಿಂದ ಸ್ವಲ್ಪ ಹೆಚ್ಚು ಗಾಳಿ ಎಳೆದುಕೊಳ್ಳಬಹುದು. ಹಾಗೆ ನಮ್ಮ ಬುದ್ಧಿ ಶಕ್ತಿಯನ್ನೂ ಪ್ರಯತ್ನಪೂರ್ವಕವಾಗಿ ಹೆಚ್ಚಿಸಿಕೊಳ್ಳಬಹುದು. ಆಗ ಅದು ನಮ್ಮ ಜ್ಞಾನವಾಗುತ್ತದೆ. ಒಂದೇ ಜ್ಞಾನನಮಗೆ ಹೀಗೆ ಎರಡಾಗಿ ಕಾಣುತ್ತದೆ ಎನ್ನುತ್ತಾರೆ ಶ್ರೀ ಡಿ.ವಿ.ಜಿ. ಯವರು.
ಅಂತಹ ಜ್ಞಾನವನ್ನು ಪಡೆಯುವ ಪ್ರಯತ್ನವನ್ನು ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?
ರಸಧಾರೆ - 102
ಕಾಯ ನಿರ್ಣೇಯವದರೊಳು ಮನವನಿರ್ಣೇಯ |
ಸ್ನಾಯು ಸಂಖ್ಯೇಯ ಜೀವಳಮಸಂಖ್ಯೇಯ ||
ಮೇಯಾಪ್ರಮೇಯಮಿಶ್ರಣವಿಂತು ನರಜಂತು | ನೇಯವದು ವಿಶ್ವಕಂ ಮಂಕುತಿಮ್ಮ.
ನಿರ್ಣೇಯವದರೊಳು = ನಿರ್ಣೇಯವು + ಅದರೊಳು, ಮನವನಿರ್ಣೇಯ = ಮನವು + ಅನಿನಿರ್ಣೇಯ, ಜೀವಳಮಸಂಖ್ಯೇಯ = ಜೀವಳಂ + ಅಸಂಖ್ಯೇಯ. ಮೇಯಾಪ್ರಮೇಯಮಿಶ್ರಣವಿಂತು = ಮೇಯ + ಅಪ್ರಮೇಯ +ಮಿಶ್ರಣವು + ಇಂತು,
ಸ್ನಾಯು = ಮಾಂಸಖಂಡಗಳು, ಮೇಯ = ಅರಿವಿಗೆ ಬರುವುದು , ಅಪ್ರಮೇಯ = ಅರಿವಿಗೆ ನಿಲುಕ್ಕದ್ದು, ನರಜಂತು = ಮನುಷ್ಯ ಪ್ರಾಣಿ, ನೇಯವದು = ಅನ್ವಯವು.
ನಮ್ಮ ಶರೀರದ ರಚನೆಯನ್ನುಇದು ಹೀಗೇ ಇದೆ ಎಂದು ನಿರ್ಣಯಿಸಬಹುದು. ಆದರೆ ಮನದ ರಚನೆ ಮತ್ತು ಮನದ ಇಂಗಿತವನ್ನು ನಿರ್ಣಯಿಸುವುದು ಸಾಧ್ಯವೇ ಇಲ್ಲ. ಶರೀದಲ್ಲಿ ಎಷ್ಟು ಮಾಂಸಖಂಡಗಳಿವೆ ಎಂದು ಲೆಕ್ಕ ಹಾಕಿಬಿಡಬಹುದು, ಆದರೆ ಜೀವನನ್ನು ಅಳೆಯುವುದು ಮತ್ತು ಲೆಕ್ಕಹಾಕುವುದು ಸಾಧ್ಯವಿಲ್ಲ. ಹೀಗೆ ಮನುಷ್ಯ ಪ್ರಾಣಿ ಮೇಯ, ಅಂದರೆ ನಿಖರವಾಗಿ ನೋಡಿ ಹೇಳಬಹುದಾದ ಮತ್ತು ಅಪ್ರಮೇಯ, ಎಂದರೆ ಹೇಳಲು, ಊಹಿಸಲು, ಅಳೆಯಲು ಅಸಾಧ್ಯವಾದದವುಗಳಿಂದ ಕೂಡಿದ್ದಾನೆ ಎಂದು ಹೇಳುತ್ತಾ, ಈ ರೀತಿಯ ವರ್ಣನೆ ಇಡೀ ಜಗತ್ತಿಗೂ ಅನ್ವಯಿಸುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ,
ಅಲ್ಲವೇ ವಾಚಕರೆ !!! ಒಂದು ತಲೆ ಎರಡು ಕೈ, ಎರಡು, ಕಾಲು ಒಂದು ಹೃದಯ, ಒಂದು ಜಠರ, ಮುಂತಾದ ಎಲ್ಲವನ್ನೂ ಎಣಿಸಿಬಿಡಬಹುದು, ಮೂಳೆಗಳು, ನರಗಳು, ರಕ್ತ ಕಣಗಳು ಮತ್ತು ಆ ರಕ್ತ ಕಣಗಳಲ್ಲಿನ ಬೇರೆ ಬೇರೆ ಅಂಶಗಳು, ದೇಹದಲ್ಲಿನ ರಾಸಾಯನಿಕಗಳು, ಎಲ್ಲವನ್ನೂ ಇಂದು ಇಷ್ಟಿತ್ತು, ಈ ಹಿಂದಿನ ಮೂರು ತಿಂಗಳಲ್ಲಿ ಸರಾಸರಿ ಇಷ್ಟಿತ್ತು ಎಂದು ಒಂದು ರಕ್ತ ಪರೀಕ್ಷೆ ಮತ್ತು ಒಂದು ಮೂತ್ರ ಪರೀಕ್ಷೆ ಮಾಡಿ ಹೇಳಿಬಿಡುತ್ತಾರೆ. ಏಕೆಂದರೆ ಇದು ಮೇಯ, ಅರಿಯಬಹುದಾದಂಥಾದ್ದು. ಆದರೆ ಎಷ್ಟು ಬುದ್ಧಿ ಇದೆ, ಎಷ್ಟು ಮನಸ್ಸಿದೆ, ಆತ್ಮ ಹೇಗಿದೆ, ಮನಸ್ಸು ಎಲ್ಲೆಲ್ಲಿ ಹೋಗಿತ್ತು, ಈ ಒಂದು ವಾರದಲ್ಲಿ ಬುಧ್ಧಿ ಏನೇನು ಗ್ರಹಿಸಿತು, ಎಷ್ಟನ್ನು ಶೇಖರಿಸಿ ಇಟ್ಟುಕೊಂಡಿದೆ, ಎಷ್ಟನ್ನು ಮರೆತುಹೋಗಿದೆ, ಆತ್ಮ ಎಂದರೇನು. ಅದರ ರೂಪ ಹೇಗಿದೆ, ಅದಕ್ಕೆ ವಯಸ್ಸೆಷ್ಟು ಎಂದು ಅಂದಾಜು ಮಾಡಲೂ ಸಾಧ್ಯವಿಲ್ಲ. ಇದು ಅಪ್ರಮೇಯ, ಅರಿವಿಗೆ ನಿಲುಕದ್ದು.
ಹಾಗೆಯೆ, ಈ ಜಗತ್ತಿನಲ್ಲಿ ಇರುವ ಮೂರ್ತರೂಪದ ವಸ್ತುಗಳನ್ನು ಲೆಕ್ಕ ಹಾಕಿಬಿಡಬಹುದು. ಸೂರ್ಯ,ಸೂರ್ಯನ ಗಾತ್ರ, ಅವನ ತಾಪಮಾನ, ಭೂಮಿಗೂ ಸೂರ್ಯನಿಗೂ ಇರುವ ಅಂತರ, ಸೂರ್ಯನ ಈ ಸೌರಮಂಡಲದಲ್ಲಿ ಇರುವ ಗ್ರಹಗಳು, ಅವುಗಳ ಪರಸ್ಪರ ಅಂತರ, ತಾಪಮಾನ, ಹವಾಮಾನ, ಹಾಗೆಯೆ ಅನ್ಯ ಸೌರ ಮಂಡಲಗಳು, ಹೀಗೆ ಎಲ್ಲವನ್ನೂ ಹೆಚ್ಚೂ ಕಮ್ಮಿ ಲೆಕ್ಕ ಹಾಕಿಬಿಡಬಹುದು.ಮತ್ತು ಇಲ್ಲಿ ಅಂದರೆ ಭೂಮಿಯಮೇಲೆ ಆಗುವ ಬದಲಾವಣೆಗಳು ಮತ್ತು ಅದಕ್ಕೆ ಕಾರಣಗಳನ್ನೂ ಹೆಚ್ಚೂ ಕಮ್ಮಿ ಹೇಳಿಬಿಡಬಹುದು.ಇದು ಮೇಯ. ಅರಿಯಲು ಸಾಧ್ಯವಾದದ್ದು. ಆದರೆ ಅದು ಏಕೆ ಆಗುತ್ತದೆ? , ಹಾಗೆಲ್ಲಾ ಆಗುವುದರ ಹಿಂದೆ ಇರುವ ಶಕ್ತಿ ಯಾವುದು? ಆ ಶಕ್ತಿಯ ಸ್ವರೂಪವೇನು? ಆ ಶಕ್ತಿ ಹಾಗೆ ವರ್ತಿಸುವುದಕ್ಕೆ ಕಾರಣವೇನು? ಅದರ ಆದಿ ಯಾವುದು ಮತ್ತು ಅದಕ್ಕೆ ಅಂತ್ಯ ಉಂಟೆ? ಹೀಗೆ ಯಾವುದನ್ನೂ ಊಹಿಸಲೂ ಸಾಧ್ಯವಿಲ್ಲ. ಇದು ಅಪ್ರಮೇಯ”, ಎಣಿಕೆಗೆ ಬಾರದ್ದು. ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ.
ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು, ನಾನಾ ಪ್ರಯತ್ನಗಳೇ ಇಂದಿನ ಧರ್ಮಗಳು ( ಸಾಮಾನ್ಯ ಅರ್ಥದಲ್ಲಿ), ಮತಗಳು, ಜಾತಿಗಳು, ಪುರಾಣಗಳು, ಸಿದ್ಧಾಂತಗಳು. ಇವು ಎಲ್ಲ ಧರ್ಮಗಳಲ್ಲೂ ಇವೆ. ಎಲ್ಲರೂ ಅವರವರದೇ ವ್ಯಾಖ್ಯಾನವನ್ನು ಕೊಡುತ್ತಾರೆ. ಅದು ಅವರ ಅನುಭವದ ಆಧಾರದಮೇಲೆ ನಿಂತಿರುತ್ತದೆ. ಹಾಗಾಗಿ ಮೇಯವು, ಕಾಣುವಂಥಾದ್ದು, ಇಂದ್ರಿಯ ಗ್ರಾಹ್ಯ. ಆದರೆ ಅಪ್ರಮೇಯವು ಇಂದ್ರಿಯ ಗ್ರಾಹ್ಯವಲ್ಲ ಅದು ಅನುಭವ ವೇಧ್ಯ. ಅಂತಹ ಅನುಭವವನ್ನು ಎಲ್ಲರೂ ಪಡೆಯಬಹುದು. ಅದಕ್ಕೆ ಗುರುವಿನ ಮಾರ್ಗದರ್ಶನ, ಧ್ಯಾನ, ಅಧ್ಯಯನ ಮುಂತಾದವು ಬೇಕು. ಅಪ್ರಮೇಯವಾದ ಈ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣವಾದ ಆ ಪರಮಾತ್ಮ ವಸ್ತುವಿನ ಪರಿಮಾಣ ಅಥವಾ ಅಳತೆಯನ್ನು ನಿರೂಪಿಸಲು ಸಾಧ್ಯವೇ ಇಲ್ಲ. ಅದನ್ನು ಕೇವಲ ಅನುಭವದಲ್ಲಿ ಕಾಣಬಹುದು, ಅನುಭವಿಸಬಹುದು ಮತ್ತು ಆನಂದಿಸಬಹುದು. ಆ ರೀತಿಯ ಅನುಭವ ಮತ್ತು ಆನಂದವನ್ನು ಪಡೆಯಲು ನಾವೂ ಸಹ ಪ್ರಯತ್ನ ಮಾಡೋಣವೆ?
ರಸಧಾರೆ - 103
ಜ್ಞೇಯದ ದ್ವೀಪಕಜ್ಞೇಯಾಬ್ದಿಯಾವರಣ |
ಕಾಯಕದ ಗಿರಿಗೆ ಮಾನಸದಭ್ರಪಟಲ ||
ಮೇಯವನು ಬಗೆದೇನಮೇಯ ಸುತ್ತಮಿರಲು |
ಮಾಯೆಯೀ ಮಿಶ್ರಣವೋ ಮಂಕುತಿಮ್ಮ ||
ದ್ವೀಪಕಜ್ಞೇಯಾಬ್ದಿಯಾವರಣ = ದ್ವೀಪಕ್ಕೆ + ಅಜ್ಞೇಯ + ಅಬ್ದಿಯ + ಆವರಣ / ಮಾನಸದಭ್ರಪಟಲ = ಮಾನಸದ + ಆಭರ + ಪಟಲ / ಬಗೆದೇನಮೇಯ= ಬಗೆದೇನ + ಅಮೇಯ/ ಸುತ್ತಮಿರಲು= ಸುತ್ತಮ + ಇರಲು. ಅಭ್ರಪಟಲ = ಮೋಡದ ಮುಸುಕು,
ಜ್ಞಾನಕ್ಕೆ ಅಜ್ಞಾನದ ಆವರಣ ಸುತ್ತಿಕೊಂಡಿದೆ. ಮಹತ್ತರ ಕಾರ್ಯಗಳನ್ನು ಸಾಧಿಸ ಹೊರಟಾಗ, ಅಜ್ಞಾನ ನಮ್ಮ ಮನಸ್ಸನ್ನು ಮೋಡದಂತೆ ಮುಸುಕಿಬಿಡುತ್ತದೆ. ಅಜ್ಞಾನ ನಮ್ಮನ್ನು ಸುತ್ತಿಕೊಂದಿರುವಾಗ, ಜ್ಞಾನವನ್ನು ಬೆದಕಿ, ಕೆದಕಿ ತೆಗೆಯುವುದು ಬಲು ಕಷ್ಟ. ಇಡೀ ಜಗತ್ತೇ ಜ್ಞಾನಾಜ್ಞಾನಗಳ ಮಿಶ್ರಣವೆಂಬುದೆ ಗುಂಡಪ್ಪನವರ ಈ ಕಗ್ಗದ ಹೂರಣ.
ಜ್ಞಾನವೆಂದರೆ ಏನು? ಎಂಬುದು ಪ್ರಶ್ನೆ ಯಾವ ವಿಷಯಗಳು ನಮ್ಮನ್ನು ಅಸತ್ಯದಿಂದ ಸತ್ಯದೆಡೆಗೆ ಕೊಂಡುಹೋಗುತ್ತದೋ, ಯಾವ ವಿಷಯಗಳು ನಮ್ಮನ್ನು ಅಂಧಕಾರದಿಂದ ಬೆಳಕಿಗೆ ಕೊಂಡುಹೋಗುತ್ತದೋ ಅದೇ ಜ್ಞಾನ. ನಮ್ಮ ಅರಿವಿಗೆ ಬಂದದ್ದೆಲ್ಲ ಜ್ಞಾನವಾಗುವುದಿಲ್ಲ. ಅಂತಹ ಶುದ್ಧ ಜ್ಞಾನವು ಎಲ್ಲೆಡೆಯಲ್ಲಿ ಇದೆ. ಆದರೆ ಅದನ್ನು ಅಜ್ಞಾನದ ಆವರಣ ಸುತ್ತಿಕೊಂಡಿದೆ, ಎಂದರೆ, ನಮಗೆ ಒಂದು ವಿಷಯದ ಅರಿವಿದ್ದರೂ ಅದು ನಮ್ಮ ಅಂತರ್ಯದಲ್ಲಿ ನೆಲೆಯಾಗಿ ಗಟ್ಟಿಯಾಗುವುದಿಲ್ಲ. ಕಾರಣವೇನೆಂದರೆ ಅದನ್ನು ಸಂಪೂರ್ಣವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು, ನಮ್ಮ ಪೂರ್ವಾಗ್ರಹಗಳೆಂಬ, ಅಹಂಕಾರವೆಂಬ, ಮಮತೆ ಮೋಹಗಳೆಂಬ, ಅಜ್ಞಾನದ ತುಣುಕುಗಳು, ನಮ್ಮ ಅರಿವನ್ನು ಸುತ್ತುವರಿದು, ಮಾಯೆಯಂಬ ಮುಸುಕಿಂದ ಕವಿದುಬಿಟ್ಟಿರುತ್ತದೆ. ಅದನ್ನು ತೊಲಗಿಸುವವರೆಗೂ ನಮಗೆ ಸತ್ಯದ ದರ್ಶನವಾಗುವುದಿಲ್ಲ.
ಅಸತ್ಯವೆಂದರೆ ಅಜ್ಞಾನವೆಂದರೆ ಏನು? ಇಲ್ಲದ್ದನ್ನು ಇದೆಯಂದೂ, ಅಲ್ಲದನ್ನು ಹೌದೆಂದೂ ಭಾವಿಸುವುದೇ ಅಜ್ಞಾನ. ವಾಚಕರೆ, ನೋಡಿ ನಮ್ಮ ಬದುಕಿನಲ್ಲಿ ಇಂತಹ ಅಜ್ಞಾನ ಹೇರಳವಾಗಿ ತುಂಬಿಕೊಂಡಿದೆ. ನಮ್ಮ ಅಚಾರ, ವಿಚಾರ, ವ್ಯವಹಾರದಲೆಲ್ಲ, ಇಂತಹ ಅಜ್ಞಾನವೇ ಪ್ರಧಾನವಾಗಿರುತ್ತದೆ. ನಮಗಿರುವುದು ಅಜ್ಞಾನವೆಂದೂ ನಮಗೆ ಬಹುಪಾಲು ಗೊತ್ತು. ಆದರೆ ಅದರ ಹೊರಗಿಂದ ಬರಲು ನಮ್ಮನ್ನು ನಮ್ಮ ಮೋಹ ವ್ಯಾಮೋಹಗಳು ಬಿಡುವುದಿಲ್ಲ. ನಾವೂ ಸಹ ಅಂತ ಮೋಹ ವ್ಯಾಮೋಹಗಳ ಬಂಧನದಿಂದ ಸುಲಭವಾಗಿ ಹೊರಬರಲು ಇಷ್ಟಪಡುವುದಿಲ್ಲ. ಏಕೆಂದರೆ ಅದು ನಮಗೆ ಈ ಪ್ರಪಂಚದಲ್ಲಿ ಇಂದ್ರಿಯ ಸುಖವನ್ನು ಕೊಡುತ್ತದೆ. ಅದನ್ನು ಬಿಡಲು ಮತ್ತು ಅದರಿಂದ ಮುಕ್ತರಾಗಲು ನಮಗೆ ಇಷ್ಟವಿಲ್ಲದಾಗ ಇನ್ನು ಅದು ನಮ್ಮನ್ನು ಬಿಡುವುದೆಂತು ನಮಗೆ ಜ್ಞಾನ ಬರುವುದೆಂತು . ಇದು ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದುಎನ್ನುವ ಗಾದೆಯಂತೆ, ಅಲ್ಲವೇ? ನಾವು ಮೊದಲು ಜ್ಞಾನ ಪಡೆಯಲು ಗಟ್ಟಿಯಾದ ಆಸೆ ಪಡಬೇಕು, ಪ್ರಯತ್ನಪಡಬೇಕು, ಅಂತಹ ಜ್ಞಾನ ಪಡೆಯಲು ಯಾವುದು ನಮಗೆ ಅಡ್ಡವಾಗಿ ಸುತ್ತುವರೆದು ಇರುತ್ತದೋ ಅದನ್ನು ನಿರ್ದಾಕ್ಷಿಣ್ಯವಾಗಿ ಪ್ರಯತ್ನಪೂರ್ವಕವಾಗಿ ತೊಲಗಿಸಬೇಕು. ಆಗ ನಮಗೆ ಜ್ಞಾನ ಬರಬಹುದು.
ಈ ಜಗತ್ತು ಜ್ಞಾನ ಅಜ್ಞಾನಗಳಿಂದ ಕೂಡಿದೆ. ನಮಗೆ ಏನು ಬೇಕೋ ಅದನ್ನು ಪಡೆದುಕೊಳ್ಳಬೇಕು ಅದು ವಿವೇಕವಂತರ ಕೆಲಸ. ಆಯ್ಕೆ ನಮ್ಮದು. ನಮ್ಮ ಆಯ್ಕೆಯಂತೆ ನಮಗೆ ಫಲ ಲಭಿಸುವುದು. ವಾಚಕರೆ ನಿಮ್ಮ ಆಯ್ಕೆ ಸರಿಯಾಗಲಿ ಎಂದು ಹಾರೈಸುತ್ತಾ.
ಅನಂತ ಚೌಕಟ್ಟು ಸಾಂತ ಚಿತ್ರ. ರಸಧಾರೆ - 104
ಕಾಲವಕ್ಷಯದೀಪವದರ ಪಾತ್ರೆಯಪಾರ |
ಬಾಳ್ ಅದರಿನಾದೊಂದು ಕಿರುಹಣತೆ ಮಿಣುಕು ||
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು
ತೈಲಧಾರೆಯಖಂಡ ಮಂಕುತಿಮ್ಮ
ಕಾಲವಕ್ಷಯದೀಪವದರ = ಕಾಲವು + ಅಕ್ಷಯದೀಪ + ಅದರ / ಪಾತ್ರೆಯಪಾರ = ಪಾತ್ರೆಯು ಅಪಾರ/ ಅದರಿನಾದೊಂದು = ಅದರಿನ + ಒಂದು/ ಗಾಳಿಯಾರಿಪುದೊಂದನಿನ್ನೊಂದ = ಗಾಳಿ + ಆರಿಪುದು + ಒಂದ + ಇನ್ನೊಂದ / ತೈಲಧಾರೆಯಖಂಡ = ತೈಲಧಾರೆಯು + ಅಖಂಡ,
ಕಾಲವೆಂಬುದು ಅವ್ಯಾಹತವಾಗಿ, ನಿರಂತರ ಉರಿಯುವ ದೀಪ. ಅದರ ಪಾತ್ರ ಬಹಳ ದೊಡ್ಡದು. ಒಂದು ಕ್ಷಣ ಮುಗಿದರೆ ಮತ್ತೊಂದು ಕ್ಷಣ ನಮ್ಮ ಬಾಳು ಕಾಲದ ಈ ಅವ್ಯಾಹತ ಪ್ರವಾಹದಲ್ಲಿ ಉರಿಯುವ ಒಂದು ಸಣ್ಣ ಹಣತೆಯಂತೆ. ಗಾಳಿಯು ಒಂದು ಹಣತೆಯನ್ನು ಆರಿಸಿದರೆ ಇನ್ನೊಂದು ದೀಪ ಹೊತ್ತಿಕೊಳ್ಳುವುದು. ಜೀವನದ ತೈಲಧಾರೆಗೆ ಅಂತ್ಯವೇ ಇಲ್ಲವೆಂಬುದೆ ಈ ಕಗ್ಗದ ಹೂರಣ.
ಈ ಜಗತ್ತಿನಲ್ಲಿರುವ ಎಲ್ಲ ಪ್ರಾಣಿಗಳ ಜೀವನ ಎಂದು ಆರಂಭವಾಯಿತೋ ಗೊತ್ತಿಲ್ಲ. ಅದರ ಕಾಲವನ್ನು ಕೇವಲ ಅಂದಾಜು ಮಾಡುತ್ತಾರೆ, ಮಾನವ ಶಾಸ್ತ್ರಜ್ಞರು. ಇಲ್ಲಿ ಜೀವನ ಎಂದೂ ಮುಗಿಯುವುದೇ ಇಲ್ಲ. ನಿರಂತರವಾಗಿ ನಡೆದೇ ಇದೆ. ಸಮಯ ಕಳೆಯುತ್ತೆ ಹೊರತು ಎಂದೂ ಮುಗಿಯುವುದೇ ಇಲ್ಲ . ನಮ್ಮ ಬಾಳು ಈ ಕಾಲಪ್ರವಾಹದಲ್ಲಿ ಒಂದು ಹನಿ ನೀರಷ್ಟೇ. ಆದರೆ ಈ ಅವ್ಯಾಹತ ಕಾಲದ ಹರವಿನಲ್ಲಿ, ನಮ್ಮ ಉಸಿರು ಆಡುತ್ತಿದ್ದರೆ ಬಾಳು ಅಥವಾ ಜೀವನ, ಅದು ನಿಂತರೆ ಮರಣ, ಸಾವು. ನಾವು ತಾಯಿಯ ಗರ್ಭದಲ್ಲಿ ಬಿದ್ದೊಡನೆಯೇ, ನಮ್ಮ ಗಣತಿ ಶುರುವಾಗುತ್ತದೆ. ೩ ತಿಂಗಳು ೬ ತಿಂಗಳು ೯ ತಿಂಗಳ ೯ ದಿನಎಂದು. ಅದು ಗರ್ಭಸ್ಥ ಜೀವನದ ಗಣತಿ. ನಮ್ಮ ಭೂ ಪತನವಾದೊಡನೆ, ಮತ್ತೆ ಗಣತಿ ಶುರು, ೩ ತಿಂಗಳು, ಒಂದು ವರ್ಷಹೀಗೆ.
ಆದರೆ ಇದು ಸಾವು ನಿಜ ಸ್ವರೂಪದಲ್ಲಿ ಅಂತ್ಯವೇ ಎಂದು ನೋಡಿದರೆ, ಅಲ್ಲ. ಇದು ಕೇವಲ ರೂಪಾಂತರ ಅಷ್ಟೇ. ಏಕೆಂದರೆ ಪಂಚಭೂತಗಳಿಂದಾದ ಮನಸ್ಸು ಬುದ್ಧಿ ದೇಹಗಳು, ಮತ್ತು ದೈವಾ೦ಶವಾದ ಆತ್ಮ ಒಂದೆಡೆ ಸೇರಿದಾಗ ಒಂದು ಜೀವಿಯ ಆವಿರ್ಭಾವ. ಇವೆಲ್ಲವೂ ಒಂದಿಷ್ಟು ಕಾಲ ಇದ್ದು ಜೀವಿಸಿ, ಮತ್ತೆ ಬೇರೆ ಬೇರೆಯಾಗಿ ತಮ್ಮ ಸ್ವಸ್ಥಾನ ಸೇರಲು ಹೊರಟಾಗ, ಆ ಜೀವಿಯ ಅಂತ್ಯ. ಅದನ್ನು ನಾವು, ಮರಣ, ಸಾವು ಎಂದು ಕರೆಯುತ್ತೇವೆ. ಆದರೆ ಇಲ್ಲಿ ಯಾವುದರ ಅಂತ್ಯವೂ ಆಗುವುದಿಲ್ಲ, ಎಲ್ಲವೂ ರೂಪಾಂತರವಷ್ಟೇ.
ವಾಚಕರೆ, ಕಾಲದ ಅವ್ಯಾಹತ ಮತ್ತು ನಿರಂತರ ಪ್ರವಾಹಕ್ಕೆ ಅಣೆಕಟ್ಟುಗಳನ್ನು ಕಟ್ಟಲು ಸಾಧ್ಯವೇ? ನಾವು ನಮ್ಮ ಜೀವನಕ್ಕೆ, ಅನುಕೂಲಕ್ಕೆ ಇದನ್ನು ಕ್ಷಣ , ನಿಮಿಷ, ಗಂಟೆ, ದಿನ, ವಾರ, ತಿಂಗಳು ವರ್ಷಗಳೆಂದು ವಿಭಾಗಿಸಿ, ಲೌಕಿಕ ಜೀವನಕ್ಕೆ ಅನುಗುಣವಾಗಿ ಕಾಲವನ್ನು ಎಣಿಸುತ್ತೇವೆ. ಆದರೆ ವಾಸ್ತವವಾಗಿ ಕಾಲವನ್ನು, ವಿಭಾಗಿಸಲು ಸಾಧ್ಯವೇ ಇಲ್ಲ. ಈ ವಿಭಾಗಗಳೆಲ್ಲ ಕೇವಲ ಕಾಲ್ಪನಿಕ ಮಾತ್ರ. ಈ ಕಾಲದ ಪ್ರವಾಹದಲ್ಲಿ ಎಷ್ಟೋ ಜೀವಿಗಳು ಬರುತ್ತಾರೆ ಹೋಗುತ್ತಾರೆ ಮತ್ತು ಈ ಬಂದು ಹೋಗುವ ಪ್ರಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ. ಕಾಲಾನುಕಾಲಕ್ಕೆ ಸಣ್ಣವರು ಬೆಳೆದು ದೊಡ್ಡವರಾಗಿ, ದೊಡ್ಡವರು ಮುದುಕರಾಗಿ, ಜೀವ ಧಾರಣೆ ಮಾಡಿದ ದೇಹ ಜರ್ಜರಿತವಾಗಿ, ಮರದಿಂದ ತರಗೆಲೆಗಳು ಉದುರುವಂತೆ ಉದುರು ಹೋಗುತ್ತಾರೆ. ಮರದಿಂದ ಹಾಗೆ ಉದುರಿದ ಎಲೆಗಳ ಹಿಂಬದಿಯಿಂದ ಹೇಗೆ ಹೊಸ ಚಿಗುರು ಬರುತ್ತದೋ ಹಾಗೆಯೇ ಭುವಿಯಲ್ಲಿ ಹೊಸ ಹೊಸ ಜೀವಿಗಳ ಆವಿರ್ಭಾವವಾಗುತ್ತದೆ. ಇದು ನಿರಂತರ, ನಮ್ಮ ಭುವಿಯಲ್ಲಿ ಕೋಟ್ಯಾಂತರ ವರ್ಷಗಳಿಂದ ನಡೆದು ಬರುತ್ತಲೇ ಇದೆ, ಎನ್ನುವುದೇ ಈ ಕಗ್ಗದ ಹೂರಣ.
ಆ ಪರಮಾತ್ಮನ ಲೀಲಾವಿನೋದದಲ್ಲಿ ಇದೂ ಸಹ ಒಂದು ಅದ್ಭುತ ಬಾಗ. ನಮಗೂ ಈ ಲೀಲಾವಿನೋದದ ಒಂದು ಪಾತ್ರ ಸಿಕ್ಕ ಸಂತೋಷವನ್ನು ಅನುಭವಿಸೋಣ.
ರಸಧಾರೆ - 105
ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು |
ಚಿತ್ರವಿಲ್ಲದ ಭಿತ್ತಿ ಸೊಗಸಹುದೆಂತು ||
ನಿತ್ಯಸತ್ವವೆ ಭಿತ್ತಿ, ಜೀವಿತ ಕ್ಷಣಚಿತ್ರ |
ತತ್ವವೀ ಸಂಬಂಧ ಮಂಕುತಿಮ್ಮ ||
ಭಿತ್ತಿಯೊಂದಿಲ್ಲದಿರೆ = ಬಿತ್ತಿ + ಒಂದು + ಇಲ್ಲದಿರೆ,/ ಚಿತ್ರವೆಂತಿರಲಹುದು = ಚಿತ್ರವೂ + ಎಂತೆ + ಇರಲು + ಅಹುದು, ಚಿತ್ರವಿಲ್ಲದ = ಚಿತ್ರವೂ + ಇಲ್ಲದ/ಸೊಗಸಹುದೆಂತು = ಸೊಗಸು + ಅಹುದು + ಎಂತು
ಭಿತ್ತಿ = ಗೋಡೆ.
ಒಂದು ಚಿತ್ರ ಬರೆಯಲು ಗೋಡೆಯೊಂದು ಬೇಕು. ಗೋಡೆಯಿಲ್ಲದೆ ಚಿತ್ರವಿರಲು ಸಾಧ್ಯವಿಲ್ಲ. ಹಾಗೆಯೇ ಚಿತ್ರವಿಲ್ಲದ ಗೋಡೆಗೆ ಸೊಗಸೂ ಇರುವುದಿಲ್ಲ. ಈ ಜಗತ್ತಿನ ಗೋಡೆಯಾದ ಆ ಪರಮಾತ್ಮ ಸತ್ವವು ನಿತ್ಯ ಮತ್ತು ಸತ್ಯವಾದ ಗೋಡೆಯಾಗಿರಲು, ನಮ್ಮ ಜೀವನವು ಆ ಗೋಡೆಯಮೇಲೆ ಬರೆದ ಒಂದು ಚಿತ್ರವಷ್ಟೇ. ಈ ತತ್ವದಿಂದಲೇ ನಮ್ಮ ಮತ್ತು ಪರಮಾತ್ಮನ ಸಂಬಂಧವಿರುತ್ತದೆ ಎನ್ನುವುದೇ ಗುಂಡಪ್ಪನವರ, ಈ ಕಗ್ಗದ ಹೂರಣ.
ಒಂದು ಚಿತ್ರ ಬರೆಯಲು ಒಂದು ಆಧಾರಬೇಕು . ಅದು ಒಂದು ಗೋಡೆಯಾಗಿರಬಹುದು, ಒಂದು ಫಲಕವಾಗಿರಬಹುದು, ಒಂದು ಬಟ್ಟೆಯಾಗಿರಬಹುದು. ಹೀಗೆ ಯಾವುದಾದರೊಂದು ಆಧಾರವಿಲ್ಲದೆ ಚಿತ್ರಬರೆಯಲು ಸಾಧ್ಯವಿಲ್ಲ. ಹಾಗಲ್ಲದೆ ನಮ್ಮ ಊಹೆಯಲ್ಲಿ ಬರೆದ ಚಿತ್ರ ಕೇವಲ ನಮ್ಮ ಮನಸ್ಸಿನಲ್ಲಿ ಅಲ್ಪ ಕಾಲ ಇದ್ದು ಮಾಯವಾಗುತ್ತದೆ. ಹಾಗಾಗಿ ಚಿತ್ರಕ್ಕೆ ಒಂದು ಆಧಾರ ಬೇಕು.
ಇಡೀ ಜಗತ್ತೇ ಒಂದು ಚಿತ್ರ. ಈ ಚಿತ್ರಕ್ಕೆ ಆಧಾರವೇ ಪರಮಾತ್ಮ ತತ್ವ. ನಿರಂತರವಾದ ನಿತ್ಯವಾದ ಆ ಪರಮಾತ್ಮ ತತ್ವವೇ ಭಿತ್ತಿ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಇಡೀ ಜಗತ್ತು ಚಿತ್ರವಾದರೆ ಅದಕ್ಕೆ ಆಧಾರವೇ ಪರಮಾತ್ಮ. ನಮ್ಮ ಭುವಿಯ ಯಾವುದೇ ಒಂದು ಭಾಗವನ್ನು ಒಂದು ಚೌಕಟ್ಟಿನಲ್ಲಿ ನಿಲ್ಲಿಸಿದರೆ ಅದೇ ಒಂದು ಸುಂದರ ಚಿತ್ರದಂತೆ ಕಾಣುತ್ತದೆ. . ಇಡೀ ಭುವಿಯನ್ನೇ ನೋಡಿದರೆ ಆ ಪರಮಾತ್ಮ ತತ್ವದಿಂದ ಸೃಷ್ಟಿಯಾದ ಈ ಜಗತ್ತಿನಲ್ಲಿ ಈ ಭುವಿಯೂ ಒಂದು ಚಿತ್ರ. ಹಾಗೆಯೇ ಎಲ್ಲವೂ, ಅಂದರೆ ಸೌರ ಮಂಡಲಗಳು, ಕ್ಷೀರಪಥಗಳು, ಆಕಾಶಗಂಗೆಗಳು ಎಲ್ಲವೂ ಒಂದೊಂದು ಚಿತ್ರದಂತೆ ಕಾಣುವುದಲ್ಲವೇ? ಹಾಗೆಯೇ ಒಂದೊಂದನ್ನಲ್ಲದೆ ಇಡೀ ವಿಶ್ವವನ್ನೇ ನೋಡಿದರೆ ಸಮಗ್ರವಾಗಿ ಒಂದೇ ಚಿತ್ರವನ್ನು ಕಾಣಬಹುದಲ್ಲವೇ. ಆದರೆ ಈ ಒಂದು ವಿಶ್ವದ ಚಿತ್ರ ನಿಂತಿರುವುದೇ ಆ ಪರಮ ಚೇತನದ ಆಧಾರದ ಮೇಲೆ. ಹಾಗಾಗಿ ಪರಮಾತ್ಮ ಒಂದು ಭಿತ್ತಿ ಮಿಕ್ಕೆಲ್ಲವೂ ಒಂದು ಚಿತ್ರ.
ಹಾಗೆಯೇ ನಮ್ಮ ಜೀವನವನ್ನು ನಾವು ಅವಲೋಕಿಸಿದರೆ, ಹುಟ್ಟಿನಂದಿನಿಂದ ನಮ್ಮ ಈ ರೂಪದ ಅಂತ್ಯದವರೆಗೆ, ನಾವೂ ಒಂದು ಚಿತ್ರವಲ್ಲವೇ? ನಮ್ಮ ಜೀವನವೂ ಆ ಪರಮಾತ್ಮ ತತ್ವವನ್ನು ಆಧರಿಸಿ ನಡೆಯುವ ಒಂದು ಚಲನ ಚಿತ್ರವೆಂದರೆ ಅತಿಶಯೋಕ್ತಿಯಾಗಲಾರದು. ಒಬ್ಬೊಬ್ಬರದು ಒಂದೊಂದು ಚಿತ್ರ. ಚಿತ್ರಗಳ ವ್ಯತ್ಯಾಸಗಳಿಗೆ ಸಾವಿರಾರು ಕಾರಣಗಳು. ಒಂದಕ್ಕಿಂತ ಒಂದು ಭಿನ್ನವಾಗಿದ್ದರೂ ಎಲ್ಲವೂ ಆ ಪರಮ ಚೇತನದ ಆಧಾರದಮೇಲೆ ನಿಂತ ಚಿತ್ರಗಳಲ್ಲವೇ?
ನಮ್ಮ ಚಿತ್ರಗಳಿಗೆ ಗೋಡೆಯಾಗಿರುವ, ಆಧಾರವಾಗಿರುವ ಆ ಪರಮ ಚೇತನಕ್ಕೂ, ಮತ್ತು ಚಿತ್ರಕ್ಕೂ ಅಂದು ಅವಿನಾಭಾವ ಸಂಬಂಧ. ಚಿತ್ರ ಬದಲಾಗುತ್ತಿರುತ್ತದೆ. ಪ್ರಕೃತಿಯಲ್ಲಿ ಋತುಮಾನಗಳಿಗೆ ತಕ್ಕಂತೆ ಬದಲಾವಣೆ ಬಂದು ಪ್ರತಿಬಾರಿಯೂ ನಮಗೆ ಹೊಸ ಹೊಸ ಚಿತ್ರಗಳು ಕಾಣುವುದಿಲ್ಲವೇ? ಹಾಗೆ ನಮ್ಮ ಜೀವನದ ಚಿತ್ರಗಳೂ ಕ್ಷಣದಿಂದ ಕ್ಷಣಕ್ಕೆ, ದಿನದಿಂದ ದಿನಕ್ಕೆ, ಜನ್ಮದಿಂದ ಜನ್ಮಕ್ಕೆ ಬದಲಾಗುತ್ತಿರುತ್ತದೆ. ನೋಡುವವರಿಗೆ ಹೊಸ ಹೊಸ ಚಿತ್ರಗಳು ಮೂಡುತ್ತವೆ. ಈ ಜೀವನಕ್ಕೂ ಮತ್ತು ಈ ಜೀವನಕ್ಕೆ ಆಧಾರವಾದ ಆ ಪರಮ ಚೇತನಕ್ಕೂ ಇರುವ ಗಾಢ ಸಂಬಂಧವೇ ಈ ಕಗ್ಗದ ಅಂತರ್ಯ.
ನಾವೂ ಸಹ ಒಂದು ಚಿತ್ರವಾಗಿ ಅನ್ಯ ಚಿತ್ರಗಳನ್ನು ನೋಡುವ ಭಾಗ್ಯಶಾಲಿಗಳು ಅಲ್ಲವೇ?
ಅನಂತ ಚೌಕಟ್ಟು- ಸಾಂತ ಚಿತ್ರ ರಸಧಾರೆ - 106
ಚೌಕಟ್ಟನಂತವದರೊಳು ಚಿತ್ರಪಟ ಸಾಂತ
ಸಾಕಾರ ಘನತತಿ ನಿರಾಕಾರ ನಭದಿ
ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ
ಲೆಕ್ಕ ತಾತ್ವಿಕನಿಗಿದು ಮಂಕುತಿಮ್ಮ,
ಚೌಕಟ್ಟನಂತವದರೊಳು = ಚೌಕಟ್ಟು + ಅನಂತವು + ಅದರೊಳು,/ ತಾತ್ವಿಕನಿಗಿದು = ತಾತ್ವಿಕನಿಗೆ + ಅದು.
ಚೌಕಟ್ಟು = ಗೋಡೆ, ಆಧಾರ,/ನಿರ್ಲೌಕಿಕದ = ಪಾರಮಾರ್ಥಿಕ/, ಸಾಂತ = ಅಂತ್ಯವಿರುವ,/ ತಾತ್ವಿಕ = ತತ್ವ ಶಾಸ್ತ್ರಜ್ಞ,
ಹಿಂದಿನ ಕಗ್ಗದ ವಿವರಣೆಯನ್ನೇ ಮುಂದುವರೆಸಿ ನೋಡಿದರೆ, ಈ ಪರಮ ಚೇತನದ ಚೌಕಟ್ಟು, ಅನಂತ,ಅಂದರೆ ಅಂತವೇ ಇಲ್ಲದ್ದು . ಹಾಗೆ ಅನಂತವಾಗಿರುವ ಚೌಕಟ್ಟಿನಲ್ಲಿ ಅಂತ್ಯಗೊಳ್ಳುವ ಚಿತ್ರ. ಹೇಗೆ ಅನಂತ ಆಕಾಶದಲ್ಲಿ ಹಲವು ಆಕಾರಗಳ, ಆದರೆ ತನ್ನ ಆಕಾರವನ್ನು ಘಳಿಗೆ ಘಳಿಗೆಗೆ ಬದಲಾಯಿಸಿಕೊಳ್ಳುವ ಮೋಡಗಳಂತೆ, ನಮ್ಮ ಲೌಕಿಕ ಜೀವನವೂ ಈ ಅನಂತ ವಿಶ್ವದ ಭಿತ್ತಿಯಲ್ಲಿ ಸಾಂತ, ಅಂದರೆ ಬದಲಾಗುವ ಜೀವನದ ಚಿತ್ರ. ಆದರೆ ಈ ಲೌಕಿಕದ ಜೀವನದ ಮೌಲ್ಯಗಳನ್ನು, ಪಾರಮಾರ್ಥದ ಒರೆಗೆಹಚ್ಚಿ ನೋಡುವವನೆ ತತ್ವಜ್ಞಾನಿ, ಎಂದು ಆ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ವಿಶಾಲವಾದ, ಈ ಜಗತ್ತು ಒಂದು ಅಂತ್ಯವೇ ಇಲ್ಲದ ಚೌಕಟ್ಟು.ಈ ಚೌಕತ್ತಿನಲ್ಲಿರುವುದು ಅಂತ್ಯಗೊಳ್ಳುವ ರೂಪಾಂತರಗೊಳ್ಳುವ ಚಿತ್ರ. ನಾವು ಆಕಾಶವನ್ನು ನೋಡಿದರೆ, ಅದರ ಅಂತ್ಯ ನಮಗೆ ಗೋಚರವಾಗುವುದಿಲ್ಲ. ಆದರೆ ಆ ನಭೋ ಮಂಡಲದಲ್ಲಿ ಮೂಡುವ ಮೋಡಗಳು ಚಿತ್ತಾರ ಚಿತ್ತಾರವಾಗಿರುತ್ತವೆ. ಆದರೆ ಆ ಮೋಡಗಳ ಆಕಾರ ಕ್ಷಣಕ್ಷಣಕ್ಕೂ ಬದಲಾಗುತ್ತಾ ಇರುತ್ತದೆ. ಹಾಗೆಯೇ ಈ ಜಗತ್ತಿನ ಭಿತ್ತಿಯಲ್ಲಿ ಮೂಡುವ ಚಿತ್ರ ಮತ್ತು ಚಿತ್ತಾರಗಳೂ ಸಹ ಆ ಮೋಡಗಳಂತೆಯೇ, ಬದಲಾಗುತ್ತಾ ಇರುತ್ತದೆ.
ಇಲ್ಲಿರುವ ಅಂತ್ಯವಾಗುವ ಚಿತ್ರ ಲೌಕಿಕದ ಚಿತ್ತಾರ. ಆದರೆ ಆ ಚಿತ್ರ ಮೂಡಿರುವುದು ಅನಂತ ಪಾರಮಾರ್ಥದಲಿ. ಲೌಕಿಕಕ್ಕೆ ಒಂದು ಮೌಲ್ಯ ಮತ್ತು ಪಾರಮಾರ್ಥಕ್ಕೆ ಒಂದು ಮೌಲ್ಯ. ಲೌಕಿಕದ ಮೌಲ್ಯಗಳು ಪರಮಾರ್ಥಕ್ಕೆ ಅನ್ವಯವಾಗದಿದ್ದರೂ ತತ್ವಜ್ಞಾನಿಯಾದವನು ಈ ಲೌಕಿಕದ ಮೌಲ್ಯಗಳನ್ನು ಪರಮಾರ್ಥ ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳುತ್ತಾನೆ. ಲೌಕಿಕದ ಚಿತ್ರ ಮತ್ತು ಪರಮಾರ್ಥ ಎರಡೂ ಒಂದಕ್ಕೊಂದು ಪೂರಕ. ಒಂದು ಇನ್ನೊಂದಕ್ಕೆ ಅಧಾರ. ಮತ್ತೊಂದು ಮೊದಲಿನದಕ್ಕೆ ಅಲಂಕಾರ. ನೋಡಿ, ನಮ್ಮ ಮನಸ್ಸೂ ಸಹ ಅನಂತ. ಅಂದರೆ ನಮ್ಮ ಮನಸ್ಸಿನಲ್ಲೂ ಅನಂತವಾದ ಆಲೋಚನೆಗಳು ಬರುತ್ತವೆ, ಆ ಪರಮಾರ್ಥದಂತೆಯೇ ಅರ್ಥವಾಗದ ಆಲೋಚನೆಗಳು ಬರುತ್ತವೆ. ಆದರೆ ಆಲೋಚನೆಗೆ ಬಂದದ್ದೆಲ್ಲ ಸಾಕಾರಗೊಳ್ಳುವುದಿಲ್ಲ. ಸಾಕಾರಗೊಂಡರೆ ಒಂದು ಆಕಾರ ಅಥವಾ ಚಿತ್ರ ಮೂಡುತ್ತದೆ. . ಆ ಚಿತ್ರವೂ ಸಹ ನಮ್ಮ ಮನಸ್ಸಿನ ಅನಂತ ಆಲೋಚನಾ ಲಹರಿಯ ಬಿತ್ತಿಯಲ್ಲಿ ಮೂಡಿದ್ದೇ ಅಲ್ಲವೇ? ಹಾಗಾಗಿ ನಾವು ಒಂದು ಚಿತ್ರವಾದರೆ, ನಾವು ಇರುವುದೂ ಸಹ ಅನಂತ ಪರಮಾತ್ಮ ತತ್ವದ ಆಧಾರದ ಮೇಲೆ ಅಲ್ಲವೇ? ನಮ್ಮೊಳಗೇ ಒಂದು ಅನಂತ(ಮನಸ್ಸು) ಅದರೊಳಗೆ ಹಲವಾರು ಕ್ಷಣಕ್ಷಣಕ್ಕೂ ಬದಲಾಗುವ ಚಿತ್ರಗಳು.
ಬೇರೆ ಬೇರೆ ರೂಪಗಳನ್ನು ಹೊಂದಿದ ಈ ಚಿತ್ರಗಳು ಲೌಕಿಕವಾದದು. ಆತ್ಮಜ್ಞಾನವನ್ನು ಪಡೆಯಲು, ತತ್ವಜ್ಞಾನಿಯಾದವನು ಈ ಚಿತ್ರದ ಭಾವದಿಂದ ಹೊರಬಂದು ಅನಂತ ವಿಶ್ವದ ಭಾವವನ್ನು ತುಂಬಿಕೊಂಡು, ಲೌಕಿಕದಿಂದ ಪರಮಾರ್ಥದೆಡೆಗೆ ಹೋಗಲು ಪ್ರಯತ್ನಮಾಡುತ್ತಾನೆ. ಅಂದರೆ ಆಕಾರದಿಂದ ನಿರಾಕಾರದೆಡೆಗೆ ಹೋಗುವುದೇ ಅಧ್ಯಾತ್ಮಿಕ ಪ್ರಯಾಣ. ಅಂತಹ ಪ್ರಯಾಣದ ಪ್ರಯತ್ನವನ್ನು ತತ್ವಜ್ಞಾನಿ ಮಾಡುತ್ತಾನೆ. ವಾಚಕರೆ ಚಿತ್ರ ಅಂದರೆ ಲೌಕಿಕ, ಬಲುಸೊಗಸು. ಇಂದ್ರಿಯಾನಂದವನ್ನು ಕೊಡುತ್ತದೆ. ಆದರೆ ಅದು ಕ್ಷಣಿಕಾನಂದ. ಇದರಲ್ಲಿ ರಕ್ತಿಯಿರುವರಿಗೆ ಅಧ್ಯಾತ್ಮ ಅಥವಾ ಪರಮಾರ್ಥ ನೀರಸ, ಆದರೆ ಅದ್ಯಾತ್ಮ ನಿತ್ಯಾನಂದ ಅಥವಾ ಶಾಶ್ವತಾನಂದ.
ಇಲ್ಲಿ ಎರಡೂ ಉಂಟು. ನಮಗೇನು ಬೇಕೋ ಅದನ್ನು ಆಯ್ದುಕೊಳ್ಳಬಹುದು.
ಅನಂತ ಚೌಕಟ್ಟು- ಸಾಂತ ಚಿತ್ರ. ರಸಧಾರೆ - 107
ಅಜ್ಞಾತವಾದುದನುಭಾವವೆನೆ ನಾಸ್ತಿಕನು |
ಅಜ್ಞೇಯವೆಂದದಕೆ ಕೈ ಮುಗಿಯೆ ಭಕ್ತ ||
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ |
ಸ್ವಜ್ಞಪ್ತಿ ಶೋಧಿ ಮುನಿ ಮಂಕುತಿಮ್ಮ. ||
ಅಜ್ಞಾತವಾದುದನುಭಾವವೆನೆ = ಅಜ್ಞಾತವಾದುದನು + ಅಭಾವವೆನೆ// ಅಜ್ಞೇಯವೆಂದದಕೆ = ಅಜ್ಞೇಯ + ಎಂದು + ಅದಕೆ // ಜಿಜ್ಞಾಸ್ಯವೆಂದು = ಜಿಜ್ಞಾಸ್ಯವು + ಎಂದು // ಪರಿಕಿಸತೊಡಗೆ = ಪರಿಕಿಸ + ತೊಡಗೆ//
ಅಜ್ಞಾತವಾದುದು = ಅರಿವಿಗಿಲ್ಲದ್ದು, ಅಭಾವ = ಇಲ್ಲದ್ದು, ಅಜ್ಞೇಯವೆಂದು = ಅರಿಯಲಾಗದ್ದು, ಜಿಜ್ಞಾಸ್ಯ = ಜಿಜ್ಞಾಸೆಗೆ ಒಳಪಡಿಸಬಹುದಾದ್ದು. ಸ್ವಜ್ಞಪ್ತಿ ಶೋಧಿ = ತನ್ನ ಸ್ವಂತ ಆಲೋಚನೆ ಮತ್ತು ಅನುಭವದಿಂದ ಅರಿಯಲು ಪ್ರಯತ್ನಪಡುವವನು.
ನಮ್ಮ ಅರಿವಿಗಿಲ್ಲದ್ದು, ಗೊತ್ತಿಲದ್ದು, ತಿಳಿಯದಿರುವುದು ಎಂದು ನಾಸ್ತಿಕದೇವರನ್ನು ನಂಬುವುದಿಲ್ಲ. ಅವನಿಗೆ ದೇವರಲ್ಲಿ ನಂಬಿಕೆ ಇಲ್ಲ. ಏಕೆಂದರೆ ಅವನಿಗೆ ಗೋಚರವಾಗುವುದಿಲ್ಲ ಮತ್ತು ಅನುಭವಕ್ಕೂ ಬರುವುದಿಲ್ಲ. ಆದರೆ ಅದರ ಅರಿವಿಲ್ಲದಿದ್ದರೂ ಅದರಲ್ಲಿ ನಂಬಿಕೆ ಇಟ್ಟಿರುವವನು ಭಕ್ತ. ಇರಲಿ ನಾನು ಇದನ್ನು ವಿಚಾರಕ್ಕೆ ಒರೆ ಹಚ್ಚಿ ನಿರ್ಣಯಿಸಬೇಕು,ಪರಿಕಿಸಿ ನೋಡಬೇಕು ಎಂದು ಹೇಳುವವನೇ ವಿಜ್ಞಾನಿ. ನಂಬಿದ್ದನ್ನು ಅಂತರ್ಯದಲ್ಲಿ ಚಿಂತನ, ಮನನ , ಧ್ಯಾನ , ತಪಸ್ಸು ಮಾಡಿ ಆ ಪರಮಾತ್ಮ ವಸ್ತುವನ್ನು ಅರಿತುಕೊಳ್ಳಲು ಪ್ರಯತ್ನಪಡುವವನೆ ಮುನಿ ಅಥವಾ ಋಷಿ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾನೊಮ್ಮೆ ಒಂದು ಟ್ರೈನ್ ನಲ್ಲಿ ಪ್ರಯಾಣ ಮಾಡುತ್ತಿದ್ದೆ. ನಾ ಕುಳಿತ ಭೋಗಿಯಲ್ಲಿ ಕೆಲ ಯುವಕರ ಚರ್ಚೆ ತೀವ್ರವಾಗಿ ಸಾಗಿತ್ತು.ದೇವರಿದ್ದಾನೆ, ಇಲ್ಲ, ನನಗೆ ನಂಬಿಕೆ ಇಲ್ಲ”. ಹೀಗೆ ಸಾಗಿತ್ತು ಅವರ ವಾಗ್ವಾದ. ಸುಮಾರು ಹೊತ್ತು ಇದನ್ನು ಆಲಿಸುತ್ತಿದ್ದ, ಒಬ್ಬ ಮುಸಲ್ಮಾನ ಸಜ್ಜನರು, ಶುದ್ಧ ನಾಸ್ತಿಕನಂತೆ ಕಾಣುತ್ತಿದ್ದವನನ್ನು ಕುರಿತು ಅಯ್ಯ ಕಡೆ ಪಕ್ಷ ನೀನು ನಿಮ್ಮ ಅಪ್ಪನ ಮಗನೆ ಎಂದು ನಂಬುತ್ತೀಯಾಎಂದಾಗ ಅಲ್ಲಿ ಸ್ಥಬ್ಧತೆ ಅಥವಾ ನೀರವತೆ ಆವರಿಸಿತು. ಹೌದು ವಾಚಕರೆ ನಂಬಿಕೆ ಬೇಕು, ಇಲ್ಲದಿದ್ದರೆ ಜೀವನ ನರಕವಾಗಿಬಿಡುತ್ತದೆ. ಆಲೋಚಿಸಿ,”ನಮ್ಮ ಅಪ್ಪ ಯಾರುಎಂದು ನಮ್ಮ ಸಂದೇಹ ಮನಸ್ಸಿಗೆ ಬಂದರೆ, ನಮ್ಮ ಮನಸ್ಸಿನ ಸ್ಥಿತಿ ಹೇಗಿರಬಹುದೆಂದು ಊಹಿಸಿದ್ದೀರಾ? ನಾವಿದ್ದೇವೆ ಎಂದರೆ ನಮ್ಮ ಅಸ್ತಿತ್ವಕ್ಕೆ ಕಾರಣ ಇರಲೇಬೇಕಲ್ಲವೇ? ನಾಸ್ತಿಕರು ನಾವು ದೇವರನ್ನು ನಂಬುವುದಿಲ್ಲಎನ್ನುತ್ತಾರೆ. ಅಂದರೆ “ “ದೇವರುಎನ್ನುವ ವಸ್ತುವೊಂದು ಇದೆ ಅದನ್ನು ನಾನು ನಂಬುವುದಿಲ್ಲಎಂದು ಅರ್ಥವಾಗಬಹುದಲ್ಲವೇ? ಹಾಗಾಗಿ ನಂಬಬೇಕು ನಂಬಿಕೆಯೆ ಜೀವನದ ಅಧಾರ. ವಿಚಾರಗಳನ್ನು, ವಿಷಯಗಳನ್ನು ವ್ಯಕ್ತಿಗಳನ್ನು ನಂಬಬೇಕು. ಅಂದರೆ ಅಂಧವಾಗಿ ನಂಬಬಾರದು . ವಿಚಾರದ ಒರೆಗೆಹಚ್ಚಿ ನಂಬ ಬೇಕು. ನಂಬಲರ್ಹವಲ್ಲದೆ ಇದ್ದರೆ ಅದನ್ನು ನಿರಾಕರಿಸಬೇಕು. ಆದರೆ ಅಪನಂಬಿಕೆ ಇರಬಾರದು.
ವಿಜ್ಞಾನದ ಮಾರ್ಗ ಬಹಳ ನಿಧಾನ. ಏಕೆಂದರೆ ಈ ಪರಮಾತ್ಮ ಚೇತನದ ಕಾರ್ಯ ವೈಖರಿ ವಿಜ್ಞಾನದ ಪರೀಕ್ಷಾ ಕೊಠಡಿಗಳ ಪರಿಧಿಯಲ್ಲಿ ಸಿಲುಕುವಂಥಾದ್ದಲ್ಲ. ಭಾರತೀಯ ವೇದ, ಉಪನಿಷತ್ತು, ಪುರಾಣ, ಭಾಗವತ ಮುಂತಾದವುಗಳಲ್ಲಿ ನಿಖರವಾಗಿ ಸಹಸ್ರ ಶೀರ್ಷಾ ಪುರುಷಃ, ಸಹಸ್ರಾಕ್ಷ; ಸಹಸ್ರಪಾತ್, ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತ್ತಿಷ್ಟತ್ ದಶಾಂಗುಲಂ”.ಎಂದು ಎಂದೋ ಹೇಳಿದ್ದನ್ನು ಹೌದು, ಇರಬಹುದುಅದೇ ಸತ್ಯಎಂದು ವಿಜ್ಞಾನಿಗಳು ಈಗೀಗ ತೊದಲುನುಡಿಗಳನ್ನು ನುಡಿಯುತ್ತಿದ್ದಾರೆ. ಅವರಿಗೆ ಒಟ್ಟಾರೆ ಅರಿವಿಗೆ ಬಂದಿರುವುದೆಷ್ಟು, ಕೋಟಿಯಲ್ಲಿ ಒಂದು ಬಾಗವೂ ಅಲ್ಲ. ಇರಲಿ ಅವರ ವೈಖರಿ ಅವರಿಗೆ.
ಇನ್ನು ಋಷಿ ಮುನಿಗಳ ಮಾರ್ಗವೂ ನಮಗೆ ಬಹಳ ಕಠಿಣ . ಏಕೆಂದರೆ ಯಮ ನಿಯಮಗಳ ತೀವ್ರತೆಗೆ, ವಿಷಯಾಸಕ್ತರಾಗಿ ಇಂದಿರಿಯಲೋಲರಾದ ಸಾಮಾನ್ಯರಾದ ನಾವುಗಳು ಒಳಪಡುವುದು ಬಹಳ ಕಷ್ಟ. ಹಾಗಾಗಿ ನಾವು ನಿರ್ಮಲ ಮನಸ್ಸಿನಿಂದ, ಶುದ್ಧವಾಗಿ ನಿಸ್ಸಂಶಯವಾಗಿ ನಂಬಬೇಕು. ಸಂಶಯಾತ್ಮಾ ವಿನಶ್ಯತಿಎಂದು ಹೇಳಿದೆ ಭಗವದ್ಗೀತೆ.
ನಂಬಿ ಕೆಟ್ಟವರಿಲ್ಲವೋಇದು ದಾಸರ ಉಕ್ತಿ. ನಾವು ನಂಬಿದರೆ ಸುಖ, ಶಾಂತಿ, ನೆಮ್ಮದಿ. ಸಂಶಯದಿಂದ ಅಶಾಂತಿ, ತೊಳಲಾಟ, ಇತ್ಯಾದಿ. ನಮಗೆ ಏನು ಬೇಕೋ ಅದನ್ನು ಆರಿಸಿಕೊಳ್ಳಬೇಕು, ನಮ್ಮ ಆಯ್ಕೆಯಿಂದ ಏನು ಲಭಿಸುವುದೋ ಅದನ್ನು ಅನುಭವಿಸಬೇಕು.
ಅನಂತ ಚೌಕಟ್ಟು ಸಾಂತ ಚಿತ್ರ. ರಸಧಾರೆ - 108
ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು |
ವೆಡೆಯಲ್ಲ ಜಡಲೋಕ ಕಲ್ಲು ಕಡ್ಡಿ ಕಸ ||
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ |
ಜಡವೆ ಜೀವದ ವಸತಿ ಮಂಕುತಿಮ್ಮ ||
ಜಡ = ನಿರ್ಜೀವವಸ್ತು, ಜಂತು = ಜೀವವಿರುವ ವಸ್ತು, ಅಡಗಿರ್ಪ = ಅಡಗಿರುವ, ಚೈತನ್ಯವೆಚ್ಚರಲು = ಚೈತನ್ಯವು ಎಚ್ಚರವಾಗಲು,
ಜಡವೇನು? ಜೀವವೇನು? ಚೈತನ್ಯ ಎಲ್ಲೆಲ್ಲಿ ನಿದ್ರಿಸಿದೆಯೋ ಅದೆಲ್ಲ ಜಡ. ಕಲ್ಲು ಕಡ್ಡಿ ಕಸ ಹೀಗೆ. ಹಾಗೆ ಅಡಗಿರುವ ಅಥವಾ ಸುಪ್ತವಾಗಿರುವ ಚೈತನ್ಯ ಎಚ್ಚರವಾದರೆ ಆ ವಸ್ತು ಜೀವಂತವಾಗುತ್ತದೆ. ಹಾಗಾಗಿ ಜಡವೆ ಜೀವಕ್ಕೆ ಮನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಜಂತುಎನ್ನುವ ಪದಕ್ಕೆ ಜೀವಂತಿ ಇತಿ ಜಂತು: ಎನ್ನುವ ಅರ್ಥ ಉಂಟು. ಅಂದರೆ ಯಾವುದು ಜೀವಂತವಾಗಿದೆಯೋ ಅದು ಜಂತು ಎಂದು ಅರ್ಥ. ಜೀವವೆಂದರೆ ಚೇತನ. ಚೇತನವೆಂದರೆ ಚೈತನ್ಯ, ಶಕ್ತಿ. ಆ ಶಕ್ತಿಯಿದ್ದರೆ ಎಲ್ಲಾ ಪ್ರಾಣಿಗಳೂ ಎದ್ದು ಓಡಾಡಬಹುದು. ಅದಿಲ್ಲದಿದ್ದರೆ, ಅದು ಜಡ ಎಂದು ಪರಿಗಣಿಸಲಾಗುತ್ತದೆ. ಜಡವೆಂದರೆ ಜೀವವಿಲ್ಲದ್ದು. ಆ ಜಡದೊಳಕ್ಕೆ ಜೀವ ತುಂಬಿದರೆ ಅದು ಜಂತುವಾಗುತ್ತದೆ.
ಈ ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳನ್ನೂ ಜಡ ಮತ್ತು ಜೀವ ಎಂದು ವಿಭಾಗಿಸಲಾಗಿದೆ. ಮೇಲೆ ಹೇಳಿದಂತೆ ಜೀವ ವಿರುವುದು ಜಂತು ಮತ್ತು ಜೀವವಿಲ್ಲದ್ದು ಜಡ. ಜಡವು ಎಲ್ಲ ಕಡೆಯೂ ಇದೆ. ಜೀವವೂ ಎಲ್ಲಕಡೆಯೂ ಇದೆ. ಇವರೆಡೂ ಬೇರೆಬೇರೆಯಾಗಿ ಇರುವತನಕ ಜಡ ಜೀವಗಳೆಂಬ ಬೇಧ. ಒಂದಾದರೆ ಕೇವಲ ಜಂತು. ಆದರೆ ಜಡ ಜೀವಗಳ ಅವಿನಾಭಾವ ಸಂಬಂಧವನ್ನು ನಾವು ಈ ಜಗತ್ತಿನಲ್ಲಿ ನೋಡಬಹುದು. ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ಥಿತ್ವವಿಲ್ಲ ಏಕೆಂದರೆ ಇಡೀ ಜಗತ್ತಿನಲ್ಲಿರುವ ಎಲ್ಲ ಪ್ರಾಣಿಗಳೂ ಒಂದು ಜಡ ಮತ್ತೊಂದು ಜೀವನದ ಸಮ್ಮಿಲನದಿಂದಲೇ ಆಗಿರುವುದು. ಸಮ್ಮಿಲನವಾದರೆ, ಒಂದು ಜೀವಿಯ ಆವಿರ್ಭಾವ. ಇಲ್ಲದಿದ್ದರೆ ಜಡ ಜಡವಾಗಿ ಮತ್ತು ಜೀವ ಜೀವವಾಗೆ ಇರುತ್ತದೆ.
ಇಲ್ಲಿ ಒಂದು ದೃಷ್ಟಾಂತವನ್ನು ನೋಡೋಣ. ಹತ್ತು ಹಿಡಿ ಅಕ್ಕಿ. ಅದಕ್ಕೆ ಚಲನೆಯಿಲ್ಲ. ಹಾಗಾಗಿ ಅದನ್ನು ಜಡವೆಂದೇ ಪರಿಗಣಿಸಿದರೂ, ಅದನ್ನು ಬೇಯಿಸಿ ಅನ್ನವಾಗಿಸಿ ದೇಹಕ್ಕೆ ಉಣಬಡಿಸಿದರೆ, ಅದರಿಂದ ಜೀವಿಗೆ ಚೈತನ್ಯ ಉಂಟಾಗುತ್ತದೆ. ಅಂದರೆ ಆ ಚೈತನ್ಯ ಆ ಹತ್ತು ಹಿಡಿ ಅಕ್ಕಿಯಲ್ಲಿ ಇತ್ತು ಎಂದು ಅರ್ಥವಲ್ಲವೇ? ಏಕೆಂದರೆ ಒಂದು ವಸ್ತುವಿನಲ್ಲಿ ಇಲ್ಲದ್ದು ಪ್ರಕಟವಾಗುವುದು ಹೇಗೆ. ಜೀವಕ್ಕೆ, ಚೈತನ್ಯಕ್ಕೆ ಹೇತುವಾದ ಆನ್ನ ಜಡವೆಂದು ಹೇಗೆ ಒಪ್ಪಿಕೊಳ್ಳುವುದು?. ಈ ದೃಷ್ಟಾಂತವನ್ನು ಎಲ್ಲ ಚೈತನ್ಯದಾಯಕ ವಸ್ತುಗಳಿಗೂ ಹೋಲಿಸಬಹುದು. ಜಡವಾಗಿ ಒಂದೇ ಕಡೆ ನಿಂತಿರುವ ಮರಕ್ಕೆ ಜೀವವಿಲ್ಲವೇ. ಹಾಗಾಗಿ ಇದನ್ನು ನಾವು ಜೀವ ಮತ್ತು ನಿರ್ಜೀವ ವಸ್ತುಗಳೆಂದು ಪರಿಗಣಿಸಿದರೆ, ನಿರ್ಜೀವ ವಸ್ತುಗಳಿಗೆ ಜೀವ ಬಂದರೆ ಅದು ಜೀವಿಯಾಗುತ್ತದೆ. ತೈತ್ತರೀಯ ಉಪನಿಷತ್ತುಅನ್ನಂ ಬ್ರಹ್ಮೇತಿವ್ಯ ಜಾನಾತ್ಎನ್ನುತ್ತದೆ. ಹಾಗಾಗಿ ಅನ್ನವು ಜೀವ. ಅಲ್ಲಿ ಚೈತನ್ಯ ಸುಪ್ತವಾಗಿದೆ. ಹಾಗೆ ಸುಪ್ತವಾಗಿರುವ ಚೈತನ್ಯವು ಪ್ರಕಟಗೊಂಡರೆ, ಜಡವು, ಜೀವಂತವಾಗುತ್ತದೆ.
ಜೀವಕ್ಕೆ ಅಂದರೆ ಚೈತನ್ಯಕ್ಕೆ ಜಡವೆ ಆಧಾರ. ಒಂದು ಚಿತ್ರಕ್ಕೆ ಭಿತ್ತಿಯು ಹೇಗೆ ಅಧಾರವೋ ಹಾಗೆ ಜೀವಕ್ಕೆ ಜಡದ ಮಾಧ್ಯಮದಿಂದಲೇ ಈ ಜಗತ್ತಿನಲ್ಲಿ ಪ್ರಕಟವಾಗಬಹುದು. ತನ್ನ ಇರುವಿಕೆಯನ್ನು ಮತ್ತು ತನ್ನ ಕಾರ್ಯ ಸಾಧನೆಗೆ ಜೀವಕ್ಕೆ ಜಡವೆ ಕರಣ. ಜೀವವು ಕಾರಣ ದೇಹ ಕರಣ ಮತ್ತು ಇಲ್ಲಿ ಇವರಿಬ್ಬರ ಸಮಾಗಮದಿಂದ ನಡೆಯುವ ಜಗದ್ವ್ಯಾಪಾರವೇ ಕಾರ್ಯ. ಆದರೆ ಎಲ್ಲವೂ ಪರಮಾತ್ಮನಿಂದ ಸಿಡಿದು ಹೊರಬಂದು ಬೇರೆ ಬೇರೆ ರೂಪಗಳನ್ನು ತಳೆದು ಬೇರೆ ಬೇರೆ ಹೆಸರುಗಳನ್ನೂ ಪಡೆದು ಇದು ಜೀವ , ಇದು ಜಡ ಎಂದು ಕರೆಸಿ ಕೊಳ್ಳಲ್ಪಡುವ ಎಲ್ಲ ವಸ್ತುಗಳಿಗೂ ಮೂಲ ಆ ಪರಮಾತ್ಮ ಚೇತನವೇ ಅಲ್ಲವೇ? ಆ ಪರಮಾತ್ಮನನ್ನ್ನು ಕರಣಂ ಕಾರಣಂ ಕರ್ತಾಎಂದೂ ಹೇಳಲಾಗಿದೆ. ಹಾಗಾಗಿ ಜಡವು ಕಾರ್ಯಪ್ರವೃತ್ತನಾಗಬೇಕಾದರೆ ಜೀವದೊಂದಿಗೆ ಸಂಗಮವಾಗಬೇಕು. ಹಾಗೆಯೇ ಜೀವ ತನ್ನ ಕಾರ್ಯ ನಿರ್ವಹಣೆ ಮಾಡಬೇಕಾದರೆ ಜಡವೆಂಬ ಮಾಧ್ಯಮ ಬೇಕು. ಅದನ್ನೇ ಮಾನ್ಯ ಗುಂಡಪ್ಪನವರು ಜಡವೆ ಜೀವದ ವಸತಿ ಎಂದರು.
ಇಂತಹ ಉತ್ತಮ ಮತ್ತು ಉನ್ನತ ವಿಚಾರಗಳು ಮನುಷ್ಯ ತನ್ನನ್ನು ತಾನು ಅರಿತುಕೊಳ್ಳಲು ಸಹಾಯವಾಗುತ್ತದೆ. ತನ್ನನ್ನು ತಾನು ಜಡವೆಂದುಕೊಂಡಾಗ ಒಂದು ರೀತಿಯಾಗಿಯೂ ತಾನು ಜೀವ ಅಥವಾ ಚೇತನ ಮಾತ್ರ ಎಂದು ಅರಿತುಕೊಂಡಾಗ ಮತ್ತೊಂದು ರೀತಿಯಾಗಿಯೂ ಆನಂದವನ್ನು ಅನುಭವಿಸುತ್ತಾನೆ. ಹಾಗಾಗಿ ವಾಚಕರೆ, ನಾವೂ ಸಹ ಯೋಚನೆ ಮಾಡೋಣ, ನಮ್ಮ ನೆಲೆಯನ್ನು ಅರಿತುಕೊಳ್ಳೋಣ.
ರಸಧಾರೆ - 109
ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ |
ತಳದ ಸಂಸ್ಪರ್ಷದಿಂದೆದ್ದು ನಿಂತಂತೆ ||
ಚಲಿಸದೆನಿಸಿದ ಜಡವನಾವ ಗಾಳಿಯೋ ಸೋಕೆ ||
ಬಲ ತೀವಿ ಚಲಿಪುದದು ಮಂಕುತಿಮ್ಮ||
ನಿದ್ರಿಸುತ್ತಿರ್ದಾಕೆ = ನಿದ್ರಿಸುತ್ತಿದ್ದ + ಆಕೆ/ ಸಂಸ್ಪರ್ಷದಿಂದೆದ್ದು = ಸಂಸ್ಪರ್ಶದಿಂದ + ಎದ್ದು/ ಚಲಿಸದೆನಿಸಿದ = ಚಲಿಸದು + ಎನಿಸಿದ / ಜಡವನಾವ = ಜಡವನು + ಆವ
ಶಿಲೆಯಾಗಿ = ಕಲ್ಲಾಗಿ/ ತಳದ = ಅಡಿಯ/ಸಂಸ್ಪರ್ಶದಿಂದ = ಸೋಕಿದ್ದರಿಂದ/ ಚಲಿಸದೆನಿಸಿದ = ಚಲಿಸದು ಎಂದು ಅನಿಸಿದ, ಜಡವ = ಆಚರವಾದದ್ದನ್ನು, ಬಲ ತೀವಿ = ಶಕ್ತಿವಂತವಾಗಿ, ಚಲಿಪುದದು = ಚಲಿಸುವುದದು.
ಶಾಪಗ್ರಸ್ತಳಾಗಿ, ಕಲ್ಲಾಗಿ ನಿದ್ರಿಸುತ್ತಿದ್ದ ಋಷಿಯ ಪತ್ನಿ ಅಹಲ್ಯೆ, ರಾಮನ ಪದ ಸೋಕಿ ಜೀವಂತವಾದಂತೆ, ಇದು ಚಲಿಸದು, ಇದು ಜಡ ಎಂದು ಯಾವುದು ಕರೆಯಲ್ಪಡುತ್ತದೋ ಅದು ಸತ್ವದ, ಚೈತನ್ಯದ, ಜೀವ ಶಕ್ತಿಯ ಸಂಸರ್ಗದಿಂದ, ಶಕ್ತಿಯನ್ನು ಪಡೆದು ಜೀವಂತವಾಗುತ್ತದೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾ ಹಿಂದೆಯೂ ವಿವರಿಸಿದಂತೆ ಈ ಜಗತ್ತು ಒಂದೇ ಮೂಲದಿಂದ ಪ್ರಕಟಗೊಂಡಿದೆ. ವಾಗರ್ಥಾವಿವ ಸಂಪ್ರುಕ್ತೌ ಎಂದು ಕಾಳಿದಾಸ ರಘುವಂಶಕಾವ್ಯವನ್ನು ಶುರುಮಾಡುತ್ತಾನೆ. ವಾಕ್ ಎಂದರೆ ಶಬ್ದ. ಅರ್ಥವೆಂದರೆ ಆ ಶಬ್ದಕ್ಕಿರುವ ಭಾವ. ಹೇಗೆ ಅವೆರಡೂ ಒಂದನ್ನಗಲಿ ಮತ್ತೊಂದಿರಲಾರದೋ, ಹಾಗೆಯೇ ಈ ಜಡ ಜೀವಗಳ ಸಂಬಂಧವೂ ಸಹ. ಕಲ್ಲಾಗಿದ್ದ ಅಹಲ್ಯೆ ರಾಮನ ಪದ ಸೋಕಿ ಎಂದಾಗ ಕಲ್ಲು ಎನ್ನುವುದು ಜಡವನ್ನೂ, ರಾಮ ಎನ್ನುವ ಪದವನ್ನು ಆ ಪರಮಾತ್ಮ ಚೈತನ್ಯವನ್ನೂ ಪ್ರತಿನಿಧಿಸುತ್ತದೆ. ಇವೆರಡರ ಸಂಸರ್ಗದಿಂದ ಅಹಲ್ಯೆ ಜೀವಂತವಾದಳು ಎಂದು ಉಲ್ಲೇಖವಿದೆ. ಇದು ಕೇವಲ ಒಂದು ದೃಷ್ಟಾಂತವಷ್ಟೇ!!.
ನಮಗೆ ಕಾಣುವ ಜಡ ಪದಾರ್ತಗಳೆಂದು ಪರಿಗಣಿಸಲ್ಪಟ್ಟ ಕಲ್ಲು ಬೆಟ್ಟ ಭೂಮಿ, ಎಲ್ಲದರಲ್ಲೂ ಆ ಚೈತನ್ಯ ಸುಪ್ತವಾಗಿದೆ. ಆ “”ಗಾಳಿಯೋ ಸೋಕೆ ಬಲ ತೀವಿ ಚಲಿಪುದದು ಎಂದಾಗ, ಜಡವಸ್ತುವಿಗೆ ಚೈತನ್ಯದ ಗಾಳಿ ಸೋಕಿದರೆ ಬಲ ತೀವಿ ಎಂದರೆ ಶಕ್ತಿಯನ್ನು ಪಡೆದುಕೊಂಡು ಚಲಿಸುತ್ತದೆ ಅಲ್ಲವೇ? ಮನೆಯಲ್ಲಿ ವಿಧ್ಯುತ್ ಉಂಟು, ಅದರ ಮೂಲದಿಂದ ಪ್ರಕಾಶಿಸಬೇಕಾದಬಲ್ಬ್ತನಕ ವಿಧ್ಯುತ್ ಪ್ರವಾಹವೂ ಉಂಟು. ಆದರೆ, ಆ ಬಲ್ಬ್ ಬೆಳಗಬೇಕಾದರೆ, ಸ್ವಿಚ್ ಒತ್ತಬೇಕು. ಗಾಳಿಯೋ ಸೋಕೆಒತ್ತಿದಾಗ, ಬೆಳಕು ಚೆಲ್ಲುತ್ತದೆ ಆ ಬಲ್ಬ್. ಪ್ರಕಾಶಿಸುವ ಸಾಮರ್ತ್ಯವಿದ್ದಾಗ್ಗ್ಯೂ ಮೂಲ ಚೈತನ್ಯದೊಡನೆ ಸಂಪರ್ಕ ಕಲ್ಪಿಸಬೇಕು ಆಗಲೇ ಅದು ಪ್ರಕಾಶಿಸುವುದು.
ಆದರೆ ಆ ಜಡ ಪೂರ್ಣ ರೂಪದಲ್ಲಿ ಸಮರ್ಥವಾಗಿರಬೇಕು. ತನ್ನ ಸ್ವಗುಣ ಸಾಮರ್ಥ್ಯವನ್ನು ಕಳೆದುಕೊಂಡಿದ್ದರೆ ಚೈತನ್ಯದ ಸಂಸರ್ಗ ಸಿಕ್ಕರೂ ಜೀವಂತವಾಗಲು, ಬೆಳಗಲು ಸಾಧ್ಯವೇ ಇಲ್ಲ. ನೋಡಿ ಒಂದು ಕಡಲೆ ಬೀಜವನ್ನು ನೆಲದಲ್ಲಿ ನೆಟ್ಟು ನೀರು ಹನಿಸಿದರೆ, ತನ್ನ ಸಾಮರ್ತ್ಯದಿಂದಲೇ, ಪ್ರಕೃತಿಯಲ್ಲಿನ ಜೀವ ಸತ್ವವನ್ನು ಹೀರಿ ತಾನು ಒಂದು ಜೀವಂತ ಸಸಿಯಾಗುತ್ತದೆ, ಫಲ ನೀಡುತ್ತದೆ. ಅದೇ ಬೀಜವನ್ನು ಹುರಿದುಬಿಟ್ಟರೆ ಅದು ತನ್ನ ಸಾಮರ್ತ್ಯವನ್ನು ಕಳೆದುಕೊಂಡು ನೆಲದಲ್ಲಿ ನೆಟ್ಟರೂ ನೀರು ಹನಿಸಿದರೂ ಮೊಳಕೆಯೊಡೆದು ಸಸಿಯಾಗಲು ಸಾಧ್ಯವೇ ಇಲ್ಲ. ಹಾಗಾಗಿ ಜಡಕ್ಕೂ ಚೈತನ್ಯವನ್ನು ಸ್ವೀಕರಿಸುವ ಗುಣವಿದ್ದರೆ ಅದು ಜೀವಂತವಾಗಲು ಸಾಧ್ಯ.
ನಾವೂ ಸಹ ಚೈತನ್ಯ ಸದೃಶವಾದ ಜ್ಞಾನವನ್ನು ಪಡೆಯಲು, ಸ್ವೀಕರಿಸುವ ಯೋಗ್ಯತೆಯನ್ನು ಉಳಿಸಿಕೊಂಡಿದ್ದರೆ, ಅಗಾಧ ಜ್ಞಾನ ಭಂಡಾರದಿಂದ ಏನನ್ನಾದರೂ ಸ್ವೀಕರಿಸಿ ನಮ್ಮ ಬುದ್ಧಿಶಕ್ತಿಯನ್ನು ಚಿಗುರಿಸಿ ಪಲ್ಲವಿಸಬಹುದು. ಅಂತಹ ಸ್ವೀಕಾರ ಗುಣಗಳನ್ನೆಲ್ಲ, ನಮ್ಮ ಸ್ವಾರ್ತ, ಅಹಂಕಾರ ಮುಂತಾದ ದುರ್ಗುಣಗಳ ಬೆಂಕಿಯಲ್ಲಿ ಸುಟ್ಟುಬಿಟ್ಟರೆ , ಜ್ಞಾನಬರುವುದು ಸಾಧ್ಯವೇ ಇಲ್ಲ. ಜಡವೂ ಜೀವವೂ ಸೇರಿದ್ದರೂ ಪ್ರಕಾಶಿಸುವುದೇ ಇಲ್ಲ, ಪಲ್ಲವಿಸುವುದೇ ಇಲ್ಲ. ಹಾಗಾಗಿ ನಾವು ಜಡ ಸ್ವರೂಪವನ್ನು(ಅಜ್ಞಾನವನ್ನು) ಶುದ್ಧಿ ಮಾಡಿಕೊಳ್ಳಬೇಕು. ಚೈತನ್ಯವನ್ನು ಬರಮಾಡಿಕೊಳ್ಳಲು ಅಣಿಯಾಗಿಸಿಟ್ಟುಕೊಂಡಿರಬೇಕು. ನಮ್ಮ ಸ್ವಾರ್ಥ ಅಹಂಕಾರ ಮುಂತಾದ ದುರ್ಗುಣಗಳನ್ನು ಧ್ಯಾನದ, ಅಧ್ಯಯನದ, ಜ್ಞಾನದ, ತಪಸ್ಸಿನ ಬೆಂಕಿಯಲ್ಲಿ ಸುಟ್ಟಾಗ, ಜ್ಞಾನ ಸ್ವೀಕಾರ ಗುಣಗಳು ಚುರುಕಾಗಿ, ನಮ್ಮ ರಿಸೀವರ್ ಶುದ್ಧವಾಗಿ, ಯೋಗ್ಯವಾಗಿ,ನಮ್ಮಲ್ಲೂ ಜಡ ಚೈತನ್ಯಗಳ ಸಮಾಗಮವಾಗಿ, ನಾವೂ ಸಹ ಪ್ರಕಾಸಿಸಬಹುದು, ಪಲ್ಲವಿಸಬಹುದು. ನಾವೂ ಸಹ ಅಂತಹ ಪ್ರಯತ್ನವನ್ನು ಮಾಡೋಣ.
ರಸಧಾರೆ - 110
ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು? |
ಕ್ರಿಮಿಗೆ ಹಸಿವುಂಟಿನಿತು ಬೆದಕಾಟಮುಂಟು ||
ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ |
ಕ್ರಿಮಿಪಂಕ್ತಿ ಕಿರಿದಹುದೆ ಮಂಕುತಿಮ್ಮ||
ಹಿರಿಮೆಯದೇನು = ಹಿರಿಮೆಯು ಅದೇನು ?/ ಹಸಿವುಂಟಿನಿತು = ಹಸಿವು + ಉಂಟು + ಇನಿತು/ ಬೆದಕಾಟಮುಂಟು = ಬೆದಕಾಟಂ + ಉಂಟು
ಹಿಮಗಿರಿಯ = ಹಿಮಾಲಯ ಪರ್ವತವನ್ನು/ ಕಂಡಂಗೆ = ಕಂಡವನಿಗೆ/ಅಮಿತ = ಮಿತಿಯಿಲ್ಲದ/ಕಿರಿದಹುದೆ = ಕಿರಿದಾಗುವುದೇ?
ಹಿಮಾಲಯ ಪರ್ವತವನ್ನು ಕಂಡವನಿಗೆ ಒಂದು ಸಣ್ಣ ಕ್ರಿಮಿ ಯಾವ ಲೆಕ್ಕ? ಆದರೆ ಕ್ರಿಮಿಗೆ ಸಂತತಿ ಉಂಟು, ಹಸಿವುಂಟು, ಬೆದಕಾಟವುಂಟು. ಹಿಮಾಲಯವು ಎಂದಿನಿಂದ ಇದೆಯೋ ಅಂದಿನಿಂದ ಕ್ರಿಮಿಯ ಅನಂತ ಸಂತತಿಯೂ ಉಂಟು. ಕ್ರಿಮಿಗಳು ಎಷ್ಟಿವೆಯೆಂದರೆ ಕ್ರಿಮಿ ಸಂತತಿಯನ್ನು ಒಟ್ಟು ಮಾಡಿದರೆ , ಅದು ಹಿಮಾಲಯಕ್ಕಿಂತ ದೊಡ್ಡದಾಗಬಹುದು. ಹಾಗಾಗಿ ಕ್ರಿಮಿ ಪಂಕ್ತಿ ಕಿರಿಯದಲ್ಲವೆಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ವಾಚಕರೆ ಜ್ಞಾನದಲ್ಲಿಯಾಗಲಿ, ಧನದಲ್ಲಿಯಾಗಲಿ, ಅಧಿಕಾರದಲ್ಲಿಯಾಗಲಿ ಉನ್ನತ ಸ್ಥಾನದಲ್ಲಿರುವವರಿಗೆ, ಕೆಳಗಿರುವವರು ಕ್ರಿಮಿಗಳಂತೆಯೇ ಕಾಣುತ್ತಾರೆ ಅಲ್ಲವೇ? ಹಾಗೆಯೇ, ಹಿಮಾಲಯ ಕಂಡವನಿಗೆ ಸಣ್ಣ ಕ್ರಿಮಿ,ಬಹಳ ಚಿಕ್ಕದಾಗಿ ಕಾಣಬಹುದು. ಆದರೆ ಹಿಮಾಲಯಕ್ಕೆ ಅದರ ಸ್ಥಾನ ಅದಕ್ಕಿದ್ದರೆ,ಸಣ್ಣ ಕ್ರಿಮಿಗೂ ಅದರದೇ ಒಂದು ಸ್ಥಾನವುಂಟು. ಮೊದಲಿಂದಲೂ ದೊಡ್ಡವರು ಮತ್ತು ಸಣ್ಣವರು ಇವೆರಡೂ ರೀತಿಯ ಜನ ಯುಗಯುಗಾಂತರದಲ್ಲೂ ಇದ್ದರು ಮತ್ತು ಮುಂದೆಯೂ ಇರುತ್ತಾರೆ.
ಇಲ್ಲಿ ನಾವು ಜ್ಞಾನದಲ್ಲಿ ಆಧಿಕ್ಯವನ್ನು ಪಡೆದವರನ್ನು, ಹಿಮಾಲಯಕ್ಕೆ ಹೋಲಿಸಿದ್ದಾರೆ ಎಂದು ನೋಡಿದರೆ, ಸಾಮಾನ್ಯ ಜ್ಞಾನದ ಪ್ರಾಪ್ತಿಯಾಗದವರನ್ನು ಕ್ರಿಮಿಗಳಿಗೆ ಹೋಲಿಸಿದ್ದಾರೆ ಎಂದು ತಿಳಿಯಬಹುದು. ಹಾಗೆ ಯೋಚಿಸಿದರೆ ಜ್ಞಾನಿಗಳಿಗೆ ಸ್ಥಿರ ಚಿಂತನೆ ಇದ್ದರೆ ಸಾಮಾನ್ಯ ಮಾನವರ ಮನಸ್ಸಿನಲ್ಲಿ ಇನ್ನೂ ಜ್ಞಾನದ ಹಸಿವೆ ಇರುತ್ತದೆ. ಜೀವನದಲ್ಲಿ ತೊಳಲಾಟವಿರುತ್ತದೆ,ಬೆದಕಾಟವಿರುತ್ತದೆ
ಈ ಜಗತ್ತಿನಲ್ಲಿ ಆ ಪರಮಾತ್ಮನ ಸೃಷ್ಟಿಯಲ್ಲಿ ಎಲ್ಲವೂ ಇದೆ. ಅವನ ಪ್ರತಿ ಸೃಷ್ಟಿಗೂ ಅವನದೇ ಆದ ಕಾರಣವುಂಟು. ನಮಗದು ಅರ್ಥವಾಗದೆ ನಮ್ಮದೇ ಆದ ವ್ಯಾಖ್ಯಾನವನ್ನು ಕೊಡುತ್ತಾ, ನಮ್ಮ ವ್ಯಾಖ್ಯಾನದ ಬಗ್ಗೆ ನಮಗೆ ನಾವೇ ತೃಪ್ತಿಪಟ್ಟುಕೊಳ್ಳುತ್ತಿರುತ್ತೇವೆ. ಈ ಜಗತ್ತಿನಲ್ಲಿ ಮಾನವನ ಸೃಷ್ಟಿಗೆ ಎಷ್ಟು ಮಹತ್ವವಿದೆಯೋ, ಒಂದು ಆನೆಯ ಸೃಷ್ಟಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಒಂದು ಸಣ್ಣ ಕ್ರಿಮಿಯ ಸೃಷ್ಟಿಗೂ ಮಹತ್ವವಿದೆ. ಅದನ್ನು ಅರಿಯುವುದೇ ಶುಧ್ಧ ಜ್ಞಾನ. ಯಾವುದನ್ನೂ ಇದು ಮೇಲು, ಇದು ಕೀಳು ಎಂದು ಪರಿಗಣಿಸುವ ಮತ್ತು ಬೇಧ ಭಾವ ಮಾಡುವುದು ಅಜ್ಞಾನ. ಅಜ್ಞಾನವಷ್ಟೇ ಅಲ್ಲ, ಅದು ಅಸಹ್ಯಾಪಚಾರವೆಂದು ಭಗವದ್ ರಾಮಾನುಜಾಚಾರ್ಯರು ಭಾಗವದಪಚಾರ, ಭಗವದಪಚಾರಗಳೆಂದು ೫ ವಿಧವಾದ ಅಪಚಾರಗಳನ್ನು ಹೇಳುವಾಗ, ಉಲ್ಲೇಖಿಸುತ್ತಾರೆ ಭಗವಂತನ ಸೃಷ್ಟಿಯ ಕಾರಣವನ್ನು ಮತ್ತು ಅವನ ಇಚ್ಚೆಯನ್ನೇ ಪ್ರಶ್ನಿಸಿದಂತೆ, ವಿಮರ್ಶೆಮಾಡಿದಂತೆ ಆಗುತ್ತದಲ್ಲವೇ? ಇದು ಅಪಚಾರ. ಹಾಗೆಯೇ ಜ್ಞಾನಿಯಾದವನು, ಉನ್ನತ ಅಧಿಕಾರದಲ್ಲಿರುವವನು, ಮತ್ತು ಧನಾಧಿಕ್ಯನು, ತಮಗಿಂತ ಕೆಳಗಿರುವವವರಲ್ಲಿ, ಪ್ರೀತಿಯಿಂದ, ಕರುಣೆಯಿಂದ ಇರಬೇಕೆ ಹೊರತು, ಅಹಂಕಾರವನ್ನು ತೋರಿದರೆ, ಅದು ಅವರಿಗೆ ಮಾಡುವ ಅಪಚಾರವಷ್ಟೇ ಅಲ್ಲ, ಅದು ಪರಮಾತ್ಮನಿಗೆ ಮಾಡಿದ ಅಪಚಾರವೆಂದೆ ಪರಿಗಣಿಸಬೇಕು.
ಅಂತಹ ಅಪಚಾರವನ್ನು ನಾವು ಮಾಡದೆ, ಆ ಪರಮಾತ್ಮನ ಸೃಷ್ಟಿಯ ಎಲ್ಲವನ್ನೂ ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಆ ಪ್ರಯತ್ನವನ್ನು ನಾವೂ ಮಾಡೋಣವೆ?
ರಸಧಾರೆ - 111
ಜಡವೆಂಬುದೇನು?ಸೃಷ್ಟಿಯಲಿ ಚೇತನ
ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ ||
ಮಿಡಿಯೆ ಪರಸತ್ವವಿದ್ಯುದ್ದೀಪ್ತಿಯದನಾಗ |
ನಡೆವುದದು ಜೀವಿವೊಲು ಮಂಕುತಿಮ್ಮ ||
ಜಡವೆಂಬುದೇನು = ಜಡವು + ಎಂಬುದು + ಅದು + ಏನು | ನಿದ್ರಿಪುದಲ್ಲಿ = ನಿದ್ರಿಪುದು + ಅಲ್ಲಿ | ಚೈತನ್ಯದಗ್ನಿ = ಚೈತನ್ಯದ + ಅಗ್ನಿ | ಪರಸತ್ವವಿದ್ಯುದ್ದೀಪ್ತಿಯದನಾಗ = ಪರಸತ್ವ + ವಿದ್ಯುತ್ + ದೀಪ್ತಿ + ಅದನು + ಆಗ | ನಡೆವುದದು = ನಡೆವುದು + ಅದು |
ಸುಪ್ತಿ = ಸುಪ್ತವಾಗಿರುವುದು | ಚೈತನ್ಯದಗ್ನಿ = ಜೀವ ತೇಜಸ್ಸು | ಮಿಡಿಯೆ = ಓಡಾಡಿದರೆ | ಪರಸತ್ವ = ಪರಮಾತ್ಮ ಸತ್ವ | ಜೀವಿವೊಲು = ಜೀವಿಯಂತೆ
ಒಂದೇ ಮೂಲದಿಂದ ಹೊರಟ ಎರಡು ವಸ್ತುಗಳು. ಒಂದು ಜಡ ಇನ್ನೊಂದು ಚೇತನ. ಅದರ ಅಸ್ಥಿತ್ವಕ್ಕೆ ಕಾರಣವೇ ಬೃಹಚ್ಚೇತನ. ಸೃಷ್ಟಿಯ ಆದಿಯಲ್ಲಿ ಆ ಚೇತನದ ವ್ಯಾಪಕತೆಯ ಸ್ವರೂಪವೇ ಬೇರೆ. ಕೋಟ್ಯಾಂತರ ವರ್ಷಗಳಿಂದ ಬದಲಾಗುತ್ತಾ ಬರುತ್ತಿದೆ. ಮೊದಲು ಪಂಚಭೂತಗಳಲ್ಲಿ ಮಾತ್ರ ಇದ್ದದ್ದು ಕಾಲಾನುಕಾಲಕ್ಕೆ ಗಿಡಮರಗಳಲ್ಲಿ ತದನಂತರ ಕ್ರಿಮಿ ಕೀಟಗಳಲ್ಲಿ, ನಂತರ ಪ್ರಾಣಿಗಳಲ್ಲಿ ಹೀಗೆ ಎಲ್ಲದರ ಅಸ್ಥಿತ್ವಕ್ಕೆ ಕಾರಣವಾದ ಚೇತನವು ತನ್ನ ಶರೀರವನ್ನು ರೂಪಾಂತರಗೊಳಿಸುತ್ತಾ ಹೋಯಿತು. ಅಕಾಶಾದ್ವಾಯು: ವಾಯೋರಗ್ನಿ: ಅಗ್ನೇರಾಪಃ ಅದ್ಭ್ಯಃ ಪೃಥಿವೀ ಪೃತಿವ್ಯಾ ಓಷದಯಃ ಒಷದೀಭ್ಯೋನ್ನಂ ಅನ್ನಾತ್ ಪುರುಷಃ ಹೀಗೆ ಚೇತನವು ತನ್ನ ಇರುವಿಕೆಯನ್ನು ಎಲ್ಲೆಡೆ ತೋರಿಸುತ್ತಾ ಜೀವಗಳಲ್ಲಿ ಚೇತನ ಸ್ವರೂಪದಿಂದ ಪುರುಷನೆಂದು ಕರೆಯಲ್ಪಡುತ್ತಾ ಪೌರುಷದಿಂದ ಮೆರೆದಿದೆ.
ಈ ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿದಂತೆ ಜಡವೆಂದರೆ ಚಲನೆ ಇಲ್ಲದ ವಸ್ತು. ಅದರಲ್ಲಿಯೂ ಚೈತನ್ಯವಿದೆ. ಆದರೆ ಆ ಚೈತನ್ಯಾಗ್ನಿ ನಿದ್ರಿಸುತ್ತಿದೆ ಎಂದರೆ ಸುಪ್ತವಾಗಿದೆ. ನಿದ್ರಿಸುತ್ತಿರುವ ಆ ಅಗ್ನಿಯ ಕಿಡಿ ಸಿಡಿದು ಮಿಡುಕಿದರೆ ಅದು ಜೀವಿಯಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಹಾಗೆಯೇ ಪ್ರತಿಜೀವಿಯೂ ಜ್ಞಾನಸ್ವರೂಪನೆ. ಆದರೆ ಆ ಜ್ಞಾನವು ಸುಪ್ತವಾಗಿದೆ. ಜ್ಞಾನದ ಕನ್ನಡಿಯ ಮೇಲೆ ಧೂಳಿನ ಪೊರೆ ಕವಿದಿದೆ. ಅದನ್ನು ಒರೆಸಿ ಶುದ್ಧಿಮಾಡಿದರೆ, ಕನ್ನಡಿಯು ಫಳ ಫಳನೇ ಹೊಳೆದು ಜ್ಞಾನ ಅಂದರೆ ಬೆಳಕನ್ನು ಹೊರಸೂಸುತ್ತದೆ. ಜ್ಞಾನ ಕವಿದಿರುವ ತನಕ ಜಡವಾಗಿದ್ದು, ಶುದ್ಧವಾದೊಡನೆ, ಚೈತನ್ಯದಿಂದ ಕೂಡಿದಂತಾಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು ಪರಸತ್ವವಿದ್ಯುದ್ದೀಪ್ತಿಯದನಾಗ” “ನಡೆವುದದು ಜೀವಿವೊಲು ಎಂದಿದ್ದಾರೆ. ಜ್ಞಾನದ ಸಂಸಂರ್ಗದಿಂದ ಜಡವಾಗಿರುವ ನಮ್ಮ ಜೀವನವು ಚೈತನ್ಯದಾಯಕವಾಗುತ್ತದೆ ಎನ್ನುವುದೇ ಈ ಕಗ್ಗದ ಹೂರಣ.
ವಾಚಕರೆ ನಾವೂ ಸಹ ನಮ್ಮ ಕನ್ನಡಿಗಳನ್ನು ಒರೆಸಿ ಶುದ್ಧಿಮಾಡಿಕೊಳ್ಳಬೇಕು. ನಾವೂ ಸಹ ಚೈತನ್ಯಪೂರಿತರಾಗಿ ಪ್ರಜ್ವಲಿಸಬೇಕು. ಅಂತಹ ಪ್ರಯತ್ನವನ್ನು ನಾವು ಮಾಡೋಣವೆ?
ರಸಧಾರೆ - 112
ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿ ಕಣ |
ಸ್ಥಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ||
ಶಮದ ಸುಂದರದ, ಸಾತ್ವಿಕದ ಗಾಂಭೀರ್ಯವದು |
ನಮಗೊಂದು ವೇದ ನಿಧಿ ಮಂಕುತಿಮ್ಮ.||
ಹಿಮಗಿರಿಯೊಳವಿತಿಹುದು = ಹಿಮಗಿರಿಯೊಳು + ಅವಿತಿಹುದು | ಚೈತನ್ಯದಗ್ನಿ = ಚೈತಯದ ಅಗ್ನಿ | ನಿಂತಿರ್ಪುದದು = ನಿಂತಿರುವುದು + ಅದು | ಗಾಂಭೀರ್ಯವದು = ಗಾಂಭೀರ್ಯವು + ಅದು
ಬೃಹತ್ತಾದ ಹಿಮಾಲಯ ಪರ್ವತದ ಗರ್ಭದಲ್ಲೂ ಸಹ ಒಂದು ಚೈತನ್ಯದ ಅಗ್ನಿ ಅಡಗಿದೆ. ಅದು ಸ್ಥಿರವಾಗಿ, ಸ್ಥಿಮಿತದಿಂದ, ನಿಂತಿದೆ. ಈ ಭೂಮಿಯನ್ನು ಕಾಪಾಡುವುದಕ್ಕಾಗಿಯೇ!! ಶಾಂತ, ಸುಂದರ ಮತ್ತು ಸಾತ್ವಿಕ ಗಾಂಭೀರ್ಯದ ನಿಲುವಿನಲ್ಲಿ ನಿಂತಿರುವ ಆ ಹಿಮಾಲಯವು ನಮಗೆ ಜ್ಞಾನದ ಪ್ರತೀಕವಾಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಆದರೆ ಆ ಚೈತನ್ಯದ ಅಗ್ನಿ ಸುಪ್ತವಾಗಿದೆ. ತಿಬ್ಬೆಟ್ಟಿನ ಆ ಭಾಗದಲ್ಲಿ ಒಂದೆರಡು ಅಗ್ನಿಪರ್ವತಗಳಿರಬಹುದು. ಆದರೆ ಒಂದು ನೂರು ವರ್ಷಗಳಿಂದ ಅದು ಸಿಡಿದ ದಾಖಲೆಯಿಲ್ಲ. ಅಂದರೆ ಸುಪ್ತವಾಗಿದೆ. ಅದು ಸುಪ್ತವಾಗಿರುವುದರಿಂದ, ಭೂಮಿಯ ಈ ಭೂ ಬಾಗ ಸ್ವಸ್ಥವಾಗಿದೆ, ಎನ್ನುವುದೂ ಸತ್ಯ.
ಹಿಮಾಲಯ ಒಬ್ಬ ಜ್ಞಾನಿ ಸ್ಥಿತಪ್ರಜ್ಞನಂತೆ, ಧೀಮಂತನಂತೆ ನಿಂತಿದೆ. ಅದು ಶಾಂತವಾಗಿದೆ. ಅದನ್ನು ಕಂಡವರಿಗೂ ಮನಸ್ಸಿನಲ್ಲಿ ಶಾಂತಿಯಡರಿ ಮನಸ್ಸು ಪ್ರಶಾಂತವಾಗುತ್ತದೆ. ಅದರ ಸೌಂದರ್ಯವನ್ನು ಬಣ್ಣಿಸಲಸಾಧ್ಯ. ಗಾಂಭೀರ್ಯವೇ ಮೂರ್ತವೆತ್ತಂತೆ ನಿಂತಿದೆ. ಅದು ದೇವತೆಗಳ ವಾಸಸ್ಥಾನ. ಹಿಮಾಲಯವನ್ನು ವರ್ಣಿಸಿದ ಕಾವ್ಯಗಳು, ಪುರಾಣಗಳು, ನಮ್ಮಲ್ಲಿ ವಿಫುಲ. ಪರಶಿವನ ಆವಾಸ ಸ್ಥಾನ. ಎಲ್ಲ ದೇವತೆಗಳ, ಯಕ್ಷರ, ಕಿನ್ನರರ, ಕಿಂಪುರುಷರ ವಾಸದ ಮನೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿರುವ ಎಲ್ಲ ಋಷಿ ಮುನಿಗಳ ತಪೋಧ್ಯಾನ. ಎಲ್ಲ ಋಷಿ ಮುನಿಗಳಿಗೂ ತಪಸ್ಸಿಗೆ ಸೂಕ್ತ ತಾಣ ಹಿಮಾಲಯ. ಅವರಲ್ಲಿ, ವಸಿಷ್ಠ, ಗೌತಮ, ವಿಶ್ವಾಮಿತ್ರ, ಮುಂತಾದವರು ಪ್ರಮುಖರು. ಹಿಮಾಲಯವು ನಮ್ಮ ಭಾರತೀಯ ವೇದ ಸಂಸ್ಕೃತಿಯ ಉಗಮಸ್ಥಾನ. ಭಾರತೀಯ ಸಂಸ್ಕೃತಿಯ ಜ್ಞಾನದ ಅಗ್ನಿಗೆ ನಮ್ಮ ಹಿಮಾಲಯವೇ ಮೂಲವೆಂದರೆ ತಪ್ಪಾಗಲಾರದು. ಹಿಮಾಲಯವನ್ನು ಬಣ್ಣಿಸಲು ಹೋದರೆ ನಮ್ಮ ಪದಗಳು ಪೇಲವಗೊಂಡಾವು.
ನಮ್ಮಲ್ಲೂ ಅಂತಹ ಹಿಮಾಲಯ ಸದೃಶರಾದ ಜ್ಞಾನಿಗಳು ಇದ್ದಾರೆ. ಸತ್ಯ ಸ್ವರೂಪದ ಜ್ಞಾನಿಗಳು. ಜ್ಞಾನಾಗ್ನಿ ಕುಂಡಗಳಂತೆ, ಜ್ಞಾನದ ಬೆಳಕು ಅವರಲ್ಲಿ ತುಂಬಿದ್ದರೂ ತುಳುಕದೆ, “ಸ್ಥಿಮಿತದಿಂ ನಿಂತಿರ್ಪುದದು ಧರೆಯ ಹಿತಕೆಎಂಬಂತೆ, ಸ್ಥಿಮಿತದಿಂದ ಶಾಂತವಾಗಿ, ಗಂಭೀರವಾಗಿ, ಜ್ಞಾನ ಸ್ವರೂಪರಾಗಿ ನಮ್ಮ ಸುತ್ತು ಮುತ್ತಲಿನ ಸಮಾಜದಲ್ಲಿ ಇದ್ದಾರೆ. ಶುದ್ಧ ಕುತೂಹಲದಿಂದ, ಜ್ಞಾನ ಪಿಪಾಸುಗಳಿಗೆ, ಅವರು ಸತ್ಯವಾಗಲೂ ವೇದ ನಿಧಿಗಳಂತೆ ಇದ್ದಾರೆ. ಅಂತಹವರು ಸಿಕ್ಕರೆ ಅವರಿಂದ ಜ್ಞಾನ ಪಡೆಯುವ ಪ್ರಯತ್ನ ಮಾಡಬೇಕು. ಹಿಮಾಲಯ ಸದೃಶರಾದ ಅವರ ಕಾಲಿಗೆರಗಿ, ನಮಸ್ಕರಿಸಿ, ಜಿಜ್ಞಾಸೆಯಿಂದ, ಅವರಿಂದ ಜ್ಞಾನ ಪಡೆಯುವ ಪ್ರಯತ್ನ ಮಾಡಬೇಕು. ಅವರಿಂದ ಸಿಡಿಯುವ ಜ್ಞಾನಾಗ್ನಿ ಕಿಡಿಗಳನ್ನು ಗ್ರಹಿಸಿ, ನಮ್ಮ ಮನಸ್ಸು, ಬುದ್ಧಿಗಳನ್ನು ಪ್ರಜ್ವಲಿಸಿಕೊಳ್ಳಬೇಕು. ಅಂತಹ ಜ್ಞಾನಿಗಳು ಹಿಮಾಲಯ ಸದೃಶರಾಗಿರುವುದರಿಂದಲೇ, ಇಂದಿಗೂ ಸಮಾಜದಲ್ಲಿ ಹಲ ಕೆಲವರಾದರೂ
ಸಜ್ಜನರಾಗಿ ರೂಪುಗೊಳ್ಳುತ್ತಿದ್ದಾರೆ. ಇಂತಹ ಜ್ಞಾನಿಗಳು, ಹಿಮಾಲಯವು ಈ ಭೂ ಭಾಗಕ್ಕೆ ಎಷ್ಟು ಹಿತವನ್ನುಂಟುಮಾಡುತ್ತಿದೆಯೋ, ಅಷ್ಟೇ ಹಿತವನ್ನು ಈ ಸಮಾಜಕ್ಕೆ ಮಾಡುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ, ಇಂದು ಇವತ್ತಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅಂತಹವರ ಅಭಿಪ್ರಾಯಗಳಿಗೆ ಬೆಲೆಯಿಲ್ಲದೆ, ನಮ್ಮ ಸಮಾಜ ಅಧೋಗತಿಯ ಮಾರ್ಗವನ್ನು ತುಳಿಯುತ್ತಿದೆ.
ಎಂದು ಅಂತಹ ಜ್ಞಾನಿಗಳ, ಧರ್ಮಾಧಾರಿತ ವಿವೇಕವನ್ನು ಸಮಾಜ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತದೋ, ಅಂದು ನಮಗೆಲ್ಲಾ ಒಳಿತು. ಅಂತಹಾ ಸುದಿನ ಬರಲೆಂದು ಆಶಿಸುತ್ತಾ.
ರಸಧಾರೆ - 113
ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ |
ಗುಣಿಸುವನು ಭೂತಶಕ್ತಿಗಳನದರಿಂದೇಂ ||
ಗಣಿತಸಾಧ್ಯದ ಹಿಂದಗಣ್ಯದ ಮಹತತ್ವ |
ವಣಗಿಹುದು ಮೂಲವದು ಮಂಕುತಿಮ್ಮ||
ಅಣುಸಂಖ್ಯೆಯೆಣಿಸುವನು = ಅಣುಸಂಖ್ಯೆಯನು + ಎಣಿಸುವನು | ಭೂತಶಕ್ತಿಗಳನದರಿಂದೇಂ = ಭೂತ + ಶಕ್ತಿಗಳನು + ಅದರಿಂದ + ಏನು| ಗಣಿತಸಾಧ್ಯದ = ಗಣಿತ + ಸಾಧ್ಯದ | ಹಿಂದಗಣ್ಯದ = ಹಿಂದೆ + ಅಗಣ್ಯದ | ಮಹತತ್ವವಣಗಿಹುದು = ಮಹತತ್ವವವು + ಅನಗಿಹುದು | ಮೂಲವದು = ಮೂಲವು + ಅದು.
ಈ ಜಗತ್ತಿನ ಅತಿ ಸೂಕ್ಷ್ಮ ಜೀವಿ ಅಣುಗಳನ್ನು ವಿಜ್ಞಾನಿ ಲೆಕ್ಕ ಹಾಕಿಬಿಡಬಹುದು. ಭೌತಿಕ ಶಕ್ತಿಯನ್ನು ಗುಣಿಸಿ ಭಾಗಿಸಿ ಲೆಕ್ಕಹಾಕಿಬಿಡಬಹುದು. ಆದರೆ ಅದರಿಂದ ಏನು ಪ್ರಯೋಜನ. ಕೇವಲ ಭೌತಿಕ ರೂಪವಷ್ಟೇ ತಿಳಿಯುವುದು. ಈ ಗಣಿತ ಶಾಸ್ತ್ರಕ್ಕೂ ಮೀರಿ ಒಂದು ಮಹತತ್ವವು ಭೌತಿಕ ಶರೀರದೊಳಗೆ ಚೈತನ್ಯ ರೂಪದಲಿ ಅಡಗಿದೆ. ಅದೇ ಮೂಲ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ವಿಜ್ಞಾನಿಗಳ ವೈಜ್ಞಾನಿಕ ಪ್ರಯೋಗಗಳ, ಅವುಗಳ ಫಲಿತಾಂಶಗಳ ಮತ್ತು ಅವುಗಳ ತಾತ್ಕಾಲಿಕತೆಯ ಬಗ್ಗೆ ನಾವು ಬಹಳಷ್ಟು ಓದಿದ್ದೇವೆ ಮತ್ತು ಬರೆದಿದ್ದೇವೆ. ವಿಜ್ಞಾನಗಳು ಕೇವಲ ಭೌತಿಕ ವಿಷಯಗಳನ್ನಷ್ಟೇ ಲೆಕ್ಕಹಾಕಬಲ್ಲರು. ಆದರೆ ಈ ಭೌತಿಕವನ್ನು ಉಂಟುಮಾಡಿದ, ಸಲುಹುತ್ತಿರುವ ಆ ಮಹಾ ಶಕ್ತಿಯು ಅವರ ಲೆಕ್ಕಗಳ ಹಿಡಿತಕ್ಕೆ ಇನ್ನೂ ಸಿಕ್ಕಿಲ್ಲ ಅಲ್ಲವೇ? ಅದು ಸಿಗುವುದೂ ಇಲ್ಲ. ಪ್ರತಿ ನಿತ್ಯ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ, ನಮಗೆಲ್ಲ ಒಂದು ವಿಸ್ಮಯವನ್ನು ತೋರುವ ಆ ಶಕ್ತಿ ಲೆಕ್ಕಾಚಾರದ ಹಿಡಿತಕ್ಕೆ ಸಿಕ್ಕಲು ಸಾಧ್ಯವೇ ಇಲ್ಲ.
ಅದು ಪರತತ್ವ, ಪರಮಾತ್ಮ ತತ್ವ ಮತ್ತು ಸತ್ವ. ಭೌತಿಕ ಶರೀರಗಳ ಚಲನೆಗೆ ಇಂಬುಕೊಡುವ ಸತ್ವ. ಅದು ಎಲ್ಲಿದೆ, ಎಲ್ಲಿಂದ ಬರುತ್ತದೆ, ಹೇಗೆ ಕಾರ್ಯಮಾಡುತ್ತದೆ, ಎನ್ನುವುದೇ ಒಂದು ವಿಸ್ಮಯ. ನೋಡಿ ಒಂದು ಬತ್ತದ ಬೀಜ ನೆಟ್ಟರೆ, ಮೊಳೆತು, ಸಸಿಯಾಗಿ, ತೆನೆಯೊಡೆಯುತ್ತದೆ. ಆದರೆ ಆ ತೆನೆಯಾಗಲು ಆ ಬೀಜ ಮತ್ತು ಆ ಸಸಿ, ಸತ್ವವನ್ನು, ಪ್ರಕೃತಿಯಿಂದ ಹೇಗೆ ಸೆಳೆದುಕೊಂಡಿತು ಎನ್ನುವುದು ಒಂದು ವಿಸ್ಮಯ. ಅದೇ ಪರಮಾತ್ವ ತತ್ವ. ಆ ಸಸಿಯ ತೆನೆಯಲ್ಲಿನ ಕಾಳುಗಳನ್ನು ಎಣಿಸಿಬಿಡಬಹುದು. ಆದರೆ ಆ ತೆನೆಯಲ್ಲಿ ಅಷ್ಟೇ ಕಾಳುಗಳು ಹೇಗೆ ಮತ್ತು ಏಕೆ ಆದವು ಎಂದು ವಿಜ್ಞಾನಿಗಳು ಹೇಳಬಲ್ಲರೆ ಅಥವಾ ಒಂದು ಸಸಿಯನ್ನು ನೋಡಿ ಅದರಲ್ಲಿ, ಇಷ್ಟೇ ಕಾಳುಗಳಾಗುವುವು ಎಂದು ವಿಜ್ಞಾನಿಗಳು ಹೇಳಬಲ್ಲರೆ ? ಹಾಗೆ ಹೇಳಲಾಗದಂತ ಶಕ್ತಿಯೇ ಪರಮಾತ್ಮ ಶಕ್ತಿ. ಹೀಗೆಯೇ ಭವತಿ ಇತಿ ಭೂತಃ ಎಂಬ ಅರ್ಥದಲ್ಲಿ ಈ ಜಗತ್ತಿನಲ್ಲಿರುವ ಎಲ್ಲ ಭೂತಗಳಲ್ಲೂ ಇರುವುದೇ ಆ ಪರಮಾತ್ಮ ಶಕ್ತಿ. ಮಾನವನ ಲೆಕ್ಕಾಚಾರಕ್ಕೆ ಎಟುಕದ್ದು. ಇದು ಕೇವಲ ಅನುಭವವೇಧ್ಯ.
ಅಂತಹ ಅನುಭವಕ್ಕೆ ಮಾತ್ರ ಸಿಗಬಹುದಾದ ಮತ್ತು ಸಕಲ ಜೀವರಾಶಿಗಳ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕಾರಣವಾದ, ಚೈತನ್ಯ ಸ್ವರೂಪವಾದ ಆ ಪರಮಾತ್ಮ ಶಕ್ತಿಯೇ ಎಲ್ಲೇ ಜೀವರಾಶಿಗಳಲ್ಲೂ ಇದೆ ಎಂಬುದೇ ಈ ಕಗ್ಗದ ಹೂರಣ.
ರಸಧಾರೆ - 114
ಸೃಷ್ಟಿರೂಪಂಗಳವತಾರದೋಳ್ ಕ್ರಮ ಲಕ್ಷ್ಯ |
ಪುಷ್ಪವಾಗಿರ್ದೊಡೇನಿಲ್ಲ ದೊಡದೇನು ||
ಶಿಷ್ಟಮಾದುದು ಸತ್ವವದನು ಸೋಕದು ರೂಪ |
ದೃಷ್ಟಿ ಸತ್ವದೊಳಿರಲಿ ಮಂಕುತಿಮ್ಮ ||
ಸೃಷ್ಟಿರೂಪಂಗಳವತಾರದೋಳ್ = ಸೃಷ್ಟಿ+ರೂಪಂಗಳ + ಅವತಾರದೋಳ್ / ಪುಷ್ಪವಾಗಿರ್ದೊಡೇನಿಲ್ಲ ದೊಡದೇ= ಪುಷ್ಪವಾಗಿ + ಇರ್ದೊಡೇನು + ಇಲ್ಲದೊಡೆ + ಅದೇನು / ಶಿಷ್ಟಮಾದುದು = ಶಿಷ್ಟಂ + ಆದುದು / ಸತ್ವವದನು = ಸತ್ವವು ಅದನು / ಸತ್ವದೊಳಿರಲಿ = ಸತ್ವದೊಳು ಇರಲಿ.
ಈ ಜಗತ್ತಿನ ಸೃಷ್ಟಿಯಲ್ಲಿ ಎಲ್ಲವೂ ಆ ಪರಮಾತ್ಮನ ಅವತಾರವೆಂದು ನಾವು ನಂಬಿದ್ದೇವೆ. ಆದರೆ ಇಡೀ ಸೃಷ್ಟಿಯಲ್ಲಿ ಒಂದು ಕ್ರಮವಿದ್ದರೆಷ್ಟು ಅಥವಾ ಇಲ್ಲದಿದ್ದರೆಷ್ಟು. ಹೊರ ರೂಪ ಶಿಷ್ಟವೋ ಅಲ್ಲವೋ ಆದರೆ ಅಂತರ್ಯದಲ್ಲಿರುವ ಆ ಪರಮಾತ್ಮ ತತ್ವವು ಹೊರರೂಪಗಳಿಗೆ ಅತೀತವಾಗಿ ವಿಕಾರಗೊಳ್ಳುವುದಿಲ್ಲ. ಹಾಗಾಗಿ ನಾವು ನಮ್ಮ ದೃಷ್ಟಿಯನ್ನು ಆ ಪರತತ್ವದಲ್ಲಿ ಕೇಂದ್ರೀಕರಿಸಬೇಕು ಎನ್ನುವುದೇ ಈ ಕಗ್ಗದ ಹೂರಣ.
ಒಂದು ಮಹಾ ಶಕ್ತಿ ಕೋಟಿ ಕೋಟಿ ವರ್ಷಗಳ ಹಿಂದೆ ತನ್ನಿಚ್ಚೆಯಂತೆ, ತನ್ನಿಂದಲೇ, ಎಲ್ಲವನ್ನೂ ಆಗ ಮಾಡಿತು. ಅದನ್ನೇ ನಾವು ಪರಮಾತ್ಮ ಶಕ್ತಿಯಂದು ಕರೆಯುತ್ತೇವೆ. ಎರಡಾಗಿ ಪ್ರಕಟವಾಯ್ತು. ಒಂದು ಬಾಹ್ಯ ರೂಪ, ಎರಡು ಅಂತರ್ಯದ ಚೇತನ. ಬಾಹ್ಯ ರೂಪಗಳು ಕೋಟಿ ವಿಧ ಆದರೆ ಅಂತರ್ಯದ ಚೇತನ ಒಂದೇ. ಪ್ರಾಣಿಗಳು, ಪಕ್ಷಿಗಳು, ಕೀಟಗಳು, ಗಿಡಮರಗಳು, ಜಲಚರಗಳು, ಹೀಗೆ ಎಷ್ಟೊಂದು ವಿಧ ಆದರೆ ಅವೆಲ್ಲರ ಅಸ್ತಿತ್ವಕ್ಕೆ ಮತ್ತು ಜೀವನಕ್ಕೆ ಪೂರಕವಾದ ಶಕ್ತಿ ಒಂದೇ. ಅದಕ್ಕೆ ರೂಪವೇ ಇಲ್ಲ. ಅಥವಾ ಎಲ್ಲರೂಪಗಳೂ ಅದೇ ಎಂದರೂ ಸರಿಯಾಗಬಹುದು. ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈಎಂದು ಅನ್ನಮಾಚಾರ್ಯರ ಹಾಡು. ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ, ಎಲ್ಲಾರ ರೂಪವೂ ತಾನೇ ಆಗಿಎಂದು. ಎಲ್ಲಕ್ಕೂ ಬಲ ಎಲ್ಲದರಲ್ಲೂ ವ್ಯಾಪಕವಾಗಿರುವವನೆ ಆ ಪರಮಾತ್ಮ ಎಂದು ಕನ್ನಡದ ಆದಿಕವಿ ಪುರಂದರ ದಾಸರೂ ಹೇಳುತ್ತಾರೆ. ಹೊರ ರೂಪಗಳು ಒಂದೇ ಸಮನಾಗಿಲ್ಲದೆ, ಕೆಲವು ಸುಂದರವಾಗಿ, ಕೆಲವು ಕುರೂಪವಾಗಿ, ಕೆಲವು ಅತೀ ಸೂಕ್ಷ್ಮವಾಗಿ, ಕೆಲವು ಬೃಹತ್ತಾಗಿ, ಹೀಗೆ ಸಾವಿರಾರು ವೈವಿಧ್ಯತೆಗಳನ್ನು ಹೊಂದಿದ್ದರೂ ಶಿಷ್ಟವಲ್ಲದೆ ಇದ್ದರೂ ಅಂತರ್ಯದಲ್ಲಿರುವ ಚೇತನ ಶಿಷ್ಟವಾಗಿದೆ ಅದು ಬಾಹ್ಯ ರೂಪದಂತೆ ಬೇಧಹೊಂದುವುದಿಲ್ಲ
ಈ ಜಗತ್ತಿನ ಎಲ್ಲ ಜೀವ ರಾಶಿಗಳ ರೂಪಗಳು ಬೇರೆ ಬೇರೆಯಾದರೂ, ಅವುಗಳು ಜನ್ಮ ತಳೆಯಲು, ಬೆಳೆಯಲು, ಜೀವಿಸಲು ಪೂರಕವಾದ ಶಕ್ತಿಯೇ ಆ ಪರಮಾತ್ಮ ಶಕ್ತಿ. ಅದಿಲ್ಲದಿದ್ದರೆ ಬೇರೆಯಾವುದೂ ಇಲ್ಲ. ನಾವು ನಮ್ಮ ಭೌತಿಕ ಕಣ್ಣುಗಳಿಗೆ ಕಾಣುವ ರೂಪಗಳಿಂದ ವಸ್ತುಗಳ ವೈವಿಧ್ಯತೆಯನ್ನು ನೋಡುತ್ತಿದ್ದೇವೆ, ಭೇದಮಾಡುತ್ತಿದ್ದೇವೆ, ಪ್ರೀತಿಸುತ್ತೇವೆ, ದ್ವೇಷಿಸುತ್ತೇವೆ. ಅಂದರೆ ಈ ಪರಮಾತ್ಮನ ಸೃಷ್ಟಿಯಲ್ಲಿನ ಎಲ್ಲ ವಸ್ತುಗಳ ಪ್ರತಿ ನಮಗಿರುವ ಭಾವಗಳೆಲ್ಲ, ಬಾಹ್ಯ ರೂಪ ಸಂಬಂಧಿಸಿದ್ದು. ಎಲ್ಲದರಲ್ಲೂ ಇರುವುದು ಒಂದೇ ಅಂತಃಶಕ್ತಿಯಂದು ನಾವು ಗುರುತಿಸುವುದೇ ಇಲ್ಲ. ಹಿಂದೆಯೂ ಇದೆ ದೃಷ್ಟಾಂತವನ್ನು ಕೊಟ್ಟಿದ್ದೇನೆ. ಹೇಗೆ ವಿದ್ಯುತ್ ಬಲ್ಬಗಳು, ಬೇರೆ ಬೇರೆ ಆಕಾರ, ಬಣ್ಣದಲ್ಲಿದ್ದರೂ, ಅದು ಪ್ರಕಾಷಿಸಲು ಒಂದೇ ವಿದ್ಯುತ್ತಿನ ಹೇಗೆ ಉಪಯೋಗಿಸಿಕೊಳ್ಳುತ್ತದೋ, ಹಾಗೆಯೇ ಎಲ್ಲ ಜೀವಿಗಳ ಜೀವನಕ್ಕೆ ಹೇತುವಾದ, ಚೇತನವು ಒಂದೇ, ರೂಪಗಳು ಬೇರೆ ಬೇರೆಯಾದರೂ ಅವು ಶಾಶ್ತ್ವತವಲ್ಲ. ನಿತ್ಯವಲ್ಲ. ಈ ಜಗತ್ತಿನಲ್ಲಿ ಶಾಶ್ವತವಾಗಿರುವುದು ಕೇವಲ ಆ ಪರಮಾತ್ಮ ಚೇತನ. ಅದನ್ನು ನಾವು ಗುರುತಿಸಬೇಕು ಎಂಬ ಭಾವವನ್ನು ನಮಗೆ ಭೋಧಿಸುವಂತೆ ದೃಷ್ಟಿ ಸತ್ವದೊಳಿರಲಿಎಂದು ಮಾನ್ಯ ಗುಂಡಪ್ಪನವರು ಅಪ್ಪಣೆ ಕೊಡಿಸಿದ್ದಾರೆ, ಈ ಕಗ್ಗದಲ್ಲಿ. ಸತ್ಯವಾಗಿ ಒಳಗಿರುವುದೇ ಸತ್ವ. ಅದೇ ಅಂತಸತ್ವ. ಅದನ್ನು ಭಾವಿಸಬೇಕು, ಕಾಣಬೇಕು ಮತ್ತು ಅನುಭವಿಸಬೇಕು. ಅದೇ ನಿಜವಾದ ಪೂಜೆ.
ರಸಧಾರೆ - 115
ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆ |
ಕ್ರಿಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ||
ಕ್ರಮವಿವರವೆನೇರಲಿ ಸೃಷ್ಟಿಯ ವಿಧಾನದಲಿ |
ಸಮಸದದು ಸತ್ವವನ್ನು ಮಂಕುತಿಮ್ಮ.||
ವಾಯ್ವಾದಿ = ವಾಯು + ಆದಿ / ಸಮಸದದು = ಸಮಸದು + ಅದು.
ಪಂಚಭೂತಗಳಿಗೆ ಒಂದು ಕ್ರಮವಿದೆ. ಸೃಷ್ಟಿಗೆ ಒಂದು ಕ್ರಮವಿದೆ ಅದು ಬದಲಾಗುವ ಕ್ರಮ. ಹೊಸ ಹೊಸ ಆವಿಷ್ಕ್ರುತ ರೂಪಗಳಲ್ಲಿ ಅದು ಕಾಣುತ್ತಲೇ ಇರುತ್ತದೆ. ಆಕಾಶ, ಭೂಮಿ ಗಾಳಿ ನೀರು ಇವೆಲ್ಲವೂ ಅವುಗಳದೇ ಆದ ಕ್ರಮದಲ್ಲಿ ಇದ್ದರೂ, ಒಂದೇ ಕ್ರಮವಿಲ್ಲದಂತೆ ಕಾಣುವುದು. ಈ ಜಗತ್ತಿನಲ್ಲಿ ಹುಟ್ಟುವ ಕ್ರಿಮಿಗಳು, ಪ್ರಾಣಿ, ಪಕ್ಷಿ, ಜಲಚರಗಳಿಗೂ ಒಂದೊಂದು ಕ್ರಮವಿದೆ. ಆಕಾರವಿದೆ, ರೂಪಗಳಿವೆ. ಆ ರೂಪಗಳು ಕಾಲಾನುಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಆದರೆ ಈ ಬದಲಾವಣೆಗಳಿಗೆ ಅತೀತವಾಗಿ ಇರುವುದೇ ಆ ಪರಮ ಚೇತನ, ಪರಮಾತ್ಮ ಶಕ್ತಿ ಅಥವಾ ಆತ್ಮವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಒಂದು ಪ್ರಾಣಿ ಒಂದು ತಾಯಿಯ ಗರ್ಭದಲ್ಲಿರುವಾಗ, ಸುಮಾರು ೫ ನೇ ತಿಂಗಳಿಗೆ ಆ ಭ್ರೂಣದೊಳಕ್ಕೆ ಪ್ರಾಣ ಪ್ರವೇಶವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಜೀವಕಣಗಳಿಂದ ಆದ ಆ ಭ್ರೂಣದ ಪ್ರತಿ ಕಣ ಕಣಗಳಲ್ಲೂ ಕೇಂದ್ರ ಬಿಂದುವೇ ಜೀವ. ಪ್ರತಿಕಣದಲ್ಲೂ ಜೀವ ವ್ಯಾಪಕವಾಗಿದೆ. ಹಾಗಾಗಿ ಜೀವಕ್ಕೆಲ್ಲಿ ವಾಸವೆಂದರೆ ಇಡೀ ದೇಹದಲ್ಲಿ. ಇದು ಸಕಲ ಪ್ರಾಣಿಗಳಿಗೂ ಅನ್ವಯ. ಪ್ರಾಣಿ, ಪಕ್ಷಿ, ಉರಗ, ಕೀಟ ಕ್ರಿಮಿ, ಜಲಚರ ಹೇಗೆ ಎಲ್ಲಕೂ ಅನ್ವಯ. ದೇಹ ಚಿಕ್ಕದಾಗಿದ್ದಲೂ ಅದೇ ಜೀವ, ಬೆಳೆದು ದೇಹ ದೊಡ್ದದಾದಮೆಲೂ ಅದೇ ಜೀವ. ಏಕೆಂದರೆ ಜೀವಕ್ಕೆ ಆಕಾರವಿಲ್ಲ. ಅದು ನಿರಾಕಾರ. ದೇಹ ಬೆಳೆಯುತ್ತದೆ. ಆದರೆ ಜೀವದ ಚೇತನದ ಸ್ವರೂಪ ಮಾತ್ರ ನಿಶ್ಚಲ.
ಎಂದು ಆ ರೂಪ ಅಥವಾ ದೇಹ ಆ ಜೀವ, ಅಥವಾ ಪ್ರಾಣ ಅಥವಾ ಚೇತನಕ್ಕೆ ವಾಸಕ್ಕೆ ಸೂಕ್ತವಲ್ಲವೋ ಅಂದು ಜೀವ ದೇಹದಿಂದ ದೂರಾಗುತ್ತದೆ, ತನ್ನ ರೂಪ ಬದಲಾಯಿಸಿಕೊಳ್ಳುತ್ತದೆ. ಹೀಗೆ ಎಷ್ಟೇ ರೂಪ ಬದಲಾವಣೆಯಾದರೂ, ಜೀವ ಬೇರೆ ಬೇರೆ ದೇಹಗಳನ್ನು ಬದಲಾಯಿಸಿಕೊಂಡು ತನ್ನನ್ನು ತಾನು ರೂಪಾಂತರಿಸಿಕೊಂಡರೂ ಜೀವದಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಇದನ್ನೇ ಮಾನ್ಯ ಗುಂಡಪ್ಪನವರು
ಸಮಸದದು ಸತ್ವವನುಎಂದರೆ ಸವೆಯದು ಆ ಸತ್ಯವಾದ ಸತ್ವ”, ಎನ್ನುತ್ತಾರೆ ಶ್ರೀ ಡಿ.ವಿ.ಜಿ.
ಹಾಗಾಗಿ ವಾಚಕರೆ ನಮ್ಮಲ್ಲಿರುವ ಚೇತನವೆ ಸತ್ಯ ಮತ್ತು ನಿತ್ಯ. ಅದು ಬದಲಾಗುವುದಿಲ್ಲ. ಅದೇ ನಾವು. ರೂಪಾಂತರಗೊಳ್ಳುವ ಈ ದೇಹವು ನಾವಲ್ಲ. ಇದನ್ನು ಅರಿತುಕೊಂಡರೆ ನಮಗೆ ನಮ್ಮ ಪರಿಚಯವಾಗುತ್ತದೆ. ಅದಾಗಿಬಿಟ್ಟರೆ , ನಾವು ನಮ್ಮ ಎಲ್ಲ ಮಾನಸಿಕ, ಭೌದ್ಧಿಕ ವಿಕಾರಗಳಿಂದ ಮುಕ್ತರಾಗಬಹುದು.
ಆತ್ಮನನ್ನು ಅರಿಯುವ ಪ್ರಯತ್ನವನ್ನು ನಾವೂ ಸಹ ಮಾಡೋಣ.
ರಸಧಾರೆ - 116
ಪರಮಾಣುವಿಂ ಪ್ರಪಂಚಗಳ ಸಂಯೋಜಿಪುದು |
ಮರೆಯಿಂದ ಸೃಷ್ಟಿಯಂತ್ರವ ಚಾಲಿಪುದು ||
ಚರಲೀಲೆಯಲಿ ಜೀವವೆನಿಪ ಚೈತನ್ಯವದು |
ಪರಸತ್ವಶಕ್ತಿಯೆಲೊ ಮಂಕುತಿಮ್ಮ ||
ಪರಮಾಣುವಿಂ = ಪರಮ ಅಣುವಿನಿಂದ, ಸಂಯೋಜಿಪುದು = ಒಂದು ಸೂತ್ರದಲ್ಲಿ ಪೋಣಿಸುವುದು , ಚಾಲಿಪುದು = ಚಲನೆ ಕೊಡುತ್ತದೆ, ಚರಲೀಲೆಯಲಿ = ನಿರಂತರ ಬದಲಾಗುವ ಜಗತ್ತಿನ ಲೀಲೆಯಲಿ, ಜೀವವೆನಿಪ ಚೈತನ್ಯವದು = ಜಗತ್ತಿನಲ್ಲಿ ಜೀವವೆಂದು ಕರೆಯಲ್ಪಡುವ ಚೈತನ್ಯವದು. ಪರಸತ್ವಶಕ್ತಿಯೆಲೊ = ಆ ಶಕ್ತಿಯೇ ಪರಸತ್ವ ಎಲೋ!
ಇಡೀ ಜಗತ್ತನ್ನು ಪರಮಾಣುಗಳನ್ನು ಪೋಣಿಸುವ ಕ್ರಿಯೆಯಿಂದ ಈ ಜಗತ್ತಿನ ಎಲ್ಲವನ್ನೂ ಒಂದು ಸೂತ್ರದಲ್ಲಿ ಇರುವಂತೆ ಸೃಷ್ಟಿಸಿ, ಇದನ್ನು ನಡೆಸಲು ಒಂದು ಕ್ರಮವನ್ನು ಉಂಟುಮಾಡಿ , ಅದರ ಚಲನೆಗೆ ತಾನೇ ಕಾರಣವಾಗಿ, ಈ ಜಗತ್ತಿನ ಲೀಲಾವಿನೋದವನ್ನು ನಡೆಸುವ ಜೀವವೆಂದು ಹೆಸರು ಪಡೆದ ಅದೇ ಚೈತನ್ಯ. ಆ ಚೈತನ್ಯವೇ, ಪರಮಾತ್ಮ, ಪರಮ ಶಕ್ತಿ ಮತ್ತು ಪರ ಸತ್ವ ಎನ್ನುತ್ತಾರೆ ಮಾನ್ಯ ಡಿ ವಿ.ಜಿ ಯವರು ಈ ಕಗ್ಗದಲ್ಲಿ.
ಒಂದು ಪ್ರಾಣಿಯ, (ಮನುಷ್ಯನನ್ನೂ ಸೇರಿದಂತೆ ) ದೇಹವನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ನಮ್ಮ ದೇಹದ ಎಲ್ಲ ಭಾಗಗಳೂ ಜೀವಕಣಗಳಿಂದ ಆಗ ಮಾಡಲ್ಪಟ್ಟಿದೆ. ಅದು ಚರ್ಮ, ಮಾಂಸ ಖಂಡ, ನರ, ರಕ್ತ , ಮೂಳೆ ಯಾವುದೇ ಆಗಿರಬಹುದು. ಅವೆಲ್ಲವೂ ಜೀವಕಣಗಳಿಂದಲೇ ಆಗಿವೆ ಅಲ್ಲವೇ? ಜೋಡಣೆಯಲ್ಲಿ ವ್ಯತ್ಯಾಸವಾದಾಗ, ಅದು ಬೇರೆ ಬೇರೆ ಅಂಗಗಳಾಗುತ್ತವೆ ಮತ್ತು ಅವುಗಳ ಜೋಡಣೆಗೆ ಅನುಗುಣವಾಗಿ ಬೇರೆ ಬೇರೆ ಕೆಲಸವನ್ನು ಮಾಡುತ್ತವೆ. ಈ ಕಣವನ್ನುಸೆಲ್ಎನ್ನುತ್ತಾರೆ. ಈ ಸೆಲ್ನಲ್ಲಿ ಒಂದು ಜೀವಸೆಲೆ ವ್ಯಾಪಿಸಿಕೊಂಡು ಅದನ್ನು ಜೀವಕಣವೆನ್ನಿಸುತ್ತದೆ . ನಮ್ಮ ಶರೀರದಲ್ಲಿ ನಾವು ಸೇವಿಸುವ ಆಹಾರದಿಂದ ಲಕ್ಷಾಂತರ ಜೀವಕಣಗಳು ಉತ್ಪತ್ತಿಯಾಗುತ್ತದಂತೆ ಮತ್ತು ನಾವು ಮಾಡುವ ಕೆಲಸದಿಂದ ಲಕ್ಷಾಂತರ ಜೀವಕಣಗಳು ನಾಶವಾಗುತ್ತವಂತೆ. ಒಂದೊಂದು ಅಣುವಿನ ನಾಶಕ್ಕೂ ಮತ್ತೆ ಸೃಷ್ಟಿಗೂ ಕಾರಣವಾದ ಇಂದನ ಜೀವ ಸೆಲೆ. ಅದನ್ನೇ ಜೀವವೆನ್ನುತ್ತಾರೆ. ಆ ಜೀವ ಸೆಲೆಯೇ ಪರಮಾತ್ಮ ಶಕ್ತಿಯ ಅಥವಾ ಪರಮ ಚೇತನದ ಒಂದು ಅಂಶ. ಅದರ ಕೆಲಸದಿಂದಲೇ ಈ ಜೀವನದ, ಜಗತ್ತಿನ ಲೀಲಾವಿನೋದ ನಡೆಯುತ್ತದೆ. ಇದನ್ನೇ ಆ ಪರಮಾತ್ಮನ ಲೀಲಾವಿನೋದವೆನ್ನುಬಹುದು.
ಜಗತ್ತಿನ ಎಲ್ಲವೂ ಕಣಗಳಿಂದಲೇ ಆಗಿದೆ. ಗಾಳಿ ನೀರು, ಆಕಾಶ, ಭೂಮಿ ಗಿಡ ಮರ ಪ್ರಾಣಿ ಪಕ್ಷಿ ಕೀಟ ಎಲ್ಲವೂ. ಆ ಕಣದಲ್ಲಿ ಜೀವ ಅಥವಾ ಚೇತನ ಸಂಚಾರವಾದಾಗ ಅದು ಜೀವ ಕಣವಾಗುತ್ತದೆ. ಜೀವಿಗಳ ಕೋಟ್ಯಾಂತರ ರೂಪಗಳಿಗೆ ಕಾರಣವಾಗುತ್ತದೆ. ಕಣ್ಣಿಗೆ ಕಾಣದಿದ್ದರೂ ಎಲ್ಲಕ್ಕೂ ಚಾಲನೆಯನ್ನು ನೀಡುವ ಆ ಚೇತನವೇ ಜೀವ. ಇದನ್ನೇ ನಮ್ಮ ಗುಂಡಪ್ಪನವರುಮರೆಯಿಂದ ಸೃಷ್ಟಿಯಂತ್ರವ ಚಾಲಿಪುದುಎಂದರು. ವಾಚಕರೆ ಎಲ್ಲ ಜೀವಿಗಳಿಗೂ ಒಂದು ರೂಪ. ಪ್ರತಿರೂಪಕ್ಕೂ ಆ ಜೀವಕಣಗಳ ಜೋಡಣೆಯ ವಿನ್ಯಾಸ ಬೇರೆ ಬೇರೆ. ವಿನ್ಯಾಸ ಬೇರೆಯಾದಾಗ ಅದಕ್ಕೆ ಬೇರೆಯೇ ಹೆಸರು. ಮನುಷ್ಯ, ಕೋತಿ, ಆನೆ , ಹಾವು , ಹದ್ದು ಇತ್ಯಾದಿ. ಮೂಲದಲ್ಲಿ ಎಲ್ಲವೂ ಚೈತನ್ಯದಿಂದ ಕಾರ್ಯ ಪ್ರವ್ರುತ್ತವಾದ ಜೀವಕಣಗಳ ಸಮಷ್ಟಿ ರೂಪ. ಆನೆಯದರೂ ಅಷ್ಟೇ , ಇರುವೆಯಾದರೂ ಅಷ್ಟೇ. ಹಾಗಾಗಿ ನಾವು ನೋಡುವುದೇನು ಆ ಜೀವಕಣಗಳ ಜೋಡಣೆಯನ್ನು. ಕಾಣಲಾಗದ್ದು ಏನೆಂದರೆ, ಹೀಗೆ ಜೋಡಿಸಲ್ಪಟ್ಟ ಕಣಗಳ ಗುಂಪಿಗೆ ಚಾಲನೆಯನ್ನು ನೀಡುವ ಚೈತನ್ಯವನ್ನು. ಈ ಕಣಗಳ ಜೋಡಣೆ ಮತ್ತು ಅವುಗಳನ್ನು ಚಾಲಿಸುವ ಚೈತನ್ಯದ ನಡುವಿನಲ್ಲಿನಾನು ಎಂಬುದು ಎಲ್ಲಿದೆ ಎಂದು ಹುಡುಕಿದರೆ ನಮಗೆ ನಿರಾಸೆ ಕಟ್ಟಿಟ್ಟ ಬುತ್ತಿ.
ನಾವು ರೂಪ ಭೇದವನ್ನು ಕಾಣದೆ, ರೂಪವೇ ಇಲ್ಲದ, ಆಕಾರವೇ ಇಲ್ಲದ, ಆ ರೂಪಕ್ಕೆ ಚೈತನ್ಯದ ಹೇತುವಾದ ಎಲ್ಲ ಪ್ರಾಣಿಗಳಲ್ಲೂ ಸಮಾನವಾಗಿರುವ ಆ ಚೈತನ್ಯದ ಬೃಹತ್ ರೂಪವನ್ನು ಕಾಣಲಾದರೆ, ನಾವು ಆಂತರಿಕವಾಗಿ ಬೆಳೆದಂತೆ ಅಲ್ಲವೇ? ಅಂತಹ ಬೆಳವಣಿಗೆಯ ಪ್ರಯತ್ನವನ್ನು ನಾವೂ ಮಾಡೋಣವೆ?
ರಸಧಾರೆ - 117
ಸ್ಥಾಪಿತವೆ ಜೀವ ನಿನ್ನೊಡಲಿನೊಂದಂಗದಲಿ ? |
ಆಪಾದಶಿರವುಮದು ತುಂಬಿರುವುದಲ್ತೆ ||
ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ |
ಲೇಪಗೊಳ್ಳದ ಸತ್ವ ಮಂಕುತಿಮ್ಮ ||
ನಿನ್ನೊಡಲಿನೊಂದಂಗದಲಿ = ನಿನ್ನ+ ಒಡಲಿನ + ಒಂದು + ಅಂಗದಲ್ಲಿ// ಆಪಾದಶಿರವುಮದು = ಆಪಾದ+ಶಿರವುಂ + ಅದು // ತುಂಬಿರುವುದಲ್ತೆ = ತುಂಬಿರುವುದು + ಅಳತೆ //ವ್ಯಾಪಿಸಿಹುದಂತೊಂದು= ವ್ಯಾಪಿಸಿಹುದು + ಅಂತ+ ಒಂದು
ಆಪಾದಶಿರವುಮದು = ಕಾಲ ತುದಿಯಿಂದ ನೆತ್ತಿಯವರೆಗೆ. ಲೇಪಗೊಳ್ಳದ = ಅಂಟಿಕೊಳ್ಳದ, ವ್ಯಾಪಿಸಿಹುದು = ಹರಡಿಕೊಂಡಿದೆ.
ಆ ಜೀವವೆನ್ನುವ ಚೈತನ್ಯ ಕೇವಲ ನಿನ್ನ ಯಾವೊದೋ ಒಂದು ಅಂಗದಲ್ಲಿ ತುಂಬಿದೆ ಎಂದು ಕೊಂಡಿದ್ದೀಯಾ? ಅದು ನಿನ್ನ ಅಡಿಯಿಂದ ಮುಡಿಯವರೆಗೆ ಅಂದರೆ ಪಾದದಿಂದ ಶಿರದವರೆಗೆ, ಇಡೀ ದೇಹವನ್ನು ವ್ಯಾಪಿಸಿಕೊಂಡಿದೆ. ಹೇಗೆ ಅದು ನಮ್ಮ ದೇಹದಲ್ಲಿ ವ್ಯಾಪಕವಾಗಿದೆಯೋ ಹಾಗೆಯೇ, ಇಡೀ ವಿಶ್ವದಲ್ಲಿ ಒಂದು ಅಂಗುಲವೂ ಬಿಡದೆ ಎಲ್ಲೆಡೆ ವ್ಯಾಪಿಸಿಕೊಂಡಿದೆ. ಹಾಗೆ ವ್ಯಾಪಿಸಿಕೊಂಡಿದ್ದರೂ, ಎಲ್ಲೂ ಯಾವುದಕ್ಕೂ ಅಂಟದೆ ಇರುವುದೇ ಆ ಚೈತನ್ಯದ ಗುಣ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಆ ಬೃಹಚ್ಚೇತನದ ಒಂದು ಅಂಶವಾದ ನಮ್ಮೊಳಗಿರುವ ಚೇತನ ಯಾವುದೋ ಒಂದು ಅಂಗದಲ್ಲಿರದೆ, ಎಲ್ಲ ಅಂಗಗಳಿಗೂ ಏನು, ಇಡೀ ದೇಹಕ್ಕೇ ಇಂಬು ಕೊಡುವ ಅದು ದೇಹದಲ್ಲೆಲ್ಲ ಒಂದು ಅಂಗುಲವೂ ಬಿಡದೆ, ಸಮಾನವಾಗಿ ವ್ಯಾಪಿಸಿಕೊಂಡಿದೆ, ಅಷ್ಟೇ ಅಲ್ಲ ಒಳಗಿರುವ ಆ ಚೈತನ್ಯವೇ ಜಗತ್ತೆಲ್ಲ ವ್ಯಾಪಿಸಿಕೊಂಡಿದೆ ಎನ್ನುವುದು ಪರಮ ಸತ್ಯ. ಜಗತ್ತಿನ ಜಡ ಚರ ಎಲ್ಲವಸ್ತುಗಳಲ್ಲೂ, ಕೆಲವು ಕಡೆ ಸುಪ್ತವಾಗಿ ಕೆಲವು ಕಡೆ ಸಕ್ರಿಯವಾಗಿ ಇರುವ ಚೈತನ್ಯವೇ ಆ ಪರಮ ಪುರುಷನ ಶಕ್ತಿ. ಏಕೆಂದರೆ ಆ ಪರಮ ಚೈತನ್ಯವೇ ತನ್ನದೇ ಶಕ್ತಿಯಿಂದ ತಾನೇ ಬೇರೆ ರೂಪದಲ್ಲಿ ಪ್ರಕಟಗೊಂಡು ಆ ರೂಪಗಳ ಸಕ್ರಿಯತೆಗೆ ತಾನೇ ಕಾರಣವಾಗಿರುವಾಗ, ಅದು ಇಲ್ಲದ ಸ್ಥಳವಿರಲು ಸಾಧ್ಯವೇ. ಇದನ್ನೇ ಮಾನಿ ಡಿ.ವಿ.ಜಿ ಯವರು ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿಎನ್ನುತ್ತಾರೆ.
ಆದರೆ ಆ ಚೈತನ್ಯದ ಸ್ವರೂಪವೇನೆಂದು ಯಾರೂ ಅರಿಯರು. ಎಲ್ಲ ರೂಪಗಳೂ ಅದೇ ಆಗಿರುವಾಗ, ಯಾವುದೇ ಒಂದು ರೂಪಕ್ಕೆ ಅದನ್ನು ಸೀಮಿತಗೊಳಿಸಲಾಗುವುದಿಲ್ಲ, ಅಲ್ಲವೇ? ಎಲ್ಲವನ್ನೂ ಮಾಡಿ ಎಲ್ಲದರೊಳಗೂ ಇದ್ದು ಎಲ್ಲವನ್ನೂ ಸಕ್ರಿಯವಾಗಿ ಇಡಲು ಪೂರಕವಾದ ಈ ಚೈತನ್ಯ ಯಾವುದಕ್ಕೂ ಅಂಟದೆ ಇದ್ದೂ ಇಲ್ಲದ ಹಾಗೆ, ಅಂಟೀ ಅಂಟದ ಹಾಗೆ, ಕಂಡೂ ಕಾಣದ ಹಾಗೆ ಇದೆ. ನಾವು ಎಲ್ಲದರಲ್ಲೂ ಇರುವ ಆ ಮಹಾ ಚೈತನ್ಯಕ್ಕೆ ನಮಿಸೋಣ, ಅದನ್ನು ಭಾವಿಸೋಣ, ಈ ಸೃಷ್ಟಿಯ ಎಲ್ಲದರಲ್ಲೂ ಆ ಚೈತನ್ಯವೇ ಇದೆಯೆಂಬ ಭಾವವನ್ನು ನಮ್ಮ ನಮ್ಮ ಮನಗಳಲ್ಲಿ ಗಟ್ಟಿಯಾದ ನಂಬಿಕೆಯಿಂದ, ಎಲ್ಲವನ್ನೂ, ಆ ಪರಮಾತ್ಮನ ಪ್ರತಿರೂಪವೆಂದು ಗೌರವಿಸುವ ಮನಸ್ಸು ನಮಗೆ ಆ ಪರಮಾತ್ಮ ಕರುಣಿಸಲಿ ಅಲ್ಲವೇ?
ರಸಧಾರೆ - 118
ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ |
ಭುವನಪೋಷಣೆಯುಭಯ ಸಹಕಾರದಿಂದ ||
ವಿವಿಧಶಕ್ತಿರಸಂಗಳೇಕೀಭವಿಸೆ ಜೀವ |
ಅವಿತರ್ಕ್ಯ ಸೂಕ್ಷ್ಮವದು ಮಂಕುತಿಮ್ಮ
ರವಿಮಾತ್ರದಿಂದಲ್ಲ = ರವಿ +ಮಾತ್ರದಿಂದ+ ಅಲ್ಲ, ಭುವಿಮಾತ್ರದಿಂದಲ್ಲ = ಭುವಿ +ಮಾತ್ರದಿಂದ +ಅಲ್ಲ, ಭುವನಪೋಷಣೆಯುಭಯ = ಭುವನ + ಪೋಷಣೆಯು + ಉಭಯ, ವಿವಿಧಶಕ್ತಿರಸಂಗಳೇಕೀಭವಿಸೆ = ವಿವಿಧ+ಶಕ್ತಿ+ ರಸಂಗಳು+ ಏಕೀಭವಿಸೆ , ಅವಿತರ್ಕ್ಯ= ಅ ವಿತರ್ಕ್ಯ, ಸೂಕ್ಷ್ಮವದು = ಸೂಕ್ಷ್ಮವು ಅದು
ಭುವನಪೋಷಣೆ= ಈ ಭುವಿಯ ಪೋಷಣೆ, ಉಭಯ = ಎರಡು, ಏಕೀಭವಿಸೆ = ಸೇರಿದರೆ, ಅವಿತರ್ಕ್ಯ= ತರ್ಕಮಾಡಲಾಗದ್ದು
ಕೇವಲ ಸೂರ್ಯನಿಂದಾಗಲೀ ಅಥವಾ ಕೇವಲ ಪ್ರುತ್ವೀತತ್ವದಿಂದಾಗಲೀ ಈ ಭೂಮಿಯು ಅಸ್ತಿತ್ವದಲ್ಲಿಲ್ಲ. ಈ ಭೂಮಿಯ ಅಸ್ಥಿಸ್ತ್ವಕ್ಕೆ ಈ ಎರಡರ ಸಹಕಾರವೂ ಬೇಕು. ಅಷ್ಟೇ ಅಲ್ಲ ಇವೆರಡರ ಸಹಕಾರದಿಂದ ಈ ಭೂಮಿಯ ಮೇಲ್ಮೈಯಲ್ಲಿ ಮತ್ತು ಅಂತರ್ಯದಲ್ಲಿ ಉತ್ಪತ್ತಿಯಾಗುವ ಹಲವಾರು ಜೀವರಸಗಳ ಸಮ್ಮಿಲನದಿಂದ ಇಲ್ಲಿ ಜೀವಿಗಳ ಜೀವಿಕೆ ಸಾಧ್ಯ. ಆದರೆ ಇದು ಏಕೆ ಹೀಗೆ? ಹಾಗೆ ಯಾಕಿರಬಾರದು? ಇದು ಹೀಗೇ ಏಕಾಗುತ್ತದೆ ಹಾಗೇಕಿರಬಾರದು, ಇದು ಸರಿ, ಅದು ಸರಿಯಿಲ್ಲ ಎನ್ನುವಂತಾ ತರ್ಕ ಕುತರ್ಕಗಳಿಗೆ ಸಿಗದ ಸೂಕ್ಷ್ಮವಿಚಾರವಿದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಪರಮಾತ್ಮನಿಂದಾದ ಈ ಜಗತ್ತಿನಲ್ಲಿ ಸೃಷ್ಟಿಸಲ್ಪಟ್ಟ ಕೋಟಿ ಕೋಟಿ ಕಾಯಗಳಲ್ಲಿ ಈ ಭೂಮಿ ಒಂದು ಸಣ್ಣ ಕಾಯ. ನಾವು ಇದರ ಮೇಲೆ ಜೀವಿಸಿದ್ದೇವೆ. ಹಾಗಾಗಿ ನಮಗಿದು ಪರಿಚಿತ. ಅನ್ಯ ಆಕಾಶ ಕಾಯಗಳ ವಿಚಾರ ನಮ್ಮ ಅರಿವಿನ ಪರಿಧಿಯಿಂದ ದೂರ, ಅಲ್ಲವೇ? ಹಾಗಾಗಿ ನಾವು ಕೇವಲ ಈ ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ನೋಡುವ. ಮೂರ ಭಾಗ ನೀರು ಒಂದು ಭಾಗ ಭೂಮಿ. ಮೇಲೆ ಆಕಾಶ ಬೀಸುವ ಗಾಳಿ ನೆತ್ತಿಯಮೇಲೆ ಸೂರ್ಯ, ಮತ್ತು ಅನ್ಯ ಗ್ರಹಗಳು, ಚಂದ್ರ. ಇವೆಲ್ಲ ನಮಗೆ ಕಾಣುತ್ತದೆ. ಸೂರ್ಯನಿಂದ ಬೆಳಕು ಮತ್ತು ಶಾಖ ನಮಗೆ ಸಿಗುತ್ತದೆ. ಬೆಳಕು ಕಾಣುತ್ತದೆ, ಶಾಖವನ್ನು ಅನುಭವಿಸಬಹುದು. ಆದರೆ ಆ ಸೂರ್ಯನಿಂದ ಭೂಮಿಗೆ ಈ ಬಿಸಿಲು ಮತ್ತು ಶಾಖದ ಜೊತೆಗೆ ಹರಿದುಬರುವ ಜೀವರಸಗಳ ಪ್ರವಾಹವನ್ನು ನಾವು ಕಾಣಲೂ ಆಗುವುದಿಲ್ಲ, ಅನುಭವಿಸಲೂ ಆಗುವುದಿಲ್ಲ. ಆದರೂ ನಾವೆಲ್ಲಾ ಅದರ ಪ್ರಭಾವಕ್ಕೊಳಗಾಗುತ್ತೇವೆ, ಅಲ್ಲವೇ?
ಹಾಗೆಯೇ ಈ ಭೂಮಿಯು, ಆ ಸೂರ್ಯನಿಂದ ಬೆಳಕು ಮತ್ತು ಶಾಖದೊಂದಿಗೆ ಹರಿದುಬರುವ ಹಲವಾರು ಜೀವರಸಗಳನ್ನು ತನ್ನ ಗರ್ಭದೊಳಕ್ಕೆ ಬಟ್ಟಿ ಇಳಿಸಿಕೊಂಡು ತನ್ನ ಸತ್ವವನ್ನೂ ಅದಕ್ಕೆ ಮಿಶ್ರಣ ಮಾಡಿ ಸಸಿ, ಗಿಡ ಮರಗಳಿಗೆ ಅವುಗಳ ಬೇರುಗಳ ಮೂಲಕ ತುಂಬಿ ಇಡೀ ಭೂಮಿಯ ಮೇಲಿನ ಸಕಲ ಚರಾಚರ ಜೀವಿಗಳಿಗೆ ಆಹಾರವನ್ನು ಒದಗಿಸಿ, “ಅನ್ನಪೂರ್ಣೆಎನ್ನುವ ಹೆಸರನ್ನು ಪಡೆದಿದೆ. ಅದನ್ನೇ ಮಾನ್ಯ ಗುಂಡಪ್ಪನವರು ಉಭಯರ ಸಹಕಾರದಿಂದಎನ್ನುತ್ತಾರೆ.
ಅಷ್ಟೇ ಅಲ್ಲ ಬೀಸುವ ಗಾಳಿ, ಸುರಿಯುವ ಮಳೆ, ಇವೆಲ್ಲವನ್ನೂ ಒಂದಕ್ಕೊಂದು ಸಹಕರಿಸುವಂತೆ ಮಾಡುವ ಆ ಪರಮ ಚೇತನ ಎಲ್ಲವೂ ಈ ಇಳೆಯ ಜೀವರಾಶಿಗಳ ಅಸ್ತಿತ್ವಕ್ಕೆ ಸಹಕಾರಿಗಳಾಗೆ ಇವೆ. ಆದರೆ ಆ ಸೂರ್ಯ, ಈ ಭೂಮಿ, ಆ ಗಾಳಿ, ಸೂರ್ಯನ ಬೆಳಕು ಮತ್ತು ಶಾಖ ಮತ್ತು ಆ ಪರತತ್ವ, ಯಾವ ಕ್ರಮದಲ್ಲಿ ಕೆಲಸ ಮಾಡುತ್ತವೆ, ಅವುಗಳ ಕಾರ್ಯದಿಂದ ಪರಿಣಾಮಗಳು ಹೇಗೆ ಆಗುತ್ತವೆ ಎನ್ನುವುದು ಬಹಳ ಸೂಕ್ಷ್ಮ ವಿಚಾರ ಮತ್ತು ನಮ್ಮಂತಹ ಸಾಮಾನ್ಯರಿಗೆ ಅರ್ಥವಾಗುವುದೇ ಇಲ್ಲ. ಈ ಜಗತ್ತಿನಲ್ಲಿ ನಾವು ಜನಿಸಿದ್ದೇವಾದ್ದರಿಂದ ಕೇವಲ ಇವೆಲ್ಲವನ್ನೂ ನೋಡುತ್ತಾ, ಆನಂದಿಸುತ್ತಾ, ಅನುಭವಿಸಬೇಕಷ್ಟೇ. ಇವುಗಳನ್ನು ವಿಶ್ಲೇಷಣೆ ಮಾಡಿ ತರ್ಕ ಕುತರ್ಕಗಳಿಂದ ಅತಿ ಬುದ್ಧಿವಂತಿಕೆಯನ್ನು ತೋರುವುದು ಸರಿಯಲ್ಲ.
ಆ ಪರಮಾತ್ಮನ ಕೃಪೆಯಿಂದ, ಇವೆಲ್ಲವೂ ಆಗಿವೆ. ಅ ಪರಮ ಶಕ್ತಿಯ ನಿರ್ದೇಶನದಂತೆ ಅವೆಲ್ಲವೂ ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಿವೆ. ವಾಚಕರೆ, ಅವುಗಳು ಸಮರ್ಪಕವಾಗಿ ಕೆಲಸ ಮಾಡುತ್ತಿರುವುದರಿಂದ, ನಮ್ಮ ಜೀವನ ಸುಗಮವಾಗಿ ಸಾಗುತ್ತಿದೆ ಎಂದು ಅರ್ಥಮಾಡಿಕೊಂಡು, ಸುಭಾವದಿಂದ ಒಪ್ಪಿಕೊಂಡು, ಅದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಈ ಭುವಿಯಲ್ಲಿ ಕುತರ್ಕ-ಕುಭಾವಗಳಿಲ್ಲದೆ ಸಂತೋಷ ಮತ್ತು ಆನಂದದಿಂದ ಬಾಳಬೇಕು ಅಲ್ಲವೇ? ಅಂತಹ ಪ್ರಯತ್ನವನ್ನು ನಾವೂ ಸಹ ಮಾಡೋಣವೆ?
ರಸಧಾರೆ - 119
ನಾವುಣ್ಣುವನ್ನಗಳು ನಾವು ಕುಡಿವುದಕಗಳು |
ನಾವುಸಿರುವೆಲರುಗಳು ನಾವುಡುವ ವಸ್ತ್ರ ||
ಭೂವ್ಯೋಮಗಳ ಯಂತ್ರಸಂಘದುತ್ಪನ್ನಗಳು |
ಜೀವವಿವೆರಡರ ಶಿಶುವು ಮಂಕುತಿಮ್ಮ
ನಾವು ತಿನ್ನುವ ಆನ್ನ, ನಾವು ಕುಡಿಯುವ ನೀರು ನಾವು ಉಸಿರಾಡುವ ಗಾಳಿ ನಾವು ಉಡುವ ಬಟ್ಟೆ ಎಲ್ಲವೂ ಆಕಾಶ ಮತ್ತು ಭೂಮಿಯ ಪರಸ್ಪರ ಸಮ್ಮಿಲನದಿಂದ ತಯಾರಿಸಲ್ಪಡುವ ಉತ್ಪನ್ನಗಳು. ನಮ್ಮಲ್ಲಿ ಇರುವ ಚೇತನವೂ ಸಹ ಈ ಭೂಮಿ ಮತ್ತು ಆಕಾಶಗಳ ಶಿಶುವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಭೂಮಿಯ ಮೇಲಿನ ಸಮುದ್ರದ ನೀರು ಸೂರ್ಯನ ಶಾಖಕ್ಕೆ ಆವಿಯಾಗಿ ಮೋಡವಾಗಿ ಮಳೆಯಾಗಿ, ಧರೆಗೆ ಸುರಿದು, ಆ ಮಳೆಯ ಜೊತೆಗೆ ಈ ಭೂಮಿಯ ಮೇಲಿನ ಅನೇಕ ಜೀವರಸಗಳನ್ನೂ ಹೀರಿ ಅದನ್ನು ಮತ್ತೆ ಮಳೆಯ ಜೊತೆಗೆ ಈ ಭೂಮಿಗೆ ಸುರಿಸಿ, ಇಲ್ಲಿ ಜೀವಿಗಳಿಗೆ ಎಲ್ಲ ಅವಶ್ಯಕ ವಸ್ತುಗಳನ್ನೂ ಒದಗಿಸುವ ಈ ಭೂಮಿ ಮತ್ತು ಸೂರ್ಯನ ಪರಸ್ಪರ ಸಂಬಂಧ ಅತೀ ಅಮೋಘವಲ್ಲವೇ ವಾಚಕರೆ. ಅತೀ ಸೂಕ್ಷ್ಮವಾದ ಪ್ರಕ್ರಿಯೆ ಇದು.
ನಾವು ತಿನ್ನುವ ಆಹಾರದ ವೈವಿಧ್ಯತೆಯನ್ನು ನೋಡಿ. ಎಷ್ಟೊಂದು ವಿಧದ ಕಾಳುಗಳು, ದಾನ್ಯಗಳು, ಸೊಪ್ಪುಗಳು, ಕಾಯಿಪಲ್ಲೆಗಳು, ಹಣ್ಣುಗಳು, ಗೆಡ್ಡೆ ಗೆಣಸುಗಳು, ಪ್ರಾಣಿಗಳಿಗೆ ಮೀಸಲಾದ ಹಲವಾರು ಆಹಾರಗಳು. ಮನುಷ್ಯರು ತಿನ್ನುವಂಥ ಆಹಾರಗಳೇ ಬೇರೆ ಬೇರೆ. ಈ ಎಲ್ಲ ಆಹಾರಗಳೂ ಬಿಸಿಲು, ಶಾಖ, ಮಳೆ ಭೂಮಿ ಗಿಡ ಮರಗಳು ಇವುಗಳ ಪರಸ್ಪರ ಸಂಬಂಧದಿಂದಲೇ ಸಾಧ್ಯ. ತೈತ್ತರೀಯ ಉಪನಿಷತ್ತು ಈ ವಿಷಯವನ್ನು ಆಕಾಶಾದ್ವಾಯು: ವಾಯೋರಗ್ನಿ: ಅಗ್ನೇರಾಪ: ಅದ್ಭ್ಯಃ ಪೃಥಿವೀ ಪೃಥಿವ್ಯಾ ಓಷದಯಃ ಓಷಧೀಭ್ಯೋನ್ನಂ ಅನ್ನಾತ್ ಪುರುಷಃ ಎಂದು ಈ ಕಗ್ಗದಲ್ಲಿ, ಈ ಉಪನಿಷತ್ತಿನ ವಿಷಯವನ್ನು ಸುಲಲಿತವಾಗಿ ಗುಂಡಪ್ಪನವರು ಪ್ರತಿಪಾದಿಸಿದ್ದಾರೆ.
ಪ್ರಕೃತಿಯಲ್ಲಿ ಪಂಚಭೂತಗಳ ಪರಸ್ಪರ ಒಡಂಬಡಿಕೆಯಿಂದಲೇ ನಮ್ಮ ನಿಮ್ಮ ಮತ್ತು ಸಕಲ ಜೀವರಾಶಿಗಳ ಅಸ್ತಿತ್ವ. ಆಕಾಶದಲ್ಲಿರುವ ವಾಯು ಸೂರ್ಯನ ಶಾಖದಿಂದ ಉಂಟಾದ ಆವಿಯನ್ನು ಹೂವನ್ನೆತ್ತುವಂತೆ ಎತ್ತಿ ನಭಕ್ಕೆ ಒಯ್ದು, ಮೋಡವಾಗಿಸಿ, ತನ್ನ ಶಕ್ತಿಯಿಂದಲೇ ಆ ಮೋಡಗಳನ್ನು ಒಗ್ಗೂಡಿಸಿ, ಹಾಗೆ ಸತ್ವಯುತವಾದ ಮೋಡಗಳಿಂದ ಧರೆಗೆ ಮಳೆಯನ್ನೂ ಸುರಿಸುತ್ತದೆ. ಹಾಗೆ ಸುರಿಸಿದ ಮಳೆಯನ್ನ್ನು ಈ ಧರೆ ಹೀರಿ ಅದರ ಸತ್ವವನ್ನು ಕರಗಿಸಿಕೊಂಡು ತನ್ನೊಳಗಿನ ಸತ್ವಗಳನ್ನೂ ಸೇರಿಸಿ, ಗಿಡಮರಗಳ ಬೆಳವಣಿಗೆಗೆ ಕಾರಣವಾಗಿ ಆಹಾರ ಉತ್ಪತ್ತಿಗೆ ಕಾರಣವಾಗಿ ಆ ಆಹಾರ ರೂಪದಲ್ಲಿ ಶಕ್ತಿಯನ್ನು, ಜಗತ್ತಿನ ಎಲ್ಲ ಜೀವಿಗಳಿಗೆ ಒದಗಿಸುತ್ತದೆ. ಹಾಗೆ ಸಿಕ್ಕ ಶಕ್ತಿಯಿಂದ ಮತ್ತು ಸತ್ವದಿಂದಲೇ ಇಲ್ಲಿ ಜೀವಿಗಳಿಗೆ ಜೀವನ. ಇಲ್ಲದಿದ್ದರೆ ಇಲ್ಲ.
ನಾವು ಇದನ್ನೆಲ್ಲಾ ಅನುಭವಿಸುತ್ತಾ, ಒಂದಿಷ್ಟೂ ಕೃತಜ್ಞತೆ ಇಲ್ಲದೆ ಇಡೀ ಭೂಮಿಯ ನಾಶಕ್ಕೆ ಎಷ್ಟು, ಏನೇನು ಅವಶ್ಯವೋ ಅದನ್ನೆಲ್ಲ ಸಿದ್ಧಪಡಿಸಿಕೊಂಡು ತನ್ನ ನಾಶಕ್ಕೆ ತಾನೇ ತಯಾರಿ ನಡೆಸಿರುವ ನಾವು ಸತ್ಯವಾಗಲೂ ಸಂಸ್ಕಾರ ವಿಲ್ಲದವರಂತೆ ವರ್ತಿಸುವುದು ಬಹಳ ಖೇದನೀಯ. ನಾವೆಲ್ಲ ಈ ಪ್ರಕೃತಿಗೆ ನಮ್ಮ ಮೇಲಿನ ಪ್ರೀತಿಗೆ ಕೃತಜ್ಞತೆಯನ್ನು ಮಾತ್ರ ತೋರಬೇಕು. ಇದನ್ನು ನಮಿಸಬೇಕು. ಇದನ್ನು ಸಂತೋಷದಿಂದ ಅನುಭವಿಸುತ್ತಾ ಇದನ್ನೆಲ್ಲಾ ಕಾಪಾಡುವ ಪ್ರಯತ್ನ ಮಾಡಬೇಕು.
ರಸಧಾರೆ - 120
ಪಾಕ ನಿನ್ನೊಳದೊಂದು ಸಾಗುತಿಹುಡೆದೆಬಿಡದೆ |
ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು ||
ಸಾಕುಬೇಕುಗಳೆಲ್ಲವದರಿನಾ ಯಂತ್ರವನ್ನು |
ಏಕೆ ರಚಿಸಿದನೋ ವಿಧಿ ಮಂಕುತಿಮ್ಮ. ||
ಪಾಕ ನಿನ್ನೊಳು ಅದು ಒಂದು ಸಾಗುತಿಹುದು ಎಡೆಬಿಡದೆ . ಲೋಕದ ಎಲ್ಲವು ಸೂಕ್ಷ್ಮ ಗತಿಯಿನ ಒಳ ಹೊಕ್ಕು.
ಸಾಕು ಬೇಕುಗಳೆಲ್ಲವ ಅದರಿನಾ ಯಂತ್ರವನ್ನು ಏಕೆ ರಚಿಸಿದನೋ ವಿಧಿ ಮಂಕುತಿಮ್ಮ
ಒಂದು ಪಾಕ ಸಿದ್ಧವಾಗುವ ರೀತಿಯಲ್ಲಿ ಮನಸ್ಸು ಬುದ್ಧಿಗಳು ದೇಹದೊಡನೆ ಸೇರಿ ನಿನ್ನೊಳು ಸೂಕ್ಷ್ಮಗತಿಯಲ್ಲಿ ಈ ಜಗದ್ವ್ಯಾಪಾರವೇ ನಡೆಯುತ್ತಿದೆ. ಕೆಲವನ್ನು ಬೇಕೆನ್ನುವ ಕೆಲವನ್ನು ಸಾಕೆನ್ನುವ. ಇಂದು ಬೇಡವೆಂದದ್ದನ್ನು ನಾಳೆ ಬೇಕೆನ್ನುವ ಎಂದೋ ಇಷ್ಟಪಟ್ಟದ್ದನ್ನು ಇಂದು ಅಸಹ್ಯಿಸಿಕೊಳ್ಳುವ , ಈ ಮನುಷ್ಯದೇಹದ ಯಂತ್ರವನ್ನು ಹೀಗೇಕೆ ರಚಿಸಿದನೋ ವಿಧಿ ಎಂದು ಒಂದು ಪ್ರಶ್ನೆಯನ್ನು ಹಾಕುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಮ್ಮ ದೇಹದ ಯಂತ್ರ ಬಹಳ ವಿಚಿತ್ರವಾದದದ್ದು. ಇದರೊಳಗೆ ನಿರಂತರ ಕೆಲಸ ನಡೆಯುತ್ತಿರುತ್ತದೆ. ಈ ಲೋಕದ ಎಲ್ಲವಸ್ತುಗಳೂ ನಮ್ಮ ಪರಿಚಯಕ್ಕೆ ಬರುತ್ತದೆ. ಬಂದ ಕೆಲವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಕೆಲವನ್ನು ಇಷ್ಟಪಡುತ್ತೇವೆ. ಕೆಲವನ್ನು ಇಷ್ಟಪಡುವುದಿಲ್ಲ. ಕೆಲವನ್ನು ಕಂಡು ನಾವು ನಿರ್ಲಿಪ್ತರಾಗಿರುತ್ತೇವೆ. ಇಂದು ಇಷ್ಟವಾದ ವಸ್ತು ವಿಷಯ ಮತ್ತು ವ್ಯಕ್ತಿಗಳು ಕಾಲಕಾಲದ ಮೇಲೆ ಇಷ್ಟವಾಗದೆ ಹೋಗುತ್ತದೆ. ಹೊಸ ಹೊಸ ವಿಷಯಗಳು. ನಮ್ಮ ಗಮನಕ್ಕೆ ಬರುವುದೆಲ್ಲವೂ ಅರ್ಥವಾಗುವುದಿಲ್ಲ. ಅರ್ಥವಾದದ್ದೆಲ್ಲವೂ ಇಷ್ಟವಾಗುವುದಿಲ್ಲ. ಇಷ್ಟವಾದದ್ದೆಲ್ಲವೂ ನಮ್ಮದಾಗುವುದಿಲ್ಲ. ನಮ್ಮದಾದದ್ದೆಲ್ಲ್ಲವೂ ನಮ್ಮದಾಗೆ ಉಳಿಯುವುದಿಲ್ಲ. ನಾವು ಇಷ್ಟಪುದುವುದಕ್ಕೆ ಅಥವಾ ಇಷ್ಟಪಡದೆ ಇರುವುದಕ್ಕೆ, ನಮ್ಮದೇ ಆದ ಕಾರಣಗಳಿರಬಹುದು ಅಥವಾ ಕಾರಣವೇ ಇಲ್ಲದಿರಬಹುದು.
ಮನಸ್ಸಿನಲ್ಲಿ ನಡೆಯುವ ಪ್ರತಿ ಪ್ರಕ್ರಿಯೆಯೂ ಬಹಳ ವಿಚಿತ್ರವಾಗಿರುತ್ತದೆ. ಇದರೊಳಗೆ ಏನೇನೂ ಬೇಕಾದ್ದು ಬೇಡದ್ದು ಎಲ್ಲಾ ವಿಚಾರಗಳ ಅಡುಗೆಯ ಪಾಕ ನಡೆಯುತ್ತಲೇ ಇರುತ್ತದೆ. ಇನ್ನು ಹೀಗೆ ಬರುವ, ಮನದಲ್ಲೇ ಉಳಿಯುವ, ಮಂದು ಹೋಗುವ ವಿಚಾರಗಳಿಂದ ದೇಹದ ಮೇಲೆ ಆಗುವ ಪ್ರಭಾವವೂ ಸಹ ಬಹಳ ವಿಚಿತ್ರ. ಅದು ಏಕೆ ಹಾಗೆ ನಡೆಯುತ್ತದೆ ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ. ನಮ್ಮ ಮನದಿಂಗಿತ ಪರರಾರಿಗೂ ಅರ್ಥವಾಗುವುದೇ ಇಲ್ಲ. ಪರರ ಮನದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿಯುವುದಿಲ್ಲ. ಇಂತಹ ಒಂದು ಯಂತ್ರವನ್ನು ಏಕೆ ರಚಿಸಿದನೋ ಆ ಬ್ರಹ್ಮ ಎನ್ನುತ್ತಾರೆ ಶ್ರೀ ಗುಂಡಪ್ಪನವರು.
ವಾಚಕರೆ ಇಲ್ಲಿ ನಾವು ನಮ್ಮ ನಮ್ಮೊಳಗೇ ವಿಚಾರಮಾದಬೇಕಾದ ವಿಚಾರವೆನೆಂದರೆ, ಮನಸ್ಸು ಸ್ಥಿಮಿತದಲ್ಲಿ ಇದ್ದರೆ, ನಿರಮಳವಾಗಿದ್ದರೆ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಸಂಸಿದ್ಧವಾಗಿದೆ. ಹಾಗಾಗಿ ನಾವು ನಮ್ಮ ಮನಸ್ಸುಗಳನ್ನು ಆದಷ್ಟು ನೆಮ್ಮದಿಯಿಂದ ಇಟ್ಟುಕೊಳ್ಳಲು ಪ್ರಯತ್ನಪಡುವ.
 

1 ಕಾಮೆಂಟ್‌:

Unknown ಹೇಳಿದರು...

ಅದ್ಭುತವಾದ ಕಾರ್ಯ ಸರ್.👍 ತುಂಬಾ ಧನ್ಯವಾದಗಳು ಸರ್🙏