ಕುವೆಂಪುರವರ ಭಾವಗೀತೆಗಳು - Lyrics of Kuvempu

ಬಾ ಫಾಲ್ಗುಣ ರವಿ ದರ್ಶನಕೆ / Baa Phalguna Ravi Darshanake
ಶಿವಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿಶೃಂಗಕೆ ಬಾ!
ಬಾ ಫಾಲ್ಗುಣ ರವಿ ದರ್ಶನಕೆ!

ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು || ಬಾ ||

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೇಕೋ ಸ್ಪಂದಿಸುತಿದೆ ಭಾವಜ್ವಾಲೆ || ಬಾ ||

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ
ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ
ಸಕಲಾರಾಧನ ಸಾಧನ ಬೋಧನ ಅನುಭವರಸ ತಾನಹುದಲ್ಲಿ || ಬಾ ||

ಬಾರಿಸು ಕನ್ನಡ ಡಿಂಡಿಮವ / Baarisu kannada dindimava
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.

ಬಾ ಇಲ್ಲಿ ಸಂಭವಿಸು / baa illi sambhavisu
ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ*,
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಓ ಭವವಿದೂರ.

ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿಂದೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,
ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!

ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು / Dharegavatarisida svargada spardhiyu
ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು
ಸುಂದರ ತಾಯ್ನೆಲವು, ನಮ್ಮೀ ತಾಯ್ನೆಲವು.
ದೇವಿ ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು.
                                                        .....
ನಮ್ಮೀ ತಾಯ್ನೆಲವು.

ಧವಳ ಹಿಮಾಲಯ ಮುಕುಟದ ಮೆರುಗು
ಕಾಲ್ತೊಳೆಯುತಲಿದೆ ಜಲಧಿಯ ಬುರುಗು
ಗಂಗಾ ಬಯಲಿನ ಹಸಿರಿನ ಸೆರಗು
ಕಣಕಣ ಮಂಗಲವು.
                                                        .....
ನಮ್ಮೀ ತಾಯ್ನೆಲವು.

ಕಾಶ್ಮೀರದಲಿ ಸುರಿವುದು ತುಹಿನ
ರಾಜಸ್ಥಾನದಿ ಸುಡುವುದು ಪುಲಿನ
ಮಲೆಯಾಚಲದಲಿ ಗಂಧದ ಪವನ
ವಿಧ ವಿಧ ಹೂ ಫಲವು

                                                        .....
ನಮ್ಮೀ ತಾಯ್ನೆಲವು.

ಹಲವು ಭಾಷೆ ನುಡಿ ಲಿಪಿಗಳ ತೋಟ
ವಿಧ ವಿಧ ಪಂಥ ಮತಗಳ ರಸದೂಟ
ಕಾಣ್ವದು ಕಾಮನಬಿಲ್ಲಿನ ನೋಟ
ಬಗೆ ಬಗೆ ಸಂಕುಲವು.
                                                        .....
ನಮ್ಮೀ ತಾಯ್ನೆಲವು.

ಗಂಗೆ ತುಂಗೆಯರ ಅಮೃತ ಸ್ತನ್ಯ
ಕುಡಿಸುತ ಮಾಡಿದೆ ಜೀವನ ಧನ್ಯ
ಮುಡುಪಿದು ಬದುಕು ನಿನಗೆ ಅನನ್ಯ
ಕ್ಷಣ ಕ್ಷಣ ಬಲ ಛಲವು.
                                                        .....
ನಮ್ಮೀ ತಾಯ್ನೆಲವು.

ಜಯ ಭಾರತ ಜನನಿಯ ತನುಜಾತೆ / Jaya bhaarata jananiya tanujaate
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂದನರವತರಿಸಿದ
                                                        
ಭಾರತ ಜನನಿಯ ತನುಜಾತೆ..

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ..
                                                        
ಭಾರತ ಜನನಿಯ ತನುಜಾತೆ...

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ.
ಕಬ್ಬಿಗರುದಿಸಿದ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ..
                                                        
ಭಾರತ ಜನನಿಯ ತನುಜಾತೆ...
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ...
                                                        
ಭಾರತ ಜನನಿಯ ತನುಜಾತೆ...

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ...
                                                        
ಭಾರತ ಜನನಿಯ ತನುಜಾತೆ...


ನೇಗಿಲ ಯೋಗಿ / Negila Yogi
ನೇಗಿಲ ಹಿಡಿದ, ಹೊಲದೊಳು ಹಾಡುತ,
ಉಳುವ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೇ ಪೂಜೆಯು,
ಕರ್ಮವೇ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ,
ಸೃಷ್ಟಿನಿಯಮದೊಳಗವನೇ ಭೋಗಿ.
                                              
ಉಳುವ ಯೋಗಿಯ....

ಲೋಕದೊಳೇನೆ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮುಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೇ ಇಲ್ಲ.
                                              
ಉಳುವ ಯೋಗಿಯ....

ಯಾರೂ ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ,
ದುಡಿವನು ಗೌರವಕಾಶಿಸದೆ.
ನೇಗಿಲ ಕುಲದೊಳಗಡಗಿದೆ ಕರ್ಮ,
ನೇಗಿಲ ಮೇಲೆಯೇ ನಿಂತಿದೆ ಧರ್ಮ.
                                              
ಉಳುವ ಯೋಗಿಯ....

ನೂರು ದೇವರನೆಲ್ಲ ನೂಕಾಚೆ ದೂರ / Nooru devaranella nookache doora...
ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ ಬಾರಾ....

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು.
                                                             
ಭಾರತಾಂಬೆಯೇ ದೇವಿ....

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು.
                                                             
ಭಾರತಾಂಬೆಯೇ ದೇವಿ....

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಬಲೆಯನು ಒಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು.
                                                             
ಭಾರತಾಂಬೆಯೇ ದೇವಿ....

ಅಂತರತಮ ನೀ ಗುರು.. / Antaratama nee guru
ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ ||

ಜಟಿಲ ಕುಟಿಲ ತಮ ಅಂತರಂಗ
ಬಹು ಭಾವ ವಿಪಿನ ಸಂಚಾರಿ ||

ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ ||

ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ
ರೂಪ ಅರೂಪ ವಿಹಾರಿ ||

ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ... / Baagilolu kaimugidu
ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳನರ್ಪಿಸಿಲ್ಲಿ

ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ
ಕರ್ಪೂರದಾರತಿಯ ಜ್ಯೋತಿಯಿಲ್ಲ
ಭಗವಂತನಾನಂದ ರೂಪುಗೊಂಡಿಹುದಿಲ್ಲಿ
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ ||

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಚೆಯಲಿ ಮೈಮರೆತು ತೇಲುವುದು ಭೂಭಾರ ||

ತನುವು ನಿನ್ನದು ಮನವು ನಿನ್ನದು / Tanuvu ninnadu manavu ninnadu
ತನುವು ನಿನ್ನದು ಮನವು ನಿನ್ನದು
ನನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು ||

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು ||


ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ |
ನೀನೆ ಮಾಯಾ ಮೋಹ ಶಕ್ತಿಯು
ನನ್ನ ಜೀವನ ಮುಕ್ತಿಯು ||

ಅಗಣಿತ ತಾರಾ ಗಣಗಳ ನಡುವೆ / Aganita taaraganagala naduve
ಅಗಣಿತ ತಾರಾ ಗಣಗಳ ನಡುವೆ
       
ನಿನ್ನನೆ ಮೆಚ್ಚಿದೆ ನಾನು.
ನನ್ನೀ ಜೀವನ ಸಮುದ್ರ ಯಾನಕೆ
       
ಚಿರ ಧ್ರುವ ತಾರೆಯು ನೀನು.

ಇಲ್ಲದ ಸಲ್ಲದ ತೀರಗಳೆಡೆಗೆ
       
ಹೊರಡುತ ಬಳಲಿದರೇನು.
ದಿಟ್ಟಿಯು ನಿನ್ನೊಳು ನೆಟ್ಟರೆ ತಾನು
       
ತೀರವ ಸೇರೆನೆ ನಾನು?


ಚಂಚಲವಾಗಿಹ  ತಾರಕೆಗಳಲಿ
       
ನಿಶ್ಚಲನೆಂದರೆ ನೀನೆ.
ಮಿಂಚಿ ಮಿನುಗುತಿಹ ನಶ್ವರದೆದೆಯಲಿ
       
ಶಾಶ್ವತನೆಂದರೆ ನೀನೆ.

ಆನಂದಮಯ ಈ ಜಗ ಹೃದಯ...
ಆನಂದಮಯ ಈ ಜಗ ಹೃದಯ, ಏತಕೆ ಭಯ ಮಾಣೋ..
ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
ಆನಂದಮಯ ಈ ಜಗ ಹೃದಯ...

ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
ಆನಂದಮಯ ಈ ಜಗ ಹೃದಯ...

ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
ಆನಂದಮಯ ಈ ಜಗ ಹೃದಯ...

ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
ಆನಂದಮಯ ಈ ಜಗಹೃದಯ...

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ ಅಂತರಾತ್ಮ ||

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಗೆ
ನರಕ ತಾನುಳಿಯುವುದೇ ನರಕವಾಗಿ ||

ಶಾಂತ ರೀತಿಯಳಿಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನೆಂದೆನ್ನ ರಕ್ಷಿಸೈ 
ನಿನ್ನ ನೀತಿಯ ಬೆಳಕಿನ ಆನಂದಕೈ || 

ಓ ನನ್ನ ಚೇತನ
ಓ ನನ್ನ ಚೇತನ
ಆಗು ನೀ ಅನಿಕೇತನ ||

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ ||

ನೂರುಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ ||

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು ||

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು ||

ದೋಣಿಸಾಗಲಿ ಮುಂದೆ ಹೋಗಲಿ
ದೋಣಿಸಾಗಲಿ ಮುಂದೆ ಹೋಗಲಿ, ದೂರ ತೀರವ ಸೇರಲಿ
ಬೀಸುಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸಿರುಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿರೆ

ದೂರಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರಜೀವರು ನಮ್ಮಜೀವನ ಲೀಲೆಗೆ
ನೆನ್ನೆ ನೆನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ

ಯಾವ ಜನ್ಮದ ಮೈತ್ರಿ / Yaava janmada maitri
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು 
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ !
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ

ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!  
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!
ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,
ಅದರಂತರಾಳದಲಿ ಗುಪ್ತಗಾಮಿನಿಯಾಗಿ;

ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು!
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ;
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ?

ಹಾದಿ ಸಾಗಿದರಾಯ್ತು ಬರುವುದೆಲ್ಲಾ ಬರಲಿ!  
ಬಾರಯ್ಯ, ಮಮಬಂಧು, ಜೀವನಪಥದೊಳಾವು
ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು

20 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ನಿಮ್ಮ ಈ ಅದ್ಭುತ ಸೇವೆಗೆ ಕೋಟಿ ಕೋಟಿ ನಮನಗಳು...

Raju Avalekar ಹೇಳಿದರು...

Uttama Kannada seve gurugle....

Unknown ಹೇಳಿದರು...

ಧನ್ಯವಾದಗಳು

Rajaneesh Kashyap ಹೇಳಿದರು...

ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು... ಗೀತೆ ಚಂದ್ರಶೇಖರ ಭಂಡಾರಿಯವರ ರಚನೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿರಿಯ ಕಾರ್ಯಕರ್ತರು. ಬೆಂಗಳೂರಿನಲ್ಲಿದ್ದಾರೆ.

Unknown ಹೇಳಿದರು...

ಭಾರತವೊಂದು ಹೂದೋಟ ನಾವದರ ಹೂಗಳು ಬರೆದ ಕವಿ

Unknown ಹೇಳಿದರು...

ಧನ್ಯವಾದಗಳು 🙏🙏🙏🙏🙏

Malukavi.com ಹೇಳಿದರು...

ನನಗೆ ಕುವೆಂಪು ಎಂದರೆ ಬಲು ಇಷ್ಟ ....ಧನ್ಯವಾದ ಸರ್ ನಿಮ್ಮ ಸೇವೆಗೆ...

RL ಹೇಳಿದರು...

ನನಗೆ ಕುವೆಂಪು ಅವರು ರಚಿಸಿರುವ ಎಲ್ಲಿ ಎಲ್ಲಿ ರಮ್ಯ ತಾಣ ಹಾಡಿನ ಸಾಹಿತ್ಯ ಬೇಕಿತ್ತು.. ಸಾಧ್ಯವಾದಲ್ಲಿ ನನ್ನ e-maild id ಗೆ ಕಲಿಯುಹಿಸುತ್ತೀರಾ.. ಧನ್ಯವಾದಗಳು

Unknown ಹೇಳಿದರು...

ಧನ್ಯವಾದ ಸರ್ ನಿಮ್ಮ ನುಡಿ ಸೇವೆಗೆ

Unknown ಹೇಳಿದರು...

ಮೂಲಪ್ರತಿ ಮತ್ತು ಪುರಾವೆಯನ್ನು ಕಳಿಸಿ

Unknown ಹೇಳಿದರು...

Thank you kuvempu avaru tumba olleyavaru

Unknown ಹೇಳಿದರು...

ಕಶ್ಯಪ ನಿಮ್ಮ ಮೂಲಪ್ರತಿಯನ್ನು ಕಳುಹಿಸಿ ಈ ಸುಳ್ಳು ಪ್ರಚಾರಗಳನ್ನು ನಿಲ್ಲಿಸಿ

ಅನಾಮಧೇಯ ಹೇಳಿದರು...

ಬಾರಿಸು ಕನ್ನಡ ಪದ್ಯದಲ್ಲಿ , ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ ಆಗಬೇಕಲ್ಲವೇ

Jayaprakash ಹೇಳಿದರು...

Please upload "sothu bandenu guruve"
lyrics in kannada

ಅನಾಮಧೇಯ ಹೇಳಿದರು...

ನೇಗಿಲ ಯೋಗಿ ಇ ಪದ್ಯದು ಸಾರಾಂಶ ಕಳ್ಸಿ ಸರ್ ಬೇಗ

ಅನಾಮಧೇಯ ಹೇಳಿದರು...

Devagind bhavapooje lyrics i need .post it pl

ಅನಾಮಧೇಯ ಹೇಳಿದರು...

Sotu bandenu guruve haadina lyrics beku

ಅನಾಮಧೇಯ ಹೇಳಿದರು...

ಕಾದೆ ಕಾದೆ ಕಾದೆ ನೀನು ಮಾತ್ರ ಬರೆದೆ ಹೋದೆ ಓಹ್ ಯನ್ನ ರಾಧೆ lyrics ಸಿಗುತ್ತಾ ಸರ್.

Harinath ಹೇಳಿದರು...

ಕಾದೆ ಕಾದೆ ಕಾದೆ ನೀನು ಮಾತ್ರ ಬರೆದೆ ಹೋದೆ ಓಹ್ ಯನ್ನ ರಾಧೆ lyrics ಸಿಗುತ್ತಾ ಸರ್. acehari73@gmail.com ಗೆ ಕಳಿಸಿ ದಯವಿಟ್ಟು

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಹೇಳಿದರು...

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com