೮. ಕರಡಿ ಕುಣಿತ

ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.

ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನ
‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಅಂದಾನ

ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನ
ಜಾಂಬುನದಿ ತೀರದ ಜಂಬುನೀರಲ ಹಣ್ಣು
ಕೃತಯುಗದ ಕೊನೆಗೀವಾ ಉಂಡಾನ

ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ

‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
ತನ್ನsನ ತಾsನನ ತಂದಾsನ
ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
ಕುಣಿದಾನ ಕುಣಿತವ ಛಂದಾನ

ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂದಾsನ
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ

ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದಾsನ
ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ

ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.
…………………………………………………………………………
೧೯ನೆಯ ಶತಮಾನದಲ್ಲಿ ಬಾಳಿದ ಸಂತ ಶರೀಫರಿಗೂ, ೨೦ನೆಯ ಶತಮಾನದಲ್ಲಿ ಬಾಳಿದ ಬೇಂದ್ರೆಯವರಿಗೂ ಒಂದು ಸಾಮ್ಯವಿದೆ. ಇವರೀರ್ವರೂ ಜನರಿಗಾಗಿ, ಜನರ ನಡುವೆ ಹಾಡಿದ ಕವಿಗಳು. ಈರ್ವರೂ ಒಂದು ಸಾಮಾನ್ಯ ಘಟನೆಯನ್ನು ವರ್ಣಿಸುತ್ತ ಅದರಲ್ಲಿಯ ಅಸಾಮಾನ್ಯ ತಿರುಳನ್ನು ಬೋಧಿಸುತ್ತಿದ್ದರು. ಇವರೀರ್ವರ ನಡುವಿನ ಭೇದವೆಂದರೆ ಶರೀಫರು ಸಂತಕವಿಗಳು, ಬೇಂದ್ರೆಯವರು ಲೋಕಕವಿಗಳು.

‘ಸರಳತೆ’ಯು ಲೋಕಕವಿಯಾದ ಬೇಂದ್ರೆಯವರ ಅನೇಕ ಕವನಗಳ ಲಕ್ಷಣವಾಗಿದೆ. ಆಡಂಬರದ ಸಂಸ್ಕೃತಾಲಂಕಾರ ಅವರ ಕವನಗಳಲ್ಲಿ ಕಾಣಸಿಗದು. ಒಂದು ರೀತಿಯಲ್ಲಿ ಇದು ಅವರ ಶೈಲಿಯ ದೌರ್ಬಲ್ಯ ಎನ್ನಬಹುದೇನೊ? ಏಕೆಂದರೆ ಬಗೆಬಗೆಯ ಸಂಸ್ಕೃತ ಪದಗಳಿಂದ ಅಲಂಕಾರಗೊಂಡ ಕಾವ್ಯವು `ಸುಲಭ ಓದುಗ’ನನ್ನು ಮರಳು ಮಾಡುವಂತೆ, ಸರಳ ದೇಸಿ ಪದಗಳ ಕವನಗಳು ಮಾಡಲಾರವು. ಬೇಂದ್ರೆಯವರ ಕವನಗಳನ್ನು ಸಹಜಸೌಂದರ್ಯದ ನಿರಾಭರಣ ಸುಂದರಿಗೆ ಹೋಲಿಸಬಹುದು. ನಿಜವಾದ ರಸಿಕಹಂಸರೇ ಈ ಕವನಗಳ ಚೆಲುವನ್ನು ಸವಿಯಬಲ್ಲರು.

‘ಕರಡಿ ಕುಣಿತ’ವು ಬೇಂದ್ರೆಯವರ ‘ಸರಳ ಕವನ’ಗಳಲ್ಲೊಂದು. ಕವನವನ್ನು ಓದುತ್ತ ಹೋದಂತೆ, ಈ ಸರಳ ಕವನದ ಒಡಲಲ್ಲಿರುವ ಶೋಷಣೆಯ ಸಂಕೀರ್ಣತೆಯು ಓದುಗರ ಗಮನಕ್ಕೆ ಬಾರದಿರಲಾರದು.

‘ಕರಡಿ ಕುಣಿತ’ ಕವನದ ಮೊದಲ ನುಡಿಯನ್ನು ಗಮನಿಸೋಣ.
ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.
ಕರಡಿಯನ್ನು ಆಡಿಸುವವನ ಚಿತ್ರಣದಿಂದ ಈ ಕವನ ಪ್ರಾರಂಭವಾಗುತ್ತದೆ. ನೋಡುಗನ ಕಣ್ಣಿಗೆ ಮೊದಲು ಕಾಣುವದು ಇವನ ಉಡುಗೆ-ತೊಡುಗೆ. ಈ ವೇಷಭೂಷಣಗಳು ಇವನ ವ್ಯಕ್ತಿತ್ವದ ಪ್ರತೀಕಗಳೂ ಆಗಿವೆ. ಈತನು ಹೆಗಲ ಮೇಲೆ ಕರಿಯ ಕಂಬಳಿಯನ್ನು ಹೊದ್ದುಕೊಂಡಿದ್ದಾನೆ ಹಾಗು ಮಣಿಕಟ್ಟಿನಲ್ಲಿ ಕಬ್ಬಿಣದ ಕಡಗವನ್ನು ತೊಟ್ಟುಕೊಂಡಿದ್ದಾನೆ. ಅಲ್ಲದೆ ಕೈಯಲ್ಲಿ ಕುಣಿಗೋಲನ್ನೊಂದನ್ನು ಹಿಡಿದುಕೊಂಡಿದ್ದಾನೆ. ಇದು ಕರಡಿಯನ್ನು ತಿವಿಯಲು ಅವನು ಬಳಸುವ ಉಪಕರಣ. ಜೊತೆಗೆ ಕರಡಿಯದೇ ಕೂದಲುಗಳ ಗುಚ್ಛವೊಂದು ಅವನ ಮತ್ತೊಂದು ಕೈಯಲ್ಲಿ. ಇವೆಲ್ಲವು ಈ ಮನುಷ್ಯನ ನಿಷ್ಕರುಣತೆಯನ್ನು ಗಾಢವಾಗಿ ಬಿಂಬಿಸುತ್ತವೆ. ನೋಡುಗರನ್ನು ಆಕರ್ಷಿಸಲು ಈತ ಕಡಗವನ್ನು ಕುಟ್ಟುತ್ತ, ಏನೇನೋ ಗುಣುಗುಟ್ಟುತ್ತ ಕರಡಿಯನ್ನು ಆಡಿಸಲು ಬರುತ್ತಿದ್ದಾನೆ. ಈತನ ಕರ್ಕಶ ವ್ಯಕ್ತಿತ್ವವನ್ನು ನೋಡಿದಾಗ ಕವಿಯ ಮನಸ್ಸು ಕರಡಿಯ ಅಸಹಾಯಕ ಸ್ಥಿತಿಯನ್ನು ಚಿಂತಿಸುತ್ತದೆ. (ಈ ನುಡಿಯ ಸಾಲುಗಳಲ್ಲಿ ಪ್ರಧಾನವಾಗಿರುವ ‘ಕ’ಕಾರವು ಕರ್ಕಶತೆಯನ್ನು ಧ್ವನಿಸುವದನ್ನು ಗಮನಿಸಬೇಕು.)


ಎರಡನೆಯ ನುಡಿ:
ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನ
‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಅಂದಾನ
ಅಡವಿಯಲ್ಲಿ ಸ್ವತಂತ್ರವಾಗಿ ಬದಕುತ್ತಿದ್ದ ಪ್ರಾಣಿ ಈ ಕರಡಿ. ಹೇರಳವಾಗಿ ಸಿಗುವ ಜೇನುತುಪ್ಪವನ್ನು ಮೆಲ್ಲುತ್ತ ನೆಮ್ಮದಿಯಿಂದ ಜೀವಿಸುತ್ತಿದ್ದ ಜೀವಿಯಿದು. ಅಲ್ಲದೆ, ಕರಡಿಯೆಂದರೇನು ಸಾಮಾನ್ಯ ಪ್ರಾಣಿಯೆ? ಇದು ಜಾಂಬುವಂತ. ಪರಮಾತ್ಮನು ರಾಮಾವತಾರ ಎತ್ತಿದಾಗ ಅವನಿಗೆ ನೆರವು ನೀಡಿದ ಪ್ರಾಣಿ. ಕೃಷ್ಣಾವತಾರದಲ್ಲಿ ಭಗವಂತನೊಡನೆಯೇ ಸೆಣಸಾಡಿಸಿದಂತಹ ಬಲಿಷ್ಠ ಪ್ರಾಣಿ. ಇದೀಗ ಮಾನವನ ಕುಟಿಲ ಜಾಲದಲ್ಲಿ ಸೆರೆಯಾಗಿ ಅವನ ಕೈಗೊಂಬೆಯಾಗಿದೆ. ಇಂತಹ ಪ್ರಾಣಿಗೆ ಈ ಮಾನವನ ತುಚ್ಛ ಆದೇಶವೇನು?---‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ’ ಎನ್ನುವ ಗುಲಾಮಗಿರಿಯ ಆದೇಶ! ಇದಕ್ಕೆ ಪ್ರತಿಫಲವೆಂದರೆ ಧಣಿ ಬಿಸಾಕುವ ‘ದಾನ’. ಈ ದಾನ ದೊರೆಯುವದೂ ಸಹ ಕುಣಿಸುವವನಿಗೇ! ಎಂತಹ ಹೃದಯವಿದ್ರಾವಕ ಚಿತ್ರವಿದು!




ಮೂರನೆಯ ನುಡಿ:
ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನ
ಜಾಂಬುನದಿ ತೀರದ ಜಂಬುನೀರಲ ಹಣ್ಣು
ಕೃತಯುಗದ ಕೊನೆಗೀವಾ ಉಂಡಾನ
ಕೃತಯುಗ ಅಥವಾ ಸತ್ಯಯುಗದಲ್ಲಿ ಎಲ್ಲ ಜೀವಿಗಳು ನಿಸರ್ಗಸಹಜ ಜೀವನ ನಡೆಯಿಸುತ್ತಿದ್ದರು. ಈ ಯುಗದ ಅಂತ್ಯದವರೆಗೆ ಜಾಂಬುವಂತನು ಅಂದರೆ ಕರಡಿಯು ಜಾಂಬುನದಿಯ ದಂಡೆಯ ಮೇಲೆ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿಂದು ಜೀವಿಸುತ್ತಿತ್ತು. ಆನಂತರದ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ಭಗವಂತನು ರಾಮಾವತಾರ, ಕೃಷ್ಣಾವತಾರ ಹಾಗು ಕಲ್ಕಿಯ ಅವತಾರಗಳನ್ನು ಎತ್ತಿ ದುಷ್ಟಸಂಹಾರ ಮಾಡಿದನು. ಇವು ನಾಗರಿಕ ಯುಗಗಳಾಗಿದ್ದುದರಿಂದ ಜಾಂಬುವಂತನು ನಿಸರ್ಗಸಹಜ ಜೀವನಕ್ಕೆ ಕೊನೆ ಹಾಡಿದನು. ಈ ಎಲ್ಲ ಯುಗಗಳನ್ನು ಕಂಡವನಾದುದರಿಂದ ಜಾಂಬುವಂತನು ಪುರಾಣಪುರುಷನು.


[ಟಿಪ್ಪಣಿ: ಹಿಮಾಲಯಪರ್ವತಶ್ರೇಣಿಯ ಭಾಗವಾದ ಕೈಲಾಸ ಶಿಖರದ ಸಮೀಪದಲ್ಲಿರುವ ಮಾನಸ ಸರೋವರದ ಸುತ್ತಲೂ ಏಳು ದ್ವೀಪಗಳಿವೆ ಎಂದು ಪುರಾಣಗಳು ಹೇಳುತ್ತವೆ. ಇವು ಬಹುಶಃ ಏಳು ಖಂಡಗಳು. ದಕ್ಷಿಣ ದಿಕ್ಕಿನಲ್ಲಿರುವ ಖಂಡಕ್ಕೆ ಜಂಬೂದ್ವೀಪ (=ಭಾರತ) ಎಂದು ಕರೆಯುತ್ತಾರೆ. ಈ ಜಂಬೂದ್ವೀಪದಲ್ಲಿ ಹರಿಯುತ್ತಿರುವ ನದಿಯೇ ಜಾಂಬುನದಿ. ಅಲ್ಲಿಯ ನಿವಾಸಿಗಳು ಜಾಂಬುವಂತರು. ಇವರೇ ಭಾರತದ ಮೂಲನಿವಾಸಿಗಳು. ಈ ನದೀತೀರದಲ್ಲಿ ಬೆಳೆಯುವ ವೃಕ್ಷಗಳು ಜಂಬು ನೀರಲ ವೃಕ್ಷಗಳು. ಜಾಂಬುವಂತರು ಈ ಮರದ ನೀರಲ ಹಣ್ಣುಗಳನ್ನು ತಿಂದು ಬದಕುತ್ತಿದ್ದರು. ಮಾನಸ ಸರೋವರದ ನಡುವಿನಲ್ಲಿಯೂ ಸಹ ಒಂದು ಬೃಹತ್ ಜಂಬೂವೃಕ್ಷ ಅಂದರೆ ನೀರಲ ಮರವಿದೆ. ಇದರಿಂದ ಬೀಳುವ ಜಂಬೂಫಲಗಳನ್ನು ಅಲ್ಲಿಯ ವಾಸಿಗಳಾದ ‘ನಾಗ’ರು ತಿಂದು ಜೀವಿಸುತ್ತಿದ್ದರು. ಸ್ವತಂತ್ರವಾಗಿ ಬಾಳುತ್ತಿದ್ದ ಈ ಆದಿವಾಸಿಗಳು ಆಯುಧಕುಶಲವಾದ ಜನಾಂಗಕ್ಕೆ ಸೋತು ಆಳಾಗಿ ಬಾಳಬೇಕಾಯಿತು.


ಜಂಬುದ್ವೀಪದಲ್ಲಿರುವ ಜಾಂಬುನದಿಯ ದಂಡೆಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿನ್ನುತ್ತ ಈ ಜಾಂಬುವಂತರು ಸ್ವತಂತ್ರವಾಗಿ, ಸುಖವಾಗಿ ಇರುತ್ತಿದ್ದರು. ಇದು ಕೃಷಿ ಸಂಸ್ಕೃತಿಗಿಂತಲೂ ಮೊದಲಿನ ಜೀವನಪದ್ಧತಿಯನ್ನು ಸೂಚಿಸುತ್ತದೆ. ಈ ಯುಗದ ಅಂದರೆ ಕೃತಯುಗದ ಲಕ್ಷಣವೇನು? ಈ ಯುಗದಲ್ಲಿ ಕಬ್ಬಿಣದ ಆವಿಷ್ಕಾರವಾಗಿರಲಿಲ್ಲ. ಆದುದರಿಂದ ಕೃಷಿಸಂಸ್ಕೃತಿಯೂ ಪ್ರಾರಂಭವಾಗಿರಲಿಲ್ಲ. ಸಸ್ಯಾಹಾರಿಗಳು ಗಡ್ಡೆ ಗೆಣಸುಗಳನ್ನು ಹಾಗು ಹಣ್ಣು ಹಂಪಲಗಳನ್ನು ತಿಂದು ಬದಕುತ್ತಿದ್ದರು. ಈ ಯುಗದಲ್ಲಿ ‘ಗುಂಪು ಜೀವನ’ವಿತ್ತು. ಯಾವುದೇ ಒಬ್ಬ ವ್ಯಕ್ತಿಯ ಆಳ್ವಿಕೆ ಪ್ರಾರಂಭವಾಗಿರಲಿಲ್ಲ; ಹಾಗು ಈ ಯುಗದ ಮನುಷ್ಯರು ‘ಆಟವಿಕರು’, ಅಂದರೆ ಅಡವಿಯ ನಿವಾಸಿಗಳು.


ಈ ನಿಸರ್ಗಸಹಜ ಜೀವನ ಕೊನೆಗೊಂಡಿದ್ದು ಕೃತಯುಗದ ಅಂದರೆ ಸತ್ಯಯುಗದ ಕೊನೆಯಲ್ಲಿ. ಸತ್ಯಯುಗದ ಬಳಿಕ ಬಂದದ್ದು ತ್ರೇತಾಯುಗ, ಆನಂತರ ಬಂದದ್ದು ದ್ವಾಪರ ಯುಗ. ತ್ರೇತಾಯುಗದಲ್ಲಿ ಕಬ್ಬಿಣದ ಶೋಧವಾಗಿತ್ತು. ಈ ಯುಗದಲ್ಲಿಯೇ ಸೂರ್ಯವಂಶದವರ ವಂಶಪಾರಂಪರಿಕ ಪ್ರಭುತ್ವ ಬೆಳೆದು ಬಂದಿತು. ಇವರು ನಗರಿಗಳಲ್ಲಿ ಜೀವಿಸುವವರು ಅಂದರೆ ‘ನಾಗರಿಕರು.’ ಶ್ರೀರಾಮಚಂದ್ರನು ಕಬ್ಬಿಣದ ಬಿಲ್ಲು ಬಾಣಗಳನ್ನು ಉಪಯೋಗಿಸಿ, ಶಿಲಾಯುಧ ಹಾಗು ಕಟ್ಟಿಗೆಯ ಗದೆಗಳನ್ನು ಬಳಸುತ್ತಿದ್ದ ಮೂಲನಿವಾಸಿಗಳನ್ನು ಅಂದರೆ ‘ಆಟವಿಕ’ರನ್ನು ಸೋಲಿಸಿದನು. ಆಯುಧಕುಶಲ ಜನಾಂಗವು ನಿಸರ್ಗಸಹಜ ಜೀವಿಗಳನ್ನು ಮಣಿಸಿತು. ಅವರನ್ನು ತನ್ನ ಅಧೀನರನ್ನಾಗಿ ಮಾಡಿತು. ಸಮಾಜದಲ್ಲಿ ವಿವಿಧ ವರ್ಣಗಳು ಪ್ರಾರಂಭವಾದವು. ಪ್ರಭುತ್ವದಿಂದ ಗುಲಾಮಗಿರಿಯವರೆಗಿನ pyramid ರೂಪುಗೊಂಡಿತು. ಇದು ಯಜಮಾನ ಸಂಸ್ಕೃತಿಯ ಪ್ರಾರಂಭವನ್ನು ಸೂಚಿಸುತ್ತದೆ.


ವಿಭಿನ್ನ ಜನಾಂಗಗಳ ಅಥವಾ ಗುಂಪುಗಳ ನಡುವೆ ಹೋರಾಟ ನಡೆದಾಗ ಗೆದ್ದವನೇ ಯಜಮಾನ, ಸೋತವನೇ ಗುಲಾಮ!
ಸತ್ಯಯುಗದ ಕೊನೆಯಲ್ಲಿ ಸೋತು ಹೋದ ‘ಜಾಂಬುವಂತರು’ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ವಿಭಿನ್ನ ಅಧಿಪತಿಗಳನ್ನು ಕಂಡರು. ತಾವು ಮಾತ್ರ ಗುಲಾಮರಾಗಿಯೇ ಉಳಿದರು.]


ನಾಲ್ಕನೆಯ ನುಡಿ:
ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ
ಮೊದಲನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಚಿತ್ರಣವನ್ನು ಹಾಗು ಎರಡನೆಯ ಮತ್ತು ಮೂರನೆಯ ನುಡಿಗಳಲ್ಲಿ ಕರಡಿಯ ಚರಿತ್ರೆಯನ್ನು ಬಣ್ಣಿಸಿದ ಬೇಂದ್ರೆಯವರು ನಾಲ್ಕನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಮಾಯದ ಮಾತುಗಳನ್ನು ವರ್ಣಿಸುತ್ತಾರೆ.


ಕುಣಿತವನ್ನು ನೋಡಲು ಬರುವವರನ್ನು ಮರಳು ಮಾಡಿ ತನ್ನ ಹೊಟ್ಟೆ ತುಂಬಿಕೊಳ್ಳುವದೇ ಕುಣಿಸುವವನ ಮುಖ್ಯ ಉದ್ದೇಶವಾಗಿರುತ್ತದೆ. ಈ ಉದ್ದೇಶ ಸಾಧಿಸಲು ಆತನು ಅಲ್ಲಿ ನೆರೆದ ತಾಯಂದಿರ ಭಾವನೆಗಳ ಮೇಲೆ ಆಟ ಆಡುತ್ತಾನೆ. ಚಿಕ್ಕ ಮಕ್ಕಳು ಯಾವಾಗಲೋ ಅಳುತ್ತಿರುತ್ತಾರೆ. ಮಗು ಅಂಜಿರಬಹುದು ಅಥವಾ ಅದಕ್ಕೆ ಕೆಟ್ಟ ದೃಷ್ಟಿ ತಾಗಿರಬಹುದು ಎಂದು ಹೆದರಿದ ತಾಯಂದಿರು ‘ದೃಷ್ಟಿಯನ್ನು ನಿವಾಳಿಸಿ’ ಚೆಲ್ಲುತ್ತಾರೆ. ‘ಕಣ್ಣಿಗೆ ಕಾಮನ ರಕ್ಷಿ, ಬೆನ್ನಿಗೆ ಭೀಮನ ರಕ್ಷಿ’ ಎಂದು ದೈವದ ರಕ್ಷಣೆ ಕೋರುತ್ತಾರೆ. ಅಂತಹ ಅಮಾಯಕ ತಾಯಂದಿರ ಎದುರಿಗೆ ಕರಡಿ ಕುಣಿಸುವವನು ‘ಈ ಕರಡಿಯ ಕೂದಲುಗಳಲ್ಲಿ ಭೀಮರಕ್ಷಿಯ ಬಲವಿದೆ’ ಎಂದು ಹೇಳುವಾಗ ಕರಡಿಯ ದೈಹಿಕ ಸಾಮರ್ಥ್ಯದ ಜೊತೆಗೇ ಅದಕ್ಕೊಂದು ದೈವಿಕ ಸಾಮರ್ಥ್ಯವನ್ನು ಆರೋಪಿಸುತ್ತಾನೆ. ಅದು ನಿಜವಿದ್ದರೆ, ಕರಡಿ ಮನುಷ್ಯನ ಆಳಾಗಿ ಬಾಳುತ್ತಿತ್ತೆ!?


ಐದನೆಯ ನುಡಿ:
‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
ತನ್ನsನ ತಾsನನ ತಂದಾsನ
ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
ಕುಣಿದಾನ ಕುಣಿತವ ಛಂದಾನ
ನೆರೆದವರ ಮನರಂಜನೆಗಾಗಿ ಕರಡಿಯನ್ನು ಕುಣಿಸಬೇಕಲ್ಲವೆ? ಕರಡಿಯಾದರೇನು ಮನುಷ್ಯನಾದರೇನು, ಜೀವಜಗತ್ತಿನಲ್ಲಿ ಎಲ್ಲರೂ ಸಮಾನರೇ. ಆದರೆ ಮನುಷ್ಯನು ತಾನೇ ಜೀವಜಗತ್ತಿನ ಅಂತಿಮ ಸೃಷ್ಟಿ ಎಂದು ಭಾವಿಸಿಬಿಟ್ಟಿದ್ದಾನೆ. ಹಾಗೆಂದುಕೊಂಡು ಕರಡಿಯನ್ನು ತನಗಿಂತ ಕೆಳದರ್ಜೆಯ ಪ್ರಾಣಿಯನ್ನಾಗಿ ಮಾಡಿದ ಮನುಷ್ಯನು ಆ ಜೀವಿಗೆ ‘ಕುಣಿಯಲೆ ಮಗನ ನೀ’ ಎಂದು ಆದೇಶ ನೀಡುತ್ತಾನೆ. ಪಾಪದ ಕರಡಿಗಂತೂ ಮೊದಲೇ ತರಬೇತಿ ಸಿಕ್ಕಿರುತ್ತದೆ. ಕುಣಿಸುವವನಿಂದ ಹೊರಡುವ ಧ್ವನಿ ಹಾಗು ಕುಣಿಗೋಲಿನ ಸನ್ನೆಗೆ ಅದು ಆಳಾಗಿ ಬಿಟ್ಟಿದೆ. ಇಂತಹ ವರ್ತನೆಯನ್ನು ೧೯ನೆಯ ಶತಮಾನದಲ್ಲಿದ್ದ ರಶಿಯಾದ ಖ್ಯಾತ ವರ್ತನಾ-ವಿಜ್ಞಾನಿ ಪಾವ್ಲೋವರು ‘ರೂಢಿಸಿದ ಪ್ರತಿಕ್ರಿಯೆ’ (=Conditioned Reaction) ಎಂದು ಕರೆದಿದ್ದಾರೆ. ಆದುದರಿಂದ ಅದರ ಕುಣಿತವು ಸುಖದ ಕುಣಿತವಲ್ಲ. ಕುಣಿಗೋಲಿಗೆ ಹೆದರಿಕೊಳ್ಳುವ ಮುಗ್ಧ ಕರಡಿಯ ಕುಣಿತವನ್ನು ಬೇಂದ್ರೆಯವರು ‘ಮುದ್ದು ಕೂಸಿನ ಮುಸುಮುಸು’ ವರ್ತನೆಗೆ ಹೋಲಿಸುತ್ತಿದ್ದಾರೆ. ಕೂಸು ಎಂದರೆ ಅಸಹಾಯಕ ಜೀವಿ. ಅದಕ್ಕೆ ಅಸಮಾಧಾನವಾದಾಗ ಅದು ಮುಸುಮುಸು ಮಾಡುತ್ತದೆ. ಅದರಂತೆ ಕರಡಿಯ ಕುಣಿತವೂ ಸಹ ಅಸಹಾಯಕ ಜೀವಿಯ ಮುಸುಮುಸು ಕುಣಿತ. ಆದರೆ ನೋಡುಗರಿಗೆ ಅದು ‘ಛಂದಾನ ಕುಣಿತ’!


ಆರನೆಯ ನುಡಿ:
ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂದಾsನ
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ
ಕರಡಿಯ ಕುಣಿತವು ತನ್ನ ಹೊಟ್ಟೆಪಾಡಿಗಲ್ಲ. ಅದನ್ನು ಹಿಡಿದುಕೊಂಡು ಬಂದವನ ಹೊಟ್ಟೆಪಾಡಿಗಾಗಿ. ‘ನಡೆದಾನ’ ಎಂದರೆ ಅನಾದಿಕಾಲದಿಂದಲೂ ಇದು ನಡೆದು ಬಂದಿದೆ. ‘ಪಡೆದಾನ’ ಅಂದರೆ ಇದು ಕರಡಿಯ ಹಣೆಬರಹ! ‘ಬಂದಾನ’ ಎಂದರೆ ಈ ಸಂಕಟಕಾರ್ಯಕ್ಕಾಗಿ ಆತ ಜನರೆದುರಿಗೆ ಬಂದು ಕುಣಿಯುತ್ತಿದ್ದಾನೆ. ಕರಡಿಯನ್ನು ಆಡಿಸುವವನ ಹೊಟ್ಟೆ ಭಗಭಗ ಎನ್ನುತ್ತಿರುವಷ್ಟು ಸಮಯವೆಲ್ಲ, ಕರಡಿ ಕುಣಿಯುತ್ತಲೇ ಇರಬೇಕು. ಅವನ ಹೊಟ್ಟೆ ತಣ್ಣಗಾದಾಗಲೇ ಕರಡಿ ಪಡುವ ಕಷ್ಟವೂ ಕಡಿಮೆಯಾದೀತು. ಅದಕ್ಕೆಂದೇ ಇದು ಮುಗಿಲಿಗೆ ಕೈ ಮಾಡಿ ದೇವರನ್ನು ಪ್ರಾರ್ಥಿಸುತ್ತದೆ: “ನನ್ನನ್ನು ಕುಣಿಸುತ್ತಿರುವವನ ಹೊಟ್ಟೆ ತಣ್ಣಗಿರಲಿ, ದೇವರೆ!”
ಅನಾಥೋ ದೇವರಕ್ಷಕಃ!

ಏಳನೆಯ ನುಡಿ:
ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದಾsನ
ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ
ಪ್ರಾಣಿಗಳಿಗೆ ಹಾಗು ಮನುಷ್ಯರಿಗೆ ಇರುವ ಭೇದವೇನು? ಪ್ರಾಣಿಗಳಲ್ಲಿ ಇರುವದು ಪ್ರಾಣಶಕ್ತಿ (vitality). ಮನುಷ್ಯನಲ್ಲಿರುವದು ಬುದ್ಧಿಶಕ್ತಿ. ಬುದ್ಧಿಶಕ್ತಿ ಎನ್ನುವದು ಧೂರ್ತತನವೂ ಆಗಬಲ್ಲದು. ಮನಬಲ್ಲ ಮಾನವ ಎನ್ನುವಾಗ ಬೇಂದ್ರೆಯವರು ಮನುಷ್ಯನ ಈ ಧೂರ್ತ ಬುದ್ಧಿಯನ್ನು ಸೂಚಿಸುತ್ತಿದ್ದಾರೆ ಹಾಗು ಪ್ರಾಣದ ಪ್ರಾಣಿ ಎನ್ನುತ್ತ ಕರಡಿ ಹಾಗು ಇತರ ಪ್ರಾಣಿಗಳ ಪ್ರಾಣಶಕ್ತಿಯನ್ನು ಸೂಚಿಸುತ್ತಿದ್ದಾರೆ. ಈ ಧೂರ್ತಬುದ್ಧಿಯಿಂದಲೇ ಮಾನವನು ಪ್ರಾಣಶಕ್ತಿಯ ಪ್ರಾಣಿಗಳನ್ನು ಸೋಲಿಸಿದ್ದಾನೆ. ಈ ಧೂರ್ತಬುದ್ಧಿಯಿಂದಲೇ ಇತರ ಅಮಾಯಕ ಮಾನವರನ್ನು ಮರಳು ಮಾಡಿದ್ದಾನೆ. ತನ್ನ ಹೊಟ್ಟೆಪಾಡಿಗೆ ಪರಮಾರ್ಥದ ವೇಷವನ್ನು ತೊಡಿಸಿದ್ದಾನೆ.

ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.

ಬೇಂದ್ರೆಯವರು ಕೊನೆಯಲ್ಲಿ ಕವನದ ತತ್ವಸಾರವನ್ನು ಹೇಳಿದ್ದಾರೆ. ಸಾಧಾರಣವೆಂದು ಕಾಣಿಸುವ ಈ ತತ್ವಸಾರವನ್ನು ಯಾವ ಉದ್ದೇಶಕ್ಕಾಗಿ ಬೇಂದ್ರೆಯವರು ಇಲ್ಲಿ ಹೇಳಿದ್ದಾರೆ? ಕವನಕ್ಕಿಂತ ಹೆಚ್ಚಾಗಿ ಕವಿಯ ಅಸ್ಮಿತೆಯನ್ನು ಗುರುತಿಸುವದು ಈ ಕೊನೆಯ ನುಡಿಯ ಉದ್ದೇಶವಾಗಿದೆ. ಬೇಂದ್ರೆಯವರು ತಮ್ಮನ್ನು ಯಾವಾಗಲೂ ಸಾಧಾರಣ ಜನರ ನಡುವಿನ ಕವಿ ಎಂದು ಗುರುತಿಸಿಕೊಳ್ಳುತ್ತಿದ್ದರು. ಹಳ್ಳಿಯಲ್ಲಿಯ ಕಟ್ಟೆಯೊಂದರ ಮೇಲೆ ಹತ್ತು ಜನರ ನಡುವೆ ಕುಳಿತುಕೊಂಡು ಕೈಯೆತ್ತಿ ಹಾಡುವ ಕವಿಯೊಬ್ಬನನ್ನು ಕಲ್ಪಿಸಿಕೊಳ್ಳಿರಿ. ಬಹುಶಃ ಬೇಂದ್ರೆಯವರ ಸ್ವ-ಕಲ್ಪನೆಯೂ ಅದೇ ಇದ್ದಿತೇನೋ? ಅಂತಹ ಕವಿಯೊಬ್ಬ ತನ್ನ ಕೇಳುಗರಿಗೆ ಕೊನೆಯಲ್ಲಿ ಕವನದ ತಿರುಳನ್ನು ಹೇಳುತ್ತಾನೆ, ಒಂದು ನೀತಿಬೋಧೆಯನ್ನು ಮಾಡುತ್ತಾನೆ. ಆದುದರಿಂದಲೇ ಬೇಂದ್ರೆಯವರು ಕವಿಯಾಗಿ ತನಗೆ ಕಂಡ ದರ್ಶನವನ್ನು ಇಲ್ಲಿ ಇತರರಿಗೂ ತಿಳಿಸುತ್ತಿದ್ದಾರೆ. ತಾವು ‘ಲೋಕಕವಿ’ ಎನ್ನುವ ಅಸ್ಮಿತೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹೆಚ್ಚಿನ ಓದಿಗೆ: http://sallaap.blogspot.com/2011/08/blog-post.html

ಕಾಮೆಂಟ್‌ಗಳಿಲ್ಲ: