೨೫. ಶಾಂತಮಧುರ ದನಿಗಳೇ

ಮನಸಿನಾಳಕಿಳಿದು ನಿಂತ ಶಾಂತ ಮಧುರ ದನಿಗಳೇ
ಕಾಲಜಲದ ತಳಕಿಳಿದೂ ಮಿನುಗುತಿರುವ ಮಣಿಗಳೇ
ಹೇಗೆ ಅಲ್ಲಿಗಿಳಿದಿರಿ
ಯಾಕೆ ಅಲ್ಲಿ ಉಳಿದಿರಿ?
ಎಂದೊ ಮರೆಯಲಾಗದಂತೆ ಹಾಗೆ ಹೇಗೆ ಇರುವಿರಿ?

ಅದುದೆಲ್ಲ ಮುಗಿಯಿತೆಂಬ ಮಾತು ಬರೀ ಸುಳ್ಳು
ಈಗಿರುವುದೆ ನಿಜವೆನ್ನುವ ಮಾತೂ ಸಹ ಜೊಳ್ಳು
ಭಾವವೊಂದೆ ಸತ್ಯ
ಕಾಲ ಬರೀ ಮಿಥ್ಯ
ನಿಜವಾದುದೆ ಎಲ್ಲ ಕಾಲ ಉಳಿಯುವಂಥ ನಿತ್ಯ

ಸ್ನೇಹ ಪ್ರೀತಿ ಇತ್ತ ಜೀವ ಹೇಗೆ ಬದಿಗೆ ಸರಿವುದು ?
ದೇಹ ಮರೆಗೆ ಸರಿದರೂ ನೆನಪು ಹೇಗೆ ಅಳಿವುದು?
ಎದುರಿಗಿರುವ ಏನೇನೋ
ಕಸ ಮನಸಿಗೆ ಬಾರದು
ಆಗಿ ಹೋದ ರಸಗಳಿಗೆಯೆ ಸದಾ ಮನವನಾಳ್ವುದು.

1 ಕಾಮೆಂಟ್‌:

Santoshkumar Attiveri ಹೇಳಿದರು...

ಕವನದ ಕೊನೆಯಲ್ಲಿ ಕವಿಯನ್ನು ಹೆಸರಿಸಿ..