೫. ನಿರೀಕ್ಷೆ

ನುಡಿಯದಿದ್ದರೇನು ನೀನು
ನಿನ್ನ ಮೌನವನ್ನೆ ನಾನು
ಹೃದಯದಲ್ಲಿ ತುಂಬಿ,
ವಿರಹದಲ್ಲಿ ಬೇಯುತಿರುವೆ
ಅಲುಗದೆಯೆ ಕಾಯುತಿರುವೆ
ನಿನ್ನನ್ನೇ ನಂಬಿ.

ಚುಕ್ಕಿಗಣ್ಣ ಬಿಚ್ಚಿ ಇರುಳು
ತಲೆ ತಗ್ಗಿಸಿ ತಾಳಿ
ಕಾಯುವಂತೆ ಬಾಳುವೆನು
ನನ್ನ ನೋವ ಹೂಳಿ.

ಬೆಳಗು ಬಂದೆ ಬರುವುದು,
ಇರುಳ ಹರಿವೆ ಹರಿವುದು ;
ನಿನ್ನ ದನಿಯ ಸ್ವರ್ಣವರ್ಷ
ಆಗಸವನೆ ಭೇದಿಸಿ
ಜುಳಜುಳನೆಯೆ ತಿರೆಗಿಳಿವುದು
ವಿಶ್ವವನ್ನೆ ತೋಯಿಸಿ.

ನನ್ನ ಹಕ್ಕಿಗೂಡಿನಿಂದ
ಹರಿವ ಹಾಡುಗಳಲಿ
ನಿನ್ನ ನುಡಿಗೆ ರೆಕ್ಕೆ ಬಂದು
ವನಸ ತುಂಬ ಹೊರಳಿ,
ನನ್ನ ತೋಟದಲ್ಲಿ ಮೂಲೆ
ಮೂಲೆಯಲ್ಲು ಗಿಡಗುಂಪಲಿ
ನಿನ್ನ ಮಧುರ ದನಿ ಪುಟಿವುದು
ಹೂ ಮೈಯನು ತಾಳಿ.

ಮೂಲ - ಗೀತಾಂಜಲಿ.... ರವೀಂದ್ರನಾಥ ಠಾಕೂರ್

ಕಾಮೆಂಟ್‌ಗಳಿಲ್ಲ: