ಭಗವದ್ಗೀತೆ ಅಧ್ಯಾಯ-2 (ಶ್ಲೋಕ 41 ರಿಂದ 72)


ಭಗವದ್ಗೀತೆ ಅಧ್ಯಾಯ-2 (ಶ್ಲೋಕ 41 ರಿಂದ 72)
·  ಶ್ಲೋಕ - 41
ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನಂದನ।
ಬಹುಶಾಖಾ ಹ್ಯನನಂತಾಶ್ಚ ಬುದ್ಧಯೋSವ್ಯವಸಾಯಿನಾಮ್ ॥೪೧॥
ವ್ಯವಸಾಯ ಆತ್ಮಿಕಾ ಬುದ್ಧಿಃ ಏಕಾ ಇಹ ಕುರುನಂದನ ಬಹುಶಾಖಾಃ ಹಿ ಅನಂತಾಃ ಚ ಬುದ್ಧಯಃ ಅವ್ಯವಸಾಯಿನಾಮ್--ಕುರುಕುಮಾರ, ಈ ದಾರಿಯಲ್ಲಿ ಮನನದಿಂದ ಹದಗೊಂಡ ಮಾತು ಒಂದೇ ತರ. ಹದವಿರದವರ ತುದಿಯಿರದ ಹರಟೆಗಳಿಗೆ ಹತ್ತು ಹಲವು ಟಿಸಿಲುಗಳು.
ಏಕನಿಷ್ಠೆಯಿಂದ ನಾವು ಮಾಡುವ ಸಾಧನೆ ವ್ಯರ್ಥವಲ್ಲ ಎನ್ನುವ ವಿಷಯ ನಮಗೆ ತಿಳಿಯಿತು, ಆದರೆ ಯಾವುದು ಸರಿ ಹಾಗು ಯಾವುದು ತಪ್ಪು ಎನ್ನುವುದನ್ನು ತಿಳಿಯುವ ಬಗೆ ಹೇಗೆ? ಕೃಷ್ಣ ಈ ಶ್ಲೋಕದಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾನೆ.
ಎಲ್ಲಾ ಕಾಲದಲ್ಲೂ ನಿರ್ಣಾಯಕವಾದ ಮಾತು ಏಕರೂಪವಾಗಿರುತ್ತದೆ. ನಿರ್ಣಯ ಇಲ್ಲದೆ ಆಡುವ ಮಾತು ಒಂದೊಂದು ಒಂದೊಂದು ತರ. ಗೊತ್ತಿಲ್ಲದೆ ಅಜ್ಞಾನದಿಂದ ಆಡುವ ಮಾತುಗಳಿಗೆ ತಲೆಬುಡವಿಲ್ಲದ ಅನಂತ ಶಾಖೆ. ಆದರೆ ನಿಜವಾಗಿ ತಿಳಿದವರ ನಿರ್ಣಯಾತ್ಮಕವಾದ ಮಾತು ಸದಾ ಒಂದೇ ಆಗಿರುತ್ತದೆ. ಆದ್ದರಿಂದ ಸತ್ಯವನ್ನು ಅರಿತವರ ಮಾರ್ಗದರ್ಶನದಂತೆ ನಡೆ ಎನ್ನುತ್ತಾನೆ ಕೃಷ್ಣ.
·  ಶ್ಲೋಕ - 42
ಯಾಮಿಮಾಂ ಪುಷ್ಪಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ ।
ವೇದವಾದರತಾಃ ಪಾರ್ಥ ನಾನ್ಯದಸ್ತೀತಿ ವಾದಿನಃ ॥೪೨॥
ಯಾಮ್ ಇಮಾಮ್ ಪುಷ್ಪಿತಾಮ್ ವಾಚಮ್ ಪ್ರವದಂತಿ ಅವಿಪಶ್ಚಿತಃ ವೇದವಾದರತಾಃ ಪಾರ್ಥ ನ ಅನ್ಯತ್ ಅಸ್ತಿ ಇತಿ ವಾದಿನಃ - -ಓ ಪಾರ್ಥ, ಅರೆಬರೆ ತಿಳಿದವರು ಹೇಳುತ್ತಾರೆ: ಈ ವೇದವಾಣಿ ಸ್ವರ್ಗವೆಂಬ ಹೂಬಿಡುವ ಬಳ್ಳಿ. ಹುಟ್ಟು, ಕರ್ಮದ ಕಟ್ಟುಗಳ ಸಂಸಾರವೆ ಇದರ ಹಣ್ಣು.
·  ಶ್ಲೋಕ - 43
ಕಾಮಾತ್ಮಾನಃ ಸ್ವರ್ಗಪರಾ ಜನ್ಮಕರ್ಮಫಲಪ್ರದಾಮ್ ।
ಕ್ರಿಯಾವಿಶೇಷಬಹುಲಾಂ ಭೋಗೈಶ್ವರ್ಯಗತಿಂ ಪ್ರತಿ ॥೪೩॥
ಕಾಮ ಆತ್ಮಾನಃ ಸ್ವರ್ಗ ಪರಾಃ ಜನ್ಮ ಕರ್ಮ ಫಲ ಪ್ರದಾಮ್ ಕ್ರಿಯಾ ವಿಶೇಷ ಬಹುಲಾಮ್ ಭೋಗ ಐಶ್ವರ್ಯ ಗತಿಮ್ ಪ್ರತಿ - ಐಷಾರಾಮದ ಐಸಿರಿಯ ಬದುಕಿಗಾಗಿ ಅದರ ತುಂಬ ಬಗೆ ಬಗೆಯ ಕರ್ಮ ಕಲಾಪಗಳು. ಅವರು ವೇದದ ಹೊರನೋಟದ ಅರ್ಥದಲ್ಲೇ ನಿಂತುಬಿಡುವರು. [ವೇದದಲ್ಲಿ ವಿವಾದ ಬೆಳೆಸುವವರು, ಅಥವಾ ಅರ್ಥವನ್ನರಿಯದೆ ಬರಿದೆ ಉರು ಹೊಡೆಯುವವರು] ಅದರಾಚೆ ಏನೂ ಇಲ್ಲ ಎನ್ನುವವರು. ಬಗೆಯಲ್ಲಿ ಆಸೆ ತುಂಬಿ ಸ್ವರ್ಗದ ಕನಸು ಕಾಣುವವರು.
·  ಶ್ಲೋಕ - 44
ಭೋಗೈಶ್ವರ್ಯಪ್ರಸಕ್ತಾನಾಂ ತಯಾSಪಹೃತಚೇತಸಾಮ್ ।
ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ ॥೪೪॥
ಭೋಗ ಐಶ್ವರ್ಯ ಪ್ರಸಕ್ತಾನಾಮ್ ತಯಾ ಅಪಹೃತ ಚೇತಸಾಮ್ ವ್ಯವಸಾಯ ಆತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ- ಐಷಾರಾಮದ ಐಸಿರಿಯಲ್ಲಿ ಮುಳುಗಿ, ವೇದ ಓದಿಯೇ ತಲೆ ಕೆಡಿಸಿಕೊಂಡ ಇಂಥವರಿಗೆ, ಹದಗೊಂಡ ತಿಳಿನುಡಿ ಕೂಡ ಮನಸ್ಸಿನ ಸಮಸ್ಥಿತಿಗೆ ನೆರವಾಗದು. ಮೇಲಿನ ಮೂರು ಶ್ಲೋಕ ಅತ್ಯಂತ ಮುಖ್ಯವಾದುದು. ಹೆಚ್ಚಿನವರಿಗೆ ಇದು ಅರ್ಥವೇ ಆಗುವುದಿಲ್ಲ. ಅರ್ಥವಾಗದೆ ಈ ಶ್ಲೋಕವನ್ನು ಟೀಕಿಸಿದವರೂ ಇದ್ದಾರೆ! ಪ್ರಾಚೀನ ಗ್ರಂಥಗಳಲ್ಲಿ, ವೇದಗಳಲ್ಲಿ, ಶ್ರುತಿಗಳಲ್ಲಿ, ಕೇವಲ ಅಧ್ಯಾತ್ಮವಲ್ಲದೆ ಅನೇಕ ಲೌಕಿಕ ವಿಷಯಗಳು ತುಂಬಿಕೊಂಡಂತೆ ಕಾಣುತ್ತದೆ. ಬರಿಯ ವೇದ ಗ್ರಂಥಗಳನ್ನು ಓದುವುದರಿಂದ ನನ್ನನ್ನು ತಿಳಿಯಲು ಸಾಧ್ಯವಿಲ್ಲ ಎನ್ನುತ್ತಾನೆ ಕೃಷ್ಣ. ಕೃಷ್ಣ ಹೇಳುತ್ತಾನೆ ವೇದವಾದಿಗಳಾದವರು ವೇದದ ಮೇಲ್ನೋಟದ ಅರ್ಥವೆಂಬ ಹೂವನ್ನು ಕಿತ್ತು ತೆಗೆದುಕೊಂಡು ಆಳವಾದ ಜ್ಞಾನ ಸಾಗರವೆಂಬ ಹಣ್ಣಿನಿಂದ ವಂಚಿತರಾಗುತ್ತಾರೆ ಎಂದು. ವೇದವನ್ನು ಆಳವಾಗಿ ಅರ್ಥ ಮಾಡಿಕೊಳ್ಳದೆ, ಕೇವಲ ಮೇಲ್ನೋಟದ ಅರ್ಥದಲ್ಲೇ ನಿಂತು ವೇದವೆಂದರೆ ಇಷ್ಟೇ ಎಂದು ಹೇಳುವವರಿಗೆ ಕೃಷ್ಣ ಈ ಮಾತನ್ನು ಹೇಳಿದ್ದಾನೆ. ಇಲ್ಲಿ 'ವೇದವಾದರು' ಎಂದರೆ ವೇದದ ಅರ್ಥ ತಿಳಿಯದೆ ಅದರ ಬಗ್ಗೆ ವಿವಾದ ಮಾಡುವವರು. ವೇದವನ್ನು ಬಾಯಿಪಾಠ ಮಾಡಿ ಅದರ ಅರ್ಥ ತಿಳಿಯದೆ ಮಾತನಾಡುವವರು. ವೇದದ ಮೇಲ್ನೋಟದ ಅರ್ಥದಲ್ಲೇ ನಿಂತವರು. ಇವರು ಮೇಲಿನಿಂದ ಈಜುವವರು. ಇವರಿಗೆ ತಳದಲ್ಲಿರುವ ಮುತ್ತು ರತ್ನಗಳ ಅರಿವಿಲ್ಲ. ವೇದವನ್ನು ನಿಜವಾಗಿ ಅರಿತುಕೊಳ್ಳದೆ, ಅದರ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡು, ಅದನ್ನೇ ಜನರಿಗೆ ಹೇಳುವುದು ನರಕಕ್ಕೆ ನೇರ ದಾರಿ. ಪೌರೋಹಿತ್ಯ ಕೂಡಾ ಹೀಗೆ. ನಿಜವಾದ ಜ್ಞಾನವಿಲ್ಲದೆ, ಮಂತ್ರದ ಅರ್ಥ ಗೊತ್ತಿಲ್ಲದೆ ಪೌರೋಹಿತ್ಯ ಮಾಡುವುದು ಕೂಡಾ ಅಷ್ಟೇ ಅಪಾಯಕಾರಿ. ಪೌರೋಹಿತ್ಯ ಒಂದು ಜವಾಬ್ದಾರಿಯುತ ಕೆಲಸ. ಒಬ್ಬ ಮನುಷ್ಯನ ಪಾಪವನ್ನು ಪರಿಹರಿಸಿ ಅವನನ್ನು ಎತ್ತರಕ್ಕೇರಿಸಬೇಕಾದರೆ ಪೌರೋಹಿತ್ಯ ಮಾಡುವವನೂ ಕೂಡಾ ಎತ್ತರದಲ್ಲಿರಬೇಕು. ವೇದ ಮಂತ್ರದ ರಹಸ್ಯ ತಿಳಿದವನಾಗಿರಬೇಕು. ಕೃಷ್ಣ ಇಲ್ಲಿ ಹೇಳುತ್ತಾನೆ: ವೇದದ ಅಂತರಂಗದ ಅರ್ಥ ತಿಳಿಯದಿದ್ದರೆ ಎಲ್ಲವೂ ಅಪಾರ್ಥವಾಗುತ್ತದೆ. ಯಾರು ಪ್ರಾಚೀನ ಗ್ರಂಥಗಳ ಮೇಲ್ನೋಟದ ಅರ್ಥವನ್ನು ಹೇಳಿ ಸಮಾಜಕ್ಕೆ ಮೋಸ ಮಾಡುತ್ತಾರೋ ಅವರು ಅವಿಪಶ್ಚಿತರುಎಂದು. 'ವಿಪಶ್ಚಿತರು' ಎಂದರೆ ಜ್ಞಾನ ಸ್ವರೂಪವಾದ ಆತ್ಮವನ್ನು ಕಂಡವರು, ಆತ್ಮ ಜ್ಞಾನಿಗಳು. ಅವಿಪಶ್ಚಿತರು ಶಾಸ್ತ್ರಕ್ಕೆ ಮೇಲ್ನೋಟದ ಅರ್ಥವನ್ನು ಹೇಳುವವರು-ಅವರು ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣ! ಈ ಮಾತು ಪ್ರಪಂಚದ ಪ್ರತಿಯೊಂದು ಧರ್ಮ ಗ್ರಂಥಗಳಲ್ಲಿದೆ. ಬೈಬಲ್ ನಲ್ಲಿ ಇದನ್ನು ಗೂಡಾರ್ಥ ಎನ್ನುತ್ತಾರೆ. ಕುರಾನಿನಲ್ಲಿ ಕೂಡಾ ಈ ಬಗ್ಗೆ ಎಚ್ಚರದ ನುಡಿ ಇದೆ. "There are Sentences that are clear in meaning and there are Sentences that are susceptible of different interpretations" . ಇದು ಕುರಾನ್ ನಲ್ಲಿ ಬರುವ ಒಂದು ನುಡಿ. ಎಲ್ಲಾ ಪ್ರಾಚೀನ ಅನುಭಾವ ಸಾಹಿತ್ಯದಲ್ಲಿ ಈ ಎಚ್ಚರವನ್ನು ಕೊಟ್ಟಿದ್ದಾರೆ. ಪ್ರಾಚೀನ ಗ್ರಂಥಗಳು ಒಗಟಿನಂತೆ. ಅದರ ಮೇಲ್ನೋಟದ ಅರ್ಥವನ್ನು ತಿಳಿದುಕೊಂಡರೆ ಅಸಂಗತವಾಗುತ್ತದೆ. ಅಧ್ಯಾತ್ಮ ಗ್ರಂಥಗಳಲ್ಲಿ ನಮ್ಮನ್ನು ಆಭೂತಿಗೆ ಕೊಂಡೊಯ್ಯಲು ಈ ರೀತಿ ಒಗಟಿನ ಬಾಷೆಯನ್ನು (mystical language) ಉಪಯೋಗಿಸಿದ್ದಾರೆ. ವೇದವೆನ್ನುವುದು ಸಾಂಕೇತಿಕ ಭಾಷೆ ಎನ್ನುವುದನ್ನು ಅರಿಯದಿದ್ದರೆ ಆಧ್ಯಾತ್ಮ ಚಿಂತನೆ ಅನರ್ಥವಾಗುತ್ತದೆ. ಈ ರೀತಿ ತಿಳಿಯದೆ ಮಾಡುವ ಸಾಧನೆಯಿಂದ ಏನೂ ಉಪಯೋಗವಿಲ್ಲ.
ಪ್ರಾಚೀನ ಗ್ರಂಥಗಳಲ್ಲಿ ಅನೇಕ ಕಥೆಗಳನ್ನು ಕಾಣುತ್ತೇವೆ. ಅದನ್ನು ಮೇಲ್ನೋಟದಲ್ಲಿ ನೋಡಿದರೆ ವಿನೋದವೆನಿಸುತ್ತದೆ. ಆದರೆ ಅದರ ತಿರುಳನ್ನು ಅರಿತರೆ ಜೀವನ ಸಾರ್ಥಕ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗಣಪತಿಯ ಕಥೆ. "ಪಾರ್ವತಿ ತನ್ನ ಮೈಯ ಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು, ಆತನ ತಲೆಯನ್ನು ಶಿವ ಕಡಿದ, ನಂತರ ಆತನಿಗೆ ಉತ್ತರ ದಿಕ್ಕಿಗೆ ತಲೆ ಹಾಕಿದ ಆನೆಯ ತಲೆಯನ್ನು ಜೋಡಿಸಿದರು, ಕಡಬು ತಿಂದ ಗಣೇಶ ಹೊಟ್ಟೆಗೆ ಹಾವನ್ನು ಸುತ್ತಿಕೊಂಡ". ಏನಿದರ ಅರ್ಥ? ಭಾಗಶಃ ಈ ಕಥೆಯನ್ನು ಕೇಳದವರಿಲ್ಲ; ಆದರೆ ಅರ್ಥ ತಿಳಿದವರು ಸಾವಿರಕ್ಕೆ ಒಬ್ಬರಿಲ್ಲ! ಈ ಕಥೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಮಾತ್ರ ನಮಗೆ ಕಥೆಯ ಮಹತ್ವ, ಪೂಜೆಯ ಮಹತ್ವ, ನಂಬಿಕೆಯ ಮಹತ್ವ ಅರಿಯುತ್ತದೆ. ಗಣಪತಿ ಆಕಾಶದ ದೇವತೆ. ಆಕಾಶ ಪಂಚ ಭೂತಗಳಲ್ಲಿ ಮಹತ್ತಾದದ್ದು. ಗಣಪತಿಯ ಸ್ಥಾನ ಇಪ್ಪತ್ತೊಂದನೆಯದು. ಅದಕ್ಕಾಗಿ ಆತನಿಗೆ ಇಪ್ಪತ್ತೊಂದು ಮೋದಕ ಅರ್ಪಣೆ. ಐದು ಅಂತಃಕರಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ತನ್ಮಾತ್ರೆಗಳು(ಶಬ್ದ, ಸ್ಪರ್ಶ ರೂಪ ರಸ ಗಂಧ) ಇದರಿಂದ ಆಚೆಗೆ ಆಕಾಶ, ಗಾಳಿ, ಬೆಂಕಿ,ನೀರು, ಮಣ್ಣು. ಇಲ್ಲಿ ಆಕಾಶ ಇಪ್ಪತ್ತೊಂದನೆ ಮೆಟ್ಟಿಲಲ್ಲಿದೆ. ಇದು ಇಪ್ಪತ್ತೊಂದನೆ ತತ್ವ. ಗಣಪತಿಗಿಂತ ಮೊದಲ ಸ್ತರದಲ್ಲಿರುವ ತತ್ವಾಭಿಮಾನಿಗಳು ಇಪ್ಪತ್ತುಮಂದಿ. ಬ್ರಹ್ಮ, ವಾಯು, ಗರುಡ, ಶೇಷ, ರುದ್ರ, ಇಂದ್ರ, ಕಾಮ, ಅಹಂಪ್ರಾಣ, ಅನಿರುದ್ಧ, ಸ್ವಾಯಂಭುವಮನು, ಬೃಹಸ್ಪತಿ, ದಕ್ಷಪ್ರಜಾಪತಿ, ಪ್ರವಹವಾಯು, ಚಂದ್ರ, ಸೂರ್ಯ, ಯಮಧರ್ಮ, ವರುಣ, ವಹ್ನಿ, ಮಿತ್ರ ಮತ್ತು ನಿರ್ ಋತಿ. ಗಣಪತಿ ಇಪ್ಪತ್ತೊಂದನೆಯವನು. ಇನ್ನು ಶಿವ ಪಾರ್ವತಿಯರು. ಇವರು ದಂಪತಿಗಳು. ಇಲ್ಲಿ ಶಿವ ಮನಸ್ಸಿನ ಅಭಿಮಾನಿ ಮತ್ತು ಪಾರ್ವತಿ ವಾಕ್ ದೇವತೆ. ಮನಸ್ಸು ಯೋಚಿಸಿದಂತೆ ಮಾತು. ಅದಕ್ಕಾಗಿ ಅವರದು ಅನ್ಯೋನ್ಯ ದಾಂಪತ್ಯ. ಶಬ್ದದ ಮೂಲ ಶಕ್ತಿ ಗಾಳಿ ಮತ್ತು ಆಕಾಶ. ಆಕಾಶ ಮತ್ತು ಗಾಳಿ ಇಲ್ಲದಿದ್ದರೆ ಶಬ್ದವಿಲ್ಲ. ನಮ್ಮ ಒಳಗಿಂದ ವಾಕ್ ನಾದವೇ ಪಾರ್ವತಿ-ಅದು ಶಬ್ದ ರೂಪದಲ್ಲಿ ಹೊರ ಹೊಮ್ಮುವುದೇ ಮಾತು. ಇದು ಮೂಲ ನಾದದ ಸ್ಥೂಲ ರೂಪ. ಮನುಷ್ಯನಿಗೆ ದೊಡ್ಡ ಆಪತ್ತು ಮಾತು. ಅದ್ಯಾತ್ಮ ಸಾಧನೆಗೆ ಬೇಕಾಗಿರುವುದು ಮಾತಿಗಿಂತ ಹೆಚ್ಚಾಗಿ ಮೌನ. ತನ್ನತನದ ಅರಿವಿಲ್ಲದೆ(Awareness of self), ಅಹಂಕಾರ ತತ್ವದ ವಿರುದ್ಧ ಮಾತು ಬೆಳೆದಾಗ, ಮಾತಿನ ಶಿರಛೇದನವಾಗದೆ ಜ್ಞಾನವಿಲ್ಲ. ಶಿರಛೇದನವಾದ ಮೇಲೆ ಪುನಃ ಅದೇ ಮಾತು ಮುಂದುವರಿಯಬಾರದು. ಅದಕ್ಕಾಗಿ ಎಲ್ಲವನ್ನು ಕೇಳುವ ದೊಡ್ಡ ಕಿವಿಯುಳ್ಳ, ಪ್ರಾಣಶಕ್ತಿಯನ್ನು ನಿಯಂತ್ರಿಸುವ ಉದ್ದನೆಯ ಮೂಗಿನ ಸಾಂಕೇತ ರೂಪವಾದ ಆನೆಯ ತಲೆಯನ್ನು ಇಟ್ಟು ಗಣಪತಿ ಎನ್ನುವ ಹೊಸ ಆಕಾರದ ಜನನವಾಯಿತು. ಗಣಪತಿಯನ್ನು ನೋಡಿದಾಕ್ಷಣ ನಮಗೆ ನೆನಪಿಗೆ ಬರಬೇಕಾದ ವಿಷಯ ಮಾತಿಗಿಂತ ಮನನ ಹೆಚ್ಚು ಮಾಡು, ಸರಿಯಾಗಿ ಕೇಳಿಸಿಕೋ (Be a good listener) ಎನ್ನುವ ವಿಚಾರ. ಇನ್ನು ಉತ್ತರ ದಿಕ್ಕಿಗೆ ತಲೆ ಹಾಕುವುದು ಅಂದರೆ ಏನು? ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತು ಕೊಳ್ಳಬಾರದು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಸುತ್ತಬಾರದು ಇತ್ಯಾದಿ. ಆದರೆ ಈ ಎಲ್ಲಾ ವಿಚಾರ ಏಕೆ? ಇದರ ಹಿಂದಿರುವ ಸಿದ್ಧಾಂತ ಏನು? ಈ ಭೂಮಿಯಲ್ಲಿ ಉತ್ತರ ದ್ರುವದ ಶಕ್ತಿ ಉತ್ತರದಿಂದ ಪೂರ್ವಕ್ಕೆ ಹರಿಯುತ್ತಿರುತ್ತದೆ ಹಾಗು ದಕ್ಷಿಣ ದ್ರುವದ ಶಕ್ತಿ ದಕ್ಷಿಣದಿಂದ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ನಮ್ಮ ಚಲನೆ ಕೂಡಾ ಈ ಶಕ್ತಿಪಾತಕ್ಕೆ ಅನುಗುಣವಾಗಿರಬೇಕು. ನಾವು ದಕ್ಷಿಣಕ್ಕೆ ಮುಖ ಮಾಡಿದರೆ ದಕ್ಷಿಣ ದ್ರುವದ ಶಕ್ತಿಪಾತಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಂತೆ ಹಾಗು ಉತ್ತರಕ್ಕೆ ಮುಖ ಮಾಡಿದರೆ ಉತ್ತರ ದ್ರುವದ ಶಕ್ತಿಪಾತಕ್ಕೆ ಒಡ್ಡಿಕೊಂಡಂತೆ. ಉತ್ತರಕ್ಕೆ ತಲೆ ಹಾಕಿ ಮಲಗುವುದು ಎಂದರೆ ಎದ್ದಾಗ ದಕ್ಷಿಣಕ್ಕೆ ಮುಖ ಮಾಡುವುದು. ಆದ್ದರಿಂದ ದಕ್ಷಿಣ ಮುಖ ಹಾಗು ಉತ್ತರ ತಲೆ ಎರಡೂ ಒಂದೆ. ಈ ಎರಡು ಶಕ್ತಿಪಾತದಲ್ಲಿ ಒಂದು ದೊಡ್ಡ ವ್ಯತ್ಯಾಸವಿದೆ. ಅದೇನೆಂದರೆ ಉತ್ತರದ ಶಕ್ತಿಪಾತ ಊರ್ಧ್ವಮುಖವಾದದ್ದು ಹಾಗು ದಕ್ಷಿಣದ ಶಕ್ತಿಪಾತ ಸಂಸಾರದ ಸುಳಿಯಲ್ಲಿ ಸಿಲುಕಿಸುವಂತಾದ್ದು. ಈ ಕಾರಣಕ್ಕಾಗಿ ಉತ್ತರಕ್ಕೆ ತಲೆ ಹಾಕಿ ಮಲಗಿದರೆ ಅಥವಾ ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತರೆ ನಮ್ಮ ಶಿರಛೇದವಾಗುತ್ತದೆ. ನಾವು ಪುನಃ ಈ ಸಂಸಾರದ ಸುಳಿಯಲ್ಲಿ ಸುತ್ತಬೇಕಾಗುತ್ತದೆ. ಇನ್ನು ಹೊಟ್ಟೆಗೆ ಹಾವಿನ ಸುತ್ತು. ಹಾವು ಕುಂಡಲಿನಿ ಶಕ್ತಿಯ ಸಂಕೇತ. ಇದು ಚಕ್ರಾಕಾರವಾಗಿ ತಲೆ ಕೆಳಗೆ ಹಾಕಿ ಮಲಗಿದ ಹಾವಿನ ರೂಪದಲ್ಲಿ ನಮ್ಮ ಮಲ-ಮೂತ್ರ ದ್ವಾರದ ಮಧ್ಯದಲ್ಲಿರುತ್ತದೆ. ಕುಂಡಲಿನಿ ಜಾಗೃತವಾಗುವುದು ಎಂದರೆ ಈ ಹಾವು ಹೆಡೆಯತ್ತಿ ನಿಲ್ಲುವುದು. ಕುಂಡಲಿನಿ ಜಾಗೃತವಾದಾಗ ಶಕ್ತಿ- ಮೂಲದಾರ, ಮಣಿಪುರ ಹಾಗು ಸ್ವದಿಷ್ಟಾನ ಶಕ್ತಿ ಕೇಂದ್ರಗಳಲ್ಲಿ ಊರ್ಧ್ವ ಮುಖವಾಗಿ ಸಂಚರಿಸುತ್ತದೆ. ನಮ್ಮ ಹೊಕ್ಕುಳಿನ ಮೇಲಿನ ಶಕ್ತಿ ಕೇಂದ್ರ ಜ್ಞಾನದ ಬಾಗಿಲು, ಗಣಪತಿ ಈ ಮೂರು ಶಕ್ತಿ ಕೇಂದ್ರಗಳನ್ನು ನಿಯಂತ್ರಿಸಿ ನಮಗೆ ಜ್ಞಾನದ ಬಾಗಿಲನ್ನು ತೆರೆಯುವ ಶಕ್ತಿದೇವತೆ. ಇಷ್ಟೊಂದು ಸಂಗತಿ ಈ ಪುಟ್ಟ ಕಥೆಯಲ್ಲಿದೆ. ಇದು ಹೂವಿನಿಂದ ಹಣ್ಣಿಗೆ ಹೋಗುವ ರೀತಿ. ಕೇವಲ ಮೇಲ್ನೋಟದ ಅರ್ಥದಲ್ಲೇ ನಿಂತರೆ ತೊಂದರೆಯಿಲ್ಲ, ಅದರಿಂದಾಚೆಗೆ ಏನೂ ಇಲ್ಲ ಎಂದು ತಿಳಿದರೆ ಅದು ಅನರ್ಥ.
ನಾವು ನಮ್ಮ ತಲೆಯಲ್ಲಿದ್ದದ್ದನ್ನು ವೇದದಲ್ಲಿ ಕಾಣದೆ, ವೇದದಲ್ಲಿದ್ದದ್ದನ್ನು ತಲೆಯೊಳಗೆ ತುಂಬಿಕೊಳ್ಳಬೇಕು. ವೇದವನ್ನು ಮೇಲ್ನೋಟದಲ್ಲಿ ಕಂಡಾಗ ಕೇವಲ ಜನ್ಮ-ಕರ್ಮ, ಹುಟ್ಟು-ಸಾವು, ಈ ಸುಳಿಯಲ್ಲೇ ಇರುತ್ತೇವೆ, ಎಂದೂ ಅಮರತ್ವದ ದಾರಿ ಕಾಣದು. ಮೇಲ್ನೋಟಕ್ಕೆ ವೇದವನ್ನು ಕಾಣುವವರು ಬೆಳಗಿನಿಂದ ಸಂಜೆಯ ತನಕ ಭೋಗ ಐಶ್ವರ್ಯ ಕರ್ಮ ಕಲಾಪದಲ್ಲಿ ನಿಂತು ಆತ್ಮ ಸಾಕ್ಷಾತ್ಕಾರವನ್ನು ಮರೆತು ನಿಲ್ಲುತ್ತಾರೆ. ಇದು ದೊಡ್ಡ ದುರಂತ. ಈಗ ನಮಗೆ ಒಂದು ಪ್ರಶ್ನೆ ಕಾಡುತ್ತದೆ. ಅದೇನೆಂದರೆ ಪ್ರಾಚೀನ ಅಧ್ಯಾತ್ಮ ಗ್ರಂಥಗಳನ್ನು ಏಕೆ ಒಗಟಿನ ರೂಪದಲ್ಲಿ ಬರೆದಿದ್ದಾರೆ? ಎಂದು. ತರಗತಿಗೊಂದು ಪಠ್ಯಪುಸ್ತಕವಿರುವಂತೆ ಈ ಗ್ರಂಥಗಳನ್ನು ಹಂತಹಂತವಾಗಿ ಅರ್ಥವಾಗುವ ರೀತಿ ಏಕೆ ಬರೆದಿಲ್ಲ? ಇತ್ಯಾದಿ. ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನೆಂದರೆ ಈ ಗ್ರಂಥಗಳನ್ನು ತಿಳಿದುಕೊಳ್ಳಲು ಯೋಗ್ಯತೆ ಬೇಕು. ಇಲ್ಲಿ ಪುಸ್ತಕ ಒಂದೆ; ಆದರೆ ಒಂದೇ ಪುಸ್ತಕದಲ್ಲಿ ಅನೇಕ ಹಂತದ ಶಿಕ್ಷಣ ಅಡಗಿದೆ. ಈ ವೇದ ಗ್ರಂಥಗಳು ಎಂದೂ ಅಯೋಗ್ಯರಿಗೆ ದಕ್ಕದು. ಅವು ಕೇವಲ ತನ್ನನ್ನು ಅರಿಯಬಲ್ಲ, ಅರಿತು ಅದರ ಸದುಪಯೋಗ ಮಾಡಬಲ್ಲವನ ಮುಂದೆ ಮಾತ್ರ ತೆರೆದುಕೊಳ್ಳುತ್ತವೆ. ಯೋಗ್ಯನಾದವನು ಈ ಗ್ರಂಥದ ಆಳಕ್ಕಿಳಿದಷ್ಟೂ ಹೆಚ್ಚು ಹೆಚ್ಚು ವಿಷಯ ತಿಳಿಯುತ್ತಾನೆ. ಒಂದು ಗ್ರಂಥವನ್ನು ಅರಿಯಲು ಅನೇಕ ಜನ್ಮಗಳ ಸಾಧನೆ ಬೇಕು.
·  ಶ್ಲೋಕ - 45
ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ ।
ನಿರ್ದ್ವನ್ದ್ವೋ ನಿತ್ಯಸತ್ತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್ ॥೪೫॥
ತ್ರೈಗುಣ್ಯ ವಿಷಯಾಃ ವೇದಾಃ ನಿಸ್ತ್ರೈಗುಣ್ಯಃ ಭವ ಅರ್ಜುನ ನಿರ್ದ್ವಂದ್ವಃ ನಿತ್ಯಸತ್ತ್ವಸ್ಥಃ ನಿರ್ಯೋಗಕ್ಷೇಮಃ ಆತ್ಮವಾನ್-- ವೇದಗಳು ಹೊರನೋಟಕ್ಕೆ ತ್ರಿಗುಣಗಳ ನಂಟನ್ನೇ ನಿರೂಪಿಸುತ್ತವೆ [ಒಳಗಿನಿಂದ ತ್ರಿಗುಣಗಳ ನಂಟಿನ ನಂಜನ್ನು ನಿವಾರಿಸುತ್ತವೆ]. ಓ ಅರ್ಜುನ, ನೀನು ತ್ರಿಗುಣಗಳ ನಂಟನ್ನು ನೀಗಿ ನಿಲ್ಲು. ದ್ವಂದ್ವಗಳ ತಾಕಲಾಟ ತೊಡೆದು ಸದಾ ಭಗವಂತನಲ್ಲಿ ಬಗೆಯನ್ನಿಡು. ಯೋಗ-ಕ್ಷೇಮದ ಹೊಣೆಯನ್ನು ಅವನಿಗೊಪ್ಪಿಸಿ ಅವನೇ ಸ್ವಾಮಿ ಎಂದು ನಂಬಿ ನಡೆ.
ಈವರೆಗೆ ನಾವು ವೇದವನ್ನು ಹೇಗೆ ಅನುಸಂಧಾನ ಮಾಡಬೇಕು, ಅದರ ಮೇಲ್ನೋಟದ ಅರ್ಥದಿಂದ ಆಳಕ್ಕೆ ಹೇಗೆ ಇಳಿಯಬೇಕು ಎನ್ನುವುದನ್ನು ಕೃಷ್ಣ ಅರ್ಜುನನಿಗೆ ಹೇಳಿದ್ದನ್ನು ನೋಡಿದೆವು. ಇನ್ನಷ್ಟು ಸ್ಪಷ್ಟವಾಗಿ, ಅದು ಹೇಗೆ ಕಾಣುತ್ತದೆ ಹಾಗು ಅದನ್ನು ಹೇಗೆ ನೋಡಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ. ಇದು ಒಂದು ರೀತಿಯಲ್ಲಿ ಇಡೀ ಆಧ್ಯಾತ್ಮದ ಅನುಸಂಧಾನದ ಪ್ರಮುಖವಾದ ವಿಚಾರ. ಇಲ್ಲಿ ಕೃಷ್ಣ ಅದನ್ನು ಹೇಗೆ ಅನುಸಂಧಾನ ಮಾಡಬೇಕು, ಹಾಗು ನಮ್ಮ ಮನಸ್ಸನ್ನು ಹೇಗೆ ಅಣಿಗೊಳಿಸಬೇಕು ಎಂದು ಹೇಳುತ್ತಾನೆ. ನಮಗೆ ಮೇಲ್ನೋಟಕ್ಕೆ ವೇದ ಸತ್ವ-ರಜಸ್ಸು-ತಮೋಗುಣಗಳಿಗೆ(ತ್ರೈಗುಣ್ಯ) ಸಂಬಂಧಪಟ್ಟ ಪ್ರಾಪಂಚಿಕ ವಿಷಯ, ಹಾಗು ಕೇವಲ ಪ್ರಾಪಂಚಿಕ ಅರ್ಥವನ್ನೇ ಹೇಳುವಂತೆ ಕಾಣುತ್ತದೆ-ಕೆಂಪು ಕನ್ನಡಕ ಧರಿಸಿದವನಿಗೆ ಪ್ರಪಂಚವೆಲ್ಲಾ ಕೆಂಪಾಗಿ ಕಾಣುವಂತೆ. ಉದಾಹರಣೆಗೆ: ಸಂತಾನ ವೃದ್ಧಿ, ಹಟ್ಟಿ ತುಂಬಾ ಹಸು, ಕೈತುಂಬ ದುಡ್ಡು, ಮನೆತುಂಬ ಮಕ್ಕಳು, ರಾಜಸೂಯ, ಅಶ್ವಮೇಧ, ಪುರುಷಮೇಧ ಇತ್ಯಾದಿ. ಇವು ವೇದದಲ್ಲಿ ಮೇಲ್ನೋಟಕ್ಕೆ ಕಾಣುವವು. ಇವೆಲ್ಲವೂ ತೀರಾ ಪ್ರಾಪಂಚಿಕ ವಿಷಯಗಳು. ಇದರಿಂದಾಗಿ ವೇದ ನಮ್ಮನ್ನು ಆಧ್ಯಾತ್ಮದ ಆಳಕ್ಕೆ ಕೊಂಡೊಯ್ಯುವುದಿಲ್ಲ ಎನ್ನುವಂತೆ ಬಾಸವಾಗುತ್ತದೆ. ಆದರೆ ನಾವು ವೇದವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಪ್ರಾಪಂಚಿಕ ಪ್ರಭಾವವನ್ನು ದಾಟಿ ನಿಲ್ಲಬೇಕು. ಪ್ರಾಪಂಚಿಕ ಪ್ರಭಾವ ಕೆಂಪು ಕನ್ನಡಕದಂತೆ. ಅದರ ಪ್ರಭಾವದಲ್ಲಿ ವೇದವನ್ನು ಕಂಡರೆ ನಮಗೆ ಕಾಣುವುದು ಕೇವಲ ಪ್ರಾಪಂಚಿಕ ವಿಷಯ ಮಾತ್ರ. ಅದಕ್ಕಾಗಿ ನಾವು ತ್ರೈಗುಣ್ಯವರ್ಜಿತರಾಗಬೇಕು. ಈ ತ್ರೈಗುಣ್ಯದ ಪ್ರಭಾವವನ್ನು ದಾಟಿ ನಮ್ಮ ನಿಜವಾದ ಸ್ವಭಾವ ಏನು ಎನ್ನುವುದನ್ನು ಗುರುತಿಸಿಕೊಂಡಾಗ ಶುದ್ಧ ಚಿಂತನೆ ಸಾಧ್ಯ. ತ್ರಿಗುಣದ ಬೇಲಿಯನ್ನು ದಾಟದೆ ಸತ್ಯ ತಿಳಿಯುವುದಿಲ್ಲ. ತ್ರಿಗುಣದ ಪ್ರಭಾವದಿಂದ ಪೂರ್ಣ ಆಚೆಗೆ ನಿಲ್ಲುವುದು ಅಸಾಧ್ಯ, ಆದರೆ ಈ ವಿಷಯ ಗೊತ್ತಿದ್ದು ಅದರ ಎಚ್ಚರ ಇದ್ದರೆ ನಾವು ಸಾಧನೆ ಮಾಡಲು ಸಾಧ್ಯ. ನಾವು ಎಷ್ಟು ಅಪವಿತ್ರರಾಗಿರಲಿ, ಬಾಯಿಯಲ್ಲಿ ಭಗವಂತನ ನಾಮ ಸ್ಮರಣೆ, ನಮ್ಮೊಳಗೆ ಭಗವಂತನಿದ್ದಾನೆ ಎನ್ನುವ ಎಚ್ಚರ ನಮ್ಮನ್ನು ಶುದ್ಧವಾಗಿಸುತ್ತದೆ.
ಧ್ಯಾನ ಮಾಡುವಾಗ ನಮ್ಮ ಮನಸ್ಸು ಹೊರ ಪ್ರಪಂಚದತ್ತ ಸುಳಿಯದಂತೆ ನೋಡಿಕೊಳ್ಳಬೇಕು. ಆತ್ಮಜ್ಞಾನವಿಲ್ಲದೆ ಹೋಮ ಹವನ ಮಾಡಿ ಉಪಯೋಗವಿಲ್ಲ. ನಮಗೆ ಆಶ್ರಯವಾಗಿರುವ ಆತ್ಮತತ್ವ ಭಗವಂತನ ಅರಿವಿನಿಂದ ನಿಸ್ವಾರ್ಥವಾಗಿ ಸಾಧನೆ ಮಾಡಬೇಕು. ಎಂದೂ ಕಪಟ ವಂಚನೆ ಇಲ್ಲದ ಧರ್ಮವನ್ನು ಆಚರಿಸಬೇಕು. ನಮ್ಮ ಮನಸ್ಸನ್ನು ಶುದ್ಧ ಭಾವ ಚಿಂತನೆಗೆ ಅಣಿಗೊಳಿಸಬೇಕು. ನಮ್ಮ ಸ್ವಾರ್ಥದತ್ತ ನೋಡದೆ, ತ್ರಿಗುಣಗಳನ್ನು ದಾಟಿ ನಿಂತರೆ ಮಾತ್ರ ನಮಗೆ ವೇದದ ನಿಜ ಸಂದೇಶ ತಿಳಿಯುತ್ತದೆ. ಈ ಸ್ಥಿತಿಯಲ್ಲಿ ವೇದ ಓದಿದರೆ ಅದು ಕೇವಲ ಲೌಕಿಕ ವಿಷಯವಲ್ಲ ಎನ್ನುವುದು ಅರ್ಥವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕರ್ಮವನ್ನು, ಪೂಜೆ ಪುರಸ್ಕಾರವನ್ನು, ನಿಸ್ವಾರ್ಥವಾಗಿ ಭಗವಂತನ ಆರಾಧನೆ ಎಂದು ಮಾಡಬೇಕು. ನಮಗೇನು ಬೇಕು ಅನ್ನುವುದು ನಮಗೆ ಗೊತ್ತಿಲ್ಲ , ನಮಗೆ ಅಗತ್ಯವಾದುದ್ದನ್ನು ಭಗವಂತ ಕೊಟ್ಟೇ ಕೊಡುತ್ತಾನೆ ಎಂದು, ನಮ್ಮ ಭವಿಷ್ಯದ ಚಿಂತೆಯನ್ನು ಭಗವಂತನಿಗೊಪ್ಪಿಸಿ, ಮುನ್ನೆಡೆದರೆ ಜ್ಞಾನ ಸಿದ್ಧಿಯಾಗುತ್ತದೆ. ಇಲ್ಲದ್ದನ್ನು ಪಡೆಯುವುದು ಯೋಗ, ಪಡೆದಿದ್ದನ್ನು ಉಳಿಸಿಕೊಳ್ಳುವುದು ಕ್ಷೇಮ. ಈ ಯೋಗ ಕ್ಷೇಮದಲ್ಲೇ ನಮ್ಮ ಇಡೀ ಜೀವನ ಕಳೆದು ಹೋಗುತ್ತದೆ. ಇದನ್ನು ಬಿಟ್ಟು ಭಗವಂತ ನಮಗೆ ಏನು ಕೊಟ್ಟಿದ್ದಾನೋ ಅದರಲ್ಲಿ ಸಂತೋಷವಾಗಿರಲು ಕಲಿಯಬೇಕು. 'ನಿರ್ಯೋಗಕ್ಷೇಮದ' ಸ್ಥಿತಿಯಲ್ಲಿ ಮಾತ್ರ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ನಮ್ಮ ಯೋಗಕ್ಷೇಮದ ಹೊಣೆ ಆ ಭಗವಂತನದ್ದು, ಎಲ್ಲರೊಳಗೆ ಅಂತರ್ಯಾಮಿಯಾಗಿರುವ ಭಗವಂತ ಎಂದೆಂದೂ ನಮ್ಮನ್ನು ರಕ್ಷಿಸುತ್ತಾನೆ ಎನ್ನುವ ಭರವಸೆಯಿಂದ, ಭಗವಂತನ ಚಿಂತನೆಗೆ ತೊಡಗಬೇಕು. ಇದು ಆಧ್ಯಾತ್ಮ ಸಾಧನೆಗೆ ಬೇಕಾದ ಮಾನಸಿಕ ತಯಾರಿ. ಇಂಥಹ ಮನಃಸ್ಥಿತಿಯಲ್ಲಿ ಯಾವ ಗ್ರಂಥ ಓದಿದರೂ ಅದು ಭಗವಂತನ ಸ್ತುತಿಯಾಗುತ್ತದೆ. ಈ ಮನಃಸ್ಥಿತಿ ತಲುಪದೆ ವೇದಾಂತ ನಮಗೆ ಅರ್ಥವಾಗುವುದಿಲ್ಲ.
ಅಧ್ಯಾತ್ಮ ಮಾರ್ಗದಲ್ಲಿ ಸಾಗುವ ವ್ಯಕ್ತಿಯ ಸಾಧನೆ ಏನಿರಬೇಕು, ಅಂತರಂಗದ ಅನುಷ್ಠಾನ ಹೇಗಿರಬೇಕು, ಎನ್ನುವುದನ್ನು ಸ್ಪಷ್ಟಪಡಿಸಿದ ಕೃಷ್ಣನ ಮಾತಿನಿಂದ ನಮಗೆ ಒಂದು ಪ್ರಶ್ನೆ ಮೂಡಬಹುದು. ಕೃಷ್ಣ ಕರ್ಮ ಮತ್ತು ಜ್ಞಾನಗಳಲ್ಲಿ- ಜ್ಞಾನಕ್ಕೆ ಒತ್ತುಕೊಟ್ಟು ಸಾಗಬೇಕು, ನಮ್ಮ ಯಾವುದೇ ಕ್ರಿಯೆಯ ಅನುಸಂಧಾನ ಜ್ಞಾನದ ಕಡೆಗೆ ಪೂರಕವಾಗಿರಬೇಕು ಎನ್ನುತ್ತಾನೆ.ಏಕೆ ಜ್ಞಾನ ಸಾಧನೆಗೆ ಇಷ್ಟೊಂದು ಮಹತ್ವ? ಕರ್ಮಯೋಗದಿಂದ ಸ್ವರ್ಗವನ್ನು ಪಡೆಯಬಹುದಲ್ಲ? ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಕೃಷ್ಣ ಇಲ್ಲಿ ಉತ್ತರಿಸುತ್ತಾನೆ. ಹಿಂದೆ ವೇದವನ್ನು ಜ್ಞಾನಕಾಂಡ, ಕರ್ಮಕಾಂಡ ಮತ್ತು ಉಪಾಸನಕಾಂಡ ಎಂದು ಮೂರು ವಿಭಾಗ ಮಾಡಿದ ಪರಂಪರೆ ಇತ್ತು. ಆದರೆ ಕೃಷ್ಣ ಹೇಳುತ್ತಾನೆ, ವೇದಕ್ಕೆ ಇರುವುದು ಒಂದೇ ಮುಖ ಎಂದು. ವೇದದಲ್ಲಿ ಹೇಳುವ ಕರ್ಮ, ಉಪಾಸನೆ, ಎಲ್ಲವುದರ ಹಿಂದೆ ಜ್ಞಾನವಡಗಿದೆ. ಎಲ್ಲವೂ ಜ್ಞಾನಕ್ಕೊಸ್ಕರ. ಆದ್ದರಿಂದ ಇಡೀ ವೇದವೇ ಜ್ಞಾನಕಾಂಡ ಎಂದು ಮುಂದಿನ ಶ್ಲೋಕದಲ್ಲಿ ಕೃಷ್ಣ ಒತ್ತಿ ಹೇಳುತ್ತಾನೆ.
·  ಶ್ಲೋಕ - 46
ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ ।
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ ॥೪೬॥
ಯಾವಾನ್ ಅರ್ಥಃ ಉದಪಾನೇ ಸರ್ವತಃ ಸಂಪ್ಲುತ ಉದಕೇ ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ --ಬಾವಿಯಿಂದ ಏನೇನು ಉಪಯೋಗವಿದೆಯೋ ಅದೆಲ್ಲವೂ ತುಂಬಿ ಹರಿಯುವ ನೀರ ನೆಲೆಯಲ್ಲಿ ಒಳಗೊಂಡಿದೆ. ಎಲ್ಲಾ ವೇದಗಳಲ್ಲಿ ಏನು ಫಲವೋ ಅದು ಬ್ರಹ್ಮವನ್ನು ಬಲ್ಲ ವಿಜ್ಞಾನಿಯ ಫಲದಲ್ಲಿ ಒಳಗೊಂಡಿದೆ.[ಪ್ರಕೃತಿಯೆ ನೀರಂತೆ ಎಲ್ಲೆಡೆ ತುಂಬಿ ಹರಿಯುವ ಪ್ರಳಯದಲ್ಲಿ ಕೂಡಾ ತುಂಬಿದ ಕೊಡವಾಗಿ, ಇನ್ನೊಬ್ಬರ ಕಾಪಿಗೊಳಪಡದೆ, ಕಾಲಾದಿಗಳನ್ನು ನಿಯಮಿಸುವ ಭಗವಂತನಿಂದ ಎನಿತು ಲಭ್ಯವೋ -ಅದು ಎಲ್ಲ ವೇದಗಳನ್ನು ಬಲ್ಲ ಹಿರಿಯ ಜ್ಞಾನಿಗೆ ಮಾತ್ರ ಸುಲಭ] ಈ ಶ್ಲೋಕ ಒಗಟಿನಂತಿದೆ. ನೇರವಾಗಿ ನೋಡಿದರೆ ಅರ್ಥ ತಿಳಿಯದ ಶ್ಲೋಕವಿದು.ಈ ಶ್ಲೋಕವನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಶ್ಲೋಕದಲ್ಲಿ ಮುಳುಗಬೇಕು. ಆಗ ಆಳದಲ್ಲಿನ ಮುತ್ತು ರತ್ನಗಳು ನಮಗೆ ಸಿಗುತ್ತವೆ. ನಾವು ನಮ್ಮ ಅಹಂಕಾರವನ್ನು ಸಂಪೂರ್ಣ ತೊರೆದು ಶರಣಾಗತಿಯಿಂದ(Total Submission) ನೋಡಿದಾಗ ಅದು ತನ್ನನ್ನು ತೆರೆದುಕೊಳ್ಳುತ್ತದೆ.
ಈ ಶ್ಲೋಕವನ್ನು ಸ್ವಲ್ಪ ಬಿಡಿಸಿ ಹೀಗೆ ಬರೆಯಬಹುದು : ಯಾವಾನ್ ಅರ್ಥ ಉದಪಾನೇ ಯಾವಾನ್ ಅರ್ಥ ಸರ್ವತಃ ಸಂಪ್ಲುತೋದಕೇ ತಾವಾನ್ ಸರ್ವೇಷು ವೇದೇಷು ತಾವಾನ್ ಬ್ರಾಹ್ಮಣಸ್ಯ ವಿಜಾನತಃ ಒಂದು ಬಾವಿ ತೋಡಿ ಅದರಲ್ಲಿ ಬರುವ ನೀರಿನಿಂದ ಏನು ಪ್ರಯೋಜನವೋ, ಎಲ್ಲಾ ಪ್ರಯೋಜನಗಳ ಜೊತೆಗೆ ಇನ್ನೂ ಅನೇಕಾನೇಕ ಪ್ರಯೋಜನಗಳನ್ನು ತುಂಬಿ ಹರಿಯುವ ನೀರಿನ ನೆಲೆ ಕೊಡಬಲ್ಲದು. ಕರ್ಮ ಕಾಂಡವನ್ನು ಮಾಡುವವನ ಸ್ಥಿತಿ ಮನೆಯಲ್ಲಿ ಕಷ್ಟಪಟ್ಟು ಬಾವಿ ತೋಡಿ ಅದರಿಂದ ನೀರು ಸೇದಿದಂತೆ. ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಂಡವನ ಸ್ಥಿತಿ ತುಂಬಿ ಹರಿಯುವ ನೀರಿನ ನೆಲೆಯ ದಡದಲ್ಲಿದ್ದಂತೆ. ಅಪರೋಕ್ಷ ಜ್ಞಾನಿ ಎಲ್ಲವುದರಲ್ಲೂ ಭಗವಂತನನ್ನು ಕಾಣುತ್ತಾನೆ. ಬ್ರಹ್ಮಜ್ಞಾನಿ ಸದಾ ನಿರ್ಮಲವಾಗಿ ತುಂಬಿ ಹರಿಯುವ ನೀರಿನ ನೆಲೆಯ ಪಕ್ಕ ನಿಂತವನಂತೆ. ಇಡೀ ವೇದವನ್ನು ಓದಿ ಕರ್ಮದಲ್ಲೇ ಕುಳಿತವನು ಬೆವರು ಸುರಿಸಿ ಬಾವಿಯಿಂದ ನೀರು ಸೇದುವವನಂತೆ.
ಈ ಶ್ಲೋಕದಲ್ಲಿ 'ಬ್ರಾಹ್ಮಣ' ಎನ್ನುವ ಪದ ಬಂದಿದೆ. ಇದನ್ನು 'ಜಾತಿ' ಎಂದು ಪರಿಗಣಿಸಿದರೆ ಈ ಶ್ಲೋಕದ ನಿಜ ಸಂದೇಶ ತಿಳಿಯುವುದಿಲ್ಲ. ವೇದ ಗ್ರಂಥಗಳಲ್ಲಿ ಎಲ್ಲೂ ಜಾತಿಯ ಬಗ್ಗೆ ಪ್ರಸ್ತಾಪವಿಲ್ಲ. ಬ್ರಾಹ್ಮಣ ಅಂದರೆ 'ಬ್ರಹ್ಮ ಅಣತೀತಿ'; ಅಂದರೆ ಬ್ರಹ್ಮ ತತ್ವವನ್ನು ಅರ್ಥ ಮಾಡಿಕೊಂಡವ ಎಂದರ್ಥ. 'ಬ್ರಹ್ಮ' ಎಂದರೆ ಎಲ್ಲಕ್ಕಿಂತ ದೊಡ್ಡದಾದದ್ದು. ಎಲ್ಲಕ್ಕಿಂತ ದೊಡ್ಡದು ವೇದ ಮತ್ತು ವೇದವೇದ್ಯನಾದ ಭಗವಂತ. ಆದ್ದರಿಂದ ವೇದವನ್ನು ಅರಿತವನು, ವೇದವೇದ್ಯ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವನು ಬ್ರಾಹ್ಮಣ. ಬ್ರಹ್ಮನನ್ನು ಅಪರೋಕ್ಷವಾಗಿ ತಿಳಿದ ಜ್ಞಾನಿಗೆ ತುಂಬಿ ಹರಿವ ನೀರನ ಫಲವಾದರೆ, ಕರ್ಮಕನಿಗೆ ಬಾವಿಯ ಫಲ. ಶಾಸ್ತ್ರದಿಂದ ವಿಶಿಷ್ಟವಾದ ಅರಿವನ್ನು ಪಡೆದ ವಿಜ್ಞಾನಿ ಮಾತ್ರ ಭಗವಂತನನ್ನು ಕಾಣಬಲ್ಲ. ಇಲ್ಲಿ ವಿಜ್ಞಾನಿ ಅಂದರೆ ಯಾವುದೇ ಒಂದು ವಸ್ತುವಿನ ಬಗ್ಗೆ ತಳಸ್ಪರ್ಶಿ ಜ್ಞಾನ ಉಳ್ಳವನು ಎಂದರ್ಥ. ಈ ಶ್ಲೋಕದಲ್ಲಿ ಇನ್ನೊಂದು ವಿಷಯವಡಗಿದೆ. "ಸರ್ವತಃ ಸಂಪ್ಲುತೋದಕ" ಎಂದರೆ ನೀರು ತುಂಬಿದ ಸ್ಥಿತಿ. ಇಲ್ಲಿ ನೀರು ಎಂದರೆ ಪ್ರಳಯಜಲ. ಪ್ರಕೃತಿ ಸೂಕ್ಷ್ಮವಾದ ಪರಮಾಣುವಿನ ಸಮುದ್ರ ರೂಪದಲ್ಲಿರುವ ಕಾಲ-ಪ್ರಳಯ ಕಾಲ. ಇಂತಹ ಪ್ರಳಯ ಸಮುದ್ರದಲ್ಲಿ ಮಲಗಿರುವವ 'ಉದಪಾನ'. ಉತ್+ಅಪ+ಪಾನ-ಅಂದರೆ ಎಲ್ಲಕ್ಕಿಂತ ಉತ್ಕೃಷ್ಟವಾದ, ಸದಾ ಎಚ್ಚರದಿಂದಿರುವ(ಉತ್); ಎಲ್ಲರನ್ನು ಪಾಲಿಸುವ, ಹಾಗು ತನಗೆ ಹಿರಿದಾದ ಇನ್ನೊಬ್ಬ ಪಾಲಕನಿಲ್ಲದ ಸರ್ವೋತ್ತಮ(ಅಪ); ಎಲ್ಲರನ್ನೂ ನಿಯಂತ್ರಿಸುವ ಸರ್ವಚೇಷ್ಟಕ(ಅನ). ಈ ತತ್ವದ ಮೂಲಕ ಏನೇನು ಉಪಯೋಗವನ್ನು ಪಡೆಯಬಹುದೋ ಆ ಉಪಯೋಗವನ್ನು ಸಮಸ್ತ ವೇದದಲ್ಲಿ, ವೇದದ ಒಂದೊಂದು ಮಂತ್ರದಲ್ಲಿ, ಮಂತ್ರದ ಒಂದೊಂದು ವಾಕ್ಯದಲ್ಲಿ, ವಾಕ್ಯದ ಒಂದೊಂದು ಪದದಲ್ಲಿ, ಪದದ ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಾಣುವ ಬ್ರಹ್ಮಜ್ಞಾನಿ ಪಡೆಯುತ್ತಾನೆ.
ವೇದವನ್ನು ಕೇವಲ ಮೇಲ್ನೋಟದಲ್ಲಿ ಓದಿದರೆ ಅದರಿಂದ ಏನೂ ಉಪಯೋಗವಿಲ್ಲ. ವೇದದ ಸಮಗ್ರ ಮಂತ್ರದಲ್ಲಿ, ಮಂತ್ರದ ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಂಡು ಭಗವನ್ಮಯನಾದಾಗ, ಭಗವಂತನ ಸಮಸ್ತ ಅನುಗ್ರಹಕ್ಕೆ ಪಾತ್ರನಾಗಿ, ಸಮಗ್ರ ಉಪಯೋಗವನ್ನು ಪಡೆಯಬಹುದು. ಫಲ ಕಾಮನೆಯಿಂದ ಕರ್ಮಕಾಂಡ ಬೇಡ, ಸಮಗ್ರವೇದವನ್ನು ಭಗವಂತನ ಚಿಂತನೆಗೆ ಮೀಸಲಿಡಿಎಂದು ಹೇಳಿದ ಕೃಷ್ಣನ ಮಾತಿನಿಂದ ನಮಗೆ ಸ್ವಲ್ಪ ಗೊಂದಲವಾಗಬಹುದು. ಏಕೆಂದರೆ ವೇದದಲ್ಲಿ ಪ್ರತಿಯೊಂದು ಕಡೆ ಫಲವನ್ನು ಹೇಳಿದ್ದಾರೆ. ಏಕೆ ಹೀಗೆ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈ ಹಿಂದೆ ಹೇಳಿದಂತೆ ಅಧ್ಯಾತ್ಮದ ಪಠ್ಯಪುಸ್ತಕ ಸಾಧನೆಯ ಎಲ್ಲಾ ಹಂತದಲ್ಲೂ-ಚಿಕ್ಕವರಿಂದ ದೊಡ್ಡವರಿಗೆ ಎಲ್ಲರಿಗೂ ಒಂದೆ. ಇನ್ನೂ ಆರಂಭದ ಹಂತದಲ್ಲಿರುವವರಿಗೆ ಏನನ್ನೂ ಬಯಸದೆ ನಿರ್ಲಿಪ್ತರಾಗಿ ಅನುಸರಿಸಿ ಎಂದು ಹೇಳಿದರೆ ಅವರಿಗೆ ವೇದಾಂತದ ಬಗ್ಗೆ ಆಸಕ್ತಿಯೇ ಬಾರದಿರಬಹುದು. ಅದಕ್ಕಾಗಿ, ಮಕ್ಕಳಿಗೆ ಬೆಲ್ಲ ಕೊಟ್ಟು ಔಷಧ ಕುಡಿಸಿದಂತೆ ವೇದಗಳಲ್ಲಿ ಫಲವನ್ನು ಹೇಳಿದ್ದಾರೆ. ಇದು ವೇದಾಭ್ಯಾಸದ ಆರಂಭದ ಹಂತದಲ್ಲಿ ಉಪಯುಕ್ತ. ಕರ್ಮ ಮಾಡುವಾಗ ನಮ್ಮ ಮನಃಸ್ಥಿತಿ ಹೇಗಿರಬೇಕು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರವಾಗಿ ಹೇಳಿದ್ದಾನೆ.
·  ಶ್ಲೋಕ - 47
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋSಸ್ತ್ವಕರ್ಮಣಿ ॥೪೭॥
ಕರ್ಮಣಿ ಏವ ಅಧಿಕಾರಃ ತೇ ಮಾ ಫಲೇಷು ಕದಾಚನ ಮಾ ಕರ್ಮಫಲ ಹೇತುಃ ಭೂಃ ಮಾ ತೇ ಸಂಗಃ ಅಸ್ತು ಅಕರ್ಮಣಿ --ಕರ್ಮದಲ್ಲಿ ಮಾತ್ರ ನಿನಗೆ ಹಕ್ಕು, ಫಲಗಳಲ್ಲಿ ಎಂದೂ ಇಲ್ಲ. ಫಲವನ್ನೇ ನಂಬಿ ಕರ್ಮ ಮಾಡಬೇಡ (ಕರ್ಮಕ್ಕೆ ಫಲ ನೀಡುವ ಶಕ್ತಿ ತಾನೆಂದು ಭ್ರಮಿಸಬೇಡ). ಅಂತೆಯೇ ನಿಷ್ಕ್ರಿಯತೆ ನಿನಗಂಟದಿರಲಿ.
ಈ ಶ್ಲೋಕವನ್ನು ಅಪಾರ್ಥ ಮಾಡಿಕೊಳ್ಳುವವರೆ ಹೆಚ್ಚು. ಕರ್ಮ ಮಾಡಬೇಕು ಆದರೆ ಫಲವನ್ನು ಬಯಸಬಾರದು ಅಂದರೆ ಏನು? ಇದು ಮನುಷ್ಯನನ್ನು ನಿಷ್ಕ್ರಿಯಗೊಳಿಸುತ್ತದೆ, ಎಂಬಿತ್ಯಾದಿ ವಾದಗಳನ್ನು ಈ ಶ್ಲೋಕದ ಮೇಲೆ ಅನೇಕ ಮಂದಿ ಮಂಡಿಸಿದ್ದಾರೆ. ಆದರೆ ಅವರ್ಯಾರೂ ಶ್ಲೋಕದ ನಿಜವಾದ ಅರ್ಥವನ್ನು ತಿಳಿಯಲು ಪ್ರಯತ್ನಿಸಿಲ್ಲ. ಇಲ್ಲಿ ಫಲವನ್ನು ಬಯಸಬೇಡ ಎಂದು ಎಲ್ಲಿಯೂ ಹೇಳಿಲ್ಲ. ಅದಕ್ಕೆ ಬದಲಾಗಿ ಫಲದಲ್ಲಿ ಅಧಿಕಾರ ಸಾಧಿಸಬೇಡ ಎಂದಿದ್ದಾನೆ ಕೃಷ್ಣ. ಕರ್ಮ ನಿನ್ನ ಕೈಯಲ್ಲಿದೆ- ಆದರೆ ಕರ್ಮ ಫಲ ಭಗವಂತನ ಕೈಯಲ್ಲಿದೆ. ನೀನು ನಾನೇ ಕರ್ಮ ಫಲದ ಹೇತು ಎಂದು ತಿಳಿಯಬೇಡ. ಕರ್ಮಫಲದ ಹೇತು ಭಗವಂತ ಎನ್ನುವ ಎಚ್ಚರ ನಿನಗಿರಲಿ ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಬಯಕೆಯನ್ನು ನಿರಾಕರಣೆ ಮಾಡಿಲ್ಲ, ಆದರೆ 'ಹೀಗೇ ಆಗಬೇಕು' ಇಲ್ಲದಿದ್ದರೆ ನಾನು ಈ ಕರ್ಮವನ್ನು ಮಾಡಲಾರೆ ಎನ್ನುವ ಅಭಿಪ್ರಾಯ ಸರಿಯಲ್ಲ ಎಂದಿದ್ದಾನೆ. ಬಯಸುವ ಅಧಿಕಾರ ನಮಗಿದೆ ಆದರೆ ಫಲವನ್ನು ಕೊಡುವವ ಭಗವಂತ ಎನ್ನುವ ಪರಿಜ್ಞಾನ ಬೇಕು. ಎಷ್ಟೋ ಸಲ ನಾವು ಅರಿವಿಲ್ಲದೆ ತಪ್ಪನ್ನು ಬಯಸುತ್ತೇವೆ. ಆಗ ಭಗವಂತ ಅದನ್ನು ಕೊಡಲಾರ. ಏಕೆಂದರೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನ ನಮಗಿಲ್ಲ. ಈ ಎಚ್ಚರ ಇದ್ದರೆ ನಮಗೆ ಫಲ ಸಿಗದಿದ್ದಾಗ ದುಃಖವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ನಿಷ್ಠೆಯಿಂದ ಭಗವದರ್ಪಣೆಯಾಗಿ ಮಾಡಿ, ಅದರಿಂದ ಏನು ಫಲ ಬಂತೋ ಅದನ್ನು ಹಾಗೇ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡರೆ ದುಃಖವಿರುವುದಿಲ್ಲ.
ಯಾವ ಕಾಲಕ್ಕೂ ನಿಷ್ಕ್ರೀಯನಾಗಿ ಕುಳಿತುಕೊಳ್ಳದೆ ಸದಾ ಕರ್ತವ್ಯ ಶೀಲನಾಗು ಎನ್ನುತ್ತಾನೆ ಕೃಷ್ಣ. ಹೀಗೇ ಆಗಬೇಕು’, ‘ಇಂಥಹ ಫಲವೇ ಬರಬೇಕುಎನ್ನುವ ವಿಚಾರವನ್ನು ಬಿಟ್ಟು, ಕರ್ತವ್ಯ ನಿರ್ವಹಿಸಿದಾಗ ಯಾವ ದುಃಖವೂ ಇಲ್ಲ. ಅದನ್ನು ಬಿಟ್ಟು ಫಲದಲ್ಲಿ ಅಧಿಕಾರ ಸಾಧಿಸಿದರೆ ಆ ಫಲ ದಕ್ಕದೇ ಇದ್ದಾಗ ಆಗುವ ಆಘಾತ, ವ್ಯಾಕುಲತೆ(Mental depression) ಭಯಾನಕ. ಸೋಲನ್ನಾಗಲಿ ಗೆಲುವನ್ನಾಗಲಿ ಸಮನಾಗಿ ಕಾಣುವ ಮನಃಸ್ಥಿತಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಹಿಂದೆ ಹೇಳಿದಂತೆ ನಾವು ಸೋಲಿನಲ್ಲಿ ಕಲಿತಷ್ಟು ಗೆಲುವಿನಲ್ಲಿ ಕಲಿಯಲಾಗದು. ಭಗವಂತ ನಮಗೆ ಫಲವನ್ನು ಕೊಡುವಾಗ ನಮ್ಮ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೊಡುತ್ತಾನೆಯೇ ಹೊರತು , ನಾವು ಅಂದುಕೊಂಡಂತೆ ಅಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸಿ, ಎಂದೂ ನಿಷ್ಕ್ರೀಯನಾಗದೆ, ಫಲದಲ್ಲಿ ಅಧಿಕಾರವನ್ನು ಸಾಧಿಸದೆ ಮುನ್ನೆಡೆಯಬೇಕು ಎನ್ನುವುದು ಕೃಷ್ಣನ ಕರ್ಮ ಸಿದ್ಧಾಂತ. ಇಲ್ಲಿ ಅರ್ಜುನ ತಾನು ಧರ್ಮ ರಕ್ಷಣೆ ಮಾಡಲು, ಧರ್ಮದ ವಿಜಯಕ್ಕಾಗಿ ಯುದ್ಧ ಮಾಡುತ್ತೇನೆ ಅಂದುಕೊಳ್ಳುವುದು ತಪ್ಪಲ್ಲ. ಈ ಹಂತದಲ್ಲಿ ಸೋಲು-ಗೆಲುವಿನ ಬಗ್ಗೆ ಯೋಚಿಸದೆ, ಅದನ್ನು ಪೂರ್ಣ ಭಗವಂತನಲ್ಲಿ ಅರ್ಪಿಸಿ, ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿಷ್ಟೆಯಿಂದ ತನ್ನ ಶಕ್ತಿ ಮೀರಿ ನಿಭಾಯಿಸುವುದು ಆತನ ಧರ್ಮ. ಹೀಗೆ ಮಾಡಿದಾಗ ಯುದ್ಧದ ಪ್ರತಿಯೊಂದು ಹಂತದಲ್ಲಿ ಬರುವ ಫಲಿತಾಂಶ ಆತನನ್ನು ಕಂಗೆಡಿಸಲಾರವು. ಏನೇ ಫಲಿತಾಂಶ ಬಂದರೂ ಅದು ಭಗವಂತನ ಪ್ರಸಾದ ಎಂದು ಸ್ವೀಕರಿಸುತ್ತಾ ಮುಂದೆ ಸಾಗಬೇಕು ಅಷ್ಟೆ.
·  ಶ್ಲೋಕ - 48
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ॥೪೮॥
ಯೋಗಸ್ಥಃ ಕುರು ಕರ್ಮಾಣಿ ಸಂಗಮ್ ತ್ಯಕ್ತ್ವಾ ಧನಂಜಯ- ಸಿದ್ಧಿ ಅಸಿದ್ಧ್ಯೋಃ ಸಮಃ ಭೂತ್ವಾ ಸಮತ್ವಂ ಯೋಗಃ ಉಚ್ಯತೇ - ಧನಂಜಯ, 'ಯೋಗ' ದಲ್ಲಿ ನೆಲೆಗೊಂಡು ಕರ್ಮಗಳನ್ನು ಮಾಡು-ಫಲದ ನಂಟನ್ನು ತೊರೆದು, ಕೆಲಸ ಕೈಗೂಡಿದರೂ, ಕೆಟ್ಟರೂ-ಸಮಭಾವದಿಂದಿದ್ದು. ಇಂಥ ಸಮಭಾವಕ್ಕೆ 'ಯೋಗ'ವೆಂದು ಹೆಸರು.
ಎಂತಹ ಕರ್ಮ ಮಾಡುವುದಾದರೂ ಸಹ ಸುಮ್ಮನೆ ಮಾಡುವುದಲ್ಲ. ಅದರ ಹಿಂದೆ ಒಂದು ಯೋಗವಿರಬೇಕು. ಭಗವಂತ ಫಲವನ್ನು ಕೊಡತಕ್ಕಂತವ, ನನ್ನಿಂದ ಕರ್ಮವನ್ನು ಮಾಡಿಸತಕ್ಕಂತವನೂ ಅವನೆ. ಏನು ಫಲ, ಎಷ್ಟು ಫಲ, ಯಾವಾಗ ಫಲ, ಎಲ್ಲವೂ ಅವನಿಗೆ ಸೇರಿದ್ದು. ಸಿಕ್ಕಿದರೂ ಸಂತೋಷ, ಸಿಗದಿದ್ದರೂ ಸಂತೋಷ. ಇದು ಭೌತಿಕ ಸಮತೋಲನ. ಇಂತಹ ಸಮತೋಲನದಲ್ಲಿ ಕರ್ತವ್ಯ ದೃಷ್ಟಿಯಿಂದ ಕರ್ಮವನ್ನು ಮಾಡಬೇಕು. ನಮ್ಮ ಬದುಕಿನ ಸಮಸ್ತ ಕರ್ಮದಲ್ಲಿ ಈ ಅನುಸಂಧಾನವಿದ್ದಾಗ ಅದು ಭಗವಂತನ ಪೂಜೆಯಾಗುತ್ತದೆ. ಇದೇ ಕರ್ಮಯೋಗ. ಸಿದ್ಧಿ-ಅಸಿದ್ಧಿಯನ್ನು ಸಮಭಾವದಿಂದ ಕಾಣುವುದು ಮನಸ್ಸಿನ ಯೋಗ. ಇದೊಂದು ಮಾನಸಿಕ ಸ್ಥಿತಿ. ಈ ರೀತಿಯ ಯೋಗ ಭಾವನೆಯಿಂದ ಕರ್ಮ ಮಾಡಿದರೆ-ಫಲ ಬಂದಾಗ ಹೆಗ್ಗಳಿಕೆ ಇರುವುದಿಲ್ಲ, ಬಾರದೆ ಇದ್ದಾಗ ದುಃಖವಿರುವುದಿಲ್ಲ. ಹೀಗೆ ಸಿದ್ಧಿ-ಅಸಿದ್ಧಿಗಳ ಸಮತ್ವದಿಂದ ಮಾಡುವ ಪ್ರತಿಯೊಂದು ಕರ್ತವ್ಯವೂ ಕೂಡಾ ಭಗವಂತನ ಪೂಜೆಯಾಗುತ್ತದೆ. ಈ ಅನುಸಂಧಾನವಿಲ್ಲದೆ ಮಾಡುವ ಮಹಾಯಜ್ಞ ಕೂಡಾ ಪೂಜೆ ಆಗಲಾರದು. ಭಗವಂತ ನನ್ನಿಂದ ಈ ಕೆಲಸವನ್ನು ಮಾಡಿಸಿದ. ಇದು ಭಗವಂತನ ಪೂಜಾರೂಪವಾಗಿ ಅರ್ಪಿತವಾಗಲಿ ಎನ್ನುವ ಅನುಸಂಧಾನವಿದ್ದಾಗ ಮಾತ್ರ ಕರ್ಮ-ಯೋಗವಾಗುತ್ತದೆ. ನಮ್ಮ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದೇ ಯೋಗ. ಈ ಅನುಸಂಧಾನಕ್ಕೆ ಪೂರಕವಾದ ಮತ್ತು ಅನುಸಂಧಾನಪೂರ್ವಕವಾದ ಎಲ್ಲಾ ಕರ್ಮವೂ ಕರ್ಮಯೋಗ.
·  ಶ್ಲೋಕ - 49
ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್ ಧನಂಜಯ ।
ಬುದ್ಧೌ ಶರಣಮನ್ವಿಚ್ಛ ಕೃಪಣಾಃ ಫಲಹೇತವಃ ॥೪೯॥
ದೂರೇಣ ಹಿ ಅವರಮ್ ಕರ್ಮ ಬುದ್ಧಿಯೋಗಾತ್ ಧನಂಜಯ ಬುದ್ಧೌ ಶರಣಮ್ ಅನ್ವಿಚ್ಛ ಕೃಪಣಾಃ ಫಲಹೇತವಃ -- ಧನಂಜಯ, ಅರಿವಿನ ದಾರಿಗಿಂತ ಕರ್ಮದ ದಾರಿ ತುಂಬಾ ಕೀಳು. ಅದರಿಂದ ಅರಿವಿನಲ್ಲಿ ನೆಲೆನಿಲ್ಲು.[ಅರಿವು ಬಂದ ಮೇಲೂ ಹರಿಗೆ ಶರಣಾಗು]. ಫಲವನ್ನೆ ನಂಬಿ ನಿಂತವರು ಮರುಕಪಡಬೇಕಾದವರು.
ಪ್ರಪಂಚದಲ್ಲಿ ಕೆಲವರು ಕರ್ಮಯೋಗಿಗಳು, ಇನ್ನು ಕೆಲವರು ಜ್ಞಾನಯೋಗಿಗಳು. ಕರ್ಮಯೋಗಿಗಳಿಗೆ ಜ್ಞಾನವಿಲ್ಲ, ಹಾಗು ಜ್ಞಾನ ಬಂದ ಮೇಲೆ ಕರ್ಮ ಬೇಕಿಲ್ಲ ಎನ್ನುವ ಚಿಂತನೆ ಕೆಲವರದು. ಕೆಲವರು ಕರ್ಮ ಮೇಲೆನ್ನುತ್ತಾರೆ ಮತ್ತೆ ಕೆಲವರು ಜ್ಞಾನ ಮೇಲು ಎನ್ನುತ್ತಾರೆ. ಇನ್ನು ಕೆಲವರು ಕರ್ಮ ಮತ್ತು ಜ್ಞಾನ- ಎರಡು ಚಕ್ರಗಳಂತೆಸಮಾನ ಎಂದು ವಾದ ಮಾಡುತ್ತಾರೆ. ಇದರಿಂದ ಅನೇಕ ದ್ವಂದ್ವಗಳು ಹುಟ್ಟಿಕೊಳ್ಳುತ್ತವೆ. ಆದರೆ ಕೃಷ್ಣ ಇಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ: ಜ್ಞಾನದ ಮುಂದೆ ಕರ್ಮ ಬಹಳ ದೂರ ಎಂದು. ಕರ್ಮ ಮಾಡುವಾಗ ಜ್ಞಾನ ಅತಿಮುಖ್ಯ. ಜ್ಞಾನಕ್ಕೋಸ್ಕರ ಕರ್ಮವಿರುವುದೇ ಹೊರತು ಅದು ಜ್ಞಾನಕ್ಕೆ ಸಮಾನ ಅಲ್ಲ. ಅದಕ್ಕಾಗಿ ಜ್ಞಾನಕ್ಕೆ ಶರಣಾಗಿ ಜ್ಞಾನಕ್ಕೆ ಪೂರಕವಾದ ಕರ್ಮ ಮಾಡಬೇಕು. ಜ್ಞಾನವಿಲ್ಲದೆ, ಫಲಾಪೇಕ್ಷೆಯಿಂದ ಕರ್ಮ ಮಾಡುವರ ಸ್ಥಿತಿ ಶೋಚನೀಯ. ಇವರು ಕರ್ಮದ ಮರ್ಮವನ್ನು ತಿಳಿಯದೆ ಕರ್ಮ ಮಾಡಿ ಒದ್ದಾಡುತ್ತಿರುತ್ತಾರೆ.
ಜ್ಞಾನದ ಮಾರ್ಗದಲ್ಲಿ ಎತ್ತರಕ್ಕೇರಲು ನಾವು ಕರ್ಮವನ್ನು ಮಾಡಬೇಕು. ಇದರಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಅಹಂಕಾರ ಪಡದೆ, ಭಗವಂತನಲ್ಲಿ ಶರಣಾಗಬೇಕು. ಭಗವಂತನೇ ನನ್ನ ರಕ್ಷಕ ಹಾಗು ಆತನೇ ನನ್ನ ನೆಲೆ ಎಂದು ತಿಳಿದು ಆತನಲ್ಲಿ ಶರಣಾಗಬೇಕು. ದೇವರಿಗೆ ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ, ಆತ ನನ್ನನ್ನು ರಕ್ಷಿಸಿಯೇ ರಕ್ಷಿಸುತ್ತಾನೆ ಎನ್ನುವ ಮನವರಿಕೆ (conviction) ಶರಣಾಗತಿ.
ನಮಗೆ ಏನಾದರೂ ಸಮಸ್ಯೆ ಬಂದಾಗ ಭಗವಂತನ ಹತ್ತಿರ ಪ್ರಾರ್ಥಿಸಿಕೊಳ್ಳಬೇಕೇ ಹೊರತು ಅನ್ಯರನ್ನಲ್ಲ. "ಓ ಭಗವಂತ ನನ್ನನ್ನು ಏಕೆ ಈ ಸಮಸ್ಯೆಯಲ್ಲಿ ಸಿಲುಕಿಸಿದಿ? ಇದಕ್ಕೆ ಪರಿಹಾರವನ್ನು ತೋರಿಸು ತಂದೆ" ಎಂದು ಮನಃಪೂರ್ವಕವಾಗಿ ಕೇಳಿಕೊಂಡರೆ ಖಂಡಿತ ಆತ ನಮ್ಮನ್ನು ಸಂಕಟದಿಂದ ಪಾರು ಮಾಡುತ್ತಾನೆ. ಆದರೆ ಇಲ್ಲಿ ಕೂಡಾ ಫಲದ ಅಧಿಕಾರ ಸಾಧಿಸದೆ, ಕೇವಲ ಭಗವಂತನನ್ನು ನಂಬಿ, ನಮ್ಮ ಎಲ್ಲಾ ಸಮಸ್ಯಗಳ ನಡುವೆಯೂ ನಿಶ್ಚಿಂತೆಯಿಂದ ಬದುಕಲು ಕಲಿಯಬೇಕು. ಮುಂದಿನ ಶ್ಲೋಕವನ್ನು ನೋಡುವ ಮೊದಲು ಇಲ್ಲಿ ಬಂದಿರುವ ಧನಂಜಯ ಎನ್ನುವ ನಾಮವಿಶೇಷಣದ ಅರ್ಥವನ್ನು ತಿಳಿಯೋಣ. ಈ ಸಂಬೋಧನೆಗೆ ಎರಡು ಅರ್ಥವಿದೆ. ಒಂದು ಲೌಕಿಕ ಹಾಗು ಇನ್ನೊಂದು ಅಧ್ಯಾತ್ಮಿಕ ಅರ್ಥ. ಲೌಕಿಕವಾಗಿ ನೋಡಿದರೆ ಅರ್ಜುನ ಅನೇಕ ಕಡೆ ಯುದ್ಧ ಮಾಡಿ, ದೇಶದ ಸೀಮೆಯನ್ನು ವಿಸ್ತರಿಸಿ, ರಾಜಕೋಶದ ಸಂಪತ್ತನ್ನು ವೃದ್ಧಿ ಮಾಡಿದವ-ಆದ್ದರಿಂದ ಆತ ಧನಂಜಯ. ಆಧ್ಯಾತ್ಮಿಕವಾಗಿ ನೋಡಿದರೆ ಈ ನಾಮಕ್ಕೆ ವಿಶೇಷ ಅರ್ಥವಿದೆ. ಭಗವಂತನ ಆರಾಧನೆ, ಅಧ್ಯಾತ್ಮದ ಅರಿವು-ನಿಜವಾದ ಧನ. ಭಗವಂತನ ಅರಿವು, ಜ್ಞಾನ ಎಲ್ಲಕ್ಕಿಂತ ದೊಡ್ಡ ಸಂಪತ್ತು. ಅರ್ಜುನ ಆ ಕಾಲದ ಅಪರೋಕ್ಷ ಜ್ಞಾನಿ. ಆತ ಸ್ವಯಂ ಇಂದ್ರ. ಆತ ಜ್ಞಾನದ ಸಂಪತ್ತಿನ ಪರಾಕಾಷ್ಠೆ. 'ಇಂತಹ ಜ್ಞಾನಿಯಾದ ನೀನು ಭಗವಂತನಿಗೆ ಶರಣಾಗಿ, ಬುದ್ಧಿಪೂರ್ವಕವಾಗಿ ಕರ್ಮಮಾಡು' ಎನ್ನುವ ಅರ್ಥದಲ್ಲಿ ಕೃಷ್ಣ ಈ ಸಂಬೋಧನೆ ಮಾಡಿದ್ದಾನೆ.
·  ಶ್ಲೋಕ - 50
ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ ।
ತಸ್ಮಾದ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್ ॥೫೦॥
ಬುದ್ಧಿಯುಕ್ತಃ ಜಹಾತಿ ಇಹ ಉಭೇ ಸುಕೃತದುಷ್ಕೃತೇ ತಸ್ಮಾತ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್- ಭಗವಂತನನ್ನರಿತವನು ಬೇಡವಾದ ಪುಣ್ಯಪಾಪಗಳೆರಡನ್ನು ಇಲ್ಲೆ ತೊರೆಯುತ್ತಾನೆ. ಆದ್ದರಿಂದ ಅರಿವಿನ 'ಯೋಗ'ಕ್ಕೆ ತೊಡಗು. 'ಯೋಗ'ವೆಂದರೆ ಇದೆ: ತಿಳಿದು ಮಾಡುವ ಜಾಣತನ.
ತಿಳುವಳಿಕೆಯಿಂದ ಕರ್ಮ ಮಾಡಿದರೆ ತನ್ನ ಎಲ್ಲಾ ಪಾಪಗಳನ್ನು ಹಾಗು ಬೇಡವಾದ ಪುಣ್ಯವನ್ನು ತೊರೆದು ಭಗವಂತನನ್ನು ಸೇರುತ್ತಾನೆ. ಇಲ್ಲಿ ಬೇಡವಾದ ಪುಣ್ಯ ಅಂದರೆ: ಉದಾಹರಣೆಗೆ ಒಬ್ಬ ಮಹಾತ್ಮ ತನ್ನ ಜ್ಞಾನ ಕರ್ಮಗಳಿಂದ ಮೋಕ್ಷವನ್ನು ಪಡೆಯುತ್ತಾನೆ. ಹೀಗೆ ಈ ಮಾರ್ಗದಲ್ಲಿರುವಾಗ ಆತ ಇತರ ಪುಣ್ಯವನ್ನೂ ಗಳಿಸುತ್ತಾನೆ. ಒಂದು ವೇಳೆ ಆತ ಚಕ್ರವರ್ತಿಯಾಗಿ ಮೆರೆಯುವ ಪುಣ್ಯವನ್ನು ಪಡೆದಿದ್ದರೆ ಅದು ಆತನಿಗೆ ಬೇಡವಾದ ಪುಣ್ಯ. ಏಕೆಂದರೆ ಮೋಕ್ಷದ ಮುಂದೆ ಈ ಪುಣ್ಯದ ಅವಶ್ಯಕತೆ ಆತನಿಗಿಲ್ಲ. ಆತ ಈ ಪುಣ್ಯವನ್ನು ಇಲ್ಲೇ ತೊರೆಯುತ್ತಾನೆ. ಇದನ್ನು ಇಲ್ಲಿ ಬೇಡವಾದ ಪುಣ್ಯ ಎಂದಿರುವುದು. ಯಾರು ಹೀಗೆ ಭಗವತ್ಪ್ರಜ್ಞೆಯಲ್ಲಿ ಬದುಕುತ್ತಾರೋ ಅವರು ಮಾಡಿದ ಕರ್ಮ ಅವರ ಪಾಪ ಪುಣ್ಯದ ಬಂಧನಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಜ್ಞಾನಯೋಗದಲ್ಲಿ ನಿಂತು ಆ ಅರಿವಿನಿಂದ ಕರ್ಮವನ್ನು ಮಾಡುವುದು ಜಾಣತನ.
·  ಶ್ಲೋಕ - 51
ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ ।
ಜನ್ಮಬಂಧವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಮ್ ॥೫೧॥
ಕರ್ಮಜಮ್ ಬುದ್ಧಿಯುಕ್ತಾಃ ಹಿ ಫಲಮ್ ತ್ಯಕ್ತ್ವಾ ಮನೀಷಿಣಃ ಜನ್ಮಬಂಧ ವಿನಿರ್ಮುಕ್ತಾಃ ಪದಮ್ ಗಚ್ಛಂತಿ ಅನಾಮಯಮ್ --ಬಲ್ಲವರು ಭಗವಂತನ ಅರಿವು ಪಡೆದು, ಕರ್ಮ ಫಲದ ಹೊಣೆಯನ್ನು ಅವನಿಗೊಪ್ಪಿಸಿ, ಹುಟ್ಟು ಸಾವಿನ ಕಟ್ಟು ಕಳಚಿಕೊಂಡು, ಕ್ಲೇಶರಹಿತವಾದ ಪದವನ್ನು ಪಡೆಯುತ್ತಾರೆ.
ನಿಜವಾದ ಮನಿಷಿಗಳು ತಮ್ಮ ಮನಸ್ಸನ್ನು ತಾವೇ ನಿಯಂತ್ರಿಸಿಕೊಳ್ಳಬಲ್ಲ ಜಿತೇಂದ್ರಿಯರು. ಆತ್ಮಸಂಯಮ ಇರುವ ಜ್ಞಾನದ ಮಾರ್ಗದಲ್ಲಿ ಸಾಗಿ ಆ ಅರಿವನ್ನು ಪಡೆದವರು. ಬುದ್ಧಿವಂತರಾದ ಜ್ಞಾನಿಗಳು ಕರ್ಮದಿಂದ ಬರತಕ್ಕಂತಹ ಫಲದ ಮೋಹವನ್ನು(attachment) ಬಿಟ್ಟು ಅದನ್ನು ಭಗವಂತನಿಗೆ ಅರ್ಪಿಸುತ್ತಾರೆ. ಹೀಗೆ ಯಾರು ಕರ್ಮ ಫಲವನ್ನು ಭಗವಂತನಿಗೆ ಅರ್ಪಣ ಬುದ್ಧಿಯಿಂದ ತ್ಯಾಗ ಮಾಡಿ ನಿರ್ವಂಚನೆಯಿಂದ ಕರ್ಮ ಮಾಡುತ್ತಾರೆ, ಅವರು ಕರ್ಮ ಮಾಡಿದರೂ ಕರ್ಮಬಂಧನಕ್ಕೊಳಪಡದೆ, ಎಲ್ಲಾ ಬಂಧನವನ್ನು ಕಳಚಿಕೊಂಡು, ದೋಷ ರಹಿತವಾದ ಮೋಕ್ಷವನ್ನು ಪಡೆಯುತ್ತಾರೆ. ಆದ್ದರಿಂದ ಕರ್ತವ್ಯ ಕರ್ಮವನ್ನು ಭಗವಂತನ ಆರಾಧನೆ ಎಂದು ಮಾಡಿ ಮೋಕ್ಷ ಪಡೆಯಬೇಕು. ಇದನ್ನು ಹೊರತುಪಡಿಸಿ ನಾನು ಜ್ಞಾನಿ, ನಾನೇನೂ ಮಾಡಲಾರೆಎನ್ನುವ ಧೋರಣೆ ಸರಿಯಲ್ಲ.
·  ಶ್ಲೋಕ - 52
ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ ।
ತದಾ ಗಂತಾನಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ ॥೫೨॥
ಯದಾ ತೇ ಮೋಹ ಕಲಿಲಮ್ ಬುದ್ಧಿಃ ವ್ಯತಿತರಿಷ್ಯತಿ ತದಾ ಗಂತಾ ಅನಿ ನಿರ್ವೇದಮ್ ಶ್ರೋತವ್ಯಸ್ಯ ಶ್ರುತಸ್ಯ ಚ --ಎಂದು ನಿನ್ನ ಬುದ್ಧಿ ಅಜ್ಞಾನದ ಕೊಳೆಯನ್ನು ಕಳೆದುಕೊಳ್ಳುವುದೋ, ಅಂದು ಮುಂದೆ ಕೇಳುವ, ಹಿಂದೆ ಕೇಳಿದ ಉಪದೇಶದ ಪೂರ್ತಿ ಫಲವನ್ನು ಪಡೆಯುವೆ.
ಯಾವಾಗ ನಾವು ಓದಿದ್ದು ಕೇಳಿದ್ದು ಸಾರ್ಥಕವಾಗುವುದು? ನಮ್ಮ ಬುದ್ಧಿ ಎಷ್ಟು ಕೇಳಿದರೂ ಕೂಡಾ ಪುನಃ ಗೊಂದಲದಲ್ಲೇ ಇದ್ದರೆ, ಎಷ್ಟು ಕೇಳಿಯೂ ಉಪಯೋಗವಿಲ್ಲ. ಓದುವುದರಿಂದ, ಕೇಳುವುದರಿಂದ ನಮ್ಮ ಮನಸ್ಸಿನ ಕೊಳೆ ತೊಳೆದು ಹೋಗಿ ಮನಸ್ಸು ತಿಳಿಯಾಗಬೇಕು. ಇಂತಹ ಮನಸ್ಸಿಗೆ ಎಂದೂ ದುಗುಡ, ಆತಂಕ ಇರುವುದಿಲ್ಲ. ಈ ಸ್ಥಿತಿಯಲ್ಲಿ ಕೋಪ ಬಾರದು. ಇಂತಹ ರಾಗ-ದ್ವೇಷ ರಹಿತವಾದ, ಎಂತಹ ಸಂದರ್ಭದಲ್ಲೂ ಸಮತೋಲನ ಕಳೆದುಕೊಳ್ಳದ ಮನಸ್ಸು ಬಂದಾಗ, ಓದಿದ್ದು, ಕೇಳಿದ್ದು ಸಾರ್ಥಕವಾಗುತ್ತದೆ.ಇಂತಹ ಸ್ಥಿತಿಯಲ್ಲಿ ಹಿಂದೆ ಕೇಳಿದ, ಹಾಗು ಇನ್ನು ಕೇಳುವ ಉಪದೇಶ ಪೂರ್ತಿ ಫಲವನ್ನು ಕೊಡುತ್ತದೆ.
·  ಶ್ಲೋಕ - 53
ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ।
ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ ॥೫೩॥
ಶ್ರುತಿ ವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ ಸಮಾದೌ ಅಚಲಾ ಬುದ್ಧಿಃ ತದಾ ಯೋಗಮ್ ಅವಾಪ್ಸ್ಯಸಿ- ಮೊದಲು ಶ್ರುತಿಗಳಿಗೆ ಹೊಂದಿಕೊಳ್ಳದಿದ್ದ,[ಮತ್ತೆ ಶ್ರುತಿಗಳಿಂದ ಶ್ರುತಿಗೂಡಿದ,] ನಿನ್ನ ಬುದ್ಧಿ ಎಂದು ನಿಜದ ಅರಿವಿನಿಂದ ಗಟ್ಟಿಗೊಂಡು, ಸಮಾಧಿಯಲ್ಲಿ ನಲುಗದೆ ನಿಲ್ಲುವುದೋ, ಅಂದು ಗುರಿ ತಲುಪುವೆ.
ಇಲ್ಲಿ 'ವಿಪ್ರತಿಪನ್ನಾ' ಅಂದರೆ 'ಅಭಿಪ್ರಾಯಭೇದ'. ಮೊದಲು ಶ್ರುತಿಗಳಿಂದ (ಶ್ರವಣದಿಂದ) ಗೊಂದಲವೆನಿಸುತ್ತದೆ. ನಂತರ ಅಲ್ಲಿಂದ ವೇದಕ್ಕೆ ಹೋದಾಗ-ವೇದದಲ್ಲಿ ಹೇಳಿದ ಸಂಗತಿಗೆ ಮನಸ್ಸು ವಿರುದ್ಧವಾಗಿ ಯೋಚಿಸುತ್ತದೆ. ಆದರೆ ಒಮ್ಮೆ ಮನಸ್ಸು ತಿಳಿಯಾದಾಗ, ಶ್ರುತಿಯಲ್ಲಿ ಹೇಳಿದ ತ್ರಿಗುಣಾತೀತ ತತ್ವದಲ್ಲಿ ಮನಸ್ಸು ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಮೊದಲು ತ್ರೈಗುಣ್ಯ ವಿಷಯವಾಗಿದ್ದು ನಂತರ ತ್ರೈಗುಣ್ಯದ ವಿಷವನ್ನು ಪರಿಹರಿಸುವಂತಾಗುತ್ತದೆ (ಯಾಪಯತಿ). ಒಮ್ಮೆ ಮನಸ್ಸು ನಿರ್ಮಲವಾದಾಗ ಅದು ವೇದಕ್ಕೆ ಶ್ರುತಿಗೂಡು(Tune)ತ್ತದೆ. ಅದರಿಂದಾಗಿ ವೇದದಲ್ಲಿ ಹೇಳಿರುವ ವಿಚಾರ ಮತ್ತು ನಮ್ಮ ಯೋಚನೆಗಳಲ್ಲಿ ಯಾವುದೇ ವೆತ್ಯಾಸ ಕಾಣುವುದಿಲ್ಲ. ಮನಸ್ಸು ವೈದಿಕ ವಾಙ್ಮಯದಲ್ಲಿ ನೆಲೆ ನಿಲ್ಲುತ್ತದೆ. ಈ ಸ್ಥಿತಿಯಲ್ಲಿ ಧ್ಯಾನ(Meditation) ಮಾಡಿದರೆ ಮನಸ್ಸು ಸದಾ ಭಗವಂತನಲ್ಲಿ ನೆಲೆಗೊಳ್ಳುತ್ತದೆ. ಇದಕ್ಕೂ ಮುಂದೆ ಹೋಗಿ ನಿಶ್ಚಲವಾದ ಸಮಾಧಿ ಸ್ಥಿತಿಯಲ್ಲಿ, ಸ್ವರೂಪ ಚಿಂತನದಲ್ಲಿ ನೋಡಿದಾಗ- ಭಗವಂತನ ನಿಜವಾದ ರೂಪ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಮನಸ್ಸು ಕೆಲಸ ಮಾಡುವುದಿಲ್ಲ-ಆತ್ಮ ಕೆಲಸ ಮಾಡುತ್ತಿರುತ್ತದೆ. ಆತ್ಮದ ಕಣ್ಣಿನಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ-ಇದು ಸಾಧನೆಯ ಪೂರ್ಣ ಫಲ.
·  ಶ್ಲೋಕ - 54
ಅರ್ಜುನ ಉವಾಚ
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ ।
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ ॥೫೪॥
ಅರ್ಜುನ ಉವಾಚ -ಅರ್ಜುನ ಕೇಳಿದನು : ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ ಸ್ಥಿತಧೀಃ ಕಿಮ್ ಪ್ರಭಾಷೇತ ಕಿಮ್ ಆಸೀತ ವ್ರಜೇತ ಕಿಮ್-- ಓ ಬ್ರಹ್ಮರುದ್ರರ ನಿಯಾಮಕನೆ, ಸಮಾಧಿಯನ್ನೇರಬಲ್ಲ [ತಿಳಿವಿನ ತಪ್ಪುಗಳನ್ನು ತಿದ್ದಿಕೊಂಡ] ಅರಿವು ಗಟ್ಟಿಗೊಡವರನ್ನು ಹೇಗೆ ಗುರುತಿಸುವುದು? ಅಂಥಹ ಸ್ಥಿತಪ್ರಜ್ಞ ಏನೆಂದು ನುಡಿಯುತ್ತಾನೆ? ಏನೆಂದು ಕೂಡುತ್ತಾನೆ? ಏನೆಂದು ನಡೆಯುತ್ತಾನೆ?
ಈ ಹಂತದಲ್ಲಿ ಕೃಷ್ಣ ತನ್ನ ಉಪದೇಶವನ್ನು ನಿಲ್ಲಿಸಿ ಅರ್ಜುನನ ಪ್ರಶ್ನೆಯನ್ನು ಆಲಿಸುತ್ತಾನೆ. ಮನುಷ್ಯನ ಅರಿವು ಗಟ್ಟಿಗೊಳ್ಳಬೇಕು; ಸತ್ಯದ ಸಾಕ್ಷಾತ್ಕಾರದಿಂದ ಮನುಷ್ಯ ಸ್ಥಿತಪ್ರಜ್ಞನಾಗಬಲ್ಲ. ಇಂತಹ ಸ್ಥಿತಪ್ರಜ್ಞರನ್ನು ಗುರುತಿಸುವುದು ಹೇಗೆ ಎನ್ನುವುದು ಅರ್ಜುನನ ಪ್ರಶ್ನೆ. ಒಬ್ಬ ಸ್ಥಿತಪ್ರಜ್ಞನನ್ನು ಆತನ ವೇಷ ಭೂಷಣದಿಂದ ಗುರುತಿಸುವುದು ಅಸಾಧ್ಯ. ಬಾಹ್ಯ ಪ್ರಪಂಚಕ್ಕೆ ಅಂಟಿಕೊಳ್ಳದೆ ಅಂತರಂಗ ಪ್ರಪಂಚದಲ್ಲಿ ಸಮಾಧಿಸ್ಥಿತಿಯನ್ನು ತಲುಪಿದ ಅವರನ್ನು ಹೇಗೆ ಗುರುತಿಸಬಹುದು? ಅವರು ಬಾಹ್ಯ ಪ್ರಪಂಚದೊಂದಿಗೆ ಹೇಗೆ ವ್ಯವಹರಿಸುತ್ತಾರೆ? ಅವರ ನಡೆ-ನುಡಿ ಹೇಗಿರುತ್ತದೆ? ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನ ಕೃಷ್ಣನನ್ನು 'ಕೇಶವ' ಎಂದು ಸಂಬೋಧಿಸಿದ್ದಾನೆ. ಈ ಸಂಬೋಧನೆಯಿಂದಲೇ ಅರ್ಥವಾಗುತ್ತದೆ, ಅರ್ಜುನ ಸ್ವಯಂ ಒಬ್ಬ ಮಹಾಜ್ಞಾನಿ ಎಂದು. ಕೇಶವ ಎಂದರೆ ಕಹ+ಈಶ, ಕಹ ಅಂದರೆ ಬ್ರಹ್ಮಶಕ್ತಿ, ಈಶ ಎಂದರೆ ಶಿವಶಕ್ತಿ. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ- ಕೇಶವ . ಸೂರ್ಯನ ಕಿರಣಗಳಲ್ಲಿ ನಿಂತು ಇಡೀ ಜಗತ್ತಿಗೆ ಶಕ್ತಿ ಪ್ರಧಾನ ಮಾಡುವ ಭಗವಂತ ಕೇಶವಃ. ಜಗತ್ತಿಗೆ ಬೆಳಕು ಕೊಡುವ ನಿನ್ನಿಂದ ನಾನು ಈ ವಿಷಯವನ್ನು ಕೇಳಿ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆಎನ್ನುವ ಅರ್ಥದಲ್ಲಿ ಈ ಸಂಬೋಧನೆಯಿದೆ.
·  ಶ್ಲೋಕ - 55
ಭಗವಾನುವಾಚ ।
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್
ಆತ್ಮನ್ಯೇವಾSತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ ॥೫೫॥
ಭಗವಾನುವಾಚ -ಭಗವಂತ ಹೇಳಿದನು :ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ ಆತ್ಮನ್ಯೇವಾSತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ- -ಪಾರ್ಥ, ಮನದಲ್ಲಿ ಮನೆಮಾಡಿದ ಎಲ್ಲ ಬಯಕೆಗಳನ್ನು ತೋರೆದಾಗ, ಪರಮಾತ್ಮನಲ್ಲೆ ನೆಲೆನಿಂತು, ಪರಮಾತ್ಮನ ಹಸಾದದಿಂದ ತಣಿದು ನಲಿದಾಗ ಸ್ಥಿತಪ್ರಜ್ಞ ಎನಿಸುತ್ತಾನೆ.
ಕೃಷ್ಣ ನೇರವಾಗಿ ಸ್ಥಿತಪ್ರಜ್ಞನ ನಡೆ-ನುಡಿಗಳ ಬಗ್ಗೆ ಹೇಳದೆ, ಆತ ಹೇಗಿರುತ್ತಾನೆ ಎನ್ನುವುದನ್ನು ಇಲ್ಲಿ ಮೊದಲು ವಿವರಿಸುತ್ತಾನೆ. ನಿಜವಾದ ಸ್ಥಿತಪ್ರಜ್ಞನಿಗೆ ಮೂಲಭೂತವಾಗಿ ಯಾವ ಬಯಕೆಯೂ ಕಾಡುವುದಿಲ್ಲ (ಇಲ್ಲಿ ಬಯಕೆ ಎಂದರೆ ಮನುಷ್ಯನನ್ನು ದಾರಿ ತಪ್ಪಿಸುವ ಕೆಟ್ಟ ಕಾಮನೆಗಳು). ಆತ ಇಂತಹ ಎಲ್ಲಾ ಕ್ಷುದ್ರ ಕಾಮನೆಗಳನ್ನು ತೊರೆದು ತನ್ನೊಳಗಿರುವ ಜ್ಞಾನಾನಂದಮಯನಾದ ಭಗವಂತನನ್ನು ಕಾಣುತ್ತಾ ಸದಾ ಸಂತೋಷವಾಗಿರುತ್ತಾನೆ.
ಮನುಷ್ಯನ ದುಃಖಕ್ಕೆ ಮೂಲ ಕಾರಣ ಆತನ ಕ್ಷುದ್ರ ಬಯಕೆಗಳು. ತನ್ನ ಬಯಕೆ ಈಡೇರದೆ ಇದ್ದಾಗ ದುಃಖ- ಕೋಪ ಇತ್ಯಾದಿ ಆರಂಭವಾಗುತ್ತದೆ. ಇದರಿಂದ ಆತ ತನ್ನ ಜೀವನವನ್ನು ನರಕವನ್ನಾಗಿ ಮಾಡಿಕೊಳ್ಳುತ್ತಾನೆ. ಇಂತಹ ಸ್ಥಿತಿಯಲ್ಲಿ ಆತನಿಗೆ ತನ್ನೊಳಗಿರುವ ಆ ಅಪೂರ್ವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ. ಸ್ಥಿತಪ್ರಜ್ಞನಾದವನು ಈ ಜಂಜಾಟದಲ್ಲಿ ಸಿಲುಕದೆ, ತನ್ನಂತರಂಗದಲ್ಲಿನ ಆ ಮಹದಾನಂದವನ್ನು ಸದಾ ಸವಿಯುತ್ತ ಸಂತೋಷವಾಗಿರುತ್ತಾನೆ. ಆತ ಕಾಮನೆಗಳಿಗೆ ಬೆಂಬೀಳುವುದಿಲ್ಲ. ಬೇಕು ಎನ್ನುವ ಬಯಕೆ ಆತನನ್ನು ಕಾಡುವುದಿಲ್ಲ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಆತ ಎಂದೂ ಉದ್ವೇಗಕ್ಕೆ (Tension or Stress) ಒಳಗಾಗುವುದಿಲ್ಲ. ಆತನ ಮನಸ್ಸು ಗಟ್ಟಿಯಾಗಿರುತ್ತದೆ ಮತ್ತು ಇದರಿಂದಾಗಿ ಆತ ಯಶಸ್ಸನ್ನು ಕಾಣಬಲ್ಲ.
ಇಲ್ಲಿ ಕೃಷ್ಣ ಅರ್ಜುನನನ್ನು 'ಪಾರ್ಥ' ಎಂದು ಸಂಬೋಧಿಸಿದ್ದಾನೆ. ಪಾರ್ಥ ಎಂದರೆ ಪಾರ-ತೀರ-ಗಮನೆ, ಅಂದರೆ ಸತ್ಯದ, ಸಾಧನೆಯ ಕಡಲನ್ನು ದಾಟಿದವ. ಸಾಧನೆಯ ಕಡಲನ್ನು ದಾಟಿದ ನಿನಗೆ ಇದು ಸ್ಪಷ್ಟವಾಗಿ ತಿಳಿಯಬೇಕುಎನ್ನುವ ಅರ್ಥದಲ್ಲಿ ಈ ಸಂಬೋಧನೆ ಇದೆ. ಮುಂದೆ ಬರುವ ಮೂರು ಶ್ಲೋಕಗಳಲ್ಲಿ ಕೃಷ್ಣ ಕಾಮನೆಗಳನ್ನು ಬಿಡುವುದು ಅಂದರೆ ಏನು ಹಾಗು ಹೇಗೆ? ಎನ್ನುವುದನ್ನು ವಿವರಿಸುತ್ತಾನೆ.
·  ಶ್ಲೋಕ - 56
ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ।
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ॥೫೬॥
ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ ವೀತ ರಾಗ ಭಯ ಕ್ರೋಧಃ ಸ್ಥಿತಧೀ ಮುನಿಃ ಉಚ್ಯತೇ --ಸಂಕಟ ಬಂದಾಗ ಬಗೆಯಲ್ಲಿ ತಳಮಳವಿಲ್ಲ. ಸುಖದ ಸಂಗತಿಗಳಲ್ಲಿ ಹಂಬಲವಿಲ್ಲ. ಯಾವುದರಲ್ಲೂ ರಾಗವಿಲ್ಲ, ಭಯವಿಲ್ಲ, ಕ್ರೋಧವಿಲ್ಲ. ಇಂಥಹ ಚಿಂತನಶೀಲ 'ಸ್ಥಿತಪ್ರಜ್ಞ' ಎನಿಸುತ್ತಾನೆ.
ಜೀವನದಲ್ಲಿ ಸುಖ-ದುಃಖಗಳು ಹಗಲು-ರಾತ್ರಿ ಇದ್ದಂತೆ. ಇದು ನಿರಂತರ ಮತ್ತು ಯಾರನ್ನೂ ಬಿಟ್ಟಿಲ್ಲ. ಕೆಲವೊಮ್ಮೆ ಸುಖ-ನಾವು ಬಯಸದೇ ಬರುತ್ತದೆ. ಅದೇ ತರ ಇನ್ನು ಕೆಲವೊಮ್ಮೆ ದುಃಖ ಸರಮಾಲೆಯಾಗಿ ಬೆನ್ನು ಹತ್ತುತ್ತದೆ. ದುಡ್ಡಿನಿಂದ ದುಃಖವನ್ನು ತಡೆಯಲಾಗದು-ಸುಖವನ್ನು ಖರೀದಿಸಲಾಗದು. ಸಾಮಾನ್ಯವಾಗಿ ದುಃಖ ಬಂದಾಗ ನಾವು ಉದ್ವೇಗಕ್ಕೊಳಗಾಗುತ್ತೇವೆ. ಇದರಿಂದ ಮನಸ್ಸು ಕಂಗೆಡುತ್ತದೆ, ಅದರಿಂದ ದೇಹದ ಆರೋಗ್ಯ ಕೆಡುತ್ತದೆ. ಯಾವುದು ಅನಿವಾರ್ಯವೋ ಅದರ ಬಗ್ಗೆ ಅಳುತ್ತಾ ಕುಳಿತುಕೊಂಡರೆ ಉಪಯೋಗವಿಲ್ಲ. ಅಳುತ್ತಾ ಕೂರುವುದರಿಂದ ಬಂದ ದುಃಖ ಹೋಗದು, ಬರುವ ದುಃಖವನ್ನು ತಡೆಯಲಾಗದು. ದುಃಖ 'ಸುಖದ ಸಿದ್ಧತೆ'; ಸುಖ 'ದುಃಖದ ಸಿದ್ಧತೆ'. ಇವು ಜೀವನದ ಅನಿವಾರ್ಯ ದ್ವಂದ್ವಗಳು. ಅಂದರೆ ಸುಖ ಬಂದಾಗ ಸಂತೋಷಪಡಬಾರದು ಎಂದಲ್ಲ, ಆ ಸುಖದಲ್ಲಿ ಮೈಮರೆಯಬಾರದು ಅಷ್ಟೆ. ತಟಸ್ಥತೆಯನ್ನು ಮನಸ್ಸಿಗೆ ಅಭ್ಯಾಸ ಮಾಡಿಸಬೇಕು. ಜೀವನ ಯುದ್ಧದಲ್ಲಿ ಸುಖ-ದುಃಖಗಳು ಹಾಸುಹೊಕ್ಕಾಗಿವೆ ಎನ್ನುವ ಸತ್ಯವನ್ನರಿತು ಜೀವನ ಸಾಗಿಸಬೇಕು. ದುಃಖ ಬಂದಾಗ ಮನಸ್ಸನ್ನು ಗಟ್ಟಿಯಾಗಿಸಿಕೊಂಡು ಬದುಕಬೇಕು ಎಂದು ಹೇಳುವುದು ಸುಲಭ. ಆದರೆ ಅದನ್ನು ಜೀವನದಲ್ಲಿ ಅನುಸರಿಸುವುದು ಅಷ್ಟೇ ಕಷ್ಟ. ಇದಕ್ಕೆ ದೃಷ್ಟಾಂತ ಮಹಾಭಾರತ ಯುದ್ಧದಲ್ಲಿ ಅಭಿಮನ್ಯು ಸತ್ತಾಗ ಕಣ್ಣೀರು ಸುರಿಸಿದ ಅರ್ಜುನ. ಸ್ವಯಂ ಭಗವಂತನಿಂದ ಉಪದೇಶ ಪಡೆದು, ಭಗವಂತನ ಸಾರಥ್ಯದಲ್ಲಿ ಯುದ್ಧಕ್ಕಿಳಿದ ಸ್ಥಿತಪ್ರಜ್ಞನಾದ ಅರ್ಜುನ, ತನ್ನ ಮಗ ಅಭಿಮನ್ಯು ಸತ್ತಾಗ ದುಃಖಿಸುತ್ತಾನೆ. ನಾವು ದುಃಖವನ್ನು ಸ್ವೀಕರಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ದುಸ್ತರವಾಗುತ್ತದೆ.
ಯಾವುದೇ ಒಂದು ವಸ್ತುವಿನ ಬಗ್ಗೆ ಮೂರು ವಿಷಯಗಳು ಮನಸ್ಸಿನಲ್ಲಿರಬಾರದು. ಅವುಗಳೆಂದರೆ ರಾಗ-ಭಯ-ಕ್ರೋಧ. ದುಃಖದ ಪೂರ್ವ ಸ್ಥಿತಿ ಭಯ; ಭಯದ ಉತ್ತರ ಸ್ಥಿತಿ ದುಃಖ! ಅತಿಯಾಗಿ ಆಸೆ ಪಡುವುದು ರಾಗ, ಆಸೆಪಟ್ಟ ವಸ್ತು ಸಿಗದಿದ್ದಾಗ ನಿರಾಶೆ. ಆ ವಸ್ತು ನಮ್ಮಿಂದ ದುರ್ಬಲರಿಗೆ ಸಿಕ್ಕಿದರೆ ಅವರ ಮೇಲೆ ಕ್ರೋಧ; ನಮ್ಮಿಂದ ಬಲಿಷ್ಠರಿಗೆ ಸಿಕ್ಕರೆ ಅವರಿಂದ ಭಯ! ಇವೆಲ್ಲವೂ ಮನಸ್ಸಿನ ಹೊಯ್ದಾಟ. ವ್ಯಾಸರು ಹೇಳಿದಂತೆ ಈ ಜಗತ್ತಿನಲ್ಲಿ ಈವರೆಗೆ ಆಗಬಾರದ್ದು ಯಾವುದೂ ಆಗಿಲ್ಲ, ಹಾಗು ಇನ್ನು ಮುಂದೆ ಆಗುವುದೂ ಇಲ್ಲ”. ಆಗಬೇಕಾದದ್ದು ಆಗಿಯೇ ತೀರುತ್ತದೆ, ಅದರ ಬಗ್ಗೆ ಚಿಂತಿಸಿ ಫಲವಿಲ್ಲ. ಇಂತಹ ಚಿಂತನಶೀಲತೆಯನ್ನು ಮೈಗೂಡಿಸಿಕೊಂಡವನು ಸ್ಥಿತಪ್ರಜ್ಞ ಎನಿಸುತ್ತಾನೆ.
ಇಲ್ಲಿ ಮುನಿಃ ಎನ್ನುವ ಪದ ಬಳಕೆಯಾಗಿದೆ. ಮುನಿಃ ಎಂದರೆ ಕಾಮ-ಕ್ರೋಧವನ್ನು ಗೆದ್ದವನು. ನಾವು ಮನಸ್ಸನ್ನು ಎಲ್ಲಾ ಸಂದರ್ಭದಲ್ಲೂ ಏಕರೂಪವಾಗಿ ತಟಸ್ಥವಾಗಿಡಲು ಪ್ರಯತ್ನಿಸಬೇಕು. ಏನು ಬಂದರೂ ಬರಲಿ, ಭಗವಂತನ ದಯೆಯೊಂದಿರಲಿ ಎಂದು ಜೀವನದಲ್ಲಿ ಸುಖ-ದುಃಖವನ್ನು ಸಮದೃಷ್ಟಿಯಲ್ಲಿ ಕಾಣುವವ ಮುನಿ. ನೀನೂ ಕೂಡ ಅಂಥಹ ಮುನಿಯಾಗುಎನ್ನುವುದು ಇಲ್ಲಿರುವ ಸಂದೇಶ.
·  ಶ್ಲೋಕ - 57
ಯಃ ಸರ್ವತ್ರಾನಭಿಸ್ನೇಹಸ್ತತ್ತತ್ ಪ್ರಾಪ್ಯ ಶುಭಾಶುಭಮ್ ।
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೫೭॥
ಯಃ ಸರ್ವತ್ರ ಅನಭಿಸ್ನೇಹ ತತ್ ತತ್ ಪ್ರಾಪ್ಯ ಶುಭ ಅಶುಭಮ ನ ಅಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ--ಆಯಾ ಒಳಿತು-ಕೆಡುಕುಗಳು ಬಂದೊದಗಿದಾಗ ಎಲ್ಲೂ ಅತಿಯಾಗಿ ಅಂಟಿಕೊಳ್ಳುವುದಿಲ್ಲ. ಒಳಿತಿನ ಬಗೆಗೆ ಮೆಚ್ಚೂ ಇಲ್ಲ. ಕೆಡುಕಿನ ಬಗ್ಗೆ ರೊಚ್ಚೂ ಇಲ್ಲ. ಇಂಥವನ ಅರಿವು ಗಟ್ಟಿಗೊಂಡಿರುತ್ತದೆ.
ಇಲ್ಲಿ ಕೃಷ್ಣ ಹೇಳುತ್ತಾನೆ- ದುಃಖ ಬಂದಾಗ ಕಂಗೆಡಬೇಡ, ಸುಖ ಬಂದಾಗ ಉಬ್ಬಬೇಡ, ನಿರ್ಲಿಪ್ತತೆಯನ್ನು ಅಭ್ಯಾಸ ಮಾಡು. ಯಾವುದರ ಮೇಲೂ ಅತಿಯಾದ ಆಸಕ್ತಿ( Over attachment) ಬೇಡ. ಮನಸ್ಸಿನ ಸಮತೋಲನವನ್ನು ಸಾಧಿಸುಎಂದು. ದುಃಖ ಎನ್ನುವುದು ಯಾರನ್ನೂ ಬಿಟ್ಟಿಲ್ಲ. ದೇವಾಂಶ ಸಂಭೂತರಾದ ಪಾಂಡವರು ಪಟ್ಟ ಕಷ್ಟವನ್ನು ನೋಡಿದರೆ ಇದು ಸ್ಪಷ್ಟ. ಜ್ಞಾನಿಗಳಾಗಲಿ, ಅಜ್ಞಾನಿಗಳಾಗಲಿ, ಎಲ್ಲರಿಗೂ ಕಷ್ಟ ಬರುತ್ತದೆ. ನಾವು ಕಷ್ಟವನ್ನು ನೋಡುವ ಮನಃಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಅಷ್ಟೆ. "ನಾನು ಬೇಕು-ಬೇಡವನ್ನು ಮೀರಿ ನಿಂತಿದ್ದೇನೆ, ಇಂತದ್ದೇ ಬೇಕು, ಇಂತದ್ದು ಬೇಡ ಎನ್ನುವ ಆಯ್ಕೆ-ಅಧಿಕಾರ ನನಗಿಲ್ಲ"- ಎನ್ನುವ ಸತ್ಯವನ್ನರಿತು ಬದುಕಿದಾಗ ಜೀವನ ಸುಗಮವಾಗುತ್ತದೆ. ಅಂತಹ ವ್ಯಕ್ತಿ ಎತ್ತರಕ್ಕೇರುತ್ತಾನೆ.
ಜ್ಞಾನಿಗಳಲ್ಲಿ ಇಂಥಹ ಮನಃಸ್ಥಿತಿ ಇರುತ್ತದೆ. ಸಾಮಾನ್ಯ ಮಾನವರಾದ ನಮಗೆ ಇಂದ್ರಿಯ ನಿಗ್ರಹ ಬಹಳ ಕಷ್ಟ, ಆದರೆ ಅಸಾಧ್ಯವಲ್ಲ. ನಿರಂತರ ಸಾಧನೆಯಿಂದ ಇದನ್ನು ಸಾಧಿಸಬಹುದು. ಯಾವ ರೀತಿ ನಾವು ಇಂದ್ರಿಯ ನಿಗ್ರಹ ಮಾಡಿ ಸಾಧನೆ ಮಾಡಬೇಕು ಎನ್ನುವುದನ್ನು ದೃಷ್ಟಾಂತದೊಂದಿಗೆ ಕೃಷ್ಣ ಮುಂದಿನಶ್ಲೋಕದಲ್ಲಿ ವಿವರಿಸಿದ್ದಾನೆ.
·  ಶ್ಲೋಕ - 58
ಯದಾ ಸಂಹರತೇ ಚಾಯಂ ಕೂರ್ಮೋಂSಗಾನೀವ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೫೮॥
ಯದಾ ಸಂಹರತೇ ಚ ಅಯಮ್ ಕೂರ್ಮಃ ಅಂಗಾನಿ ಇವ ಸರ್ವಶಃ ಇಂದ್ರಿಯಾಣಿ ಇಂದ್ರಿಯ ಅರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ-- ಹೇಗೆ ಆಮೆಯು ತನ್ನ ಅಂಗಗಳನ್ನು ಪೂರ್ತಿಯಾಗಿ ಚಿಪ್ಪಿನೊಳಗೆ ಎಳೆದುಕೊಳ್ಳುತ್ತದೋ ಹಾಗೆ, ಇಂದ್ರಿಯಗಳನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದುಕೊಳ್ಳುವವರ ಪ್ರಜ್ಞೆ ಗಟ್ಟಿಗೊಂಡಿರುತ್ತದೆ.
ನಮ್ಮನ್ನು ನಮ್ಮ ಇಂದ್ರಿಯಗಳು ದಾರಿ ತಪ್ಪಿಸುತ್ತವೆ. ಯಾವುದು ಬೇಡವೋ ಅದೇ ಬೇಕು ಎನ್ನುವ ಆಸೆ ಹುಟ್ಟಿಸುತ್ತವೆ. ಇಲ್ಲಿ ಕೃಷ್ಣ ಹೇಳುತ್ತಾನೆ: ಆಮೆ ಹೇಗೆ ತನ್ನ ನಾಲ್ಕು ಕಾಲು ಮತ್ತು ತಲೆಯನ್ನು ತನ್ನ ಚಿಪ್ಪಿನೊಳಗೆ ಸಂಪೂರ್ಣ ಎಳೆದುಕೊಂಡು ಸುರಕ್ಷಿತವಾಗಿರುತ್ತದೋ, ಹಾಗೇ ನಾವು ನಮ್ಮ ಪಂಚೇಂದ್ರಿಯಗಳನ್ನು ಗಟ್ಟಿ ಮನಸ್ಸಿನ ಕೋಟೆಯೊಳಗೆ ಎಳೆದುಕೊಂಡು ಅಂತರ್ಮುಖಗೊಳಿಸಿಕೊಳ್ಳಬೇಕು ಎಂದು. ಇಲ್ಲಿ ಅಂತರ್ಮುಖಗೊಳಿಸುವುದು ಎಂದರೆ ನೋಡುವ ದೃಷ್ಟಿಯನ್ನು ಬದಲಿಸಿಕೊಳ್ಳುವುದು. ಎಲ್ಲವನ್ನು ಅಂತರಂಗ ದೃಷ್ಟಿಯಿಂದ ವಿಶ್ಲೇಷಣೆ ಮಾಡಿ ಅದರಲ್ಲಿನ ಒಳ್ಳೆಯತನವನ್ನು ಗುರುತಿಸಿ ಗ್ರಹಣ ಮಾಡುವುದು. ಅದನ್ನು ಸೃಷ್ಟಿಸಿದ ಭಗವಂತನ ಮಹಿಮೆಯನ್ನು ಅನುಸಂಧಾನ ಮಾಡುವುದು.
ನಾವು ಭಗವಂತ ಸೃಷ್ಟಿಸಿದ ಈ ಪ್ರಪಂಚವನ್ನು ನೋಡುತ್ತೇವೆ. ನೋಡುತ್ತಾ ಅದರ ಹಿಂದೆ ಇರುವ ಆ ವಿಶ್ವಶಕ್ತಿಯ ಮಹಿಮೆಯನ್ನು ಯೋಚಿಸಿದರೆ- ಅದು ಅಂತರ್ಮುಖವಾದ ಒಳನೋಟವಾಗುತ್ತದೆ. ಎಲ್ಲವುದರ ಒಳಗೂ ಭಗವಂತನಿದ್ದಾನೆ ಎನ್ನುವ ಎಚ್ಚರ, ಒಂದೊಂದು ಅಭಿವ್ಯಕ್ತಿಯಲ್ಲಿ ಭಗವಂತನ ಒಂದೊಂದು ವಿಭೂತಿ ಇದೆ ಎನ್ನುವ ತಿಳುವಳಿಕೆ ಇದ್ದಾಗ, ಯಾವುದೂ ನಮ್ಮನ್ನು ದಾರಿ ತಪ್ಪಿಸುವುದಿಲ್ಲ. ಇದು ಜ್ಞಾನಿ ಪ್ರಪಂಚವನ್ನು ನೋಡುವ ದೃಷ್ಟಿ. ನಾವು ಪ್ರಪಂಚವನ್ನು ಬದಲಿಸಲು ಸಾಧ್ಯವಿಲ್ಲ. ಪ್ರಪಂಚವನ್ನು ನಾವು ನಮ್ಮ ಇಷ್ಟದಂತೆ ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನರಿತು, ಪ್ರಪಂಚ ಇದ್ದ ಹಾಗೆ ಅದಕ್ಕನುಗುಣವಾಗಿ ಬದುಕುವ ಮನೋವೃತ್ತಿಯನ್ನು ಬೆಳೆಸಿಕೊಂಡಾಗ ಯಾವ ಸಮಸ್ಯೆಯೂ ಇಲ್ಲ. ಈ ರೀತಿ ತಮ್ಮ ಇಂದ್ರಿಯಗಳನ್ನು ಅಂತರ್ಮುಖಗೊಳಿಸಿಕೊಂಡವನ ಪ್ರಜ್ಞೆ ಗಟ್ಟಿಗೊಂಡಿರುತ್ತದೆ.
·  ಶ್ಲೋಕ - 59
ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ ।
ರಸವರ್ಜಂ ರಸೋSಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ ॥೫೯॥
ವಿಷಯಾಃ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ ರಸವರ್ಜಮ್ ರಸಃ ಅಪಿ ಅಸ್ಯ ಪರಮ್ ದೃಷ್ಟ್ವಾ ನಿವರ್ತತೇ- -ಆಹಾರ ತೊರೆದ ಜೀವಿಗೆ ವಿಷಯ ಭೋಗದ ಕಸುವಷ್ಟೇ ಕುಂದುತ್ತದೆ-ನಾಲಗೆಯ ಕಸು ಮತ್ತು ಭೋಗದ ಬಯಕೆಯನ್ನು ಬಿಟ್ಟು. ಅಂಥ ಕಸುವು-ಬಯಕೆ ಕೂಡಾ ಭಗವಂತನನ್ನು ಕಂಡಾಗ ಇಲ್ಲವಾಗುತ್ತದೆ.
ನಾವು ಸ್ಥಿತಪ್ರಜ್ಞರಾಗಬೇಕೆಂದರೆ ಇಂದ್ರಿಯಗಳನ್ನು ಅಂತರ್ಮುಖಗೊಳಿಸಬೇಕು ಎನ್ನುವ ವಿಷಯವನ್ನು ನೋಡಿದೆವು. ಆದರೆ ಅದು ಅಷ್ಟು ಸುಲಭದ ವಿಷಯವಲ್ಲ. ಸಾಧನಾ ಶರೀರದಲ್ಲಿರುವ ಸಾಧಕ, ಇಂದ್ರಿಯಗಳನ್ನು ಹೊರಗಿನ ವಿಷಯಗಳ ಜೊತೆಗೆ ಸಂಪರ್ಕ ಆಗದಂತೆ ತಡೆದರೆ(ಏಕಾಂತದ ಅಭ್ಯಾಸ), ನೋಡುವ, ಕೇಳುವ ಎಲ್ಲಾ ಆಸೆಗಳು ಹೊರಟು ಹೋಗಬಹುದು. ಆದರೆ ರುಚಿ(ನಾಲಿಗೆಯ ಚಪಲ) ಮತ್ತು ಶೃಂಗಾರ(ಲೈಂಗಿಕ ಬಯಕೆ)ವನ್ನು ನಿವಾರಿಸುವುದು ಬಹಳ ಕಷ್ಟ. ಈ ಕಾರಣಕ್ಕಾಗಿ ನಾವು ಬ್ರಹ್ಮಚರ್ಯ ಪಾಲನೆ ಮಾಡಬೇಕೆಂದಿದ್ದರೆ ಒಮ್ಮೆ ಶೃಂಗಾರ ಭೋಗವನ್ನು ಅನುಭವಿಸಿ, ದಾಂಪತ್ಯವೆಂದರೆ ಏನು ಎಂದು ಅರಿತು, ಆನಂತರ ಬ್ರಹ್ಮಚರ್ಯಕ್ಕೆ ಕಾಲಿಟ್ಟರೆ ಸಾಧನೆ ಸುಲಭ. ನಿಯಮಿತ ಆಹಾರ, ಉಪವಾಸ- ಅಧ್ಯಾತ್ಮಕ್ಕೆ ಪೂರಕ. ಅತಿ ಆಹಾರ, ತಾಮಸ ಹಾಗು ರಾಜಸ ಆಹಾರ (ಉದಾ: ತೊಗರಿ ಬೇಳೆ, ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಇತ್ಯಾದಿ) ಅಧ್ಯಾತ್ಮ ಸಾಧನೆಗೆ ತೀರಾ ವಿರುದ್ಧ (ಈ ಕಾರಣಕ್ಕಾಗಿ ಯಾರೇ ಅತಿಥಿ ಬಂದಾಗ ಅವರಿಗೆ ಒತ್ತಾಯ ಪೂರ್ವಕವಾಗಿ ಆಹಾರ ನೀಡಬಾರದು; ಮಾಡಿದ ಅಡಿಗೆ ಮಿಕ್ಕಿದಾಗ ಹಾಳಾಗುತ್ತಲ್ಲಾ ಅಂತ ತಿನ್ನುವುದರಿಂದ ಆಹಾರವೂ ಹಾಳು ದೇಹವೂ ಹಾಳು! ). ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಏಕಾಂತ ಹಾಗು ಆಹಾರ ನಿಯಂತ್ರಣ ಸಾಧನೆಗೆ ಪೂರಕ . ಇದರಿಂದ ನಮ್ಮ ನಾಲಿಗೆಯ ಮತ್ತು ಭೋಗದ ಚಪಲ ಸಂಪೂರ್ಣ ನಿಗ್ರಹ ಆಗದಿದ್ದರೂ ಕೂಡಾ ಅವು ಭಗವಂತನಲ್ಲಿ ಸಂಪೂರ್ಣ ಶರಣಾದಾಗ ಇಲ್ಲವಾಗುತ್ತವೆ.
·  ಶ್ಲೋಕ - 60
ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ।
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥೬೦॥
ಯತತಃ ಹಿ ಅಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಮ್ ಮನಃ -- ಸಾಧಕ ಸಾಕಷ್ಟು ತಿಳಿದುಕೊಂಡರೂ, ಸಾಕಷ್ಟು ಪ್ರಯತ್ನಿಸಿದರೂ ಕೂಡಾ, ಇಂದ್ರಿಯಗಳು ಬಲವಂತವಾಗಿ ಮನಸ್ಸನ್ನು ಕಲಕಿ ಸೆಳೆದುಬಿಡುತ್ತವೆ.
ನಾವು ಎಷ್ಟು ಓದಿ , ಕೇಳಿ ತಿಳಿದುಕೊಂಡರೂ ಕೂಡಾ, ಸಾಧನೆಯ ಈ ದಾರಿ ಅಷ್ಟು ಸುಲಭದ್ದಲ್ಲ. ಪ್ರಯತ್ನದ ಛಲವಿಲ್ಲದೆ ಇದು ಅಸಾಧ್ಯ. ಅಧ್ಯಾತ್ಮದ ದಾರಿಯಲ್ಲಿ ಸಾಗಲು ಮನಸ್ಸು ಗಟ್ಟಿಯಾಗಿರಬೇಕು. ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಅದೇನೆಂದರೆ ಮನಸ್ಸು ಗಟ್ಟಿಯಾದಾಗ ಇಂದ್ರಿಯಗಳು ಸಡಿಲವಾಗುತ್ತವೆ. ರಾಗ ದ್ವೇಷ ಮಾಡಬಾರದು, ಕಾಮ ಕ್ರೋಧಗಳಿಗೆ ಒಳಗಾಗಬಾರದು, ಬಯಕೆಯ ಮೇಲೆ ಕಡಿವಾಣವಿರಬೇಕು ಎಂದು ಗಟ್ಟಿ ಮನಸ್ಸಿನಲ್ಲಿ ತೀರ್ಮಾನ ಮಾಡಿ ಕುಳಿತಾಗ, ಇಂದ್ರಿಯಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ. ಶಾಸ್ತ್ರವನ್ನು ಓದಿ ಪರೋಕ್ಷವಾಗಿ ಸತ್ಯವನ್ನು ಕಂಡವನನ್ನೂ ಸಹ ಈ ಸಮಸ್ಯೆ ಕಾಡದೆ ಬಿಡದು. ಬಲಾತ್ಕಾರವಾಗಿ ಇಂದ್ರಿಯಗಳು ಮನಸ್ಸನ್ನು ದಾರಿ ತಪ್ಪಿಸುತ್ತವೆ. ಇದರಿಂದಾಗಿ ಮೊದಲು ನಂಬಿದ್ದನ್ನು ನಂಬಬೇಕೋ ಬಿಡಬೇಕೋ ಅನ್ನುವ ಸಂಶಯ ಹುಟ್ಟಿಕೊಳ್ಳುತ್ತದೆ. ಇದು ಪ್ರತಿಯೊಬ್ಬ ಸಾಧಕ ಜೀವನಿಗೆ ಅನುಭವಕ್ಕೆ ಬರುವ ಸಂಗತಿ. ಈ ಸಮಸ್ಯೆ ಗಂಭೀರವಾಗಿ ಕಂಡರೂ ಕೂಡಾ ಕೃಷ್ಣ ಮುಂದಿನ ಶ್ಲೋಕದಲ್ಲಿ ಇದಕ್ಕೆಸರಳ ಪರಿಹಾರ ಸೂಚಿಸುತ್ತಾನೆ.
·  ಶ್ಲೋಕ - 61
ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ ಪರಃ ।
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೬೧॥
ತಾನಿ ಸರ್ವಾಣಿ ಸಂಯಮ್ಯ ಯುಕ್ತಃ ಆಸೀತ ಮತ್ ಪರಃ ವಶೇ ಹಿ ಯಸ್ಯ ಇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ--ಅವುಗಳನ್ನೆಲ್ಲ ತಡೆಹಿಡಿದು, ನನ್ನನ್ನೇ ಪರತತ್ವವೆಂದು ನಂಬಿ ನನ್ನಲ್ಲೇ ಮನವಿಟ್ಟು ಕೂಡಬೇಕು. ಹೀಗೆ ಇಂದ್ರಿಯಗಳನ್ನು ಗೆದ್ದವನ ಅರಿವು ಗಟ್ಟಿಗೊಂಡಿರುತ್ತದೆ.
ಇಂದ್ರಿಯಗಳಿಂದ ಮನಸ್ಸು ಕದಲುವುದು ಅಥವಾ ಮನಸ್ಸಿನಿಂದ ಇಂದ್ರಿಯ ಬೇಡದ ಕಾರ್ಯದಲ್ಲಿ ತೊಡಗುವುದು. ಈ ಸಮಸ್ಯೆಯಿಂದ ಈಚೆ ಬರಬೇಕಾದರೆ ನಾವು ಇಂದ್ರಿಯಗಳೆಂಬ ಕುದುರೆಗಳನ್ನು ಪಳಗಿಸಿ, ಮನಸ್ಸೆಂಬ ಕಡಿವಾಣದಲ್ಲಿ ಅವುಗಳನ್ನು ಬಿಗಿದು, ಅದು ಸಡಿಲವಾಗದಂತೆ ಬಿಗಿ ಹಿಡಿಯಬೇಕು. ಈ ಕಾರ್ಯವನ್ನು ಯಶಸ್ಸಾಗಿ ಮಾಡಬೇಕಾದರೆ ಮೊದಲು ನಾವು ಭಗವಂತನಲ್ಲಿ ಶರಣಾಗಬೇಕು. "ಈ ಜವಾಬ್ದಾರಿಯನ್ನು ನನಗೊಪ್ಪಿಸು" ಎನ್ನುತ್ತಾನೆ ಕೃಷ್ಣ. ಎಂಥಹ ಭರವಸೆ? "ನನ್ನ ಇಂದ್ರಿಯಗಳು ದಾರಿತಪ್ಪದಂತೆ ನನ್ನೊಳಗಿದ್ದು ಪ್ರೇರೇಪಿಸು ಭಗವಂತ, ನಿನ್ನ ಚಿಂತನೆಯ ಶಕ್ತಿ ನಿರಂತರ ನನ್ನ ಮನಸ್ಸಿನಲ್ಲಿ ಉಳಿಯುವಂತೆ ಮಾಡು" ಎಂದು ಭಗವಂತನನ್ನು ಪ್ರಾರ್ಥಿಸಬೇಕು. ಭಗವಂತನಲ್ಲಿ ಶರಣಾಗತಿಯನ್ನು ಪಡೆಯದೆ ಎಲ್ಲವನ್ನು ಸ್ವಪ್ರಯತ್ನದಿಂದ ಮಾಡುತ್ತೇನೆ ಎಂದರೆ ಅದು ಅಸಾಧ್ಯ. ಪ್ರಯತ್ನ ಮಾಡಬೇಕು, ಪ್ರಯತ್ನದಲ್ಲಿ ಜಯ ದೊರೆಯುವಂತೆ ಭಗವಂತನಲ್ಲಿ ಬೇಡಿ, ಆತನಲ್ಲಿ ಶರಣಾದಾಗ, ಒಂದಲ್ಲ ಒಂದು ದಿನ ಅನುಭೂತಿಯ ಅನುಗ್ರಹವಾಗುತ್ತದೆ. ಆಗ ಸಂಪೂರ್ಣ ಇಂದ್ರಿಯ ನಿಗ್ರಹ ಸಾಧ್ಯ. ಈ ಸಾಧನೆ ಅನೇಕ ಜನ್ಮದ್ದು. ಹತ್ತು ದಿನ ಸಾಧನೆ ಮಾಡಿ ನಿರಾಶೆಯಾಗಿ ನಾಸ್ತಿಕನಾಗದೆ, ನಿರಂತರ ಸಾಧನೆ ಮಾಡಿದರೆ ಯಶಸ್ಸು ನಮ್ಮದಾಗುತ್ತದೆ. ಯಾರ ಇಂದ್ರಿಯಗಳು ಅವನ ವಶಕ್ಕೆ ಬಂದವೋ, ಅವನ ಅರಿವು ಗಟ್ಟಿಯಾಗುತ್ತದೆ. ಆತ ಜೀವನದಲ್ಲಿ, ಸಾಧನೆಯ ಹಾದಿಯಲ್ಲಿ ಗೆಲ್ಲುತ್ತಾನೆ.
ನಮ್ಮ ಅಧಃಪತನಕ್ಕೆ ನಮ್ಮ ಮನಸ್ಸು ಹೇಗೆ ಕಾರಣವಾಗುತ್ತದೆ ಎನ್ನುವುದನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ವಿವರಿಸಿದ್ದಾನೆ. ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎನ್ನುವ ಒಂದು ಅಪೂರ್ವ ಮಾನಸಿಕ ಚಿತ್ರಣ ಇಲ್ಲಿದೆ.
·  ಶ್ಲೋಕ - 62
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ ।
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋSಭಿಜಾಯತೇ ॥೬೨॥
ಧ್ಯಾಯತಃ ವಿಷಯಾನ್ ಪುಂಸಃ ಸಂಗಃ ತೇಷು ಉಪಜಾಯತೇ ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧಃ ಅಭಿಜಾಯತೇ -- ವಿಷಯಗಳನ್ನೆ ನೆನೆಯುತ್ತಿರುವ ಮನುಷ್ಯನಿಗೆ ಅವುಗಳ ನಂಟು ಬೆಳೆಯುತ್ತದೆ. ನಂಟಿನಿಂದ ಆಸೆ ಕುದುರುತ್ತದೆ. ಆಸೆಗೆ ಅಡ್ಡಿಯಾದಾಗ ರೊಚ್ಚು ಮೂಡುತ್ತದೆ.
·  ಶ್ಲೋಕ - 63
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾದ್ ವಿನಶ್ಯತಿ ॥೬೩॥
ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿ ವಿಭ್ರಮಃ ಸ್ಮೃತಿಭ್ರಂಶಾದ್ ಬುದ್ಧಿನಾಶಃ ಬುದ್ಧಿನಾಶಾತ್ ವಿನಶ್ಯತಿ --ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂಥ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ!
ಒಂದು ವಸ್ತುವಿನ ನಿರಂತರ ಸಂಪರ್ಕದಿಂದ ನಮಗೆ ಅದರ ಮೇಲೆ ಮೋಹ ಬೆಳೆಯುತ್ತದೆ. ಮೊದಲು ಪರಿಚಯ, ಪರಿಚಯದಿಂದ ಸ್ನೇಹ, ನಂತರ ಆ ಸ್ನೇಹವನ್ನು ಹಚ್ಚಿಕೊಳ್ಳುವುದು(Attachment).ನಂತರ ಅವರು ನನ್ನವರಾಗಬೇಕು ಎನ್ನುವ ಆಸೆ. ನಾವು ಆಸೆ ಪಟ್ಟಂತೆ ನೆರವೇರದಾಗ ಕ್ರೋಧ. ಈ ಕ್ರೋಧದ ಮೂಲ ಪ್ರೀತಿ! ಕೋಪಕ್ಕೆ ಮೂಲ ಕಾರಣ ಕಾಮನೆ. ನಮಗೆ ಕೋಪ ಬಾರದಂತೆ ತಡೆಯಬೇಕಾದರೆ ಮೊದಲು ಕಾಮನೆಯನ್ನು ತೊರೆಯಬೇಕು. ಆಸೆ ಕಡಿಮೆಯಾದಂತೆ ಸಿಟ್ಟು ಕಡಿಮೆಯಾಗುತ್ತದೆ. ಅಂಟಿಸಿಕೊಳ್ಳುವುದು ಅಥವಾ ಹಚ್ಚಿಕೊಳ್ಳುವುದರಿಂದ ಆಸೆ ಆಕಾಂಕ್ಷೆಗಳು ಬೆಳೆಯುತ್ತವೆ. ಅದು ಈಡೇರದಿದ್ದಾಗ ಕೋಪ. ಕೋಪದಿಂದ ಸಮ್ಮೋಹ. ಅಂದರೆ ಅಸಂಗತವಾದ ವಿಚಾರಗಳು ತಲೆಯಲ್ಲಿ ಬಂದು ಮಾಡಬಾರದ್ದನ್ನು ಮಾಡುವ ಬಯಕೆ. ಇದರಿಂದ ಯುಕ್ತಾಯುಕ್ತಗಳನ್ನು ವಿಶ್ಲೇಷಣೆ ಮಾಡುವ ಶಕ್ತಿ ಹೊರಟು ಹೋಗಿ, ತಪ್ಪನ್ನೇ ಸರಿ ಎಂದು ಸಮರ್ಥನೆ ಮಾಡುವ ಮಟ್ಟಕ್ಕೆ ನಾವು ಇಳಿಯುತ್ತೇವೆ. ಪಲಿತಾಂಶ: ಪ್ರತಿಕಾರ ಮಾಡಬೇಕು ಎನ್ನುವ ಹಠ. ಅದರಿಂದ ಪೂರ್ತಿ ತಿಳಿಗೇಡಿತನ ಮತ್ತು ಕೊನೆಗೆ ಆತ್ಮದ ಅಧಃಪತನ- ವಿನಾಶ-ಸರ್ವನಾಶ!
ಬುದ್ಧಿ ನಾಶವಾದಾಗ ಮನಸ್ಸು ಸತ್ತಂತೆ. ಅದರಿಂದ ಜೀವ ನರಕದ ದಾರಿಯಲ್ಲಿ ಹೋಗುವಂತಾಗುತ್ತದೆ. ಇದು ಅಧಃಪತನದ ದಾರಿ. ನಾವು ಎತ್ತರಕ್ಕೇರಬೇಕೆಂದರೆ ಪರಮಾತ್ಮನ ಮಹತ್ವವನ್ನು ಅರಿತು ಅವನಿಗೆ ಶರಣಾಗಬೇಕು. ಒಳ್ಳೆಯ ದಾರಿಯಲ್ಲಿ ಮನಸ್ಸು ಚಿಂತನೆ ಮಾಡಿದಾಗ ಆತ್ಮ ಎತ್ತರಕ್ಕೇರಲು ಸಾಧ್ಯ. ಇದಕ್ಕೆ ಮೊದಲು ನಾವು ಹಚ್ಚಿಕೊಳ್ಳುವುದನ್ನು(Over attachment) ಕಡಿಮೆ ಮಾಡಬೇಕು. ಇದರರ್ಥ ಯಾರನ್ನೂ ಪ್ರೀತಿಸಬಾರದು, ಸ್ನೇಹ ಬೆಳೆಸಬಾರದು ಎಂದರ್ಥವಲ್ಲ. ಪ್ರೀತಿ ಇರಲಿ, ಸ್ನೇಹವಿರಲಿ, ಆದರೆ ಮೋಹ ಬೇಡ. ಬಂದಿದ್ದು ಬರಲಿ ಎನ್ನುವ ದೃಢ ನಿರ್ಧಾರವಿರಲಿ. ಹೀಗೇ ಆಗಬೇಕು-ಹಾಗೇ ಆಗಬೇಕು ಎನ್ನುವ ಅತಿಮೋಹ ದುಃಖಕ್ಕೆ ಕಾರಣ. ಎಲ್ಲವುದರ ಜೊತೆಗಿದ್ದು, ಎಲ್ಲರನ್ನೂ ಪ್ರೀತಿಸುವುದು-ಆದರೆ ಹಚ್ಚಿಕೊಳ್ಳದೇ ಇರುವುದು(Detached attachment). ಇದೇ ಸಾಧನೆಯ, ಸಂತೋಷದ ಮೂಲ ಮಂತ್ರ.
ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಪ್ರಸನ್ನತೆ ಇಲ್ಲದಿದ್ದಾಗ ಮಾನಸಿಕವಾಗಿ, ದೈಹಿಕವಾಗಿ ನಾವು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಎಂಥಹ ಪ್ರಸಂಗದಲ್ಲೂ ತಲೆ ಕೆಡಿಸಿಕೊಳ್ಳದೆ ಹಾಯಾಗಿರುವುದು ಪ್ರಸನ್ನತೆ. ಇದನ್ನು ಗಳಿಸುವುದು ಹೇಗೆ ಎನ್ನುವ ಚಿತ್ರಣ ಮುಂದಿನ ಶ್ಲೋಕ.
·  ಶ್ಲೋಕ - 64
ರಾಗದ್ವೇಷವಿಮುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ ।
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ ॥೬೪॥
ರಾಗ ದ್ವೇಷ ವಿಮುಕ್ತೈ: ತು ವಿಷಯಾನ್ ಇಂದ್ರಿಯೈ: ಚರನ್ ಆತ್ಮವಶ್ಯೈ: ವಿಧೇಯ ಆತ್ಮಾ ಪ್ರಸಾದಮ್ ಅಧಿಗಚ್ಛತಿ --ಒಲವು ಹಗೆತನಗಳಿಂದ ಪಾರಾಗಿ ತನ್ನ ಹಿಡಿತದಲ್ಲಿರುವ ಇಂದ್ರಿಯಗಳಿಂದ ವಿಷಯಗಳನ್ನು ಅನುಭವಿಸುವಾಗಲೂ, ಅಂಕೆ ತಪ್ಪದವನ ಮನಸ್ಸು ತಿಳಿಗೊಳ್ಳುತ್ತದೆ.
ಇಂದ್ರಿಯ ನಿಗ್ರಹ ಅಥವಾ ಹಚ್ಚಿಕೊಳ್ಳದೆ ಇರುವುದು ಅಂದರೆ ಎಲ್ಲಾ ವಿಷಯ ಭೋಗಗಳನ್ನು ತೊರೆದು ಪ್ರಾಪಂಚಿಕ ವ್ಯವಹಾರದಿಂದ ದೂರಸರಿದು ಕಣ್ಮುಚ್ಚಿ ಕುಳಿತುಕೊಳ್ಳುವುದಲ್ಲ. ಇಂದ್ರಿಯದಿಂದ ವಿಷಯ ಗ್ರಹಿಸು, ಅದು ನಿರಂತರ. ಆದರೆ ಅದರಿಂದ ಪ್ರಭಾವಿತನಾಗಿ ಅದರ ದಾಸನಾಗಬೇಡ ಎನ್ನುತ್ತಾನೆ ಕೃಷ್ಣ. ವಿಷಯಗಳನ್ನು ಇಂದ್ರಿಯಗಳಿಂದ ಅನುಭವಿಸು, ಆದರೆ ವಿಷಯಗಳಿಗೆ ರಾಗ-ದ್ವೇಷಗಳ ಹವ್ಯಾಸವನ್ನು ಅಂಟಿಸಬೇಡ. ಏನು ಬಂತೋ ಹಾಗೇ ಅನುಭವಿಸು. ಇಂತಹ ಮನೋವೃತ್ತಿಯನ್ನು ಬೆಳೆಸಿಕೊಂಡಾಗ ಇಂದ್ರಿಯ ಯಾವ ವಿಷಯವನ್ನು ಗ್ರಹಿಸಿದರೂ ಅಪಾಯವಿಲ್ಲ. ತಟಸ್ಥ ಮನಸ್ಸಿನಿಂದ ಯಾವ ವಿಷಯ ಕೇಳುವುದರಿಂದ, ನೋಡುವುದರಿಂದ ಯಾವ ಅಪಾಯವೂ ಇಲ್ಲ. ಇಲ್ಲಿ ತಟಸ್ಥ ಮನಸ್ಸು ಅನ್ನುವುದಕ್ಕೆ ಉದಾಹರಣೆ ಎಂದರೆ, ಕೆಲವೊಮ್ಮೆ, ನಾವು ನಮ್ಮ ಸ್ನೇಹಿತರನ್ನು ದಾರಿ ಮಧ್ಯದಲ್ಲಿ ಭೇಟಿಯಾಗುತ್ತೇವೆ. ನಾವು ಅಲ್ಲಿ ಕುಳಿತು ಸಂಭಾಷಣೆ ಮಾಡುತ್ತೇವೆ. ಆದರೆ ನಂತರ ಯಾರಾದರೂ ಬಂದು ನಿನ್ನ ಸ್ನೇಹಿತ ಯಾವ ಬಣ್ಣದ ಬಟ್ಟೆ ಧರಿಸಿದ್ದ ಎಂದು ಕೇಳಿದರೆ ನಮಗೆ ಗೊತ್ತಿರುವುದಿಲ್ಲ. ನಾವು ನೋಡಿರುತ್ತೇವೆ, ಆದರೆ ಗಮನಿಸಿರುವುದಿಲ್ಲ. ಏಕೆಂದರೆ ಅದರ ಅಗತ್ಯವಿರುವುದಿಲ್ಲ. ಇದೇ ರೀತಿ ಮನಸ್ಸನ್ನು ತಟಸ್ಥವಾಗಿಟ್ಟು ಯಾವ ವಿಷಯ ಗ್ರಹಿಸಿದರೂ ಅಪಾಯವಿಲ್ಲ. ಇದರಿಂದ ಇಂದ್ರಿಯಗಳು ಅಧೀನವಾಗಿರುತ್ತವೆ. ಮನಸ್ಸು ವಿಧೇಯವಾಗಿರುತ್ತದೆ. ಒಳಗಿನಿಂದ ನಿರ್ಲಿಪ್ತತೆಯನ್ನು ಬೆಳೆಸಿಕೊಂಡಾಗ ಎಲ್ಲರ ಜೊತೆಗಿದ್ದು ಏಕಾಂತತೆಯನ್ನು ಗಳಿಸಬಹುದು. ಎಲ್ಲರ ಜೊತೆ ಬೆರೆತು ಬೇರೆಯಾಗಿರಬಹುದು. ಅಂತರಂಗದ ಪ್ರಪಂಚದಲ್ಲಿ ಬೇರೆಯಾಗಿರುವ ಸ್ಥಿತಿ ಇದು. ಈ ರೀತಿ ಬದುಕಲು ಕಲಿತಾಗ ಮನಸ್ಸು ತಿಳಿಗೊಳ್ಳುತ್ತದೆ. ಯಾವಾಗಲೂ ಸಂತೋಷ ಉಕ್ಕಿ ಹೊರಬರುತ್ತಿರುತ್ತದೆ. ಸಾಧನೆ ಸುಗಮವಾಗುತ್ತದೆ.
·  ಶ್ಲೋಕ - 65
ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ ।
ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತಿ ॥೬೫॥
ಪ್ರಸಾದೇ ಸರ್ವ ದುಃಖಾನಾಮ್ ಹಾನಿಃ ಅಸ್ಯ ಉಪಜಾಯತೇ ಪ್ರಸನ್ನಚೇತಸಃ ಹಿ ಅಶು ಹ್ಯಾಶು ಬುದ್ಧಿಃ ಪರಿ ಅವತಿಷ್ಠತಿ--ಮನಸ್ಸು ತಿಳಿಗೊಂಡಾಗ ಸಾಧಕನ ಎಲ್ಲಾ ದುಗುಡಗಳು ಇಲ್ಲವಾಗುತ್ತವೆ. ಏಕೆಂದರೆ ಬಗೆ ತಿಳಿಗೊಂಡವನ ಬುದ್ಧಿ ಬೇಗನೆ ಭಗವಂತನಲ್ಲಿ ನೆಲೆಗೊಳ್ಳುತ್ತದೆ.
ಮನಸ್ಸು ಕೊಳೆಯಾದರೆ ಎಲ್ಲವೂ ಕೊಳೆ. ಮನಸ್ಸು ತಿಳಿಯಾದರೆ ಎಲ್ಲವೂ ತಿಳಿ. ಎಲ್ಲಾ ಸಮಸ್ಯೆ ಇರುವುದು ಮನಸ್ಸು ಕೊಳೆಯಾಗುವುದರಿಂದ. ನಮಗೆ ನಮ್ಮ ಮನಸ್ಸಿನ ಸ್ವಚ್ಛತೆ ಬಗ್ಗೆ ಗಮನ ಇಲ್ಲದಿದ್ದರೆ ಇತರ ಎಲ್ಲಾ ಕಾರ್ಯವೂ ವ್ಯರ್ಥ. ಮನಸ್ಸು ಸ್ವಚ್ಚವಾದರೆ ಮಡಿ. ಅದೇ ಪ್ರಸನ್ನವಾದ ಸ್ಥಿತಿ. ಮನಸ್ಸು ತಿಳಿಯಾದಾಗ ಸರ್ವ ದುಃಖವೂ ತನ್ನಷ್ಟಕ್ಕೆ ತಾನು ಕಣ್ಮರೆಯಾಗುತ್ತದೆ. ಇದು ದುಃಖಾತೀತ ಆನಂದ ಸ್ಥಿತಿ.
ಮನಸ್ಸು ತಿಳಿಯಾಯಿತು ಎಂದರೆ ಅದು ಭಗವಂತನನ್ನು ತಿಳಿಯಲು ಸಹಾಯ ಮಾಡುತ್ತದೆ. ಕೊಳೆಯಾದ ಮನಸ್ಸಿನಿಂದ ಭಗವಂತನ ಚಿಂತನೆ ಸಾಧ್ಯವಿಲ್ಲ. ಭಗವಂತನನ್ನು ತಿಳಿದ ಮೇಲೆ ದುಃಖವಿಲ್ಲ. ಬುದ್ಧಿ-ಗಟ್ಟಿಗೊಂಡು ಭಗವಂತನ ಅಪರೋಕ್ಷ ಜ್ಞಾನದಲ್ಲಿ ನಿಂತುಬಿಡುತ್ತದೆ. ಈ ಸ್ಥಿತಿಯಲ್ಲಿ ಯಾವ ದೆಸೆಯಲ್ಲಿ ಯೋಚನೆ ಹೋದರೂ ಕೂಡಾ ಅದು ಭಗವಂತನಲ್ಲಿ ಹೋಗಿ ನಿಲ್ಲುತ್ತದೆ. ಯಾವುದನ್ನು ಕೇಳಿದರು, ಯಾವುದನ್ನು ನೋಡಿದರು, ಅದರ ಹಿಂದೆ ಇರುವ ಜಗತ್ತಿನ ಮೂಲ ಶಕ್ತಿಯ ಚಿಂತನೆ ಮನಸ್ಸಿಗೆ ಬಂದುಬಿಡುತ್ತದೆ. ಆಗ ಯಾವುದೋ ಸಣ್ಣ ಸಂಗತಿಗಾಗಿ ಕೊರಗುವ ಪ್ರಶ್ನೆಯೇ ಉಳಿಯುವುದಿಲ್ಲ. ತಿಳಿಯಾದ ಮನಸ್ಸು ಭಗವನ್ಮಯವಾಗುತ್ತದೆ. ಒಮ್ಮೆ ಭಗವಂತ ಮನಸ್ಸಿನಲ್ಲಿ ತುಂಬಿದ ಅಂದರೆ ಸರ್ವವೂ ಆನಂದಮಯ. ಆ ನಂತರ ದುಃಖವೆಂಬುವುದಿಲ್ಲ; ಈ ಆನಂದ ಅಪರಿಮಿತ.
·  ಶ್ಲೋಕ - 66
ನಾಸ್ತಿ ಬುದ್ಧಿರಯುಕ್ತಸ್ಯ ನಚಾಯುಕ್ತಸ್ಯ ಭಾವನಾ ।
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್ ॥೬೬॥
ನ ಅಸ್ತಿ ಬುದ್ಧಿಃ ಅಯುಕ್ತಸ್ಯ ನ ಚ ಅಯುಕ್ತಸ್ಯ ಭಾವನಾ ನ ಚ ಅಭಾವಯತಃ ಶಾಂತಿಃ ಅಶಾಂತಸ್ಯ ಕುತಃ ಸುಖಮ್--ಮನಸ್ಸು ಮಣಿಸದವನಿಗೆ ತಿಳಿಯಾದ ತಿಳಿವಿಲ್ಲ. ಮನಸ್ಸು ಮಣಿಸದವನಿಗೆ ಧ್ಯಾನವೂ ಇಲ್ಲ. ಧ್ಯಾನ ಇರದವನಿಗೆ ಮುಕ್ತಿಯಿಲ್ಲ[ಭಗವಂತನಲ್ಲಿ ಬಗೆ ನೆಲೆಸದು]. ಮುಕ್ತನಾಗದವನಿಗೆ[ಭಗವಂತನಲ್ಲಿ ಬಗೆ ನೆಡದವನಿಗೆ] ಎಲ್ಲಿಯ ಸುಖ ?
ಸುಖ ಬೇಕಿದ್ದರೆ ಶಾಂತಿ ಬೇಕು. ಮನಸ್ಸು ಪ್ರಸನ್ನವಾಗದೆ ವಿಕ್ಷಿಪ್ತವಾಗಿದ್ದರೆ ಅದು ಭಗವಂತನನ್ನು ಹೋಗಿ ಸೇರುವುದಿಲ್ಲ. ಯಾರ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದಿಲ್ಲವೋ ಅವನಿಗೆ ಅಪರೋಕ್ಷವಿಲ್ಲ. ಅಂಥವನ ಮನಸ್ಸು ತಿಳಿಯಾಗದು. ಇಂಥವರು ಏಕಾಗ್ರವಾಗಿ ಚಿಂತಿಸಲು ಸಾಧ್ಯವಿಲ್ಲ. ಏಕಾಗ್ರವಾಗಿ ಚಿಂತಿಸದ ಹೊರತು ಯಥಾರ್ಥ ಜ್ಞಾನವಿಲ್ಲ. ಇಂಥವರಿಗೆ ಧ್ಯಾನ(Meditation) ಅಸಾಧ್ಯ. ಇಲ್ಲಿ ಧ್ಯಾನ ಅಂದರೆ ಏಕಾಗ್ರವಾಗಿ ಒಂದು ವಸ್ತುವಿನ ಬಗ್ಗೆ ಚಿಂತಿಸುವುದು. ಯಾವುದೇ ಒಂದು ವಸ್ತುವಿನ ಬಗ್ಗೆ ನಮಗೆ ಖಚಿತವಾದ ಅರಿವು ಬರಬೇಕಾದರೆ ನಮಗೆ ಏಕಾಗ್ರತೆ ಬೇಕು. ಅದನ್ನೇ ಇಲ್ಲಿ 'ಭಾವನಾ' ಎಂದಿದ್ದಾರೆ. ಮನಸ್ಸು ಏಕಾಗ್ರವಾದರೆ ಮಾತ್ರ ಆಳವಾದ ಚಿಂತನೆ ಸಾಧ್ಯ. ಯಾವುದನ್ನೂ ಆಳವಾಗಿ ಚಿಂತಿಸದ ಹೊರತು ಅದರ ಬಗ್ಗೆ, ಅದರ ವೈಶಾಲ್ಯತೆ ಬಗ್ಗೆ ಅರಿವು ಮೂಡದು. ಹೀಗೆ ಆಳಕ್ಕಿಳಿದು ಚಿಂತನೆ ಮಾಡದವನಿಗೆ ಶಾಂತಿ ಇಲ್ಲ. ಇಲ್ಲಿ ಶಾಂತಿ ಎನ್ನುವುದಕ್ಕೆ ಎರಡು ಅರ್ಥವಿದೆ. ಮೇಲ್ನೋಟಕ್ಕೆ ಶಾಂತಿ ಅಂದರೆ ಆನಂದಮಯವಾದ ಸ್ಥಿತಿ. ಶಾಸ್ತ್ರಕಾರರ ಪ್ರಕಾರ ಜೀವನಿಗೆ ಪೂರ್ಣ ಆನಂದದ ಸ್ಥಿತಿ ಅಂದರೆ ಮೋಕ್ಷ. ಆದ್ದರಿಂದ ಯಾರು ಧ್ಯಾನದಿಂದ ಭಗವಂತನನ್ನು ಕಂಡುಕೊಳ್ಳುವುದಿಲ್ಲವೋ ಅವನಿಗೆ ಮೋಕ್ಷವಿಲ್ಲ. ಮೋಕ್ಷದ ದಾರಿಯಲ್ಲಿ ಸಾಗದವನಿಗೆ ಸುಖವಿಲ್ಲ. ಇನ್ನು ಶಾಂತಿ ಎಂದರೆ ಆನಂದದ ತುತ್ತತುದಿ ಅಥವಾ ಪರಾಕಾಷ್ಠೆ. ಮನಸ್ಸು ಭಗವಂತನಲ್ಲಿ ನೆಲೆಗೊಂಡಾಗ ನಮಗೆ ಶಾಂತಿ.
ಹೀಗೆ ಇಂದ್ರಿಯಗಳನ್ನು ಸಂಯಮ ಮಾಡಿಕೊಂಡು, ಮನಸ್ಸನ್ನು ಏಕಾಗ್ರಗೊಳಿಸಿ, ಅದರಲ್ಲಿ ಆಳವಾಗಿ ಚಿಂತನೆ ಮಾಡಿ, ಸತ್ಯವನ್ನು ಕಂಡುಕೊಳ್ಳಬೇಕು. ನಾವು ಹೊರ ಪ್ರಪಂಚವನ್ನು ಬಿಟ್ಟು ಒಳ ಪ್ರಪಂಚದಲ್ಲಿ ಆಳವಾಗಿ ಮುಳುಗದ ಹೊರತು ಸತ್ಯದ ಸಾಕ್ಷಾತ್ಕಾರವಾಗದು. ಸತ್ಯದ ಸಾಕ್ಷಾತ್ಕಾರವಾಗದ ಹೊರತು ಸುಖವಿಲ್ಲ.
·  ಶ್ಲೋಕ - 67
ಇಂದ್ರಿಯಾಣಾಂ ಹಿ ಚರತಾಂ ಯನ್ಮನೋSನುವಿಧೀಯತೇ ।
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ ॥೬೭॥
ಇಂದ್ರಿಯಾಣಾಂ ಹಿ ಚರತಾಮ್ ಯತ್ ಮನಃ ಅನುವಿಧೀಯತೇ ತತ್ ಅಸ್ಯ ಹರತಿ ಪ್ರಜ್ಞಾಮ್ ವಾಯುಃ ನಾವಮ್ ಇವ ಅಂಭಸಿ--ವಿಷಯಗಳತ್ತ ಹರಿಯುವ ಇಂದ್ರಿಯಗಳ ಬೆನ್ನು ಹತ್ತುವಂತೆ ಮನಸ್ಸು ರೂಪುಗೊಂಡಿದೆಯಲ್ಲವೇ? ಆದ್ದರಿಂದ, ಅದು ಸಾಧಕನ ಅರಿವನ್ನು ದಾರಿಗೆಡಿಸಿಬಿಡುತ್ತದೆ-ಕಡಲಲ್ಲಿ ಬಿರುಗಾಳಿ ಹಡಗನ್ನು ಹೇಗೆ ದಾರಿ ತಪ್ಪಿಸುತ್ತದೋ ಹಾಗೆ.
ಇಷ್ಟೆಲ್ಲಾ ಗಹನವಾದ ವಿಚಾರ ಇದ್ದರೂ ಕೂಡಾ, ಮನಸ್ಸು ಏಕೆ ಅಂತರಂಗದ ಆಳಕ್ಕಿಳಿಯುವುದಿಲ್ಲ? ಅದು ಸಹಜ ಎನ್ನುತ್ತಾನೆ ಕೃಷ್ಣ. ಏಕೆಂದರೆ ಮನಸ್ಸಿಗೆ ಒಂದು ಸ್ವಭಾವವಿದೆ. ಯಾವುದನ್ನು ನಾವು ಅದಕ್ಕೆ ಅಭ್ಯಾಸ ಮಾಡಿದೆವೋ ಅದನ್ನೇ ಮೆಚ್ಚಿಕೊಳ್ಳುವುದು. ಹೊಸದನ್ನು ಅದು ನಿರಾಕರಿಸುತ್ತದೆ ಹಾಗು ಪರಿಚಿತವಾದುದನ್ನು ಮಾತ್ರ ಅದು ಇಷ್ಟಪಡುತ್ತದೆ. ಮನಸ್ಸಿಗೆ ಒಳಪ್ರಪಂಚ ಅಪರಿಚಿತ. ಆದ್ದರಿಂದ ಅದು ಒಳಪ್ರಪಂಚದತ್ತ ಹರಿಯುವುದಿಲ್ಲ. ಮನಸ್ಸಿಗೆ ಗಟ್ಟಿಯಾಗಿ ಹೇಳಿದರೆ ಅದು ಅಂತರ್ಮುಖವಾಗುತ್ತದೆ; ಆದರೆ ಆ ಪ್ರಯತ್ನ ನಾವು ಮಾಡುವುದಿಲ್ಲ! ಈ ಅಪಾಯವನ್ನು ಈ ಶ್ಲೋಕದಲ್ಲಿ ಕೃಷ್ಣ ವಿವರಿಸಿದ್ದಾನೆ.
ಮನಸ್ಸಿಗೆ ನಾವು ಬಾಲ್ಯದಿಂದ ಎನನ್ನು ಅಭ್ಯಾಸ ಮಾಡಿಸಿದ್ದೆವೋ ಅದರ ಹಿಂದೆ ಅದು ಹೋಗುತ್ತದೆ. ಉದಾಹರಣೆಗೆ ಬಾಲ್ಯದಿಂದಲೂ ಶಾಖಾಹಾರಿಯಾಗಿದ್ದವನಿಗೆ ಮಾಂಸವನ್ನು ಕಂಡಾಗ ಅಸಹ್ಯ ಅನಿಸುತ್ತದೆ. ಆದರೆ ಅದೇ ಮಾಂಸ ಮಾರುವವ ಮಾಂಸದ ಮಧ್ಯದಲ್ಲೇ ಇದ್ದು ಅದನ್ನೇ ಬೇಯಿಸಿ ತಿಂದರೂ ಅವನಿಗೆ ಹೇಸಿಗೆ ಅನಿಸುವುದಿಲ್ಲ. ಇದೆಲ್ಲವೂ ಮನಸ್ಸಿಗೆ ನಾವು ಕೊಡುವ ತರಬೇತಿ. ಮನಸ್ಸು ನಿರಂತರ ಯಾವುದನ್ನು ನೋಡುತ್ತದೋ ಅದನ್ನೇ ರೂಢಿ ಮಾಡಿಕೊಳ್ಳುತ್ತದೆ. ಆ ರೀತಿ ಮನಸ್ಸು ಭಗವಂತನಿಂದ ನಿರ್ಮಿಸಲ್ಪಟ್ಟಿದೆ. ಇಂದ್ರಿಯಗಳು ನಿತ್ಯ ಯಾವುದನ್ನು ನೋಡುತ್ತವೋ ಅದನ್ನು ಮೆಚ್ಚುವಂತಹ ಸ್ವಭಾವವನ್ನು ಭಗವಂತ ಮನಸ್ಸಿಗೆ ಕೊಟ್ಟಿದ್ದಾನೆ. ಇಂತಹ ಮನಸ್ಸಿನ ಸ್ವಭಾವವನ್ನು ಅರಿಯದಿದ್ದರೆ ಅಪಾಯಕಾರಿ. ಅದು ನಮ್ಮ ಪ್ರಜ್ಞೆಯನ್ನು ಅಪಹಾರ ಮಾಡಿಬಿಡುತ್ತದೆ. ಇದನ್ನು ಒಂದು ಒಳ್ಳೆಯ ದೃಷ್ಟಾಂತದ ಮುಖೇನ ಕೃಷ್ಣ ವಿವರಿಸಿದ್ದಾನೆ:
ನಾವು ಹಾಯಿ ದೋಣಿಯಲ್ಲಿ ಪ್ರಯಾಣಿಸುವ ನಾವಿಕನಂತೆ. ನಮ್ಮ ಮನಸ್ಸು ಆ ದೋಣಿಗೆ ಕಟ್ಟಿದ ಬಟ್ಟೆ. ಒಂದು ವೇಳೆ ನಮಗೆ ಈ ಬಟ್ಟೆಯನ್ನು ತಿರುಗಿಸಿ ನಮಗೆ ಬೇಕಾದಂತೆ ದೋಣಿಯನ್ನು ನಿಯಂತ್ರಿಸುವ ಕಲೆ ಗೊತ್ತಿಲ್ಲದಿದ್ದರೆ, ಗಾಳಿ ಬೀಸಿದತ್ತ ನಾವು ಹೋಗುತ್ತೇವೆ ಹೊರತು ನಮಗೆ ತಲುಪಬೇಕಾದಲ್ಲಿಗಲ್ಲ. ಈ ದೃಷ್ಟಾಂತ ತುಂಬಾ ಔಚಿತ್ಯಪೂರ್ಣವಾಗಿದೆ. ಒಂದು ವೇಳೆ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವ ಕಲೆಯನ್ನು ಕಲಿಯದಿದ್ದರೆ ಬದುಕು ಛಿದ್ರ-ವಿಛಿದ್ರವಾಗುತ್ತದೆ. ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.
·  ಶ್ಲೋಕ - 68
ತಸ್ಮಾದ್ ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೬೮॥
ತಸ್ಮಾತ್ ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ ಇಂದ್ರಿಯಾಣಿ ಇಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ-ಆದ್ದರಿಂದ ಓ ಮಹಾವೀರ, ಯಾರ ಇಂದ್ರಿಯಗಳು ಎಲ್ಲ ಬಗೆಯಿಂದಲು ಇಂದ್ರಿಯ ವಿಷಯಗಳಿಂದ ಪಾರಾಗಿ ಹಿಡಿತದಲ್ಲಿರುವವೋ ಅವನ ಅರಿವು ಗಟ್ಟಿಗೊಡಿರುತ್ತದೆ.
ಕೃಷ್ಣ ಹೇಳುತ್ತಾನೆ, ಮನಸ್ಸು ಯಾವಾಗಲೂ ಹೊರಗಿನ ಇಂದ್ರಿಯಗಳು ಎನನ್ನು ಅಭ್ಯಾಸ ಮಾಡಿದವೋ ಅದರ ಹಿಂದೆಯೇ ಹೋಗುತ್ತದೆ. ಇಂದ್ರಿಯಗಳನ್ನು ನಿಯಂತ್ರಿಸದೆ ಮನಸ್ಸನ್ನು ನಿಯಂತ್ರಿಸುವುದು ಕಷ್ಟ. ಆದ್ದರಿಂದ ಮೊದಲು ನಾವು ಇಂದ್ರಿಯಗಳಿಗೆ ತರಬೇತಿ ಕೊಡಬೇಕು. ಇದಕ್ಕಾಗಿ ಚಿಕ್ಕ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಅತಿ ಮುಖ್ಯ. ಚಿಕ್ಕಂದಿನಿಂದಲೂ ಪಾಲಿಸಿಕೊಂಡು ಬಂದ ಅಭ್ಯಾಸವನ್ನು ಮುರಿಯುವುದು ಅಸಾಧ್ಯ. ಈ ಕಾರಣಕ್ಕಾಗಿ ಹಿಂದೆ ಶಾಲೆಯಲ್ಲಿ ಹಾಗು ಮನೆಯಲ್ಲಿ ಅನೇಕ ಸಂಸ್ಕಾರಗಳನ್ನು ರೂಢಿ ಮಾಡಿಕೊಂಡು ಮಕ್ಕಳಿಗೆ ತರಬೇತಿ ಕೊಡುತ್ತಿದ್ದರು. ಆದರೆ ಇಂದು ಶಾಲೆಯಲ್ಲಾಗಲಿ, ಮನೆಯಲ್ಲಾಗಲೀ ಇಂತಹ ಮಾರ್ಗದರ್ಶನ ಮಕ್ಕಳಿಗೆ ಸಿಗದೇ, ಇಂದಿನ ಯುವ ಪೀಳಿಗೆ ಬಿರುಗಾಳಿಗೆ ಸಿಕ್ಕ ದೋಣಿಯಂತಾಗಿದೆ.
ಇಂದ್ರಿಯ ನಿಗ್ರಹ ಮಾಡಲು ಪೂರಕವಾದ ಸಂಸ್ಕಾರ ಬಾಲ್ಯದಿಂದ ಬಂದರೆ ಇಂದ್ರಿಯಗಳು ಮನಸ್ಸನ್ನು ದಾರಿ ತಪ್ಪಿಸುವ ಪರಿಸ್ಥಿತಿ ಬಂದೊದಗುವುದಿಲ್ಲ. ಇದರಿಂದ ಮನಸ್ಸು ಗಟ್ಟಿಯಾಗುತ್ತದೆ. ಏಕಾಗ್ರತೆ ಸಾಧ್ಯವಾಗುತ್ತದೆ. ಏಕಾಗ್ರತೆ ಬಂದಾಗ ಅರಿವು ಗಟ್ಟಿಗೊಳ್ಳುತ್ತದೆ. ಮನಸ್ಸನ್ನು ನಿಗ್ರಹ ಮಾಡುವುದು ಹೇಗೆ, ನಿಗ್ರಹ ಮಾಡಿದಂತಹ ಮನಸ್ಸು ಯಾವ ರೀತಿ ವರ್ತಿಸುತ್ತದೆ, ಅಂತಹ ಮನಃಸ್ಥಿತಿಯವರು ಹೇಗೆ ಜ್ಞಾನಿಗಳಾಗಲು ಸಾಧ್ಯ- ಅನ್ನುವ ಒಂದು ವಿಸ್ತಾರವಾದ ಮನೋವಿಶ್ಲೇಷಣೆಯನ್ನು ಕೃಷ್ಣ ಮಾಡಿದ. ಅರ್ಜುನ ಹಾಕಿದ ಮೂಲ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ. ಒಬ್ಬ ಸ್ಥಿತ ಪ್ರಜ್ಞ ಹೇಗಿರುತ್ತಾನೆ, ಆತನ ನಡೆ ನುಡಿ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಮಹತ್ತರವಾದ ಉತ್ತರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.
·  ಶ್ಲೋಕ - 69
ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ।
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ ॥೬೯॥
ಯಾ ನಿಶಾ ಸರ್ವ ಭೂತಾನಾಂ ತಸ್ಯಾಮ್ ಜಾಗರ್ತಿ ಸಂಯಮೀ ಯಸ್ಯಾಮ್ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತಃ ಮುನೇಃ -- ಯಾವುದು ಎಲ್ಲಾ ಜೀವಿಗಳಿಗೆ ಕತ್ತಲ ಕಗ್ಗಂಟೋ ಅಂಥಲ್ಲಿ ಇಂದ್ರಿಯಗಳನ್ನು ಗೆದ್ದ ಯೋಗಿ ಎಚ್ಚರವಿರುತ್ತಾನೆ. ಎಲ್ಲಾ ಜೀವಿಗಳು ಏಲ್ಲಿ ಎಚ್ಚರವಿರುವರೋ-ಅದು ಬಲ್ಲ ಚಿಂತಕನಿಗೆ ನಟ್ಟಿರುಳು.
ಸಾಮಾನ್ಯ ಮನುಷ್ಯನಿಗೆ ಯಾವುದು ಹಗಲೋ ಅದು ಸತ್ಯದ ಸಾಕ್ಷಾತ್ಕಾರವಾದವನಿಗೆ ರಾತ್ರಿ. ಜಗತ್ತಿನ ಎಲ್ಲಾ ಜೀವ ಜಾತಕ್ಕೆ ಯಾವುದು ರಾತ್ರಿಯೋ ಅದು ಸಾಧಕನಿಗೆ ಹಗಲು. ಅಂದರೆ ನಿಜವಾದ ಸಾಧಕ ನಮ್ಮ ರಾತ್ರಿಯಲ್ಲಿ ಎಚ್ಚರವಿರುತ್ತಾನೆ, ಹಾಗು ಲೌಕಿಕ ವ್ಯವಹಾರವೆಂಬ ನಮ್ಮ ಹಗಲು ಅವನಿಗೆ ರಾತ್ರಿ. ಲೌಕಿಕ ಪ್ರಪಂಚದಲ್ಲಿ ಅವನಿಗೆ ಪ್ರವೃತ್ತಿಯೇ ಇರುವುದಿಲ್ಲ. ಆತ ನಮಗೆ ಒಬ್ಬ ಮುಗ್ಧನಂತೆ, ಮಗುವಂತೆ ಕಾಣಬಹುದು. ಆತನ ಜ್ಞಾನದ ಬಗ್ಗೆ ಅರಿವಿಲ್ಲದವನಿಗೆ ಆತನೊಬ್ಬ ಹುಚ್ಚನಂತೆ ಕಂಡರೆ ಆಶ್ಚರ್ಯವಿಲ್ಲ! ಏಕೆಂದರೆ ಆತ ಲೌಕಿಕ ಪ್ರಪಂಚದೊಂದಿಗಿದ್ದು, ಅದರೊಂದಿಗೆ ಬೆರೆಯದೆ ತನ್ನ ಅಂತರಂಗದ ಆನಂದವನ್ನು ಸದಾ ಸವಿಯುತ್ತಿರುತ್ತಾನೆ. ಒಬ್ಬ ಜ್ಞಾನಿ ಭಗವಂತನನ್ನು ಕಂಡಾಗ ಆತನಿಗೆ ಉಳಿದಿದ್ದೆಲ್ಲಾ ಕತ್ತಲು. ಅದ್ಭುತವಾದ ಸಂಗತಿಯನ್ನು ಕಂಡ ವಿಸ್ಮಯದಲ್ಲಿ ತದೇಕಚಿತ್ತನಾಗಿ ಅದನ್ನೇ ನೋಡುತ್ತಿರುತ್ತಾನೆ. ಭಗವಂತನನ್ನು ಕಾಣಬೇಕಾದರೆ ನಾವು ಸದಾ ಶಾಸ್ತ್ರದ ಶ್ರವಣ ಮಾಡಬೇಕು. ಕೇವಲ ಶ್ರವಣ ಮಾಡಿದರೆ ಸಾಲದು, ಶ್ರವಣದ ನಂತರ ಮನನ-ನಿದಿಧ್ಯಾಸನ ಅತಿ ಮುಖ್ಯ. ಇದನ್ನೇ "ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿದಿಧ್ಯಾಸಿತವ್ಯಃ ಚ" ಎಂದಿದ್ದಾರೆ. ಮನನ ಶೀಲನಾದವ 'ಮುನಿ' ; ಅವನೇ 'ಪಶ್ಯ' ಅಂದರೆ ಭಗವಂತನನ್ನು ಕಾಣಬಲ್ಲವ ಅಥವಾ ಕಂಡವ.
ಇಂದಿನ ಸಮಾಜದಲ್ಲಿ ಸತ್ಯದ ಸಾಕ್ಷಾತ್ಕಾರನಾದವನನ್ನು ಗುರುತಿಸುವುದು ಬಹಳ ಕಷ್ಟ. ಸಿದ್ಧ ಪುರುಷರೆಲ್ಲಾ ಸತ್ಯವನ್ನು ಕಂಡವರಲ್ಲ! ಪವಾಡ ಮಾಡುವವರು ಭಗವಂತನನ್ನು ಕಂಡವರು ಎಂದು ಹೇಳಲಾಗುವುದಿಲ್ಲ. ಏಕೆಂದರೆ ನಿಜವಾದ ಸಾಧಕ ಸಾಮಾನ್ಯವಾಗಿ ಪವಾಡ ಮಾಡುವುದಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಆತ ಪ್ರಪಂಚದ ಒಳಿತಿಗಾಗಿ ಪವಾಡ ಮಾಡಬಹುದು. ನಿರಂತರ ಸತ್ಯದ ಬಗ್ಗೆ ಅನ್ವೇಷಣೆ ಮಾಡಿ, ಸಿದ್ಧಿ ಗಳಿಸಿದರೆ ಮಾತ್ರ ಸ್ಥಿತಪ್ರಜ್ಞರಾಗಲು ಸಾಧ್ಯ.
·  ಶ್ಲೋಕ - 70
ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ ।
ತದ್ವತ್ ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ ॥೭೦॥
ಆಪೂರ್ಯಮಾಣಮ್ ಅಚಲಪ್ರತಿಷ್ಠಮ್ ಸಮುದ್ರಮ್ ಅಪಃ ಪ್ರವಿಶಂತಿ ಯದ್ವತ್ ತದ್ವತ್ ಕಾಮಾಃ ಯಮ್ ಪ್ರವಿಶಂತಿ ಸರ್ವೇ ಸಃ ಶಾಂತಿಮ್ ಅಪ್ನೋತಿ ನ ಕಾಮಕಾಮೀ--ತುಂಬಿದರೂ ತುಳುಕದೆ ನಿಂತ ಕಡಲನ್ನು ಎಲ್ಲ ನೀರುಗಳು ಬಂದು ಸೇರುವಂತೆ, ಯಾರನ್ನು ಎಲ್ಲ ವಿಷಯಗಳು ತುಂಬಿಯೂ ತುಳುಕದಂತೆ ಬಂದು ಸೇರುವವೋ ಅವನು ಮುಕ್ತಿ ಪಡೆಯುತ್ತಾನೆ. ಹೊರತು ಕೆಟ್ಟ ಬಯಕೆಗಳ ಬೆನ್ನು ಹತ್ತಿದವನಲ್ಲ.
ಭಗವಂತನನ್ನು ಕಂಡವನು, ಸತ್ಯದ ಸಾಕ್ಷಾತ್ಕಾರವಾದವನು. ಭಗವಂತನನ್ನು ಕಾಣುವ ಸರಿ ದಾರಿಯಲ್ಲಿ ನಡೆಯುವವನು ಹೇಗಿರುತ್ತಾನೆ ಎನ್ನುವ ವಿಷಯದ ಮೇಲೆ ಕೃಷ್ಣ ಇಲ್ಲಿ ಇನ್ನಷ್ಟು ವಿವರಣೆಯನ್ನು ಕೊಟ್ಟಿದ್ದಾನೆ: ಆತನ ಮನಸ್ಸು ಸದಾ ಆನಂದವಾಗಿರುತ್ತದೆ. ಅದು ಭಗವಂತನಲ್ಲಿ ನೆಲೆಗೊಂಡಿರುತ್ತದೆ. ಆತ ಕಿರು ತೊರೆಗಳಂತೆ ಇರದೆ ಕಡಲಿನಂತಿರುತ್ತಾನೆ. ಸಮುದ್ರಕ್ಕೆ ಎಲ್ಲಾ ನದಿಗಳು ಬಂದು ಸೇರಿದರೂ ಅದು ಉಕ್ಕೇರುವುದಿಲ್ಲ. ಕಡಲು ಮಳೆ ಬಂದಾಗ ಉಕ್ಕಿ ಹರಿದು- ಬೇಸಿಗೆ ಬಂದಾಗ ಬತ್ತಿ ಹೋಗುವುದಿಲ್ಲ. ಅದೇ ರೀತಿ ಸಾಧಕ ಪ್ರಪಂಚದ ಎಲ್ಲಾ ಭೋಗಗಳು ಅವನನ್ನು ಪ್ರವೇಶಿಸಿದರೂ ಕೂಡಾ, ವಿಚಲಿತನಾಗದೆ ಸುಖ-ದುಃಖವನ್ನು ಮೀರಿ ನಿಲ್ಲುತ್ತಾನೆ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಆತ ಭಗವಂತನಲ್ಲಿ ನಿಷ್ಠೆಯನ್ನಿಟ್ಟು ಮೋಕ್ಷವನ್ನು ಪಡೆಯುತ್ತಾನೆ. ಆದರೆ ಬಯಕೆಗಳ ಬೆನ್ನು ಹತ್ತಿದವನು ಅದರಿಂದ ಈಚೆ ಬಾರದೆ ಎಂದೂ ನಿಜವಾದ ಸುಖ ಕಾಣಲಾರ.
·  ಶ್ಲೋಕ - 71
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಸ್ಪೃಹಃ ।
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ ॥೭೧॥
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾನ್ ಚರತಿ ನಿಸ್ಪೃಹಃ ನಿರ್ಮಮಃ ನಿರಹಂಕಾರಃ ಸಃ ಶಾಂತಿಮ್ ಅಧಿಗಚ್ಛತಿ--ಯಾರು ಎಲ್ಲ ವಿಷಯಗಳನ್ನು ಮನಸೋಲದೆ, ಕೆಟ್ಟ ಆಸೆಗೆ ಬಲಿ ಬೀಳದೆ, ನಾನು ನನ್ನದು ಎಂಬ ಹಮ್ಮು ತೊರೆದು ಅನುಭವಿಸುತ್ತಾನೆ-ಅವನು ಮುಕ್ತಿ ಪಡೆಯುತ್ತಾನೆ.
ಯಾರು ಭೋಗದ ಬಯಕೆಯನ್ನು ಬಿಟ್ಟು ಬಂದದ್ದನ್ನು ಸಂತೋಷವಾಗಿ ಅನುಭವಿಸುತ್ತಾರೆ, ಅವನು ನಿಜವಾದ ಸಾಧಕನೆನೆಸುತ್ತಾನೆ. ಸೀಮಿತವಾದ ಆಹಾರ, ನಿದ್ದೆ ಮತ್ತು ಮೈಥುನವನ್ನು ಅಭ್ಯಾಸ ಮಾಡಿಕೊಂಡು, ನಿರ್ಭಯವಾಗಿ ಸಂಪೂರ್ಣ ಭಗವಂತನ ರಕ್ಷಾ ಕವಚದ ಜ್ಞಾನದಲ್ಲಿದ್ದು, ಆಸೆ ಆಕಾಂಕ್ಷೆಗಳಿಗೆ ಬಲಿ ಬೀಳದೆ, ಯಾವುದೇ ಏರು-ಪೇರುಗಳಿಗೆ ವಿಚಲಿತನಾಗದೆ ಬದುಕುತ್ತಾನೆ. ಅವನು ನಿಜವಾದ 'ಮನುಷ್ಯ'ನೆನಿಸುತ್ತಾನೆ. ಇಂತವನಿಗೆ ನಾನು-ನನ್ನದು ಎನ್ನುವ ಅಹಮ್ ಎಂದೂ ಇರುವುದಿಲ್ಲ ಹಾಗು ಆತ ಮುಕ್ತಿಯನ್ನು ಪಡೆಯುತ್ತಾನೆ.



ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ   
ಸ್ಥಿತ್ವಾSಸ್ಯಾಮಂತಕಾಲೇSಪಿ ಬ್ರಹ್ಮ ನಿರ್ಬಾಣಮೃಚ್ಛತಿ ॥೭೨॥

ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನ ಏನಾಮ್  ಪ್ರಾಪ್ಯ ವಿಮುಹ್ಯತಿ
ಸ್ಥಿತ್ವಾ ಅಸ್ಯಾಮ್ ಅಂತಕಾಲೇ ಅಪಿ ಬ್ರಹ್ಮನಿರ್ಬಾಣಮ್  ಋಚ್ಛತಿ- - ಪಾರ್ಥ, ಇದು ಬ್ರಹ್ಮ ಜ್ಞಾನಿಯ ಗುರುತು. ಇದನ್ನು ಪಡೆದು ಮತ್ತೆ ಮೈಮರೆಯುವುದಿಲ್ಲ. ಕೊನೆಯ ಕಾಲದಲ್ಲೂ ಈ ನೆಲೆಯಲ್ಲಿ ನಿಂತವನು ಕಾಯದಿಂದಲು ಸಾಯದ ಪರತತ್ವವನ್ನು ಸೇರುತ್ತಾನೆ.
ಭಗವಂತನಲ್ಲಿ ನೆಲೆಗೊಳ್ಳತಕ್ಕಂತವನ ಲಕ್ಷಣ ಬ್ರಾಹ್ಮೀ ಸ್ಥಿತಿ. ಈವರೆಗೆ ಹೇಳಿರುವುದು ಒಬ್ಬ ಬ್ರಹ್ಮ ಜ್ಞಾನಿಯ ಲಕ್ಷಣ. ಬ್ರಹ್ಮನಲ್ಲಿ ಸ್ಥಿತನಾದ ಬ್ರಹ್ಮ ಪ್ರಜ್ಞೆ ಜಾಗೃತನಾದವನ ಲಕ್ಷಣ. ಇಂತಹ ಬ್ರಹ್ಮಜ್ಞಾನಿಯನ್ನು ಆತನ ಬಾಹ್ಯ ಕ್ರಿಯೆಯಿಂದಾಗಲಿ, ವೇಷ ಭೂಷಣದಿಂದಾಗಲಿ ಗುರುತಿಸಲಾಗದು. ಆತನ ಮಾನಸಿಕ ಸ್ಥಿತಿ ಆತನ ಸ್ಥಾನವನ್ನು ತಿಳಿಸುತ್ತದೆ.
ತನ್ನ ಸಾವಿನ ಕೊನೆ ಕ್ಷಣದಲ್ಲಿ ಕೂಡಾ ಭಗವಂತನ ಪ್ರಜ್ಞೆ ಜಾಗೃತವಾಗಿದ್ದರೆ ಆತ ನೇರ ಮರು ಹುಟ್ಟಿಲ್ಲದ  ಮೋಕ್ಷವನ್ನು ಸೇರುತ್ತಾನೆ.
ಇತಿ ದ್ವಿತೀಯೋSಧ್ಯಾಯಃ

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.