ಭಗವದ್ಗೀತೆ ಅಧ್ಯಾಯ-18 (ಶ್ಲೋಕ 1 ರಿಂದ 20)



 ಭಗವದ್ಗೀತೆ ಅಧ್ಯಾಯ-18 (ಶ್ಲೋಕ 1 ರಿಂದ 20)
·  ಶ್ಲೋಕ - 01
ಹಿಂದಿನ ಹದಿನೇಳು ಅಧ್ಯಾಯಗಳಲ್ಲಿ ನಮ್ಮ ಸಾಧನೆ ಹೇಗಿರಬೇಕು ಎನ್ನುವುದನ್ನು ವಿವರಿಸಿದ್ದ ಕೃಷ್ಣ, ಇಲ್ಲಿ ಆ ಸಾಧನೆಯ ಸಂದೇಶವನ್ನು ಸಂಗ್ರಹ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಇದರ ಜೊತೆಗೆ ಅಧ್ಯಾಯ ಹದಿನೇಳರಲ್ಲಿ ವಿವರಿಸದೇ ಇರುವ ಸಾಧನೆಗೆ ಕುರಿತಾದ ತ್ರೈಗುಣ್ಯದ ಮುಂದುವರಿದ ವಿವರಣೆ ಕೂಡ ಇಲ್ಲಿದೆ. ಇದು ಗೀತೆಯ ಉಪಸಂಹಾರ. ಅಧ್ಯಾಯ ಅರ್ಜುನನ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ.
ಅರ್ಜುನ ಉವಾಚ ।
ಸಂನ್ಯಾಸಸ್ಯ ಮಹಾಬಾಹೋ ತತ್ವಮಿಚ್ಛಾಮಿ ವೇದಿತುಮ್ ।
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿನಿಸೂದನ ॥೧॥
ಅರ್ಜುನ ಉವಾಚ ಅರ್ಜುನ ಕೇಳಿದನು :ಸಂನ್ಯಾಸಸ್ಯ ಮಹಾಬಾಹೋ ತತ್ವಮ್ ಇಚ್ಛಾಮಿ ವೇದಿತುಮ್ ।
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿನಿಸೂದನ ಮಹಾಬಾಹೋ, ಸಂನ್ಯಾಸದ ಮತ್ತು ತ್ಯಾಗದ ಅಂತರವೇನು? ಓ ಹೃಷೀಕೇಶ, ಇದರ ನಿಜವನ್ನು ಕೇಶಿನಿಸೂದನನಾದ ನೀನು ನನಗೆ ತಿಳಿಸು.
ಕೃಷ್ಣ ಮೊದಲು ಸಂನ್ಯಾಸದ ಬಗ್ಗೆ ಹೇಳಿದ್ದ; ಆನಂತರ ಹಿಂದಿನ ಅಧ್ಯಾಯದಲ್ಲಿ ಯಜ್ಞ, ದಾನ, ತಪಸ್ಸು ಎನ್ನುವ ಕರ್ಮಗಳನ್ನು ಹೇಳಿದ. ಇಲ್ಲಿ ನಮಗೆ ಸ್ವಲ್ಪ ಗೊಂದಲವಾಗುತ್ತದೆ. ಹಾಗಾಗಿ ಅರ್ಜುನ ಕೃಷ್ಣನಲ್ಲಿ ಕರ್ಮತ್ಯಾಗ ಮತ್ತು ಕರ್ಮಸಂನ್ಯಾಸ ಇವೆರಡರ ನಡುವಿನ ಅಂತರವೇನು ಎಂದು ಕೇಳುತ್ತಾನೆ. ತ್ಯಾಗ ಮತ್ತು ಸಂನ್ಯಾಸ ಎರಡು ಪದಗಳು ಮೇಲ್ನೋಟಕ್ಕೆ ಒಂದೇ ಅರ್ಥವನ್ನು ಕೊಟ್ಟಂತೆ ಕಂಡರೂ ಕೂಡ, ಅದು ಬೇರೆಬೇರೆ. ಸಂನ್ಯಾಸ ಮತ್ತು ತ್ಯಾಗದ ಮೂಲಭೂತ ಅರ್ಥವೇನು ? ಅವೆರಡನ್ನು ಪ್ರತ್ಯೇಕವಾಗಿ ಅರ್ಥೈಸುವುದು ಹೇಗೆ ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನ ಕೃಷ್ಣನನ್ನು ಮಹಾಬಾಹೋ, ಹೃಷೀಕೇಶ ಮತ್ತು ಕೇಶಿನಿಸೂದನ ಎನ್ನುವ ಮೂರು ದಿವ್ಯ ನಾಮಗಳಿಂದ ಸಂಬೋಧಿಸಿದ್ದಾನೆ. ಇದು ಆತನಲ್ಲಿರುವ ಗುರುಭಕ್ತಿಯನ್ನು ಸೂಚಿಸುತ್ತದೆ ಮತ್ತು ಕೃಷ್ಣ ಕೇವಲ ವಸುದೇವನ ಮಗನಲ್ಲ, ಅವನು ಭಗವಂತಎಂದು ಅರ್ಥ ಮಾಡಿಕೊಂಡು ಈ ಪ್ರಶ್ನೆ ಕೇಳಿರುವುದು ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಮಹಾಬಾಹುಅಂದರೆ ಶತ್ರುಗಳನ್ನು ಎದುರಿಸುವ, ನೀಳವಾದ, ಗಟ್ಟಿಯಾದ ತೊಳುಗಳುಳ್ಳವ ಎನ್ನುವುದು ಮೇಲ್ನೋಟದ ಅರ್ಥ. ದುಷ್ಟನಿಗ್ರಹ ಮಾಡಿ ಶಿಷ್ಟ ರಕ್ಷಣೆ ಮಾಡುವ, ಎಲ್ಲರೊಳಗಿನ ಅಜ್ಞಾನವನ್ನು ನೀಗಿಸುವ, ಲೋಕರಕ್ಷಕ ತೋಳುಳ್ಳವ ಎನ್ನುವುದು ಈ ದಿವ್ಯ ನಾಮದ ಹಿಂದಿರುವ ಮೂಲ ಅರ್ಥ. ಇನ್ನು ಹೃಷೀಕಎಂದರೆ ಇಂದ್ರಿಯಗಳು. ಪಿಂಡಾಂಡದೊಳಗಿದ್ದು ಸರ್ವ ಇಂದ್ರಿಯಗಳನ್ನು ನಿಯಂತ್ರಿಸುವ ಭಗವಂತ ಹೃಷೀಕೇಶ. ಕೇಶಿಅಂದರೆ ಸೂರ್ಯಕಿರಣ; ವಾಯುದೇವರು(Ref: ಋಗ್ವೇದ ೧೦.೧೩೬.೦೭). ಸೌರಮಂಡಲದಲ್ಲಿದ್ದು; ತನ್ನ ಅಂತರಂಗದ ಭಕ್ತನಾದ ಪ್ರಾಣದೇವರಲ್ಲಿದ್ದು; ನಮ್ಮ ಅಭೀಷ್ಟವನ್ನು ಪೂರೈಸುವ, ನಮಗೆ ಶಕ್ತಿತುಂಬುವ ಭಗವಂತಕೇಶಿನಿಸೂದನ’. ಅವನು ಬ್ರಹ್ಮಾಂಡ ಮತ್ತು ಪಿಂಡಾಂಡದೊಳಗಿದ್ದು ಇಡೀ ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿ . (ಹೆಚ್ಚಿನ ಕಡೆ ಕೇಶಿನಿಷೂದನಎನ್ನುವ ಪದ ಬಳಕೆಯಲ್ಲಿದೆ, ಆದರೆ ಸರಿಯಾದ ಪದ ಕೇಶಿನಿಸೂದನ).
·  ಶ್ಲೋಕ - 02
ಭಗವಾನುವಾಚ ।
ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ ।
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ ॥೨॥
ಭಗವಾನ್ ಉವಾಚ- ಭಗವಂತ ಹೇಳಿದನು :ಕಾಮ್ಯಾನಾಮ್ ಕರ್ಮಣಾಮ್ ನ್ಯಾಸಮ್ ಸಂನ್ಯಾಸಂ ಕವಯಃ ವಿದುಃ ।
ಸರ್ವಕರ್ಮಫಲ ತ್ಯಾಗಮ್ ಪ್ರಾಹುಃ ತ್ಯಾಗಂ ವಿಚಕ್ಷಣಾಃ ಕಾಮ್ಯ ಕರ್ಮಗಳನ್ನು ತೊರೆಯುವುದನ್ನು ಬಲ್ಲವರು ಸಂನ್ಯಾಸಎನ್ನುತ್ತಾರೆ. ಎಲ್ಲ ಕರ್ಮಗಳ ಫಲವನ್ನಷ್ಟೆ ತೊರೆಯುವುದನ್ನು ತಿಳಿದವರು ತ್ಯಾಗಎನ್ನುತ್ತಾರೆ.
ಇಲ್ಲಿ ಹೇಳುವ ಸಂನ್ಯಾಸ ಗೃಹಸ್ಥರನ್ನೂ ಒಳಗೊಂಡು ಎಲ್ಲ ಸಾಧಕರಿಗೂ ಅನ್ವಯವಾಗುವ ಸಂನ್ಯಾಸ. ಸಂನ್ಯಾಸದಲ್ಲಿ ಎರಡು ವಿಧ. ಒಂದು ಕರ್ಮದ ಫಲವನ್ನು ಬಿಡುವುದು, ಇನ್ನೊಂದು ಬಯಕೆಗಳಿಂದ ಪ್ರೇರಿತವಾದ ಕರ್ಮವನ್ನೇ ತ್ಯಾಗ ಮಾಡುವುದು. ಇಲ್ಲಿ ತ್ಯಾಗ ಎಂದರೆ ಕರ್ಮವನ್ನು ತ್ಯಾಗ ಮಾಡುವುದಲ್ಲ, ಬದಲಿಗೆ ಯಾವ ಕರ್ಮವೇ ಇರಲಿ, ಅದನ್ನು ಮಾಡಿ-ಯಾವುದೇ ಫಲನ್ನು ಬಯಸದೇ ಇರುವುದು. ಆದ್ದರಿಂದ ಕರ್ಮತ್ಯಾಗ ಅಂದರೆ: ವೇದಾಧ್ಯಯನ ಬಿಡುವುದು, ಸಂಧ್ಯಾವಂದನೆ ಬಿಡುವುದು, ವೃತಾನುಷ್ಠಾನ ಇತ್ಯಾದಿಯನ್ನು ಬಿಡುವುದು ಎಂದಲ್ಲ. ಬದಲಿಗೆ ಸತ್ಕರ್ಮವನ್ನು ಮಾಡಿ ಅದರ ಫಲವನ್ನು ಬಯಸದೇ ಇರುವುದು ಎಂದರ್ಥ. ಯಾವ ಕರ್ಮವೇ ಇರಲಿ ಅದನ್ನು ಭಗವದ್ ಪ್ರೀತ್ಯರ್ತ ಮಾಡು-ಫಲ ಬಯಕೆಯಿಂದಲ್ಲ.
ಇಲ್ಲಿ ಕವಯಃ ಮತ್ತು ವಿಚಕ್ಷಣಾಃ ಎನ್ನುವ ಎರಡು ವಿಶೇಷ ಪದಗಳನ್ನು ಬಳಸಲಾಗಿದೆ. ಶಬ್ದಾರ್ಥದ ಸಂಬಂಧವನ್ನು ತಿಳಿದವರು-ಕವಿಗಳು; ಶಬ್ದಾರ್ಥವನ್ನು ತಿಳಿದು ಅದನ್ನು ಅನುಭವಿಸಿ ಆಚರಿಸುವವರು ವಿಚಕ್ಷಣರು. ಕವಿಗಳು ಮತ್ತು ವಿಚಕ್ಷಣರು ಸಂನ್ಯಾಸ ಮತ್ತು ತ್ಯಾಗಕ್ಕೆ ಈ ವಿವರಣೆಯನ್ನು ಕೊಡುತ್ತಾರೆಎಂದಿದ್ದಾನೆ ಕೃಷ್ಣ.
·  ಶ್ಲೋಕ - 03
ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ
ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ ॥೩॥
ತ್ಯಾಜ್ಯಂ ದೋಷವತ್ ಇತಿ ಏಕೇ ಕರ್ಮ ಪ್ರಾಹುಃ ಮನೀಷಿಣಃ
ಯಜ್ಞದಾನತಪಃಕರ್ಮ ನ ತ್ಯಾಜ್ಯಮ್ ಇತಿ ಚ ಅಪರೇ ದೋಷವುಳ್ಳ ಕರ್ಮವನ್ನು ತೊರೆಯಬೇಕು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಬಾರದು ಎನ್ನುತ್ತಾರೆ ಮತ್ತೆ ಕೆಲವರು.
ಕರ್ಮತ್ಯಾಗದ ಬಗ್ಗೆ ಒಂದೊಂದು ಶಾಸ್ತ ಒಂದೊಂದು ರೀತಿ ಹೇಳಿದಂತೆ ನಮಗೆ ಕಾಣುತ್ತದೆ. ಆದರೆ ಎಲ್ಲಾ ಶಾಸ್ತ್ರಗಳ ಅಂತರಂಗದ ತಿರುಳು ಒಂದೆ. ತ್ಯಾಗ ಅಂದರೆ ಏನು ಎನ್ನುವುದು ತಿಳಿದಾಗ ಇದು ಸ್ಪಷ್ಟವಾಗುತ್ತದೆ. ತಿಳಿದ ಬುದ್ಧಿವಂತರು ಹೇಳುತ್ತಾರೆ: ಕರ್ಮವನ್ನು ಬಿಡಬೇಕುಎಂದು. ಇನ್ನು ಕೆಲವು ವೇದಾನುಯಾಯಿಗಳು ಹೇಳುತ್ತಾರೆ:ಯಜ್ಞ-ದಾನ-ತಪಸ್ಸನ್ನು ಮಾಡಬೇಕುಎಂದು. ನಿನ್ನ ಉಸಿರಿರುವ ತನಕ ಅಗ್ನಿಹೊತ್ರದಿಂದ ಭಗವಂತನನ್ನು ಆರಾಧಿಸುಎನ್ನುತ್ತದೆ-ಯಜುರ್ವೇದ. ಇಲ್ಲಿ ಹೇಳಿದ ವಿಷಯ ಸರಿಯಾಗಿ ಅರ್ಥವಾಗಬೇಕಾದರೆ ನಾವು ತ್ಯಾಗ ಪದದ ಅರ್ಥವನ್ನು ವಿವಿಧ ಮುಖದಲ್ಲಿ ನೋಡಬೇಕು. ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಇದರ ಸುಂದರ ವಿವರಣೆಯನ್ನು ಕೊಟ್ಟಿದ್ದಾನೆ.
·  ಶ್ಲೋಕ - 04
ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ ॥೪॥
ನಿಶ್ಚಯಮ್ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗಃ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ -- ಭರತಸತ್ತಮ, ಅದರಲ್ಲಿ ತ್ಯಾಗದ ಬಗ್ಗೆ ನನ್ನ ನಿರ್ಧಾರ ಕೇಳು. ಪುರುಷವ್ಯಾಘ್ರ, ಮೂರು ಬಗೆಯ ತ್ಯಾಗ ಉಕ್ತವಾಗಿದೆ.
ತ್ಯಾಗದ ವಿಷಯದಲ್ಲಿ ನಿಶ್ಚಿತವಾದ ಅಭಿಪ್ರಾಯವನ್ನು ನಿನಗೆ ಹೇಳುತ್ತೇನೆಎನ್ನುತ್ತಾನೆ ಕೃಷ್ಣ. ಹೇಗೆ ಯಜ್ಞ-ದಾನ-ತಪಸ್ಸು ಮೂರು ವಿಧವೋ ಹಾಗೇ ತ್ಯಾಗವೂ ಕೂಡ ಮೂರು ವಿಧ. ಅದನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ಭರತಸತ್ತಮ ಮತ್ತು ಪುರುಷವ್ಯಾಘ್ರ ಎಂದು ಸಂಬೋಧಿಸಿದ್ದಾನೆ. ಭರತವಂಶದ ಅರಸರ ಮಾಲಿಕೆಯಲ್ಲಿ ಗಣ್ಯನಾದ್ದರಿಂದ ಅರ್ಜುನ ಭರತಸತ್ತಮ-ಇದು ಮೇಲ್ನೋಟದ ಅರ್ಥ. ಭಗವಂತನಲ್ಲಿ ಮತ್ತು ಜ್ಞಾನದಲ್ಲಿ ರತನಾದವ, ಭಕ್ತಿ ಉಳ್ಳವ ಭರತಸತ್ತಮ ಎನ್ನುವುದು ಈ ಸಂಬೋಧನೆಯ ಅಂತರಂಗದ ಅರ್ಥ. ಅದೇ ರೀತಿ ಪುರುಷವ್ಯಾಘ್ರ ಎಂದರೆ ಪುರುಷಶ್ರೇಷ್ಠ ಎಂದರ್ಥ. ಭಗವಂತನ ಕಡೆಗೆ ತಮ್ಮ ಮನಸ್ಸನ್ನು ಹರಿಯಗೊಟ್ಟವರು ಪುರುಷರು. ಅವರಲ್ಲಿ ಶ್ರೇಷ್ಠ-ಪುರುಷಶ್ರೇಷ್ಠ. ಅಂದರೆ ಜ್ಞಾನಿಗಳಲ್ಲಿ ಶ್ರೇಷ್ಠ ಎಂದರ್ಥ. ನಾವೂ ಕೂಡ ನಮ್ಮ ಜೀವನದಲ್ಲಿ ಭರತಸತ್ತಮರು, ಪುರುಷವ್ಯಾಘ್ರರು ಆಗಬೇಕು. ಆಗ ಭಗವಂತನ ಸಂದೇಶ ನಮಗೆ ತಲುಪುತ್ತದೆ.
·  ಶ್ಲೋಕ - 05
ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ ॥೫॥
ಯಜ್ಞ ದಾನ ತಪಃ ಕರ್ಮ ನ ತ್ಯಾಜ್ಯಮ್ ಕಾರ್ಯಮ್ ಏವ ತತ್
ಯಜ್ಞಃ ದಾನಮ್ ತಪಃ ಚ ಏವ ಪಾವನಾನಿ ಮನೀಷಿಣಾಮ್ ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಲಾಗದು. ಅದನ್ನು ಮಾಡಲೇಬೇಕು. ಯಜ್ಞ, ದಾನ, ತಪಸ್ಸು ಜ್ಞಾನಿಗಳನ್ನು ಪಾವನಗೊಳಿಸುತ್ತದೆ.
ಯಾವಾಗಲೂ ಭಗವಂತನ ಆರಾಧನಾ ರೂಪವಾದ ಯಜ್ಞ, ದಾನ, ತಪವನ್ನು ಬಿಡಬಾರದು. ಅದನ್ನು ಮಾಡಲೇಬೇಕು. ಇದಕ್ಕಿಂತ ಮಂಗಳವಾದ ಸಂಗತಿ ಇನ್ನೊಂದಿಲ್ಲ. ಇವು ಮೂರು ಕೂಡ ನಮ್ಮ ಬದುಕನ್ನು ಪವಿತ್ರಗೊಳಿಸುವ ಕ್ರಿಯೆಗಳು. ಇದಕ್ಕಿಂತ ಹೆಚ್ಚು ಪವಿತ್ರವಾದ ಕ್ರಿಯೆ ಇನ್ನೊಂದು ಜಗತ್ತಿನಲ್ಲಿಲ್ಲ. ಇತರ ಎಲ್ಲ ಕ್ರಿಯೆಗಳೂ ಈ ಮೂರು ಕ್ರಿಯೆಯಲ್ಲಿ ಅಂತರ್ಭಾವವಾಗಿರುತ್ತವೆ. ಆದ್ದರಿಂದ ನಮ್ಮ ಜೀವನದ ಪ್ರತಿಯೊಂದು ಕ್ರಿಯೆ ಕೂಡ ಯಜ್ಞ-ದಾನ-ತಪವಾಗಬೇಕು.
·  ಶ್ಲೋಕ - 06
ಏತಾನ್ಯಪಿತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ ॥೬॥
ಏತಾನಿ ಅಪಿ ತು ಕರ್ಮಾಣಿ ಸಂಗಮ್ ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನಿ ಇತಿ ಮೇ ಪಾರ್ಥ ನಿಶ್ಚಿತಮ್ ಮತಮ್ ಉತ್ತಮಮ್ ಆದರೆ, ಪಾರ್ಥ, ಕರ್ಮಗಳನ್ನು ಮಮತೆ ತೊರೆದು, ಫಲದ ಹಂಬಲ ತೊರೆದು ಮಾಡಬೇಕು ಎನ್ನುವುದು ನನ್ನ ಖಚಿತವಾದ ಮತ್ತು ಹಿರಿದಾದ ಆಶಯ.
ಕರ್ಮ ಮಾಡುವಾಗ ಅದರಲ್ಲಿ ಬರುವ ಮೂಲ ದೋಷ ನಾನು ಮಾಡಿದೆ, ನನ್ನಿಂದಾಯಿತು' ಎನ್ನುವ ಅಹಂಕಾರ. ಇದರ ಜೊತೆಗೆ ದೇವರ ಬಳಿ ನಮ್ಮ ಫಲಕಾಮನೆಯ ಪಟ್ಟಿ ಕೊಟ್ಟು ಫಲಾಪೇಕ್ಷೆಯಿಂದ ಕರ್ಮ ಮಾಡುವುದು. ಇವು ಕರ್ಮದಲ್ಲಿನ ಮಹಾದೋಷ. ಅಹಂಕಾರದಿಂದ ಕರ್ಮ ಮಾಡಿದರೆ ಅದು ವ್ಯರ್ಥಏಕೆಂದರೆ ಅಹಂಕಾರವಿದ್ದೆಡೆಗೆ ಭಗವಂತ ಬರಲಾರ. ಇನ್ನು ನಾವು ಫಲದ ಅಸೆಯಿಂದ ಕರ್ಮ ಮಾಡುವುದು. ಫಲದಾಸೆಯಿಂದ ಕರ್ಮ ಮಾಡಿ ಒಂದು ವೇಳೆ ನಾವು ಬಯಸಿದ ಫಲ ನೆರವೇರದಿದ್ದರೆ, ಆಗ ನಮಗೆ ಆ ಕರ್ಮದಲ್ಲಿ ಆಸಕ್ತಿ ದೂರವಾಗುತ್ತದೆ. ದೇವರ ಬಗ್ಗೆ ವೈರತ್ವ ಉಂಟಾಗುತ್ತದೆ. ಇದು ಫಲಾಪೇಕ್ಷೆಯಿಂದ ಕರ್ಮ ಮಾಡುವುದರಿಂದ ಆಗುವ ಅನಾಹುತ. ಇದು ನನ್ನ ನಿಶ್ಚಿತವಾದ ಅಭಿಪ್ರಾಯ. ನೀನು ಬಿಡಬೇಕಾದದ್ದು ಕರ್ಮವನ್ನಲ್ಲ, ಬದಲಿಗೆ ಕರ್ಮಫಲವನ್ನು ಮತ್ತು ನಾನು ಮಾಡಿದೆ ಎನ್ನುವ ಆಸಕ್ತಿ-ಅಹಂಕಾರವನ್ನುಎನ್ನುತ್ತಾನೆ ಕೃಷ್ಣ. ಇದು ಕರ್ಮ ಸಿದ್ಧಾಂತದ ಅತ್ಯಂತ ಶ್ರೇಷ್ಠ ತೀರ್ಮಾನ. ಅಹಂಕಾರವನ್ನು, ಕಾಮ್ಯಕರ್ಮವನ್ನು(ಫಲಕ್ಕಾಗಿಯೇ ಕರ್ಮ ಮಾಡುವುದನ್ನು) ಮತ್ತು ಕರ್ಮದಲ್ಲಿ ಫಲವನ್ನು ಬಯಸುವುದನ್ನು-ಬಿಡುವುದು ನಿಜವಾದ ತ್ಯಾಗ ಹೊರತು, ನಿಯತಕರ್ಮವನ್ನು ಬಿಡುವುದಲ್ಲ. ಇದು ನಿಶ್ಚಿತವಾದ ಸಿದ್ಧಾಂತ.
·  ಶ್ಲೋಕ - 07
ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ
ಮೋಹಾತ್ ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ ೭॥
ನಿಯತಸ್ಯ ತು ಸಂನ್ಯಾಸಃ ಕರ್ಮಣಃ ನ ಉಪಪದ್ಯತೇ
ಮೋಹಾತ್ ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ ವಿಹಿತವಾದ ಕರ್ಮವನ್ನು ತೊರೆಯುವುದು ತರವಲ್ಲ. ಅರಿವುಗೆಟ್ಟು ಅದನ್ನು ತೊರೆವುದು ತಾಮಸ ತ್ಯಾಗ ಎನಿಸುತ್ತದೆ.
ಯಾವ ಕಾಲಕ್ಕೂ ನಾವು ನಮ್ಮ ನಿಯತಕರ್ಮವನ್ನು ತೊರೆಯಬಾರದು. ಒಂದು ವೇಳೆ ತಪ್ಪು ತಿಳುವಳಿಕೆಯಿಂದ ನಿಯತ ಕರ್ಮವನ್ನು ಬಿಟ್ಟರೆ ಆಗ ಅದು ತಾಮಸ ತ್ಯಾಗ ಎನಿಸುತ್ತದೆ. ಇಲ್ಲಿನಿಯತಕರ್ಮಎಂದರೆ ನಮ್ಮ ಜೀವಯೋಗ್ಯತೆಗೆ ಯಾವುದು ನಿಯತವೋ ಆ ಕರ್ಮ. ನಮಗೆ ತಿಳಿದಂತೆ ಎಲ್ಲ ಕರ್ಮವನ್ನು ಎಲ್ಲರೂ ಮಾಡುವಂತಿಲ್ಲ. ಉದಾಹರಣೆಗೆ ಯಜ್ಞ: ಯತಿಗಳು ಅಗ್ನಿಮುಖದಲ್ಲಿ ಆಹುತಿ ನೀಡುವಂತಿಲ್ಲ; ಬ್ರಹ್ಮಚಾರಿಗಳು ಪೂರ್ಣಪ್ರಮಾಣದ ಅಗ್ನಿಹೋತ್ರ ಮಾಡುವಂತಿಲ್ಲ. ಆದರೆ ಯತಿಗಳು ಜ್ಞಾನಯಜ್ಞ ಮಾಡಬಹುದು ಅದು ಅವರ ನಿಯತಕರ್ಮ. ಎಲ್ಲ ಕಾಲದಲ್ಲೂ ಎಲ್ಲರೂ ಮಾಡಬಹುದಾದ ಯಜ್ಞ ನಾಮಯಜ್ಞ’. ಅಂದರೆ ಭಗವಂತನ ನಾಮ ಸ್ಮರಣೆ. ಇದು ಯಜ್ಞದಲ್ಲಿ ಎಲ್ಲರಿಗೂ ಅನ್ವಯಿಸುವ ನಿಯತಕರ್ಮ. ಇನ್ನು ದಾನ: ಬ್ರಹ್ಮಚಾರಿಗಳು ಕನ್ಯಾದಾನ ಮಾಡಲಾಗುವುದಿಲ್ಲ, ಅದನ್ನು ಗೃಹಸ್ಥ ಮಾಡಬೇಕು. ಗೃಹಸ್ಥನಿಗೆ ಕನ್ಯಾದಾನ ನಿಯತಕರ್ಮ. ಎಲ್ಲರೂ ಮಾಡಬಹುದಾದ ದಾನ-ಅಭಯದಾನ ಮತ್ತು ಜ್ಞಾನದಾನ. ಮೂರನೆಯದು ತಪಸ್ಸು: ಕೆಲವು ತಪಸ್ಸನ್ನು ಎಲ್ಲರೂ ಮಾಡಲಾಗುವುದಿಲ್ಲ. ಅದಕ್ಕೆ ವೇದಧೀಕ್ಷೆ ಬೇಕಾಗಬಹುದು. ಆದರೆ ಎಲ್ಲರೂ ಮಾಡಬಹುದಾದ ತಪಸ್ಸು ಎಂದರೆ ಉಪವಾಸಾದಿ ವೃತಾನುಷ್ಠಾನಗಳು. ಈ ತಪಸ್ಸನ್ನು ಮನುಷ್ಯ ಮಾತ್ರದವರು ಮಾಡಬಹುದು. ಹೀಗೆ ಯಾರಿಗೆ ಯಾವ ಕರ್ಮ ನಿಯತವೋ ಆ ಕರ್ಮವನ್ನು ಮಾಡಬೇಕು. ನಿಯತ ಕರ್ಮದಲ್ಲಿ ಫಲಾಪೇಕ್ಷೆಯ ಪ್ರಶ್ನೆಯೇ ಇಲ್ಲ. ತಪ್ಪು ತಿಳುವಳಿಕೆಯಿಂದ ನಿಯತಕರ್ಮವನ್ನು ಬಿಟ್ಟರೆ ಅದು ತಾಮಸ ತ್ಯಾಗ ಎನಿಸುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಈ ಶ್ಲೋಕದ ಮೂಲಕ ಕೊಟ್ಟಿದ್ದಾನೆ.
·  ಶ್ಲೋಕ - 08
ದುಃಖಮಿತ್ಯೇವ ಯತ್ ಕರ್ಮ ಕಾಯಕ್ಲೇಶಭಯಾತ್ ತ್ಯಜೇತ್ ।
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ ೮॥
ದುಃಖಮ್ ಇತಿ ಏವ ಯತ್ ಕರ್ಮ ಕಾಯ ಕ್ಲೇಶ ಭಯಾತ್ ತ್ಯಜೇತ್ ।
ಸ ಕೃತ್ವಾ ರಾಜಸಮ್ ತ್ಯಾಗಮ್ ನ ಏವ ತ್ಯಾಗ ಫಲಮ್ ಲಭೇತ್ ಮಾಡುವುದಕ್ಕೆ ಮೈಬಗ್ಗದೆ, ಬಗೆಯೊಗ್ಗದೆ, ಕಷ್ಟವಾಗುತ್ತದೆ ಎಂದು ಮಾಡದೆ ಇರುವುದು ರಾಜಸ ತ್ಯಾಗ. ಇಂಥ ತ್ಯಾಗ ಮಾಡಿಯೂ ತ್ಯಾಗದ ಫಲ ದೊರೆಯದು.
ನಮಗೆ ನಮ್ಮ ನಿಯತಕರ್ಮ ಮಾಡಬೇಕು ಎನ್ನುವುದು ಗೊತ್ತಿದ್ದೂ, ಮನಸ್ಸಿಗೆ ದೇಹಕ್ಕೆ ನೋವಾಗುತ್ತದೆ ಎನ್ನುವ ಕಾರಣಕ್ಕಾಗಿ ಕರ್ಮವನ್ನು ಮಾಡದೆ ಬಿಡುವುದು ರಾಜಸ ತ್ಯಾಗ ಎನಿಸುತ್ತದೆ. ಉದಾಹರಣೆಗೆ ಯಾವುದೋ ದೂರದರ್ಶನದ ದಾರಾವಾಹಿಯನ್ನು ನೋಡಬೇಕು ಎನ್ನುವ ಮನಸ್ಸಿನ ಉತ್ಕಟ ಬಯಕೆಯಿಂದ ಕರ್ಮವನ್ನು ಕೈಬಿಡುವುದು, ಚಳಿಯಾಗುತ್ತದೆ ಎಂದು ಸಂಧ್ಯಾವಂದನೆ ಮಾಡದೇ ಇರುವುದು, ಇತ್ಯಾದಿ ರಾಜಸ ತ್ಯಾಗ. ಇಂಥಹ ರಾಜಸ ತ್ಯಾಗ ಮಾಡಿದರೆ ನಿಜವಾದ ತ್ಯಾಗದ ಫಲ ಸಿಗದು.
·  ಶ್ಲೋಕ - 09
ಕಾರ್ಯಮಿತ್ಯೇವ ಯತ್ ಕರ್ಮ ನಿಯತಂ ಕ್ರಿಯತೇSರ್ಜುನ
ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ ೯॥
ಕಾರ್ಯಮ್ ಇತಿ ಏವ ಯತ್ ಕರ್ಮ ನಿಯತಮ್ ಕ್ರಿಯತೇ ಅರ್ಜುನ
ಸಂಗಂ ತ್ಯಕ್ತ್ವಾ ಫಲಂ ಚ ಏವ ಸಃ ತ್ಯಾಗಃ ಸಾತ್ತ್ವಿಕಃ ಮತಃ ಅರ್ಜುನ, ಕರ್ತವ್ಯ ದೃಷ್ಟಿಯಿಂದ ವಿಹಿತ ಕರ್ಮವನ್ನು ಮಾಡುತ್ತಲೆ ಮಮತೆಯನ್ನೂ ಫಲದ ಹಂಬಲವನ್ನೂ ತೊರೆಯುವುದು ಸಾತ್ತ್ವಿಕ ತ್ಯಾಗ ಎನಿಸುತ್ತದೆ.
ನಿಯತಕರ್ಮವನ್ನು ಮಾಡದೇ ಇರಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ನಮ್ಮ ಮನಸ್ಸು ತಲುಪಬೇಕು. ಈ ರೀತಿ ಸತ್ತ್ವಗುಣ ಮನಸ್ಸಿನಲ್ಲಿ ತುಂಬಿದಾಗ(ಅರ್ಜುನರಾದಾಗ)ಯಾವ ಕರ್ಮವನ್ನೂ ಬಿಡಲು ನಮಗೆ ಮನಸ್ಸಾಗುವುದಿಲ್ಲ. ಅಲ್ಲಿ ಫಲದ ಬಯಕೆ ಇರುವುದೇ ಇಲ್ಲ. ಸದಾ ಭಗವದರ್ಪಣ ಭಾವನೆಯಲ್ಲಿ ಖುಷಿಯಿಂದ ಕರ್ಮ ಮಾಡುವುದು; ಯಾವುದೇ ಅಹಂಕಾರ ಇಲ್ಲದೆ ಇರುವುದು; ಎಲ್ಲ ಕರ್ಮದ ಮಹತ್ವ ತಿಳಿದು ನಿಯತವಾಗಿ ಕರ್ಮ ಮಾಡುವುದು- ಸಾತ್ತ್ವಿಕತ್ಯಾಗ. ಇಲ್ಲಿ ತ್ಯಾಗ ಮಾಡುವುದು ಕರ್ಮವನ್ನಲ್ಲ ಬದಲಿಗೆ ಕರ್ಮ ಫಲವನ್ನು. ಹೀಗೆ ನಮ್ಮಲ್ಲಿರುವ ಗೊಂದಲಗಳಿಗೆ ಕೃಷ್ಣ ಅತ್ಯಂತ ಸರಳವಾದ ಉತ್ತರ ಕೊಟ್ಟ. ಒಟ್ಟಿನಲ್ಲಿ ಹೇಳಬೇಕೆಂದರೆ: ಫಲಾಪೇಕ್ಷೆ ಇಲ್ಲದೆ ಅಹಂಕಾರ ತೊರೆದು ನಿಯತಕರ್ಮವನ್ನು ಮಾಡುವುದು ಸಾತ್ತ್ವಿಕ ತ್ಯಾಗ; ಸೋಮಾರಿತನದಿಂದ ಕಷ್ಟವಾಗುತ್ತದೆ ಎಂದು ನಿಯತಕರ್ಮವನ್ನು ಬಿಡುವುದು ರಾಜಸ ತ್ಯಾಗ ಮತ್ತು ತಪ್ಪು ತಿಳುವಳಿಕೆಯಿಂದ, ‘ಎಲ್ಲವೂ ಮೂಢನಂಬಿಕೆಎಂದು ನಿಯತಕರ್ಮವನ್ನು ಮಾಡದೇ ಬಿಡುವುದು ತಾಮಸ ತ್ಯಾಗ.
·  ಶ್ಲೋಕ - 10
ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಛಿನ್ನಸಂಶಯಃ ೧೦॥
ನ ದ್ವೇಷ್ಟಿ ಅಕುಶಲಮ್ ಕರ್ಮ ಕುಶಲೇ ನ ಅನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟಃ ಮೇಧಾವೀ ಛಿನ್ನಸಂಶಯಃ ಮುದ ನೀಡದ ಕರ್ಮದ ಬಗ್ಗೆ ಹಗೆಯೂ ಇಲ್ಲ, ಮುದ ನೀಡುವ ಕರ್ಮದ ಬಗ್ಗೆ ಅತಿಯಾದ ನಂಟೂ ಇಲ್ಲ. ಇಂಥವನು ಸಾತ್ವಿಕ-ತ್ಯಾಗಿ. ಅವನು ತಿಳಿದವನು ಮತ್ತು ಸಂದೇಹವಳಿದವನು.
ಈ ಶ್ಲೋಕ ಒಬ್ಬ ಸಾತ್ವಿಕ ತ್ಯಾಗಿ ಯಾವ ರೀತಿ ತನ್ನ ಕರ್ಮಗಳನ್ನು ನೋಡುತ್ತಾನೆ ಎನ್ನುವುದನ್ನು ಹೇಳುತ್ತದೆ. ನಾವು ಮಾಡಿದ ಹಿಂದಿನ ಯಾವುದೋ ಒಂದು ಕರ್ಮದಿಂದ ಇಂದು ಕೆಟ್ಟ ಪರಿಣಾಮ ಆಗುತ್ತಿದ್ದರೆ, ಅಥವಾ ಹಿಂದೆ ಮಾಡಿದ ಇನ್ಯಾವುದೋ ಕರ್ಮದಿಂದ ಒಳ್ಳೆಯದು ಆಗುತ್ತಿದ್ದರೆ, ಸಾತ್ವಿಕ ತ್ಯಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆತ ಒಳ್ಳೆಯದಾಯಿತು ಎಂದು ಹಾರಾಡುವುದಿಲ್ಲ, ಕೆಟ್ಟದ್ದಾಯಿತು ಎಂದು ಕುಸಿಯುವುದಿಲ್ಲ. ಈತ ದುಃಖಕಾರವಾದ ಕರ್ಮವನ್ನು ದ್ವೇಷಿಸುವುದೂ ಇಲ್ಲ. ಔಷಧಿ ಹೇಗೆ ಕಹಿ ಇರುತ್ತದೋ ಹಾಗೇ ಸತ್ಕರ್ಮ ಕಿಂಚಿತ್ ದುಃಖಕರವಾದಾಗ ಅದರ ಬಗ್ಗೆ ಆತ ಚಿಂತೆ ಮಾಡುವುದಿಲ್ಲ. ಸಾತ್ವಿಕ ತ್ಯಾಗಿಯ ಮನಸ್ಸು ಸತ್ತ್ವಗುಣದಲ್ಲಿ ತುಂಬಿರುತ್ತದೆ. ಅವನಿಗೆ ತಾಮಸ-ರಾಜಸ ಚಿಂತೆಗಳೇ ಬರುವುದಿಲ್ಲ. ಬಲಜ್ಞಾನಗಳಿಂದ ಪರಿಪೂರ್ಣನಾದ ಭಗವಂತನಲ್ಲಿ ಎಲ್ಲವನ್ನು ಅರ್ಪಿಸಿ ಆತ ಕರ್ಮ ಮಾಡುತ್ತಿರುತ್ತಾನೆ. ಇದರಿಂದ ಆತನ ಮನಸ್ಸು ಪೂರ್ಣವಾಗಿ ಭಗವಂತನಲ್ಲಿ ಸಮಾವಿಷ್ಟವಾಗಿರುತ್ತದೆ. ಮೇಧಾವಿಯಾಗಿರುವ ಈತನಿಗೆ ತನ್ನ ಬದುಕಿನ ಪ್ರತೀ ನಡೆಯ ಎಚ್ಚರವಿರುತ್ತದೆ. ಭಗವಂತನಲ್ಲಿ ನೆಲೆಗೊಂಡ ಇಂಥವರ ಮನಸ್ಸಿಗೆ ಎಂದೂ ಯಾವ ಗೊಂದಲವೂ ಸುಳಿಯುವುದಿಲ್ಲ. ಇಂಥವರ ಜೀವನದ ನಡೆ ನೋಡಲು ಸಾಮಾನ್ಯವಾಗಿರುತ್ತದೆ ಆದರೆ ಅವರ ಕ್ರಿಯೆಯ ಹಿಂದಿನ ಅನುಸಂಧಾನ ಮಾತ್ರ ಭಿನ್ನವಾಗಿರುತ್ತದೆ. ಇವರು ಭಗವಂತ ನೀನು ಮಾಡಿಸುತಿದ್ದಿ-ನಾನು ಮಾಡುತ್ತಿದ್ದೇನೆಎನ್ನುವ ಅನುಸಂಧಾನದಿಂದ ತಮ್ಮ ಕರ್ಮವನ್ನು ಮಾಡುತ್ತಿರುತ್ತಾರೆ.
·  ಶ್ಲೋಕ - 11
ನಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ ।
ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ ೧೧॥
ನಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣಿ ಅಶೇಷತಃ ।
ಯಃ ತು ಕರ್ಮ ಫಲ ತ್ಯಾಗೀ ಸಃ ತ್ಯಾಗೀ ಇತಿ ಅಭಿಧೀಯತೇ ಶರೀರದಲ್ಲಿರುವಷ್ಟು ಕಾಲ ಕರ್ಮಗಳನ್ನು ಪೂರ್ತಿಯಾಗಿ ಬಿಡುವುದು ಸಾಧ್ಯವಿಲ್ಲ. ಕರ್ಮದ ಫಲವನ್ನು ತೊರೆದವನೆ ಕರ್ಮತ್ಯಾಗಿ.
ಮನುಷ್ಯನಾಗಿ ಹುಟ್ಟಿದ ಮೇಲೆ, ಹುಟ್ಟಿನಿಂದ ಸಾಯುವ ತನಕ ನಾವು ಕರ್ಮ ಮಾಡಲೇ ಬೇಕು. ಕರ್ಮವನ್ನೇ ಬಿಟ್ಟು ಬದುಕಲು ಸಾಧ್ಯವಿಲ್ಲ. ನಾವು ತೊರೆಯಬೇಕಾದದ್ದು ಕರ್ಮವನ್ನಲ್ಲ-ಕರ್ಮಫಲವನ್ನು. ಈ ರೀತಿ ಕರ್ಮ ಮಾಡಿಕೊಂಡು ಕರ್ಮಫಲ ತೊರೆದವನು ಕರ್ಮತ್ಯಾಗಿ ಎನಿಸುತ್ತಾನೆ.
·  ಶ್ಲೋಕ - 12
ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತ್ಯತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್ ॥೧೨॥
ಅನಿಷ್ಟಮ್ ಇಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತಿ ಅತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್ ಕರ್ಮದ ಫಲ ಮೂರು ತೆರ: ಬೇಕಾದ್ದು, ಬೇಡವಾದದ್ದು, ಮತ್ತು ಎರಡರ ಬೆರಕೆ. ಫಲತ್ಯಾಗ ಮಾಡದವರಿಗೆ ಇದು ಸತ್ತಮೇಲೆ ಸಲ್ಲುತ್ತದೆ. ಫಲದ ನಂಟು ತೊರೆದವರಿಗೆ ಇದು ಎಂದೂ ಸೋಕುವುದಿಲ್ಲ.
ಕರ್ಮ ಮಾಡುವುದರಿಂದ ಸುಖವಾಗಬಹುದು; ದುಃಖವಾಗಬಹುದು; ಅಥವಾ ಸುಖ-ದುಃಖದ ಬೆರಕೆಯ ಫಲ ಸಿಗಬಹುದು. ಕರ್ಮಫಲ ತ್ಯಾಗ ಮಾಡದೆ ಕರ್ಮ ಮಾಡುವವರಿಗೆ ಇದು ಸತ್ತ ಮೇಲೆ ಸಲ್ಲುತ್ತದೆ. ಇವರು ಕರ್ಮ ಮತ್ತು ಕರ್ಮ ಫಲದ ಸುಳಿಯಲ್ಲಿ ಸಿಲುಕಿ ಮತ್ತೆ ಸಂಸಾರ ಬಂಧದಲ್ಲಿ ಸಿಲುಕುತ್ತಾರೆ. ಆದರೆ ಕರ್ಮ ಫಲದ ಅಪೇಕ್ಷೆ ಇಲ್ಲದವರಿಗೆ ಇದು ಎಂದೂ ಸೋಕುವುದಿಲ್ಲ. ಅವರಿಗೆ ಏನು ಬಂದರೂ ಅದು ಭಗವಂತನ ಪ್ರಸಾದ. ಅದರಲ್ಲಿ ಬೇಕಾದ್ದು, ಬೇಡವಾದದ್ದು ಎನ್ನುವ ಭೇದವಿಲ್ಲ. ಇದು ಮೋಕ್ಷ ಮಾರ್ಗ. ಉದಾಹರಣೆಗೆ ರಾಜ್ಯದ, ಅಧಿಕಾರದ ಆಸೆಯಿಂದ, ಭಗವಂತನನ್ನು ಮರೆತು ಯುದ್ಧವನ್ನು ಮಾಡುವವ- ಯುದ್ಧದಲ್ಲಿ ನಡೆಯುವ ಪ್ರಾಣಹಾನಿಗೆ ಕಾರಣನಾಗುತ್ತಾನೆ. ಆತ ಈ ಪಾಪದ ಹೊರೆಯನ್ನು ಸತ್ತ ನಂತರ ಪಡೆಯಬೇಕಾಗುತ್ತದೆ. ಆದರೆ ಕರ್ತವ್ಯ ಕಾರಣಕ್ಕಾಗಿ ಯಾವುದೇ ಸ್ವಾರ್ಥವಿಲ್ಲದೆ ಎಲ್ಲವನ್ನು ಭಗವಂತನಿಗೆ ಅರ್ಪಿಸಿ ಯುದ್ಧ ಮಾಡುವವನಿಗೆ ಯಾವ ಪಾಪದ ಲೇಪವೂ ಅಂಟುವುದಿಲ್ಲ.
·  ಶ್ಲೋಕ - 13
ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್ ೧೩॥
ಪಂಚ ಏತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತ ಅಂತೇ ಪ್ರೋಕ್ತಾನಿ ಸಿದ್ಧಯೇ ಸರ್ವ ಕರ್ಮಣಾಮ್ ಎಲ್ಲ ಕಾರ್ಯಗಳು ಕೈಗೂಡಲು ಇವು ಐದು ಕಾರಣಗಳು. ಹೇ ಮಹಾಬಾಹೋ, ವೈದಿಕ ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಅವುಗಳನ್ನು ನನ್ನಿಂದ ತಿಳಿದುಕೋ :
ನಮ್ಮಲ್ಲಿ ಅನೇಕರಿಗೆ ಒಂದು ಪ್ರಶ್ನೆ ಇದೆ. ನಾವು ಮಾಡಿದ ಕೆಲಸವನ್ನು ನಾನು ಮಾಡಿದೆಅನ್ನುವುದರಲ್ಲಿ ತಪ್ಪೇನುಎಂದು. ಈ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಾದರೆ, ಒಂದು ಕ್ರಿಯೆ ನಡೆಯಬೇಕಾದರೆ ಆ ಕ್ರಿಯೆಯ ಹಿಂದೆ ಇರುವ ಐದು ಕಾರಣಗಳನ್ನು ತಿಳಿದುಕೊಳ್ಳಬೇಕು. ವೈದಿಕ ಸಾಂಖ್ಯ ಶಾಸ್ತ್ರದಲ್ಲಿ, ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಈ ಐದು ಕಾರಣಗಳನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ.
ಇಲ್ಲಿ ಕೃಷ್ಣ ಅರ್ಜುನನನ್ನು ಮಹಾಬಾಹೋ ಎಂದು ಸಂಬೋಧಿಸಿದ್ದಾನೆ. 'ಮಹಾ-ಬ' ಅಂದರೆ ಮಹತ್ತಾದ ಬಯಕೆಗಳು. ಅದನ್ನು ತ್ಯಾಗ ಮಾಡಿದವ-ಮಹಾಬಾಹು. ನಾವೆಲ್ಲರೂ ನಮ್ಮ ಜೀವನದಲ್ಲಿ ಕರ್ಮಫಲತ್ಯಾಗ ಮಾಡಿ, ಕೇವಲ ಭಗವದರ್ಪಣಾ ಭಾವದಿಂದ ಕರ್ಮ ಮಾಡುವುದನ್ನು ಕಲಿತುಕೊಂಡು-ಮಹಾಬಾಹುಗಳಾಗಬೇಕು ಎನ್ನುವುದು ಈ ಸಂಬೋಧನೆ ಹಿಂದಿರುವ ಧ್ವನಿ.
·  ಶ್ಲೋಕ - 14
ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ೧೪॥
ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಃ ಚ ಪೃಥಕ್ ಚೇಷ್ಟಾ ದೈವಂ ಚ ಏವ ಅತ್ರ ಪಂಚಮಮ್ ಕ್ರಿಯೆ ನಡೆಯುವ ತಾಣ, ಮಾಡುವ ಭಗವಂತ [ಜೀವ], ಬೇರೆಬೇರೆ ಉಪಕರಣಗಳು, ಬಗೆಬಗೆಯ ಪೂರಕ ಕ್ರಿಯೆಗಳು ಮತ್ತು ಐದನೆಯದಾದ ಅದೃಷ್ಟ[ಭಗವಂತ].
ಪ್ರತಿಯೊಂದು ಕ್ರಿಯೆ ನಡೆಯಲು ಐದು ಕಾರಣಗಳು:
(೧) ಅಧಿಷ್ಠಾನ: ಇಲ್ಲಿ ಅಧಿಷ್ಠಾನ ಎಂದರೆ ನೆಲೆ. ನಮ್ಮ ದೇಹವೇ ನಮ್ಮ ಅಧಿಷ್ಠಾನ. ಈ ಸಾಧನಾ ಶರೀರವಿಲ್ಲದೆ ಯಾವ ಕ್ರಿಯೆಯೂ ನಡೆಯುವುದಿಲ್ಲ. ನಿನಗೆ ದೊರೆತಿರುವ ಸಾಧನಾ ಶರೀರ ಆ ಭಗವಂತನ ಪ್ರಸಾದ.
(೨) ಕರ್ತಾ: ಶರೀರದಲ್ಲಿ ಕೂತು ನಮ್ಮ ಕ್ರಿಯೆಗಳನ್ನು ನಿಯಂತ್ರಿಸುವ ಭಗವಂತ ಕರ್ತಾ. ಆತ ಸ್ವತಂತ್ರ. ಆತನಿಗೆ ಅಧೀನವಾಗಿರುವ ಜೀವ(ನಾನು-Self) ಸ್ವತಂತ್ರನಲ್ಲ. ಆದರೆ ಜೀವನಿಗೆ ಇಚ್ಛಾಪೂರ್ವಕ ಕೃತಿ ಇದೆ.
(೩) ಕರಣಗಳು: ನಮ್ಮ ಇಂದ್ರಿಯಗಳು. ನಮ್ಮ ಇಂದ್ರಿಯಗಳನ್ನು ದೇವತೆಗಳು ನಿಯಂತ್ರಿಸುತ್ತಾರೆ. ಇಂದ್ರಿಯಗಳ ಒಡೆಯ ಭಗವಂತ(ಹೃಷೀಕೇಶ). ಇಂದ್ರಿಯಗಳು ನಮಗೆ ಭಗವಂತನ ಮಹಾ ಪ್ರಸಾದ.
(೪) ವಿವಿಧ ಪೂರಕ ಸಾಧನಗಳು: ಒಂದು ಕ್ರಿಯೆ ಆಗಬೇಕಾದರೆ ಅದಕ್ಕೆ ಪೂರಕವಾದ ಅನೇಕ ಪೂರಕ ಸಾಧನಗಳು ಅಗತ್ಯ.
(೫) ದೈವಂ: ನಮ್ಮ ಪ್ರತಿಯೊಂದು ಕ್ರಿಯೆ ಭಗವಂತನ ಸಂಕಲ್ಪವನ್ನು ಅವಲಂಭಿಸಿದೆ. ಇದನ್ನು ಅದೃಷ್ಟ, ಹಣೆಬರಹ ಎಂದೂ ಕರೆಯಬಹುದು.
ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ- ಒಬ್ಬ ಅತ್ಯುತ್ತಮ ಮಾತುಗಾರ. ಆತ ಅಷ್ಟೊಂದು ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುತ್ತಾನೆ. ಆತ ಹೀಗೆ ಮಾತನಾಡಬೇಕಾದರೆ ಆತ ಮೂಗನಾಗಿರಬಾರದು, ಬಾಯಿ ಇದ್ದರೆ ಸಾಲದು-ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು, ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು, ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದದ ಹುಟ್ಟಿಗೆ ಆಕಾಶ-ಗಾಳಿ ಮಾಧ್ಯಮ. ಈ ಎಲ್ಲ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೆ ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆ? ಹುಟ್ಟುವಾಗಲೇ ಮೂಗನಾಗಿ ಹುಟ್ಟಿದ್ದರೆ? ಜ್ಞಾನ ಪರಂಪರೆಯೇ ಇಲ್ಲದ ಮನೆತನದಲ್ಲಿ ಹುಟ್ಟಿದ್ದರೆ? ಇಲ್ಲಿ ನಮ್ಮ ಕೈವಾಡ ಏನಿದೆ? ಇದು ತಿಳಿದಾಗ ನಾನು ಮಾಡಿದೆಎನ್ನುವ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೆ ಇರಲು ಸಾಧ್ಯ.
·  ಶ್ಲೋಕ - 15
ಶರೀರವಾಙ್ಮನೋಭಿರ್ಯತ್ ಕರ್ಮ ಪ್ರಾರಭತೇ ನರಃ ।
ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ ೧೫॥
ಶರೀರ ವಾಕ್ ಮನೋಭಿಃ ಯತ್ ಕರ್ಮ ಪ್ರಾರಭತೇ ನರಃ ।
ನ್ಯಾಯ್ಯಂ ವಾ ವಿಪರೀತಂ ವಾ ಪಂಚ ಏತೇ ತಸ್ಯ ಹೇತವಃ ಮೈ-ಮಾತು-ಮನಗಳಿಂದ ಮನುಷ್ಯ ಯಾವ ಕೆಲಸ ಕೈಗೊಂಡರೂ ಅದು ಒಪ್ಪಿರಲಿ, ತಪ್ಪಿರಲಿ-ಇವು ಐದು ಅದಕ್ಕೆ ಕಾರಣಗಳು.
ಮೈ-ಮಾತು-ಮನಗಳಿಂದ ನಾವು ಯಾವ ಕ್ರಿಯೆ ಮಾಡಿದರೂ ಅದರ ಹಿಂದೆ ಮೇಲೆ ಹೇಳಿದ ಐದು ಕಾರಣಗಳಿರುತ್ತವೆ. ಆ ಕ್ರಿಯೆ ಒಳ್ಳೆಯದಿರಬಹುದು ಅಥವಾ ಕೆಟ್ಟದ್ದಿರಬಹುದು. ಕ್ರಿಯೆ ಮಾತ್ರ ಈ ಐದು ಕಾರಣಗಳಿಂದಲೇ ನಡೆಯುವುದು.
·  ಶ್ಲೋಕ - 16
ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ
ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ ॥೧೬॥
ತತ್ರ ಏವಂ ಸತಿ ಕರ್ತಾರಮ್ ಆತ್ಮಾನಂ ಕೇವಲಂ ತು ಯಃ
ಪಶ್ಯತಿ ಅಕೃತ ಬುದ್ಧಿತ್ವಾತ್ ನ ಸಃ ಪಶ್ಯತಿ ದುರ್ಮತಿಃ ಅದು ಹೀಗಿರುತ, ಏನೂ ಮಾಡದ ತನ್ನನ್ನುಮಾಡುವವನುಎಂದು [ತಾನೊಬ್ಬನೇ ಎಲ್ಲ ಮಾಡಿದವನು ಎಂದು] ತಿಳಿದವನು ಬುದ್ಧಿಗೇಡಿ. ಆ ತಿಳಿಗೇಡಿಗಳಿಗೆ ಏನೂ ತಿಳಿದಿಲ್ಲ.
ಈ ರೀತಿ ಐದು ಕಾರಣಗಳು ನಮ್ಮ ಕ್ರಿಯೆಯಲ್ಲಿ ಪಾತ್ರಧಾರಿಗಳಾಗಿರುವಾಗ, ಅದನ್ನು ಅರಿಯದೆ, “ನಾನು ಮಾಡಿದೆಎಂದು ಅಹಂಕಾರ ಪಟ್ಟುಕೊಳ್ಳುವುದು ಅರ್ಥಶೂನ್ಯ. ಈ ರೀತಿ ತಿಳಿದುಕೊಳ್ಳುವವರು ಬುದ್ಧಿಗೇಡಿಗಳು. ಇಂಥಹ ಮತಿಗೇಡಿಗಳು ಏನನ್ನೂ ತಿಳಿದಿಲ್ಲ.
·  ಶ್ಲೋಕ - 17
ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ
ಹತ್ವಾSಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ ೧೭॥
ಯಸ್ಯ ನ ಅಹಂಕೃತಃ ಭಾವಃ ಬುದ್ಧಿಃ ಯಸ್ಯ ನ ಲಿಪ್ಯತೇ
ಹತ್ವಾ ಅಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ ನಾನು ಮಾಡಿದೆ ಎಂಬ ಹಮ್ಮಿರದವನು, ಬಗೆಯಲ್ಲಿ ಫಲದ ನಂಟಿರದವನು, ಈ ಮಂದಿಯನ್ನೆಲ್ಲ ಕೊಂದರೂ ಯಾರನ್ನೂ ಕೊಲ್ಲುವುದಿಲ್ಲ. ಕರ್ಮದ ಸೆರೆ ಅವನನ್ನು ಸೋಕದು.
ಕರ್ಮಫಲದ ತ್ಯಾಗ ಮಾಡಿದವ ಯಾವ ಕರ್ಮ ಮಾಡಿದರೂ ಅದು ಅವನಿಗೆ ಬಾಧಕವಾಗುವುದಿಲ್ಲ. ನಾವು ನನ್ನಿಂದಾಯಿತುಎಂದು ಅಂಟಿಸಿಕೊಳ್ಳದೆ, ಯಾವುದೇ ಫಲಾಪೇಕ್ಷೆ ಇಲ್ಲದೆ, ಕರ್ಮ ಮಾಡಿದಾಗ-ಆ ಕರ್ಮದ ಫಲ ಎಂದೂ ನಮ್ಮನ್ನು ಬಾಧಿಸುವುದಿಲ್ಲ. ನಾವು ಮಹಾಭಾರತ ಯುದ್ಧದ ಸನ್ನಿವೇಶವನ್ನು ನೋಡಿದರೆ-ಪಾಂಡವರಿಗೆ ಯುದ್ಧ ಅನಿವಾರ್ಯವಾಗಿ ಒದಗಿಬಂದಿರುವುದು. ಅವರು ಎಂದೂ ಯುದ್ಧವಾಗಬೇಕು ಎಂದು ಬಯಸಿಲ್ಲ; ಯುದ್ಧದಲ್ಲಿ ಗೆದ್ದು ಅಧಿಕಾರ ಪಡೆಯಬೇಕು ಎಂತಲೂ ಯೋಚಿಸಿಲ್ಲ. ಆದರೆ ಅವರಿಗೆ ಅನಿವಾರ್ಯವಾಗಿ ಯುದ್ಧಮಾಡುವ ಸನ್ನಿವೇಶ ಎದುರಿಗೆ ಬಂದು ನಿಂತಿತು. ಅವರು ಅದನ್ನು 'ಇದು ದೈವೇಚ್ಛೆ' ಎಂದು ಯುದ್ಧದ ಪರಿಣಾಮದ ಬಗ್ಗೆ ಯೋಚಿಸದೆ ಭಗವದರ್ಪಣಾ ಭಾವದಿಂದ ಮಾಡಿದರು. ಈ ರೀತಿ ಒದಗಿ ಬಂದ ಯುದ್ಧದಲ್ಲಿ ಅವರು ಅನೇಕಾನೇಕ ಯೋಧರನ್ನು ಕೊಲ್ಲಬೇಕಾಯಿತು. ಆದರೆ ಅವರು ತಮ್ಮ ಕರ್ತವ್ಯ ಕರ್ಮವನ್ನು ಫಲಾಪೇಕ್ಷೆ, ಅಹಂಕಾರವಿಲ್ಲದೆ ಮಾಡಿದರು. ಈ ರೀತಿ "ನಿರ್ಲಿಪ್ತ ಮನಸ್ಸಿನಿಂದ ಯುದ್ಧ ಭೂಮಿಯಲ್ಲಿ ಅನೇಕ ಜನರನ್ನು ಕೊಲ್ಲುವ ಪ್ರಸಂಗ ಬಂದರೂ ಕೂಡ-ಆ ಕೊಂದ ಪಾಪ ಕೊಂದವನನ್ನು ಸೋಕುವುದಿಲ್ಲ" ಎನ್ನುತ್ತಾನೆ ಕೃಷ್ಣ. ಆದರೆ ಇಲ್ಲಿ ಬಹಳ ಮುಖ್ಯ ವಿಚಾರ ಎಂದರ-ಮಾನಸಿಕವಾಗಿ ಒಂದು ಕ್ಷಣವೂ ನಮಗೆ ಭಗವಂತನ ಮೇಲೆ ಅಪನಂಬಿಕೆ ಬರಕೂಡದು; ಸಂಪೂರ್ಣ ಅರ್ಪಣಾ ಭಾವದಲ್ಲಿ, ನಿಶ್ಚಿತಾಭಿಪ್ರಾಯದಲ್ಲಿ(Conviction) ನಮ್ಮ ಪಾಲಿಗೆ ಒದಗಿ ಬಂದಿರುವ ಕರ್ಮವನ್ನು ಫಲಾಪೇಕ್ಷೆ ಇಲ್ಲದೆ ಮಾಡಬೇಕು. ಭಗವಂತನ ಕೈಯಲ್ಲಿ ನಾನು ಒಂದು ಸಾಧನ(Instrument)ಎನ್ನುವ ಎಚ್ಚರದಿಂದ ಎಲ್ಲವನ್ನು ಭಗವಂತನ ಚರಣಗಳಿಗೆ ಅರ್ಪಿಸಿ ಕರ್ಮವನ್ನು ಮಾಡಿದಾಗ ಕರ್ಮದ ಸೆರೆ ನಮ್ಮನ್ನು ಸೋಕುವುದಿಲ್ಲ. ಜೀವನಿಗೆ ಕರ್ಮದ ಫಲ ತಟ್ಟುವುದೇ ಅವನು 'ನಾನು ಮಾಡಿದೆ' ಎಂದು ತಿಳಿದುಕೊಳ್ಳುವುದರಿಂದ.
ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಜೀವನಿಗೆ ಸ್ವತಂತ್ರ ಕರ್ತೃತ್ವ ಇಲ್ಲ, ಕರ್ಮ ಭಗವದಿಚ್ಛೆಯಂತೆ ನಡೆಯುತ್ತದೆ. ಹೀಗಿರುವಾಗ ಜೀವನಿಗೆ ವಿಧಿನಿಷೇಧ ಏಕೆ? ಶಾಸ್ತ್ರ ಏಕೆ ಅದನ್ನು ಮಾಡು, ಇದನ್ನು ಮಾಡಬೇಡ ಎಂದು ಹೇಳುತ್ತದೆ? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾನೆ.
·  ಶ್ಲೋಕ - 18
ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ
ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ ॥೧೮॥
ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮ ಚೋದನಾ
ಕರಣಂ ಕರ್ಮ ಕರ್ತಾ ಇತಿ ತ್ರಿವಿಧಃ ಕರ್ಮಸಂಗ್ರಹಃ ಕರ್ಮ ವಿಧಿಯ ಉದ್ದೇಶ ಮೂರು: ಮಾಡಬೇಕೆಂಬ ಅರಿವು, ಅದಕ್ಕಾಗಿ ಅರಿಯಬೇಕಾದ ಕರ್ಮ,ಕರ್ಮಫಲ ಮತ್ತು ಅರಿತು ಮಾಡುವವನು. [ಕರ್ಮಕ್ಕೆ ಕಾರಣವಾದ ಭಗವಂತನ ಪ್ರೇರಣೆ ಅವನ ಸ್ವರೂಪವೇ. ಆದ್ದರಿಂದ ಮುಮ್ಮುಖವಾದ ಅದು ಅರಿವಿನ ರೂಪ, ಎಲ್ಲರೂ ಅರಿಯಬೇಕಾದಂಥದು ಮತ್ತು ಎಲ್ಲವನ್ನೂ ಬಲ್ಲುದು] ಕರ್ಮದ ಕಾರಣವೂ ಅಡಕವಾಗಿ ಮೂರು ತೆರ: ಉಪಕರಣ, ಮಾಡುವಿಕೆ ಮತ್ತು ಮಾಡುವವನು.
ವಿಧಿನಿಷೇಧ ಇರುವುದು ನಮ್ಮ ಜ್ಞಾನಕ್ಕಾಗಿ. "ಭಗವಂತನನ್ನು 'ನಾನು' ತಿಳಿದುಕೊಳ್ಳಬೇಕು" ಎನ್ನುವುದಕ್ಕಾಗಿ ಕರ್ಮದ ವಿಧಿನಿಷೇಧ. ಕರ್ಮ ಮಾಡುವುದು ಕರ್ಮಕ್ಕಾಗಿ ಅಲ್ಲ-ಜ್ಞಾನಕ್ಕಾಗಿ. ಕರ್ಮದ ವಿಧಾನದ ಹಿಂದಿರುವುದು ಕಾರುಣ್ಯ. ಜ್ಞಾನವಿಲ್ಲದ ಲೋಕಕ್ಕೆ ಭಗವಂತನ ಜ್ಞಾನ-ಆ ಜ್ಞಾನಕ್ಕೆ ಪೂರಕವಾಗಿ ಕರ್ಮ. ಕರ್ಮದ ಹಿಂದಿರುವ ಪ್ರೇರಣೆ ಮೂರು: ಜ್ಞಾನ, ಜ್ಞೇಯ ಮತ್ತು ಜ್ಞಾತಾ. ಒಂದು ಕ್ರಿಯೆಯನ್ನು ಮಾಡಬೇಕು ಅನ್ನುವ ಅರಿವು; ಆ ಕ್ರಿಯೆಯನ್ನು ಮಾಡಲು ಅರಿಯಬೇಕಾದ ಕರ್ಮ; ಮತ್ತು ಕರ್ಮವನ್ನು ಅರಿತು ಕರ್ಮವನ್ನು ಮಾಡುವವನು. ಭಗವಂತನನ್ನು ತಿಳಿದುಕೊಳ್ಳಬೇಕು ಎನ್ನುವುದು ಕರ್ಮದ ಹಿಂದಿನ ಮೂಲಪ್ರೇರಣೆ. ಕರ್ಮ ಮಾಡುವುದು ನಮ್ಮ ತಿಳಿಗೇಡಿತನವನ್ನು ಕಳಚಿಕೊಂಡು ಜ್ಞಾನವನ್ನು ಪಡೆಯುವುದಕ್ಕೋಸ್ಕರ; ನಮ್ಮ ಅರಿವನ್ನು ಬೆಳೆಸುವುದಕ್ಕೊಸ್ಕರ; ಆ ಅರಿವು ಭಗವನ್ಮುಖವಾಗುವುದಕ್ಕೊಸ್ಕರ. ನಾವು ಅರಿವುಳ್ಳವರಾಗುವುದಕ್ಕೊಸ್ಕರವೇ ಕರ್ಮವಿಧಿನಿಷೇಧ ಶಾಸ್ತ್ರಕಾರರಿಂದ ಬಂತು.
ಜೀವನಿಗೆ ಕರ್ಮ ಮಾಡಬೇಕು ಎನ್ನುವ ಪ್ರೇರಣೆ ಮಾಡುವವ-ಭಗವಂತ. ಅದಕ್ಕನುಗುಣವಾಗಿಯೇ ಜೀವ ಕರ್ಮ ಮಾಡುತ್ತಾನೆ. ಯಾವ ಜೀವ ಏನು ಆಗಬೇಕು ಎನ್ನುವುದು ಆ ಜೀವದ ಸ್ವರೂಪಕ್ಕೆ ಸಂಬಂಧಪಟ್ಟ ವಿಚಾರ. ಆದರೆ ಸ್ವಯಂ ಜೀವನಿಗೆ ಅದನ್ನು ಅಭಿವ್ಯಕ್ತಗೊಳಿಸುವ ಶಕ್ತಿ ಇಲ್ಲ. ಭಗವಂತ ಆ ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಆತನಲ್ಲಿ ಪ್ರೇರಣೆ ಮಾಡುತ್ತಾನೆ. ಭಗವಂತನ ಪ್ರೇರಣೆಯಿಂದ ಜೀವಯೋಗ್ಯತೆ ವ್ಯಕ್ತವಾಗುತ್ತದೆ ಮತ್ತು ಅದಕ್ಕನುಗುಣವಾಗಿ ಜೀವ ಕರ್ಮದಲ್ಲಿ ತೊಡಗುತ್ತಾನೆ. ಇಲ್ಲಿ ಎಲ್ಲವೂ ಮೂಲತಃ ಭಗವದ್ ಸ್ವರೂಪ. ಭಗವಂತನ ಜ್ಞಾನ-ಭಗವದ್ ಸ್ವರೂಪ, ಭಗವಂತನ ಕ್ರಿಯೆ-ಭಗವದ್ ಸ್ವರೂಪ, ಭಗವಂತನ ಪ್ರೇರಣೆ-ಭಗವದ್ ಸ್ವರೂಪ. ಭಗವಂತನ ಸ್ವರೂಪ ನೇರ ನಮ್ಮ ಮೇಲೆ ಕೆಲಸ ಮಾಡುತ್ತಿರುತ್ತದೆ. ಅವನೇ ಜ್ಞಾನ, ಅವನೇ ಜ್ಞೇಯ, ಅವನೇ ಜ್ಞಾತೃ. ಆದ್ದರಿಂದ ಅವನ ಪ್ರೇರಣೆ-ಜ್ಞಾನಸ್ವರೂಪ; ಅವನ ಪ್ರೇರಣೆ- ಜ್ಞಾತೃಸ್ವರೂಪ; ಅವನ ಪ್ರೇರಣೆ-ಜ್ಞೇಯ. ಹೀಗೆ ಜ್ಞಾನಸ್ವರೂಪನಾದ ಭಗವಂತನ ಪ್ರೇರಣೆಯಿಂದ ಜೀವ ಕರ್ಮ ಮಾಡುತ್ತಾನೆ ಮತ್ತು ಎಲ್ಲವೂ ಅವನ ಅಧೀನವಾಗಿ ನಡೆಯುತ್ತದೆ.
ಒಟ್ಟಿನಲ್ಲಿ ಕರ್ಮದ ಕಾರಣಗಳನ್ನು ಅಡಕವಾಗಿ ಹೇಳಬೇಕೆಂದರೆ ಅವು ಮೂರು ವಿಧ: ದೇಹ ಇಂದ್ರಿಯಾದಿ ಉಪಕರಣಗಳು, ಮಾಡುವಿಕೆ(ಕರ್ಮ) ಮತ್ತು ಕರ್ತಾ(ಜೀವ,ಭಗವಂತ ಮತ್ತು ಅದೃಷ್ಟ).
·  ಶ್ಲೋಕ - 19
ಗುಣತ್ರಯಗಳ ಬಗ್ಗೆ ಹಿಂದೆ ಸಾಕಷ್ಟು ವಿವರಗಳನ್ನು ಕೊಟ್ಟಿದ್ದ ಕೃಷ್ಣ, ಇಲ್ಲಿ ಜೀವನಕ್ಕೆ ಬಹಳ ಮುಖ್ಯವಾದ ತ್ರೈಗುಣ್ಯ ವಿದ್ಯೆಯನ್ನು ವಿವರಿಸಿದ್ದಾನೆ.
ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ ॥೧೯॥
ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧಾ ಏವ ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವತ್ ಶೃಣು ತಾನಿ ಅಪಿ ಅರಿವು, ಕಾಯಕ ಮತ್ತು ಮಾಡುವಾತ ಕೂಡ ಗುಣಗಳ ಭೇದದಿಂದ ಮೂರು ತೆರ ಎಂದು ಗುಣಗಳ ಎಣಿಕೆಯ ಪ್ರಕರಣದಲ್ಲಿ [ವೈದಿಕ ಸಾಖ್ಯ ಶಾಸ್ತ್ರದಲ್ಲಿ] ಹೇಳಲಾಗಿದೆ. ಅವುಗಳನ್ನು ಹಾಗೆಯೇ ಆಲಿಸು.
ಪ್ರತಿಯೊಬ್ಬನ ಬದುಕಿನಲ್ಲಿರುವ ಮೂರು ಪ್ರಮುಖ ಘಟಕಗಳೆಂದರೆ ಅರಿವು(ಜ್ಞಾನ), ಕಾಯಕ(ಕರ್ಮ) ಮತ್ತು ಕರ್ತಾ(ಮಾಡುವಾತ). ಏನನ್ನೇ ಮಾಡುವುದಾದರೂ ಕೂಡ ಒಂದು ತಿಳುವಳಿಕೆಯಿಂದ ಮಾಡುತ್ತೇವೆ-ಅದು ಜ್ಞಾನ; ಆ ತಿಳುವಳಿಕೆಯಿಂದ ಮಾಡುವುದು’-ಕರ್ಮ; ಜ್ಞಾನ ಮತ್ತು ಕರ್ಮಗಳಿಗೆ ಆಶ್ರಿತನಾಗಿರತಕ್ಕಂತವ-ಕರ್ತಾ. ಈ ಮೂರೂ ಕೂಡ ಗುಣತ್ರಯ ವಿಭಾಗಕ್ಕೆ ಒಳಪಟ್ಟು ಪ್ರತಿಯೊಂದೂ ಮತ್ತೆ ಮೂರು ವಿಧವಾಗಿದೆ. ಶಾಸ್ತ್ರದಲ್ಲಿ ಎಲ್ಲಿ ಗುಣಗಳ ಪರಿಗಣನೆ ಆಗುತ್ತದೋ ಅಲ್ಲಿ ಈ ವಿಷಯ ಹೇಳಿದ್ದಾರೆ ಮತ್ತು ಭಗವಂತ ಕಪಿಲವಾಸುದೇವನಾಗಿ ಜಗತ್ತಿಗೆ ಕೊಟ್ಟ ಪರಮಸಾಂಖ್ಯದಲ್ಲಿಇದನ್ನು ಹೇಳಲಾಗಿದೆ. ಇದು ಕಪಿಲ ವಾಸುದೇವನಿಂದ ಮೊಟ್ಟಮೊದಲು ಹೇಳಲ್ಪಟ್ಟ, ಪುರಾತನ ಕಾಲದಿಂದಲೂ ಇದ್ದ, ಜಗತ್ತಿಗೆ ಹೇಳಬೇಕಾದ ವಿಷಯಗಳಲ್ಲೇ ಅತ್ಯಂತ ಪ್ರಕೃಷ್ಟವಾದ ವಿಷಯ. ತ್ರೈಗುಣ್ಯವಿಲ್ಲದೆ ಜೀವನವೇ ಇಲ್ಲ. ನಮ್ಮ ಬದುಕಿನ ಎಲ್ಲ ಮುಖದಲ್ಲೂ ವ್ಯಾಪಿಸಿರುವ ಈ ತ್ರೈಗುಣ್ಯವನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ ನಮ್ಮ ಬದುಕನ್ನು ತಿದ್ದಿಕೊಳ್ಳಲು ಸಾಧ್ಯವಿಲ್ಲ ಮತ್ತು ತ್ರಿಗುಣಾತೀತ ಭಗವಂತನ ಕಡೆಗೆ ಸಾಗಲು ಸಾಧ್ಯವಿಲ್ಲ. ಅತ್ಯಂತ ಪುರಾತನವಾದ ಈ ಮೂಲಭೂತ ಸತ್ಯವನ್ನು ನಾನು ನಿನಗೆ ತದ್ವತ್ತಾಗಿ ಹೇಳುತ್ತೇನೆ -ಅದನ್ನು ಗಮನವಿಟ್ಟು ಆಲಿಸುಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ.
·  ಶ್ಲೋಕ - 20
ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।
ಅವಿಭಕ್ತಂ ವಿಭಕ್ತೇಷು ತಜ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ ೨೦॥
ಸರ್ವಭೂತೇಷು ಯೇನ ಏಕಂ ಭಾವಂ ಅವ್ಯಯಮ್ ಈಕ್ಷತೇ ।
ಅವಿಭಕ್ತಂ ವಿಭಕ್ತೇಷು ತತ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ ಎಲ್ಲ ಜೀವಿಗಳಲ್ಲಿ ಬದಲಾಗದ ಒಂದು ಪರತತ್ವವನ್ನು, ಬಗೆಬಗೆಯ ವಸ್ತುಗಳಲ್ಲಿ ಒಂದೆ ಬಗೆಯ ಭಗವಂತನನ್ನು ಕಾಣುವ ತಿಳಿವು ಸಾತ್ವಿಕ ಎಂದು ತಿಳಿ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ(೪-೫-೧೧)ಹೇಳುವಂತೆ: ಅಸ್ಯ ಮಹತೋ ಭೂತಸ್ಯ ನಿಶ್ವಸಿತಮ್”- ‘ಅಂದರೆ ಇಡೀ ಪ್ರಪಂಚ ಆ ಮಹಾಭೂತದ ಉಸಿರಿನ ಉದ್ಗಾರ’. ವಿಷ್ಣು ಸಹಸ್ರನಾಮದಲ್ಲಿ ಹೇಳುತ್ತಾರೆ: ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃಎಂದು. ಅಂದರೆ ಒಬ್ಬನೇ ಒಬ್ಬ ವಿಷ್ಣು ಹಿರಿಯ ಚೇತನ(ಮಹಾಭೂತ); ಅಲ್ಪ ಚೇತನಗಳು(ಭೂತಗಳು) ಹಲವಾರು ಎಂದು. ಗೀತೆಯ ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಅರಿವಿನ ಬಗ್ಗೆ ಹೇಳುತ್ತ ಹೇಳುತ್ತಾನೆ: ಪರಸ್ಪರ ಭಿನ್ನವಾದ, ಒಂದರಂತೆ ಇನ್ನೊಂದಿಲ್ಲದ, ವಿಲಕ್ಷಣವಾದ ಜೀವಪ್ರಪಂಚದಲ್ಲಿ(ಸರ್ವಭೂತೇಷು)- ಯಾವ ಭೇದವೂ ಇಲ್ಲದೆ, ಪೂರ್ಣ ಗುಣಕ್ರಿಯೆಯಲ್ಲಿ ಅಖಂಡ ಸತ್ಯವಾಗಿರುವ ಒಂದು ತತ್ವ ನೆಲೆಸಿದೆ. ಅನಂತದಲ್ಲಿ ಏಕವಾಗಿರುವ, ತ್ರೈಗುಣ್ಯವರ್ಜಿತ ಭಗವಂತನೆಂಬ ಈ ತತ್ವ ಯಾವ ಅರಿವಿಗೆ ಗೋಚರವಾಗುತ್ತದೋ ಆ ಅರಿವು ಸಾತ್ವಿಕಎಂದು.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.