ಮಂಕುತಿಮ್ಮನ ಕಗ್ಗ (21-40)

ಮಂಕುತಿಮ್ಮನ ಕಗ್ಗ (21-40)

 ರಸಧಾರೆ - 021
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡದನು ವಿಧಿ
ಮಣ್ಣೆನುವನ್, ಅವನವರ ಮಣ್ಣೆನುವೆ ನೀನು
ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ
ಪಣ್ಯಕ್ಕೆ ಗತಿಯನ್ತೋ? ಮಂಕುತಿಮ್ಮ
ಹೊನ್ನು ಎಂದು ಜಗದಿ ನೀ೦ ಕೈಗೆ ಕೊಂಡದನು ವಿಧಿ ಮಣ್ಣೆನುವನು, ಅವನ ವರ ಮಣ್ಣೆನುವೆ ನೀನು
ಭಿನ್ನವು ಇಂತಿರೆ ವಸ್ತು ಮೌಲ್ಯಗಳ ಗಣನೆಯು ಈ ಪಣ್ಯಕ್ಕೆ ಗತಿಯೇನೋ ಮಂಕುತಿಮ್ಮ
ಹೊನ್ನು = ಚಿನ್ನ, ಜಗದಿ = ಜಗತ್ತಿನಲ್ಲಿ, ಭಿನ್ನ = ವ್ಯತ್ಯಾಸ, ಪಣ್ಯ = ವ್ಯಾಪಾರ.
ಯಾವುದನ್ನು ನೀನು ಚಿನ್ನ ಎಂದು ಕೈಗೆ ಎತ್ತಿಕೊಳ್ಳುತೀಯೋ, ಅದು ವಾಸ್ತವದಲ್ಲಿ ಚಿನ್ನವಾಗಿರದೆ, ಮಣ್ಣಂತೆ ನಿಷ್ಪ್ರಯೋಜಕವಾಗುತ್ತದೆ. ಆದರೆ ಕೆಲವು ಬಾರಿ ಬಯಸದೆ ಸಂದ ಭಾಗ್ಯವನ್ನು, ಆಪರಮಾತ್ಮನ ಕರುಣೆಯಿಂದ ವರ ರೂಪದಲ್ಲಿ ಸಂದದ್ದು ನಿನಗೆ ನಿಷ್ಪ್ರಯೋಜಕವಾಗಿ ಕಾಣುತ್ತದೆ. ಹೀಗೆ ವಸ್ತುಗಳ ನಿಜರೂಪ ಗುರುತಿಸುವುದರಲ್ಲಿ ನಮಗೆ ವ್ಯತ್ಯಾಸವಾದರೆ ಈ ಜಗತ್ತಿನ ವ್ಯಾಪಾರ ನಡೆಯುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು.
ನಮ್ಮ ಜೀವನಗಳಲ್ಲಿ ಇದು ಬಹಳ ಸತ್ಯವಾದ ಮಾತು. ನಮಗೆ ವಸ್ತುಗಳು ಬೇಕು. ವ್ಯಕ್ತಿಗಳು ಬೇಕು, ವಿಷಯಗಳು ಬೇಕು. ಆದರೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಒಳಿತೋ ಇಲ್ಲವೋ ನಮಗೆ ಗೊತ್ತಿಲ್ಲ. ಎಷ್ಟೋಬಾರಿ ನಾವು ಇಷ್ಟಪಟ್ಟು ಆಯ್ದುಕೊಂಡದ್ದು ನಮಗೆ ತೊಂದರೆಗಳಿಗೆ, ಮಾನಸಿಕ ಹಿಂಸೆಗೆ, ಕಾರಣವಾಗಬಹುದು. ಹೀಗೆ ಆಗಲಿಕ್ಕೆ ಕಾರಣವೇನು ಎಂದರೆ, ಅದಕ್ಕೆವಿಧಿಯನ್ನು ಕಾರಣರಾಗಿಸುತ್ತಾರೆ ಶ್ರೀ ಗುಂಡಪ್ಪನವರು. ಆದರೆ ಅದು ಹೀಗೂ ಇರಬಹುದು. ನಾವು ಒಂದು ವಸ್ತು,ವ್ಯಕ್ತಿ, ವಿಷಯವನ್ನು ಬೇಕು ಎಂದುಕೊಳ್ಳುವುದೇ ತಪ್ಪಿರಬಹುದು. ಅಥವಾ ನಮ್ಮ ಆಯ್ಕೆಯೇ ತಪ್ಪಾಗಿರಬಹುದು. ಹೊರನೋಟಕ್ಕೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಹಿತವಾಗಿಯೋ, ಸವಿಯಾಗಿಯೋ ಕಂಡರೂ ನಮ್ಮ ದೈಹಿಕ ಮತ್ತು ಮಾನಸಿಕ ಪ್ರಕೃತಿಗೆವಿರುದ್ಧವಾಗಿರಬಹುದು ಹಾಗಾಗಿ ದೋಷ ನಮ್ಮ ಆಯ್ಕೆಯಲ್ಲಿದೆಯೇ ಹೊರತು ಆ ವಸ್ತು, ವ್ಯಕ್ತಿ, ವಿಷಯದಲ್ಲಿ ಇಲ್ಲ ಅಲ್ಲವೇ?. ಹಾಗಾದಾಗ ಹೊನ್ನೆಂದುನಾವು ವಸ್ತು, ವ್ಯಕ್ತಿ, ವಿಷಯಗಳನ್ನು ಆಯ್ಕೆಮಾಡಿದಾಗ, ಅದು ನಮಗೆ ಹಿತವಾಗಿಲ್ಲದೆ ನಿಶ್ಪ್ರಯೋಜಕವಾಗುವುದು ಎಂಬುದು ಇಲ್ಲಿನ ಅಂತರ್ಯ.
ಇನ್ನು ನಾವು ಬಯಸದೆ ಬಂದ, ಸಂದ ಮತ್ತು ಪಡೆದುಕೊಂಡ ವಸ್ತು, ವ್ಯಕ್ತಿ, ವಿಷಯಗಳು ನಮಗರಿವಿಲ್ಲದಂತೆಯೇ ನಮಗೆ ಹಿತವನ್ನು ಮಾಡುತ್ತಿರಬಹುದು. ಇದರ ಅನುಭವ ನಮಗೆ ಬಹಳ ಬಾರಿ ಆಗಿರುತ್ತದೆ. ಆದರೆ ಅದು ನಾವು ಇಷ್ಟಪಟ್ಟುಪಡೆದುಕೊಂಡಿಲ್ಲವಾದ್ದರಿಂದ ನಮಗೆ ಅದರ ಮಹತ್ವ ಅರ್ಥವಾಗುವುದಿಲ್ಲ. ಅವನದೇ ಕಣಪ್ಪ ಅದೃಷ್ಟ. ಹಿಂಗೆ ಅಂದ್ಕೊಂಡೆ ಇರ್ಲಿಲ್ಲ ಕಣಯ್ಯಾ. ಎಂಥ ಚಾನ್ಸು ನೋಡುಇಂತಹ ಮಾತುಗಳನ್ನು ನಾವು ಎಷ್ಟೋಬಾರಿ ಕೇಳಿರುತ್ತೇವೆ. ಅದೇ ಅವನವರಎಂದು ಶ್ರೀ ಗುಂಡಪ್ಪನವರು ಹೇಳುತ್ತಾರೆ.
ಹಾಗಾದರೆ ನಾವು ಇಷ್ಟಪಟ್ಟದ್ದೆಲ್ಲ ಹಾಗೆ ಆಗುವುದೇ? ಎಂದರೆ ಇಲ್ಲ. ಎಲ್ಲ ಹಾಗಾಗುವುದಿಲ್ಲ. ಆದರೆ ಹೆಚ್ಚಿನ ಮಟ್ಟಿಗೆ ಹಾಗಾಗುತ್ತದೆ. ಮೇಲ್ನೋಟಕ್ಕೆ ಎಲ್ಲ ಸರಿಯಾಗಿದೆ ಎಂದು ನಾವು ಕಂಡರೂ , ಪ್ರತಿವ್ಯಕ್ತಿಯೂ, ತಾನು ಬಯಸಿದ್ದು, ತಾನು ಪಡೆದಿದ್ದು, ಅದರಿಂದ ತಾನು ಅನುಭವಿಸುವ ಕಷ್ಟ, ಸಂಕಟ, ಜಿಗುಪ್ಸೆ, ಇವುಗಳನ್ನು ತೋರ್ಪಡಿಸದೆ, ಅಂತರ್ಯದಲ್ಲಿಅನುಭವಿಸುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಏಕೆಂದರೆ ನಾವು ನೀವು ಎಲ್ಲರೂ ಇದನ್ನು ಅನುಭವಿಸಿಯೇ ಇರುತ್ತೇವೆ. ಹಾಗಾದರೆ ನಾವು ಬಯಸುವುದೇ ಬೇಡವೇ ಎಂದು ವಿಚಾರಮಾಡಿದರೆ ನಮಗೆ ಸಿಗುವ ಉದಾಹರಣೆ ಹೇಗಿದೆ.
ಒಂದು ತಾಯಿ, ತನ್ನ ಮಗುವಿಗೆ ಏನು ಬೇಕು, ಯಾವುದು ಒಳ್ಳೆಯದು, ಯಾವುದರಿಂದ ಆ ಮಗುವಿಗೆ ಹಿತ ಆರೋಗ್ಯಕರ ಎಂದೆಲ್ಲ ಅರಿತು ಸರಿಯಾದ ಸಮಯಕ್ಕೆ ಕೊಡುತ್ತಾಳೆ. ಆದರೆ ಆ ಮಗುವಿಗೆ ಅದು ಅರ್ಥವಾಗದೆ ಕಂಡ ಕಂಡದ್ದಕ್ಕೆಲ್ಲ ರಚ್ಚೆ ಮಾಡಿ, ಹಠಮಾಡುತ್ತದೆ. ನಮ್ಮ ಪರಿಸ್ಥಿತಿಯೂ ಹಾಗೆ ಇದೆ. ನಮಗೆಲ್ಲರಿಗೆ ತಾಯಿಸ್ಥಾನದಲ್ಲಿರುವ ಆ ಪರಮಾತ್ಮ ನಮಗೆ ವಿಧಿ ಪ್ರಕಾರ, ಏನು, ಎಷ್ಟು, ಯಾವಾಗ, ಯಾರ ಮೂಲಕ, ನಮಗೆ ಹಿತವಾದದ್ದನ್ನು ಕೊಡಿಸಬೇಕೋ ಕೊಡಿಸುತ್ತಾನೆ. ಅದ್ದನ್ನರಿಯದೆ ನಾವು ನಾವು ಬಯಸಿದ ವಸ್ತು ಸಿಗದೇ ಹೋದರೆ, ” ಅಯ್ಯೋ ದೇವರೇ ನನಗೇ ಯಾಕೆ ಹೀಗೆಎಂದು ಆ ದೇವರನ್ನು ಬಯ್ಯುತ್ತ, ನಮ್ಮ ಹಣೆಬರಹಾನೆ ಇಷ್ಟುಎಂದು ನಮ್ಮನ್ನು ನಾವೇ ಹಳಿದುಕೊಳ್ಳುತ್ತಾ ಬದುಕುತ್ತೀವಿ.
ನೋಡಿ ಒಂದು ವಿಷಯ. ಒಂದು ನೆಮ್ಮದಿಯ ವಿಷಯ. ಆ ಪರಮಾತ್ಮನ ಉಕ್ತಿನೀನು ನನಗೆ ಶರಣಾಗು. ನಾನು ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ.ಎಂದು ಹೇಳಿರುವಾಗ ಮತ್ತೇನು. ಮತ್ತೆನೀ ಏನೂ ಕೇಳಬೇಡ, ಹಾಗೆ ನೀ ಏನು ಕೇಳಿದರೂ ಕೊಡುವೆ. ಆದರೆ ನೀ ಹಾಗೆ ಕೇಳಿ ಪಡೆದುಕೊಂಡ ವಸ್ತುವಿನಿಂದ ಬರುವ ಎಲ್ಲ ನೋವು, ಸಂಕಟ, ಕಷ್ಟ, ಕಾರ್ಪಣ್ಯಗಳನ್ನೆಲ್ಲ ನೀನೇ ಅನುಭವಿಸಬೇಕು. ಆದರೆ ನೀ ನನ್ನನು ಏನೂ ಕೇಳದಿದ್ದರೆ, ನಿನಗೇನೂ ಸೂಕ್ತವೋ ,ಹಿತವೋ, ಅದನ್ನು ನಾನೇ ನಿನಗೆ ಸರಿಯಾದ ಸಮಯಕ್ಕೆ ಕೊಡುವೆ. ಆಯ್ಕೆನಿನ್ನದುಎಂದಾಗ. ಮತ್ತೇಕೆ ನಾವು ಕೇಳಬೇಕು?. ಹಾಗೆ ಕೇಳಬೇಕೆಂದರೆ ಆ ಪರಮಾತ್ಮನನ್ನೇ ನನ್ನ ಮನಸ್ಸಿಗೆ ನಿರಂತರವಾಗಿ ಬಾಎಂದು ಕೇಳಬೇಕು, ಅಲ್ಲವೆ ವಾಚಕರೆ? .
ಇನ್ನು ಹೀಗೆ ನಮಗೆ ಬೇಡದ ಹಿತವಲ್ಲದ ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸಿ ಅದರಿಂದ ಪಡಬಾರದ ಕಷ್ಟಗಳನ್ನು ಪಡುವಾಗ, ಆ ವಿಧಿಯಿಂದ ಸಿಕ್ಕ ವಸ್ತುಗಳ ಬೆಲೆ ನಾವು ಅರಿಯದಾದಾಗ ಇಲ್ಲಿ ಜಗದ್ವ್ಯಾಪಾರದಲ್ಲಿ ವ್ಯತ್ಯಯ ಉಂಟಾಗದೇ ಇನ್ನೇನು ಎನ್ನುವ ಅರ್ಥದಲ್ಲಿ ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ ಪಣ್ಯಕ್ಕೆ ಗತಿಯನ್ತೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಹಾಗಾಗಿ ವಾಚಕರೆ, ತಾಯಿ ಸ್ವರೂಪದ ಆ ಪರಮಾತ್ಮನಲ್ಲಿ ಶರಣಾಗಿ ನಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು, ನಮ್ಮ ಆಯ್ಕೆಯ ಮೇಲೆ ಅಧಾರಪಡದೆ, ಎಲ್ಲವನ್ನೂ ಆ ಪರಮಾತ್ಮನಿಗೆ ಅರ್ಪಿಸಿ, ನಮಗೆ ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಹೋದರೆ, ನಮಗೇನು ಹಿತವೋ ಅದನ್ನು ಆ ಪರಮಾತ್ಮ ನೀಡುತ್ತಾನೆ, ಅದೇ ನನಗೆ ಹಿತ ಎಂದು ಅರಿತರೆ, ನಮಗೆ ಹಿತ. ಒಟ್ಟಾರೆ ಹೇಳುವುದಾದರೆ, ” ಅಹಂಕಾರ ಬಿಟ್ಟರೆ ಹಿತ ಎನ್ನುವ ಅರ್ಥದಲ್ಲಿದೆ ಈ ಕಗ್ಗದ ಅಂತರ್ಯ.
ರಸಧಾರೆ - 022
ಕೃತ್ರಿಮವೋ ಜಗವೆಲ್ಲ | ಸತ್ಯತೆಯದೆಲ್ಲಿಹುದೋ?
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು
ಚತ್ರವೀ ಜಗವಿದರೋಳಾರ ಗುಣವೆಂತಹುದೋ
ಯಾತ್ರಿಕನೆ, ಜಾಗರಿರೋ ಮಂಕುತಿಮ್ಮ
ಕೃತ್ರಿಮ = ಡಾ೦ಬಿಕತೆ, ನಾಟಕ, ಬೂಟಾಟಿಕೆ. ಕರ್ತೃವು = ಜಗತ್ತನ್ನು ಸೃಷ್ಟಿಮಾಡಿದ ಶಕ್ತಿ. ಗುಪ್ತ = ಅವ್ಯಕ್ತನಾಗಿ, ಅಮೂರ್ತನಾಗಿ, ಕಣ್ಣಿಗೆ ಕಾಣದೆ. ಯಾತ್ರಿಕ = ಪಯಣಿಗ. ಜಾಗರಿರು - ಜಾಗ್ರತೆಯಾಗಿರು.
ಕ್ರುತ್ರಿಮವು ಜಗವೆಲ್ಲ ಸತ್ಯತೆಯು ಎಲ್ಲಿಹುದೋ ? ಕರ್ತೃವೆನಿಸಿದವನು ತಾಂ ಗುಪ್ತನಾಗಿಹನು
ಚತ್ರವೀ ಜಗವಿದು ಇದರೊಳು ಯಾರ ಗುಣವೆಂತಹುದೋ ಯಾತ್ರಿಕನೆ ಜಾಗರಿರೊ ಮಂಕುತಿಮ್ಮ
ಹಿಂದಿನ ಐದು ಕಗ್ಗಗಳಲ್ಲಿ ವೇದಾಂತದ ಹಲವು ವಿಚಾರಗಳನ್ನು ನಮಗೆ ಅರುಹುತ್ತಾ, ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು, ಈ ಜಗತ್ತಿನ ಪ್ರಸ್ತಾಪ ಮಾಡುತ್ತಾರೆ. ಈ ಜಗತ್ತು ಕೃತ್ರಿಮವೆನ್ನುತ್ತಾರೆ. ಇದನ್ನು ಕೇವಲ ಮಾನವರಜಗತ್ತಿಗೆ ಅನ್ವಯಿಸಿಕೊಳ್ಳಬೇಕು. ಏಕೆಂದರೆ, ಗಿಡ, ಮರ, ಪಶು ಪಕ್ಷಿ ಮತ್ತು ಅನ್ಯ ಜೀವಿಗಳಲ್ಲಿ ಇಂದಿಗೂ ಕೃತ್ರಿಮತೆ ನಾವು ಕಾಣುವುದಿಲ್ಲ. ಈ ಕೃತ್ರಿಮತೆ ಏನಿದ್ದರೂ ಕೇವಲ ಮಾನವರಿಗೆ ಅನ್ವಯಿಸುತ್ತದೆ. ಏಕೆ ಹೀಗೆ? ಮಾನವರಲ್ಲಿ ಮಾತ್ರ ಏಕೆ? ಮಾನವರು ಮೊದಲಿನಿಂದಲೂ ಹೀಗೇ ಇದ್ದಾರೆಯೇ ಅಥವಾ ಈ ಕೃತ್ರಿಮತೆ ಕಾಲಕ್ರಮೇಣ ಜನಮಾನಸದಲ್ಲಿ ಹೊಕ್ಕಿದೆಯೇ?” ಎಂಬುದನ್ನು ಯೋಚಿಸಿದಾಗ ನಮಗೆ ಕಾಣುವುದು ಹೀಗೆ . ಮಾನವಮೊದಲಿನಿಂದಲೂ ಕೃತ್ರಿಮನಲ್ಲ. ಪ್ರಕೃತಿಯ ಮಗುವಾಗಿ ಪ್ರಕೃತಿಯಲ್ಲಿ ಒಂದಾಗಿ ಅಲ್ಲೇ ಜೀವಿಸುತ್ತಿದ್ದ. ಅವನೂ ಸಹ ಮಿಕ್ಕೆಲ್ಲ ಪ್ರಾಣಿಗಳಂತೆ, ತನ್ನ ಆಹಾರ ಹುಡುಕುವುದು, ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮತ್ತು ತನ್ನ ಸಂತತಿಯನ್ನು ಬೆಳೆಸುವುದು, ಇಷ್ಟಕ್ಕೆ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡಿದ್ದ.
ಮಾನವ ಕಾಲಕ್ರಮೇಣ ಸಂಗ ಜೀವಿಯಾದ. ಅಲೆಮಾರಿಯಾಗಿದ್ದ ಅವನು ಒಂದು ಕಡೆ ನೆಲೆನಿಲ್ಲಲು ಆರಂಭಿಸಿದ ದಿನದಿಂದ ಅಲ್ಪ ಅಲ್ಪವಾಗಿ ಇವನಲ್ಲಿ ಇದು ತನ್ನದು, ಇದು ತನಗೆ, ಇವರು ತನ್ನವರು ಎಂಬ ಮಮಕಾರದ ಭಾವಗಳು ಬಂದವು. ಮುಕ್ತನಾಗಿದ್ದ ಮನುಷ್ಯ ತನ್ನ ಸುತ್ತ ಒಂದು ವೃತ್ತವನ್ನು ಎಳೆದುಕೊಂಡ. ಆ ವೃತ್ತದಲ್ಲಿ ಇರುವುದೆಲ್ಲ ತನ್ನದು ಎನ್ನುವ ಮಮಕಾರವನ್ನು ಬೆಳೆಸಿಕೊಂಡ. ಕ್ರಮೇಣ ಅವನ ಪರಿವಾರ ಬೆಳೆದಂತೆ, ಆ ವೃತ್ತವನ್ನೂ ದೊಡ್ದದಾಗಿಸುವ ಪ್ರಯತ್ನ. ಹೀಗೇ ಅವನಿಗೆ ವಸ್ತು ಸಂಚಯನ ಅಭ್ಯಾಸವಾಗಿಹೋಯಿತು. ಇಷ್ಟಿದ್ದರೆ ಇನ್ನಷ್ಟರಾಸೆ. ಕಡಿಮೆ ಸಂಪನ್ಮೂಲಗಳಿಗೆ ಅಧಿಕ ಬೇಡಿಕೆಯಾದರೆ, ಪೈಪೋಟಿ ಬೆಳೆಯುತ್ತದೆಎನ್ನುವುದು ಅರ್ಥಶಾಸ್ತ್ರದ ಸಿದ್ಧಾಂತ. ಆ ಸಿದ್ಧಾಂತದ ಪ್ರಕಾರ, ಮನುಷ್ಯ ಮನುಷ್ಯನ ಮಧ್ಯೆ ತೀವ್ರ ಪೈಪೋಟಿ. ಎಲ್ಲ ವಿಷಯದಲ್ಲೂ. ಅಲ್ಲಿ ಎಲ್ಲರೂ, ಎಂದಿಗೂ ಮುಂಚೂಣಿಯಲ್ಲಿ ನಿಲ್ಲಲು ಸುಳ್ಳು, ಮೋಸ, ದಗಾ, ಎಲ್ಲವನ್ನೂ ತನ್ನ ಮನೋಭಾವದಲ್ಲಿ ಅಳವಡಿಸಿಕೊಂಡ. ಯಾರು ಹೆಚ್ಚು ಸುಳ್ಳನ್ನು, ಹೆಚ್ಚು ಸಮರ್ಪಕವಾಗಿ, ಸುಳ್ಳರೆಂದು ಬಯಲಾಗದೆ, ಹೆಚ್ಚು ಸಮಯಕ್ಕೆ ಹೇಳಬಲ್ಲವರೋ ಅವರೇ ಈ ಪೈಪೋಟಿಯಲ್ಲಿ ಗೆಲ್ಲುತ್ತಾ ಬಂದರು. ಗೆಲುವಿಗೆ
ಇದು ಒಂದು ಸೂಕ್ತ ಮಾರ್ಗವೆಂದು ಮನಗಂಡು ಅದನ್ನೇ ಅಭ್ಯಾಸಮಾಡಿ, ತಮ್ಮ ಸ್ವಾಭಾವವಾಗಿಸಿಕೊಂಡರು. ರುಚವೆಂದರೆ ಮನದೊಳಗಿನ ಭಾವ. ಸತ್ಯವೆಂದರೆ ಆ ಮನದೊಳಗಿನ ಆ ಭಾವ ಹಾಗೇ, ಬದಲಾಗದೆ, ವ್ಯಕ್ತವಾದರೆ ಅದು ಸತ್ಯ. ಆದರೆ ಇಂದು ರುಚದಲ್ಲೂ ಕುಟಿಲತೆ, ಸತ್ಯದಲ್ಲೂ ಕುಟಿಲತೆ. ಇದನ್ನೇ ಮಾನ್ಯ ಗುಂಡಪ್ಪನವರು ಕೃತ್ರಿಮವು ಜಗವೆಲ್ಲ ಸತ್ಯತೆಯೆದಲ್ಲಿಹುದೋ ಎಂದರು
ಆದರೆ ಇವುಗಳನ್ನೆಲ್ಲ ಮತ್ತು ಎಲ್ಲ ಪ್ರಾಣಿಗಳನ್ನು ಸೃಷ್ಟಿಸಿದ ಆ ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ ಎನ್ನುತ್ತಾರೆ, ಶ್ರೀ ಡಿ ವಿ. ಜಿ. ಅಂದರೆ ಮನುಷ್ಯರ ಮನಸ್ಸುಗಳಲ್ಲಿ ಆ ದೈವ ಭಕ್ತಿ, ಪರಮಾತ್ಮ ಸೃಷ್ಟಿಯಾದ ಈ ಜಗತ್ತನ್ನು ಪೂಜಾಭಾವದಿಂದ ನೋಡುವ ಪರಿ, ಎಲ್ಲವೂ ಆ ಪರಮಾತ್ಮನ ಸೃಷ್ಟಿ, ಇದನ್ನು ನಾನು ದುರುಪಯೋಗಪಡಿಸಿಕೊಳ್ಳಬಾರದು, ಮತ್ತು ಅವನು ನಿರ್ಮಿಸದ ಲೋಕದಲ್ಲಿ ನಾನೂ ಎಲ್ಲರಂತೆ, ಹಾಗಾಗಿ ದುರಾಸೆ, ದುರ್ಭಾವ, ದುರಾಲೋಚನೆ, ಸುಳ್ಳು ಮೋಸ, ತಟವಟ ಇವೆಲ್ಲವೂ ಇರಬಾರದು,ಇದ್ದರೆ ನಾನು ಆ ದೈವದ ಅವಕೃಪೆಗೆ ಪಾತ್ರನಾಗುತ್ತೇನೆಂಬ ಭಯ ಯಾವುದೂ ಇಲ್ಲದೆ ಸ್ವೇಚ್ಚಾ ಮನೋಭಾವ ಬೆಳೆಸಿಕೊಂಡಿರುವುದರಿಂದ, ಅವನ ಮನಸ್ಸಿನಲ್ಲಿ ಆ ದೈವವಿಲ್ಲದಿರುವುದರಿಂದ, ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಆ ದೇವರು ನಮ್ಮೆಲ್ಲರ ಕಲ್ಪನೆಯೆಂತೆ ಇರುವನೋ ಇಲ್ಲವೋ ಎಂಬ ಜಿಜ್ಞಾಸೆ ಬೇಡ. ಆದರೆ ಒಂದು ಮಾತು ಸತ್ಯ. ಆ ದೈವವಿದೆ, ನಾವದರ ಅಧೀನ ಎಂಬ ಭಾವಗಳು, ಮಾನವರು ಸಂಸ್ಕಾರವನ್ನು ಬೆಳೆಸಿಕೊಳ್ಳಲು ಮತ್ತು ಅವರೇ ನಿರ್ಮಿಸಿಕೊಂಡ ಸಮಾಜದಲ್ಲಿ ಒಂದು ಸಂಯಮ ಮತ್ತು ಶಿಸ್ತು ಇರಲು ಕಾರಣವಾಗಿದೆ ಎಂದರೆ ಅದು ಒಳ್ಳೆಯದೇ ಅಲ್ಲವೇ. ಅಂತಹ ದೈವದಲ್ಲಿ ಇಂದು ಭಯ ಭಕ್ತಿಗಳು ಇಂದು ಕಾಣೆಯಾಗಿವೆ ಎನ್ನುವ ಅರ್ಥದಲ್ಲಿ ಆ ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ವಾಚಕರೆ ಇದರ ವಿಚಾರವನ್ನು ಎಲ್ಲರೂ ಮಾಡಲೇ ಬೇಕು. ಏಕೆಂದರೆ ಯಾವುದೋ ಇದ್ದರೆ ಸಮಾಜ ಒಳ್ಳೆಯ ಸಮಾಜವಾಗಿ ಪರಿವರ್ತನೆಗೊಳ್ಳುತ್ತದೆ ಎಂದು ಅರಿತರೆ, ನಮ್ಮ ಸಮಾಜ ಸುಧಾರಿಸಲು ಎಲ್ಲೋ ಒಂದು ಮಾರ್ಗವಿದೆ ಎಂದು ಅರಿತುಕೊಳ್ಳಬಹುದು. ಎಲ್ಲರೂ ಅದನ್ನು ಸಾಧಿಸಲು ಪ್ರಯತ್ನಿಸಬೇಕು.
ಇನ್ನು ಈ ಸಮಾಜದಲ್ಲಿ ಹೇಗಿರಬೇಕೆಂದು ಒಂದು ಎಚ್ಚರಿಕೆಯನ್ನು ನೀಡುತ್ತಾರೆ ಶ್ರೀ ಡಿ ವಿ. ಜಿ ಯವರು, ಇಂತಹ ವಿಚಿತ್ರವಾದ ಜಗತ್ತಿನಲ್ಲಿ ಯಾರ ಗುಣ ಹೇಗಿರುತ್ತೋ ತಿಳಿಯುವುದು ಕಷ್ಟ ಎನ್ನುತ್ತಾರೆ. ನಯ ವಂಚಕರಿರುವ ಈ ಜಗತ್ತಿನಲ್ಲಿ ಮೋಸಮಾಡುವವರು ಕಡಿಮೆಯಾದರೂ ಮೋಸಹೋಗುವವರ ಸಂಖ್ಯೆ ಅಧಿಕ. ಇಲ್ಲಿ ಒಂದು ವಿಷಯ ಹೇಳಬೇಕು. ಮೋಸಮಾಡಲು ಬುದ್ಧಿವಂತಿಕೆ ಬೇಕು. ಎಲ್ಲ ಬುದ್ಧಿವಂತರೂ ಮೋಸಗಾರರಲ್ಲ. ಆದರೆ ಎಲ್ಲ ಮೋಸಗಾರರೂ ಬುದ್ಧಿವಂತರುಎನ್ನುವುದು ಸತ್ಯವಾದ ಮಾತು. ಇಂತಹವರ ಸಂಖ್ಯೆ ಕಡಿಮೆಯಾದರೂ ಅವರ ಬಲೆಗೆ ಬೀಳುವ ಜನರ ಸಂಖ್ಯೆ ಹೆಚ್ಚಾದ್ದರಿಂದ ಎಲ್ಲರೂ ಒಂದಲ್ಲ ಒಂದು ಬಾರಿ ಆ ಮೋಸದ ವಂಚನೆಯ ಕೃತ್ರಿಮತೆಯ, ತಟವಟದ ಜನರ ಬಲೆಯಲ್ಲಿ ಸಿಕ್ಕು ಕಷ್ಟಪಟ್ಟಿರುವವರೇ ಆಗಿರುತ್ತಾರೆ. ಹಾಗಾಗಿ ನೀ ಜಾಗರೂಕನಾಗಿರು ಎಂದು ಎಚ್ಚರಿಕೆಯನ್ನು ನೀಡುತ್ತಾರೆ. ಹಾಗೇ ನೀಡುವಾಗಯಾತ್ರಿಕನೆ ಎನ್ನುವ ಪದ ಪ್ರಯೋಗ ಮಾಡುತ್ತಾರೆ. ಹೌದು ನಾವೆಲ್ಲರೂ ಈ ಜಗತ್ತಿನಲ್ಲಿ ಜೀವನವೆನ್ನುವ ಪ್ರಯಾಣವನ್ನು ಮಾನವರೂಪದ ಈ ಮಣ್ಣಿನ ಬಂಡಿಯಲ್ಲಿ ಮಾಡುವ ಪ್ರಯಾಣಿಕರೇ, ಅಲ್ಲವೇ?
ಹಾಗಾಗಿ ಈ ಜಗತ್ತು ಕೃತ್ರಿಮತೆ, ಕುಟಿಲತೆ, ಸುಳ್ಳು ಮತ್ತು ಮೋಸದಿಂದ ತುಂಬಿದೆ. ದೈವಭಕ್ತಿಯು ನಶಿಸಿದೆ. ಇಲ್ಲಿ ನೀನು ಜಾಗರೂಕನಾಗಿರು ಎಂದು ಎಚ್ಚರಿಸುವ ಭಾವವೇ ಈ ಕಗ್ಗ. ಆದರೆ ಈ ಸ್ತಿತಿ ಅ-ನಿವಾರ್ಯ (incurable) ಅಲ್ಲ. ಎಲ್ಲರೂ ಮನಸ್ಸು ಮಾಡಿದರೆ ಸಾಧ್ಯ. ಇಲ್ಲಿ ಸುಳ್ಳು ಕೃತ್ರಿಮತೆ, ಕುಟಿಲತೆ, ಸುಳ್ಳು ಮತ್ತು ಮೋಸಗಳ ಸ್ಥಾನದಲ್ಲಿ ಕರುಣೆ ಪ್ರೀತಿ ಪ್ರೇಮ ಸಹೃದಯತೆ ಮುಂತಾದ ಭಾವಗಳನ್ನು ಬೆಳೆಸಿಕೊಂಡು ನಾವಿರುವ ಜಗತ್ತನ್ನು ಸುಂದರವನ್ನಾಗಿಸಲು ನಾವೆಲ್ಲರೂ ಪ್ರಯತ್ನಪಡೋಣವೆಂದು ಹೇಳುತ್ತಾ,
ರಸಧಾರೆ - 023
ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು
ಮರಳಿ ಕೊರಗಾಡುವುದು, ಕೆರಳುವುದು ನರಳುವುದು
ಇರವಿದೇನೊಣರಗಳೇ? ಮಂಕುತಿಮ್ಮ
ತಿರು ತಿರುಗಿ ತೊಳಲುವುದು ತಿರಿದು ಅನ್ನವನ್ನು ಉಣ್ಣುವುದು ಮೆರೆದು ಮೈ ಮರೆಯುವುದು ಹಲ್ಲ ಕಿರಿಯುವುದು.
ಮರಳಿ ಕೊರಗಾಡುವುದು ಕೆರಳುವುದು ನರಳುವುದು ಇರವು ಇದೇನು ಒಣ ರಗಳೇ? ಮಂಕು ತಿಮ್ಮ
ತಿರುದು = ಬಿಕ್ಷೆಯತ್ತಿ , ಉಣ್ಣುವುದು = ತಿನ್ನುವುದು, ಕೆರಳುವುದು = ಕೋಪಗೊಳ್ಳುವುದು, ರಗಳೆ = ಪರದಾಟ.
ಮತ್ತೆ ಮತ್ತೆ ಮನುಷ್ಯ ಪರದಾಡುವುದು, ನಾವು ಎಲ್ಲ ಕಡೆಯೂ ಕಾಣಬಹುದು. ಪರದಾಡಿ ಅವರಿವರನ್ನು ಕಾಡಿ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವುದು. ಪಡೆದದ್ದು ಹೆಚ್ಚಾದರೆ ಮೆರೆದು ಅಹಂಕಾರ ತೋರಿಸುವುದು. ತಮ್ಮನ್ನು ತಾವು, ಬಹಳ ಸಾಧಿಸಿದೆವೆಂದು ಅಹಂಕಾರದಿಂದ ಮೆರೆಯುವುದು., ಪಡೆದದ್ದನ್ನು ಉಳಿಸಿಕೊಳ್ಳಲು ಅವರಿವರ ಮುಂದೆ ಹಲ್ಲು ಕಿರಿಯುವುದು, ಗಿಂಜುವುದು, ಬೇಡುವುದು ನಾವು ಸರ್ವೇ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುತ್ತೇವೆ. ತಾವು ಅಂದುಕೊಂಡದ್ದು ಸಿಗದಿದ್ದ್ದರೆ ಕೋಪಗೊಳ್ಳುವುದು,ಹಾಗೂ ಸಿಗದಿದ್ದರೆ, ಕೈಲಾಗತನದಿಂದ ಸಂಕಟಪಡುವುದು ಅಥವಾ ನರಳುವುದು, ಇದನೆಲ್ಲಾ ಮಾನ್ಯ ಡಿ.ವಿ.ಜಿ.ಯವರು ಸತ್ವವಿಲ್ಲದ ಒಣ ರಗಳೆ ಅಥವಾ ಸತ್ವವಿಲ್ಲದ ಜೀವನದ ಪರಿ ಎಂದು ಈ ಕಗ್ಗದಲ್ಲಿ ಸೂಚ್ಯವಾಗಿ ಹೇಳುತ್ತಾರೆ.
ಹೊಟ್ಟೆಪಾಡಿಗಾಗಿಯೇ ಮತ್ತೆ ಮತ್ತೆ ಪರದಾಡುವುದು, ನಮಗೆ ಸೂಕ್ತವೋ ಅಲ್ಲವೋ , ನಾವು ಇಷ್ಟಪಟ್ಟು ಮಾಡುವ ಕೆಲಸವೋ ಅಲ್ಲವೋ, ಆ ಕೆಲಸದಲ್ಲಿ ನಮಗೆ ತೃಪ್ತಿ ಸಿಗುತ್ತದೆಯೋ ಇಲ್ಲವೋ, ಇವೆಲ್ಲವನ್ನೂ ಪರಿಗಣಿಸದೆ ಮಾತ್ರ ಉದರ ಫೋಷಣೆಗಾಗಿಯೇ ಕೆಲಸ ಮಾಡುವುದು. ಇದು ಅವಶ್ಯಕವೇ ಹೌದು. ಆದರೆ ಹೀಗೆ ಮಾಡುವ ಕೆಲಸದಲ್ಲಿ ಒಂದು ಉತ್ಸಾಹವಿಲ್ಲದೆ, ತೃಪ್ತಿಯಿಲ್ಲದೆ, ಕೇವಲ ಯಾಂತ್ರಿಕವಾಗಿ ನಾವು ನಮ್ಮ ಕೆಲಸಕಾರ್ಯಗಳನ್ನು ಮಾಡುತ್ತಿದ್ದೇವೆ. ನಮ್ಮ ಗುಣಕ್ಕೆ, ನಮ್ಮ ಸ್ವಭಾವಕ್ಕೆ ಹೊಂದುವ ಕೆಲಸ ನಾವು ಮಾಡಬೇಕೆಂದರೂ, ಆಗದೆ ಕೇವಲ ಹೊಟ್ಟೆಪಾಡಿಗಾಗಿ ಕೆಲಸಮಾಡುತ್ತ ರಸಾನುಭವವಿಲ್ಲದೆ, ನೀರಸವಾದ ಜೀವನಮಾದುತ್ತೇವೆ. ಅದನ್ನೇ ಒಣ ರಗಳೆ ಎಂದು ಗುಂಡಪ್ಪನವರು ಹೇಳುತ್ತಾರೆ.
ಉದರ ವೈರಾಗ್ಯವಿದು ಎಂದು ಹೇಳುವ ಪುರಂಧರ ದಾಸರ ಪದದಲ್ಲಿನ ಅಂತರ್ಯವೂ ಇದೆ ಆಗಿರುತ್ತೆ. ಹೀಗೆ ಹೊಟ್ಟೆಪಾಡಿಗಾಗಿ ಕೆಲಸಮಾಡುವಾಗ , ನಮಗೆ ಬೇಸರ, ಕೋಪ, ದ್ವೇಷ ಅಸೂಯೆ ಮುಂತಾದವುಗಳೆಲ್ಲ ಮನಸ್ಸಿಗೆ ಬಂದು ಒಂದು ರಸಾನುಭಾವವಿಲ್ಲದೆ ಅತೃಪ್ತಿಯ ಭಾವನೆಯೇ ಇರುವುದು ಹಾಗಾಗಿ ಈ ಜೀವನವೆಲ್ಲ ಒಂದು ಒಣ ರಗಳೆ ಎಂದು ಹೇಳುತ್ತಾರೆ.
ಇದು ಹೀಗೆ ಎಲ್ಲರಿಗೂ ಇರುವುದಿಲ್ಲ. ತಮ್ಮ ಕೆಲಸವನ್ನು ಬಹಳ ಇಷ್ಟಪಟ್ಟು ಮಾಡುವವರೂ ತಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಆಸಕ್ತಿ ತನ್ಮಯತೆ ಮತ್ತು ತೃಪ್ತಿಯನ್ನು ಕಂಡುಕೊಳ್ಳುವವರೂ ಇದ್ದಾರೆ. ಆದರೆ ಅವರ ಸಂಖ್ಯೆ ಬಹಳ ಕಡಿಮೆ. ಬಹಳ ಸಂಖ್ಯೆಯ ಜನ, ಶ್ರೀ ಗುಂಡಪ್ಪನವರು ಹೇಳುವ ಹಾಗೆ ನೀರಸವಾದ ಜೀವನವನ್ನೇ ನಡೆಸುತ್ತಾರೆ. ನಾವೂ ಸಹ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ತೃಪ್ತಿಯನ್ನು ಕಂಡುಕೊಳ್ಳಬಹುದೇನೋ ಎಂದು ಆಲೋಚಿಸುತ್ತಾ………
ಬಾಳ-ಭೂಪಟ ರಸಧಾರೆ - 024
ನರರ ಬಯಕೆಗಳೆ ಸುರರ ತಾಯ್ತಂದೆಗಳೋ? |
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ||
ಪರಕಿಸುವರೇನವರ್ಗಳನ್ಯೋನ್ಯಶಕ್ತಿಗಳ |
ಧರುಮವೆಲ್ಲಿದರಲ್ಲಿ ಮಂಕು ತಿಮ್ಮ ? ||
ನರರ ಬಯಕೆಗಳೆ ಸುರರ ತಾಯಿ ತಂದೆಗಳೋ ಸುರರ ಅಟ್ಟಹಾಸದಿ ಇನೆ ನರಭಕ್ತಿಯ ಒರಲೋಪರಕಿಸುವರೇನು ಅವರ್ಗಳ ಅನ್ಯೋನ್ಯ ಶಕ್ತಿಗಳ ಧರುಮವೆಲ್ಲಿ ಇದರಲ್ಲಿ ಮಂಕುತಿಮ್ಮ.
ನರರ = ಮನುಷ್ಯರ, ಬಯಕೆಗಳೆ = ಆಸೆಗಳೆ, ಸುರರ = ದೇವತೆಗಳ ಅಟ್ಟಹಾಸದಿ = ಆರ್ಭಟದಲ್ಲಿ , ಇನೆ=ಇರಲು, ಒರಲೋ = ಕೂಗೋ ಪರಕಿಸುವರೇನು = ಪರೀಕ್ಷಿಸುವರೇನು, ಅವರ್ಗಳ = ಅವರೀರ್ವರ, ಶಕ್ತಿಗಳ = ಪರಸ್ಪರ ಶಕ್ತಿಗಳ, ಧರುಮ = ಧರ್ಮ.
ಮನುಷ್ಯರ ಬಯಕೆಗಳೇ ಈ ದೇವತೆಗಳಿಗೆ ತಂದೆ ತಾಯಿಗಳೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಹೌದಲ್ಲವೇ ಈ ವಿಶ್ವದ ಎಲ್ಲವನ್ನೂ ಸೃಷ್ಟಿಸಿ ನಡೆಸಿಕೊಂಡು ಹೋಗುವ ಪರಮಾತ್ಮನಾಗಿರುವಾಗ, ಮನುಷ್ಯರು ತಮ್ಮ ತಮ್ಮ ಸಣ್ಣ ಸಣ್ಣ ಬಯಕೆಗಳನ್ನು ಈಡೇರಿಸಿಕೊಳ್ಳಲು ಬೇರೆ ಬೇರ ದೇವತೆಗಳನ್ನು ಸೃಷ್ಟಿಸಿಕೊಂಡಿರುವುದರಿಂದ, ಅವರಿಗೆ ನಮ್ಮ ಬಯಕೆಗಳೇ ತಂದೆ ತಾಯಿಗಳ ಸ್ಥಾನದಲ್ಲಿರುವುದು ತತ್ಯವಲ್ಲವೇ? ಇದನ್ನೇ ಶ್ರೀ ಗುಂಡಪ್ಪನವರು ಹೇಳುತ್ತಾರೆ. ವಿದ್ಯೆಗೆ ಒಂದು ದೇವತೆ, ಹಣಕ್ಕೆ ಒಂದು ದೇವತೆ, ಮಳೆಗೆ ಒಂದು ದೇವತೆ, ಗಾಳಿಗೊಂದು ದೇವತೆ. ನಮಗೆ ಗಿಡ ಮರ ಬಳ್ಳಿಗಳೂ ನದಿ ಬೆಟ್ಟ ಕಾಡುಗಳೂ, ಎಲ್ಲವೂ ದೇವತಾ ಸ್ವರೂಪವೇ. ಹಾಗಾಗಿ ನಾವೇ ನಮ್ಮ ಕಲ್ಪನಾ ಶಕ್ತಿಯಿಂದ, ಆ ಪರಮಾತ್ಮನ ಸೃಷ್ಟಿ ಎಲ್ಲಕ್ಕೂ ದೇವತಾ ರೂಪವನ್ನು ಕೊಟ್ಟಿರುವುದರಿಂದ, ಮನುಷ್ಯರ ಬಯಕೆಗಳೇ ದೇವತೆಗಳಿಗೆ ತಂದೆ ತಾಯಿ ಸ್ಥಾನದಲ್ಲಿದ್ದಾವೆ, ಎಂದು ಗುಂಡಪ್ಪನವರು ಹೇಳುತ್ತಾರೆ.
ಆದರೆ ನಾವು ಯಾವುದನ್ನು ದೇವತೆ ಎಂದು ಕರೆಯುತ್ತೇವೆಯೋ,ಅವುಗಳು, ಆ ಪರಮ ಶಕ್ತಿಯು ಇಡೀ ಸೃಷ್ಟಿಯನ್ನು ನಿಯಂತ್ರಿಸಲು ಬೇರೆ ಬೇರೆ ರೂಪದಲ್ಲಿ ಇಂದ್ರ, ವರುಣ, ಅಗ್ನಿ, ವಾಯು, ದಿಕ್ಪಾಲಕರು ಎಂದು ಕರೆಸಿಕೊಳ್ಳುತ್ತ, ಈ ಜಗದ್ವ್ಯಾಪಾರವನ್ನು ನಡೆಸುತ್ತಿದೆ. ಹಾಗಾಗಿ ಇವರೆಲ್ಲ ಆ ಪರಮಶಕ್ತಿಯ ಅಧೀನದಲ್ಲಿರುವ ಮತ್ತು ಆದೇಶದಂತೆ ನಡೆಯುವವರು. ಭೀಷಾಸ್ಮಾದ್ ವಾತಃ ಪವತೆ, ಭೀಷೋದೇತಿ ಸೂರ್ಯಃ, ಭೀಷಾಸ್ಮಾದ್ ಅಗ್ನಿಸ್ಚೇ೦ದ್ರಶ್ಚಎಂದು ವೇದ ಹೇಳುತ್ತದೆ. ಅಂದರೆ ಆ ಪರಮ ಶಕ್ತಿಯ ಅಧೀನದಲ್ಲಿರುವುದೇ ಇವುಗಳೆಲ್ಲ ಎಂದು ಅರ್ಥ. ಅಂತಹ ದೇವತೆಗಳು ತಮ್ಮ ಅಟ್ಟಹಾಸದಿಂದ, ತಮ್ಮ ಅಧಿಪತ್ಯದಿಂದ ಮತ್ತು ಆಧಿಕ್ಯದಿಂದ ಇರುವುದರಿಂದ, ಮನುಷ್ಯರು ಹೆದರಿ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಈ ದೇವತೆಗಳನ್ನು ಕುರಿತು ಭಕ್ತಿಯಿಂದ ಹುಯಿಲಿಡುತ್ತಿದ್ದಾರೋ ಏನೋ ಎಂಬ ಅರ್ಥದಲ್ಲಿ ನರಭಕ್ತಿಯೊರಲೋಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು.
ಅಥವಾ ದೇವತೆಗಳು ತಮ್ಮ ದೈವೀ ಶಕ್ತಿಯನ್ನು ಮನುಷ್ಯರ ಮೇಲೆ, ಅವರನ್ನು ಪರೀಕ್ಷಿಸಲು ಮತ್ತು ಮನುಷ್ಯರು ತಮ್ಮ ಭಕ್ತಿಯ ಶಕ್ತಿಯಿಂದ ಈ ದೇವತೆಗಳನ್ನೊಲಿಸಿಕೊಳ್ಳಲು, ಒಬ್ಬರಿಗೊಬ್ಬರು ಪೈಪೋಟಿಮಾಡುತ್ತಾ ಇದ್ದರೋ ಎಂದು ಒಂದು ಶಂಕೆಯನ್ನು ವ್ಯಕ್ತಪಡಿಸುತ್ತಾರೆ. ಇದರಿಂದ ಎಲ್ಲರೂ ತಾವು ಆ ಪರಮಶಕ್ತಿಯಿಂದ ಸೃಷ್ಟಿಸಲ್ಪಟ್ಟು, ಸಲುಹಲ್ಪಟ್ಟು,ಅಸ್ತಿತ್ವದಲ್ಲಿದ್ದೇವೆಂಬ ಮೂಲ ಧರ್ಮವನ್ನೇ ಮರೆತಿಹರೇನು ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು.
ಇಲ್ಲಿ ದೇವತೆಗಳನ್ನು ಪೂಜೆಮಾಡುವ ಪ್ರಕ್ರಿಯೆಯನ್ನು ವಿಮರ್ಶೆ ಮಾಡಿದ್ದಾರೆ, ಶ್ರೀ ಗುಂಡಪ್ಪನವರು. ನಾನಾ ದೇವತೆಗಳ ಪೂಜೆಯನ್ನು ವಿಮರ್ಶೆ ಮಾಡಿದ್ದಾರೆ. ಆದರೆ ವಿಮರ್ಶೆಯಷ್ಟೇ. ಅದು ಟೀಕೆಯಲ್ಲ. ಏಕೆಂದರೆ ಅನೇಕ ದೇವತಾ ಪೂಜೆಯಿಂದ ಏಕ ದೇವ ಪೂಜೆಗೆ ಹೋಗುವುದೇ ಆಧ್ಯಾತ್ಮ ಚಿಂತನೆಯ ಮತ್ತು ಪ್ರಯಾಣದ ಮೂಲ ಉದ್ದೇಶ್ಯ. ಹಲವಾರು ದೇವತೆಗಳನ್ನು ಪೂಜಿಸುವುದು ಪ್ರಾಥಮಿಕ ಹಂತ. ಏಕದೈವವನ್ನು ಪೂಜೆಮಾಡುವುದು,ಆಧ್ಯಾತ್ಮದ ಉನ್ನತ ಹಂತ. ಈ ಪೂಜೆಗಳು ಅದರೊಳಗೆ ವೈವಿಧ್ಯೆತೆ, ಮತ್ತು ಹಲ ದೇವತಾ ಪೂಜೆ ಮತ್ತು ಅಲ್ಲಿಂದ ಏಕ ದೈವದ ಆರಾಧನೆಯ ಕ್ರಮ ಇವೆಲ್ಲವನ್ನೂ ವಿಷದವಾಗಿ ತಿಳಿಯಬೇಕು. ನಾವು ಯಾವ ಸ್ಥರದಲ್ಲಿದ್ದೇವೆ ಎಂದು ನಮ್ಮನ್ನೇ ನಾವು ಪರೀಕ್ಷಿಸಿಕೊಳ್ಳಬೇಕು ಮತ್ತು ಆ ಪರರ್ದೈವದಿಂದ ನಿಯಮಿಸಲ್ಪಟ್ಟ ದೇವಾತಾ ಆರಾಧನೆಯ ಮೂಲಕ ಆ ಪರದೈವವನ್ನು ಅರಿಯುವುದರ ಪ್ರಯತ್ನ ಮಾಡಬೇಕು. ಅನೇಕದಿಂದ ಏಕಕ್ಕೆ ಹೋಗುವ ಮಾರ್ಗದಲ್ಲಿ ಪಯಣಿಸಿ ಪರಮಾರ್ಥವನ್ನು ಸಾಧಿಸಬೇಕು.
ರಸಧಾರೆ - 025
ಜೀವಗತಿಗೊಂದು ರೇಖಾಲೇಖವಿರಬೇಕು
ನಾವಿಕನಿಗಿರುವಂತೆ ದಿಕ್ಕುದಿನವೆಣಿಸೆ
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ?
ಆವುದೀ ಜಗಕಾದಿ ? ಮಂಕುತಿಮ್ಮ
ಜೀವಗತಿಗೊಂದು ರೇಖಾ ಲೇಖವು ಇರಬೇಕು. ನಾವಿಕನಿಗೆ ಇರುವಂತೆ ದಿಕ್ಕು ದಿನವನು ಎಣಿಸೆ.
ಭಾವಿಸುವುದು ಎಂತೆ ಅದನು ಮೊದಲು ಕೊನೆ ತೋರದಿರೆ ಆವುದು ಈ ಜಗಕೆ ಆದಿ ಮಂಕುತಿಮ್ಮ.
ರೇಖಾ ಲೇಖ = ಒಂದು ಗೆರೆ ಅಥವಾ ನಿರ್ಧಿಷ್ಟ ಮಾರ್ಗ. ನಾವಿಕ = ಹಡಗ ನಡೆಸುವವ, ಎಂತೆ = ಹೇಗೆ
ಒಂದು ಹಡಗನ್ನು ನಡೆಸಲು ನಾವಿಕನಿಗೆ ಒಂದು ದಿಕ್ಸೂಚಿ ಇರುತ್ತದೆ. ಸುತ್ತಲೂ ಸಮುದ್ರ ಮಧ್ಯದಲ್ಲಿ ಹಡಗು. ತನ್ನ ಗಮ್ಯದ ಕಡೆಗೆ ಹೋಗಲು ಆ ನಾವಿಕನಿಗೆ ದಿಕ್ಕನ್ನು ತೋರಲು ಒಂದು ದಿಕ್ಸೂಚಿ ಬೇಕು. ಆ ದಿಕ್ಸೂಚಿಯ ಸೂಚನೆಯಂತೆ ನಾವಿಕನು ಮುಂದುವರೆಯುತ್ತಾನೆ. ಆಗ ಹಡಗು ಆ ದಿಕ್ಕಿನಲ್ಲಿ ನೇರ ಹೋಗುತ್ತದೆ. ಆದರೆ ಜೀವನದ ಗತಿಗೆ ದಿಕ್ಸೂಚಿ ಯಾವುದು, ಇಲ್ಲ . ಅಂಥಹ ಒಂದು ದಿಕ್ಸೂಚಿ ಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಜೀವನದ ಗತಿಗೆ ಒಂದು ನೇರ ನಡೆ ಇಲ್ಲ. ಆ ನೇರ ನಡೆ ಬೇಕಾದರೆ ಒಂದು ನೇರ ಗೆರೆ ಬೇಕು ಎನ್ನುತ್ತಾರೆ. ಹೌದು ಇಡೀ ಬದುಕಿಗೆ ಒಂದು ನಿರ್ಧಿಷ್ಟ ಗತಿ ಅಥವಾ ಒಂದು ನಿರ್ಧಿಷ್ಟ ಯಾನದ ದಾರಿ ಇಲ್ಲ.
ಒಟ್ಟಾರೆ ಎಲ್ಲರ ಜೀವನದ ಗತಿಯನ್ನೂ ಅವಲೋಕಿಸಿದರೆ, ಏರು ತಗ್ಗುಗಳು, ಏಳು ಬೀಳುಗಳು, ಸುಖ ದುಃಖಗಳು, ಒಂದೇ ರೀತಿ ಇರದ ಬಂಧ-ಸಂಬಂಧಗಳು. ಹೀಗೆ ಯಾವ ಆಯಾಮದಲ್ಲಿ ನೋಡಿದರೂ ಒಂದು ನಿರ್ಧಿಷ್ಟ ಗತಿ ಇಲ್ಲ. ಏಕೆ ಹೀಗೆ ಎಂದು ಮಂಥನ ಮಾಡಿದರೆ ನಮಗೆ ಕಾಣುವುದು ಯಾವುದೋ ಒಂದು ಅವ್ಯಕ್ತ ಶಕ್ತಿಯೇ ನಮ್ಮೆಲ್ಲರ ಜೀವನವನ್ನೂ ನಡೆಸಿಕೊಂಡು ಹೋಗುತ್ತಿದೆ. ಏಕೆ ಹೀಗೆ, ಆವುದಾ ಶಕ್ತಿ ಎಂದು ಅನಾದಿಕಾಲದಿಂದಲೂ ಒಂದು ಜಿಜ್ಞಾಸೆ ನಡೆದೇ ಇದೆ. ಆದರೆ ಇನ್ನೂ ನಿರ್ಧಿಷ್ಟ ಉತ್ತರ ಸಿಕ್ಕಿಲ್ಲ. ಒಬ್ಬ ಬಡವ, ಒಬ್ಬ ಧನಿಕ, ಒಬ್ಬ ರೋಗಿ ಇನ್ನೊಬ್ಬ ನಿರೋಗಿ, ಒಬ್ಬ ಅಲ್ಪಾಯುಷಿ ಮತ್ತೊಬ್ಬ ಧೀರ್ಗಯುಷಿ, ಒಬಾ ಹೆಡ್ಡ ಮತ್ತೊಬ್ಬ ಅತಿ ಬುದ್ಧಿವಂತ, ಒಬ್ಬ ಸುಂದರ ಮತ್ತೊಬ್ಬ ಕುರೂಪಿ, ಹೀಗೆ ಹಲವಾರು ವೈವಿಧ್ಯಗಳಿಂದ ಕೂಡಿರುವುದೇ ಜೀವನ.
ಹೇಗಿರುವವರು ಹಾಗೆ ಇದ್ದು ಅವರ ಜೀವನ ಅದೇ ಗತಿಯಲ್ಲಿ ಅಂದರೆ ನೇರ ರೇಖೆಯಲ್ಲಿ ಮುಂದುವರೆಯುತ್ತದೆಯೇ? ಎಂದರೆ ಅದೂ ಇಲ್ಲ. ಎಲ್ಲವೂ ಬದಲಾಗುತ್ತದೆ, ಇಂದು ಇದ್ದಂತೆ ನಾಳೆ ಇರುವುದಿಲ್ಲ. ಎಲ್ಲವೂ ಕೆಲವೊಂದು ಬಾರಿ ಏರು ಪೇರು. ಏಕೆ ಹೀಗೆ? ಗೊತ್ತಿಲ್ಲ. ಆದರೂ ಮುಂದೆ ಹೋಗುತ್ತದೆ, ಒಂದು ಅಂತ್ಯವನ್ನು ಕಂಡು ಕೊಳ್ಳುತ್ತದೆ. ಯಾವುದೋ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಎಲ್ಲವೂ ನಿಘೂಡ. ಆ ನಿಘೂಡತೆಯನ್ನೇ ಎಲ್ಲರೂ ವಿಧಿ, ದೇವರು, ಭಾಗ್ಯ, ಅದೃಷ್ಟ ಹೀಗೆ ನಾನಾ ಹೆಸರುಗಳಿಂದ ಕರೆದರೂ. ಯಾರಿಗೂ ಅದು ಅರ್ಥವಾಗದಿದ್ದರೂ ಅದರ ಹಿಡಿತದಿಂದ ಬಿಡಿಸಿಕೊಳ್ಳಲಾಗದು.
ಪ್ರತಿಯೊಬ್ಬ ಜೀವಿಯೂ ತನ್ನ ಪೂರ್ವ ಕರ್ಮದ ಅನುಸಾರ ಅವನ ಜೀವನವನ್ನು ಅನುಭವಿಸುತ್ತಾನೆ, ಎಂದರು. ಆ ಪೂರ್ವಕರ್ಮವೂ ಅವನಿಗೆ ಅರ್ಥವಾಗುವುದಿಲ್ಲ. ಯಾವ ಪೂರ್ವ ಕರ್ಮದಿಂದ, ಇಂದಿನ ವಿಧ್ಯಮಾನ ಹೀಗೆ ನಡೆಯುತ್ತಿದೆ ಎಂದು ಅರ್ಥವಾಗುವುದಿಲ್ಲ. ಶುದ್ಧವಾಗಿ, ಪರಮಾತ್ಮನಿಂದ ಬಂದ ಆತ್ಮಕ್ಕೆ , ಈ ಪೂರ್ವಕರ್ಮದ ಸಂಚಯನ ಹೀಗೆ ಆಯ್ತು, ಎಂಬುದೇ ಒಂದು ನಿಘೂಢ. ಆ ಪರಮಾತ್ಮನ ಇಚ್ಛೆಯಂತೆ ಎಲ್ಲ ನಡೆಯುತ್ತದೆ ಎನ್ನುತ್ತಾರೆ. ಅವನ ಇಚ್ಚೆಯೆಂದರೆ ಏನು? ಅದು ಏಕೆ ಹೀಗಿರುತ್ತದೆ ಅದು ಬದಲಾಗುತ್ತಿದ್ದರೂ, ಆ ಬದಲಾವಣೆಗೆ ಕಾರಣವೇನು ಎಂದು ಅರ್ಥವಾಗುವುದಿಲ್ಲ. ಇದರ ಗುಟ್ಟನ್ನು ಚೇಧಿಸಲು, ಅನಾದಿಕಾಲದಿಂದಲೂ ಪ್ರಯತ್ನ ನಡೆಯುತ್ತಿದ್ದರೂ ಅದು ಏನು ಎನ್ನುವುದೂ ಸಹ ನಿಘೂಢ. ಇದರ ಮೊದಲು ಕೊನೆಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂದು ಮಾನ್ಯ ಗುಂಡಪ್ಪನವರು ನಮ್ಮ ಮುಂದೆ ಒಂದು ಪ್ರಶ್ನೆ ಇಡುತ್ತಾರೆ.
ಮಾನ್ಯ ವಾಚಕರೆ, ಇದು ನಿಘೂಡ, ಆದರೆ ನಮ್ಮ ಭಾರತೀಯ ಚಿಂತಕರು ಅದಕ್ಕೆ ತಮ್ಮ ತಮ್ಮದೇ ಆದ ಪರಿಭಾಷೆ, ವಿವರಣೆ ಮತ್ತು ವ್ಯಾಖ್ಯಾನಗಳನ್ನು ನೀಡಿದ್ದರೂ ಯಾವುದೋ ನಿರ್ಧಿಷ್ಟವಿಲ್ಲ. ಆದರೆ ನಮಗೆ ಒಂದು ಗೊತ್ತು. ಯಾವುದು ನಿರ್ಧಿಷ್ಟವಲ್ಲವೋ ಅದನ್ನು ಆ ಪರಮಾತ್ಮನ ಇಚ್ಛೆ ಎಂದುಕೊಂಡು ಅವನಿಗೆ ಶರಣಾಗಿ, ಇದೆಲ್ಲದರ ಬಗ್ಗೆ ಚಿಂತಿಸದೆ, ಬಂದ ಜೀವನವನ್ನು ಸಂತೋಷದಿಂದ ತೃಪ್ತಿಯಿಂದ ಕಳೆದರೆ ಆ ಸಂತೋಷ, ಪ್ರೀತಿ, ಪ್ರೇಮ, ನಿಸ್ವಾರ್ಥತೆ, ತೃಪ್ತಿ, ಶ್ರದ್ಧೆ, ಭಕ್ತಿಗಳೇ ನಮ್ಮ ಜೀವನಕ್ಕೆ ಒಂದು ದಿಕ್ಸೂಚಿಯಾಗಿ ಒಂದು ನೆಮ್ಮದಿಯ ದಡಕ್ಕೆ ನಮ್ಮನ್ನು ಮುಟ್ಟಿಸಬಹುದು ಎಂದು ಆಶಿಸುತ್ತಾ, ನಾವು ಮುಂದಿನ ಕಗ್ಗಕ್ಕೆ ಹೋಗೋಣ.
ಬಾಳಿನ ನಕಾಸೆ ರಸಧಾರೆ - 026
ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯ ಗುಣಗಲೊಂದು ಕಡೆ ||
ಕಷ್ಟ ಭೀಭತ್ಸ ಘೋರಗಳಿನ್ನೊಂದುಕಡೆ |
ಕ್ಲಿಷ್ಟವೀ ಬ್ರಹ್ಮ ಕೃತಿ ಮಂಕುತಿಮ್ಮ ||
ಸೃಷ್ಟಿಯ ಆಶಯವು ಅದು ಏನು ಅಸ್ಪಷ್ಟ ಸಂಶ್ಲಿಷ್ಟ ಇಷ್ಟ ಮೋಹಕ ದಿವ್ಯ ಗುಣಗಳೊಂದು ಕಡೆ
ಕಷ್ಟ ಭೀಭತ್ಸ ಘೋರಗಳು ಇನ್ನೊಂದು ಕಡೆ ಕ್ಲಿಷ್ಟವೀ ಬ್ರಹ್ಮ ಕೃತಿ ಮಂಕುತಿಮ್ಮ
ಆಶಯ = ಉದ್ದೇಶ್ಯ, ಸಂಶ್ಲಿಷ್ಟ = ತೊಡಕಾದದ್ದು, ದಿವ್ಯ = ಸುಂದರ ಭೀಭತ್ಸ = ಭಯಂಕರ, ಘೋರ = ಕಷ್ಟಕರ, ಕ್ಲಿಷ್ಟ = ಬಿಡಿಸಲಾಗದ ಗಂಟು. ಬ್ರಹ್ಮ ಕೃತಿ = ಈ ಜಗತ್ತಿನ ಸೃಷ್ಟಿ.
ಆಹಾ ಎಂತಹ ವಿಷಯ! ಜಗತ್ತಿನ ಸೃಷ್ಟಿಯನ್ನು ವಿಶ್ಲೇಷಣೆ ಮಾಡುವಂಥಾ ವಿಚಾರ. ಈ ಸೃಷ್ಟಿಯಾಗುವುದಕ್ಕೆ ಉದ್ದೇಶ್ಯವು ಏನಿತ್ತು ಎಂದು ಯೋಚಿಸುತ್ತಾರೆ ಮಾನ್ಯ ಗುಂಡಪ್ಪನವರು. ಅದೊಂದು ಬ್ರಹ್ಮಗಂಟು. ಬಿಡಿಸಲಾಗದ್ದು. ಏಕೆಂದರೆ ಎಂತೆಂತಾ ಮಹಾ ಮಹಿಮರು ಈ ವಿಷಯದಲ್ಲಿ ಯೋಚನೆ ಜಿಜ್ಞಾಸೆ ತಪಸ್ಸು ಧ್ಯಾನ ಎಲ್ಲ ಮಾಡಿ ತಮಗೆ ತೋಚಿದ್ದನ್ನು ನಮಗೆ ಉಲ್ಲೇಖಿಸಿ ಕೊಟ್ಟಿದ್ದಾರೆ. ವೈಜ್ಞಾನಿಕ ಪರಿಭಾಷೆಗಳು ಬೇರೆ, ವೇದಾನ್ವಯ ಪರಿಭಾಷೆಗಳು ಬೇರೆ. ಸಿದ್ಧಾಂತಗಳು ಬೇರೆ , ನಂಬಿಕೆಗಳು ಬೇರೆ. ಆದರೆ ಎಲ್ಲೂ ಸಹಮತವಿಲ್ಲ. ನಾನು ಇಲ್ಲಿ ೯ನೆ ಕಗ್ಗಕ್ಕೆ ವಿವರಣೆ ನೀಡುವಾಗ ಕೆಲವು ಸೃಷ್ಟಿಯ ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಂಡಿಸಿದ್ದೆ. ಅಂದು ಇಡೀ ವಿಶ್ವದ ಸೂಕ್ಷ್ಮ ವಿಚಾರ ಮಂಡಿಸಿದ್ದೆ. ಎಷ್ಟು ಅಗಾಧ, ಎಷ್ಟು ವಿಸ್ತಾರ ನಮ್ಮ ಯೋಚನೆಗೆ ನಿಲುಕದಷ್ಟು, ಎಂದು.
ಆದರೆ ಯಾವ ಶಕ್ತಿ ಈ ಪ್ರಪಂಚವನ್ನು ಆಗ ಮಾಡಿಸಿತೋ ಅದಕ್ಕೆ ಹೀಗೆ ಮಾಡುವುದಕ್ಕೆ ಯಾವ ಉದ್ದೇಶ್ಯವಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲವೂ ಆ ಪರಮಾತ್ಮನ ಸಂಕಲ್ಪದಿಂದಲೇ ಆದದ್ದು ಎನ್ನುತ್ತಾರೆ. ಆಪರಮಾತ್ಮನ ಲೀಲಾವಿನೋದವೆನ್ನುತ್ತಾರೆ ಆದರೆ ಹಾಗೆ ಸಂಕಲ್ಪ ಬರಲು ಕಾರಣವೇನು, ಈ ಲೀಲೆಗೆ ಕಾರಣವೇನು ಎಂದು ಗೊತ್ತಿಲ್ಲ!!!. ಇದು ಅರ್ಥವಾಗದ ವಿಷಯವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಆದರೆ ಇಡೀ ಸೃಷ್ಟಿಯು ಬಹಳ ವೈವಿಧ್ಯಮಯ. ಒಂದುಕಡೆ ಸುಂದರ ಮತ್ತೊಂದು ಕಡೆ ಬೀಭತ್ಸ.ನಮಗೆ ನಮ್ಮ ಭೂಮಿಯ ವಿಷಯ ಮತ್ತು ನಾವಿರುವ ಸೌರಮಂಡಲದ ಸ್ವಲ್ಪ ವಿಷಯ ಮಾತ್ರ ಗೊತ್ತು ಅದರಾಚಿನ ವಿಷಯ ಕೆಲವು ವಿಜ್ಞಾನಿಗಳಿಗೆ ಅಲ್ಪ ಮಾತ್ರ ಗೊತ್ತಿರಬಹುದು. ಆದರೆ ಇಡೀ ಬ್ರಹ್ಮಾಂಡದ ವಿಚಾರ ನಮ್ಮ ಊಹೆಗೂ ನಿಲುಕದ್ದು. ಅದರ ವಿಚಾರ ಬಿಡಿ, ನಾವು ನಮ್ಮ ಭುವಿಯನ್ನು ತೆಗೆದುಕೊಳ್ಳೋಣ.
ನಮ್ಮ ಈ ಭುವಿಯ ಸುಂದರತೆಯ ಭಾಗವನ್ನು ನೋಡಿದರೆ ಅಲ್ಲಿ ನಮಗೆ ಸಿಗುವುದು, ಅಪ್ರತಿಮ ಬುದ್ಧಿಶಕ್ತಿಯ ಮನುಷ್ಯ, ಎಷ್ಟೊಂದು ಆವಿಷ್ಕಾರಗಳು, ಸಂಗೀತ, ಭಾಷೆ, ಕಲೆ, ವಿಜ್ಞಾನ, ಸಂಸ್ಕೃತಿ ಸಾಹಿತ್ಯದಂತಹ ಎಲ್ಲ ರೀತಿಯ ವೈವಿಧ್ಯತೆಯಿಂದ ಕೂಡಿ, ಇಡೀ ಸೃಷ್ಟಿಯನ್ನು ತನ್ನ ಉಪಯೋಗಕ್ಕೆ ಸೂಕ್ತವಾಗಿಸಿಕೊಳ್ಳಲು ನಿರಂತರ ಪ್ರಯತ್ನ. ಸಾಕಷ್ಟು ಯಶಸ್ಸೂ ಸಹ. ಹಾಗೆ ಮಾಡುವ ಪ್ರಯತ್ನದಲ್ಲಿ ನಿಸರ್ಗದ ದುರುಪಯೋಗವಾಗಿರುವುದೊಂದನ್ನು ಬಿಟ್ಟರೆ. ಇನ್ನು ಅನ್ಯ ಪ್ರಾಣಿಗಳು, ಒಂದೊಂದೂ ಒಂದೊಂದು ರೀತಿ. ಹಲವಾರು ಬಣ್ಣಗಳು ಅದರೊಳಗೂ ಜಿರಾಫೆ, ಮೊಸಳೆ, ಹಾವು, ಹೇಸರಕತ್ತೆ, ಜಿಂಕೆ, ಹುಲಿ ಸಿಂಹ, ಚಿರತೆ ಮುಂತಾದ ಪ್ರಾಣಿಗಳನ್ನು ನೋಡಿದಾಗ, ಏನು ವಿನ್ಯಾಸ, ಏನು ರಂಗಿನಾಟ, ಆಹಾ, ಆ ಪರಮಾತ್ಮ ಎಷ್ಟು ಒಳ್ಳೆಯ ಚಿತ್ರಕಾರನೆನ್ನದ ಮನಸ್ಸಿರದು. ಇನ್ನು ಜಲಗರ್ಭದಲ್ಲಿರುವ ಆ ಚಿತ್ರ ವಿಚಿತ್ರ ಮೀನು ಮತ್ತು ಇತರ ಜಲಚರಗಳನ್ನು ಕಂಡಾಗ, ಅಬ್ಬಾ ಎಂತಹ ಸೃಷ್ಟಿ, ಎಂದು ಉದ್ಘಾರ ತೆಗೆಯದವನು ಅರಸಿಕನೆ ಸರಿ. ಮನುಷ್ಯನಿಗೆ ಮತ್ತು ಕೆಲವು ಪ್ರಾಣಿಗಳಿಗೆ ಒಂದೇ ಬಣ್ಣ. ಇನ್ನು ಪಕ್ಷಿ, ಕೀಟ, ಚಿಟ್ಟೆಗಳ ಪ್ರಪಂಚದಲ್ಲಿ ನುಸುಳಿದರೆ ಈ ಚಿಟ್ಟೆಗಳು ಮತ್ತು ಕೆಲವು ಚಿಟ್ಟೆಗಳನ್ನು ನೋಡಿದರೆ ಆ ಬಣ್ಣಗಳು ಆ ರಂಗೋಲೆಯಂತಹ ಚಿತ್ತಾರಗಳು ಆಹಾ! ಏನು ಸುಂದರ. ಆದರೆ ಅಯ್ಯೋ ನಾವು ಎಲ್ಲ ನ್ಯೂನತೆ ಗಳನ್ನೂ ಹೊಂದಿರುವ ಮನುಷ್ಯರಾಗಿ ಹುಟ್ಟಿಬಿಟ್ಟೆವಲ್ಲ, ಎಂದು ಒಂದು ಕ್ಷಣ ಅನಿಸಿಯೇ ಅನಿಸುತ್ತದೆ. ಗಿಡ ಮರಮರಗಳು, ಹೂ ಹಣ್ಣುಗಳ ಪ್ರಪಂಚವೇ ಬೇರೆ. ವರ್ಣಿಸಲು ಪದಗಳೇ ಸಾಲದು. ಇದು ಈ ಸೃಷ್ಟಿಯ ಸುಂದರತೆಯ ಒಂದು ಮುಖ .
ಇನ್ನು ಭೀಭತ್ಸದ, ಭೀಕರತೆಯ ಆಯಾಮವನ್ನು ನೋಡಿದರೆ, ರುದ್ರ ಭೀಕರತೆಯನ್ನು ಕಾಣಬಹುದು. ಸೃಷ್ಟಿಯ ಅಂದಗೆಡಿಸುವ ಮತ್ತು ಪ್ರಾಣ ಹಾನಿಮಾಡುವ ಧಾರಾಕಾರವಾಗಿ ಸುರಿದು ಪ್ರವಾಹವನ್ನು ಸೃಷ್ಟಿಸುವ ಮಳೆ, ಧೂಳಿನಿಂದ ಕೂಡಿದ ಬಿರುಗಾಳಿ, ಕಾಳ್ಗಿಚ್ಚು, ಭೂಕಂಪಗಳು, ಸುನಾಮಿಗಳು, ಅಗ್ನಿ ಪರ್ವತಗಳು, ಅನ್ಯ ಪ್ರಾಣಿಗಳಿಗೆ ಪ್ರಾಣ ಭಯವನ್ನುಂಟುಮಾಡುವ ಭಯಂಕರ ಪ್ರಾಣಿಗಳು, ಹೀಗೆ ಹತ್ತು ಹಲಾವರು ಭೀಕರಗಳೂ ಈ ಜಗತ್ತಿನಲ್ಲಿ ಇವೆ.
ಇದಲ್ಲೆದೆ ಪ್ರೀತಿ ಪ್ರೇಮಗಳು, ಸ್ನೇಹ ಸೌಹಾರ್ದಗಳು, ಒಲುಮೆ ಔದಾರ್ಯಗಳು, ಧರ್ಮ ದಯಾ-ದಾಕ್ಷಿಣ್ಯಗಳಂತಹ ಸುಂದರಭಾವಗಳು ಮನುಷ್ಯರಲ್ಲೇ ಅಲ್ಲ ಹಲವಾರು ಪ್ರಾಣಿ ಪಕ್ಷಿಗಳಲ್ಲೂ ನಮಗೆ ಕಾಣಸಿಗುವುದು. ಇದು ಭಾವನೆಗಳ ಸುಂದರತೆಯಾದರೆ,ಇನ್ನು ಕೋಪ ದ್ವೇಷ ರೋಷ ಅಸೂಯೆ, ಅಹಂಕಾರ, ದುರಾಸೆ, ಮೋಹ, ಲಂಪಟತನ, ಅವ್ಯವಹಾರ, ವ್ಯಭಿಚಾರ ಇಂತಹ ದುರ್ಗುಣಗಳನ್ನು ಹೊಂದಿರುವ ಮನುಷ್ಯರೇ ಅಧಿಕ. ಪ್ರಾಣಿಗಳಲ್ಲೂ ಈ ರೀತಿಯ ಭಾವಗಳು ಇದ್ದರೂ ಅವು ಮಾತ್ರ ಅಸ್ತಿತ್ವದ ಹೋರಾಟಕ್ಕೆ ಮಾತ್ರ ಸೀಮಿತ. ಆದರೆ ಮನುಷ್ಯ ಮಾತ್ರ ಅನಿಯಮಿತ ದುಷ್ಟ. ಒಂದು ಕಾಡಿನಲ್ಲಿ ನೀವು ಒಬ್ಬರೇ ಹೋಗುವಾಗ, ಒಂದು ಹುಲಿಯೋ ಸಿಂಹವೋ ಎದುರು ಬಂದರೆ ನೀವು ಹೆದರಬೇಕಾಗಿಲ್ಲ. ಏಕೆಂದರೆ ಅದು ಹಸಿದಿದ್ದರೆ ಮಾತ್ರ ನಿಮ್ಮ ಮೇಲೆರೆಗುವುದು. ಆದರೆ ಒಬ್ಬ ಮನುಷ್ಯ ಎದುರಿಗೆ ಬಂದರೆ, ನೀವು ಖಂಡಿತ ಹೆದರಿ ನೀರಾಗುತ್ತೀರಿ . ಏಕೆಂದರೆ, ಮಾನವನಿಗೆ ಅನ್ಯರ ಮೇಲೆರಗುವುದಕ್ಕೆ ಕಾರಣವೇ ಬೇಕಿಲ್ಲ.
ಇಂತಹ ವೈವಿಧ್ಯಮಯ ಜಗತ್ತನ್ನು ಸೃಜಿಸಲು ಆ ಪರಮಾತ್ಮನಿಗೆ ಏನು ಕಾರಣವಿತ್ತು. ಏನೋ ಇದ್ದಿರಬಹುದು ನಮಗೆ ಗೊತ್ತಿಲ್ಲ, ಆದರೆ ಮೇಲೆ ಹೇಳಿದ ಎಲ್ಲವನ್ನೂ ಒಳಗೊಂಡ ಸೃಷ್ಟಿಯನ್ನು ಏಕೆ ಸೃಷ್ಟಿಸಿದ ಎನ್ನುವುದು ಒಂದು ಚಿದಂಬರ ರಹಸ್ಯ. ಯಾರಿಗೂ ಅರ್ಥವಾಗದು ಎನ್ನುವ ಅರ್ಥದಲ್ಲಿ ಶ್ರೀ ಗುಂಡಪ್ಪನವರು ಈ ಕಗ್ಗವನ್ನು ರಚಿಸಿದ್ದಾರೆ. ಅರ್ಥವಾಗುವುದಿಲ್ಲಪ್ಪ, ಹೌದು ಅದಕ್ಕೆ ನಾವು ಎನು ಮಾಡಬೇಕು? ಎಂದರೆ ಒಳ್ಳೆಯದನ್ನು ಅರಾದಿಸೋಣ, ಅಭಿನಂದಿಸೋಣ, ಸೃಷ್ಟಿಕರ್ತನಿಗೆ ವಂದಿಸಿ ಕೃತಜ್ಞತೆ ಸಲ್ಲಿಸೋಣ, ಒಳ್ಳೆಯದನ್ನು ಮತ್ತು ಸುಂದರವಾದದ್ದನ್ನು ಕಾಪಾಡೋಣ, ಕೆಟ್ಟದ್ದು ಅನಿವಾರ್ಯವಾದರೆ, ವಿಧಿಯೆಂದು ಅನುಭವಿಸೋಣ, ಸಾಧ್ಯವಾದರೆ ನಿವಾರ್ಯವನ್ನು ನಿವಾರಿಸೋಣ, ಮನುಷ್ಯ ಪ್ರಯತ್ನವನ್ನು ಸುಮುಖವಾಗಿ ತೆಗೆದುಕೊಂಡು ಹೋಗೋಣ ಎನ್ನವ ಆಶಯವನ್ನು ಹೊತ್ತು ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ ಮಿತ್ರರೇ?
ಬಾಳ-ಭೂಪಟ ರಸಧಾರೆ - 027
ಧರೆಯ ಬದುಕೇನದರ ಗುರಿಯೇನು ಫಲವೇನು? |
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ |
ನರನು ಸಾದಿಪುದೇನು ? – ಮಂಕು ತಿಮ್ಮ ||
ಧರೆ = ಭೂಮಿ, ಬಳಸು = ಸುತ್ತು, ಪರಿಭ್ರಮಣೆ = ಸುತ್ತಾಟ, ಮೃಗ = ಪ್ರಾಣಿ, ಖಗ = ಪಕ್ಷಿ
ಧರೆಯ ಬದುಕು ಏನಾದರ ಗುರಿಯೇನು, ಫಲವೇನು ಬರಿ ಬಳಸು ಬರಿ ಪರಿಭ್ರಮಣೆ
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗ ಖಗಕಿಂತ ನರನು ಸಾದಿಪುದೇನು ಮಂಕು ತಿಮ್ಮ.
ಈ ಭೂಮಿಯಲ್ಲಿ ಜನಿಸಿದ ನಾವು ಮತ್ತು ನಮ್ಮ ಬದುಕು ಇದರ ಗುರಿಯೇನು? ಇದಕ್ಕಿರುವ ಪ್ರಯೋಜನವೇನು? ಸುಮ್ಮನೆ ಸುತ್ತಾಟ ಕೇವಲ ಪ್ರದಕ್ಷಿಣೆ ಬಂದ ಹಾಗೆ. ಕೇವಲ ಹೊಟ್ಟೆ ಪಾಡಿನ ಜೀವನ. ಪ್ರಾಣಿ ಪಕ್ಷಿಗಳಲ್ಲೂ ಸಹ ಈ ರೀತಿಯ ಹೊಟ್ಟೆ ಪಾಡಿನ ಜೀವನ ಮಾಡುತ್ತವೆ. ನಾವು ಅದಕ್ಕಿ೦ತ ಉತ್ತಮರೇನು ಅಲ್ಲ. ಇದೆಲ್ಲದರಿಂದ ಮನುಷ್ಯರು ಸಾಧಿಸುವುದದೇನು ? ಎಂದು ಈ ಕಗ್ಗದಲ್ಲಿ ಕೆಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ.
ಇದೊಂದು ಸುಂದರವಾದ ಕಗ್ಗ. ಅಂತರ್ಯದಲ್ಲಿ ಅಡಗಿರುವ ಭಾವ ಬೇಸರದ, ನಿರಾಸೆಯ ಭಾವ.ಮಾನವ ಜನ್ಮ ದೊಡ್ಡದುಎಂದು ದಾಸರೂ ಸಹ ಹೇಳಿದರು. ಬೇರೆ ಎಲ್ಲ ಪ್ರಾಣಿಗಳಿಗಿಂತಲೂ ನಾವೇನು ಭಿನ್ನ. ಆ ಪ್ರಾಣಿಗಳೂ ಹೊಟ್ಟೆ ಹೊರೆಯುತ್ತವೆ, ಮಕ್ಕಳನ್ನು ಹುಟ್ಟಿಸುತ್ತವೆ, ತಮ್ಮ ಇರುವಿಕೆಗೆ ಹೋರಾಡುತ್ತವೆ ಮತ್ತೆ ಸಾಯುತ್ತವೆ. ನಾವು ಅಂದರೆ ಮನುಷ್ಯರೂ ಸಹ, ಇವುಗಳನ್ನು ಮಾಡುತ್ತೇವೆ. ಆದರೆ ಮಾನವರಾದ, ನಾವು ಉತ್ತಮ ಜೀವಿಗಳು ಎಂದು ಕರೆದು ಕೊಳ್ಳಲು ನಮ್ಮ ಸಾಧನೆಯೇನು? ಎಂದು ಪ್ರಶ್ನಿಸುತ್ತಾ, ಒಂದು ಅವಲೋಕನಕ್ಕೆ ಆಸ್ಪದ ಮಾಡಿಕೊಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಅನಾದಿ ಕಾಲದ ಮಾನವನ ಮತ್ತು ಪ್ರಾಣಿಗಳ ಬದುಕುವ ಶೈಲಿಯನ್ನು ಅವಲೋಕಿಸಿದರೆ ನಮಗೆ ವೇದ್ಯವಾಗುವುದು ಒಂದು ವಿಷಯ. ಪ್ರಾಣಿಗಳ ಜೀವನದಲ್ಲಿ ಏರು ಪೇರು ಇಲ್ಲ. ಮನುಷ್ಯನ ದುರಾಸೆಯಿಂದ ಉಂಟಾದ ಅಭಾವ ಅನಾನುಕೂಲಗಳನ್ನು ಬಿಟ್ಟರೆ ಬೇರೆ ಯಾವ ಬದಲಾವಣೆಯೂ ಇಲ್ಲ. ಆದರೆ ಮನುಷ್ಯನೋ! ಬಹಳ ಬದಲಾಗಿದ್ದಾನೆ. ಪ್ರಗತಿಯ ಪಥದಲ್ಲಿರುವವನು, ಪುರೋಗಾಮಿ, ಎಂದೆಲ್ಲ ಹೊಗಳಿಕೆಗೆ ಪಾತ್ರನಾದ ಈ ಮನುಷ್ಯನ ಬದಲಾದ ಸ್ಥಿತಿಯನ್ನು ಗಮನಿಸಿದರೆ ನಮಗೆ ಕಾಣುವುದು ಒಂದು ಬೇರೆಯೇ ಚಿತ್ರ, ಬಹಳ ವಿಚಿತ್ರ.
ಉತ್ತರೋತ್ತರ ಬದಲಾವಣೆಗೆ ಪ್ರಗತಿ ಎಂದು ಹೆಸರು. ತಮಸೋಮಾ ಜ್ಯೋತಿರ್ಗಮಯಕತ್ತಲೆಯಿಂದ ಬೆಳಕಿಗೆ. ಅಸತೋಮಾ ಸದ್ಗಮಯಅಸತ್ತಿನಿಂದ ಸತ್ತಿನೆಡೆಗೆ,ನಮ್ಮ ನಡಿಗೆಯಾದರೆ ಅಂದು ಸಕಾರಾತ್ಮಕವಾದ ಬೆಳವಣಿಗೆ ಮತ್ತು ಪ್ರಗತಿಪರ ಬದಲಾವಣೆ? ಆದರೆ ಅಂತಹ ಬದಲಾವಣೆಯಾಗಿದೆಯೇ? ಖಂಡಿತ ಇಲ್ಲ.
ವಿಜ್ಞಾನದದಲ್ಲಿ ಪ್ರಗತಿ ? ಅಣು ಬಾಂಬು, ಮುಂತಾದ ಮಾರಕಾಸ್ತ್ರಗಳ ತಯಾರಿಕೆ, ನಾಶಕ್ಕೆ ನಾಂದಿ. ವೇಷ ಭೂಷಣದಲ್ಲಿ ಪ್ರಗತಿ ? ಮೈ ಮುಚ್ಚದೆ ಬಿಚ್ಚುವುದೇ ಹೆಚ್ಚು. ಭಾಷೆಯಲ್ಲಿ ಪ್ರಗತಿ ? ನಮಗೆ ಯಾವುದೇ ಭಾಷೆಯೂ ಸರಿಯಾಗಿ ಆಡಲು, ಓದಲು ಬರೆಯಲು ಬರುವುದಿಲ್ಲ. ಸಮಾಜದಲ್ಲಿ ಪ್ರಗತಿ ? ಸೌಹಾರ್ಧ ಭಾವ, ಸ್ನೇಹ ಪ್ರೀತಿ ಪ್ರೇಮ, ಅನ್ಯೋನ್ಯ ಜೀವನ, ಒಟ್ಟು ಕುಟುಂಬಗಳ ಸಹಜೀವನ ಶೈಲಿ, ಹಿರಿಯರಲ್ಲಿ ಗೌರವ, ಮಕ್ಕಳಲ್ಲಿ ಮಮತೆ, ಕೆಲಸದಲ್ಲಿ ಶ್ರದ್ಧೆ, ದೈವದಲ್ಲಿ ಭಕ್ತಿ, ಮುಂತಾದ್ಯಾವುದಕ್ಕೂ ಮೂರು ಕಾಸಿನ ಬೆಲೆ ಇಲ್ಲದೆ, ಮಾತ್ರ ಸ್ವಾರ್ಥ, ದ್ವೇಷ, ಲಾಲಸೆ, ಲಂಪಟತನ, ಮೋಸ, ದಾರಿದ್ಯ, ಭೌಧ್ಧಿಕ ದಿವಾಳಿತನ, ಮೌಲ್ಯಗಳ ದಿವಾಳಿತನ. ಇದು ಪ್ರಗತಿಯೇ? ಇನ್ನು ವಿದ್ಯಾಭ್ಯಾಸದಲ್ಲಿ ಪ್ರಗತಿ ? ಸತ್ವ ಹೀನ, ಸತ್ಯ ರಹಿತ, ಆಳವಾದ ಅಭ್ಯಾಸವಿಲ್ಲದ ,, ವ್ಯಕ್ತಿತ್ವವನ್ನು ರೂಪಿಸಿವಂಥಾ ಅಭ್ಯಾಸಕ್ರಮವಿಲ್ಲದ , ಕೇವಲ ಹೊಟ್ಟೆಪಾಡಿಗಾಗಿ, ವಿದ್ಯೆ ಇಲ್ಲದಿದ್ದರೂ ವಿದ್ಯಾವಂತರೆನ್ನಿಸಿಕೊಳ್ಳುವ, ವ್ಯಕ್ತಿತ್ವವಿಲ್ಲದಿದ್ದರೂ ವ್ಯಕ್ತಿಗಳೆನಿಸಿಕೊಳ್ಳುವವರನ್ನು ತಯಾರುಮಾಡುವುದಕ್ಕೆ, ಪ್ರಗತಿ ಎಂದು ಹೆಸರೇ ?
ಇನ್ನು ಆರ್ಥಿಕವಾಗಿ ನಾವು ಬಹಳಷ್ಟು ಪ್ರಗತಿಯನ್ನು ಸಾಧಿಸಿದ್ದೇವೆಂದು ಕೊಚ್ಚಿಕೊಳ್ಳುವ ನಮ್ಮ ಆರ್ಥಿಕ ತಜ್ಞರ ಅವಿವೇಕಕ್ಕೆ ಏನು ಹೇಳುವ? ಸಸ್ಯಶ್ಯಾಮಲವಾಗಿರುತ್ತಿದ್ದ ನಮ್ಮ ಹಳ್ಳಿಗಲೆಲ್ಲವೂ ಇಂದು ಬರಡು ಬೆಂಗಾಡಾಗಿದೆ. ಹಳ್ಳಿಯ ಜನರೆಲ್ಲರೂ ಪಟ್ಟಣಕ್ಕೆ ವಲಸೆ. ಬಡವ ಬಲ್ಲಿದರ ನಡುವಿನ ಅಂತರ ಇನ್ನಷ್ಟು ವಿಸ್ತಾರ. ಇಡೀ ಸಮುದಾಯದ ಸಂಪತ್ತನ್ನು ಅಧಿಕಾರ ಬಲದಿಂದ, ವಶೀಲಿಯ ಬಲದಿಂದ ಕೇವಲ ಕೆಲವೇ ವ್ಯಕ್ತಿಗಳು ತಮ್ಮದಾಗಿಸಿಕೊಳ್ಳುವ ಹುನ್ನಾರ. ಯಾರಿಗೂ ಒಟ್ಟು ಸಮಾಜದ ಆರ್ಥಿಕ ಪ್ರಗತಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಪ್ರಜೆಗಳಿಂದ ಆಯ್ಕೆಯಾಗಿ, ಪ್ರಜಾಪಾಲನೆ ಮಾಡಲು ಅಧಿಕಾರವನ್ನು ಸ್ವೀಕರಿಸಿದ ದಿನದಿಂದಲೇ ಪ್ರಜೆಗಳ ಪೀಡನೆ ಶುರುವಾಗುವುದು ಪ್ರಗತಿಯೇ?
ಭಾಷೆ, ಜಾತಿ, ಭೂಮಿ, ನೀರು, ದೇವರು, ಪಂಗಡ, ಮುಂತಾದವುಗಳಿಗಾಗಿ ನಿರಂತರ ಹೊಡೆದಾಟ, ಯುದ್ಧ.ಇಂದು ಪ್ರಗತಿಯೇ? ಯಾವುದೇ ವಿಷಯವನ್ನು ನೋಡಿದರೂ ಸತ್ವಹೀನತೆ ಸತ್ಯಹೀನತೆ ಇದು ಪ್ರಗತಿಯೇ. ? ಹಾಗಾಗಿ ನರರ ಅಂದರೆ ನಾವು ಮನುಷ್ಯರ ಸಾಧನೆ ಏನೂ ಇಲ್ಲ. ನಾವು ಯಾವುದನ್ನು ಇಂದು ಸಾಧನೆ ಎಂದು ಕರೆಯುತ್ತಿದ್ದೆವೋ ಅದು ಸಾಧನೆಯಲ್ಲ. ಅಧೋಗತಿ. ಹೆತ್ತ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ, ಇಲ್ಲ ಬೀದಿಯಲ್ಲಿ ಬಿಕ್ಷೆ ಬೇಡಲು ಅಟ್ಟುವ ಸಮಾಜ ನಮ್ಮದಾಗಿರಲಿಲ್ಲ . ಇಂದು ಹಾಗಾಗಿದೆ ಎಂದರೆ ಇದು ಪ್ರಗತಿಯೇ ವಾಚಕರೆ ?
ಇದನ್ನೆಲ್ಲ ಕಂಡು ಹೊಟ್ಟೆಯುರಿಯಬೇಕು, ಕೋಪಬರಬೇಕು, ಇದು ಸರಿಯಿಲ್ಲ, ಇದು ಬದಲಾಗಬೇಕು, ಸತ್ಯದ, ಸತ್ವದ, ತತ್ವದ, ಶ್ರದ್ದೆಯ, ಪ್ರೀತಿ ಪ್ರೇಮಗಳ, ಸ್ನೇಹ ಸೌಹಾರ್ಧತೆಗಳ ಪುನರುತ್ಥಾನವಾಗಬೇಕು. ಮುಂದಿನ ಪೀಳಿಗೆಗೆ ಒಂದು ಸುಂದರವಾದ ಸಮಾಜದ ನಿರ್ಮಾಣವಾಗಬೇಕು. ಹಾಗಾಗದಿದ್ದಲ್ಲಿ ನಮ್ಮೆಲ್ಲರ ಸರ್ವಾಂಗೀಣ ಅಂದರೆ ಸಮಗ್ರ ನಾಶ ಖಂಡಿತ. ನಮ್ಮೆಲ್ಲರ ಪತನ ಖಂಡಿತ. ರಿಪೇರಿಯ ಕೆಲಸ ತ್ವರಿತವಾಗಿ ಶುರುವಾಗಬೇಕು. ಹಾಗೆ ಮಾಡದಿದ್ದಲ್ಲಿ, ವೃಣ ಗುಣವಾಗದಿದ್ದಲ್ಲಿ, ಕಾಲನ್ನೇ ತೆಗೆಯಬೇಕಾದ ಪರಿಸ್ಥಿತಿ ಬರಬಹುದು.
ಹಾಗಾಗಿ ವಾಚಕರೆ, ನಮ್ಮ ನಮ್ಮ ವೃತ್ತಗಳನ್ನು ಬದಲಾಯಿಸಲು ನಾವು ಪ್ರಯತ್ನಿಸಿ ಆ ವೃತ್ತವನ್ನು ದೊಡ್ಡದಾಗಿಸಿ, ನಮ್ಮ ಕಾರ್ಯಕ್ಷೇತ್ರವನ್ನು ಇಡೀ ಸಮಾಜಕ್ಕೆ ವಿಸ್ತರಿಸಿ, ರೋಗಿಷ್ಟ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸುವ ದಿಕ್ಕಿನಲ್ಲಿ ಸಾಗುತ್ತಾ ಮುಂದಿನ ಕಗ್ಗಕ್ಕೆ ಹೋಗೋಣವೆ?
ರಸಧಾರೆ - 028
ಕಾರುಣ್ಯ ಸರಸ ಸೌಂದರ್ಯ ರುಚಿಗಳೇ ಸೃಷ್ಟಿ
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ
ತೋರುವುದಾವುದು ದಿಟವೋ? – ಮಂಕುತಿಮ್ಮ
ಕಾರಣಮೆನಿಪ್ಪವೊಲು = ಕಾರಣ + ವೆನಿಪ್ಪ + ವೊಲು, ತೋರ್ಪುದೊಂದು = ತೋರ್ಪುದು + ಒಂದು, ಕಟುಕತೆಗಳೆನಿಪುದಿನ್ನೊಂದು = ಕಟುಕತೆಗಳೇ + ಎನಿಪುದು + ಇನ್ನೊಂದು, ತೋರುವುದಾವುದೋ = ತೋರುವುದು + ಅದು + ಆವುದೋ
ಕಾರುಣ್ಯ = ಅನುಕಂಪ, ಸರಸ = ವಿನೋದ, ವೆನಿಪ್ಪ = ಎನ್ನಿಸುವ, ವೊಲು = ತರಹೆ / ರೀತಿ, ಕಾರ್ಪಣ್ಯ = ಬಡತನ, ಕಟುಕತೆಗಳು = ಕಷ್ಟ ಮತ್ತು ಕ್ಲಿಷ್ಟತೆಗಳು, ಎನಿಪುದು = ತೋರುವುದು. ದಿಟ = ಸತ್ಯ, ಚಣ = ಕ್ಷಣ.
ಸಮಗ್ರ ಜೀವನದ ಚಿತ್ರದಲ್ಲಿ,ಈ ಜಗದ್ವ್ಯಾಪಾರಕ್ಕೆ, ಒಂದು ಬಾರಿ ಎನಗೆ, ಮಾನವರ ನಡುವಿನ ಕರುಣೆ, ವಿನೋದ ಸೌಂದರ್ಯ ಮುಂತಾದ ಸುಭಾವಗಳೇ ಕಾರಣವೆನಿಸುತ್ತದೆ. ಮತ್ತೆ ಕೆಲವು ಬಾರಿ ಜೀವನದ ಕಷ್ಟ ದುಃಖಗಳು, ಬಡತನ ಮತ್ತು ಬಡತನದಿಂದ ಕೂಡಿದ ಬದುಕಿನ ಕ್ಲಿಷ್ಟತೆಯಿಂದ ಕೂಡಿದ ಕಷ್ಟಗಳೇ ಕಾರಣವೆಂದು ಅನಿಸುತ್ತದೆ, ಇದು ಸತ್ಯವೋ ಅಥವಾ ಅದು ಸತ್ಯವೋ ಎಂದು ಅರಿಯದಾಗಿದೆ ಎಂದು ಒಂದು ಡೋಲಾಯಮಾನವಾದ ಭಾವನೆ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಆದರೆ, ಅವರು ಅಂದು ಕಂಡಂತೆ ಮತ್ತು ಮಾನವನ ಅಸ್ಥಿತ್ವದ ಇತಿಹಾಸದ ಎಲ್ಲ ಪುಟಗಳಲ್ಲೂ ನಮಗೆ ಈ ಎರಡೂ ಮುಖಗಳು ಕಾಣುತ್ತವೆ. ಪುರಾಣಗಳಲ್ಲಿಯೂ ಅಂದಿನ ಕೆಲವು ಪಾತ್ರಗಳು ಆನಂದವನ್ನು ಅನುಭವಿಸುವುದೂ ಮತ್ತೆ ಕೆಲವು ಪಾತ್ರಗಳು ಅತೀವ ಸಂಕಷ್ಟಗಳಿಗೆ ಸಿಕ್ಕು ತೊಳಲಾಡುವುದನ್ನು ನಾವು ಕಾಣಬಹುದು. ಇಂದಿಗೂ ಅದೇ ಪರಿಸ್ಥಿತಿ. ಒಂದಿಷ್ಟೂ ಬದಲಾವಣೆಯೇ ಇಲ್ಲ. ಏಕೆ ಹೀಗೆ? ಎಂದು ಆಲೋಚಿಸಿದರೆ, ನಮಗೆ ಸೂಕ್ತ ಮತ್ತು ಸಮರ್ಪಕ ಉತ್ತರ ಸಿಗುವುದಿಲ್ಲ. ಹಾಗಾಗಿ ಸತ್ಯ ಇದೋ ಅದೋ ಎನ್ನುವ ದ್ವಂದ್ವದ ಭಾವ ನಮ್ಮಲ್ಲೂ ಬರಬಹುದು. ಅದೇ ಭಾವ ಮಾನ್ಯ ಡಿ.ವಿ.ಜಿ.ಯವರಿಗೂ ಬಂದಿತ್ತು, ಈ ಕಗ್ಗದ ರೂಪದಲ್ಲಿ.
ಇರಲಿ ಕಷ್ಟ ಸುಖಗಳು ಮನುಷ್ಯರಿಗಷ್ಟೇ ಅಲ್ಲ, ಸೃಷ್ಟಿಯ ಸಕಲ ಚರಾಚರಗಳಿಗೂ, ಪ್ರಮಾಣ ಭೇಧವಿದ್ದರೂ ಇದ್ದೇ ಇರುವಂಥಹದು ಸರ್ವವೇದ್ಯ ಮತ್ತು ಅನಿವಾರ್ಯ. ಆದರೆ ಇಲ್ಲಿ ನೋಡಬೇಕಾದ ವಿಷಯವೇನೆಂದರೆ, ನಮ್ಮ ನಮ್ಮ ಜೀವನಗಳಲ್ಲಿ ಕಷ್ಟ ಸುಖಗಳು ಏಕೆ ಮತ್ತು ಹೇಗೆ ಬರುತ್ತವೆ? ಎಂದು. ಅದಕ್ಕೂ ಮೊದಲು ಕಷ್ಟವೆಂದರೇನು? ಸುಖವೆಂದರೇನು? ಎಂದು ವಿಶ್ಲೇಸಿದರೆ ನಮ್ಮ ಅರಿವಿಗೆ ಬರುವುದು ಹೀಗೆ. ನಮಗೆ ಮಮಕಾರವಿದೆ. ಈ ಮಮಕಾರಕ್ಕೆ ಹಿತವಾದದ್ದು ಸುಖ ಮತ್ತು ಅಹಿತವಾದದ್ದು ದುಃಖ. ಅಂದರೆ ಕಷ್ಟ ಸುಖ ಎನ್ನುವುದು ಬಹಳಷ್ಟು ಬಾರಿ ಕೇವಲ ಒಂದು ಭಾವನೆ ಮಾತ್ರ. ಹಾಗಾಗಿ ಮಮಕಾರವನ್ನು ತೊರೆದರೆ, ಜೀವಿ ಮಾನಸಿಕವಾಗಿ ತಟಸ್ಥನಾಗಿ ಸುಖದುಃಖಗಳನ್ನು ಸಮಭಾವದಿಂದ ತೆಗೆದುಕೊಳ್ಳಬಹುದುಎನ್ನುವ ಒಂದು ಸಿದ್ಧಾಂತವಿದೆ. ಭಗವದ್ಗೀತೆಯಲ್ಲಿಸ್ಥಿತಪ್ರಜ್ಞನೆಂದರೆ ಯಾರುಎಂದು ಅರ್ಜುನ ಕೇಳುವ ಪ್ರಶ್ನೆಗೆ ಶ್ರೀ ಕೃಷ್ಣ ಉತ್ತರಿಸಿದ್ದೂ ಇದನ್ನೇ. ಇದು ತತ್ವ ಶಾಸ್ತ್ರ( ಫಿಲಾಸಫಿ ). ಹೇಳುವುದು(ಪರರಿಗೆ) ಸುಲಭ, ಆದರೆ ಪಾಲಿಸುವುದು ಸುಲಭವಲ್ಲ.
ನಮಗೆ ಈ ಪ್ರಪಂಚದಲ್ಲಿ ನಮ್ಮ ಅಸ್ತಿತ್ವಕ್ಕೆ ಅವಶ್ಯವಾದ ಕೆಲವು ಮೂಲಭೂತ ಅವಶ್ಯಕತೆಗಳಿವೆ. ಅವುಗಳ ಅಭಾವವೇ ನಮ್ಮ ಅನಿವಾರ್ಯ ಕಷ್ಟಕ್ಕೆ ಕಾರಣ. ಅದರ ಪೂರೈಕೆ ಸಮರ್ಪಕವಾಗಿ ಆದಾಗ, ನಮಗೆ ನೆಮ್ಮದಿ ಎಂದು ಅಂದುಕೊಳ್ಳುತ್ತೇವೆ ಮತ್ತು ಅವುಗಳನ್ನು ಪೂರೈಸಿಕೊಳ್ಳಲು ಹೋರಾಡುತ್ತೇವೆ. ಆದರೆ ಅಷ್ಟಕ್ಕೇ ನಮಗೆ ನೆಮ್ಮದಿ ಸಿಗುತ್ತದೆಯೇ? ಖಂಡಿತ ಇಲ್ಲ. ಏಕೆಂದರೆ ಬಡತನಕೆ ಉಂಬುವ ಚಿಂತೆ, ಉಂಬುವುದಾದರೆ ಉಡುವ ಚಿಂತೆ, ಉಡುವುದಾದರೆ, ಮನೆಯ ಚಿಂತೆ, ಮನೆಯದಾದರೆ ಮಡದಿಯ ಚಿಂತೆಎನ್ನುವುದು ಶಿವ ಶರಣರ ಉಕ್ತಿ. ಎಷ್ಟು ಸತ್ಯ. ನಮ್ಮ ಆಸೆಗಳಿಗೆ ಮಿತಿಯೇ ಇಲ್ಲ. ನಮ್ಮ ಪರಿಮಿತ ಸಾಮರ್ಥ್ಯದಲ್ಲಿ ಮತ್ತು ಯೋಗ್ಯತೆಯಲ್ಲಿ ನಾವು ಏನನ್ನು ಪಡೆಯಬಹುದೋ ಅದನ್ನು ಪಡೆದು ಸಂತುಷ್ಟರಾದರೆ ಸುಖ ಮತ್ತು ನೆಮ್ಮದಿ. ಆದರೆ ನಮಗೆ ನಮ್ಮ ಯೋಗ್ಯತೆಯ ಮತ್ತು ಸಾಮರ್ಥ್ಯದಮಿತಿಯ ಅರಿವೇ ಇಲ್ಲ. ಹಾಗಾಗಿ ನಮ್ಮ ಆಸೆಗಳಿಗೂ ಕೊನೆಯಿಲ್ಲ. ನಮ್ಮ ಕಷ್ಟಗಳು ಮತ್ತು ದುಃಖಗಳು ಎಂದಿಗೂ ಮುಗಿಯುವುದೇ ಇಲ್ಲ. ನಮಗೆ ನಮ್ಮ ಯೋಗ್ಯತೆಯ ಮತ್ತು ಸಾಮರ್ಥ್ಯದಮಿತಿಯ ಅರಿವು ಏಕಿರುವುದಿಲ್ಲವೆಂದರೆ, ” ಅಹಂಕಾರನಾನು, ನನಗೆ, ನನ್ನ, ಎನ್ನುವ ಭಾವ ನಮ್ಮಲ್ಲಿ ತುಂಬಿತುಳುಕುತ್ತಿದೆ. ಇನ್ನು ಮಿತಿಯನ್ನು ಅರಿಯುವ ಪ್ರಯತ್ನವೂ ಇಲ್ಲ. ಹಾಗಿದ್ದಮೇಲೆ ಇನ್ನೇನು, ಈ ಜೀವನದ ಜಂಜಾಟದಲ್ಲಿ ತೊಳಲಾಡದೆ ಬೇರೆ ದಾರಿಯೇ ಇಲ್ಲ. ಈ ಅಹಂಕಾರದಿಂದ ಮತ್ತೆಲ್ಲ ದುರ್ಭಾವಗಳೂ ನಮ್ಮೊಳಗೇ ನುಗ್ಗಿ ನಮ್ಮನ್ನು ಈ ಜೀವನದ ಆಸೆ ಅಭಾವಗಳವಿಷ ವೃತ್ತದಲ್ಲಿ ನೂಕಿ ಅದರಿಂದ ಹೊರಗೆ ಬರುವ ಮಾರ್ಗವನ್ನು ಕಾಣದೆ ತೊಳಲಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತೆ. ಅಯ್ಯೋ ಎಂತಹ ದೌರ್ಭಾಗ್ಯವೆಂದು ನಮ್ಮ ಸ್ಥಿತಿಗೆ ನಾವೇ ಕೊರಗುವಂತೆ ಮರುಗುವಂತೆ ಮಾಡುತ್ತದೆ.
ಅಹಂಕಾರವನ್ನು ಬಿಟ್ಟರೆ ನೆಮ್ಮದಿ ಸುಖ. ಆದರೆ ಈ ಸುಖವೆಂದರೇನು? ನಮ್ಮ ಮಮಕಾರಕ್ಕೆ ಹಿತವಾದದ್ದು ಸುಖ. ಏನುಬೇಕೋ ಅದು ಸಿಕ್ಕರೆ ಸುಖವೆಂದು ನಾವು ಅಂದುಕೊಂಡಿದ್ದೇವೆ. ಆದರೆ ಅದು ಸುಳ್ಳು. ಒಂದು ವಸ್ತುವನ್ನು ಆಸೆಪಟ್ಟು ಪಡೆದುಕೊಂಡು ಆನಂದಪಡುವುದು ಸುಖವಲ್ಲ. ಏಕೆಂದರೆ ಆ ವಸ್ತು ನಮ್ಮನ್ನು ಯಾವ ಯಾವ ರೀತಿಯ ಕಷ್ಟದ ಸಂಕೋಲೆಗಳಿಗೆ ತಳ್ಳುತ್ತದೋ ಎಂಬುದರ ಅರಿವಿಲ್ಲದೆಯೇ, ಅದನ್ನು ಪಡೆದುಕೊಂಡು ತಾತ್ಕಾಲಿಕವಾಗಿ ನಾವು ಆನಂದ ಪಡೆದೆವು ಎಂದು ಅಂದುಕೊಳ್ಳುತ್ತೇವೆ. ಅದು ಬಾರೀ ಭ್ರಮೆ. ಹಾಗಾದರೆ ಸುಖ ದುಃಖಗಳೆಂಬುದು ಕೇವಲ ಭ್ರಮೆಯಂದಾದರೆ ಅದರ ಹಿಂದೆ ಮನುಷ್ಯ ಏಕೆ ಇಷ್ಟೊಂದು ಪರದಾಡುತ್ತಾನೆ?ಎಂದರೆ, ಕೇವಲ ಅಜ್ಞಾನದಿಂದ. ವಸ್ತುವಿಷಯಗಳ ಪರಿಚಯ, ಪೂರ್ವಾಪರಗಳ ವಿವೇಚನೆ ಸರಿಯಾಗಿ ಆದಲ್ಲಿ, ತೃಪ್ತಿಯ ಒಂದು ಭಾವ ಬಂದಾಗ, ಸುಖ ದುಃಖಗಳನ್ನು ಸಮವಾಗಿ ತೆಗೆದುಕೊಳ್ಳಲು ಮನಸ್ಸಿಗೆ ಸಾಮರ್ಥ್ಯ ಮತ್ತು ಶಕ್ತಿ ಎರಡೂ ಬಂದು ನೆಮ್ಮದಿ ಸಿಗುತ್ತದೆ.
ವಾಚಕರೆ, ಎಲ್ಲಿಯವರೆಗೆ, ನಮಗೆ ಈ ಪ್ರಪಂಚದ ಅಂಟು ಇದೆಯೋ ಅಲ್ಲಿಯತನಕ ಈ ಸುಖ ದುಃಖದ ಸಂಕೋಲೆಯಿಂದ ಮುಕ್ತಿ ಇಲ್ಲ. ಆದರೆ ಸಹನೆ, ಸಹಿಷ್ಣುತೆ, ತೃಪ್ತಿಯಂತಹ ಬಾವಗಳನ್ನು ನಮ್ಮ ಸ್ವಾಭಾವವಾಗಿಸಿಕೊಂಡರೆ, ಸುಖ ದುಃಖಗಳನ್ನು ಸಮನಾಗಿ, ಅಂದರೆ ಸುಖದಲ್ಲಿ ಉಬ್ಬದೆ ಮತ್ತು ದುಃಖದಲ್ಲಿ ಕುಗ್ಗದೆ, ತೆಗೆದುಕೊಳ್ಳುವ ಶಕ್ತಿ ನಮಗೆ ಬಂದು ನಾವು ನೆಮ್ಮದಿಯಾಗಿರಬಹುದು.
ರಸಧಾರೆ - 029
ಎರಡುಮಿರಬಹುದು ದಿಟ, ಶಿವರುದ್ರನೆಲೆ ಬೊಮ್ಮ |
ಕರವೊಂದರಲಿ ವೇಣು, ಶಂಖವೊಂದರಲಿ ||
ಬೆರಳ್ಗೆಳೆರಡಾನುಮಿರೆ ಕೈ ಚಿಟಿಕೆಯಾಡುವುದು |
ಒರುವನಾಡುವುದೆಂತು ? ಮಂಕುತಿಮ್ಮ ||
ಎರಡು೦ ಇರಬಹುದು ದಿಟ ಶಿವರುದ್ರ ನೆಲೆ ಬೊಮ್ಮ ಕರವೊಂದರಲಿ ವೇಣು ಶಂಖವೊಂದರಲಿ ಬೆರಳ್ಗಳು ಎರಡು ಆನುಂ ಇರೆ ಕೈ ಚಿಟಿಕೆ ಆಡುವುದು ಒರುವನು ಆಡುವುದೆಂತು ಮಂಕುತಿಮ್ಮ
ದಿಟ = ಸತ್ಯ, ಬೊಮ್ಮ = ಪರಬ್ರಹ್ಮ, ಪರಮಾತ್ಮ, ಕರ = ಕೈ, ವೇಣು = ಕೊಳಲು, ಆನುಮಿರೆ = ಒಂದಕ್ಕೊಂದು ಸೇರಿದರೆ . ಒರುವ = ಒಬ್ಬ ಅಥವಾ ಒಂದು.
ಪರಮಾತ್ಮನಿಗೆ, ಶಿವನೆಂಬ ಶಾಂತ ಸುಂದರ ಮತ್ತು ಶುಭಕರವಾದ ರೂಪವೂ ಇರಬಹುದು ಅಥವಾ ರುದ್ರನೆಂದು ಕರೆಯಲ್ಪಡುವ ಭಯಂಕರ ರೂಪವೂ ಇರಬಹುದು ಅಥವಾ ಸರ್ವರನೂ ತನ್ನೆಡೆಗೆ ಆಕರ್ಷಿಸುವ, ನಯನ ಮನೋಹರ, ವೇಣುಗಾನಲೋಲನ ರೂಪವೂ ಇರಬಹುದು ಅಥವಾ ರಣ ಕಹಳೆಗೆ ದನಿಗೂಡಿಸಿ ಯುದ್ಧಕ್ಕೆ ಆಹ್ವಾನವೀಯುವ ಪಾಂಚಜನ್ಯವನ್ನೂದುವ ಕ್ಷಾತ್ರ ರೂಪವೂ ಇರಬಹುದು. ಎರಡು ರೂಪಗಳೂ ಸತ್ಯವಿರಬಹುದು. ಏಕೆಂದರೆ ಕೈ ಚಿಟಿಕೆಯಾಡಿಸಲು, ಎರಡು ಬೆರಳುಗಳೂ ಬೇಕು. ಒಂದೇ ಬೆರಳಲ್ಲಿ ಚಿಟಿಕೆಯಾಗುವುದೇ ಎನ್ನುತ್ತಾರೆ ಶ್ರೀ ಡಿ.ವಿ.ಜಿ ಯವರು ಈ ಕಗ್ಗದಲ್ಲಿ
ಇಡೀ ಸೃಷ್ಟಿಯೇ ಪರಮಾತ್ಮನ ಹಲವು ರೂಪಗಳ ಬಿಂಬವೇ. ಒಂದು ಅದ್ಭುತ ಪರಮ ಶಕ್ತಿಯೇ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು. ಸಂಸ್ಕಾರ, ಶ್ರದ್ಧೆ, ವಿದ್ಯೆ, ಕಲೆ, ಸಂಗೀತ, ಸಾಹಿತ್ಯ, ಪ್ರೇಮ, ಪ್ರೀತಿ , ಸ್ನೇಹ, ಕರುಣೆ, ಸೌಹಾರ್ದದಂತಹ ಸುಂದರ ಮಾನವೀಯ ಭಾವಗಳು, ಪ್ರಕೃತಿ ಮತ್ತದರ ಉಪಯುಕ್ತ ರೂಪಗಳಾದ, ಮಳೆ, ಬೆಳೆ, ಹೊಸ ಚಿಗುರು, ಹೂವು ಹಣ್ಣು,ಮನಸ್ಸಿಗೆ ಆಹ್ಲಾದವೀಯುವ, ಪ್ರಕೃತಿ ಸೌಂದರ್ಯ, ಬೆಟ್ಟ ಗುಡ್ಡ, ನದಿ, ಝರಿ, ವೈವಿಧ್ಯಮಯ ಸಸ್ಯ ಜಗತ್ತು ಮತ್ತು ಪ್ರಾಣಿಜಗತ್ತು ಎಲ್ಲವೂ ಆ ಪರಮ ಶಕ್ತಿಯ ಒಂದು ರೂಪವಾದರೆ, ಕುಯುಕ್ತಿ, ದ್ವೇಷ, ಮೋಸ, ಕೊಲೆ, ದರೋಡೆ, ಯುದ್ಧ, ರಕ್ತಪಾತ, ಹಸಿವು, ದಾರಿದ್ರ್ಯ, ನೋವು ಭಯೋತ್ಪಾದನೆಯಂತಹ ಅ ಮಾನವೀಯ ಭಾವಗಳು, ಅತಿವೃಷ್ಟಿ, ಅನಾವೃಷ್ಟಿ,ಅಗ್ನಿಪರ್ವತಗಳು, ಸುನಾಮಿ, ಭೂಕಂಪಗಳಂತಹ ಪ್ರಕೃತಿಯ ಕ್ರೂರತೆಯ ಇನ್ನೊಂದು ರೂಪ. ಇವೆಲ್ಲವೂ ಪರಮಾತ್ಮನ ಪ್ರೇರಣೆಯಿಂದಲೇ ನಡೆಯುತ್ತೆ ಎಂದರೆ, ಈ ಎರಡೂ ಮುಖಗಳು ಆ ಪರಮಾತ್ಮನ ಮುಖವೇ ಅಲ್ಲವೇ? ಎರಡು ರೂಪಗಳಿಗೂ ಆ ಪರಮ ಶಕ್ತಿಯೇ ಪ್ರೇರಕವಲ್ಲವೇ?
ಈ ಎರಡೂ ಮುಖಗಳ ಪರಿಚಯವನ್ನು ಮಾಡಿಸಿದ ಘಟನೆಗಳ ಉಲ್ಲೇಖ ನಮ್ಮಲ್ಲಿ ಹೇರಳವಾಗಿ ಸಿಗುತ್ತದೆ. ಭಕ್ತಿಗೆ ಮೆಚ್ಚಿ ಕಾರಣ ಜನ್ಮವೆತ್ತಿದ ಮಹಾನ್ ಭಕ್ತರಾವಣನಿಗೆ ವರಕೊಟ್ಟ ಶಿವನ ಶಾಂತ ರೂಪ. ಅದೇ ರಾವಣನನ್ನು ಯುದ್ಧದಲ್ಲಿ ಕೊಂದು ಮೋಕ್ಷವನ್ನು ಕರುಣಿಸಿದ ರಾಮನ ರುದ್ರ ರೂಪ. ಪರಶಿವನ ಸ್ತ್ರೀ ರೂಪವಾದ ಶಕ್ತಿದೇವತೆಯು, ತನ್ನ ಇಚ್ಚಾಮಾತ್ರದಿಂದಲೇ ಸೃಷ್ಟಿ ಸ್ಥತಿ ಲಯಗಳನ್ನು ಮಾಡತಕ್ಕ ಶಕ್ತಿ ಸಂಪನ್ನಳಾದರೂ, ಅಧರ್ಮಿಯಾದ ಮಹಿಷಾಸುರನನ್ನು ಕೊಲ್ಲಲು ರುದ್ರರೂಪ ತಾಳಿ ತನ್ನ ಆಯುಧಗಳನ್ನು ಉಪಯೋಗಿಸಿ ಅವನನ್ನು ಹತ ಮಾಡಿದ ರುದ್ರ ರೂಪ. ಆ ರುದ್ರತೆಯಲ್ಲೂ, ತನ್ನ ಆಯುಧಗಳ ಸ್ಪರ್ಶದಿಂದ ಅವನ ಪಾಪಗಳನ್ನೆಲ್ಲ ನಾಶಮಾಡಿ ಅವನಿಗೆ ಮುಕ್ತಿಯನ್ನು ನೀಡಿದ ಕರುಣಾಮಯ ತಾಯ ರೂಪ. ಶಬರಿ, ಭೀಷ್ಮ ಜಟಾಯು, ಪ್ರಹ್ಲಾದ, ದ್ರುವ ಇಂತಹವರಿಗೆ ಪ್ರೇಮದಿಂದ ಮುಕ್ತಿ. ಹಿರಣ್ಯಾಕ್ಷ, ಹಿರಣ್ಯಕಶಿಪು, ಪೂತನೆ, ಕಂಸ, ಚಾಣೂರ, ಮುಷ್ಟಿಕ, ಪೂತನ, ಶಿಶುಪಾಲ, ಪೌಂಡ್ರಕ ವಾಸುದೇವ, ಜರಾಸಂದ, ದಂತವಕ್ತ್ರ, ಮುಂತಾದವರಿಗೆ ಉಗ್ರ ರೂಪದಿ ಮುಕ್ತಿ, ಹೀಗೆ ಹತ್ತು ಹಲವಾರು ಪ್ರಸಂಗಗಳು ನಮಗೆ ಆ ಪರಮ ಶಕ್ತಿಯ ಎರಡೂ ರೂಪಗಳನ್ನು ಪರಿಚಯ ಮಾಡುತ್ತದೆ.
ಪ್ರಸಕ್ತ ಜಗತ್ತಿನಲ್ಲೂ ಸಹ ಇಂಥಹ ಭಿನ್ನ ರೂಪಗಳನ್ನು ನಾವು ಕಾಣುತ್ತೇವೆ. ಪರಸ್ಪರ ಸ್ನೇಹಭಾವ, ಉಪಕಾರ ಬುದ್ಧಿ, ಪ್ರೀತಿ, ಪ್ರೇಮ, ಕರುಣೆಯಂತಹ ಸಕಾರಾತ್ಮಕ ಭಾವಗಳೂ, ದುರ್ಬುದ್ಧಿ, ದುರ್ಭಾವ, ದ್ವೇಷ, ಅಸೂಯೆ, ಕ್ರೌರ್ಯದಂತಹ ನಕಾರಾತ್ಮಕ ಭಾವಗಳು ಒಂದರ ಪಕ್ಕದಲ್ಲಿ ಇನ್ನೊಂದೆಂಬಂತೆ ನಮ್ಮ ಸಮಾಜದಲ್ಲಿ ನಾವು ಕಾಣಬಹುದು. ಅಷ್ಟೇ ಏಕೆ ವಾಚಕರೆ ಒಂದೇ ವ್ಯಕ್ತಿಯಲ್ಲೇ ಇಂತಹ ಎರಡು ಮುಖಗಳನ್ನೂ ನಾವು ಕಾಣುವುದಿಲ್ಲವೇ. ಒಬ್ಬನೇ ವ್ಯಕ್ತಿ ಕೆಲವರಿಗೆ ಒಳ್ಳೆಯವನಾಗಿಯೂ, ಕೆಲವರಿಗೆ ದುಷ್ಟನಾಗಿಯೂ ತೋರುವುದಿಲ್ಲವೇ. ನಮ್ಮ ಮನಸ್ಸುಗಳಲ್ಲೇ ಈ ರೀತಿಯ ದ್ವಿ ಭಾವಗಳ ಗುಚ್ಚವೆ ಇಲ್ಲವೇ? ಇಂತಹ ದ್ವಿಭಾವಯುಕ್ತವೆ ಜೀವನ. ಎರಡೂ ಇರಬೇಕು ಜಗದ್ವ್ಯಾಪಾರಕ್ಕೆ. ಎಂದಿಗೂ ಎಲ್ಲರೂ ಎಲ್ಲಕಾಲಕ್ಕೂ ಒಳ್ಳೆಯವರಾಗಿಯೂ ಅಥವಾ ಎಲ್ಲ ಕಾಲಕ್ಕೂ ಕೆಟ್ಟವರಾಗಿಯೂ ಇರುವುದಿಲ್ಲ. ಇವೆರಡರ ಸಮ್ಮಿಶ್ರ ರೂಪವೇ ಈ ಜಗದ್ವ್ಯಾಪಾರ. ಹೇಗೆ ಒಂದು ಬೆರಳಲ್ಲಿ ಚಿಟಿಕೆ ಹಾಕಲಾಗುವುದಿಲ್ಲವೋ, ಹೇಗೆ ಒಂದು ಕೈಯಿಂದ ಚಪ್ಪಾಳೆ ತಟ್ಟಲಾಗುವುದಿಲ್ಲವೋ, ಹಾಗೆ ಯಾವುದೋ ಒಂದರಿಂದಲೇ, ಜಗತ್ತಿಲ್ಲ.ಇದೇ ಈ ಕಗ್ಗದ ಆಂತರ್ಯ ಭಾವ.
ಒಂದು ಮನುಷ್ಯನಿಗೆ ಹೇಗೆ ಅಸತ್ತಿನಿದ ಸತ್ತಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ದುಃಖದಿಂದ ನೆಮ್ಮದಿಯೆಡೆಗೆ ಹೋಗಲು ಸಾಧ್ಯ ಉಂಟೋ ಹಾಗೆಯೇ ಇದರ ವಿರುದ್ಧ ದಿಕ್ಕಿನಲ್ಲಿ ಹೋಗಲೂಸಹ ಸಾಧ್ಯ ಉಂಟು. ಒಟ್ಟು ಸಮುದಾಯದ ಸಾಮೂಹಿಕ ಇಚ್ಚಾ ಶಕ್ತಿಯ ಮೇಲೆ ಆ ಸಮಾಜದ ಆಗುಹೋಗುಗಳು ನಿರ್ಭರವಾಗಿವೆ. ನಾವೂ ಸಹ ನಮ್ಮ ಸಮಾಜದ ಸಮಗ್ರ ವಿಶ್ಲೇಷಣೆ ಮಾಡಿ ನಾವು ಎಲ್ಲಿದ್ದೇವೆ ಎಲ್ಲಿಗೆ ಹೋಗಬೇಕು ಎಂದು ಧೃಢ ನಿಶ್ಚಯ ಮಾಡಿದರೆ, ಎಂದೋ ಒಂದು ದಿನ ಸಮಾಜದ ಸಮೃದ್ಧ ಸಂಪನ್ನ ಶಾಂತ ರೂಪವನ್ನು ಕಾಣಬಹುದು.
ಸತ್ಯಾನ್ವೇಷಣೆ ರಸಧಾರೆ - 030
ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿಥ್ಯೆಯೆನ್ನುವೊಡೆ
ಸಂಬಂಧವಿಲ್ಲವೇನು ವಿಷಯಯುಗಕೆ?
ನಮ್ಮ ಕಣ್ಮನಸುಗಳೇ ನಮಗೆ ಸಟೆ ಪೇಳುವೊಡೆ
ನೆಮ್ಮುವುದದಾರನೋ ? ಮಂಕು ತಿಮ್ಮ
ಮಿಥ್ಯೆಯೆನ್ನುವೊಡೆ = ಮಿಥ್ಯೆ + ಎನ್ನುವೊಡೆ, ಕಣ್ಮನಸುಗಳೇ = ಕಣ್ಣು + ಮನಸ್ಸುಗಳೇ, ನೆಮ್ಮುವುದದಾರನೋ = ನೆಮ್ಮುವುದು + ಅದು + ಯಾರನೋ
ಬ್ರಹ್ಮ = ಸೃಷ್ಟಿಕರ್ತ, ಪರಮಾತ್ಮ, ಸೃಷ್ಟಿ = ಈ ಜಗತ್ತು, ಮಿಥ್ಯೆ = ಅಸ್ತ್ಯವಾದದ್ದು, ಎನ್ನುವೊಡೆ = ಎಂದರೆ, ವಿಷಯಯುಗ = ಎರಡು ವಿಷಯಗಳು, ಸಟೆ = ಸುಳ್ಳು, ನೆಮ್ಮುದು = ನಂಬುವುದು.
ಬ್ರಹ್ಮವೇ ಸತ್ಯ ಸೃಷ್ಟಿಯೇ ಮಿಥ್ಯ ಎನ್ನುವುದಾದರೆ ಈ ಜಗತ್ತು ಮತ್ತು ಅದನ್ನು ಸೃಷ್ಟಿಮಾಡಿದ ಆ ಪರ ಬ್ರಹ್ಮನಿಗೂ ಯಾವುದೇ ಸಂಬಂಧವಿಲ್ಲವೇನು? ನಮ್ಮ ಕಣ್ಣು ಮನಸ್ಸುಗಳೇ ನಮಗೆ ಅಸತ್ಯವನ್ನು ಹೇಳುವುದಾದರೆ ನಂಬುವುದು ಯಾರನ್ನು ಎಂದು, ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವಿನ ಸಂಬಂಧ ಕುರಿತಾದಂತ ಒಂದು ಅದ್ಭುತ ವಿಷಯವನ್ನು ನಮ್ಮ ಮುಂದಿಡುತ್ತಾರೆ ಶ್ರೀ ಡಿ.ವಿ.ಜಿ.ಯವರು ಈ ಕಗ್ಗದ ರೂಪದಲ್ಲಿ.
ಆ ಪರಮ ಶಕ್ತಿಯೇ ಈ ಸೃಷ್ಟಿಗೆ ಮೂಲ. ತನ್ನ ಇಚ್ಚಾ ಶಕ್ತಿಯಿಂದಲೇ ಇಡೀ ಬ್ರಹ್ಮಾಂಡವನ್ನು ಸೃಜಿಸಿದ ಆ ಪರಮಾತ್ಮ ಎಂದು ಪುರಾಣಗಳು ಹೇಳುತ್ತವೆ. ಆ ಪರಬ್ರಹ್ಮ ಸತ್ಯವೆಂದಮೇಲೆ, ಈ ಜಗದ್ವ್ಯಾಪರವನ್ನು, ಎಂದರೆ ಹಗಲು ರಾತ್ರಿಗಳು, ಋತುಮಾನಗಳು, ಮಳೆಗಳು ಬೆಳೆಗಳು, ಜೀವಿಗಳ ಹುಟ್ಟುಸಾವಿನ ಪ್ರಕ್ರಿಯೆಗಳು, ಹೀಗೆ ಎಲ್ಲವೂ ಅ ಪರಮಾತ್ಮನ ಅಧೀನದಲ್ಲಿದೆಯೆಂದರೆ,ಆ ಪರಮ ವಸ್ತುವಿಗೂ ಮತ್ತು ಅದು ಸೃಜಿಸಿದ ಈ ಸೃಷ್ಟಿಗೂ ಒಂದು ಅವಿನಾಭಾವ ಸಂಬಂಧವಿರಬೇಕಲ್ಲವೇ? ಅವನ ಸೃಷ್ಟಿಯೂ ಸತ್ಯವಾಗಿರಬೇಕಲ್ಲವೇ. ಆದರೆ ಜಗತ್ ಮಿಥ್ಯಎನ್ನುವ ಒಂದು ತತ್ವ ಪ್ರತಿಪಾದನೆಯೂ ಇದೆ. ಆದರೆ ನಮ್ಮ ಕಣ್ಣಿಗೆ ಕಾಣುತ್ತದಲ್ಲ!!!! ಹಾಗೆ ಕಣ್ಣಿಗೆ ಕಾಣುವುದನ್ನು ನಾವು ಅಸತ್ಯ ಎಂದು ಹೇಗೆ ನಂಬುವುದು. ಇದರಲ್ಲಿ ಯಾವುದನ್ನು ನಂಬುವುದು ಎಂದು ಒಂದು ಗಹನವಾದ ವಿಚಾರವನ್ನು ಶ್ರೀ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸಿದ್ದಾರೆ.
ಸತ್ಯವೆಂದರೇನು? ಸಿದ್ಧಾಂತ ಪ್ರತಿಪಾದಕರ ಪ್ರಕಾರ, ಯಾವುದು ನಿತ್ಯವೂ ಅದು ಸತ್ಯ. ನಿತ್ಯವೆಂದರೆ ನಿರಂತರವಾಗಿರುವುದು. ಅಂದರೆ ಸದಾಕಾಲ ಬದಲಾಗದೆ ಹಾಗೆ ಇರುವುದು. ಹೌದು ಆ ಅರ್ಥದಲ್ಲಿ ಈ ಜಗತ್ತು ಕೇವಲ ಮಿಥ್ಯೆ ಅಥವಾ ಭ್ರಮೆ. ಈಗ ಕಂಡದ್ದು ಇನ್ನೊಂದು ಕ್ಷಣಕ್ಕೆ ಇಲ್ಲ. ಹಾಗೆ ನೋಡಿದರೆ ಪರಮಾತ್ಮಶಕ್ತಿಯನ್ನು ಬಿಟ್ಟರೆ, ಮಿಕ್ಕ ಎಲ್ಲಕ್ಕೂ ಒಂದು ಕಾಲ ಉಂಟು, ಆಮೆಗೆ ೩೫೦ವರ್ಷ,ಆನೆಗೆ ೧೮೫, ಮನುಷ್ಯನಿಗೆ ೧೦೦ ಆದರೆ ಇರುವೆಗೆ ೫ ದಿನ, ಸೊಳ್ಳೆಗೆ ೩ ದಿನ. ಯಾವುದೂ ಶಾಶ್ವತವಲ್ಲ. ಪುರಾಣಗಳ ಪ್ರಕಾರ, ಬ್ರಹ್ಮ ಇಂದ್ರ ಮತ್ತು ಅವನ ಸಹಚರರಾದ ದಿಕ್ಪಾಲಕರು ಅಷ್ಟವಸುಗಳು, ಇವರೆಲ್ಲರೂ ಕೇವಲ ನಿಯಮಿತ ಅಧಿಕಾರಿಗಳು. ( appointed officers ) ಪರಮಾತ್ಮನ ಆದೇಶದ ಮೇರೆಗೆ ಜಗತ್ತನ್ನು ನಿಯಂತ್ರಿಸುವ ಇವರುಗಳಿಗೂ ಒಂದು ಕಾಲವೆಂದು ಉಂಟು ಹಾಗಾಗಿ ಅವರೂ ಸಹ ನಿತ್ಯರಲ್ಲದ ಕಾರಣ ಅವರನ್ನು ಸತ್ಯವಲ್ಲವೆಂದು ಪರಿಗಣಿಸಬೇಕಾಗುತ್ತದೆ, ಅಲ್ಲವೇ?
ಇಂದು ನಮಗೆ ಕಾಣುವುದು, ನಮ್ಮ ಅನುಭವಕ್ಕೆ ಬರುವುದು, ನಮ್ಮ ಸಂಪರ್ಕಕ್ಕೆ ಬರುವುದು ಎಲ್ಲವೂ ನಮಗೆ ಇಂದಿಗೆ ಸತ್ಯ. ಅಲ್ಲದಿದ್ದರೆ, ಅದು ಬರೀ ಭ್ರಮೆಯಾದರೆ ನಮ್ಮ ಅನುಭವಗಳು ಸುಳ್ಳೇ?. ಸಾಧ್ಯವಿಲ್ಲ. ವೇದಾಂತದ ಪ್ರಕಾರ ಹಾಗಿರಬಹುದು ಆದರೆ ವಾಸ್ತವಿಕ ಬದುಕಿನಲ್ಲಿ ಆ ರೀತಿಯ ಭಾವನೆಗಳು ಜೀವನದಲ್ಲಿ ಉತ್ಸಾಹವನ್ನು ಕುಗ್ಗಿಸಿ, ಬದುಕನ್ನು ಬರಡಾಗಿಸುತ್ತದೆ. ನಾವು ಇದ್ದೇವೆ ಎಂದರೆ ನಮ್ಮ ಸುತ್ತಿ ಇರುವುದೆಲ್ಲ ಇದೆ ಎಂದು ಅರ್ಥ. ಇದೆ ಎಂದರೆ ಅದು ಸತ್ಯ. ಇಲ್ಲವೆಂಬುದನ್ನು ಇದೆ ಎಂದುಕೊಂಡರೆ, ಅದು ಭ್ರಮೆ. ಇರುವುದನ್ನು ಇಲ್ಲವೆಂದರೂ ಭ್ರಮೆಯೇ ತಾನೇ?.
ವಾಚಕರೆ ಒಂದು ಪರಮ ಶಕ್ತಿ. ಆ ಒಂದು ಶಕ್ತಿಯ ಸೃಷ್ಟಿಯೇ ಈ ಜಗತ್ತು. ಈ ಜಗತ್ತಿನ ಒಂದು ಅಂಶ ನಾವು. ಹೇಗೆ ಒಂದೇ ಬಸ್ಸಿನಲ್ಲಿ ಬೇರೆ ಬೇರೆ ಸಮಯಕ್ಕೆ ಬೇರೆ ಬೇರೆ ಪ್ರಯಾಣಿಕರು ಪ್ರಯಾಣ ಮಾಡುತ್ತಾರೋ ಮತ್ತು ಒಂದೊಂದು ಬಾರಿಯ ಪ್ರಯಾಣಕ್ಕೂ(ಟ್ರಿಪ್) ಬೇರೆ ಬೇರೆ ಪ್ರಯಾಣಿಕರು ಆ ಟ್ರಿಪ್ಪಿಗೆ ಎಷ್ಟು ಸತ್ಯವೋ ಅಷ್ಟೇ ಸತ್ಯ ಈ ಜನ್ಮವೆಂಬ ಪ್ರಯಾಣದಲ್ಲಿ ನಮ್ಮ ಜೀವನವೂ ಸಹ. ವಾಸ್ತವಿಕ ಬದುಕು ಬೇರೆ ವೇದಾಂತದ ಬದುಕು ಬೇರೆ. ವೇದಾಂತದಲ್ಲಿ ವಾಸ್ತವವನ್ನೂ ಮತ್ತು ವಾಸ್ತವದಲ್ಲಿ ವೇದಾಂತವನ್ನೂ ಸಮನ್ವಯವಾಗಿ ಬೆರೆಸಿಕೊಂಡು ನಮ್ಮನ್ನು ನಾವು ಸಾರ್ಥಕ್ಕ್ಯದೆಡೆಗೆ ತೆಗೆದುಕೊಂಡು ಹೋಗಬೇಕು. ಇದಕ್ಕೆ ಅಧ್ಯಯನ ನಿಧಿಧ್ಯಾಸನಗಳ ಅವಶ್ಯಕತೆ ಇದೆ. ಅದರ ಪ್ರಯತ್ನವೇ ನಮ್ಮ ಬದುಕಾಗಬೇಕು. ಸತ್ಯ ಅಸತ್ಯಗಳ ದ್ವಂದ್ವವಿಲ್ಲದೆ ಉತ್ಸಾಹದಿಂದ ಜೀವವನ್ನು ಆಸಕ್ತಿಯಿಂದ ಜೀವಿಸಬೇಕು. ಹಾಗೆ ಆಸಕ್ತಿಯ ಜೀವನವನ್ನು ನಡೆಸುವಾಗ ಅಂತರಂಗದಲ್ಲಿ ವಿರಕ್ತಿಯ ಭಾವವಿರಬೇಕು. ಹಾಗಿದ್ದರೆ ಸುಖ ಸಂತೋಷ ನೆಮ್ಮದಿ. ಅಂತಹ ಸ್ಥಿತಿಯನ್ನು ಸಾಧಿಸುವ ಪ್ರಯತ್ನವನ್ನು ನಾವೂ ಮಾಡೋಣವೆ?
ಸತ್ಯಾನ್ವೇಷಣೆ ರಸಧಾರೆ - 031
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |
ನಚ್ಚುವುದೆ ಮರೆಯೋಲಿಹುದನೆ ಸತ್ಯವೆಂದು ? ||
ಅಚ್ಚರಿಯ ತಂತ್ರವಿದು ಬ್ರಹ್ಮ ಸೃಷ್ಟಿಗಳೇಕೋ |
ಮುಚ್ಚಿಹವು ಸಾಜತೆಯ- ಮಂಕುತಿಮ್ಮ ||
ನಚ್ಚುವುದು = ನೆಚ್ಚುವುದು, ನಂಬುವುದು, ಇಹುದನೆ = ಇರುವುದನ್ನು , ಸಾಜತೆಯ = ಸಹಜತೆಯ.
ಸತ್ಯವಾದ ಆ ಪರಮಾತ್ಮವಸ್ತು ಅಸತ್ಯವಾದ ಈ ಸೃಷ್ಟಿಯ ಹಿಂದೆ ಬಚ್ಚಿಟ್ಟುಕೊಂಡಿರುವುದೇ? ಜಗತ್ತು ಕಾಣುತ್ತದೆ. ಇಂದ್ರಿಯ ಗ್ರಾಹ್ಯ. ಇದನ್ನು ಮಿಥ್ಯವೆಂದು ಅಸಥ್ಯವೆಂದು ಹೇಳುತ್ತಾರೆ. ಆದರೆ ಅದನ್ನು ಸೃಜಿಸಿದ ಶಕ್ತಿ ಕಾಣುವುದಿಲ್ಲ. ಭಾವಿಸಬಹುದು ಮತ್ತು ಕೇವಲ ಅನುಭವ ವೇಧ್ಯ. ಅದನ್ನು ಸತ್ಯವೆನ್ನುತ್ತಾರೆ.ಕಣ್ಣಿಗೆ ಕಾಣದೆ, ಮರೆಯಲ್ಲಿರುವುದನ್ನು ಸತ್ಯವೆಂದು ನಂಬುವುದು ಹೇಗೆ. ಈ ಸೃಷ್ಟಿಕರ್ತ ಮತ್ತು ಅವನ ಸೃಷ್ಟಿಯ ತಂತ್ರ ಬಹಳ ಆಶ್ಚರ್ಯಕರವಾದವು ಮತ್ತು ಸಹಜತೆಯು ಮುಚ್ಚಿಹುದು, ಸ್ಪಷ್ಟವಿಲ್ಲದೆ ,ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
ನೋಡಿ ಒಂದು ಮಗುವಿಗೆ ಆನೆಯನ್ನು ನೀವು ಬಹಳ ಚೆನ್ನಾಗಿ ವಿವರಿಸುತ್ತೀರಿ. ದೊಡ್ಡ ಕಿವಿ, ಸಣ್ಣ ಕಣ್ಣು, ಸಣ್ಣ ಬಾಲ, ಬೃಹತ್ತಾದ ದೇಹ ಮತ್ತು ಕಾಲುಗಳು, ಒಂದು ದೊಡ್ಡ ಸೊಂಡಿಲು ಎಂದು ಎಷ್ಟು ಹೇಳಿದರೂ ಆ ರೂಪವನ್ನು ಆ ಮಗು ಕಲ್ಪಿಸಿಕೊಳ್ಳಲು ಸಾಧ್ಯವೇ?. ಇಲ್ಲ. ಬದಲಿಗೆ ಅದಕ್ಕೊಂದು ಆನೆಯನ್ನು ತೋರಿಸಿ, ಇದು ಆನೆ ಎಂದು ಹೇಳಿದರೆ. ಮುಂದೆ ಅದಕ್ಕೆ ಆನೆ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ನಿಜವಾದ ಆನೆಯ ರೂಪ ಅದರ ಮನಸ್ಸಿಗೆ ಬರುತ್ತದೆ ಮತ್ತು ಬೇರೆ ರೂಪವನ್ನಲ್ಲ. ಆದರೆ ನಮಗೆ ಯಾರೂ ಆ ಪರಮಾತ್ಮನನ್ನು ತೋರಿಸಿಲ್ಲ.
ಹಾಗಿರಬೇಕಾದರೆ ನಾವು ಯಾವುದನ್ನು ಪರಮಾತ್ಮ ಎಂದು ನಂಬುವುದು. ಹಾಗೆ ನಾವು ಕಾಣದೆ ಇರುವ, ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಒಂದು ವಸ್ತುವನ್ನು ಸತ್ಯವೆಂದೂ, ಕಣ್ಣಿಗೆ ಕಾಣುವ ಮತ್ತು ನಮ್ಮ ನಿತ್ಯಜೀವನದಲ್ಲಿ ನೋಡುವ ಅನುಭವಿಸುವ ಮತ್ತು ಒಡನಾಡುವ ವಸ್ತು, ವ್ಯಕ್ತಿ ವಿಷಯಗಳನ್ನು ಸುಳ್ಳು ಅಥವಾ ಮಿಥ್ಯೆ ಎನ್ನುವುದು, ಏನಿದು ತಂತ್ರ ಎನ್ನುತ್ತಾರೆ ಶ್ರೀ ಗುಂಡಪ್ಪನವರು.
ನಮ್ಮ ಋಷಿ ಮುನಿಗಳು ಬಹಳ ಗಹನವಾದ ತತ್ವವನ್ನು ಪ್ರತಿಪಾದಿಸಿದ್ದಾರೆ. ಜಗತ್ತಿನಲ್ಲಿ ಯಾರೂ ಕಾಣದನ್ನು ಬಹಳ ಹಿಂದೆಯೇ ಅನುಭವದಿಂದ ಕಂಡುಕೊಂಡಿದ್ದಾರೆ. ತೆಲುಗಿನಲ್ಲಿ ಒಬ್ಬ ನಮ್ಮ ಗುಂಡಪ್ಪನವರಂತೆಯೇ ಒಬ್ಬ ತತ್ವಪ್ರತಿಪಾದಕ ಕವಿ, ವೇಮನ. ಸರಿ ಸುಮಾರು ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಜನಿಸಿದ ಈ ಕವಿ ನಮ್ಮ ಗುಂಡಪ್ಪನವರ ಕಗ್ಗಗಳ ರೂಪದಲ್ಲಿಯೇ ತತ್ವಪ್ರತಿಪಾದಕ ಕೃತಿವೇಮನ ಶತಕವನ್ನು ರಚಿಸಿದ್ದಾರೆ. ಅವರು ಬರೆಯುತ್ತಾರೆ ಇಂದು ಗಲಡು ಅಂದು ಲೇಡನಿ ಸಂದೇಹಮು ವಲದು, ಚಕ್ರಿ ಎದೆಂದು ವೆಥಿಕಿತೆ ಅದಂದೆ ಗಲಡುಎಂದು. ಇಲ್ಲಿರುವ ಅಲ್ಲಿ ಇಲ್ಲ ಎಂಬ ಸಂದೇಹವು ಬೇಡ ಆ ಚಕ್ರಧಾರಿಯು ಎಲ್ಲೆಲ್ಲಿ ಹುಡುಕಿದರೆ ಅಲ್ಲಲ್ಲಿ ಕಾಣುವಎನ್ನುತ್ತಾರೆ.
ಆ ಪರಮಾತ್ಮನ ಸರ್ವಪ್ಯಾಪಕತ್ವವನ್ನು ಪ್ರತಿಪಾದಿಸುವ ಸಾಹಿತ್ಯ ನಮ್ಮಲ್ಲಿ ಹೇರಳವಾಗುಂಟು. ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿಎನ್ನುವ ಶಿವಶರಣರು, ” ಆ ಪರಮಾತ್ಮ ಎಲ್ಲಕಡೆಯೂ ಇರುವುದರಿಂದ, ಈ ಬಾಳೆ ಹಣ್ಣನ್ನು ನಾ ಮರೆಯಲ್ಲಿ ತಿನ್ನಲಾಗಲಿಲ್ಲಎಂದು ತನ್ನ ಗುರುಗಳಿಗೆ ಹೇಳಿದ ನಮ್ಮ ಕನಕದಾಸರು. ಎಲ್ಲರೂ ಆ ಕಾಣದ ದೈವದ ಸರ್ವವ್ಯಾಪಕತ್ವವನ್ನು ಪ್ರತಿಪಾದಿಸಿದ್ದಾರೆ.
ಕಾಣದ್ದೆಲ್ಲ ಅಸತ್ಯವೆಂದು ಹೇಳುವುದು ತಪ್ಪು. ಪ್ರೀತಿ ಪ್ರೇಮಗಳು ಕಾಣದಿದ್ದರೂ ಅದರ ಅನುಭವವಾಗುವುದಿಲ್ಲವೇ? ಗಾಳಿ ಕಾಣದಿದ್ದರೂ ನಮ್ಮನ್ನೆಲ್ಲ ಜೀವಂತವಾಗಿರಿಸಿಲ್ಲವೇ? ನಮಗೆ ವಿದ್ಯುತ್ ಕಣ್ಣಿಗೆ ಕಾಣದಿದ್ದರೂ ಬೆಳಕು ಬರುವುದಿಲ್ಲವೇ? ಕಾಣುವುದಿಲ್ಲವಲ್ಲ ಎಂದು ಪರೀಕ್ಷಿಸಲು ಕೈ ಇಟ್ಟು ನೋಡಿ. ಅಷ್ಟೇ ನಿಮ್ಮನ್ನೇ ಬಲಿ ತೆಗೆದುಕೊಂಡು ಬಿಡುತ್ತೆ. ಅಲ್ಲವೇ? ಹಾಗೆ ನಾವು ನಮಗೆ ಕಣ್ಣಿಗೆ ಕಾಣವುದು ಮಾತ್ರ ಸತ್ಯ ಕಾಣದ್ದೆಲ್ಲ ಸುಳ್ಳು ಅಸತ್ಯವೆಂದು ಹೇಳಲಾಗುವುದಿಲ್ಲ. ಇದ್ದರೂ ಕಾಣದ ಆದರೆ ಸತ್ಯವೆನ್ನಿಸಿಕೊಳ್ಳುವ, ಈಗ ಕಂಡರೂ ಬದಲಾಗುತ್ತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಸತ್ಯವೆನ್ನಿಸಿಕೊಳ್ಳುವ ಈ ಪರಮಾತ್ಮ ಜಗತ್ಸಂಬಂಧವನ್ನೇ ಗುಂಡಪ್ಪನವರು ಅಚ್ಚರಿಯ ತಂತ್ರ ಎನ್ನುತ್ತಾರೆ.
ಕಾಣದ ದೇವರು ಮತ್ತು ಕಾಣುವ ಈ ಜಗತ್ತು ಇವುಗಳ ಬಾಂಧವ್ಯವೆ ಈ ಜಗದ್ವ್ಯಾಪಾರ. ಆದರೆ ಒಂದು ಶಕ್ತಿ, ಕಣ್ಣಿಗೆ ಕಾಣದಿದ್ದರೂ ತನ್ನ ಪ್ರಭಾವ ಮತ್ತು ಪ್ರತಾಪವನ್ನು ಎಲ್ಲ ಕಡೆಯೂ ಬೀರುತ್ತಿರುವ ಅತ್ಯುತ್ತಮ ಶಕ್ತಿ, “ಪರಮ ಪೌರುಷವನ್ನುಪಡೆದಿರುವ ಪರಮ ಪುರುಷನೆಂದು ಕರೆಯಲ್ಪಡುವ ಆ ಶಕ್ತಿಯೇ ಎಲ್ಲವೂ ಆಗಿರುವಾಗ, ನಾವು ಅದನ್ನು ನಂಬದೆ ಬೇರೆ ಗತ್ಯಂತರವೇ ಇಲ್ಲ. ನಂಬದೆ ಸತ್ಯ-ಮಿಥ್ಯೆಗಳ ದ್ವಂದ್ವಗಳಲ್ಲಿ ತೊಳಲಾಡುವುದಕ್ಕಿಂತ, ನಂಬಿ ನೆಮ್ಮದಿಯಿಂದ ಇರಬಹುದಲ್ಲವೇ? ನಮ್ಮ ಭಾರತೀಯ ಸಿದ್ಧಾಂತಗಳಲ್ಲಿ ಪ್ರತಿಪಾದಿಸಲ್ಪತ್ತಂತೆ ಎಲ್ಲವೂ ಆ ಪರಮಾತ್ಮನೇ ಆದಮೇಲೆ ನಾನು, ನೀವು, ಅವನು, ಅವಳು, ಇದು, ಅದು, ಎಲ್ಲವೂ ಆ ಪರಮ ಶಕ್ತಿಯ ಸ್ವರೂಪವೇ ಎಂದಮೇಲೆ, ಎಲ್ಲವನ್ನೂ ಪ್ರೀತಿ ಪ್ರೇಮ ವಿಶ್ವಾಸದಿಂದ ಕಂಡು ಒಂದು ಸೌಹಾರ್ಧಯುತವಾದ ಬಾಳು ನಡೆಸಲು ಸಾಧ್ಯವಲ್ಲವೇ?
ಸತ್ಯಾನ್ವೇಷಣೆ ರಸಧಾರೆ - 032
ಪರಬೊಮ್ಮನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೋ ನಿದ್ದೆ ಕಲವರವೋ? ||
ಮರುಳನವನಲ್ಲದೊಡೆ ನಿಯಮವೊಂದಿರಬೇಕು |
ಗುರಿಗೊತ್ತದೇನಿಹುದೋ ? – ಮಂಕುತಿಮ್ಮ. ಈ
ಪರಬೊಮ್ಮನು ಈ ಜಗವ ರಚಿಸಿದವನು ಆದೊಡೆ ಬರಿ ಆಟವೋ ಕನಸೋ ಕಲವರವೋ? |
ಮರುಳನು ಅವನು ಅಲ್ಲದೊಡೆ ನಿಯಮವು ಒಂದು ಇರಬೇಕು ಗುರಿ ಗೊತ್ತು ಅದು ಎನಿಹುದೋ ಮಂಕುತಿಮ್ಮ ಈ
ಪರಬೊಮ್ಮ = ಪರಬ್ರಹ್ಮ, ಪರಮಾತ್ಮ, ಜಗವ = ಜಗತ್ತನ್ನು, ಆದೊಡೆ = ಆದರೆ, ಕಲವರ = ಅರೆ ನಿದ್ರಾವಸ್ಥೆಯಲ್ಲಿ ಬಡಬಡಿಸುವುದು. ಮರುಳ = ಹುಚ್ಚ, ಗುರಿ = ಧ್ಯೇಯ, ಗೊತ್ತು = ಗತಿ ಮಾರ್ಗ.
ಆ ಪರಮಾತ್ಮನು, ನಾವು ಹಿಂದೆ ಹೇಳಿದಂತೆ, ಈ ಜಗತ್ತನ್ನು ಸೃಷ್ಟಿಸಿದ ಎಂದರೆ ಇದರ ಧ್ಯೇಯ ಮತ್ತು ದಿಶೆ ಎರಡೂ ಇಲ್ಲದೆ, ಒಂದು ನಿರ್ದಿಷ್ಟ ನಿಯಮವಿಲ್ಲದೆ ಏಕೆ ಹೀಗೆ ಇದೆ ? ಮಾನವರಿಗೆ ಅರ್ಥವಾಗದ ಈ ಜಗತ್ತನ್ನು ಸೃಷ್ಟಿಸಿ, ಈ ಜಗತ್ತನ್ನು, ಬರಿ ಅವನಾಟವೆಂದೋ, ಕನಸೆಂದೋ, ಮಾಯೆಯೆಂದೋ ಹೇಳಿ, ಅರ ನಿದ್ರೆಯಲಿ ಆಡುವ ಅಸ್ಪಷ್ಟಮಾತುಗಳಂತೆ, ಈ ಜಗತ್ತಿನ ವಿಷಯದಲ್ಲಿ ಒಂದು ಸ್ಪಷ್ಟ ನಿರೂಪಣೆ ಏಕಿಲ್ಲವೆಂದು ಮತ್ತು ಇಂತಹ ಜಗತ್ತನ್ನು ಸೃಷ್ಟಿಮಾಡಿದ, ಆ ಪರಮಾತ್ಮನು ಹುಚ್ಚನಲ್ಲವಷ್ಟೇ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ. ಈ ಕಗ್ಗಗಳನ್ನು ನೋಡಿದರೆ ಏಕೆ ಹೀಗೆ ಗುಂಡಪ್ಪನವರು ಮತ್ತೆ ಮತ್ತೆ ಇದೆ ಪ್ರಶ್ನೆಗಳನ್ನು ಬೇರೆ ಬೇರೆ ರೀತಿಯಲ್ಲಿ ಕೇಳಿದ್ದಾರೆ ಎಂದು ಸಂದೇಹವು ಬರುವುದು, ಸಹಜ. ವಿಷಯವೇ ಹಾಗಿದೆ. ಇದರ ವಿಚಾರವನ್ನು ಮತ್ತೆ ಮತ್ತೆ ಜಿಜ್ಞಾಸೆಗೆ ಒಳಪಡಿಸಿದರೂ ಅರ್ಥವಾಗದಷ್ಟು ಕ್ಲಿಷ್ಟ. ಓದುಗರ ಮನಸ್ಸನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುವ ಪ್ರಯತ್ನ ಮಾನ್ಯ ಗುಂಡಪ್ಪನವರದು.
ಹೀಗೆ ಅನ್ನಿಸುವುದು ಸಹಜ. ಆದರೆ ಇದರ ವ್ಯಾಪ್ತಿ ಮತ್ತು ವೈಶಾಲ್ಯ ಎಷ್ಟಿದೆ ಎಂದರೆ, ಸಮಗ್ರ ಸೃಷ್ಟಿಯನ್ನು ಅವಲೋಕನಮಾಡಲು ಮಾನವ ಮಾತ್ರರಿಂದೇನು, ದೇವತೆಗಳಿಗೆ ಅಸಾಧ್ಯವಾದ ವಿಷಯ. ಬ್ರಹ್ಮಾಂಡದ ಬೃಹದಾಕಾರವನ್ನು ಈಗಾಗಲೇ ಪ್ರಸ್ತಾಪ ಮಾಡಿದ್ದೇನೆ. ಕಣ್ಣಿಗೆ ಕಾಣದ್ದನ್ನು ನಾವು ಕಲ್ಪನೆ ಮಾಡಿಕೊಳ್ಳಬಹುದು ಅಥವಾ ಊಹಿಸಿಕೊಳ್ಳಬಹುದು. ಆದರೆ ಊಹೆಗೆ ನಿಲುಕದ್ದನ್ನ, ಅರ್ಥಮಾಡಿಕೊಳ್ಳುವುದು ಹೇಗೆ?. ಆದರೆ ಮನುಷ್ಯನಿಗೆ ಚಿಂತನೆಯ ಶಕ್ತಿ ಎಂದಿನಿಂದ ಬಂತೋ ಅಂದಿನಿಂದ ಮೊದಲುಗೊಂಡು ಇಂದಿನವರೆಗೆ, ಹಲವಾರು ಮಹನೀಯರು, ತಮ್ಮ ತಮ್ಮ ಅರಿವಿನ ಮಿತಿಯೊಳಗೆ ಈ ಜಗತ್ತಿನ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಎಲ್ಲೂ ಸಮಗ್ರ ಚಿತ್ರ ನಮಗೆ ಕಾಣುವುದಿಲ್ಲ.
ಒಬ್ಬೊಬ್ಬರದು ಒಂದೊಂದು ವಿಶ್ಲೇಷಣೆ. ದೂರದಲ್ಲಿ ನಿಂತು ಒಬ್ಬೊಬರ ವಿವರಣೆಯನ್ನು ಕಂಡಾಗ, ನಾವು ಬಹಳ ವಿಚಲಿತರಾಗಿ ಪರದಾಡುವಂತಾಗುತ್ತದೆ. ಏಕೆಂದರೆ, ಅಷ್ಟೊಂದು ವೈವಿದ್ಯಮಯ ಚಿತ್ರಗಳು ನಮಗೆ ಕಾಣುತ್ತದೆ. ಇದೇನು ಬೊಂಬೆಯಾಟದಲ್ಲೋ ಅಥವಾ ಕನಸಿನಲ್ಲೋ ಘಳಿಗೆಗೊಂದು ಚಿತ್ರಮೂಡುವಂತೆ ಇದೆಯಲ್ಲ, ಈ ಸೃಷ್ಟಿಯ ವಿಧ್ಯಮಾನಗಳೆಲ್ಲ, ಒಂದೇ ರೀತಿಯಲ್ಲಿ ಇಲ್ಲದಿರುವುದರಿಂದ ಅರ್ಥಮಾಡಿಕೊಳ್ಳಲು ಮತ್ತು ಮುಂದಣ ಚಿತ್ರವನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲವಲ್ಲ ಎಂದು ನಾವು ಪರದಾಡುವಾಗ, ” ಇದೊಂದು ಹುಚ್ಚು ಪ್ರಪಂಚಎನ್ನುವ ಭಾವ ನಮಗೆಲ್ಲರಿಗೂ ಯಾವುದಾದರೂ ಸಮಯದಲ್ಲಿ ಬಂದಿರಬಹುದು ಅಥವಾ ಮುಂದೆ ಬರಬಹುದು. ಇದನ್ನೇ ಮಾನ್ಯ ಗುಂಡಪ್ಪನವರು ಬರಿ ಆಟವೋ ಕನಸೋ ಕಲವರವೋ ಎಂದಿದ್ದಾರೆ.
ವಾಚಕರೆ, ದಯವಿಟ್ಟು ಆಲೋಚಿಸಿ. ನಮ್ಮ ನಮ್ಮ ಜೀವನದಲ್ಲೂ ಸಹ ನಮಗೆ ಈ ರೀತಿಯ ಭಾವನೆ ಬಂದಿರಬಹುದು. ಅರ್ಥವಾಗದ್ದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತೇವೆ. ನಮ್ಮ ಜೀವನದ ಗತಿಗೇಕೆ ಒಂದು ನಿಯಮವಿಲ್ಲ ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ. ಆದರೆ ನಿಯಮ ಇದೆ. ನಮಗೆ ಕಾಣುವುದಿಲ್ಲ. ಕಂಡರೂ ಅರ್ಥವಾಗುವುದಿಲ್ಲ. ಅರ್ಥವಾದರೂ ನಮ್ಮ ಮತಿಯ ಮಿತಿಯಿಂದ ಸಮಗ್ರ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುವುದಿಲ್ಲ. ಯಾವುದು ನಮಗೆ ಅರ್ಥವಾಗುವುದಿಲ್ಲವೋ ಅದನ್ನು ನಾವು, ಈ ಜಗತ್ತು ಒಂದು ಮಾಯೆ, ಮಿಥ್ಯಾ ಲೋಕ ಮತ್ತು ನಮಗೆ ಈ ಜೀವನದಲ್ಲಿ ಸಂಧಿಸುವುದೆಲ್ಲಾ ಆ ಪರಮಾತ್ಮನ ಇಚ್ಚೆಯಂತೆ ನಡೆಯುವುದು, ವಿಧಿ, ಹಣೆಬರಹ ಎಂದೆಲ್ಲ ಪರಿಭಾಷೆಯನ್ನು ಕೊಡುತ್ತಾ ಇರುತ್ತೇವೆ.
ನಮಗಿರುವುದು ಅಲ್ಪ ಆಯಸ್ಸಿನ ಜೀವನ. ಎಂದು ಕೊನೆಯೋ ಗೊತ್ತಿಲ್ಲ. ಹತ್ತಾರು ಜನ್ಮದಲ್ಲಿ ಅದನ್ನೇ ಸಂಶೋಧನೆಯ ರೀತಿಯಲ್ಲಿ ಅರ್ಥೈಸುವುದಕ್ಕೆ ಪ್ರಯತ್ನಪಟ್ಟರೂ ಅರ್ಥವಾಗದ ಈ ಪರಮಾತ್ಮನ ಲೀಲೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು, ವೃಥಾ ವ್ಯರ್ಥ. ನಮಗಿಂತ ಹಿರಿಯರು, ಅನುಭವಿಗಳು, ಜ್ಞಾನವಂತರು, ಬುದ್ಧಿವಂತರು ನಮ್ಮದುರಿಗೆ ಇರುವಾಗ, ಅವರಾಡುವ ಮಾತುಗಳನ್ನು ಆಲಸಿ, ಒಳಗೆ ಮಂಥನ ಮಾಡಿ ಸಾರವನ್ನು ಹೀರುವ ಕೆಲಸ ಮಾಡಬೇಕೆ ಹೊರತು ವಾದ ತರ್ಕದಲ್ಲಿ ಸಮಯ ಕಳೆದು ಸಿಕ್ಕ ಅವಕಾಶವನ್ನು ವೃಥಾ ಮಾಡುವುದು ಅವಿವೇಕದ ಕೆಲಸ.
ಒಂದು ಜೀವನ ಸಿಕ್ಕಿದೆ. ಅರ್ಥಪೂರ್ಣವಾಗಿ ಜೀವಿಸುವುದು ಬಿಟ್ಟು ಅದರ ವಿಶ್ಲೇಷಣೆ ಮಾಡುತ್ತಾ, ಕೈಲಿರುವ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಈ ವಿಷಯದಲ್ಲಿ ನಾವು ನಮ್ಮದೇ ನಿಲುವನ್ನು ತಳೆಯಬೇಕು. ಸಾಧ್ಯವಾದಷ್ಟು ಅರ್ಥಮಾಡಿಕೊಳ್ಳಬೇಕು. ಅರ್ಥವಾಗದ್ದನ್ನು ಅವನಿಚ್ಛೆ, ವಿಧಿ ಎಂದು ಬಿಟ್ಟುಬಿಟ್ಟು ನಮ್ಮದಿಯಾಗಿ ಜೀವನ ಮಾಡಬೇಕು. ನಾವೂ ನೆಮ್ಮದಿಯಾಗಿದ್ದು ಮತ್ತೊಬ್ಬರ ನೆಮ್ಮದಿಯನ್ನು ಕೆಡಿಸದೆ ಜೀವನ ಮಾಡಿದರೆ ಅದು ಸಾರ್ಥಕ ಜೀವನ.
ಸತ್ಯಾನ್ವೇಷಣೆ ರಸಧಾರೆ - 033
ನರಪರೀಕ್ಷೆಯೇ ಬೊಮ್ಮನಾಶಯವೇ? ನಮ್ಮ ಬಾಳ್ |
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ||
ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ |
ಗುರುವೆಂದು ಕರೆಯುವೆಯ? ಮಂಕುತಿಮ್ಮ ||
ನರ = ಮಾನವ, ಬೊಮ್ಮ = ಪರಬ್ರಹ್ಮ, ಪೂರಣ = ಮುಗಿವು, ಅಂತ್ಯ, ಕುಡೆ = ಕೂಡ, ಬಾರದನ = ಬಾರದವನ
ಮಾನವರನ್ನು ಪರೀಕ್ಷಿಸುವುದೇ ಆ ಪರಮಾತ್ಮನ ಆಶಯವೇ? ನಮ್ಮ ಬಾಳು ಬರೀ ಸಮಸ್ಯೆಗಳ ಆಗರವೇ? ಇದಕ್ಕೆ ಅಂತ್ಯವೆಲ್ಲಿ? ಈ ರೀತಿಯ ಪ್ರಶ್ನೆಗಳನ್ನು ಕೇಳಿಸಿಕೊಂಡೂ ಸಹ ಅದಕ್ಕುತ್ತರಬಾರದವನನ್ನು ಗುರುವೆಂದು ಕರೆಯುವೆಯ?
ಬಸ್ಸಿನಲ್ಲಿ ಹೋಗುವಾಗ, ಹಿಂದೆ ನೋಡಲು ತಲೆ ಹೊರಗೆ ಹಾಕಿ, “ತಲೆ ಒಡೆಸಿಕೊಂಡವನಂತೆ, ನಮಗೆ ನಮ್ಮ ಜೀವನದಲ್ಲಿ ಮರುಕ್ಷಣ ಏನಾಗುತ್ತದೆ ಎಂದು ಗೊತ್ತಿಲ್ಲ. ನಾವು ನೆನೆವುದು ಒಂದು, ನಡೆಯುವುದೇ ಒಂದು. ಇಲ್ಲಿ ನಾವು ನೆನೆದದ್ದೇ ಸರಿ ಇರಲಿಲ್ಲ, ಹಾಗಾಗಿ ಹೀಗಾಯಿತುಎಂದು ಅಂದುಕೊಳ್ಳುವವರು ಎಷ್ಟು ಜನ. ಅಯ್ಯೋ ದೇವರೇ ಇದೇನು ನಿನ್ನ ಆಟ” ” ನಮ್ಮ ಹಣೆಬರಹವೇ ಸರಿ ಇಲ್ಲ” ” ಆ ದೇವರು ನಮ್ಮನ್ನು ಏಕೆ ಹೀಗೆ ಪರೀಕ್ಷೆ ಮಾಡುತ್ತಾನೆಎಂದು ಅಂದುಕೊಳ್ಳುವವರೇ ಬಹಳ ಜನ. ಅದನ್ನು ದೇವರಾಟ, ನಮ್ಮ ಹಣೆಬರಹ, ವಿಧಿಲಿಖಿತ ಎಂದು ಏನೇನೋ ವ್ಯಾಖ್ಯಾನವನ್ನು ನಾವು ಮಾಡುತ್ತಿರುತ್ತೇವೆ. ಅದನ್ನೇ ಮಾನ್ಯ ಗುಂಡಪ್ಪನವರು ನರಪರೀಕ್ಷೆಯೇ ಬೊಮ್ಮನಾಶಯವೇ ?” ಎಂದು ಕೇಳುತ್ತಾ ನರರನ್ನು ಅವರವರ ಜೀವನದಲ್ಲಿ ಪರೀಕ್ಷಿಸುವುದೇ ಆ ಪರಮಾತ್ಮನ ಆಶಯವೋ? ಎಂದು ಪ್ರಸ್ತಾಪಿಸುತ್ತಾರೆ.
ಕೆಲವರಿಗೆ ಕೊರತೆಯ ಅಥವಾ ಆಧಿಕ್ಯದ ಸಮಸ್ಯೆ, ಹಣದ, ಆರೋಗ್ಯದ, ವೃತ್ತಿಯ, ಮಕ್ಕಳ ಓದು ವಿಧ್ಯಾಭ್ಯಾಸದ, ಮಕ್ಕಳೇ ಇಲ್ಲದ, ಅಕ್ಕ ಪಕ್ಕದ ಜನರ, ಪ್ರೇಮದಲ್ಲಿ, ದಾಂಪತ್ಯದಲ್ಲಿ ಹೀಗೆ ಎಲ್ಲರಿಗೂ ಯಾವುದೋ ಒಂದು ರೀತಿಯ ಸಮಸ್ಯೆ ಇದೆ. ಇದು ಪ್ರಪಂಚದಲ್ಲಿರುವ ಎಲ್ಲ ಮನುಷ್ಯರಿಗೂ ಅನ್ವಯವಾಗುತ್ತದೆ.ಸಮಸ್ಯೆಗಳಿಲ್ಲದವರು ಈ ಪ್ರಪಂಚದಲ್ಲೇ ಅತೀ ವಿರಳ. ಆ ಪರಮಾತ್ಮನಿಗೂ ಇಷ್ಟು ಜೀವರಾಶಿಗಳು ಮತ್ತು ಇಡೀ ಜಗತ್ತಿನ ನಿಯಮವನ್ನು ಪಾಲಿಸುವುದೇ ಒಂದು ದೊಡ್ಡ ಸಮಸ್ಯೆ. ಪ್ರತಿ ನಿಯಮಕ್ಕೂ ಒಂದು ಅಪವಾದವಿರುವಂತೆ, ಎಲ್ಲೋ ಕೋಟಿಗೊಬ್ಬನಿಗೆ ಯಾವ ಸಮಸ್ಯ್ಯೂ ಇಲ್ಲದಂತೆ ಇರಬಹುದು. ಇರಬಹುದು ಎಂದೆ. ಎಲ್ಲವನ್ನೂ ಆ ಪರಮಾತ್ಮನೇ ಸೃಜಿಸುವವನು ಎಂಬುವುದನ್ನು ಒಪ್ಪಿಕೊಂಡರೆ, ಈ ರೀತಿಯ ಸಮಸ್ಯೆಗಳನ್ನು ಕೊಟ್ಟು ಆ ಪರಮಾತ್ಮ ಮನುಷ್ಯರನ್ನು ಪರೀಕ್ಷಿಸುವುದೇ ಆಶಯವೇನು. ಈ ಸಮಸ್ಯೆಗಳಿಗೆ ಕೊನೆಯಾವುದು? ಎಂದು ಗುಂಡಪ್ಪನವರು ಕೇಳುತ್ತಾರೆ.
ಹಾಗೆ ಸಮಸ್ಯೆ ಇರುವವರೆಲ್ಲರೂ ತಮ್ಮ ತಮ್ಮ ಸಮಸ್ಯೆಗಳಿಗೆ ಕಾರಣವನ್ನೋ ಅಥವಾ ಪರಿಹಾರವನ್ನೋ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ತೃಪ್ತಿ ಇಲ್ಲದವರಿಗೆ, ಒಂದು ಸಮಸ್ಯೆ ಪರಿಹಾರವಾದರೆ ಇನ್ನೊದು ಉದ್ಭವವಾಗುತ್ತದೆ. ನಮ್ಮ ಅರಿವಿಗೆ ಬಾರದ ಕಾರಣಗಳಿಗಾಗಿ ನಾವು ಏನನ್ನಾದರೂ ಅನುಭವಿಸುತ್ತೇವೆ ಅದನ್ನು ತಿಳಿದುಕೊಳ್ಳಲು ಮತ್ತು ಪರಿಹಾರ ಕಂಡುಕೊಳ್ಳಲು ನಮಗಿಂತ ಅಧಿಕವಾಗಿ ತಿಳಿದವರೆನಿಸಕೊಂಡವರಲ್ಲಿ, ಸಂದೇಹ ನಿವಾರಣೆಗೋ ಅಥವಾ ಸೂಕ್ತ ಪರಿಹಾರಕ್ಕಾಗಿಯೋ ಹೋಗುವುದು ಸಹಜ. ಆದರೆ ಇಂದಿಗೂ ಈ ಜೀವನದಲ್ಲಿ ನಮಗೆ ನಡೆದ ವಿಷಯಗಳ ವಿಶ್ಲೇಷಣೆಯನ್ನು ಕರಾರುವಾಕ್ಕಾಗಿ ಹೇಳಿದವರಾಗಲೀ ಅಥವಾ ಸತ್ಯವನ್ನು ಅರ್ಥಮಾಡಿಕೊಂಡವರಾಗಲೀ ಇಲ್ಲ. ಮಾತ್ರ ಊಹೆಯಿಂದ ಮತ್ತು ತಮ್ಮ ವಾಗ್ಜರಿಯಿಂದ ಜನರನ್ನು ನಂಬಿಸುವುದೋ ಅಥವಾ ತೋರಿಕೆಯ ಶಾಸ್ತ್ರಗಳನ್ನು ಹೇಳಿ ಉಪಾಯವನ್ನು ಸೂಚಿಸುವುದೋ ಮಾಡುತ್ತಾರೆ. ಅದನ್ನು ಕೇಳಿದ ನಮ್ಮ ಸಮಸ್ಯಾ ಪ್ರಾಣಿಒಂದು ಮಾನಸಿಕ ನೆಮ್ಮದಿಯನ್ನು ಪಡೆದು ಅದನ್ನು ಪಾಲಿಸುವುದೋ ಅಥವಾ ಒಂದು ತಾತ್ಕಾಲಿಕ ಸಾಂತ್ವನವನ್ನು ಕಂಡುಕೊಳ್ಳುವುದೋ ನಡೆಯುತ್ತದೆ. ಅಂದರೆ ನಮ್ಮ ಪ್ರಶ್ನೆಗಳನ್ನು ಅರ್ಥವೇ ಆಗದ ಮತ್ತು ಸತ್ಯದ ಆಧಾರದಮೇಲೆ ನಮಗೆ ಸೂಕ್ತ ಮಾರ್ಗದರ್ಶನ ಮಾಡಲಾಗದ ವ್ಯಕ್ತಿಯನ್ನು ನಾವು ಗುರುಎಂದು ಹೇಗೆ ಒಪ್ಪಿಕೊಳ್ಳುವುದು ಎಂದು ಮಾನ್ಯ ಗುಂಡಪ್ಪನವರು ಪ್ರಶ್ನಿಸುತ್ತಾರೆ.
ಏನು ಮಾಡಬೇಕು ಎನ್ನುವುದೇ ಸಮಸ್ಯೆ. ಒಂದು ಹುಟ್ಟಿಯಾಗಿದೆ. ಸಾಯುವತನಕ ಕಷ್ಟವೋ ನಿಷ್ಟೂರವೋ ಅನುಭವಿಸಲೇ ಬೇಕು. ನಮಗೆ ಈ ಜೀವನದಲ್ಲಿ ನಡೆಯುವ ಗತಿ ವಿಧಿಗಳನ್ನು ಸಂಪೂರ್ಣವಾಗಿಏಕೆ ಹೀಗೆ ನಡೆಯುತ್ತದೆಎಂದು ಅರ್ಥವಾಗುವುದೇ ಇಲ್ಲ. ನಮಗೆ ಅರ್ಥವಾಗದ ವಿಷಯವಾದ್ದರಿಂದ ಗತ್ಯಂತರವಿಲ್ಲದೆ ಬೇರೆ ಏನನ್ನೋ ನಂಬಬೇಕು. ಅನ್ಯ ದಾರಿಯಿಲ್ಲ. ಈ ಜಗತ್ತು ಮತ್ತು ಅದರಲ್ಲಿ ನಮ್ಮ೦ತಹ ಪಾತ್ರಧಾರಿಗಳ ನಡುವೆ ನಡೆಯುವ ನಾಟಕವೆಲ್ಲ, ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ ಎನ್ನುವುದನ್ನು ಒಪ್ಪುವುದಾದರೆ, ಆ ದೇವರನ್ನು ನಂಬಬೇಕು. ಪರೀಕ್ಷೆಯೋ ವಿಧಿಲಿಖಿತವೋ ಅನುಭವಿಸಬೇಕು. ಏಕೆಂದರೆ ಬೇರೆ ದಾರಿ ಅಥವಾ ಪರಿಹಾರ ಇಲ್ಲ ಅಥವಾ ಇದ್ದರೂ ಗೊತ್ತಿಲ್ಲ. ಅಪರಿಹಾರ್ಯವನ್ನು ನಿವಾರಿಸಲು ಸಾಧ್ಯವಾಗದಾಗ ಆ ದೇವರನ್ನು ನಂಬಿ ಬಂದದ್ದನ್ನೆಲ್ಲಾ ಅನುಭವಿಸುವುದು, ನೆಮ್ಮದಿ. ಮಾಡುವ ಕೆಲಸವನ್ನು ನಿರ್ವಂಚನೆಯಿಂದ ಮಾಡುತ್ತಾ, ಎಲ್ಲವೂ ಆ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ ಎಂದು ಆ ವಿಚಿತ್ರಕೆಶರಣಾದರೆ ಸುಖ, ಶಾಂತಿ ಮತ್ತು ನೆಮ್ಮದಿ. ನಂಬದೆ ತೊಳಲಿ ಬಳಲುವುದೋ, ನಂಬಿ ಆನಂದಿಸುವುದೋ ನಮ್ಮ ಕೈಯಲ್ಲೇ ಇದೆ.
ಸತ್ಯಾನ್ವೇಷಣೆ ರಸಧಾರೆ - 034
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ
ಸೃಷ್ಟಿಯಲಿ ತತ್ವವೆಲ್ಲಿಯೋ ಬೆದಕಿ ನರನು
ಕಷ್ಟಪಡುತಿರಲೆನುವುದೇ ಬ್ರಹ್ಮ ವಿಧಿಯೇನೋ!
ಅಷ್ಟೇ ನಮ್ಮಯ ಪಾಡು ? ಮಂಕುತಿಮ್ಮ
ಚಿಂತಿಸಿದೊಡಂ = ಚಿಂತಿಸಿದರೂ, ಶಂಕೆಯನು = ಸಂದೇಹವನ್ನು, ಬೆಳೆಸುವೀ = ಅಧಿಕವಾಗಿಸುವ
ಈ ಜಗದ್ಸೃಷ್ಟಿಯ ಬಗ್ಗೆ ಎಷ್ಟು ಚಿ೦ತಿಸಿದರೂ ನಿವಾರಣೆಯಾಗದ ಅನುಮಾನಗಳು, ಸಂದೇಹಗಳು ಹಾಗೆ ಉಳಿದಿವೆ. ಈ ಸೃಷ್ಟಿಯ ರಹಸ್ಯವನ್ನು ಚೇಧಿಸುವುದಕ್ಕಾಗಿ, ತತ್ವಗಳ ಹುಡುಕಿ, ತಡಕಿ ಕಷ್ಟಪದುವುದೇ ಮಾನವರಿಗೆ ಆ ಪರಮಾತ್ಮ ಬರೆದ ಹಣೆಬರಹವೋ, ಇಷ್ಟೇಯೇ ನಮ್ಮ ಪಾಡು ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ಗಾಳಿ ಹೇಗೆ ಬೀಸುತ್ತದೆ, ಮಳೆ ಹೇಗೆ ಬೀಳುತ್ತದೆ, ಬೆಂಕಿ ಏಕೆ ಸುಡುತ್ತದೆ, ಸೂರ್ಯನಾರು, ಚಂದ್ರನಾರು ಈ ಗ್ರಹಗಳೇನು?? ನಕ್ಷತ್ರಗಳೇನು? ಇಡೀ ಸೃಷ್ಟಿಯಲ್ಲಿ ಇಷ್ಟೊಂದು ಬಗೆ ಏಕೆ? ಹುಟ್ಟು ಎಂದರೆ ಏನು? ಯಾವುದರ ಹುಟ್ಟು? ಸಾವು ಎಂದರೇನು? ಸಾವಿನ ನಂತರ ಏನು? ಕೋಟಿ ಕೋಟಿ ವೈವಿಧ್ಯತೆಯನ್ನು ಹೊಂದಿರುವ ಈ ಜಗತ್ತಿನ ಸೃಷ್ಟಿಯ ಉದ್ದೇಷ್ಯವೇನು? ಸೃಷ್ಟಿಯು ಹೀಗೆ ಯಾಕೆ ಇದೆ? ಇದರ ಹಿಂದಿನ ಶಕ್ತಿಯಾವುದು? ಅದರ ಸ್ವರೂಪವೇನು? ಇದು ಹೀಗಿರಬಹುದೇ ಅಥವಾ ಹಾಗಿರಬಹುದೇ? ಹೀಗೆ ಮಾನವನಲ್ಲಿ ವಿಚಾರ ಶಕ್ತಿ ಮೂಡಿದಾಗಿನಿಂದ ಇಂದಿನವರೆಗೆ ಹತ್ತು ಹಲವಾರು ಸಾವಿರಾರು ಪ್ರಶ್ನೆಗಳು ಮನುಷ್ಯರನ್ನು ಅನಾದಿಕಾಲದಿಂದ ಕಾಡಿದೆ. ಪ್ರಾಣಿಗಳನ್ನೂ ಕಾಡುತ್ತದೆಯೋ ಏನೋ! ನಮಗೆ ಗೊತ್ತಿಲ್ಲ.
ಈ ಸೃಷ್ಟಿಯನ್ನು ಪರಮಾತ್ಮನ ಲೀಲಾ ವಿನೋದವೆಂದರು. ಇದು ಅವನ ಸಂಕಲ್ಪದಿಂದ ಆದದ್ದು ಎಂದರು. ಆ ಸಂಕಲ್ಪಕ್ಕೆ ಕಾರಣವನ್ನು ಬೆದಕಿ ಬೆದಕಿ, ಅವರವರಿಗೆ ಏನೇನು ತೋಚಿತೋ ಅದನ್ನೇ ಒಂದು ಸಿದ್ಧಾಂತದ ರೂಪದಲ್ಲಿ ಪ್ರತಿಪಾದಿಸಿದರು. ಅದಕ್ಕೊಂದು ಕ್ರಮವನ್ನು ವಿವರಿಸಿದರು. ತಸ್ಮಾದ್ವಾ ಏತಸ್ಮಾದಾತ್ಮನ ಅಕಾಶಃ ಸಂಭೂತಃ ಆಕಾಶಾದ್ವಾಯು: ವಾರೋರಗ್ನಿ: ಅಗ್ನೇರಾಪಃ ಅದ್ಭ್ಯಃಪೃಥಿವೀ, ಪ್ರುಥಿವ್ಯಾ ಓಷದಯಃ ಓಷದೀಭ್ಯೋನ್ನಂ, ಅನ್ನಾತ್ ಪುರುಷಃಹೀಗೆ ಆತ್ಮನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಪೃಥ್ವಿ, ಪೃಥ್ವಿಯಿಂದ ಗಿಡಮರಗಳು, ಗಿಡಮರಗಳಿಂದ ಆಹಾರ, ಆಹಾರದಿಂದ ಶಕ್ತಿ ಆಯಿತು ಎಂದು ಒಂದು ಕ್ರಮವಾದ ಸೃಷ್ಟಿಯ ಪ್ರಕ್ರಿಯೆಯನ್ನು ಹೇಳುತ್ತಾರೆ. ಬಹಳ ವೈಜ್ಞಾನಿಕವಾಗಿ ಕಾಣುತ್ತದೆ. ನಮ್ಮ ಅನುಭವಕ್ಕೆ ಹತ್ತಿರವಾಗಿ ಕಾಣುತ್ತದೆ. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲವೇ? ಹಾಗಾಗಿ ಇದು ಸರ್ವ ಮಾನ್ಯವಾಗಿಲ್ಲ. ಬೇರೇನೋ ಇರಬೇಕೆಂಬ ಹುಡುಕಾಟ ನಡೆದೇ ಇರುತ್ತದೆ. ಈ ರೀತಿ ಹುಡುಕಾಡುವುದೇ ಮಾನವನ ಹಣೆ ಬರಹವೋ? ಎಂದು ಶ್ರೀ ಗುಂಡಪ್ಪನವರು ಕೇಳುತ್ತಾರೆ.
ನಮಗೆ ಯಾವುದೋ ತಿಳಿದಿಲ್ಲವೆಂದು ಇಟ್ಟುಕೊಳ್ಳೋಣ. ಆಗ ಯಾರೋ ಒಬ್ಬರು ತಮ್ಮ ಆತ್ಮವಿಶ್ವಾಸದಿಂದ ಮತ್ತು ವಾಗ್ಜರಿಯಿಂದ ಹೇಳಿದ ಮಾತುಗಳನ್ನು ನಂಬುವುದು ನಮ್ಮ ಪರಿಪಾಠ. ಏಕೆಂದರೆ ಮಹಾಸಾಗರದಲ್ಲಿ ಈಜಲು ಬಾರದವನಿಗೆ ಒಂದು ಹುಲ್ಲು ಕಡ್ಡಿಯನ್ನಾದರೂ ಸಹ ಹಿಡಿದುಕೊಳ್ಳಲು ಪ್ರಯತ್ನಪಡುತ್ತಾನೆ ಅಲ್ಲವೆ. ಹಾಗಿದೆ ನಮ್ಮ ಸ್ಥಿತಿಯೂ ಕೂಡ. ದೇಶ ಕಾಲ ಪ್ರದೇಶಗಳಿಗೆ ಅನುಗುಣವಾಗಿ ಆಯಾಯಾ ಸಮಯದಲ್ಲಿ ಯಾರು ಯಾರು ಏನೇನನ್ನು ಹೇಳಿದರೋ ಅದೆಲ್ಲ ಬೇರೆ ಬೇರೆ ತತ್ವಗಳಾಗಿ ಪ್ರತಿಪಾದಿಸಲ್ಪಟ್ಟು ಬೇರೆ ಬೇರೆ ಸಿದ್ಧಾಂತಗಳು ಆಗಿವೆ. ಅಂದರೆ ಅಂತರ್ಯದಲ್ಲಿ ಎಲ್ಲ ಸಿದ್ಧಾಂತಗಳೂ ಹೇಳುವುದು ಒಂದೇ ಸತ್ಯವನ್ನಾದರೂ, ಹೇಳುವ ರೀತಿ ಬೇರೆ ಆದ್ದರಿಂದ ಮತ್ತು ಅದರ ಬಾಹ್ಯ ರೂಪ ಬೇರೆ ಆದ್ದರಿಂದ ಅದು ಮತ್ತು ಇದು ಬೇರೆ ಬೇರೆ ಎನ್ನುವ ರೀತಿಯಲ್ಲಿ ನೋಡಲಾಗಿದೆ. ಹಾಗೆ ಬಂದುದೇ ಅನೇಕಾನೇಕ ಸಿದ್ಧಾಂತಗಳು. ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶೈವ, ವೈಷ್ಣವ, ಭೌದ್ಧ, ಜೈನ, ಪ್ಹಾರಸೀಕ, ಕ್ರೈಸ್ತ, ಇಸ್ಲಾಮಿಕ ಹೀಗೆ ಹತ್ತು ಹಲವಾರು ಮತಗಳು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ಸಮಯದಲ್ಲಿ ಪ್ರತಿಸಾದಿಸಿದ ತತ್ವಗಳು ಮೂಲದಲ್ಲಿ ಒಂದೇಯಾದರೂ ಹೊರಗೆ ಭಿನ್ನ ಭಿನ್ನವಾಗಿ ಕಂಡು ಜನರ ಇದು ಸರಿಯೋ ಅಥವಾ ಅದು ಸರಿಯೋಎನ್ನುವ ಸಂದೇಹಗಳಿಗೆ ಕಾರಣವಾಗುತ್ತದೆ. ಒಂದು ತತ್ವ ಎಲ್ಲರಿಗೂ ಸಮಾನವಾಗಿ ಅರ್ಥವಾಗುವಂತೆ ಇಲ್ಲದೆ, ಜನರ ಈ ಸೃಷ್ಟಿಯನ್ನು ಅರ್ಥೈಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಈ ಕಗ್ಗದ ಭಾವ.
ಒಂದು ಶಕ್ತಿ ಈ ಸೃಷ್ಟಿಯ ಮೂಲ. ಅದರ ರೂಪಗಳು ಹಲವಾರು. ನಾವು ರೂಪಗಳನ್ನು ಬಿಡುವ, ನಾಮಗಳನ್ನು ಬಿಡುವ, ಬೇಧಗಳನ್ನು ಬಿಡುವ, ಪ್ರಭೇಧಗಳನ್ನು ಬಿಡುವ, ವೈರಿನಲ್ಲಿ ಹರಿಯುವ ಕರೆಂಟ್ ಬೇರೆ ಬೇರೆ ಸಾಧನಗಳ ಮೂಲಕ ಬೇರೆ ಬೇರೆ ಕೆಲಸಗಳಿಗಾಗಿ ಉಪಯೋಗಿಸಿದರೂ ತಾನು ಒಂದೇ ರೀತಿ ಇದ್ದಂತೆ ನಮ್ಮ ನಿಮ್ಮಲ್ಲಿ ಮತ್ತು ಎಲ್ಲ ಪ್ರಾಣಿಗಳಲ್ಲೂ ಏಕ ರೂಪದಲ್ಲಿ ಚೇತನಾ ಸ್ವರೂಪದಲ್ಲಿರುವ ಆ ಪರಮಾತ್ಮ ಶಕ್ತಿಯನ್ನು ನಾವು ಈ ಜಗತ್ತಿನಲ್ಲಿ ನಮ್ಮ ಅಸ್ಥಿತ್ವಕ್ಕೆ ಕಾರಣವೆಂದು ಸ್ಮರಿಸಿ, ನಮಿಸಿ, ಕೃತಜ್ಞತೆಯನ್ನು ಸಲ್ಲಿಸುತ್ತಾ, ನಮ್ಮ ನಮ್ಮಲ್ಲಿರುವ ಬೇಧಗಳನ್ನು ಅಳಿಸುವ ಪ್ರಯತ್ನವನ್ನು ಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗೋಣವೆ?
ಸತ್ಯಾನ್ವೇಷಣೆ ರಸಧಾರೆ - 035
ಇರಬಹುದು ಚಿರಕಾಲ ಬೊಮ್ಮ ಚಿಂತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವಂತಾಗೆ ಕೃತಿಕೌಶಲದ |
ಹಿರಿಮೆಗದು ಕುಂದಲ್ತೆ? – ಮಂಕುತಿಮ್ಮ ||
ಅರಿತೆನಾನೆನ್ನುವಂತಾಗೆ = ಅರಿತೆ + ನಾನು + ಎನ್ನುವಂತೆ + ಆಗೆ, ಹಿರಿಮೆಗದು = ಹಿರಿಮೆಗೆ + ಅದು
ಬೊಮ್ಮ = ಪರಬ್ರಹ್ಮ, ಪರಮಾತ್ಮ, ನಿರವಿಸಿಹ = ನಿರ್ಮಿಸಿರುವ, ವಿಶ್ವಚಿತ್ರವ = ಈ ಜಗತ್ತಿನ ರಹಸ್ಯವನ್ನು, ಮರ್ತ್ಯನರನು = ಮರಣವನ್ನು ಹೊಂದುವ ಮನುಷ್ಯನು, ಅರಿತೆನಾನೆನ್ನುವಂತಾಗೆ = ನಾನು ಅರಿತಿದ್ದೇನೆ ಎನ್ನುವಂತಾದರೆ, ಕೃತಿಕೌಶಲದ = ಕುಶಲತೆಯಿಂದ ಮಾಡಿದ ಈ ಕೃತಿಯ ( ಜಗತ್ತು), ಹಿರಿಮೆ = ಹೆಗ್ಗಳಿಕೆ, ಕುಂದಲ್ತೆ= ಕುಂದಲ್ಲವೇ?
ಬಹಳಕಾಲ ಯೋಚನೆ ಮಾಡಿ ಶ್ರಮಪಟ್ಟು ಆ ಪರಮಾತ್ಮ ಈ ಅದ್ಭುತವಾದ ಜಗತ್ತನ್ನು ನಿರ್ಮಿಸಿರುವಾಗ, ಕೆಲಕಾಲ ಬದುಕಿ ಸಾವನ್ನಪ್ಪುವ ಯಃಕಶ್ಚಿತ್ ಮಾನವನೆಂಬ ಪ್ರಾಣಿ ಇದರ ರಹಸ್ಯವನ್ನು ತಾನು ಅರಿತುಕೊಂಡು ಬಿಟ್ಟೆ ಎಂದರೆ , ತನ್ನ ಹಿರಿಮೆ, ಶ್ರಮ ಮತ್ತು ಕುಶಲತೆಗಳಿಗೆ ಕುಂದು ಅಥವಾ ಕಳಂಕ ಬಂದಂತೆ ಆಗುತ್ತದೆ ಎಂದು, ಆ ಪರಮಾತ್ಮ, ಆ ಜಗತ್ತಿನ ರಹಸ್ಯಗಳನ್ನು ಸಂಪೂರ್ಣವಾಗಿ ಮಾನವರು ಅರಿತುಕೊಳ್ಳುವ ಶಕ್ತಿಯನ್ನು ಕೊಡಲಿಲ್ಲವೋ ಏನೋ? ಎಂಬ ಕುಹಕವನ್ನಾಡುತ್ತಾರೆ, ಮಾನ್ಯ ಗುಂಡಪ್ಪನವರು.
ಒಂದು ವಿಡಂಬನಾತ್ಮಕವಾದ ವಿಚಾರಧಾರೆಯನ್ನು ನಮ್ಮ ಮುಂದಿಡುತ್ತಾ, ಎರಡು ವಿಚಾರಗಳನ್ನು ನಮಗೆ ತಿಳಿಸುತ್ತಾರೆ ಶ್ರೀ ಗುಂಡಪ್ಪನವರು.
ಒಂದು ಈ ಜಗತ್ತಿನ ಸೃಷ್ಟಿಯ ವೈಶಾಲ್ಯತೆ ಮತ್ತು ಸುಂದರತೆ. ಎಲ್ಲವೂ ಸಮರ್ಪಕವಾಗಿ ಎಲ್ಲೆಲ್ಲಿ, ಹೇಗೆ, ಯಾವ ಪ್ರಮಾಣದಲ್ಲಿ ಇರಬೇಕೋ ಎಲ್ಲವೂ ಹಾಗೆ ಇದೆ ಈ ಸೃಷ್ಟಿ. ಅದಕ್ಕೆ ನಮ್ಮ ದೇಹಗಳನ್ನೇ ತೆಗೆದುಕೊಳ್ಳೋಣ. ತಲೆ, ಮೆದುಳು, ಕಣ್ಣು, ಕಿವಿ, ಕತ್ತು, ಮೂಳೆಗಳು, ಚರ್ಮ, ಎಲ್ಲ ಅಂಗಾಂಗಗಳೂ ಸಹ ಒಂದಕ್ಕೊಂದು ಪೂರಕವಾಗಿ ಕೆಲಸಮಾಡುವಂತೆ ಎಷ್ಟು ಸುಂದರವಾಗಿದೆ. ಸೂರ್ಯ ಚಂದ್ರರು, ಎಲ್ಲ ಗ್ರಹಗಳು, ಅವುಗಳಲ್ಲಿನ ಪರಸ್ಪರ ಅಂತರ ಮತ್ತು ಆ ಅಂತರದಿಂದಾಗುವ ಋತುಮಾನಗಳು ಮತ್ತು ಋತುಮಾನ ಬದಲಾವಣೆಯ ಸಮಯಕ್ಕೆ ಸರಿಯಾಗಿ ಆಗಬೇಕಾದ ಬದಲಾವಣೆಗಳು.ಇದು ಏಕೆ ಹೀಗೆ? ಹಾಗೆ ಯಾಕಿರಬಾರದು ಎಂದು ಪ್ರಶ್ನೆಯೇ ಉದ್ಭವವಾಗಬಾರದು, ಹಾಗಿದೆ ಆ ಪರಬ್ರಹ್ಮನ ಕುಶಲತೆ. ಹೇಗೇ ವರ್ಣಿಸುತ್ತಾ ಹೋದರೆ ಪದಗಳು ಮತ್ತು ಪುಟಗಳು ಸಾಲುವುದೇ ಇಲ್ಲ. ಅಷ್ಟು ಸಮರ್ಪಕ ಮತ್ತು ಪರಿಪೂರ್ಣ ಮತ್ತು ಅಷ್ಟು ಸುಂದರ.
ಮತ್ತೊಂದು ಕಡೆ ಇರುವುದು, ಮಾನವರ ಅಪರಿಪೂರ್ಣತೆ, ಅಸಹಾಯಕತೆ ಮತ್ತು ನ್ಯೂನತೆಗಳು. ನಮಗೆ ಯಾವುದೂ ಸಂಪೂರ್ಣ ಅರ್ಥವಾಗುವುದಿಲ್ಲ. ಯಾವುದೂ ಸರಿಯಾದ ದಿಕ್ಕಿನಲ್ಲಿ ಯೋಚಿಸಲಾಗುವುದಿಲ್ಲ. ಎಲ್ಲವೂ ಅಯೋಮಯ. ದಿಕ್ಕು ತೋಚದ ಪರಿಸ್ಥಿತಿ. ನಮ್ಮ ಮಿತಿಗಳು ಹೇಗಿವೆ ಎಂದರೆ, ಕೆಲವರು ಯೋಚಿಸಲು ಅಸಮರ್ಥರು. ಕೆಲವರಿಗೆ ಯೋಚಿಸಲು ಸಮಯವಿಲ್ಲ. ಕೆಲವರು ಯೋಚಿಸಲು ಸೋಂಬೇರಿಗಳು. ಕೆಲವರು ಪೂರ್ವಾಗ್ರಹಪೀಡಿತರು. ಕೆಲವರು ಯೋಚಿಸಲು ಇಷ್ಟಪಟ್ಟರೂ ಸಾಮರ್ಥ್ಯದ ಮಿತಿ ಇರುವವರು. ಅಂದರೆ ಒಂದು ಮಿತಿಗೆ ಮೀರಿ ಅವರು ಯೋಚಿಸಲಾರರು. ಕೆಲವರು ಅಹಂಕಾರದಿಂದ ಇಲ್ಲದ್ದನ್ನು ಇದೆಯಂದು ಕಲ್ಪಿಸುತ್ತಾ ತಮ್ಮ ವಾದವೇ ಸರಿಯಾದದ್ದ್ದು ಎಂದು ಮೊಂಡು ವಾದ ಮಾಡುವವರು. ಹಾಗಾಗಿ ನಮಗೆ ಯಾವುದೂ ಅರ್ಥವಾಗುವುದಿಲ್ಲ. ಇದೊಂದು ಬಹಳ ವೈಶಾಲ್ಯವಿರುವ ಚಿತ್ರ ಒಂದು ಕಡೆಯಿಂದ ಇನ್ನೊಂದು ಕಡೆಗೆ ನೋಡುವುದಕ್ಕೆ ನಮ್ಮ ಕಣ್ಣ ದೃಷ್ಟಿಯ ಹರಹು ಸಾಲದು.
ಯಾವುದೋ ಒಂದು ಚೂರನ್ನು ಅರ್ಥಮಾಡಿಕೊಂಡಿದ್ದೇವೆ ಎಂದುಕೊಳ್ಳುವಷ್ಟರಲ್ಲೇ, ಮತ್ಯಾವುದೋ ಹೊಸದೊಂದು ಆಯಾಮ ಕಾಣುತ್ತದೆ. ಹೀಗೆ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಇರುವಾಗಲೇ, ನಮ್ಮ ಇಹ ಲೋಕ ಯಾತ್ರ ಮುಗಿಯುತ್ತದೆ. ಮತ್ತೆ ಮೊದಲಿಂದ ಎಲ್ಲ ಶುರು. ಹಾಗಾಗಿ ಈ ಸೃಷ್ಟಿಯನ್ನು ಮನುಷ್ಯರಿಗೆ ಅರ್ಥವಾಗದ ರೀತಿಯಲ್ಲಿ ಅಥವಾ ಮನುಷ್ಯರಿಗೆ ಇದರ ರಹಸ್ಯ ಅರ್ಥವಾಗಬಾರದೆಂದು ಆ ಪರಮಾತ್ಮ ಈ ರೀತಿ ಸೃಷ್ಟಿಸಿದ್ದಾನೆಯೇ? ಎಂದು ಪ್ರಶ್ನೆ.ಹೆಚ್ಚು ಕ್ಷಮತೆ ಇರುವವರು ಇದನ್ನು ತಮ್ಮ ಧ್ಯಾನದಿಂದ ತಪಸ್ಸಿನಿಂದ ವಿಜ್ಞಾನದ ಸಂಶೋಧನೆಗಳಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಸಿಕ್ಕ ಯಶಸ್ಸು ಕೇವಲ ಅಲ್ಪ ಮಾತ್ರ ಮತ್ತು ಆ ಯಶಸ್ಸೂ ಸಹ ತಾತ್ಕಾಲಿಕ.
ಈಗ ನಮಗಿಂತ ಒಬ್ಬ ಮಹಾಬಲಶಾಲಿ ಇದ್ದಾನೆ ಎಂದು ಇಟ್ಟುಕೊಳ್ಳಿ. ಅದು ಬುದ್ಧಿ ಬಲವಾಗಿರಬಹುದು, ದೇಹ ಬಲವಾಗಿರಬಹುದು ಅಥವಾ ಕ್ಷಮತೆಯ ಬಲವಾಗಿರಬಹುದು. ಅವನನ್ನು ಜಯಿಸಲು ನಾವು ಅವನಿಗಿಂತ ಹೆಚ್ಚು ಬಲವಂತರಾದರೆ ಸಾಧ್ಯ. ಹಾಗಿಲ್ಲದೆ ನಾವು ಅವನಿಗಿಂತಾ ಶಕ್ತಿ ಹೀನರಾಗಿಯೂ ಅವನೊಡನೆ ಹೋರಾಡಿದರೆ, ನಮ್ಮ ನಾಶ ಕಂಡಿತ. ಹಾಗೆ ಮಾಡದೆ ವಾಸ್ತವತೆಯನ್ನು ಅರ್ಥಮಾಡಿಕೊಂಡು ಅವನಿಗೆ ಶರಣಾಗಿಬಿಟ್ಟರೆ, ನಾವು ಕ್ಷೇಮ ಮತ್ತು ನಮಗೆ ಸಂಪೂರ್ಣ ರಕ್ಷಣೆ. ಇಲ್ಲೂ ಸಹ ಅಷ್ಟೇ ಈ ಜಗತ್ತಿನ ಸೃಷ್ಟಿಯ ರಹಸ್ಯ ಮತ್ತು ರೂಪವನ್ನು ಅರ್ಥೈಸಿಕೊಳ್ಳಲು ಶಕ್ತಿಯಿಲ್ಲದೆ ಪ್ರಯತ್ನಪಟ್ಟು ಅನಾವಶ್ಯಕವಾಗಿ ಇರುವ ಬಾಳನ್ನು ಆನಂದವಾಗಿ ಬಾಳದೆ ಹಾಳುಮಾಡಿಕೊಳ್ಳುವುದಕ್ಕಿಂತ, ಆ ಪರಮ ಶಕ್ತಿಗೆ ಶರಣಾಗಿ ನೆಮ್ಮದಿಯಿಂದ ಇರಬಹುದಲ್ಲವೆ? ಮನುಷ್ಯರೆಲ್ಲರೂ ಯೋಚನಾ ಪರಿಯಲ್ಲಿ ಸರ್ವ ಸ್ವತಂತ್ರರು. ಹಾಗಾಗಿ ವಾಚಕರೆ, ಆಯ್ಕೆ ನಿಮಗೆ ಬಿಟ್ಟದ್ದು.
ಸತ್ಯಾನ್ವೇಷಣೆ ರಸಧಾರೆ - 036
ಎಲ್ಲೆಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ ||
ಗೆಲ್ಲಲಿಲ್ಲಿವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೋ ? ಮಂಕುತಿಮ್ಮ ||
ಎಲ್ಲೆಲಿಯುಂ = ಎಲ್ಲೆಲ್ಲಿಯೂ, ಮೋಹ = ವ್ಯಾಮೋಹ, ಸಂಭ್ರಾಂತಿ = ಸಂಭ್ರಮ ಸಡಗರಕೂಡಿದ ಭಾವ, ಭ್ರಾಂತಿಯಿಂದ ಕೂಡಿದ. ಕವಿಸಿ = ಹರಡಿ, ವ್ಯಾಪಿಸಿ, ಸಲ್ಲದ = ಸರಿಯಲ್ಲದ, ಕುಮಾರ್ಗ= ಕೆಟ್ಟ ದಾರಿ, ಸೊಲ್ಲಿಪುದು = ಹೇಳುವುದು.
ಗೆಲ್ಲಲಿಲ್ಲಿವನಾ = ಗೆಲ್ಲಲಿಲ್ಲ + ಅವನಾ , ಪರೀಕ್ಷೆಯೊಳಗೆಂದು = ಪರೀಕ್ಷೆಯೊಳಗೆ + ಎಂದು
ಇಡೀ ಜಗತ್ತೇ ಒಂದು ಭ್ರಾಂತಿಯ ಉಂಡೆ. ಮಾನವರಿಗೆ ಯಾವುದೂ ಅರ್ಥವಾಗುವುದಿಲ್ಲ ಆದರೂ ಪ್ರಯತ್ನ ಮಾಡುತ್ತಾನೆ. ಅವನಿಗೆ ಅರಿವಿನ ಮಿತಿ ಉಂಟು. ಅಮಿತವಾದ ಜಗತ್ಸೃಷ್ಟಿಯ ರಹಸ್ಯವನ್ನು ಪರಿಮಿತ ಮತಿಯಿಂದ ಅರಿಯುವುದೆಂತು? . ಈ ಜಗತ್ತನ್ನು ತನ್ನ ಅಪರಿಮಿತ ಶಕ್ತಿಯಿಂದ ಅಗಾಧವಾಗಿ ಸೃಷ್ಟಿಸಿ, ಮಾನವರನ್ನು ಅಲ್ಪಮತಿಗಳನ್ನಾಗಿಸಿ, ಅವನು ಅರಿಯುವ ಪ್ರಯತ್ನದಲ್ಲಿ ಸೋತಾಗ, ಇವನು ಗೆಲ್ಲಲಿಲ್ಲ ಎಂದು ಹೇಳುವುದು ಆ ಪರಮಾತ್ಮನಿಗೆ ಸರಿಯೇ? ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾ ಹಿಂದೆಯೇ ಹೇಳಿದಂತೆ, ಮಾನವನಲ್ಲಿ ವಿಚಾರ ಶಕ್ತಿ ಮೂಡಿದಂದಿನಿಂದ, ಈ ವಿಶ್ವದ ಗುಟ್ಟನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡುತ್ತಲೇ ಇದ್ದಾನೆ. ಒಂದು ಚೂರೂ ಸಫಲನಲ್ಲ. ಬದಲಿಗೆ ಆ ಪರ ತತ್ವವನ್ನು ಅರ್ಥೈಸುವ ಇವನ ಪ್ರಯತ್ನದಲ್ಲಿ ಕೇವಲ ಭ್ರಾಂತಿ ಭ್ರಮೆ ಗಳನ್ನು ಬೆಳೆಸಿಕೊಂಡಿದ್ದಾನೆ. ತಮಗೆ ತೋಚಿದ ಹಾಗೆ ಬೇರೆ ಬೇರೆ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಒಬ್ಬರು ಹೇಳುವುದನ್ನು ಮತ್ತೊಬ್ಬರು ಒಪ್ಪುವುದಿಲ್ಲ. ಪರತತ್ವವನ್ನು ಅರಿಯದಿದ್ದರೂ ತಾವು ಅರಿತಿದ್ದೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ತಮ್ಮ ವಾದವನ್ನು ದೃಡೀಕರಿಸಲು, ತಮ್ಮ ಮತವನ್ನು ಪ್ರತಿಷ್ಠಾಪಿಸಲು ಏನು ಬೇಕಾದರೂ ಮಾಡುತ್ತಾರೆ. ಅಹಂಕಾರವನ್ನು ಬೆಳೆಸಿಕೊಳ್ಳುತ್ತಾರೆ. ಮಠ ಕಟ್ಟುತ್ತಾರೆ. ಗುಂಪುಗಾರಿಕೆ ಮಾಡುತ್ತಾರೆ. ತಮ್ಮ ಅಹಂಕಾರವನ್ನು ಮತ್ತು ಆಧಿಪತ್ಯವನ್ನು ಸ್ಥಾಪಿಸಲು ಶತಪ್ರಯತ್ನ ಮಾಡುತ್ತಾರೆ. ಇದನ್ನೇ ಕುಮಾರ್ಗವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.
ವ್ಯಕ್ತಿಗತವಾಗಿ ಎಲ್ಲ ಆತ್ಮಗಳೂ ಶುದ್ಧಾತ್ಮಗಳೇ. ಪರಮಾತ್ಮನಿಂದ ಹೊರಟು ಇಂದ್ರಿಯ ಸಹಿತವಾದ ದೇಹಧಾರಣೆ ಮಾಡಿದನಂತರ, ಪಂಚಭೂತಗಳ ಸಂಪರ್ಕಕ್ಕೆ ಬಂದೊಡನೆಯೇ ಎಲ್ಲ ರೀತಿಯ ಭ್ರಮೆ ಭ್ರಾಂತಿಗಳನ್ನು ಬೆಳೆಸಿಕೊಳ್ಳುತ್ತದೆ. ಇಲ್ಲಿದ್ದೂ ಅಲ್ಲಿಗೆ ಹೋಗುವ ಪ್ರಯತ್ನವನ್ನು ಮಾಡುತ್ತದೆ. ಆ ಪ್ರಯತ್ನದ ಫಲ ಸ್ವರೂಪವೇ ಅವನ ಅಧ್ಯಾತ್ಮಿಕ ಪ್ರಯಾಣ. ಎಷ್ಟೊಂದು ಮತಗಳು ಎಷ್ಟೊಂದು ಧರ್ಮಗಳು. ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಇವನ ಹಾರಾಟ ನಿರಂತರ. ಯಾವುದರಲ್ಲೂ ಧೃಡವಾದ ನಂಬಿಕೆ ವಿಶ್ವಾಸವಿಲ್ಲ. ದೂರದಲ್ಲಿರುವುದು ಇವನಿಗೆ ಹಿತವಾಗಿ ಕಾಣುತ್ತದೆ. ಈ ಹುಡುಕಾಟ ಬೆದಕಾಟದಲ್ಲಿ ಇವನು ಎಲ್ಲಿಯೂ ಸಲ್ಲ. ಕಡೆಗೊಂದು ದಿನ ಇವನ ದೇಹದ ಅಂತ್ಯ. ಮತ್ತೆ ಮೊದಲಿನಿಂದ ಶುರು. ಅದೇ ಹುಡುಕಾಟ ಅದೇ ಬೆದಕಾಟ. ಇವನಿಗೆ ಆ ಪರಮಾತ್ಮನನ್ನು ಅರಿತುಕೊಳ್ಳಲು ಸಾಧ್ಯವೇ ಇಲ್ಲವೇನೋ ಎಂದು ಅನಿಸುತ್ತದೆ.
ಆ ಪರಮ ಶಕ್ತಿಯ ಸ್ವರೂಪವೂ ಹಾಗೆ ಇದೆ. ಇಂದು ಕಂಡಂತೆ ನಾಳೆ ಇಲ್ಲ. ಒಂದೇ ವಿಷಯಕ್ಕೆ ಹತ್ತು ಹಲವಾರು ಆಯಾಮಗಳು. ಯಾವುದನ್ನು ನಂಬುವುದು ಯಾವುದು ಸತ್ಯ ಎಂದು ಈ ಮನುಷ್ಯನ ಅಲ್ಪಮತಿಗೆ ಅರ್ಥವೇ ಆಗುವುದಿಲ್ಲ. ಹಾಗಾಗಿ ಇವನು ಆ ಪರಮಾತ್ಮನ ಪರೀಕ್ಷೆಯಲ್ಲಿ ಎಂದಿಗೂ ಗೆಲ್ಲಲಾರ. ಇವನನ್ನು ಸೋಲಿಸಿ, ನೋಡಿದೆಯಾ ನೀನು ಗೆಲ್ಲಲೇ ಇಲ್ಲ ಎಂದು ಆ ಪರಮಾತ್ಮ ಕುಹಕವಾಡುವುದು ಸರಿಯೇ? ಎಂದು ಮಾನ್ಯ ಗುಂಡಪ್ಪನವರು ಕೇಳುತ್ತಾರೆ.
ವಾಚಕರೆ. ಹೌದು ಆ ಪರಮಾತ್ಮನ ಸೃಷ್ಟಿ ವಿಚಿತ್ರ, ಅಗಾಧ, ಅನಂತ. ಒಂದು ಜನ್ಮದಲ್ಲಲ್ಲ ಜನ್ಮ ಜನ್ಮಾಂತರದಲ್ಲಿ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಲ್ಲ. ಪ್ರತಿಯೊಬ್ಬರ ಆತ್ಮವೂ ಮೂಲ ಸ್ವರೂಪದಲ್ಲಿ ಶುದ್ಧ. ಇಂದ್ರಿಯಾಕರ್ಷಣೆಯ, ಅರಿಷಡ್ವರ್ಗಗಳ, ಸಂಪರ್ಕದಿಂದ ಧೂಳು ಆವರಿಸಿದೆ. ನಿರಂತರ ಪ್ರಯತ್ನದಿಂದ ಆ ಧೂಳನ್ನು ಒರೆಸಿದರೆ, ಸತ್ವ ಮತ್ತು ತತ್ವ ಎರಡೂ ನಿಚ್ಚಳವಾಗಿ ಪ್ರಕಟವಾಗಿ ಪ್ರತಿ ಜೀವಿಯೂ ಆ ಪರಮಾತ್ಮನನ್ನು ಅರಿತುಕೊಳ್ಳಲು ಸಾಧ್ಯವಾಗಬಹುದು.
ಸತ್ಯಾನ್ವೇಷಣೆ ರಸಧಾರೆ - 037
ಆವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ
ಅವನ ವೇಷಗಳೇಕೆ ಮಾರ್ಪಡುತಲಿಹವು ?
ತವಕಪಡನೇತಕೋ ಕುರುಹ ತೋರಲು ನಮಗೆ
ಅವಿತುಕೊಂಡಿಹುದೇಕೋ?- ಮಂಕುತಿಮ್ಮ
ಅವತರಿಸಿಹನು = ಅವತ್ತರ ಎತ್ತಿಹನು. ಬೊಮ್ಮ = ಪರಬ್ರಹ್ಮ, ವಿಶ್ವದೇಹ = ವಿಶ್ವದಲ್ಲೆಲ್ಲ, ಎನ್ನೆ = ಎನಲುತವಕ = ಆತುರ, ಕುರುಹ = ಗುರುತ.
ಈ ಜಗತ್ತನ್ನು ಆ ಪರಮಾತ್ಮನೇ ಸೃಷ್ಟಿಮಾಡಿದ. ಈ ಜಗತಿನಲ್ಲಿರುವ ಎಲ್ಲವನ್ನೂ ಆ ಪರಮಾತ್ಮನೇ ಸೃಷ್ಟಿಮಾಡಿದ ಮತ್ತು ಎಲ್ಲದರಲ್ಲೂ ಅವನೇ ಇರುವನೆಂದು ತತ್ವಜ್ಞಾನಿಗಳು ಹೇಳುತ್ತಾರೆ. ಎಲ್ಲವೂ ಅವನ ರೂಪವೇ ಎಂದು ಹೇಳುತ್ತಾರೆ. ಹಾಗಾದರೆ ಎಲ್ಲದರಲ್ಲೂ ಅವನೇ ಅವತರಿಸಿದ್ದಾನೆ ಎಂದಾದರೆ, ಮತ್ತು ಪರಮಾತ್ಮ ನಿತ್ಯನೂ ಸತ್ಯನೂ ಅದಾಗ, ಈ ರೂಪಗಳ ಬದಲಾವಣೆ ಏಕೆ. ಎಲ್ಲ ರೂಪವೂ ಅವನೇ ಆದರೆ, ಅವನು ತನ್ನ ನಿಜ ರೂಪವನ್ನೇಕೆ ತೋರಿಸುವುದಿಲ್ಲ. ಏಕೆ ಅವಿತುಕೊಂಡಿದ್ದಾನೆ? ಎಂದು ಒಂದು ವಿಷಯವನ್ನು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು.
ತೆಲುಗಿನ ಕವಿ, ಭಕ್ತ, ಶ್ರೀ ತಾಳ್ಳಪಾಕ ಅನ್ನಮಾಚಾರ್ಯರು, ತಮ್ಮ ಒಂದು ಹಾಡಿನಲ್ಲಿ ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈಅಂದರೆ ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ ಎಲ್ಲರ ರೂಪವೂ ತಾನೇ ಆಗಿಎಂದು ಆ ಪರಮಾತ್ಮನ ಸರ್ವ ವ್ಯಾಪಕತ್ವವನ್ನು ಕೊಂಡಾಡುತ್ತಾರೆ. ಅಣುವಿನಲ್ಲೂ ಬೃಹತ್ತಲ್ಲೂ , ಕೃಶದಲ್ಲೂ ಸ್ಥೂಲದಲ್ಲೂ, ಗುಣದಲ್ಲೂ ನಿರ್ಗುಣದಲ್ಲೂ ಹೀಗೆ ಎಲ್ಲದರಲ್ಲೂ ಚೇತನಾ ಸ್ವರೂಪನಾಗಿ ತಾನೇ ಇದ್ದರೂ ತನ್ನದೇ ಆದಂತ ಒಂದು ರೂಪವಿಲ್ಲದೆ ಎಲ್ಲ ರೂಪಗಳೂ ತಾನೇ ಆಗಿರುವ ಆ ಪರಮಾತ್ಮ ತನ್ನ ನಿಜ ರೂಪವನ್ನು ತೋರಲಾರನೇಕೆ ಎನ್ನುವುದೇ ಜಿಜ್ಞಾಸೆ.
ಇಡೀ ಜಗತ್ತೇ ಚೇತನ ಮತ್ತು ಜಡದಿಂದಾಗಿದೆ. ಇವೆರಡರ ಸಮ್ಮಿಲಿತ ರೂಪವೇ ಈ ಜಗತ್ತು ಮತ್ತು ಈ ಜಗತ್ತಿನಲ್ಲಿರುವ ಎಲ್ಲವೂ ಎಲ್ಲವೂ ಆ ಭೃಹತ್ ಚೇತನದಿಂದಲೇ ಬಂದಿದೆ ಎನ್ನುವ ಒಂದು ಸಿದ್ಧಾಂತವೂ ಇದೆ.
ಯತಃ ಸರ್ವಾಣಿ ಭೂತಾನಿ ಭವನ್ತ್ಯಾದಿ ಯುಗಾಗಮೆ I ಯಸ್ಮಿನ್ಸ್ಚ ಪ್ರಳಯಂ ಯಾಂತಿ ಪುನರೇವ ಯುಗಕ್ಷಯೆ ಎನ್ನುವಂತೆ ಎಲ್ಲವೂ ಆ ಮಹಾನ್ ಚೇತನದಿಂದ ಬಂದು ಮತ್ತೆ ಆ ಮಹಾನ್ ಚೇತನಕ್ಕೆ ಸೇರಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ರೂಪ ಬದಲಾವಣೆಯಾಗುತ್ತಾ ಇರುತ್ತದೆ. ಹೇಗೆ ಎಲ್ಲ ವಿದ್ಯುತ್ ಉಪಕರಣಗಳನ್ನೂ ಬೆಳಗುವ ವಿದ್ಯುತ್ ಕಣ್ಣಿಗೆ ಕಾಣದಿದ್ದರೂ ಮತ್ತು ಅದಕ್ಕೊಂದು ರೂಪವಿಲ್ಲದಿದ್ದರೂ ತಾನು ಬೆಳಗುವ ಉಪಕರಣದ ಮೂಲಕ ತನ್ನ ಅಸ್ತಿತ್ವವನ್ನು ತೋರುವಂತೆ, ಆ ಪರಮಾತ್ಮನೂ ಸಹ ತನಗೊಂದು ರೂಪವಿಲ್ಲದಿದ್ದರೂ ಈ ಜಗತ್ತಿನ ಎಲ್ಲ ವಸ್ತುಗಳಲ್ಲೂ, ಆ ವಸ್ತುವೇ ಆಗಿ ಪ್ರಕಟಗೊಂಡಿದ್ದಾನೆ ಎನ್ನುವುದು ಸಿದ್ಧಾಂತ.
ರೂಪ ಕಣ್ಣಿಗೆ ಕಾಣದಿದ್ದರೂ ಆ ಚೇತನ ಅನುಭವಕ್ಕೆ ಬರುತ್ತದೆ.
ಸತ್ಯಾನ್ವೇಷಣೆ ರಸಧಾರೆ - 038
ಬೇರೆಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ |
ತೋರಿಪೂಸರವಳ್ಳಿಯಂತೇನು ಬೊಮ್ಮಂ? ||
ಪೂರ ಮೈದೋರೆನೆಂಬಾ ಕಪಟಿಯ೦ಶಾವ|
ತಾರದಿಂದಾರ್ಗೇನು? ಮಂಕುತಿಮ್ಮ. ||
ಬೇರೆಯಿಸಿ ನಿಮಿಷ ನಿಮಿಷಕೆ ಒಡಲ ಬಣ್ಣಗಳ ತೋರಿಪ ಊಸರವಳ್ಳಿಯಂತೆ ಏನು ಬೊಮ್ಮಂ ಪೂರ ಮೈ ತೋರೆನು ಎಂಬ ಕಪಟಿಯ ಅಂಶಾವತಾರದಿಂದ ಯಾರಿಗೆ ಏನು?
ಬೇರೆಯಿಸಿ = ಬೇರೆಬೇರೆಯಾಗಿಸಿ, ಒಡಲ = ರೂಪದ, ತೋರಿಪ = ತೋರಿಸುವ, ಊಸುರವಳ್ಳಿ = ಗೋಸುಂಬೆ, ಬೊಮ್ಮ = ಬ್ರಹ್ಮ, ಪೂರ = ಸಂಪೂರ್ಣ, ಮೈದೋರೆ= ರೂಪತೋರೆ,
ನಾವು ಈ ವರೆಗೆ ಹೇಳಿರುವುದೇನು ಎಂದು ಒಂದು ಬಾರಿ ನೋಡೋಣ. ಎಲ್ಲವೂ ಆ ಪರಮಾತ್ಮನಿಂದ ಆಗಿ ಅವನೇ ಎಲ್ಲ ರೂಪಗಳಲ್ಲಿಯೂ ಪ್ರಕಟವಾಗಿರುವ ಎಂದು ನಮ್ಮ ನಂಬಿಕೆ. ಈ ಪ್ರಪಂಚದಲ್ಲಿ ಇರುವ ಎಲ್ಲವೂ ಆ ಪರಮಾತ್ಮನೇ, ತನ್ನ ಅಂಶದಿಂದ ಪ್ರಕಟವಾಗಿ(ಸಿ)ದ್ದಾನೆ ಎಂದು. ಹಾಗಾಗಿ ಯಾರ್ಯಾರು ಏನೇನು ಎಂದು ಭಾವಿಸಿದರೆ ಹಾಗೆ ಅವರಿಗೆ ತೋರುವ ಆ ಪರಮಾತ್ಮ ವಸ್ತು ಏಕ ರೂಪದಲ್ಲಿ ಏಕೆ ಇಲ್ಲ ಎಂದು ಈ ಕಗ್ಗದ ಪ್ರತಾಪ. ಘಳಿಗೆ ಘಳಿಗೆಗೆ ಬದಲಾಗುವ ಮನುಷ್ಯರ ಮನದ ಭಾವಕ್ಕೆ ತಕ್ಕಂತೆ ಬದಲಾಗುವ ಆ ಪರಮಾತ್ಮ ಸ್ವರೂಪವನ್ನು ಗುಂಡಪ್ಪನವರು, ಊಸರವಲ್ಲಿಯಂತೆ ಕ್ಷಣಕ್ಕೊಂದು ರೂಪವನ್ನು ಏಕೆ ತೋರುತ್ತಾನೆ ಈ ಪರಮಾತ್ಮ. ಆಗಾಗ ಅವನೆತ್ತುವ ಅಂಶಾವತಾರಗಳಿಂದ ಯಾರಿಗೆ ಏನು ಪ್ರಯೋಜನ. ತನ್ನ ನಿಜ ರೂಪವನ್ನೇ ತೋರಬಹುದಲ್ಲ ಎಂದು, ಪ್ರತಾಪಿಸಿ, ಓದುಗರನ್ನು ಆ ಪರಮಾತ್ಮನ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ.
ಒಂದು ಬಾರಿ ದೇವರನ್ನು ಕಾಣುವ ತವಕದಿಂದ ಸ್ವಾಮಿ ರಾಮ ತೀರ್ಥರ ಬಳಿ ಒಬ್ಬ ಬಂದ. ಆಗ ನಡೆದ ಸಂವಾದ ಹೀಗಿತ್ತು
ವ್ಯಕ್ತಿ. ಸ್ವಾಮಿ ನೀ ದೇವರನ್ನು ನೋಡಿದ್ದೀರಂತೆ. ನನಗೂ ಆ ದೇವರನ್ನು ತೋರಿಸುತ್ತೀರಾ
ಸ್ವಾಮಿ ಓಹೋ ಅದಕ್ಕೇನಂತೆ, ತೋರಿಸುತ್ತೇನೆ, ಹಾ ಅವರ ಬಳಿ ಹೋದಾಗ, ನಿನ್ನ ಪರಿಚಯ ಮಾಡಿಕೊಡಬೇಕು. ಹಾಗಾಗಿ ನೀ ಯಾರೆಂದು ಹೇಳು?” ವ್ಯಕ್ತಿ. ರಾಜ ಗಜಪತಿ ರಾಜು
ಸ್ವಾಮಿಅದು ನಿನ್ನ ಹೆಸರು, ನೀ ಯಾರು?”
ವ್ಯಕ್ತಿ. ವಿಜಯನಗರ ಸಾಮ್ರ್ಯಾಜ್ಯದ ನಿರ್ವಾಹಕ
ಸ್ವಾಮೀಅದು ನೀನಿರುವ ಹುದ್ದೆ, ಈ ಹಿಂದೆಯೂ ಆ ಹುದ್ದೆಯಲ್ಲಿ ಯಾರೋ ಇದ್ದರು. ಮುಂದೆಯೂ ಯಾರೋ ಇರುತ್ತಾರೆ, ನೀ ಯಾರು ?”
ಹೀಗೇ ನಾಲ್ಕಾರುಬಾರಿ ಸ್ವಾಮಿ ನೀ ಯಾರು, ನೀ ಯಾರುಎಂದು ಕೇಳಿದಾಗ, ಆ ವ್ಯಕ್ತಿ ರೋಸಿ, ” ನಾ ಏನೇ ಹೇಳಿದರೂ, ಅದು ನೀ ಅಲ್ಲ, ನೀ ಯಾರು?ಎನ್ನುತ್ತೀರಿ, ಹಾಗಾದರೆ ನಾ ಯಾರುಎಂದು ಕುಪಿತಗೊಂಡು ಕೇಳಿದ. ಅದಕ್ಕವರುಅಲ್ಲಿ ಕುಳಿತುಕೋ. ನೀ ಯಾರೆಂದು ಯೋಚಿಸು, ನಿನಗೆ ನೀ ಯಾರೆಂದು ಅರಿವಾದಾಗ, ಆ ದೇವರು ನಿನಗೇ ಕಾಣುತ್ತಾನೆ, ನಾ ತೋರಿಸುವ ಅವಶ್ಯಕತೆಯೇ ಬರುವುದಿಲ್ಲಎಂದರಂತೆ.
ಆ ಪರಮಾತ್ಮನಿಗೆ ಒಂದು ರೂಪವಿದ್ದಿದ್ದರೆ, ಪಾಪ ಅವನೂ ತೋರಿಸಿಯಾನು. ಎಲ್ಲ ರೂಪಗಳೂ ಅವನೇ ಆಗಿರುವಾಗ, ಒಂದು ರೂಪವನ್ನು ಹೇಗೆ ತೋರುವುದು. ಹಾಗಾಗಿ ವಾಚಕರೆ, ಶುದ್ಧ ಮನಸ್ಸಿನಿಂದ, ಅಹಂಕಾರವನ್ನು ತೊರೆದು, ಧ್ಯಾನದಿಂದ ಆ ಪರಮ ಶಕ್ತಿಯ ಸ್ವರೂಪವನ್ನು ಎಲ್ಲೆಲ್ಲೂ ಕಾಣಬಹುದು. ಈ ರೀತಿಯ ಪ್ರೇರಣೆಯನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ನಮಗೆ ನೀಡುತ್ತಾರೆ.
ರಸಧಾರೆ - 039
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
 ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಒಸದೇತಕವನೀಯನೆಮಗೊಂದು ನಿಜ ಕುರುಹ |
ನಿಷೆಯೊಳುಡಕರಡವೊಲು ? ಮಂಕು ತಿಮ್ಮ ||
ಕಾಣ್ಬವೊಲೆಸಗೆ = ಕಾಣ್ಬ + ಒಲ್ + ಎಸಗೆ , ಪರಬೊಮ್ಮನೆನ್ನುವೊಡೆ= ಪರಬೊಮ್ಮನು + ಎನ್ನುವೊಡೆ, ಒಸದೇತಕವನೀಯನೆಮಗೊಂದು = ಒಸೆದು + ಏತಕೆ + ಆವನು + ಈಯನು + ಎಮಗೆ + ಒಂದು, ನಿಷೆಯೊಳುಡಕರಡವೊಲು = ನಿಶೆಯ + ಒಳು + ಉಡುಕರದ + ಒಲು, ಪುಸಿಯ = ಸುಳ್ಳನ್ನು, ದಿಟವ = ನಿಜವನ್ನು, ಒಸಗೆ = ಸಹಾಯಮಾಡಲು, ಒಸದು = ದಯತೋರಿ, ಉಡುಕರದ = ನಕ್ಷತ್ರದ.
ಸುಳ್ಳನ್ನು ನೀನು ಸುಳ್ಳು ಎಂದು ಅರಿತುಕೊಂಡು ಸತ್ಯವನ್ನು ಕಾಣಲು ನಿನಗೆ ಸಹಾಯಮಾಡುವವನಂತಾದರೆ, ಆ ಪರಮಾತ್ಮನು ಮರೆಯಾಗಿ ಮುಸುಕು ಹಾಕಿಕೊಂಡಂತೆ ಇರುವುದಾದರೆ, ಅವನು ನಮ್ಮ ಮೇಲೆ ಪ್ರಸನ್ನನಾಗಿ, ರಾತ್ರಿ ಹೊತ್ತು ನಕ್ಷತ್ರದ ಕಿರಣಗಳು ನಮಗೆ ದಾರಿ ತೋರುವಂತೆ, ಒಂದು ಗುರುತನ್ನು ತನ್ನ ಇರುವಿಕೆಯ ಕುರುಹಾಗಿ ತೋರಿಸಬಾರದೇನು? ಇನ್ನುತ್ತಾರೆ ಶ್ರೀ ಗುಂಡಪ್ಪನವರು ಈ ಕಗ್ಗದಲ್ಲಿ.
ಜಗತ್ ಮಿತ್ಯವೆನ್ನುವ ಮಿತ್ಯಾವಾದವನ್ನು ಒಪ್ಪುವುದಾದರೆ, ಜಗತ್ತು ಮಾಯೆ, ಮಿಥ್ಯೆಯಾದರೆ, ಸತ್ಯವಾವುದು ಎಂದು ನಾವು ಅರಿತುಕೊಳ್ಳಲು, ಪ್ರಯತ್ನ ಪಡುತ್ತೇವೆ. ಎಲ್ಲ ವೇದಾಂತಿಗಳೂ, ಸಿದ್ಧಾಂತಿಗಳೂ, ಸಾಧು ಸಂತರೂ ಎಲ್ಲರೂ ಅನಾದಿಕಾಲದಿಂದಲೂ ಆ ಪರಮ ಸತ್ಯವನ್ನು ಅರಿತುಕೊಳ್ಳಲು ಪ್ರಯತ್ನಪಟ್ಟು ತಮ್ಮ ಅರಿವನ್ನು ಪ್ರತಿಪಾದಿಸಿದ್ದಾರೆ. ಅದರ ಪ್ರತಿಫಲವೇ, ಎಲ್ಲ ಮತಗಳು ಮತ್ತು ವೇದಾಂತದ ಹಲವಾರು ಕವಲುಗಳು.
ಇಲ್ಲಿ ಸತ್ಯವೆಂದರೇನು? ಸುಳ್ಳೆಂದರೇನು? ಯಾವುದು ನಿತ್ಯವಲ್ಲವೋ, ಯಾವುದು ಕಾಲಕ್ರಮೇಣ ಬದಲಾಗುತ್ತದೋ, ಯಾವುದು ನಾಶವಾಗುತ್ತದೋ ಅದನ್ನು ಮಿತ್ಯ, ಸುಳ್ಳು, ಎಂದರು. ಅದನ್ನೇ ಸತ್ಯವೆಂದು ನಂಬಿದರೆ,ಅದನ್ನು ಮಾಯೆ ಎಂದರು. ಆದರೆ, ಯಾವುದು ಸದಾಕಾಲ ಒಂದೇ ರೀತಿ ಇರುತ್ತದೋ ಅದನ್ನು ನಿತ್ಯವೆಂದರು, ಸತ್ಯವೆಂದರು. ಹಾಗಾದರೆ ನಾವು ಕಾಣುವುದೆಲ್ಲವೂ, ಬದಲಾಗುವುದೆಲ್ಲವೂ ಅಸತ್ಯವಾದರೆ ಮಿತ್ಯವಾದರೆ ಸತ್ಯವಾವುದು? . ಹೀಗೆ ನಾವು ಮಿಥ್ಯೆ ಯನ್ನು ಗುರುತಿಸಿ, ಸತ್ಯವನ್ನು ಅರಿತುಕೊಳ್ಳಲು, ಆ ಪರಮಾತ್ಮನೇ ಸಹಾಯಮಾಡುವುದಾದರೆ, ಸತ್ಯವಾದ ತನ್ನ ನಿಜ ರೂಪವನ್ನು ನಮಗೆ ತೋರಿಸಲು ಯಾವುದಾದರೂ ಒಂದು ಕುರುಹನ್ನು ನೀಡಬಹುದಲ್ಲ? ಎಂದು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು
ಮನಸ್ಸು ಬುದ್ಧಿ ದೇಹ ಆತ್ಮಗಳು ಒಂದಾದಾಗ ಒಂದು ಜೀವಿಯ ಆವಿರ್ಭಾವ. ಜೀವವನ್ನು ಪ್ರಾಣವೆಂದೂ ಕರೆಯುತ್ತಾರೆ. ಒಂದು ಜೀವಿಯ ಪ್ರಾಣ ಮನಸ್ಸು ಬುದ್ಧಿ ದೇಹವನ್ನು ಬಿಟ್ಟಾಗ, ಜೀವಿಯನ್ನು ಸತ್ತ(ಸತ್ತಿತೆ೦ದು)ನೆಂದು ಹೇಳುತ್ತಾರೆ. ಅಂದರೆ ಪ್ರಾಣ ಸಾಯುವುದಿಲ್ಲ, ಹೋಗುತ್ತದೆ. ಮನಸ್ಸು ಬುದ್ಧಿಗಳು, ದೇಹದಂತೆ ಇಲ್ಲವಾಗುತ್ತದೆಯಾದರೆ, ನಮ್ಮ ಅಸ್ತಿತ್ವದಲ್ಲಿ ಹಾಗಾದರೆ ಸತ್ಯವಾದದ್ದು ಈ ಪ್ರಾಣ ಅಥವಾ ಆತ್ಮವೊಂದೇ. ಈ ಆತ್ಮದ ಅರಿವನ್ನು ಪಡೆಯುವುದೇ ಸತ್ಯವನ್ನು ಅರಿಯುವ ದಾರಿ. ಇದು ನಮ್ಮ ಆಧ್ಯಾತ್ಮದ ಮಾತು.
ಮನಸ್ಸು ಬುದ್ಧಿ ದೇಹ ಆತ್ಮಗಳಿಗೆ ಒಂದೊಂದು ಮೂಲ ಉಂಟು. ಮನಸ್ಸು ಬುದ್ಧಿಗಳಿಗೆ ಮೂಲ ಪಂಚ ಭೂತಗಳು, ದೇಹಕ್ಕೆ ಈ ಭೂಮಿ ಮತ್ತು ಆತ್ಮಕ್ಕೆ ಆ ಪರಮಾತ್ಮ. ಆತ್ಮವು ಸತ್ಯವಾದರೆ, ಪರಮಾತ್ಮನೂ ಸತ್ಯವಲ್ಲವೇ. ಆತ್ಮ ಆ ಪರಮಾತ್ಮನ೦ತೆಯೇ ಸಾಕ್ಷೀ ಭೂತವಾಗಿ ಇದೆ. ಇದನ್ನರಿಯುವುದೇ ಆಧ್ಯಾತ್ಮದ ಮೂಲ ಗುರಿ. ಇದನ್ನರಿತವರಿಗೆ ಪರಮಾತ್ಮ ಸಾಕ್ಷಾತ್ಕಾರ. ಇದನ್ನು ಯಾರು ಬೇಕಾದರೂ ಸಾಧಿಸಬಹುದು. ಅದಕ್ಕೆ ಸಾಧನೆಯ ಅವಶ್ಯಕತೆಯುಂಟು ಅಷ್ಟೇ.
ಅಂತ ಸಾಧನೆಯ ದಾರಿಯನ್ನು, ಸತ್ಯವನ್ನರಿಯುವ ಮಾರ್ಗವನ್ನು ನಮಗೆ ಆ ಪರಮಾತ್ಮ ಕರುಣಿಸಲಿ ಎಂದು ಬೇಡುವುದೇ ಈ ಕಗ್ಗದ ಮೂಲ ಅಂತರ್ಯ.
ಪರಮಾತ್ಮ ದರ್ಶನ ರಸಧಾರೆ - 040
ನಿಶೆಯೊಳೇ೦ ಕಾಣಬಾರನು ಹಗಲನೊಲ್ಲದೊಡೆ
ಶಶಿರವಿಗಳವನ ಮನೆಕಿಟಕಿಯಾಗಿರರೇ೦?
ಮಸುಕುಬೆಳಕೊಂದಾದ ಸಂಜೆಮಂಜೇನವನು
ಮಿಸುಕಿ ಸುಳಿಯುವ ಸಮಯ? ಮಂಕುತಿಮ್ಮ
ನಿಶೆಯೊಳೇ೦ = ನಿಶೆಯೊಳು + ಏಂ, ಹಗಲನೊಲ್ಲದೊಡೆ = ಹಗಲನು ಒಲ್ಲದೊಡೆ, ಮಸುಕುಬೆಳಕೊಂದಾದ = ಮಸುಕು + ಬೆಳಕು + ಒಂದಾದ, ಸಂಜೆಮಂಜೇನವನು = ಸಂಜೆ ಮಂಜೇನು + ಅವನು, ನಿಶೆಯೊಳು = ರಾತ್ರಿಯಲಿ, ಶಶಿರವಿಗಳು = ಸೂರ್ಯ ಚಂದ್ರರು, ಮಸುಕು = ಹಗಲು ರಾತ್ರಿಗಳೊಂದಾಗುವ ವೇಳೆ, ಮಂಜೇನು = ಕಂಡೂ ಕಾಣದ, ಮಿಸುಕಿ = ಅಲೆದಾಡುವ
ಹಗಲಲ್ಲಿ ಕಾಣಬಾರದೆಂತಾದರೆ, ರಾತ್ರಿಯಲ್ಲಿ ಏಕೆ ಕಾಣುವುದಿಲ್ಲ ಆ ಪರಮಾತ್ಮ. ರವಿ ಚಂದ್ರರು ಅವನ ಮನೆಯ ಕಿಟಕಿಗಳೇನು? ಇತ್ತ ಹಗಲೂ ಅಲ್ಲದೆ ನಿಶೆಯೂ ಅಲ್ಲದೆ ಇರುವ ಮುಸ್ಸಂಜೆಯ ಸಮಯವೇನು ಅವನು ಅಲೆದಾಡುವ ಸಮಯ ಎಂದು ಒಂದು ನೇರ ಪ್ರಶ್ನೆಯನ್ನು ಕೇಳುತ್ತಾರೆ. ಮಾನ್ಯ ಗುಂಡಪ್ಪನವರು.
ಆ ದೇವರು ಯಾರು? ಅವನ ಸ್ವರೂಪವೇನು? ಅವನನ್ನು ಹೇಗೆ ಸಾಕ್ಷಾತ್ಕರಿಸಿಕೊಳ್ಳಬಹುದು? ಹೀಗೆ ಹತ್ತು ಹಲವಾರು ಸಂಶಯಗಳು ಅನಾದಿಕಾಲದಿಂದಲೂ ಮಾನವನನ್ನು ಕಾಡುತ್ತಿದೆ. ಕಣ್ಣು ತೆರೆದರೆ ಬೆಳಕು. ಅದನ್ನೇ ಹಗಲು ಎನ್ನುತ್ತಿರಬಹುದು ಮಾನ್ಯ ಗುಂಡಪ್ಪನವರು. ಕಣ್ಣು ತೆರೆದರೆ , ನಮಗೆ ಪ್ರಪಂಚವೆಲ್ಲ ಕಾಣುವುದು. ಕಂಡವಸ್ತುವಿನ ಮೇಲೆ ನಮ್ಮ ಗಮನ ಮತ್ತು ಆಲೋಚನೆ. ಇಂದ್ರಿಯಗಳ ಸೆಳೆತದಿಂದ ನಾವು ಕಣ್ಣು ತೆರೆದಿರುವಾಗ ಮನಸ್ಸು ಚಂಚಲವಾಗಿರುವುದರಿಂದ, ಆ ಪರಮಾತ್ಮನನ್ನು ಭಾವಿಸುವುದು ಬಹಳ ಕಷ್ಟ. ಆದರೆ ಕಣ್ಣು ಮುಚ್ಚಿದರೆ, ಕತ್ತಲು. ಇದನ್ನೇ ನಿಶೆಯಂದಿರಬಹುದು. ಹಾಗಾಗಿ ಕಣ್ಣು ಮುಚ್ಚಿರುವಾಗ, ಬಾಹ್ಯ ವಸ್ತುಗಳು ಕಾಣದಾದಾಗ, ಅಂತರ್ಮುಖಿಯಾಗಲು ಸಾಧ್ಯ. ಹಾಗೆ ಅಂತರ್ಮುಖಿಯಾದಾಗಲಾದರೂ ಆ ಪರಮಾತ್ಮ ನಮ್ಮ ಅರಿವಿಗೆ ಬರಬಹುದಲ್ಲ, ಎಂದರೆ ಕಷ್ಟ ಆದರೆ ಅಸಾಧ್ಯವಲ್ಲ. ಹರಿದಾಡುವಂತ, ಮನವ ನಿಲಿಸುವುದು ಬಲು ಕಷ್ಟ. ಕಾಶೀಗ್ ಹೋಗಲು ಬಹುದು, ದೇಶ ಸುತ್ತಲು ಬಹುದು, ಆಸೆ ಸುಟ್ಟ೦ತಿರಬಹುದು, ಹರಿದಾಡುವಂತ,ಮನವ ನಿಲಿಸುವುದು ಬಲು ಕಷ್ಟಎಂದು ದಾಸರು ಹೇಳಿದ್ದಾರೆ. ಹಾಗೆ ಕಣ್ಣು ಮುಚ್ಚಿ ಕುಳಿತರೂ ಈ ಮನಸ್ಸೆಂಬುದು ಒಂದು ಇದೆಯಲ್ಲ, ಎಲ್ಲೆಲ್ಲೋ ಸುತ್ತುತದೆ, ಏನೇನೋ ಯೋಚಿಸುತ್ತದೆ. ಈ ಯೋಚನೆ ಆಲೋಚನೆಗಳ ಸುಳಿಯಲ್ಲಿ ಆ ಪರಮಾತ್ಮನಮೇಲೆ ಧ್ಯಾನಮಾಡುವುದೂ ಸಹ ಕಷ್ಟ.
ಆದರೆ, ಎಚ್ಚರ ಮತ್ತು ಸುಶುಪ್ತಿಗಳ ನಡುವಿನ ಒಂದು ಸ್ತರ ಉಂಟು. ಅದು ಜಗೃತಾವಸ್ತೆ. ಮನದ ಎಲ್ಲ ಕೋಣೆಗಳ ಗೋಡೆಗಳ ಕಾಲ್ಪನಿಕ ಗೆರೆಗಳನ್ನು ಅಳಿಸಿ, ಮನದ ಪಟಲವನ್ನು ಒಂದೇ ಆಗಿಸಿ ಅಲ್ಲಿ ಧ್ಯಾನಮಾಡಿದರೆ, ಈ ಪ್ರಪಂಚದ ಸೆಳೆತಗಳನ್ನು ಮೀರಿ ಇಡೀ ಸೃಷ್ಟಿಗೆ ಕಾರಣವಾದ ಆ ಚೇತನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಡಬಹುದು. ಈ ಪ್ರಯತ್ನ ನಿರಂತರವಾಗಿ ಸಾಗಿದಾಗ, ಧ್ಯಾನ ಗಟ್ಟಿಯಾಗಿ ಆ ಪರಮ ಶಕ್ತಿಯ ದರ್ಶನ ಅಂತಃ ಚಕ್ಷುಗಳಿಗೆ ಆಗಬಹುದು. ಆದರೆ ಅದೂ ಸಹ ಒಂದು ಕ್ಷಣ ಬಂದು ಹೋಗಿಬಿಡುತ್ತೆ. ಇದು ಅನುಭವ ವೇಧ್ಯ. ಇದನ್ನೇ ಮಾನ್ಯ ಗುಂಡಪ್ಪನವರು ಮಂಜೇನುಎನ್ನುತ್ತಾರೆ. ಹಾಗೆ ಒಂದು ಕ್ಷಣ ಬಂದು ಹೋಗುವ ಭಾವಕ್ಕೆ ಮಿಸುಕುಎಂದಿದ್ದಾರೆ. ಆ ಸ್ಥಿತಿಯಲ್ಲಿ ಹೆಚ್ಚು ಸಮಯ ಇರಲು ಪ್ರಯತ್ನಪಟ್ಟರೆ ಅದು ಧ್ಯಾನವಾಗುತ್ತದೆ . ಎಲ್ಲ ಭಾವಗಳೂ ಕರಗಿ ಹೋಗಿ, ಕೇವಲ ಆ ಪರಮ ಶಕ್ತಿಯನ್ನೇ ಅನುಭವಕ್ಕೆ ತಂದುಕೊಳ್ಳುವ ಪ್ರಕ್ರಿಯೆ ಇದು. ಒಂದು ವ್ಯಕ್ತಿ, ಕೇವಲ, ತೊಂಬತ್ತು ಕ್ಷಣಗಳು, ಅಂದರೆ ಒಂದೂವರೆ ನಿಮಿಷ ಯಾವ ಅಡಚಣೆಯೂ ಇಲ್ಲದೆ ಈ ಸ್ಥಿತಿಯಲ್ಲಿ ಇರಲು ಆದರೆ ಅವನನ್ನು ಯೋಗಿ ಎನ್ನಬಹುದು.
ಅಧ್ಯಾತ್ಮ ಸಾಧನೆಯ ಉತ್ತುಂಗ ಸ್ಥರವದು. ಆದರೆ ಇಂದಿನ ಹಲವಾರು ಸೆಳೆತಗಳ ಈ ಸಮಾಜದಲ್ಲಿ ಇದು ಬಹಳ ಕಷ್ಟ, ಆದರೆ ಅಸಾಧ್ಯವಲ್ಲ. ಇದಕ್ಕೊಂದು ಮಾರ್ಗ ಬೇಕು, ಒಬ್ಬ ಮಾರ್ಗದರ್ಶಕಬೇಕು, ನಿರಂತರ ಪ್ರಯತ್ನ ಬೇಕು. ಸಾಧಿಸಬಹುದು.

 ಮುಂದಿನ ಭಾಗಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ

1 ಕಾಮೆಂಟ್‌:

Suki Vishala Kanarally ಹೇಳಿದರು...

Over-explained. Even where DVG leaves the question open-ended, there seems to be an urge to explain and thus limit the scope of profound philosophical dimension DVG evokes.