ಭಗವದ್ಗೀತೆ ಅಧ್ಯಾಯ-9 (ಶ್ಲೋಕ 16 ರಿಂದ 34)

 ಭಗವದ್ಗೀತೆ ಅಧ್ಯಾಯ-9 (ಶ್ಲೋಕ 16 ರಿಂದ 34)
·  ಶ್ಲೋಕ - 16
ಭಗವಂತನನ್ನು ಹೇಗೆ ಅನುಸಂಧಾನ ಮಾಡಬೇಕು, ಹೇಗೆ ಮಾಡಬಾರದು ಎನ್ನುವ ಅರಿವನ್ನು ಕೊಟ್ಟ ಕೃಷ್ಣ, ಮುಂದೆ ಭಗವಂತನ ವಿಭೂತಿಯನ್ನು ಬೇರೆ ಬೇರೆ ಪ್ರತೀಕಗಳಲ್ಲಿ ಹೇಗೆ ಅನುಸಂಧಾನ ಮಾಡಬೇಕು ಎನ್ನುವುದನ್ನು ವಿವರಿಸುತ್ತಾನೆ. ಇಡೀ ವಿಶ್ವದ ಅಣು ಕಣಗಳಲ್ಲಿ ತುಂಬಿರುವ ಭಗವಂತನ ಅನುಸಂಧಾನ ಹಾಗು ಅದರ ವಿಶಿಷ್ಟ ಉಪಾಸನೆಯ ವಿವರವನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ವಿವರಿಸಿದ್ದಾನೆ. ಬನ್ನಿ ಈ ಅಪೂರ್ವ ವಿಶಿಷ್ಟ ಜ್ಞಾನವನ್ನು ಭಗವಂತನಿಂದಲೇ ಕೇಳಿ ತಿಳಿದು ಕೃತಾರ್ಥರಾಗೋಣ.
ಅಹಂ ಕ್ರತುರಹಂ ಯಜ್ಞಃ ಸ್ವಧಾSಹಮಹಮೌಷಧಮ್ ।
ಮಂತ್ರೋSಹಮಹಮೇವಾSಜ್ಯಮಹಮಗ್ನಿರಹಂ ಹುತಮ್ ॥೧೬॥
ಅಹಮ್ ಕ್ರತುಃ ಅಹಮ್ ಯಜ್ಞಃ ಸ್ವಧಾ ಅಹಮ್ ಔಷಧಮ್ ।
ಮಂತ್ರಃ ಅಹಮ್ ಅಹಮ್ ಏವ ಆಜ್ಯಮ್ ಅಹಮ್ ಅಗ್ನಿಃ ಅಹಮ್ ಹುತಮ್- ನನ್ನಿಂದ ಯಾಗ. [ನನ್ನ ಕ್ರಿಯೆ ನನ್ನ ಸ್ವರೂಪವಾದ್ದರಿಂದ ನಾನು ಕ್ರತು’]. ನನ್ನಿಂದ ಹವನ ಕ್ರಿಯೆ.[ಎಲ್ಲ ಬಲ್ಲವನಾದ್ದರಿಂದ ಯಜ್ಞ’]. ಪಿತೃಗಳ ಅನ್ನ ನನ್ನಿಂದ [ನನಗೆ ನಾನೆ ಆಸರೆಯಾದ್ದರಿಂದ ಸ್ವಧಾ’]. ನನ್ನಿಂದ ಮನುಷ್ಯರ ಆಹಾರ[ಬೆಂದವರಿಗೆ ಆಸರೆಯಾದ್ದರಿಂದಔಷಧ’]. ಮಂತ್ರ ನನ್ನಿಂದ[ತಿಳಿವಿತ್ತು ಸಲಹುದರಿಂದ ಮಂತ್ರ’]. ನನ್ನಿಂದಲೆ ತುಪ್ಪ [ಎಲ್ಲಕ್ಕಿಂತ ಹಿರಿಯನಾದ್ದರಿಂದ ಆಜ್ಯ’]. ನನ್ನಿಂದ ಬೆಂಕಿ.[ನಾನೆ ಚಲಿಸದ ವಿಶ್ವಕ್ಕೆ ಚಲನೆ ನೀಡುವುದರಿಂದ ಅಗ್ನಿ’]. ನನ್ನಿಂದ ಹೋಮದ ಹವಿ[ಭಕ್ತರು ಕರೆವುದರಿಂದ ನಾನೆಹುತ’].
ಭಗವಂತನ ಉಪಾಸನೆಗೆ ಮೂರು ಪ್ರತೀಕವನ್ನು ಶಾಸ್ತ್ರಕಾರರು ಹೇಳಿದ್ದಾರೆ. ವೇದದಲ್ಲಿ ಆ ಮೂರು ಪ್ರತೀಕಗಳಿಂದ ಉಪಾಸನೆಯೇ ನಮಗೆ ಎಲ್ಲಾ ಕಡೆ ಸಿಗುವುದು. ಅವುಗಳೆಂದರೆ ಅಗ್ನಿಪ್ರತೀಕ, ವಾಯುಪ್ರತೀಕ ಮತ್ತು ಆದಿತ್ಯಪ್ರತೀಕ. ಭೂಸ್ತರದಲ್ಲಿ ಭಗವಂತನ ಉಪಾಸನೆ ಅಗ್ನಿಪ್ರತೀಕದಲ್ಲಿ. ಅಂತರಿಕ್ಷ ಸ್ತರದಲ್ಲಿ ಆದಿತ್ಯ ಮುಖದಲ್ಲಿ ಮತ್ತು ಅಂತರಂಗದಲ್ಲಿ ಭಗವಂತನ ಉಪಾಸನೆ ವಾಯುವಿನ ಪ್ರತೀಕದಲ್ಲಿ. ಭೂಮಿಯಲ್ಲಿ ಸಾಮಾನ್ಯವಾಗಿ ಮನುಷ್ಯರು ಜ್ಞಾನಮಾರ್ಗಕ್ಕಿಂತ ಹೆಚ್ಚು ಕರ್ಮ ಮಾರ್ಗಕ್ಕೆ ಅಂಟಿಕೊಂಡವರು. ಇಂಥವರಲ್ಲಿ ಜ್ಞಾನಕ್ಕಿಂತ ಕರ್ಮಕ್ಕೆ ಒತ್ತು ಹೆಚ್ಚು. ಕೆಲವರು ಬೆಳಿಗ್ಗೆಯಿಂದ ಸಂಜೆ ತನಕ ಪೂಜೆ ಮಾಡುತ್ತಾರೆ, ಆದರೆ ತಾವು ಮಾಡುವ ಅನುಷ್ಠಾನದ ಜ್ಞಾನವೇ ಅವರಿಗಿರುವುದಿಲ್ಲ. ಇವರಿಗೆ ಜ್ಞಾನ ಸಂಪಾದನೆ ದ್ವಿತೀಯಕ(Secondary). ಇದು ಮನುಷ್ಯನ ದೌರ್ಬಲ್ಯ. ನಮಗೆ ನಮ್ಮ ಮಡಿವಂತಿಕೆಯಲ್ಲಿರುವಷ್ಟು ಒತ್ತು ಜ್ಞಾನದಲ್ಲಿರುವುದಿಲ್ಲ! ತಿಳಿಯದ ಬಾಹ್ಯಾನುಷ್ಠಾನದಲ್ಲಿ ಕಾಲಹರಣ ಮಾಡುವುದಕ್ಕಿಂತ ಪಾಠ ಪ್ರವಚನದಿಂದ ಸ್ವಲ್ಪಮಟ್ಟಿನ ಜ್ಞಾನ ಗಳಿಸಿಕೊಳ್ಳುವುದು ದೇವರು ಮೆಚ್ಚುವ ಮಹಾ ಪೂಜೆ ಎನಿಸುತ್ತದೆ.
ಕರ್ಮ ಪ್ರಧಾನವಾಗಿರುವವರಿಗೆ ಭಗವಂತನ ಅನುಷ್ಠಾನ ಹೇಗಿರಬೇಕು ಎನ್ನುವುದನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ: ಅಹಮ್ ಕ್ರತುಃ ಅಹಮ್ ಯಜ್ಞಃಎಂದು. ಭಗವಂತನ ಆರಾದನೆಗೊಸ್ಕರ ಮಾಡತಕ್ಕಂತಹ ಅಗ್ನಿ ಆರಾದನೆಯ ಪ್ರಕ್ರಿಯೆ ಕ್ರತು’. ಇಲ್ಲಿ ಯಜ್ಞದ ಮೂಲಕ ಭಗವಂತನಿಗೆ ಆಹುತಿ ಕೊಡುವಾಗ ಈ ರೀತಿ ಹೇಳಿ ಆಹುತಿ ಕೊಡುತ್ತೇವೆ: ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ; ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ; ಇಂದ್ರಾಯ ಸ್ವಾಹಾ-ಇಂದ್ರಾಯ ಇದಂ ನ ಮಮ; ಸೂರ್ಯಾಯ ಸ್ವಾಹಾ-ಸೂರ್ಯಾಯ ಇದಂ ನ ಮಮ; ವಾಯವೇ ಸ್ವಾಹಾ-ವಾಯವ ಇದಂ ನ ಮಮ; ವರುಣಾಯ ಸ್ವಾಹಾ-ವರುಣಾಯ ಇದಂ ನ ಮಮ;..ಇತ್ಯಾದಿ. ಹೀಗೆ ಬೇರೆ ಬೇರೆ ಪ್ರತೀಕದಲ್ಲಿ ಭಗವಂತನಿಗೆ ಆಹುತಿ ಕೊಡುವುದು ಯಜ್ಞ. ಇಲ್ಲಿ ಕೃಷ್ಣ ಹೇಳುತ್ತಾನೆ ನೀವು ಮಾಡುವ ಕ್ರತುವಿನ ನಿಯಾಮಕ ನಾನು" ಎಂದು. ನಾವು ಯಾವ ಪ್ರತೀಕದಲ್ಲಿ ಪೂಜೆ ಮಾಡಿದರೂ ಅದು ಸಲ್ಲುವುದು ಆ ದೇವತೆಯ ಅಂತರ್ಯಾಮಿ ಭಗವಂತನಿಗೆ. ಉದಾಹರಣೆಗೆ ಗಣಹೋಮ, ಚಂಡಿಕಾಹೋಮ, ನವಗ್ರಹಹೋಮ ಇತ್ಯಾದಿ. ಇಲ್ಲಿ ನಾವು ಯಾವ ದೇವತೆಯ ಪ್ರತೀಕದಲ್ಲಿ ಯಜ್ಞ ಮಾಡಿದರೂ ಕೂಡಾ ಆ ಯಜ್ಞ ಭಗವಂತನಿಗೆ ಸಲ್ಲುತ್ತದೆ ಎನ್ನುವ ಅನುಸಂಧಾನ ನಮ್ಮಲ್ಲಿರಬೇಕು. ಭಗವಂತ ಅನೇಕ ಶಕ್ತಿ ರೂಪದಲ್ಲಿ ಅಭಿವ್ಯಕ್ತನಾದರೂ ಕೂಡ, ಸರ್ವ ನಿಯಾಮಕ ಭಗವಂತ ಒಬ್ಬನೆ. [ನಮಗೆ ಬಂದಿರುವ ಆಪತ್ತಿನ ನಿವಾರಣೆಗಾಗಿ ಜೋತಿಷಿಗಳು ಭಗವಂತನ ಆಯಾ ಶಕ್ತಿ ಪ್ರತೀಕವನ್ನು ಪೂಜಿಸುವಂತೆ ಹೇಳುತ್ತಾರೆ ಹೊರತು, ಭಗವಂತ ಅನೇಕ ಅಲ್ಲ]. ದೇವತೆಯ ಒಳಗಿರುವ ಭಗವಂತ ಪ್ರೀತನಾದಾಗ ಮಾತ್ರ ಅದು ಆ ದೇವತೆಗೂ ಮತ್ತು ಭಗವಂತನಿಗೂ ಸಂದಂತೆ. ಆದ್ದರಿಂದ ಒಂದೊಂದು ದಿನ ಒಂದೊಂದು ದೇವತೆಗೆ ಪ್ರೀತಿಯಾಗುವುದಕ್ಕೊಸ್ಕರ ಕರ್ಮ ಮಾಡುವುದಲ್ಲ. ಸರ್ವಾಂತರ್ಯಾಮಿ ಭಗವಂತನಿಗೆ ನಮ್ಮ ಪೂಜೆ ಮೀಸಲಾಗಿರಬೇಕು.
ನಮ್ಮ ದೇಹದೊಳಗೆ ತತ್ವಾಭಿಮಾನಿ ದೇವತೆಗಳಿದ್ದಾರೆ. ಅವರನ್ನು ನಿಯಮನ ಮಾಡಿಕೊಂಡು ಆ ಭಗವಂತನಿದ್ದಾನೆ. ಈ ತತ್ವಾಭಿಮಾನಿ ದೇವತೆಗಳು ಭಗವಂತನ ಅನುಗ್ರಹದಿಂದ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಲಿ ಎಂದು ಅವರ ಅಂತರ್ಯಾಮಿಯಾದ ಭಗವಂತನನ್ನು ಆರಾದಿಸುವುದು ಯಜ್ಞ.
ನಾವು ನಿತ್ಯ ಪೀಠದಲ್ಲಿ ಮಾಡುವ ಪೂಜೆ ತತ್ವಾಭಿಮಾನಿ ದೇವತೆಗಳನ್ನು ಕುರಿತು ಮಾಡುವ ಯಜ್ಞವಾದರೆ, ಶ್ರಾದ್ಧ- ಪಿತೃದೇವತೆಗಳನ್ನು ಕುರಿತು ಮಾಡುವ ಯಜ್ಞ. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಕಲ್ಪನೆ ಇದೆ. ಶ್ರಾದ್ಧ ದೇಹ ತ್ಯಾಗ ಮಾಡಿದ ಜೀವಕ್ಕೆಎಂದು. ಆದರೆ ಇದು ಸರಿಯಲ್ಲ. ಶ್ರಾದ್ಧ ಸ್ಥೂಲ ದೇಹವನ್ನು ತ್ಯಜಿಸಿ ಸೂಕ್ಷ್ಮ ಶರೀರದಲ್ಲಿರುವ ಜೀವವನ್ನು ನಿಯಂತ್ರಿಸುವ ಪಿತೃದೇವತೆಗಳಿಗೆಮಾಡುವಂತದ್ದು. ವಿಶೇಷವಾಗಿ ಹತ್ತು ಮಂದಿ ವಿಶ್ವೇದೇವತೆಗಳು(ಕ್ರತು,ದಕ್ಷ, ವಾಸು, ಸತ್ಯ, ಕಾಮ, ಕಾಲ,ಧುರಿ, ಲೋಚನ,ಪುರೂರವ ಆರ್ದ್ರವ); ಇವರಲ್ಲಿ ಪುರೂರವ ಮತ್ತು ಆರ್ದ್ರವರದ್ದು ಪಿತೃಗಣದ ನಿಯಮನ ಮಾಡತಕ್ಕಂತಹ ಖಾತೆ(Portfolio). ಪಿತೃದೇವತೆಗಳ ಗಣ ಹತ್ತು(ನೂರು ಮಂದಿ ಪಿತೃಗಳಲ್ಲಿ ಇವರು ಪ್ರಧಾನರು): ಯಮ, ಸೋಮ, ಕವ್ಯವಾಹ(ಇವರು ಮೂವರು ಪಿತೃಪತಿಗಳು), ಸೋಮಸದರು, ಅಗ್ನಿಷ್ವಾತ್ತರು, ಬಹಿರ್ಷದರು, ಸೋಮಪರು, ಹವಿರ್ಭುಜರು, ಅಜ್ಯಪರು, ಸುಕಾಲಿಗಳು. ನಾವು ಪಿಂಡ ಹಾಕುವುದು ಜೀವದ ಹಸಿವು ನೀಗಲಿಕ್ಕೆ ಅಲ್ಲ. ನಮ್ಮ ಹಿರಿಯರು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವುದು ಅವರು ಮಾಡಿದ ಕರ್ಮಫಲದಿಂದ ಹೊರತು ನಾವು ಹಾಕಿದ ಶ್ರಾದ್ಧದಿಂದಲ್ಲ. ಶ್ರಾದ್ಧಾ ಏಕೆಂದರೆ ಪಿತೃದೇವತೆಗಳ ಸ್ವಾದೀನದಲ್ಲಿರುವ ಜೀವ ಯಾವುದೋ ದುರಿತದ ಪ್ರಭಾವದಿಂದ ದಾರಿಯಲ್ಲಿ ತಡೆಯನ್ನು (Road blockers) ಎದುರಿಸಬೇಕಾಬಹುದು. ಆ ಸಮಯದಲ್ಲಿ ಅದನ್ನು ನಿವಾರಣೆ ಮಾಡುವ ಕರ್ಮಾನುಷ್ಠಾನ ಆ ಸೂಕ್ಷ್ಮ ಶರೀರದಲ್ಲಿ ಇರುವುದಿಲ್ಲ. ಅದಕ್ಕೋಸ್ಕರ ಅಂತಹ ಪ್ರತಿಬಂಧಕಗಳಿಂದ ಅವರನ್ನು ಪಾರು ಮಾಡಿ ಮುಂದೆ ಸಾಗಲು ನೆರವು ಕೋರಿ ಮಾಡುವ ಪಿತೃದೇವತೆಗಳ ಪೂಜೆಯೇ ಶ್ರಾದ್ಧ. ಒಟ್ಟಾರೆ ಇದು ಹಿರಿಯರು ಸತ್ತ ದಿನದ ನೆನಪು, ಅವರಿಗೆ ಕೃತಜ್ಞತೆ ಮತ್ತು ಪಿತೃದೇವತೆಗಳ ಪೂಜೆ.
ಕೃಷ್ಣ ಹೇಳುತ್ತಾನೆ ಸ್ವಧಾ ಅಹಮ್ಎಂದು. ಮಂತ್ರಗಳು ವಿಳಾಸದಂತೆ, ‘ಸ್ವಾಹತತ್ವಾಭಿಮಾನಿ ದೇವತೆಗಳಿಗಾದರೆ ಸ್ವಧಾಪಿತೃದೇವತೆಗಳಿಗೆ. ನನ್ನ ಮುಖೇನವೇ ಶ್ರಾದ್ಧ ಪಿತೃದೇವತೆಗಳಿಗೆ ಸಲ್ಲುವುದು ಎನ್ನುತ್ತಾನೆ ಕೃಷ್ಣ.
ತತ್ವಾಭಿಮಾನಿದೇವತೆಗಳು ಮತ್ತು ಪಿತೃದೇವತೆಗಳ ನಂತರ ಮನುಷ್ಯರು. ಮನುಷ್ಯರ ಮುಖ್ಯವಾದ ಆಹಾರ ಓಷಧಿ’. ಫಲ ಕೊಟ್ಟು ಸಾಯುವ ಗಿಡವನ್ನು ಸಂಸ್ಕೃತದಲ್ಲಿ ಓಷಧಿಎನ್ನುತ್ತಾರೆ. ಆ ಗಿಡದ ಪ್ರಸವವೇ ಅದರ ಸಾವು. ಮನುಷ್ಯ ತಿನ್ನುವ ದವಸದಾನ್ಯ ಎಲ್ಲವೂ ಓಷಧಿಗಳು. ಇಂತಹ ಓಷಧಿಗಳ ಸಮುದಾಯವೇ ಔಷಧಿ. ಕೃಷ್ಣ ಹೇಳುತ್ತಾನೆ ಅಹಮ್ ಔಷಧಮ್ಎಂದು. ನಾವು ತಿನ್ನುವ ದವಸ ಧಾನ್ಯ ಸಲ್ಲುವುದು ಕೂಡಾ ವೈಶ್ವಾನರನಾಗಿ ಒಳಗೆ ಕುಳಿತಿರುವ ಭಗವಂತನಿಗೆ. ಔಷಧ ಕೊಡತಕ್ಕವ, ಅದರಿಂದ ರೋಗ ನಿವಾರಿಸುವವ, ಹಸಿವು ನಿವಾರಿಸಿ ರಕ್ಷಣೆ ಮಾಡುವವ ಭಗವಂತ.
ನಾವು ಬೇರೆ ಬೇರೆ ಮಂತ್ರಗಳಿಂದ ಆಹುತಿಯನ್ನು ಕೊಡುತ್ತೇವೆ. ಈ ಹಿಂದೆ ಹೇಳಿದಂತೆ ಮಂತ್ರ ವಿಳಾಸವಿದ್ದಂತೆ. ಕೊಡುವ ಆಹುತಿ ಎಲ್ಲವೂ ಭಗವಂತನಿಗೆ ಸೇರುವುದಾದರೆ ಬೇರೆಬೇರೆ ವಿಳಾಸವೇಕೆ? ಕೃಷ್ಣ ಹೇಳಿದ ಬೇರೆ ಬೇರೆ ವಿಳಾಸದಲ್ಲಿರುವ ನನಗೆಎಂದು! ಭಗವಂತ ಏಕ ಆದರೆ ಆತನ ರೂಪ ಅನೇಕ. ನಾವು ಯಾವ ಮಂತ್ರದಿಂದ ಕಳುಹಿಸಿದರೂ ಕೂಡಾ-ಅದು ಸೇರುವುದು ಎಲ್ಲಾ ಮಂತ್ರದಿಂದ ವಾಚ್ಯನಾದ, ಸರ್ವಶಬ್ದವಾಚ್ಯ ಭಗವಂತನನ್ನು. ಹೀಗೆ ಬೇರೆ ಬೇರೆ ಶಕ್ತಿ ರೂಪವನ್ನು ಬೇರೆ ಬೇರೆ ದೇವತಾ ಪ್ರತೀಕದಲ್ಲಿ ಪೂಜಿಸಿದರೂ ಕೂಡಾ ಪ್ರತಿಯೊಂದು ನಾಮವೂ ಸಹ ಅಂತತಃ ಭಗವಂತನನ್ನೇ ಹೇಳುತ್ತದೆ. ಎಲ್ಲವುದರ ಸಾರವೂ ಭಗವಂತ. ಇದಕ್ಕೆ ಉತ್ತಮ ಉದಾಹರಣೆ ತೆಂಗಿನಕಾಯಿ. ಸಿಪ್ಪೆ ಸಹಿತವಾಗಿರುವ ತೆಂಗಿನಕಾಯಿ ಉರಿಯುವ ಬೆಂಕಿಯಂತೆ; ಸಿಪ್ಪೆಯೊಳಗಿನ ಕಾಯಿ ಬೆಂಕಿಯ ಅಂತರ್ಯಾಮಿ ಅಗ್ನಿ ದೇವತೆಯಂತೆ; ಚಿಪ್ಪಿನ ಒಳಗಿನ ಕೊಬ್ಬರಿ ಅಗ್ನಿ ದೇವತೆಯೊಳಗಿನ ಭಗವಂತನಂತೆ. ಇಲ್ಲಿ ನಾವು ಎಲ್ಲವನ್ನೂ ಕರೆಯುವುದು ತೆಂಗಿನಕಾಯಿ ಅಥವಾ ಅಗ್ನಿ ಎಂತಲೆ. ಹೇಗೆ ನಿಜವಾದ ತೆಂಗಿನಕಾಯಿ ಒಳಗಿನ ಸಾರವೋ ಹಾಗೇ ನಿಜವಾದ ಅಗ್ನಿ ಅಂತತಃ ಅಂತರ್ಯಾಮಿ ಭಗವಂತ. ಈ ಶ್ಲೋಕದಲ್ಲಿ ಕೃಷ್ಣ ಇದನ್ನೇಅಹಮ್ ಅಗ್ನಿಃಎಂದಿರುವುದು.
ಕೃಷ್ಣ ನಾವು ಆಹುತಿಯಾಗಿ ಕೊಡುವ ಒಂದು ಪ್ರಮುಖ ವಸ್ತುವನ್ನು ಉದಾಹರಣೆಯಾಗಿ ತೆಗೆದುಕೊಂಡು ಹೇಳುತ್ತಾನೆ ಅಹಮ್ ಏವ ಆಜ್ಯಮ್ಎಂದು. ಆಜ್ಯ ಎಂದರೆ ತುಪ್ಪ. ಆಜ್ಯದಲ್ಲಿ ದೇವತೆಗಳನ್ನು ತಣಿಸುವ ವಿಶಿಷ್ಟ ಶಕ್ತಿ ಇದೆ. ಆಜ್ಯದಲ್ಲಿ ವಿಶಿಷ್ಟ ಶಕ್ತಿಯಾಗಿ ನಾನಿದ್ದೇನೆ ಎನ್ನುವ ಕೃಷ್ಣ ನಾನೇ ಹೋಮದ ಹವಿ (ಅಹಮ್ ಹುತಮ್) ಎನ್ನುತ್ತಾನೆ.
ಹವಿಸ್ಸು ಎಂದರೆ ಭಗವಂತನಿಗೆ ಅರ್ಪಿಸುವ ಹೋಮ ದ್ರವ್ಯ. ಆ ಹವಿಸ್ಸಿನಲ್ಲಿ ವಿಶೇಷ ಶಕ್ತಿ ಇರುವುದು ಆ ಭಗವಂತನಿಂದ. ನಾವು ಅರ್ಪಿಸುವ ಹವಿಸ್ಸು ಎಂದೂ ವ್ಯರ್ಥವಲ್ಲ. ಅಗ್ನಿಗೆ ಅರ್ಪಿಸಿದ ಹವಿಸ್ಸು ಅಗ್ನಿಯಿಂದ ಹೊರ ಹೊಮ್ಮುವ ಏಳು ಬಣ್ಣಗಳ ಮುಖೇನ ವಾತಾವರಣದಲ್ಲಿನ ಸೂರ್ಯ ಕಿರಣದೊಂದಿಗೆ ಸೇರಿ ಸಮಾಜಕ್ಕೆ ಫಲವನ್ನು ಕೊಡುತ್ತದೆ. ಹವಿರ್ಭಾಗವನ್ನು ಸ್ವೀಕರಿಸುವ ಭಗವಂತ ಹವಿರ್ಹರಿಃ . ನಾವು ಯಾವುದೇ ನಾಮವನ್ನುಚ್ಚರಿಸಿ ಹವಿಸ್ಸನ್ನು ಅರ್ಪಿಸಿದರೂ ಅದು ಸೇರುವುದು ಸರ್ವಶಬ್ದ ವಾಚ್ಯನಾದ ಭಗವಂತನನ್ನು. "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಭಗವಂತ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. ಆದ್ದರಿಂದ ಯಾವ ಶಬ್ದವನ್ನು ಹೇಳಿದರೂ ಅದು ಸೇರುವುದು ಅವನನ್ನೇ. ಹೀಗೆ ಹವಿಸ್ಸನ್ನು ಸ್ವೀಕರಿಸಿ ಭಕ್ತರ ಪಾಪವನ್ನು ಪರಿಹರಿಸುವ ಭಗವಂತ ಹವಿರ್ಹರಿಃ
ಈ ಶ್ಲೋಕವನ್ನು ಇನ್ನೊಂದು ಆಯಾಮದಲ್ಲಿ ನೋಡಿದರೆ, ಇಲ್ಲಿ ಬರುವ ಒಂದೊಂದು ಶಬ್ದವನ್ನು ಭಗವಂತನಲ್ಲಿ ಅನುಸಂಧಾನ ಮಾಡು ಎನ್ನುವ ಸಂದೇಶವನ್ನು ಕಾಣುತ್ತೇವೆ.
ಕ್ರತುಃ ” –ಭಗವಂತನೇ ಕ್ರತು ಶಬ್ದದ ಮುಖ್ಯಾರ್ಥ. 'ಕ್ರತು' ಕ್ರಿಯೆ, ಜ್ಞಾನ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಕ್ರಿಯಾ ಸ್ವರೂಪ, ಜ್ಞಾನ ಸ್ವರೂಪ ಭಗವಂತಕ್ರತುಃ’. ನಮ್ಮಲ್ಲಿ ನಂಬಿಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗು ಅನುಕೂಲತೆ ಕೊಟ್ಟು, ನಮ್ಮ ಹಿಂದೆ ನಿಂತು, ಕ್ರಿಯಾ ಕಲಾಪಗಳನ್ನು ನಡೆಸುವ, ಜ್ಞಾನ ಸ್ವರೂಪನೂ, ಕರ್ಮದ ಕಟ್ಟಿನಿಂದ ನಮ್ಮನ್ನು ಪಾರು ಮಾಡುವನೂ ಆದ ಭಗವಂತ ಕ್ರತುಃ’.
ಯಜ್ಞ” -ಯಜ್ಞ ಅಂದರೆ ಎಲ್ಲವನ್ನೂ ತಿಳಿದವನು. ಜ್ಞಾನರೂಪಿಯಾಗಿ ಎಲ್ಲೆಡೆ ಇರುವ ಭಗವಂತ, ಎಲ್ಲಾ ಕ್ರಿಯೆಗಳಿಂದ ಎಲ್ಲರೂ ಆರಾಧಿಸಬೇಕಾದ ಯಜ್ಞದ ಅಂತರ್ಯಾಮಿ.
ಸ್ವಧಾಃಎಂದರೆ ತನ್ನನ್ನು ತಾನು ಆದರಿಸಿ ನಿಂತ ಸರ್ವ ನಿಯಾಮಕ.
ಭಗವಂತಔಷಧಃ’. ಎಂದರೆ ಸಂಸಾರ ತಾಪದಲ್ಲಿ ಬಿದ್ದು ಒದ್ದಾಡುವವ(ಔಷರು)ರಿಗೆ ಆಸರೆ-ಮೋಕ್ಷ ಪ್ರದ.
ಮಂತ್ರಃ” –ಜ್ಞಾನ ಪೂರ್ವಕವಾಗಿ ಅನುಸಂಧಾನ ಮಾಡುವವರನ್ನು ರಕ್ಷಣೆ ಮಾಡುವ ಭಗವಂತಮಂತ್ರಃ’. ಮಂತ್ರ ನಮ್ಮನ್ನು ರಕ್ಷಣೆ ಮಾಡುವುದು ನಾವು ತಿಳಿದು ಪಠಿಸಿದಾಗ ಮಾತ್ರ.[ಇಲ್ಲದಿದ್ದರೆ ಕಿಂಚಿತ್ ಫಲ ಮಾತ್ರ. ಮಹಾ ಫಲದಿಂದ ವಂಚಿತರಾಗುತ್ತೇವೆ].
ಭಗವಂತ ಎಲ್ಲಕ್ಕಿಂತ ದೊಡ್ಡ ವಸ್ತು ಆದ್ದರಿಂದ ಆತ ಆಜ್ಯಃ”.
ಚಲಿಸದೇ ಇರುವ ವಸ್ತುವಿಗೆ ಚಲನೆ ಕೊಡುವ ಭಗವಂತ ಅಗ್ನಿಃ”.
ಎಲ್ಲ ಭಕ್ತರಿಂದ ಆಹುತನಾದ್ದರಿಂದ ಭಗವಂತಹುತಃ”.
·  ಶ್ಲೋಕ - 17
ಪಿತಾSಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ ।
ವೇದ್ಯಂ ಪವಿತ್ರಮೋಂಕಾರ ಋಕ್ ಸಾಮ ಯಜುರೇವ ಚ ೧೭॥
ಪಿತಾ ಅಹಮ್ ಅಸ್ಯ ಜಗತಃ ಮಾತಾ ಧಾತಾ ಪಿತಾಮಹಃ ।
ವೇದ್ಯಮ್ ಪವಿತ್ರಮ್ ಓಂಕಾರಃ ಋಕ್ ಸಾಮ ಯಜುಃ ಏವ
- ನಾನು ಈ ಜಗದ ತಂದೆ, ತಾಯಿ, ಪೋಷಕ ಮತ್ತು ಅಜ್ಜ-ಮುತ್ತಜ್ಜ.[ಸಲಹುವುದರಿಂದ ಪಿತೃ’. ಅರಿಯುವುದರಿಂದ ಮಾತೃ’. ಬೆಳೆಯುವುದರಿಂದ ಧಾತೃ’. ತಂದೆಗಿಂತಲೂ ಹಿರಿಯನಾದ್ದರಿಂದ ಪಿತಾಮಹ’] ಜಗವೆಲ್ಲ ತಿಳಿಯಬೇಕಾದವನು. ಜಗಕೆ ಪಾವನನಾದವನು. ಓಂಕಾರದಿಂದ, ಋಗ್ವೇದ-ಸಾಮವೇದ-ಯಜುರ್ವೇದಗಳಿಂದ ವಾಚ್ಯನಾದವನು. [ಓಂಎಂದು ಕರೆಸಿಕೊಳ್ಳುವುದರಿಂದ ಓಂಕಾರ’. ಪೂಜನೀಯನಾದ್ದರಿಂದಋಕ್’. ಸಮಾನನಾದ್ದರಿಂದ ಸಾಮ’. ಯಜ್ಞಗಳಿಂದ ಆರಾಧ್ಯನಾದ್ದರಿಂದ ಯಜುಸ್’]
ಬದುಕಿನ ಸಂಬಂಧಗಳಿಗೆ ಸಂಬಂಧಿಸಿ ಭಗವಂತನ ಉಪಾಸನೆಯನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ ಪಿತಾ ಅಹಮ್ ಅಸ್ಯ ಜಗತಃ ಮಾತಾ ಧಾತಾ ಪಿತಾಮಹಃಎಂದು. ಅಂದರೆ ನಾನೆ ತಂದೆ, ನಾನೆ ತಾಯಿ, ನಾನೆ ಧಾರಕ ಮತ್ತು ಪಿತಾಮಹ”. ನಮಗೆ ತಿಳಿದಂತೆ ಒಬ್ಬರು ತಂದೆಯಾಗಬಹುದು ಅಥವಾ ತಾಯಿಯಾಗಬಹುದು. ಆದರೆ ಒಬ್ಬರೇ ತಾಯಿ ಮತ್ತು ತಂದೆ ಎರಡೂ ಆಗುವುದು ಸಾಧ್ಯವಿಲ್ಲ. ಇದು ಭಗವಂತನಲ್ಲಿ ಮಾತ್ರ ಸಾಧ್ಯ. ಭಗವಂತ ಎಲ್ಲರಿಗೂ ಅಪ್ಪ ಮತ್ತು ಎಲ್ಲರಿಗೂ ಅಮ್ಮ. ತಂದೆಯೊಳಗೆ ತಂದೆಯಾಗಿ, ತಾಯಿಯೊಳಗೆ ತಾಯಿಯಾಗಿ ತುಂಬಿರುವ ಶಕ್ತಿ ಆ ಭಗವಂತ. ಇದನ್ನು ನಾವು ಈ ರೀತಿ ಸ್ತುತಿಸುತ್ತೇವೆ:
ತ್ವಮೇವ ಮಾತಾಚ ಪಿತಾ ತ್ವಮೇವ
ತ್ವಮೇವ ಬಂದುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ
ಗಾಯತ್ರಿಯಲ್ಲಿ ಮೂಲತಃ ಈ ಅನುಷ್ಠಾನವಿದೆ. ತತ್ಸವಿತುರ್ವರೇಣ್ಯಂ ಭರ್ಗಃಎನ್ನುವಲ್ಲಿ ಭಗವಂತ ಜಗತ್ತನ್ನು ಸೃಷ್ಟಿ ಮಾಡಿದ ತಂದೆ ಎನ್ನುವ ಅರ್ಥವಿದೆ.ಸವಿತ’. ಎಂದರೆ ಜಗತ್ತನ್ನು ಹೆತ್ತವನು ಎಂದರ್ಥ. ಪ್ರಳಯಕಾಲದಲ್ಲಿ ಜಗತ್ತನ್ನು ತನ್ನ ಉದರದಲ್ಲಿ ಧರಿಸಿ, ಸೃಷ್ಟಿ ಕಾಲದಲ್ಲಿ ಅದನ್ನು ಭಗವಂತ ಹೆತ್ತ. ಹೆತ್ತು ಹೊತ್ತು ಸಲಹುವವಳುತಾಯಿ’-ಆದ್ದರಿಂದ ಭಗವಂತ ತಾಯಿಯೂ ಹೌದು. ಅಷ್ಟೇ ಅಲ್ಲ, ಪ್ರತಿಯೊಬ್ಬ ತಾಯಿಯೊಳಗಿದ್ದು ಆ ತಾಯಿಯ ತಾಯ್ತನವನ್ನು ಜಾಗೃತಗೊಳಿಸಿ, ತಾಯಿಯೊಳಗೆ ತಾಯಿಯಾಗಿ ತುಂಬಿರುವ ಭಗವಂತ, ಎಲ್ಲ ತಂದೆಯಂದಿರ ಒಳಗೂ ಇದ್ದು, ಅವರಲ್ಲಿ ಪಿತೃತ್ವ ಜಾಗೃತಗೊಳಿಸುವ ತಂದೆ. ಪಿತಾ ಅನ್ನುವ ಪದದ ನಿರ್ವಚನ ನೋಡಿದರೆ ತಂದೆಅನ್ನುವುದು ಕೇವಲ ರೂಢಿ ಅರ್ಥ. ಶ್ರುತಿಯಲ್ಲಿ ಹೀಗೆ ಹೇಳುತ್ತಾರೆ:
ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|
ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ||
ಇಲ್ಲಿ ಪಿತಾ ಮತ್ತು ಜನಕನನ್ನು ಬೇರೆ ಬೇರೆಯಾಗಿ ಹೇಳುತ್ತಾರೆ. ಅವನು ನಮ್ಮ ತಂದೆ, ಅವನು ನಮ್ಮ ಜನಕ. ಅಂದರೆ: ಹುಟ್ಟಿಸಿದವನೂ ಅವನೇ, ರಕ್ಷಕನೂ ಅವನೆ.
ಲೋಕದಲ್ಲಿ ಗಂಡು ಹೆಣ್ಣಲ್ಲ, ಹೆಣ್ಣು ಗಂಡಲ್ಲ. ಆದರೆ ಭಗವಂತ ಎಲ್ಲರ ಬಿಂಬರೂಪ. ಆದ್ದರಿಂದ ಭಗವಂತ ಉಭಯಲಿಂಗ-ಆತ ಸ್ತ್ರೀಪುಂಸಕ. ಆದರೆ ಆತನಲ್ಲಿ ಸ್ತ್ರೀಯಲ್ಲಿರುವ ದೋಷವಾಗಲಿ, ಪುರುಷನಲ್ಲಿರುವ ದೋಷವಾಗಲೀ ಇಲ್ಲ. ಆದ್ದರಿಂದ ಆತ ಲಿಂಗಾತೀತಕೂಡಾ ಹೌದು.[ಇದನ್ನು ನಾವು ಭಗವಂತನ ನಾಮಾವಳಿಗಳಲ್ಲಿ ಕಾಣಬಹುದು].
ಭಗವಂತನೇ ಧಾತಾ’. ಆತ ಅನಾಧಿ ಅನಂತಕಾಲದಲ್ಲಿ ಈ ಜಗತ್ತಿನ ಧಾರಣೆ ಮತ್ತು ಪೋಷಣೆ ಮಾಡುವವ. ಚತುರ್ಮುಖ ಬ್ರಹ್ಮನೊಳಗಿದ್ದು, ಪಿತಾಮಹ ಶಬ್ದ ವಾಚ್ಯನಾಗಿರುವವ ಭಗವಂತ.
ಇಲ್ಲಿ ಕೃಷ್ಣ ಕೇವಲ ಮುಖ್ಯವಾದ ಸಂಬಂಧವನ್ನು ಮಾತ್ರ ಹೇಳಿದ. ಇದರರ್ಥ ಎಲ್ಲಾ ಸಂಬಂಧದಲ್ಲಿಯೂ ಆ ಭಾವವನ್ನು ಜಾಗೃತಗೊಳಿಸುವವ ಅಂತರ್ಯಾಮಿ ಭಗವಂತ ಎಂಬುದು. ಪ್ರತಿಯೊಂದು ಸಂಬಂಧದ ಹಿಂದೆ ಭಗವಂತನ ಸಂಬಂಧವಿದೆ. ಆದರೆ ನಮಗೆ ಆ ಕಲ್ಪನೆ ಇರುವುದಿಲ್ಲ. ಆಯಾ ಜೀವದ ಪ್ರಾರಾಬ್ಧ ಕರ್ಮಕ್ಕನುಗುಣವಾಗಿ ಸಂಬಂಧಗಳು. ಅಲ್ಲಿರುವ ಪ್ರೀತಿ, ಮಮತೆ, ಶತ್ರುತ್ವ ಎಲ್ಲವೂ ಭಗವಂತನ ಕಾರ್ಯಕ್ರಮ. ಇದನ್ನು ನಾವು ತಿಳಿದಾಗ ನಮ್ಮ ಜೀವನ ಸುಗಮ. ಒಬ್ಬರು ನಮ್ಮನ್ನು ದ್ವೇಷಿಸಿದಾಗ ಕುಗ್ಗುವ ಅಗತ್ಯವಾಗಲೀ, ಒಬ್ಬರು ನಮ್ಮನ್ನು ಪ್ರೀತಿಸಿದಾಗ ಹಿಗ್ಗುವ ಅಗತ್ಯವಾಗಲೀ ಇಲ್ಲ. ಎಲ್ಲವೂ ನಮ್ಮ ಜೀವಸ್ವಭಾವ ಮತ್ತು ಪ್ರರಾಬ್ಧಕರ್ಮಕ್ಕನುಗುಣವಾಗಿ ಭಗವಂತನ ಲೀಲೆ ಎನ್ನುವ ಎಚ್ಚರ ಇಲ್ಲಿ ಬಹಳ ಮುಖ್ಯ. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಭಾಗವತದಲ್ಲಿ ಬರುವ ವೃತ್ರ ಮತ್ತು ಇಂದ್ರನ ಯುದ್ಧದ ಕಥೆ: ಇಂದ್ರನನ್ನು ಕೊಲ್ಲಲು ಹೊರಟ ವೃತ್ರನ ತಂದೆ ತ್ವಸ್ಥ ಎಂಬುವನು ಉಚ್ಚರಿಸಿದ ಮಂತ್ರದಲ್ಲಿ ಒಂದು ಸ್ವರ ತಪ್ಪಾಗಿದ್ದರಿಂದ-ವೃತ್ರನಿಂದ ಇಂದ್ರಹತ್ಯೆಯಾಗುವ ಬದಲು, ಇಂದ್ರನೇ ವೃತ್ರನನ್ನು ಕೊಲ್ಲುವಂತಾಯಿತು. ವೃತ್ರ ಮತ್ತು ಇಂದ್ರರ ಯುದ್ಧದಲ್ಲಿ ಇಂದ್ರ ಮಹಾಜ್ಞಾನಿಯಾದ ವೃತ್ರನನ್ನು ಕೊಲ್ಲಲು ಹಿಂದೇಟು ಹಾಕುತ್ತಾನೆ. ಆಗ ವೃತ್ರ ಹೇಳುತ್ತಾನೆಸಂಕೋಚ ಪಡಬೇಡ ಇಂದ್ರ, ನನ್ನನ್ನು ಕೊಂದುಬಿಡು. ಏಕೆಂದರೆ ಈ ನಾಟಕದಲ್ಲಿ ಭಗವಂತ ನಿನಗೆ ಕೊಲ್ಲುವ ಪಾತ್ರವನ್ನೂ ಮತ್ತು ನನಗೆ ಸಾಯುವ ಪಾತ್ರವನ್ನೂ ಕೊಟ್ಟಿದ್ದಾನೆ. ನಾವು ಅದನ್ನು ಅಭಿನಯಿಸಬೇಕು ಅಷ್ಟೇಎಂದು. ಈ ರೀತಿ ಎಚ್ಚರವಿದ್ದರೆ ನಮಗೆ ಇನ್ನೊಬ್ಬರು ಬೈದಾಗ ಅಥವಾ ದ್ವೇಶಿಸಿದಾಗ ಬೇಸರವಾಗುವುದಿಲ್ಲ. ಎಲ್ಲವೂ ಭಗವಂತನ ವ್ಯವಸ್ಥೆ ಎಂದು ತಿಳಿದಾಗ ಎಲ್ಲವೂ ಏಕರೂಪವಾಗಿ ಕಾಣುತ್ತದೆ. ದ್ವೇಷ ಮತ್ತು ಪ್ರೀತಿ ಸಹಜವಾಗಿ ಬಿಡುತ್ತದೆ. ಸಂಬಂಧ ಕಳಚಿದಾಗ ಕುಗ್ಗುವುದಾಗಲೀ, ಬೆಸೆದಾಗ ಹಿಗ್ಗುವುದಾಗಲೀ ಇರುವುದಿಲ್ಲ. ಇದು ಬಹಳ ಎತ್ತರದ ಸ್ಥಿತಿ.
ಒಟ್ಟಿನಲ್ಲಿ ಕೃಷ್ಣ ಇಲ್ಲಿ ಹೇಳಿರುವ ವಿಚಾರವೆಂದರೆ: ಎಲ್ಲಾ ಸಂಬಂಧದ ಹಿಂದೆ ಇರುವವನು ಆ ಭಗವಂತ. ಎಲ್ಲರ ಒಳಗೂ ಎಲ್ಲರೂಆಗಿ ಆತ ತುಂಬಿದ್ದಾನೆ. ಒಂದೊಂದು ರೂಪದಲ್ಲಿ, ಅವರವರಲ್ಲಿ, ಆಯಾ ಕ್ರಿಯೆಗಳನ್ನು ಮಾಡಿಸುತ್ತಾನೆ. ಇದು ನಾವು ಅನುಸಂಧಾನ ಮಾಡಬೇಕಾದ ವಿಜ್ಞಾನ.
ಕ್ರಿಯೆ, ಸಂಬಂಧಗಳನ್ನು ವಿವರಿಸಿದ ಕೃಷ್ಣ ಈಗ ಜ್ಞಾನದ ಬಗ್ಗೆ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ ವೇದ್ಯಂ ಪವಿತ್ರಮೋಂಕಾರ ಋಕ್ ಸಾಮ ಯಜುರೇವ ಚಎಂದು. ನಾಮಾತ್ಮಕವಾದ ಈ ಪ್ರಪಂಚದ ಎಲ್ಲ ನಾಮಗಳ ಮೂಲ ಓಂ’. ಕೃಷ್ಣ ಹೇಳುತ್ತಾನೆ: ನಾನು ಓಂಕಾರಎಂದು. ಪ್ರಪಂಚದಲ್ಲಿನ ಎಲ್ಲಾ ಶಬ್ದವೂ ಹುಟ್ಟಿದ್ದು ಓಂಕಾರದಿಂದ. ಆದ್ದರಿಂದ ಭಗವಂತ ಸರ್ವಶಬ್ದವಾಚ್ಯ. ಸಂಸ್ಕೃತದಲ್ಲಿನ ಎಲ್ಲಾ ಶಬ್ದಗಳೂ ಕೂಡಾ ಓಂಕಾರದಿಂದ ಆವಿರ್ಬಾವಗೊಂಡ ಶಬ್ದಗಳು. ಅದು ಹೇಗೆಂದು ನೋಡೋಣ:
ವೈದಿಕವಾಙ್ಮಯದ ಮೂಲಾಕ್ಷರವಾದ ಓಂಕಾರದಲ್ಲಿ ಎಂಟು ಅಕ್ಷರಗಳು: ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲೆ, ಶಾಂತ, ಅತಿಶಾಂತ. ಇದರಿಂದ ವ್ಯಕ್ತವಾದದ್ದು ನಾರಾಯಣಾಷ್ಟಾಕ್ಷರ:ಓಂ ನಮೋ ನಾರಾಯಣಾಯ’. ಓಂಕಾರದ ಎಂಟು ಮೂಲವರ್ಣಗಳಿಂದ ಅಕ್ಷರ ಮಾಲಿಕೆಯ ಎಂಟು ವರ್ಗಗಳು ರೂಪುಗೊಂಡವು:
೧. ಸ್ವರಾಕ್ಷರಗಳು: ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
೨. ಕ ವರ್ಗ: ಕ ಖ ಗ ಘ ಙ
೩. ಚ ವರ್ಗ: ಚ ಛ ಜ ಝ ಞ
೪. ಟ ವರ್ಗ : ಟ ಠ ಡ ಢ ಣ
೫. ತ ವರ್ಗ: ತ ಥ ದ ಧ ನ
೬. ಪ ವರ್ಗ: ಪ ಫ ಬ ಭ ಮ
೭.ಅಂತಸ್ಥಾಕ್ಷರಗಳು: ಯ ರ ಲ ವ
೮. ಕೊನೆಯ ಆರು ಅಕ್ಷರಗಳು: ಶ ಷ ಸ ಹ ಳ ಕ್ಷ
ಒಟ್ಟು '' ದಿಂದ 'ಕ್ಷ' ತನಕ ಐವತ್ತೊಂದು ಅಕ್ಷರಗಳು(ಅ ದಿಂದ ಕ್ಷ ತನಕ ಆದ್ದರಿಂದ ಅ-ಕ್ಷ-ರ). ಇಡೀ ಪ್ರಪಂಚದಲ್ಲಿರುವ ಎಲ್ಲಾ ಶಬ್ದಗಳೂ ಈ ಅಕ್ಷರಗಳ ಸಂಯೋಜನೆ. ಎಲ್ಲಾ ಶಬ್ದಗಳೂ ಓಂಕಾರದಿಂದ ಹುಟ್ಟಿರುವುದರಿಂದ ಓಂಕಾರ ವಾಚ್ಯ ಭಗವಂತ ಸರ್ವ ಶಬ್ದವಾಚ್ಯ. ಆದ್ದರಿಂದ ಎಲ್ಲಾ ಶಬ್ದಗಳ ಮೂಲಭೂತ ಪವಿತ್ರ ಅರ್ಥ ಭಗವಂತನನ್ನು ಹೇಳುತ್ತದೆ. ದೋಷವನ್ನು ಹೇಳುವ ಪದಗಳೂ ಕೂಡಾ ಭಗವಂತನಲ್ಲಿ ಕೇವಲ ಪವಿತ್ರ ಅರ್ಥವನ್ನು ಮಾತ್ರ ಹೇಳುತ್ತವೆ. ಉದಾಹರಣೆಗೆ ದುಃಖಿ’. ಇದು ಭಗವಂತನಲ್ಲಿ ಹೇಳುವಾಗ ದುಃಖದ ಒಡೆಯ ಎನ್ನುವ ಅರ್ಥವನ್ನು ಕೊಡುತ್ತದೆ.
ಐವತ್ತೊಂದು ಅಕ್ಷರಗಳಿಂದ(ಮಾತೃಕೆಗಳಿಂದ) ವಾಚ್ಯನಾದ ಭಗವಂತನ ರೂಪಗಳೂ ಐವತ್ತೊಂದು:
೧. ಅಜ, ೨. ಆನಂದ, ೩. ಇಂದ್ರ, ೩. ಈಶ, ೪. ಉಗ್ರ, ೫. ಊರ್ಜ, ೭. ಋತಂಭರ, ೮. ೠಘ, ೯. ಲ್ ಶ, ೧೦. ಲ್ೕಜಿ, ೧೧. ಏಕಾತ್ಮ , ೧೨. ಐರ, ೧೩. ಓಜೋಭೃತ್, ೧೪. ಔರಸ, ೧೫. ಅಂತ, ೧೬. ಅರ್ಧಗರ್ಭ, ೧೭. ಕಪಿಲ, ೧೮. ಖಪತಿ, ೧೯. ಗರುಡಾಸನ, ೨೦. ಘರ್ಮ, ೨೧. ಙಸಾರ ೨೨. ಚಾರ್ವಾಂಗ, ೨೩. ಛಂದೋಗಮ್ಯ, ೨೪. ಜನಾರ್ದನ, ೨೫. ಝೂಟಿತಾರಿ, ೨೬. ಞಮ, ೨೭.ಟಂಕಿ, ೨೮.ಠಕಲ, ೨೯. ಡರಕ, ೩೦.ಢರಿ, ೩೧. ಣಾತ್ಮ, ೩೨. ತಾರ, ೩೩. ಥಭ, ೩೪. ದಂಡಿ, ೩೫. ಧನ್ವಿ, ೩೬. ನಮ್ಯ, ೩೭. ಪರ, ೩೮. ಫಲಿ, ೩೯. ಬಲಿ, ೪೦. ಭಗ, ೪೧. ಮನು, ೪೨. ಯಜ್ಞ, ೪೩. ರಾಮ, ೪೪. ಲಕ್ಷ್ಮೀಪತಿ, ೪೫. ವರ, ೪೬. ಶಾಂತಸಂವಿತ್, ೪೭. ಷಡ್ಗುಣ, ೪೮. ಸಾರಾತ್ಮ, ೪೯. ಹಂಸ, ೫೦. ಳಾಳುಕ, ೫೧. ನೃಸಿಂಹ[ನೃಹರ್ಯಕ್ಷ].
ಓಂಕಾರದ ಮೂಲ ಮೂರಕ್ಷರ ಅ-ಉ-ಮ ಪದ್ಯ-ಗದ್ಯ-ಗಾನ ರೂಪದ ಮೂರು ವೇದವನ್ನು ಮತ್ತು ವೇದ ಪ್ರತಿಪಾದ್ಯ ಭಗವಂತನನ್ನು ಹೇಳುತ್ತವೆ. ಕಾರ ಋಗ್ವೇದಕ್ಕೆ, ‘ಕಾರ ಯಜುರ್ವೇದಕ್ಕೆ ಮತ್ತು ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾರಂ ರತ್ನ ಧಾತಮಂ |..." ಎಂದು ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥ಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ ಇಷೇ ತ್ವೋರ್ಜೆ ತ್ವಾ …” ಎಂದು ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃಎಂದು ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ಕಾರ ಮತ್ತು ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ(abbreviation)ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ ಅಗ್ನ ಆ ಯಾಹಿ ………” ಎಂದು ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತುಎಂದುಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ ಓಂಕಾರ ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ. ಈ ಕಾರಣದಿಂದ ಓಂಕಾರ ಭಗವಂತನನ್ನು ನಾವು ಕರೆಯಲು ಬಳಸುವ ಅವನ ವಿಶೇಷ(Exclusive)ನಾಮ.
ಓಂಕಾರ ವಿಸ್ತೃತವಾದಾಗ ವ್ಯಾಹೃತಿ, ವ್ಯಾಹೃತಿ ವಿಸ್ತಾರವಾಗಿ ಗಾಯತ್ರಿ, ಗಾಯತ್ರಿ ವಿಸ್ತಾರವಾಗಿ ಕುರುಡ ಸೂಕ್ತ, ನಂತರ ಮೂರು ವೇದಗಳು, ಅಲ್ಲಿಂದ ಸಮಸ್ತ ವೇದಗಳು. ಹೀಗೆ ಪ್ರಣವದಲ್ಲಿ, ವ್ಯಾಹೃತಿಯಲ್ಲಿ, ಪುರುಷ ಸೂಕ್ತದಲ್ಲಿ, ಸಮಸ್ತವೇದಗಳಲ್ಲಿ ಭಗವಂತ ನೆಲೆಸಿದ್ದಾನೆ. ಓಂಕಾರದ ಬಗ್ಗೆ ಅಧ್ಯಾಯ ಏಳರಲ್ಲಿ(ಶ್ಲೋಕ -೦೮) ವಿಶೇಷವಾಗಿ ವಿವರಿಸಲಾಗಿದೆ.
ವೇದದ ಶಬ್ದಗಳಿಂದಲೇ ಹುಟ್ಟಿ ಬಂದ ಪ್ರಪಂಚದ ಎಲ್ಲಾ ಶಬ್ದದಲ್ಲೂ ಎಲ್ಲಾ ಲೌಕಿಕ ನಾದದಲ್ಲೂ ತುಂಬಿದ ಭಗವಂತ, ಆಕಾಶದಲ್ಲಿ ಅನಂತ ಶಬ್ದಗಳನ್ನೂ, ಅನಂತ ನಾದಗಳನ್ನು ಸೃಷ್ಟಿ ಮಾಡಿದ. ನಮಗೆ ಶಬ್ದದಿಂದ ಅನಂತ ಅನುಭವವನ್ನು ಕೊಟ್ಟು, ಆ ಶಬ್ದವನ್ನು ಗ್ರಹಿಸುವ ಮತ್ತು ಗ್ರಹಿಸಿ ಪುನರುಚ್ಛರಿಸುವ ವಿಶೇಷ ಶಕ್ತಿಯನ್ನು ಕರುಣಿಸಿದ. ಜ್ಞಾನದ ಮೂಲಕ ಈ ಶಬ್ದ ನಾಮಕ ಭಗವಂತನನ್ನು ತಿಳಿಯುವ ವಿಶೇಷ ಶಕ್ತಿ ಮಾನವನಿಗೆ ಭಗವಂತನ ವಿಶೇಷ ಕೊಡುಗೆ.
ಭಗವಂತ ಋಕ್’: ಯಾವುದರಿಂದ ನಾವು ಭಗವಂತನನ್ನು ಅರ್ಚನೆ ಮಾಡುತ್ತೇವೆ ಅದು ಋಕ್. ಅದು ಮಂತ್ರಗಳು. ಯಾರು ಅರ್ಚಿಸಲ್ಪಡುತ್ತಾನೋ ಅವನು ಋಕ್ ನಾಮಕ ಭಗವಂತ. ಎಲ್ಲಾ ಮಂತ್ರಗಳಿಂದ ಅರ್ಚಿಸಲ್ಪಡುವವ-ಸ್ತುತಿಗೆ ಪಾತ್ರನಾದ ಭಗವಂತ ಋಕ್
ಭಗವಂತ ಸಾಮಃ’: ಎಲ್ಲವನ್ನು ಸಮೀಕರಿಸಿದವನು. ತನ್ನ ಎಲ್ಲ ರೂಪದಲ್ಲಿ ಜ್ಞಾನಾನಂದಾದಿ ಗುಣಗಳಿಂದ ಸಮನಾದ್ದರಿಂದ ಮತ್ತು ಅವರವರ ಯೋಗ್ಯತೆಗೆ ಸಮನಾಗಿ ಜೀವನ ಕೊಡುವ ಭಗವಂತಸಾಮಃ’.
ಭಗವಂತ ಯಜುಸ್’: ಎಲ್ಲ ಯಾಗಗಳಿಂದ ಹೊಮಿಸಲ್ಪಡುವ, ವೇದಗಳಲ್ಲಿ ಸನ್ನಿಹಿತನಾಗಿರುವ ಸರ್ವಶಬ್ದವಾಚ್ಯ ಭಗವಂತ ಯಜುಸ್’.
·  ಶ್ಲೋಕ - 18
ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್
ಪ್ರಭವಃ ಪ್ರಳಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್ ೧೮॥
ಗತಿಃ ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಮ್ ಸುಹೃತ್
ಪ್ರಭವಃ ಪ್ರಳಯಃ ಸ್ಥಾನಮ್ ನಿಧಾನಮ್ ಬೀಜಮ್ ಅವ್ಯಯಮ್-ಮುಕ್ತಿಗಾಗಿ ತಿಳಿಯಬೇಕಾದವನು. ಎಲ್ಲ ಹೊಣೆಯನ್ನು ಹೊತ್ತವನು. ಎಲ್ಲದರ ಒಡೆಯ. ಎಲ್ಲವನ್ನು ನೇರ ಕಾಣಬಲ್ಲವನು. ಎಲ್ಲರ ನೆಲೆ. ಮುಕ್ತರಿಗು ಆಸರೆ. ಅನಿಮಿತ್ತ ಬಂಧು. ಸೃಷ್ಟಿ-ಸ್ಥಿತಿ-ಪ್ರಳಯಗಳಿಗೆ ಕಾರಣ. ಪ್ರಳಯದಲ್ಲಿ ಜಗವನ್ನು ಬಸಿರಲ್ಲಿ ಹೊತ್ತವನು. ಮತ್ತೆ ಜಗದ ಅಭಿವ್ಯಕ್ತಿಗೆ ಕಾರಣನಾದವನು. ಅಳಿವಿರದವನು.
ಸಂಬಂಧಗಳ ಬಗ್ಗೆ ಹಿಂದೆ ಹೇಳಿದ್ದ ಕೃಷ್ಣ ಇಲ್ಲಿ ನಾನಾ ವಿಧದ ಅನುಬಂಧಗಳನ್ನು ಹೇಳುತ್ತಾನೆ. ಬೇರೆಬೇರೆ ರೀತಿಯಾಗಿ ಸಮಾಜದಲ್ಲಿ ಒಬ್ಬರಿಂದ ಒಬ್ಬರು ನೆರವು ಪಡೆಯುತ್ತಾರೆ. ರಾಜನಿಂದ ರಕ್ಷಣೆ, ಆಪತ್ಕಾಲದಲ್ಲಿ ಆಶ್ರಯ, ಕಷ್ಟದಲ್ಲಿರುವವನನ್ನು ಸಂತೈಸುವುದು, ಗೆಳೆತನ ಇತ್ಯಾದಿ ಅನುಬಂಧಗಳು. ಇವೆಲ್ಲವೂ ಭಗವಂತನ ಧರ್ಮ ಎನ್ನುತ್ತಾನೆ ಕೃಷ್ಣ.
ಯಾರೂ ನೆಲೆಯೇ ಇಲ್ಲ, ಬದುಕುವುದಕ್ಕೆ ಅವಕಾಶವೇ ಇಲ್ಲ ಅನ್ನುವಾಗ ನಾನಿದ್ದೇನೆಎಂದು ರಕ್ಷಣೆ ಮಾಡುವವರನ್ನು ಗತಿಎನ್ನುತ್ತಾರೆ. ವಾಸ್ತವವಾಗಿ ಗತಿ ಎಂದರೆ ಕೊನೆಯ ಗತಿ. ಸಂಸಾರದಲ್ಲಿ ಮಾತ್ರ ಅಲ್ಲ ಮೊಕ್ಷದಲ್ಲೂ ಆಶ್ರಯವಾಗಿರುವ ಭಗವಂತ ಗತಿಃ. ಆತನೇ ಸದ್ಗತಿ, ತಪ್ಪು ಮಾಡಿದಾಗ ಆತನೇ ದುರ್ಗತಿ ಕೂಡಾ. ಎಲ್ಲ ಹೊಣೆಯನ್ನು ಹೊತ್ತು, ಪ್ರಪಂಚದಲ್ಲಿ ಪ್ರತಿಯೊಬ್ಬರು ಏನು ಮಾಡುತ್ತಾರೆ, ಅವರ ಒಳಿತು ಕೆಡುಕುಗಳೇನು ಎಂದು ನೋಡಬಲ್ಲ ಪ್ರಭು ಭಗವಂತ. ಆತ ನಮ್ಮ ಅಂತರಂಗ ಬಹಿರಂಗ ಎಲ್ಲವನ್ನೂ ಬಲ್ಲವ. ಆತ ಎಲ್ಲೆಡೆ ತುಂಬಿ ಎಲ್ಲವನ್ನೂ ಕಾಣಬಲ್ಲ ನಿಜವಾದ ಸಾಕ್ಷಿ.
ಮುಂದುವರಿದು ಕೃಷ್ಣ ಹೇಳುತ್ತಾನೆ ಅಹಮ್ ನಿವಾಸಃಎಂದು. ಈಶಾವಾಸ್ಯೋಪನಿಷತ್ತಿನಲ್ಲಿ ಹೇಳುವಂತೆ:
ಈಶಾವಾಸ್ಯಂ ಇದಂ ಸರ್ವಂ ಯತ್ ಕಿಂ ಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭೂಂಜಿಥಾಃ ಮಾ ಗೃಧಃ ಕಸ್ಯ ಸ್ವಿದ್ ಧನಮ್|
ನಾವು ವಾಸ ಮಾಡುತ್ತಿರುವುದೇ ಭಗವಂತನ ಮನೆಯಲ್ಲಿ. ಈ ವಿಶ್ವವೆಂಬ ಮನೆಯನ್ನು ನಿರ್ಮಿಸಿ, ಅದರಲ್ಲಿ ನಮಗೆ ಆಶ್ರಯ ಕೊಟ್ಟು, ನಮಗೆ ಬದುಕಲು ಬೇಕಾದ ವ್ಯವಸ್ಥೆ ಮಾಡಿದ ಭಗವಂತ ನಿವಾಸಃ. ಆತ ಎಲ್ಲರಿಗೂ ಆಸರೆ. ಇಂತಹ ಭಗವಂತ ನಮಗೆ ಆಪತ್ಕಾಲದಲ್ಲಿ ರಕ್ಷಣೆ(ಶರಣ) ಕೊಡುವ ಆತ್ಮೀಯ ಗೆಳೆಯ(ಸುಹೃತ್).
ಗೆಳೆಯರಲ್ಲಿ ಎರಡು ವಿಧ. ಸಖ ಮತ್ತು ಸುಹೃತ್. ಸಖಎಂದರೆ ಒಡನಾಡಿ. ಯಾವಾಗಲೂ ಜೊತೆಗಿರುವವ. ಸುಹೃತ್ ಎಂದರೆ ದೂರದಲ್ಲಿರಲಿ ಹತ್ತಿರವಿರಲಿ ನಮ್ಮ ಹೃದಯಕ್ಕೆ ಸ್ಪಂದಿಸಿ ನಮ್ಮ ಹಿತಚಿಂತಕನಾಗಿರುವವ. ಭಗವಂತ ನಮ್ಮ ಹೃತ್ಕಮಲ ಮಧ್ಯ ನಿವಾಸಿಯಾಗಿರುವ ಸಖ ಮತ್ತು ನಮ್ಮ ಹೃದಯದ ಕೂಗಿಗೆ ಸದಾ ಸ್ಪಂದಿಸುವ ಸುಹೃತ್.
ಅನುಬಂಧವನ್ನು ಹೇಳಿದ ಕೃಷ್ಣ ಮುಂದೆ ಮನುಷ್ಯ ಶಕ್ತಿಯನ್ನು ಬಿಟ್ಟು ದೇವತಾ ಶಕ್ತಿಯನ್ನು ವಿವರಿಸುತ್ತಾನೆ. ಹೇಳುತ್ತಾನೆ ಪ್ರಭವಃ ಪ್ರಳಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್ಎಂದು. ನಮ್ಮಲ್ಲಿ ಕೆಲವರು ತಿಳಿದಿದ್ದಾರೆ ಸೃಷ್ಟಿಕರ್ತ -ಬ್ರಹ್ಮ, ಸ್ತಿತಿ-ವಿಷ್ಣು ಮತ್ತು ಸಂಹಾರ-ಶಿವ ಎಂದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ:ನಾನೇ ಪ್ರಭವಃ- ಪ್ರಳಯಃ-ಸ್ಥಾನಂಎಂದು. ಜಗತ್ತಿನ ಸೃಷ್ಟಿಗೆ ಮೂಲ ಕಾರಣ, ಸೃಷ್ಟಿಯ ಕೊನೆಯಲ್ಲಿ ಈ ಜಗತ್ತು ನಾಶವಾಗಲು, ಮತ್ತು ಸೃಷ್ಟಿಯಿಂದ ಸಂಹಾರ ತನಕದ ಅವದಿಯಲ್ಲಿ ಸ್ಥಿತಿಗೆ ಮೂಲತಃ ಭಗವಂತನೇ ಕಾರಣ.
ಪ್ರಳಯ ಕಾಲದಲ್ಲಿ ಸಮಸ್ತ ಜೀವಜಾತವನ್ನು ಸೂಕ್ಷ್ಮ ಸ್ಥಿತಿಯಲ್ಲಿ ತನ್ನ ಹೊಟ್ಟೆಯಲ್ಲಿಟ್ಟು ಸಾಕುವವ ಆ ಭಗವಂತ. ಆ ಸೂಕ್ಷ್ಮ ವಸ್ತು ಮತ್ತೆ ಚಿಗುರಿ ಅರಳಿ ಹೆಮ್ಮರವಾಗಿ ಬೆಳೆಯುವಂತೆ ಬೀಜಕ್ಷೇಪ ಮಾಡುವ, ಎಂದೂ ಅಳಿವಿಲ್ಲದ ಅವ್ಯಯ-ಭಗವಂತ.
ಹೀಗೆ ಜಗತ್ತಿನ ಸಮಸ್ತ ಕ್ರಿಯೆಯನ್ನು, ಲೌಕಿಕ , ಪ್ರಾಪಂಚಿಕ, ಪಾರಲೌಕಿಕವಾದ ಸಂಬಂಧಗಳು,ಅನುಬಂಧಗಳು ಎಲ್ಲವನ್ನು ವಿವರಿಸಿದ ಕೃಷ್ಣ ಮುಂದೆ ಕಾಲಕಾಲದಲ್ಲಿ ಆಗತಕ್ಕಂತಹ ಸಂಗತಿಗಳನ್ನು ವಿವರಿಸುತ್ತಾನೆ.
·  ಶ್ಲೋಕ - 19
ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ
ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ॥೧೯॥
ತಪಾಮಿ ಅಹಮ್ ಅಹಮ್ ವರ್ಷಮ್ ನಿಗೃಹ್ಣಾಮಿ ಉತ್ಸೃಜಾಮಿ ಚ
ಅಮೃತಮ್ ಚ ಏವ ಮೃತ್ಯುಃ ಚ ಸತ್ ಅಸತ್ ಚ ಅಹಮ್ ಅರ್ಜುನ-ನಾನು ಸುಡುತ್ತೇನೆ. ನಾನು ಮಳೆ ಬರದಂತೆ ತಡೆಯುತ್ತೇನೆ; ಮಳೆಗರೆಸುತ್ತೇನೆ. ಸಾವು ಬರದಂತೆ ಮಾಡುತ್ತೇನೆ; ಸಾಯಿಸುತ್ತೇನೆ. ಓ ಅರ್ಜುನ, ಕಾಣುವ ಕಾರ್ಯ, ಕಾಣದ ಕಾರಣ ಎಲ್ಲವೂ ನನ್ನಿಂದ.[ಸದ್ಗುಣಗಳ ಸೆಲೆಯಾದ್ದರಿಂದ ನಾನು ಸತ್’. ನನ್ನಂಥವ ಇನ್ನೊಬ್ಬ ಇರದ್ದರಿಂದ ನಾನು ಅಸತ್’]
ಸೂರ್ಯನಲ್ಲಿ ಸನ್ನಿಹಿತನಾಗಿ, ಭೂಮಿಗೆ ಸೌರಶಕ್ತಿಯನ್ನು ಹರಿಸಿ, ಬದುಕು ಕೊಟ್ಟವ ಭಗವಂತ. ಕಾಲ ಕಾಲಕ್ಕೆ ಮಳೆ ಬರುವಂತೆ ಮಾಡುವವನೂ ಅವನೆ, ಅಕಾಲದಲ್ಲಿ ಮಳೆ ಬಾರದಂತೆ ತಡೆಯುವವನೂ ಅವನೆ. ಮಳೆ ಬರಬೇಕಾದಾಗ ಬಾರದೇ ಇರುವುದು, ಮಳೆ ಬರಬಾರದಾಗ ಬರುವುದೂ ಭಗವಂತನನಿಂದಲೆ. ಕಾಣುವ ಕ್ರಿಯೆಯ ಹಿಂದಿನ ಕಾರಣಶಕ್ತಿ ಭಗವಂತ.
ಭಗವಂತ ನಮ್ಮ ಬದುಕಿನಲ್ಲಿ ಉಸಿರು ಕೊಟ್ಟು ಬದುಕಿಸುವ ಅಮೃತ. ಆಯಸ್ಸು ಮುಗಿದಾಗ ಉಸಿರು ನಿಲ್ಲಿಸಿ ಕರೆಸಿ ಕೊಳ್ಳುವವನೂ ಅವನೆ. ಒಟ್ಟಿನಲ್ಲಿ ಕೃಷ್ಣ ಹೇಳುತ್ತಾನೆಕಣ್ಣಿಗೆ ಕಾಣುವ (ಸತ್), ಕಣ್ಣಿಗೆ ಕಾಣದ (ಅಸತ್) ಸಮಸ್ತ ಪ್ರಪಂಚವನ್ನು ನಿರ್ವಹಿಸುವ ಶಕ್ತಿ ನಾನುಎಂದು. ಇದು ಕೃಷ್ಣ ಸೂಕ್ಷ್ಮವಾಗಿ ಭಗವಂತನ ಅನುಸಂಧಾನಕ್ಕೆ ಕೊಟ್ಟಿರುವ ಸಮಗ್ರ ಚಿತ್ರಣ. ಇಲ್ಲಿ ಪೂರ್ಣ ಪ್ರಮಾಣದಲ್ಲಿ ಭಗವಂತನ ಅನುಸಂಧಾನಕ್ಕೆ ಬೇಕಾದ ಸಮಗ್ರ ಸಂಗತಿ ಅಡಗಿದೆ.
ಮುಂದೆ ಕೃಷ್ಣ ತನ್ನ ಭಕ್ತರಲ್ಲಿ(ಜ್ಞಾನಿಗಳಲ್ಲೇ) ಪ್ರಮುಖವಾಗಿ ಎರಡು ವಿಧದ ಭಕ್ತರ ಬಗ್ಗೆ ವಿವರಿಸುತ್ತಾನೆ. ಅವರೆಂದರೆ ತ್ರೈವಿದ್ಯರು ಮತ್ತು ಭಾಗವತರು.
·  ಶ್ಲೋಕ - 20
ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾಃ ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ ।
ತೇ ಪುಣ್ಯಮಾಸಾದ್ಯ ಸುರೇಂದ್ರ ಲೋಕಮಶ್ನಂತಿ ದಿವ್ಯಾನ್ ದಿವಿ ದೇವಭೋಗಾನ್ ॥೨೦॥
ತ್ರೈ ವಿದ್ಯಾಃ ಮಾಮ್ ಸೋಮಪಾಃ ಪೂತ ಪಾಪಾಃ ಯಜ್ಞೈಃ ಇಷ್ಟ್ವಾ ಸ್ವಃ ಗತಿಮ್ ಪ್ರಾರ್ಥಯಂತೇ ।
ತೇ ಪುಣ್ಯಮ್ ಆಸಾದ್ಯ ಸುರ ಇಂದ್ರ ಲೋಕಮ್ ಅಶ್ನಂತಿ ದಿವ್ಯಾನ್ ದಿವಿ ದೇವ ಭೋಗಾನ್ ತ್ರೈವಿದ್ಯರು ಮೂರು ವೇದಗಳ ಮೊರೆಹೊಕ್ಕ ಹಂಬಲಿಗರು. ಹೊಮಿಸುತ್ತ ನನ್ನನಾರಾಧಿಸಿ, ಸೋಮರಸ ಕುಡಿದು, ಪಾಪ ತೊಡೆದು, ಸಗ್ಗದ ದಾರಿಯನ್ನು ಬೇಡುತ್ತಾರೆ. ಅವರು ಪುಣ್ಯದ ಫಲವಾಗಿ ದೇವೇಂದ್ರನ ನಾಡು ಸೇರಿ, ಆ ಸಗ್ಗದಲ್ಲಿ ವೆಗ್ಗಳದ ದೇವಭೂಗಗಳನ್ನು ಉಣ್ಣುತ್ತಾರೆ.
ತ್ರೈವಿದ್ಯರು ಎಂದರೆ ತ್ರಿಪಥಗಾಮಿಗಳು! ಇವರು ಭಗವಂತನ ಜೊತೆಗೆ ಅನೇಕವನ್ನು ಹಂಚಿಕೊಂಡವರು. ಇವರು ಸ್ವರ್ಗದ ಬಯಕೆ, ಲೌಕಿಕ ಬಯಕೆಯನ್ನು ಮುಂದಿಟ್ಟು ಭಗವಂತನಲ್ಲಿ ಭಕ್ತಿ ಮಾಡುತ್ತಾರೆ. ಇವರಿಗೆ ವೇದದಲ್ಲಿ ಹೇಳಿದ ಕರ್ಮಖಂಡವೇ ಮುಖ್ಯವಾಗುತ್ತದೆ. ಜ್ಯೋತಿಷ್ಟೋಮಯ ಯಾಗಗದಂತಹ ಯಾಗವನ್ನು ಕೇವಲ ಸ್ವರ್ಗದ ಬಯಕೆಯಿಂದ ಮಾಡಿ, ಭಗವಂತನನ್ನು ಬಯಸದೆ ಸ್ವರ್ಗವನ್ನು ಬಯಸುತ್ತಾರೆ. ಹೀಗೆ ಭಕ್ತಿ ಮಾಡುವುದರ ಫಲವಾಗಿ ಅವರು ಇಂದ್ರನ ನಾಡಾದ ಸ್ವರ್ಗವನ್ನು ಸೇರಿ ಅಲ್ಲಿ ಭೋಗವನ್ನು ಅನುಭವಿಸುತ್ತಾರೆ.
·  ಶ್ಲೋಕ - 21
ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ
ಏವಂ ತ್ರಯೀಧರ್ಮಮನುಪ್ರಪನ್ನಾಃ ಗತಾಗತಂ ಕಾಮಕಾಮಾ ಲಭಂತೇ ॥೨೧॥
ತೇ ತಮ್ ಭುಕ್ತ್ವಾ ಸ್ವರ್ಗ ಲೋಕಮ್ ವಿಶಾಲಮ್ ಕ್ಷೀಣೇ ಪುಣ್ಯೇ ಮರ್ತ್ಯ ಲೋಕಮ್ ವಿಶಂತಿ
ಏವಮ್ ತ್ರಯೀ ಧರ್ಮಮ್ ಅನುಪ್ರಪನ್ನಾಃ ಗತ ಆಗತಮ್ ಕಾಮ ಕಾಮಾಃ ಲಭಂತೇ ಅವರು ಹಿರಿದಾದ ಸಗ್ಗಿಗರ ನಾಡನ್ನು ಕಂಡುಂಡು, ಪುಣ್ಯ ಮುಗಿದಾಗ ಭೂಮಿಗೆ ಮರಳುತ್ತಾರೆ. ಹೀಗೆ ವೈದಿಕ ಕರ್ಮಗಳ ಮೊರೆ ಹೊಕ್ಕು, ಬಯಕೆಗಳ ಬೆನ್ನುಹತ್ತಿ ಅತ್ತಿಂದಿತ್ತ ಅಲೆದಾಡುತ್ತಿರುತ್ತಾರೆ.
ಸ್ವರ್ಗದ ಬಯಕೆಯಿಂದ ಪುಣ್ಯಕರ್ಮ ಮಾಡುವ ತ್ರೈವಿದ್ಯರು ಸ್ವರ್ಗವನ್ನು ಸೇರಿ ಅಲ್ಲಿ ಬಗೆ ಬಗೆಯ ಭೋಗವನ್ನು ಅನುಭವಿಸಿ ತಮ್ಮ ಸತ್ಕರ್ಮದ ಫಲ ಮುಗಿದ ತಕ್ಷಣ ಪುನಃ ಭೂಲೋಕದಲ್ಲಿ ಹುಟ್ಟುತ್ತಾರೆ. ಈ ಕಾರಣದಿಂದ ಇವರು ಅತ್ಯಂತ ಹಿರಿದಾದ ಮೋಕ್ಷದಿಂದ, ಭಗವಂತನಿಂದ ವಂಚಿತರಾಗುತ್ತಾರೆ. ಇವರು ಸದಾ ಬಯಕೆಗಳ ಬೆನ್ನು ಹತ್ತಿ ಚಕ್ರಭ್ರಮಣದಲ್ಲಿ ಸಿಲುಕಿ ಕೊಳ್ಳುತ್ತಾರೆ.
ಇವರಿಗಿಂತ ತೀರ ಭಿನ್ನ ನಡೆ ಭಾಗವತರದ್ದು:
·  ಶ್ಲೋಕ - 22
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ।
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ॥೨೨॥
ಅನನ್ಯಾಃ ಚಿಂತಯಂತಃ ಮಾಮ್ ಯೇ ಜನಾಃ ಪರ್ಯುಪಾಸತೇ ।
ತೇಷಾಮ್ ನಿತ್ಯ ಅಭಿಯುಕ್ತಾನಾಮ್ ಯೋಗ ಕ್ಷೇಮಮ್ ವಹಾಮಿ ಅಹಮ್- ಬೇರೆಲ್ಲಾ ತೊರೆದು ನನ್ನನ್ನೆ ನೆನೆಯುತ್ತ ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲು ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು.
ಭಾಗವತರು ಯಾವುದನ್ನೂ ಬೇಕು ಎಂದು ಬಯಸುವುದಿಲ್ಲ. ಅವರಿಗೆ ಭಗವಂತನ ಚಿಂತನೆಯೊಂದನ್ನು ಬಿಟ್ಟರೆ ಬೇರೆ ಚಿಂತನೆಯೇ ಇಲ್ಲ. ಇವರು ಅನನ್ಯವಾಗಿ ಭಗವಂತನನ್ನು ಮಾತ್ರ ಬಯಸುತ್ತಾರೆ. ಯಾವುದೋ ಬಯಕೆಗೆ ಕಟ್ಟು ಬಿದ್ದು ಅವರು ಪೂಜೆ ಮಾಡುವುದಿಲ್ಲ. ಇವರು ಭಗವಂತನಲ್ಲದೆ ಇನ್ನ್ಯಾವುದೇ ದೇವತೆಯನ್ನು ಪ್ರಧಾನವಾಗಿಟ್ಟುಕೊಂಡು ಆಹುತಿ ಕೊಟ್ಟು ಆರಾಧನೆ ಮಾಡುವುದಿಲ್ಲ. ಎಲ್ಲ ದೇವತೆಯ ಒಳಗೂ ಇವರು ಕೇವಲ ಭಗವಂತನನ್ನು ಕಾಣುತ್ತಾರೆ. ಇದು ಏಕಭಕ್ತಿ-ಪರಮಾತ್ಮನನ್ನು, ಮೋಕ್ಷವನ್ನು ಸೇರಲು ಅನುಸರಿಸಬೇಕಾದ ಮಾರ್ಗ.
ನಾವು ಪೂಜೆ ಮಾಡಿಸಿದಾಗ ಸಂಕಲ್ಪ ಮಾಡಿಸುತ್ತಾರೆ. ಇಲ್ಲಿ ನಾವು ಎಂದೂ ನಮ್ಮ ಐಹಿಕ ಬಯಕೆಗಳನ್ನು ಭಗವಂತನ ಮುಂದಿಡಬಾರದು. ಕೇವಲ ಜ್ಞಾನ, ಭಕ್ತಿ, ಮೋಕ್ಷ- ಇದು ನಮ್ಮ ಸಂಕಲ್ಪವಾಗಿರಬೇಕು. ನಶ್ವರವಾದ ಬಯಕೆಗಳನ್ನು ಮುಂದಿಟ್ಟು ಪೂಜೆ ಮಾಡಿಸಿದಾಗ ನಾವು ಮಹತ್ತಾದ ಫಲವನ್ನು ಕಳೆದುಕೊಳ್ಳುತ್ತೇವೆ. ನಮಗೆ ಏನು ಬೇಕು ಏನು ಬೇಡ ಎನ್ನುವುದು ಭಗವಂತನಿಗೆ ನಮಗಿಂತ ಚನ್ನಾಗಿ ಗೊತ್ತು ಮತ್ತು ಆತ ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ. ಪೂಜೆ ಕೇವಲ ಭಗವಂತನ ಪ್ರೀತ್ಯಾರ್ಥವಾಗಿ ಮಾಡಿ ಆತನಲ್ಲಿ ಅನನ್ಯ ಭಕ್ತಿ ನೆಟ್ಟಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಕೃಷ್ಣ ಹೇಳುತ್ತಾನೆ ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ಇಂತಹ ಭಕ್ತರ ಯೋಗಕ್ಷೇಮದ ಹೊಣೆ ನನ್ನದು ಎಂದು. ಇದಕ್ಕಿಂತ ಹೆಚ್ಚಿನ ಭರವಸೆ ಏನು ಬೇಕು?
ನಾವು ಗಾಢವಾಗಿ ಭಗವಂತ ನಮ್ಮನ್ನು ರಕ್ಷಿಸಿಯೇ ರಕ್ಷಿಸುತ್ತಾನೆಎಂದು ಗಟ್ಟಿಯಾಗಿ ನಂಬಿದರೆ ಆತ ರಕ್ಷಿಸಿಯೇ ರಕ್ಷಿಸುತ್ತಾನೆ. ಭಗವಂತನ ಮೇಲಿನ ನಮ್ಮ ನಂಬಿಕೆಯಲ್ಲಿ ನಾವು ಎಂದೂ ವಿಚಲಿತರಾಗಬಾರದು. ಅದು ದೃಢವಾಗಿರಬೇಕು. ಗುರಿ ಕೇವಲ ಭಗವಂತನನ್ನು ಸೇರುವತ್ತ ಇರಬೇಕು. ಭಗವಂತ ಏನು ಕೊಟ್ಟನೋ ಅದೇ ಮಹಾ ಪ್ರಸಾದವೆಂದು ಸ್ವೀಕರಿಸಿ ಸಂಪೂರ್ಣ ಆತನಲ್ಲಿ ಶರಣಾಗಬೇಕು. ಇಂತಹ ಸ್ಥಿತಿಯಲ್ಲಿ ನಮಗೆ ಎಂದೂ ದುಃಖವಾಗುವುದಿಲ್ಲ. ಬದುಕು ಆನಂದಮಯವಾಗಿರುತ್ತದೆ. ಜೀವನದಲ್ಲಿ ಏನೇ ಘಟನೆ ನಡೆದರೂ ಭಗವಂತನ ಚಿತ್ತದಂತೆ ಆಯಿತುಎಂದು ತಿಳಿದು ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿ ನಮ್ಮದಾಗಬೇಕು. ಇದು ಮೋಕ್ಷದ ಹೆಬ್ಬಾಗಿಲು.
·  ಶ್ಲೋಕ - 23
ಯೇSಪ್ಯನ್ಯದೇವತಾ ಭಕ್ತಾ ಯಜಂತೇ ಶ್ರದ್ಧಯಾSನ್ವಿತಾಃ ।
ತೇSಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ ೨೩॥
ಯೇ ಅಪಿ ಅನ್ಯ ದೇವತಾ ಭಕ್ತಾಃ ಯಜಂತೇ ಶ್ರದ್ಧಯಾ ಅನ್ವಿತಾಃ ।
ತೇ ಅಪಿ ಮಾಮ್ ಏವ ಕೌಂತೇಯ ಯಜಂತಿ ಅವಿಧಿ ಪೂರ್ವಕಮ್-ಕೌಂತೇಯ, ಯಾರು ಬೇರೆ ದೇವತೆಗಳ ಭಕ್ತರಾಗಿ ಶ್ರದ್ಧೆಯಿಂದ ಅವರನ್ನು ಆರಾಧಿಸುತ್ತಾರೆ ಅಂಥವರು ಕೂಡ ತಪ್ಪುದಾರಿಯಿಂದ ನನ್ನನ್ನೆ ಆರಾಧಿಸುತ್ತಾರೆ.
·  ಶ್ಲೋಕ - 24
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ
ನತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ॥೨೪॥
ಅಹಮ್ ಹಿ ಸರ್ವಯಜ್ಞಾನಾಮ್ ಭೋಕ್ತಾ ಚ ಪ್ರಭುಃ ಏವ
ನ ತು ಮಾಮ್ ಅಭಿಜಾನಂತಿ ತತ್ತ್ವೇನ ಅತಃ ಚ್ಯವಂತಿ ತೇ-ನಾನೆ ಅಲ್ಲವೆ ಎಲ್ಲ ಪೂಜೆಗಳನ್ನು ಕೊಳ್ಳುವವನು ಮತ್ತು ನಡೆಸುವವನು. ನಿಜವಾಗಿ ಅವರು ನನ್ನನ್ನು ಚನ್ನಾಗಿ ತಿಳಿದಿಲ್ಲ. ಅದರಿಂದ ಜಾರಿ ಬೀಳುತ್ತಾರೆ.
ಹಿಂದೆ ವಿಶ್ಲೇಶಿಸಿದಂತೆ ಕೆಲವರು ತಮ್ಮ ಬಯಕೆಗಳನ್ನು ಈಡೇರಿಸುವಂತೆ ಕೋರಿ ದೇವತೆಗಳನ್ನು ಪ್ರಮುಖವಾಗಿ (ಭಗವಂತನಿಗಿಂತ ಬಿನ್ನವಾಗಿ) ಪೂಜಿಸುತ್ತಾರೆ. ಹೀಗೆ ಮಾಡಿದಾಗ ಏನಾಗುತ್ತದೆ ಎನ್ನುವ ಪ್ರಶ್ನೆ ನಮಗೆ ಮೂಡಬಹುದು. ಹಿಂದೆ ಕೃಷ್ಣ ಹೇಳಿದ್ದಎಲ್ಲವುದರಲ್ಲೂ ಇರುವವನು ನಾನುಎಂದು. ಯಾರನ್ನು ಪ್ರಮುಖವಾಗಿ ಪೂಜಿಸಿದರೂ ಕೂಡಾ ಅದು ಸಲ್ಲುವುದು ಭಗವಂತನನ್ನೇ. ಇಲ್ಲಿ ಸಮಸ್ಯೆ ಎಂದರೆ ಪೂಜೆ ಮಾಡುವವರಿಗೆ ಆ ಅರಿವು ಇಲ್ಲದಿರುವುದು. ಇದರಿಂದ ತಪ್ಪು ಅನುಸಂಧಾನ. ಅರಿವಿಲ್ಲದೇ ಮಾಡುವ ಭಕ್ತಿ ಪೂರ್ಣ ಭಕ್ತಿಯಾಗಲಾರದು. ಪರತತ್ವದ ಎಚ್ಚರ ಇಲ್ಲದೆ ಮಾಡುವ ಪೂಜೆ ಎಂದೂ ನಮ್ಮನ್ನು ಉನ್ನತಿಗೇರಿಸಲಾರದು. ಕೃಷ್ಣ ಹೇಳುತ್ತಾನೆ ಈ ರೀತಿಯ ಪೂಜೆಯಿಂದ ಪುಣ್ಯ ಗಳಿಸುವ ಬದಲು, ಪುಣ್ಯ ಕರ್ಮ ಮಾಡಿಯೂ ಜಾರಿ ಬಿದ್ದಂತೆಎಂದು. ಆದ್ದರಿಂದ ಯಾವ ಪೂಜೆಯನ್ನೇ ಆಗಲಿ ಪರತತ್ವದ ಎಚ್ಚರದಿಂದ ಮಾಡಿದಾಗ ಮಾತ್ರ ಅದು ಸಾರ್ಥಕ. ಯಾರನ್ನೇ ಪೂಜಿಸಿದರೂ ಆ ಪೂಜೆ ಅಂತತಃ ಸಲ್ಲುವುದು ಭಗವಂತನನ್ನೇ. ಏಕೆಂದರೆ ಸರ್ವ ಯಜ್ಞಗಳ ಭೊಕ್ತಾರ ಭಗವಂತ. ಇದು ಯಜ್ಞದ ಹಿಂದಿರುವ ಯಜ್ಞಪುರುಷನ ರಹಸ್ಯ. ಪುರುಷಸೂಕ್ತದಲ್ಲಿ ಹೇಳುವಂತೆ "ಯಜ್ಞೇನ ಯಜ್ಞ ಮಯಜಂತ ದೇವಾಃ"-ಯಜ್ಞದಿಂದ ಯಜ್ಞ ನಾಮಕ ಭಗವಂತನ ಆರಾಧನೆ. ಯಜ್ಞಗಳ ಭೊಕ್ತ, ಯಜ್ಞಗಳ ಸ್ವಾಮಿ, ಯಜ್ಞ ಶಬ್ದವಾಚ್ಯನಾದ ಭಗವಂತನ ಆರಾಧನೆಯಿಂದ ನಾವು ಭಗವಂತನನ್ನು ಸೇರಬಹುದು.
ಹೀಗಿದ್ದರೂ ಕೂಡಾ ಸಮಾಜದಲ್ಲಿ ನಾವು ಅನೇಕ ರೀತಿಯಲ್ಲಿ ದೇವತಾ ಆರಾದನೆ ಮಾಡುವವರನ್ನು ನೋಡುತ್ತೇವೆ. ಅಂತವರು ಆ ದೇವತೆಯನ್ನು ಪೂಜಿಸುವುದರಲ್ಲೇ ಶ್ರದ್ಧೆ ಇಟ್ಟಿರುತ್ತಾರೆ. ಆ ರೀತಿ ಪೂಜೆ ಮಾಡುವವರ ಗತಿ ಏನು? ಇದಕ್ಕೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.
·  ಶ್ಲೋಕ - 25
ಯಾಂತಿ ದೇವವ್ರತಾ ದೇವಾನ್ ಪಿತ ನ್ ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಮ್ ೨೫॥
ಯಾಂತಿ ದೇವವ್ರತಾಃ ದೇವಾನ್ ಪಿತ ನ್ ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮತ್ ಯಾಜಿನಃ ಅಪಿ ಮಾಮ್-ದೇವತೆಗಳ ನೇಮ ಹಿಡಿದವರು ದೇವತೆಗಳನ್ನು ಸೇರುತ್ತಾರೆ. ಪಿತೃಗಳ ನೇಮ ಹಿಡಿದವರು ಪಿತೃಗಳನ್ನು ಸೇರುತ್ತಾರೆ. ದೆವ್ವಗಳನ್ನು ಪೂಜಿಸುವವರು ದೆವ್ವಗಳನ್ನು ಸೇರುತ್ತಾರೆ. ನನ್ನನ್ನು ಪೂಜಿಸುವವರು ನನ್ನನ್ನೇ ಸೇರುತ್ತಾರೆ.
ಕೃಷ್ಣ ಹೇಳುತ್ತಾನೆ ನೀವು ಯಾರನ್ನು ಪೂಜಿಸುತ್ತೀರೋ ಅವರನ್ನೇ ಪಡೆಯುತ್ತೀರಿಎಂದು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನೂ, ಪಿತೃಗಳನ್ನು ಪೂಜಿಸುವವರು ಪಿತೃಗಳನ್ನೂ, ಭೂತ ಪ್ರೇತವನ್ನು(ದೇವತಾ ಗಣ) ಪೂಜಿಸುವವರು ಭೂತ ಪ್ರೇತಗಳನ್ನೂ ಪಡೆಯುತ್ತಾರೆ. ಆದರೆ ಯಾರು ಏಕಭಕ್ತಿಯಿಂದ ಎಲ್ಲವುದರಲ್ಲೂ ಭಗವಂತನನ್ನು ಕಂಡು ಶ್ರದ್ಧೆಯಿಂದ ಆತನನ್ನು ಪೂಜಿಸುತ್ತಾರೋ- ಅವರು ನನ್ನನ್ನು ಸೇರುತ್ತಾರೆಎನ್ನುವ ಭರವಸೆಯನ್ನು ಇಲ್ಲಿ ಕೃಷ್ಣ ಕೊಡುತ್ತಾನೆ. ದೇವತೆಗಳನ್ನು ಪೂಜಿಸಿ ಸ್ವರ್ಗವನ್ನು ಪಡೆಯಬಹುದು, ಆದರೆ ಮರಳಿ ಹುಟ್ಟದ ಮೋಕ್ಷವನ್ನಲ್ಲ. ಯಾವ ಪೂಜೆ ಮಾಡಿದರೂ ಸರಿಯೇ, ಪ್ರತಿಯೊಂದು ಕ್ರಿಯೆಯ ಹಿಂದೆ ಭಗವಂತನ ಅರಿವಿದ್ದು ಅದರಿಂದ ಅವನನ್ನು ಆರಾಧಿಸುವುದೇ ನಿಜವಾದ ಪೂಜೆ. ಅರಿವಿಲ್ಲದ ಪೂಜೆ ಎಂದೂ ನಮ್ಮನ್ನು ಮೋಕ್ಷದತ್ತ ಕೊಂಡೊಯ್ಯುವುದಿಲ್ಲ.ಬ್ರಹ್ಮಾದಿ ಸಮಸ್ತ ದೇವತಾ ಪರಿವಾರ ಸಮೆತನಾಗಿರತಕ್ಕಂತಹ ಭಗವಂತನ ಆರಾಧನೆ ಮಾಡಿದರೆ ಆಗ ಭಗವಂತನನ್ನು ಸೇರುತ್ತಾರೆ. ಇದು ಶಾಸ್ತ್ರದ ವ್ಯವಸ್ಥೆ.
·  ಶ್ಲೋಕ - 26
ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಇಲ್ಲಿ ನಾವು ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಯಬೇಕು. ನಾವು ನಮ್ಮ ದೈನಂದಿನ ಜೀವನದಲ್ಲಿ ಗಣಹೋಮ, ನವಗ್ರಹಹೋಮ, ದೈವಾರಾಧನೆ, ಸಂಕಷ್ಟಿ, ಇತ್ಯಾದಿ ರೂಪದಲ್ಲಿ ಉಪಾಸನೆ ಮಾಡುತ್ತೇವೆ. ಇದು ತಪ್ಪೇ? ನಾವು ಗಣಪತಿ ಅಥವಾ ಇನ್ಯಾವುದೋ ಪ್ರತೀಕದಲ್ಲಿ ಭಗವಂತನ ಆರಾಧನೆ ಮಾಡಿದರೆ ನಮಗೆ ಮೋಕ್ಷ ಪ್ರಾಪ್ತಿ ಇಲ್ಲವೇ? ಯಾವುದು ಸರಿ, ಯಾವುದು ತಪ್ಪು? ಯಾವುದು ತ್ರೈವಿಧ್ಯಧರ್ಮ, ಯಾವುದು ಭಾಗವತ ಧರ್ಮ ?
ನಮ್ಮಲ್ಲಿ ಇಂದು ಭಾಗವತ ಧರ್ಮ ಕಣ್ಮರೆಯಾಗುತ್ತಿದೆ. ಯಾವುದೇ ಪ್ರತೀಕದ ಅಂತರ್ಯಾಮಿ ಭಗವಂತನ ಪೂಜೆ ತಪ್ಪಲ್ಲ. ಆದರೆ ಅದರ ಹಿಂದಿರುವ ನಮ್ಮ ಸಂಕಲ್ಪ ತಪ್ಪು. ಉದಾಹರಣೆಗೆ ನವಗ್ರಹ ಹೋಮ. ಒಂದು ವೇಳೆ ನಾವು ಯಾವ ಫಲ ಕಾಮನೆ ಇಲ್ಲದೆ, ಕೇವಲ ಮೋಕ್ಷ ಪ್ರಾಪ್ತಿಗಾಗಿ, ಸಕಲ ದೇವತಾಪರಿವಾರನಾದ, ನವಗ್ರಹ ಅಂತರ್ಗತ ನಾರಾಯಣ ಪ್ರೀತ್ಯರ್ಥ ನವಗ್ರಹ ಹೋಮ ಮಾಡಿದರೆ ಏನೂ ತಪ್ಪಿಲ್ಲ. ಆದರೆ ಅಲ್ಲಿ ನಾವುನವಗ್ರಹ ಅಂತರ್ಗತ ನಾರಾಯಣ ಪ್ರಸನ್ನನಾಗಿ ಆ ಮೂಲಕ ನವಗ್ರಹ ದೋಷ ಪರಿಹಾರ ಮಾಡಲಿಎಂದು ಸಂಕಲ್ಪ ಮಾಡಿದಾಗ ಅದು ತ್ರೈವಿಧ್ಯ ಧರ್ಮವಾಗುತ್ತದೆ. ಸಂಕಲ್ಪ ಮಾಡುವಾಗ ಯಾವುದೇ ಕಾಮನೆ ಸೇರಿಸದೆ ಕೇವಲ ಭಗವದ್ ಪ್ರೀತ್ಯರ್ಥ ಎಂದು ಯಾವ ಕಾಮ್ಯ ಕರ್ಮ ಮಾಡಿದರೂ ಅದು ಭಾಗವತ ಧರ್ಮ. ಭಗವಂತ ಸುಪ್ರೀತನಾದರೆ ಎಲ್ಲವೂ ಸಿದ್ಧಿ. ಅವನು ಕೊಟ್ಟಿದ್ದನ್ನು ಸಂತೋಷವಾಗಿ ಭೋಗಿಸು, ಕೊಡದಿದ್ದನ್ನು ಬಯಸಬೇಡ. ನಿನಗೆ ಬಂದ ಕಷ್ಟ ನಿವಾರಣೆ ಮಾಡು ಎಂದು ಭಗವಂತನನ್ನು ಪೂಜಿಸಬೇಡ, ಬದಲಿಗೆ ಬಂದದ್ದನ್ನು ಪ್ರಸಾದವಾಗಿ ಸ್ವೀಕರಿಸು ಮತ್ತು ಜ್ಞಾನ ವೈರಾಗ್ಯ ಭಕ್ತಿ-ಮೋಕ್ಷ ಕೊಡು ಎಂದು ನಿರಂತರ ಭಗವಂತನನ್ನು ಪ್ರಾರ್ಥಿಸು. ನಿನ್ನ ರಕ್ಷಣೆಯ ಭಾರ ಆ ಭಗವಂತನದ್ದು. ಅದಕ್ಕಾಗಿ ನೀನು ತಲೆ ಕೆಡಿಸಿಕೊಳ್ಳಬೇಡ. ನಿನ್ನ ಜೀವನದಲ್ಲಿ ಏನು ನಡೆಯುತ್ತಿದೆ ಅದು ಆಕಸ್ಮಿಕವಲ್ಲ. ಅದು ಭಗವಂತನ ಇಚ್ಛೆ, ಅದರ ನಿವಾರಣೆಗಾಗಿ ನೀನು ಭಗವಂತನನ್ನು ಪೂಜಿಸುವುದಲ್ಲ ಬದಲಿಗೆ ಭಗವಂತನನ್ನು ಸೇರಲು ಭಗವಂತನನ್ನು ಪೂಜಿಸುವುದು. ಈ ರೀತಿ ನಾವು ನಮ್ಮ ಸಂಕಲ್ಪದ ಹಿಂದಿನ ಅನುಸಂಧಾನವನ್ನು ಬದಲಿಸಿಕೊಂಡಾಗ ಅದು ಭಾಗವತ ಧರ್ಮವಾಗುತ್ತದೆ. ಒಬ್ಬ ತ್ರೈವಿಧ್ಯ ತನ್ನ ಗುರುವಿಗೆ ನನ್ನ ಗುರುಎಂದು ನಮಸ್ಕಾರ ಮಾಡಿದರೆ ಭಾಗವತ ಆ ಗುರುಗಳ ಒಳಗೆ ಭಗವಂತ ಕೂತು ನನಗೆ ಪಾಠ ಹೇಳುತ್ತಿದ್ದಾನೆಎಂದು ತಿಳಿದು ನಮಸ್ಕಾರ ಮಾಡುತ್ತಾನೆ. ಭಾಗವತ ತನ್ನೆಲ್ಲಾ ಕ್ರಿಯೆಯಲ್ಲಿ ಭಗವಂತನನ್ನು ಕಾಣುತ್ತಾನೆ. ಆತ ತನ್ನೆಲ್ಲಾ ಕ್ರಿಯಾ ಕರ್ಮದಲ್ಲಿ ಮೋಕ್ಷ ಮತ್ತು ಭಗವಂತನನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಆತನ ಪೂಜಾ ಸಂಕಲ್ಪದಲ್ಲಿ ಮೋಕ್ಷದ ಬಯಕೆಯನ್ನು ಬಿಟ್ಟು ಇನ್ಯಾವುದೇ ಬಯಕೆ ಇರುವುದಿಲ್ಲ. ನಾವು ಈ ಎತ್ತರಕ್ಕೇರುವುದು ಅಸಾಧ್ಯವಲ್ಲ. ಇದನ್ನು ಸಾಧ್ಯ ಮಾಡಲು ಪ್ರಯತ್ನ ಬೇಕು ಅಷ್ಟೇ. ನಾವು ಎಷ್ಟುಎಷ್ಟು ಭಗವತ್ ಪ್ರೀತ್ಯರ್ಥ ಕರ್ಮ ಮಾಡುತ್ತೇವೋ ಅಷ್ಟುಅಷ್ಟು ಹೆಚ್ಚು ಮೋಕ್ಷಕ್ಕೆ ಹತ್ತಿರವಾಗುತ್ತೇವೆ. ಭಗವಂತನಲ್ಲಿನನಗೆ ಇದನ್ನು ಕೊಡುಎಂದಾಗಾಲಿ ಅಥವಾಇದನ್ನು ನಿವಾರಿಸುಎಂದಾಗಲಿ ಎಂದೂ ಕೇಳಬೇಡ. ನಿನಗೆ ಏನು ಬೇಕು ಎನ್ನುವುದು ಭಗವಂತನಿಗೆ ಗೊತ್ತಿದೆ, ಅದನ್ನು ಭಗವಂತನಿಗೆ ಬಿಡು. ಕೇವಲ ಭಗವತ್ ಪ್ರೀತಿಗಾಗಿ, ಮೋಕ್ಷ ಸಾಧನೆಗಾಗಿ ಕರ್ಮ ಮಾಡು”. “ಇದು ಕೇವಲ ಭೀಮಸೇನ/ವಾಯುದೇವರಿಗೆ ಮಾತ್ರಎಂದು ಪಲಾಯನ ವಾದ ಮಾಡದೆ ಯಾವುದೇ ಫಲ ಕಾಮನೆ ಇಲ್ಲದೆ ಪೂರ್ಣ ಭಕ್ತಿಯಿಂದ ಭಗವಂತನ ಪೂಜೆ ಮಾಡು. ಪೂಜೆಯಲ್ಲಿ ನಿನಗೆ ಬೇಡಲು ಇರುವ ಅಧಿಕಾರ ಕೇವಲಮೋಕ್ಷ ಮತ್ತು ಭಗವಂತ’. ಅದನ್ನು ಪಡೆಯಲು ನಿನ್ನ ಸಾಧನೆಯನ್ನು ಮೀಸಲಿಡು. ಜೀವನದಲ್ಲಿ ಬರುವ ಏಳು ಬೀಳು ಎಲ್ಲವೂ ನಶ್ವರ, ಆ ಬಗ್ಗೆ ಯೋಚಿಸದೆ, ಸಂಸಾರದಿಂದ ಕಳಚಿಕೊಂಡು ಸಾವಿಲ್ಲದ ಮೋಕ್ಷವನ್ನು ಸೇರುವುದಕ್ಕಾಗಿ ಸಾಧನೆ ಮಾಡು. ಇದು ಇಲ್ಲಿರುವ ಮೂಲ ಸಂದೇಶ.
ಭಗವಂತನ ಪೂಜೆಗೆ ಬೇಕಾಗಿರುವುದು ಧನ-ಕನಕವಲ್ಲ. ಕೇವಲ ನಿಷ್ಕಾಮ ಭಕ್ತಿ. ಭಗವಂತನ ಪೂಜೆ ಎಷ್ಟು ಸುಲಭ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ:
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ॥೨೬॥
ಪತ್ರಮ್ ಪುಷ್ಪಮ್ ಫಲಮ್ ತೋಯಮ್ ಯಃ ಮೇ ಭಕ್ತ್ಯಾ ಪ್ರಯಚ್ಛತಿ ।
ತತ್ ಅಹಮ್ ಭಕ್ತಿ ಉಪಹೃತಮ್ ಅಶ್ನಾಮಿ ಪ್ರಯತ ಆತ್ಮನಃ ಯಾರು ಎಲೆಯನ್ನೋ, ಹೂವನ್ನೋ, ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾನೆ ನನ್ನಲ್ಲೇ ಬಗೆಯಿಟ್ಟ ಅವನ ಭಕ್ತಿಯ ಆ ಕೊಡುಗೆಯನ್ನು ನಾನು ನಲ್ಮೆಯಿಂದ ಕೊಳ್ಳುತ್ತೇನೆ.
ಮಹೋನ್ನತನಾದ ಭಗವಂತನ ಪೂಜೆಗೆ ಮೂಲವಾಗಿ ಬೇಕಾಗಿರುವುದು ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಳ್ಳುವುದು(involvement)’, ಮತ್ತು ಮನಸ್ಸು ತುಂಬಿ ಆರಾಧನೆಮಾಡುವುದು. ಮನಸ್ಸಿನಲ್ಲಿ ಭಕ್ತಿ ತುಂಬಿ ತುಳಸಿ ಪತ್ರೆಯನ್ನೋ, ಹೂವನ್ನೋ ಅರ್ಪಿಸಿದರೆ ಅದನ್ನು ಭಗವಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಇಲ್ಲಿ ಬಂಗಾರದ ಪೀಠವಾಗಲೀ, ಬೆಳ್ಳಿಯ ಹರಿವಾಣವಾಗಲಿ, ಪಂಚಪಾತ್ರೆಯಾಗಲಿ ಏನೂ ಬೇಡ. ಮನೆಯಲ್ಲಿ, ಮನೆ ತೋಟದಲ್ಲಿ ಏನಿದೆ ಅದನ್ನೇ ಅರ್ಪಿಸು. ಮನೆಯಲ್ಲಿ ಹಾಲಿಲ್ಲದಿದ್ದರೆ ಒಂದು ಲೋಟ ನೀರನ್ನು ಭಕ್ತಿಯಿಂದ ಅರ್ಪಿಸು. ಆದರೆ ಅದರ ಹಿಂದೆ ಭಾವ ಶುದ್ಧಿ ಇರಲಿ ಅಷ್ಟೇ. ಕೃಷ್ಣ ಹೇಳುತ್ತಾನೆ ಯೋ ಮೇ ಭಕ್ತ್ಯಾ ಪ್ರಯಚ್ಛತಿಎಂದು. ಭಗವಂತ ಬಯಸುವುದು ನಮ್ಮ ಅಂತರಂಗದ ಪ್ರೀತಿಯನ್ನು ಮತ್ತು ಹೃದಯವಂತಿಕೆಯನ್ನು ಹೊರತು ಹೊರಗಿನ ವೈಭವವನ್ನಲ್ಲ. ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ”-“ನೀನು ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸಿ, ಭಕ್ತಿಯಿಂದ ಏನು ಕೊಟ್ಟರೂ ಅದನ್ನು ನಾನು ಸ್ವೀಕರಿಸುತ್ತೇನೆಎನ್ನುತ್ತಾನೆ ಕೃಷ್ಣ. ರಾಮಾಯಣದಲ್ಲಿ ಬರುವ ಶಬರಿಯ ಕಥೆ ಭಗವಂತನ ಈ ನುಡಿಗೆ ಒಂದು ದೃಷ್ಟಾಂತ.
·  ಶ್ಲೋಕ - 27
ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ॥೨೭॥
ಯತ್ ಕರೋಷಿ ಯತ್ ಅಶ್ನಾಸಿ ಯತ್ ಜುಹೋಷಿ ದದಾಸಿ ಯತ್
ಯತ್ ತಪಸ್ಯಸಿ ಕೌಂತೇಯ ತತ್ ಕುರುಷ್ವ ಮತ್ ಅರ್ಪಣಮ್-ಕೌಂತೇಯ, ಏನು ಮಾಡುವೆ, ಏನು ತಿನ್ನುವೆ, ಏನು ಹೋಮಿಸುವೆ, ಏನು ನೀಡುವೆ, ಏನು ತಪಗೈವೆ ಅದನು ನನಗೆ ಒಪ್ಪಿಸು.
ಕೃಷ್ಣ ಹೇಳುತ್ತಾನೆ ನನಗಾಗಿ ನೀನು ಏನನ್ನೂ ಮಾಡುವುದು ಬೇಡ ಆದರೆ ನಿನಗೋಸ್ಕರ ಏನು ಮಾಡುತ್ತೀಯೋ ಅದನ್ನು ನನಗೆ ಅರ್ಪಿಸುಎಂದು. ನಮ್ಮ ನಿತ್ಯ ಜೀವನದಲ್ಲಿ ಮಾಡಬೇಕಾದ ಅನೇಕ ಅನಿವಾರ್ಯ ವೃತ್ತಿ ಕಾರ್ಯಗಳಿರುತ್ತವೆ. ಜೀವನ ನಿರ್ವಹಣೆಯ ಕಾಯಕವಿರುತ್ತದೆ. ನಾವು ಅದನ್ನೇ ಭಗವಂತನ ಪೂಜೆ ಎಂದು ತಿಳಿದು ಮಾಡಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಧರ್ಮವ್ಯಾಧನ ಕಥೆ. ಮಾಂಸ ವಿಕ್ರಯ ಮಾಡಿ ಜೀವನ ಸಾಗಿಸುತ್ತಿದ್ದ ಆತನಲ್ಲಿ ಒಂದು ಸಂಕಲ್ಪ ಇತ್ತು.ಮಾಂಸ ತಿನ್ನುವುದು ನನಗೆ ಆನುವಂಶೀಯವಾಗಿ ಬಂದ ಅಭ್ಯಾಸ. ಆದ್ದರಿಂದ ನಾನು ಮಾಂಸ ತಿನ್ನುತ್ತೇನೆ, ನನಗೆ ಬದುಕುವುದಕ್ಕೋಸ್ಕರ ಮತ್ತು ನನ್ನ ತಂದೆತಾಯಿಯನ್ನು ಸಾಕುವುದಕ್ಕೊಸ್ಕರ ನನ್ನ ಪಾಲಿಗೆ ಬಂದ ಈ ವೃತ್ತಿಯನ್ನು ನಾನು ಮಾಡುತ್ತೇನೆ. ಇದರಿಂದ ನನ್ನ ಬದುಕಿಗೆ ಬೇಕಾದಷ್ಟನ್ನು ಮಾತ್ರ ನಾನು ಗಳಿಸುತ್ತೇನೆ. ಎಂದೂ ವ್ಯವಹಾರದಲ್ಲಿ ಜನರ ಶೋಷಣೆ ಮಾಡುವುದಿಲ್ಲಎಂದುಕೊಂಡು ಮಾಂಸ ವಿಕ್ರಯ ಮಾಡುತ್ತಿದ್ದ ಆತ. ಇದರಿಂದ ಆತನಿಗೆ ದೊಡ್ಡ ಜ್ಞಾನಿ ಧರ್ಮವ್ಯಾಧ ಎನ್ನುವ ಹೆಸರು ಬಂತು. ಋಷಿ ಮುನಿಗಳು ಆತನಿಂದ ಪಾಠ ಕಲಿಯುವ ಪ್ರಸಂಗ ಬಂತು. ಇದಕ್ಕೆ ಮೂಲ ಕಾರಣ ಆತ ತಾನು ಏನು ಮಾಡುತ್ತಿದ್ದನೋ ಅದನ್ನು ದೇವರ ಪೂಜೆ ಎಂದು ಮಾಡಿದ ಅಷ್ಟೇ. ಹೀಗೆ ಎಂದೂ ನಾವು ಮಾಡುವ ವೃತ್ತಿ ಮುಖ್ಯವಾಗುವುದಿಲ್ಲ, ಬದಲಿಗೆ ಅದನ್ನು ಭಗವಂತನ ಪೂಜೆ ಎಂದು ಮಾಡುವ ಅನುಸಂಧಾನ ಮುಖ್ಯವಾಗುತ್ತದೆ.
ನಿನ್ನ ನಿತ್ಯ ಕರ್ತವ್ಯ ಏನಿದೆ ಅದನ್ನು ಭಗವಂತನಿಗೆ ಅರ್ಪಿಸು. ಅದನ್ನು ಭಗವಂತನ ಪೂಜೆ ಎಂದು ಮಾಡು. ಭಗವಂತನಿಗಾಗಿ ಭಕ್ಷ್ಯ ಭೋಜ್ಯವನ್ನು ಮಾಡುವ ಅಗತ್ಯವಿಲ್ಲ. ನೀನು ಏನನ್ನು ತಿನ್ನುತ್ತೀಯೋ ಅದನ್ನು ಭಗವಂತನಿಗೆ ಅರ್ಪಿಸು. ಹೀಗೆ ಮಾಡಿದಾಗ ಭಗವಂತನ ಆರಾಧನೆ ಪ್ರತ್ಯೇಕವಾಗುವುದಿಲ್ಲ ಮತ್ತು ಕಷ್ಟವಾಗುವುದಿಲ್ಲ. ಭಗವಂತನಿಗಾಗಿ ಯಾವುದೋ ವಿಶೇಷ ಹೋಮ ಹವನ ಮಾಡುವ ಅಗತ್ಯವಿಲ್ಲ. ನೀನು ಏನು ಹೋಮ ಮಾಡುತ್ತೀಯೋ ಅದನ್ನೇ ಅಗ್ನಿ ಅಂತರ್ಗತ ನಾರಾಯಣಾಯ ಇದಮ್ ನ ಮಮಎಂದು ಅರ್ಪಿಸು. ಒಬ್ಬ ಹಸಿದ ವ್ಯಕ್ತಿ ಆತನ ಹೊಟ್ಟೆಯಲ್ಲಿ ವೈಶ್ವಾನರ ರೂಪಿ ಭಗವಂತನನ್ನು ಹೊತ್ತು ಬಂದಿದ್ದಾನೆ ಎಂದು ತಿಳಿದು ಆತನೊಳಗಿರುವ ವೈಶ್ವಾನರ ಪ್ರಸನ್ನನಾಗಲಿ ಎಂದು ಆ ವ್ಯಕ್ತಿಯನ್ನು ಸತ್ಕಾರ ಮಾಡು. ಇದೇ ಭಗವಂತನ ಮಹಾ ಪೂಜೆ ಎನಿಸುತ್ತದೆ.
ಕೃಷ್ಣ ಹೇಳುತ್ತಾನೆ ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ಎಂದು. ಇಲ್ಲಿ ತಪಸ್ಸು ಎಂದರೆ ಚಿಂತನೆಅಥವಾ ವೃತಾನುಷ್ಟಾನ. ಉದಾಹರಣೆಗೆ ಸಂಕಷ್ಟಿ’- ಅದನ್ನು ಆಚರಿಸುವಾಗ ಗಣಪತಿ ಅಂತರ್ಗತನಾದ ಭಗವಂತನಿಗೆ ಅರ್ಪಿತವಾಗಲಿ ಎಂದು ಮಾಡು. ಅಲ್ಲಿ ಯಾವುದೇ ಫಲಾಪೇಕ್ಷೆ ಅಹಂಕಾರ ಇಟ್ಟುಕೊಳ್ಳಬೇಡ. ಹೀಗೆ ಯಾವ ಆಚರಣೆಯೂ ಕೂಡಾ ಅಂತತಃ ಪರಮ ಪುರುಷನಾದ ಭಗವಂತನಿಗೆ ಅರ್ಪಿತ ಎಂದು ತಿಳಿದು ಮಾಡಿದಾಗ ಅದು ನಿಜವಾದ ತಪಸ್ಸಾಗುತ್ತದೆ. ಇಲ್ಲಿ ಅರ್ಜುನನಿಗೆ ನಿನ್ನ ಕರ್ತವ್ಯ ಕರ್ಮವಾಗಿ ಬಂದಿರುವ ಈ ಯುದ್ಧವನ್ನೂ ಕೂಡಾ ಭಗವಂತನ ಪೂಜೆಯಾಗಿ ಮಾಡುಎನ್ನುವ ಸಂದೇಶವನ್ನು ಈ ಶ್ಲೋಕದ ಮೂಲಕ ಕೃಷ್ಣ ನೀಡಿದ್ದಾನೆ.
·  ಶ್ಲೋಕ - 28
ಭಾಗವತ ಧರ್ಮ ಅನುಷ್ಠಾನದಿಂದ ಎನು ಫಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈಃ ।
ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ॥೨೮॥
ಶುಭ ಅಶುಭ ಭಲೈಃ ಏವಮ್ ಮೋಕ್ಷ್ಯಸೇ ಕರ್ಮ ಬಂಧನೈಃ ।
ಸಂನ್ಯಾಸ ಯೋಗ ಯುಕ್ತ ಆತ್ಮಾ ವಿಮುಕ್ತಃ ಮಾಮ್ ಉಪೈಷ್ಯಸಿ-ಹೀಗೆ ಬದುಕಿದಾಗ, ಒಳಿತು-ಕೆಡುಕುಗಳ ಕಡೆಗೆಳೆವ ಕರ್ಮದ ಸೆರೆಯಿಂದ ಪಾರಾಗುವೆ. ಫಲದ ಹಂಗು ತೊರೆದು ಕರ್ತವ್ಯದಲ್ಲಿ ಬಗೆ ತೊಡಗಿಸುತ್ತ ಸೆರೆ ಕಳಚಿಕೊಂಡು ನನ್ನ ಬಳಿ ಸೇರುವೆ.
ನಾವು ಯಾವುದೇ ಕರ್ಮವನ್ನು ನನಗೆ ಇಂತಹ ಫಲ ಬರಬೇಕುಎನ್ನುವ ಫಲದ ನಂಟಿನಿಂದ ಮತ್ತು ನಾನು ಈ ಕರ್ಮವನ್ನು ಮಾಡಿದೆಎನ್ನುವ ಅಹಮ್ ಇದ್ದು ಮಾಡಿದಾಗ ಆ ಕರ್ಮ ನಮಗೆ ಅಂಟುತ್ತದೆ. ಅದಕ್ಕೋಸ್ಕರ ಹಿಂದಿನ ಕಾಲದಲ್ಲಿಕರ್ಮಕರಿಷ್ಯೇಎಂದು ಸಂಕಲ್ಪ ಮಾಡುವಾಗ ಈ ರೀತಿ ಹೇಳುತ್ತಿದ್ದರು:
ಭಗವತೋ ಬಲೇನ ಭಗವತೋ ವೀರ್ಯೇನ ಭಗವದಃ ತೇಜಸಾ |
ಭಗವತಾ ಕರ್ಮಣಾ ಕರ್ಮಕರಿಷ್ಯಾಮಿ ಭಗವತೋ ವಾಸುದೇವಸ್ಯಃ ||
ನಾನು ಮಾಡುವ ಕರ್ಮ ನನ್ನ ಕರ್ಮವಲ್ಲ, ನನ್ನೊಳಗಿರುವ ಭಗವಂತ ಮಾಡುವ ಕರ್ಮ. ಅದರ ಹಿಂದಿರುವ ಶಕ್ತಿ ಸಾಮರ್ಥ್ಯ ಎಲ್ಲವೂ ಭಗವಂತನದ್ದು, ನನ್ನದೇನೂ ಇಲ್ಲಎಂದು. ಇದು ಭಾಗವತಧರ್ಮದ ಸಂಕಲ್ಪ. ಭಗವತ್ ಪ್ರೀತ್ಯರ್ಥ ಮಾಡಿದ ಯಾವ ಕರ್ಮವೂ ನಮಗೆ ಬಂಧನವಾಗುವುದಿಲ್ಲ. ಬ್ರಹ್ಮಸೂತ್ರದಲ್ಲಿ ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ:ಭಗವಂತನ ಜ್ಞಾನ ನಮ್ಮೊಳಗೆ ದೃಢವಾಗಿ ಅಪರೋಕ್ಷವಾದಾಗ, ಹಿಂದೆ ಫಲಕಾಮನೆಯಿಂದ ಮಾಡಿದ ಎಲ್ಲಾ ಪಾಪಗಳನ್ನು ಆ ಜ್ಞಾನಾಗ್ನಿ ಸುಟ್ಟುಬಿಡುತ್ತದೆಎಂದು. ಆದ್ದರಿಂದ ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ. ಇದನ್ನು ನಾವು ಕಠೋಪನಿಷತ್ತಿನಲ್ಲಿ ಬರುವ ಯಮ ಮತ್ತು ನಚಿಕೇತನ ಸಂಭಾಷಣೆಯಲ್ಲಿ ಕಾಣುತ್ತೇವೆ. ಅಲ್ಲಿ ನಚಿಕೇತ ಯಮನಲ್ಲಿ ಜ್ಞಾನವನ್ನು ವರವಾಗಿ ಬೇಡಿದಾಗ ಯಮ ಆತನಿಗೆ ನಿನಗೆ ಎಷ್ಟು ಸಂಪತ್ತು ಬೇಕು ಅದನ್ನು ಕೇಳು, ನಿನ್ನನ್ನು ಬೇಕಿದ್ದರೆ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡುತ್ತೇನೆಎನ್ನುತ್ತಾನೆ. ಇದಕ್ಕೆ ನಚಿಕೇತ ಹೇಳುತ್ತಾನೆ ಇದೆಲ್ಲವೂ ನರಕಕ್ಕೆ ಹೋಗುವ ಸಾಧನಗಳು, ಇದ್ಯಾವುದೂ ನನಗೆ ಬೇಡ. ನನಗೆ ಭಗವಂತನ ಬಗ್ಗೆ ತಿಳಿಯಬೇಕುಎಂದು. ಹೀಗೆ ನಮ್ಮ ಪಾಪ ಕರ್ಮವನ್ನು ಸಂಪೂರ್ಣ ತೊಳೆದುಕೊಂಡು ಮೋಕ್ಷಕ್ಕೆ ಹೋಗುವ ಏಕಮಾತ್ರ ಮಾರ್ಗ ಭಗವಂತನ ಬಗೆಗಿನ ಜ್ಞಾನ. ಭಗವದರ್ಪಣ ಬುದ್ಧಿಯಿಂದ ಕರ್ಮ ಅನುಷ್ಠಾನ ಮಾಡಿದಾಗ ಶುಭಾಶುಭ ಕರ್ಮದ ಕಟ್ಟಿನಿಂದ ಬಿಡುಗಡೆ ಸಾಧ್ಯ. ಕೃಷ್ಣ ಹೇಳುತ್ತಾನೆ ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿಎಂದು. ಇಲ್ಲಿ ಹೇಳುವ ಸಂನ್ಯಾಸ ಒಂದು ಯೋಗ(ಉಪಾಯ). ಎಲ್ಲವನ್ನೂ ಭಗವಂತನಿಗೆ ಅರ್ಪಣೆ ಮಾಡಿ ಫಲಕಾಮನೆ ಇಲ್ಲದೆ ಭಗವತ್ ಪೂಜಾ ದೃಷ್ಟಿಯಿಂದ ಮಾಡುವಂತಹ ಸಾತ್ವಿಕರ ಸಾಧನೆ. ಸಂನ್ಯಾಸ ಎಂದರೆ ಕಾಮ-ಸಂಕಲ್ಪವನ್ನು ಭಗವಂತನಲ್ಲಿ ಅರ್ಪಿಸುವುದು. ಕಾಮ ಅಂದರೆ ಮಾಡಬೇಕುಎಂದು ಬಯಸುವುದು, ಸಂಕಲ್ಪ ಎಂದರೆಮಾಡುತ್ತೇನೆಎಂದು ನಿರ್ಧರಿಸುವುದು. ಕಾಮಸಂಕಲ್ಪ ವರ್ಜಿತ-ಸಂನ್ಯಾಸ. ಹೀಗೆ ಭಾಗವತ ಧರ್ಮ ಪಾಲನೆ ಮಾಡಿದರೆ ಸುಲಭವಾಗಿ ಭಗವಂತನನ್ನು ಸೇರಬಹುದು-ನಿಶ್ಚಿತವಾಗಿಯೂ ನನ್ನನ್ನು ಸೇರುತ್ತಾರೆಎನ್ನುವುದು ಕೃಷ್ಣನ ಭರವಸೆ.
·  ಶ್ಲೋಕ - 29
ಸಮೋSಹಂ ಸರ್ವಭೂತೇಷು ನ ಮೇ ದ್ವೇಷ್ಯೋSಸ್ತಿ ನ ಪ್ರಿಯಃ ।
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ॥೨೯॥
ಸಮಃ ಅಹಮ್ ಸರ್ವಭೂತೇಷು ನ ಮೇ ದ್ವೇಷ್ಯಃ ಅಸ್ತಿ ನ ಪ್ರಿಯಃ ।
ಯೇ ಭಜಂತಿ ತು ಮಾಮ್ ಭಕ್ತ್ಯಾ ಮಯಿ ತೇ ತೇಷು ಚ ಅಪಿ ಅಹಮ್-ಎಲ್ಲ ಜೀವಿಗಳೂ ನನಗೆ ಒಂದೆ. ನನಗೆ ಹಗೆಯನೂ ಇಲ್ಲ, ಗೆಳೆಯನೂ ಇಲ್ಲ. ಆದರೆ ಯಾರು ನನ್ನನ್ನು ಭಕ್ತಿಯಿಂದ ಒಲಿಸುತ್ತಾರೆ ಅವರು ನನ್ನ ವಶ; ನಾನು ಅವರ ವಶ.
ಭಗವಂತನಿಗೆ ಯಾರ ಮೇಲೂ ಹಗೆಯಾಗಲೀ ಅಥವಾ ಗೆಳೆತನವಾಗಲೀ ಇಲ್ಲ. ಆತ ಪ್ರೀತಿಸುವುದು ವ್ಯಕ್ತಿಯನ್ನಲ್ಲ ಬದಲಿಗೆ ವ್ಯಕ್ತಿಯಲ್ಲಿರುವ ಜ್ಞಾನವನ್ನು ಮತ್ತು ಭಕ್ತಿಯನ್ನು. ಅರ್ಹತೆ ಇದ್ದವರು ಭಗವಂತನನ್ನು ಭಕ್ತಿಯಿಂದ ಒಲಿಸುತ್ತಾರೆ. ನಿಜವಾದ ಭಕ್ತರಿಗೆ ಭಗವಂತ ವಶನಾಗುತ್ತಾನೆ.
·  ಶ್ಲೋಕ - 30
ಅಪಿ ಚೇತ್ ಸುದುರಾಚಾರೋ ಭಜತೇ ಮಾಮನನ್ಯಭಾಕ್ ।
ಸಾಧುರೇವ ಸ ಮಂತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ ॥೩೦॥
ಅಪಿ ಚೇತ್ ಸು ದುರಾಚಾರಃ ಭಜತೇ ಮಾಮ್ ಅನನ್ಯ ಭಾಕ್ ।
ಸಾಧುಃ ಏವ ಸಃ ಮಂತವ್ಯಃ ಸಮ್ಯಗ್ ವ್ಯವಸಿತಃ ಹಿ ಸಃ ಬೇರೆಡೆಗೆ ಬಗೆಗೊಡದೆ ನನ್ನಲ್ಲೇ ಭಕ್ತಿಯಿಡುವವನು ಎಂಥ ನಡತೆಗೇಡಿಯಾದರೂ ಮೂಲತಃ ಒಳ್ಳೆಯವನೆಂದೇ ತಿಳಿಯಬೇಕು. ಏಕೆಂದರೆ ಅವನು ಖಚಿತವಾಗಿ ನಿಜವನರಿತವನು.
ನಿಜವಾದ ಭಕ್ತರು ಸಾಮಾನ್ಯವಾಗಿ ಎಂದೂ ದುರಾಚಾರಿಗಳಾಗಿರುವುದಿಲ್ಲ. ಆಕಸ್ಮಾತ್ ಒಬ್ಬ ಸಾತ್ವಿಕ ಯಾವುದೋ ಪ್ರಾರಬ್ಧ ಕರ್ಮದಿಂದ ಒಂದು ಜನ್ಮದಲ್ಲಿ ನಡತೆಗೇಡಿಯಾಗಿದ್ದರೂ ಸಹ ಆತ ಮೂಲತಃ ಉತ್ತಮನೇ ಆಗಿರುತ್ತಾನೆ. ಏಕೆಂದರೆ ಆತ ತನ್ನ ಅನೇಕ ಜನ್ಮದಲ್ಲಿ ಭಗವತ್ ಸಾಧನೆ ಮಾಡಿರುತ್ತಾನೆ. ಇದು ಸಾಮಾನ್ಯರಾದ ನಮಗೆ ಕಾಣದಿದ್ದರೂ ಕೂಡಾ ಭಗವಂತನಿಗೆ ಕಾಣುತ್ತದೆ. ಭಗವಂತನ ದೃಷ್ಟಿಯಲ್ಲಿ ಆತ ಉತ್ತಮನೆನಿಸಿರುತ್ತಾನೆ. ಈ ಕಾರಣಕ್ಕಾಗಿ ನಾವು ಯಾರನ್ನೂ ಹಗುರವಾಗಿ ಕಾಣಬಾರದು. ಒಬ್ಬ ಕೆಟ್ಟ ದಾರಿಯಲ್ಲಿ ನಡೆಯುತ್ತಿದ್ದರೆ ಅದಕ್ಕೆ ಅನೇಕ ಕಾರಣಗಳಿರಬಹುದು. ಆತ ಸಾತ್ವಿಕನೂ ಇರಬಹುದು. ಆದರೆ ಆತನ ಪ್ರರಾಬ್ಧ ಕರ್ಮ ಆತನನ್ನು ಆ ಮಾರ್ಗದಲ್ಲಿ ನಡೆಯುವಂತೆ ಮಾಡಿರಬಹುದು. ಉತ್ತಮನೆನಿಸಿದವನು ಶಾಶ್ವತವಾಗಿ ಆ ದಾರಿಯಲ್ಲಿ ಸಾಗುವುದಿಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.
·  ಶ್ಲೋಕ - 31
ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾನ್ತಿಂ ನಿಗಚ್ಛತಿ ।
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ॥೩೧॥
ಕ್ಷಿಪ್ರಮ್ ಭವತಿ ಧರ್ಮ ಆತ್ಮಾ ಶಶ್ವತ್ ಶಾಂತಿಮ್ ನಿಗಚ್ಛತಿ ।
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ಅವನು ಒಡನೆಯೆ ಸರಿದಾರಿ ಹಿಡಿಯುತ್ತಾನೆ; ಅಳಿವಿರದ ಸುಖದ ಸೆಲೆಯನ್ನು ಪಡೆಯುತ್ತಾನೆ. ಕೌಂತೇಯ, ಇದನ್ನು ಆಣೆಯಿಟ್ಟಾಡು: ನನ್ನ ಭಕ್ತನೆಂದೂ ಕೆಡುವುದಿಲ್ಲ’.
ಹೀಗೆ ಪ್ರರಾಬ್ಧ ಕರ್ಮದಿಂದ ದಾರಿತಪ್ಪಿದವರು ಯಾವುದೋ ಒಂದು ಸಂದರ್ಭದಲ್ಲಿ ಒಡನೆಯೇ ತಾವು ಮಾಡುತ್ತಿರುವ ತಪ್ಪಿನ ಅರಿವಾಗಿ ಸರಿದಾರಿಯನ್ನು ಹಿಡಿಯುತ್ತಾನೆ, ಮತ್ತು ಅಳಿವಿರದ ಮೋಕ್ಷವನ್ನು ಸೇರುತ್ತಾನೆ. ಇದು ನಿಶ್ಚಿತ. ಇದನ್ನು ನೀನು ಆಣೆಮಾಡಿ ಹೇಳು ಎನ್ನುತ್ತಾನೆ ಕೃಷ್ಣ. ಇದಕ್ಕೆ ಉತ್ತಮ ಉದಾಹರಣೆ ಅಜಾಮಿಳನ ಕಥೆ. ತನ್ನ ಜೀವನದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿದ ಅಜಾಮಿಳ ಮೂಲತಃ ಒಬ್ಬ ಶ್ರೇಷ್ಠ ಜೀವ. ಇಂತಹ ಅಜಾಮಿಳನಿಗೆ ಭಗವಂತ ಜೀವನದ ಕೊನೆಗಾಲದಲ್ಲಿ ಸತ್ಯದ ದಾರಿ ತೋರಿಸಿ ಉದ್ಧಾರ ಮಾಡುತ್ತಾನೆ. ಆತ ತನ್ನ ಕೊನೆಗಾಲದಲ್ಲಿ ಸಾಧನೆ ಮಾಡಿ ಮೋಕ್ಷವನ್ನು ಸೇರುತ್ತಾನೆ.
ಇಲ್ಲಿ ಕೃಷ್ಣ ಅರ್ಜುನನಲ್ಲಿ ಏಕೆ ನೀನು ಪ್ರತಿಜ್ಞೆ ಮಾಡುಎಂದು ಹೇಳುತ್ತಾನೆ ಎಂದರೆ-ಭಗವಂತ ಭಕ್ತರಿಗಾಗಿ ತನ್ನ ಪ್ರತಿಜ್ಞೆಯನ್ನು ಮುರಿದಾನು ಆದರೆ ಎಂದೂ ಭಕ್ತರ ಪ್ರತಿಜ್ಞೆಯನ್ನಲ್ಲ. ಇದಕ್ಕೆ ಉದಾಹರಣೆ ಮಹಾಭಾರತ ಯುದ್ಧದಲ್ಲಿ ನಡೆದ ಒಂದು ಘಟನೆ:
ಮಹಾಭಾರತ ಯುದ್ಧದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಯುದ್ಧದ ನಡುವೆ ಅರ್ಜುನ ಭೀಷ್ಮನ ಎದುರು ಯುದ್ಧ ಮಾಡುವುದಕ್ಕೆ ಹಿಂಜರಿದಾಗ, ಕೋಪಾವೇಶದಿಂದ ಭೀಷ್ಮನನ್ನು ಸಾಯಿಸಲೆಂಬಂತೆ ರಥದಚಕ್ರವೊಂದನ್ನು ಹಿಡಿದು ಮುಂದೊತ್ತಿ ಬರುತ್ತಾನೆ! ಇದನ್ನು ನೋಡಿದ ಬೀಷ್ಮ ತನ್ನ ಎರಡೂ ಕೈಗಳನ್ನು ಜೋಡಿಸಿ ಹೀಗೆ ಹೇಳುತ್ತಾನೆ: " ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ. ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ನೀನು ಮರೆತಿರುವೆ, ಆದರೆ ನಿನ್ನ ಭಕ್ತನ ಪ್ರತಿಜ್ಞೆಯನ್ನಲ್ಲ; ನೀನಲ್ಲದೆ ನಮಗೆ ಗತಿ ಇನ್ಯಾರು?" ಎಂದು. ಈ ಘಟನೆಯಲ್ಲಿ ಭಗವಂತ ಎಂತಹ ಭಕ್ತವತ್ಸಲ ಎನ್ನುವುದು ತಿಳಿಯುತ್ತದೆ.
·  ಶ್ಲೋಕ - 32
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇSಪಿ ಸ್ಯುಃ ಪಾಪಯೋನಯಃ ।
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇSಪಿ ಯಾಂತಿ ಪರಾಂ ಗತಿಮ್ ॥೩೨॥
ಮಾಮ್ ಹಿ ಪಾರ್ಥ ವ್ಯಪಾಶ್ರಿತ್ಯ ಯೇ ಅಪಿ ಸ್ಯುಃ ಪಾಪಯೋನಯಃ ।
ಸ್ತ್ರಿಯಃ ವೈಶ್ಯಾಃ ತಥಾ ಶೂದ್ರಾಃ ತೇ ಅಪಿ ಯಾಂತಿ ಪರಾಮ್ ಗತಿಮ್ ಪಾರ್ಥ, ನನಗೆ ಶರಣು ಬಂದವರು ಯಾವುದೋ ಪಾಪದಿಂದ ಹೆಣ್ಣಾಗಿ, ವೈಶ್ಯರಾಗಿ, ಶೂದ್ರರಾಗಿ ಸಾಧನೆಯಿಂದ ವಂಚಿತರಾದರೂ ಹಿರಿಯ ನೆಲೆಯಾದ ನನ್ನನ್ನೆ ಪಡೆಯುತ್ತಾರೆ.
ಈ ಶ್ಲೋಕ ಕೆಲವು ಭಾಷ್ಯಕಾರರಿಗೇ ಗೊಂದಲ ಮಾಡಿದ ಶ್ಲೋಕ. ಮಧ್ವಾಚಾರ್ಯರು ಈ ಶ್ಲೋಕಕ್ಕೆ ಭಾಷ್ಯ ನೀಡುವ ತನಕ ಹೆಚ್ಚಿನವರು ಇದಕ್ಕೆ ತಪ್ಪು ಅರ್ಥವನ್ನು ಕಲ್ಪಿಸಿಕೊಂಡಿದ್ದರು. ಮೇಲ್ನೋಟದಲ್ಲಿ ಈ ಶ್ಲೋಕವನ್ನು ನೋಡಿದಾಗ ಸ್ತ್ರೀಯರು, ವೈಶ್ಯರು ಮತ್ತು ಶೂದ್ರರು ಪಾಪಿಗಳುಎಂದು ತಿಳಿಯುವ ಅಪಾಯ ಹೆಚ್ಚು. ಇಲ್ಲಿ ಕೃಷ್ಣ ಹೇಳುತ್ತಿರುವುದು ಸ್ತ್ರೀ ಜೀವದ ಬಗ್ಗೆ ಅಲ್ಲ. ಸ್ತ್ರೀಯರು ಪಾಪಿಗಳಲ್ಲ. ಯಾವುದೋ ಪಾಪದಿಂದ ಅಥವಾ ಶಾಪದಿಂದ ಸ್ತ್ರೀ ಜನ್ಮ ಪಡೆದ ಗಂಡು ಸ್ತ್ರೀ ಪಾಪಯೋನಿಹೊರತು ಹೆಣ್ಣಾಗಿರುವ ಸ್ತ್ರೀಜೀವ ಪಾಪಯೋನಿಯಲ್ಲ.
ಕೃಷ್ಣ ಹೇಳುತ್ತಾನೆ ಯಾವುದೋ ಪಾಪದಿಂದ ಹೀನಯೋನಿ ಬಂದಿರಬಹುದು, ಆದರೆ ಅಂತವರು ನನ್ನನ್ನು ಆರಾಧಿಸಿ ಎಲ್ಲಾ ದೋಷಗಳಿಂದ ಬಿಡುಗಡೆ ಹೊಂದಬಹುದುಎಂದು. ಇದಕ್ಕೆ ಉತ್ತಮ ದೃಷ್ಟಾಂತ ನರಕಾಸುರನ ಸೆರೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ಸ್ತ್ರೀಯರು. ಇವರು ಅಗ್ನಿ ಪುತ್ರರು. ಭಗವಂತನ ಪತ್ನಿಯರಾಗಬೇಕು ಎಂಬ ಆಸೆಯಿಂದ ತಮ್ಮ ಎತ್ತರವನ್ನು ಕಳೆದುಕೊಂಡು ಭೂಮಿಯಲ್ಲಿ ಹೆಣ್ಣಾಗಿ ಹುಟ್ಟಿ ನರಕಾಸುರನ ಸೆರೆಮನೆಯಲ್ಲಿ ಸಿಕ್ಕಿ ಒದ್ದಾಡಿದವರು. ಕೃಷ್ಣ ಅವರನ್ನು ಮದುವೆಯಾಗಿ ಉದ್ಧರಿಸಿದ.
ನಂದಗೋಪ ಮತ್ತು ಯಶೋದೆ ಇವರು ಮೂಲತಃ ದೇವಾಂಶ ಸಂಭೂತರು. ದ್ರೋಣನಾಮಕ ವಸು ನಂದಗೋಪ ಮತ್ತು ಧರನಾಮಕ ವಸುಪತ್ನಿ ಯಶೋದೆ. ಅವರು ಭೂಮಿಯಲ್ಲಿ ವೈಶ್ಯರಾಗಿ ಹುಟ್ಟಿದರು. ಭಗವಂತ ತನ್ನ ಅವತಾರದಲ್ಲಿ ಅವರ ಮನೆಯಲ್ಲಿ ಬೆಳೆದು ಅವರನ್ನು ಉದ್ಧರಿಸಿದ.
ಮಹಾ ಚೇತನ ವಿಧುರ. ಈತ ಸ್ವಯಂ ಧರ್ಮರಾಯ. ಶಾಪದ ಫಲವಾಗಿ ಭೂಮಿಯಲ್ಲಿ ಶೂದ್ರನಾಗಿ ಬದುಕಬೇಕಾಗಿ ಬಂತು. ಸಂಧಾನಕ್ಕೆ ಬಂದ ಕೃಷ್ಣ ದುರ್ಯೋಧನ, ಭೀಷ್ಮ, ದ್ರೋಣರ ಮನೆಗೆ ಹೋಗದೆ ನೇರವಾಗಿ ವಿಧುರನ ಮನೆಗೆ ಬಂದು ಅಲ್ಲಿ ವಿಧುರನಿಂದ ಸರಳ ಆಹಾರ ಸೇವಿಸಿ ಆತನನ್ನು ಪ್ರಸನ್ನನಾಗಿ ಮಾಡಿದ. ಇಲ್ಲಿ ಭಗವಂತ ಬಯಸುವುದು ಪ್ರದರ್ಶನವನ್ನಲ್ಲ ಬದಲಿಗೆ ಪ್ರೀತಿಯನ್ನು ಎನ್ನುವುದು ಸ್ಪಷ್ಟವಾಗುತ್ತದೆ. ಆತನಿಗೆ ಅಂತರಾತ್ಮ ಮುಖ್ಯ, ಮುಖವಾಡವಲ್ಲ.
ಹೀಗೆ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ ಯಾವುದೋ ಪಾಪ ಕರ್ಮದಿಂದ ಅಥವಾ ಶಾಪದಿಂದ ಹೀನಯೋನಿಯಾಗಿ ಹುಟ್ಟಿದವರು ನನ್ನನ್ನು ಆಶ್ರಯಿಸಿದಾಗ ಪಾಪದಿಂದ ಕಳಚಿಕೊಂಡು ನನ್ನನ್ನು ಸೇರುತ್ತಾರೆಎಂದು.
·  ಶ್ಲೋಕ - 33
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ ।
ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಮ್ ೩೩॥
ಕಿಮ್ ಪುನಃ ಬ್ರಾಹ್ಮಣಾಃ ಪುಣ್ಯಾಃ ಭಕ್ತಾಃ ರಾಜ ಋಷಯಃ ತಥಾ ।
ಅನಿತ್ಯಮ್ ಅಸುಖಮ್ ಲೋಕಮ್ ಇಮಮ್ ಪ್ರಾಪ್ಯ ಭಜಸ್ವ ಮಾಮ್-ಪುಣ್ಯದ ಫಲದಿಂದ ಬ್ರಾಹ್ಮಣರಾಗಿ, ಋಷಿಗಳಂಥ ಅರಸರಾಗಿ ಹುಟ್ಟಿ ಬಂದು ಭಕ್ತಿ ಮಾಡುವವರ ಬಗೆಗೆ ಹೇಳುವುದೇನು? ಅದರಿಂದ ಸ್ಥಿರವಲ್ಲದ, ಸುಖವಿಲ್ಲದ ನರಜನ್ಮ ಬಂದಾಗ ನನ್ನನ್ನು ಆರಾಧಿಸು.
ಪುಣ್ಯದ ಫಲದಿಂದ ರಾಜರ್ಷಿಗಳಾಗಿ, ಬ್ರಹ್ಮಜ್ಞಾನಿಗಳಾಗಿ ಹುಟ್ಟಿ ಭಗವಂತನನ್ನು ಆರಾಧಿಸುವವರ ಬಗೆಗೆ ವಿಶೇಷವಾಗಿ ಹೇಳಬೇಕೆನು?” ಎಂದು ಪ್ರಶ್ನಿಸುತ್ತಾನೆ ಕೃಷ್ಣ. ಹೀಗೆ ಭಗವಂತನಲ್ಲಿ ಶರಣಾಗಿ ಆಶ್ರಯ ಬೇಡುವ ಪ್ರತಿಯೊಬ್ಬರ ರಕ್ಷಣೆಯ ಭಾರ ಭಗವಂತನದ್ದು. ಅದಕ್ಕಾಗಿ ಕೃಷ್ಣ ಇಲ್ಲಿ ನಮಗೆ ಕಿವಿ ಮಾತನ್ನು ಹೇಳುತ್ತಾನೆ: ನೀನು ಈ ಪ್ರಪಂಚವೇ ಸರ್ವಸ್ವ ಎಂದು ಪ್ರಪಂಚದಲ್ಲಿ ಬಿದ್ದು ಒದ್ದಾಡಬೇಡ. ಏಕೆಂದರೆ ಇದುಅನಿತ್ಯಮ್ ಅಸುಖಮ್ ಲೋಕಮ್’. ಇದರಲ್ಲಿ ಸುಖವಿಲ್ಲ. ಇದು ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಆನಂದವನ್ನು ಪಡೆಯುವುದಕ್ಕೋಸ್ಕರ ನನ್ನನ್ನು ಆಶ್ರಯಿಸು. ನನಗೆ ಶರಣಾಗು. ನಿನ್ನನ್ನು ಉದ್ಧಾರ ಮಾಡುವ ಹೊಣೆ ನನ್ನದು”.
·  ಶ್ಲೋಕ - 34
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು
ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ೩೪॥
ಮತ್ ಮನಾಃ ಭವ ಮತ್ ಭಕ್ತಃ ಮತ್ ಯಾಜೀ ಮಾಮ್ ನಮಸ್ಕುರು
ಮಾಮ್ ಏವ ಎಷ್ಯಸಿ ಯುಕ್ತ್ವಾ ಏವಮ್ ಆತ್ಮಾನಮ್ ಮತ್ ಪರಾಯಣಃ ನನ್ನಲ್ಲೆ ಬಗೆಯಿಡು. ನನ್ನನ್ನು ಅತಿಶಯವಾಗಿ ಪ್ರೀತಿಸು. ನನ್ನನ್ನೆ ಆರಾಧಿಸು.ನನಗೇ ತಲೆಬಾಗು. ಬಗೆಯನ್ನು ಹೀಗೆ ಅಣಿಗೊಳಿಸಿ ನನಗೇ ಮೊರೆ ಹೊಕ್ಕಾಗ ನನ್ನನ್ನೆ ಸೇರುವೆ.
ನಾವು ನಮ್ಮ ಜೀವನದಲ್ಲಿ ಸಾಧಿಸಬೇಕಾದ ಒಂದೇ ಒಂದು ಸಂಗತಿ ಎಂದರೆ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವುದು. ವ್ಯವಹಾರ ಪ್ರಪಂಚದಲ್ಲಿನ ಸಾವಿರಾರು ವಿಚಾರಗಳು ನಮ್ಮನ್ನು ಉದ್ಧಾರ ಮಾಡಲಾರವು. ಅವು ನಮ್ಮನ್ನು ಮರಳಿ ಅಧಃಪಾತಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಅವೆಲ್ಲವನ್ನೂ ಬಿಟ್ಟು ಮನಸ್ಸಿನಲ್ಲಿ ಭಗವಂತನನ್ನು ತುಂಬಿಸಬೇಕು. ಭಗವಂತನನ್ನು ನಿರಂತರ ಪ್ರೀತಿಸಬೇಕು. ನೀನು ಎಷ್ಟು ಗಾಢವಾಗಿ ಭಗವಂತನನ್ನು ಪ್ರೀತಿಸುತ್ತೀಯೋ ಅಷ್ಟೇ ಗಾಢವಾಗಿ ಭಗವಂತ ನಿನ್ನನ್ನು ಪ್ರೀತಿಸುತ್ತಾನೆ. ಶ್ರೀ ಸೂಕ್ತದಲ್ಲಿ ಹೇಳುವಂತೆ ತ್ವನ್ಮಾ ಭಜಸ್ವ ಪದ್ಮಾಕ್ಷಿ, ಯೇನ ಸೌಖ್ಯಂ ಲಭಾಮ್ಯಹಮ್”. ನಾನು ನಿನ್ನನ್ನು ಭಜನೆ ಮಾಡುತ್ತೇನೆ, ನೀನು ನನ್ನನ್ನು ಭಜನೆ ಮಾಡು”. ಇಲ್ಲಿ ಭಜನೆ ಎಂದರೆ ಭಕ್ತಿಯಿಂದ ಪ್ರೀತಿಸುವುದು.
ನೀನು ಏನು ಪೂಜೆ ಮಾಡುತ್ತೀಯೋ ಅದು ಭಗವಂತನ ಪೂಜೆಯಾಗಿರಲಿ, ನಿನ್ನ ಎಲ್ಲಾ ಪ್ರೀತಿಯಲ್ಲಿ ಭಗವಂತನನ್ನು ಕಾಣು. ನೀನು ಮಾಡುವ ಎಲ್ಲಾ ನಮಸ್ಕಾರ ಭಗವಂತನ ನಮಸ್ಕಾರವಾಗಿರಲಿ. ಹೀಗೆ ಮಾಡಿ ನಿನ್ನ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿ ಇಡಿಯ ಬದುಕನ್ನು ಭಗವನ್ಮಯ ಮಾಡಿಕೊ- ನಿನಗೆ ಎಲ್ಲಕ್ಕಿಂತ ದೊಡ್ಡ ವಸ್ತು ಭಗವಂತ, ಬದುಕಿನ ಸಾರ ಸರ್ವಸ್ವ ಭಗವಂತ, ನಿರಂತರ ಚಿಂತನೆಯ ವಸ್ತು ಭಗವಂತನಾಗಲಿ. ನಿನ್ನ ಬದುಕಿನ ಒಂದೊಂದು ಕ್ರಿಯೆಯೂ ಭಗವಂತನ ಆರಾಧನೆಯಾಗಲಿ. ಆಗ ನೀನು ನನ್ನನ್ನು ಸೇರಲೇ ಬೇಕುಎನ್ನುತ್ತಾನೆ ಕೃಷ್ಣ. ಹೀಗೆ ಮೋಕ್ಷ ಸಾಧಕವಾದ ಉಪಾಸನೆಯನ್ನು ಕೃಷ್ಣ ವಿವರಿಸಿದ ಅನ್ನುವಲ್ಲಿಗೆ ಒಂಬತ್ತನೆಯ ಅಧ್ಯಾಯ ಮುಕ್ತಾಯವಾಯಿತು.
ಇತಿ ನವಮೋSಧ್ಯಾಯಃ
ಒಂಬತ್ತನೆಯ ಅಧ್ಯಾಯ ಮುಗಿಯಿತು

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.