೪. ವಿಸ್ಮೃತಿ

ಯಾರ ಬಳಸಿ ನಿಂತಿರುವೆನೊ
ನನ್ನ ಹೆಸರಿನಲ್ಲಿ,
ಅಳುತಿರುವನು ಸಿಲುಕಿ ಅವನು
ಈ ಕೂಪದಲ್ಲಿ.

ಹಗಲಿರುಳೂ ಮನಸುರುದು
ಗೋಡೆಯೊಂದ ಸುತ್ತಲೂ
ಕಟ್ಟುತಿರುವೆ, ಚಕ್ರಬಂಧ
ಮುಟ್ಟುತ್ತಿದೆ ಮುಗಿಲು.

ಗೋಡೆಗೋಡೆ ನಡುವೆ ತೆರೆವ
ಕಾಳತಿಮಿರ ಕೂಪ,
ಮೆಲುಮೆಲ್ಲನೆ ನುಂಗುತ್ತಿದೆ
ನನ್ನ ನೈಜರೂಪ.

ಆದರೇನು ನನ್ನ ಕಣ್ಣು
ಗೋಡೆ ನೆತ್ತಿಯೆಡೆಗೆ,
ಹೆಮ್ಮೆ ಒಳಗೆ ಈ ಮಣ್ಣಲಿ
ಎತ್ತಿದಂಥ ನಿಲುವಿಗೆ ;

ಸಣ್ಣದೊಂದು ಬಿರುಕು ಕೂಡ
ನನ್ನ ಹೆಸರ ಗೀರದಂತೆ
ಮಣ್ಣುಮರಳ ಒತ್ತಿಯೊತ್ತಿ
ಮೆತ್ತಿರುವೆನು ಗೋಡೆಗೆ

ಈ ಎಚ್ಚರ ಇಷ್ಟು ಶ್ರಮಕೆ
ಪಡೆದುದೇನು ಕಡೆಗೆ,
ಸರಿಯುತ್ತಿದೆ ನನ್ನ ನೈಜ -
ಬಿಂಬ ಕಣ್ಣ ಮರೆಗೆ !

ಮೂಲ - ಗೀತಾಂಜಲಿ.... ರವೀಂದ್ರನಾಥ ಠಾಕೂರ್

ಕಾಮೆಂಟ್‌ಗಳಿಲ್ಲ: