೨. ನನ್ನವಳು

ಬೇಂದ್ರೆಯವರ ಈ ಕವನದ ನಾಯಕಿ ನಿಸರ್ಗವೂ ಹೌದು, ಕವಿಯ ನಲ್ಲೆಯೂ ಹೌದು.
ಬೇಂದ್ರೆಯವರ ಈ ಕವನದಲ್ಲಿ ನಲ್ಲೆಯ ವರ್ಣನೆ ಹಾಗು ದಿನಮಾನದ ವರ್ಣನೆ ಒಂದರೊಳಗೊಂದು ಚಮತ್ಕಾರಪೂರ್ಣವಾಗಿ ಬೆಸೆದುಕೊಂಡಿವೆ.
ಕವನ ಹೀಗಿದೆ:

                 ನನ್ನವಳು
           (ನಸುಕಿನ ಝುಳುಕು)


ತಂಬುಲದ ತುಟಿಯ ತೋರಿ
ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರs?
ಸಂಜಿ ಏನs?

ಮೇಲಸೆರಗು ಮೆಲ್ಲಗ ಸರಿಸಿ
ವಾರಿನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರs?
ಇರುಳು ಏನs?

ಅಲೆದುಗಿಲಿದು ಉಲಿದೂ ಉಲಿದೂ
ನೆಟ್ಟ ನೋಟಾ ಕೀಳಲಾರ್ದs
ತಣ್ಣಗಾಗಿ ನಿಂತವಳ್ಯಾರs?
ನಸುಕು ಏನs?

ಹೊತ್ತೊತ್ತಿಗೆ ಹೊಂದಿಕೆಯಾಗಿ
ಹಲವಾದಿ ಒಬ್ಬಾಕೆಯಾಗಿ
ಹೌದs ಚನ್ನಿ ಹೌದ ಚೆಲುವೀ
ನನ್ನವಳೇನs?

ಈ ಕವನದ ಮೊದಲನೆಯ ನುಡಿಯು ಪ್ರಾರಂಭವಾಗುವದು ಪ್ರೇಮಿಯು ಮಾಡುವ ನಲ್ಲೆಯ ವರ್ಣನೆಯಿಂದ :

ತಂಬುಲದ ತುಟಿಯ ತೋರಿ
ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರs?
ಸಂಜಿ ಏನs?

ಕವಿಯ ನಲ್ಲೆ ತಾಂಬೂಲ ಚರ್ವಣದಿಂದ ತುಟಿಗಳನ್ನು ಕೆಂಪಾಗಿಸಿಕೊಂಡು, ಮಲ್ಲಿಗೆ ಹೂವುಗಳನ್ನು ಮುಡಿದುಕೊಂಡು, ಮೆಲ್ಲಮೆಲ್ಲಗೆ ಆತನನ್ನು ಸಂಧಿಸಲು ಬರುತ್ತಿದ್ದಾಳೆ ಎನ್ನುವದು ಮೊದಲ ಮೂರು ಸಾಲುಗಳಲ್ಲಿ ತೋರುವ ಅಭಿಪ್ರಾಯ. ಆದರೆ, ಕೊನೆಯ ಸಾಲಿನಲ್ಲಿ ಬರುವ “ ಸಂಜಿ ಏನs? ” ಎನ್ನುವ ಪ್ರಶ್ನೆಯಿಂದಾಗಿ, ಈ ಕವನದ ನಾಯಕಿ ದಿನಮಾನದ ಸಂಧ್ಯಾಸಮಯವೆನ್ನುವ ಹೊಸ ಹೊಳಹು ವ್ಯಕ್ತವಾಗುತ್ತದೆ.

ತಾಂಬೂಲಚರ್ವಣದ ಕೆಂಪುವರ್ಣವು ಸಂಜೆಗೆಂಪಿನ ಬಣ್ಣ ; ಮಲ್ಲಿಗೆಯ ಹೂವುಗಳು ಒಂದೊಂದಾಗಿ ಕಾಣುತ್ತಿರುವ ತಾರೆಗಳು ; ಬೆಳಗು ಜಾರಿ ಕತ್ತಲೆ ಸಾವಕಾಶವಾಗಿ ಬರುತ್ತಿದೆ ಎನ್ನುವ ಹೊಸ ಅರ್ಥ ಮೂಡುತ್ತದೆ.

ಎರಡನೆಯ ನುಡಿಯನ್ನು ನೋಡಿರಿ:

ಮೇಲಸೆರಗು ಮೆಲ್ಲಗ ಸರಿಸಿ
ವಾರಿನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರs?
ಇರುಳು ಏನs?

ಎರಡನೆಯ ನುಡಿಯ ಮೊದಲ ಮೂರು ಸಾಲುಗಳೂ ಸಹ ನಲ್ಲೆಯ ವರ್ಣನೆಯಂತೆಯೇ ಭಾಸವಾಗುವವು.
ನಲ್ಲನನ್ನು ಸಂಧಿಸಿದ ನಲ್ಲೆ ತನ್ನ ಸೆರಗನ್ನು ಮೆಲ್ಲಗೆ ಸರಿಸಿ, ಓರೆನೋಟವನ್ನು ತುಸುವೇ ಮೇಲಕ್ಕೆತ್ತಿ, ತೋರಿಕೆಗೆ ಮಳ್ಳಿಯಂತೆ ನಟಿಸುತ್ತ, ಬಿನ್ನಾಣ ಮಾಡುತ್ತ, ನಲ್ಲನನ್ನು ರಂಬಿಸುವ ಪರಿಯನ್ನು ವರ್ಣಿಸಿದಂತೆ ಭಾಸವಾಗುವದು.
ಆದರೆ ಕೊನೆಯಲ್ಲಿರುವ “ಇರುಳು ಏನs? ” ಎನ್ನುವ ಸಾಲಿನಿಂದ ಕವನಕ್ಕೆ ಮತ್ತೊಂದು ದ್ವಂದ್ವಾರ್ಥ ಪ್ರಾಪ್ತವಾಗುವದು.

ಮೇಲಸೆರಗು ಅಂದರೆ ಮೋಡಗಳ ಸೆರಗೆ? ವಾರಿನೋಟವೆಂದರೆ ಮೋಡಗಳ ಮರೆಯಿಂದ ಆಗಾಗ ಹೊರಗಾಣುವ ಚಂದ್ರಮನೆ? ಇಂತಹ ಬೆಳದಿಂಗಳ ರಾತ್ರಿಯ ಚೆಲುವನ್ನು ಅನುಭವಿಸುತ್ತ ಕೂತಿರುವ ವ್ಯಕ್ತಿಗೆ, ಇದು ಒಯ್ಯಾರ ಮಾಡುತ್ತಿರುವ ನಾರಿಯಂತೆ ಭಾಸವಾಗುವದೆ?

ಮೂರನೆಯ ನುಡಿಯನ್ನು ಗಮನಿಸಿರಿ :


ಅಲೆದುಗಿಲಿದು ಉಲಿದೂ ಉಲಿದೂ
ನೆಟ್ಟ ನೋಟಾ ಕೀಳಲಾರ್ದs
ತಣ್ಣಗಾಗಿ ನಿಂತವಳ್ಯಾರs?
ನಸುಕು ಏನs?

ಈ ಮೂರನೆಯ ನುಡಿಯ ಸಾಲುಗಳನ್ನೂ ಸಹ ನಲ್ಲೆಯ ಪ್ರೇಮದಾಟಗಳಿಗೆ ಹೋಲಿಸುವಂತೆಯೇ, ಇರುಳಿನಿಂದ ನಸುಕಿನವರೆಗಿನ ನಿಸರ್ಗದ ಕ್ರಿಯೆಗಳಿಗೂ ಹೋಲಿಸಬಹುದು.

ನಾಲ್ಕನೆಯ ನುಡಿಯು ಅದ್ಭುತವಾದ ರೀತಿಯಲ್ಲಿ, ಕವಿಗೆ ತನ್ನ ನಲ್ಲೆಯ ಬಗೆಗಿರುವ ಪ್ರೀತಿಯನ್ನು, ಹಾಗು ದಾಂಪತ್ಯರಹಸ್ಯವನ್ನು ಹೇಳುತ್ತದೆ:

ಹೊತ್ತೊತ್ತಿಗೆ ಹೊಂದಿಕೆಯಾಗಿ
ಹಲವಾದಿ ಒಬ್ಬಾಕೆಯಾಗಿ
ಹೌದs ಚನ್ನಿ ಹೌದ ಚೆಲುವೀ
ನನ್ನವಳೇನs?

ನಿಸರ್ಗದ ದೈನಂದಿನ ವ್ಯಾಪಾರದಲ್ಲಿ, ನಿಸರ್ಗ ಹೇಗೆ ಹಲವು ಬಣ್ಣಗಳನ್ನು ತಳೆಯುತ್ತದೆ, ಇವೆಲ್ಲ ಪ್ರಕಾರಗಳು ಹೇಗೆ ನಿಸರ್ಗದ ಚೆಲುವೇ ಆಗಿವೆ, ಈ ಎಲ್ಲ ಬಗೆಗಳು ಮನುಷ್ಯನಿಗೆ ಹೇಗೆ ಸುಖವನ್ನೇ ಕೊಡುತ್ತವೆ ಎಂದು ಹೇಳುತ್ತಲೆ, ಸಮರಸ ದಾಂಪತ್ಯವೂ ಸಹ ಇದೇ ತೆರನಾಗಿರುತ್ತದೆ ಎನ್ನುವ ತನ್ನ ಭಾವನೆಯನ್ನು ಕವಿ ಹೊರಗೆಡುವುತ್ತಿದ್ದಾನೆ. ದೈನಂದಿನ ವ್ಯವಹಾರದಲ್ಲಿ ಬಳಲಿದ ಮನುಷ್ಯ ಸಂಜೆಯಾಗುತ್ತಿದ್ದಂತೆ ವಿಶ್ರಾಂತಿಯನ್ನು ಬಯಸುತ್ತಾನೆ. ಇರುಳು ಆತನ ದಣಿವನ್ನು ತೊಡೆಯುತ್ತದೆ. ಬೆಳಗಾಗುತ್ತಿದ್ದಂತೆ ಆತ ಮರುದಿನದ ವ್ಯವಹಾರಕ್ಕೆ ಹುರುಪಿನಿಂದ ಅಣಿಯಾಗುತ್ತಾನೆ. ಅವನ ನಲ್ಲೆಯೂ ಸಹ ಈ ಸಂಧ್ಯಾಕಾಲದಂತೆ, ನಿಶಾಕಾಲದಂತೆ ಹಾಗೂ ಉಷಾಕಾಲದಂತೆ ಅವನ ದಣಿವನ್ನು ಪರಿಹರಿಸುತ್ತಾಳೆ, ತಣಿಸುತ್ತಾಳೆ, ಹೊಸ ಹುರುಪನ್ನು ತುಂಬುತ್ತಾಳೆ.
ಅವಳನ್ನು ಕವಿ “ ಚನ್ನಿ ” ಎಂದು ಕರೆಯುತ್ತಾರೆ. “ ಚನ್ನಿ ”ಯಾದವಳೇ “ ಚೆಲುವಿ ” ಯಾಗಿರಬಲ್ಲಳು, ಬರಿ ನೋಟಕ್ಕೆ ಚೆಲುವಿಯಾದವಳು ಚನ್ನಿಯಾಗಿರದಿದ್ದರೆ ಅವಳು ಚೆಲುವೆಯಾಗಲಾರಳು. ನಲ್ಲನಿಗೆ ಅವಳು ಎಲ್ಲಾ ಸಂದರ್ಭಗಳಲ್ಲೂ ಹೊಂದಿಕೆಯಾಗಬೇಕು .
ಈ ಒಬ್ಬಳೇ ನಲ್ಲೆ ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿಗಳಲ್ಲಿ ತೋರಿಬರುತ್ತಾಳೆ ಎನ್ನುವ ಅಭಿಪ್ರಾಯವನ್ನು ಬೇಂದ್ರೆ ವ್ಯಕ್ತ ಪಡಿಸುತ್ತಾರೆ.

ಈ ಸಂದರ್ಭದಲ್ಲಿ ಹೆಣ್ಣು ಗಂಡಿಗೆ ಎಷ್ಟೆಲ್ಲಾ ಬಗೆಗಳಲ್ಲಿ ಪ್ರೀತಿಯ ಸಂಬಂಧಗಳನ್ನು ಹೊಂದುತ್ತಾಳೆ ಎನ್ನುವದನ್ನು ಅವರ ಮತ್ತೊಂದು ಕವನದಲ್ಲಿ
(--“ ಗಂಡುಸು ಹೆಂಗುಸಿಗೆ ”--) ನೋಡಬಹುದು:
“ ತಾಯೆ ಕನಿಮನೆಯೇ ನೀ ಅಕ್ಕ ಅಕ್ಕರತೆಯೇ
ಬಾಯೆನ್ನ ತಂಗಿ ಬಾ ಮುದ್ದು ಬಂಗಾರವೇ
ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ
ಮಗಳೊ ನನ್ನೆದೆಯ ಮುಗುಳೊ? ”

[ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಯೊಂದರಲ್ಲಿ ಬರುವ ವಾಕ್ಯವೊಂದನ್ನು ಇಲ್ಲಿ quote ಮಾಡುವದು ಅಪ್ರಸ್ತುತವಾಗಲಾರದು :
“ ಒಲಿಸದ ಹೆಣ್ಣು ಹೆಣ್ಣಲ್ಲ ; ನಲಿಸದ ಗಂಡು ಗಂಡಲ್ಲ. ”
ದಾಂಪತ್ಯ ಜೀವನದಲ್ಲಿ ಸಾಮರಸ್ಯ ಸಿದ್ಧಿಗೆ ಮಾಸ್ತಿಯವರು ಕಂಡ ದರ್ಶನವಿದು.]

ಬೇಂದ್ರೆಯವರ ಈ ಕವನ ಅವರ “ ಕಾಮಕಸ್ತೂರಿ ” ಕವನಸಂಗ್ರಹದಲ್ಲಿದೆ.
ಕಾಮಕಸ್ತೂರಿ ಸುಗಂಧವನ್ನು ಬೀರುವ ಒಂದು ಸಸ್ಯ. ಇದರ ಎಲೆಗಳನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ.
ಆದರೆ ಕಸ್ತೂರಿ ಮೃಗದಿಂದ ಪಡೆಯಲಾದ ಗಂಧವನ್ನು ಕಾಮೋದ್ದೀಪನಕ್ಕಾಗಿ ಬಳಸಲಾಗುತ್ತದೆ. ಗಂಡು ಹೆಣ್ಣಿನ ನಡುವಿರುವ ಕಾಮವೂ ಸಹ ಕಸ್ತೂರಿಯ ಗಂಧವಾಗದೆ, ಕಾಮಕಸ್ತೂರಿಯ ಸುಗಂಧವಾಗಬೇಕು ಎನ್ನುವದು ಬೇಂದ್ರೆಯವರ ಮನೀಷೆ ಎನ್ನುವದು, ಸುಪ್ರಸಿದ್ಧ ವಿಮರ್ಶಕ ‘ಸಾಕ್ಷಿ’ (ದಿವಂಗತ ಶ್ರೀ ಆರ್. ಜಿ. ಕುಲಕರ್ಣಿ) ಇವರ ಅಭಿಪ್ರಾಯವಾಗಿದೆ.

ಕೇವಲ ನಾಲ್ಕು ನುಡಿಗಳ ಈ ಕವನ, ಅತ್ಯಂತ ಸರಳ ಕನ್ನಡದಲ್ಲಿ ಬರೆದ ಈ ಕವನ, ಅತ್ಯಂತ ಚಮತ್ಕಾರಪೂರ್ಣವಾದ ಈ ಕವನ, ಅತಿ ಸುಂದರವಾದ ನಿಸರ್ಗ ಕವನವೂ ಹೌದು, ದಾಂಪತ್ಯಕವನವೂ ಹೌದು.

ಹೆಚ್ಚಿನ ಓದಿಗೆ :http://sallaap.blogspot.com/2008/07/blog-post_12.html

ಕಾಮೆಂಟ್‌ಗಳಿಲ್ಲ: