ಭಗವದ್ಗೀತೆ ಅಧ್ಯಾಯ-6 (ಶ್ಲೋಕ-23 ರಿಂದ 47)

ಭಗವದ್ಗೀತೆ ಅಧ್ಯಾಯ-6 (ಶ್ಲೋಕ-23 ರಿಂದ 47)
  • ಶ್ಲೋಕ - 23
ತಂ ವಿದ್ಯಾದ್ ದುಃಖಸಂಯೋಗವಿಯೋಗಂ ಯೋಗಸಂಜ್ಞಿತಮ್ ।
ಸ ನಿಶ್ಚಯೇನ ಯೋಕ್ತವ್ಯೋ ಯೋಗೋನಿರ್ವಿಣ್ಣಚೇತಸಾ ೨೩॥
ತಮ್ ವಿದ್ಯಾತ್ ದುಃಖಸಂಯೋಗ ವಿಯೋಗಮ್ ಯೋಗಸಂಜ್ಞಿತಮ್ ।
ಸಃ ನಿಶ್ಚಯೇನ ಯೋಕ್ತವ್ಯಃ ಯೋಗಃ ಅನಿರ್ವಿಣ್ಣಚೇತಸಾ ||
ಧ್ಯಾನ ಸಾಧನೆಯಿಂದ ಬಿಗಿಗೊಂಡ ಒಳಬಗೆ ಈ ಸ್ಥಿತಿಯಲ್ಲಿ ಹೊರಗಣ ವಿಷಯಗಳತ್ತ ಹರಿಯದು. ಇಲ್ಲಿ ತನ್ನೊಳಗೆಯೆ ಬಗೆಯಿಂದ[ಭಗವಂತನ ಹಸಾದದಿಂದ] ಭಗವಂತನನ್ನು ಕಾಣುತ್ತ ಸಂತಸಗೊಳ್ಳುತ್ತಾನೆ.ಇಲ್ಲಿ ಇಂದ್ರಿಯಗಳಿಂದ ದೊರಕದ, ಒಳಬಗೆಯಲ್ಲಿ ಅರಳುವ ಅತಿಶಯವಾದ ಆನಂದವನ್ನು ಅನುಭವಿಸುತ್ತಾನೆ. ಈ ಸ್ಥಿತಿಯಲ್ಲಿ ನಿಂತವನು ಎಂದೂ ಭಗವಂತನಿಂದ ಕದಲುವುದಿಲ್ಲ. ಇದನ್ನು ಪಡೆದ ಮೇಲೆ ಇನ್ನಾವ ಗಳಿಕೆಯೂ ಇದಕ್ಕಿಂತ ಮಿಗಿಲೆನಿಸುವುದಿಲ್ಲ. ಇಲ್ಲಿ ನಿಂತವನು ಎಂಥ ಹಿರಿಯ ದುಗುಡದಿಂದಲೂ ಕಂಗೆಡುವುದಿಲ್ಲ. ಇದೇ ಎಲ್ಲ ದುಗುಡಗಳಿಂದ ಬಿಡುಗಡೆಗೊಳಿಸುವ ಯೋಗವೆಂದರಿಯಬೇಕು. ವಿಷಯಗಳಿಂದ ಬೇಸತ್ತು ಬೆನ್ನು ತಿರುಗಿಸಿದವನು ಅವಶ್ಯವಾಗಿ ಈ ಯೋಗದಲ್ಲಿ ಪಳಗಬೇಕು.
ಹೊರಗಿನ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡು ಮನಸ್ಸು ಭಗವಂತನಲ್ಲಿ ನೆಲೆಸಿದಾಗ ಏನಾಗುತ್ತದೆ ಎಂದರೆ- ಕೃಷ್ಣ ಹೇಳುತ್ತಾನೆ: ಉಪರಮತೇ ಚಿತ್ತಮ್ಅಂದರೆ ಉತ್ಕೃಷ್ಟವಾದ ಆ ಆನಂದದಲ್ಲೇ ಮನಸ್ಸು ನಿಂತುಬಿಡುತ್ತದೆ. ಆ ಆನಂದದ ಸೆಲೆಯಿಂದ ಬೇರೆಯಾಗುವುದು ಬೇಡ ಎನ್ನುವ ಭಾವನೆ ಬಂದುಬಿಡುತ್ತದೆ. ಸಾಮಾನ್ಯವಾಗಿ ತಕ್ಷಣ ಈ ಸ್ಥಿತಿಗೆ ಮನಸ್ಸು ಹೋಗುವುದಿಲ್ಲ. ಅದಕ್ಕೆ ಬಹಳ ಪ್ರಯತ್ನ ಬೇಕು. ಪ್ರಯತ್ನ ಒಂದು ಜನ್ಮದಲ್ಲ ಅನೇಕ ಜನ್ಮದ ಪ್ರಯತ್ನವಿಲ್ಲದೆ ಒಮ್ಮೆಗೆ ಈ ಸ್ಥಿತಿಯನ್ನು ತಲುಪುವುದು ಅಸಾಧ್ಯ. ನಿರಂತರ ಯೋಗಾಭ್ಯಾಸದ ಸಾಧನೆಯಿಂದ ಚಿತ್ತ ವೃತ್ತಿಯನ್ನು ನಿರೋಧ ಮಾಡಬೇಕು. ಅಂದರೆ ನಮ್ಮ ಮನಸ್ಸನ್ನು ತಡೆಹಿಡಿಯಬೇಕು. ಅದು ಎಲ್ಲಿಯೂ ಹರಿಯದಂತೆ ಒಡ್ಡುಹಾಕಿ ಅದು ಭಗವಂತನಲ್ಲೇ ನೆಲೆನಿಲ್ಲುವಂತೆ ಮಾಡಬೇಕು.
ನಮಗೆ ಆತ್ಮಸಾಕ್ಷಾತ್ಕಾರವಾದಾಗ ಎಂದೂ ಆಗದ ಅಪೂರ್ವ ಆನಂದವಾಗುತ್ತದೆ. ಇದು ಅತ್ಯಂತ ಶ್ರೇಷ್ಠವಾದ ಆನಂದದ ಅನುಭವ. ಭಗವಂತನ ಬಗ್ಗೆ ಭಕ್ತನ ಭಕ್ತಿ ಹಾಗು ಭಕ್ತನ ಮೇಲೆ ಭಗವಂತನ ವಾತ್ಸಲ್ಯ ಇವೆರಡೂ ಮೇಳವಿಸಿದಾಗನಿರ್ಭಯ’. ಒಳಗಣ್ಣಿನಿಂದ ಧ್ಯಾನದ ಸ್ಥಿತಿಯಲ್ಲಿ ಅಂತರ್ಯಾಮಿಯಾದ ಭಗವಂತನನ್ನು ಕಾಣುವುದು ಧ್ಯಾನದಲ್ಲಿ ಬರುವ ಅನುಭವ. ಇಲ್ಲಿ ನಮಗೆ ಕಾಣುವುದು ಮನಸ್ಸು ಕಡೆದ ಆ ಭಗವಂತನ ಭವ್ಯ ರೂಪ. ಇದು ಕೇವಲ ಭಗವಂತನ ಪ್ರತೀಕ. ನಾವು ಭಗವಂತನನ್ನು ನಿಜವಾಗಿ ಕಾಣಬೇಕಾದರೆ ಅವನು ನಮ್ಮನ್ನು ಪ್ರೀತಿಸಬೇಕು. ಭಗವದ್ ಅನುಗ್ರಹವಾದಾಗ ನಮ್ಮ ಸ್ವರೂಪ ಭಗವಂತನನ್ನು ಕಾಣುತ್ತದೆ. ಇದು ಬಹಳ ಉತ್ಕಟವಾದ ಸ್ಥಿತಿ. ಈ ಸ್ಥಿತಿಯಲ್ಲಿ ಮನಸ್ಸು ಸಂಪೂರ್ಣ ಸ್ತಬ್ಧವಾಗಿ ನೇರವಾಗಿ ಆತ್ಮಸ್ವರೂಪ ತನ್ನ ಆತ್ಮಸ್ವರೂಪದ ಕಣ್ಣಿನಿಂದ ಭಗವಂತನನ್ನು ಕಾಣುತ್ತದೆ. ಈ ಸ್ಥಿತಿ ಸಂಪೂರ್ಣ ತೃಪ್ತಿಯನ್ನು ಕೊಡಬಲ್ಲದು. ಇಂದ್ರಿಯಗಳಿಂದ ಸಿಗುವ ಆನಂದ ಸಾಪೇಕ್ಷ ಎನ್ನುವ ನಿಜ ಆ ಹಂತದಲ್ಲಿ ತಿಳಿಯುತ್ತದೆ. ಈ ಉತ್ಕಟವಾದ ಆನಂದವನ್ನು ಅನುಭವಿಸಿದ ಮೇಲೆ ಮತ್ತೆ ಮೇಲೇರಬೇಕು ಅಥವಾ ಕೆಳಗಿಳಿಯಬೇಕು ಎನ್ನುವ ಬಯಕೆ ಇಲ್ಲ. ಭಗವಂತನ ಪೂರ್ಣ ಅನುಭವ ಬಂದಾತ ಯಾವ ಪ್ರಾಪಂಚಿಕ ದುಃಖದಲ್ಲೂ ಎಂದೂ ವಿಚಲಿತನಾಗುವುದಿಲ್ಲ. ಇದು ಮಾನವ ಜೀವನದಲ್ಲಿ ಪಡೆಯಬಹುದಾದ ಅತೀ ಎತ್ತರದ ಸ್ಥಿತಿ. ನಾವು ನಿಜವಾದ ಆನಂದವನ್ನು ಕಾಣಬೇಕಾದರೆ ಈ ಉತ್ಕಟವಾದ ಸ್ಥಿತಿಯನ್ನು ತಲುಪಬೇಕು.
ಮೇಲೆ ಹೇಳಿದ ವಿಚಾರವನ್ನು ಕೇಳಿ ಕೆಲವರು ಭ್ರಮೆಗೊಳಗಾಗಿ ಒಮ್ಮೆಗೆ ಎಲ್ಲವನ್ನೂ ಬಿಟ್ಟು ಈ ಸ್ಥಿತಿಯನ್ನು ತಲುಪುವ ಸಾಹಸಕ್ಕೆ ಕೈ ಹಾಕುತ್ತಾರೆ. ಆದರೆ ಹಾಗೆ ಮಾಡಿದರೆ ಎಂದೂ ಯಶಸ್ಸು ಸಿಗದು. ಕೇವಲ ನಿರಂತರ ಸಾಧನೆಯಿಂದ ಮಾತ್ರ ಈ ಆನಂದವನ್ನು ಪಡೆಯಲು ಸಾಧ್ಯ. ಜೀವನದ ಸುಖವನ್ನು ಅನುಭವಿಸಿ, ಪ್ರಾಪಂಚಿಕ ಸುಖ ಸಾಕು ಎಂದು ಕಾಣಿಸಿದಾಗ ಅಧ್ಯಾತ್ಮದ ಆಳಕ್ಕಿಳಿಯುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಅಪಾಯ.
  • ಶ್ಲೋಕ - 24 & 25
ಸಂಕಲ್ಪಪ್ರಭವಾನ್ ಕಾಮಾಂಸ್ತ್ಯಕ್ತ್ವಾ ಸರ್ವಾನಶೇಷತಃ ।
ಮನಸೈವೇದ್ರಿಯಗ್ರಾಮಂ ವಿನಿಯಮ್ಯ ಸಮಂತತಃ ॥೨೪॥

ಶನೈಃ ಶನೈರುಪರಮೇದ್ ಬುದ್ಧ್ಯಾ ಧೃತಿಗೃಹೀತಯಾ ।
ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ ॥೨೫॥
ಸಂಕಲ್ಪ ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃ ।
ಮನಸಾ ಏವ ಇಂದ್ರಿಯ ಗ್ರಾಮಮ್ ವಿನಿಯಮ್ಯ ಸಮಂತತಃ ||
ಶನೈಃ ಶನೈಃ ಪರಮೇತ್ ಬುದ್ಧ್ಯಾ ಧೃತಿ ಗೃಹೀತಯಾ ।
ಆತ್ಮಸಂಸ್ಥಮ್ ಮನಃ ಕೃತ್ವಾ ನ ಕಿಂಚಿತ್ ಅಪಿ ಚಿಂತಯೇತ್ ಬಗೆಯಲ್ಲಿ ಮೂಡಿಬರುವ ಎಲ್ಲ ಬಯಕೆಗಳನ್ನೂ ಪೂರ್ತಿಯಾಗಿ ತೊರೆದುಬಿಡಬೇಕು; ಇಂದ್ರಿಯಗಳ ಗಡಣವನ್ನು ಎಲ್ಲೆಡೆಯಿಂದಲು ಮನೋಬಲದಿಂದಲೆ ಹಿಡಿತದಲ್ಲಿಡಬೇಕು; ಅಳುಕದ ವಿವೇಕ ಪ್ರಜ್ಞೆಯಿಂದ ಮೆಲಮೆಲನೆ ಬಗೆಯನ್ನು ವಿಷಯಗಳಿಂದ ಹೊರಳಿಸಬೇಕು; ಭಗವಂತನಲ್ಲಿರಿಸಬೇಕು. ಇರಿಸಿ ಮತ್ತೇನನ್ನೂ ಚಿಂತಿಸಬಾರದು.
ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವ ವಿಧಾನವನ್ನು ಮತ್ತೆ ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ:ಸಂಕಲ್ಪ ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನ್ ಅಶೇಷತಃಎಂದು. ಇದರ ಹಿನ್ನೆಲೆಯನ್ನು ಹಿಂದೆ ನಾವು ನೋಡಿದ್ದೇವೆ. ನಮ್ಮ ಎಲ್ಲ ಸಮಸ್ಯೆಗಳ ಮೂಲ ನಮ್ಮ ಸಂಕಲ್ಪಗಳು. ಸಂಕಲ್ಪಗಳು ಎಂದರೆ ಮನಸ್ಸಿನಲ್ಲಿ ಏನೇನು ಮಾಡಬೇಕು ಎನ್ನುವ ತೀರ್ಮಾನ. ನಾವು ಯಾವುದೇ ಒಂದು ಕೆಲಸವನ್ನೂ ಮಾಡುವ ಮೊದಲು ಅದನ್ನು ಮಾನಸಿಕವಾಗಿ ಮಾಡುತ್ತೇವೆ. ಇಂದು ಇಲ್ಲಿಗೆ ಹೋಗಬೇಕು, ಇಂತವರನ್ನು ಭೇಟಿಯಾಗಬೇಕು, ಅಲ್ಲಿ ಇಂತಹದ್ದನ್ನು ಪಡೆಯಬೇಕು, ಇತ್ಯಾದಿ ವೇಳಾಪಟ್ಟಿ ನಮ್ಮ ಮನಸ್ಸಿನಲ್ಲಿ ನೆಟ್ಟಿರುತ್ತದೆ. ಈ ರೀತಿ ಸಾವಿರ ಸಂಕಲ್ಪಗಳು, ಅದನ್ನು ಈಡೇರಿಸಿಕೊಳ್ಳುವುದಕ್ಕೆ ಸಾವಿರ ಬಯಕೆಗಳು. ಹೀಗೆ ಮಾಡಬೇಕು ಅದರಿಂದ ಹೀಗೇ ಆಗಬೇಕು ಎನ್ನುವ ಆಸೆಗಳು’. ಬದುಕು ಎಂದರೆ ನಾವು ನಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಬದುಕಿನ ರೂಪುರೇಷೆಯನ್ನು ಬಾಹ್ಯ ಪ್ರಪಂಚದಲ್ಲಿ ಸಾಕಾರಗೊಳಿಸುವ ಪ್ರಯತ್ನ. ಹೀಗೆ ಸಾವಿರಾರು ಸಂಕಲ್ಪ ಮತ್ತು ಕಾಮನೆಯನ್ನು ಮನಸ್ಸಿನಲ್ಲಿ ತುಂಬುತ್ತಾ ಹೋದರೆ ಮನಸ್ಸಿಗೆ ಅದರಿಂದಾಚೆಗೆ ಯೋಚಿಸಲು ಅವಕಾಶವೇ ಇಲ್ಲವಾಗುತ್ತದೆ. ಮನಸ್ಸು ಎಂದರೆ ಬರೀ ಸಂಕಲ್ಪ-ವಿಕಲ್ಪ. ಏನೇನೋ ಕನಸು ಕಟ್ಟುವುದು(ಸಂಕಲ್ಪ), ಮಾಡಬೇಕೋ ಬೇಡವೋ, ಮಾಡಿದರೆ ಯಶಸ್ವಿ ಆದೀತೋ ಇಲ್ಲವೋ (ವಿಕಲ್ಪ) ಎಂದು ಯೋಚಿಸುತ್ತ ಅದರಿಂದ ಗೊಂದಲಕ್ಕೊಳಗಾಗುವುದು-ಇದರಿಂದಾಚೆಗೆ ಮನಸ್ಸು ಹೋಗುವುದೇ ಇಲ್ಲ. ಕೃಷ್ಣ ಹೇಳುತ್ತಾನೆ ಮೊದಲು ನಿನ್ನ ಸಂಕಲ್ಪಗಳನ್ನು ಬಿಟ್ಟುಬಿಡುಎಂದು. ಈ ಸಂಕಲ್ಪಗಳು ತಿರುಕನ ಕನಸಿನಂತೆ. ಎಷ್ಟು ಹೆಚ್ಚು ಸಂಕಲ್ಪ ನಮ್ಮ ಮನಸ್ಸಿಗೆ ಬರುತ್ತದೆ ಅಷ್ಟೇ ಹತಾಶೆ ಹೆಚ್ಚಾಗುತ್ತದೆ, ಅದರಿಂದ ವ್ಯಾಕುಲತೆ. ನಂತರ ಏನನ್ನೂ ಯೋಚಿಸಲು ಆಗುವುದಿಲ್ಲ!
ಬಯಸುವುದು ಮನಸ್ಸಿನ ಸಹಜ ಗುಣ, ಬಯಸದೆ ಬದುಕಿಲ್ಲ. ಅದಕ್ಕಾಗಿ ಏನು ಬರುತ್ತದೋ ಅದು ಬರಲಿ ಎಂದು ಬಯಸುವುದನ್ನು ಕಲಿತು ನಮ್ಮ ಇತರ ಸಂಕಲ್ಪ ವಿಕಲ್ಪವನ್ನು ಬಿಟ್ಟುಬಿಡಬೇಕು- ಇದು ಯಶಸಿನ ಸೂತ್ರ. ಬಯಸಿದ್ದು ಸಿಗುವುದಿಲ್ಲ, ಬಯಸಿದಂತೆ ಆಗುವುದಿಲ್ಲ ಎಂದ ಮೇಲೆ ಅನಗತ್ಯ ಕನಸಿನ ಗೋಪುರ ಕಟ್ಟುವುದರಲ್ಲಿ ಯಾವ ಅರ್ಥವೂ ಇಲ್ಲ. ನಮ್ಮ ಸಂಕಲ್ಪ ಕೇವಲ ಒಂದೇ ಒಂದು ಭಗವಂತನ ಸಂಕಲ್ಪ ಹೇಗೋ ಹಾಗೆ’. ದ್ವಾದಶ ಸ್ತೋತ್ರದಲ್ಲಿ ಶ್ರೀ ಮಧ್ವಾಚಾರ್ಯರು ಹೇಳುವಂತೆ:
ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದ ವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ ಪಿತೃಮಾತೃಗತಿಃ || ೩-೧ ||
ನಿನ್ನ ಪಾಲಿನ ಕರ್ಮ ಮಾಡು, ಬಂದುದನ್ನುಣ್ಣು. ಹರಿಯ ಚರಣದ ಅರಿವು ತಪ್ಪದಿರಲಿ. ನನ್ನದು ಎನ್ನುವ ಪ್ರತ್ಯೇಕ ಸಂಕಲ್ಪ ಬೇಡ. ವೇದದಲ್ಲಿ ಹೇಳುವಂತೆ ಭಗವಂತನ ಕಾಮನೆಯೇ ನನ್ನ ಕಾಮನೆಯಾಗಲಿ, ಆತನ ಇಚ್ಛೆಯೇ ನನ್ನ ಇಚ್ಛೆಯಾಗಲಿ, ಅದರಿಂದ ನನ್ನ ಕಾಮನೆ ಭಗವಂತನ ಕಾಮನೆಗೆ ಶ್ರುತಿಗೂಡಲಿ’. ಹೀಗೆ ಆದಾಗ ಅಪಸ್ವರ ಹೊರಡುವುದಿಲ್ಲ. ನಮ್ಮ ಬಯಕೆ ಭಗವಂತನ ಇಚ್ಛೆಗೆ ಅನುರಣನವಾದಾಗ(State of Resonance) ಬಾಳಿನ ಸಂಗೀತದಲ್ಲಿ ಮಾಧುರ್ಯ ನಿರ್ಮಾಣವಾಗುತ್ತದೆ. ಕೃಷ್ಣ ಹೇಳುತ್ತಾನೆ ಸರ್ವಾನ್ ಅಶೇಷತಃಎಂದು. ಅಂದರೆ ನಿನ್ನೆಲ್ಲಾ ಸಂಕಲ್ಪವನ್ನು ಪೂರ್ಣವಾಗಿ ಬಿಡು ಎಂದು. ಭಗವಂತನ ಇಚ್ಚೆಗೆ ವಿರುದ್ಧವಾದ ಒಂದೂ ಸಂಕಲ್ಪ ನಮ್ಮಲ್ಲಿರಬಾರದು. ನೀನು(ಭಗವಂತ) ಏನು ಬಯಸಿದೆಯೋ ಅದೇ ನನ್ನ ಸಂಕಲ್ಪ’-ಇದು ಒಬ್ಬ ಯೋಗಿ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕಾದ ಏಕೈಕ ಸಂಕಲ್ಪ.
ಸಂಕಲ್ಪ ಎಲ್ಲಿ ಹುಟ್ಟುತ್ತದೋ ಅಲ್ಲೇ ಅದನ್ನು ತಡೆಯಬೇಕು. ಇದನ್ನು ತಡೆಯಬೇಕು ಎಲ್ಲಿಂದ ಎಂದರೆ ಮನಸ್ಸಿನಿಂದಲೇ! ನಾವು ನಮ್ಮ ಮನಸ್ಸಿಗೆ ನಿರಂತರ ಈ ರೀತಿ ಹೇಳಬೇಕುನೀನು ಹುಚ್ಚು ಸಂಕಲ್ಪ ಮಾಡಬೇಡ, ಮಾಡಿದರೆ ಅದು ನಿನಗೆ ಸಿಗುವುದಿಲ್ಲ. ನಂತರ ಸಿಗಲಿಲ್ಲ ಎಂದು ಚಡಪಡಿಸಬೇಕಾಗುತ್ತದೆ- ಆದ್ದರಿಂದ ಈ ಹುಚ್ಚು ಸಂಕಲ್ಪಗಳನ್ನು ಬಿಡುಎಂದು. ಈ ರೀತಿ ಮನಸ್ಸಿಗೆ ನಿರಂತರ ಹೇಳಿ (Auto Suggestion) ಅದನ್ನು ಪಳಗಿಸಬೇಕು. ಸಾಧಕನನ್ನು ದಾರಿ ತಪ್ಪಿಸುವುದೂ ಮನಸ್ಸು, ದಾರಿ ಹೆಚ್ಚಿಸುವುದೂ ಮನಸ್ಸು. ಆದ್ದರಿಂದ ಮನಸ್ಸಿಗೆ ನಿರಂತರ ಈ ರೀತಿ ಹೇಳುತ್ತಾ ಇದ್ದರೆ ಅದು ಕೊನೆಗೆ ಅದನ್ನು ಒಪ್ಪಿಕೊಳ್ಳುತ್ತದೆ.
ನಾವು ನಮ್ಮ ಹುಚ್ಚು ಸಂಕಲ್ಪವನ್ನು ಬಿಡಬೇಕಾದರೆ ಮೊದಲು ನಮ್ಮ ಇಂದ್ರಿಯ ಸಮುದಾಯವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ನಾವು ನಮ್ಮಲ್ಲಿ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ ಹಿಂದೆ ಚಿಕ್ಕ ಮಕ್ಕಳಿಗೆ ಅನೇಕ ಅಧ್ಯಾತ್ಮಿಕ ಸಂಸ್ಕಾರವನ್ನು ಹೇಳಿಕೊಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಮನಸ್ಸು ಹಸಿ ಮಣ್ಣಿನಂತೆ, ಏನು ಹೇಳಿದರೂ ಅದರ ಯಥಾರ್ಥ ಗ್ರಹಣವಾಗುತ್ತದೆ. ಮನಸ್ಸಿನ ಗುಣವೆಂದರೆ ಅದನ್ನು ನಾವು ಒಂದು ಕಡೆ ನಿರ್ಬಂಧ ಮಾಡಿದಾಗ ಅದು ಇನ್ನೊಂದು ಕಡೆ ಜಾರಿ ನುಣುಚಿಕೊಳ್ಳುತ್ತದೆ. ಕೃಷ್ಣ ಹೇಳುತ್ತಾನೆ ಮನಸ್ಸನ್ನು ಜಾರಲು ಬಿಡಬೇಡ, ಎಲ್ಲ ಸಂಕಲ್ಪವನ್ನು ತ್ಯಾಗ ಮಾಡಿ ಭಗವಂತ ಒದಗಿಸಿಕೊಟ್ಟಿದ್ದನ್ನು ಭಗವದ್ ಪ್ರಸಾದವೆಂದು ಸ್ವೀಕರಿಸು, ಸಂತೋಷವಾಗಿ ಅದನ್ನು ಭೋಗಿಸು-ಅನುಭವಿಸು, ಇಲ್ಲದ್ದನ್ನು ಬೇಕು ಎಂದು ಬಯಸಿ ಕೊರಗಬೇಡಎಂದು.
ಈ ಹಿಂದೆ ಹೇಳಿದಂತೆ ಮನಸ್ಸನ್ನು ಒಮ್ಮೆಗೆ ತಿರುಗಿಸಲು ಬರುವುದಿಲ್ಲ. ಅದನ್ನು ಬಹಳ ನಿದಾನವಾಗಿ ತಿರುಗಿಸಬೇಕು. ಮೆಲ್ಲ-ಮೆಲ್ಲನೆ ಆ ಉತ್ಕೃಷ್ಟ ಆನಂದಕ್ಕೆ ಮನಸ್ಸನ್ನು ತಿರುಗಿಸಬೇಕು. ಇದಕ್ಕಾಗಿ ನಿನ್ನ ವಿಶ್ಲೇಷಕ ಬುದ್ಧಿಯನ್ನು ಬಳಸುಎನ್ನುತ್ತಾನೆ ಕೃಷ್ಣ. ಇದಕ್ಕೆ ಛಲ ಬೇಕು ಧೈರ್ಯ ಬೇಕು. ಗುರಿ ಮುಟ್ಟುವ ತನಕ ನಾನು ವಿಚಲಿತನಾಗಲಾರೆ ಎನ್ನುವ ಬುದ್ಧಿ(conviction), ಧೃತಿ(courage) ಬಹಳ ಮುಖ್ಯ. ಹೀಗೆ ತರ್ಕವನ್ನು ಮೀರಿ ತರ್ಕಾತೀತ ಭಗವಂತನತ್ತ ಮನಸ್ಸನ್ನು ತಿರುಗಿಸಬೇಕು.ಮನಸ್ಸು ಮೊದಲು ನಮ್ಮ ಸ್ವರೂಪವನ್ನು ಗುರುತಿಸಿ ಅಲ್ಲಿ ನೆಲೆನಿಂತು ಆ ನಂತರ ಸ್ವರೂಪದಲ್ಲಿರುವ ಭಗವಂತನಲ್ಲಿ ನೆಲೆ ನಿಲ್ಲಬೇಕು. ಒಮ್ಮೆ ನೆಲೆ ನಿಂತ ಮನಸ್ಸನ್ನು ಬೇರೆ ಯಾವುದೇ ಚಿಂತೆಗೆ ಒಡ್ಡದೆ ಅದನ್ನು ಅಲ್ಲೇ ನೆಲೆಗೊಳಿಸಬೇಕು.
  • ಶ್ಲೋಕ - 26
ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ ।
ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ ॥೨೬॥
ಯತಃ ಯತಃ ನಿಶ್ಚರತಿ ಮನಃ ಚಂಚಲಮ್ ಅಸ್ಥಿರಮ್ ।
ತತಃ ತತಃ ನಿಯಮ್ಯ ಏತತ್ ಆತ್ಮನಿ ಏವ ವಶಮ್ ನಯೇತ್ ಗಟ್ಟಿಗೊಳ್ಳದೆ ಎತ್ತೆತ್ತ ಸರಿಯುವ ಬಗೆ ಯಾವೆಡೆಯೆಲ್ಲ ಹರಿಯಿತು ಆಯಾ ಕಡೆಯಿಂದ ಮತ್ತೆ ಹೊರಳಿಸಿ ಭಗವಂತನಲ್ಲೆ ನಿಲ್ಲುವಂತೆ ಹಿಡಿತಕ್ಕೆ ತರಬೇಕು.
ನಮ್ಮ ಮನಸ್ಸು ಬಹಳ ಚಂಚಲ. ಈ ಕಾರಣದಿಂದ ಅದು ಎಲ್ಲೆಡೆ ಹರಿಯುತ್ತಿರುತ್ತದೆ. ಅದು ಎಲ್ಲಿ ಎಲ್ಲಿ ಜಾರುತ್ತದೋ ಅಲ್ಲಿ ಅಲ್ಲಿ ಭಗವಂತನೆಂಬ ಒಡ್ಡು ಹಾಕಿ ಅದನ್ನು ಭಗವಂತನಲ್ಲಿ ನೆಲೆನಿಲ್ಲುವಂತೆ ಮಾಡಬೇಕು. ಇದಕ್ಕೆ ನಿರಂತರ ಪ್ರಯತ್ನ ಅಗತ್ಯ.
  • ಶ್ಲೋಕ - 27
ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್
ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಮ್ ॥೨೭॥
ಪ್ರಶಾಂತ ಮನಸಮ್ ಹಿ ಎನಮ್ ಯೋಗಿನಮ್ ಸುಖಮ್ ಉತ್ತಮಮ್
ಉಪೈತಿ ಶಾಂತರಜಸಮ್ ಬ್ರಹ್ಮಭೂತಮ್ ಅಕಲ್ಮಷಮ್ ವಿಷಯಗಳತ್ತ ಹರಿಯದೆ ಹಾಯಾದ ಬಗೆಯವನನ್ನು, ರಜೋಗುಣದ ಬಿಸಿಯಳಿದು ತಿಳಿಯಾದವನನ್ನು, ಭಗವಂತನಲ್ಲೆ ನೆಲೆನಿಂತ ಇಂಥ ಯೋಗಿಯನ್ನು ಸುಖದ ಸುಗ್ಗಿ ನುಗ್ಗಿ ಬರುತ್ತದೆ.
ಒಮ್ಮೆ ನಮ್ಮ ಮನಸ್ಸು ಭಗವಂತನಲ್ಲಿ ನೆಲೆ ನಿಂತಿತೆಂದರೆ ಗೊಂದಲದ ಗೂಡಾದ ಮನಸ್ಸು ಪ್ರಶಾಂತವಾಗುತ್ತದೆ. ಇದನ್ನು ಸಾಧಿಸಿದ ವ್ಯಕ್ತಿ ಎಂತಹ ಸನ್ನಿವೇಶದಲ್ಲೂ ಉದ್ವೇಗಕ್ಕೊಳಗಾಗುವುದಿಲ್ಲ. ಜೀವನದಲ್ಲಿ ನಾವು ಅನುಭವಿಸಬೇಕಾದ ನಿಜವಾದ ಶ್ರೇಷ್ಠ ಸುಖ ಏನು ಎನ್ನುವುದು ಈ ಸ್ಥಿತಿಯಲ್ಲಿ ತಿಳಿಯುತ್ತದೆ. ಮನಸ್ಸು ಸಾಮಾನ್ಯವಾಗಿ ಬಯಸುವ ರಾಜಸ ಸುಖದಲ್ಲಿ ಇರುವ ನಿರಾಶೆ ಇಲ್ಲಿ ಎಂದೂ ಇರದು. ಈ ಸ್ಥಿತಿಯಲ್ಲಿ ನಾವು ಸ್ವಚ್ಚವಾಗುತ್ತೇವೆ. ಇದು ನಿಜವಾದ ಮಡಿ. ಮನಸ್ಸಿನ ಸ್ವಚ್ಚತೆಯನ್ನು ಸಾಧಿಸದೆ ಬಾಹ್ಯ ಮಡಿ ಮಾಡುವುದರಿಂದ ಯಾವ ಉಪಯೋಗವೂ ಇಲ್ಲ.ಶುದ್ಧವಾದ ಮನಸ್ಸಿಗೆ ಯಾವುದೂ ಮೈಲಿಗೆ ಅಲ್ಲ! ಮನಸ್ಸು ಮಡಿಯಾದರೆ ಅವನು ಮೈಲಿಗೆಯಾಗುವ ಸಾಧ್ಯತೆ ಇಲ್ಲ. ಇದು ಮಾನವ ತನ್ನ ಜೀವಮಾನದಲ್ಲಿ ಪಡೆಯಬಹುದಾದ ಪರಮಾನಂದದ ಸ್ಥಿತಿ.
  • ಶ್ಲೋಕ - 28
ಯುಂಜನ್ ಏವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ ।
ಸುಖೇನ ಬ್ರಹ್ಮಸಂಸ್ಪರ್ಶಮತ್ಯಂತಂ ಸುಖಮಶ್ನುತೇ ೨೮॥
ಯುಂಜನ್ ಏವಮ್ ಸದಾ ಆತ್ಮಾನಮ್ ಯೋಗೀ ವಿಗತ ಕಲ್ಮಷಃ ।
ಸುಖೇನ ಬ್ರಹ್ಮಸಂಸ್ಪರ್ಶಮ್ ಅತ್ಯಂತಮ್ ಸುಖಮಶ್ನುತೇ-ಹೀಗೆ ಕೊಳೆಯಳಿದು ಸದಾ ಭಗವಂತನನ್ನು ಧ್ಯಾನಿಸುವ ಸಾಧಕನು ಹಾಯಾಗಿ ಭಗವದನುಭವದ ಪರಮ ಸುಖವನ್ನು ಉಣ್ಣುತ್ತಾನೆ.
ಭಗವದ್ ಅನುಭೂತಿ ಆದಾಗ ಆಗುವ ಅಂತರಂಗದ ಆನಂದವನ್ನು ಇನ್ನೊಂದು ರೀತಿಯಲ್ಲಿ ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ ಯುಂಜನ್ ಏವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃಎಂದು. ಕೃಷ್ಣನ ಈ ನುಡಿಯನ್ನು ಎರಡು ರೂಪದಲ್ಲಿ ಕಾಣಬಹುದು. ಮೊದಲನೆಯದಾಗಿವಿಗತಕಲ್ಮಷ ಸನ್ ಆತ್ಮಾನಂ ಯುಂಜನ್ಹಾಗು ಎರಡನೆಯದಾಗಿ ಆತ್ಮಾನಂ ಯುಂಜನ್ ಸನ್ ವಿಗತಕಲ್ಮಷಃ”. ನಾವು ಮೊದಲು ವಿಗತಕಲ್ಮಶವಾದ ಮನಸ್ಸಿನಿಂದ ಭಗವಂತನನ್ನು ಕಾಣಬೇಕು, ನಂತರ ಭಗವಂತನನ್ನು ಧ್ಯಾನ ಮಾಡುತ್ತಾ ವಿಗತಕಲ್ಮಷರಾಗಬೇಕು. ಭಗವಂತನ ಧ್ಯಾನಕ್ಕೊಸ್ಕರ ಮನಸ್ಸನ್ನು ಸ್ವಚ್ಛಗೊಳಿಸಿ ಒಮ್ಮೆ ಭಗವಂತನನ್ನು ಕಾಣಬಹುದು ಆದರೆ ಭಗವಂತನ ಅನುಭವದಿಂದ ಕೆಳಗಿಳಿದ ತಕ್ಷಣ ತಾಮಸ ಆವೇಶ ನಮ್ಮ ಮನಸ್ಸನ್ನು ಕೆಡಿಸಬಹುದು. ಅದಕ್ಕಾಗಿ ಸದಾ ಭಗವದ್ ಅನುಭೂತಿಯಲ್ಲೇ ನೆಲೆಗೊಳ್ಳಬೇಕು. ಇದರರ್ಥ ದಿನದ ಇಪತ್ನಾಲ್ಕು ಗಂಟೆ ಧ್ಯಾನದಲ್ಲೇ ಇರಬೇಕು ಎಂದಲ್ಲ, ಬದಲಾಗಿ ಸದಾ ಭಗವಂತನ ಗುಂಗಿನಲ್ಲಿರುವುದು. ಹೀಗಿದ್ದಾಗ ಮನಸ್ಸು ನಿರಂತರ ಸ್ವಚ್ಛವಾಗಿರುತ್ತದೆ. ಹೀಗೆ ಭಗವದ್ಪ್ರಜ್ಞೆ ಗಟ್ಟಿಗೊಂಡಾಗ ಸಾಧಕ ಅನಾಯಾಸವಾಗಿ ಭಗವಂತನನ್ನು ನೇರವಾಗಿ ಕಾಣುವ ಅತ್ಯಂತ ಸುಖಾನುಭವವನ್ನು ಪಡೆಯತ್ತಾನೆ.
  • ಶ್ಲೋಕ - 29
ಧ್ಯಾನ ಪ್ರಕ್ರಿಯೆಯನ್ನು ವಿವರಿಸಿದ ಕೃಷ್ಣ ಮುಂದಿನ ಶ್ಲೋಕದಲ್ಲಿ ಭಗವಂತನಲ್ಲಿ ಎಂತಹ ಗುಣದ ಅನುಸಂಧಾನ ಮಾಡಬೇಕು ಎನ್ನುವುದನ್ನು ವಿವರಿಸುತ್ತಾನೆ. ದೇವರು ಎಂದರೆ ಎಲ್ಲೋ ಸತ್ಯಲೋಕದಿಂದಾಚೆಗಿನ ವೈಕುಂಠದಲ್ಲಿನ ಅಂತಃಪುರದ ಕೋಣೆಯಲ್ಲಿ ಕುಳಿತ ಒಬ್ಬ ವ್ಯಕ್ತಿ ಎಂದು ಅನುಸಂಧಾನ ಮಾಡುವುದಲ್ಲ. ದೇವರು ಎನ್ನುವ ಕಲ್ಪನೆ ಹಿಂದಿರುವ ನಿಜವಾದ ಅನುಸಂಧಾನ ಹೇಗಿರಬೇಕು ಎನ್ನುವುದನ್ನು ಇಲ್ಲಿ ಕೃಷ್ಣ ವಿವರಿಸುತ್ತಾನೆ.
ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾSತ್ಮನಿ ।
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ೨೯॥
ಸರ್ವ ಭೂತ ಸ್ಥಮ್ ಆತ್ಮಾನಮ್ ಸರ್ವ ಭೂತಾನಿ ಚ ಆತ್ಮನಿ ।
ಈಕ್ಷತೇ ಯೋಗ ಯುಕ್ತ ಆತ್ಮಾ ಸರ್ವತ್ರ ಸಮದರ್ಶನಃ ಧ್ಯಾನಯೋಗಕ್ಕೆ ಬಗೆ ಸಜ್ಜುಗೊಂಡ ಸಾಧಕ ಎಲ್ಲ ಜೀವಿಗಳಲ್ಲು ಭಗವಂತನನ್ನು ಕಾಣುತ್ತಾನೆ ಮತ್ತು ಎಲ್ಲ ಜೀವಿಗಳನ್ನು ಭಗವಂತನಲ್ಲಿ ಕಾಣುತ್ತಾನೆ. ಎಲ್ಲೆಡೆ ಇರುವ ಭಗವಂತ ಏಕರೂಪನೆಂದು ಕಾಣುತ್ತಾನೆ.
ನಾವು ಭಗವಂತನನ್ನು ಬ್ರಹ್ಮ ಎನ್ನುತ್ತೇವೆ, ಪರಮಾತ್ಮ ಎನ್ನುತ್ತೇವೆ. ಏನು ಹಾಗೆಂದರೆ? ಎಲ್ಲ ಕಾಲದಲ್ಲೂ ಎಲ್ಲ ದೇಶದಲ್ಲೂ ತುಂಬಿರುವ ಬೃಹತ್ತಾದದ್ದು ಬ್ರಹ್ಮ. ಎಲ್ಲ ಕಡೆ ವ್ಯಾಪಿಸಿರುವ ಸರ್ವ ಗುಣಪೂರ್ಣನಾಗಿ ಕಾಲತಃ, ದೇಶತಃ, ಗುಣತಃ, ಶಕ್ತಿತಃ ಅನಂತವಾಗಿರುವವ ಪರಮಾತ್ಮ. ಇಲ್ಲಿ ಕೃಷ್ಣ ಹೇಳುತ್ತಾನೆ ಸರ್ವಭೂತಸ್ಥಮಾತ್ಮಾನಂ”-ಅಂದರೆ ಸಮಸ್ತ ಜೀವಜಾತದೊಳಗೆ ಅಂತರ್ಯಾಮಿಯಾಗಿ ಬಿಂಬರೂಪಿ ಭಗವಂತನಿದ್ದಾನೆ. ಅಷ್ಟೇ ಅಲ್ಲಸರ್ವ ಭೂತಾನಿ ಚ ಆತ್ಮನಿಅಂದರೆ ಸಮಸ್ತ ಜೀವಗಳೂ ಭಗವಂತನಲ್ಲಿವೆ. ಇದರ ಪೂರ್ಣ ಅರ್ಥ:ಭಗವಂತ ನಮ್ಮ ಒಳಗೂ ಹೊರಗೂ ತುಂಬಿದ್ದಾನೆಎಂದು. ಇದು ನಾವು ಉಪಾಸನೆ ಮಾಡುವಾಗ ತಿಳಿದುಕೊಳ್ಳಬೇಕಾದ ಮುಖ್ಯವಾದ ಅಂಶ. ಒಬ್ಬ ಧ್ಯಾನಯೋಗದಲ್ಲಿರುವ ಸಾಧಕ ಭಗವಂತನ ಸರ್ವಗತತ್ವವನ್ನು ಕಾಣುವ ಬಗೆಯಿದು.
ಭಗವಂತ ಎಲ್ಲಾ ಜೀವದಲ್ಲೂ ತುಂಬಿದ್ದರೂ ಕೂಡಾ ಒಬ್ಬ ಸಾಧಕ ಆತನನ್ನು ಸರ್ವತ್ರ ಸಮದರ್ಶನಃ”- ಅಂದರೆ ಏಕರೂಪದಲ್ಲಿ ಕಾಣುತ್ತಾನೆ. ಭಗವಂತನ ಅವತಾರ, ಆತನ ಆವೇಶ, ಸನ್ನಿಧಾನ, ಗುಣ, ಕೃತಿ, ರೂಪ ಎಲ್ಲವೂ ಅಖಂಡ. ಅದರಲ್ಲಿ ವೆತ್ಯಾಸವಿಲ್ಲ. ಎಲ್ಲವುದರ ಒಳಗೂ ಹೊರಗೂ ತುಂಬಿರುವ ಆತ ಏಕರೂಪನಾಗಿದ್ದಾನೆ. ಬೈಬಲ್ ನಲ್ಲಿ ಯಾರಾದರೂ ದೇವರ ಬಗ್ಗೆ ಹೇಳುವವರು ಏನು ಹೇಳುತ್ತಾರೆ ಎನ್ನುವಲ್ಲಿ ಹೀಗೆ ಹೇಳಿದ್ದಾರೆ “ If they say ‘the Kingdom is in the sky’ then the birds will precede you; if they say to you ‘It is in the sea’ then the fish will precede you. Rather ‘the Kingdom is inside of you and It is outside of you’. ಎಲ್ಲಾ ಗ್ರಂಥದ ತಾತ್ಪರ್ಯ ಒಂದೆ. ಹೀಗೆ ಭಗವಂತ ಸರ್ವಾಂತರ್ಯಾಮಿ ಮತ್ತು ಸರ್ವಗತ ಎನ್ನುವ ಅನುಸಂಧಾನ ನಮ್ಮ ನಿತ್ಯ ಉಪಾಸನೆಯಲ್ಲಿರಬೇಕು.
  • ಶ್ಲೋಕ - 30
ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ
ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ೩೦॥
ಯಃ ಮಾಮ್ ಪಶ್ಯತಿ ಸರ್ವತ್ರ ಸರ್ವಮ್ ಚ ಮಯಿ ಪಶ್ಯತಿ
ತಸ್ಯ ಅಹಮ್ ನ ಪ್ರಣಶ್ಯಾಮಿ ಸಃ ಚ ಮೇ ನ ಪ್ರಣಶ್ಯತಿ ಯಾರು ನನ್ನನ್ನು ಎಲ್ಲೆಡೆ ಕಾಣುತ್ತಾನೆ ಮತ್ತು ಎಲ್ಲವನ್ನು ನನ್ನಲ್ಲಿ ಕಾಣುತ್ತಾನೆ ಅವನಿಗೆ ನಾನು ಎರವಾಗಲಾರೆ; ಅವನೂ ನನಗೆ ಎರವಾಗಲಾರ.
ಮುಂದುವರಿದು ಕೃಷ್ಣ ಹೇಳುತ್ತಾನೆ: ಯಾರು ಹೀಗೆ ನನ್ನನ್ನು ಎಲ್ಲರಲ್ಲಿಯೂ ಮತ್ತು ಎಲ್ಲರನ್ನು ನನ್ನಲ್ಲಿ ಕಾಣುತ್ತಾನೋ ಅವನಿಗೆ ನಾನೆಂದೂ ಇಲ್ಲವಾಗುವುದಿಲ್ಲ. ಸದಾ ಆತನ ಯೋಗ ಕ್ಷೇಮದ ಹೊಣೆ ನನ್ನದು. ಅದೇ ರೀತಿ ನಾನು ಆತನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ ಎನ್ನುವ ಎಚ್ಚರ ಸದಾ ಆತನಲ್ಲಿರುತ್ತದೆಎಂದು. ಹೀಗೆ ಭಗವಂತನ ಅನ್ಯೋನ್ಯ ಸಂಬಂಧ, ದೇವರು ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ ಎನ್ನುವ ಎಚ್ಚರ ನಮ್ಮಲ್ಲಿ ಸದಾ ಜಾಗೃತವಾಗಿರುತ್ತದೆ. ಹಿಂದೆ ಹೇಳಿದಂತೆ ಭಗವಂತ ನಾವು ಆತನನ್ನು ಹೇಗೆ ನೋಡುತ್ತೆವೋ ಹಾಗೆ. ಈ ಕಾರಣದಿಂದ ನಮ್ಮಲ್ಲಿನ ಈ ಎಚ್ಚರದಿಂದ ಯಾವತ್ತೂ ಜೀವನದಲ್ಲಿ ಬಗೆಹರಿಯದಂತಹ ಸಮಸ್ಯೆ ನಮಗೆ ಬರುವುದಿಲ್ಲ. ಪ್ರರಾಬ್ಧಕರ್ಮದಿಂದ ಬಂದರೂ ಕೂಡಾ ಕಾಣದ ಕೈ ನಮ್ಮನ್ನು ಕೈ ಹಿಡಿದು ನಡೆಸುತ್ತಿರುವ ಅನುಭವವಾಗುತ್ತದೆ. ನನ್ನನ್ನು ಕಾಪಾಡುವವನಿದ್ದಾನೆ ಅವನು ನನ್ನ ಯೋಗ-ಕ್ಷೇಮವನ್ನು ನೋಡಿಕೊಳ್ಳುತ್ತಾನೆ, ನಾನೇಕೆ ಹೆದರಬೇಕುಎನ್ನುವ ದೈರ್ಯ ಬರುತ್ತದೆ. ಕೆಟ್ಟ ಯೋಚನೆ ದೂರವಾಗುತ್ತದೆ. ಸಾಮಾಜಿಕ ಪ್ರತಿಕ್ರೀಯೆಗಳಿಗೆ, ಟೀಕೆ-ಟಿಪ್ಪಣಿಗಳಿಗೆ, ಅಪವಾದಗಳಿಗೆ, ನಿಂದನೆಗಳಿಗೆ, ಯಾವುದಕ್ಕೂ ವಿಚಲಿತನಾಗುವುದಿಲ್ಲ. ಭಗವಂತ ಕೈಬಿಟ್ಟ ಎನ್ನುವ ಸ್ಥಿತಿ ಭಕ್ತನಿಗೆ ಎಂದೂ ಬರುವುದಿಲ್ಲ. ಭಗವಂತ ಎಂದೂ ತನ್ನ ಆತ್ಮೀಯ ಭಕ್ತನಿಂದ ದೂರವಾಗುವುದಿಲ್ಲ. ಇದಕ್ಕಾಗಿ ಭಗವಂತನನ್ನು ಭಕ್ತಪರಾಧೀನಎನ್ನುವುದು. ಈ ಕುರಿತು ಇನ್ನಷ್ಟು ವಿವರವಾಗಿ ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.
  • ಶ್ಲೋಕ - 31
ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ ।
ಸರ್ವಥಾ ವರ್ತಮಾನೋSಪಿ ಸ ಯೋಗೀ ಮಯಿ ವರ್ತತೇ ೩೧॥
ಸರ್ವಭೂತಸ್ಥಿತಂ ಯಃ ಮಾಮ್ ಭಜತಿ ಏಕತ್ವಮ್ ಆಸ್ಥಿತಃ
ಸರ್ವಥಾ ವರ್ತಮಾನಃ ಅಪಿ ಸಃ ಯೋಗೀ ಮಯಿ ವರ್ತತೇ-ಎಲ್ಲಾ ಜೀವಿಗಳಲ್ಲಿರುವ ನನ್ನನ್ನು ಏಕರೀತಿಯಿಂದ ತಿಳಿದು ಪೂಜಿಸುವವನು ಯಾವ ಸ್ಥಿತಿಯಲ್ಲಿದ್ದರೂ ನನ್ನಲ್ಲಿ ಇರುತ್ತಾನೆ.
ಕೃಷ್ಣ ಹೇಳುತ್ತಾನೆ ಸರ್ವಗತನಾದ ಭಗವಂತ ಎಲ್ಲ ಕಡೆ ಏಕರೂಪವಾಗಿದ್ದಾನೆ ಎನ್ನುವ ಅನುಸಂಧಾನ ಮತ್ತು ನಿರಂತರ ಭಕ್ತಿ ಇರುವ ಸಾಧಕ, ಆತ ಹೇಗೇ ಇರಲಿ, ಅವನು ನನ್ನನ್ನು ಸೇರುವುದು ನಿಶ್ಚಿತಎಂದು. ಅಪರೋಕ್ಷ ಜ್ಞಾನ ಪಡೆದವ ಭಗವಂತನಿಂದ ಎಂದೂ ದೂರ ಸರಿಯುವುದಿಲ್ಲ. ಆತ ಮೋಕ್ಷವನ್ನು ಪಡೆದು ಭಗವಂತನಲ್ಲಿ ನೆಲೆಸುತ್ತಾನೆ.
  • ಶ್ಲೋಕ - 32
ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋSರ್ಜುನ
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ ೩೨॥
ಆತ್ಮಔಪಮ್ಯೇನ ಸರ್ವತ್ರ ಸಮಮ್ ಪಶ್ಯತಿ ಯಃ ಅರ್ಜುನ
ಸುಖಮ್ ವಾ ಯದಿ ವಾ ದುಃಖಮ್ ಸಃ ಯೋಗೀ ಪರಮಃ ಮತಃ ಸುಖವಿರಲಿ, ದುಃಖವಿರಲಿ, ಎಲ್ಲರ ಬೇಕು-ಬೇಡಗಳನ್ನು ತನ್ನ ಹಾಗೆಯೇ ಸಮಾನತೆಯಿಂದ ಕಾಣುವವನು, ಓ ಅರ್ಜುನ, ಬಹಳ ದೊಡ್ಡ ಸಾಧಕ ಎನ್ನುವುದು ತೀರ್ಮಾನ.
ಕೃಷ್ಣ ನಮಗೆ ಸಮದೃಷ್ಟಿ ಬಗ್ಗೆ ಹಿಂದೆ ಕೂಡಾ ಹೇಳಿದ್ದ. ಇಲ್ಲಿ ಮುಖ್ಯವಾಗಿ ಸಾತ್ವಿಕರೊಂದಿಗೆ, ಭಗವದ್ಭಕ್ತರೊಂದಿಗೆ ಒಬ್ಬ ಸಾಧಕ ಯಾವ ರೀತಿ ಸಮದರ್ಶನ ಬೆಳೆಸಿಕೊಳ್ಳುತ್ತಾನೆ ಎನ್ನುವುದನ್ನು ವಿವರಿಸಿದ್ದಾನೆ. ಯೋಗಿಗಳಲ್ಲಿ ಶ್ರೇಷ್ಠನಾದವನು ತನ್ನಂತೆಯೇ ಇನ್ನೊಬ್ಬರು ಎಂದು ತಿಳಿದಿರುತ್ತಾನೆ. ನಮಗೆ ಯಾವುದು ದುಃಖವಾಗುತ್ತದೋ ಅದು ಇನ್ನೊಬ್ಬರಿಗೂ ದುಃಖವನ್ನು ಕೊಡುತ್ತದೆ ಎನ್ನುವ ಸತ್ಯವನ್ನು ಆತ ಅರಿತಿರುತ್ತಾನೆ. ಎಲ್ಲರಿಗೂ ಸುಖ-ದುಃಖಗಳಿವೆ, ನನ್ನನಂತೆಯೇ ಅವರು ದುಃಖವನ್ನು ಇಷ್ಟಪಡುವುದಿಲ್ಲ ಎನ್ನುವ ಎಚ್ಚರದಿಂದ ಸಾಧಕ ವ್ಯವಹರಿಸುತ್ತಾನೆ. ಯಾರು ಇನ್ನೊಬ್ಬರ ನೋವನ್ನು ತನ್ನ ನೋವಿನಷ್ಟೇ ನೋವಿನಿಂದ ಕಾಣುತ್ತಾನೋ, ಯಾರು ಇನ್ನೊಬ್ಬರ ಸಂತೋಷವನ್ನು- ಯಶಸ್ಸನ್ನು ತನ್ನ ಯಶಸ್ಸೆಂದು ತಿಳಿದು ಖುಷಿ ಪಡುತ್ತಾನೋ- ಅವನು ಬಹಳ ದೊಡ್ಡ ಯೋಗ ಸಾಧಕ.
ಭಗವದ್ಭಕ್ತರಲ್ಲಿ ಭಗವಂತನ ವಿಶೇಷ ಸನ್ನಿಧಾನವಿದೆ. ಆದ್ದರಿಂದ ಅವರ ಸುಖ-ದುಃಖಕ್ಕೆ ನಾವು ಸ್ಪಂದಿಸಿದಾಗ ಅದು ಅವರೊಳಗಿನ ಭಗವಂತನ ಪೂಜೆಯಾಗುತ್ತದೆ.
ಈ ಅಧ್ಯಾಯದಲ್ಲಿ ಇಲ್ಲಿಯವರೆಗೆ ಧ್ಯಾನದ ಬಗ್ಗೆ ಕೃಷ್ಣ ವಿಸ್ತಾರವಾಗಿ ಹೇಳಿದ. ಕೃಷ್ಣನ ಈ ವಿವರಣೆಯಲ್ಲಿ ಎಲ್ಲರಿಗೂ ಕಾಣುವ ಒಂದೇ ಒಂದು ಸರ್ವೇ ಸಾಮಾನ್ಯ ಕಷ್ಟದ ವಿಷಯವೆಂದರೆ ಚಂಚಲ ಮನಸ್ಸನ್ನು ಹೊಂದಿದ ನಾವು ಅದನ್ನು ನಿಯಂತ್ರಿಸಿ ಸಮದೃಷ್ಟಿ ಬೆಳೆಸಿಕೊಳ್ಳುವುದು’. ಇದು ನಿಜವಾಗಲೂ ಸಾಧ್ಯವೇ? ಮುಂದಿನ ಶ್ಲೋಕದಲ್ಲಿ ಅರ್ಜುನ ನಮ್ಮೆಲ್ಲರ ಪರ ಈ ಪ್ರಶ್ನೆಯನ್ನು ಕೃಷ್ಣನಲ್ಲಿ ಮಂಡಿಸುತ್ತಾನೆ.
  • ಶ್ಲೋಕ - 33
ಅರ್ಜುನ ಉವಾಚ ।
ಯೋSಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ ।
ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್ ೩೩॥
ಅರ್ಜುನಃ ಉವಾಚ-ಅರ್ಜುನ ಕೇಳಿದನು :
ಯಃ ಅಯಾಮ್ ಯೋಗಃ ತ್ವಯಾ ಪ್ರೋಕ್ತಃ ಸಾಮ್ಯೇನ ಮಧು ಸೂದನ ।
ಏತಸ್ಯ ಅಹಮ್ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಮ್ ಸ್ಥಿರಾಮ್-ಮಧುಸೂದನ, ನೀನು ಸಮದೃಷ್ಟಿಯ ಧ್ಯಾನ ಯೋಗವನ್ನು ಹೇಳಿದೆ. ನನಗನಿಸುತ್ತದೆ: ಮನಸ್ಸು ಚಂಚಲವಾದ್ದರಿಂದ ಇದರಲ್ಲಿ ಗಟ್ಟಿಯಾಗಿ ನಿಲ್ಲುವುದು ಸಾಧ್ಯವಿಲ್ಲ.
ಸಾತ್ವಿಕರಿಗೆ ಆನಂದವನ್ನು ಕೊಡುವ ಓ ಮಧುಸೂದನಎಂದು ಅರ್ಜುನ ಶ್ರೀಕೃಷ್ಣನನ್ನು ಸಂಭೋದಿಸಿ ಹೇಳುತ್ತಾನೆ: ನೀನು ಸಂಗ್ರಹವಾಗಿ ಹೇಳಿದ ಈ ಧ್ಯಾನ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳಲು ಹೇಗೆ ಸಾಧ್ಯ? ಧ್ಯಾನವೆಂಬುದು ಸಂಪೂರ್ಣ ಮಾನಸಿಕ ಪ್ರಕ್ರಿಯೆ. ಆದರೆ ನಮ್ಮ ಮನಸ್ಸು ಪ್ರಕ್ಷಬ್ಧ ಮತ್ತು ಚಂಚಲ. ಇಂತಹ ಮನಸ್ಸನ್ನು ಹಿಡಿತದಲ್ಲಿಟ್ಟು ನೀನು ಹೇಳಿದ ಸ್ಥಿರವಾದ ಈ ಧ್ಯಾನಯೋಗವನ್ನು ಸಾಧಿಸುವುದು ಸಾಧ್ಯವಿಲ್ಲಎನ್ನುತ್ತಾನೆ ಅರ್ಜುನ.
  • ಶ್ಲೋಕ - 34
ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ ದೃಢಮ್ ।
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ॥೩೪॥
ಚಂಚಲಂ ಹಿ ಮನಃ ಕೃಷ್ಣ ಪ್ರಮಾದಿ ಬಲ ವತ್ ದೃಢಮ್
ತಸ್ಯ ಅಹಮ್ ನಿಗ್ರಹಮ್ ಮನ್ಯೇ ವಾಯೋಃ ಇವ ಸು ದುಷ್ಕರಮ್ ಕೃಷ್ಣ ಬಗೆ ಚಂಚಲವಲ್ಲವೇ? ನಮ್ಮನ್ನು ಕಂಗೆಡಿಸಿಬಿಡುವಷ್ಟು ಗಟ್ಟಿ, ಬಲಶಾಲಿ. ಅದನ್ನು ಬಿಗಿ ಹಿಡಿಯುವುದೆಂದರೆ ಗಾಳಿಯನ್ನು ಬಿಗಿ ಹಿಡಿದಂತೆ ಎಂದು ನನ್ನ ಭಾವನೆ.
ಮನಸ್ಸು ತುಂಬಾ ಚಂಚಲ, ಅದು ವಿಷಯದಿಂದ ವಿಷಯಕ್ಕೆ ಹಾರುತ್ತಿರುತ್ತದೆ. ನನ್ನ ಮನಸ್ಸು ಸದಾ ನನ್ನನ್ನು ಮಣಿಸುತ್ತಿದೆ ಆದರೆ ನಾನು ಅದನ್ನು ಮಣಿಸಲಾಗುತ್ತಿಲ್ಲ. ತನಗೆ ಬೇಕಾದಂತೆ ಇನ್ನೊಬ್ಬರನ್ನು ಬಗ್ಗು ಬಡಿಯುವ ಸ್ವಭಾವ ಮನಸ್ಸಿನದು. ನಮ್ಮ ಭಗವದ್ ಸಂಕಲ್ಪವನ್ನು ಅದು ನುಚ್ಚು ನೂರುಮಾಡಿ ತನ್ನ ಸ್ವಾಧೀನ ಮಾಡಿಕೊಂಡು ಬಿಡುತ್ತದೆ. ಇಂತಹ ಮನಸ್ಸನ್ನು ಸಾಮಾನ್ಯ ಮನುಷ್ಯ ನಿಗ್ರಹ ಮಾಡುವುದು ಹೇಗೆ? ಬೀಸುವ ಗಾಳಿಯನ್ನು ಹೇಗೆ ಮುಷ್ಠಿಯಲ್ಲಿ ಹಿಡಿಯುವುದು ಅಸಾಧ್ಯವೋ ಹಾಗೆ ಮನಸ್ಸನ್ನು ನಿಗ್ರಹ ಮಾಡುವುದು ಅಸಾಧ್ಯ ಎನ್ನುವುದು ನನ್ನ ಭಾವನೆ ಎನ್ನುತ್ತಾನೆ ಅರ್ಜುನ.
ಅರ್ಜುನನ ಈ ಪ್ರಶ್ನೆ ಭಾಗಶಃ ನಮ್ಮ ಪ್ರತಿಯೊಬ್ಬ ಓದುಗರಿಗೂ ಈ ಅಧ್ಯಾಯದ ಇಲ್ಲಿಯ ತನಕದ ಭಾಗವನ್ನು ಓದುವಾಗ ಮನಸ್ಸಿಗೆ ಬಂದಿರುತ್ತದೆ. ಇದೆಲ್ಲಾ ನಮ್ಮಂತವರಿಗಲ್ಲಅಥವಾಇದು ನಮ್ಮಿಂದ ಸಾಧ್ಯವಿಲ್ಲಎನ್ನುವುದು ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಬರುವ ಮೊದಲ ವಿಚಾರ. ಈ ಕಾರಣವನ್ನು ತಿಳಿದೇ ಇಲ್ಲಿ ನಮ್ಮೆಲ್ಲರ ಪ್ರತಿನಿಧಿ ನರನಾರಾಯಣನನ್ನು ಈ ರೀತಿ ಪ್ರಶ್ನಿಸಿದ್ದಾನೆ. ಈಗ ನರನ ಈ ಪ್ರಶ್ನೆಗೆ ಕೃಷ್ಣ ಏನೆಂದು ಉತ್ತರಿಸುತ್ತಾನೆ ಎಂದು ತಿಳಿಯುವ ಕರ್ಣಕುತೂಹಲ ನಿಮಗೆಲ್ಲರಿಗೂ ಮೂಡಿರುತ್ತದೆ. ಏಕೆಂದರೆ ನಮಗೆ ಆ ನಮ್ಮ ಚಂಚಲ ಮನಸ್ಸನ್ನು ಮಣಿಸಬೇಕು, ಮಣಿಸಿ ಭಗವಂತನಲ್ಲಿ ನೆಲೆ ನಿಲ್ಲಿಸಬೇಕು ಎನ್ನುವ ಸಂಕಲ್ಪವಿದೆ. ಆದರೆ ಆ ಮನಸ್ಸು ಮಹಾ ಬಲಶಾಲಿ ಎನ್ನುವ ಭಯವಿದೆ! ಬನ್ನಿ ಆ ಮಧುಸೂದನ ನಮ್ಮ ಪ್ರಶ್ನೆಗೆ ಏನೆಂದು ಉತ್ತರಿಸಿದ ಎಂದು ಈ ಅಧ್ಯಾಯದ ಮುಂದಿನ ಭಾಗದಲ್ಲಿ ನೋಡೋಣ.
  • ಶ್ಲೋಕ - 35
ಭಗವಾನುವಾಚ ।
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ |
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ॥೩೫॥
ಭಗವಾನುವಾಚ-ಭಗವಂತ ಹೇಳಿದನು :
ಅಸಂಶಯಮ್ ಮಹಾಬಾಹೋ ಮನಃ ದುರ್ನಿಗ್ರಹಮ್ ಚಲಮ್ |
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ಮಹಾವೀರ, ಖಂಡಿತ ಹೌದು;ಬಗೆ ಚಪಲವಾದದ್ದು, ಹಿಡಿತಕ್ಕೆ ಸಿಗದ್ದು. ಆದರೆ ಕೌಂತೇಯ, ಮರಳಿ ಮರಳಿ ಯತ್ನಿಸುವುದರಿಂದ ಮತ್ತು ವೈರಾಗ್ಯದಿಂದ ಅದನ್ನು ಬಿಗಿಹಿಡಿಯಬಹುದು.
ಕೃಷ್ಣ ಹೇಳುತ್ತಾನೆ ನೀನು ಹೇಳುವುದರಲ್ಲಿ ಯಾವ ಸಂಶಯವೂ ಇಲ್ಲ. ಮನಸ್ಸನ್ನು ತಡೆ ಹಿಡಿಯುವುದು ಸುಲಭದ ಕೆಲಸವಲ್ಲ, ಆದರೆ ಅಭ್ಯಾಸ ಮತ್ತು ವೈರಾಗ್ಯದಿಂದ ಇದನ್ನು ಕ್ರಮೇಣವಾಗಿ ಸಾಧಿಸಬಹುದುಎಂದು. ನಾವು ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಪ್ರಯತ್ನ ಬೇಕು. ನಾವು ನಮ್ಮ ಮನಸ್ಸು ಹೇಳಿದಂತೆ ಕುಣಿಯುವ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಅದನ್ನು ಬಿಟ್ಟು ನಾವು ಹೇಳಿದಂತೆ ಮನಸ್ಸು ಕೇಳುವಂತೆ ಮಾಡುವ ಪ್ರಯತ್ನವನ್ನು ನಾವೆಂದೂ ಮಾಡಿರುವುದಿಲ್ಲ. ಇಲ್ಲಿ ಕೃಷ್ಣ ವೈರಾಗ್ಯ ಮತ್ತು ಅಭ್ಯಾಸ ಎನ್ನುವ ಎರಡು ವಿಚಾರವನ್ನು ಒತ್ತುಕೊಟ್ಟು ಹೇಳುತ್ತಾನೆ. ವೈರಾಗ್ಯ ಎಂದರೆ ಯಾವುದರ ಕಡೆ ಮನಸ್ಸು ಹರಿಯಬಾರದೋ ಅದನ್ನು ಮನಸ್ಸಿಗೆ ಉಣಿಸದೇ(Feed) ದೂರವಿಡುವುದು. ನಮಗೆ ದೇವರು ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತಿಳಿದುಕೊಳ್ಳುವ ಬುದ್ಧಿ ಕೊಟ್ಟಿದ್ದಾನೆ. ಆ ಬುದ್ಧಿಯನ್ನು ಉಪಯೋಗಿಸಿ ನಮ್ಮ ಮನಸ್ಸನ್ನು ಕೆಟ್ಟದರಿಂದ ದೂರವಿರಿಸುವುದು. ಕೆಟ್ಟದ್ದನ್ನು ಮನಸ್ಸಿಗೆ ಪರಿಚಯ ಮಾಡಿಕೊಡದೇ ಇರುವುದು. ಹೀಗೆ ಯಾವುದು ನಮ್ಮ ಬೆಳವಣಿಗೆಗೆ ಬಾದಕವೋ ಅದನ್ನು ಮನಸ್ಸಿನಿಂದ ದೂರವಿಡುವುದು ವೈರಾಗ್ಯ. ಇದರ ಜೊತೆಗೆ ನಿರಂತರವಾಗಿ ಏಕಾಗ್ರತೆಗೆ ಬೇಕಾದ ಅಭ್ಯಾಸವನ್ನು ತಪ್ಪದೆ ಮಾಡುವುದು. ಇದರಿಂದ ನಾವು ಮನಸ್ಸನ್ನು ಖಂಡಿತವಾಗಿ ನಿಯಂತ್ರಿಸಬಹುದು ಎನ್ನುತ್ತಾನೆ ಕೃಷ್ಣ.
ಸಾಮಾನ್ಯವಾಗಿ ನಾವು ನಮ್ಮ ಮನಸ್ಸಿಗೆ ಪ್ರತೀ ದಿನ ಬೇಡದ ತರಬೇತಿಯನ್ನೇ ಕೊಡುತ್ತೇವೆ. ಉದಾಹರಣೆಗೆ ನಮ್ಮ ಅಮೂಲ್ಯವಾದ ಸಮಯದಲ್ಲಿ ದೂರದರ್ಶನದಲ್ಲಿ ಬರುವ ಯಾವುದೋ ದೈನಂದಿನ ದಾರಾವಾಹಿ, ಸಿನಿಮ ಇತ್ಯಾದಿ ವಿಷಯದಲ್ಲಿ ನಮ್ಮ ಮನಸ್ಸನ್ನು ಸಂಪೂರ್ಣ ತೊಡಗಿಸಿಕೊಳ್ಳುತ್ತೇವೆ. ನಮಗೆ ಆಧ್ಯಾತ್ಮಿಕ ಗ್ರಂಥಗಳನ್ನು ಓದಲು ಸಮಯವೇ ಇರುವುದಿಲ್ಲ! ದೇವರ ಪೂಜೆ ಮಾಡುವಾಗ ಕೂಡಾ ನಮಗೆ ಆ ದಾರಾವಾಹಿಯ ಮುಂದಿನ ಭಾಗದ ಚಿಂತೆ. ನಾವು ರಾತ್ರಿ ಮಲಗುವಾಗ ಯಾವುದೋ ಕೆಟ್ಟ ಪುಸ್ತಕವನ್ನು ಓದಿ, ಕೆಟ್ಟ ದಾರಾವಾಹಿಯನ್ನು ನೋಡಿ ಮಲಗುವ ಬದಲು, ಒಳ್ಳೆಯ ಅಧ್ಯಾತ್ಮಿಕ ಗ್ರಂಥವನ್ನು ಓದುವ ಅಭ್ಯಾಸವನ್ನು ಮಾಡಿಕೊಂಡು ನಮಗೆ ಬೇಡವಾದ ವಿಷಯದತ್ತ ವೈರಾಗ್ಯ ಸಾಧಿಸಬೇಕು. ಇದು ಕೇವಲ ಒಂದು ಉದಾಹರಣೆಯಷ್ಟೇ, ನಾವು ನಮ್ಮ ದೈನಂದಿನ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಇಂತಹ ಸಾವಿರ ಉದಾಹರಣೆಗಳು ಸಿಗುತ್ತವೆ.
ಮನಸ್ಸು ತನಗೆ ತಿಳಿಯದ ವಿಷಯದತ್ತ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ಒಮ್ಮೆ ರುಚಿ ನೋಡಿದರೆ ಅದು ನಿಮ್ಮನ್ನು ಬಿಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಮಧ್ಯ ಸೇವನೆ. ಎಂದೂ ಮಧ್ಯ ಸೇವನೆ ಮಾಡದವನಿಗೆ ಅದು ಅಸಹ್ಯ, ಆದರೆ ಒಮ್ಮೆ ಒತ್ತಾಯದಿಂದ ಬೇಡದ ಮಧ್ಯವನ್ನು ಸೇವಿಸಿ ನಮ್ಮ ಮನಸ್ಸಿಗೆ ಅದರ ಪರಿಚಯ ಮಾಡಿಸಿದಾಗ ನಮ್ಮ ಮನಸ್ಸು ಹೇಗೂ ಒಮ್ಮೆ ಕುಡಿದಿದ್ದೀಯ ಇನ್ನೊಮ್ಮೆ ಕುಡಿದರೆ ಏನೂ ಆಗುವುದಿಲ್ಲ-ಕುಡಿಎಂದು ಹೇಳುತ್ತದೆ! ಇದರ ಪರಿಣಾಮ ಏನು ಎನ್ನುವುದನ್ನು ಇಲ್ಲಿ ವಿವರಿಸಬೇಕಾಗಿಲ್ಲ.
ನಮ್ಮ ಇನ್ನೊಂದು ಮಹಾ ತಪ್ಪು ಎಂದರೆ ಬೇಡದ ವಿಷಯದಲ್ಲಿ ತಲೆ ಹಾಕುವುದು. ಯಾರೋ ಏನೋ ಮಾಡಿದರಂತೆ”-ಈ ರೀತಿ ಒಂದು ಮಾತು ನಮ್ಮ ಕಿವಿಗೆ ಬಿದ್ದಾಗ ನಾವು ನಮಗೆ ಆ ವಿಚಾರವನ್ನು ತಿಳಿಯುವುದರಿಂದ ಏನು ಉಪಯೋಗ ಎಂದು ಯೋಚಿಸದೆ ಆ ವಿಷಯಕ್ಕೆ ತಲೆ ಹಾಕುತ್ತೇವೆ. ಒಮ್ಮೆ ತಲೆ ಹಾಕಿದರೆ ಮತ್ತೆ ಮನಸ್ಸು ಅದನ್ನು ಬಿಡುವುದಿಲ್ಲ. ಎಲ್ಲವನ್ನೂ ಬಿಟ್ಟು ಆ ವಿಷಯದ ಬೆನ್ನು ಹತ್ತುತ್ತದೆ. ಆದ್ದರಿಂದ ಒಂದು ವಿಷಯಕ್ಕೆ ತಲೆ ಹಾಕುವ ಮೊದಲು ಆ ವಿಷಯದ ಬಗ್ಗೆ ಬುದ್ಧಿಪೂರ್ವಕವಾಗಿ ನಿರ್ಧಾರ ತೆಗೆದುಕೊಂಡು ಮನಸ್ಸು ಇಲ್ಲ ಸಲ್ಲದ ವಿಚಾರದ ಹಿಂದೆ ಓಡದಂತೆ ತಡೆಹಿಡಿಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಗ್ರೀಕ್ ದೇಶದ ಸೋಕ್ರಾಟೆಸ್ ಎನ್ನುವ ವಿಚಾರವಾಧಿಯ ಮೂರು ಹಂತದ ಸೋಸುವಿಕೆ ಎನ್ನುವ ಕಥೆ(The Socrates Triple Filter Test). ಒಮ್ಮೆ ಸೋಕ್ರಾಟೆಸ್ ನ ಒಬ್ಬ ಪರಿಚಯದ ವ್ಯಕ್ತಿ ಬಂದು ಸೋಕ್ರಾಟೆಸ್ ನಲ್ಲಿ ಈ ರೀತಿ ಹೇಳುತ್ತಾನೆ ನಾನು ನಿನ್ನ ಮಿತ್ರನ ಬಗ್ಗೆ ಏನು ಕೇಳಿದೆ ಗೊತ್ತಾ?( Do you know what I just heard about your friend?)” ಎಂದು. ತಕ್ಷಣ ಸೋಕ್ರಾಟೆಸ್ ಹೇಳುತ್ತಾನೆ ಸ್ವಲ್ಪ ನಿಲ್ಲು (Hold on a minute); ನೀನು ನನ್ನ ಮಿತ್ರನ ಬಗ್ಗೆ ಏನನ್ನಾದರೂ ಹೇಳುವ ಮೊದಲು ನಾನು ಮೂರು ವಿಚಾರವನ್ನು ತಿಳಿಯ ಬಯಸುತ್ತೇನೆ. ಮೊದಲಿಗೆ ನೀನು ಹೇಳಲು ಹೊರಟಿರುವ ವಿಚಾರದ ಬಗ್ಗೆ ನಿನಗೆ ನೈಜ ಮಾಹಿತಿ ಇದೆಯೋ?(Have you made absolutely sure that what you are about to tell me is true?)”. ಆಗ ಆ ವ್ಯಕ್ತಿ ಹೇಳುತ್ತಾನೆ ಇಲ್ಲ.... ಆದರೆ ನಾನು ಈ ವಿಚಾರವನ್ನು ಕೇಳಿಸಿಕೊಂಡೆ...(“No, actually I just heard about it and…)” ಎಂದು. ಈಗ ಸೋಕ್ರಾಟೆಸ್ ಕೇಳುತ್ತಾನೆ ಅಂದರೆ ನಿನಗೆ ಆ ವಿಚಾರ ಸರಿಯಾಗಿ ತಿಳಿದಿಲ್ಲ(So you don’t really know if it’s true or not), ಇರಲಿ, ನೀನು ಹೇಳಬೇಕೆಂದಿರುವ ವಿಚಾರ ತುಂಬಾ ಒಳ್ಳೆಯ ವಿಚಾರವೋ?( Is what you are about to tell me about my friend something good?)”. ಆಗ ಆ ವ್ಯಕ್ತಿ ಹೇಳುತ್ತಾನೆ ಅಲ್ಲ ಅದು ಒಳ್ಳೆಯ ವಿಚಾರವಲ್ಲ(No, on the contrary…)” ಎಂದು. ಕೊನೆಯದಾಗಿ ಸೋಕ್ರಾಟೆಸ್ ಕೇಳುತ್ತಾನೆ ನೀನು ಹೇಳಲು ಹೊರಟಿರುವ ವಿಚಾರ ನನಗೆ ಉಪಯೋಗಕ್ಕೆ ಬರುವ ವಿಚಾರವೋ?( Is what you want to tell me about my friend going to be useful to me?)”. ಆಗ ಆ ವ್ಯಕ್ತಿ ಹೇಳುತ್ತಾನೆ ಅಲ್ಲ (No, not really)” ಎಂದು. ಈಗ ಸೋಕ್ರಾಟೆಸ್ ಹೇಳುತ್ತಾನೆ ನೀನು ಹೇಳಲು ಹೊರಟಿರುವ ವಿಚಾರ ನಿಜವಲ್ಲ, ಒಳ್ಳೆಯ ವಿಚಾರವಲ್ಲ, ಉಪಯೋಗಕ್ಕೆ ಬರುವ ವಿಚಾರವಲ್ಲ ಮತ್ತೆ ಏಕೆ ನನಗೆ ಹೇಳುತ್ತೀಯ?( if what you want to tell me is neither true nor good nor even useful, why tell it to me at all)”.
ಸ್ನೇಹಿತರೆ, ಇಲ್ಲಿ ನಾವು ಕಲಿಯಬೇಕಾದ ವಿಚಾರವೇನೆಂದರೆ ಮನಸ್ಸನ್ನು ಇಲ್ಲ ಸಲ್ಲದ ವಿಚಾರದಲ್ಲಿ ತೊಡಗಿಸುವ ಮೊದಲು ವಿಷಯವನ್ನು ಮೂರು ಬಾರಿ ಸೋಸುವುದನ್ನು ಕಲಿಯಿರಿ. ಬೇಡದ ವಿಚಾರದಲ್ಲಿ ವೈರಾಗ್ಯವನ್ನು ತಾಳಿ ಮತ್ತು ಮನಸ್ಸನ್ನು ಏಕಾಗ್ರಮಾಡುವ ಸಾಧನೆಯನ್ನು ಮನಸ್ಸಿಗೆ ಅಭ್ಯಾಸ ಮಾಡಿಸಿ. ಈ ಮಾರ್ಗದಲ್ಲಿ ಸಾಗಿದವರಿಗೆ ಧ್ಯಾನಯೋಗ ಎಂದೂ ಅಸಾಧ್ಯವಲ್ಲ.
  • ಶ್ಲೋಕ - 36
ಅಸಂಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ ।
ವಶ್ಯಾತ್ಮನಾ ತು ಸತತಂ ಶಕ್ಯೋSವಾಪ್ತುಮಶೇಷತಃ ॥೩೬॥
ಅಸಂಯತ ಆತ್ಮನಾ ಯೋಗಃ ದುಷ್ಪ್ರಾಪಃ ಇತಿ ಮೇ ಮತಿಃ ।
ವಶ್ಯ ಆತ್ಮನಾ ತು ಸತತಂ ಶಕ್ಯಃ ಆವಾಪ್ತುಮ್ ಅಶೇಷತಃ ಬಗೆ ಬಿಗಿಗೊಳಿಸದವನಿಗೆ ಸಮಾಧಿ ಸಿಗುವಂತದ್ದಲ್ಲ ಎಂದು ನನ್ನ ತೀರ್ಮಾನ.ಬಗೆಯನ್ನು ಸದಾ ಹಿಡಿತದಲ್ಲಿಟ್ಟವನು ಸಮಗ್ರವಾಗಿ ಸಮಾಧಿಯನ್ನು ಸಾಧಿಸಬಲ್ಲ.
ಯಾರು ತನ್ನ ಸೋಮಾರಿತನದಿಂದ, ಕೆಟ್ಟ ಲೌಕಿಕ ಅಭಿಲಾಷೆಯಿಂದ ಈ ರೀತಿ ಪ್ರಯತ್ನ ಮಾಡುವುದಿಲ್ಲವೋ ಅವನಿಗೆ ಸಮಾಧಿ ಎಂದೂ ದಕ್ಕುವುದಿಲ್ಲ. ವೈರಾಗ್ಯ ಮತ್ತು ಅಭ್ಯಾಸವೆಂಬ ಉಪಾಯದಿಂದ ಮನಸ್ಸನ್ನು ಮಣಿಸಿ ನಮಗೆ ಬೇಕಾದಂತೆ ಆ ಮನಸ್ಸಿನಿಂದ ಕೆಲಸವನ್ನೂ ಮಾಡಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಸಮಾಧಿಯನ್ನು ಸಾಧಿಸಬಹುದು ಎನ್ನುವ ಭರವಸೆಯನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.
ಕೃಷ್ಣನ ಈ ಉತ್ತರದಲ್ಲಿ ನಮಗೆ ಧ್ಯಾನಕ್ಕೆ ಬೇಕಾದ ಉಪಾಯ ದೊರಕಿತು. ಆದರೆ ಈಗ ನಮ್ಮೆಲ್ಲರಿಗೆ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಅದೇನೆಂದರೆ ಸಂಸಾರದಲ್ಲಿರುವ ನಾವು ಒಂದು ವೇಳೆ ಸಾಧನೆಯ ಹಾದಿಯಲ್ಲಿ ಪೂರ್ಣ ಸಮಾಧಿಯನ್ನು ಸಾಧಿಸದೆ ಮಧ್ಯದಲ್ಲೇ ನಿಂತಿದ್ದರೆ ಅಥವಾ ಅರ್ಧ ಸಾಧನೆಯ ನಂತರ ನನ್ನ ಈ ಜನ್ಮ ಕೊನೆಗೊಡರೆ ಆಗ ನನ್ನ ಪಾಡೇನು? ಜನ್ಮದ ಸಾಧನೆ ವ್ಯರ್ಥವೋ? ನಾನು ಭಗವಂತನನ್ನು ಸೇರುವುದು ಅಸಾಧ್ಯವೋ? ನಮ್ಮ ಈ ಪ್ರಶ್ನೆಯನ್ನೇ ಮುಂದಿನ ಶ್ಲೋಕದಲ್ಲಿ ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ.
  • ಶ್ಲೋಕ - 37
ಅರ್ಜುನ ಉವಾಚ ।
ಅಯತಿಃ ಶ್ರದ್ಧಯೋಪೇತೋ ಯೋಗಾಚ್ಚಲಿತಮಾನಸಃ ।
ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ ೩೭॥
ಅರ್ಜುನ ಉವಾಚ-ಅರ್ಜುನ ಕೇಳಿದನು :
ಅಯತಿಃ ಶ್ರದ್ಧಯಾ ಉಪೇತಃ ಯೋಗಾತ್ ಚಲಿತ ಮಾನಸಃ
ಅಪ್ರಾಪ್ಯ ಯೋಗಸಂಸಿದ್ಧಿಮ್ ಕಾಮ್ ಗತಿಮ್ ಕೃಷ್ಣ ಗಚ್ಛತಿ ಕೃಷ್ಣ, ಶ್ರದ್ಧೆಯಿದೆ. ಪ್ರಯತ್ನಿಸುವುದಾಗಲಿಲ್ಲ. ಧ್ಯಾನಯೋಗದಿಂದ ಬಗೆ ಕದಲಿದೆ. ಯೋಗಸಿದ್ಧಿಯನ್ನು ಪಡೆಯಲಾಗದ ಇಂಥವನ ಪಾಡೇನು?
ಯೋಗದ ಸಾಧನೆಯಲ್ಲಿ ಸಾಧನೆ ಮಾಡಿದ, ಧ್ಯಾನ ಮಾಡುವುದಕ್ಕೂ ಪ್ರಯತ್ನ ಮಾಡಿದ, ಒಂದು ಹಂತದವರೆಗೆ ಶ್ರದ್ದೆಯಿಂದ ಏಕಾಗ್ರತೆಗೆ ಪ್ರಯತ್ನಿಸಿದ, ಯಾವುದೋ ಕಾರಣದಿಂದ ಪೂರ್ಣ ಗುರಿ ತಲುಪಲಿಲ್ಲ-ಅಂತವನ ಪಾಡೇನು? ಇಂತವರಿಗೆ ಸಿದ್ಧಿ ಲಭಿಸದೆ?
  • ಶ್ಲೋಕ - 38
ಕಚ್ಚಿನ್ನೋಭಯವಿಭ್ರಷ್ಟಶ್ಛಿನ್ನಾಭ್ರಮಿವ ನಶ್ಯತಿ
ಅಪ್ರತಿಷ್ಠೋ ಮಹಾಬಾಹೋ ವಿಮೂಢೋ ಬ್ರಹ್ಮಣಃ ಪಥಿ ೩೮॥
ಕಚ್ಚಿತ್ ನ ಉಭಯ ವಿಭ್ರಷ್ಟಃ ಛಿನ್ನ ಅಭ್ರಮ್ ಇವ ನಶ್ಯತಿ
ಅಪ್ರತಿಷ್ಠಃ ಮಹಾಬಾಹೋಃ ವಿಮೂಢಃ ಬ್ರಹ್ಮಣಃ ಪಥಿ ಓ ಮಹಾವೀರ, ನೆಲೆಗಾಣದೆ, ಭಗವಂತನ ದಾರಿಯಲ್ಲಿ ಗುರಿತಪ್ಪಿದ ಅವನು ಇಲ್ಲೂ ಇಲ್ಲದೆ ಅಲ್ಲೂ ಸಲ್ಲದೆ ತುಂಡು ಮೋಡದಂತೆ ಮರೆಯಾಗುವನೆ?
ಇಂತವರು ಇಹವೂ ಇಲ್ಲದೆ, ಪರವೂ ಇಲ್ಲದೆ, ಒಂದು ತುಣುಕು ಮೋಡದಂತೆ ಆ ಕಡೆ ನೆರಳೂ ಆಗದೆ, ಈಚೆ ಮಳೆಯೂ ಸುರಿಸದೆ ಯಾವುದಕ್ಕೂ ಉಪಯೋಗವಿಲ್ಲದೆ ವ್ಯರ್ಥವಾಗಿ ಹೋಗುವುದೋ ಅವರ ಬದುಕು? ಜ್ಞಾನ ಬಲ ಇಚ್ಛಾ ಸ್ವರೂಪನಾದ(ಮಹಾಬಾಹೋಃ) ನೀನು ಅಂತಹ ವಯವಿಭ್ರಷ್ಟರನ್ನು ಏನು ಮಾಡುತ್ತೀಯ?
  • ಶ್ಲೋಕ - 39
ಏತನ್ಮೇ ಸಂಶಯಂ ಕೃಷ್ಣ ಚ್ಛೇತ್ತುಮರ್ಹಸ್ಯಶೇಷತಃ
ತ್ವದನ್ಯಃ ಸಂಶಯಸ್ಯಾಸ್ಯ ಚ್ಛೇತ್ತಾ ನ ಹ್ಯುಪಪದ್ಯತೇ ॥೩೯॥
ಏತತ್ ಮೇ ಸಂಶಯಮ್ ಕೃಷ್ಣ ಚ್ಛೇತ್ತುಮ್ ಅರ್ಹಸಿ ಅಶೇಷತಃ
ತ್ವತ್ ಅನ್ಯಃ ಸಂಶಯಸ್ಯ ಅಸ್ಯ ಚ್ಛೇತ್ತಾ ನ ಹಿ ಉಪಪದ್ಯತೇ- ಕೃಷ್ಣ, ನನ್ನ ಈ ಗೊಂದಲವನ್ನು ಪೂರ್ತಿಯಾಗಿ ನೀನೆ ಪರಿಹರಿಸಬೇಕು. ನೀನಲ್ಲದೆ ಇನ್ನಾರೂ ಇಂಥ ಸಂಶಯವನ್ನು ಪರಿಹರಿಸಲಾರರು ಎಂದು ಅರ್ಜುನ ಕೃಷ್ಣನನ್ನು ಕೇಳುತ್ತಾನೆ.
  • ಶ್ಲೋಕ - 40
ಭಗವಾನುವಾಚ ।
ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ ।
ನಹಿ ಕಲ್ಯಾಣಕೃತ್ ಕಶ್ಚಿದ್ ದುರ್ಗತಿಂ ತಾತ ಗಚ್ಛತಿ ೪೦॥
ಭಗವಾನುವಾಚ-ಭಗವಂತ ಹೇಳಿದನು :
ಪಾರ್ಥ ನ ಏವ ಇಹ ನ ಅಮುತ್ರ ವಿನಾಶಃ ತಸ್ಯ ವಿದ್ಯತೇ ।
ನ ಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಮ್ ತಾತ ಗಚ್ಛತಿ- ಪಾರ್ಥ, ಅವನ ಸಾಧನೆ ವ್ಯರ್ಥವಲ್ಲ, ಇಹದಲ್ಲಿ ಮತ್ತು ಪರದಲ್ಲಿ. ಅಪ್ಪಾ(ತಾತ), ಒಳಿತನ್ನು ಮಾಡುವವನು ಎಂದೂ ಕೇಡನ್ನು ಪಡೆಯುವುದಿಲ್ಲ.
ಅರ್ಜುನನ ಪ್ರಶ್ನೆಗೆ ಕೃಷ್ಣನ ಉತ್ತರ ದೊಡ್ಡ ಭರವಸೆ. ಕೃಷ್ಣ ಹೇಳುತ್ತಾನೆ ಸಾಧನೆಯ ದಾರಿಯಲ್ಲಿ ಸಾಗಿದವರು ಇಹದಲ್ಲಿ ಅಥವಾ ಪರದಲ್ಲಿ ಏನನ್ನೂ ಕಳೆದುಕೊಳ್ಳುವುದಿಲ್ಲ. ಓ ನನ್ನ ಪ್ರೀತಿಯ ಮಿತ್ರನೇ, ಒಳ್ಳೆಯದನ್ನು ಮಾಡಿದವರು ಎಂದೂ ಕೆಟ್ಟದ್ದನ್ನು ಪಡೆಯುವುದಿಲ್ಲ. ಇದು ಪ್ರಕೃತಿಯ ನಿಯಮಎಂದು. ಇಲ್ಲಿ ಕೃಷ್ಣ ಅರ್ಜುನನನ್ನು ಪಾರ್ಥ ಎಂದು ಸಂಬೋದಿಸಿದ್ದಾನೆ. ಪಾರ್ಥ ಎಂದರೆ ಪಾರವನ್ನು(ದಡವನ್ನು) ತಿಳಿದವನು. ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟವನು ಒಮ್ಮೆಗೆ ಭಗವಂತನನ್ನು ಕಾಣದಿದ್ದರೂ ಕೂಡಾ ಆತ ಎಂದೂ ಮಧ್ಯದಲ್ಲಿ ಮುಳುಗುವುದಿಲ್ಲ. ಆತ ಸಾಧನೆಯ ಆಚೆ ದಡವನ್ನು ಸೇರಿಯೇ ಸೇರುತ್ತಾನೆ. ಒಳ್ಳೆಯದನ್ನು ಮಾಡಿದವರಿಗೆ ಒಳ್ಳೆಯ ಮಾರ್ಗವನ್ನು ತುಳಿದವರಿಗೆ ಎಂದೂ ಕೆಟ್ಟದ್ದಾಗುವುದಿಲ್ಲ. ನಮ್ಮಲ್ಲಿ ಕೆಲವರು ಹೇಳುವುದಿದೆ: ನಾನು ನನ್ನ ಜೀವನದಲ್ಲಿ ಎಂದೂ ಕೆಟ್ಟ ಕೆಲಸ ಮಾಡಿಲ್ಲ, ಯಾವತ್ತೂ ಒಬ್ಬರಿಗೆ ಕೇಡನ್ನು ಬಯಸಲಿಲ್ಲ, ಆದರೆ ಏಕೆ ದೇವರು ನನಗೆ ಹೀಗೆ ಮಾಡಿದ?” ಎಂದು. ನಾವು ಜೀವನದಲ್ಲಿ ಕೆಟ್ಟದ್ದನ್ನು ಮಾಡಿಲ್ಲ, ಕೆಟ್ಟದ್ದನ್ನು ಎಣಿಸಿಲ್ಲಎನ್ನುವುದು ಕೇವಲ ಈ ಜನ್ಮಕ್ಕೆ ಸೀಮಿತ. ಆದರೆ ಜೀವದ ಗತಿ ಅನಾದಿ ಅನಂತ. ಅದು ಜನ್ಮದಿಂದ ಜನ್ಮಕ್ಕೆ ಹರಿದು ಬರುವ ಪ್ರವಾಹ. ನಾವು ಈ ಜನ್ಮದಲ್ಲಿ ಒಂದು ದುರಂತ ಅಥವಾ ಕಷ್ಟಕ್ಕೆ ಒಳಗಾದರೆ ಅದಕ್ಕೆ ಕಾರಣಭೂತವಾಗಿರುವಂತಹ ಇನ್ನೊಂದು ಕ್ರಿಯೆ ನಮ್ಮಿಂದ ನಡೆದಿರಲೇ ಬೇಕು. ಕೆಟ್ಟದ್ದನ್ನು ಮಾಡದವನು ಕೆಟ್ಟದ್ದನ್ನು ಪಡೆಯುವುದಿಲ್ಲ. ಒಳ್ಳೆಯದನ್ನು ಮಾಡಿದವನು ಒಳ್ಳೆಯದನ್ನು ಪಡೆಯದೆ ಇರುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ಇದಕ್ಕೆ ಅಪವಾದವೇ ಇಲ್ಲ. ಅದು ಹೇಗೆ ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ.
  • ಶ್ಲೋಕ - 41
ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀಃ ಸಮಾಃ ।
ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋSಭಿಜಾಯತೇ ॥೪೧॥
ಪ್ರಾಪ್ಯ ಪುಣ್ಯಕೃತಾಮ್ ಲೋಕಾನ್ ಉಷಿತ್ವಾ ಶಾಶ್ವತೀಃ ಸಮಾಃ ।
ಶುಚೀನಾಮ್ ಶ್ರೀಮತಾಮ್ ಗೇಹೇ ಯೋಗ ಭ್ರಷ್ಟಃ ಅಭಿಜಾಯತೇ-ಇಂಥ ಯೋಗ ಭ್ರಷ್ಟನು ಪುಣ್ಯವಂತರ ಲೋಕಗಳನ್ನು ಪಡೆದು ಅಲ್ಲಿ ಬಹಳ ಕಾಲ ನೆಲಸಿ ಅನಂತರ ನಿರ್ಮಲರೂ ಸಿರಿವಂತರೂ ಆದವರ ಮನೆಯಲ್ಲಿ ಹುಟ್ಟುತ್ತಾನೆ.
ಯೋಗಭ್ಯಾಸ ಮಾಡಿ, ಭಗವಂತನ ಧ್ಯಾನಕ್ಕೆ ಪ್ರಯತ್ನಿಸಿ, ಕೆಲವು ಮೆಟ್ಟಲನ್ನೇರಿ ಯಾವುದೊ ಕಾರಣದಿಂದ, ಮನೋವಿಕ್ಷೇಪದಿಂದ ಅಥವಾ ಆಯಸ್ಸು ಮುಗಿದುದರಿಂದ, ಅಲ್ಲೇ ಅದನ್ನು ನಿಲ್ಲಿಸಿದವನ ಸಾಧನೆ ಎಂದೂ ವ್ಯರ್ಥವಲ್ಲ-ಇದು ಏಕೆ ಎನ್ನುವುದನ್ನು ಕೃಷ್ಣ ಹಿಂದಿನ ಅಧ್ಯಾಯದಲ್ಲೇ (ಅ-೨; ಶ್ಲೋ-೪೦) ಹೇಳಿದ್ದಾನೆ, ಅದಕ್ಕೆ ಒತ್ತು ಕೊಟ್ಟು ಇಲ್ಲಿ ಮತ್ತೆ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ ಸಾಧನೆ ಮಧ್ಯದಲ್ಲಿ ನಿಂತು ಹೋದರೆ ಏನೂ ತೊಂದರೆ ಇಲ್ಲ. ಏಕೆಂದರೆ ಅಂತವನು ದೇಹತ್ಯಾಗ ಮಾಡಿದ ಮೇಲೆ ಪುಣ್ಯವನ್ನು ಗಳಿಸಿದವರು ಪಡೆಯುವಂತಹ ಲೋಕವನ್ನು ಪಡೆಯುತ್ತಾನೆ. ಬಹಳ ಕಾಲದ ತನಕ ಅಲ್ಲಿ ಸುಖವನ್ನು ಅನುಭವಿಸಿ, ಮತ್ತೆ ಭೂಮಿಯಲ್ಲಿ ಸ್ವಚ್ಛವಾದ ಶ್ರೀಮಂತ ವೇದಜ್ಞರ ಮನೆಯಲ್ಲಿ ಆತ ಹುಟ್ಟುತ್ತಾನೆ. ಆತನಿಗೆ ಯಾವುದೇ ಐಹಿಕ ಭೋಗದ ಕೊರತೆ ಕಾಡದು. ಯೋಗಸಾಧನೆಗೆ ಬೇಕಾದ ಅತ್ಯುತ್ತಮ ವಾತಾವರಣ ಅವನಿಗೆ ದೊರೆಯುತ್ತದೆ.
  • ಶ್ಲೋಕ - 42
ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್ ।
ಏತದ್ಧಿ ದುರ್ಲಭತರಂ ಲೋಕೇ ಜನ್ಮ ಯದೀದೃಶಮ್ ೪೨॥
ಅಥವಾ ಯೋಗಿನಾಮ್ ಏವ ಕುಲೇ ಭವತಿ ಧೀಮತಾಮ್ । ಏತತ್ ಹಿ ದುರ್ಲಭ ತರಮ್ ಲೋಕೇ ಜನ್ಮ ಯತ್ ಈದೃಶಮ್-ಅಥವಾ ಬಲ್ಲವರಾದ ಯೋಗಿಗಳ ಮನೆತನದಲ್ಲಿ ಹುಟ್ಟುತ್ತಾನೆ. ಲೋಕದಲ್ಲಿ ಈ ಬಗೆಯ ಹುಟ್ಟು ತುಂಬ ದುರ್ಲಭವಾದದ್ದು.
ಮುಂದುವರಿದು ಕೃಷ್ಣ ಹೇಳುತ್ತಾನೆ: ಯೋಗ ಸಾಧಕರಲ್ಲದಿದ್ದರೆ ಯೋಗ ಸಿದ್ಧರ ಮನೆಯಲ್ಲಿ ಆತ ಜನಿಸುತ್ತಾನೆ. ಇದರಿಂದ ಗರ್ಭದಿಂದಲೇ ಆತನಿಗೆ ಯೋಗದ ದೀಕ್ಷೆಯಾಗುತ್ತದೆ. ಹಿಂದಿನ ಜನ್ಮದಲ್ಲಿ ಆತ ಸಾಧನೆಯ ಯಾವ ಮೆಟ್ಟಿಲನ್ನು ಹತ್ತಿದ್ದನೋ ಆ ಮೆಟ್ಟಿಲನ್ನು ಸುಲಭವಾಗಿ ಆತ ತಲುಪಿ ಅಲ್ಲಿಂದ ಮುಂದಿನ ಸಾಧನೆ ಮಾಡುವ ಅವಕಾಶ ಅವನಿಗೆ ಸಿಗುತ್ತದೆ. ಇದು ಅಧ್ಯಾತ್ಮ ಸಾಧನೆಯಲ್ಲಿನ ವಿಶೇಷ. ಒಂದು ಜನ್ಮದಲ್ಲಿ ಎರಡು ಮೆಟ್ಟಿಲು ಹತ್ತಿದರೆ ಮುಂದಿನ ಜನ್ಮದಲ್ಲಿ ನೇರವಾಗಿ ಮೂರನೇ ಮೆಟ್ಟಿಲಿಗೆ ಹೆಜ್ಜೆ. ಈ ಕಾರಣದಿಂದ ಯಾವ ಸಾಧನೆಯೂ ವ್ಯರ್ಥವಲ್ಲ- ಈ ಬಗ್ಗೆ ಎಂದೂ ನಿರಾಶೆಪಡಬೇಕಾಗಿಲ್ಲ. ಈ ರೀತಿ ಪಕ್ವವಾದ ಜೀವ ಯೋಗಸಿದ್ಧರ ಮನೆಯಲ್ಲಿ ಹುಟ್ಟುವುದರಿಂದ ಆತನಿಗೆ ಅಲ್ಲಿ ಅನುವಂಶೀಯ ಸಾತ್ವಿಕ ಸೆಳೆತ (genetic force) ಮತ್ತು ಅದಕ್ಕೆ ಬೇಕಾದ ವಾತಾವರಣ (Environmental forces)ಸಿಗುತ್ತದೆ ಮತ್ತು ಆತ ಅಲ್ಲಿ ತನ್ನ ಸಾಧನೆಯನ್ನು ಮುಂದುವರಿಸುತ್ತಾನೆ. ಲೋಕದಲ್ಲಿ ಯೋಗಸಿದ್ಧರ ಮನೆಯಲ್ಲಿ ಹುಟ್ಟು ಬಹಳ ದುರ್ಲಭ. ಸಾಧನೆಯ ಹಾದಿಯಲ್ಲಿ ಎತ್ತರಕ್ಕೆರಿದವರಿಗೆ ಮಾತ್ರ ಈ ಭಾಗ್ಯ.
  • ಶ್ಲೋಕ - 43
ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೈಹಿಕಮ್
ಯತತೇ ಚ ತತೋ ಭೂಯಃ ಸಂಸಿದ್ಧೌ ಕುರುನಂದನ ೪೩॥
ತತ್ರ ತಮ್ ಬುದ್ಧಿಸಂಯೋಗಮ್ ಲಭತೇ ಪೌರ್ವ ದೈಹಿಕಮ್
ಯತತೇ ಚ ತತಃ ಭೂಯಃ ಸಂಸಿದ್ಧೌ ಕುರುನಂದನ-ಈ ಜನ್ಮದಲ್ಲು ಹಿಂದಿನ ಜನ್ಮದ ವಿವೇಕದ ನಂಟನ್ನು ಮರಳಿ ಪಡೆಯುತ್ತಾನೆ. ಕುರುಕುಮಾರ, ಮತ್ತೆ ಮರಳಿ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ.
ಹಿಂದಿನ ಜನ್ಮದಲ್ಲಿ ಅವನು ಏನು ಸಾಧನೆ ಮಾಡಿದ್ದ ಅವೆಲ್ಲವೂ ಸ್ತುಪ್ತಪ್ರಜ್ಞೆಯಲ್ಲಿ ಹುದುಗಿದ್ದು ಅದಕ್ಕೆ ಅನುಗುಣವಾದ ವಾತಾವರಣ ಸಿಕ್ಕ ತಕ್ಷಣ ಅದು ಜಾಗೃತವಾಗುತ್ತದೆ. ಈ ಜನ್ಮದ ಬೆಳವಣಿಗೆ ಹಿಂದಿನ ಜನ್ಮದ ಬೆಳವಣಿಗೆಯ ಉತ್ತರಾರ್ಧವಾಗುತ್ತದೆ. ಒಂದು ವೇಳೆ ಹಿಂದಿನ ಜನ್ಮದಲ್ಲಿ ಹೆಚ್ಚು ಬೆಳವಣಿಗೆ ಆಗದೇ ಇದಿದ್ದರೆ ಇಲ್ಲಿ ಅದನ್ನು ಪ್ರಾರಂಭಿಸಬೇಕೇ ಹೊರತು ಅದಕ್ಕಾಗಿ ಗಾಬರಿಪಡುವ ಅವಶ್ಯಕತೆ ಇಲ್ಲ. ಪೂರ್ವ ಜನ್ಮದ ಸಂಸ್ಕಾರ ಸದಾ ನಮ್ಮೊಂದಿಗಿರುತ್ತದೆ ಹಾಗು ಆ ಸಂಸ್ಕಾರದೊಂದಿಗೆ ನಾವು ಸಾಧನೆಯ ಹಾದಿಯಲ್ಲಿ ಮುಂದುವರಿಯಬೇಕು. ಧ್ಯಾನಯೋಗವೆಂಬುವುದು ಒಂದು ಜನ್ಮದ ಸಾಧನೆಯಲ್ಲ.
  • ಶ್ಲೋಕ - 44
ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋSಪಿ ಸಃ
ಜಿಜ್ಞಾಸುರಪಿ ಯೋಗಸ್ಯ ಶಬ್ದಬ್ರಹ್ಮಾತಿವರ್ತತೇ ॥೪೪॥
ಪೂರ್ವ ಅಭ್ಯಾಸೇನ ತೇನ ಏವ ಹ್ರಿಯತೇ ಹಿ ಅವಶಃ ಅಪಿ ಸಃ
ಜಿಜ್ಞಾಸುಃ ಅಪಿ ಯೋಗಸ್ಯ ಶಬ್ದಬ್ರಹ್ಮ ಅತಿವರ್ತತೇ ಹಿಂದಿನ ಅಭ್ಯಾಸ ಬಲದಿಂದ ಅವನಿಗರಿವಿಲ್ಲದೆಯೆ,ಅವನ ಬಗೆ ಅತ್ತ ಹರಿಯುತ್ತದೆ. ಧ್ಯಾನಯೋಗವನ್ನು ತಿಳಿಯಬಯಸಿದವನು ಕೂಡ ಶಬ್ದಬ್ರಹ್ಮದಾಚೆಗಿರುವ ಪರಬ್ರಹ್ಮನನ್ನು ಸೇರುತ್ತಾನೆ.
ಒಂದು ವೇಳೆ ವೇದಜ್ಞರ ಮನೆಯಲ್ಲಿ ಹುಟ್ಟದೇ ಇದ್ದರೂ ಕೂಡ ಹಿಂದಿನ ಜನ್ಮದ ಸಾಧನೆಯ ಫಲದಿಂದ ನಮಗರಿವಿಲ್ಲದಂತೆ ನಮ್ಮ ಮನಸ್ಸು ಸಾಧನೆಯತ್ತ ಹರಿಯುತ್ತದೆ. ಪ್ರಹಲ್ಲಾದನ ಮತ್ತು ಪಿಂಗಳೆಯ ಕಥೆ ಇದಕ್ಕೆ ಉತ್ತಮ ದೃಷ್ಟಾಂತ. ಅಂತರಂಗದಲ್ಲಿ ಸದಾ ಅಧ್ಯಾತ್ಮದ ಬಗ್ಗೆ ತುಡಿತ, ಅತ್ಯಂತ ಉತ್ಕಟವಾದ ಕಳಕಳಿ ಇದ್ದರೆ ಅವರು ಶಾಸ್ತ್ರ ಓದಿದವರನ್ನು ಮೀರಿ ಎತ್ತರಕ್ಕೆರುತ್ತಾರೆ.
  • ಶ್ಲೋಕ - 45
ಪ್ರಯತ್ನಾದ್ ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಿಷಃ ।
ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಮ್ ೪೫॥
ಪ್ರಯತ್ನಾತ್ ಯತಮಾನಃ ಟು ಯೋಗೀ ಸಂಶುದ್ಧ ಕಿಲ್ಬಿಷಃ ।
ಅನೇಕ ಜನ್ಮಸಂಸಿದ್ಧಃ ತತಃ ಯಾತಿ ಪರಾಮ್ ಗತಿಮ್-ಧ್ಯಾನದಲ್ಲಿ ತೊಡಗುವ ಸಾಧಕ ಪ್ರಯತ್ನದ ಫಲವಾಗಿ ಬಗೆಯ ಕಿಲುಬು ಕಳೆದುಕೊಂಡು ಅನೇಕ ಜನ್ಮಗಳ ಸಾಧನೆಯಿಂದ ಸಿದ್ಧಿ ಪಡೆದು ಹಿರಿಯ ನೆಲೆಯಾದ ಭಗವಂತನನ್ನು ಸೇರುತ್ತಾನೆ.
ಹಿಂದೆ ಹೇಳಿದಂತೆ ನಮ್ಮ ಸಾಧನೆ ಅನೇಕ ಜನ್ಮಗಳದ್ದು. ಮೊದಲು ನಮ್ಮಲ್ಲಿ ಇಚ್ಛೆ ಹುಟ್ಟಿತು, ಅದರಿಂದ ಆ ಇಚ್ಛೆ ಪೂರ್ಣವಾಗುವ ವಾತವರಣವನ್ನು ಮುಂದಿನ ಜನ್ಮದಲ್ಲಿ ಭಗವಂತ ಕೊಟ್ಟ, ಅಲ್ಲಿ ಪ್ರಯತ್ನ ಮಾಡಿ ಒಳಗಿನ ಕೊಳೆ ತೊಳೆಯಿತು, ಸಾಧನೆಯಿಂದ ಸ್ವಚ್ಛವಾದ ಜ್ಞಾನ ಬಂತು. ಈ ಜ್ಞಾನ ಮತ್ತು ಸಾಧನೆಯಿಂದ ಅನೇಕ ಜನ್ಮಗಳ ನಂತರ ಶಬ್ದಬ್ರಹ್ಮನನ್ನು ಮೀರಿ ಭಗವಂತನನ್ನು ಕಾಣಲು ಸಾಧ್ಯ. ಹೀಗೆ ಅಂತರಂಗದಲ್ಲಿ ಉತ್ಕಟವಾದ ಕಳಕಳಿ ಉಳ್ಳ ಜಿಜ್ಞಾಸು ಶಾಸ್ತ್ರ ಪಂಡಿತರನ್ನು ಮೀರಿ ಮೋಕ್ಷವನ್ನು ತಲುಪಬಲ್ಲ.
ಸಾಧನೆಯಲ್ಲಿ ಬಹಳ ಮುಖ್ಯವಾದದ್ದು ಅಂತರಂಗ ಪ್ರಪಂಚದ ಸಾಧನೆ. ಹೊರಗಡೆ ಸ್ನಾನ, ಪೂಜೆ, ಹೋಮ, ಹವನ, ಏನೇ ಮಾಡಿದರೂ ಕೂಡಾ ಅದಕ್ಕಿಂತ ಮಿಗಿಲಾದದ್ದು ಅಂತರಂಗ ಪ್ರಪಂಚ. ಇದನ್ನು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ ಕೃಷ್ಣ.
  • ಶ್ಲೋಕ - 46
ತಪಸ್ವಿಭ್ಯೋSಧಿಕೋ ಯೋಗೀ ಜ್ಞಾನಿಭ್ಯೋಪಿ ಮತೋಧಿಕಃ
ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ ಯೋಗೀ ಭವಾರ್ಜುನ ॥೪೬॥
ತಪಸ್ವಿಭ್ಯಃ ಅಧಿಕಃ ಯೋಗೀ ಜ್ಞಾನಿಭ್ಯಃ ಅಪಿ ಮತಃ ಅಧಿಕಃ ।
ಕರ್ಮಿಭ್ಯಃ ಚ ಅಧಿಕಃ ಯೋಗೀ ತಸ್ಮಾತ್ ಯೋಗೀ ಭವ ಅರ್ಜುನ-ಧ್ಯಾನ ಯೋಗದ ಸಾಧಕ ಉಪವಾಸ ಮೊದಲಾದ ವ್ರತಸಾಧಕರಿಗಿಂತ ಮಿಗಿಲು; ಬರಿಯ ಧ್ಯಾನಯೋಗದ ಬಗೆಯನ್ನು ಬಲ್ಲವರಿಗಿಂತಲೂ ಮಿಗಿಲು ಎನ್ನುವುದು ತೀರ್ಮಾನ. ಕರ್ಮ ಯೋಗಿಗಳಿಗಿಂತಲು ಮಿಗಿಲು. ಆದ್ದರಿಂದ ಓ ಅರ್ಜುನ , ನೀನು ಧ್ಯಾನಯೋಗಿಯಾಗು.
ಯಾರು ಅಂತರಂಗದಲ್ಲಿ ಏಕಾಗ್ರವಾಗಿ ಭಗವಂತನನ್ನು ಧ್ಯಾನಿಸಬಲ್ಲ ಅವನು ತಪಸ್ಸು ಮಾಡುವವನಿಗಿಂತ ದೊಡ್ಡವ ಎನ್ನುತ್ತಾನೆ ಕೃಷ್ಣ. ಇಲ್ಲಿ ತಪಸ್ಸು ಎಂದರೆ ನಾವು ಮಾಡುವ ವೃತಾಚರಣೆ. ದೇಹ ದಂಡನೆ, ಏಕಾದಶಿ ಉಪವಾಸ, ಬ್ರಹ್ಮಚರ್ಯಪಾಲನೆ ಇತ್ಯಾದಿ. ಬಾಹ್ಯವಾದ ನೂರಾರು ವೃತಾಚರಣೆ, ಹೋಮ-ಹವನ ಮಾಡುವವರಿಗಿಂತಲೂ ಅಂತರಂಗದಲ್ಲಿ ಧ್ಯಾನ ಮಾಡತಕ್ಕವನು ಭಗವಂತನಿಗೆ ಹೆಚ್ಚು ಪ್ರಿಯ. ಅವನು ಜ್ಞಾನಿಗಳಿಗಿಂತಲೂ ದೊಡ್ಡವನು ಎನ್ನುತ್ತಾನೆ ಕೃಷ್ಣ. ಅಂದರೆ ಧ್ಯಾನದ ಬಗ್ಗೆ, ಶಾಸ್ತ್ರದ ಬಗ್ಗೆ ಕೇವಲ ತಿಳಿದಿರುವವರಿಗಿಂತ ಧ್ಯಾನ ಮಾಡುವವನು ದೊಡ್ಡವನು. ಇಂದು ಅಧ್ಯಾತ್ಮದ ಬಗ್ಗೆ ಮಾತನಾಡುವವರು ಸಿಗುತ್ತಾರೆ ಹೊರತು ನಿಜವಾದ ಧ್ಯಾನ ಯೋಗಿಗಳು ಅತೀ ವಿರಳ("There are nowadays professors of philosophy, but not philosophers”- Henry David Thoreau, Walden).
ನಮ್ಮಲ್ಲಿ ಕೆಲವರು ಕರ್ಮಟರು. ಯಜ್ಞ-ಯಾಗ ಮಾಡುವುದು, ಅಗ್ನಿ ಮುಖೇನ ಭಗವಂತನ ಆರಾದನೆ ಮಾಡುವವರು. ಅಂತರಂಗದಲ್ಲಿ ಭಗವಂತನನ್ನು ಕಾಣುವುದಕ್ಕೊಸ್ಕರ ಈ ಕರ್ಮ. ಇದೇ ರೀತಿ ಪ್ರತಿಮಾಪೂಜೆ. ನಮ್ಮ ಪೂಜೆ ಕೇವಲ ದೇವರ ಪ್ರತಿಮೆಗೆ ಮೀಸಲಾಗದೆ ಅದು ಅಂತರಂಗದಲ್ಲಿ ಭಗವಂತನನ್ನು ಕಾಣಲು ಸಹಾಯ ಮಾಡುವ ಸಂಕೇತ ಎನ್ನುವ ಜ್ಞಾನ ನಮಗಿರಬೇಕು. ಮಾನಸ ಪೂಜೆ ಇಲ್ಲದೆ ಬಾಹ್ಯ ಪೂಜೆ ಪೂಜೆಯೇ ಅಲ್ಲ. ಆದ್ದರಿಂದ ಬರೇ ಕರ್ಮಾಟನಾಗಿ ಬಾಹ್ಯ ಪೂಜೆ ಮಾಡುವವನಿಗಿಂತ ಮಾನಸ ಪೂಜೆ ಮಾಡುವ ಧ್ಯಾನಯೋಗಿ ದೊಡ್ಡವ. ಆದ್ದರಿಂದ ನೀನು ಜೀವನದಲ್ಲಿ ಧ್ಯಾನಯೋಗಿಯಾಗು, ಅಂತರಂಗದ ಧ್ಯಾನದಲ್ಲಿ ತೊಡಗು. ಆ ಧ್ಯಾನದಲ್ಲಿ ತೊಡಗಿದ ಮೇಲೆ ನಿನ್ನ ಬಾಹ್ಯ ಕರ್ಮಗಳು ನಿನಗೆ ಲೇಪವಾಗುವುದಿಲ್ಲ. ಆಗ ಯುದ್ಧವೂ ಕೂಡಾ ಭಗವದ್ ಪೂಜೆಯಾಗುತ್ತದೆಎನ್ನುವುದು ಅರ್ಜುನನಿಗೆ ಕೃಷ್ಣನ ಸಂದೇಶ
  • ಶ್ಲೋಕ - 47
ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ ।
ಶ್ರದ್ಧಾವಾನ್ ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ ॥೪೭॥
ಯೋಗಿನಾಮ್ ಅಪಿ ಸರ್ವೇಷಾಮ್ ಮತ್ ಗತೇನ ಅಂತಃ ಆತ್ಮನಾ
ಶ್ರದ್ಧಾವಾನ್ ಭಜತೇ ಯಃ ಮಾಮ್ ಸಃ ಮೇ ಯುಕ್ತ ತಮಃ ಮತಃ ನನ್ನಲ್ಲಿ ಒಳಬಗೆಯನ್ನಿರಿಸಿ ಶ್ರದ್ಧೆಯಿಂದ ನನ್ನನ್ನು ಸೇವಿಸುವವನು ಇತರ ಎಲ್ಲ ಧ್ಯಾನಯೋಗಿಗಳಿಗಿಂತಲು ಹಿರಿಯ ಯೋಗಿ ಎಂದು ನನ್ನ ತೀರ್ಮಾನ.
ಧ್ಯಾನವನ್ನು ಮಾಡುವಾಗ ನಾವು ಮನಸ್ಸನ್ನು ಯಾವುದರಮೇಲೆ ಕೂಡ ಏಕಾಗ್ರ ಮಾಡಿ ಧ್ಯಾನ ಮಾಡಬಹುದು. ಕೆಲವರು ಅನೇಕ ಕ್ಷುದ್ರ ದೇವತೆಗಳು, ಭೂತ-ಪ್ರೇತಗಳನ್ನು ಉಪಾಸನೆ ಮಾಡುವವರಿದ್ದಾರೆ. ಆದರೆ ಕೃಷ್ಣ ಹೇಳುತ್ತಾನೆ ಯಾರು ಭಗವಂತನಲ್ಲೇ ಮನಸ್ಸನ್ನಿಟ್ಟು ಧ್ಯಾನ ಮಾಡುತ್ತಾರೋ ಅವರು ಎಲ್ಲರಿಗಿಂತ ಹಿರಿಯ ಯೋಗಿಎಂದು. ಭಗವಂತನನ್ನು ಬಿಟ್ಟು ಇನ್ನೇನನ್ನೋ ಧ್ಯಾನ ಮಾಡಿದರೆ ಏನೂ ಉಪಯೋಗವಿಲ್ಲ. ನಮ್ಮ ಜೋತಿಷಿಗಳು ಸಾಮಾನ್ಯವಾಗಿಇಂತಹ ಗ್ರಹಚಾರಕ್ಕೆ ಇಂತಹ ದೇವತೆಯನ್ನು ಉಪಾಸನೆ ಮಾಡುಎಂದು ಹೇಳುತ್ತಾರೆ. ಅದರರ್ಥ ಭಗವಂತನನ್ನು ಆ ಪ್ರತೀಕದಲ್ಲಿ ಕಾಣು ಎಂದರ್ಥ. ಯಾವುದೇ ದೇವತೆಯನ್ನು ಉಪಾಸನೆ ಮಾಡುವಾಗ ಆ ಪ್ರತೀಕದಲ್ಲಿ ಭಗವಂತನ ಉಪಾಸನೆ ಮಾಡದಿದ್ದರೆ ಅದು ನಿಜವಾದ ಯೋಗವಾಗುವುದಿಲ್ಲ. ಧ್ಯಾನದಲ್ಲಿ ಕೇವಲ ಭಗವಂತನನ್ನು ಕಾಣಬೇಕು ಎನ್ನುವ ಬಯಕೆ ಮತ್ತು ಎಲ್ಲಾ ಪ್ರತೀಕದಲ್ಲೂ ಅವನನ್ನೇ ಕಾಣುವುದು ಶ್ರೇಷ್ಠವಾದ ಯೋಗ. ಈ ರೀತಿ ಬದುಕಿದಾಗ ನಮ್ಮ ಬದುಕೇ ಒಂದು ಯೋಗವಾಗುತ್ತದೆ.
ಇತಿ ಷಷ್ಠೋSಧ್ಯಾಯಃ
ಆರನೆಯ ಅಧ್ಯಾಯ ಮುಗಿಯಿತು
ಇಲ್ಲಿಗೆ ಭಗವದ್ಗೀತೆಯ ಮೊದಲ ಷಟ್ಕ(ಮೊದಲ ಆರು ಅಧ್ಯಾಯ) ಮುಗಿಯಿತು. ಈ ಷಟ್ಕದಲ್ಲಿ ಭಗವಂತನ ಉಪಾಸನೆಯ ಜ್ಞಾನ ಮತ್ತು ಸಾಂಖ್ಯವನ್ನು ಕೃಷ್ಣ ವಿವರಿಸಿದ. ಜ್ಞಾನಪೂರ್ವಕವಾಗಿ ಭಗವದುಪಾಸನೆಯನ್ನು ಮಾಡುವಂತಹ ವಿಧಾನವನ್ನು ಗೀತೆಯ ಮೊದಲ ಷಟ್ಕ ವಿವರಿಸುತ್ತದೆ. ಮುಂದೆ ಭಗವಂತನನ್ನು ಉಪಾಸನೆ ಮಾಡುವ ವಿಷಯಾಂಶ(aspect) ಮತ್ತು ಭಗವಂತನ ಮಹಿಮೆ-ಅದರ ವಿವರಗಳು ಬರುತ್ತವೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.